ಬರದೋರು :   ತೆಕ್ಕುಂಜ ಕುಮಾರ ಮಾವ°    on   02/04/2014    4 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

“ಈ ಸರ್ತಿ ಮಳೆಯೂ ಲಾಯಕ ಬಯಿಂದು, ಚಳಿಯೂ ಇತ್ತು. ಹಾಂಗಾಗಿ  ಅಲಫಲಂಗೊಕ್ಕೆ ಒಳ್ಳೆದು. ಊರಿಲಿ ಎಲ್ಲ ಮಾವಿನ ಮರಂಗಳಲ್ಲಿ ಹೂಗು ಹೋದಿಕ್ಕು ಅಲ್ಲದೋ..?” ಸೋಫಲ್ಲಿ ಠೀವಿಲಿ ಕೂದೊಂಡು ಟೀವಿಲಿ ಬಪ್ಪ ಮಲಯಾಳಂ ಸಿನೆಮಾ ನೋಡಿಗೊಂಡಿತ್ತಿದ್ದ ಪಾರು ಕೇಳಿತ್ತು. ಯೇವ ಸಿನೆಮ ಬತ್ತ ಇಪ್ಪದು ಹೇಳಿ ಎನಗರಡಿಯ.ಪಾರು ನೋಡಿಗೊಂಡಿಪ್ಪದಕ್ಕೂ ಮಾತಾಡ್ತದಕ್ಕೂ ಯೇವಾಗಳೂ ಸಂಬಂಧ ಇಕ್ಕು ಹೇಳಿ ಹುಡ್ಕುಲೆ ಹೋಪಲಾಗ.
“ಹೋಗಿಕ್ಕು.ಮನೆಲಿ ಬೀಜದ ಮರಲ್ಲಿ ಹೂಗು ಹೋಯಿದಡ.” ಅಲ್ಲಿ ಒಂದು ನೀಲಮ್ಮಿನ ಗೆಡು,ಎರಡು ನೆಕ್ಕರೆ ಮರ ಮತ್ತೊಂದು ಪಾಂಡಿ ಮಾವಿನ ಮರ ಇಪ್ಪದು. ಅದರಲ್ಲಿ ಹೂಗು ಹೋಯಿದೋ ಇಲ್ಲೆಯೋ ತಿಳ್ಕೊಂಬ ಯೇವುರ ನವಗಾರಿಂಗೂ ಇರ್ತಿಲೆ. ಹಾಂಗಾಗಿ ಆ ವಿಷಯ ಎನಗೆ ಗೊಂತೂ ಇಲ್ಲೆ.
“ಎರಡು ವರ್ಷ ಆತು, ಮೆಡಿ ಉಪ್ಪಿನಕಾಯಿ ನವಗೆ ಸಿಕ್ಕದ್ದೆ.ಮನೆಲೂ ಹಾಕಿದ್ದವಿಲ್ಲೆ,ಕಲ್ಲಾರಿಮೂಲೆಲಿಯೂ ಕೊಟ್ಟಿದವಿಲ್ಲೆ.” ಹಾಂಗೆ ಪಾರುವ ಅಸಮಧಾನ.
“ಹ್ಹಾ.ಉಪ್ಪಿನಕಾಯಿಯೋ.! ಕೊಡ್ಲೆ ಬೇಕಪ್ಪಷ್ಟು ಮಾಡಿದರಲ್ಲದೋ.?” ಅದಕ್ಕೆ ಎನ್ನ ಸಮಾಧಾನ.
“”ಅದಪ್ಪು…” ಹೇಳಿ ದೊಡ್ಡಕೆ ಒಂದು ಉಸುಲು ಬಿಟ್ಟತ್ತು ಪಾರು,ಮತ್ತೆ ಶುರು ಮಾಡಿತ್ತು.
”ಉಪ್ಪಿನಕಾಯಿಗೆ ಮೆಡಿ ಸಿಕ್ಕಿದರಲ್ಲದೋ.? ಮೆಡಿ ಆಯೆಕ್ಕಾರೆ ಹೂಗು ಹೋಗೆಡದೊ.? ಹೂಗು ಹೋಪಲೆ, ಮರ ಇದ್ದು ಬೇಕನ್ನೆ? ಮಾಣಿ ಸಂಪಾಜೆ ಮಾರ್ಗವ ಹೆದ್ದಾರಿ ಮಾಡ್ಲೆ ಹೆರಟು ಮಾರ್ಗದ ಕರೆಲಿತ್ತಿದ್ದ ಎಲ್ಲ ಮರಂಗಳ ಕಡುದು ಹೊತ್ತುಗೊಂಡು ಹೋಯಿದವನ್ನೆ.ಒಂದಲ್ಪ ಮೆಡಿ ಸಿಕ್ಕಿಗೊಂಡಿದ್ದತ್ತು, ಮದಲು.ಈಗ ಅದೂ ಇಲ್ಲೆ. ಪಾಂಡಿಯೊ, ನೆಕ್ಕರೆಯೊ ಬೆಳದ ಮತ್ತೆ ಹಸಿಕೆತ್ತೆ,ಒಗ್ಗರ್ಸಿದ್ದೋ ಹೇಳ್ಯೊಂಡು ಹಾಕೆಕ್ಕಷ್ಟೆ, ಅದು ಮಳೆಗಾಲ ಮುಗಿವನ್ನಾರಕ್ಕೆ ಮಾಂತ್ರ ಆತಷ್ಟೆ, ಅಲ್ಲ, ಆನು ಒಂದು ವಿಷಯ ಮಾತಾಡೊದು ಬಾಯಿ ವಾಸನೆ ಹೋಪಲೆ, ಅಷ್ಟೆ.”
ಈ ಸಮೆಯಲ್ಲಿ ಉಪ್ಪಿನಕಾಯಿ ಹೆಸರು ಹೇಳಿರೆ ಅದು ಮೆಡಿ ಉಪ್ಪಿನಕಾಯಿ ಹೇಳಿಯೇ ಲೆಕ್ಕ. ಎಲ್ಲೇ ಹೋಗಲಿ,ಆರನ್ನೇ ಕಾಣಲಿ ಮಾತಿಂಗೆ ಅದೊಂದು ವಿಷಯವೇ.! ಅಡಕ್ಕೆಗೆ ರೇಟು ಹೇಂಗಡ ? ಪ್ರಶ್ನೆಯೊಟ್ಟಿಂಗೆ ಉಪ್ಪಿನಕಾಯಿ ಹಾಕಿ ಆತೋ,ಮೆಡಿ ಎಲ್ಲಿಂದ, ಸಾವಿರಕ್ಕೆಷ್ಟಡ ? ಹೇಳಿ ಕೇಳೋರೆ. ಪಾರುವಿಂಗೂ ಅದೇ ಯೇಚನೆ. ಈ ವರ್ಷ ಹೇಂಗಾರಾಗಲಿ,ಒಂದು ಕುಪ್ಪಿ ಮೆಡಿ ಉಪ್ಪಿನಕಾಯಿ ಸಂಪಾಲ್ಸೆಕ್ಕು ಹೇಳಿ ಅಸಬಡಿವದು.ಹಾಂಗೆ ಫೋನಿಲಿ ಅಕ್ಕನತ್ತರೆ ಮಾತಾಡಿ  ವಿಚಾರ್ಸಿಗೊಂಡಿತ್ತು. “ಮೆಡಿ ಸಿಕ್ಕಿದ್ದೊ,ಮಾರ್ಗದ ಕರೆಯಾಣ ಅಂಗಡಿ ಕುಞಂಬುವತ್ತರೆ ಹೇಳಿ ಮಡಗಿ ಆಯಿದೊ ಹೇಂಗೆ.?”  ಅಣ್ಣ ಈ ಸರ್ತಿ ಮೆಡಿ ಕೊಯ್ವಲೆ ಹೋಯಿದನೋ ಹೇಳಿ ಕಲ್ಲಾರಿಮೂಲೆಲಿಯೂ ವಿಚಾರ್ಸಿದ್ದತ್ತು.
ಪೇಟೆಲಿ ಅಂಗಡಿಗಳಲ್ಲಿ, ಮಾಲುಗಳಲ್ಲಿ ನಮುನೆ ನಮುನೆದು ಕುಪ್ಪಿಲಿ ತುಂಬುಸಿದ ಉಪ್ಪಿನಕಾಯಿ ಸಿಕ್ಕುತ್ತು.ಮೆಡಿದೋ,ಕೆತ್ತೆದೋ, ನಿಂಬೆ ಹುಳಿದೊ ಆಗಿಕ್ಕು,ಬೆಳ್ಳುಳ್ಳಿ ಹಾಕಿದ್ದು,ಹಾಕದ್ದು ಹೀಂಗೆ ಬೇಕಾದ ನಮುನೆಲಿ ಸಿಕ್ಕುತ್ತು. ಒಂದಷ್ಟು ಮೆಣಸಿನ ಕಡದು ಉಪ್ಪು ಬೆರುಶಿ ಹಾಕುತ್ತವು,ಮತ್ತೊಂದಷ್ಟು ಎಣ್ಣೆಯ ಸೇರ್ಸಿರೆ ಆತು ಉಪ್ಪಿನಕಾಯಿ. ಬೆರಳ ಕೊಡಿ ಮುಟ್ಟುಸಿ ನಕ್ಕಲೆ ಮಾಂತ್ರ ಅಕ್ಕಷ್ಟೆ ಹೇಳೊದು ಪಾರುವ ತೀರ್ಮಾನ. ತಣ್ಣನೆ ಹೆಜ್ಜೆ ತೆಳಿಯ ಮೊಸರಿನೊಟ್ಟಿಂಗೆ ಉಣ್ಣೆಕ್ಕಾರೆ ಮನೆಂದ ತಂದ ಮೆಡಿಯೇ ಆಯೆಕ್ಕು ಹೇಳಿಗೊಂಡು ನಾಲಗೆ ಚಪ್ಪರ್ಸುಗು. “ಅದರ ಸುಖ ಉಂಡವಂಗೇ ಗೊಂತು.!”ಹೇಳುಗು. ಕೆಲವು ದಿನ ಉದಿಯಪ್ಪಗ ಎನಗೂ ಮಕ್ಕೊಗೂ ಬೇಕಾದ ತಿಂಡಿ ಮಾಡಿ ಕೊಟ್ಟು ಪಾರು ಹೆಜ್ಜೆಯನ್ನೇ ಉಂಗು.ತಣ್ಣನೆ ಹೆಜ್ಜೆ ಉಂಬಲೆ ಬೇಕಾಗಿ ಮುನ್ನಾಣ ಇರುಳಿಂಗೆ ಇಬ್ರಿಂಗೆ ಅಪ್ಪಷ್ಟು ಹೆಜ್ಜೆ ಮಡಗ್ಗು,ತಾನು ಉಂಡು ಮರದಿನಕ್ಕೆ ಒಳಿವಾಂಗೆ. ಹೆಜ್ಜೆಗೆ ಗಟ್ಟಿ ಮೊಸರು ಸೇರ್ಸಿ ಸಶಬ್ಧವಾಗಿ ಬಾಯಿಗೆ ಹಾಕಿ ಮೆಡಿಯ ಕರಕರನೆ ಅಗುದು ಉಂಡು ಕೂದರೆ ಮತ್ತೆ ಸ್ವರ್ಗಕ್ಕೆ ಕಿಚ್ಚು ಕೊಡೋದೆ ಸೈ.!
ಕಳುದ ವೊರಿಷ ಲಾಗಾಯ್ತು ಇಂಥಾ ಸುಖ ಅನುಭವಿಸಲೆ ಸಿಕ್ಕದ್ದದೇ ಪಾರುವ ಅಸಬಡಿಯಾಣಕ್ಕೆ ಕಾರಣ.
ಹಾಂಗೇಳಿ ಉಪ್ಪಿನಕಾಯಿ ಇಲ್ಲಲೇ ಇಲ್ಲೆ ಹೇಳಿ ಆಯಿದಿಲೆ.ಬೆಂಗ್ಳೂರಿಲಿ ಮಾವಿನಕಾಯಿ ಮಳೆಗಾಲದವರೆಗೂ ಸಿಕ್ಕುತ್ತು.ತೋತಾಪುರಿ ಆದರೆ ಎಂತಾತು ಕೊರದು ಕೆತ್ತೆ ಮಾಡಿ ಹಾಕಿರೆ ರಜ್ಜ ಸಮಯಕ್ಕೆ ಮೆಡಿಗೆ ಪರ್ಯಾಯ ಆವುತ್ತನ್ನೆ ಹೇಳಿ ಆನು ಹೇಳಿದ್ದಕ್ಕೆ ಮೆಣಸು,ಸಾಸಮೆ,ಅರಶಿನದ ಪ್ರಮಾಣ ಎಷ್ಟೆಷ್ಟು ಹೇಳಿ ಕೇಳಿ ತಿಳ್ಕೊಂಡು ಕೆತ್ತೆ ಉಪ್ಪಿನಕಾಯಿ ಹಾಕಿದ್ದತ್ತು..ಅದು ಮುಗುದಪ್ಪದ್ದೆ ನಿಂಬೆ ಹುಳಿ ಆತು.ಓ ಮನ್ನೆ ವೀಣಕ್ಕ ಕೊಟ್ಟ ರಾಜನೆಲ್ಲಿಯನ್ನೂ ಹಾಕಿ ಆಯಿದು. ಈಗಳೂ  ನಮ್ಮಲ್ಲಿ ಊಟಕ್ಕೆ ಚೇರ್ಚೆಗೆ ಅದುವೇ. ಎಡೆಲಿ ಉದ್ದಿನ ಸೆಂಡಗೆ,ಬಾಳಕ ಮೆಣಸು ಮಾಡಿಯೂ ಆತು.ಅಂತೂ ಮೆಡಿ ಉಪ್ಪಿನಕಾಯಿ ಇಲ್ಲದ್ದ ಹೆಳೆಲಿ ಪಾರು ಇದೆಲ್ಲ ಮಾಡ್ತದರ ಕಲ್ತದೊಂದು ಲಾಭ,”ಅವಗುಣಲ್ಲಿ ಗುಣ” ಆದ ಹಾಂಗೆ.
ಅಂದರೂ ಮೆಡಿ ಉಂಡ ಹಾಂಗಾವುತ್ತೋ.?
ಓ ಮನ್ನೆ ಇತ್ಲಾಗಿ ದೊಡ್ಡ ಮಗ ರಜೆಲಿ ಮನೆಗೆ ಬಂದಿತ್ತಿದ್ದ ಸಮೆಯಲ್ಲಿ ಊಟಕ್ಕೆ ‘ಕಾಮತ’ನಲ್ಲಿಗೆ ಹೋಗಿತ್ತಿದ್ದೆಯೊ.ಅಲ್ಲಿಗೆ ಹೋಪದು ಇದು ಶುರುವೇನಲ್ಲ.ಆನು ಮಕ್ಕೊ ಅಲ್ಲಿ ಪರೊಟ, ನಾನು ತೆಕ್ಕೊಂಡು ನಾರ್ಥ್ ಐಟಮ್ಮಿನೊಟ್ಟಿಂಗೆ ಉಂಬದು.ಪಾರುಗೆ ಸೌತ್ ಊಟವೇ ಆಯೆಕ್ಕು.ಬಾಳೆಲೆ ಹಾಕಿ ಬೇಕಪ್ಪದರ ಕೇಳಿದಷ್ಟು ಬಳುಶುತ್ತವು ಅಲ್ಲಿ.’ಊಟವನ್ನೇ ಉಂಬದಾದರೆ ಇಲ್ಲಿವರೆಗೆ ಬರೆಕ್ಕೋ,ಮನೆಲಿಯೇ ಉಂಬಲಕ್ಕನ್ನೆ’ ಹೇಳಿ ಒಂದರಿ ದೊಡ್ಡ ಮಗ ಹೇಳಿದ್ದಕ್ಕೆ “ನಿಂಗೊಗೆಲ್ಲ ಕೂದಲ್ಲಿಗೆ ಬಟ್ಲು ಮಡಗಿ,ಮಾಡಿದ್ದರ ಬಳುಶಿ,ಬೇಕಪ್ಪದರ ಕೊಟ್ಟು ಉಣ್ಸೆಕ್ಕು.ಆನುದೇ ಹಾಂಗೆ ಕೂದೊಂಡು ಉಣ್ತೆ,ನಿನಗೆ ಬೇಕಪ್ಪದರ ತಳಿಯದ್ದೆ ತಿನ್ನು”ಹೇಳಿ ದಟ್ಟುಸಿದ್ದತ್ತು. ಬೇಕಪ್ಪದರ ಮತ್ತೆ ಮತ್ತೆ ವಿಚಾರ್ಸಿ ಹಾಕ್ಯೊಳ್ತು.ಅದು ಬಿಡಿ,ಉಪ್ಪಿನಕಾಯಿಯ ಕರಡಿಗೆಲಿ ತುಂಬುಶಿ ಮೇಜಿಲಿ ಮಡಗಿರುದೆ ವೇಟರನ ದೆನುಗೇಳಿ ಅದನ್ನೂ ಬಳಶುಲೆ ಹೇಳ್ತು. ವೇಟರ ಇಲ್ಲಿದ್ದು ಹೇಳಿ ಕರಡಿಗೆಯ ಮುಚ್ಚೆಳು ತೆಗದು ಕೊಟ್ಟರೂ ಬೆರಳಿನ ಎಲೆ ಕೊಡಿಲಿ ಮಡಗಿ ತೋರ್ಸಿ ಬಳಸುಲೆ ಹೇಳ್ತು. ಅಕೇರಿಗೆ ಬಿಲ್ಲು ಕೊಟ್ಟು ಟಿಪ್ಸ್ ಮಡಗಿರೆ ಅದರ ವಾಪಾಸು ತೆಕ್ಕೊಳ್ತು,”ಇದು ಸರಿಯಲ್ಲ” ಹೇಳೊದು ಪಾರುವ ಅಭಿಪ್ರಾಯ.
ಈ ಸರ್ತಿಯೂ ಹಾಂಗೇ ಆತು.ಎಂಗೊಗೆ ಬೇಕಾದ್ದರ ತರ್ಸಿಗೊಂಡೆಯೊ,ಪಾರುಗೆ ಯಥಾಪ್ರಕಾರ ಫುಲ್ ಮೀಲು. ಮೊಸರು ಅಶನ ಉಂಬಲಪ್ಪಗ
“ಉಪ್ಪಿನಕಾಯಿ.?” ಕೇಳಿತ್ತು.
ಕರಡಿಗೆಯ ಮುಚ್ಚೆಳು ತೆಗದು ಇಲ್ಲಿದ್ದು ಹೇಳಿ ತೋರ್ಸಿತ್ತು ವೇಟರ.ಲಿಂಬೆಹುಳಿ,ಕೇರಟ್ಟು ತುಂಡುಗಳೆಡೆಲಿ ಪಾರು ಮಾವಿನಕಾಯಿ ತುಂಡಿನ ಹುಡ್ಕೊದು ಎನಗೆ ಗೊಂತಾತು. ವೇಟರನ ದೆನುಗೇಳಿ ವಿಚಾರ್ಸಿತ್ತುದೆ. ಅದು ಒಳ ಹೋಗಿ ರಜ್ಜ ಹೊತ್ತಿಲಿ ಒಂದು ಸಣ್ಣ ತಟ್ಟೆಲಿ ಎರಡು ಮಾವಿನಕಾಯಿ ತುಂಡು ತಂದು ಮಡಗಿತ್ತು, ತೆಲುಗರ ಕ್ರಮಲ್ಲಿ ಹಾಕಿದ ಉಪ್ಪಿನಕಾಯಿ ಅದು. ಪಾರು ಒಳುದ ಅಶನಕ್ಕೆ ಮೊಸರು ಬೆರುಶಿ ಮಾವಿನತುಂಡಿನೊಟ್ಟಿಂಗೆ ಅಗುದಗುದು ಉಂಡು ತೇಗಿತ್ತು.
ಬಿಲ್ಲು ಚುಕ್ತ ಮಾಡಿ ಹೆರಡ್ಲಪ್ಪಗ ಪಾರು ಎನ್ನತ್ರೆ ಹೇಳಿತ್ತು
“ಟಿಪ್ಸ್ ಮಡಗುಲಿಲ್ಲೆಯೋ ?”
ಅದನ್ನೂ ಮಡಗಿದೆ ಆನು. ಮರುಭೂಮಿಲಿ ನೀರು ತೋರ್ಸಿದವನ ಹಾಂಗೆ ಪಾರುಗೆ ಆ ವೇಟರ  ಕಂಡದರಲ್ಲಿ ವಿಶೇಷ ಎಂತೂ ಇಲ್ಲೆ.
ಇದರೆಡಕ್ಕಿಲಿ ಮನ್ನೆ ಮನೆಯೋರತ್ರೆ ಮಾತಾಡಿದ್ದರಲ್ಲಿ ಒಂದು ಶುದ್ಧಿ ಸಿಕ್ಕಿತ್ತು. ಆಚಮನೆ ಉಮತ್ತಿಗೆ ಹೇಳಿತ್ತಿದ್ದಡ.- ಸುಬ್ಬಣ್ಣ,ಅವನ ಭಾವಂದ್ರೆಲ್ಲ ಸೇರಿ ಮೆಡಿ ಕೊಯ್ವಲೆ ಹೋದೋರಿಂಗೆ ಲಾಯ್ಕದ ಮೆಡಿ ಸಿಕ್ಕಿದ್ದಡ.”ಛೇ. ಆನು ಇದ್ದಿದ್ದರೆ ಅವರೊಟ್ಟಿಂಗೆ ಸೇರ್ತಿತ್ತೆ.ಕೊಕ್ಕೆ ಎಳವಲೆ ಎಡಿಯದ್ದರೂ ಇಳುಶಿದ್ದರ ಹೆರ್ಕುಲಾದರೂ ಎಡಿಗನ್ನೆ .ರಜ್ಜ ಮೆಡಿ ಎನಗೂ ಸಿಕ್ಕುತಿತ್ತು” ಹೇಳಿ ಕಡಮ್ಮೆಲಿ ಹತ್ತು ಸರ್ತಿಯಾದರೂ ಹೇಳಿಗೊಂಡಿತ್ತು. ಸತ್ಯನಾರಾಯಣ ಪೂಜೆಗೆ ಹೋಪಲೆ ಹೇಳಿಕೆ ಅಗತ್ಯ ಇಲ್ಲೆ, ಹಾಂಗೆ ಇದುದೆ ಹೇಳಿ ಪಾರುವ ಲೆಕ್ಕಾಚಾರ.
“ಹೊಳೆ ಆಚಿಕಾಣ ಬಂಟನಲ್ಲಿ ಮೆಡಿ ಇದ್ದಡ.ಅದು ಕೊಯ್ಸಿ ತಂದು ಕೊಟ್ಟಿದಡ.ಹಾಂಗೆ ಮನ್ನೆ ಅಣ್ಣ ಮನೆಗೆ ಬೇಕಪ್ಪಷ್ಟು ಮೆಡಿ ತೆಕ್ಕೊಂಡಿದನಡ”ಎನಗೆ ಗೊಂತಾದ ಶುದ್ದಿಯ ಆನು ಹೇಳಿದೆ.
“ಈಗ ಉಪ್ಪಿಲಿ ಹಾಕಿ ಆಗಿಕ್ಕನ್ನೆ.ದೊಡ್ಡ ದೊಡ್ಡದರ ಹೆರ್ಕಿ ಕೊರದು ಕೆತ್ತೆ ಹಾಕಿಯೂ ಆಗಿಕ್ಕು” ಹೇಳಿತ್ತು ಪಾರು.ಅಂದೇ ಹೊತ್ತೋಪಗ ಮನೆಗೆ ಫೋನು ಮಾಡಿ ಅಕ್ಕನತ್ರೆ ಕೇಳಿತ್ತು.
“ರಾಜನೆಲ್ಲಿ ಉಪ್ಪಿನಕಾಯಿ ಹಾಕಿದ್ದೆ. ಇವು ನಾಡ್ತಿಂಗೆ ಬತ್ತವು. ಒಂದು ಕುಪ್ಪಿ ಕಳುಶೆಕ್ಕೋ.?” ಯಬ್ಬಾ ಇದರ ಹಿಕ್ಮತ್ತೇ ಹೇಳಿ ಕಂಡತ್ತೆನಗೆ.
ಮನೆಲಿ ಮಕ್ಕೊಗೆ ಅದು ಇಷ್ಟ ಆವುತ್ತಡ – ಹಾಂಗೆ ಎನ್ನತ್ರೆ ಒಪ್ಪುಸಿತ್ತು. “ಬಪ್ಪಗ ಒಂದು ಕುಪ್ಪಿ ಕೆತ್ತೆ ಉಪ್ಪಿನಕಾಯಿ ಹಿಡ್ಕೊಂಬಲೆ ಮರದಿಕ್ಕೆಡಿ ಆತೋ” ಹೇಳಿ ಒಂದು ನೆಂಪೂ ಹೇಳಿತ್ತು.
ಆನು ಊರಿಂದ ಇರುಳು ವಾಪಾಸು ಹೆರಟವನತ್ರೆ ಫೋನು ಮಾಡಿ ವಿಚಾರ್ಸಿತ್ತುದೆ.ಉದಿ ಉದೆಗಾಲ ಮನೆಗೆತ್ತುವಗ ಪಾರು ಎದ್ದಿದ್ದತ್ತು.ಆನು ಆಫೀಸಿಂಗೆ ಹೆರಡ್ತ ತಯಾರಿಗೆ ಶುರು ಮಾಡಿದೆ.ಮಗಂಗೆ ತಿಂಡಿ ಹಾಲು ಕೊಟ್ಟು ಅವನ ಶಾಲೆಗೆ ಕಳುಗಿ ಎನಗೆ ಕಾಫಿ ಕುಡಿವಲಪ್ಪಗ ಇದು ಹೆಜ್ಜೆ ಮಡಗಿ ಇಳುಶಿಯೂ ಆಗಿದ್ದತ್ತು.ಅಕೇರಿಗೆ ಎರಡು ತುಂಡು ಕೆತ್ತೆಯ ರುಚಿ ನೋಡಿಕ್ಕಿಯೇ ಕೂದ್ದದು.ಉಂಡ ಬಟ್ಲು ತೆಕ್ಕೊಂಡು ಒಳ ನಡವಗ ಪಾರು ಗಾಳಿಲಿ ತೇಲಿಗೊಂಡು ಹೋವುತ್ತ ನಮುನೆ ಕಂಡತ್ತು. ಸಣ್ಣ ಸ್ವರಲ್ಲಿ “ಮಾಮರವೆಲ್ಲೋ..” ಹಾಡಿಂಗೆ ರಾಗ ಹಾಕಿಗೊಂಡಿತ್ತು.
“ನಾವು ಈ ಸರ್ತಿ ರಜೆಲಿ ಊರಿಂಗೆ ಹೋಗಿಪ್ಪಗ ನಮ್ಮ ಜಾಗೆಲಿ ಒಂದು ಮಾವಿನ ಸೆಸಿ ನೆಡೆಕ್ಕು,ಎಂತ ಹೇಳ್ತಿ..?” ಪಾರು ಸಮದಾನಲ್ಲಿ ಕೂದೊಂಡು ಎನ್ನತ್ರೆ ಪಂಚಾತಿಗೆ ಶುರು ಮಾಡಿತ್ತು.
“ನಮ್ಮ ಜಾಗೆಲಿ ಎರಡು ಸೆಸಿ ನೆಟ್ಟು ಆಯಿದನ್ನೆ.ನೆಕ್ಕರೆದು ದೊಡ್ಡ ಆಯಿದು.ಇನ್ನು ಬೇಕಾರೆ ಒಂದು ಚಿಕ್ಕಿನ ಸೆಸಿ ನೆಡುವೋ” ಹೇಳಿದೆ ಆನು.
“ಚಿಕ್ಕಿನ ಎಂತ ಉಪ್ಪಿನಕಾಯಿ ಹಾಕಲೆ ಆವುತ್ತೋ.? ನವಗೆ ನಮ್ಮ ಜಾಗೆಲಿಯೇ ಮೆಡಿ ಸಿಕ್ಕುವಾಂಗೆ ಆಯೆಕ್ಕು.ಹಾಂಗೆ ಹೇಳಿದ್ದು ಆನು.”ಪಾರು ಕುಶಾಲಿಂಗೆ ಹೇಳಿದ್ದಾಗಿರ.
“ಹುಂ…! ಮೆಡಿಗಿಪ್ಪ  ಕಾಟು ಮಾವಿನ ಸೆಸಿ ಯೇವ ಫಾರ್ಮಿಲಿ ಸಿಕ್ಕುಗಪ್ಪ. ಅಲ್ಲದ್ದರೆ,ಊರಿಲಿ ನವಗೆ ಒಂದು ಸರ್ತಿಯಾದರೂ ಮಾವಿನ ಗೊಜ್ಜು ಉಂಬಲೆ ಸಿಕ್ಕದ್ದೆ ಇರ.ಗೊಜ್ಜು ಉಂಡಿಕ್ಕಿ ಗೊರಟಿನ ತೊಟ್ಟೆಲಿ ಹಾಕಿ ಸೆಸಿ ಮಾಡಿ ಅದನ್ನೇ ನೆಡುವೋ.” ಆನು ಘಾತಿಂಗೇ ಹೇಳಿದೆ.
“ಅಲ್ಲ,ಕಳುದ ವರ್ಷ ಯೇವಗಳೊ ನಿಂಗ ಹೇಳಿತ್ತಿದ್ದಿ, ಕೊಂಚಾಡಿ ಭಾವ ಸಿರ್ಸಿಂದಲೋ,ಸಾಗರಂದಲೋ ಅಪ್ಪೆ ಮೆಡಿ ಸೆಸಿ ತಂದು ಅವರ ಹೊಸ ಜಾಗೆಲಿ ನೆಟ್ಟಿದವಡ.ನಾವುದೆ ತರ್ಸಿರೆ ಎಂತಕ್ಕು.?” ಹೀಂಗಿಪ್ಪದೆಲ್ಲ ಒಳ್ಳೆತ ನೆಂಪಿಲಿರ್ತು ಪಾರುಗೆ.ಒಂದೆರಡು ಸೆಸಿಯ ಅಷ್ಟು ದೂರಂದ ತರ್ಸುಲೆ ಅಸಲು ಎಷ್ಟಕ್ಕು ಹೇಳಿ ಆಲೋಚನೆ ಶುರುವಾತೆನಗೆ. ಮಾತಿನ ಬದಲ್ಸಿದೆ.
“ಅದಿರಳಿ,ಈಗ ಸೆಸಿ ನೆಟ್ಟು,ಅದು ದೊಡ್ಡ ಆಗಿ ಹೂಗು ಹೋಗಿ ಮೆಡಿ ಅಪ್ಪಲೆ ಸಮಯ ಎಷ್ಟಕ್ಕು.ನವಗೆ ಸಿಕ್ಕುಲಿದ್ದೋ.?” ಇದಕ್ಕೆ ಪಾರುವ ಉತ್ತರ ಹೇಂಗಿಕ್ಕು ಹೇಳ್ತ ಕಲ್ಪನೆ ಎನಗಿತ್ತು.
“ನಮ್ಮ ಹೇರಿಯೋರು ನೆಟ್ಟು ಬೆಳೆಶಿದ್ದರ ನಾವು ತಿಂಬದು,ನಮ್ಮ ನಂತ್ರದೋರಿಂಗೂ ತಿಂಬಲೆ ಆಯೆಕ್ಕಾರೆ ನಾವು ನೆಟ್ಟು ಬೆಳೆಶೆಕ್ಕು,ಹಾಂಗೆ ಎನ್ನ ಕಿಟ್ಟಜ್ಜ ಯೇವಗಳೂ ಹೇಳುಗು.ನಾವು ಒಂದಾದರೂ ಮಾವಿನ ಸೆಸಿ ನೆಟ್ಟು ಬೆಳೆಶೆಕ್ಕು.” ಹೇಳಿಕ್ಕಿ ಪಾರು ಅದರ ಕೆಲಸಲ್ಲಿ ತೊಡಗಿತ್ತು.ಆನು ಆಫೀಸಿಂಗೆ ಹೆರಟೆ.

***<>***

 

4 thoughts on “ವಂದೇ ಮಾಮರಂ

  1. ;ಲೇಖನ ತುಂಬಾ ಲಾಯಕ ಇದ್ದು

  2. ವಂದೇ ಮಾಮರಂ. ಕುಮಾರ ಭಾವಯ್ಯನ ಶುದ್ದಿ ಲಾಯಕಾಯಿದು. ಈಗ ಒಂದೇ ಮಾಮರಂ, ಮುಂದೆ ಒಂದುದೆ ಇಲ್ಲೆ ಮಾಮರಂ ಹೇಳಿ ಅಕ್ಕಾನೆ ಹೇಳಿ ಬೇಜಾರು.

  3. ಉಂಡವಂಗೇ ಗೊಂತು ಮೆಡಿ ಉಪ್ಪಿನಕಾಯಿಯ ರುಚಿ.ಅದರ್ಲಿಯೂ ಅಪ್ಪೆ ಮೆಡಿ ಆದರೆ ಕೇಳುವದೇ ಬೇಡ.ರುಚಿಯಾಯಿದು ತೆಕ್ಕುಂಜ ಮಾವ.

  4. ಎಂತಾರು ಅಕ್ಕು ಭಾವ ಸೊನೆ ಮೆಡಿ ಆಯೇಕ್ಕಾತೋ. ಆದಿತ್ಯವಾರ ಆದರೆ ಸಾಕು ಮೆಡಿ ಹುಡ್ಕ್ಯೊಂಡು ಹೋಗಿ ಕೊಯ್ತವು ಇದ್ದವು ಅವರನ್ನೇ ಕೇಳ್ವೋ°
    ಅಪ್ಪಪ್ಪು ನಮ್ಮ ಹೆರಿಯೋರು ನೆಟ್ಟು ಬೆಳಶಿದ್ದರ….. ಹಾಂಗೇ ನಾವೂ ಮಾಡೆಕು. ಅಕೇರಿಗೆ ಆರಿಂಗಾರು ಉಪಯೋಗಕ್ಕೆ ಬಾರದ್ದೆ ಹೋಗ ಮಾಮರ ಬೆಳಶಿರೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×