Oppanna.com

ಚೈನು- ಭಾಗ ಐದರ ಮುಂದುವರುದ ಭಾಗ

ಬರದೋರು :   ಶ್ಯಾಮಣ್ಣ    on   21/08/2013    8 ಒಪ್ಪಂಗೊ

ಶ್ಯಾಮಣ್ಣ

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣ ವರೆಗೆ….
———————————————————————————–

ನವಬಾರತ

ಪೋಲೀಸು ದೌರ್ಜನ್ಯದ ಶಂಕೆ

(ನಮ್ಮ ಸುದ್ದಿಗಾರರಿಂದ)
ವಿಷ್ಣುಪುರ, ಡಿಸೆಂಬರು,೧೭: ವಿಷ್ಣುಪುರ ಪೋಲೀಸು ಸ್ಟೇಶನಿನಲ್ಲಿ ವ್ಯಕ್ತಿಯೊಬ್ಬರು ಮೂರ್ಛೆ ತಪ್ಪಿ ಬಿದ್ದಿದ್ದು ಅವರನ್ನು ನೆಕ್ಕರೆಮೂಲೆಯ ಎಂಕಣ್ಣ ಬಟ್ ಎಂದು ಗುರುತಿಸಲಾಗಿದೆ. ಅವರ ಮೇಲೆ ಪೋಲಿಸು ದೌರ್ಜನ್ಯ ನಡೆದಿರುವ ಶಂಕೆ ಇದ್ದು ನಮ್ಮ ಸುದ್ದಿಗಾರರನ್ನು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕಳುಹಿಸಿದ್ದು ಮುಂದಿನ ವರದಿಗಾಗಿ ಕಾಯಲಾಗುತ್ತಿದೆ.
———————————————————————————–
ಸುಮಾರು ದಿನಂದ ಎಂಕಣ್ಣನ ಸುದ್ದಿ ಇಲ್ಲದ್ದು ನೋಡಿ ನವಬಾರತ ಪೇಪರಿಲಿ ಹೀಂಗೊಂದು ಸುದ್ದಿ ಬಕ್ಕು ಹೇಳಿ ಗ್ರೇಷಿ ಆನು ಕಾದು ಕೂದೊಂಡು ಇತ್ತಿದ್ದೆ… ದಿನಾಗ್ಳೂ ನವ ಬಾರತ ಪೇಪರಿಲಿ ಹುಡ್ಕುದು…ನಿಂಗಳು ಕಾದೊಂಡು ಇತ್ತಿದ್ದಿರೋ? ಆದರೆ ಪೇಪರಿಲಿ ಹಾಂಗೆಂತ ಸುದ್ದಿ ಬೈಂದಿಲ್ಲೆ. ಮತ್ತೆ ಎಂತಾದಿಕ್ಕಪ್ಪ ಹೇಳೀ ಗ್ರೇಷುವಗ ಎಂಕಣ್ಣನೇ ಸಿಕ್ಕಿದ°. ಅವನ ಹತ್ತರೇ ಮುಂದಾಣ ಕತೆ ಗೊಂತಾತದ… ಎಂಕಣ್ಣಂಗೆ ಬೋದ ತಪ್ಪಿದ್ದು ಅಪ್ಪಡ. ಮತ್ತೆಂತಾತು ಹೇಳಿ ಕೇಳಿರೆ….
ಲಾಟಿಯ ಪಟಾರ್ ಹೇಳಿ ಮೇಜಿಂಗೆ ಬಡುತ್ತೋ ಇಲ್ಲೆಯೋ…….
ಎಂಕಣ್ಣನ ತೆಗಲೆ ದಸಕ್ ಹೇಳಿತ್ತು. ಮೈ ಎಲ್ಲ ಅಕ್ಕಿಗಟ್ಟಿತ್ತು. ಇಡಿಮೈಲಿ ಒಂತರಾ ಎರುಗು ಹರುದಾಂಗೆ ಅಪ್ಪಲೆ ಸುರು ಆತು. ಮೊದಲೆ ಆಸರ ಆಯ್ಕೊಂಡಿತ್ತು ಈಗ ಗೆಂಟ್ಳಿನ ಪಸೆ ಪೂರಾ ಆರಿತ್ತು.ತೊಡೆಲಿ ಚೆಂಡಿ ಚೆಂಡಿ ಆದ ಹಾಂಗೆ ಆತು. ಕಣ್ಣು ಕಸ್ತಲೆ ಕಟ್ಟಿತ್ತು. ಎಂಕಣ್ಣ ಬೋದ ತಪ್ಪಿ ದಡಾಲ್ಲನೆ ಬಿದ್ದ°.
ಪುನಾ ಎಂಕಣ್ಣ ಕಣ್ಣು ಒಡದಪ್ಪಗ ಅವಂಗೆ ಗೊಂತಾತು, ಅವನ ಹೆರ ಬೆಂಚಿಲಿ ಮನುಗಿಶಿದ್ದವು ಹೇಳಿ. ಹೆಡ್ಡು ಕಾನಿಷ್ಟೆಬಿಲ್ಲು ಕಿಷ್ಣಪ್ಪಂದೆ, ರೈಟ ರಂಗಣ್ಣಂದೆ ಅವನ ಮೋರೆಗೆ ನೀರು ಚೇಪಿದ್ದರಲ್ಲಿ ಅಂಗಿ ಎಲ್ಲ ಚೆಂಡಿ ಆಯಿದು. ಸುತ್ತಿದ ವಸ್ತ್ರದೆ ಚೆಂಡಿ ಆಯಿದು. ಸಬ್ಬಿನಿಸ್ಪೇಟ ಮರಿಯಪ್ಪ ಒಳವೇ ಇದ್ದು. ಬಹುಷ ಕಿಷ್ಣಪ್ಪ ಹೇಳಿತ್ತಾಯ್ಕು ಏನಾದರೂ ಹೆಚ್ಚು ಕಮ್ಮಿ ಆದರೆ ತಲೆ ಮೇಲೆ ಬಕ್ಕು ಹೇಳಿ. ಹಾಂಗೆ ಪುನಾ ಅವನ ದಿನುಗುಲೆ ಹೇಳಿದ್ದಿಲ್ಲೆ.
ಅವಂಗೆ ಎಚ್ಚರಿಕೆ ಆದ ಕೂಡ್ಳೆ ಕಿಷ್ಣಪ್ಪ ಒಳ ಹೋಗಿ ಸಬ್ಬಿನಿಸ್ಪೇಟ ಮರಿಯಪ್ಪಂಗೆ ಹೇಳಿತ್ತು. ಅದು ಕಿಷ್ಣಪ್ಪಂಗೆ ಎಂತ ಹೇಳಿತ್ತೋ, ಕಿಷ್ಣಪ್ಪ ಬಂದು ಎಂಕಣ್ಣನ ಹತ್ತರೆ “ಬನ್ನಿ ಬಟ್ರೆ, ಹೋಗುವ” ಹೇಳಿತ್ತು . ಎಂಕಣ್ಣ ಮೆಲ್ಲಂಗೆ ಅದರ ಹಿಂದೆ ಹೆರಟ°. ಕಿಷ್ಣಪ್ಪ ಅವನ ಕರಕ್ಕೊಂಡು ಟೇಶನಿಂದ ಕೆಳ ಕರಕ್ಕೊಂಡು ಹೋಗಿ ಅಲ್ಲೆ ನಿಂದುಕೊಂಡಿತ್ತ ಪೋಲೀಸು ಜೀಪಿನ ಹಿಂದಾಣ ಹೊಡೆಂಗೆ ಹೋಗಿ “ಹತ್ತಿ ಬಟ್ರೆ” ಹೇಳಿತ್ತು. “ಎಲ್ಲಿ ಕರಕ್ಕೊಂಡು ಹೋವುತ್ತವಪ್ಪ” ಹೇಳಿ ಎಂಕಣ್ಣಂಗೆ ರಜಾ ಮಂಡೆ ಬೆಶಿ ಆತು. ಅವಂಗೆ ತಾಗಿದ ಹಾಂಗೆ ಕಿಷ್ಣಪ್ಪ ಕೂದತ್ತು.
ಅವರ ಎದುರಾಣ ಸೀಟಿಲಿ ಬೇರೆ ಎರಡು ಪೋಲೀಸುಗ ಕೂದವು.ಒಂದು ಐದು ನಿಮಿಷ ಹಾಂಗೇ ಕೂದವು. ಸಬ್ಬಿನಿಸ್ಪೇಟ ಮರಿಯಪ್ಪ ಬಂದು ಜೀಪಿನ ಎದುರಾಣ ಸೀಟಿಲಿ ಕೂದತ್ತು. ಡ್ರೈವರ ಮೊದಲೇ ಕೂದುಗೊಂಡು ಇತ್ತಿದ್ದು. ಮರಿಯಪ್ಪ ಕೂದು “ಹೂ… ಹೋಗುವ” ಹೇಳಿದ ಕೂಡ್ಳೆ ಜೀಪು ಹೆರಟತ್ತು.
ಜೀಪು ಹೋದ್ದು ಸೀದಾ ಪೇಟೆ ಹೊಡೇಂಗೆ.ಎಂಕಣ್ಣ ನೋಡಿಕೊಂಡಿದ್ದ ಹಾಂಗೆ ಜೀಪು ‘ವಿಜಯ ಹೋಟೇಲಿ’ನ ಎದುರು ನಿಂದತ್ತು. ವಿಜಯ ಹೋಟ್ಳು ಹೇಳಿರೆ ಅದೊಂದು ಶೆಟ್ರುಗಳ ಹೋಟ್ಳು. ಅಲ್ಲಿ ಮೀನು ಊಟ, ಮಾಂಸಾಹಾರ ಊಟ ಸಿಕ್ಕುತ್ತು ಹೇಳುದು ಎಂಕಣ್ಣಂಗೆ ಕೇಳಿ ಗೊಂತಿದ್ದು. ಅದೆಂತದೋ ಅಶನಲ್ಲಿ ಹುಗುದ ಕೋಳಿಯ ಹೆಣ ಕೂಡ ಸಿಕ್ಕುತ್ತಡ. ಎಂತಪ್ಪ?.. ಚಿಕ್ಕನು ಬಿರಿಯಾನಿಯೋ, ಕಿಚ್ಚನು ಬಿರಿಯಾನಿಯೋ ಎಂತದೋ ಹೆಸರಡಾ ಅದಕ್ಕೆ. ದರಿದ್ರದವು ಎಂತ ಎಲ್ಲ ತಿನ್ತವೋ ಈ ಶೂದ್ರುಗ. ಇಲ್ಲಿ ಎಂತಕ್ಕೆ ನಿಲ್ಸಿದ್ದು ಹೇಳಿ ಮಂಡೆ ಬೆಶಿ ಆತು ಎಂಕಣ್ಣಂಗೆ. ಮರಿಯಪ್ಪ, ದ್ರೈವರ, ಎರಡು ಪೋಲೀಸುಗ ಇಳುದು ಸೀದ ಒಳ ಹೋದವು. ಕಿಷ್ಣಪ್ಪ ಎಂಕಣ್ಣನ ಹತ್ತರೆ “ಬನ್ನಿ ಬಟ್ರೆ, ಊಟ ಮಾಡುವ” ಹೇಳಿ ದಿನಿಗಿತ್ತು.
“ಎಂತ ಇಲ್ಲಿಯಾ?” ಎಂಕಣ್ಣಂಗೆ ಹಾರ್ಟು ಪೈಲು ಅಪ್ಪಲೆ ಬಾಕಿ.
“ಹೋ.. ಹೌದಲ್ಲ? ನಿಮಿಗೆ, ಬಟ್ರಿಗೆ ಇಲ್ಲಿ ಆಗೂದಿಲ್ಲ ಅಲ್ವಾ…” ಕಿಷ್ಣಪ್ಪ ನೆಗೆ ಮಾಡಿಗೊಂಡು ಹೋಟ್ಳಿನ ಒಳ ಹೋತು.
‘ಅಬ್ಬ… ಬದ್ಕಿದೆ… ಇನ್ನು ಬಲವಂತ ಮಾಡಿ ತಿನ್ಸುಲೆ ನೊಡಿದ್ದವಿಲ್ಲೆನ್ನೆ’ ಗ್ರೇಶಿದ° ಎಂಕಣ್ಣ.
ಎಂಕಣ್ಣ ಜೀಪಿಲಿ ಒಬ್ಬನೆ ಕೂಯಿದ°. ಅತೆ ಇತ್ತೆ ಹೋಪ ಕೆಲವು ಜೆನಂಗ ತಿರುಗಿ ತಿರುಗಿ ಅವನನ್ನೆ ನೋಡಿಕೊಂಡು ಹೋವ್ತಾ ಇದ್ದವು. ಬಹುಷ ಅವನ ಪೋಲೀಸುಗ ಎರೆಷ್ಟು ಮಾಡಿ ಕೊಂಡೊವ್ತಾ ಇದ್ದವು ಹೇಳಿ ಗ್ರೇಷೆಕ್ಕು, ಆರಾದ್ರು.
ಮುಕ್ಕಾಲು ಗಂಟೆ ಕಳುದಿಕ್ಕಿ ಕಿಷ್ಣಪ್ಪ ಬಂತು. ಅದರ ಕೈಲಿ ಒಂದು ಸಣ್ಣ ಚೀಟಿ. ಅದರ ಎಂಕಣ್ಣಂಗೆ ಕೊಟ್ಟು ಹೇಳಿತ್ತು “ಬಟ್ರೆ… ಇದು ಕೊಡಿ”
‘ಎಂತಪ್ಪ ಇದು ಮದ್ದಿನ ಚೀಟಿಯ?’ ಎಂಕಣ್ಣ ನೋಡಿರೆ ಹೋಟ್ಳಿಲಿ ಅವು ತಿಂದದಕ್ಕೆ ಎಷ್ಟಾತು ಹೇಳಿ ಚೀಟಿ… ನಲುವತ್ತ ನಾಲ್ಕು ರೂಪಾಯಿ ಆಯಿದು ಹೇಳಿ…
“ಎ… ಎ… ಇದೆಂತ ನಾನು ಕೊಡ್ಬೇಕ?” ಎಂಕಣ್ಣಂಗೆ ತಲೆ ಬೆಶಿ ಆತು.
” ಮತ್ತೆಂತ? ನಿಮ್ಮ ಕೆಲ್ಸಕ್ಕೇ ನಾವು ಹೊರ್ಟದ್ದು… ಕೊಡಿ ಕೊಡಿ…” ಕಿಷ್ಣಪ್ಪ ಹೇಳಿತ್ತು.
ಛೆ ಇವಕ್ಕೆ ಮಾತಾಡಿದರೆ ಕೊಡಿ ಕೊಡಿ ಹೇಳುದೇ ಆತನ್ನೇ…ಇವರ ಮಾತಿಂಗೆ ಕಡೆ ಇಲ್ಲೆ ‘ಕೊಡಿ’ ಮಾಂತ್ರ ಇಪ್ಪದು… ಎಂಕಣ್ಣಂಗೆ ಬೇರೆ ದಾರಿ ಇಲ್ಲೆ… ಪೈಶೆ ತೆಗವಲೆ ಕಿಸೆಗೆ ಕೈ ಹಾಕಿದ… ಅರೆ… ಪುನ ತೆಗಲೆ ದಸಕ್ ಹೇಳಿತ್ತು… ಕಿಸೆಲಿ ಐವತ್ತು ರೂಪಾಯಿ ಇರೆಕ್ಕಾತನ್ನೆ?.. ಕೈಗೆ ಸಿಕ್ಕುತ್ತ ಇಲ್ಲೆ. ಎಲ್ಲಿ ಹೋತಪ್ಪಾ ಇದು? ಪುನಾ ಸರೀ ಪರಡಿದ ಕಿಸೆಯೊಳ. ಊಹೂಂ.. ಇಲ್ಲೆ… ಕಿಸೆಲಿತ್ತ ಐವತ್ತು ರೂಪಾಯಿ ಕಾಣೆ…
ಕಳ್ಳಂಗ… ಈ ಪೋಲೀಸುಗ ಟೇಷನಿಲಿ ಬೋದ ತಪ್ಪಿಪ್ಪಗ ತೆಗದಿರೆಕ್ಕು… ಆಗಲೇ ಆಗ ಇವರ ಸಾವಾಸ…. ಈಗೆಂತ ಮಾಡುದು? ಪೈಶೆಗೆ ಎಲ್ಲಿ ಹೋಪದು? ರಕ್ಕಸನ ಹಾಂಗೆ ಎದುರು ನಿಂದಿದು ಕಿಷ್ಣಪ್ಪ. ‘ನೀವು ದುಡ್ಡು ತೆಗೆದಿದ್ದೀರ?’ ಹೇಳಿ ಹೇಂಗೆ ಕೇಳುದು ಅದರ ಹತ್ತರೆ…?
ವಿಜಯ ಹೋಟ್ಳಿಂದ ರಜ ಮುಂದೆ ಎಡತ್ತಿಂಗೆ, ಅದೇ ಸಾಲಿಲಿ ಸೀತಾರಾಮಣ್ಣನ ಅಡಕ್ಕೆ ಬಂಡಸಾಲೆ ಇಪ್ಪದು. ಎಂಕಣ್ಣ ಸೀತಾರಾಮಣ್ಣನ ಬಂಡ ಸಾಲೆಗೇ ಅಡಕ್ಕೆ ಹಾಕುದು. ಬಂಡಸಾಲೆ ಬಾಗಿಲು ತೆಗದ್ದು ಎಂಕಣ್ಣಂಗೆ ಕಂಡತ್ತು.
“ನೋಡಿ ನನ್ನತ್ರ ಈಗ ದುಡ್ಡಿಲ್ಲ… ಸ್ವಲ್ಪ ಬಂಡಸಾಲೆಗೆ ಹೋಗಿ ಬರ್ತೇನೆ….” ಹೇಳಿದ ಕಿಷ್ಣಪ್ಪನ ಹತ್ತರೆ. ಬಿಟ್ಟತ್ತು ಪುಣ್ಯಕ್ಕೆ. ‘ಹೋಗಡ’ ಹೇಳ್ಲೆ ಎಂತ ಎಂಕಣ್ಣನ ಎರೆಷ್ಟು ಮಾಡಿದ್ದೋ?
ಎಂಕಣ್ಣ ಸೀತಾರಾಮಣ್ಣನ ಬಂಡಸಾಲೆಗೆ ಬಂದ. ಪುಣ್ಯ ಕೈ ಬಿಟ್ಟಿದಿಲ್ಲೆ ಕಾಣ್ತು, ಸೀತಾರಾಮಣ್ಣ ಬಂಡಸಾಲೆಲೇ ಇದ್ದ.
“ಎಂತ ಎಂಕಣ್ಣ, ಪೋಲೀಸು ಜೀಪಿನೊಳ ಇದ್ದೆ? ಎಂತ ಯೆವಾರ ಅವರೊಟ್ಟಿಂಗೆ?” ಇವ° ಜೀಪಿನೊಳ ಇದ್ದದರ ಸೀತಾರಾಮಣ್ಣ ಮೊದಲೇ ನೋಡಿದ್ದ°.
“ಇದ ಸೀತಾರಾಮಣ್ಣ, ಸಿಕ್ಕಿಬಿದ್ದಿದೆ ಮಾರಾಯನೆ… ಆ ತ್ಯಾಂಪ ಇದ್ದಲ್ಲದ, ಅದರ ಹೆಣ ಎಂಗಳ ತೋಟದ ಗುರ್ಮೆಲಿ ಬಿದ್ದಿದು. ಹಾಂಗಾಗಿ ಈ ಪೋಲೀಸುಗಳ ಒಟ್ಟಿಂಗೆ ವ್ಯೆವಾರ… ಕೈಲಿ ಪೈಶೆ ಇಲ್ಲೆ… ಒಂದು ಇನ್ನೂರು ರೂಪಾಯಿ ಕೊಡ್ತೆಯ… ಬಪ್ಪ ಸರ್ತಿ ಅಡಕ್ಕೆಲಿ ವಜಾ ಮಾಡ್ಲಕ್ಕು…”
“ಎಂತ… ಎಂತ?’ ಸೀತಾರಾಮಣ್ಣಂಗೆ ಕೂತುಹಲ.
“ಎಲ್ಲ ಕತೆ ಮತ್ತೆ ಹೇಳ್ತೆ… ಈಗ ಒಂದು ಇನ್ನೂರು ರೂಪಾಯಿ ಕೊಡು.”
ಸೀತಾರಾಮಣ್ಣಂಗೆ ವ್ಯೆವಾರ ಮುಖ್ಯ.. ತೆಗದು ಇನ್ನೂರು ರೂಪಾಯಿ ಕೊಟ್ಟ°.
ಎಂಕಣ್ಣ ನೂರೈವತ್ತು ರೂಪಾಯಿ ತೆಗದು ಸುತ್ತಿದ ವಸ್ತ್ರದ ಒಳದಿಕ್ಕೆ, ಕೋಣದ ಕೊಡೀಲಿ ಕಟ್ಟಿಕೊಂಡ° (ಎಲ್ಲಿಯಾದರೂ ತಪ್ಪಿ ಪೋಲೀಸುಗ ಪುನಾ ಕದಿವಲಾಗನ್ನೆ. ಪಾಪ ಅವಂಗೆ ಗೊಂತಿಲ್ಲೆ ಪೋಲೀಸುಗ ಎಲ್ಲಿ ಹುಗ್ಗಿಸಿ ಮಡುಗಿದರೂ ಎಳದು ತೆಗೆತ್ತವು ಹೇಳಿ). ಒಳುದ ಪೈಶೆಲಿ ಸೀತಾರಾಮಣ್ಣನ ಹತ್ತರೆ ಚಿಲ್ಲರೆ ಮಾಡ್ಸಿಕೊಂಡ°.
ಪುನ ಜೀಪಿನ ಹತ್ತರೆ ಬಂದು ಕಿಷ್ಣಪ್ಪಂಗೆ ಪೈಶೆ ಕೊಟ್ಟ°. ಒಟ್ಟು ನೂರೈವತ್ತು ಹತ್ತರೆ ಹೋತು… ಛೆ..
“ಜೀಪಿನಲ್ಲಿ ಕೂತ್ಕೊಳ್ಳಿ… ಈಗ ಬರ್ತೇವೆ” ಹೇಳಿ ಕಿಷ್ಣಪ್ಪ ಪುನಾ ಹೋಟ್ಳಿನ ಒಳ ಹೋತು.
ರಜಾ ಹೊತ್ತಿಲಿ ಬಂದವು ಎಲ್ಲವುದೇ… ಹೊಟ್ಟೆ ಬಿರಿಪ್ಪ ತಿಂದಿದವು ಕಾಣ್ತು…ಬಕಾಸುರಂಗ… ಒಟ್ಟಿಂಗೆ ಬೀಡವುದೆ ಹಾಯ್ಕೊಂಡು ಜಗಿತ್ತಾ ಇದ್ದವು… ಬಂದು ಪುನಾ ಜೀಪಿಲಿ ಕೂದವು…
“ಹುಂ..ಹೋಗುವ” ಹೇಳಿತ್ತು ಮರಿಯಪ್ಪ. ಜೀಪು ಹೆರಟತ್ತು. ವಾಪಾಸು ಹಿಂದೆ ತಿರುಗಿ, ಪುನ ಪೋಲೀಸು ಟೇಶನಿನ ಬುಡಂದಾಗಿ, ಶಾಲೆ ಹತ್ತರಂಗೆ ಬಂದು ಮಣ್ಣೀನ ಮಾರ್ಗಲ್ಲಿ ಸಾಲೆತ್ತೂರು ಹೊಡೆಂಗೆ ಹೋತು. ಒಂದು, ಒಂದೂವರೆ ಮೈಲು ಬಂದು ಬಲತ್ತಿಂಗೆ ಒಂದು ಸಣ್ಣ ಮಣ್ಣಿನ ರೋಟು, ಒಳಂಗೆ ತಿರುಗೆಕ್ಕು. ಅದು ನೆಕ್ಕರೆ ಮೂಲೆಯ ಮೇಲಾಣ ಹೊಡೆಂಗೆ ಸೇರ್ತು. ಅಲ್ಲಿಂದ ಇಳುದು, ಕೆಳ ಇಳುದರೆ ನೆಕ್ಕರೆ ಮಾವಿನ ಮರದ ತೋಟ, ಮತ್ತೆ ಎಂಕಣ್ಣನ ಅಡಕ್ಕೆ ತೋಟ.
ಅಂತೂ ಕಡೆಂಗೆ ಪೋಲೀಸುಗಳ ಮೆರವಣಿಗೆ ಎಂಕಣ್ಣನ ತೋಟಕ್ಕೆ ಎತ್ತಿತ್ತು. ಎತ್ತುವಗ ಮದ್ಯಾನ ಒಂದೂವರೆ ಗಂಟೆ. chain6
ತೋಟಲ್ಲಿ ನೋಡಿರೆ ಇಪ್ಪತ್ತೈದು ಮೂವತ್ತು ಜೆನಂಗ ಸೇರಿದ್ದವು. ಎಲ್ಲ ಆ ದೂಜನ ಕೆಲಸ… ಊರ್ಲಿಡಿ ಸಾರಿಕ್ಕಿ ಬೈಂದು. ಕೆಲವು ಗುರ್ಮೆಗೆ ಇಳಿವಲೆ ನೋಡಿದವಡ, ಅವು ಇಳಿಯದ್ದ ಹಾಂಗೆ ಮಾಡ್ಳೆ ಕಿಟ್ಟಣ್ಣಂಗೆ ಸಾಕು ಬೇಕಾತಡ. “ಪೋಲೀಸುಗ ನಿಂಗಳನ್ನೆ ಹಿಡಿಗು.. ಎನಗೊಂತಿಲ್ಲೆ” ಹೇಳಿದ ಮತ್ತೆ, ಸುಮ್ಮನೆ ಮೇಲಂದಲೆ ನೋಡ್ಳೆ ಸುರು ಮಾಡಿದವಡ.
ಪೋಲೀಸುಗಳ ಕಂಡ ಕೂಡ್ಳೆ ಒಬ್ಬೊಬ್ಬನೆ ಅಲ್ಲಿಂದ ಚಾಂಬುಲೆ ಸುರು ಮಾಡಿದವು. ಕಡೆಂಗೆ ಒಂದು ಹದ್ನೈದು ಜೆನಂಗ ಒಳುದವು. ಗುರ್ಮೆ ಕರೇಲಿ ನಿಂದು ನೋಡುವೋರಿನ ಪೋಲಿಸುಗ “ದೂರ ಹೋಗಿ…ದೂರ ಹೋಗಿ” ಹೇಳಿ ದೂರ ಅಟ್ಟಿದವು.
ಸಬ್ಬಿನಿಸ್ಪೇಟ ಮರಿಯಪ್ಪ ಗತ್ತಿಲಿ ಅತ್ಲಾಗಿ ಇತ್ಲಾಗಿ ನೋಡಿಕೊಂಡು ಗುರ್ಮೆ ಹತ್ತರಂಗೆ ಹೋತು. ಪೇರಳೆ ಮರದ ಬುಡಲ್ಲಿ ನಿಂದು ಒಂದು ಸರ್ತಿ ಬಗ್ಗಿ ಕೆಳಂಗೆ ನಿಲ್ಕಿತ್ತು. ಅದರ ಹಿಂದಂದ ಬಲಗೈ ಬಂಟ ಕಿಷ್ಣಪ್ಪನೂ ಇದ್ದು. ಇಬ್ರುದೆ ಗುಟ್ಟಿಲಿ ಮಾತಾಡಿಕೊಂಡಾಂಗೆ ಎಂತದೋ ಮಾತಾಡಿಕೊಂಡವು.
“ಏನಾ…? ಯಾರಾದ್ರೂ ಕೆಳಗೆ ಇಳ್ದಿದ್ದಾರಾ?” ಮರಿಯಪ್ಪ ಕೈಲಿ ಲಾಟಿ ಹಿಡ್ಕೊಂಡು ಕಿಟ್ಟಣ್ಣನ ಹತ್ತರೆ ಕೇಳಿತ್ತು. ಕಿಟ್ಟಣ್ಣ ‘ಇಲ್ಲೆ’ ಹೇಳಿ ತಲೆ ಅಡ್ಡಡ್ಡ ಆಡ್ಸಿದ°.
“ಸುರುವಿಗೆ ಲಿಂಗಪ್ಪ ಒದ್ಸರ್ತಿ ಇಳ್ದಿದಾನೆ….” ಎಂಕಣ್ಣ ಹೇಳಿದ°.
“ಯಾಕೆ ಇಳ್ದದ್ದು?” ಕಣ್ಣು ಕೆಂಪು ಮಾಡಿ ಮರಿಯಪ್ಪ ಕೇಳಿತ್ತು.
“ಅವ್ನೆಂತ ಮುಟ್ಳಿಲ್ಲ… ಯಾರೂಂತ ನೋಡ್ಳಿಕ್ಕೆ ಮಾತ್ರ ಇಳ್ದದ್ದು…” ಎಂಕಣ್ಣ ಹೆದರಿಕೊಂಡೇ ಹೇಳಿದ°.
“ಹೂಂ…” ಹೇಳಿತ್ತು ಮರಿಯಪ್ಪ.
“ಫೋರ್ಟ್ವೆಂಟಿ… ಕೆಳಗೆ ಇಳಿ… ನೋಡುವ ಎಂತದೂಂತ…” ಕಿಷ್ಣಪ್ಪಂಗೆ ಹೇಳಿತ್ತು. ಈ ಪೋಲಿಸುಗೊಕ್ಕೆ ಹೆಸರು ಇರ್ತಿಲ್ಲೆಡ. ನಂಬರು ಇಪ್ಪದಡ. ಕಿಷ್ಣಪ್ಪಂಗೆ “420” ಹೇಳ್ತ ನಂಬರು ಇಪ್ಪದು. ಅದರ ಆ ನಂಬರಿಂದ ದಿನಿಗುವಗ ಒಳುದ ಪೋಲೀಸುಗ ಮೀಸೆ ಅಡೀಂದ ಇದಕ್ಕೆ ಗೊಂತಾಗದ್ದ ಹಾಂಗೆ ಕಿಸಿ ಕಿಸಿ ನೆಗೆ ಮಾಡ್ತವು. ಆ ನಂಬರಿಂಗೆ ಎಂತದೋ ಬೇರೆ ಅರ್ತ ಇದ್ದಡ. ಅದಕ್ಕೆ ಕಿರಿ ಕಿರಿ ಅಪ್ಪದು ಇದ್ದು ಆ ನಂಬರಿಂದ. ಆದರೆ ಎಂತ ಮಾಡ್ಳಾವುತ್ತು? ಗವರ್ಮೆಂಟು ಕೊಟ್ಟ ನಂಬರು ಅದು. ಅದರ ಕೆಂಪು ಟೊಪ್ಪಿಯ ಕರೇಲಿ ಆ ನಂಬರು ಬರಕ್ಕೊಂಡು ಇದ್ದು.
ಸಬ್ಬಿನಿಸ್ಪೇಟನ ಓರ್ಡರು…. ಮಾಡೆಕ್ಕನ್ನೆ… ಕಿಷ್ಣಪ್ಪ ಮೆಲ್ಲಂಗೆ ಇಳಿವಲೆ ಕಾಲು ಮಡುಗಿತ್ತು. ಅದುವೋ ಬೂಟ್ಸು ಕಾಲು… ಗಟ್ಟಿ ನಿಂದಿದಿಲ್ಲೆ… ಬಸಕ್ಕ ಜಾರಿತ್ತು… ಪುಣ್ಯಕ್ಕೆ ಕೂಡ್ಳೆ ಕೈಗೆ ಸಿಕ್ಕಿದ ಒಂದು ಬೇರು ಹಿಡ್ಕೊಂಡ ಕಾರಣ ಆತು… ಇಲ್ಲದ್ರೆ ಕೆಳ ತ್ಯಾಂಪನ ಒಟ್ಟಿಂಗೆ ಕಿಷ್ಣಪ್ಪಂದೆ…
ಪುನಾ ಇತ್ಲಾಗಿ ಬಂದು ಒಂದು ಅಡಕ್ಕೆ ಮರದ ಬುಡಲ್ಲಿ ಕೂದತ್ತು… ಬೂಡ್ಸಿನ ಬಿಡುಸಿ, ತೆಗದು ಮಡುಗಿ ಇಳಿವಾ ಹೇಳಿ… ಶನಿ ಶನಿ ಹೇಳಿ ಅದು ಕೂದ್ದು ಒಂದು ಬೆದುರಿನ ಕಣೆಯ ಮೇಲೆ. ಬೇಲಿ ಕಟ್ಳೆ ತಂದ ಬೆದುರಿನ ಒಂದು ಕಣೆ ಅಲ್ಲಿ ಇತ್ತದರ ಕಿಷ್ಣಪ್ಪ ನೋಡಿದ್ದಿಲ್ಲೆ. ಅರ್ದ ಇಂಚಿನ ಬೆದುರು ಮುಳ್ಳು ಕುಂಡೆಗೆ ಕುತ್ತೆಕ್ಕಾ… ದಪ್ಪದ ಚಡ್ಡಿಯ ದಾಂಟಿ ಕುಂಡೆಗೆ ಕುತ್ತಿದ್ದು. ಹಾಂಗಾಗಿ ಜಾಸ್ತಿ ಕಂತಿದ್ದಿಲ್ಲೆ. ದಬುಕ್ಕ ಹಾರಿ ಎದ್ದತ್ತು. “ಯಾರ್ರೀ ಇದು ಮುಳ್ಳು ಹಾಕಿದ್ದು ಇಲ್ಲಿ?” ಹೇಳಿ ಕಿರ್ಚಿತ್ತು. ಎಂತ ಆರಾದ್ರು ಬೇಕೂಳಿ ಅಲ್ಲಿ ಮುಳ್ಳು ತಂದು ಹಾಕಿದ್ದಾ? ಇದುವೇ ಅಲ್ಲಿ ಹೋಗಿ ಕೂದ್ದಲ್ಲದಾ?
ಮತ್ತೆ ಇನ್ನೊಂದು ಹೊಡೆಲಿ ಸರೀ ನೋಡಿ, ಕೂದು, ಬೂಡ್ಸು ತೆಗದು ಮಡುಗಿ, ಮೆಲ್ಲಂಗೆ ಗುರ್ಮೆಲಿ ಇಳುದತ್ತು. ಕೆಳ ಇಳುದು ಒಂದು ಎರಡು ನಿಮಿಷ ಆತು.
ಒಳಂದ ಅದರ ಸ್ವರ ಕೇಳಿತ್ತು…”ಸಾ…ರ್..”
ಮರಿಯಪ್ಪ ಗುರ್ಮೆ ಕರೆಲಿ ನಿಂದು ಬಗ್ಗಿ ಕೇಳಿತ್ತು..”ಏನು? ಎಂತಾಗ್ತಿದೆ ಅಲ್ಲಿ?”
“ಸಾರ್… ನೀವುಸಾ ಕೆಳಗೆ ಬನ್ನಿ..”
“ಇನ್ನೊಬ್ನನ್ನು ಕಳಿಸ್ತೇನೆ ಇರು….”
“ಇಲ್ಲ ಸಾರ್… ನೀವೇ ಇಳ್ದು ಬನ್ನಿ…ಇಂಪೋರ್ಟೆಂಟ್..” ತೊಂದರೆ ಇಲ್ಲೆ, ಕಿಷ್ಣಪ್ಪಂಗೆ ಇಂಗ್ಳೀಷು ಬತ್ತು. ಬಾರದ್ದೆಂತ? ಎಸ್ಸೆಲ್ಸಿ ಆಗಿ ಅಲ್ಲದಾ ಪೋಲೀಸು ಕೆಲಸ ಸಿಕ್ಕಿದ್ದು…?
ಸಬ್ಬಿನಿಸ್ಪೇಟ ಮರಿಯಪ್ಪಂಗೆ ಬೆಶಿ ಆತು… ಆದರೆ ಅದಕ್ಕೆ ಅಂದಾಜಿ ಇದ್ದು ಕಿಷ್ಣಪ್ಪ ಹಾಂಗೆ ಹೇಳೆಕ್ಕರೆ ಎಂತದೋ ಇದ್ದು. ಪುನಾ ಗುರ್ಮೆಯೊಳ ಬಗ್ಗಿ ನೋಡಿತ್ತು. ರಜ ರಜಾ ನಾತ ಬಪ್ಪಲೆ ಸುರು ಆಯಿದು. ಬಾರದ್ದೆ ಇಕ್ಕ? ಹೆಣ ಅಲಿ ಕೆಳ ಇಪ್ಪದು ಹೊತ್ತೆಷ್ಟಾತು? ಸಬ್ಬಿನಿಸ್ಪೇಟ ಮರಿಯಪ್ಪ ಬೂಡ್ಸು ತೆಗದು ಮಡುಗಿತ್ತು. ಗುರ್ಮೆ ಹತ್ತರಂಗೆ ಬಂದು ಆರೂ ಬಗ್ಗಿ ನೋಡದ್ದ ಹಾಂಗೆ ನೋಡಿಗೊಂಬಲೆ ಒಳುದ ಎರಡು ಪೋಲಿಸುಗೊಕ್ಕೆ ತಾಕೀತು ಮಾಡಿತ್ತು. ಮತ್ತೆ ಮೆಲ್ಲಂಗೆ ಗುರ್ಮೆಯೊಳ ಇಳುತ್ತು…
ಗುರ್ಮೆಯೊಳ ಸಬ್ಬಿನಿಸ್ಪೇಟಂದೂ, ಹೆಡ್ಡು ಕಾನಿಷ್ಟೆಬಿಲ್ಲಿಂದೂ ಎಂತ ಪಿತೂರಿ? ಬಪ್ಪವಾರ ನೋಡುವೊ ಆಗದಾ?

8 thoughts on “ಚೈನು- ಭಾಗ ಐದರ ಮುಂದುವರುದ ಭಾಗ

  1. ಈ ಚೈನು ಕತೆ ಸುರುವಾದ ಲಾಗಯಿತು , ರೂಪಾಯಿ ಅತ್ಲಾಗಿ ಕುಸುದು ಕುಸುದು ಗುರ್ಮಗೆ ಬೀಳ್ತನ್ನೆ !!

    1. ಇದು ಸರಿ ಆತು.
      ಮಾ೦ಬಾಡಿಯಣ್ಣ ಬರೆದ ನಾಟಕದ ೨ನೇ ಕ೦ತಿಲಿಯೆ ;
      ಶಮ್ಮಿ ಮದುವೆಗೆ ಒಪ್ಪಿಕೊ೦ಡಿದ್ದರೆ,
      ಇನ್ನು ೪ಪವನು ಜಾಸ್ತಿ ತೆಕ್ಕೊ೦ಬಲಾವುತ್ತಿತು
      ಹೇಳಿ೦ದಾಗೆ ,ಅಲ್ಲದಾ?

    2. ಯೇ ಭಾಗ್ಯಕ್ಕಾ.. ಚೈನು ಕತೆಗೂ ರೂಪಾಯಿ ಕುಸಿತಕ್ಕೂ ಎ೦ತು ಸ೦ಬ೦ಧ ಇಲ್ಲೆ ಆತಾ.. ಹೊಸ ಸೊಸೆ ಮನೆ ಹೊಕ್ಕದೇ ಹೊಕ್ಕದು, ಪುಚ್ಚೆ ಸತ್ತತ್ತು ಹೇಳ್ತಷ್ಟೆ ಸ೦ಬ೦ಧ ಇಪ್ಪದು, ಈ ಕತೆಗೂ, ರೂಪಾಯಿ ಕುಸಿತಕ್ಕೂ.. 😉 🙂
      ಶಾಮಣ್ಣಾ.. ಕತೆ ಟೋಪ್ ಕ್ಲಾಸ್ ಆಗಿ ಹೋವ್ತಾ ಇದ್ದು, ಅಭಿನ೦ದುಸಲೆ ಶಬ್ದ೦ಗೊ ಸಿಕ್ಕುತ್ತಾ ಇಲ್ಲೆ..

      1. ಗಣೇಶಣ್ಣಾ,
        ಶ್ಯಾಮಣ್ಣ ಗಟ್ಟಿ ಚೈನು ಮಾಡುತ್ತ ಅ೦ದಾಜಿ ಮಾಡಿದ ಮತ್ತೆಯೇ ಚಿನ್ನಕ್ಕೆ ಬೆಲೆ ಏರಿತ್ತು.ರೂಪಾಯಿಯ ಬೆಲೆ ಕುಸುದತ್ತು. ಇದು ಬೆಶಿಮಟ್ಟುದು ಭಾರತಲ್ಲಿಪ್ಪೊರಿ೦ಗೆ ಅಲ್ಲದಾ? ಅದರಲ್ಲಿಯೂ ಹೆಮ್ಮಕ್ಕೊಗೆ ಅಲ್ಲದಾ? ನಿ೦ಗೊ ಇಪ್ಪ ಊರಿಲಿ ಹೊಸ ಸೊಸೆ ಆದರೂ, ಪುಚ್ಹೆ ಆದರೂ ವ್ಯತ್ಯಾಸ ಬಕ್ಕೊ? 😉

  2. ಸರಿ..ಸರಿ. ಈಗ ಗೊಂತಾತು.

  3. ಒಳ ಹಂದಿ ಇದ್ದು, ಬೆಂದಿ ಮಾಡಿ ತಿಂತವೊ ಎಂತ ಕತೆ ???

  4. [ಅವಂಗೆ ತಾಗಿದ ಹಾಂಗೆ ಕಿಷ್ಣಪ್ಪ ಕೂದತ್ತು.] [ಎಂಕಣ್ಣ ನೋಡಿಕೊಂಡಿದ್ದ ಹಾಂಗೆ ಜೀಪು ] [ಎಂತ ಎಲ್ಲ ತಿನ್ತವೋ ಈ ಶೂದ್ರುಗ] [ಪುಣ್ಯ ಕೈ ಬಿಟ್ಟಿದಿಲ್ಲೆ ಕಾಣ್ತು, ಸೀತಾರಾಮಣ್ಣ ಬಂಡಸಾಲೆಲೇ ಇದ್ದ.] [ಒಬ್ಬೊಬ್ಬನೆ ಅಲ್ಲಿಂದ ಚಾಂಬುಲೆ ಸುರು ಮಾಡಿದವು] [ಅದುವೋ ಬೂಟ್ಸು ಕಾಲು…] – ಉಹ್! ಡೈರಕ್ಷನ್ ಸೂಪರ್ ಆಯ್ದಪ್ಪ. ಇದು ಪುಸ್ತಕ ರೂಪಲ್ಲಿ ಅಲ್ಲ, ಧಾರಿವಾಯಿಯೋ, ಸಿನೆಮಾವೋ ಆರಾರು ಮಾಡಿರೆ ಮದಾಲು ಕೂದು ನೋಡೆಕೆನಗೆ ಇದರ
    ” ಮತ್ತೆಂತ? ನಿಮ್ಮ ಕೆಲ್ಸಕ್ಕೇ ನಾವು ಹೊರ್ಟದ್ದು… ಕೊಡಿ ಕೊಡಿ…” ಕಿಷ್ಣಪ್ಪ ಹೇಳಿತ್ತು. – ಇದಾ ಒಂದು ಸಂಗತಿ ನೆಂಪಾತು. ಬೇಡದ್ರೂ ಹೇಳೀಕ್ಕುತೆ – ಎಂಗಳ ಪೈಕಿ ಒಬ್ಬ ಜವ್ವನಿಗ ನಟ್ಟ ಮಜ್ಜಾನ ಮನೆಲಿ ಎಲ್ಲೋರು ಒರಗ್ಯೊಂಡಿಪ್ಪಗ ಚಾವಡಿಲಿ ನಿಂದುಗೊಂಡು ಸಣ್ಣ ಸ್ಟೂಲ್ ಮಡಿಗಿ ಮೇಗೆ ಇಪ್ಪ ಫೇನಿಂಗೂ ಅವನ ಕೊರಳಿಂಗೂ ಬಳ್ಲಿಕಟ್ಟಿ ಸ್ಟೂಲ ಅತ್ತೆ ತಟ್ಟಿ ಬಿಟ್ಟ°. ಒಳ ಮನಿಕ್ಕೊಂಡಿತ್ತಿದ್ದ ಅಬ್ಬೆ ಹೆರಬಂದು ನೋಡುವಾಗ ಕತೆ ಎಲ್ಲ ಮುಗುದಾಗಿತ್ತು. ಸರಿ, ವರ್ತಮಾನ ನವಗೂ ಎತ್ತಿತ್ತು. ನಾವು ಹೋತು. ಮತ್ತೆ ಶ್ಯಾಮಣ್ಣ ಹೇದಾಂಗೆ ಪೋಲೀಸು ಟೇಶನಿಂಗೆ ಹೋತು. ಕೃಷ್ಣಪ್ಪ ಕಂಪ್ಲೇಟು ಬರಕ್ಕೊಂಡತ್ತು. ಚಾಯೆ ಬೇಕೋ ಕೇಳಿತ್ತು, ಎಂಗೊಗೆ ಬೇಡದ್ರೂ ಅದಕ್ಕೆ ಬೇಕು. ಹತ್ರಾಣ ಗೂಡಂಗಡಿ ಪೊರ್ಬು ಆಣು ೩ ಚಾಯ ತಂದು ಕೊಟ್ಟತ್ತು, ಚಾಯ ಕುಡುದು ರಜ ಹೊತ್ತಪ್ಪಗ ಗ್ಲಾಸು ತೆಕ್ಕೊಂಡೋಪಲೆ ಬಂತು. ಕೃಷ್ಣಪ್ಪ ಆ ಆಣಿನತ್ರೆ ಕೇಟತ್ತು. ಮದ್ಲಾಣದ್ದು ಎಟ್ಟು ಬಾಕಿ ಇದ್ದೋ. ಆಣು ಹೇಳಿತ್ತು. ೧೩೫/- . ಎಂಗಳತ್ರೆ ಕೊಡಿ ಬಟ್ರೆ ಹೇಳಿತ್ತು. ಕೃಷ್ಣಪ್ಪ. ಎಂತ ಮಾಡುಸ್ಸು…. ೩ ಚಾಯಕ್ಕೆ ೧೫೦/- ಕೊಟ್ಯೋ° ತಳಿಯದ್ದೆ ಮತ್ತೆ 🙁
    ಸಮ., ಗುರ್ಮಂಗೆ ಇಳುದವು ಎಂತ ಮಾತಾಡಿಗೊಂಡವೋ.. ಉಮ್ಮ ಅದು ಮೇಗೆ ಬರೇಕ್ಕಾರೆ ಒಂದು ವಾರ ಕಾಯೇಕ್ಕಪ್ಪೋ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×