Oppanna.com

ಚೈನು- ಭಾಗ ಹತ್ತು

ಬರದೋರು :   ಶ್ಯಾಮಣ್ಣ    on   29/10/2013    9 ಒಪ್ಪಂಗೊ

ಶ್ಯಾಮಣ್ಣ

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣವರೇಗೆ…..
ಈ ಕೊಲೆ ತೋಡಿನ ಒಳಂಗೆ ಹಾರಿದ್ದಲ್ಲದಾ? ಒಳಂಗೆ ಇಣ್ಕಿ ನೋಡಿದವು….
ಮುಂದೆ ಓದಿ…..
——————————————————————————————-
ಜೋಯಿಷರು ಹಿಂದಂಗೆ ಓಡಿಕೊಂಡು ಬಂದು ತೋಡಿನ ಒಳ ನಿಲ್ಕಿ ನೋಡಿದವು. ಅಲ್ಲಿ ಕಂಡದೆಂತರ?
ನಾಯಿಯ ಹಿಡುದ ನಾಯಿಪಿಲಿಯಷ್ಟು ಎತ್ತರ ಇತ್ತಿದ್ದ ಪುಚ್ಚೆ, ಈಗ ನೋಡ್ಳೆ ಪುಚ್ಚೆಯ ಹಾಂಗೆ ಇಲ್ಲೆ. ಅದರ ರೂಪ ಬದಲಾಯಿದು. ಕೆಂಪು ಕೆಂಪು ಕಣ್ಣು….ಉರೂಟು.. ಮೀನಿನ ಕಣ್ಣು ಉರುಟು ಇರ್ತಲ್ಲದಾ…ಹಾಂಗೆ… ಸಣ್ಣ ಸಣ್ಣ ಅಲ್ಲ… ದೊಡದೊಡ್ಡಾಕೆ ಸಾದಾರಣ ಪೂರಿಯಷ್ಟು ದೊಡ್ಡ ಇಕ್ಕು. ಮೂಗಿನ ಒಟ್ಟೆಗ ಮೇಲಂಗೆ ಎಳದ ಹಾಂಗೆ. ಮೂರಿಂಚು ಉದ್ದದ ಬೆಳೀಹಲ್ಲು… ಸ್ಟೀಲಿನ ಹಾಂಗೆ ಹೋಳೆತ್ತು… ಮುಳ್ಳು ಮುಳ್ಳು ನಾಲಗೆ ಹೆರಂಗೆ ನೇತುಕೊಂಡು ಇದ್ದು. ಎರಡು ಹೊಡೇಲಿ ಉದ್ದದ ಕೆಮಿಗ, ಕತ್ತೆಯ ಕೆಮಿಯ ಹಾಂಗೆ.. ಎರಡು ಕೈಲಿಯುದೆ ನಾಲ್ಕು ನಾಲ್ಕು ಇಂಚಿನಷ್ಟು ಉದ್ದದ ಉಗುರುಗ. ಬೆನ್ನಿಲಿ ಉದ್ದಕ್ಕೂ ಕೆಂಪು ರೋಮ… ಕುತ್ತ ನಿಂದಿದು… ಕಾಲು ಎಮ್ಮೆಯ ಕಾಲಿನ ಹಾಂಗೆ… ಒಟ್ಟಾರೆ ನೋಡಿದೋನ ತೆಗಲೆ ಹೆದರಿಕೆಲಿ ಒಡೆಯಕ್ಕು… ಹಾಂಗಿಪ್ಪ ಭಯಂಕರ ರೂಪ.

ಈ ಭಯಂಕರ ರೂಪದ ಕೊಲೆ ಎಂತ ಮಾಡ್ತಾ ಇದ್ದು? ಹಿಡ್ಕೊಂಡ ನಾಯಿಯ ಒಂದು ಕಾಲಿಲಿ ನೆಲಕ್ಕೆ ಒತ್ತಿ ಹಿಡ್ದು.ಇನ್ನೊಂದು ಕಾಲಿನ ಕೈಲಿ ಹಿಡುದು, ಮೇಲಂಗೆ ಎಳದು ಸೀಳಿದ್ದು…ನಾಯಿ ತೊಡೆಂದ ಹೊಟ್ಟೆವರೇಗೆ ಸೀಳಿ ಹೋಯಿದು, ಈ ಕೊಲೆ ಅದರ ಕರುಳಿಂಗೆ ಸೀದ ಬಾಯಿ ಹಾಕಿ ಅದರ ಕೋರೆ ಹಲ್ಲುಗಳಲ್ಲಿ ಮೇಲಂಗೆ ಎಳದ್ದು… ನಾಯಿಯ ಕರುಳು ಕೊಲೆಯ ಬಾಯಿಲಿ ನೇತುಕೊಂಡು ಇದ್ದು…ಅದರ ಬಾಯಿಂದ ನೆತ್ತರು ಅರಿತ್ತಾ ಇದ್ದು… ನಾಯಿ ಇನ್ನುದೇ ಸತ್ತಿದಿಲ್ಲೆ… ಎದುರಾಣ ಎರಡು ಕೈಗಳ ಜೋರು ಆಡ್ಸಿಕೊಂದು ಸಾವಿನ ಮರ್ಕಲ್ಲಿ ಜೋರು ಅರೆಜ್ಜುತ್ತಾ ಇದ್ದು… ಜೋಯಿಷರು ಕೆಳ ನೋಡುವಗ ಕೊಲೆ ಮೇಲಂಗೆ ತಲೆ ತಿರುಗಿಸಿ ಅದರ ಕೆಂಪು ಕಣ್ಣಿಲಿ ಜೋಯಿಷರ ನೋಡಿತ್ತು….ಜೋಯಿಷರಿಂಗೆ ಒಂದು ಸಲ ಜಿಗ್ಗ ಆಗಿ, ತೆಗಲೆ ಒಂದೇಸಮ ಭಡ ಭಡ ಹೇಳಿತ್ತು…ಜೋಯಿಷರು ಇದರ ನೋಡಿದ್ದು ಒಂದು ಅರೆ ಗಳಿಗೆ ಮಾಂತ್ರ… ಕೈಲಿ ಜೆನಿವಾರದ ಬ್ರಹ್ಮಗೆಂಟು ಹಿಡುದು, ದೊಡ್ಡಕ್ಕೆ ಗಾಯತ್ರಿ ಹೇಳಿಕೊಂಡು, ಜೋಯಿಷರು ಅಲ್ಲಿಂದ ಪುಡ್ಚೋ….

——————————————————————–
ಜೋಯಿಷರು ಹೀಂಗಿಪ್ಪ ಕಥೆಗಳನ್ನೇ ಹೇಳುಗು. ಮಕ್ಕ ಬಿಡಿ ದೊಡ್ಡೋರಿಂಗೆ ಕೂಡಾ ಹೆದರಿಕೆ ಆಯೆಕ್ಕು. ಇವರ ಹೀಂಗಿಪ್ಪ ಕಥೆಗಳ ಕೇಳಿದರೆ ಮತ್ತೆ ಕಸ್ತಲಪ್ಪಗ ಉಚ್ಚೊಯ್ವಲೂ ಕೂಡ ಹೆರ ಬಪ್ಪಲೆ ಪುಕುಪುಕು ಹೇಳೆಕ್ಕು. ಮಕ್ಕ ಅಂತೂ ಗುಡಿ ಹೆಟ್ಟಿ ಮನುಗ್ಗು.
ಇಂತಿರ್ಪ ಬುರುಡೆ ಜೋಯಿಷರು ಎಂಕಣ್ಣನ ಮನೆಯ ಅಂಗಳದಲ್ಲಿ “ಎಂಕಣ್ಣಾ…” ಎಂದು ಕರೆಯುತ್ತಿರತಕ್ಕಂಥಾ ಸಂದರ್ಭದಲ್ಲಿ…
“ಓ ಜೋಯಿಷರು…!!! ಬನ್ನಿ ಬನ್ನಿ… ಎಂತ ಇಷ್ಟೊತ್ತಿಂಗೆ?” ಹೇಳಿ ಎಂಕಣ್ಣ ಬಾಗಿಲು ತೆಗದ°.
ಜಾಲಿಲಿಯೇ ಕಾಲಿಂಗೆ ಒಂದು ಚೆಂಬು ನೀರು ಹಾಕಿಕ್ಕಿ ಜೋಯಿಷರು ಒಳ ಬಂದವು. ಎಂಕಣ್ಣ ಚಾವಡಿಲಿ ಒಂದು ಹಸೆ ಹಾಕಿ “ಕೂರಿ” ಹೇಳಿದ°.
“ಅಲ್ಲ.. ಆನು ಕೂಪಲೆ ಬಂದದಲ್ಲಪ್ಪಾ… ಎಂತ…” ಹೇಳಿ ಜೋಯಿಷರು ಹಸೆಲಿ “ಉಸ್ಸಪ್ಪ” ಹೇಳಿ ಕೂದು, ಹೆಗಲಿಲಿ ಇತ್ತಿದ್ದ ಚೀಲವ ತೆಗದು ಗೋಡೆ ಕರೇಲಿ ಮಡುಗಿದವು.
“ಇದಾ… ಮಿಂದ ನೀರುದೇ, ಬೆಲ್ಲದೇ ತಾ… ಜೋಯಿಷರು ಬೈಂದವು” ಹೇಳಿ ಎಂಕಣ್ಣ ಹೆಂಡತ್ತಿಗೆ ಹೇಳಿದ°. ಹೆಂಡತ್ತಿ ಒಂದು ಚೆಂಬಿಲಿ ಹದಾ ಬೆಶಿ ನೀರುದೆ, ಒಂದು ಲೋಟೆಯುದೆ, ಒಂದು ತಟ್ಟೆಲಿ ಬೆಲ್ಲದ ತುಂಡುದೆ ತಂದು ಮಡುಗಿತ್ತು.
“ಇದು ಮಿಂದ ನೀರೋ? ಚೆ… ಚೆ… ಬೇಕೂಳಿ ಇತ್ತಿಲ್ಲೆಪ್ಪಾ… ಎಂತ…” ಹೇಳಿ ಜೋಯಿಷರು ಎರಡು ತುಂಡು ಬೆಲ್ಲ ಬಾಯಿಗೆ ಹಾಕಿ ಚೆಂಬನ್ನೇ ಎತ್ತಿ ನೀರು ಕುಡುದವು. ಕುಡಿವಗ ನೀರು ಹೆರಂಗುದೆ ಅರುದತ್ತು…ರಜಾ ರಜ.
“ನಿಂಗೊಗೆ ಕುಡಿವಲೆ ಎಂತ ಅಕ್ಕು… ಚಾಯವೋ ಕಾಪಿಯೋ?” ಎಂಕಣ್ಣ ಕೇಳಿದ°.
“ಚೆ ಚೆ ಬೇಕೂಳಿ ಇಲ್ಲೆಪ್ಪಾ… ಆನು ಕುಡಿವದು ಚಾಯ.. ಎಂತ…” ಹೇಳಿದವು ಜೋಯಿಷರು.
“ಇದಾ… ಜೋಯಿಷರಿಂಗೆ ಚಾಯ ಅಕ್ಕಡಾ..” ಎಂಕಣ್ಣ ಒಳಂಗೆ ಕೇಳುವ ಹಾಂಗೆ ಹೇಳಿದ°.
“ಮತ್ತೆಂತ ವಿಶೇಷ?” ಕೇಳಿದ ಎಂಕಣ್ಣ. ಎಂತಾರು ಹೇಳುವಂತದ್ದು ಇಲ್ಲದ್ರೆ ಜೋಯಿಷರು ಹಾಂಗೆಲ್ಲ ಬಪ್ಪೋರು ಅಲ್ಲ.
“ವಿಶೇಷ ಎಂತ ಇಲ್ಲೆ… ಎಲ್ಲ ನಿನ್ನದೇ… ಎಂತ..” ಚಾಯ ಕುಡ್ಕೊಂಡು ಜೋಯಿಷರು ಹೇಳಿದವು. “ನಿನ್ನ ಹತ್ತರೆ ರಜಾ ಮಾತಡ್ಳೆ ಇತ್ತದಾ…ಎಂತ….”
“ತುಂಬ ಮಾತಾಡ್ಳೆ ಇದ್ದೋ…? ನಿಂಗ ಮಿಂದಿಕ್ಕಿ ಬನ್ನಿ…. ಉಂಡಿಕ್ಕಿ ಮಾತಡ್ಳೆ ಅಕ್ಕು… ಆಗದೋ?” ಎಂಕಣ್ಣ ಹೇಳಿದ°.
“ಚೆ ಚೆ… ಉದಿಯಪ್ಪಗ ಮಿಂದಿಕ್ಕಿಯೇ ಹೆರಟದು ಆನು… ಈಗೆಂತ ಮೀಯೆಕ್ಕೂಳಿ ಇಲ್ಲೆ.. ಎಂತ….” ಹೇಳಿ ಜೋಯಿಷರು ಎಂಕಣ್ಣ ಕೊಟ್ಟ ಬೈರಾಸು ತೆಕ್ಕೊಂಡು ಮೀವಲೆ ಹೋದವು.
—————————————————————————————-
ಉಂಡಾದ ಮತ್ತೆ ಜೋಯಿಷರಿಂಗೆ ಎಂಕಣ್ಣ ಚಾವಡಿಲಿಯೇ ಹಸೆ ಹಾಕಿದ°.
“ಊಟ ಭಾರಿ ಲಾಯಿಕ ಆಯಿದಿದಾ… ಅಕ್ಕನ ಅಡಿಗೆ ಹೇಳಿರೆ ಯಾವಾಗಳು ಪಸ್ಟ್ ಕ್ಳಾಸು…ಎಂತ…” ಜೋಯಿಷರು ಹೇಳಿಕೊಂಡು ಹಸೆಲಿ ಕೂದು ಎಲೆ ಅಡಕ್ಕೆ ಹಾಕುಲೆ ಸುರು ಮಾಡಿದವು. ಅವರ ಚೀಲಲ್ಲಿ ಯಾವಾಗಳೂ ಎಲೆ ಅಡಕ್ಕೆ ಇರ್ತೇ ಇರ್ತು.
ಬೆಶಿ ಬೆಶಿ ಬೆಣ್ತಕ್ಕಿ ಅಶನ, ಸಾರು, ದೀಗುಜ್ಜೆ ಕೊದಿಲು, ಬೆಂಡೆಕಾಯಿ ತಾಳ್ಳು, ಜೀರಿಗೆ ಮಾವಿನ ಮೆಡಿಯ ಉಪ್ಪಿನಕಾಯಿ, ಗಟ್ಟಿ ಮೊಸರು, ಮಜ್ಜಿಗೆ…. ಊಟ ಪಸ್ಟ್ ಕ್ಳಾಸು ಆಗದ್ದೆ ಎಂತ?
“ಮತ್ತೆಂತ….” ಎಂಕಣ್ಣ ಕೇಳಿದ°.
“ಎನ್ನದೆಂತ ಮಾರಾಯ.. ಎಲ್ಲ ನಿನ್ನದೇ… ಆರೋ ಹೇಳಿದವು ಇಲ್ಲಿ, ನಿನ್ನ ತೋಟಲ್ಲಿ ಎಂತದೋ ಗಲಾಟೆ, ಮಾರಾಮಾರಿ ಆಗಿ ನಿನ್ನ ತೋಟಲ್ಲಿ ಕೆಲಾವು ಹೆಣ ಬಿದ್ದಿದಡ…? ಎಂತ…? ಇಲ್ಲಿ ನೋಡಿರೆ ಎಂತದೂ ಇಲ್ಲೆ… ಊಂ…ಎಂತ…”
“ಹೇ.. ಗಲಾಟೆಯ? ಹಾಂಗೆ ಎಂತದೂ ಇಲ್ಲೆ ಜೋಯಿಷರೇ…. ಕತೆ ಒಂದು ಆದ್ದು ಅಪ್ಪು… ಇದಾ….” ಹೇಳಿ ಎಂಕಣ್ಣ ಇಡಿ ದಿನದ ಕತೆಯ ಪೂರ ಹೇಳಿದ° ಜೋಯಿಷರಿಂಗೆ.
“ಅಂಬಗ ಒಂದೇ ಹೆಣ ಬಿದ್ದದೋ…? ಎಂತ…. ಶೇ….” ಎಲ್ಲ ಕತೆ ಕೇಳಿದ ಮತ್ತೆ ಜೋಯಿಷರಿಂಗೆ ನಿರಾಶೆ ಆದಹಾಂಗೆ ಕಂಡತ್ತು. ಈ ಜೋಯಿಷರಿಂಗೆ ಕುಶಾಲು… ಒಂದು ಬಿದ್ದದಕ್ಕೇ ಎಂಕಣ್ಣಂಗೆ ಮೇಲೆ ಕೆಳ ಆಗಿ ಸಾಕಾಗಿ ಹೋಯಿದು… ಇನ್ನು ಎಲ್ಲಿಯಾದ್ರೂ ಜಾಸ್ತಿ ಬೀಳ್ತಿತ್ತರೆ…? ಕತೆ ಕೈಲಾಸ…
“ಹೆ ಹೆ ನಿಂಗೊಗೆ ಕುಶಾಲು…. ಮತ್ತೆ ನಿಂಗೊ ಎಂತ ಇತ್ಲಾಗಿ…? ಸುಮ್ಮನೆ ಬಪ್ಪೋರು ಅಲ್ಲ ನಿಂಗ….” ಎಂಕಣ್ಣ ಕೇಳಿದ°.
ಅದಪ್ಪು, ಹಾಂಗೆಲ್ಲ ಸುಮ್ಮನೆ ಬಪ್ಪೋರಲ್ಲ.. ಜೋಯಿಷರು…!!!
————————————————————————————–
ನಿಂಗೊಗೆ ಗೊಂತಿದ್ದಲ್ಲ… ಎಂಕಣ್ಣನ ಮಗಳು ಸವಿತಂಗೆ ಪೊದು ಹುಡ್ಕಿಕೊಂಡಿತ್ತದು? ನಮ್ಮ ಈ ಬುರುಡೆ ಜೋಯಿಷರು ಆ ವಿಚಾರಲ್ಲಿಯೇ ಎಂಕಣ್ಣನಲ್ಲಿಗೆ ಬಂದದು. ಬುರುಡೆ ಜೋಯಿಷರ ಜೋಳಿಗೆಲಿ ಸುಮಾರು ಜಾತಕಂಗೋ ಇದ್ದು. ಅವು ಹಾಕಿದ ಸುಮಾರು ಸಂಧಾನಂಗೋ ಕೂಡಿ ಬಂದು, ಮದುವೆಯೂ ಆಗಿ ಹೋಯಿದು. ಅವ್ವೆಂತ ಇದಕ್ಕೆಲ್ಲ ಪೈಶೆ ಗೀಶೆ ತೆಕ್ಕೊಂಬೋರು ಅಲ್ಲ. ಕೂಸಿಂಗೆ ಮಾಣಿ ಹುಡ್ಕಿ, ಮಾಣಿಗೆ ಕೂಸು ಹುಡ್ಕಿ ಮದುವೆ ಮಾಡುಸುದು ಬಾರಿ ಪುಣ್ಯದ ಕೆಲಸ ಹೇಳಿ ಅವು ತಿಳ್ಕೊಂಡಿದವು. ಎಲ್ಲಿ ಮದುವೆ ಪ್ರಾಯಕ್ಕೆ ಬಂದ ಮಾಣಿಯಂಗೊ ಇದ್ದವು.., ಎಲ್ಲಿ ಮದುವೆಗೆ ತಯಾರಾದ ಕೂಸುಗೋ ಇದ್ದವು… ಹೇಳಿ ಗೊಂತಪ್ಪದು ಹೆಚ್ಚಾಗಿ ಪುರೋಹಿತ ಬಟ್ರಿಂಗೆ, ಅವರ ಒಟ್ಟಿಂಗೆ ಇಪ್ಪ ಪರಿಕರ್ಮಿಗೊಕ್ಕೆ, ಸತ್ಯಣ್ಣನ ಹಾಂಗಿಪ್ಪ ಅಡಿಗೆ ಬಟ್ರುಗೊಕ್ಕೆ, ಮತ್ತೆ ಈ ನಮ್ಮ ಬುರುಡೆ ಜೋಯಿಷರ ಹಾಂಗಿಪ್ಪ ಜೋಯಿಷರಿಂಗೆ…. ಅಲ್ಲದೋ?
ಹಾಂಗೆ ಸವಿತಂಗೂ ಅವು ಸುಮಾರು ಮಾಣಿಯಂಗಳ ನೋಡಿದ್ದವು. ಅದರಲ್ಲಿ ಒಂದು ಕೂಡಿ ಬಪ್ಪ ಅಂದಾಜಿ ಇದ್ದು. ಹಾಂಗೆ ಅದರ ಸಂಧಾನ ಹಾಕುವೋ ಹೇಳಿಯೇ ಅವು ಬಂದದು.
ಮಾಣಿ ವಿಶಯ ಎಲ್ಲ ಎಂಕಣ್ಣಂಗೆ ಮೊದಲೆ ಒಂದು ಸರ್ತಿ ಹೇಳಿ ಆಯಿದು. ಅಲ್ಲಿ ಎಲ್ಲಿಯೋ ನೀರ್ಚಾಲು ಹೋಡೆಂದ ಮಧೂರಿಂಗ ಹೋಪ ಒಂದು ದಾರಿ ಇದ್ದಲ್ಲದೋ….? ಅದಲ್ಲಿ ಸುಮಾರು ದೂರ ಹೋದಪ್ಪಗ ಒಂದು ಪದವು ಸಿಕ್ಕುತ್ತು, ಅದರ ದಾಂಟಿ ಅಪ್ಪಗ ಒಂದು ದೊಡ್ಡ ಚಡವು ಇಳಿತ್ತದ… ಅಲ್ಲಿಯೇ ಎಲ್ಲಿಯೋ ಎಡತ್ತಿಂಗೊ… ಬಲತ್ತಿಂಗೊ ತಿರುಗಿದರೆ ಒಂದು ದೊಡ್ಡ ತೋಡು ಸಿಕ್ಕುತ್ತಲ್ಲದಾ? ಅದರ ಕರೇಲಿ ಒಂದು ದಾರಿ ಇದ್ದದಾ? ಅದಲ್ಲಿಯೇ ಸುಮಾರು ಒಂದು ಪರ್ಲಾಂಗೋ… ಒಂದು ಮೈಲಿಯೋ… ಹೋದರೆ ಮಾಣಿಯ ಮನೆ ಸಿಕ್ಕುತ್ತು… ಈ ಮಾಣಿ ಕಡೇಯಾಣ ಮಾಣಿ. ಅವಂಗೆ ಒಬ್ಬ° ಅಣ್ಣಂದೆ, ಇಬ್ರು ಅಕ್ಕಂದ್ರುದೆ ಇದ್ದವು. ಇಬ್ರು ಅಕ್ಕಂದ್ರಿಂಗೂ ಮದುವೆ ಆಗಿ ಗೆಂಡನ ಮನೆಲಿ ಇದ್ದವು. ಮಾಣಿಯ ಅಣ್ಣಂಗೆ ರೈಲು ಇಲಾಕೆಲಿ ಕೆಲಸ ಅಡ. ಅವಂಗೆ ರೈಲು ಬಿಡುದೇ ಕೆಲಸ ಹೇಳಿ ಬುರುಡೆ ಜೋಯಿಷರು ಹೇಳಿದ್ದವು. ಅದರೆ ಅವಂಗೆ ನಿಜವಾಗಿ ರೈಲು ಬಿಡುದು ಕೆಲಸ ಅಲ್ಲ… ಅದೆಂತದೋ “ಗಾರ್ಡ°” ಹೇಳಿ ಹೇಳ್ತವಡ. ಅವ° ಹೇಳದ್ದೆ ರೈಲು ಮುಂದೆ ಹೋಗಡ್ಡ. ಅವ° “ನಿಲ್ಲು” ಹೇಳಿರೆ ರೈಲು ನಿಲ್ಲೆಕ್ಕಡ… “ಹೋಗು” ಹೇಳಿರೆ ಹೋಯೆಕ್ಕಡ… ಬಯಂಕರ ಜೆವಾಬುದಾರಿಯ ಕೆಲಸ ಮಾರಾಯನೆ… ಅಷ್ಟು ದೊಡ್ಡ ರೈಲಿನ ಕಂಟ್ರೋಲು ಮಾಡೆಡದಾ?
ಅವಂಗುದೆ ಮದುವೆ ಆಯಿದು. ಹೆಂಡತ್ತಿಯ ಕರಕ್ಕೊಂಡು ಅವ° ಕೆಲಸ ಮಾಡುವ ಜಾಗೆಗೆ ಹೋಗಿ ಬಿಡಾರ ಮಾಡಿದ್ದ°. ಮನೆಲಿ ಎಂಟೂವರೆ ಕಂಡಿ ಅಡಕ್ಕೆ ಆವುತ್ತು. ರಜಾ ಸಾಗುವಳಿ ಗೆದ್ದೆದೇ ಇದ್ದು. ಸಣ್ಣ ಮಗ° ಈಗ ಜಾಗೆ ನೋಡಿಕೊಂಡು ಅಬ್ಬೆ ಅಪ್ಪನ ಒಟ್ಟಿಂಗೆ ಇಪ್ಪದು. ಎಂಕಣ್ಣಂಗೆ ‘ಅಕ್ಕು’ ಹೇಳಿ ಕಂಡು ಜಾತಕ ಕೊಟ್ಟಿತ್ತಿದ್ದ°… ಜಾತಕ ಕೂಡಿ ಬೈಂದು… ಮಾಣಿ ಮನೆಯವು ಕೂಸು ನೋಡ್ಳೆ ಬತ್ತವಡಾ ಹೇಳಿ ಹೇಳ್ಲೆ ಬುರುಡೆ ಜೋಯಿಷರು ಬಂದದು.
————————————————————————————————————
ಸವಿತಂಗೆ ಮದುವೆ ಆತಾ? ಗೊಂತಪ್ಪಲೆ ರಜಾ ಕಾಯೆಕ್ಕನ್ನೆ…..

9 thoughts on “ಚೈನು- ಭಾಗ ಹತ್ತು

  1. ಮಾಣಿಮನೆ ನೊಡ್ಳೆ ಹೋಪಲಿದ್ದೋ?
    ಗೂಗಲ್ಲಿ ಅದು ನೋಡಿ ಆತು.
    ಚಡವು ಕೆಳ ಉಣೆ೦ಗಿಲ ಹತ್ರೆ ಇಪ್ಪ ತಾಳಿ {?}ಮರ೦ಗಳ ಕ೦ಡು,
    ದೊಡ್ಡಕ್ಕೆ ಸಣ್ಣ ಡೌಟು ಬಯಿ೦ದಡ,
    ಒಡ್ಕಣಾವ ಕುಡುಕ್ಕಾನ ಹೇಳೀ?.
    ಆರೋ ಹೇಳಿದವು ಅಪ್ಪಡಾ,
    ಆದರೇ ದಿನಕ್ಕೆ ಮೂರು ಚಾಯೆ ದ ಬದಲು ಕೋತ೦ಬರಿಯೋ/ಜೀರಿಗೆಯೋ ಕಷಾಯ ಕುಡಿತ್ತಡ.
    ಎನೇ ಇರಲಿ,ಉಡುಗೋರೆ ಮಾಡ್ಲೆ ಹೋದ ಶಾಲೆನ್ನೆ,ವಾಪಸ್ಸು
    ಹೆಗಲಿ೦ಗೆ ಹಾಕಿಕೊ೦ಡು ಬ೦ದಾ೦ಗೆ,
    ಇದು ಕುತ್ತಕ೦ಡೆ ಅಪ್ಪ ಚಾನ್ಸೇ ಜಾಸ್ತಿ?
    ರೈಲ -ಚೈನು ಸದ್ಯಕ್ಕೆ ಎಳವುದು ದೂರವೆ.?
    ಎಲ್ಲ ಕ೦ಟ್ರೋಲೊ೦ಗೆ ಬಾರದ್ದೆ ,ಛತ್ರಿ ಹಿಡಿವ ಸಿಗ್ನಲ್ ಬಾರ ಅಲ್ಲದೊ?

  2. ಮನೆಲಿ ಇಪ್ಪ ಮಾಣಿ ಎನಬೇಡ ಹೇಳಿ ಹೇಳ ಹೇಳಿ ಕಾಣ್ತು ಈ ಸವಿತ- ಎಂತಕೆ ಹೇಳಿರೆ ಇದು ಐವತ್ತು ವರ್ಷ ಹಿಂದಾಣ ಕಥೆ ಅಲ್ಲದೋ. ಅಂಬಗ ಈ ಪೇಟೆಗಾಳಿ ಕೂಸುಗೊಕ್ಕೆ ಈಗಾಣಷ್ಟು ಬಡುದ್ದಿಲ್ಲೆ ಅಲ್ಲದಾ?

  3. ಈ ಕತೆ ಬರತ್ತ ಶಾಮಣ್ನ ಹೋಗದ್ದ ಜಾಗೆ ಯೇವದೂ ಬಾಕಿ ಇಲ್ಲೆ ಹೇದು ಕಾಣುತ್ತನ್ನೆ! ನೀರ್ಚಾಲು ಹೊಡೆಂದ ಮಧೂರಿಂಗೆ ಹೋಪಗ ಸಿಕ್ಕುತ್ತ ಕೊರಾತ್ತಿ ಗುಳಿ ತೋಡಿಲಿದೆ ಒಂದು ಗುರ್ಮೆ ಇದ್ದು .ಅದರಲ್ಲಿ ಅದಾ! ಎರಡು ಮಕ್ಕಳ ಕೊಂದು ಹಾಕಿದ್ದು, ಅದರ ಕತೆ ಕೇಳಿರೆ ಒರಕ್ಕುದೆ ಬಾರ ,ಪಿಶಾಚಿ ಗಳುದೆ ಕಾಂಗು …ಮತ್ತೆ ಮಾಣಿಗೆ ಕೂಸು ಅಕ್ಕು ಹೇದು ಕಂಡು, ಮಾಣಿ ಮನೆ ನೋಡಲೆ ಹೇಳಿಹೋಪಲಿದ್ದರೆ… ಜಾಗ್ರತೆಗೆ ಹೇದ್ದು ಮಿನಿಯಾ…

    1. ಹೇ… ಎಂತ ಬಾಲಣ್ಣ ಕತೆಯ ಹಿಂದೆ ಹೋಪದೋ.. ಅಲ್ಲ ಆನು ಎಲ್ಲೆಲ್ಲಿ ಹೋವುತ್ತೆ ಹೇಳಿ ಪತ್ತೇದಾರಿ ಮಾಡುದೋ?

    2. ಶಾಮಣ್ಣನ ಕತೆ ಎಂಗಳ ಬೊಳುಂಬಿನ ಹತ್ರಂಗೇ ಬಯಿಂದಾನೆ. ಜೋಯಿಸ ಕೊಲೆಯ ವರ್ಣನೆ ಮಾಡಿದ್ಸು ಲಾಯಕಾಯಿದು. ಮಧೂರಿಂಗೆ ಹೋಪಗ ಸಿಕ್ಕುವ ಕೋಟೆಕಣ್ಣಿಲಿ ಇರುಳು ಹೊತ್ತು ದೊಂದಿ ಬೀಸುತ್ತ ಗುಳಿಗಂದಾಗಿ ದಾರಿ ತಪ್ಪಿದ ಕತೆಯುದೆ ಇದ್ದು. ಬಾಲಣ್ಣ ಹೇಳಿದ ಹಾಂಗೆ, ಕೊರತಿಗುಳಿಯ ಮಕ್ಕಳ ಕಲ್ಲಿಲ್ಲಿ ಗುದ್ದಿ ಗುದ್ದಿ ಕೊಂದ ಕತೆ ಕೇಳುವಗ ಈಗಳೂದೆ ಚಳಿ ಕೂರುತ್ತು.
      ಶಾಮಣ್ಣನ ಚೈನು, ಮದುವೆ ಚೈನಿನ ಕಡೇಂಗೆ ಹೆರಟತ್ತು, ಸ್ವಾರಸ್ಯ ಇನ್ನುದೆ ಹೆಚ್ಚಕ್ಕು ಹೇಳಿ ಕಾಣ್ತು.

  4. ನಾಯಿಪಿಲಿ ಪುಚ್ಚೆ ವರ್ಣನೆ ಪಷ್ಟಾಯ್ದು ಭಾವ. ಜೋಯಿಷರು ಜೆನಿವಾರದ ಬ್ರಹ್ಮಗೆಂಟು ಹಿಡ್ಕೊಂಡಿತ್ತ ಕಾರಣ ಮರದಿನ ಅವಕ್ಕೆ ಜ್ವರಮಣ್ಣ ಬಾರದ್ದೆ ಬಚವಾತಪ್ಪೋ!
    [ಕುಡಿವಗ ನೀರು ಹೆರಂಗುದೆ ಅರುದತ್ತು…ರಜಾ ರಜ.] – ಏ.. ಇದು ಕೊಳೆ ಆತಿಲ್ಯೋ ಭಾವ !!
    ಮತ್ತೆ… ಹೇದಾಂಗೆ ಈ ಜೋಯಿಷರಿಂಗೆ ನಾಮೋಸು ರೆಜಾ ಹೆಚ್ಚಿಗೆಯೋದು !
    ಶ್ಯಾಮಣ್ಣ ಹೇದ ನೀರ್ಚಾಲಿಂದ ಮುಂದೆ ಮಧೂರಿಂಗೆ ಹೋಪ ದಾರಿಲಿ ಬೆಣ್ಚಿ ಹಾಕ್ಯೋಂಡು ಹೋಗಿ ನೋಡಿದೆ ಎಲ್ಲ್ಯಾತು ಆ ಮಾಣಿ ಮನೆ ಅರಡಿವೋದು. ಉಮ್ಮಾ ಎನ ದಾರಿ ತಪ್ಪಿತ್ತೋ ಏನೋ… ಹೋಗಿ ಹೋಗಿ ಏರಿಕ್ಕಳ ತಂಬಿಲ ಆವ್ತಲ್ಯಂಗೆ ಎತ್ತಿತ್ತತ್ತೆ ಪ್ಫೋ! 😀
    ಅಂಬಗ ಈಗ ಇನ್ನು ಬಪ್ಪವಾರಕ್ಕೆ ಸವಿತಂಗೆ ಮಾಣಿಮನೆ ನೊಡ್ಳೆ ಹೋಪಲಿದ್ದೋ?!

    1. ( ಏ.. ಇದು ಕೊಳೆ ಆತಿಲ್ಯೋ )
      ಭಾವ ಕೊಳೆ ಅಲ್ಲ… ಎಂಜಲು… ತೊಂದರೆ ಇಲ್ಲೆಪ್ಪಾ… ಮತ್ತೆ ಮೀವಲೆ ಹೋದ್ದನ್ನೇ…ಎಂತ….
      ( ನಾಮೋಸು ರೆಜಾ ಹೆಚ್ಚಿಗೆ) 😀
      (ನೀರ್ಚಾಲಿಂದ ಮುಂದೆ ಮಧೂರಿಂಗೆ ಹೋಪ ದಾರಿಲಿ ಬೆಣ್ಚಿ ಹಾಕ್ಯೋಂಡು ಹೋಗಿ….)
      ಛೆ ನಿಂಗಳ ಕತೆಲಿ ಎಡಿಯ… ಆ ಕಸ್ತಲೆಲಿ ಹೋಗಿ ಎಲ್ಲಿಯಾದ್ರೂ ರಣವೊ… ಕೊಲೆಯೋ ಸಿಕ್ಕುತಿತ್ತರೆ? ಕೆಳ ಬಾಲಣ್ಣ ಹೇಳಿದ್ದು ನೋಡಿ… ಗರುಡ ಪುರಾಣ ಬರವ ನಿಂಗಳೆ ಹೀಂಗೆ ಮಾಡುದೋ?
      ಅಲ್ಲ.. ಐವತ್ತು ವರ್ಷ ಮೊದಲಾಣ ದಾರಿ ಹುಡುಕ್ಕಿಕೊಂಡು ನಿಂಗ ಈಗ ಹೋಪದೋ? ಅಷ್ಟಕ್ಕೂ ಆ ಮನೆಯೋರು ಈಗ ಅಲ್ಲಿ ಇಲ್ಲೆ ಹೇಳಿ ಕಾಣ್ತು. ಆ ಮಾಣಿಗೆ ಮದುವೆ ಆಗಿ ಕೆಲಾವು ವರ್ಷ ಕಳುದ ಮೇಲೆ ಅಪ್ಪ್ಪ ತೀರಿಹೋಗಿ, ಅಣ್ಣಂಗೂ ತಮ್ಮಂಗೂ ಜಾಗೆ ವಿಶಯಲ್ಲಿ ಕಟಿಪಿಟಿ ಆಗಿ, ತಮ್ಮಂಗೆ ಆ ಜಾಗೆಯೇ ಬೇಡ ಹೇಳಿ ಕಂಡು, ಸಿಕ್ಕಿದ ಪಾಲಿನ ಏವದೋ ಬ್ಯಾರಿಗೆ ಮಾರಿಕ್ಕಿ, ಮೂಡ್ಳಾಗಿ ಹೋಗಿ ಜಾಗೆ ಮಾಡಿದಡ. ಅಣ್ಣಂಗೆ ಜಾಗೆ ನೋಡುವೋರು ಇಲ್ಲದ್ದೆ, ಏವದೋ ಪುರ್ಬುಗೊಕ್ಕೆ ಜಾಗೆ ಕೊಟ್ಟಿಕ್ಕಿ ಹೋದಡ. ಆ ಜಾಗೆಲಿ ಆ ಬ್ಯಾರಿಗೂ ಪುರ್ಬುಗೂ ಗಡಿ ವಿಶಯಲ್ಲಿ ಲಟಾಪಟಿ ಆಗಿ ಕಡೇಂಗೆ ಅವುದೆ ಆರಿಂಗೋ ಜಾಗೆ ಕೊಟ್ಟಿಕ್ಕಿ ಅಲ್ಲಿಂದ ತೊಲಗಿದವಡ… ಈಗ ಅಲ್ಲಿ ಆರಿದ್ದವೋ ಎನಗಂತೂ ಗೊಂತಿಲ್ಲೆ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×