Oppanna.com

” ತಾನೊಂದು ಬಗೆದರೆ…..” {2014ನೇ ಸಾಲಿನ ಕೊಡಗಿನ ಗೌರಮ್ಮ ಕತಾ ಸ್ಪರ್ಧೆಲಿ ಮೂರನೆ ಬಹುಮಾನ ಬಂದ ಕತೆ}ಬರೆದೊವು ಶ್ರೀಮತಿ ಪ್ರಸನ್ನಾ,ವಿ.ಚೆಕ್ಕೆಮನೆ}

ಬರದೋರು :   ವಿಜಯತ್ತೆ    on   04/02/2015    16 ಒಪ್ಪಂಗೊ

prasanna     

 ಲೇಖಕಿಃ-ಶ್ರೀಮತಿ ಪ್ರಸನ್ನ,ವಿ. ಚೆಕ್ಕೆಮನೆ

ತಾನೊಂದು ಬಗೆದರೆ…  { 2014ನೇ ಸಾಲಿನ  ಕೊಡಗಿನ ಗೌರಮ್ಮ ಕಥಾಸ್ಪರ್ಧೆಲಿ ಮೂರನೆ ಬಹುಮಾನಿತ ಕತೆ}

 

 

ತೋಟಂದ ಬಂದ ಗೆಣಪ್ಪ ಬಾಜಿರಕಂಬದ ಹತ್ತರೆಯಿದ್ದ ಎಲೆತಟ್ಟೆಯ ಹತ್ರಂಗೆಳದು ಅದರಿಂದ ಎಲೆ ತೆಗದು ಅಡಕ್ಕೆ ಹೋಳಿದ್ದಾಳಿ ನೋಡಿಂಡಿಪ್ಪಗಳೇ ಅವನ ಹೆಂಡತ್ತಿ ಸುಮತಿ, ಹತ್ರಂಗೆ ಬಂತು.

“ಎಂತಕೆ ಬಂದದು?”  ಹೇಳುವಾಂಗೆ ಅದರನ್ನೇ ನೋಡಿದ   ಅವ೦;

“ಇದಾ ನಿಂಗೊ ಬಾಯಿಗೆ ಎಲೆ ತುಂಬುಸುವ ಮೊದಲೇ ಎನಗೆ ಉತ್ತರ ಹೇಳೆಕ್ಕು ನಿನ್ನೆ ಆನು ಹೇಳಿದ್ದಕ್ಕೆ ಎಂತ ಮಾಡಿದಿ?”

ಅವರ ಮಗ ಗಣೇಶಂಗೆ ಉಪ್ನಾನ ಗೌಜಿಗೆ ಮಾಡೆಕೂಳಿ ಸುಮತಿಗೆ ಆಶೆಯಾದರೆ; ಗೆಣಪ್ಪಂಗೆ ಹಾಂಗಲ್ಲ. ಧಾರ್ಮಿಕ ಕ್ರಿಯೆಗೊಲ್ಲ ಸರಿಯಾಗಿ ಆಯೆಕು. ಅದು ಬಿಟ್ಟು ಐಸ್ಕ್ರೀಂ, ಪಲಾವು.., ಅದೂ –ಇದೂ..ಳಿ ದರ್ಬಾರು ಮಾಡ್ಳೆ ಅವಂಗೆ ಕೊಶಿಯಿಲ್ಲೆ. ಈ ವಿಷಯಲ್ಲಿ  ಅವಕ್ಕಿಬ್ರಿಂಗೂ ಕೆಲವು ದಿನಂದಲೇ ರಜಾ ಮನಸ್ತಾಪ.

“ಎಂತರ ಹೇಳುದು?. ಆನು ಮೊನ್ನೆ ಹೇಳಿದ್ದನ್ನೆ ಇಂದುದೆ ಹೇಳುದು.ನಮ್ಮತ್ರೆ ಎಷ್ಟಿದ್ದು ನೋಡಿ ಅದರ ಕರ್ಚು ಮಾಡೆಕು. ಅಂತೇ ಆರೋ ದರ್ಬಾರು ಮಾಡುತ್ತೊವೂಳಿ ನಾವುದೆ ಮಾಡ್ಳಾಗ.”

“ ಹ್ಹೋ ಸುರುವಾತು ನಿಂಗಳ ಉಪದೇಶ. ಏವಗಳೂ ಹೀಂಗೇ ನಿಂಗೊ!. ಆನೆಂತಾರು ಹೇಳಿರೆ ಮಾಂತ್ರ ಆಗದ್ದದು. ಆ ಶಾರದೆ ಕೂಡಾ ಅದರ ಮಗನ ಉಪ್ನಾನ ಎಷ್ಟು ಗಡ್ದಿಲ್ಲಿ   ಮಾಡಿದ್ದು  ನೆಂಪಿದ್ದಾ?. ಎರಡು ಸ್ವೀಟು, ಎರಡು ಖಾರ, ಅದೆಂತದೋ ಘೀರೈಸಾಡ!.ಮತ್ತೆ ಉಂಡಿಕ್ಕಿ ಐಸ್ ಕ್ರೀಮ್, ಮುಸುಂಬಿ…ಅಬ್ಬಾ!. ಮನೆ ಜಾಲಿಲ್ಲಿ ಎಷ್ಟು ದೊಡ್ಡ ಒಯ್ಯಾಪ್ರೆ ಹಾಕಿದ್ದು. ಆದಿನ   ಅದು ಸುತ್ತಿದ ಸೀರಗೆ ಏಳು ಸಾವಿರ ರೂಪಾಯಿ ಇದ್ದಾಡ. ಉದಿಯಪ್ಪಗ ಬ್ಯೂಟಿ ಪಾರ್ಲರಿಂಗೆ ಹೋಗಿ ಹೇಂಗೆ ಆಯತ ಮಾಡ್ಸೆಂಡು ಬಯಿಂದು!. ಆದಿನ ಅದರ ಸೇಳೆ ಗ್ರೇಶುವಾಗ ಎನಗೀಗಳು ಮೈ ಉರಿತ್ತು. ನಾವುದೆ ಅದಕ್ಕಿಂತ ಕಮ್ಮಿಯೇನಲ್ಲಾಳಿ ತೋರ್ಸದ್ರೆ ಹೇಂಗೆ!?.”

ಗೆಣಪ್ಪಂಗೆ ಅದರ ಮಾತು ಕೇಳಿ ನೆಗೆ ಬಂತು. ’ಹೆಮ್ಮಕ್ಕಳ ಬುದ್ಧಿ ಮೊಳಪ್ಪಿಂದ ಕೆಳ’ ಹೇದು ಹೆರಿಯೊವು ಹೇಳುದು ಹೀಂಗಿರ್ತವರ ಮಾತು ಕೇಳ್ಯಾಗಿಕ್ಕು. ಇದಕ್ಕೆ ರಜಾವು ಬುದ್ಧಿ ಇಲ್ಲದ್ದಾತನ್ನೆ!. ಊರ್ಲಿ ಆರೋ ಏನೋ ಮಾಡ್ತವೂಳಿ ನಾವುದೆ ಮಾಡ್ಳೆ ಹೆರಟ್ರಕ್ಕೋ, ಮಗಂಗೆ  ಉಪ್ನಾನ ಮಾಂತ್ರ ಮಾಡೀರೆ ಸಾಕಾ? ಅವನ ಕಲಿಶೆಡದಾ? ಒಟ್ಟಿಂಗೆ ಮಗಳನ್ನೂ ಕಲಿಶೆಕ್ಕು.ಒಳ್ಳೆಕುಳವಾರು ನೋಡಿ ಮದುವೆ ಮಾಡಿಕೊಡೆಕು. ಈ ಬೋದಾಳಂಗೆ ಅದರೆಲ್ಲ ಹೇಳಿರೆ ಅರ್ಥವೂ ಆಗ. ಅಂದರೂ ಹೇಳಿ ನೋಡಿದ.

“ಅವಕ್ಕೆಲ್ಲ ಪೈಸಿನ ಬೆಶಿ ಗೊಂತಿಲ್ಲೆ.ನಾವು ಹಾಂಗಲ್ಲ, ನಮ್ಮ ಜಾಗೆಲಿ ಗೈದರೆ ಮಾಂತ್ರ ಅಕ್ಕಷ್ಟೆ, ಗೌರ್ಮೆಂಟ್ ಸಂಬಳ ಇದ್ದರೆ ತಲೆಬೆಶಿ ಇಲ್ಲೆ. ಮಕ್ಕಳ ಕಲಿಶೆಡದಾ? ’ಭೂತಕ್ಕೆ ಮರ್ಲೂಳಿ ಮಾಡಕ್ಕೂ ಮರ್ಲಪ್ಪಲಾಗ’ ಹೇಳಿದ್ದಕ್ಕಾರೆ ಕೇಳು. ಗಡ್ದು ಮಾಡ್ಳೆ ಎನ್ನೆತ್ರೆ ಪೈಸೆಯೂ ಇಲ್ಲೆ.”

ಸುಮತಿ ಅಂದು ಗೆಂಡನತ್ರೆ ಮಾತಾಡ್ಳೆ ಬೇಕಾದ ತಯಾರಿ ಮಾಡಿಯೊಂಡೇ ಬಯಿಂದು.ಎಂತ ಮಾಡಿರೂ ಅವರ ನೆರೆಕರೆಲಿಪ್ಪ ಶಾರದೆಯ ಮಗನ ಉಪ್ನಾನಂದ ಗಡದ್ದಾಯೆಕ್ಕು ನಮ್ಮ ಉಪ್ನಾನಳಿ ಅದಕ್ಕಿಪ್ಪದು.ಶಾರದಗೆ   ತೋಟ ಹೆಚ್ಚಿಲ್ಲದ್ದರೂ ;ಅದರ ಗೆಂಡ ಗೌರ್ಮೆಂಟ್ ಆಫೀಸಿಲ್ಲಿ ಕ್ಲರ್ಕ್. ಅವಕ್ಕೆ ಒಬ್ಬನೇ ಮಗ ಇಪ್ಪದೂದೆ!.ಅದೆಲ್ಲ ಸುಮತಿಗೆ ಲೆಕ್ಕಯಿಲ್ಲೆ.ಆಯೆಕ್ಕಾದ ಹಾಂಗೆ ಆಗದ್ರೆ ಅದಕ್ಕೆ ಪಿಸ್ರು ಬಕ್ಕು.ಸೀರೆಯ ಸೆರಗು ಸೊಂಟಕ್ಕೆ ಸುತ್ತಿ ಗೆಂಡನ ಹತ್ರೆ ಬಂದು ನಿಂದತ್ತು.

“ಆನೆಂತ ಹೇಳೀರೂ ನಿಂಗೊ ಅರ್ಥಮಾಡ್ಳಿಲ್ಲೆ.  ’ಆನೆ ಕುಂಡಗೆ ತಗತ್ತೆ ಕೋಲಿಲ್ಲಿ ಕುತ್ತಿದ ಹಾಂಗೆ’ ಅದಕ್ಕೆ ಬೆಲೆಯೇಇಲ್ಲೆ. ಗಣೇಶ ನಿಂಗೊಗೆ ಮಾಂತ್ರ ಮಗ ಅಲ್ಲ. ಮಗಳ ಕೊಡ್ಳೆ ಈಗಳೇ ಅಂಬ್ರೇಪೆಂತಾ?.ಕೂಸುಗಳೇ ಕಮ್ಮಿ ಇಪ್ಪ ಈಗಾಣ ಕಾಲಲ್ಲಿ ಮಾಣ್ಯಂಗಳೇ ಎರಡೂ ಹೊಡೆ ಖರ್ಚಿಹಾಕಿ ಮದ್ವೆಯೂ ಆವುತ್ತವು.ಹಾಂಗಿಪ್ಪಗ ನಿಂಗೊ ಅಂತೇ ಏಕಾರೂ ಹೇಳಿ ಎನ್ನ…ಎನ್ನ…”

ಹೇಳಿಂಡೇ ಎಕ್ಕಿ ಎಕ್ಕಿ ಕೂಗಲೆ ಸುರುಮಾಡಿತ್ತದು.ಗೆಣಪ್ಪಂಗೆ ಈಗ ನಿಜವಾಗಿಯೂ ಕೋಪ ಬಂತು.ಇದರ ಹೇಳಿ ನೇರ್ಪಮಾಡ್ಳೆ ಕಷ್ಟ ಇದ್ದು.ಅಂದರೂ ಅದು ಹೇಳಿದಾಂಗಿಪ್ಪ ದರ್ಬಾರುಮಾಡುವಷ್ಟು ಪೈಸೆ ಅವನತ್ರೆ ಇಲ್ಲಲೂ ಇಲ್ಲೆ. ಸುಮತಿ ಎಲ್ಲಾ ವಿಷ್ಯಲ್ಲೂ ಹಾಂಗೇ. ಎಲ್ಯಾರು ಜೆಂಬಾರಕ್ಕೆ ಹೋಗಿಂಡು ಬಂದರೆ ಅಲ್ಲಿಪ್ಪ ಹೆಮ್ಮಕ್ಕೊ ಮಾತಾಡಿದ್ದರನ್ನೇ ತಲೆಲಿ ತುಂಬುಸೆಂಡು ಬಕ್ಕು. ಅವರ ಮನೆಲಿ ಟಿ.ವಿ,ಫ್ರಿಜ್ಜು,ವಸ್ತ್ರತೊಳವ ಮಿಶನು ಹೀಂಗಿಪ್ಪದೆಲ್ಲ ತೆಗದ್ದದೇ ಸುಮತಿಯ ಹಠಂದ. ’ತಲೆ ನೋಡದ್ದೆ ಎಣ್ಣೆ ಕಿಟ್ಳಾಗ’ ಳಿ ಗೆಣಪ್ಪ ಹೇಳಿರೂ ಅದು ಕೇಳ.ಏವಗಳೂ ಮನೆಲಿ ಲಡಾಯಿ ಅಪ್ಪದು ಅವಂಗೆ ಕೊಶಿಯಾವ್ತಿಲ್ಲೆ.ಅಂದರೂ ಈ ಸರ್ತಿ ಅವಂಗೆ ಹೇಳದ್ದೆ ಬೇರೆ ದಾರಿಯೇ ಇತ್ತಿದ್ದಿಲ್ಲೆ.ಎರಡು ತಿಂಗಳು ಮೊದಲೆ ಸುಮತಿ ಏವದೋ   ಅನುಪತ್ಯಕ್ಕೆ ಹೋಗಿಂಡು ಬಂದು ಆರದ್ದೋ ಕೊರಳಿಲ್ಲಿದ್ದಾಂಗಿಪ್ಪ ಮುತ್ತಿನಮಾಲೆ ಮಾಡ್ಸೆಕ್ಕೂಳಿ ಹಠಹಿಡುದು ಮಾಡ್ಸಿಗೊಂಡಿದು.ಈಗಳೂ ಹಾಂಗೇ ಮಾಡ್ಸೆಕಕ್ಕೂಳಿ ಅವಂಗೆ ಗೊಂತಿದ್ದು. ಅಂದರೂ ಪೈಸೆಯಿಲ್ಲದ್ರೆ ಅವ೦ ಎಂತ ಮಾಡುದು? ಅದರನ್ನೇ ಹೇಳಿ ನೋಡಿದಂ.

“ನೀನು ಹೀಂಗೆ ಕೂಗಿಯೆಲ್ಲ ಎನ್ನ ಹೆದರ್ಸೆಕೂಳಿಯಿಲ್ಲೆ. ಇಲ್ಲದ್ದ ಪೈಸೆಯ ಆನೆಲ್ಲಿಂದ ತರ್ಲಿ? ನಿನ್ನಪ್ಪನ ಮನೆಂದ ತತ್ತರೆ ತಾ. ನಾವು ಮಗನ ಉಪ್ನಾನ ಗಡ್ದಿಲ್ಲಿ ಮಾಡುವೊಂ.”

ಅಪ್ಪನ ಮನೆ ಶುದ್ದಿಯೆತ್ತಿಯಪ್ಪಗ ಸುಮತಿಗೆ ಕಂಡಾಬಟ್ಟೆ ಪಿಸ್ರು ಬಂತು.

“ನಿಂಗೊ ಎನ್ನ ಅಪ್ಪನ ಹೇಳೆಕ್ಕೂಳಿಲ್ಲೆ. ಎನ್ನ ಅಪ್ಪಂಗೆ ಅಂದೇ ನಿಂಗೊಗೆ ಎನ್ನ ಕೊಡ್ಳೆ ಮನಸ್ಸಿತ್ತಿದ್ದಿಲ್ಲೆ. ಅಂದರೂ ಆನೆ ಹಠ ಹಿಡುದು ಮದುವೆಯಾದ್ದು. ಎನ್ನ ಅಕ್ಕ-ತಂಗೆಯೆಲ್ಲ ನೋಡಿ ಹೇಂಗಿದ್ದೊವು. ಆನೆ ಅಂಬಗ ಅಪ್ಪನ ಮಾತು ಕೇಳ್ತಿತರೆ ಹೀಂಗಾವ್ತಿತಿಲ್ಲೆ.ನಿಂಗೊ ಇಷ್ಟು ಪಿಟ್ಟಾಸುಗೋಳಿ ಎನಗೆ ಗೊಂತಿತ್ತಿದ್ದಿಲ್ಲೆ. ಪೈಸೆ ಇಲ್ಲದ್ರೆ ಊರಿಲ್ಲಿ ಇಷ್ಟು ಬೇಂಕುಗೊ ಇಪ್ಪದೆಂತಕೆ? ಮನೆಯ ರಿಕಾರ್ಟು ಕೊಂಡೋಗಿ ಅಡವು ಮಡಗೀರೆ ಅಲ್ಲಿಂದ ಸಾಲ ಕೊಡ್ತವು. ಮತ್ತೆ ಕಟೀರಾತು.ನಾವಿನ್ನು ಬೇರೆ ಮಕ್ಕಳ ಉಪ್ನಾನ ಮಾಡ್ಳಿದ್ದಾ?.ನಿಂಗೊಗೆ ಮನಸ್ಸಿಲ್ಲದ್ರೆ ಹೇಳಿ ಆನು ಹೆರಟು ನೆಡೆತ್ತೆ.”

’ಹೆರಟು ನೆಡೆತ್ತೇಳಿ’ ಹೇಳೀರೂ ಅದೆಲ್ಲಿಗೂ ಹೋಗಾಳಿ ಅವಂಗೆ ಗೊಂತಿದ್ದು.ಅಂದರೂ ಅದರ ಮಾತಿಲ್ಲಿ ಸೋಲ್ಸುಲೆಡಿತ್ತಿಲ್ಲೆನ್ನೇಳಿ ಬೇಜಾರ್ವೂ ಆತು.

“ಸಾಲ ಮಾಡುದೂಳಿರೆ ಕೇಸರಿಬಾತು ತಿಂದಾಂಗೇಳಿ ಗ್ರೇಶೆಡ. ಅದರ ಮತ್ತೆ ಕಟ್ಟುದಾರು?.ಅದರ ಬಡ್ಡಿ?!. ನಮ್ಮ ಮಕ್ಕೊಗೆ ಪೈಸೆ ಕಟ್ಟಿಮಡುಗಲೆಡಿಯದ್ರೂ ಸಾಲದ ಹೊರೆ ಹೊರ್ಸುಲಾಗ. ಚೆಂದ ಕಂಡವರ ಅಪ್ಪಂ  ಹೇಳುವ ನಿನ್ನಾಂಗಿರ್ತವಕ್ಕೆ ಎಂತ ಹೇಳೀರೂ ಒಂದೆ.ಎಂತ ಬೇಕಾರೂ ಮಾಡು. ’ತನ್ನಿಚ್ಚಗೂ ಚಾಣಿತ್ತಲಗೂ ಮದ್ದಿಲ್ಲೇಡ’ ಹೇಳಿಕ್ಕಿ ಎಲೆತಟ್ಟೆಯ ಕರೇಂಗೆ ದೂಡಿಕ್ಕಿ ಅವಂ ಎದ್ದು ತೋಟಕ್ಕೋದಂ.

ಸುಮತಿಗೆ ಕೊಶಿಯಾತು.ಇನ್ನವಂ ಎಂತ ಹೇಳಾಳಿ ಗೊಂತಿದ್ದದಕ್ಕೆ. ಮತ್ತಾಣ ಕೆಲಸಕ್ಕೆಲ್ಲ ಅದುವೇ ಮುಂದೆ ನಿಂದತ್ತು. ಬೇಂಕಿಂಗೆ ಹೋಗಿ ಎಲ್ಲ ಮಾತಾಡಿಂಡು ಬಂತು.ಜಾಗೆಯ ರಿಕಾರ್ಟೆಲ್ಲ ಗೆಂಡನತ್ರೆ ಕೇಳಿ ತೆಕ್ಕೊಂಡೋತು.ಕಾಗದಕ್ಕೆ ದಸ್ಕತ್ತು ಹಾಕಲೆ ಮಾಂತ್ರ ಗೆಣಪ್ಪನೇ ಹೋಯೆಕ್ಕಾಗಿ ಬಂತು.

ಒಂದು ಕಂತಿನ ಪೈಸೆ ಕೈಗೆ ಸಿಕ್ಕುವದ್ದೆ ಸುಮತಿ ಅದರ ಕಾರ್ಬಾರ ಮಾಡ್ಳೆ ಸುರುಮಾಡಿತ್ತು.ಉಪ್ನಾನ ಮನೆಲೇ ಮಾಡುವದೂಳಿ ನಿಗಂಟುಮಾಡಿದಕಾರಣ ಜಾಲಿಂಗೆ ಜಾಗೆ ಸಾಲಾಳಿ ಜೆ.ಸಿ.ಬಿ ತಂದು ತಟ್ಟು ಕಡಿಶಿತ್ತು.ತಟ್ಟು ಕಡ್ಶುವಗ ಕೆಲವು ಅಡಕ್ಕೆ ಮರವೂ ಹೋತು.ಬಂಙ ಬಂದು ಸಂಕಿದ ಅಡಕ್ಕೆಮರ ಉರುಳಿಯಪ್ಪಗ ಗೆಣಪ್ಪಂಗೆ ಸಂಕಟಾತು.ಆದರೆ ಎಂತ ಹೇಳಿರೂಸುಮತಿ ಪೆದಂಬೇ ಹೇಳುಗಷ್ಟೇಳಿ ಗೊಂತಿದ್ದವಂಗೆ.ಎಲ್ಲವನ್ನೂ ನೋಡಿಂಡು ಮೂಕನಾಂಗೆ ಕೂದಂ.

ಮತ್ತೆ ಜವುಳಿ ತೆಗವಲೆ ಕೊಡೆಯಾಲಕ್ಕೆ ಹೋತು.ಬೇಕಾದ ಹಾಂಗಿರ್ತ ರಂಗಿನಸೀರೆ ಅಜಪ್ಪೆಕ್ಕಾರೆ ಅಲ್ಲಿಗೇ ಹೋಯೆಕ್ಕೂಳಿ ಅದರ ಲೆಕ್ಕ.ಸೀರೆ ಅದಕ್ಕೆ ಮಾಂತ್ರ ಅಲ್ಲದ್ದೆ ;ಅದರ ಹತ್ರಾಣ ಸಂಬಂಧದವಕ್ಕೆ,ಜೊತೆಗಾರ್ತಿಗೊಕ್ಕೆ, ಗೆಣಪ್ಪನ ಅಕ್ಕ-ತಂಗೆಕ್ಕೊಗೆ, ಅವರ ಮಕ್ಕೊಗೆ, ಹೀಂಗೆ ಅಲ್ಪಾ ಸೀರೆ ತೆಗದತ್ತು.ಆ ಜವುಳಿಯ ನೋಡಿ ಗೆಣಪ್ಪಂಗೆ ತಲೆಬೆಶಿಯಾತು.  ’ಅಲ್ಪಂಗೆ ಐಶ್ವರ್ಯ ಬಂದರೆ ನೆಡುಇರುಳು ಕೊಡೆ ಹಿಡಿಗು’ ಹೇಳುದು ಹೀಂಗಿರ್ತದಕ್ಕಾಗಿಕ್ಕೂಳಿ  ಆತವಂಗೆ. ಅವನ ಮಾತು ನೆಡೆಯದ್ದ ಕಾರಣ ಸುಮ್ಮನೆ ಎಲ್ಲವನ್ನೂ ನೋಡಿಂಡು ಕೂದಂ.

ಮತ್ತಾಣ ಕಂತಿನ ಪೈಸೆ ಬಪ್ಪಗ ಮತ್ತೆಲ್ಲ ಗೌಜಿಯೇ.ಉಪ್ನಾನಕ್ಕೆ ಆರಿಂಗೆಲ್ಲ ಹೇಳಿಕೇಳೆಕ್ಕು,ಊಟಕ್ಕೆಂತೆಲ್ಲ ಮಾಡೆಕ್ಕು,ಉಪ್ನಾನ ಕಾಗದ ಹೇಂಗೆಲ್ಲ ಪ್ರಿಂಟ್ ಮಾಡ್ಸೆಕ್ಕು …ಹೀಂಗೆ ಮನೆಲಿ ಸಂಬ್ರಮವೋ ಸಂಭ್ರಮ!.

ಹೆಂಡತ್ತಿ ಎಲ್ಲ ಮಾಡ್ತೂಳಿ ಗೆಣಪ್ಪಂಗೆ ಕೈಕಟ್ಟಿ ಕೂಪಲಾವುತ್ತೋ?. ಕೆಲವು ಏರ್ಪಾಡಿಂಗೆಲ್ಲ ಅವನೇ ತಲೆಕೊಡೆಕನ್ನೆ!.ಹಾಂಗೆ ಅಂತೂ-ಇಂತೂ ಸುಮತಿ ಗೇಶಿದಾಂಗಾತು.

ಎಂಟುಸಾವಿರ ರುಪಾಯಿ ಸೀರೆ, ಅದಕ್ಕೆ ರವಕ್ಕೆಯನ್ನೂ ಹೊಸ ನಮುನೆಲಿ ಹೊಲ್ಸಿಗೊಂಡತ್ತು.ನಾಳಂಗೆ ಬ್ರಹ್ಮಚಾರಿಯ ಅಬ್ಬೆ ಬರೀ ಪುಸ್ಕು ಸೀರೆ ಸುತ್ತಿದ್ದೂಳಿ ಊರವು ಹೇಳ್ಲಾಗನ್ನೆ!. ಸುಮತಿಯ ಆಯತ ಮಾಡ್ಲೆ ಒಂದು ಹೆಣ್ಣಿನ ಬಪ್ಪಲೆ ಹೇಳಿಯೂ ಆತು. ಎಂಟುನೂರರಿಂದ ಸಾವಿರಜೆನಕ್ಕೆ ಏರ್ಪಾಡೂಳಿ ತೀರ್ಮಾನಾತು. ಕಿಟ್ಟಿದ್ದಕೆ ಮುಟ್ಟಿದ್ದಕ್ಕೆ ನೀರಿನಾಂಗೆ ಪೈಸೆ  ಮುಗುಶುದು ಕಾಂಬಗ  ಗೆಣಪ್ಪಂಗೆ ಎದೆಯೊಳವೇ ಚುಕು-ಬುಕು ಆಗಿಂಡಿತ್ತಿದ್ದು.

ಹೇಳಿಕೆ ಹೇಳ್ಳೆ ಖುದ್ದು ಸುಮತಿಯೇ ಗೆಂಡನೊಟ್ಟಿಂಗೆ ಹೆರಟಿದು. “ಎಲ್ಲೋರು ಬರೆಕು ನವಗೂ ಗಡ್ದಿಂಗೆ ಒಂದು ಅನುಪತ್ಯ ಮಾಡ್ಳೆಡಿತ್ತೂಳಿ ಎಲ್ಲೋರಿಂಗೂ ಗೊಂತಾಯೆಕ್ಕು” .ಇದು ಅದರ ಲೆಕ್ಕಾಚಾರ.ಹೇಳಿಕೆ ಹೇಳ್ಳೆ ಹೋಪಲೇ ನಾಲ್ಕು ಸೀರೆ ತಗದ್ದದು!.ಹೋದಲ್ಲೆಲ್ಲ  ಆಷ್ಟ್ರುಪಾಯಿ ಸೀರೆ ತೆಗದೆ, ಅವಕ್ಕೆ ಕೊಟ್ಟಿದೆ,ಇವಕ್ಕೆ ಕೊಟ್ಟಿದೇಳಿ ಪೋರ್ಸುದೆ ಕೊಚ್ಚಿತ್ತು.

ಇದಕ್ಕೆ ಹಾಂಕಾರ!  ’ಗೆಣಪ್ಪ ಮೂರುಮೊಳ ನೈವಗ ಇದು ಆರುಮೊಳ ಹರಿತ್ತು’ ಳಿ  ಅದರ ಹಿಂದದಲೇ ನೆರೆಕರೆವು,ನೆಂಟ್ರೆಲ್ಲ ನೆಗೆ ಮಾಡ್ತವೂಳಿ ಅದಕ್ಕೆ ಗೊಂತಾಯಿದೇ ಇಲ್ಲೆ!.ಊಟಕ್ಕು ಹಾಂಗೆ ಗಮ್ಮತ್ತಿನ ಏರ್ಪಾಡು!.ಉದಿಯಪ್ಪಗ ಕಾಫಿಗೆ ಇಡ್ಲಿ,ಸಾಂಬಾರೆಲ್ಲ ಹಳತ್ತಾತು.ನಾವು ಚಪಾತಿ,ಗಸಿ ಮಾಡುವೊಂ.ಇಲ್ಲದ್ರೆ ಉದ್ದಿನ ದೋಸೆಯೂ ಅಕ್ಕು.ಬಟಾಟೆ ಹಲ್ವವುದೆ ಅಂಬೊಡೆಯೂ ಸಾಕು.ಮದ್ಯಾಹ್ನ ಊಟಾಕ್ಕೆ ಎರಡುತಾಳು, ಅವಿಲು,ಮೆಣಸ್ಕಾಯಿ,ಕೋಸಂಬ್ರಿ,ಸಾರು,ಸಾಂಬಾರು, ಮೇಲಾರ ಅಲ್ಲದ್ದೆ ಪಲಾವು,ಮೂರು ಸ್ವೀಟು,ಮೂರು ಖಾರ,ಉಂಡಮತ್ತೆ ಐಸ್ಕ್ರೀಮಿನೊಟ್ಟಿಂಗೆ ಬೆಶಿ-ಬೆಶಿ ಕ್ಯಾರೆಟ್ ಹಲ್ವವುದೆ!.ಇದೆಲ್ಲ ಏರ್ಪ್ಪಾಡು ಸುಮತಿದು

“ಈ ಐಸ್ಕ್ರೀಂ, ಅದೂ ಇದೂ ಮಾಡುದಕ್ಕಿಂತ ನವಗೆ ಸಣ್ಣಕೆ ಚೆಂದಕೆ ಹತ್ತುಜೆನಕ್ಕೆ ಹಸ್ತೋದಕ ಹಾಕಿ, ಊಟದಕ್ಷಿಣೆ ಕೊಟ್ಟಿದ್ದರೆ ಸಾಕಾವ್ತಿತು.” ಹೆಂಡತಿಯ ಕಾರ್ಬಾರು ನೋಡಿ ತಡವಲೆಡಿಯದ್ದೆ ಗೆಣಪ್ಪಂ  ಹೇಳಿದಂ.

“ನಿಂಗೊಂದಾರಿ ಸುಮ್ಮನೆ ಕೂರಿ. ಎಷ್ಟುಜೆನ ಬಂದರೂ ಹೆದರಿಕೆಯಿಲ್ಲೆ. ಸುಧರಿಕಗೆ ಹತ್ತು ಜೆನರ ಹೇಳಿದ್ದೆ. ನಿಂಗೊ ಎಡೇಲಿ ಬಾಯಿಹಾಕಿ ಎಲ್ಲ ಹಾಳುಮಾಡದ್ರೆ ಸಾಕು.” ಹೆಂಡತ್ತಿಯ ಬಾಯಿ ಮುಂದೆ ಅವ ಸುಮ್ಮನೆ ಕೂದಂ.

ಸಾಲಮಾಡಿದ ಪೈಸೆಯೆಲ್ಲ ಮುಗುದು  ಹಳೆ ಅಡಕ್ಕೆಯನ್ನೂ ಸೊಲುದು ಮಾರಿ ಆತು.ಇಷ್ಟೆಲ್ಲ ಖರ್ಚು ಬರೀ ಒಂದುದಿನಕ್ಕೆ ಮಾಡಿದರೆ; ಮುಂದೆ ನಾವು ಉಂಬದೆಂತರಾಳಿ ಗೆಣಪ್ಪಂಗೆ ಹೆದರಿಕೆಯೂ ಆತು. ಪಿ.ಯು.ಸಿಗೆ ಹೋಪ ಮಗಳಿಂಗೆ ಫೀಸ್ ಕೊಡ್ಳೂ ಆಯೆಕ್ಕು. ಮಗಂಗೆ ದಿನಾಗಳೂ ಶಾಲಗೆ ಹೋಪಲೂ ಪೈಸೆ ಆಯೆಕ್ಕು.

ಸುಮತಿಗೆ ಇದೇವದೂ ತಲಗೆ ಹೊಕ್ಕಿದಿಲ್ಲೆ. ಉಪ್ನಾನ ದಿನ ಎಲ್ಲೋರಮುಂದೆ ಹೇಂಗೆ ರೈಸುದು,ಎಷ್ಟು ಸರ್ತಿ ಸೀರೆ ಬದಲುಸಲೆಡಿಗು,ಆಯತ ಮಾಡ್ಳೆ ಆ ಹೆಣ್ಣು ಬಾರದ್ರೆ ಎಂತ ಮಾಡುದು…” ಹೀಂಗೆ ಆಲೋಚನೆ ,ಚಿಂತೆ ಮಾಂತ್ರ ಅದರ ತಲೆಲಿದ್ದದು.

ಅಂತೂ ಉಪ್ನಾನ ದಿನ ಓಡಿಬಂತು.ಕಳಿಯದ್ದ ನೆಂಟ್ರುಗೊ ಮಾಂತ್ರ ಮುನ್ನಾಳದಿನ ಬಂದದಷ್ಟೆ. ಹೆಚ್ಚಿನವೂ ಹಗಲಿಂಗೇ ಬಕ್ಕಷ್ಟೆ.ಅಡಿಗೆಯವೆಲ್ಲ   ಮುನ್ನಾಳದಿನ ಬಂದು; ಹೋಳಿಗೆ,ಲಾಡು ಮಾಡಿ ಮಡುಗಿದೊವು. ಬೆಂದಿಗೂ ಕೊರದಾಯಿದು.ಉದಿಯಪ್ಪಾಣ ಕಾಫಿಗೆ ಚಪಾತಿ,ಗಸಿ ಆಗ್ಯೊಂಡಿದ್ದತ್ತು.

ಸುಮತಿ ಮಿಂದಿಕ್ಕಿ ಬಂತು.ಆಯತ ಮಾಡುವ ಹೆಣ್ಣಿನ ಉದಿಯಪ್ಪಗಳೇ ಬಪ್ಪಲೆ ಹೇಳಿದ್ದದು.ಗಂಟೆ ಏಳೂವರೆ ಆದರೂ ಅದರ ಕಾಣದ್ದಿಪ್ಪಗ ಅದಕ್ಕೆ ತಲೆಬೆಶಿಯಾತು. ಅದಕ್ಕೆ ಫೋನು ಮಾಡುವಾಳಿ ಫೋನಿನ ಹತ್ರಂಗೆ ಬಪ್ಪಗಳೂ ಹೆರ ಚೆಪ್ಪರಲ್ಲಿಪ್ಪವೆಲ್ಲ ಎಂತೋ ಗುಸು-ಗುಸು ಮಾತಾಡುದೆಂತದೂ ಅದಕ್ಕೆ ಗುಮಾನವೇ ಆಯಿದಿಲ್ಲೆ.ಆ ಹೆಣ್ಣಿಂಗೆ ಫೋನು ಮಾಡಿಯಪ್ಪಗ ಅದು ಹೇಳಿತ್ತು. “ಇಂದು ಹರತಾಳ. ಏವ ವಾಹನವೂ ಮಾರ್ಗಕ್ಕಿಳಿತ್ತಿಲ್ಲೆ.ಅಲ್ಲಲ್ಲಿ ಗಲಾಟೆಯೂ ಇದ್ದು.ಎನಗೆ ಬಪ್ಪಲೆಡಿಯ”.

ಸುಮತಿಗೆ ಮರದಕೊದಂಟಿಲಿ ಆರೋ ತಲಗೆ ಜೆಪ್ಪಿದಹಾಂಗಾತು. ಹಾಂಗಾರೆ   ಈ ಗೌಜಿ, ಈ ಸಂಭ್ರಮ ಇದೆಲ್ಲ ನೋಡ್ಳೆ ಆರುದೆ ಇರವಾ!?. ಇಷ್ಟೆಲ್ಲಾ ಖರ್ಚು ಮಾಡಿದ್ದು ಎಲ್ಲೋರೂ ಬಂದು ಆನು ಸೇಲೆ ಮಾಡುದರ ನೋಡೇಕೂಳಿ ಅಲ್ಲದಾ?!.ದೇವರೇ ಎನ್ನ ಹಾಂಕಾರಕ್ಕೆ ತಕ್ಕ ಶಿಕ್ಷೆಯನ್ನೇ ನೀನು ಕೊಟ್ಟೆ”. ಎಂತ ಮಾಡ್ಳು ಅರಡಿಯದ್ದೆ ಹತ್ರೆ ಇಪ್ಪ ಗಿಳಿಬಾಗಿಲಿನ ಹಿಡ್ಕೊಂಡು ನಿಂದತ್ತು ಸುಮತಿ. ಹೆರಾಂದ ಪುರೋಹಿತರು “ಬ್ರಹ್ಮಚಾರಿಯ ಅಬ್ಬೆ ಹೆರ ಬರ್ಲಿ” ಹೇಳುದು ಕೇಳಿದರೂ ಸುಮತಿ ಮತಿ ತಪ್ಪಿದವರ ಹಾಂಗೆ ಅಲ್ಲೇ ನಿಂದತ್ತದು.

                                                                                                                                   —–೦—–

 

 

 

 

16 thoughts on “” ತಾನೊಂದು ಬಗೆದರೆ…..” {2014ನೇ ಸಾಲಿನ ಕೊಡಗಿನ ಗೌರಮ್ಮ ಕತಾ ಸ್ಪರ್ಧೆಲಿ ಮೂರನೆ ಬಹುಮಾನ ಬಂದ ಕತೆ}ಬರೆದೊವು ಶ್ರೀಮತಿ ಪ್ರಸನ್ನಾ,ವಿ.ಚೆಕ್ಕೆಮನೆ}

  1. ಉಪ್ನಾನ ಮದುವೆಯಾಂಗಿಪ್ಪ ಧಾರ್ಮಿಕ ಸಂಸ್ಕಾರಕಾರ್ಯಂಗಳನ್ನೊ ಕೇವಲ ಆಡಂಬರ ಪ್ರದರ್ಶನಕ್ಕಿಪ್ಪ ಒಂದು ಅವಕಾಶ ಹೇಳಿ ಗ್ರೇಶಿಯೊಂಡಿಪ್ಪವಕ್ಕೆಲ್ಲರಿಂಗೂ ಮರದ ಕೊದಂಟಿಲಿ ತಲಗೆ ಜೆಪುಉವಾಂಗೇ ಇದ್ದು ಕತೆಯ ತಾತ್ಪರ್ಯ. ಅಪರೂಪದ ಗಾದೆಗಳ ಹದವಾಗಿ ಸೇರ್ಸಿ ಚೆಂದಕೆ ನಿರೂಪಣೆಯಾದ ಕತೆ. ಅಭಿನಂದನೆಗೊ ಪ್ರಸನ್ನಕ್ಕ..
    ಅದರೊಟ್ಟಿಂಗೆ ಕಾಸರಗೋಡು ಹೊಡೆಲಿಪ್ಪವು ಅನುಭವಿಸುವ ಈ ’ಹರತಾಳ’ ಹೇಳ್ತ ಭಾದೆಯ ಹೊಡೆಂಗೆ ಬೆರಳು ತೋರ್ಸಿದ್ದು ಚೊಕ್ಕ ಆಯಿದು!

  2. ಬಹುಮಾನಿತ ಕತೆಗಾರ್ತಿ ಪ್ರಸನ್ನಕ್ಕಂಗೂ ಕತೆಯ ಒದಗುಸಿಕೊಟ್ಟ ವಿಜಯತ್ತೆಗೂ ಅಭಿನಂದನೆಗೊ..

  3. ಬದಲಾದ ಈಗಾಣಾ ತಲೆಮಾರಿನ ಆಲೋಚನೆಯ ಭಾರಿ ಲಾಯ್ಕಲ್ಲಿ ಪ್ರೆತಿಬಿಂಬಿದ್ದು ಈ ಕತೆ. ಈಶ್ವರ ಚಂದ್ರ ವಿದ್ಯಾ ಸಾಗರರ ಕತೆ ನೆನಪಿಂಗೆ ಬತ್ತು. ನಮ್ಮ ಹೆರಾಣ ಆಡಂಬರವ ನೋಡಿ ಮಣೆ ಹಾಕುದೆ ಪ್ರಪಂಚದ ನಡೆ ಆದ್ದು ವಿಪರ್ಯಾಸ! ಮನೆ ಗೆದ್ದು ಮಾರು ಗೆದವ ಮನುಷ್ಯ ಮೊದಲಾಯೆಕ್ಕಲ್ಲದಾ? ಬಹುಮಾನ ವಿಜೇತ ಕತಾಗಾರರಿಂಗೆ ಶುಭಾಶಯಂಗೊ.

  4. ಪ್ರಸನ್ನನ ಪರವಾಗಿಯೂ ಎನ್ನ ಲೆಕ್ಕಲ್ಲಿಯೂ ಒಪ್ಪಕೊಟ್ಟವಕ್ಕೆ ಧನ್ಯವಾದಂಗೊ. ಚೆನ್ನೈ ಭಾವನ ವಿಶ್ಲೇಷಣೆ ಸೂಪರ್! ಹೊಸದಿಗಂತದ ಹೊಸ ನೆಂಟ್ರು, .ಕು. ಸು . ! . ಅಪರೂಪದ ನೆಂಟ್ರು ಬಯಿಂದೊವು ಹೇದು ಸಂತೋಷಾತು.

  5. ಸೂಪರ್ ಆಯಿದು ಕಥೆ. ಓದಿ ಮುಗುದ್ದ ಮತ್ತೆ ಆಲೋಚನೆ ಮಾಡಿಯಪ್ಪಗ ಇದು ಕಥೆ ಹೇದು ಗೊಂತಾದ್ದದು………………ಹ್ಹೆ..ಹ್ಹೆ…ಹ್ಹೆ……

  6. ಹರೇರಾಮ, ಹೊಸದಿಗಂತದ ಪ್ರಕಾಶಣ್ಣ ಅಪರೂಪಕ್ಕೆ ಒಪ್ಪಣ್ಣ ಬೈಲಿಂಗೆ ಬಂದದು,ಒಪ್ಪಕೊಟ್ಟದು ಬಹು ಸಂತೋಷಾತು. ಅಂತೂ ಕತೆಗಾರ್ತಿ; ತಂಗೆ ಪ್ರಸನ್ನಂಗೆ ಸ್ಪರ್ಧಾವೇದಿಕೆಯ ಕಾರ್ಯದರ್ಶಿ ವಿಜಯಕ್ಕಂಗೆ ಧನ್ಯತಾಭಾವ ಮೂಡಿದ್ದಂತೂ ಸತ್ಯ.

  7. ಕಥೆ ಚಂದ ಇದ್ದು.ಅರ್ಥಪೂರ್ಣವೂ ಆಗಿದ್ದು. ಆಧುನಿಕತೆಯ ಥಳಕಿಲಿ, ವಾಸ್ತವ ಮರದು ಬದುಕಿನ ಗಾಳಿಗೋಪುರದಾಂಗೆ ಕಾಂಬ ಜನಂಗಳೇ ಇಂದು ಹೆಚ್ಚಿಪ್ಪದು. ನೀತಿಯುಕ್ತ ಕಥೆ. ಪ್ರಸನ್ನಕ್ಕಂಗೆ ಹಾರ್ದಿಕ ಅಭಿನಂದನೆಗೊ….
    ಪ್ರಕಾಶ್‌ ಇಳಂತಿಲ

  8. ಜಾಗೆಯ ರಿಕಾರ್ಡು ಎಲ್ಲ ಕಟ್ಟ್ಯೊಂಡು ಬೇಂಕಿಂಗೆ ಸುಮತಿಯಕ್ಕ ಹೆರಟತ್ತು ಹೇದಪ್ಪಳೇ ಬೈಲಿನ ನಾಕು ಜೆನರ ಕರ್ಕೊಂಡು ಹೋಪೊ° ಹೇದು ಕಂಡತ್ತೆನಗೆ ಒಂದರಿ. ಮತ್ತೆ ನೋಡಿರೆ ಇದು ಕತೆ ಇದಾ!!

    ಚಪ್ಪರಲ್ಲಿ ಗುಸು ಗುಸು ಮಾತಾಡ್ಯೊಂಡಿತ್ತವು ಹೇದಪ್ಪಗ ಎದೆ ಧಸಕ್ಕೇತನಗೆ. ಮತ್ತೆ ನೋಡಿರೆ ಗಣಪ್ಪಣ್ಣಂಗೇನಾಯಿದಿಲ್ಲೆ. ದೇವ್ರೇ ದೊಡ್ಡವ°!
    ಅಂದರೆ ಕತೆ ಹೋಗಿ ಅಯತಹೆಣ್ಣಿನ ತಲೆಲಿ ಕೂದ್ದು ಪಷ್ಟಾಯ್ದು!

    ಎಂತಾರು ಇನ್ನು ಕೂಸಿನ ಜೆಂಬ್ರಕ್ಕಪ್ಪಗ ಜೋಯಿಸಪ್ಪಚ್ಚಿಯತ್ರೆ ಮದಲೆ ಒಂದರಿ ಕೇಟು ಮಡಿಕ್ಕೊಂಬದು ಒಳ್ಳೆದು ಅಂದಿಂಗೆ ಏನೂ ವಿಘ್ನ ಆಗದ್ದ ದಿನದ ಮೂರ್ತ ನೋಡ್ಳೆ ಹೇಳ್ಳೆ.

    ದೌಲತ್ತು ಜೆಂಬ್ರದ ಮೇಗೆ ಬೆಣಚ್ಚಿ ಹಾಕಿದ ಈ ಕತೆ ಪಷ್ಟಾಯ್ದು ಹೇದೊಂದು ಚೆನ್ನೈವಾಣಿ.

    ಬಹುಮಾನಗಳಿಸಿದ ಪ್ರಸನ್ನಕ್ಕಂಗೆ ಅಭಿನಂದನೆಗೊ, ಶುದ್ದಿ ಬೈಲಿಂಗೆ ಒಪ್ಪುಸಿದ ವಿಜಯತ್ತಗೆ ಧನ್ಯವಾದಂಗೊ.

  9. ಧನ್ಯವಾದ ಪಾರ್ವತಿ. ಆನು ನಾಲ್ಕಾರು ದಿನಂದ ಟೈಪ್ ಮಾಡ್ತಾ ಇದ್ದು ಪಬಿಲ್ಷಿಷಿಂಗೆ ಹಾಕಿದ ದಿನವೇ ಓದಿ ಅಭಿಪ್ರಾಯ ಹೇಳಿದೆಲ್ಲೋ.ಈಗೀಗ ಒಪ್ಪಣ್ಣ ಬೈಲಿಂಗೆ ಓದಲೆ ಬಪ್ಪವು ಕಮ್ಮಿ ಆಯಿದೊವೋಳಿ ಆವುತ್ತೆನಗೆ!.

    1. nija vijayakka eegeega ellori0goo utsaha kammi addoo alla purusottilleyaa hEli go0taauttille.

      1. ಬೈಲಿನ ಹೆಚ್ಚಿನೋರು ವಾಟ್ಸ್ ಎಪ್ ಹೇಳಿ ಇದ್ದನ್ನೇ, ಅದರ ಗುಂಪಿಲಿ ಗೋವಿಂದಾ ಅಯಿದವು. ಅವಕ್ಕೆ ಬೈಲಿಂಗೆ ಬರೆಕ್ಕೂಳಿ ಕಾಣ್ತೇ ಇಲ್ಲೆ… ಎಂತ ಮಾಡುದು?

  10. ಕಥೆ ಸೂಪರ್ ಆಯಿದು ಪ್ರಸನ್ನ .’ಹಾಸಿಗೆ ಇದ್ದಷ್ಟು ಕಾಲು ಚಾಚೆಕ್ಕು’ಹೇಳುದರ ಅರ್ಥ ಮಾಡಿಗೊಳೆಕ್ಕು ಹೇಳುದಕ್ಕೆ ಒಳ್ಳೆ ಉದಾಹರಣೆ ಈ ಕಥೆ ಅವರವರ ಅಂತಸ್ತೆ ಮುಖ್ಯ ವಿನಃ ಸ್ಟೇಟಸ್ ಅಲ್ಲ ಹೇಳುದರ ಅವವು ತಿಳುಕ್ಕೊಂಡರೆ ಒಳ್ಳೆದು ಅಲ್ಲದಾ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×