Oppanna.com

'ಅಡಿಗೆ ಸತ್ಯಣ್ಣ°' – 39

ಬರದೋರು :   ಚೆನ್ನೈ ಬಾವ°    on   05/12/2013    7 ಒಪ್ಪಂಗೊ

ಚೆನ್ನೈ ಬಾವ°

1
ಅಡಿಗೆ ಸತ್ಯಣ್ಣ ಬಾಗ ಬೇಶಿಯೊಂಡಿತ್ತಿದ್ದ , ರಂಗಣ್ಣ ಕಂಜಿ ತಿರಿಗಿಸಿಯೊಂಡಿತ್ತಿದ್ದ2.10.2013
ದಿಡೀರ್ನೆ ಸತ್ಯಣ್ಣಂಗೆ ನೆಂಪಾತು, – “ರಂಗೋ., ಬಪ್ಪ ಸೋಮವಾರ ಕೆದಿಲಕ್ಕೆ ಹೋಪಲಿದ್ದೊ°”
ಹೋಪದು ಹೋಪದೆ ಅಂದರೂ ಅಲ್ಲಿ ಎಂತ್ಸರ ಹೇದು ಅರಡಿಯೆಡೆದೊ!, ರಂಗಣ್ಣ ಕೇಟ° – ಅಲ್ಲ್ಯೆಂತ್ಸು ಮಾವ°?
ಸತ್ಯಣ್ಣ ಹೇದ° – ತಿಥಿ
ರಂಗಣ್ಣ ಕೇಟ°- ಸಮ, ತಿಥಿ ಮಜ್ಜಾನಕ್ಕೋ ಇರುಳಿಂಗೊ?!
ಸತ್ಯಣ್ಣಂಗೆ ತಲಗೆ ಹಸಿಬೊಂಡ ಬಿದ್ದಾಂಗೆ ಆತು. ಇವ° ಇಷ್ಟು ಸಮಯಂದ ಎನ್ನೊಟ್ಟಿಂಗೆ ಬತ್ತ°!, ಇದೆಂತ್ಸು ಹೊಸತ್ತೊಂದು ಇಂದು ಇವನದ್ದೇದು.
ಸತ್ಯಣ್ಣ ಕಣ್ಣ ಹೊಡಚ್ಚುತರ್ಲೇ ಗೊಂತಾತು ಸತ್ಯಣ್ಣ ಎಂತ ಕೇಳ್ಳೆ ಹೆರಡ್ತ° ಹೇದು. ಮದಲೇ ಸಮಾಧಾನ ಹೇಳ್ಯೊಂಡ ರಂಗಣ್ಣ – “ಅಲ್ಲ ಮಾವ°.., ಕಳುದತಿಂಗಳು ಎಂಗಳ ಮನೆಲಿ ಅಜ್ಜಿ ತಿಥಿ ಇತ್ತಿದ್ದಲ್ಲದ. ಅದಕ್ಕೆ ಪುತ್ತೂರಣ್ಣ ಇರುಳಿಂಗೆ ಬಂದ್ಸು. 🙁
ಏಕೆ ಮಜ್ಜಾನಕ್ಕೆ ಬಾರದ್ದು ಕೇಟದಕ್ಕೆ, ತಿಥಿ ಇದ್ದು, ಬರೇಕು ಹೇಯಿದಿ.., ಮಜ್ಜಾನಕ್ಕೋ ಇರುಳಿಂಗೋ ಹೇದು ಹೇಯಿದಿಲ್ಲಿ.  ಇರುಳಿಂಗೆ ಬಂದರೆ ಮಜ್ಜಾನಕ್ಕಾಗಿದ್ದರೂ ಅಡ್ಡಿ ಇಲ್ಲೆ ಇದಾ. ಒಂದೊತ್ತಾಣದ್ದರ್ಲಿ ಮುಗಿತ್ತು. ಮಜ್ಜಾನಕ್ಕೆ ಬಂದು ತಿಥಿ ಇರುಳಿಂಗೆ ಆದರೆ ಇರುಳು ಮುಟ್ಟ ಕಾಯೆಕ್ಕನ್ನೇ  😀
ಸತ್ಯಣ್ಣಂಗೆ  ಇವನ ತಲೆಯ ತೆಗದು ಎಲ್ಲಿ ಮಡುಗೆಕು ಹೇದು ತಲೆಬೆಶಿ ಸುರುವಾತು 😀
**
2
ಅಡಿಗೆ ಸತ್ಯಣ್ಣಂಗೆ ಕಾರ್ಯಾಡಿಲ್ಲಿ ಅನುಪ್ಪತ್ಯ
ಅಲ್ಲಿಗದ ಅಡಿಗೆ ಸತ್ಯಣ್ಣನ ಹಳೇ ಕಾಲದ ದೋಸ್ತಿ ಹೇಳಿರೆ ಚೆಡ್ಡಿ ದೋಸ್ತಿ.. ಇನ್ನೂ ಹೇಳ್ತರೆ ಬೆಂಚಿಮೆಟ್ಟು ಒಬ್ಬ° ಬಂದಿತ್ತ.
ಎರಡ್ನೇ ಕ್ಲಾಸಿಲ್ಲಿ ಶಾಲೆಲಿ ಲೆಕ್ಕ ಮಾಟ್ರ ಕೈಂದ ಬೆತ್ತಲ್ಲಿ ತಿಂದು ಶಾಲೆ ಬಿಟ್ಟವ°, ಮುಂದೆ ಆ ಕುಟುಂಬ ಆ ಜಾಗೆ ಕೊಟ್ಟಿಕ್ಕಿ ತೆಂಕ್ಲಾಗಿ ಎಲ್ಯೋ ಹೋಗಿ ಅಮರಿದವು..  ಇಂದೇ ಗುರ್ತ ಸಿಕ್ಕಿ ಮಾತಾಡ್ಸಿದ್ದದು
ಸತ್ಯಣ್ಣ ಶಾಲೆ ಬಿಟ್ಟ ಮತ್ತೆ ಸತ್ಯಣ್ಣನ ದಾರಿ ಹಿಡ್ಕೊಂಡು ಹೋದ, ಅವ ಅವನ ದಾರಿ ನೋಡಿಗೊಂಡ
ಅಂತೂ ಕೊಶಿಲಿ ಅಲ್ಪ ಇಲ್ಲದ್ರೂ ಸ್ವಲ್ಪ ಮಾತಾಡಿಯಾತು. “ಓಯ್ ನೀ ಎಂತ ಮಾಡ್ತಾ ಇದ್ದೆ ಅಂಬಗ?” – ಸತ್ಯಣ್ಣ° ವಿಚಾರ್ಸಿದ°
“ಆನೀಗ  ದೊಡ್ಡ ಉದ್ಯೋಗಲ್ಲಿ ಇದ್ದೆ. – ಹೇದ° ಅವ°
ಆತಪ್ಪ ಒಳ್ಳೆದೇ. ಆದರೆ ಆ ಉದ್ಯೋಗ ಎಂತ್ಸೋ ? – ಸತ್ಯಣ್ಣ° ವಾಪಾಸು ಕೇಟ°
“ಸತ್ಯಣ್ಣೋ!, ಒಂದಿನ ಅಪೀಸಿಂಗೆ ಹೋಗದ್ರೂ ಅಲ್ಲಿ ಬಾಗಿಲು ತೆಗೆಯವು. ಆನೇ ಹೋಗಿ ಬಾಗಿಲು ತೆಗವದು” – ಅವ° ವಿವರುಸಿ ಹೇದ°
“ಓ..! ಆಪೀಸು ಪ್ಯೂನೋ ? . ಹಾಂಗೆ ಆಗಳೇ ಹೇಳಿತ್ತಿದ್ರೆ ಎನಗೊಂತಾವ್ತಿತ್ತನ್ನೇ “ – ಅಡಿಗೆ ಸತ್ಯಣ್ಣ° ಹೇದಿಕ್ಕಿ ಕೈಲಿಪ್ಪ ಕೈಮರಿಗೆ ತೆಗದು ಆಚಿಗೆ ತಿರುಗಿ ಮಡಿಗಿ ಈಚಿಗೆ ತಿರುಗವನ್ನೊಳ ಇವ° ಅಲ್ಲಿಂದ ಜಾಗೆ ಕಾಲಿ ಮಾಡಿ ಆಗಿದ್ದತ್ತು. 😀
**
3
ಮನ್ನೆ ದೀಪಾವಳಿಗೆ ಅಡಿಗೆ ಸತ್ಯಣ್ಣನಲ್ಲಿಗೆ ರಮ್ಯನ ಕೋಳೇಜು ಪ್ರೆಂಡುಗೊ ಬಂದ್ಸು ಬೈಲಿಂಗೇ ಗೊಂತಾಯ್ದು ಶುದ್ದಿ
ಈ ವೊರ್ತಮಾನ ಓದಿದ ಬೈಲ ಜಾಣ ಮನಗೆ ಫೋನು ಮಾಡಿ ಹೇಳಿದನಡ – “ಬೇಸಗೆ ರಜೆಲಿ ಆನು ಎನ್ನ ಕ್ಲಾಸುಮೇಂಟುಗಳ ಕರ್ಕೊಂಡು ಬತ್ತೆ”
ಈ ವೊರ್ತಮಾನವ ಅಡಿಗೆಸತ್ಯಣ್ಣನೈಲಿ ಜಾಣನ ಅಪ್ಪ ಮನ್ನೆ ಓ ಅಲ್ಲಿ ಅನುಪ್ಪತ್ಯಲ್ಲಿ ಕಂಡಿಪ್ಪಗ ಹೇದನಡ… ಮಾಣಿ ಹೀಂಗೆಂಗೆ
ಸತ್ಯಣ್ಣ ಹೇದ° – ಬರ್ಲಿ ಬಾವ ಬರ್ಲಿ. ಬೇಸಗೆಲಿ ಬಪ್ಪದು ಒಳ್ಳೆದೇ ಆತು . ಬೀಜ ಕೊಯ್ವಲೆ ಜೆನ ಇಲ್ಲೆ ಹೇಳ್ಯೊಂಡಿತ್ತಿದ್ದಿ. ಅಡಕ್ಕೆ ಸುಲಿವಲೂ, ಅಡಕ್ಕೆ ಹೆರ್ಕಲಿದ್ದರೆ ಹೆರ್ಕಲೂ ಮಾಡ್ಸಿ ಒಂದು ವಾರ ರೆಜ ಕೆಲಸವನ್ನೂ ಒಟ್ಟು ಸೇರಿ ಮಾಡಿಕ್ಕಲಕ್ಕು. ಮಕ್ಕೊಗೂ ಒಂದು ಹೊತ್ತುಹೋಪಲೆ ಕೆಲಸ ಆತು. ಆಳುಗೊ ಇಲ್ಲದ್ದಿಪ್ಪಗ ಹೀಂಗಿರ್ಸೆಲ್ಲ ಬಿಟ್ಟು ಬಿಡ್ಳಾಗ  😀
**
4
ಅಡಿಗೆ ಸತ್ಯಣ್ಣಂಗೆ ಜಾಲ್ಸೂರ ಹೊಡೆಲಿ ಅಂದು ಅನುಪ್ಪತ್ಯ
ಜಾಲ್ಸೂರು ಹೇದ ಮತ್ತೆ ಜಾಲ್ಸೂರಣ್ಣ ಅಲ್ಲಿ ಇಲ್ಲದ್ದೆ ಅಯೇಕ್ಕಾರೆ ಅದು ಬೇರೆಂತದೋ ತೆರಕ್ಕಿನದ್ದಾಗಿರೆಕು
ಜಾಲ್ಸೂರಣ್ಣನೂ ಇತ್ತಿದ್ದವು. ಅವರ ನೆಂಟ ಒಬ್ಬ ಬೆಂಗ್ಳೂರಣ್ಣನೂ ವಾರದ ರಜೆಲಿ ಬಂದಿತ್ತವು ಇತ್ತಿದ್ದವು
ಜಾಲ್ಸೂರಣ್ಣ ಬೆಂಗ್ಳೂರಣ್ಣನ ಅಡಿಗೆ ಸತ್ಯಣ್ಣಂಗೆ ಗುರ್ತ ಮಾಡ್ಸಿದವು.
ಮಾತಾಡ್ಯೊಂಡು …. ಅಡಿಗೆ ಸತ್ಯಣ್ಣ ಹೇದ° – ಎಂತ ಅಣ್ಣೋ.. ಇಲ್ಲಿ ನಿತ್ಯ ಜೆಂಬಾರ ನಿತ್ಯ ಪಾಚ ನಿತ್ಯ ಹೋಳಿಗೆ. ಒಂದು ವಾರಂದ ಊರ್ಲಿ ಇಪ್ಪ ಕಾರಣ ನಿಂಗೊಗೇ ಈಗ ಗೊಂತಾದಿಕ್ಕು.
ಬೆಂಗ್ಳೂರಣ್ಣ ಹೇದ° –  ಇಲ್ಲೆ ಸತ್ಯಣ್ಣ , ನಿತ್ಯ ಪಾಚ ಉಂಬಲೆ ನಾವೆಂತ ಜಾಲ್ಸೂರಣ್ಣನೋ?! ನವಗೆ ಒಂದಿನ ಲಾಡು, ಒಂದಿನ ಜಿಲೇಬಿ, ಒಂದಿನ ಮೈಸೂರು ಪಾಕು. ಇಂದಿದಾ ನಿಂಗಳ ಹೋಳಿಗೆ!
ಸತ್ಯಣ್ಣ ಹೇದ° ಹೋ! ಅಂಬಗ ನಿಂಗೊ ಹಂತಿಲಿ ಕೂದು ಉಂಡದಲ್ಲ!, ಬಫೆಲಿ ಹೇಳಿ!!. ಎಂತಕೂ ಬೆಂಗ್ಳೂರಿಂಗೆ ಹೋದಮತ್ತೆ ಒಂದರಿ ಎಲ್ಲ ಟೆಸ್ಟು ಮಾಡ್ಸಿಕ್ಕಿ ಅಣ್ಣೋ. 😀
**
5
ಅಡಿಗೆ ಸತ್ಯಣ್ಣಂಗೆ ಮಾಣಿಮಠದ ಜನಭವನಲ್ಲಿ ಮುಳಿಯಾಲ ಮದುವೆ.
ಪ್ರಜಾವಾಣಿ ಪರವಾಗಿ ಅಲ್ಲ ನೆಂಟ್ರ ಲೆಕ್ಕಲ್ಲಿ ಹೇದು ವಜ್ರಾಂಗಿ ಭಾವನೂ ಪ್ರಜಾವಾಣಿಗೆ ರಜೆ ಹಾಕಿ ಬಂದಿತ್ತವು.
ಬಂದ ಸ್ಪೀಡಿಂಗೆ ನಾಕು ಗ್ಲಾಸು ಸರ್ಬತ್ತು ನಿಂದಲ್ಲೇ ಕುಡುದಾತು.  ಇನ್ನೆಂತ ಮಾಡ್ಸು. ಗುರ್ತ ಇಲ್ಲೋದ್ದರ ಗುರ್ತ ಇಪ್ಪೋರತ್ರೆ  ಗುರ್ತ ಮಾಡ್ಸಿ ಗುರ್ತ ಮಾಡಿರೆ ಗುರ್ತವೂ ಆವ್ತು, ಹೊತ್ತೂ ಹೋವ್ತು. ವಜ್ರಾಂಗಿ ಭಾವ ಸುರುಮಾಡಿದವು.
ಮುಂದುವರುದು ಅಡಿಗೆ ಕೊಟ್ಟಗ್ಗೆ ಎತ್ತಿಯಪ್ಪಗ ಅಲ್ಲಿ ನಮ್ಮ ಅಡಿಗೆ ಸತ್ಯಣ್ಣ!
ಅಡಿಗೆ ಕೊಟ್ಟಗ್ಗೆ ಹೋದರೆ ಮತ್ತೆ ಹಸೆ ಮಣೆ ಹಾಕಿ ಕೂದೊಂಡು ಮಾತಾಡ್ತ ಪಂಚಾತಿಗೆ ಇಲ್ಲೆನ್ನೆ. ಓ ಅಟ್ಟು ದೂರ ನಿಂದೊಂಡೇ ಏನುತಾನು ಆತು.
ಸತ್ಯಣ್ಣ ಹೆಗಲ ತೋರ್ತ ಹುಟ್ಟಗೆ ಉದ್ದಿಗೊಂಡೇ ಏನು ಒಳ್ಳೆದು ಹೇದ°
ವಜ್ರಾಂಗಿ ಭಾವ ಕೇಟ ಅಲ್ಲಿಂದಲೇ – ” ಬೆಂಗ್ಳೂರ ಹೊಡೆಂಗೆ ಸದ್ಯ ಬೈಂದಿಲ್ಯೋ ಸತ್ಯಣ್ಣ?”
“ಹೋಯ್ದೆಪ್ಪ. ನಿನ್ನೆಷ್ಟೇ ಬಂದ್ಸೇ ಉಳ್ಳೋ ಅಲ್ಲಿಂದ” ಸತ್ಯಣ್ಣ ಹೇದ°.
“ಬಸ್ಸಿಲ್ಲಿ ಟಿಕೇಟು ಸಿಕ್ಕಿತ್ತೋ ಅಂಬಗ ? ಏವ ಬಸ್ಸಿಲ್ಲಿ ಬಂದ್ಸಂಬಗ?” – ವಜ್ರಾಂಗಿ ಬಾವಂಗೆ ಅರಡಿಯದ್ದೆ ಕಳಿಯ
“ಸ್ಲೀಪರು ಬಸ್ಸಿಲ್ಲಿ ಬಾವ.., ಹೆರಡ್ಳೆ ರಜಾ ತಡವಾತು ಅಲ್ಲಿಂದ. ಹಾಂಗಾಗಿ ಬಸ್ಸು ಹಿಡಿವಲೂ ರಜಾ ಗಡಿಬಿಡಿ ಆತು. ಬತ್ತ ಬಸ್ಸಿಂಗೆ ಕೈ ತೋರ್ಸಿ ಕಂಡೇಟ್ರನತ್ರೆ ಸೀಟು ಉಂಟಾ ಕೇಳ್ಯಪ್ಪಗ ಬನ್ನಿ ಬನ್ನಿ ಕಾಲಿ ಉಂಟು ಹೇದು ಏರ್ಸಿತ್ತು.” – ಸತ್ಯಣ್ಣನ ವಿವರಣೆ ಆತು
“ಹೋ.. ಸ್ಲೀಪರು ಬಸ್ಸಿಲ್ಲಿ ಆರಾಮಲ್ಲಿ ಬಂದಿರೊಂಬಗ!” – ವಜ್ರಾಂಗಿ ಬಾವ ಬಿಡ್ತನೋ! , ಹೇಂಗಾರು ಮಜ್ಜಾನ ಆಗೆಡದೋ
“ಆರಾಮ ಎಂತ ಬೊಜ್ಜ ಬಾವ!, ಆ ಕಂಡೆಟ್ರ ಕೆಳಗೆ ಸೀಟಿಲ್ಲ, ಊ ಆ ಮೇಲೆ ಇಪ್ಪ ಏಳು ನಂಬ್ರ ತೆಕ್ಕೊಳ್ಳಿ ಹೇತು. ಬಂಙಲ್ಲಿ ಅದರ ಹತ್ತಿ ಕೂದರೆ ಅಲ್ಲಿ ಒಂದು ಗೆಂಡು ಇದ್ದತ್ತು. ಹಾಂಗಾಗಿ ನಾವು ಅಲ್ಲೇ ಈಚಿಗಾಣ ಹೊಡೆಲಿ ಆ ರೋಡ ಹಿಡ್ಕೊಂಡು ಮನಿಗಿತ್ತು. ಒರಗುವ ಉದ್ದೇಶಂದ ಆ ಬಸ್ಸಿಂಗೆ ಹತ್ತಿರೆ ಬಾವ ನೇರ್ಪ ಕಾಲು ಬಿಡಿಸಿ ಮನಿಗಿಕ್ಕಲೂ ಎಡಿಯ ಅದರ್ಲಿ ಕರ್ಮ. ಘಾಟಿಲಿ ಅದರ ಒಂದು ಒಚ್ಚಾಣವೇ!! ” – ಸತ್ಯಣ್ಣ ಬಸ್ಸಿಲ್ಲಿ ಆದ ನರಕ್ಕಾಣವ ಹೇದ°
“ಹೋ! ಅಂಬಗ ಹಂಡೆಲಿಪ್ಪ ಕೊದಿಲ ಬಾಗದ ಹಾಂಗೆ ಆತೋ ನಿಂಗೊಗೆ?!” – ವಜ್ರಾಂಗಿ ಭಾವನ ವರ್ಣನೆ!
“ಅಪ್ಪು ಹೇದು!, ಪುಣ್ಯಕ್ಕೆ ಬಾಗ ಕರಗಿ ಮುದ್ದೆ ಆಯ್ದಿಲ್ಲೆ ಅಟ್ಟೇ!. ಹಾಂಗಾಗಿ ಇದಾ ಇಂದು ಬದನೆ ಬಾಗ ಕರಗಿ ಮುದ್ದೆ ಅಪ್ಪಲಾಗ ಹೇದು ದಾಣೆ ಹಾಕಿ ತೊಳಸುತ್ತ ಇದ್ದೆ” – ಹೇದಿಕ್ಕಿ ಸತ್ಯಣ್ಣ° ವಾಪಾಸು ಒಂದರಿ ತೋರ್ತಿಲ್ಲಿ ಹೊಟ್ಟೆ ಉದ್ದಿಗೊಂಡು ವಾಪಾಸು ದಾಣೆ ಕೈಲಿ ಹಿಡ್ಕೊಂಡ 😀
**
6
ಮುಳಿಯಾಲದ ಮದುವೆ ಅಡಿಗೆ ಕಳ್ಸಿಕ್ಕಿ ಅಡಿಗೆ ಸತ್ಯಣ್ಣ ಹೋದ್ದು ಮಾಡಾವಿಂಗೆ.
ಮಾಡಾವು ಈಶ್ವರಣ್ಣ ಹೇದರೆ ಮದಲಿಂದಲೇ ವಿಶಾಲಹೃದಯಿ.
ಮರದಿನ ಅಲ್ಲಿ ಶಿವಪೂಜೆ ಗೆಣವತಿ ಹೋಮ. ಜಿಲೇಬಿ ಸೀಟು ಹೇದಕಾರಣ ಮುನ್ನಾಣ ದಿನಕ್ಕೇದು ಎಂತ ಕೆಲಸವೂ ಇಲ್ಲೆ. ಉದಿಯಪ್ಪಗ ಬೇಗ ಎದ್ದಂಡು ಸುರುಮಾಡಿರಾತು.
ಇರುಳು ಊಟ ಆಗಿಕ್ಕಿ ಸತ್ಯಣ್ಣಂಗೂ ರಂಗಣ್ಣಂಗೂ ಚಾವಡಿಲಿ ಹಸೆ ಏರ್ಪಾಡು ಮಾಡಿತ್ತವು ಈಶ್ವರಣ್ಣ°.
ಸತ್ಯಣ್ಣಂಗೆ ಮನಿಗಿಯಪ್ಪದ್ದೆ ಒರಕ್ಕು ಬಂತು ಎಲ್ಲಿಂದಲೋ
ಅನುಪ್ಪತ್ಯ ಇಲ್ಲದ್ರೂ ನೆಡು ಇರುಳು ಕಳುದೇ ಬೆಣಚ್ಚಿ ನಂದ್ಸುತ್ತ ರಂಗಣ್ಣಂಗೆ ಅಟ್ಟು ಬೇಗ ಮನಿಗಿರೆ ಒರಕ್ಕು ಹಿಡುದು ಬೇಕನ್ನೆ!
ಮನಿಕ್ಕೊಂಡೇ ಮೊಬೈಲ ಗುರುಟಿದ°, ಎರೆಡೆರಡು ಸರ್ತಿ ಎದ್ದು ಹೋಗಿ ಜಾಲ ಕೊಡಿಯಂಗೆ ಹೋಗಿ ಬಂದ° … ಉಹ್ಹುಂ..ಒರಕ್ಕು ಬಯಿಂದಿಲ್ಲೆ ರಂಗಣ್ಣಂಗೆ
ವಾಪಾಸು ಮನಿಗಿದ°, ಕಾಲ ಕುಡಿಗಿದ°, ಹೊದಕ್ಕೆ ಬಲುಗಿದ°,  ಆಚೊಡೆಂಗೆ ಹೊಡಚ್ಚಿದ°, ಈಚೊಡೆಂಗೆ ಹೊಡಚ್ಚಿದ°…   ಎಷ್ಟು ಸರ್ತಿ ಹೇಳ್ವದರಿಂದ ಎಷ್ಟು ಹೊತ್ತು ಹೇದು ಕೇಳ್ತದೇ ಸಮ
ಇವನ ಹೊಡಚ್ಚಾಣಕ್ಕೆ ಸತ್ಯಣ್ಣಂಗೆ ಎಚ್ಚರಿಗೆ ಆತು.
ಸತ್ಯಣ್ಣ ಅಲ್ಲಿಂದಲೇ ರಂಗಣ್ಣನ ಬೆನ್ನ ತಟ್ಟಿ ಹೇದ° – ಎಂತ ರಂಗೋ!, ಲಟ್ಟಣಿಗೆ ಹಾಂಗೆ ಹೊಡಚ್ಚುತ್ತ ಇದ್ದೆ. ರಜ ಕಾನಕವ ಮಾಡಿ ನಿನ್ನ ಬೆನ್ನ ಅಡಿಂಗೆ ಮಡಿಗಿತ್ತಿದ್ರೆ ಕೆಲವು ಸೇರಿನ ಹೋಳಿಗೆಯೇ ಆವ್ತಿತ್ತು 😀
‘ಆ..ವ್ವೂಂ’ ಹೇದ ರಂಗಣ್ಣ ಮತ್ತೆ ಹೊದಕ್ಕೆ ಎಳಾದು ಮುಸುಕ್ಕೆಟ್ಟಿ ಮನಿಗಿದವ° ಮತ್ತೆ ಎದ್ದದು ಉದಿಯಪ್ಪಗ ಸತ್ಯಣ್ಣನ ಸುಪ್ರಭಾತ ಕೇಟಪ್ಪಗಳೇ 😀
**
7
ಅಡಿಗೆ ಸತ್ಯಣ್ಣಂಗೆ ಮದಲಿಂಗೆ ಒಂದು ಹೋಟ್ಳು ಇದ್ದತು ಹೇದು ನಾವು ಓ ಅಂದು ಮಾತಾಡಿದ್ದು ಅಪ್ಪೋ
ಮತ್ತೆ ಅದರ ಮುಚ್ಚೆಕ್ಕಾಗಿ ಬಂತು. ವ್ಯಾಪಾರ ಇಲ್ಲದ್ದೆ ಅಲ್ಲ, ನೋಡಿಗೊಂಬಲೆ ಸರಿಗಟ್ಟು ಜೆನ ಸಿಕ್ಕುತ್ತವಿಲ್ಲೆ ಹೇದು.
ಎಷ್ಟು ಸಣ್ಣ ಹೋಟ್ಳು ಆದರೂ ಒಬ್ಬನಿಂದ ಇಬ್ರಿಂದ ದಿನಾ ನಡೆಶುಲೆ ಎಡಿಯ. ಹೇಂಗಿದ್ದರೂ ನಾಕೈದು ಜೆನಾರು ಬೇಕೇ ಬೇಕು.
ಅಡಿಗೆ ಸತ್ಯಣ್ಣಂಗೆ ನೇರ್ಪಕ್ಕೆ ಕೆಲಸಕ್ಕೆ ಜೆನ ಸಿಕ್ಕದ್ದೆ ಮತ್ತೆ ಆ ಹೋಟ್ಳ ವಯಿವಾಟು ಬೇಡ ಹೇದು ಮತಿ ಮಾಡಿದ್ಸು.
ಹಾಂಗೆ ಕೆಲವು ದಿನ ಅಲ್ಲಿ ಸಪ್ಲೈಗೆ ಚಾಯ ಮಾಡ್ಳೆ ದೋಸೆ ಎರವಲೆ ಪೈಸೆ ತೆಕ್ಕೊಂಬಲೆ ಹೇದು ಅಡಿಗೆ ಸತ್ಯಣ್ಣ ಒಬ್ಬನೇ ಸುಧಾರ್ಸೆಕ್ಕಾಗಿ ಹೋತು.
ಹೋಟ್ಳು ಹೇದು ಆದ ಮತ್ತೆ ಅಲ್ಲಿ ಬಂದವರ ಚಂದಕ್ಕೆ ಮಾತಾಡ್ಸಿ ಎಂತ ಬೇಕು ಹೇದು ಕೇಳಿ ತರ್ಸಿ ಕೊಡದ್ರೆ ಮತ್ತೆ ಜೆನ ಬತ್ತವೋ.
ಜೆನ ಇಲ್ಲದ್ರೂ ಆ ಕರ್ತವ್ಯ ಶೂನ್ಯ ಅಪ್ಪಲೆ ಬಿಡ್ಳೆ ಇಲ್ಲೆ ಅಡಿಗೆ ಸತ್ಯಣ್ಣ.
ಆರಾರು ಒಳಬಂದಪ್ಪದ್ದೆ ಚಾಯೆ ಮಾಡ್ಯೊಂಡಿದ್ದಲ್ಲಿಂದಲೆ “ಹ್ಹಾ° ಬನ್ನಿ ಕೂರಿ” ಹೇದು ಅಡಿಗೆ ಸತ್ಯಣ್ಣ ಹೇಳುಗು.
ಹೋದವ° ಹೋಗಿ ಲಾಯಕ ಕೂದುಗೊಂಡು ಇನ್ನೆಂತ ಸಪ್ಲೈಯರ ಬಕ್ಕು ಹೇದು ಗ್ರೇಶುವಾಗ ಸತ್ಯಣ್ಣನೇ ಬಕ್ಕು, ನಿಂಗೊಗೆ ಎಂತ ಬೇಕು ಹೇದು ವಿಲೆವಾರಿ ಮಾಡ್ಳೆ.
ಬಂದ ಗಿರಾಕಿ ಹೇಳುಗನ್ನೆ – “ ಎನಗೆ ಚಟ್ಟಂಬಡೆ /ಗೋಳಿಬಜೆ / ಬನ್ಸ್ / ಅಂಬೋಡೆ/ ದೋಸೆ / ಇಡ್ಳಿ / ಅವಲಕ್ಕಿ / ಬ್ರೆಡ್ಡು” ಹೇದು
ಸತ್ಯಣ್ಣ ಅಲ್ಲಿಂದ ದೊಡ್ಡಕೆ ಹೇಳುಗು – ಬಟ್ರಿಂಗೆ ಒಂದು ಪ್ಲೇಟು ಗೋಳಿಬಜೆ / ಅಂಬೋಡೇ / ಬನ್ಸು ಕೊಡಿ ಇಲ್ಲಿ. ಹೇಳ್ತು ನೋಡಿರೆ ಆರೋ ಇನ್ನೊಬ್ಬ ತಂದು ಮಡುಗ್ಗುಗು ಈಗ ಇಲ್ಲಿ ಇವಂಗೆ ಬೆಶಿ ಬೆಶಿ ತೆಕ್ಕೊಂಡು ಬಂದು ಹೇದು.
ಆದರೆ ಹಾಂಗೆ ಅಪ್ಪಲೆ ಇಪ್ಪದು ಅಡಿಗೆ ಸತ್ಯಣ್ಣ ಒಬ್ಬನೇ ಅಲ್ಲದ
ಹೋತು, ಅಡಿಗೆ ಸತ್ಯಣ್ಣನೇ ಹೋಗಿ ಪ್ಲೇಟಿಲ್ಲಿ ಪಗರಿ ತಂದು ಮಡಿಗಿ ಈಗ ಸಣ್ಣಕೆ ಹೇಳ್ಸು – ಇಕೊಳಿ ಬಟ್ರೆ ಗೋಳಿಬಜೆ
ಸತ್ಯಣ್ಣನ ಹೋಟ್ಳಿಂಗೆ ಬಪ್ಪವ ನಾಕು ನಾಕು ಬಗೆ ತರ್ಸಿ ತಿಂಬವನೂ ಅಲ್ಲ, ಬಂದವ ಪೂರ್ತಿ ತಿಂದು ಅಪ್ಪನ್ನಾರ ಕಾವಲೆ ಾದು ಪಂಚತಾರ ಹೋಟ್ಳೂ ಅಲ್ಲ
ಸುರುವಾಣ ಪ್ಲೇಟು ಮಡಿಗಿದ ಕೂಡ್ಳೆ ಕೇಳಿಕ್ಕುವದು – ಅಣ್ಣಂಗೆ ಚಾಯವೋ ಕಾಪಿಯೋ ಕಶಾಯವೋ ಹಾಲೋ..
ಗಿರಾಗಿ ಹೇಳ್ತನ್ನೆ – ಚಾಯ / ಕಾಪಿ  ಅಕ್ಕು.
ಸತ್ಯಣ್ಣಂದು ಅಲ್ಲಿಂದಲೇ ದೊಡ್ಡಕೆ –  ಬಟ್ರಿಂಗೆ ಒಂದು ಪೆಸ್ಸಲು ಚಾಯೆ ಸುಗರ್ ಲೆಸ್ಸು
ಗಿರಾಕಿ ನೋಡಿಯೊಂಡಿದ್ದಾಂಗೆ ಸತ್ಯಣ್ಣನೇ ಹೋಗಿ ಚಾಯ ಅತ್ತಿತ್ತೆ ಮಾಡಿ ತಂದು ಮಡಿಗಿ ಇದ ಅಣ್ಣೋ ಚಾಯೆ ಹೇದು ಸಣ್ಣಕೆ ಹೇದಿಕ್ಕಿ ಮಡುಗುವದು.
ಗಲ್ಲಪೆಟ್ಟಿಗೆಲಿ ಕೂದೊಂಡು ಮತ್ತೊಂದರಿ ಗಟ್ಟಿಗೆ – ಬಟ್ರದ್ದು ಎಷ್ಟೋ ?
ಎಷ್ಟು ಹೇಳ್ಳೆ ಆರಿದ್ದವಲ್ಲಿ! ಗಿರಾಕಿಯೇ ಹೇಳುವದು – ಒಂದುಪ್ಲೇಟು ಗೋಳಿ ಬಜೆ, ಒಂದು ಚಪ್ಪೆ ಚಾಯೆ ಸತ್ಯಣ್ಣ. ಎಟ್ಟಾತು?
ಅಲ್ಲಿಗೆ ಒಂದು ಮುಕ್ಕಾಲು ಹೇದು ಸತ್ಯಣ್ಣ ಹೇಳುವದೂ ಗಿರಾಕಿ ಎರಡ್ರುಪ್ಪಾಯಿ ಕೊಟ್ಟಪ್ಪಗ ಸತ್ಯಣ್ಣ ಅದರ ಒಳಹಾಕಿ ಒಳಂದ ನಾಕಾಣೆ ಚಿಲ್ಲೆರಿ ತೆಗದು ಕೊಟ್ರೆ ಸತ್ಯಣ್ಣನ ಒಂದು ವ್ಯಾಪಾರ ಮುಗುದತ್ತು.
ಆಚಿಂಗೆ ಕೂದೊಂಡಿದ್ದವಂಗೆ ಟಿ.ವಿ ರೇಡಿಯಾ ಇಲ್ಲದ್ದೆ ಒಂದು ಮನರಂಜನೆಯೂ ಸಿಕ್ಕುತ್ತು 😀
 
**
8
ಅಡಿಗೆ ಸತ್ಯಣ್ಣ° ಏವಗ ಸಿಕ್ಕುತ್ತ° ಹೇದು ಬೈಲಿನಕ್ಕೆ ಒಂದು ಕಣ್ಣು
ಬೈಲಿನವು ಏವಾಗ ಸಿಕ್ಕುತ್ತವು ಹೇದು ಸತ್ಯಣ್ಣಂಗೂ ಒಂದು ಕಣ್ಣು
ಹೀಂಗಿಪ್ಪಗ ನಿನ್ನೆ ಒಂದು ಗುಟ್ಟಿನ ಶುದ್ದಿ ಸತ್ಯಣ್ಣ ನಮ್ಮತ್ರೆ ಹೇದ°.
ಇದು ಎನ್ನತ್ರೆ ಮಾತ್ರ ಗುಟ್ಟಿಲ್ಲಿ ಹೇದ ಕಾರಣ ಇದರ ನಿಂಗಳುದೇ ಗುಟ್ಟಿಲ್ಲಿ ಮಡಿಕ್ಕೊಳ್ಳಿ. ಆರತ್ರ ಹೇದಿಕ್ಕೆಡಿನ್ನು.
ಮದಲಿಂದಲೇ ಸುಳ್ಯಂದ ಕೊಡೆಯಾಲಕ್ಕೆ ಹೋಯ್ಕಿ ಬಪ್ಪಗ ನೆಡುಕೆ ಪುತ್ತೂರಿಲ್ಲಿ ಒಂದು ಬ್ರೇಕು ಹಾಕಲಿದ್ದಡ ಕೆಲವು ಜೆನಕ್ಕೆ
ಕಾರಣ ಪೇಟೆಲಿ ಕೆಲಸ ಇದ್ದು. ಹಾಂಗೇ ಪೇಟೆ ನೆಡುಕೆ ಎತ್ತಿಯಪ್ಪಗ ಒಂದು ಆಸರಿಂಗೆ ಕುಡಿದಿಕ್ಕಲೂ ಆವ್ತಿದ
ಹಾಂಗೇದು ಅವ್ವು ಹೋವ್ಸು ಹೋಟ್ಳಿಂಗೋ?!
ಕೇಟ್ರೆ.. ಅಲ್ಲ !!
ಪೇಟೆ ನೆಡೂಕೆ ಇಪ್ಪ ಜಿ.ಎಲ್ ಕಟ್ಟೋಣದ ಒಂದನೇ ಮಾಳಿಗ್ಗೆ
ಅಲ್ಲಿಗೆ ಹೋದರೆ ಅಲ್ಲಿಪ್ಪೋರ ಕಂಡು ಮಾತಾಡ್ಸಿದಾಂಗೂ ಆವ್ತು. ಅಲ್ಲಿಗೆ ಹೋದಪ್ಪಗ ಅಲ್ಲಿಪ್ಪವು ಇವು ಹೋದಪ್ಪಗ ಒಂದು ಚಾಯ ಬರ್ಲಿ ಹೇಳಿಯಪ್ಪಗ ಕೆಳಂದ ಒಂದು ಚಾಯ ಬಕ್ಕಡ.
ಈಗ ಆ ಕಟ್ಟೋಣಲ್ಲಿತ್ತಿದ್ದವು ಜಾಗೆ ಬದಲ್ಸಿದ್ದವು ಹೇದು ಶುದ್ದಿ
ಓ ಅಲ್ಲಿ ರಜ ಕೆಳ ಮುಂದೆ ಪೆಟ್ರೋಲು ಪಂಪಿನ ಹತ್ರೆ ಎಲ್ಯೋ  ಆವ್ತಡ. ಅಲ್ಲಿಯೂ ಒಂದನೇ ಮಾಳಿಗೆಯೆ.
ಭಾವಯ್ಯ ಈಚಿಗೆ ಹೋಗಿಯೊಂಡಿಪ್ಪಗ  ಅಲ್ಲಿ ವಾಹನ ನಿಲ್ಲುಸಲೆ ತುಂಬ ಉಪದ್ರ ಆಗ್ಯೊಂಡಿತ್ತಡ.
ಈಗ ಆ ಪೆಂಟ್ರೋಲು ಪಂಪಿನ ಹತ್ರೆ ವಾಹನ ನಿಲ್ಲುಸಲೆ ಬೇಕಾಷ್ಟು ಜಾಗೆ ಇದ್ದಡ.  ಹಾಂಗಾಗಿ ಬೈಲ ಬಾವಂದ್ರೂ ಈಗ ಎಂತಾರು ಕೆಲಸಂಗೊ ಆಯೇಕ್ಕಾರೆ ಆ ಹೊಡೆಂಗೆ ಹೋತಿಕ್ಕುವದಡ!
ಅಲ್ಲಿಗೆ ಹೋದಪ್ಪಗ ಮತ್ತೆ ಒಂದರಿ ಒಂದನೇ ಮಾಳಿಗ್ಗೆ ಹೋಗದ್ದೆ ಆವ್ತಾ!
ಮಾಳಿಗ್ಗೆ ಹೋಗಿ ಒಂದು ಚಾಯೆ ಹೇಳಿರೆ ಎರಡ್ನೇ ಮಹಡಿಂದ ಚಾಯೆ ಬತ್ತಡ 😀
ಸತ್ಯಣ್ಣ ಇಷ್ಟು ಹೇದಪ್ಪಗ  ನಿಂಗೊಗೆ ನೆಗೆ ಬಂತೋ ಇಲ್ಯೋ ಬೈಲ ಆ ಬಾವಂದ್ರ ಗ್ರೇಶಿ ಎನ ನೆಗೆ ಬಂತಪ್ಪ. ಎಂತಕೇದರೆ ಅಲ್ಲಿ ಚಾಯ ಬಪ್ಪದು ಸತ್ಯಣ್ಣನ ಹೋಟ್ಳಿಲ್ಲಿ ಆಯ್ಕೊಂಡಿದ್ದಾಗೆ ಏಕಪಾತ್ರಾಭಿನಯ!.  ಬಿಲ್ಲು ಏನು ತಾನು ಹೇದು ಮಾತ್ರ ಇಲ್ಲೆ ಅಟ್ಟೆ 😀
**
 
9
ಅಡಿಗೆ ಸತ್ಯಣ್ಣಂಗೆ ಶನಿವಾರ ಪನೆಯಾಲಲ್ಲಿ ತಿಥಿ
ಶನಿವಾರ ಅಡಿಗೆ ಸತ್ಯಣ್ಣಂಗೆ ಒಪ್ಪತ್ತು ಹೇದು ಏನೂ ಇಲ್ಲೆ, ಪನೆಯಾಲಲ್ಲಿ ಶನಿವಾರ ತಿಥಿ ಮಾಡ್ಳಾಗ ಹೇಳಿಯೂ ಇಲ್ಲೆ
ಅಡಿಗೆ ಸತ್ಯಣ್ಣಂಗೆ ಅಡಿಗೆ ಆಯ್ಕಿ ಪರಾಧಿನವೂದೆ
ಪರಾಧಿನ ಕಳ್ಶಿಕ್ಕಿ ಮನಗೆ ಎತ್ತಿಯಪ್ಪಗ ಅಡಿಗೆ ಸತ್ಯಣ್ಣಂಗೆ ವಿಪ್ರೀತ ತಲೆಬೇನೆ ಶೀತ
ಪರಾಧಿನಕ್ಕೆ ಕೂದರೆ ಮತ್ತೆ ಇರುಳಿಂಗೆ ಊಟ ಇಲ್ಲೆ ಅದಾ,  ಅಡಿಗೆ ಸತ್ಯಣ್ಣಂಗೆ ಶೀತ ತಲೆಬೇನೆ ಮಣ್ಣ ಹಿಡುದರೆ ಮತ್ತೆ ಊಟವೂ ಬೇಡ, ತಿಂಬಲೂ ಬೇಡ… , ಇರುಳಿಂಗೆ ಎನಗೆಂತ್ಸೂ ಬೇಡ ಹೇದ° ಅಡಿಗೆ ಸತ್ಯಣ್ಣ°.
ಶನಿವಾರ, ಅದಿತ್ಯವಾರ  ರಜೆ, ಸೋಮವಾರ ರಜೆ ಹಾಕಿದ್ದದು – ಈ ರೀತಿಯಾಗಿ ಅಡಿಗೆ ಸತ್ಯಣ್ಣನ ದೊಡ್ಡ ಮಗಳು ರಾಧೆಯೂ, ಅಳಿಯನೂ ಶನಿವಾರ ಮಧ್ಯಾಹ್ನಿಂತ್ರಿಗಿ ಬಂದು ಎತ್ತಿದವು
ಮಗಳು ಅಳಿಯ ನೆಂಟ್ರು ಇದ್ದವು ಹೇದು ಶಾರದಕ್ಕ ತೊಂಡೆಚಪ್ಪರಲ್ಲಿ ಆದ ಲಾಯಕ ತೊಂಡೆಕ್ಕಾಯಿ ಹೆರ್ಕಿ ಅರ್ಧ ಕಡಿ ಸೌತೆಕಾಯಿಯನ್ನೂ ಸೇರ್ಸಿ ಮೇಲಾರ ಮಾಡಿತ್ತು. 
ಮಗಳಿಂಗೆ ಹರುವೆ ಸಾಸಮೆ ಇಷ್ಟ ಹೇದು ಸಾಸಮೆಯೂ, ಅಳಿಯಂಗೆ ಪ್ರೀತಿ ಹೇದು ಶುಂಠಿ ತಂಬುಳಿಯೂ, ತನಗೆ ಬೇಕು ಹೇದು ಮುಳ್ಳುಸೌತೆ ಹಸಿಗೊಜ್ಜಿಯನ್ನೂ ಶಾರದಕ್ಕ ಮಾಡಿ ಮಡಿಗಿತ್ತು ಇರುಳಿಂಗೆ
ಇರುಳು ಅಡಿಗೆ ಸತ್ಯಣ್ಣಂಗೆ ಮಿಂದು ಜೆಪ ಎಲ್ಲ ಆದಪ್ಪಗ ಅದೆಂತ್ಸೋ ಪಟ್ಟಿ ಮಾಡುಸಲೆ ಹೇದು ಮಜ್ಜಿಗೆ ಮೊಸರು ಕಂಡ್ರೇ ಮೋರೆ ಹುಳಿ ಹುಳಿ ಅಪ್ಪ ಬಾವ° ಒಬ್ಬ° ಹಾಜರಿ ಆದ°
ಮಾತಾಡಿ ಎಲ್ಲ ಆತು, ಇನ್ನು ಉಂಡಿಕ್ಕಿಯೇ ಹೋಪಲಕ್ಕು ಹೇದು ಬಟ್ಳು ಮಡಿಗಿ ಊಟಕ್ಕೆ ಬಂದೋರ ಊಟಕ್ಕೆ ಕೂರ್ಸಿದ° ಅಡಿಗೆ ಸತ್ಯಣ್ಣ°
ಇಪ್ಪೋರು ಮನೆಯೋರ ಹಾಂಗೆ ಇಪ್ಪ ಕಾರಣ ಇನ್ನೂ ಕೂರ್ಸಿ ಬಳ್ಸಿ ಹೇದೆಲ್ಲ ಉಪಚಾರ ಮಾಡ್ಳೆ ಎಂತಿದ್ದಪ್ಪೋ!
ಬಟ್ಳ ಹರಗಿ ಹತ್ರೆ ಎಲ್ಲ ಮಡಿಕ್ಕೊಂಡು ಅಶನ ಬಳ್ಸಿತ್ತು ಶಾರದಕ್ಕ°.
ಅಡಿಗೆ ಸತ್ಯಣ್ಣ ರಪಕ್ಕನೆ ಹೋಗಿ ಹಲಸಿನಕಾಯಿ ಹಪ್ಪಳ ನಾಕು ಹೊರುದ ಬಾಣಾಲಗೆ ಎಣ್ಣೆ ಸುರುದು
ಮೊಸರು ಮಜ್ಜಿಗೆ ಆಗದ್ದ ಬಾವ ಹತ್ರೆ ಮಡಿಕ್ಕೊಂಡಿಪ್ಪ ಪಾತ್ರಂಗಳ ಮುಚ್ಚಳ ಒಂದರಿ ನೆಗ್ಗಿ ನೋಡಿಕ್ಕಿ ಮೂಗ ಪೀಂಟುಸಿ ಸಾರು ಮಣ್ಣ ಆಗಣದ್ದು ಮಾಡಿದ್ದು ಒಳುದ್ದದು ಇದ್ದೋ ಹೇದು ಕೇಟ°
ಸತ್ಯಣ್ಣಂಗೆ ಅಷ್ಟಪ್ಪಗಷ್ಟೇ ನೆಂಪಾತು – ಕೊದಿಲ ಮಣ್ಣ ಮಾಡಿಕ್ಕಲಾವ್ತಿತ್ತು.
ಆದರೆ ಬಟ್ಳ ಬುಡಲ್ಲಿ ಕೂರ್ಸಿಕ್ಕಿ ಇನ್ನೆಂತರ ಕೊದಿಲಿಂಗೆ ಅರಟುತ್ಸು!
“ಹಾ° ಇದ್ದು ಬಾವ ಇದ್ದು ಇದ್ದು ಹೇದ ಸತ್ಯಣ್ಣ ಇದಾ ಬೆಶಿ ಮಾಡಿ ತತ್ತೆ. ಹೇದಾಂಗೆ ಸಾರಿಂಗೆ ಇಂಗು ಹಾಕಿದ್ದು .. ಅಕ್ಕನ್ನೇ” – ಹೇದವನೇ, ಅಂಬಗಷ್ಟೇ ಬಗ್ಗುಸಿ ಮಡಿಗಿದ  ಹೆಜ್ಜೆ ತೆಳಿಯ ತಪ್ಪಲೆಂದ ಒಂದರ್ಧ ಕೈಮರಿಗೆ ತೋಡಿ ಅದಕ್ಕಿ ಒಂದಿಷ್ಟು ಉಪ್ಪು ಹುಳಿ ಮೆಣಸಿನ ಹುಡಿ ಕರಗಿಸಿ, ಒಂದಿಷ್ಟು ಇಂಗಿನಹೊಡಿಯ ಬಿಕ್ಕಿ, ಒಲೆಲಿ ಬೆಶಿಮಾಡಿದಾಂಗೆ ಮಾಡಿ ಅದಕ್ಕೊಂದು ಗಡಿಬಿಡಿ ಒಗ್ಗರಣೆ ಹಾಕಿ ತಂದು ಮಡಿಗಿದ° ಅಡಿಗೆ ಸತ್ಯಣ್ಣ°.
ಆಚವು ಲಾಯಕ ಮೇಲಾರ, ಸಾಸಮೆ , ತಂಬುಳಿ ಆಂತೊಂಡು ಉಂಡವು, ಇವ° ಬೆಶಿ ಬೆಶಿ ಕೊದಿಪ್ಪಟೆ ಸಾರಶನಕ್ಕೆ ಕೈಹಾಕಿ ಹಾ ಹೂ ಭಾರೀ ಲಾಯಕ ಆಯ್ದು ಹೇದು ಊಪಿ ಊಪಿ ಉಂಡಿಕ್ಕಿ ಎದ್ದ°.
“ಎಂತಾರು ಇವ್ವಿಂದು ಇದ್ದ ಕಾರಣ ಅತು . ಇಲ್ಲದ್ರೆ ಈ ಬಾವ° ಹಾಲು ಬೆಣ್ಣೆ ತುಪ್ಪಲ್ಲೇ ಉಣ್ಣೆಕ್ಕಾವ್ತಿತ್ತು” – ಹೇಳಿತ್ತು ಶಾರದಕ್ಕ°.
“ನುರಿತವರ ಕೈ ರುಚಿ ಹೇಳಿರೆ ಇದುವೇ ಅಪ್ಪೋ!” – ಅಬ್ಬೆಯತ್ರೆ ಹೇಳಿತ್ತು ರಮ್ಯ.  😀
**
10
ಅಡಿಗೆ ಸತ್ಯಣ್ಣನ ಶಿಷ್ಯವರ್ಗದವ್ವೇ ಗುತ್ತಿಗಾರಿನೋರು.
ಗೆಂಡ° ಹೆಂಡತಿ ಇಬ್ರುದೇ ಸತ್ಯಣ್ಣನ ಮನೆಗೆ ಬಂದವು ಮಗಳ ಮದುವೆಗೆ ಅಡಿಗ್ಗೆ ಪಟ್ಟಿ ಮಾಡುಲೆ ಹೇದು.
ಕಣ್ಣಎದುರೇ ಬೆಳದ ಕೂಸಿನ ಮದುವೆ ಹೇದು ಸತ್ಯಣ್ಣಂಗೆ ಭಾರೀ ಕೊಶೀ ಆತಡ್ಡ.
ಕೂಸು ಕಲ್ತು ದೊಡ್ಡ ಉದ್ಯೋಗಲ್ಲಿಯೂ ಇದ್ದಡ್ಡ.
ಮಾತಾಡ್ತ ಹಾಂಗೆ ಸತ್ಯಣ್ಣಂಗೆ ಒಂದರಿ ಹಿಂದಾಣ ಚಿತ್ರಣ ನೆಂಪಾತಿದಾ..
ಈ ಕೂಸು ಸಣ್ಣ ಇಪ್ಪ ಕಾಲಲ್ಲಿ ಕೂಸಿನ ಅಬ್ಬೆ ಗುರುಸೇವೆ ಯಥಾನುಶೆಗ್ತಿ ಮಾಡುಗು, ಅಂಬಗ ಈ ಕೂಸಿಂಗೆ ಎಂತದೋ ಉಶಾರಿಲ್ಲದ್ದೆ ಆಗಿ ರಾಮದೇವರ ಸೇವೆ ಮಾಡಿ ಉಶಾರು ಆದ್ದದು.
ಹಾಂಗೆ ಜೀವನಕಷ್ಟಲ್ಲಿದ್ದ ಕೂಸಿನ ದಾರಿ ಒಂದು ನೆಲೆ ಕಾಣ್ತಾ ಇದ್ದು ಹೇದು ಸತ್ಯಣ್ಣ ಕೊಶೀಲಿ ಕೇಟ- ‘ಅಂಬಗ ಮಗಳ ಎಲ್ಲಿಗೆ ಕೊಡುಸ್ಸು ?’
 ಅಬ್ಬೆ ಹೇಳಿತ್ತು – ‘ಸತ್ಯಣ್ಣೋ, ಮಗಳು ಒಳ್ಳೇತ ಕಲ್ತತ್ತಿದಾ, ಹಾಂಗೆ ಅದು ಮಾಣಿಯ ಅದುವೇ ನೋಡಿಗೊಂಡದು. ಮಾಣಿ ಕಾಂಬಲೆ ಚೆಂದಕೆ ಇದ್ದ. ಪೈಶವೂ ಬೇಕಾದಷ್ಟು ಇದ್ದು. ಅಬ್ಬೆ, ಅಪ್ಪ ಒಟ್ಟಿಂಗೆ ಇಲ್ಲೆ. ಅವಕ್ಕೆ ಮಗ ಒಟ್ಟಿಂಗೆ ಇರೆಕ್ಕು ಹೇದೂ ಇಲ್ಲೆ. ಪೇಟೆಲಿ ಚೆಂದಕ್ಕೆ ಇವ್ವು ಇಬ್ರೇ ಇಪ್ಪಲಕ್ಕಿದಾ. 
ಸತ್ಯಣ್ಣ ಕೇಟ°- “ಅಂಬಗ ಅವು ಯೇವ ಮನೆಯೋರಪ್ಪಾ? ನಮ್ಮಲ್ಲಿ ಹೀಂಗೆ ಇಪ್ಪವ್ವು ಇದ್ದವೋ?!!”
ಕೂಸಿನ ಅಬ್ಬೆ ಹೇಳಿತ್ತು, “ಅಯ್ಯೋ ಸತ್ಯಣ್ಣ ನಿಂಗೊ ಯೇವ ಕಾಲಲ್ಲಿ ಇದ್ದಿ? ಈಗ ಜಾತಿ ಎಲ್ಲ ಪ್ರಶ್ನೆಯೇ ಅಲ್ಲ. ಕಲಿಯುವಿಕೆ, ಉದ್ಯೋಗವೇ ಈಗಾಣ ಕಾಲಲ್ಲಿ ಅಗತ್ಯ ಇಪ್ಪದು. ಹಾಂಗೆ ಮಗಳು ಒಪ್ಪಿದವಂಗೆ ಎಂಗೊ ಮದುವೆ ಮಾಡಿ ಕೊಡುದು.
‘ಜಾತಿ ಲೆಕ್ಕ ಇಲ್ಲೆ’ -ಇದರ ಕೇಳಿ ಸತ್ಯಣ್ಣಂಗೆ ಒಂದರಿಯಂಗೇ ಬೆಶಿ ಎಣ್ಣೆ ಕಾಲಿಂಗೆ ಬಿದ್ದ ಹಾಂಗೆ ಆತು. ಅಕ್ಕೊ, ಈಗ ಬತ್ತೆ ಹೇದು ಒಳ ಹೋಗಿ ಕೆಲೆಂಡರಿಲ್ಲಿ ಹೋಪಲಿಪ್ಪದರ ಬರದು ಹಾಕಿದ್ದರ ನೋಡ್ತಾಂಗೆ ಮಾಡಿ ಬಂದಿಕ್ಕಿ ಹೇದ° .. –
“ಈಗ ಒಂದು ಸಮಸ್ಯೆ ಬಯಿಂದನ್ನೆಪ್ಪ! ನಿಂಗೊ ಮಗಳ ಕೈನೀರು ಬೀಳ್ತ.. ಅಲ್ಲಲ್ಲ.,  ಕೈಯೆತ್ತಿ ಕೊಡುವ ದಿನ ಎನಗೆ ಬೇರೆ ಒಪ್ಪಿಗೊಂಡದು ಇದ್ದು.  ನಿಂಗೊ ಆ ದಿನಕ್ಕೆ ಬೇರೆ ಆರನ್ನಾದರೂ ನೋಡಿಕ್ಕಿ ಆಗದೋ?”
ಬಂದೋರು ಇನ್ನು ಯೇವ ಕೇಟರಿಂಗಿನವನ ಹಿಡಿವದಂಬಗ ಹೇದು ಮಾತಾಡಿಗೊಂಡು ಹೋದವು.

ಅವರ ತಲೆಕೊಡಿ ಕಾಂಬನ್ನಾರ ತಳಿಯದ್ದೆ ಕೂದ ಸತ್ಯಣ್ಣ° ಒಂದರಿಯಂಗೇ ಪಿಸುರಿಲಿ ಹಾರಿದ°-  “ಗುರುಸೇವೆ ಮಾಡಿ ಕೂಸಿಂಗೆ ರಾಮರಕ್ಷೆ ಸಿಕ್ಕಿ ಬೆಳದಪ್ಪಗ ಬೇರೆ ಜಾತಿಗೆ ಮದುವೆ ಮಾಡ್ತವಡ್ಡ!  ಕೂಸಿಂಗೆ ಬುದ್ಧಿ ಇಲ್ಲೆ ಹೇದು ಮಡುಗುವ°. ಅಬ್ಬೆ ಅಪ್ಪನ ಬುದ್ಧಿಯ ಎಲ್ಲಿ ಅಡವು ಮಡಗಿದ್ದವು? ನಮ್ಮ ನಮ್ಮ ಜಾತಿ ಧರ್ಮಂದ ದೊಡ್ಡದು ಬೇರೆ ಇದ್ದ? ಹೀಂಗಿರ್ಸ ಮದುವೆಗೆ ಅಡಿಗೆ ಮಾಡ್ಲೆ ಈ ಸತ್ಯಣ್ಣ ಅಂತೂ ಸಿಕ್ಕಲೇ ಸಿಕ್ಕ. ಯೇ ಶಾರದೇ! ಇನ್ನು ಆರೇ ಬರಳಿ,  ಮೊದಾಲು ಎಲ್ಲಿಂದ ಎಲ್ಲಿಗೆ ಕೊಡುದು ತಪ್ಪದು ಹೇದು ಮದಾಲು ವಿಚಾರ್ಸೆಕ್ಕು ಮಿನಿಯಾ!. ಕಲಿಕಾಲ!! , ನಮ್ಮಲ್ಲಿ ಮಾಣಿಯಂಗೊಕ್ಕೆ ಕೂಸು ಸಿಕ್ಕದ್ದೆ ಎಲ್ಲೆಲ್ಲಿಂದಲೋ ತತ್ತಾ ಇಪ್ಪಗ ನಮ್ಮ ಕೂಸುಗಳ ಹಾಂಕಾರ ಕಾಣ್ತಿಲ್ಲೆಯಾ? ಬೇರೆ ಜಾತಿಯೋರ ಮದುವೆ ಅಪ್ಪದು!! ಛೆ!!” ಹೇದು ಒಂದರಿಯಂಗೆ ಬೈರಾಸು ಕುಡುಗಿಕ್ಕಿದ° ಸತ್ಯಣ್ಣ ದುಕ್ಕಲ್ಲಿ!! 🙁
ತನಗೂ ಮಗಳೊಂದು ಬಾಕಿ ಇದ್ದು ಹೇಳ್ತ  ನೆಂಪು ಇಪ್ಪ ಕಾರಣ ಶಾರದಕ್ಕ° ಎಂತ್ಸೂ ಮಾತಾಡಿತ್ತಿಲ್ಲೆ. ಸತ್ಯಣ್ಣನತ್ರೆ ಮಾತಾಡ್ಳೆ ಈಗ ಸಕಾಲ ಅಲ್ಲ ಹೇದು ತಳಿಯದ್ದೆ ಒಳ ನಡಾತು 🙁
ರಜ ಹೊತ್ತು ಕಳುದಿಕ್ಕಿ “ಎಲ್ಲ ಅವರವರ ವಿಧಿ!”  ಹೇಳಿಕ್ಕಿ ಅಲ್ಲಿಂದ ಎದ್ದನಡ್ಡ ಅಡಿಗೆ ಸತ್ಯಣ್ಣ° ದೊಡ್ಡ ಉಸುಲು ಒಂದು ಎಳಕ್ಕೊಂಡಿಕ್ಕಿ  😀
**
 
 

***  😀 😀 😀  ***

 

7 thoughts on “'ಅಡಿಗೆ ಸತ್ಯಣ್ಣ°' – 39

  1. Bhaari artha vattagi mudi baindu… lastina maduve kathe anthu adbhutha… olle Theme iddu… (y)

  2. ಹಾಸ್ಯದ ಲೇಪನಲ್ಲಿ ಬಪ್ಪ ಸತ್ಯಂಗೊ ರೈಸುತ್ತಾ ಇದ್ದು.ಹೋಟ್ಳಿನ ಶುದ್ದಿ-ಎಸರು ಹಳತ್ತಾದರೂ ಕುಪ್ಪಿ ಹೊಸತ್ತು.

  3. ತಿಥಿ ಇರುಳಿಂಗೆ ಹೇಳಿದ್ದು, ಬೆಂಚಿಮೆಟ್ಟಿನ ಕೆಲಸ, ಬಸ್ಸಿಲ್ಲಿ ಬೆಂದು ಕರಡಿ ಹೋದ್ದದು ಎಲ್ಲವೂ ಲಾಯಕಾತು. ಸತ್ಯಣ್ಣನ ಭೀಷ್ಮ ಪ್ರತಿಜ್ಞೆ ಸೂಪರ್ ಆಯಿದು. ಅಂತರ್ಜಾತಿ ವಿವಾಹಕ್ಕೆ ಸತ್ಯಣ್ಣನ ಅಡುಗೆ ಖಂಡಿತಾ ಸಿಕ್ಕ, ಒಳ್ಳೆ ತೀರ್ಮಾನ. ಸತ್ಯಣ್ಣಂಗೆ ಸತ್ಯಣ್ಣನೇ ಸರಿಸಾಟಿ.

  4. ಸತ್ಯಣ್ಣಂಗೆ ಸತ್ಯಣ್ಣನೇ ಸಾಟಿ.
    ಒಂದಕ್ಕಿಂತ ಒಂದು ತೂಕ ಹೆಚ್ಚಿನದ್ದೇ.

  5. ಸತ್ಯಣ್ಣನ ಏಕಪಾತ್ರಾಭಿನಯ ಪಶ್ಟಾಯಿದಪ್ಪ. ಎನಗೊಂದು ಸಂಶಯ ಬಪ್ಪದು. ಈ ಸತ್ಯಣ್ಣನೂ , ಆ ವಜ್ರಾಂಗಿ ಭಾವನೂ ಮದಲಿಂದಲೇ ಚೆಂಞಾಯಿಗಳೋ.. ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×