Oppanna.com

ಭೂಪ ಕೇಳೆಂದ…!

ಬರದೋರು :   ತೆಕ್ಕುಂಜ ಕುಮಾರ ಮಾವ°    on   03/03/2014    8 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

“ಬಿತ್ತಿಲ್ಲದ್ದ ದ್ರಾಕ್ಷೆ ಇಪ್ಪ ಹಾಂಗೆ ಕಣ್ಣೀರು ಬಾರದ್ದ ನೀರುಳ್ಳಿ ಬೇಕಾತು,ಅಪ್ಪೊ.? ಒಬ್ಬಾದರೂ ಪುಣ್ಯಾತ್ಮ ಇದರ ಕಂಡು ಹಿಡಿಯೆಕ್ಕಾತೆ ” ನೀರುಳ್ಳಿ ಕೊರಕ್ಕೊಂಡು ಕೂದ ಪಾರು ಮೂಗು ಒರಸಿಗೊಂಡು ಹೇಳೊದು ಎನ್ನ ಕೆಮಿಗೆ ಬಿದ್ದತ್ತು.ಕಣ್ಣಿಲಿ ನೀರು ತುಂಬಿದ್ದತ್ತು. ಒಂದು ಕಣ್ಣಿನ ಮುಚ್ಚಿ ಇನ್ನೊಂದರ ಅರ್ಧ ಒಡಾದು ಎನ್ನ ನೋಡಿತ್ತು.
“ಇನ್ನೆಷ್ಟಿದ್ದು ಕೊರವಲೆ,ಆನು ಕೊರದು ಕೊಡ್ತೆ” ಹೇಳಿ ಎದ್ದೆ. ಚೋಲಿ ತೆಗದು ಮಡಗಿದ ನೀರುಳ್ಳಿಯ ಲಾಯಕಲ್ಲಿ ನೀರಿಲಿ ತೊಳದು ತಂದು ಕೊರದು ಕೊಟ್ಟೆ.ಎನ್ನ ಕಣ್ಣಿಲಿ ನೀರು ಬಾರದ್ಸು ಕಂಡು,”ಅದೆಂತ ಕೆಣಿ ನಿಂಗಳದ್ದು.ಎನಗೆ ಹೇಳಿ ಕೊಡ್ಲಾಗದ ?”ಹೇಳಿ ಒಗ್ಗರಣೆ ಕಾಸುಲೆ ಒಳ ನಡದತ್ತು. ಹಿಡುದ ಕೆಲಸ ಮುಗುಶದ್ದೆ ಉತ್ತರದ ಅಪೇಕ್ಷೆ ಇರ್ತಿಲೆ ಪಾರುಗೆ.
“ಅಮ್ಮ,ಆನು ದೊಡ್ಡ ಅಪ್ಪಗ ಸೈಂಟಿಸ್ಟ್ ಆಗಿ ಕಣ್ಣಿಲಿ ನೀರು ಬಾರದ್ದ ಹಾಂಗಿಪ್ಪ ನೀರುಳ್ಳಿ ಕಂಡು ಹೀಡಿತ್ತೆ.ಮತ್ತೆ ನಿನಗೂ ಸುಲಭ ಆವುತ್ತನ್ನೆ” ಹೇಳ್ಯೊಂಡು ಸಣ್ಣ ಮಾಣಿ ಕೂದಲ್ಲಿಂದಲೆ ಒಗ್ಗರಣೆ ಹಾಕಿದ.
“ನೀನು ಅದೆಲ್ಲ ಮಾಡೆಕ್ಕಾರೆ ಮದಲು ಈಗ ಸರಿ ಓದು.ಹೋಮ್ ವರ್ಕ್ ಮುಗುಶಿದ್ದೆಯಾ,ಹೋಗು ಅದರ ಮಾಡು ನೀನು, ಇಲ್ಲಿ ನಿಲ್ಲೆಡ” ಮಗನ ದಟ್ಟುಸಿ ಕಳುಸಿತ್ತು ಪಾರು.
ಇನ್ನು ಎಲ್ಲ ಕೆಲಸ ಮುಗುಶಿ ಸೋಫಲ್ಲಿ ಕೂದಪ್ಪಗ ನೆಂಪಕ್ಕು.ಎನಗೆ ಆ ವಿಷಯ ಮರದು ಹೋಗಿಕ್ಕು ಹೇಳ್ತದರ ಗುಮಾನಿ ಮಾಡದ್ದೆ ಮಾತು ನಿಲ್ಸಿದಲ್ಲಿಂದ ಎತ್ತಿಗೊಂಬದು ಪಾರುವ ಕ್ರಮ.
“ಹ್ಹಾಂ…ಈಗ ಹೇಳಿ”
“ಹುಂ ಅಕ್ಕು. ಅಲ್ಲ, ಈಗ ಆನು ಎಂತರ ಹೇಳೆಕ್ಕಪ್ಪದು ?”ಬಚ್ಚಿ ಬಂದು ಕೂದವಕ್ಕೆ ಹಾಂಗೆ ಕೇಳಿರೆ ಕೆಣಕ್ಕಿದ ಹಾಂಗೆ ಆವುತ್ತು ಹೇಳೊದು ಗೊಂತಿದ್ದರೂ ಎನಗೆ ಹಾಂಗೆ ಕೇಳದ್ದೆ ನಿವೃತ್ತಿ ಇಲ್ಲೆ.
“ಇನ್ನು ದಿನಾಗಿಳೂ ನಿಂಗೊ ನೀರುಳ್ಳಿ ಕೊರದು ಕೊಡೆಕ್ಕು.ಎಲ್ಲ ಕೆಲಸಕ್ಕೂ ಆನೇ ಆಯೆಕ್ಕು ಹೇಳಿ ಆದರೆ ಮುಗಿವಲಿಲ್ಲೆ,ಹ್ಹುಂ.” ಪಾರುವ ಒಂದೊಂದು ಶಬ್ಧವೂ ಮಣ ಭಾರ ಇಪ್ಪ ಅನುಭವ ಆತೆನಗೆ.
“ಓ…ಅದಾ ಸಂಗತಿ.? ಆಗಳೂ ಆನಾಗಿಯೇ ಅಲ್ಲದೊ ನೀರುಳ್ಳಿ ಕೊರದು ಕೊಡ್ತೆ ಹೇಳಿದವ.ಅಲ್ಲ ಪಾರು, ನೀನು ಹೀಂಗೆ ಮಾತು ಶುರು ಮಾಡುವಾಗ ಅದರ ಹಿಂದು ಮುಂದಾಣದ್ದರ ಹೇಳಿರೆ ಎನಗೆ ಉತ್ತರ ಕೊಡ್ಲೆ ಯೇಚನೆ ಮಾಡೆಕ್ಕಾಗಿ ಬಪ್ಪಲಿಲ್ಲೆ ಇದಾ. ಮುಕ್ಕಾಲು ಘಂಟೆ ಕಳುದು ಬಂದು ‘ಹೇಳಿ ಇನ್ನು’ ಹೇಳಿ ಶುರು ಮಾಡಿರೆ ಆನು ಎಲ್ಲಿಂದ,ಎಂತರ ಶುರು ಮಾಡೆಕ್ಕು?”
“ಹಾಂಗಲ್ಲ, ನಿಂಗೊ ನೀರುಳ್ಳಿ ಕೊರವಗ ಕಣ್ಣೀರು ಬಯಿಂದಿಲೆನ್ನೆ.ಕನ್ನಡ್ಕ ಹಾಕಿದ್ದಕ್ಕೆಯೋ ಅಲ್ಲ ಬೇರೆಂತಾರು ಕೆಣಿ ಮಾಡಿದ್ದಿರೊ. ಎನಗೂ ಹೇಳಿ ಕೊಡಿ. ನಾಳಂದ ಆನುದೆ ಹಾಂಗೆ ಮಾಡ್ಲಕ್ಕನ್ನೆ” ಪಾರುವ ಬಚ್ಚೆಲು ತಣುದ ಸೂಚನೆ ಅದು. ಒಳ ಎದ್ದಿಕ್ಕಿ ಹೋಪಗ ಮಾತು ಎಲ್ಲಿ ನಿಲ್ಸಿದ್ದು ಹೇಳುದರ ನೆಂಪು ಮಾಡ್ಸಲೆ ಆ ನಮುನೆ ದಟ್ಟಿಸಿದ್ದು, ಅಷ್ಟೆ.ಹೆಚ್ಚಾಗಿ ನಿತ್ಯದ ಅಡಿಗೆಗೆ ಆಯೆಕ್ಕಪ್ಪ ಎಲ್ಲ ಕೆಲಸವ ಪಾರುವೇ ಮಾಡೊದು.ಅಪರೂಪಲ್ಲಿ, ರಜೆ  ದಿನ ಹೀಂಗೆ ಸಣ್ಣ ಸಣ್ಣ ಕೆಲಸವ ಎನ್ನ ಕೈಗೆ ಹಿಡುಸುತ್ತು, ಅದು ಲೆಕ್ಕದ್ದಲ್ಲ.
ಆಗ ಆನು, ಸೊಲುದು ಮಡಗಿದ ನೀರುಳ್ಳಿಯ ನೀರಿಲಿ ಮುಂಗಿಸಿ ತಂದದು ಪಾರುಗೆ ಕಂಡಿರ. ಆನು ವಿಷಯ ಹೇಳಿಯಪ್ಪದ್ದೆ ಎಡದ ಕೈಲಿ ಇಷ್ಟೆಯೋ ಹೇಳಿ ಕೈ ಕರಣೆ ಮಾಡಿ ತೋರ್ಸಿತ್ತು.
“ಏಂ…! ಲೊಟ್ಟೆ ಅಲ್ಲ, ನೀನು ಮಾಡಿ ನೋಡೊಂದರಿ.ಮತ್ತೆ ಹೇಳು.ಇನ್ನೂ ಒಂದು ಒಳ್ಳೆ ಕೆಣಿ ಇದ್ದು.ನೀನು ಕೆಲವು ಸರ್ತಿ ಬುತ್ತಿಗಿಪ್ಪ ತಾಳ್ಳಿಂಗೆ ಉದಿಯಪ್ಪಗ ನೀರುಳ್ಳಿ ಕೊರೆತ್ತನ್ನೆ. ಕಣ್ಣಿಲಿ ಮೂಗಿಲಿ ನೀರು ಇಳಿವದಪ್ಪೋ. ಹಾಂಗಾಗಿ, ಮುನ್ನಾಣ ದಿನ ಇರುಳೇ ಚೋಲಿ ತೆಗದು ಒಂದು ಮುಚ್ಚೆಳು ಪಾತ್ರಲ್ಲಿ ತುಂಬುಸಿ ಫ್ರಿಜ್ಜಿಲಿ ಮಡುಗು.ಫ್ರಿಜ್ಜಿನೊಳ ನೀರುಳ್ಳಿ ಘಾಟುದೆ ಬಾರ,ಕೊರವಗ ಒಂಚೂರೂ ಕಣ್ಣೀರುದೆ ಬಾರ,ನೋಡು ಬೇಕಾರೆ.ಅದಕ್ಕೆ ಸೈಂಟಿಫಿಕ್ ಕಾರಣವೂ ಇದ್ದು ಪಾರು” ಹೇಳಿ  ಆನು ಓ ಮನ್ನೆ ಯಾವುದೋ ಪೇಪರಿಲಿ ಓದಿದ್ದರ ವಿವರುಸುಲೆ ಶುರು ಮಾಡಿದೆ. ಪಾರುಗೆ ಇದರ ಅರ್ತುಗೊಂಬಲೆ ಎಷ್ಟು ಒಲವಿದ್ದು ಹೇಳುದರ ಗಣ್ಯ ಮಾಡಿದ್ದಿಲೆ.
“ನೀರುಳ್ಳಿಲಿ ಸಲ್ಫೆನಿಕ್ ಆಮ್ಲ ಹೇಳ್ತ ಅಂಶ ಇರ್ತಡ.ಕೊರದಪ್ಪಗ ಹೆರ ಬಂದ ಆಮ್ಲ ನೀರುಳ್ಳಿ ಬುಡಲ್ಲಿಪ್ಪ ಕಿಣ್ವದೊಟ್ಟಿಂಗೆ ಸೇರಿ ಗಂಧಕಾಂಶ ಇಪ್ಪ ಸಂಯುಕ್ತ ಆವಿ ರೂಪಲ್ಲಿ ಬಿಡುಗಡೆ ಆವುತ್ತಡ.ಅದು ನಮ್ಮ ಕಣ್ಣ ನೀರಿನೊಟ್ಟಿಂಗೆ ಸೇರಿ ಗಂಧಕಾಮ್ಲ ಆವುತ್ತಡ.ಈ ಆಮ್ಲಂದಾಗಿ ಕಣ್ಣು ಉರಿವಲೆ ಶುರುವಪ್ಪದಡ. ಅದರಂದಾಗಿ ಕಣ್ಣೀರು ಬಪ್ಪಲೆ ಶುರುವಾವುತ್ತು. ಉರಿ ಹೆಚ್ಚಿದಷ್ಟು ಕಣ್ಣೀರುದೆ ಹೆಚ್ಚಿಗೆ ಆವುತ್ತು.ಹಾಂಗಾಗಿ ನೀರುಳ್ಳಿಯ ಕೊಡಿ ಬುಡ ಕತ್ತರಿಸಿ, ಚೋಲಿ ತೆಗದು, ಕೊರೆಯೆಕ್ಕಾರೆ ಮದಲು ನೀರಿಲಿ ಅದ್ದಿರೆ ಉತ್ಪತ್ತಿಯಾದ ಆಮ್ಲ  ನೀರಿಲಿ ಕರಗಿ ತೊಳದು ಹೋವುತ್ತು. ಅಥವಾ ಹಾಂಗೆ ಚೋಲಿ ತೆಗದ ನೀರುಳ್ಳಿಯ ರಜ್ಜ ಹೊತ್ತು ತಂಪಿಲಿ ಫ್ರಿಜ್ಜಿನೊಳ ಮಡಗಿರೂ ಆವುತ್ತು. ಮತ್ತೆ ಕೊರವಾಗ  ಕಣ್ಣಿನೊಳ ಆಮ್ಲ ತಯಾರಪ್ಪ ಪ್ರಕ್ರಿಯೆ ಕಮ್ಮಿ ಆವುತ್ತು.ಹಾಂಗಾಗಿ ಕಣ್ಣು ಉರಿವಲೂ ಇಲ್ಲೆ ಕಣ್ಣೀರೂ ಬತ್ತಿಲೆ,ಅಷ್ಟೆ ಇದರಲ್ಲಿಪ್ಪ ಗುಟ್ಟು…ಎಂತ ?” ಹೇಳಿ ಪಾರುವ ಮೋರೆ ನೋಡಿದೆ. ಕೆಲವು ವೈಜ್ಞಾನಿಕ ಶಬ್ಧಂಗಳ ಕನ್ನಡಲ್ಲಿ ಅನುವಾದ ಮಾಡ್ಲೆ ಹೆರಟರೆ ಅದು ಪೂರ್ತಿ ಸರಿ ಇಕ್ಕು ಹೇಳ್ತದಕ್ಕೆ ಪ್ರಮಾಣ ಮಾಡ್ಲೆ ಎಡಿಯ. ಆದರೆ, ಹಾಂಗೆ ಕನ್ನಡಲ್ಲಿ ಹೇಳದ್ದರೆ ಸರಿ ಅರ್ಥವೂ ಆಗ. ಹಾಂಗಾಗಿ ಎನಗೆ ಅರ್ತಷ್ಟು ಅನುವಾದ ಮಾಡಿ ವಿವರ್ಸಿದೆ. ವಿಜ್ಞಾನ ವಿಶಯ ಕಲ್ತವಕ್ಕೆ ಇದು ಸುಲಾಭಲ್ಲಿ ಅರ್ಥ ಆವುತ್ತು ಹೇಳಿ ಅಕೇರಿಗೊಂದು ಟಿಪ್ಪಣಿಯನ್ನೂ ಸೇರ್ಸಿದೆ.
“ಹ್ಹುಂ.ಆನು ವಿಜ್ಞಾನ ವಿಷಯ ಕಲ್ತೋಳಲ್ಲ. ಹಾಂಗೇಳಿ ನಿಂಗೊ ಕಲ್ತಿದಿ,ಸುಲಾಭಲ್ಲಿ ಅರ್ಥ ಮಾಡಿಗೊಳ್ತಿ  ಹೇಳಿ ಎನ್ನ ತಾಪು ಮಾಡೊದು ಬೇಡ.ನಿಂಗೊ ಈಗ ಹೇಳಿದ್ದು ಒಂಚೂರೂ ಅರ್ಥ ಆಯಿದಿಲ್ಲೆ ಹೇಳುಲೆ ಎನಗೆಂತ ನಾಮೂಸೂ ಇಲ್ಲೆ.” ಹೇಳಿ ಸುಡುಂಪಿ ಅಕೇರಿಗೊಂದು ಟೀಕೆಯನ್ನೂ ಸೇರ್ಸಿತ್ತು ಪಾರು –
“ಅಂತೂ ಎನಗೆ ಬೇಡದ್ದರೂ ಎಂತದೋ ಏನೋ ಒಂದು ಪುರಾಣ ಹೇಳಿದಿ ನಿಂಗೊ ಅಲ್ಲದೊ.? ಭೂಪ ಕೇಳೆಂದ…
“ಇಷ್ಟಕ್ಕೇ ನೀನು ಕೋಪ ಮಾಡಿರೆ ಅಕ್ಕೋ.ಆನೆಂತ ಅಸಂಬದ್ಧ ವಿಶಯ ಹೇಳಿದ್ದನೋ.? ಅಲ್ಲ ಪಾರು ನೀನೇ ಹೇಳ್ತೆನ್ನೆ,ದಿನಲ್ಲಿ ನಾಕು ಮಾತು ಆಡಿರೆ ಹೆಚ್ಚಾವುತ್ತೋ ಹೇಳಿ. ಹಾಂಗೆ ತಿಳ್ಕೊ ನೀನು ಏಂ..”
“ಆತು ಆತು.ಅದಿರಳಿ ಈಗ ನಿಂಗೊ ಚಾ ಕುಡಿತ್ತಿರೋ, ಎನಗೆ ಕುಡಿವಲಿದ್ದು” ಹೇಳ್ಯೊಂಡು ಎನ್ನ ಉತ್ತರಕ್ಕೆ ಕಾಯದ್ದೆ ಎದ್ದಿಕ್ಕಿ ಹೋತು.ರಜ್ಜ ಹೊತ್ತಿಲಿ ಎರಡು ಗ್ಲಾಸಿಲಿ ಚಾ ತಂದು ಮಡಗಿತ್ತು.
“ಅಷ್ಟಕ್ಕೊ ಈ ‘ಭೂಪ ಕೇಳೆಂದ’ ನಿನಗೆ ಎಲ್ಲಿಂದ ಸಿಕ್ಕಿತ್ತು.? ಅಪ್ಪ ಅಂಬಗಂಬಗ ಹೇಳುಗು”
ಅಪ್ಪ ಮಾಷ್ಟ್ರ ಆಗ್ಯೊಂಡಿತ್ತಿದ್ದ ಸಮೆಯಲ್ಲಿ ತಾಳಮದ್ದಳೆ ಕೂಟಕ್ಕೆ ಹೋಪ ಕ್ರಮ ಇದ್ದತ್ತು.ಅರ್ಥವನ್ನೂ ಹೇಳುಗು.ಅಪ್ಪನ ಒಬ್ಬ ಖಾಸಾ ದೋಸ್ತಿ ಇದ್ದತ್ತು,ಅಪ್ಪು ಕಮ್ತಿ.ಅದಕ್ಕೂ ತಾಳಮದ್ದಳೆ,ಆಟ ಹೇಳಿರೆ ಆತು.ಆದರೆ ಅದರ ವ್ಯಾಪಾರ ವೈವಾಟು ಬಿಟ್ಟಿಕ್ಕಿ ಎಲ್ಲಿಗೂ ಹೋಗ.ಅಲ್ಲಿ ಆಸುಪಾಸಿಲಿ ಕೂಟ ಇದ್ದರೆ ಅಪ್ಪ ಹೋಕ್ಕು.ಹಾಂಗೆ ಹೋದಲ್ಲಿ ತಾಳಮದ್ದಳೆ ಹೇಗಿತ್ತು ಪಂಡಿತ್ರೆ ಹೇಳಿ ವಿಚಾರ್ಸಿಗೊಂಡು ಬಕ್ಕು,ಈ ಕಮ್ತಿ ಮರದಿನ ಹೊತ್ತೋಪಗ. ಅಪ್ಪ ಎಲೆ ಪೆಟ್ಟಿಗೆ ಮಡಿಕ್ಕೊಂಡು ಶುರು ಮಾಡುಗು ಶುದ್ದಿ ಹೇಳುಲೆ. ಕೆಲವು ಹೆಸರುವಾಸಿ ಅರ್ಥಧಾರಿಗೊ ದೊಡ್ಡ ಅರ್ಥ ಹೇಳ್ತ ಗೌಜಿಲಿ ಕೆಲವು ಸರ್ತಿ ಪದಕ್ಕೂ ಅರ್ಥಕ್ಕೊ ಸಂಬಂಧ ಇಲ್ಲದ್ದ ಹಾಂಗೆ ಅಪ್ಪದಿರ್ತು. ಹಾಂಗಾತು ಹೇಳಿ ಆದರೆ ಅಪ್ಪ ಹೇಳುಗು,”ಅವನ ಅರ್ಥಕ್ಕೆ ಎಂತದ್ದು ಹೇಳ್ಬೇಕು.ಅವನಿಗೆ ಕೊಟ್ಟ ಪದ ಯಾವುದೋ,ಅದಕ್ಕೆ ಹೇಳಿದ ಅರ್ಥ ಎಂತದೋ.? ಞಂಙ್…ಞಂಙ್ ಅಂತ ಮುಗಿಲಿಕ್ಕೇ ಇಲ್ಲ. ಒಟ್ರಾಶಿ ಮಾತಾಡೊದು. ಭೂಪ ಕೇಳೆಂದ.”
ಹೀಂಗೆ ಸುಮಾರು ಸರ್ತಿ ಕೇಳಿದ್ದದಿತ್ತು.ಅಪ್ಪಂಗೆ ರಿಟೈರ್ ಆಗಿ ಊರು ಬದಲ್ಸಿದ ಮತ್ತೆ ಪಟ್ಟಾಂಗಕ್ಕೆ ಅಪ್ಪು ಕಮ್ತಿಯಾಂಗೆ ಜೆನವೂ ಸಿಕ್ಕಿದ್ದವಿಲ್ಲೆ,ಆನುದೆ ಕೆಲಸ ಹೇಳಿ ಮನೆ ಬಿಟ್ಟ ಮತ್ತೆ ಅದರ ಕೇಳುವ ಅವಕಾಶವೂ ಸಿಕ್ಕಿದ್ದಿಲೆ.ಮದುವೆ ಕಳುದು ದೊಡ್ಡೋನ  ಬಸರಿ  ಸಮೆಯಲ್ಲಿ ಪಾರು ಸುಮಾರು ಏಳೆಂಟು ತಿಂಗಳು ಊರಿಲೇ ಇರೆಕ್ಕಾಗಿ ಬಂದಿತ್ತು.ಇದಕ್ಕೆ ಪೂರ್ಣ ವಿಶ್ರಾಂತಿ, ಅತ್ತೆ ಮಾವಂದ್ರಿಂಗೆ ಪುರ್ಸೊತ್ತೇ ಪುರ್ಸೊತ್ತು,ಸೊಸೆಯೊಟ್ಟಿಂಗೆ ಪಟ್ಟಾಂಗಕ್ಕೆ.
“ದೊಡ್ಡೋನ ಬಸರಿ ಆಗಿತ್ತ ಸಮೆಯಲ್ಲಿ ಊರಿಲಿತ್ತಿದ್ದೆನ್ನೆ,ಅಷ್ಟಪ್ಪಗ ಮಾವನೋರು ಹೀಂಗೆ ಒಂಡೆರಡು ಸರ್ತಿ ಹೇಳಿದ್ದರ ಕೇಳಿದ್ದೆ” ಹೇಳಿ ಪಾರು ಸುಮಾರು ಹದಿನೈದು ವರ್ಷ ಹಿಂದಕ್ಕೆ ಹೋತು. ಆ ನೆಂಪಿನಾಳಂದ ಹೆರ ಬರೆಕ್ಕಾರೆ ಪಾರುಗೆ ಸುಮಾರು ಹೊತ್ತು ಹಿಡುದತ್ತು.ಸಣ್ಣವ ಹಶುವಾವ್ತು ಹೇಳಿದ್ದಕ್ಕೆ ಅವಂಗೆ ಒಂದು ಬಟ್ಲಿಲಿ ಅಶನ ಬಳಿಶಿ ಕೊಟ್ಟತ್ತು.ಸಾಂಬಾರು ಮಾಡಿದ್ದರ ಬಳುಶುವಾಗ “ಇನ್ನು ರಜ್ಜ..ಇನ್ನು ರಜ್ಜ” ಹೇಳ್ಯೊಂಡು ಹಾಕ್ಸಿ ಮಾಣಿ ಉಂಬಲೆ ಶುರು ಮಾಡಿದ. ಪಾರು ಓರೆಗೆ ಎನ್ನ ನೋಡಿ ನೆಗೆ ಮಾಡ್ಲೆ ಶುರು ಮಾಡಿತ್ತು.
“ಆರ ಅಭ್ಯಾಸ ಬಂದದು ಇವಂಗೆ,ಹೇಂ.!”ಅದರ ಸ್ವರಲ್ಲಿಯೇ ಎನ್ನ ಕೆಣಕ್ಕುತ್ತ ಲಕ್ಷಣ ಇದ್ದತ್ತು.
“ಅಲ್ಲ ನಿಂಗೊ ಹೇಳದ್ದರೂ ತೊಂದರೆ ಇಲ್ಲೆ.ಸಣ್ಣಗಿಪ್ಪಗಾಣ ಕತೆ ಸುಮಾರೆಲ್ಲ ಅತ್ತೆ ಹೇಳಿದ್ದವು ಅಂದು.”
“ಅಂದ್ರಾಣ ಕತೆ ಅದು ಕತೆ ಮಾಂತ್ರವೇ.ಅದೆಲ್ಲ ಸಣ್ಣ ಪ್ರಾಯದ,ಎಳೆ ಮನಸ್ಸಿನ ಮಕ್ಕಳ ಚರ್ಯೆಗೋ. ದೊಡ್ಡ ಆಗಿ ಅದೆಲ್ಲ ಹಾಂಗೇ ಒಳಿತ್ತೊ. ಅದರ ಹೇಳಿ, ಮಾಡ್ಲೆ ಎಂತ ಇದ್ದು ಬೇಕನ್ನೆ.ಕೇಳಿದ ನಿನಗೂ ಅದರಂದ ಏನಾರು ಉಪಕಾರ ಇದ್ದೋ ?” ಹೇಳಿ ಎನ್ನ ಅಸಹನೆಯ ತೋರ್ಸಿದೆ.
“ಅಂದು ಆತ್ಯೋರು ಕೂದೊಂಡು ನಿಂಗಳ  ಸಣ್ಣಾಗಿಪ್ಪಗಾಣ ಸಾಹಸಂಗಳ ವಿವರ್ಸಿ ವಿವರ್ಸಿ ಹೇಳೊಗ, ಮಾವನೋರೂ ಹೀಂಗೆ ಈಗ ನಿಂಗೊ ಹೇಳಿದ ಹಾಂಗೆ ಹೇಳಿತ್ತಿದ್ದವು.ಕೋಪಲ್ಲಿ ಅಲ್ಲ,ನೆಗೆ ನೆಗೆಲಿಯೇ. ಅಕೇರಿಗೆ ‘ಅವನ ಆ ಪುರಾಣ ಎಲ್ಲ ಬಿಚ್ಚಿ ಹೇಳೆಕ್ಕೋ.ಎಂತ ಅಪ್ಪಲಿಲ್ಲೆ ಹೋಪಲಿಲ್ಲೆ, ಭೂಪ ಕೇಳೆಂದ’ ಹೇಳಿ ಅತ್ಯೋರ ಬಾಯಿ ಮುಚ್ಚಿಸಿತ್ತಿದ್ದವು.”
“ಅಲ್ಲ ಮತ್ತೆ.!ಪುಳ್ಯಕ್ಕಳ ತಂಟೆ ಪೋಕ್ರಿಗಳ ನೋಡಿ ಅದನ್ನೇ ಅಪ್ಪನ ಸಣ್ಣಾಗಿಪ್ಪಗಾಣ ಚರ್ಯೆಯೊಟ್ಟಿಂಗೆ ತೂಗಿ ನೋಡೋದು,
ಅಲ್ಲದ್ದರೆ ಅದರೊಟ್ಟಿಂಗೆ ತಾಳೆ ಹಾಕಿ ತೃಪ್ತಿ ಪಟ್ಟುಗೊಂಬದು ಈ ಅಜ್ಜಿಯಕ್ಕಳ ಕೆಲಸ,ಅಷ್ಟೆ.”
“ಕೋಪ ಬತ್ತಲ್ಲದೋ ನಿಂಗೊಗುದೆ.ಸುಮ್ಮನೆ ಮಾತಿಂಗೆ ಹೇಳಿದ್ದಷ್ಟೆ ಆನು” ಹೇಳಿ ಪಾರು ಸಮಾಧಾನ ಮಾಡ್ಲೆ ಹೆರಟತ್ತು. ಯಥಾರ್ಥಕ್ಕಾರೆ,ಎನಗೆ ಕೋಪ ಬಂದದರಿಂದಲೂ ಹೆಚ್ಚಿಗೆ ಅಪ್ಪನ ನೆಂಪುಗೊ ಕಾಡಿತ್ತು.ಎಷ್ಟೊ ಸರ್ತಿ ಅವರ ಅನುಭವಂಗಳ ಬಗ್ಗೆ ವಿಚಾರ್ಸಿರೆ,ಚೆಂದಕ್ಕೆ ಕತೆ ಕಟ್ಟಿ ರಸವತ್ತಾಗಿ ಹೇಳುಗು. ಹಾಂಗೇಳಿ ನಾವಾಗಿ ನೆಂಪು ಮಾಡ್ಸಿರೆ “ಎಂತ ಕರ್ಮ.ಈಗ ಆ ವಿಷಯ ಎಂತರ ಹೇಳೊದು,ಭೂಪ ಕೇಳೆಂದ” ಹೇಳಿ ಎಲ್ಲ ಸಂಗತಿಗಳ ಬಿಚ್ಚಿ ಮಡಗ್ಗು.

***<>***

8 thoughts on “ಭೂಪ ಕೇಳೆಂದ…!

  1. ಹ ಹ ಹಾ 😀 ಭೂಪ ಕೇಳೆಂದ ರೈಸಿದ್ದು !

  2. ಕಣ್ಣೀರು ಬಾರದ್ದಹಾಂಗಿಪ್ಪ ನೀರುಳ್ಳಿ ಕಂಡು ಹಿಡಿತ್ತವೋ ಗೊಂತಿಲ್ಲೆ, ಆದರೆ ಕಣ್ಣೀರು ಬರದ್ದ ಹಾಂಗೆ ಹೇಂಗೆ ಸುದರುಸುವದು ಹೇಳಿ ತಿಳ್ಕೊಂಡಾತು. ಇದು ನವಗೆ “ಭೂಪ ಕೇಳೆಂದ” ಹೇಳಿ ಆಗದ್ದರೆ, ಕೆಣಿ ಹೇಳಿ ಕೊಟ್ಟದು ಸಾರ್ಥಕ ಆತು.
    ಎರಡು ಘಟನೆಗಳ ಜೋಡಿಸಿದ್ದದು, ನವಿರಾದ ಹಾಸ್ಯ….ತುಂಬಾ ಕೊಶಿ ಕೊಟ್ಟತ್ತು.
    ಪಾರು ಹೀಂಗೆ ಎಂತಾರೂ ಕೇಳ್ತಾ ಇರಳಿ, ಲೇಖನ ಬತಾ ಇರಳಿ

  3. ಭೂಪ ಕೇಳೆಂದ… ಇನ್ನೂ ಬರಲಿ

  4. ಹಳೇ ಕತೆಗಳ ನೆಂಪು ಮಾಡ್ಳೆ ಕೊಶೀ ಆವ್ತು ಭಾವಯ್ಯ. ಅದರ ಈಗಾಣ ಮಕ್ಕೊಗೆ ವಿವರುಸಲೆ ಹೆರಟರೆ, ನಿಂಗಳದ್ದು ಇದೇ ಆತು ಹೇಳುಗು. ಭಾವಯ್ಯನ ಶುದ್ದಿ ಲಾಯಕಾತು. ನೀರುಳ್ಳಿ ಕೊರೆತ್ತ ಕೆಟ್ಟುಂಕೆಣಿಯ ಕನ್ನಡಲ್ಲಿ ವಿವರುಸಿದ್ದದು ಫಶ್ಟಾಯಿದು.

  5. ಇ೦ದು ಉದಿಯಪ್ಪಗ ಕೌರವನ ಸ್ವಗತದ ಬೈಟೂ ಕಾಫಿಲಿ,ಭೀಮನ ಟ್ಯಾಗ್ ಹಾಕಿದ್ದರ ಕ೦ಡು ಓದಿಯಪ್ಪಗ , ಮತ್ತೊ೦ದರಿ ಭೂಪ ಕೇಳೆ೦ದ …………. ಹೇಳಿದ ಹಾ೦ಗೆ ಆತು.

  6. ಕುಮಾರ ಭಾವನ ” ಭೂಪ ಕೇಳೆಂದ ” ತುಂಬಾ ಖುಶಿ ಕೊಟ್ಟತ್ತು. ಲಾಯ್ಕಿತ್ತು. ಅಭಿನಂದನೆಗೊ.

  7. ನೀರುಳ್ಳಿ ಕಥೆಯ ಭೂಪ ಕೇಳೆಂದದೊಟ್ಟಿಂಗೆ ಸಂಧಿ ಮಾಡಿದ್ದದು ಲಾಯಕಾಯಿದು ತೆಕ್ಕುಂಜ ಮಾವ.

  8. ದಕ್ಕಿತ್ತೋ… ದಕ್ಕಿತ್ತು…. ಆಹೋಹೊ… ಶಾಭ… ಬಾಲ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×