Oppanna.com

ವಿಶ್ವಾಮಿತ್ರ ಋಷಿಃ, ದೇವೀ ಗಾಯತ್ರೀ ಛಂದಃ, ಸವಿತಾ ದೇವತಾ ||

ಬರದೋರು :   ಒಪ್ಪಣ್ಣ    on   24/06/2011    63 ಒಪ್ಪಂಗೊ

ಬಟ್ಟಮಾವಂಗೆ ಈಗ ಸೂತಕ!
ಸೂತಕ ಇಲ್ಲದ್ದರೆ ತಿರುಗಾಟ ಇರ್ತು ಇದಾ! ಅನುಪ್ಪತ್ಯಂಗಳಲ್ಲಿ ವೈದೀಕ ಕಾರ್ಯಕ್ರಮಂಗೊಕ್ಕೆ ಹೋಪಲಿರ್ತು.
ಈಗ ಅದೆಂತೂ ಇಲ್ಲೆ; ಹತ್ತುದಿನ ವಿರಾಮ, ಸೂತಕದ ಲೆಕ್ಕಲ್ಲಿ. – ಹಾಂಗಾಗಿ ಬೈಲಿಂಗೆ ರಜ ಕಾಂಬಲೆ ಸಿಕ್ಕುತ್ತವು!

ಸೂತಕಲ್ಲಿ ಎರಡುವಿಧ ಅಲ್ಲದೋ – ಕ್ಷಯ ಸೂತಕ, ವೃದ್ಧಿ ಸೂತಕ – ಹೇಳಿಗೊಂಡು.
ಈ ಸರ್ತಿ – ಆಚಮನೆ ದೊಡ್ಡಣ್ಣಂಗೆ ಎರಡ್ಣೇಮಗಳು ಹುಟ್ಟಿದ ಲೆಕ್ಕಲ್ಲಿ – ಕುಟುಂಬವೃದ್ಧಿ ಆದ ಲೆಕ್ಕದ ಕೊಶಿಯ ಸೂತಕ.
~

ಆಚಮೊನ್ನೆ ಹೊತ್ತೋಪಗಳೇ ಆಚಮನೆ ದೊಡ್ಡಣ್ಣ ಕಣಿಯಾರದ ಆಶುಪತ್ರೆಗೆ ಹೋಯಿದ°, ಅತ್ತಿಗೆಯ ಕರಕ್ಕೊಂಡು.
ಒಳ್ಳೆಶುದ್ದಿ ಯೇವಗ ತಿಳಿಶುತ್ತ° – ಹೇಳಿ ಎಲ್ಲೋರುದೇ ಕಾದಿತ್ತಿದ್ದವು. ಮರದಿನ ಉದಿಯಪ್ಪಗ ಪೋನು ಬಂದೇಬಿಟ್ಟತ್ತು.
ಗಾಯತ್ರಿಗೆ ತಂಗೆ ಹುಟ್ಟಿತ್ತು – ಹೇಳಿಗೊಂಡು! ಅಲ್ಲಿಂದ ಮತ್ತೆ ಕುಟುಂಬದೋರಿಂಗೆಲ್ಲ ಈ ಕೊಶಿವಿಶಯ ಎತ್ತಿತ್ತು.

ಇಷ್ಟನ್ನಾರ `ಸಣ್ಣಕೂಸು’ ಆಗಿದ್ದ ಗಾಯತ್ರಿ ಈಗ ಅಕ್ಕ° ಆತು!
ಅಂದಿಂದಲೇ ಆಟಾಡ್ಳೆ ಕಾದುಗೊಂಡಿದ್ದ ಗಾಯತ್ರಿ ಮೊನ್ನೆ ಆಸ್ಪತ್ರೆಗೆ ಹೋಗಿ ಕುಂಞಿ ತಂಗೆಯ ಕೈ ಮುಟ್ಟಿಕ್ಕಿ ಬಂತಾಡ;
– ತಂಗೆಯೊಟ್ಟಿಂಗೆ ಆಡಿದ ಸುರೂವಾಣ ಆಟ ಅದುವೇ ಅಲ್ಲದೋ – ಕೊಶೀಲಿ ಬೊಬ್ಬೆ ಹೊಡಾದು ಹೇಳಿಗೊಂಡಿತ್ತು.! 🙂
~

ಸೂತಕ ಬಕ್ಕು ಹೇಳ್ತ ಲೆಕ್ಕಲ್ಲಿ ಈ ಸಮಯಲ್ಲಿದ್ದ ಕಳೀಯಬಾರದ್ದರ ಮಾಂತ್ರ ಒಪ್ಪಿದ್ದದು ಬಟ್ಟಮಾವ°. ಅದಕ್ಕೂ, ಬೇರೆ ಬಟ್ಟಮಾವನ ಮದಲೇ ಜೆನ ಮಾತಾಡಿತ್ತಿದ್ದವು.
ಈ ಶುದ್ದಿ ಬಂದ ಕೂಡ್ಳೇ ಎಲ್ಲ ವೆವಸ್ತೆ ಮಾಡಿಯೂ ಬಿಟ್ಟವು.

ಇನ್ನು ಹತ್ತುದಿನ ಪುರುಸೊತ್ತೇ ಅಲ್ಲದೋ?
ಅಪುರೂಪಲ್ಲಿ ಪುರುಸೊತ್ತು ಸಿಕ್ಕುವ ಬಟ್ಟಮಾವಂಗೆ ಸುಮಾರು ಕೆಲಸ ಬಾಕಿಒಳುದ್ದು, ಬೈಲಿಂಗೆ ಕೆಲವು ಶುದ್ದಿ ಹೇಳುದೂ ಸೇರಿ! 🙂
~
ನಿನ್ನೆಉದಿಯಪ್ಪಗ ಗಾಯತ್ರಿಯ ಕೊಶಿಯ ನೋಡ್ಳೆ ಒಪ್ಪಣ್ಣ ಹೋಗಿತ್ತಿದ್ದನಲ್ಲದೋ – ಬಪ್ಪಗ ಮಾಷ್ಟ್ರುಮಾವನ ಮನೆಲೆ ಆಗಿಯೇ ಬಂದದು.
ಅಲ್ಲಿ ಬಟ್ಟಮಾವಂದೇ ಬಂದಿತ್ತಿದ್ದವು, ಪುರುಸೋತಿಲಿ ಮಾತಾಡ್ಳೆ; ಎಷ್ಟು ಕಾಲ ಆತೋ ಏನೋ – ಅವಕ್ಕೆ ಹಾಂಗ್ರುತ್ತ ಪುರುಸೊತ್ತು ಸಿಕ್ಕದ್ದೆ!

ಬಟ್ಟಮಾವ° ಬಂದದು ಪಟ್ಟೆಸುತ್ತಿಗೊಂಡಲ್ಲಪ್ಪ, ನಿತ್ಯಒಸ್ತ್ರ – ತೋರ್ತು ಸುತ್ತಿಗೊಂಡು. ಒಂದು ಚೆಂಡಿಹರ್ಕಿನ ಮುಂಡಾಸಿನ ನಮುನೆ ಸುತ್ತಲಿಪ್ಪದು – ಈಗ ಹೆಗಲಿಂಗೆ ಹಾಕಿಂಡದವು; ಅಷ್ಟೇ.
ಆಸ್ಪತ್ರೆಗೆ ಕುಂಬ್ಳೆಅಜ್ಜಿಯಲ್ಲಿಂದ ಬೆಶಿಬೆಶಿ ತೆಳ್ಳವುಮಾಡಿದ್ದದರ ಆಚಮನೆ ದೊಡ್ಡಣ್ಣ ತೆಕ್ಕೊಂಡು ಹೋದನಡ, ಅದರ ತಿಂದುಗೊಂಡು ಮಾಷ್ಟ್ರುಮಾವಂಗೆ ಪೋನುಮಾಡಿತ್ತಿದ್ದನಾಡ ರಜ್ಜ ಮದಲು.
ಹಾಂಗೆ ಅಲ್ಯಾಣ ಬೆಶಿಶುದ್ದಿಯನ್ನೇ ಮಾತಾಡಿಗೊಂಡಿತ್ತಿದ್ದವು.
ಒಪ್ಪಣ್ಣ ಅಲ್ಲಿಗೆ ಎತ್ತಿದ್ದೇ ಕೂಡ್ಳೇ ಗಾಯತ್ರಿಯ ಕೊಶಿಯ ಬಗ್ಗೆಯೂ ಹೇಳಲೆ ಸುರುಮಾಡಿದೆ.
~
ಆಚಮನೆ ದೊಡ್ಡಣ್ಣನ ದೊಡ್ಡಮಗಳ ಹೆಸರು “ಗಾಯತ್ರಿ” ಹೇಳಿ ಮಡಗಿದ್ದನಲ್ಲದೋ?
ಅದು ಸಣ್ಣ ಇಪ್ಪಗ ತೆಚೆಪೆಚೆ ಮಾತಾಡಿಗೊಂಡಿದ್ದದರ ’ಗಾಯತ್ರಿ ಜೆಪ’ ಹೇಳಿಗೊಂಡಿದ್ದದು ಒಪ್ಪಣ್ಣ!
ಈಗ ಕೊಶೀಲಿ ಹಾರಿಗೊಂಡಿಪ್ಪಗ ಅದೇ ನೆಂಪಾತು.
ದೊಡ್ಡದು ಗಾಯತ್ರಿ ಜೆಪ ಮಾಡ್ತು, ಸಣ್ಣ ಕೂಸು ಯೇವ ಜೆಪ ಮಾಡ್ತೋ – ಹೇಳಿದೆ, ನೆಗೆಮಾಡಿಗೊಂಡು.
ಮಾಷ್ಟ್ರುಮಾವನ ಎಲೆಹರಿವಾಣಲ್ಲಿದ್ದ ಪೀಶಕತ್ತಿಯ ಕೊಡಿಲಿ ಕಡೆಹಲ್ಲಿನ ಒಕ್ಕಿಗೊಂಡಿದ್ದ ಬಟ್ಟಮಾವ° ಜಾಗ್ರತೆಲಿ ಅದರ ಹೆರತೆಗದು ಹ್ಹ ಹೇಳಿ ನೆಗೆಮಾಡಿದವು.
~
ಬಟ್ಟಮಾವ° ಇಪ್ಪಗ ಎಂತಾರು ಮಂತ್ರದ ವಿಶಯ ಬಪ್ಪದು ಇಪ್ಪದೇ!
ಹಾಂಗೇ ಇಂದುದೇ ಬಂತು, ಗಾಯತ್ರಿ ಜೆಪದ ಬಗ್ಗೆಯೇ.

ಉಪ್ನಾನ ಆದ ದಿನ ಹೇಳುಲೆ ಸುರುಮಾಡಿದವ° – ಮೈಲಿ ಜೆನಿವಾರ ಇಪ್ಪನ್ನಾರ ನೆಂಪುಮಡಗಿ ಹೇಳ್ತದು ಗಾಯತ್ರಿ ಜೆಪವೇ ಅಲ್ಲದೋ?
ಬ್ರಹ್ಮತ್ವಲ್ಲಿ, ಬ್ರಾಹ್ಮಣತ್ವಲ್ಲಿ ಗಾಯತ್ರಿಗೆ ಬಹುಮುಖ್ಯ ಸ್ಥಾನ ಇದ್ದು. ಎಲ್ಲೋರುದೇ ಹೇಳ್ತವು; ಆದರೆ ಅದರ ಆಳ-ವಿಸ್ತಾರ ಎಷ್ಟು ಜೆನಕ್ಕೆ ಅರಡಿಗು?
ಗಾಯತ್ರಿಜೆಪದ ನೆಗೆಶುದ್ದಿ ಬಂದಪ್ಪಗಳೇ ಇದರ ತೆಗದೆ, ಗಾಯತ್ರಿಜೆಪವ ರಜ್ಜ ವಿವರುಸುತ್ತಿರೋ – ಹೇಳಿಗೊಂಡು.
ಒಂದರಿಯಾಣ ಕಾಪಿಕುಡುದು ಎಲೆ ಬಾಯಿಗೆ ಹಾಕಿದ್ದಷ್ಟೇ ಬಟ್ಟಮಾವ°! ಮಾಷ್ಟ್ರುಮಾವನಷ್ಟಲ್ಲದ್ದರೂ ಅಪುರೂಪಕ್ಕೆ ಎಲೆತಿನ್ನೇಕು ಅವಕ್ಕೆ.
ಇವಕ್ಕಿಬ್ರಿಂಗೆ ಕಾಪಿಕೊಟ್ಟು ಮಾಷ್ಟ್ರಮನೆ ಅತ್ತೆ ತೋಟಕ್ಕೆ ಹೋಗಿತ್ತಿದ್ದವೋ ಕಾಣ್ತು, ಎಲ್ಲಿಯೂ ಕಂಡತ್ತಿಲ್ಲೆ. (ಒಪ್ಪಣ್ಣಂಗೆ ಕಾಪಿಯೂ ಬಯಿಂದಿಲ್ಲೆ ಇದಾ! 🙁 )
ಎಲೆ ಮಡಿಕ್ಕೊಂಡೇ ಬಟ್ಟಮಾವ° ವಿವರುಸಿಗೊಂಡು ಹೋದವು…
~
‘ಕ್ರಮಾಗತವಾಗಿ ಹೇಳ್ತರೆ, ನೇರವಾಗಿ ಗಾಯತ್ರಿಜೆಪದ ವಿವರಣೆಗೆ ಹೋಪಮದಲು, ಅದರ ಪೂರ್ವಮಾಹಿತಿ ಇರೇಕು’ – ಹೇಳಿ ಮಾತು ಸುರುಮಾಡಿದವು.
ಯೇವದೇ ಜೆಪಮಂತ್ರ ಹೇಳಿ ಜೆಪಮಾಡ್ತರೆ, ಅದರಿಂದ ಮದಲು ನಮ್ಮ ಮೈಕೈಯ ಮಾನಸಿಕವಾಗಿ ಆ ದೇವರಿಂಗೆ ಅರ್ಪಣೆ ಮಾಡೇಕಡ.
ವೈದೀಕವಾಗಿ ಹೀಂಗೆ ಮಾಡ್ತ ಕಾರ್ಯಕ್ಕೆ ಕರನ್ಯಾಸ, ಷಡಂಗನ್ಯಾಸ – ಒಟ್ಟಾಗಿ ಕರಷಡಂಗನ್ಯಾಸ ಹೇಳುದು’ – ಹೇಳಿದವು.

ಈ ಕರಷಡಂಗನ್ಯಾಸ ಎಲ್ಲ ಜೆಪಕ್ಕೂ ಇರ್ತಾಡ, ಗಾಯತ್ರೀ ಜೆಪಕ್ಕೂ ಇದ್ದು.
ಕರನ್ಯಾಸ:
ಗಾಯತ್ರಿಯ ಕರನ್ಯಾಸಲ್ಲಿ ಗಾಯತ್ರೀಮಂತ್ರವನ್ನೇ ವಿಭಾಗಮಾಡಿ ನಮ್ಮ ಕೈಯ ಐದು ಬೆರಳುಗೊಕ್ಕೆ, ಪೂರ್ತಿ ಕೈಗೆ ಅನ್ವಯ ಮಾಡ್ತದಡ.

ತತ್ಸವಿತುಃ ಬ್ರಹ್ಮಾತ್ಮನೇ – ಹೆಬ್ಬೆರಳಿಂಗೆ ಅನ್ವಯ ಮಾಡಿಗೊಂಡು ಹೇಳ್ತದು- ಅಂಗುಷ್ಟಾಭ್ಯಾಂ ನಮಃ |
ವರೇಣ್ಯಂ ವಿಷ್ಣ್ವಾತ್ಮನೇ
– ತೋರುಬೆರಳು – ತರ್ಜನೀಭ್ಯಾಂ ನಮಃ |
ಭರ್ಗೋದೇವಸ್ಯ ರುದ್ರಾತ್ಮನೇ
– ನೆಡುಬೆರಳು – ಮಧ್ಯಮಾಭ್ಯಾಂ ನಮಃ |
ಧೀಮಹಿ ಈಶ್ವರಾತ್ಮನೇ
– ಪವಿತ್ರಬೆರಳು – ಅನಾಮಿಕಾಭ್ಯಾಂ ನಮಃ |
ಧಿಯೋಯೋನಃ ಸದಾಶಿವಾತ್ಮನೇ
– ಕಿರುಬೆರಳು – ಕನಿಷ್ಠಿಕಾಭ್ಯಾಂ ನಮಃ |
ಪ್ರಚೋದಯಾತ್ ಸರ್ವಾತ್ಮನೇ
– ಅಂಗೈ, ಹಿಂಗೈ, ಪೂರ್ತಿ ಕೈಯೊಳ – ಕರತಲ, ಕರಪೃಷ್ಠಾಭ್ಯಾಂ ನಮಃ ||

– ಹೀಂಗೆ ಹೇಳಿಗೊಂಡು ಒಂದೊಂದೇ ಬೆರಳನ್ನೂ – ಪೂರ್ತಿ ಕೈಯ್ಯನ್ನೂ ಮುಟ್ಟಿ ತೋರುಸಿಗೊಂಡು ಹೋದವು.
ಜೆಪಕ್ಕಪ್ಪಗ ನಿತ್ಯವೂ ಹೇಳ್ತರೂ, ಸ್ಪುಟವಾಗಿ ಅರ್ತ ಹೇಳಿದ್ದು ಮನನ ಅಪ್ಪಲೆ ಒಳ್ಳೆದಾತು.

ಷಡಂಗನ್ಯಾಸ:
ಕೈಯ ಒಂದೊಂದು ಬೆರಳಿಂಗೆ ಅನ್ವಯ ಮಾಡಿದ ಮತ್ತೆ ದೇಹದ ಒಂದೊಂದು ಅಂಗಕ್ಕೆ ಅನ್ವಯ ಮಾಡ್ತದು. ಆಗ ಹೇಳಿದ ಅದೇ ಮಂತ್ರದ ಪ್ರಕಲ್ಪಂಗೊ, ದೇಹದ ಬೇರೆಬೇರೆ ಭಾಗಂಗೊಕ್ಕೆ ಹೊಂದುಸುತ್ತದು, ಅಷ್ಟೇ.

ತತ್ಸವಿತುರ್ಬ್ರಹ್ಮಾತ್ಮನೇ – ಎದೆ ಮುಟ್ಟಿಗೊಂಡು ಹೇಳ್ತದು – ಹೃದಯಾಯ ನಮಃ |
ವರೇಣ್ಯಂ ವಿಷ್ಣ್ವಾತ್ಮನೇ
– ನೆತ್ತಿಯ ಮುಟ್ಟಿಗೊಂಡು – ಶಿರಸೇ ಸ್ವಾಹಾ|
ಭರ್ಗೋದೇವಸ್ಯ ರುದ್ರಾತ್ಮನೇ
– ಶಿಖೆ (ಜೊಟ್ಟು) ಮುಟ್ಟಿಗೊಂಡು  ಶಿಖಾಯೈ ವಷಟ್ | ಈಗ ಶಿಖೆಇಲ್ಲದ್ದೋರು ಹಿಂದಲೆ ಮುಟ್ಟಿಗೊಳ್ತವು, ಅಷ್ಟೇ! ಹೇಳಿದವು.
ಧೀಮಹಿ ಈಶ್ವರಾತ್ಮನೇ
– ಮೈಗಿಪ್ಪ ಕವಚ (ಎರಡೂ ಕೈಯ ರಕ್ಷಣಾಕವಚದ ಹಾಂಗೆ ಹಿಡ್ಕೊಂಡ ಕಲ್ಪಿತ ಕವಚ) – ಕವಚಾಯ ಹುಮ್ |
ಧಿಯೋಯೋನಃ ಸದಾಶಿವಾತ್ಮನೇ
– ಕಣ್ಣುಗೊ – ನೇತ್ರತ್ರಯಾಯ ವಷಟ್ |
ಪ್ರಚೋದಯಾತ್ ಸರ್ವಾತ್ಮನೇ
ಅಸ್ತ್ರಾಯ – ಎರಡೂ ಕೈ ಸೇರುಸಿ ಒಂದು ಚಪ್ಪಾಳೆ ಶೆಬ್ದ ಮಾಡಿದವು – ಫಟ್ ||

ಆ ಶಬ್ದದ ಮೂಲಕ ನಮ್ಮ ದೇಹದ ಸರ್ವತ್ರ ಗಾಯತ್ರೀದೇವರು ಆವಾಹನೆ ಆಗಲಿ – ಹೇಳ್ತದು ಆಶಯ ಅಡ.  ಬಟ್ಟಮಾವ° ಮಳೆಗಾಲ ಆದ ಕಾರಣ ನುಸಿ ಓಡುಸಿದ್ದೋ ಗ್ರೇಶುಗು ನೆಗೆಮಾಣಿ. 🙂
ಒಂದೊಂದು ಕೈ-ಕರಣವನ್ನೂ ಸ್ಫುಟವಾಗಿ ತೋರುಸುವಗ ಒಂದರಿ ಎಲೆತುಪ್ಪೇಕಾಗಿ ಬಂತು ಬಟ್ಟಮಾವಂಗೆ. ಈಗ ಎಲೆತಟ್ಟೆ ಮಾಷ್ಟ್ರುಮಾವನ ಹತ್ತರೆ ಇದ್ದು.
ಜೆಪ ಮಾಡ್ತ ಆದಿಲಿ ಮೈಕೈ ಇಡೀ ಗಾಯತ್ರಿದೇ ಅನ್ವಯ ಮಾಡಿಗೊಂಬದು.
~
ಧ್ಯಾನ:
ದೇಹದ ಯೇವಯೇವ ಭಾಗ ಏವ ಅಂಶಕ್ಕೆ – ಹೇಳ್ತದು ವಿವರಣೆ ಆದ ಮೇಗೆ ಗಾಯತ್ರಿಯ ಧ್ಯಾನ ಮಾಡ್ತದು. ಸಾಮಾನ್ಯವಾಗಿ ಜೆಪದ ಮದಲಾಣ ಧ್ಯಾನಶ್ಲೋಕಲ್ಲಿ ಆ ದೇವರ ವರ್ಣನೆಯೇ ಇಪ್ಪದು-ಹೇಳಿದವು ಮಾಷ್ಟ್ರುಮಾವ°.
ಗಾಯತ್ರಿಯ ಧ್ಯಾನಶ್ಲೋಕ ಶಾರ್ದೂಲ ವಿಕ್ರೀಡಿತಲ್ಲಿ ಇದ್ದಾಡ.
ಹೆರ ಮುಗಿಲು ಹಾಕಿ ಕಪ್ಪುಗಟ್ಟಿದ್ದು, ಇನ್ನು ರಜ ಹೊತ್ತಿಲೇ ಮಳೆ ಬಂದುಬಿಡುಗು. ಈಗ ಹಾಂಗೇ ಅಲ್ಲದೋ –  ಉದಿಯಪ್ಪಗಳೇ ಮಳೆ. ಎಂತ ಕೆಲಸವೂ ಮಾಡ್ಳೆಡಿಯ.
ಧ್ಯಾನಶ್ಲೋಕವ ಜೋರಾಗಿ ರಾಗಲ್ಲಿ ಹೇಳಿದವು ಬಟ್ಟಮಾವ°:

ಮಂದಾರಾಹ್ವಯರೋಚನಾಂಜನಜಪಾ ಖಾಭೈರ್ಮುಖೈರಿಂದುಮ-
– ದ್ರತ್ನೋದ್ಯನ್ಮ ಕುಟಾಂಶು ಸಂತತ ಚತುರ್ವಿಂಶಾರ್ಣ ಚಿತ್ರಾ ತನುಃ |
ಅಂಭೋಜೇರಿ ದರಾಹ್ವಯೌ ಗುಣಕಪಾಲಾಖ್ಯೌ ಚ ಪಾಶಾಂಕುಶೇ-
ಷ್ಟಾ ಭೀತೀರ್ದಧತೀ ಭವೇದ್ಭವಭಯ ಪ್ರೋತ್ಸಾರಿಣೀ ತಾರಿಣೀ ||

ಇದು ಗಾಯತ್ರೀ ಮಂತ್ರದ ಧ್ಯಾನ ಶ್ಲೋಕ ಅಡ. ಇದರ್ಲಿಯೂ ಗಾಯತ್ರಿಯ ವರ್ಣನೆ ಇಪ್ಪದೋ – ಕೇಳಿದೆ.
ಮಾಷ್ಟ್ರುಮಾವ° ತೂಷ್ಣಿಲಿ ವಿವರುಸಿದವು:
ಗಾಯತ್ರಿ ತುಂಬ ಚೆಂದ ಆಡ. ಆಚಮನೆ ಗಾಯತ್ರಿಯೂ ಹಾಂಗೇ – ಹೇಳಿ ಅನುಸಿತ್ತು ಒಪ್ಪಣ್ಣಂಗೆ.
ಅಯಿದುಮೋರೆ ಇಪ್ಪ ಈ ದೇವಿಯ ವರ್ಣನೆ ಇದರ್ಲಿ ಮಾಡಿದ್ದವಡ. ಮಂದಾರ ಹೂಗಿನ ಬಣ್ಣದ ಒಂದು ಮೋರೆ, ಅರುಶಿನ ಬಣ್ಣದ ಒಂದು ಮೋರೆ, ಮಸಿಯ ನಮುನೆ ಕಪ್ಪುಬಣ್ಣದ್ದೊಂದು ಮೋರೆ, ಕೆಂಪುಬಣ್ಣದ್ದೊಂದು ಮೋರೆ, ಆಕಾಶದ ನಮುನೆ ನೀಲ ಬಣ್ಣದ್ದೊಂದು ಮೋರೆ! ಕಿರೀಟಲ್ಲಿಪ್ಪ ಆಭರಣಗಳಿಂದ ಮೈ ಹೊಳೆತ್ತಾ ಇದ್ದಾಡ. ಕೈಲಿ ಶಂಖಚಕ್ರಂಗಳ ಧರಿಸಿ ಆಯುಧಗಳಿಂದ ಶೋಭಿತಳಾಗಿ ಇದ್ದಾಡ. ನಂಬಿದೋರಿಂಗೆ ಅಭಯಕೊಡ್ಳೆ ಸಿದ್ಧವಾಗಿದ್ದಾಡ – ಹೇಳಿದವು.

ಅಂದೊಂದರಿ ಕಾಂಚಿ ಸ್ವಾಮಿಗೊ ಬೆಳ್ಳಾರೆ ವೇದಪಾಟಶಾಲೆಗೆ ಬಂದಿತ್ತಿದ್ದವು ಅಲ್ಲದೋ? ಅಲ್ಯಾಣ ಮಕ್ಕಳೊಟ್ಟಿಂಗೆ ಒಂದು ರಜ ಹೊತ್ತು ಮಾತಾಡಿ, ಹೆರಡ್ಳಪ್ಪಗ “ಗಾಯತ್ರಿ ದೇವಿಯ ಪಟ” ಒಂದು ಕಟ್ಟ ಕೊಟ್ಟಿತ್ತಿದ್ದವಡ.
ಬೈಲಿನ ಮಕ್ಕೊ ಆರೋ ಅಲ್ಲಿ ಕಲ್ತುಗೊಂಡಿದ್ದ ಕಾರಣ, ಬೈಲಿಂಗೂ ರಜ ಪಟ ಎತ್ತಿದ್ದತ್ತು.
ಗಣೇಶಮಾವಂಗೆ ಹತ್ತಿಪ್ಪತ್ತು ಸಿಕ್ಕಿದ್ದರ್ಲಿ ಮಾಷ್ಟ್ರುಮಾವಂಗೆ ರಜ ತಂದುಕೊಟ್ಟಿತ್ತಿದ್ದವಾಡ.
ಉಪ್ನಾನ ಹೇಳಿಕೆ ಬಂದಲ್ಲಿಗೆ ಒಸಗೆಯ ಒಟ್ಟಿಂಗೆ ಮಾಷ್ಟ್ರುಮಾವ° ಈ ಪಟವ ಉಡುಗೊರೆ ಮಾಡಿಗೊಂಡಿತ್ತಿದ್ದವಾಡ. ಇನ್ನೂ ಒಂದು ಪಟ ಇದ್ದತ್ತು, ಒಳ ಹೋಗಿ ಪಟ ತಂದು ತೋರುಸಿದವು.
ಈ ಧ್ಯಾನ ಶ್ಲೋಕ ನೋಡಿಯೇ ಪಟ ತೆಗದ್ದೋ, ಪಟ ನೋಡಿಯೇ ಧ್ಯಾನಶ್ಲೋಕ ಬರದ್ದೋ ಹೇಳಿ ಕನುಪ್ಯೂಸು ಬಪ್ಪಷ್ಟು ಚೆಂದದ ಪಟ!
ಎರಡಿದ್ದಿದ್ದರೆ ಒಂದರ ಒಪ್ಪಣ್ಣಂಗೇ ಕೊಡ್ತಿತವೋ ಏನೋ! ಗಣೇಶಮಾವನತ್ರೆ ಕೇಳೇಕು. 😉
~

ಮಾಷ್ಟ್ರುಮಾವ° ಎಲೆತಿನ್ನದ್ದೆ ಅರ್ದಗಂಟೆ ಕೂದರೆ ಹೆಚ್ಚು. ಈಗ ಎಲೆತುಪ್ಪಿ ಬಂದದಷ್ಟೇ, ಪುನಾ ತಿಂಬಲೆ ಸುರುಮಾಡಿದವು.
ಅದಿರಳಿ,
ಗಾಯತ್ರಿ ಧ್ಯಾನ ಆದ ಮತ್ತೆಯೂ ರಜ್ಜ ಶ್ಲೋಕಮಂತ್ರಂಗೊ ಇದ್ದಾಡ – ಗಾಯತ್ರಿದೇವಿಯ ಬಗ್ಗೆಯೇ.
ಸಾಮಾನ್ಯವಾಗಿ ಜೆಪಂದ ಮದಲು ಅದರ ಹೇಳ್ತ ಕ್ರಮ ಇದ್ದಾಡ, ಬಟ್ಟಮಾವ° ಹೇಳಿದವು.

ಗಾಯತ್ರೀಹೃದಯ:
ಗಾಯತ್ರಿಮಂತ್ರದ ಶೆಗ್ತಿಯ ಆಳವಾಗಿ ನೆಂಪುಮಾಡ್ತ ಮಂತ್ರ. ಅದಕ್ಕೆ ‘ಗಾಯತ್ರಿ ಹೃದಯ’ ಹೇಳ್ತದು.  ಗಾಯತ್ರಿ ಜೆಪ ಮಾಡ್ತ ಮದಲು ಇದರ ಹೇಳುಲೇ ಬೇಕಡ!
ಮಂತ್ರವ ಒಂದರಿ ಹೇಳಿಗೊಂಡು ಹೋದವು ಬಟ್ಟಮಾವ°; ಒಪ್ಪಣ್ಣಂಗೆ ಅದರ ಅರ್ತ ತೆಕ್ಕೊಂಬಲೆ ಎಡಿಗಾಯಿದಿಲ್ಲೆ!
ಮತ್ತೊಂದರಿ ಮಂತ್ರವೂ ಮಂತ್ರಾರ್ಥವೂ ಒಟ್ಟೊಟ್ಟಿಂಗೆ ಹೀಂಗೆ ವಿವರುಸಿಗೊಂಡು ಹೋದವು.

ಓಮಿತ್ಯೇಕಾಕ್ಷರಂಓಂ ಹೇಳ್ತ ಒಂದಕ್ಷರವೇಬ್ರಹ್ಮ | ಅಗ್ನಿರ್ದೇವತಾ – ಈ ಮಂತ್ರಕ್ಕೆ ಅಗ್ನಿಯೇ ದೇವತೆ | ಬ್ರಹ್ಮಇತ್ಯಾರ್ಷಂ – ಬ್ರಹ್ಮನೇ ಆ ಮಂತ್ರಕ್ಕೆ ಋಷಿ | ಗಾಯತ್ರಂ ಛಂದಂ – ಅದು ಗಾಯತ್ರೀ ಛಂದಸ್ಸಿಲಿ ನಿಬದ್ಧ ಆಯಿದು.  ಪರಮಾತ್ಮಂ ಸರೂಪಂ – ಇದಕ್ಕೆ ಪರಮಾತ್ಮನದ್ದೇ ಸ್ವರೂಪ | ಸಾಯುಜ್ಯಂ ವಿನಿಯೋಗಂ – ಮೋಕ್ಷವೇ ಇದರ ಫಲ|

– ಹೇಳಿದವು.
ಗಾಯತ್ರಿಗೆ ಆಮಂತ್ರಣ:
ಜೆಪದ ಪೂರ್ವಭಾವಿಯಾಗಿ ಗಾಯತ್ರಿದೇವಿಯ ದೆನಿಗೊಳಿ, ನಮ್ಮ ಅಸ್ತಿತ್ವಕ್ಕೆ ಆವಾಹನೆ ಮಾಡ್ತದು ಇದ್ದಡ. ಈ ಕೆಳಾಣ ಶ್ಲೋಕ ಹೇಳಿಗೊಂಡು ಬಟ್ಟಮಾವ° ವಿವರಣೆ ಕೊಟ್ಟವು:

ಆಯಾತು ವರದಾ ದೇವೀ – ಬೇಡಿದೋರಿಂಗೆ ಅಭಯಕೊಡ್ತ ದೇವೀ, ಅನುಗ್ರಹಿಸಲೆ ಬಾ! ಅಕ್ಷರಂ – ನಾಶವೇ ಇಲ್ಲದ್ದ –  ಬ್ರಹ್ಮ ಸಮ್ಮಿತಮ್ ಬ್ರಹ್ಮನೇ ಆಗಿಪ್ಪ ಮಾತೆ! |
ಗಾಯತ್ರೀಂ ಛಂದಸಾಂ ಮಾತಾ
– ಛಂದಸ್ಸಿಂಗೆಲ್ಲ ಅಬ್ಬೆಯ ಹಾಂಗಿರ್ತ ಗಾಯತ್ರೀ ಛಂದಸ್ಸಿಲಿ ಇಪ್ಪ ; ಇದಂ ಬ್ರಹ್ಮ ಜುಷಸ್ವಮೇ – ನಿನ್ನ ಅಮೋಘತ್ವದ ಬಗ್ಗೆ ಆನು ಮಾಡಿದ ಪ್ರಾರ್ಥನೆಗೆ ನೀನು ಕೆಮಿಕೊಟ್ಟು ಆಶೀರ್ವಾದ ಮಾಡು||

ಬಟ್ಟಮಾವ° ವಿವರುಸುತ್ತರೆ ಸಂಸ್ಕೃತ ಶ್ಲೋಕಂಗಳೂ ಎಡೆಡೆಲಿ ಬಂದು – ಎಲ್ಲಿಗೆತ್ತಿತ್ತು ಹೇಳ್ತದು ಗೊಂತಾವುತ್ತು.
ಮಾಷ್ಟ್ರುಮಾವ° ವಿವರುಸುತ್ತರೆ ಸಮಗ್ರ ಅರ್ಥ ಒಂದರಿಯೇ ತಲಗೆ ಹೋವುತ್ತು! ಎರಡುದೇ ಕೊಶಿಯೇ ಇದಾ!!
~

ಮಾಷ್ಟ್ರುಮಾವ° ತೋರುಸಿದ ಗಾಯತ್ರೀದೇವಿ!!

ಮಹಿಮೆ ವರ್ಣನೆ:
ಗಾಯತ್ರಿಯ ಮಹಿಮೆಯ ಸ್ತುತಿಮಾಡ್ತ ಕಾರ್ಯ ಜೆಪಂದ ಮದಲೇ ಮಾಡ್ಳಿದ್ದಾಡ. ವಿಶೇಷವಾಗಿ ಪಾಪಪರಿಹಾರಲ್ಲಿ ಗಾಯತ್ರಿಯ ಪಾತ್ರ ಹೇಂಗಿರ್ತು ಹೇಳ್ತ ಮಹಿಮೆಯ ಇಲ್ಲಿ ವರ್ಣನೆ ಮಾಡ್ತವಾಡ.

ಯದಹ್ನಾತ್ಕುರುತೇ ಪಾಪಂ – ಹಗಲೊತ್ತು ಮಾಡಿದ ಪಾಪಂಗೊ ಎಲ್ಲವುದೇ – ತದಹ್ನಾತ್ ಪ್ರತಿಮುಚ್ಯತೇ – ಹಗಲೇ ಬಿಡುಗಡೆ ಆವುತ್ತಾಡ|
ಯದ್ರಾತ್ರಿಯಾತ್ಕುರುತೇಪಾಪಂ
– ಇರುಳೊತ್ತು ಮಾಡಿದ ಪಾಪಂಗೊ – ತದ್ರಾತ್ರಿಯಾತ್ಪ್ರತಿಮುಚ್ಯತೇ – ಇರುಳಿಂದಿರುಳೇ ಪರಿಹಾರ ಆವುತ್ತಾಡ ||

ಹೇಳಿತ್ತುಕಂಡ್ರೆ – ಉದ್ದೇಶಪೂರ್ವಕ ಮಾಡಿದ ಪಾಪಂಗೊ ಅಲ್ಲ, ಬದಲಾಗಿ ಅಜ್ಞಾನಾದ್ವಾ-ಪ್ರಮಾದಾದ್ವಾ ಮಾಡಿದ ನಮುನೆ ಇದ್ದಾರೆ ಗಾಯತ್ರಿ ಸ್ತುತಿಲಿ ಪರಿಹಾರ ಆವುತ್ತು ಹೇಳ್ತದು ತಾತ್ಪರ್ಯ – ಹೇಳಿದವು.

ಸರ್ವವರ್ಣೇ – ಕಲ್ಪನೆಗೆ ಸಿಕ್ಕುವ, ಕಲ್ಪನೆಂದಲೂ ಮಿಗಿಲಾದ ಎಲ್ಲಾ ಬಣ್ಣಂಗಳಲ್ಲಿ ಪ್ರಕಟಅಪ್ಪ – ಮಹಾದೇವೀ – ಮಹಾಮಾತೆ – ಸಂಧ್ಯಾವಿದ್ಯೇ – ಸಂಧ್ಯಾಕಾಲಲ್ಲಿ ವಿಶೇಷವಾಗಿ ಪ್ರಕಟ ಅಪ್ಪ – ಸರಸ್ವತೀ –  ವಿದ್ಯಾಧಿದೇವತೇ|
ಓಜೋಸಿ
– ಇಂದ್ರಿಯ ಶೆಗ್ತಿವೆಂತೆ – ಸಹೋಸಿ – ಶತ್ರುನಾಶಿನಿ – ಬಲಮಸಿ– ಬಲವಂತೆ –  ಭ್ರಾಜೋಸಿ – ಪ್ರಕಾಶವಂತೆ – ದೇವಾನಾಂ ಧಾಮನಾಮಾಸಿ – ಇಂದ್ರಾದಿ ದೇವರಿಂಗೇ ಪ್ರಸಿದ್ಧಳಾಗಿ – ವಿಶ್ವಮಸಿ – ವಿಶ್ವವೇ ಆಗಿಪ್ಪ – ವಿಶ್ವಾಯುಃ – ಸಮಗ್ರ ಜೀವಜಗತ್ತಿನ ಆಯುಸ್ಸು ಆಗಿಪ್ಪ – ಸರ್ವಮಸಿ ಸರ್ವಾಯುಃ – ಜಗತ್ತಿನ ಸರ್ವ ಶೆಗ್ತಿಯ ಸರ್ವ ಆಯುಶ್ಶೆಗ್ತಿ ಆಗಿಪ್ಪ – ಅಭಿಭೂಃ – ಸರ್ವಪಾಪವ ನಿವಾರಣೆ ಮಾಡುವ – ಓಂ – ಮಹಾ ಬ್ರಹ್ಮ ಶೆಗ್ತಿಯ ಆವಾಹನೆ ಮಾಡ್ತಾ ಇದ್ದೆ | – ಹೇಳಿ ಪ್ರಾರ್ಥನೆ ಮಾಡಿಗೊಳೇಕಡ.

ಆವಾಹನೆ:
ಯೇವದೇ ಒಂದು ಶೆಗ್ತಿಯ ಮೇಗೆ ಮನಸ್ಸು ಮಡಗಿ ಚಿಂತನೆ ಮಾಡಿರೆ ಅದುವೇ ಧ್ಯಾನ.
ಅದೇ ಶೆಗ್ತಿಯ ಮಾಡಿದ ಮತ್ತೆ ಒಂದು ಕಲ್ಪಿತ ಕ್ಷೇತ್ರಲ್ಲಿ ಮಡಗುತ್ತದಕ್ಕೆ ಆವಾಹನೆ ಹೇಳ್ತದಡ.
ಗಾಯತ್ರಿಯನ್ನೂ ಧ್ಯಾನ ಮಾಡಿದ ಮೇಗೆ ಆವಾಹನೆ ಮಾಡೇಕಲ್ಲದೋ, ಅದಕ್ಕೆ ಈ ಶ್ಲೋಕಲ್ಲಿ ವಿವಿಧ ರೂಪಲ್ಲಿರ್ತ ಗಾಯತ್ರೀದೇವಿಯ ಆವಾಹನೆ ಮಾಡ್ತದಡ:

ಗಾಯತ್ರೀಮಾವಾಹಯಾಮಿ – ಸಂಧ್ಯಾಕಾಲದ ಬ್ರಹ್ಮತ್ವದ ದೇವತೆಯಾದ ಮಹಾಶೆಗ್ತಿ , ಸಾವಿತ್ರೀಮಾವಾಹಯಾಮಿ – ಯಜುರ್ವೇದ ದೇವತೆಯಾದ ದೇವಿಯ ಇನ್ನೊಂದು ಶೆಗ್ತಿಯ ಆವಾಹನೆ ಮಾಡ್ತೆ, ಸರಸ್ವತೀಮಾವಾಹಯಾಮಿ – ವಿದ್ಯಾದೇವತೆಯ ಆವಾಹನೆ ಮಾಡ್ತೆ, ಛಂದರ್ಷೀನಾವಾಹಯಾಮಿ – ಗಾಯತ್ರೀಛಂದಸ್ಸಿನ ದ್ರಷ್ಟಾರರಾದ ಋಷಿವರೇಣ್ಯರ ಆವಾಹನೆ ಮಾಡ್ತೆ, ಶ್ರಿಯಮಾವಾಹಯಾಮಿ – ಶ್ರೀರೂಪದ ಲಕ್ಷ್ಮಿಯನ್ನೂ ಆವಾಹನೆ ಮಾಡ್ತೆ

ಗಾಯತ್ರಿ ಪರಿಚಯ:
ಇಷ್ಟೆಲ್ಲ ವಿಶಯ ಹೇಳಿ ಅಪ್ಪಗ ಗಾಯತ್ರಿದೇವಿಯ ಒಂದು ಹಂತದ ಪರಿಚಯ ಆವುತ್ತು. ಇದಾದ ಮೇಗೆ, ಒಟ್ಟಾರೆಯಾಗಿ ಗಾಯತ್ರಿಯ ಪರಿಚಯ ತೂಷ್ಣಿಯಾಗಿ ಮಾಡಿಗೊಂಬದು.
ಪರಿಚಯ ಹೇಳಿರೆ ಎಂತರ? ಕೇಳಿದೆ ಬಟ್ಟಮಾವನ ಹತ್ತರೆ.
ಗಾಯತ್ರಿಯ ದ್ರಷ್ಟಾರ ಆರು, ಯೇವ ಛಂದಸ್ಸು ಹೇಳ್ತರಿಂದ ಹಿಡುದು, ಗಾಯತ್ರಿ ದೇವರ ದೇಹದ ವಿವಿಧ ಭಾಗಂಗಳಲ್ಲಿ ಯೇವಯೇವ ದೇವರು ಇಪ್ಪದು ಹೇಳ್ತರ ಬಗ್ಗೆ ಸ್ಥೂಲ ವಿವರಣೆ ಇಲ್ಲಿದ್ದಾಡ.
ಇದುದೇ ಹಾಂಗೆ, ಸುರುವಿಂಗೆ ಮಂತ್ರ ಹೇಳಿಗೊಂಡು ಹೋದವು; ತಲಗೆ ಏನೂ ಹೊಕ್ಕಿದಿಲ್ಲೆ ಹೇಳಿದೆ. ಪುನಾ ಒಂದೊಂದೇ ವಿವರುಸಿಗೊಂಡು ಹೋದವು – ಮಂತ್ರದ ಒಟ್ಟೊಟ್ಟಿಂಗೆ.

ಗಾಯತ್ರಿಯಾ ಗಾಯತ್ರೀಚ್ಛಂದೋ – ಗಾಯತ್ರೀ ಮಂತ್ರ ಇಪ್ಪ ಛಂದಸ್ಸಿಂಗೆ “ಗಾಯತ್ರೀ” ಛಂದಸ್ಸು ಹೇಳಿಯೇ ಹೆಸರಡ,  ವಿಶ್ವಾಮಿತ್ರಋಷಿಃ – ಮಂತ್ರದ ದ್ರಷ್ಟಾರ ಆದ ವಿಶ್ವಾಮಿತ್ರ ಋಷಿ, ಸವಿತಾ ದೇವತಾ – ವಿಶ್ವಾಮಿತ್ರ ಸೂರ್ಯನ ಬಗ್ಗೆ ಯೋಚನೆ ಮಾಡುವಗ ಈ ಜೆಪ ಹೊಳದ್ದಡ – ಹಾಂಗಾಗಿ ಇದಕ್ಕೆ ದೇವತೆ ಸವಿತೃ – ಸೂರ್ಯ ಇವೆಲ್ಲರನ್ನೂ ಆದಿಲಿ ನೆಂಪು ಮಾಡಿಗೊಂಬದು. ಅಗ್ನಿರ್ಮುಖಂ – ಗಾಯತ್ರಿಯ ಮುಖಲ್ಲಿ ಅಗ್ನಿದೇವರು ಇಪ್ಪದು, ಬ್ರಹ್ಮಾ ಶಿರೋ – ಶಿರಸ್ಸು-ತಲೆಲಿ ಬ್ರಹ್ಮದೇವರು, ವಿಷ್ಣುರ್-ಹೃದಯಗ್೦ – ಹೃದಯಲ್ಲಿ ವಿಷ್ಣು, ರುದ್ರಃಶಿಖಾ – ಶಿಖೆಲಿ – ಜೊಟ್ಟಿಲಿ ರುದ್ರ ನೆಲೆ ಆಯಿದ°, ಪೃಥಿವೀ ಯೋನಿಃ – ಆದಿಸ್ಥಾನಲ್ಲಿ ಭೂಮಿದೇವರು, ಪ್ರಾಣಾಪಾನವ್ಯಾನೋದಾನಸಮಾನಾ ಸಪ್ರಾಣಾಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ – ಹೇಳ್ತ ಐದು ಪ್ರಾಣವಾಯುಗಳ ರೂಪಲ್ಲಿ ದೇಹವ್ಯಾಪಿಯಾಗಿಪ್ಪ, ಶ್ವೇತವರ್ಣಾ – ಬೆಳಿಬಣ್ಣದ, ಸಾಂಖ್ಯಾಯನ ಸಗೋತ್ರಾ – ಸಾಂಖ್ಯಾಯನ ಹೇಳ್ತ ಗೋತ್ರಕ್ಕೆ ಸಗೋತ್ರ ಆಗಿದ್ದೊಂಡು – ಹೇಳಿರೆ ಸಾಂಖ್ಯಾಯನ ಗೋತ್ರಲ್ಲಿಪ್ಪ, ಗಾಯತ್ರೀ – ಗಾಯತ್ರಿದೇವಿಯು, ಚತುರ್ವಿಗ್೦ಶತ್ಯಕ್ಷರಾ – ಇಪ್ಪತ್ನಾಲ್ಕು ಅಕ್ಷರ ಹೊಂದಿದ್ದು, ತ್ರಿಪದಾ – ಮೂರುಕಾಲು ಹೊಂದಿದ್ದು, ಷಟ್ಕುಕ್ಷಿಃ – ಆರು ಶರೀರ ಹೊಂದಿಗೊಂಡಿದು. ಪಂಚಶೀರ್ಷೋಪನಯನೇ ವಿನಿಯೋಗಃ |
ಓಂ ಭೂಃ ಓಂ ಭುವಃ ಓಗ್೦ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಗ್೦ ಸತ್ಯಂ ||
– ಸಪ್ತಲೋಕಕ್ಕೂ ಅಧಿಪತಿಯಾಗಿ ಇಪ್ಪ ಗಾಯತ್ರೀ ದೇವಿಯ ಸದಾಸತತ ಸ್ಮರಣೆಮಾಡ್ತೆ.

ಗಾಯತ್ರಿ ಮುದ್ರೆ:
ಗಾಯತ್ರಿಯ ಸಮಗ್ರ ಜಾತಕ ಪರಿಚಯ ಆತಲ್ಲದೋ. ಇದು ಇಷ್ಟುದೇ ಮಂತ್ರಪೂರ್ವಕ ಆದ್ಸು.
ಇನ್ನು ತಂತ್ರಪೂರ್ವಕವಾಗಿ ಗಾಯತ್ರಿಯ ಸ್ತುತಿ ಆಯೇಕಲ್ಲದೋ? ಅದಕ್ಕೇ ಇಪ್ಪದು ’ಗಾಯತ್ರಿ ಮುದ್ರೆ’ಗೊ.  ಇಪ್ಪತ್ತನಾಕು ಅಕ್ಷರದ ಗಾಯತ್ರಿಗೆ ಇಪ್ಪತ್ತನಾಕು ಮುದ್ರೆಗಳ ಮೂಲಕ ಪ್ರಾರ್ಥನೆ ಮಾಡ್ತದಡ.
ಆ ಇಪ್ಪತ್ತನಾಕು ಹೀಂಗಿದ್ದಾಡ:

ಸುಮುಖಂ ಸಂಪುಟಂ ಚೈವ ವಿತತಂ ವಿಸ್ತೃತಂ ತಥಾ |
ದ್ವಿಮುಖಂ ತ್ರಿಮುಖಂಚೈವ ಚತುಷ್ಪಂಚಮುಖಂ ತಥಾ ||
ಷಣ್ಮುಖೋದೋ ಮುಖಂ ಚೈವ ವ್ಯಾಪಕಾಂಜಲಿಕಂ ತಥಾ |
ಶಕಟಂ ಯಮಾಪಾಶಂಚ ಗ್ರಥಿತಂಚೋನ್ಮುಖೋನ್ಮುಖಂ ||
ಪ್ರಲಂಬ ಮುಷ್ಟಿಕಂ ಚೈವ ಮತ್ಸ್ಯ ಕೂರ್ಮೋ ವರಾಹಕಂ |
ಏತಾಮುದ್ರಾಶ್ಚತುರ್ವಿಂಶಾ ಗಾಯತ್ರ್ಯಾಃ ಸುಪ್ರತಿಷ್ಠಿತಾ ||

– ಹೀಂಗೆ ಹೇಳಿಗೊಂಡು ಬಟ್ಟಮಾವ ಕೈಲಿ ಮುದ್ರೆಗಳ ಮಾಡಿತೋರುಸಿದವು. ಒಪ್ಪಣ್ಣಂಗೆ ಕುಂಟಾರುತಂತ್ರಿಗೊ ತಂತ್ರತೂಗುದು ನೆಂಪಾತು! 🙂
ಈಗೀಗ ಈ ಮುದ್ರೆಗಳ ಬಳಕೆ ತುಂಬಾ ಕಮ್ಮಿ ಆಯಿದು, ಆದರೆ – ಕನಿಷ್ಠ ಪಕ್ಷ ಆ ಮುದ್ರೆಗಳ ನೆಂಪು ಮಾಡ್ತ ಶ್ಲೋಕವನ್ನಾರೂ ಒಂದರಿ ಪಠಿಸೇಕು – ಹೇಳಿದವು ಬಟ್ಟಮಾವ°.

ಗಾಯತ್ರಿ ಜೆಪ:

ಇಷ್ಟೆಲ್ಲ ಆದ ಮತ್ತೆಯೇ ಗಾಯತ್ರಿ ಜೆಪ ಸುರು ಮಾಡ್ತದು.
ಮಾಷ್ಟ್ರುಮಾವಂಗೆ ಎಲೆತಿಂದು ಒಳ್ಳೆತ ಸರುವೀಸು ಇದ್ದ ಕಾರಣ ಬೇಗ ತಿಂದುದೇ ಆತು.
ಗಾಯತ್ರೀಜೆಪವ ಅಂದೇ ಕೇಳಿದ್ದು, ಅಂದಿಂದಲೇ ಹೇಳಿದ್ದು. ಆದರೆ ಅದರ ಸ್ಪಷ್ಟವಾದ ಅರ್ತ ಎಂತರ ಅಂಬಗ – ಕೇಳಿದೆ.
ಮಹರ್ಷಿ ವಿಶ್ವಾಮಿತ್ರಂಗೆ ಒಲುದ ಈ ಗಾಯತ್ರೀಜೆಪಕ್ಕೆ ಸಾವಿರಾರು ಋಷಿಮುನಿಗೊ ಲಕ್ಷಾಂತರ ನಮುನೆಲಿ ಭಾಷ್ಯ – ಟೀಕೆಗೊ ಬರದ್ದವಾಡ. ಎಲ್ಲವನ್ನೂ ಕಲ್ತುಗೊಂಬಲೆ ಒಂದು ಜನ್ಮ ಸಾಲ – ಹೇಳಿದವು ಬಟ್ಟಮಾವ°.
ಆದರೆ ಸಾಮಾನ್ಯಜನರಿಂಗೆ ಅರ್ತ ಅಪ್ಪ ರೀತಿಯ ಒಂದು ಅರ್ತ ಹೀಂಗೆ ಹೇಳ್ಳಕ್ಕು – ಹೇಳಿ ಮಾಷ್ಟ್ರುಮಾವ° ವಿವರುಸುಲೆ ಸುರುಮಾಡಿದವು:

ವಿಶ್ವಾಮಿತ್ರ ಋಷಿಃ | ದೇವೀ ಗಾಯತ್ರೀ ಛಂದಃ | ಸವಿತಾ ದೇವತಾ | ಗಾಯತ್ರೀ ಮಂತ್ರ ದ್ರಷ್ಟಾರನಾದ ವಿಶ್ವಾಮಿತ್ರ ಋಷಿಯನ್ನೂ, ಗಾಯತ್ರೀ ಮಂತ್ರ ನಿಬದ್ಧವಾದ ಗಾಯತ್ರೀ ಛಂದಸ್ಸು, ಗಾಯತ್ರೀಮೂಲಕ ಪ್ರಾರ್ಥನೆಮಾಡ್ತ ಸೂರ್ಯ ದೇವರ ಮತ್ತೊಂದರಿ ನೆಂಪುಮಾಡಿಗೊಂಡು ಜೆಪದ ಹಂತಕ್ಕೆ ಎತ್ತುದು.

ಓಂ | ಬ್ರಹ್ಮತೇಜಸ್ಸಿನ
ಭೂರ್ಭುವಸ್ಸುವಃ
| ಭೂಲೋಕ-ಭುವರ್ಲೋಕ-ಸುವರ್ಲೋಕಂಗಳಲ್ಲಿ (ಹಾಂಗೆಯೇ – ಋಗ್-ಯಜುಃ-ಸಾಮ ವೇದಂಗಳಲ್ಲಿಯೂ ) ಶ್ರೇಷ್ಠವಾದ,

  1. ತತ್ಸವಿತುರ್ವರೇಣಿಯಂ |  ಶ್ರೇಷ್ಠ ಕಿರಣಂಗೊ ಇಪ್ಪ ಪ್ರಕಾಶಮಾನವಾದ ಸವಿತೃದೇವರ (ಸುರುವಾಣ ಪಾದಲ್ಲಿ ಎಂಟಕ್ಷರ ಅಪ್ಪಲೆ ಜೆಪಕ್ಕಪ್ಪಗ “ವರೇಣಿಯಂ” ಹೇಳ್ತದು. ಅಂತೆ ಹೇಳ್ತರೆ “ವರೇಣ್ಯಂ” ಹೇಳ್ತವಡ)
  2. ಭರ್ಗೋ ದೇವಸ್ಯ ಧೀಮಹಿ || ತೇಜಸ್ಸಿನ ಮನಸ್ಸಿಲೇ ಧ್ಯಾನಿಸುತ್ತೆ.
  3. ಧಿಯೋಯೋನಃ ಪ್ರಚೋದಯಾತ್ ||| ಇದು ನಮ್ಮ ’ಧೀ’ ಶಕ್ತಿಯ (ಮನಸ್ಸಿನ ಶೆಗ್ತಿಯ)ಪ್ರಚೋದನೆ, ಉದ್ದೀಪನೆ ಮಾಡಲಿ.

ನೂರಾರು ಪುಟಗಟ್ಳೆ ಇಪ್ಪ ಅರ್ತವ ಮೂರೇ ಗೆರೆಮಾಡಿ ಹೇಳಿದವು ಮಾಷ್ಟ್ರುಮಾವ°! ವಾಹ್!

ಗಾಯತ್ರೀ ಉತ್ತರ ಮುದ್ರೆಗೊ:
ಗಾಯತ್ರಿ ಜೆಪ ಸುರುಮಾಡ್ತ ಪೂರ್ವಲ್ಲಿ ಮುದ್ರಾಪ್ರದರ್ಶನ ಮಾಡಿತ್ತಿದ್ದು. ಗಾಯತ್ರಿ ಆದ ಮತ್ತೆಯೂ ಮುದ್ರೆಗಳ ಮಾಡ್ಳಿದ್ದು. ಇದಕ್ಕೆ ‘ಉತ್ತರ ಮುದ್ರಿಕಾ’ ಹೇಳ್ತದಡ.

ಸುರಭಿರ್ಜ್ಞಾನ ಚಕ್ರಂಚ ಭೂಮಿಃ ಕೂರ್ಮೋಥಪಂಕಜಂ |
ಲಿಂಗಂ ನಿರ್ಯಾಣ ಮುದ್ರಾ ಚ ಗಾಯತ್ರ್ಯುತ್ತರ ಮುದ್ರಿಕಾ ||

ಮದಲಿಂಗೆ ವಟುಗೊಕ್ಕೆ ಜೆಪದ ಮಂತ್ರ ಹೇಳಿಕೊಡುವಗ ಈ ಮುದ್ರೆಗಳನ್ನೂ ಹೇಳಿಕೊಟ್ಟೊಂಡಿತ್ತಿದ್ದವು, ಆದರೆ ಕ್ರಮೇಣ ಅದರ ಬಿಟ್ಟುಗೊಂಡು ಬಂದವು.
ಮತ್ತೆ ಮತ್ತೆ ಕೇವಲ ಶ್ಲೋಕಮಾಂತ್ರ ಹೇಳ್ತ ಪರಿವಾಡಿ ಸುರು ಆತು. ಈಗ ಈ ಶ್ಲೋಕ ಹೇಳಿರೆ ಸಾಕಾವುತ್ತಡ! – ಹೇಳಿದವು ಬಟ್ಟಮಾವ° ಕೈ ಮೊಗಚ್ಚಿಗೊಂಡು!!

~

ಇದಿಷ್ಟೇ ಅಲ್ಲದ್ದೆ, ಗಾಯತ್ರಿ ಜೆಪ ಮಾಡ್ತರ ಬಗ್ಗೆಯೂ ಒಂದೆರಡು ಸೂಚನೆಗಳನ್ನೂ ಬಟ್ಟಮಾವ° ಹೇಳಿತೋರುಸಿದವು:

  • ಗಾಯತ್ರಿಜೆಪವ ದೊಡ್ಡ ಸ್ವರಲ್ಲಿ ಮಾಡ್ಳಿಲ್ಲೇಡ. ಮವುನವಾಗಿ, ನವಗೆ ಮಾಂತ್ರ ಕೇಳ್ತ ನಮುನೆಲಿ ಮಾಡೇಕಡ. ಹಾಂಗೆನೋಡಿರೆ, ಯೇವದೇ ಜೆಪವನ್ನೂ ಜೋರು ಮಾಡ್ತ ಮರಿಯಾದಿ ಇಲ್ಲೇಡ.
  • ಸ್ವಚ್ಛ ಮನಸ್ಸಿನ, ಸ್ವಚ್ಛ ಶರೀರಲ್ಲಿ ಕೂದೊಂಡು ಗಾಯತ್ರಿ ಮಾಡೇಕಡ.
  • ಜೆಪ ಮಾಡುವಗ ಲೆಕ್ಕ ಮಡಿಕ್ಕೊಳೇಕು. ಹನ್ನೆರಡು ಗಾಯತ್ರಿ ಮಾಡ್ತವ ಅಂಬೆರ್ಪಿನ ಜೆನ ಹೇಳಿ ಲೆಕ್ಕ. ಹನ್ನೆರಡು-ಇಪ್ಪತ್ನಾಕು-ನಲ್ವತ್ತೆಂಟು-ನೂರ ಎಂಟು-ಸಾವಿರದಎಂಟು – ಹೀಂಗೆ ಎಷ್ಟುಬೇಕಾರೂ ಮಾಡ್ಲಕ್ಕು – ಹೇಳಿದವು.
    ಪರಕ್ಕಜೆ ಅನಂತಣ್ಣ ಹೊತ್ತಿಂಗೊಂದು ಗಂಟೆ ಜೆಪಮಾಡ್ತದು ನೆಂಪಾತು ಒಪ್ಪಣ್ಣಂಗೆ!
  • ಜೆಪದ ಲೆಕ್ಕ ಮಾಡುವಗ ಕೈಬೆರಳಿನ ಮಡುಸದ್ದೆ ಲೆಕ್ಕಮಾಡೇಕಡ. ಒಂದೋ ಬೆರಳಕೊಡಿಗಳ ಹೆಬ್ಬೆರಳಿಲಿ ಮುಟ್ಟಿಗೊಂಡು – ಅಲ್ಲದ್ದರೆ ಹೆಬ್ಬೆರಳಿಲಿ ಒಳುದ ಬೆರಳಿನ ಗೆಂಟಿನ ಮುಟ್ಟಿಗೊಂಡು ಜೆಪ ಮಾಡೇಕಡ.

ಈ ನಮುನೆ ಸುಮಾರು ಕಟ್ಟುಗೊ, ಕಟ್ಟುಪಾಡುಗೊ ಎಲ್ಲ ನಮ್ಮೊಳದಿಕೆ ಇತ್ತು. ಇಂದು ಅಷ್ಟಾಗಿ ಬಳಕೆ ಮಾಡ್ತವಿಲ್ಲೆ, ಎಲ್ಲ ಸುಲಾಬಲ್ಲಿ ಮುಗುಶುತ್ತವು – ಹೇಳಿದವು ಮಾಷ್ಟ್ರುಮಾವ°.
ಅಪ್ಪೂ, ಜೆಪವೇ ಮಾಡ್ತವಿಲ್ಲೆ, ಇನ್ನು ಜೆಪಲೆಕ್ಕ ಮಾಡ್ತದು ಎಲ್ಲಿಗೆ, ಹ್ಹೊ! – ಹೇಳಿದವು ಒಂದರಿ ಬಟ್ಟಮಾವ°.
ಇದೇ ಛಂದಸ್ಸಿಲಿ ಬೇರೆಬೇರೆ ದೇವರ ’ಗಾಯತ್ರಿ’ಗೊ ಇದ್ದಾಡ.
ಆದರೆ ಪ್ರಾರಂಭಲ್ಲಿ ಬಂದದು ಇದಾದ ಕಾರಣ “ಮೂಲಗಾಯತ್ರಿ” ಆಗಿ ಒಳುತ್ತು – ಹೇಳಿದವು.

~

ಆಗಳೇ ಮುಗಿಲು ಕಟ್ಟಿಕಟ್ಟಿ ಕಾದ್ದದು ಒಂದರಿ ಜೋರು ಸೊಯಿಪ್ಪಿತ್ತದಾ! ಮಳೆ ಜೋರು ಬಡಿತ್ತದೇ, ಮಾಷ್ಟ್ರಮನೆ ಅತ್ತೆ ತೋಟಕ್ಕೆ ಹೋಗಿದ್ದೋರು ಬಂದು ಮನೆಒಳ ಸೇರಿಗೊಂಡವು.
ಗಾಯತ್ರಿಗೆ ತಂಗೆಹುಟ್ಟಿದ ಲೆಕ್ಕದ ಲಾಡು ನಿನ್ನೆಯೇ ಕಳುಸಿಕೊಟ್ಟಿದನಾಡ, ಆಚಮನೆ ದೊಡ್ಡಣ್ಣ. ಹಾಂಗೆ ಬಿಡುಸಿ ಮಡಗಿದವು.
ಬಟ್ಟಮಾವಂಗೆ ಚೀಪೆ ಶುದ್ದಿಗೊ ಅಕ್ಕು; ಆದರೆ ಚೀಪೆ ಆಗ! ಹಾಂಗೆ ನಾಕು ತಂದು ಮಡಗಿದ್ದರ ಇಬ್ರೇ ತಿಂದು ಮುಗುಶಿದ್ದದು.
ಮಳೆ ಹನ್ಕುದು ಕಮ್ಮಿ ಆದ ಕೂಡ್ಳೇ ಮೆಲ್ಲಂಗೆ ಹೆರಟೆ.

ಬಾಯಿಲಿ ಗಾಯತ್ರಿಯ ತಂಗೆ ಲೆಕ್ಕದ ಚೀಪೆ, ತಲೆಲಿ ಗಾಯತ್ರಿ ಲೆಕ್ಕದ ಚೀಪೆ!
ಉದಿಉದಿಯಪ್ಪಗ ಕೆಲಸ ಇಪ್ಪ ಹೊತ್ತಿಂಗೆ ಗಾಯತ್ರಿಯ ಕೊಶಿ ಕಾಂಬಲೆ ಹೆರಟು, ಮತ್ತೆ ‘ಗಾಯತ್ರಿ’ಯ  ಬಗ್ಗೆ ತಿಳಿಯಲೆ ಸಮಯ ಸಿಕ್ಕಿದ್ದದು ಗ್ರೇಶಿ ಕೊಶಿ ಆವುತ್ತು!
ಬಟ್ಟಮಾವಂಗೆ ಸೂತಕ – ಅಲ್ಲಿ ಗಾಯತ್ರಿಯ ಕೊಶಿಯ ಶುದ್ದಿ ಬಂದದು – ಅಲ್ಲಿ ಗಾಯತ್ರಿ ಜೆಪದ ಶುದ್ದಿ ಬಂದದು – ಅಲ್ಲಿ ಈ ಶುದ್ದಿ ಬಂದದು – ಎಲ್ಲ ಒಂದೊಂದು ಒದಗಿ ಬಪ್ಪದಲ್ಲದೋ?!
ಅಂತೂ ಉಪಾಯಲ್ಲಿ ಗಾಯತ್ರಿಯ ಬಗ್ಗೆ ಕಲ್ತಾತದಾ!
~

ಅದೇನೇ ಇರಳಿ, ಒಂದು ಗಾಯತ್ರಿ ಜೆಪದ ಹಿಂದೆ-ಮುಂದೆ ಆಗಿ ಇಷ್ಟೆಲ್ಲ ವಿವರಣೆ ಇದ್ದತ್ತೋ?! ಸಾಮಾನ್ಯವಾಗಿ ನಾವು ಜೆಪಮಾಡುವಗ ಕೇವಲ ಆ ಮೂರು ಗೆರೆ ಮಾಂತ್ರ ಹೇಳ್ತದು.
ಬಟ್ಟಮಾವ° ವಿವರುಸುದು ನೋಡಿರೆ ನಾವು ಎಷ್ಟೋ ವಿಶಯಂಗಳ ದಿನಂದದಿನಕ್ಕೆ ಬಿಟ್ಟುಗೊಂಡು ಬತ್ತಾ ಇದ್ದು – ಹೇಳಿ ಕಂಡತ್ತು!
ಎಂತ ಹೇಳ್ತಿ?
ಗಾಯಂತಂ ತ್ರಾಯತಿ – ಸಾ ಗಾಯತ್ರೀ | – ಆರು ಗಾಯತ್ರಿಯ ಜೆಪಮಾಡ್ತನೋ, ಅವನ ಇದು ಒಳಿಶುತ್ತಡ – ಮಾಷ್ಟ್ರುಮಾವ° ಹೇಳಿದ್ದು ತಲೆಲಿ ತಿರುಗಿಂಡೇ ಇತ್ತು.

ಒಂದೊಪ್ಪ:ನಮ್ಮ ಅಜ್ಜಂದ್ರ ಗಾಯತ್ರಿ ಒಳುಶಿದ್ದು. ನಾವು ಗಾಯತ್ರಿಯನ್ನಾದರೂ ಒಳುಶುವೊ, ಆಗದೋ?

63 thoughts on “ವಿಶ್ವಾಮಿತ್ರ ಋಷಿಃ, ದೇವೀ ಗಾಯತ್ರೀ ಛಂದಃ, ಸವಿತಾ ದೇವತಾ ||

  1. ಇದರ ಬಗ್ಗೆ ಮಿತ್ತೂರು ಪುರೋಹಿತರ ಕನ್ನಡ ಸಂಧ್ಯಾಭಾಷ್ಯಲ್ಲಿ ಸಮಗ್ರ ವಿವರಣೆ ಇದ್ದು.
    ಗಾಯತ್ರಿ ಮಂತ್ರದ ಅರ್ಥವ್ಯಾಪ್ತಿಯ ವಿಸ್ತಾರವಾಗಿ ವಿವರುಸಿದ್ದವು.
    ಲೇಖನ ಲಾಯಿಕ್ಕ ಬರದ್ದಿ. ಧನ್ಯವಾದ.
    ಕೆಲವು ಮುದ್ರೆಗೊ (ಆವಾಹನ ಮುದ್ರೆ, ಗಾಯತ್ರೀ ಮುದ್ರೆ, ಅಂಕುಶ ಮುದ್ರೆ ಮತ್ತೆ ಲಲಿತಾ ಸಹಸ್ರನಾಮದ ಲೋಪಾ ಮುದ್ರೆ), ಅದೇ ರೀತಿ ಲಲಿತಾ ಸಹಸ್ರ ನಾಮದ ಕರ/ಅಂಗ ನ್ಯಾಸದ ಬಗ್ಗೆ ಆರಿಂಗಾದರು ಗೊಂತಿದ್ದರೆ ತಿಳುಶಿ

    1. ಹರೇ ರಾಮ ಒಪ್ಪಣ್ಣ.ವಿವರಣಾತ್ಮಕ ಸುದ್ದಿ.ಬಾರೀ ಲಾಯಕಕೆ ಬಯಿ೦ದು.ಧನ್ಯವಾದ೦ಗೊ.

    1. ನಮಸ್ಕಾರ. ಪ್ರೀತಿಯ ಒಪ್ಪಂಗೊ ಕಂಡು ಕೊಶಿ ಆತು.
      ನಿಂಗೊ ಎಂತ ಮಾಡ್ತಾ ಇದ್ದಿ? ಎಲ್ಲಿದ್ದಿ ಈಗ? ಕಣಿಯಾರಲ್ಲಿಯೋ ?

  2. ಈ ಮುದ್ರೆಗಳ ಪೊಟೊ ಇದ್ದಲ್ಲಿ ಲಾಯಕ್ ಅಗಿತ್ತು

    1. ಗಾಯತ್ರಿ ಮುದ್ರೆಗಳ ವಿವರ ಹಾಕುವೊ. ಆದರೆ ನಿಂಗಳ ವಿವರ ಹೇಳ್ತಿರೋ?
      ಎಂತ ಮಾಡ್ತಾ ಇದ್ದಿ? ಎಲ್ಲಿದ್ದಿ ಈಗ?

  3. ಪ್ರತಿದಿನ ಉದಿಯಪ್ಪಗಳೂ,ಹೊತ್ತೋಪಗಳೂ ಉದಯ,ಅಸ್ತಮಾನದ ಸಮಯಲ್ಲಿ ಪ್ರಪಂಚಕ್ಕೆಲ್ಲ ಬೆಣಚ್ಚು ಕೊಡುವ ಸೂರ್ಯಂಗೆ ಕೃತಜ್ಞತೆ ಹೇಳುವ ಉದ್ದೇಶಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”.
    ಸಂಧ್ಯಾವಂದನೆ ಮಾಡುದರಿಂದ ಮನಸ್ಸಿಂಗೆ ನೆಮ್ಮದಿ,ಶಾಂತಿ ಸಿಕ್ಕುತ್ತು .ಆರೋಗ್ಯ ದೃಷ್ಟಿಂದ ಪ್ರಾಣಾಯಾಮ ಮಾಡಿರೆ ಮನಸ್ಸು ಶುದ್ದ ಆಗಿ ,ಬುದ್ಧಿ ಚುರುಕು ಆವುತ್ತು.ಆ ಮೂಲಕ ತೇಜಸ್ಸು, ಓಜಸ್ಸು, ಆಯಸ್ಸು ಹೆಚ್ಚುತ್ತು. ಋಷಿವರೇಣ್ಯರ ಧೀರ್ಘಾಯುಷ್ಯದ ಗುಟ್ಟು ಈ ಸಂಧ್ಯಾವಂದನೆ,”ಪ್ರಾಣಾಯಾಮ”.ಈ ರೀತಿಯ ನಿತ್ಯ ಅಭ್ಯಾಸಲ್ಲಿ ನಮ್ಮ ಜೀವನದಲ್ಲಿ ಶಿಸ್ತು ಮೂಡುಲೆ ಸುರೂವಾಣ ಮೆಟ್ಟಿಲು ಹೇಳಿರೆ ಸಂಧ್ಯಾವಂದನೆ. ಮುದ್ರೆ, ತಾತ್ಪರ್ಯ,ಗಾಯತ್ರಿಯ ವಿವರಣೆ ಒಪ್ಪಣ್ಣ ಶುದ್ಧಿಲಿ ಚೆಂದಕೆ ವಿವರ್ಸಿದ್ದಕ್ಕೆ ಧನ್ಯವಾದಂಗೋ!!!

    1. ಗಣೇಶಮಾವಾ..
      ಮಾಷ್ಟ್ರುಮಾವ ಒಪ್ಪಣ್ಣಂಗೆ ತೋರುಸಿದ ಗಾಯತ್ರಿಯ ಸರೀಗುರ್ತ ಮಾಡಿದ್ದು ನಿಂಗಳೇ ಅಲ್ಲದೋ? 🙂
      ಒಪ್ಪ ಕೊಟ್ಟದು ಕೊಶೀ ಆತು.

      ಹರೇರಾಮ

  4. ಧನ್ಯವಾದಂಗೋ..ಉತ್ತಮ ಮಾಹಿತಿ ಕೊಟ್ಟದಕ್ಕೆ

  5. Thumba arthapoorna lekhana……Mantragala swara(waves/frequency) namma mele parinama beeurttu….

  6. {ಗಾಯತ್ರಿಯಾ ಗಾಯತ್ರೀಚ್ಛಂದೋ – ಗಾಯತ್ರೀ ಮಂತ್ರ ಇಪ್ಪ ಛಂದಸ್ಸಿಂಗೆ “ಗಾಯತ್ರೀ” ಛಂದಸ್ಸು ಹೇಳಿಯೇ ಹೆಸರಡ, ವಿಶ್ವಾಮಿತ್ರಋಷಿಃ – ಮಂತ್ರದ ದ್ರಷ್ಟಾರ ಆದ ವಿಶ್ವಾಮಿತ್ರ ಋಷಿ, ಸವಿತಾ ದೇವತಾ – ವಿಶ್ವಾಮಿತ್ರ ಸೂರ್ಯನ ಬಗ್ಗೆ ಯೋಚನೆ ಮಾಡುವಗ ಈ ಜೆಪ ಹೊಳದ್ದಡ – ಹಾಂಗಾಗಿ ಇದಕ್ಕೆ ದೇವತೆ ಸವಿತೃ – ಸೂರ್ಯ ಇವೆಲ್ಲರನ್ನೂ ಆದಿಲಿ ನೆಂಪು ಮಾಡಿಗೊಂಬದು. ಅಗ್ನಿರ್ಮುಖಂ – ಗಾಯತ್ರಿಯ ಮುಖಲ್ಲಿ ಅಗ್ನಿದೇವರು ಇಪ್ಪದು, ಬ್ರಹ್ಮಾ ಶಿರೋ – ಶಿರಸ್ಸು-ತಲೆಲಿ ಬ್ರಹ್ಮದೇವರು, ವಿಷ್ಣುರ್-ಹೃದಯಗ್೦ – ಹೃದಯಲ್ಲಿ ವಿಷ್ಣು, ರುದ್ರಃಶಿಖಾ – ಶಿಖೆಲಿ – ಜೊಟ್ಟಿಲಿ ರುದ್ರ ನೆಲೆ ಆಯಿದ°, ಪೃಥಿವೀ ಯೋನಿಃ – ಆದಿಸ್ಥಾನಲ್ಲಿ ಭೂಮಿದೇವರು, ಪ್ರಾಣಾಪಾನವ್ಯಾನೋದಾನಸಮಾನಾ ಸಪ್ರಾಣಾ – ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ – ಹೇಳ್ತ ಐದು ಪ್ರಾಣವಾಯುಗಳ ರೂಪಲ್ಲಿ ದೇಹವ್ಯಾಪಿಯಾಗಿಪ್ಪ, ಶ್ವೇತವರ್ಣಾ – ಬೆಳಿಬಣ್ಣದ, ಸಾಂಖ್ಯಾಯನ ಸಗೋತ್ರಾ – ಸಾಂಖ್ಯಾಯನ ಹೇಳ್ತ ಗೋತ್ರಕ್ಕೆ ಸಗೋತ್ರ ಆಗಿದ್ದೊಂಡು – ಹೇಳಿರೆ ಸಾಂಖ್ಯಾಯನ ಗೋತ್ರಲ್ಲಿಪ್ಪ, ಗಾಯತ್ರೀ – ಗಾಯತ್ರಿದೇವಿಯು, ಚತುರ್ವಿಗ್೦ಶತ್ಯಕ್ಷರಾ – ಇಪ್ಪತ್ನಾಲ್ಕು ಅಕ್ಷರ ಹೊಂದಿದ್ದು, ತ್ರಿಪದಾ – ಮೂರುಕಾಲು ಹೊಂದಿದ್ದು, ಷಟ್ಕುಕ್ಷಿಃ – ಆರು ಶರೀರ ಹೊಂದಿಗೊಂಡಿದು. ಪಂಚಶೀರ್ಷೋಪನಯನೇ ವಿನಿಯೋಗಃ |
    ಓಂ ಭೂಃ ಓಂ ಭುವಃ ಓಗ್೦ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಗ್೦ ಸತ್ಯಂ || – ಸಪ್ತಲೋಕಕ್ಕೂ ಅಧಿಪತಿಯಾಗಿ ಇಪ್ಪ ಗಾಯತ್ರೀ ದೇವಿಯ ಸದಾಸತತ ಸ್ಮರಣೆಮಾಡ್ತೆ.}

    ಒಟ್ಟಾರೆ ಲೇಖನ ಓದಿ ಅಪ್ಪಗ ಒಬ್ಬ ಜಿಜ್ಞಾಸುವಿಂಗೆ, ಧರ್ಮಾಧರ್ಮಗಳ ವಿವೇಚನೆ ಮಾಡ್ತವಂಗೆ, ನಿತ್ಯ ಜೀವನಲ್ಲಿ ಧರ್ಮಾನುಷ್ಠಾನ ಮಾಡ್ತವಂಗೆ ಆದರೆ ಅನುಷ್ಠಾನದ ಅರ್ಥ ಸರಿಯಾಗಿ ತಿಳಿಯದ್ದವಂಗೆ ಮತ್ತು ತಿಳಿಯಬಯಸುವವಂಗೆ, ಈ ಕೆಳಾಣ ಸಂಶಯಂಗೊ ಬಂತು ಹೇಳಿ ಮಡಿಕ್ಕೊಂಬ. ಈ ಸಂಶಯಂಗೊಕ್ಕೆ ಎಲ್ಲಿಯಾದರೂ ಸಮಾಧಾನ ಸಿಕ್ಕುಗೋ? ಅಥವಾ ಒಬ್ಬ ಅಧರ್ಮಿಯಾದವ ಮನಸ್ಸು ಬದಲಾಯಿಸಿ ಧರ್ಮಾಚರಣೆಗೆ ಅಣಿಯಾದವ ಈ ಲೇಖನ ಓದಿ ಅಪ್ಪಗ ಕೆಳಾಣ ಸಂಶಯಂಗೊ ಬಂತು ಹೇಳಿ ಮಡಿಕ್ಕೊಂಬ. ಅಂಬಗ ಅವನ ಪ್ರಶ್ನೆಗೊಕ್ಕೆ ಉತ್ತರ ಎಲ್ಲಿಯಾರು ಸಿಕ್ಕುಗೋ?

    ೧. ಈ ಗಾಯತ್ರೀ ಮಂತ್ರಕ್ಕೆ ನಮ್ಮ ಶಾಸ್ತ್ರಂಗಳಲ್ಲಿ ಇಷ್ಟೋಂದು ಮಹತ್ವ ಇದ್ದು. ಏನು ಜಪತಪ ಮಾಡದ್ದರೂ ಗಾಯತ್ರಿ ಒಂದು ಮಾಡೆಕ್ಕು ಹೇಳ್ತವು. ಇಷ್ಟೊಂದು ಮಹತ್ವ ಇಪ್ಪ ಗಾಯತ್ರಿ ಮಂತ್ರದ ದೇವತೆ ನಮ್ಮ ಸೂರ್ಯ ಹೇಂಗೆ ಅಪ್ಪಲೆ ಸಾಧ್ಯ? ಲೋಕದ ಸೃಷ್ಟಿಲಿ ಕೋಟಿ ಸೂರ್ಯರಿದ್ದವು. ಅವಕ್ಕೆ ಹೆಸರು ಸೂರ್ಯನೋ ಮತ್ತೊಂದೋ ಗೊಂತಿಲ್ಲೆ. ಇಂಥಾ ಯಕಶ್ಚಿತ್ ಸೂರ್ಯಂಗೆ ಇಂಥಾ ಒಂದು ಅತಿ ಮಹತ್ವದ ಮಂತ್ರ ಎಂತಕ್ಕಿದ್ದು?
    ೨. ಸೂರ್ಯಾದಿ ನಕ್ಷತ್ರಂಗೊ ವಿನಾಶಿ. ಒಂದು ದಿನ ನಂದಿ ಹೋಪ ಅಗ್ನಿ. ಇಂಥಾ ಸಾಮಾನ್ಯ ಸೂರ್ಯಂಗೆ ಇಷ್ಟೊಂದು ಮಹತ್ವದ ಮಂತ್ರ ಎಂತಕ್ಕೇ?
    ೩. ಇಂದಲ್ಲ ನಾಳೆ ನಾಶ ಆಗಿ ಹೋಪ ಸೂರ್ಯನ ಸರ್ವರೂ ದಿನನಿತ್ಯ ಜಪ ಮಾಡುವ ಅವಶ್ಯಕತೆ ಎಂತರ?
    ೪. ಕೇವಲ ಭೂ ಲೋಕಕ್ಕೆ ಅಧಿಪತಿಯಾಗಿಪ್ಪ ಸೂರ್ಯ ಸಪ್ತಲೋಕಕ್ಕೆ ಅಧಿಪತಿ ಅಪ್ಪದು ಹೇಂಗೆ? ಭೂ ಹೊರತಾಗಿ ಮೇಲೆ ಹೇಳಿದ ಎಲ್ಲಾ ಲೋಕಂಗೊ ಸೌರ ಮಂಡಲಲ್ಲಿ ಎಲ್ಲಿಯೂ ಇಲ್ಲೆನ್ನೆ?
    ೫. ಇಲ್ಲಿ ’ಗಾಯತ್ರಿ ದೇವಿ’ ಎಲ್ಲಿಂದ ಬಂದದು? ಗಾಯತ್ರಿ ಮಂತ್ರದ ಚ್ಂದಸ್ಸು ’ಗಾಯತ್ರಿ’ ಎಂದು ಹೇಳಿ ಆತು. ದೇವತಾ ’ಸವಿತೃ’ ಹೇಳಿ ಆತು. ಹಾಂಗಿಪ್ಪಗ ಈ ಚಂದಸ್ಸು ’ದೇವಿ’ ಆದದ್ದು ಹೇಂಗೆ? ಅಂಬಗ ಗಾಯತ್ರೀ ಮಂತ್ರದ ದೇವತೆ ಸವಿತೃವೋ ಅತ್ವಾ ಗಾಯತ್ರಿಯೋ?
    ೬. ಸೂರ್ಯ ಪಂಚ ಪ್ರಾಣ ರೂಪಲ್ಲಿ ದೇಹಲ್ಲಿ ಇದ್ದು ಹೇಳಿ ಆದರೆ ಈ ಪ್ರಾಣಂಗಳ ಕೊಡುವವನೂ, ಪ್ರಾಣ ತೆಗವವನೂ ಆರು? ಸೂರ್ಯನೇ ಅಥವಾ ಇನ್ನೊಬ್ಬನೇ?
    ೭. ಮಂತ್ರಂಗಳಲ್ಲಿ ಶ್ರೇಷ್ಟವಾದ ಗಾಯತ್ರೀ ಮಂತ್ರಲ್ಲಿ ಎಲ್ಲಿಯೂ ಶ್ರೇಷ್ಠರಲಿ ಶ್ರೇಷ್ಠನಾದ ಪರಮಾತ್ಮನ ಉಲ್ಲೇಖ ಇಲ್ಲೆಯಾ ಅಂಬಗ! ಹಾಂಗಿದ್ದರೆ ಪರಮಾತ್ಮನ ಪೂಜಿಸದ್ದೆಯೂ ಬರೇ ಸೂರ್ಯನ ಪೂಜಿಸಿಗೊಂಡು ಇದ್ದರೆ ಧರ್ಮ ಮಾರ್ಗಲ್ಲಿ ನಡೆದ ಹಾಂಗೆ ಆವುತ್ತಾ (ನಿತ್ಯವೂ ಗಾಯತ್ರಿ ಜಪ ಮಾತ್ರ ಮಾಡುವವರ ಬಗ್ಗೆ)? ಅಥವಾ ಗಾಯತ್ರೀ ಮಂತ್ರ ಪರಮಾತ್ಮನ ಬಗ್ಗೆಯೇ ಹೇಳಿ ಇದ್ದಲ್ಲಿ ಸೂರ್ಯನ ಉಲ್ಲೇಖ ಎಂತಕ್ಕೆ?
    ೮. ಗಾಯತ್ರೀ ಮಂತ್ರ ಋಕ್ ಮತ್ತು ಯಜುರ್ ವೇದಂಗಳಲ್ಲಿ ಬತ್ತು. ಇನ್ನುಳಿದ ಮಂತ್ರಂಗೊ ಎಲ್ಲಿ ಬತ್ತು?

    1. It is well established fact that chanting of mantras with correct swara has many possitive effects.Ofcourse it is well and good if we knew the meaning also….

    2. ನೀರ್ಕಜೆಅಪ್ಪಚ್ಚೀ..
      ಒಬ್ಬ ಧರ್ಮಜಿಜ್ಞಾಸುವ ಜಾಗೆಂದ ನಿಂದು ನೋಡಿರೆ ಧರ್ಮ-ಮಂತ್ರ-ವೇದಂಗೊ ಹೇಂಗಕ್ಕು – ಹೇಳ್ತರ ಬಗ್ಗೆ ಚಿಂತನೆ ಕೊಟ್ಟ ಒಪ್ಪ ಬಾರೀ ಕೊಶೀ ಆತು.

      ನಮ್ಮ ಬೈಲಿಲಿ ವಿದ್ವತ್ತಿಂಗೆ ಏನೂ ಕಮ್ಮಿ ಇಲ್ಲೆ.
      ವಿದ್ವಾನಣ್ಣ ಇನ್ನಾಣ ಸರ್ತಿ ಸಿಕ್ಕಿಪ್ಪಗ ಸ್ವತಃ ಕೇಳಿ, ಇದಕ್ಕೆ ಸಮಾಧಾನ ಹುಡ್ಕುವೊ, ನಿಂಗಳೂ ಇರಿ. ಆಗದೋ?

      ಹರೇರಾಮ..

  7. ಉತ್ತಮ ಮಾಹಿತಿ. ಗಾಯತ್ರಿ ಮಂತ್ರ ಹೇಳುವಾಗ ಜಪ ಮಾಡುವಾಗ ಅದರ ಮಹತ್ವದ ಅರಿವಿದ್ದು ಮಾಡಿದರೆ ಪರಿಣಾಮಕಾರಿಯಾಗಿರುತ್ತದೆ. ಗಾಯತ್ರ ಮಂತ್ರ ಉಪದೇಶ ಆಗದೆ ಪಠಿಸಬಾರದು ಎಂಬ ನಿಯಮವಿದೆ. ಅಂತೆ ಉಪದೇಶ ಅದವರು ಅದನ್ನು ಬಾಯ್ದೆರೆಯಾಗಿ ಪರರಿಗೆ ಕೇಳುವಂತೆ ಹೇಳಬಾರದು ಎಂದು ಇದೆ. ಇಲ್ಲಿ ಗಾಯತ್ರಿ ಮಂತ್ರದ ಸರ್ವ ವಿವರವನ್ನು ಕೊಟ್ಟಿದ್ದು ಮಂತ್ರವನ್ನು ಮಾತ್ರ ಎಲ್ಲು ಹೇಳದಿದ್ದುದು ಉಚಿತವಾಗಿ ಕಂಡಿತು. ಶ್ರದ್ದೆ ಭಕ್ತಿಯಿಂದ ಕಾಲ ಕಾಲಕ್ಕೆ ಸಂಧ್ಯಾವಂದನೆ ಮಾಡುವುದು ಆದ್ಯ ಕರ್ಮಗಳಲ್ಲಿ ಒಂದು.

    1. ರಾಜಣ್ಣಾ..
      ಬೈಲಿಂಗೆ ಬಂದು ಒಪ್ಪ ಕೊಟ್ಟದು ಕಂಡು ತುಂಬಾ ಕೊಶಿ ಆತು.
      { ಬಾಯ್ದೆರೆಯಾಗಿ ಪರರಿಗೆ ಕೇಳುವಂತೆ ಹೇಳಬಾರದು }
      – ಸರಿಯಾದ ಮಾತು.
      ಇಂತಹ ಅಪರೂಪದ ಕ್ರಮಗಳು ಇನ್ನು ಮುಂದಕ್ಕೂ ಉಳಿದಾವೋ? 🙁

  8. ಗಾಯತ್ರಿ ಮ೦ತ್ರದ ಬಗ್ಗೆ ವಿವರಿಸಿದ್ದದು ಭಾರೀ ಲಾಯಕ ಆಯಿದು.ಸ೦ಗ್ರಹಯೊಗ್ಯ ಲೀಖನ.ಧನ್ಯವಾದ ಒಪ್ಪಣ್ಣ೦ಗೆ.

  9. ಒಪ್ಪಣ್ಣೋ…………………………….,

    ಗಾಯತ್ರಿ ಜೆಪದ ಪ್ರತಿ ಹಂತವನ್ನೂ ಸೂಕ್ಷ್ಮವಾಗಿ ವಿವರುಸಿ, ಅದರ ಎಳೆ ಎಳೆ ಬಿಡುಸಿ ಲಾಯ್ಕಲ್ಲಿ ಬೈಲಿಲಿ ಹರಗಿ ಮಡಗಿದ್ದೆ. ಈ ಒಂದು ಅಮೂಲ್ಯ ಶುದ್ದಿಯ ಎಲ್ಲೋರಿಂಗೂ ಅರ್ತ ಅಪ್ಪ ಹಾಂಗೆ ಹೇಳಿ ಕೊಡ್ಸಿದ್ದಕ್ಕೆ ತುಂಬಾ ತುಂಬಾ ತುಂಬಾ ಧನ್ಯವಾದಂಗೋ.
    ಚೆಂದದ ಗಾಯತ್ರಿ ದೇವಿಯ ಪಟದ ಒಟ್ಟಿಂಗೆ ಅಷ್ಟೇ ಚೆಂದದ ವಿಸ್ತಾರ ವಿವರಣೆ ಶುದ್ದಿಯ ಇನ್ನೂ ಚೆಂದ ಮಾಡಿತ್ತು.

    ಹಿರಿಯರಿಂದ ಪರಂಪರೆಲಿ ಅಪ್ಪಂದ ಮಗಂಗೆ ಸೀದಾ ಹರುದು ಬಪ್ಪ ಒಂದು ಸೊತ್ತು ಹೇಳಿದರೆ ‘ಗಾಯತ್ರಿ ಮಂತ್ರ’. ಅದರಲ್ಲಿಯೂ ಮನೆಲಿ ಹಿರಿಯ ಜೀವ ಇದ್ದರೆ ಅವರ ಜೀವನಸಾಧನೆಲಿ ಬಂದ, ಅವರ ಗುರುಗಳಿಂದ ಅವು ಕಲ್ತದೂ ಕೂಡಾ ಪುಳ್ಳಿಗೆ ಸಿಕ್ಕಿದರೆ ಅದು ಮಹಾಭಾಗ್ಯವೇ ಅಲ್ಲದೋ!!!

    [ಬ್ರಹ್ಮತೇಜಸ್ಸಿನ ಭೂಲೋಕ-ಭುವರ್ಲೋಕ-ಸುವರ್ಲೋಕಂಗಳಲ್ಲಿ (ಹಾಂಗೆಯೇ – ಋಗ್-ಯಜುಃ-ಸಾಮ ವೇದಂಗಳಲ್ಲಿಯೂ ) ಶ್ರೇಷ್ಠ ಕಿರಣಂಗೊ ಇಪ್ಪ ಪ್ರಕಾಶಮಾನವಾದ ಸವಿತೃದೇವರ ತೇಜಸ್ಸಿನ ಮನಸ್ಸಿಲೇ ಧ್ಯಾನಿಸುತ್ತೆ. ಇದು ನಮ್ಮ ’ಧೀ’ ಶಕ್ತಿಯ (ಮನಸ್ಸಿನ ಶೆಗ್ತಿಯ)ಪ್ರಚೋದನೆ, ಉದ್ದೀಪನೆ ಮಾಡಲಿ.]

    ಒಪ್ಪಣ್ಣ, ತುಂಬಾ ಲಾಯ್ಕದ ಸ್ಪಷ್ಟ ವಿವರಣೆ ಗಾಯತ್ರಿ ಮಂತ್ರದ್ದು ಕೊಟ್ಟಿದೆ ನೀನು.

    ನಮ್ಮ ಎಲ್ಲಾ ಮಕ್ಕೊಗೂ ಕೂಡಾ ಗಾಯತ್ರಿಯ ಉಪದೇಶ ಸರಿಯಾಗಿಯೇ ಆಗಿ, ಎಲ್ಲ ಮಕ್ಕೊ ಗಾಯತ್ರಿಯ ಒಲಿಶಿಗೊಂಡು, ಗಾಯತ್ರಿ ಮಂತ್ರಲ್ಲಿ ಹೇಳ್ತ ಹಾಂಗೆ ಎಲ್ಲರ ‘ಧೀ’ ಶಕ್ತಿಯ ಉದ್ದೀಪನೆ ಮಾಡಿ ಎಲ್ಲೋರಿಂಗೂ ಮಂಗಳ ಆಗಲಿ.

    ಆಚಮನೆ ದೊಡ್ಡಣ್ಣನ ಮಗಳು ಗಾಯತ್ರಿ ಅಕ್ಕ° ಆದ ಕೊಶಿಯ ಒಟ್ಟಿಂಗೆ ಅಪುರೂಪಲ್ಲಿ ಬಟ್ಟಮಾವ°, ಮಾಷ್ಟ್ರುಮಾವ°, ಒಪ್ಪಣ್ಣ ಮೂರು ಜನರ ಸೇರುವಿಕೆಲಿ ಬಂದ ಗಾಯತ್ರಿ ಮಂತ್ರದ ವಿವರ ಬೈಲಿಂಗೆ ಒಂದು ಅತ್ಯುತ್ತಮ ಮಾಹಿತಿ ಸಿಕ್ಕಿತ್ತು. ಒಂದೊಪ್ಪ ಲಾಯ್ಕಾಯಿದು. ನಮ್ಮ ಅಜ್ಜಂದ್ರ ಒಳಿಶಿದ ಗಾಯತ್ರಿಯ ಒಳಿಶೆಕ್ಕಾದ್ದದು ನಮ್ಮ ಕರ್ತವ್ಯ. ಅದುವೇ ನಮ್ಮ ಧರ್ಮವೂ ಅಲ್ಲದೋ?
    ಇಂದು ಗಾಯತ್ರಿ ಒಳುದರೆ ನಾಳೆ ನಮ್ಮ ಮಕ್ಕಳೂ ಅವರ ಸಂತತಿಯೂ ಒಳಿಗು.

    1. ಶ್ರೀಅಕ್ಕಾ, ಶುದ್ದಿಗೆ ಚೆಂದದ ಒಪ್ಪ ಕೊಟ್ಟದಕ್ಕೆ ನಮಸ್ಕಾರಂಗೊ.
      {ಇಂದು ಗಾಯತ್ರಿ ಒಳುದರೆ ನಾಳೆ ನಮ್ಮ ಮಕ್ಕಳೂ ಅವರ ಸಂತತಿಯೂ ಒಳಿಗು.}
      ಸರಿಯಾಗಿ ಹೇಳಿದಿ.
      ನಮ್ಮ ಅಜ್ಜಂದ್ರು ಗಾಯತ್ರಿಮಾಡಿದ ಪುಣ್ಯಲ್ಲೇ ಅಲ್ಲದೋ – ನಾವು ಇಂದು ಇಷ್ಟು ’ಧೀ’ವಂತರಾಗಿ ಬದ್ಕುತ್ತದು..?
      ಎಲ್ಲೋರಿಂಗೂ ಧೀಶೆಗ್ತಿ ಪ್ರಚೋದನೆ ಆಗಲಿ – ಹೇಳುವಗ ನೆಂಪಾತು, ’ಧೀ’ರಜ್ ಎಂತ ಮಾಡ್ತಾ ಇದ್ದ°? ಶಾಲೆ ಸುರು ಆಯಿದೋ? 🙂

      1. ಒಪ್ಪಣ್ಣೋ,

        ‘ಧೀ’ ಗೆ ಶಾಲೆ ಸುರು ಆಯಿದು. ಕೊಶೀಲಿ ಇದ್ದ°.

        ಗಾಯತ್ರಿಯ ನೀನು ಹೇಳಿದ ರೀತಿಲಿ ಸರಿಯಾಗಿ ಒಲಿಶಿ, ಅದರ ಫಲಲ್ಲಿ ಅವ° ಬೆಳಗಿ ನಿನ್ನ ಹಾಂಗೇ, ನಿನ್ನ ಪ್ರತಿರೂಪ ಆಗಲಿ ಅಳಿಯ° ಹೇಳಿ ನೀನು ಮನಸಾ ಹಾರಯಿಸು. ನಿನ್ನ ಆಶೀರ್ವಾದ ಅವನ ಮೇಲಿರಲಿ..

  10. ಒಪ್ಪಣ್ಣಾ,
    ಗಾಯತ್ರಿ ಜೆಪ ಮಾಡುವ ಪ್ರತಿಯೊಂದು ಹಂತವನ್ನೂ ವಿವರವಾಗಿ ತಿಳಿಸಿ ಕೊಟ್ಟದು ಲಾಯಿಕ ಆಯಿದು.
    ಅಂತೇ ಹೇಳಿಗೊಂಡು ಹೋಪದಕ್ಕೂ ಅರ್ಥ ತಿಳ್ಕೊಂಡು ಹೇಳುವದಕ್ಕೂ ತುಂಬಾ ವೆತ್ಯಾಸ ಇದ್ದು.
    ಗಾಯತ್ರಿ ಮುದ್ರೆಗಳ ಬಗ್ಗೆ ಮಾಹಿತಿ ತುಂಬಾ ಅಪರೂಪ. ಮುದ್ರೆಗಳ ಇಲ್ಲಿ ತೋರುಸಲೆ ಎಡಿಯದ್ದರೂ ಶ್ಲೋಕ ರೂಪಲ್ಲಿ ಕೊಟ್ಟು ಮತ್ತೊಂದರಿ ನೆಂಪು ಮಾಡಿಸಿ ಕೊಟ್ಟೆ.
    ಗಾಯಾನ್ (=ಪ್ರಾಣಾನ್) ತ್ರಾಯತೇ ಇತಿ ಗಾಯತ್ರಿ ಹೇಳಿ ಕೇಳಿದೆ. ಯಾವುದು ನಮ್ಮ ಪ್ರಾಣವ ಕಾಪಾಡುತ್ತೋ ಅದುವೇ ಗಾಯತ್ರಿ.
    ಸೂರ್ಯ (ಸವಿತೃ) ಇಲ್ಲದ್ದ ಜೀವನ ಜಾನ್ಸಲೇ ಸಾಧ್ಯ ಇಲ್ಲೆ. ಅಂತಹ ಶಕ್ತಿಗೆ ನಮಿಸಿ, ಗಾಯತ್ರಿ ಮಂತ್ರ ಹೇಳಿ ಅರ್ಘ್ಯ ಬಿಟ್ಟು ಅದರೂ ಕೃತಜ್ಞತೆ ಸಲ್ಲುಸುವ ಕಾರ್ಯ ಜನಿವಾರ ಹಾಕಿದವು ಎಲ್ಲರೂ ಮಾಡಲೇ ಬೇಕು.
    ಗಾಯತ್ರಿ ಮಂತ್ರ ಹೇಳುವಾಗ ಉದ್ದಾಕ್ಕೆ ಹೇಳಿಗೊಂಡು ಹೋಪದಲ್ಲ. ಅದರ ಐದು ವಿಭಾಗ ಮಾಡಿ ಅಲ್ಲಿ ಒಂದು ಸಣ್ಣ pause ಕೊಟ್ಟು ಮುಂದುವರಿಯೆಕ್ಕು ಹೇಳುವದು ಕೇಳಿದ್ದೆ. ಅದರ ಪ್ರಕಾರ
    ಓಂ
    ಭೂರ್ಭುವಸ್ಸುವಃ
    ತತ್ಸವಿತುರ್ವರೇಣಿಯಂ
    ಭರ್ಗೋ ದೇವಸ್ಯ ಧೀಮಹಿ
    ಧಿಯೋಯೋನಃ ಪ್ರಚೋದಯಾತ್

    ಸೂತಕದ ಬಗ್ಗೆ ಒಂದು ಮಾಹಿತಿ:
    ವೃದ್ಧಿ ಸೂತಕಕ್ಕೆ ಅಮೆ ಹೇಳಿಯೂ, ಕ್ಷಯ ಸೂತಕಕ್ಕೆ ಹೊಲೆ ಹೇಳಿಯೂ ಹೇಳುವದು ಕೇಳಿದ್ದೆ.

    1. ಶರ್ಮಪ್ಪಚ್ಚೀ,
      ಗಾಯತ್ರಿ ಮುದ್ರೆಗಳ ಬಗ್ಗೆ ಮಾಹಿತಿ ತೀರಾ ವಿರಳ.
      ಆ ಶ್ಲೋಕವನ್ನೂ ವೇದಪಾಟಶಾಲೆಗಳಲ್ಲಿ ಹೇಳಿಕೊಡ್ತವಿಲ್ಲೆ. ಹೀಂಗೇ ಮುಂದರುದರೆ ಕ್ರಮೇಣ ಅದು ಮರದೇ ಹೋಕೋ?
      ಗಾಯತ್ರಿಯ ವಿವರಣೆ ಕಂಡು ಕೊಶಿ ಆತು.
      ಹೇಳಿದಾಂಗೆ, ಹೀಂಗಿರ್ತರ ನಾವೇ ಮರದರೆ, ಮತ್ತೆ ಜರ್ಮನಿಗೆ ಹೋಗಿ ಕಲ್ತುಗೊಂಡು ಬರೆಕಷ್ಟೇಯೋ ಏನೋ! ಉಮ್ಮಪ್ಪ.

  11. laikaidu shuddi..
    purusottu iddare istu heludu alladre kuntu gayatri helire aavuttu.
    idara odi innadaru sariyagi elloru gayatri jepa maadali.
    aarude thooshnili jepa mugishavanne oppnna.
    olleya shuddi.
    oppannange olledagali.

    1. { ಕುಂಟುಗಾಯತ್ರಿ }
      ಅದಾ, ಗಂಪಬಟ್ರು ಹೇಳಿಗೊಂಡಿದ್ದ ಈ ಶೆಬ್ದ ಪುನಾ ನೆಂಪುಮಾಡಿದ್ದು ಕೊಶಿ ಆತು.

      ಕುಂಟುಗಾಯತ್ರಿಯ ಬಿಟ್ಟು, ಸರಿಯಾದ ಗಾಯತ್ರಿ ಮಾಡುವೋರು ಬೈಲಿಲಿ ಇದ್ದವಲ್ಲದೋ? ಅದೇ ಕೊಶಿ! 🙂

  12. ಲಾಯ್ಕಾಯ್ದು ಒಪ್ಪಣ್ಣ ಶುದ್ದಿ…’ಒಂದೊಪ್ಪ’ಕ್ಕೆ ಎನ್ನದೊಂದು ಒಪ್ಪ….
    ಬಾರಿ ಲಾಯ್ಕ ವಿವರುಸಿದ್ದೆ….

    ಒಹ್..ಗಾಯತ್ರಿ ಜಪಕ್ಕೆ ಇಷ್ಟೆಲ್ಲ ಹೇಳುಲಿದ್ದ?ಮತ್ತೆ ೨ ನಿಮಿಶಲ್ಲಿ ಜಪ ಆವ್ತು ಈಗೀಗ?ಹೇಂಗೊ… 😉

    [ ಹನ್ನೆರಡು ಗಾಯತ್ರಿ ಮಾಡ್ತವ ಅಂಬೆರ್ಪಿನ ಜೆನ ಹೇಳಿ ಲೆಕ್ಕ.] – ಅಂಬಗ ನೆಗೆಗಾರಣ್ಣ,ಒಪ್ಪಣ್ಣ ಎಲ್ಲ ಎಷ್ಟು ಮಾಡ್ತವೊ.. 😉 ಪುರುಸೊತ್ತು ಅಪ್ಪದೆ ಕಮ್ಮಿ ಅಲ್ದ?

    [ಹಾಂಗೆ ನಾಕು ತಂದು ಮಡಗಿದ್ದರ ಇಬ್ರೇ ತಿಂದು ಮುಗುಶಿದ್ದದು.]-ಮಾಷ್ಟ್ರುಮಾವಂಗೆ ಎಂತಕೆ ಸುಮ್ಮನೆ ದೂರು ಹಾಕುದು?ಅವರ ಬಾಯಿಲಿ ಎಲೆ ಇತ್ತಿದ್ದು ಅಲ್ದ?…ಹಾಂಗೆಲ್ಲ ಅಷ್ಟು ಬೇಗ ತುಪ್ಪುತ್ತವಿಲ್ಲೆನ್ನೆ.. 😉

    1. {ಮತ್ತೆ ೨ ನಿಮಿಶಲ್ಲಿ ಜಪ ಆವ್ತು ಈಗೀಗ?ಹೇಂಗೊ }
      ಹೀಂಗೆಲ್ಲಾ ಪ್ರಷ್ನೆ ಕೇಳಿಕ್ಕಡ ಒಪ್ಪಕ್ಕೋ.. ಎನ್ನ ಹೆಂಡತ್ತಿ ಓದಿಗೊಂಡು ಎನ್ನ ಮೋರೆಯನ್ನೇ ನೋಡ್ತು ಇಲ್ಲಿ.

      1. ಒಪ್ಪಕ್ಕ,

        [ಒಹ್..ಗಾಯತ್ರಿ ಜಪಕ್ಕೆ ಇಷ್ಟೆಲ್ಲ ಹೇಳುಲಿದ್ದ?ಮತ್ತೆ ೨ ನಿಮಿಶಲ್ಲಿ ಜಪ ಆವ್ತು ಈಗೀಗ?ಹೇಂಗೊ… ]

        ತಂಗೇ..,
        ಹಾಂಗೆಲ್ಲ ಕೇಳಿದರೆ ಆವುತ್ತಾ? ಸಮಯ ಒಂದೇ ಹಾಂಗೆ ಇರ್ತೋ? 😉
        ಮನೆದೇವರ ಮೆಚ್ಚಿಸಿಗೋಳ್ತ ಎಲ್ಲವನ್ನುದೇ ಮಾಡಿಗೊಳ್ಳೆಡದಾ? 😉 😉
        ಮೊದಲಾಣ ಹಾಂಗೇ ದೊಡ್ಡ ಜೆಪ ಸುರು ಅಕ್ಕು… 😉 ರಜ್ಜ ಸಮಯ ಹೋಗಲಿ…

        1. ಒಪ್ಪಕ್ಕೋ,
          { ಮತ್ತೆ ೨ ನಿಮಿಶಲ್ಲಿ ಜಪ ಆವ್ತು }
          ಜೆಪಕ್ಕೆ ಎರಡೇ ನಿಮಿಷ. ಅದರಿಂದ ಮದಲು-ಮತ್ತೆ ಹೇಳುಲಿದ್ದಲ್ಲದೋ – ಅದಕ್ಕೇ ಹೊತ್ತು ಹಿಡಿತ್ತದು ನೋಡು! 😎
          ಅದಿರಳಿ, ಮಾಷ್ಟ್ರುಮಾವ ಅವ್ವಾಗಿ ಬೇಡ ಹೇಳಿರೆ ಬಾಕಿದ್ದೋನು ತಿಂಬಲಾಗ ಹೇಳಿ ಇದ್ದೋ?

          ತೆಕ್ಕುಂಜೆಕುಮಾರಣ್ಣಾ,
          ಮದುವೆ ಆದ ಸಮೆಯಲ್ಲಿ ’ವಡೆ’ ಕೊಡುಸಿದ್ದಿದ್ದರೆ ಹೀಂಗೆ ಮೋರೆ ನೋಡ್ತಿತವಿಲ್ಲೆಯೋ, ಏನೋ! 😉

          ಶ್ರೀಅಕ್ಕಾ,
          ದೊಡ್ಡಜೆಪ ಸುರುಅಪ್ಪಲೆ ನಿಂದಿದೇ ಇಲ್ಲೆ!
          ಬೈಲು ದೊಡ್ಡ ಆದ ಹಾಂಗೆ ಜೆಪವೂ ದೊಡ್ಡ ಆವುತ್ತಿದಾ… 🙂

          1. ಒಪ್ಪಣ್ಣಾ,

            [ಬೈಲು ದೊಡ್ಡ ಆದ ಹಾಂಗೆ ಜೆಪವೂ ದೊಡ್ಡ ಆವುತ್ತಿದಾ…]

            ಜೆಪ ದೊಡ್ಡ ಆಗಿ ಸಹಸ್ರನಾಮಾರ್ಚನೆ ಆವುತ್ತೋ?? 😉 😉 🙁

      2. @ತೆಕ್ಕುಂಜ ಕುಮಾರಣ್ಣ,
        ಅಷ್ಟು ಹೆದರಿಕೆ ಇದ್ದೊ ಅಂಬಗ? 😉

        @ಶ್ರೀ ಅಕ್ಕ,
        ಹಾ… ಅದುದೆ ಅಪ್ಪು….ಮನೆದೇವರ ಮೆಚ್ಚುಸಿಗೊಳದ್ರೆ ಕಷ್ಟವೆ…ಇದರ ಬಗ್ಗೆ ಜಾಸ್ತಿ ವಿವರ ಬಾವನತ್ರೆ ಕೇಳೆಕ್ಕಷ್ಟೆ… 😉

        @ಒಪ್ಪಣ್ಣ,
        [ಅದರಿಂದ ಮದಲು-ಮತ್ತೆ ಹೇಳುಲಿದ್ದಲ್ಲದೋ – ಅದಕ್ಕೇ ಹೊತ್ತು ಹಿಡಿತ್ತದು ]- ಅದೆ..ಆ ಹೊತ್ತು ಹಿಡಿತ್ತದರ ನುಂಗುದ ಅಂಬಗ?

  13. ಲೇಖನ ಲಾಯಕಿದ್ದು. ಹೇಮಾರುಸಿ ಮಡಗೆಕ್ಕಾದ್ದದೇ.

    1. ಮಡಗುವಗ ಕೈಗೆ ಸಿಕ್ಕುತ್ತಲ್ಲೇ ಮಡಗಿಕ್ಕೇಕಿದಾ. ಹೊಗೆಅಟ್ಟಕ್ಕೆ ಎತ್ತಿರೆ ಕಷ್ಟ! 🙂

      1. ಹೆಹೆಹೆ ಹೀಂಗಿರುತ್ಸರ ಮಡಗಲೆ ನಮ್ಮತ್ರೆ ಕಬ್ಬಿಣದ ಕವಾಟಿದ್ದು. ಚೆನ್ನೈ ಭಾವನತ್ರೆ ಮರದ್ದು ಇದ್ದಡ. ಬೇಂಕಿನ ಅಜ್ಜನತ್ರೆ [ಬೊಳುಂಬು ಗೋಪಾಲ ಮಾವ°] ಕೇಳಿರೆ ಲೋಕರು, ಷ್ಟೋಂಗ್ ರೂಮು ಹೇಳುಗು. ನಮ್ಮತ್ರೆ ಇಪ್ಪದು ಕಬ್ಬಿಣದ್ದು.

  14. “ಗಾಯತ್ರಿ ಜೆಪ ಸುರುಮಾಡ್ತ ಪೂರ್ವಲ್ಲಿ ಮುದ್ರಾಪ್ರದರ್ಶನ ಮಾಡಿತ್ತಿದ್ದು. ಗಾಯತ್ರಿ ಆದ ಮತ್ತೆಯೂ ಮುದ್ರೆಗಳ ಮಾಡ್ಳಿದ್ದು”
    ಇದರ ಬಗ್ಗೆ ಪೆರಡಾಲ ವೇದ ಪಾಟ ಲ್ಲಿ ಹೇಳಿ ಕೊಡುತ್ತವಿಲ್ಲೆ……
    ಲೇಖನ ಲಾಯಿಕ ಅಯಿದು. ನಿತ್ಯ ಗಾಯತ್ರಿ ಜಪ ಮಾಡುವಕ್ಕೆ ಗಾಯತ್ರಿಯ ಮಹಿಮೆಯ ತಿಳಿವಲೆ ಒಳ್ಳೆ ಲೇಖನ

    1. {ಪೆರಡಾಲ ವೇದ ಪಾಟ ಲ್ಲಿ ಹೇಳಿ ಕೊಡುತ್ತವಿಲ್ಲೆ}
      ಅಪ್ಪು, ಈ ಶ್ಲೋಕಂಗೊ ಈಗಾಣ ಸಂಧ್ಯಾವಂದನೆ “ಪಠ್ಯಕ್ರಮ” ಆದ ಮತ್ತೆ ಕಾಣ್ತಿಲ್ಲೇಡ, ಬಟ್ಟಮಾವ ಬೇಜಾರುಮಾಡಿಗೊಂಡವು.

    1. ಹರೇರಾಮ..
      ಅಷ್ಟುದೂರಲ್ಲಿ ಕೂದು ಸತ್ಯನಾರಾಯಣ ಪೂಜೆಯ ಉಂಡೆಪಚಾದ ತಿಂದ ನಿಂಗೊಗೆ ಗಾಯತ್ರಿಜೆಪ ಖಂಡಿತವಾಗಿಯೂ ಕೊಶಿ ಆಗಿಕ್ಕು, ಅಲ್ಲದೊ? 🙂

      1. ಅಪ್ಪು, ಖ೦ಡಿತಾ.. ಎ೦ತ ಸ೦ಶಯ?
        ಆದರೆ ಆನು ಇಷ್ಟು ವಿವರವಾಗಿ ಇಲ್ಲಿ ಜೆಪ ಮಾಡ್ತ ಕ್ರಮ ಇಲ್ಲೆ. ಆದರುದೆ ಎಷ್ಟು ಹೊತ್ತಾದರೂ ಕೂಡ ದಿನಾಗಳೂ ಗಾಯತ್ರಿ, ಅಷ್ಟಾಕ್ಷರಿ, ಪ೦ಚಾಕ್ಷರಿ, ವಿಷ್ಣು ಸಹಸ್ರನಾಮ ಇಷ್ಟು ಮಾಡದ್ದೆ ಇರ್ತಿಲ್ಲೆ. ಇಷ್ಟೆಲ್ಲ ವಿವರವಾಗಿ ತಿಳಿಸಿದ ನಿ೦ಗೊಗೆ ಎಷ್ಟು ಒಪ್ಪ ಕೊಟ್ರುದೆ ಸಾಲ.

  15. ಒಳ್ಳೆ ಮಾಹಿತಿ ಇಪ್ಪ ಲೇಖನ ಒಪ್ಪಣ್ಣಾ..
    ಇದೇ ವಿಚಾರಂಗಳ ಡಾ. ಮಡ್ವ ಶಾಂ ಭಟ್ರು ಅವರ ಒಂದು ಪುಸ್ತಕಲ್ಲಿ ಬರದ್ದವು, ವೇದ ಮಂತ್ರ ಗೀತಾಂಜಲಿ ಹೇಳಿ ಪುಸ್ತಕ..
    ಲಾಯಕ ಆಯಿದು ಬರದ್ದು..
    ಒಂದೊಪ್ಪ:):)

    1. ಮಂಗ್ಳೂರುಮಾಣಿಯ ಒಪ್ಪಕ್ಕೆ ಧನ್ಯವಾದಂಗೊ.
      ಮಡ್ವದಜ್ಜ ಬರದ ಆ ಪುಸ್ತಕಂದಲೇ ಅದಾ, ರುದ್ರ-ಚೆಮೆಗೊ ಬೈಲಿಂಗೆ ಬಪ್ಪದು.
      ಶರ್ಮಪ್ಪಚ್ಚಿ ಪ್ರತಿ ಸೋಮವಾರ ಶುದ್ದಿಮಾಡಿ ಹಾಕುತ್ತವು, ನೋಡಿದೆಯೋ?
      ಕ್ರಮೇಣ ಗಾಯತ್ರಿಜೆಪದ್ದೂ ಬಕ್ಕೋ ಏನೋ.
      ಕಾದುನೋಡುವೊ°.

  16. ಅಸ್ತ್ರಾಯ ಫಟ್ || ಆ ಶಬ್ದದ ಮೂಲಕ ನಮ್ಮ ದೇಹದ ಸರ್ವತ್ರ ಗಾಯತ್ರೀದೇವರು ಆವಾಹನೆ ಆಗಲಿ. ಹಲವು ಕಾಲಂದ ತಲೆತಿಂದೊಂಡಿದ್ದಿದ್ದ, ಒಂದು ಸಂಶಯಕ್ಕೆ, ಒಪ್ಪಣ್ಣನ ಲೇಖನಲ್ಲಿ ಪರಿಹಾರ ಸಿಕಿತ್ತದ.
    ಅಂತೂ ಉಪಾಯಲ್ಲಿ ಗಾಯತ್ರಿಯ ಬಗ್ಗೆ ಕಲ್ತಾತು ! ಚೆಂದಕೆ ಪೀಟಿಕೆ ಕೊಟ್ಟು, ಮಾಶ್ಟ್ರುಮಾವನ ಹಾಂಗೆ ಹೇಳಿಕೊಟ್ಟರೆ, ಏವ ವಿಷಯ ಆದರು, ಆಸಕ್ತಿ ಹುಟ್ಟುಗು. ಅರಿಗ್ಗೆಜೆಪ ಮಾಡ್ತವು, ಮಾಡದ್ದವುಕ್ಕುದೆ ಗಾಯತ್ರಿ ಬಗ್ಗೆ ಒಳ್ಳೆ ಮಾಹಿತಿ ಸಿಕ್ಕಿತ್ತು. ಬಟ್ಟಮಾವ ಹೇಳಿದ್ದರ, ಒಪ್ಪಣ್ಣ ಚೆಂದಕೆ ಸವಿಸ್ತಾರವಾಗಿ ವಿವರಣೆ ನೀಡಿದ್ದ. ಎಡೆಲಿ, ಗೋಪಾಲಣ್ಣನುದೆ ಪೂರಕ ಮಾಹಿತಿ ಕೊಟ್ಟಿದವು. ಧನ್ಯವಾದಂಗೊ.

    ಹೇಳಿದ ಹಾಂಗೆ ಒಪ್ಪಣ್ಣಾ, ಕೂಸು ಗಾಯತ್ರಿಯ ತಂಗೆಗೆ ಎಂತ ಹೆಸರು ಮಡಗುತ್ತವೊ ?!

    1. ಬೊಳುಂಬುಮಾವಾ,
      ಪ್ರೀತಿಯ ಒಪ್ಪ ಕಂಡು ಕೊಶಿ ಆತು.
      {ಮಾಶ್ಟ್ರುಮಾವನ ಹಾಂಗೆ ಹೇಳಿಕೊಟ್ಟರೆ, ಏವ ವಿಷಯ ಆದರು, ಆಸಕ್ತಿ ಹುಟ್ಟುಗು}
      ವಿಶಯ ಅಪ್ಪಾದ್ದೇ!
      ಶುದ್ದಿಯ ಎಷ್ಟು ಬೇಕೋ – ಅಷ್ಟೇ ವಿವರುಸಿ ಸುಮ್ಮನೆ ಕೂದೊಂಗು ಅವು!

      ಗಾಯತ್ರಿಯ ತಂಗಗೆ ಹೆಸರೆಂತರ ಗೊಂತಾಯಿದಿಲ್ಲೆ.
      ನಾಳ್ತು ಶುದ್ದಕ್ಕೆ ಹೇಳಿಕೆ ಹೇಳಿದ್ದ, ನೆಡುಗಳಕ್ಕೆ ಹೋದ ಮತ್ತೆ ಗುಟ್ಟಿಲಿ ಆರಾರು ಮಾತಾಡ್ತವೋ ಕೇಳಿಗೊಳ್ತೆ, ಆಗದೋ? 🙂

  17. [ ಕ್ಷಯ ಸೂತಕ, ವೃದ್ಧಿ ಸೂತಕ] – ಈ ಪದ ಪ್ರಯೋಗ ಕೇಳಿ ಹಲವು ವರ್ಷವೇ ಆತು. ಸರಿಯಾಗಿ ಹೀಂಗೇ ಹೇಳಿರೇ ಚಂದ ಇದು.

    [ಮೈಲಿ ಜೆನಿವಾರ ಇಪ್ಪನ್ನಾರ ನೆಂಪುಮಡಗಿ ಹೇಳ್ತದು….] – ಹ್ಮ್ಮ್ಮ್ !!

    [(ಒಪ್ಪಣ್ಣಂಗೆ ಕಾಪಿಯೂ ಬಯಿಂದಿಲ್ಲೆ ಇದಾ] – ಒಪ್ಪಣ್ಣಂಗೆ ಹಾಲು ಕಷಾಯ ಅಲ್ಲದೋ!

    [ಮಾಷ್ಟ್ರಮನೆ ಅತ್ತೆ ತೋಟಕ್ಕೆ ಹೋಗಿತ್ತಿದ್ದವೋ ಕಾಣ್ತು, ಎಲ್ಲಿಯೂ ಕಂಡತ್ತಿಲ್ಲೆ ….] [ ಈಗ ಎಲೆತಟ್ಟೆ ಮಾಷ್ಟ್ರುಮಾವನ ಹತ್ತರೆ ಇದ್ದು.] – ತೋಟಕ್ಕೆ ಹೋಪಗಳೂ ಕೈಲಿ ಎಲೆತಟ್ಟೆ ಹಿಡ್ಕೊಂಡು ಹೋಪದೋಪ್ಪಾ!

    [ಮಾಷ್ಟ್ರುಮಾವ° ತೋರುಸಿದ ಗಾಯತ್ರೀದೇವಿ!!] – ಯಪ್ಪಾ..! ನೆಂಪು ಮಡುಗಿ ಸರಿಯಾಗಿ ಹೇಳಿದಿ.

    [ಈಗ ಶಿಖೆಇಲ್ಲದ್ದೋರು ಹಿಂದಲೆ ಮುಟ್ಟಿಗೊಳ್ತವು,] – ಬೋಸ ಭಾವ ಪ್ರತ್ಯೇಕ ಒಂದು ಜುಟ್ಟು ರೆಡಿಮೇಡ್ ಮಡಿಕ್ಕೊಂಡಿದ್ದವಡ . ಶಿಖಾಯೈ ವಷಟ್ ಹೇಳುವಾಗ ಅದರ ಹಾಕಿ ಮುಟ್ಟಿಗೊಂಬದಡ.

    ಇರಲಿ ಬಿಡಿ., ಆಚಮನೆ ಗಾಯತ್ರಿಯ ನೆಂಪಿಸ್ಯೊಂಡು ಈಚಮನೇಲಿ ಕೂದು ಗಾಯತ್ರೀ ವರ್ಣನೆ / ವಿವರಣೆ ಭಾರೀ ಲಾಯಕ್ಕ ಆಯ್ದು . ಗಾಯತ್ರಿ ಜೆಪ ಮಾಡ್ತರ ಬಗ್ಗೆಯೂ ಒಂದೆರಡು ಸೂಚನೆಗಳನ್ನೂ ಕೊಟ್ಟು ಶುದ್ಧಿ ಅತೀ ಉತ್ತಮ ಆಯ್ದು. ಗಾಯತ್ರೀ ವಿಶ್ಲೇಷಣೆ ಬೈಲಿಂಗೆ ಬರೆಕು ಹೇಳಿ ಗ್ರೇಶಿಯೊಂಡಿದ್ದ ಎನ್ನ ಕನಸು ನನಸಾತು ಹೇಳಿಗೊಂಡು ಇಲ್ಲಿಂದ ಒಪ್ಪ.

    ಕೂಸುಗೋ ಹೇಳ್ಳಕ್ಕೊ?- ಬಹು ದಿನಂದ ಜಿಜ್ಞಾಸೆ ಆಗಿಯೇ ಉಳುದ್ದು. ಸ್ಪಷ್ಟ ಉತ್ತರ ಆರೂ ಕೊಟ್ಟ ಹಾಂಗೇ ಕಂಡಿದಿಲ್ಲೆ. ಎನ್ನ ವೈಯುಕ್ತಿಕ ಅಭಿಪ್ರಾಯ – ಏಕೆ ಆಗದ್ದೆ?!. ‘ಎಡಿಗಾರೆ’ ಅಕ್ಕು!. ಗಾಯತ್ರೀ ಮಂತ್ರದ ಪ್ರತಿಯೊಂದು ಅಕ್ಷರಕ್ಕೂ ಬಹುತೂಕ ಗಾಂಭೀರ್ಯ ಇದ್ದು. ಅಕ್ಷರ ಎಲ್ಲಿಂದ ಹೆರಡೆಕ್ಕಾದ್ದೋ ಅಲ್ಲಿಂದ ಬರೆಕ್ಕು. ಅಂದರೆ ಮಾತ್ರ ಅದಕ್ಕೆ ಶಕ್ತಿ , ಫಲ. ಅಂತೇ ಮನರಂಜನೆ ಮಾಡಿಯೊಂಡು ಕ್ಯಾಸೆಟ್ಟು ಹಾಕಿ ಕೇಳಲೆ ಅಲ್ಲ. ಗಾಯತ್ರೀ ಮಂತ್ರ ಉಪದೇಶ ಮೂಲಕ ಪಡಕ್ಕೊಳ್ಳೆಕ್ಕು. ಇಷ್ಟು ಅರ್ಥ ಮಾಡದ್ದೆ ಚೋಮ ದಾಸನೂ ಲಾಯಕ್ಕ ಹಾಡಿದ್ದು ಹೇಳ್ವದು ಅರ್ಥ ಹೀನ. “ಭೂರ್ಭುವಸ್ಸುವಃ ……ಧೀಯೋಯೋನಃ …”. ಇದರ ನಾಭಿಂದ ಹೆರಡುಸುವಷ್ಟು ಶಾರೀರಿಕ ಶಕ್ತಿ ಬೇಕು. ಗಾಯತ್ರೀ ಜೆಪ ನಿತ್ಯ ತ್ರಿಕಾಲ ಸಂಧ್ಯಾವಂದನೆ ಮಾಡ್ಳೆ. ಸಂಗೀತ ರೂಪಲ್ಲಿಯೋ , ಅಂತೇ ಕೂದೊಂಡು ಇಡೀ ಬೈಲಿಂಗೆ ಕೆಳ್ತಾಂಗೆ ಬರೇ ಹಾಡ್ಳೋ ಅಲ್ಲ. ಪ್ರಾಚೀನ ಕಾಲಲ್ಲಿ ಕೂಸುಗೊಕ್ಕೂ ಉಪ್ನಾನ ಗಾಯತ್ರೀ ಉಪಾಸನೆ ಇತ್ತಡ. ಕಾಲಾಂತರಲ್ಲಿ ಕೂಸುಗಳ ಶಾರೀರಿಕ ಪರಿಸ್ಥಿತಿಯ ಮನಗಂಡು ನಿಷೇಧ ಹೇಳಿ ಮಾಡಿಗೊಂಡದು. ದಯವಿಟ್ಟು ಕ್ಷಮಿಸಿ – ಇದು ಎನ್ನ ವೈಯ್ಯಕ್ತಿಕ ಅಭಿಪ್ರಾಯ.

    1. {ಗಾಯತ್ರೀ ವಿಶ್ಲೇಷಣೆ ಬೈಲಿಂಗೆ ಬರೆಕು ಹೇಳಿ ಗ್ರೇಶಿಯೊಂಡಿದ್ದ ಎನ್ನ ಕನಸು ನನಸಾತು}
      ಚೆನ್ನೈಭಾವಾ,
      ನಿಂಗಳ ಕಲ್ಪನೆಯ ನಮುನೆ ಈ ಶುದ್ದಿ ಬಯಿಂದೋ ಇಲ್ಲೆಯೋ – ಬಂದಿದ್ದರೆ ಸಮ.
      ಒಂದು ವೇಳೆ ನಿಂಗೊ ಹೇಳ್ತಂತದು ಬಾಕಿ ಒಳುದ್ದು ಹೇಳಿ ಆದರೆ, ಇನ್ನೊಂದು ಚೆಂದದ ಶುದ್ದಿಮಾಡಿ ಬೈಲಿಂಗೆ ಹೇಳಿ, ಆಗದೋ?

      ಹೇಳಿದಾಂಗೆ, ಕೂಸುಗಳ ಮಂತ್ರಾಧಿಕಾರದ ಬಗೆಗಿನ ವಿವರಣೆ ಲಾಯಿಕಾಯಿದು.
      ಮಾಣಿಯಂಗೊ ಕಲಿವದು ಕಮ್ಮಿ ಆಯಿದು, ಕೂಸುಗೊ ಆದರೂ ಕಲಿಯಲಿ – ಹೇಳುಗು ಪಾರೆ ಮಗುಮಾವ ಒಂದೊಂದರಿ! 🙂

  18. ಒಪ್ಪಣ್ಣಾ,
    ತುಂಬಾ ಮಾಹಿತಿ ಸಿಕ್ಕಿತ್ತು, ಧನ್ಯವಾದ.
    ಬೇಜಾರು ಎಂತರ ಹೇಳಿರೆ,
    ಇಲ್ಲಿ ಬರದ್ಸರ ನಮ್ಮ ಊರಿನ ಎಲ್ಲಾ ಬಟ್ಟಕ್ಕೊಗೂ ತೋರುಸೆಕ್ಕಾದ ಸ್ಥಿತಿ ಬಯಿಂದು.
    “ಆನು ಹೋದ ಹತ್ತು ಉಪ್ನಾನಂಗಳ ಹತ್ತು ರೀತಿಲಿ ಮಾಡಿದ್ದವು ಬಟ್ಟಕ್ಕೊ” ಹೇಳ್ತ ವೀಡ್ಯ ತೆಗೆತ್ತ ವೇಣು ಅಣ್ಣ…!

    1. ದೊಡ್ಡಬಾವಾ,
      ದೊಡ್ಡಮಾವನ ಹತ್ತರೆ ಕೇಳಿರೆ ಇನ್ನೂ ಹಲವು ವಿಷಯಂಗೊ ಸಿಕ್ಕದಾ? 🙂

      ಹೇಳಿದಾಂಗೆ,
      {ಉಪ್ನಾನಂಗಳ ಹತ್ತು ರೀತಿಲಿ ಮಾಡಿದ್ದವು ಬಟ್ಟಕ್ಕೊ}
      ವೇಣುಅಣ್ಣಂದೇ ಹತ್ತು ರೀತಿಲಿ ಪಟ ತೆಗದ್ದನಿಲ್ಲೆಯೋ? – ಹಾಂಗೇ ನಮ್ಮ ಸನಾತನತೆಲಿಯೂ ಸ್ವಾತಂತ್ರಕ್ಕೆ ಪ್ರಾಶಸ್ತ್ಯ ಇದ್ದು. ಹೇಂಗೆ ಮಾಡಿರೂ ಸರಿಯೇ.
      ಹಾಂಗಾಗಿಯೇ ನಮ್ಮ ಧರ್ಮ ಇಷ್ಟು ಬೆಳದ್ದು.
      ಒಂದೇ ಊರಿಲಿ, ಒಂದೇ ಪ್ರಭೇದಲ್ಲಿ ಆಚಾರ-ವಿಚಾರಲ್ಲಿ ಸುಮಾರು ವಿತ್ಯಾಸಂಗೊ ಇರ್ತು. ಅದೆಲ್ಲವನ್ನೂ ತಪ್ಪು ಹೇಳಿಕ್ಕಲೆಡಿಯ, ಅಲ್ಲದೋ?
      ಸನಾತನತೆಲಿ ನೋಡ್ತರೆ, “ಎಲ್ಲವೂ ಸರಿಯೇ”.

      ಹೀಂಗೇ ಸರಿ, ಹೀಂಗೆ ಆಗಿಯೇ ಕಳಿಯೇಕು – ಹೇಳುಲೆ ಇದು ಬ್ಯಾರಿ ಧರ್ಮದ ನಮಾಜೂ ಅಲ್ಲ, ಬಾಯಮ್ಮನ ಶಿಲುಬೆ ನಮಸ್ಕಾರವೂ ಅಲ್ಲ. ಎಂತ ಹೇಳ್ತಿ?

      1. ಒಪ್ಪಣ್ಣನ ಅಭಿಪ್ರಾಯ ಸರೀ ಇದ್ದು.
        ಈ ಬದಲಾವಣೆಗೊ ಗುಣಾತ್ಮಕವಾದದ್ದಾದರೆ ಅದಕ್ಕೆ ಎನ್ನ ಬೆಂಬಲವೂ ಇದ್ದು.
        ಆದರೆ…
        ಮನೆ ನೋಡಿಯೊಂಡು, ಮನೆ ಯೆಜಮಾನನ ಪೈಶೆ ತಟ್ಟೆ ನೋಡಿಗೊಂಡು,
        ಸಮಯ ಉಳಿಶುಲೆ ಬೇಕಾಗಿ,
        ಕಾರ್ಯಕ್ರಮಲ್ಲಿ ಲೋಪ ಮಾಡ್ಸಕ್ಕೆ ಎನ್ನ ಆಕ್ಷೇಪ ಇದ್ದು.
        ಬಹುಶ: ವೇಣು ಅಣ್ಣ ಹೇಳಿದ ವಿತ್ಯಾಸ ಇದುವೇ ಆಗಿರೇಕು… 😉

  19. ಒಪ್ಪಣ್ಣನ ಲೇಖನ ಅದೆಷ್ಟು ಮಾಹಿತಿಯ ಒಳಗೊಂಡು, ಎಷ್ಟು ಲಾಯಕ ಮೂಡಿ ಬಯಿಂದು ಹೇಳಿರೆ ಸಂಧ್ಯಾವಂದನೆ ಮಾಡದ್ದವು ಆರಾದರೂ ಇದರ ಓದಿದರೆ ಖಂಡಿತವಾಗಿಯೂ ಪ್ರತಿನಿತ್ಯ ಸಂಧ್ಯಾವಂದನೆ ಮಾಡುವ ದೃಢ ಸಂಕಲ್ಪವ ಇಂದೇ ಮಾಡುಗು… ಮಾಡುತ್ತಾ ಇಪ್ಪವು ಓದಿದರೆ ಇನ್ನೂ ಶ್ರದ್ದೆಲಿ ಮಾಡುಲೆ ಶುರುಮಾಡುಗು… ಎನ್ನ ಹಾಂಗಿದ್ದ ಹೆಮ್ಮಕ್ಕ ಓದಿದರೆ ಅಣ್ಣ ತಮ್ಮಂದಿರ ಹತ್ರೆ, ಗಂಡನ ಹತ್ರೆ ಎಲ್ಲ “ಒಪ್ಪಣ್ಣನ ಲೇಖನವ ಒಂದರಿ ಓದಿ…” ಹೇಳಿ ಪ್ರೇರಣೆ ನೀಡುಗು…

    1. ನೀರಮೂಲೆ ಅಕ್ಕಂಗೆ ನಮಸ್ಕಾರಂಗೊ.
      ಶುದ್ದಿಯ ಓದಿ, ಚೆಂದಲ್ಲಿ ಒಪ್ಪ ಕೊಟ್ಟು ಪ್ರೋತ್ಸಾಹ ಮಾಡಿದ್ದು ಕಂಡರೆ ಒಪ್ಪಣ್ಣಂಗೆ ಹೃದಯತುಂಬಿ ಬತ್ತು.
      {ಲೇಖನವ ಒಂದರಿ ಓದಿ…}
      ನಿಂಗೊ ಹಾಂಗೆ ಮಾಡಿರೆ ಬೈಲು ಸಾರ್ಥಕ ಆತು.
      ಹರೇರಾಮ.

      1. ನಿಜವಾಗಿಯೂ ಅಪ್ಪು ಒಪ್ಪಣ್ಣ,

        ಹೀಂಗಿದ್ದ ಲೇಖನಂಗಳ ಓದಿ ಅನಗತ್ಯ ವಿಮರ್ಶೆ ಮಾಡಿಗೊಂಡು ಕಾಲಹರಣ ಮಾಡದ್ದೆ… ಪ್ರತಿಯೊಬ್ಬಂದೆ ನಿಜ ಅರ್ಥಲ್ಲಿ ವಿಮರ್ಶೆ ಮಾಡಿ, ನಿಜವಾಗಿಯೂ ಕಾರ್ಯ ರೂಪಲ್ಲಿ ತಂದು ಸಮಾಜಲ್ಲಿ ಒಂದು ಸಾತ್ವಿಕ ಬೆಳವಣಿಗೆ ಅವುತ್ತ ಇಪ್ಪದರ ನೋಡಿದರೆ ಅದೆಷ್ಟು ಖುಷಿ ಆವುತ್ತು ಅಲ್ಲದ…

  20. ನಾವು ಯೇವದೇ ಕೆಲಸ ಮಾಡ್ತರುದೇ ಮೊದಲು ಅದರ ಅರ್ಥ ಸರಿಯಾಗಿ ತಿಳಿಕ್ಕೊಳೆಕ್ಕು. ಇಲ್ಲದ್ದರೆ ಸರಿಯಾದ ಫಲ ಸಿಕ್ಕ.
    ಲೇಖನ ತುಂಬಾ ತುಂಬಾ ಒಪ್ಪ ಆಯಿದು. “ಗಾಯತ್ರಿ ಜೆಪ”ದ ಬಗ್ಗೆ ಸವಿವರವಾಗಿ ವಿವರಿಸಿದ್ದಕ್ಕೆ ಒಪ್ಪಣ್ಣಂಗೊಂದು ಪ್ರೀತಿಯ ಒಪ್ಪ…. 🙂

    1. ಮುಣ್ಚಿಕಾನದ ಪ್ರದೀಪಣ್ಣನ ಅಭಿಮತಕ್ಕೆ ಒಪ್ಪಣ್ಣನ ಸಹಮತ ಇದ್ದು.
      ಗಾಯತ್ರೀ ಮಂತ್ರಾರ್ಥ ತಿಳುದೇ ಜೆಪತಪ ಮಾಡಿರೆ ಫಲ ಜಾಸ್ತಿ ಸಿಕ್ಕುಗು, ಅಲ್ಲದೋ? 🙂

  21. ಗಾಯತ್ರಿ ಮಂತ್ರ, ಜಪದ ವಿಷಯವಾಗಿ ಎಷ್ಟು ತಿಳ್ಕೊಂಡರೂ, ಓದಿದರೂ ಸಾಕಪ್ಪಲಿಲ್ಲೆ. ಇದರ ವಿಷಯವಾಗಿ ಕೋಟ ಲಕ್ಶ್ಮಿನಾರಾಯಣ ಕಾರಂತರ(ಶಿವರಾಮ ಕಾರಂತರ ಅಣ್ಣ) ಪುಸ್ತಕವ ಓದಿತ್ತಿದ್ದೆ. ಈಗ ಒಪ್ಪಣ್ಣನೂ ವಿವರವಾಗಿ ಬರದ್ದದು ಓದಿ ಖುಷಿ ಆತು. ಬರಹ ಲಾಯಿಕ್ಕಾಯಿದು ಹೇಳಿ ಒಪ್ಪ.

    1. ತೆಕ್ಕುಂಜೆ ಕುಮಾರಣ್ಣಾ,
      ಕೋಟ ಕಾರಂತರ ಪುಸ್ತಕ ಪರಿಚಯ ನಿಂಗೊ ಮಾಡುವಗ ಓದುತ್ತೆ, ಈಗ ಓದಿ ಆಯಿದಿಲ್ಲೆ ಅದರ! 🙂
      ಒಪ್ಪಕ್ಕೊಂದೊಪ್ಪ.

  22. ಗಾಯತ್ರೀ ಚಂದಃ-ಸರಿ ಅಲ್ಲ.ಛಂದಃ-ಆಯೆಕ್ಕು.[೬ ಅಕ್ಷರದ ಛಂದಸ್ಸು ಆಗಿರೆಕ್ಕು ಈ ಗಾಯತ್ರಿ]
    ಗಾಯತ್ರಿ-ಒಂದೇ ಮಂತ್ರ.ರುದ್ರ ಗಾಯತ್ರಿ,ಗಣಪತಿಯ ಗಾಯತ್ರಿ ಎಲ್ಲಾ ಮತ್ತಾಣವರ ಸೃಷ್ಟಿ ಹೇಳಿ ಸ್ವಾಮಿ ದಯಾನಂದ ಸರಸ್ವತಿಯವರ ಅಭಿಮತ.
    ಕುಂಬಳೆಯ ದಿ।ಡಾ.ಶಾಮ ಭಟ್ರು ಎಂಗಳ ಶೇಡಿಗುಮ್ಮೆಲಿ ೨೦೦೩ರಲ್ಲಿ ಗಾಯತ್ರಿ ಬಗ್ಗೆ ಬಹಳ ಲಾಯ್ಕ ಉಪನ್ಯಾಸ ಕೊಟ್ಟಿದವು.ಸೂರ್ಯ ನಮ್ಮ ಕಣ್ಣೆದುರಿನ ದೇವತೆ.ಸಯನ್ಸಿಲೂ ಸೂರ್ಯನೇ ನಮ್ಮ ಶಕ್ತಿಯ ಮೂಲ ಹೇಳಿ ಇದ್ದು.ಹಾಂಗಿಪ್ಪಾಗ ಗಾಯತ್ರಿಯ ಮಹತ್ವದ ಬಗ್ಗೆ ಅನುಮಾನ ಬೇಡ.ಸೂರ್ಯನ ಹಿಂದಿನ ಸವಿತೃ ಶಕ್ತಿಯ ಉಪಾಸನೆ ಇದು.ಹೇಳಿ ಅವು ಹೇಳೀದವು.
    ಹೆಮ್ಮಕ್ಕೊ ಹೇಳುಲಕ್ಕೊ ಹೇಳಿ ಕೇಳಿಅಪ್ಪಾಗ-“ಏಕಾಗದ್ದೆ?ಸ್ತ್ರೀಯರು ನಮ್ಮ ಹೆತ್ತ ತಾಯಂದ್ರು.ಅವಕ್ಕೆ ಈ ಮಂತ್ರ ನಿಷಿದ್ಧ ಹೇಳೀ ಯಾವ ಶಾಸ್ತ್ರವೂ ಇಲ್ಲೆ”ಹೇಳಿ ಸ್ಪಷ್ಟವಾಗಿ ಹೇಳಿದವು.

    1. ಗೋಪಾಲಣ್ಣ,
      {ರುದ್ರ ಗಾಯತ್ರಿ,ಗಣಪತಿಯ ಗಾಯತ್ರಿ ಎಲ್ಲಾ ಮತ್ತಾಣವರ ಸೃಷ್ಟಿ}
      ಸರಿಯಾದ ಮಾತು ಹೇಳಿದಿ. ಗಾಯತ್ರಿ ಬಂದ ಮೇಗೆ, ಅದೇ ಛಂದಸ್ಸಿಲಿ ಒಳುದ ದೇವರದ್ದುದೇ ಜೆಪ ಮಾಡಿಬಿಟ್ಟವು. ಅದುವೇ ಮುಂದಂಗೆ ಗಾಯತ್ರಿ ಆಗಿಬಿಟ್ಟತ್ತು.
      – ನಮ್ಮ ನೆಗೆಮಾಣಿ ಸುಪ್ರಭಾತ ಬರದ ಹಾಂಗೆ! 😉
      ಅಲ್ಲದೋ?

      ಡಾಗುಟ್ರ ನೆಂಪುಮಾಡಿ ಶುದ್ದಿ ತಿಳುಶಿದ್ದು ಕೊಶೀ ಆತು.

  23. ಎನಗೆ ಸರೀ ಗೊಂತಿಲ್ಲೆ ತಪ್ಪಿಪ್ಪಲೂ ಸಾಕು. ಗಾಯತ್ರಿ ಮಂತ್ರವ ಹೆಮ್ಮಕ್ಕೊ ಕೇಳುಲೆ ಆಗಡ ಅದು ಅಪ್ಪೊ?
    ಹಾಂಗೆ ಆದಿಕ್ಕು ಅದರ ಮೌನಲ್ಲಿ ಮನಸಿಲ್ಲಿ ಹೇಳುದು ಹೇಳಿ ಬಟ್ಟ ಮಾವ ಹೇಳಿದ್ದು.
    ದೇವಿ ಫೋಟೊ ಚಂದ ಇದ್ದು.
    ಉತ್ತಮ ಮಾಹಿತಿ ಇಪ್ಪ ಒಪ್ಪ ಲೇಖನ ಒಪ್ಪಣ್ಣ…
    ಸುಮನಕ್ಕ.

    1. ಸುಮನಕ್ಕಾ,
      ಶುದ್ದಿಗೆ ಸುರೂವಾಣ ಒಪ್ಪ ಕೊಟ್ಟದಕ್ಕೆ ಮನಸಾ ವಂದನೆಗೊ.
      {ಗಾಯತ್ರಿ ಮಂತ್ರವ ಹೆಮ್ಮಕ್ಕೊ ಕೇಳುಲೆ ಆಗಡ ಅದು ಅಪ್ಪೊ?}
      ನೋಡಿ, ನಿಂಗಳ ಈ ಒಂದು ಗೆರೆ ಬೈಲಿಲಿ ಸುಮಾರು ಚಿಂತನೆಗೆ ದಾರಿಮಾಡಿತ್ತು.

      ಎನಗೆ ಅನುಸುತ್ತು, ಹಾಂಗೆಂತೂ ಇರ – ಹೇಳಿಗೊಂಡು. ಮತ್ತೆ ಗೊಂತಿಲ್ಲೆ, ವಿದ್ವಾನಣ್ಣನ ಕೈಲಿ ಸಿಕ್ಕಿಪ್ಪಗ ಕೇಳುವೊ°, ಅಲ್ಲದಾ?

    2. mangalore na ‘AMMA’ ನ ಶಾಲೆಲಿ ಪ್ರಾರ್ಥನೆ ರೂಪಲ್ಲಿ ಸೂಕ್ಥಮ್ ಗಳ ಹೇಳಿ ಕೊಡುತ್ತ್ ವು…ಅಲ್ಲಿ ಕಲಿವ ಕೂಸುಗೊ ಸ್ವರ ಸಹಿತ ಚೆಂದಕ್ಕೆ ಮನ್ತ್ರ ಹೇಳುತ್ತವು….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×