Oppanna.com

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..

ಬರದೋರು :   ಡಾಗುಟ್ರಕ್ಕ°    on   09/08/2010    19 ಒಪ್ಪಂಗೊ

ಡಾಗುಟ್ರಕ್ಕ°

ಕಳುದ ಸರ್ತಿ ಶರೀರಕ್ಕೆ ಬೇಕಪ್ಪ ಮುಖ್ಯವಾದ ಆಹಾರದ ಬಗ್ಗೆ ಬರದ್ದೆ.. ಈ ಸರ್ತಿ ಕಮ್ಮಿ ಪ್ರಮಾಣಲ್ಲಿ ಬೇಕಪ್ಪ ಪೋಷಕಾಂಶಗಳ ಬಗ್ಗೆ ಬರೆತ್ತೆ.. ಅದುವೇ ವಿಟಮಿನ್-ಖನಿಜಾಂಶ… ಈ ಪೋಷಕಾಂಶಂಗೊ ಪ್ರಮಾಣಲ್ಲಿ ಮಾತ್ರ ಕಮ್ಮಿ ಬೇಕಪ್ಪದು,ಇಲ್ಲದ್ರೆ ಇವುದೇ ಶರೀರಕ್ಕೆ ಮುಖ್ಯವಾದ್ದೇ… ಇದು ಕಮ್ಮಿ ಪ್ರಮಾಣಲ್ಲಿ ಬೇಕಪ್ಪದು ಹೇಳಿ ಇವುಗಳ ಬಗ್ಗೆ ಆಹಾರಲ್ಲಿ ಗಮನ ಕೊಡದ್ರೆ ಸುಮಾರು ರೋಗಂಗೊಕ್ಕೆ ಕಾರಣ ಆವುತ್ತು..
ವಿಟಮಿನ್–
ನಮ್ಮ ದೇಹದ ಒಳ್ಳೆ ಆರೋಗ್ಯಕ್ಕೆ ವಿಟಮಿನ್ ಅತೀ ಅಗತ್ಯ..ಇದು ಬೇಕಪ್ಪದು ತುಂಬಾ ಸಣ್ಣ ಪ್ರಮಾಣಲ್ಲಿ..ನಮ್ಮ ಶರೀರಲ್ಲಿ ಇದರ ಉತ್ಪಾದನೆ ಆವುತ್ತಿಲ್ಲೆ,ಹಾಂಗಾಗಿ ಆಹಾರಂದಲೇ ಇದು ನವಗೆ ಸಿಕ್ಕೆಕ್ಕಷ್ಟೆ.. ವಿಟಮಿನಿನ ಕೊರತೆಂದಾಗಿ ಸುಮಾರು ರೋಗಂಗೊ ಬತ್ತು..
ವಿಟಮಿನ್ ಗಳ ೨ ಗುಂಪುಗಳಾಗಿ ಮಾಡಿದ್ದವು–
೧.ಕೊಬ್ಬಿನಂಶಲ್ಲಿ ಕರಗುವ ವಿಟಮಿನ್ ಗೊ— ವಿಟಮಿನ್ ಎ,ಡಿ,ಇ,ಕೆ.. ಈ ನಾಲ್ಕು ವಿಟಮಿನ್ ಗೊ ಶರೀರಲ್ಲಿ ಕರಗೆಕ್ಕಾದರೆ ಕೊಬ್ಬಿನಂಶ ಬೇಕೇ ಬೇಕು.. ಇವುಗೊ ಶರೀರದ ಅಗತ್ಯತೆಗಳಂದ ಹೆಚ್ಚಿದ್ದರೆ,ಕೊಬ್ಬಿನೊಟ್ಟಿಂಗೆ ಯಕೃತ್ತಿಲಿ (ಲಿವರ್) ಶೇಖರಣೆ ಆವುತ್ತು..
೨.ನೀರಿಲಿ ಕರಗುವ ವಿಟಮಿನ್ ಗೊ– ವಿಟಮಿನ್ ಬಿ-ಗುಂಪು,ವಿಟಮಿನ್ ಸಿ.. ಈ ವಿಟಮಿನ್ ಗೊ ನೀರಿಲಿ ಕರಗುವ ಕಾರಣ ಅಗತ್ಯಕ್ಕಿಂತ ಹೆಚ್ಚಿಪ್ಪದು ಮೂತ್ರದ ಮೂಲಕ ಶರೀರಂದ ಹೆರ ಹೋವುತ್ತು..ಆದ ಕಾರಣ ಇವುಗಳ ಸರಿಯಾದ ಪ್ರಮಾಣಲ್ಲಿ ತೆಕ್ಕೊಳ್ಳೆಕ್ಕು..
ವಿಟಮಿನ್ ಎ—
ವಿಟಮಿನ್ ಎ ೨ ರೀತಿಲಿ ನಮ್ಮ ಶರೀರಕ್ಕೆ ಸಿಕ್ಕುತ್ತು..
.ರೆಟಿನೋಲ್ ರೂಪಲ್ಲಿ–ರೆಟಿನೋಲ್ ಹೇಳ್ತದಕ್ಕೆ ವಿಟಮಿನ್ ಎ ಹೇಳಿದೆ ಹೇಳ್ತವು..ಈ ರೂಪಲ್ಲಿಯೇ ವಿಟಮಿನ್ ಎ ಯ ಶರೀರ ಹೀರಿಗೊಂಬದು.. ಇದು ಮುಖ್ಯವಾಗಿ ಪ್ರಾಣಿ ಜನ್ಯ ಆಹಾರಂಗಳಲ್ಲಿ ಇರ್ತು..
.ಕೆರೋಟಿನ್ ರೂಪಲ್ಲಿ–ಇದರ ರೆಟಿನೋಲ್ ನ ಪೂರ್ವರೂಪ ಹೇಳುಲೆ ಅಕ್ಕು..ಇದು ನೆಟ್ಟಿಕಾಯಿಗಳಲ್ಲಿ ಇರ್ತು..ಇದು ಶರೀರದ ಒಳ ರೆಟಿನೋಲ್ ಆಗಿ ಅಥವಾ ವಿಟಮಿನ್ ಎ ಆಗಿ ಪರಿವರ್ತನೆ ಆವುತ್ತು..

vit A
ವಿಟಮಿನ್ ಎ

ವಿಟಮಿನ್ ಎ ಇಪ್ಪ ಆಹಾರಂಗೊಬೆಣ್ಣೆ,ಹಾಲು,ತುಪ್ಪ,ಮೊಸರು,ಮೊಟ್ಟೆ,ಯಕೃತ್,ಮೀನಿನ ಯಕೃತ್ ಎಣ್ಣೆ..
ಕೆರೋಟಿನ್ ಹೆಚ್ಚಾಗಿ ಇಪ್ಪ ಆಹಾರಂಗೊ ಹಸಿರು ಸೊಪ್ಪುಗೊ-ಮೂಲಂಗಿ ಎಲೆ,ಪಾಲಕ್ ಸೊಪ್ಪು,ಮೆಂತೆ ಸೊಪ್ಪು, ಬಸಳೆ,ಹರುವೆ ಇತ್ಯಾದಿ.,ಕೆಂಪು-ಹಳದಿ ಬಣ್ಣದ ತರಕಾರಿಗೊ ಕಾರೆಟ್,ಟೊಮೆಟೊ,ಚೀನಿಕಾಯಿ,ದೊಣ್ಣೆಮೆಣಸು.. ಹಣ್ಣುಗೊ-ಪಪ್ಪಾಯಿ,ಮಾವಿನಹಣ್ಣು.
ಪ್ರಯೋಜನಂಗೊ

  • ವಿಟಮಿನ್ ಎ ನಮ್ಮ ಕಣ್ಣಿಂಗೆ ತುಂಬಾ ಮುಖ್ಯ..ಕಸ್ತಲೆಲಿ ನವಗೆ ಕಣ್ಣು ಕಾಂಬದು ವಿಟಮಿನ್ ಎ ಇಪ್ಪ ಕಾರಣಂದ..ಇದು ಕಣ್ಣಿನ ಆರೋಗ್ಯ ಕಾಪಾಡ್ತು,ಕಣ್ಣಿಲಿ ನೀರಿನಂಶ ಇಪ್ಪಾಂಗೆ ನೋಡಿಗೊಳ್ತು ಹಾಂಗೇ ಕಣ್ಣಿನ ರೋಗಂಗಳ ತಡೆತ್ತು..
  • ಆರೋಗ್ಯವಾದ ಚರ್ಮಕ್ಕೆ;ಅನ್ನನಾಳದ,ಮೂತ್ರನಾಳದ ಒಳಪದರದ ಆರೋಗ್ಯಕ್ಕೆ ವಿಟಮಿನ್ ಎ ಅಗತ್ಯ..ಇದು ಶರೀರದ ಬೆಳವಣಿಗೆಗೂ ತುಂಬಾ ಅಗತ್ಯ..

ತೊಂದರೆಗೊ

  • ಆಹಾರಲ್ಲಿ ವಿಟಮಿನ್ ಎ ಕಮ್ಮಿ ಇದ್ದರೆ ಅಥವಾ ಶರೀರ ಕೊಬ್ಬಿನಂಶ ಸರಿಯಾಗಿ ಹೀರಿಗೊಳ್ಳದ್ರೆ ವಿಟಮಿನ್ ಎ ಯ ಕೊರತೆ ಕಾಣ್ತು..ಇದರ ಮುಖ್ಯ ಲಕ್ಷಣ ಕಮ್ಮಿ ಬೆಳಕಿಲಿ ಕಣ್ಣು ಕಾಣದ್ದೆ ಅಪ್ಪದು,ಇದರ ರಾತ್ರಿಕುರುಡು (night blindness) ಹೇಳ್ತವು..ಸುರುವಿಲಿಯೇ ಇದಕ್ಕೆ ಮದ್ದು ಮಾಡದ್ರೆ ಮುಂದೆ ಕಣ್ಣಿನ ರೆಪ್ಪೆ ಒಣಗುಲೆ ಸುರು ಆವುತ್ತು,ಕಣ್ಣು ಮಂಕಾವುತ್ತು..ಮತ್ತೂ ಮದ್ದು ಮಾಡದ್ರೆ ಕಣ್ಣುಗೊ ದೃಷ್ಟಿ ಕಳಕ್ಕೊಳ್ತು..
  • ವಿಟಮಿನ್ ಎ ಕೊರತೆಂದ ಚರ್ಮ ಒಣಗುತ್ತು ಹಾಂಗೇ ಸುಕ್ಕು ಕಟ್ಟುತ್ತು..

ವಿಟಮಿನ್ ಎ ಕೊರತೆಯ ಕಮ್ಮಿ ಮಾಡ್ಲೆ ೬ ತಿಂಗಳಿಂಗೊಮ್ದರಿ ಮಕ್ಕೊಗೆ ವಿಟಮಿನ್ ಎ ಮದ್ದು ಕೊಡುವ ಕ್ರಮ ಇದ್ದು.. ಈ ಮದ್ದು ಹೆಚ್ಚಾದರೆ ತಲೆಸೆಳಿವದು,ಕಾರ್ಲೆ ಬಪ್ಪ ಲಕ್ಷಣಂಗೊ ಕಾಣ್ತು..

ವಿಟಮಿನ್ ಡಿ
೭-ಡಿಹೈಡ್ರೋ ಕೊಲೆಸ್ಟಿರೊಲ್ ಹೇಳುವ ಅಂಶ ನಮ್ಮ ಚರ್ಮದ ಅಡಿಲಿ ಇರ್ತು.ನಮ್ಮ ಚರ್ಮದ ಮೇಲೆ ಬೆಶಿಲು ಬಿದ್ದಪ್ಪಗ ಇದು ವಿಟಮಿನ್ ಡಿ ಆಗಿ ಪರಿವರ್ತನೆ ಆವುತ್ತು.. ರಜ ಪ್ರಮಾಣದ ವಿಟಮಿನ್ ಆಹಾರಂದಲೂ ಸಿಕ್ಕುತ್ತು..

vitamin D
ವಿಟಮಿನ್ ಡಿ

ವಿಟಮಿನ್ ಡಿ ಮೂಲಂಗೊ–
ಮೇಲೆ ಹೇಳಿದ ಹಾಂಗೆ ನವಗೆ ವಿಟಮಿನ್ ಡಿ ಮುಖ್ಯವಾಗಿ ಸಿಕ್ಕುದು ಸೂರ್ಯನ ಬೆಶಿಲಿಂದ..ಆದ ಕಾರಣಂದಲೇ ಮಕ್ಕೊ,ದೊಡ್ಡೋರು ಎಲ್ಲರೂ ರಜ ಬೆಶಿಲಿಲಿ ಓಡಾಡೆಕ್ಕು ಅಥವಾ ಕೆಲಸ ಮಾಡೆಕ್ಕು..ಮೈ ಕಪ್ಪಾವುತ್ತು ಹೇಳಿ ಮನೆ ಒಳ ಕೂದರೆ ತೊಂದರೆಯೇ.. 🙂 ವಿಟಮಿನ್ ಡಿ ಸಿಕ್ಕುವ ಆಹಾರಂಗೊ ಯಾವುದಪ್ಪಾ ಹೇಳಿದರೆ ಮೀನು,ಮೊಟ್ಟೆ,ಯಕೃತ್,ಮೊಟ್ಟೆಯ ಹಳದಿ ಭಾಗ,ಹಾಲು,ಬೆಣ್ಣೆ,ತುಪ್ಪ..
ಪ್ರಯೋಜನಂಗೊ–
ವಿಟಮಿನ್ ಡಿ, ಕಾಲ್ಶಿಯಂ ಹೇಳ್ತ ಖನಿಜಾಂಶದ ಹೀರುವಿಕೆಗೆ ಮತ್ತೆ ಅದರ ಹಲ್ಲು-ಎಲುಬುಗಳಲ್ಲಿ ಶೇಖರಣೆ ಮಾಡ್ಲೆ ಅಗತ್ಯ.. ಇದು ಪರೋಕ್ಷವಾಗಿ ನಮ್ಮ ಹಲ್ಲು-ಎಲುಬುಗಳ ಗಟ್ಟಿಮುಟ್ಟು ಮಾಡ್ತು..

ತೊಂದರೆಗೊ–

  • ವಿಟಮಿನ್ ಡಿ ಯ ಕೊರತೆ ಹೆಚ್ಚಾಗಿ ಮಕ್ಕಳಲ್ಲಿ,ಹೆಮ್ಮಕಳಲ್ಲಿ ಅದೂ ಯಾವಾಗಳೂ ಬೆಶಿಲಿಲ್ಲದ್ದಲ್ಲಿ ಇಪ್ಪೋರಲ್ಲಿ ಕಾಣ್ತು..ಇದರಂದಾಗಿ ಮಕ್ಕಳಲ್ಲಿ ‘ರಿಕೆಟ್ಸ್’(rickets) ಹೇಳ್ತ ತೊಂದರೆ ಬತ್ತು.. ಈ ರೋಗಲ್ಲಿ ಕಾಲ್ಶಿಯಂ ಮತ್ತೆ ಫೋಸ್ಫರಸ್ ಹೇಳ್ತ ಖನಿಜಾಂಶಂಗಳ ಶರೀರ ಸರಿಯಾಗಿ ಹೀರಿಗೊಳ್ತಿಲ್ಲೆ,ಹಾಂಗಾಗಿ ಹಲ್ಲು-ಎಲುಬುಗೊ ಗಟ್ಟಿ ಇಪ್ಪ ಬದಲು ಮೆಸ್ತಂಗೆ ಆಗಿ ದುರ್ಬಲ ಆವುತ್ತು.. ಆದ್ದರಂದ ಮಕ್ಕಳ ಬೆಳವಣಿಗೆ ಕಮ್ಮಿ ಆವುತ್ತು..ಮಕ್ಕೊಗೆ ತನ್ನದೇ ಮೈ ಭಾರವ ತಡಕ್ಕೊಂಬಲೆ ಕಷ್ಟ ಆವುತ್ತು..ಕಾಲು ಬಿಲ್ಲಿನ ಹಾಂಗೆ ಬಗ್ಗಿ ನಿಲ್ತು..ಮಕ್ಕೊ ನಿಂದು,ನಡವದು ನಿಧಾನ ಆವುತ್ತು.. ಒಂದು ವೇಳೆ ಬಿದ್ದರೆ ಅವರ ಮೂಳೆಗೊ ಬೇಗ ತುಂಡಾವುತ್ತು..
  • ಹಲ್ಲುಗೊ ಗಟ್ಟಿ ಇಲ್ಲದ್ದ ಕಾರಣಂದ ಬೇಗ ಹುಳು ಹಿಡುದು ಹಾಳಾವುತ್ತು…
  • ಇನ್ನು ಯೌವ್ವನಾವಸ್ಥೆಲಿಪ್ಪ ಕೂಸುಗಳಲ್ಲಿ ಸೊಂಟದ ಎಲುಬಿನ ಬೆಳವಣಿಗೆ ಸರಿಯಾಗಿ ಆಗದ್ದೆ ಮುಂದೆ ಅವು ಬಸರಿಯಕ್ಕೊ ಅಪ್ಪಗ ಹೆರಿಗೆಗೆ ತೊಂದರೆ ಆವುತ್ತು..
  • ಹೆಮ್ಮಕ್ಕಳಲ್ಲಿ ಸೊಂಟದ ಎಲುಬು,ಮೈಯ ಬಾಕಿ ಎಲುಬುಗಳೂ ದುರ್ಬಲ ಆಗಿ ಬೇಗ ಬಗ್ಗುತ್ತು ಅಥವಾ ಮುರಿತ್ತು..ಅವಕ್ಕೆ ನಡವಗ ಬೇನೆ ಆವುತ್ತು.. ಈ ತೊಂದರೆಗೆ ’ಓಸ್ಟಿಯೋಮಲೇಶಿಯಾ’(osteomalacia) ಹೇಳ್ತವು..

ವಿಟಮಿನ್ ಇ—
ವಿಟಮಿನ್ ಇ ಯ ಇನ್ನೊಂದು ಹೆಸರು ಟೊಕೋಫೆರೋಲ್(tocopherol)ಹೇಳಿ.. ಇದು ನಾವು ದಿನಾಗುಳೂ ತೆಕ್ಕೊಂಬ ಆಹಾರಲ್ಲಿ ಶರೀರಕ್ಕೆ ಬೇಕಪ್ಪಷ್ಟು ಪ್ರಮಾಣಲ್ಲಿ ಇರ್ತು..ಇದು ಸಸ್ಯ ಜನ್ಯ ಮತ್ತೆ ಪ್ರಾಣಿ ಜನ್ಯ ಆಹಾರ ಎರಡರಲ್ಲೂ ಇರ್ತು..ಎಣ್ಣೆ ತಯಾರು ಮಾಡುವೋರು ಇದರ ಎಣ್ಣೆಗೆ ಸೇರ್ಸುತ್ತವು..ನಿಂಗೊ ಎಣ್ಣೆಯ ಪ್ರಚಾರ ಮಾಡುವೋರು ಹೇಳುದರ ಕೇಳಿಪ್ಪಿ-ಇದರಲ್ಲಿ ವಿಟಮಿನ್ ಇ ಇದ್ದು ಹೇಳಿ.. ಅಲ್ಲದಾ? ಇದು ಎಣ್ಣೆಲಿ ಕರಗುತ್ತ ಕಾರಣ ಎಣ್ಣೆಗೆ ಸೇರ್ಸುಲೆ ಸುಲಭ..ಇದು ಕಲಬೆರಕೆ ಅಲ್ಲ,ನಮ್ಮ ಸರಕಾರ ವಿಟಮಿನ್ ಇ ಕೊರತೆ ಬಾರದ್ದಾಂಗೆ ನೋಡಿಗೊಂಬಲೆ ಹೀಂಗೆ ಮಾಡಿದ್ದು.. ಹಾಂಗಾಗಿ ನವಗೆಲ್ಲಾ ವಿಟಮಿನ್ ಇ ಸಾಕಷ್ಟು ಪ್ರಮಾಣಲ್ಲಿ ಸಿಕ್ಕುತ್ತು..

vitamin E
ವಿಟಮಿನ್ ಇ

ವಿಟಮಿನ್ ಇ ಇಪ್ಪ ಆಹಾರಂಗೊ–
ಮೊಳಕೆ ಬರ್ಸಿದ ಗೋಧಿ,ಜೋಲ,ನೆಲಕಡ್ಲೆ,ತೆಂಗಿನಕಾಯಿ,ಬೀಜಂಗೊ,ಒಲಿವ್(olive),ಪಾಲಕ್ ಸೊಪ್ಪು ಮತ್ತೆ ಎಲ್ಲಾ ಸೊಪ್ಪು ತರಕಾರಿಗೊ.. ತರಕಾರಿಂದ ತಯಾರು ಮಾಡಿದ ಎಣ್ಣೆಗೊ-ನೆಲಕಡ್ಲೆ ಎಣ್ಣೆ,ಸೋಯ ಎಣ್ಣೆ,ಸೂರ್ಯಕಾಂತಿ ಎಣ್ಣೆ..

ಪ್ರಯೋಜನಂಗೊ–
ವಿಟಮಿನ್ ಇ ಯ ಮುಖ್ಯವಾಗಿ antioxidant ಆಗಿ ಕೆಲಸ ಮಾಡ್ತು.. ಇದರ ಎಣ್ಣೆಗೆ ಸೇರ್ಸುದರಂದಾಗಿ ಎಣ್ಣೆ ಕಸಂಟುದು ತಪ್ಪುತ್ತು..ಹಾಂಗೇ ಶರೀರವನ್ನೂ ಕಾಪಾಡ್ತು..ಇದು ಶರೀರದ ಜೀವಕೋಶಂಗಳ ಕಾಪಾಡ್ತು,ರಕ್ತ ಕಣಂಗಳ ಕಾಪಾಡ್ತು,ಸುಮಾರು ಖಾಯಿಲೆಗಳಾದ ಹೃದಯ ತೊಂದರೆ,ಗಂಟು ಬೇನೆ, ,ಕಣ್ಣಿನ ಪೊರೆ(cataract), ವಿಟಮಿನ್ ಇ ಕೊರತೆ ಕಾಂಬದು ತುಂಬಾ ಅಪರೂಪ..
ವಿಟಮಿನ್ ಕೆ—
ನಮ್ಮ ದೇಹಕ್ಕೆ ಬೇಕಪ್ಪ ಮತ್ತೊಂದು ಮುಖ್ಯವಾದ ವಿಟಮಿನ್.. ನವಗೆ ಎಂತಾರು ತಾಗಿದರೆ ನೆತ್ತರು ಬತ್ತು,ಆದರೆ ರಜ ಹೊತ್ತಿಲಿ ನೆತ್ತರು ಬಪ್ಪದು ನಿಲ್ತು ಅಲ್ಲದಾ?ಇದು ವಿಟಮಿನ್ ಕೆ ನಮ್ಮ ದೇಹಲ್ಲಿ ಇಪ್ಪ ಕಾರಣಂದ..ಅಪ್ಪು,ವಿಟಮಿನ್ ಕೆ ನೆತ್ತರು ಹೆಪ್ಪುಗಟ್ಟುಸುಲೆ ತುಂಬಾ ಅಗತ್ಯ.. ಕೆಲವು ಹೃದಯದ ತೊಂದರೆ ಇಪ್ಪ ರೋಗಿಗೊಕ್ಕೆ ನೆತ್ತರು ರಕ್ತನಾಳಲ್ಲಿ ಹೆಪ್ಪುಗಟ್ತದ್ದಾಂಗೆ ಮದ್ದು ಕೊಟ್ಟಿರ್ತವು(anticoagulant),ಅಷ್ಟಪ್ಪಗ ವಿಟಮಿನ್ ಕೆ ಇಪ್ಪ ಆಹಾರಂಗೊ ವರ್ಜ್ಯ ಎಂತಕೆ ಹೇಳಿದರೆ ಇದು ಆ ಮದ್ದಿನ ಕಾರ್ಯಕ್ಕೆ ವಿರೋಧವಾದ ಕೆಲಸ ಮಾಡ್ತು..ಹಾಂಗಾಗಿ ಹೃದಯದ ತೊಂದರೆ ಇಪ್ಪೋರು ವೈದ್ಯರತ್ರೆ ಮದ್ದು ತೆಕ್ಕೊಂಬಗ ಪಥ್ಯ ಇದ್ದಾ ಹೇಳಿ ಕೇಳಿಗೊಳ್ಳೆಕ್ಕು..
ವಿಟಮಿನ್ ಕೆ ಇಪ್ಪ ಆಹಾರಂಗೊ–

vit k
ವಿಟಮಿನ್ ಕೆ

ಸೊಪ್ಪು ತರಕಾರಿಗೊ-ಪಾಲಕ್,ಮೆಂತೆ ಸೊಪ್ಪು,ಕೊತ್ತಂಬರಿ ಸೊಪ್ಪು,ಮುಲಂಗಿ ಎಲೆ,ಬಸಳೆ,ಹರುವೆ,ಬೇವುಸೊಪ್ಪು,ಹೂಕೋಸು,ಎಲೆಕೋಸು;ತರಕಾರಿಂದ ತಯಾರಾದ ಎಣ್ಣೆಗೊ-ಸೋಯ ಎಣ್ಣೆ,ಒಲಿವ್ ಎಣ್ಣೆ…ಸುರ್ಯಕಾಂತಿ ಎಣ್ಣೆ,ನೆಲಕಡ್ಲೆ ಎಣ್ಣೆ,ಜೋಳದ ಎಣ್ಣೆಲಿ ವಿಟಮಿನ್ ಕೆ ಕಡಮ್ಮೆ ಪ್ರಮಾನಲ್ಲಿ ಇಪ್ಪದು.. ಪ್ರಾಣಿ ಜನ್ಯ ಆಹಾರಂಗಳಲ್ಲಿ ಮೊಟ್ಟೆಯ ಹಳದಿ ಭಾಗ,ಹಾಲು,ಯಕೃತ್..
ಇವುಗಳಲ್ಲಿ ವಿಟಮಿನ್ ಕೆ ಹೆಚ್ಚಿನ ಪ್ರಮಾನಲ್ಲಿ ಇರ್ತು..
ಪ್ರಯೋಜನಂಗೊ–
ಮೇಲೆ ಹೇಳಿದಾಂಗೆ ನೆತ್ತರಿನ ಹೆಪ್ಪುಕಟ್ಟುಸುದೇ ಇದರ ಮುಖ್ಯ ಕೆಲಸ..
ತೊಂದರೆಗೊ–
ವಿಟಮಿನ್ ಕೆ ಕೊರತೆ ಇದ್ದರೆ,ಶರೀರಲ್ಲಿ ಎಲ್ಲಿಯಾದರೂ ತಾಗಿ ಗಾಯ ಆದಪ್ಪಗ ತುಂಬಾ ನೆತ್ತರು ಹೋವುತ್ತು,ಹೆಪ್ಪುಗಟ್ಟುದು ನಿಧಾನ ಆವುತ್ತು ಅಥವಾ ಹೆಪ್ಪುಗಟ್ಟುತ್ತಿಲ್ಲೆ.. ಬಸರಿಯಕ್ಕೊಗೆ,ಈಗಷ್ಟೇ ಹುಟ್ಟಿದ ಮಕ್ಕೊಗೂ ವಿಟಮಿನ್ ಕೆ ಕೊಡ್ತ ಕ್ರಮ ಇದ್ದು.ಇದರಂದಾಗಿ ಪ್ರಸವದ ಸಮಯಲ್ಲಿ ಅತಿಯಾದ ರಕ್ತ ಸ್ರಾವ ತಡವಲೆ ಸಾಧ್ಯ ಆವುತ್ತು..

ನೀರಿಲಿ ಕರಗುವ ವಿಟಮಿನ್ ಗೊ–
ವಿಟಮಿನ್ ಬಿ ಗುಂಪು(B-complex)–
ಬಿ ಗುಂಪಿನ ವಿಟಮಿನ್ ಗೊ ಕೆಲವು ನಮೂನೆಯ ಆಹಾರಂಗಳಲ್ಲಿ ಇರ್ತು.. ಈ ವಿಟಮಿನ್ ಗೊ ನೀರಿಲಿ ಕರಗುವ ಕಾರಣ,ಆಹಾರ ಪದಾರ್ಥಂಗಳ ನೀರಿಲಿ ಮುಳುಗುಸಿ ಮಡುಗಿದರೆ,ಅಡಿಗೆಲಿ ಬೇಯಿಶಿ ಅಪ್ಪಗ ಅಥವಾ ಸುಮಾರು ಸರ್ತಿ ತೊಳದು ಆ ನೀರಿನ ಚೆಲ್ಲಿ ಅಪ್ಪಗ ಅದರಲ್ಲಿ ಹೋವುತ್ತು.. ಸುಮಾರು ನಮೂನೆಯ ಬಿ ವಿಟಮಿನ್ ಗೊ ಇದ್ದು.. ಆನು ಇಲ್ಲಿ ತುಂಬಾ ಮುಖ್ಯ ಆದ್ದರ ಮಾತ್ರ ಹೇಳ್ತೆ.. ಅದೇ,

  • ವಿಟಮಿನ್ ಬಿ1 ಅಥವಾ ಥಯಾಮಿನ್(Thiamine)
  • ವಿಟಮಿನ್ ಬಿ2 ಅಥವಾ ರೈಬೋಫ್ಲೇವಿನ್(Riboflavin)
  • ವಿತಮಿನ್ ಬಿ3 ಅಥವಾ ನಿಯಾಸಿನ್(Niacin)
  • ವಿಟಮಿನ್ ಬಿ9 ಅಥವಾ ಫೋಲಿಕ್ ಆಸಿಡ್(Folic acid)
  • ವಿಟಮಿನ್ ಬಿ12

ಬಿ ವಿಟಮಿನ್ ಇಪ್ಪ ಆಹಾರಂಗೊ–
ಧಾನ್ಯಂಗೊ,ಬೇಳೆ ಕಾಳುಗೊ,ಬಾದಾಮಿ,ಗೇರುಬೀಜ ಇತ್ಯಾದಿಲಿ ಹಾಂಗೇ ಹುಳಿ ಬರ್ಸಿ ಮಾಡಿದ ತಿಂಡಿಗೊ(ಉದ್ದಿನ ದೋಸೆ,ಇಡ್ಲಿ),ಮೊಳಕೆ ಬರ್ಸಿದ ಕಾಳುಗಳಲ್ಲಿ ವಿಟಮಿನ್ ಬಿ1,ಬಿ3 ಹೆಚ್ಚಿನ ಪ್ರಮಾಣಲ್ಲಿ ಇರ್ತು.. ಪ್ರಾಣಿ ಜನ್ಯ ಆಹಾರವಾದ ಮೊಟ್ಟೆ,ಯಕೃತ್,ಮೆದುಳು ಇತ್ಯಾದಿಲೂ ಬಿ ಗುಂಪಿನ ವಿಟಮಿನ್ ಗೊ ಇರ್ತು.. ಹಾಲು ಮತ್ತೆ ಅದರಂದ ಮಾಡಿದ ಇತರೇ ಪದಾರ್ಥಂಗಳಲ್ಲಿ ವಿಟಮಿನ್ ಬಿ2 ಇರ್ತು.. ಸೊಪ್ಪು ತರಕಾರಿಗಳಾದ ಮೆಂತೆ ಸೊಪ್ಪು,ಪಾಲಕ್,ಸಬ್ಬಸಿಗೆ,ಹರುವೆ,ಬಸಳೆ ಇತ್ಯಾದಿ ಎಲ್ಲಾ ಬಗೆಯ ಸೊಪ್ಪುಗಳಲ್ಲಿ ರೈಬೋಫ಼್ಲೇವಿನ್ ಮತ್ತೆ ಫೋಲಿಕ್ ಆಸಿಡ್ ಇರ್ತು..

vit B complex
ಹಣ್ಣು-ತರಕಾರಿ ಬುಟ್ಟಿ

ಪ್ರಯೋಜನಂಗೊ–
ಬಿ ಗುಂಪಿನ ವಿಟಮಿನ್ ಗೊ ಶರೀರದ ಸರಿಯಾದ ಬೆಳವಣಿಗೆಗೆ,ದೇಹದ ಮುಖ್ಯ ಅಂಗಂಗಳಾದ ಹೃದಯ,ನರ ಮಂಡಲ,ಮೆದುಳು ಹಾಂಗೇ ಚರ್ಮ,ಕಣ್ಣು,ಅನ್ನ ನಾಳದ ಸರಿಯಾದ ಕೆಲಸಕ್ಕೆ ಅಗತ್ಯ.. ವಿಟಮಿನ್ ಬಿ 12 ಮತ್ತೆ ಫೋಲಿಕ್ ಆಸಿಡ್ ಕೆಂಪು ರಕ್ತ ಕಣಂಗಳ ದಿನ ನಿತ್ಯದ ಕಾರ್ಯಂಗೊಕ್ಕೆ ಅಗತ್ಯ.. ಹೀಂಗೇ ಬಿ ಗುಂಪಿನ ವಿಟಮಿನ್ ಗೊ ನಮ್ಮ ದೇಹದ ಹಲವು ಕೆಲಸಂಗೊಕ್ಕೆ ಅಗತ್ಯ…
ತೊಂದರೆಗೊ–

  • ವಿಟಮಿನ್ ಬಿ1 ಕೊರತೆಂದಾಗಿ ಬೆರಿ ಬೆರಿ(Beri-Beri) ಹೇಳ್ತ ಖಾಯಿಲೆ ಬತ್ತು.ಇದರ ಲಕ್ಷಣಂಗೊ ಸುಸ್ತು,ಹಶು ಇಲ್ಲದ್ದಿಪ್ಪದು,ಮಾಂಸ ಖಂಡಂಗಳ ಚಲನೆಲಿ ವ್ಯತ್ಯಾಸ ಬಪ್ಪದು,ಕಾಲು ಭಾರ ಅಪ್ಪದು,ಶಕ್ತಿ ಇಲ್ಲದ್ದೆ ಅಪ್ಪದು,ಮೈಲಿ ಕಿಚ್ಚು ಬಪ್ಪದು..ಇದರ ಮದ್ದು ತೆಕ್ಕೊಂಡು ಸರಿ ಮಾಡಿಗೊಳ್ಳದ್ರೆ ಮುಂದೆ ಹೃದಯಕ್ಕೆ ತೊಂದರೆ ಆವುತ್ತು ಅಕೇರಿಗೆ ರೋಗಿಗೆ ಸಾವು ಬತ್ತು.
  • ವಿಟಮಿನ್ ಬಿ2 ಕೊರತೆಂದ ಕಾಲಿನ ಹಿಮ್ಮಡಿ ಒಡೆತ್ತು,ಬಾಯಿಲಿ ಊತ-ಬೇನೆ ಕಾಣ್ತು,ತುಟಿಯ,ಮೂಗಿನ ಬದಿಲಿ ಒಡೆತ್ತು..
  • ವಿಟಮಿನ್ ಬಿ3 ಕೊರತೆಂದ ಪೆಲ್ಲಗ್ರ(Pellagra) ಹೇಳ್ತ ರೊಗ ಕಾಣ್ತು.ರೋಗಿಗೆ ಬೇಧಿ ಆವುತ್ತು,ನಾಲಗೆ ಕೆಂಪಾಗಿ ಬೀಗುತ್ತು.. ಮೈಲಿ ಬೆಶಿಲು ಬೀಳುವಷ್ಟು ಜಾಗೆಲಿ,ಕೊರಳು,ಮೊಣಕೈಯತ್ರೆ ತೊರ್ಸುತ್ತು,ಕಿಚ್ಚು ಬಂದಾಂಗಾವುತ್ತು.. ಇದರಲ್ಲೂ ಹಾಂಗೇ,ಸರಿಯಾಗಿ ಮದ್ದು ಮಾಡದ್ರೆ ಸಾವೇ ಗತಿ..
  • ವಿಟಮಿನ್ ಬಿ12 ಮತ್ತೆ ಫೋಲಿಕ್ ಆಸಿಡ್ ಕೊರತೆಂದ ಕೆಂಪು ನೆತ್ತರಿನ ಕಣ ಸರಿಯಾಗಿ ಆವುತ್ತಿಲ್ಲೆ..ಇದರಂದ ರಕ್ತದ ಕೊರತೆ ಕಂಡು ಬತ್ತು(Anaemia).ರಕ್ತದ ಕೊರತೆ ಇಪ್ಪೋರಿಂಗೆ ಬೇಗ ಬಚ್ಚುತ್ತು,ಮೈ ಬೆಳ್ಚೆ ಇರ್ತು,ಬೇಗ ಉಸಿರುಕಟ್ಟುತ್ತು ಎಷ್ಟು ಹೇಳಿದರೆ ರಜ ನಡದರೂ ಸಾಕಾಗಿ ಹೋವುತ್ತು.. 🙁

*ಬಿ ಗುಂಪಿಲಿ ಇನ್ನೂ ಸುಮಾರು ವಿಟಮಿನ್ ಗೊ ಇದ್ದು..ಆನು ತುಂಬಾ ಮುಖ್ಯವಾದ್ದರ ಮಾತ್ರ ತಿಳಿಶಿದ್ದು..

ವಿಟಮಿನ್ ಸಿ(Ascorbic acid)—
ಕೆಲವು ಪ್ರಾಣಿಗಳ ಶರೀರಲ್ಲಿ ವಿಟಮಿನ್ ಸಿ ತಯಾರಾವುತ್ತು ಆದರೆ ಮನುಷ್ಯರಲ್ಲಿ ಹಾಂಗಾವುತ್ತಿಲ್ಲೆ,ಆದ ಕಾರಣ ಅದು ಆಹಾರದ ಮೂಲಕವೇ ಸಿಕ್ಕೆಕ್ಕಷ್ಟೆ..

Vitamin C
ವಿಟಮಿನ್ ಸಿ

ವಿಟಮಿನ್ ಸಿ ಇಪ್ಪ ಆಹಾರಂಗೊ–
ಇದರ ಸಾಮಾನ್ಯವಾಗಿ ತಾಜಾ ಆಹಾರಲ್ಲಿಪ್ಪ ವಿಟಮಿನ್ ಹೇಳ್ತವು ಎಂತಕೆ ಹೇಳಿದರೆ ಸಿ ವಿಟಮಿನ್ ಇಪ್ಪ ಆಹಾರಂಗಲ ಬೆಶಿ ಮಾಡಿ ಅಪ್ಪಗ ಅದು ನಾಶ ಆವುತ್ತು.. ಆದ ಕಾರಣ ಆದಷ್ಟು ಈ ಹಣ್ಣು ತರಕಾರಿಗಳ ಬೇಯಿಶದ್ದೆ ತಿನ್ನೆಕ್ಕು..
ಅತೀ ಹೆಚ್ಚು ವಿಟಮಿನ್ ಸಿ ಇಪ್ಪದು ನೆಲ್ಲಿಕಾಯಿ,ಪೇರಳೆಲ,ಒರೆಂಜ್,ಮುಸುಂಬಿ,ನಿಂಬೆಹುಳಿ,ದುಡ್ಲೆಹುಳಿ,ಮಾಫಲ ಹಣ್ಣು ಇತ್ಯಾದಿಲಿ.
ಒಳ್ಳೆ ಪ್ರಮಾಣಲ್ಲಿ ಸಿ ವಿಟಮಿನ್ ಇಪ್ಪದು ನುಗ್ಗೆ ಸೊಪ್ಪಿಲಿ,ಎಲ್ಲಾ ನಮೂನೆಯ ಸೊಪ್ಪುಗಳಲ್ಲಿ,ಎಲೆಕೋಸು,ಹಸಿ ಮೆಣಸು,ಹಣ್ಣುಗಳಾದ ಗೇರು ಹಣ್ಣು,ಪರಂಗಿ ಚೆಕ್ಕೆ(ಮುಂಡಿ ಚೆಕ್ಕೆ),ಟೊಮೆಟೊ..
ಸಾಧಾರಣ ಪ್ರಮಾಣಲ್ಲಿ ಇಪ್ಪದು ಆಪ್ಪಲ್ಲು,ಬಾಳೆಹಣ್ಣು ಹಾಂಗೇ ದ್ರಾಕ್ಷೆಲಿ..
ಪ್ರಯೊಜನಂಗೊ–
ಆರೋಗ್ಯವಂತ ಹಲ್ಲು,ಒಸಡು,ಚರ್ಮಕ್ಕೆ ಇದು ಅಗತ್ಯ.. ರೋಗ ತಡೆಗಟ್ಟುವ ಶಕ್ತಿ(immunity power) ಹೆಚ್ಚಾವುತ್ತು..
ತೊಂದರೆಗೊ–
ವಿಟಮಿನ್ ಸಿ ಕೊರತೆಂದ ಸ್ಕರ್ವಿ(Scurvy) ಹೇಳ್ತ ರೊಗ ಬತ್ತು..ಇದರಲ್ಲಿ ಒಸಡಿಲಿ ಬೇನೆ,ಊತ,ನೆತ್ತರು ಬಪ್ಪದು ಕಾಣ್ತು..ಹಲ್ಲುಗೊ ಸಡಿಲ ಆಗಿ ಉದುರುಲೆ ಸುರು ಆವುತ್ತು.. ಇದರೊಟ್ಟಿಂಗೆ ಗಂಟುಗಳಲ್ಲಿಯೂ ಬೇನೆ,ಊತ ಇರ್ತು..

ಖನಿಜಾಂಶಂಗೊ
ಅತೀ ಮುಖ್ಯವಾದ ಖನಿಜಾಂಶಂಗೊ ಹೇಳಿದರೆ ಕಾಲ್ಶಿಯಂ,ಕಬ್ಬಿಣ,ಅಯೋಡಿನ್..
ಕಾಲ್ಶಿಯಂ(Calcium)–
ಬಾಕಿ ಎಲ್ಲಾ ಖನಿಜಂಗೊಕ್ಕೆ ಹೋಲ್ಸಿದರೆ ಶರೀರಲ್ಲಿ ಇದು ಹೆಚ್ಚಿನ ಪ್ರಮಾಣಲ್ಲಿ ಇದ್ದು..ಪ್ರತಿಯೊಂದು ಜೀವ ಕೋಶಲ್ಲಿ,ಮೂಳೆಗಳಲ್ಲಿ,ಹಲ್ಲುಗಳಲ್ಲಿ ಇದು ಇದ್ದು..

calcium
ಕಾಲ್ಶಿಯಂ ಇಪ್ಪ ಆಹಾರ

ಕಾಲ್ಶಿಯಂ ಇಪ್ಪ ಆಹಾರಂಗೊ—
ಹಾಲು-ಹಾಲಿನ ಉತ್ಪನ್ನಂಗೊ ಬೆಣ್ಣೆ,ತುಪ್ಪ ಬಿಟ್ಟು,ಸೊಪ್ಪು ತರಕಾರಿ,ಮಾಂಸ,ಮೊಟ್ಟೆ,ಮೀನು.. ಧಾನ್ಯಂಗಳಲ್ಲಿ ರಾಗಿಲಿ ಮಾತ್ರ ಒಳ್ಳೆ ಪ್ರಾಮಾಣಲ್ಲಿ ಕಾಲ್ಶಿಯಂ ಇಪ್ಪದು.. ಎಳ್ಳಿನ ಕಾಳಿಲೂ ಕಾಲ್ಶಿಯಂ ಇದ್ದು..

ಪ್ರಯೋಜನಂಗೊ–
ಮೂಳೆ,ಹಲ್ಲುಗಳ ಬೆಳವಣೆಗೆಗೆ ಇದು ಅಗತ್ಯ.. ಇದು ಫೋಸ್ಫರಸ್ ಹೇಳ್ತ ಇನ್ನೊಂದು ಖನಿಜದೊಟ್ಟಿಂಗೆ ಸೇರಿಗೊಂಡು ವಿಟಮಿನ್ ಡಿ ಯ ಉಪಸ್ಥಿತಿಲಿ ಕೆಲಸ ಮಾಡುದು.. ಆದ ಕಾರಣ ವಿಟಮಿನ್ ಡಿ ಇಲ್ಲಿ ಅಗತ್ಯ… ಕಾಲ್ಶಿಯಂ ನೆತ್ತರಿನ ಹೆಪ್ಪುಕಟ್ಟುಸುಲೂ ಸಹಾಯ ಮಾಡ್ತು..
ತೊಂದರೆಗೊ–
ಸಾಮಾನ್ಯವಾಗಿ ಬಸರಿಯಕ್ಕಳಲ್ಲಿ,ಬಾಳಂತಿಯಕ್ಕಳಲ್ಲಿ,ಮಕ್ಕಳಲ್ಲಿ ಇದರ ಕೊರತೆ ಕಾಣ್ತು.. ಮಕ್ಕಲಲ್ಲಿ ಮೊದಲೇ ಹೇಳಿದ ಹಾಂಗೇ ರಿಕೆಟ್ಸ್ ಬತ್ತು.. ಹೆಮ್ಮಕ್ಕಳಲ್ಲಿ ಒಸ್ಟಿಯೋಮಲೇಶಿಯಾ ರೋಗ ಬತ್ತು..

ಕಬ್ಬಿಣದ ಅಂಶ(Iron)–
ತುಂಬಾ ಸಣ್ಣ ಪ್ರಮಾಣಲ್ಲಿ ಬೇಕಪ್ಪದು ಆದರೆ ಮುಖ್ಯವಾದ್ದು..

iron
ಕಬ್ಬಿಣ ಆಹಾರ 😉

ಕಬ್ಬಿಣದ ಅಂಶ ಇಪ್ಪ ಆಹಾರ–ಧಾನ್ಯಂಗೊ,ಹಸಿರು ಸೊಪ್ಪು ತರಕಾರಿಗೊ,ಮೊಟ್ಟೆಯ ಹಳದಿ ಭಾಗ,ಯಕೃತ್,ಮಾಂಸ.. ಬೆಲ್ಲಲ್ಲಿ ಕೂಡಾ ಕಬ್ಬಿಣದ ಅಂಶ ಇರ್ತು.. ಹಾಂಗಾಗಿ ಸಕ್ಕರೆಯ ಬದಲು ಬೆಲ್ಲ ತುಂಬಾ ಒಳ್ಳೆದು..

ಪ್ರಯೋಜನಂಗೊ–
ನೆತ್ತರಿನ ಕೆಂಪು ಕಣಲ್ಲಿ ಹೀಮೋಗ್ಲೋಬಿನ್(Haemoglobin) ಹೇಳ್ತ ಅಂಶ ಇರ್ತು..ಇದು ಕಬ್ಬಿಣದ ಅಂಶಂದ ತಯಾರು ಅಪ್ಪದು..ಇದರಂದಾಗಿ ನೆತ್ತರಿಂಗೆ ಕೆಂಪು ಬಣ್ಣ ಬಪ್ಪದು..ದೇಹದ ಎಲ್ಲಾ ಭಾಗಕ್ಕೆ ಆಮ್ಲಜನಕ ಕೊಂಡೋಪದೇ ಇದರ ಕೆಲಸ..
ಅಯೋಡಿನ್–
ಥೈರೋಐಡ್ ಗ್ರಂಥಿಯ ಸರಿಯಾದ ಕೆಲಸಕ್ಕೆ ಈ ಖನಿಜ ಅಗತ್ಯ.. ಇದರ ಕೊರತೆಂದಾಗಿ ಗಲಗಂಡ(goitre) ರೋಗ ಬತ್ತು..ನಿಂಗೊಗೆ ಗೊಂತಿಕ್ಕು,ಗಂಟಲಿನ ಜಾಗೆಲಿ ಊತದಾಂಗೆ ಇಪ್ಪೋರ ನೋಡಿಪ್ಪಿ..ಸಾಮಾನ್ಯವಾಗಿ ಬೆಟ್ಟ ಪ್ರದೇಶದ ಜನಂಗಳಲ್ಲಿ ಕಾಂಬಲೆ ಸಿಕ್ಕುತ್ತು.. ಅಯೋಡಿನ್ ಮಣ್ಣಿಲಿ ಇರ್ತು,ಅದು ಅಲ್ಲಿ ಬೆಳದ ತರಕಾರಿಗಳಲ್ಲೂ ಇರ್ತು.. ಆದರೆ ಬೆಟ್ಟ ಪ್ರದೇಶದ ಮಣ್ಣಿಲಿ ಅಯೋಡಿನ್ ಕೊರತೆ ಇರ್ತು,ಹಾಂಗಾಗಿ ಅಲ್ಲಿಯಾಣ ಜನರಲ್ಲೂ ಕೊರತೆ ಕಾಣ್ತು….ಸಮುದ್ರದ ಆಹಾರಲ್ಲಿ(ಮೀನು ಇತ್ಯಾದಿ) ಅಯೋಡಿನ್ ಅತೀ ಹೆಚ್ಚು ಪ್ರಮಾಣಲ್ಲಿ ಇರ್ತು..ಹಾಂಗೇ ಸಮುದ್ರದ ಹತ್ತರಣ ಮಣ್ಣಿಲಿ..

ಉಪ್ಪಿಂದ ರುಚಿ ಬೇರೆ ಇಲ್ಲೆ

ಅಯೋಡಿನ್ ಕೊರತೆಯ ಕಮ್ಮಿ ಮಾಡ್ಲೆ ಸರಕಾರ ಅಯೋಡಿನ್ ನ ಉಪ್ಪಿಲಿ ಸೇರ್ಸುಲೆ ಹೇಳಿದ್ದು.. ನಿಂಗೊ ಗ್ರೇಶಿಗೊಂಡಿಪ್ಪಿ ಉಪ್ಪು ಎಂತಕೆ ಬೇರೆ ಯಾವುದಕ್ಕಾರು ಹಾಕುಲಾವುತ್ತಿತ್ತನೇ ಹೇಳಿ.. ಉಪ್ಪು ಎಲ್ಲರೂ ಉಪಯೋಗ ಮಾಡುವ ಪದಾರ್ಥ,ಅದಿಲ್ಲದ್ದೆ ಅಡಿಗೆ ಮಾಡುವೋರೇ ಇಲ್ಲೆ..ಹಾಂಗಾಗಿ ಎಲ್ಲಾ ಜನರಿಂಗೂ ಸಿಕ್ಕೆಕ್ಕು ಹೇಳಿ ಅದರಲ್ಲಿ ಸೇರ್ಸಿದ್ದವು..

ಇವುಗಳೇ ನಮ್ಮ ಆಹಾರಲ್ಲಿಪ್ಪ ಅಂಶಂಗೊ.. ಇವುಗೊ ಬೇಕಪ್ಪ ಪ್ರಮಾಣ ಸಣ್ಣದಾದರೂ ಕಾರ್ಯ ಮುಖ್ಯವಾದ್ದನೇ ಮಾಡ್ತವು…(ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು 🙂 ) ಈ ಎಲ್ಲಾ ಅಂಶಂಗಳ ಅಗತ್ಯದ ಪ್ರಮಾಣಲ್ಲಿ ತೆಕ್ಕೊಂಡರೆ ಆರೋಗ್ಯವಾಗಿ ಬದುಕ್ಕುಲೆ ಎಡಿಗು..ಈಗ ನಿಂಗೊಗೂ ಅಂದಾಜಾದಿಕ್ಕು ಯಾವ ಆಹಾರಲ್ಲಿ ಯಾವುದೆಲ್ಲಾ ಪೋಷಕಾಂಶಂಗೊ ಇದ್ದು ಹೇಳಿ..ಇದರ ಗಮನಲ್ಲಿ ಮಡಿಕ್ಕೊಂಡು ಸರಿಯಾದ ಆಹಾರದ ಮೂಲಕ ಆರೋಗ್ಯ ಕಾಪಾಡುವ..

ಒಪ್ಪ:ಎಲ್ಲರೂ ಬದುಕುದಕ್ಕೋಸ್ಕರ ಊಟ ಮಾಡೆಕ್ಕೇ ಹೊರತು ಊಟಕ್ಕೋಸ್ಕರ ಬದುಕುಲಾಗ… ಬಾಯಿ ಚಪಲದ ಹಿಡಿತ ತಪ್ಪಿದರೆ ಜೀವನದ ಹಿಡಿತವೇ ತಪ್ಪಿ ಹೋಕ್ಕು..

19 thoughts on “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..

  1. Vitamin matte mineral gala hechchu tindare enta aavuttu? Eegina diet conscioius society ge Hypervitaminosis bagee kooda helire olledu, article chokkalli baraddadakke special comment “husharu koose”

  2. ಸವಿಸ್ತಾರ ಮಾಹಿತಿಪೂರ್ಣ ಲೇಖನ.
    ವಿಟಮಿನ್‌ಗಳ ಬಗ್ಗೆ ಶಾಲೆಲಿ ಒಂದು ರಜಾ ಕಲ್ತದು ನೆಂಪಾತು. ಆವ್ಗ ಮಾರ್ಕಿಂಗೆ ಬೇಕಾಗಿ ಬಾಯಿಪಾಟ ಮಾಡಿಗೊಂಡಿದ್ದದು. 😉
    ಈಗ ಅದರ ಗಂಭೀರತೆ ಗೊಂತಾಯಿದು.
    ಧನ್ಯವಾದಂಗೊ ಡಾಗುಟ್ರಕ್ಕ.

  3. ಸೌಮ್ಯಾ, ನಮ್ಮ ಶರೀರಕ್ಕೆ ಕಮ್ಮಿಲಿ ಆದರೂ ಅಗತ್ಯ ಬೇಕಾಗಿ ಬಪ್ಪಂಥ ವಿಟಮಿನ್ ಗಳ ಬಗ್ಗೆ ಎಲ್ಲಾ ವಿಷಯಂಗಳ ವಿಸ್ತಾರವಾಗಿ ವಿವರ್ಸಿದ್ದೆ.. ಲಾಯಕ ಆಯಿದು ಬರದ್ದು… ನಾವು ಬಳಸುವ ಅಹಾರಲ್ಲಿ ಇಪ್ಪ ವಿಟಮಿನ್ ಗ ಯಾವುದೆಲ್ಲಾ ಹೇಳಿ ತಿಳಿಶಿ ಕೊಟ್ಟು, ಎಲ್ಲೋರೂ ಅದರ ಉಪಯೋಗಿಸುವ ಹಾಂಗೆ ಬರದ್ದೆ.. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದಿಪ್ಪ ಹೀಂಗಿಪ್ಪ ವಿಷಯಂಗಳ ಬೈಲಿಂಗೆ ಇನ್ನುದೇ ಪರಿಚಯ ಮಾಡು ಅತಾ? ಸೌಮ್ಯೊಪ್ಪ ಲಾಯ್ಕಾಯಿದು..:-)

  4. ಅತ್ತೆ ಲಾಯ್ಕ ಆಯಿದು ಆತಾ.. ವಿಟಮಿನ್ ಗೆ ನಮ್ಮ ಭಾಷೆಲಿ ಎಂತ ಹೇಳುದತ್ತೆ…

    1. ಜೀವಸತ್ವ ಹೇಳಿ ಮಾಸ್ಟ್ರು ಹೇಳಿಗೊಂಡಿತ್ತಿದ್ದವು…

      1. ಅಪ್ಪು ವಿಟಮಿನಿಂಗೆ ನಮ್ಮ ಭಾಷೆಲಿ “ಜೀವಸತ್ವ” ಹೇಳುದು… ಮಾಷ್ಟ್ರತ್ರೆ ಕೇಳಿ ಹೇಳಿದ್ದಕ್ಕೆ ಧನ್ಯವಾದ ರಘು ಅಣ್ಣ… 🙂

        1. ಜೀವಸತ್ವ ಅತಿಕಮ್ಮಿ ಆದರೆ ಸತ್ತಜೀವ ಆವುತ್ತಡಪ್ಪ.ಮಾಸ್ಟ್ರೆ ಹೇಳಿದ್ದು.. ಅಪ್ಪೋ ದಾಗುಟ್ರಕ್ಕಾ..

  5. ಸೌಮ್ಯಕ್ಕಾ,,ಲೇಖನ ಓದಿಯಪ್ಪಗ ೧೦ ವರ್ಷ ಹಿಂದೆ ಶಾಲೇಲಿ ಪಾಠ ಕೇಳಿದ ನೆಂಪು ಆತು.ಎನ್ನದು ಒಂದು ಪ್ರಶ್ನೆ,ಕ್ಯಾಲ್ಸಿಯಂ ಇಪ್ಪ ಆಹಾರ ನವಗೆ ಹೆಚ್ಚಿನ ಪ್ರಮಾಣ ಯಾವುದರ್ಲಿ ಸಿಕ್ಕುತ್ತು?ಸೊಪ್ಪು ತರಕಾರಿಲಿಯೋ?ಅಥವಾ ಮೀನು,ಮೊಟ್ಟೆ,ಮಾಂಸಲ್ಲಿಯೋ?

    1. ಕಾಲ್ಶಿಯಂ ನಾವು ಕುಡಿವ ಹಾಲಿಲಿ,ಮೊಸರು,ಮಜ್ಜಿಗೆಲಿ ತುಂಬಾ ಒಳ್ಳೆ ಪ್ರಮಾಣಲ್ಲಿ ಸಿಕ್ಕುತ್ತು..ದಿನಕ್ಕೆರಡು ಗ್ಲಾಸು ಹಾಲು ಕುಡುದರೆ ನಮ್ಮ ಶರೀರಕ್ಕೆ ಬೇಕಪ್ಪಷ್ಟು ಕಾಲ್ಶಿಯಂ ಸಿಕ್ಕುತ್ತು(ಕಾಪಿ-ಚಾಯದ ರೂಪಲ್ಲಿ ಅಲ್ಲ) 🙂 ಮೇಲೆ ಹೇಳಿದಾಂಗೇ ರಾಗಿಲಿದೇ ಕಾಲ್ಶಿಯಂ ಇರ್ತು ಅದುದೇ ಬೇರೆ ಯಾವುದೇ ಧಾನ್ಯಂದ ಹೆಚ್ಚು…
      ಈ ಲೇಖನ ಓದಿಯಪ್ಪಗ ಶಾಲೆಯ ನೆಂಪಾದ್ದು ಖುಷಿ ಆತು… 🙂

  6. ವಿಟಮಿನ್ ಬಗ್ಗೆ ವಿವರವಾದ ಸಚಿತ್ರ ಲೇಖನ. ಲಾಯಿಕ್ ಆಯಿದು. ಹಲವಾರು ವಿಷಯಂಗೊ ಗೊಂತಾತು.
    @ ರಘು ಮುಳಿಯ & Pamara: ವಿಟಮಿನ್ I (ಐ) ಕೂಡಾ ಹೆಚ್ಚಿನ ಉಪಯೋಗಕ್ಕೆ ಬತ್ತು

    1. ಧನ್ಯವಾದ ಅಪ್ಪಚ್ಚಿ…
      ಇದ್ಯಾವುದು ಹೊಸ ವಿಟಮಿನ್? ಐ ವಿಟಮಿನ್? ಆನು Phd ಮಾಡ್ಲೆ ಅದನ್ನೇ ವಿಷಯವಾಗಿ ತೆಕ್ಕೊಳ್ಳೆಕ್ಕಾ ಹೇಳಿ ಗ್ರೇಶುತ್ತಾ ಇದ್ದೆ.. 😉 🙂

      1. ಇದು ವಿಟಮಿನ್ “Influence”

        1. ಅದು ಈಗಾಣ ಕಾಲಲ್ಲಿ ಜೀವನಕ್ಕೆ ಅತೀ ಮುಖ್ಯವಾದ ವಿಟಮಿನ್…Phd ಮಾಡ್ಲೆ ಸೂಕ್ತ ವಿಷಯ… 😉

  7. Vitamin M is also very important.
    Vitamin M is Money. In our office especially at the time of appraisals, we look for Vitamin M:)

  8. ದಾಗುತ್ರಕ್ಕಾ..ಲೇಖನ ತುಂಬಾ ಲಾಯಿಕಾಯಿದು.ತಿಳುಕ್ಕೊಲ್ಳೆಕ್ಕಾದ ವಿಷಯನ್ಗೋ ಸುಮಾರಿದ್ದು.
    – ಹಸಿ ತರಕಾರಿ,ಸೊಪ್ಪುಗಳ ಬೇಶಿ ಅಪ್ಪಗ ವಿಟಮಿನ್ ನಾಶ/ಕಮ್ಮಿ ಅಪ್ಪ ಹಾಂಗೆ ಫ್ರಿಜ್ಜಿಲಿ ಮಡುಗಿ ಅಪ್ಪಗಳೂ ವಿಟಮಿನ್ಗೋ ನಾಶ/ಕಮ್ಮಿ ಆವುತ್ತಲ್ಲದಾ?
    – ಎಣ್ಣೆ ತಯಾರು ಮಾಡ್ತೋರು ವಿಟಮಿನ್ ನ ಪ್ರಚಾರ ಮಾಡೊದು ರಾಜ ಲೊಟ್ಟೆಯೇ. ಕಚ್ಚಾ ಎಣ್ಣೆಗಳಲ್ಲಿ ತೊಕೊಪ್ಹೆರೋಲ್ ಇರುತ್ತು. ಎಣ್ಣೆಯ ಬಣ್ಣ ಮತ್ತೆ ಮೂರಿ ಕಂಟ್ರೋಲ್ ಮಾಡುಲೆ ಬೇಕಾಗಿ ಎಣ್ಣೆಯ ಶುದ್ದೀಕರಣ( ರಿಫೈನ್) ಮಾಡುತ್ತವು.ಬಣ್ಣ ತೆಗವಲೆ ಮಣ್ಣು ಕಲಸಿ ಫಿಲ್ಟರ್ ಮಾಡುತ್ತವು.ಮುರಿ ತೆಗವಲೆ ಎಣ್ಣೆಯ ಹೆಚ್ಚು ಉಷ್ಣತೆಗೆ ( ೨೫೦ ಡಿಗ್ರಿ) ವರೆಗೆ ವೆಕ್ಯುಮಿಲಿ ಬೆಶಿ ಮಾಡುತ್ತವು.ಈ ಕ್ರಿಯೇಲಿ ಎಣ್ಣೆಲಿಪ್ಪ ಎಲ್ಲಾ ಒಳ್ಳೆ ಪ್ರೋಟೀನುಗೋ,ವಿಟಮಿನ್ಗೋ ನಾಶ ಆವುತ್ತು .ನಿಜವಾಗಿ ವಿಟಮಿನ್ ಇ ಸರಿಯಾಗಿ ಇಪ್ಪೋದು ಕಚ್ಚಾ ಎಣ್ಣೆಲಿ. ಇನ್ನು ಕಾನೂನಿನ ಪ್ರಕಾರ ರಜ ವಿಟಮಿನ್ ( ಬಿ ಮತ್ತೆ ಡಿ ) ಗಳ ಸೇರುಸುತ್ತವು . ನವಗೆ ಮನೆಯ ಕೊಪ್ಪರಂದ ಮಿಲ್ಲಿಲಿ ಮಾಡಿದ ತೆಂಗಿನ ಎಣ್ಣೆಯೇ ಒಳ್ಳೆದು ಹೇಳಿ ಎನ್ನ ಅಭಿಪ್ರಾಯ .ಒಳುದ ಕಾಳುಗಳದ್ದೂ ಹಾಂಗೆ ,ಮಿಲ್ಲಿನ ಎಣ್ಣೆ ಒಳ್ಳೇದು .ಆದರೆ ಬಾಳ್ತರ ಬತ್ತಿಲ್ಲೆ ಹೇಳೋದು ಒಂದು ತೊಂದರೆ .
    ಬೆರಿ ಬೆರಿ ಹೇಳಿರೆ ಎಂತ ರೋಗ? ಮಣ್ಣೇ ಬಟ್ಯ ಬೆರಿ ಬೇನೆ ಆಪುಂಡು ಹೇಳಿ ಹೆಡಗೆ ಕವುಂಚಿ ಮಡುಗಿ ನಡದ್ದು.ಅದುವೆಯೋ ??
    ವಿಟಮಿನ್ ಎಂ ಹೆಚ್ಚಿದ್ದಷ್ಟು ಒಳ್ಳೆದು ಹೇಳಿ ಕೆಲವು ಜೆನ ಹೇಳಿಗೊಂಡಿತ್ತಿದ್ದವು,ಎನಗರಡಿಯ.

    1. ವಿಟಮಿನ್ ಮ್ ಹೇಳಿದರೆ ಫೋಲಿಕ್ ಆಸಿಡ್…
      ಬೆರಿ ಬೆರಿ ಮಕ್ಕಳಲ್ಲಿ ಕಂಡು ಬಪ್ಪ ರೋಗ.. ಬಟ್ಯನ ಬೆರಿ ಬೇನೆ ಬೇರೆಯೆ…
      ವಿಟಮಿನ್ ಇ ಎಣ್ಣೆ ಹಾಳಪ್ಪದನ್ನೂ ತಡೆತ್ತು..ಎಣ್ಣೆ ಹಾಳಪ್ಪದು ಅದು ಗಾಳಿಲಿಪ್ಪ ಆಮ್ಲಜನಕದೊಟ್ಟಿಂಗೆ ಸೇರಿ ಅಪ್ಪಗ..ವಿಟಮಿನ್ ಇ ಅಲ್ಲಿ ಅಪ್ಪ ರಾಸಾಯನಿಕ ಕ್ರಿಯೆಯ ತಡೆತ್ತು.. ನಾವು ನಮ್ಮ ಮನೆಲಿ ಯಾವ ಎಣ್ಣೆ ಮೊದಲಿಂದಲೂ ಉಪಯೋಗ ಮಾಡಿಗೊಂಡಿತ್ತೋ ಅದೇ ಒಳ್ಳೆದು… 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×