Oppanna.com

‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 8

ಬರದೋರು :   ಚೆನ್ನೈ ಬಾವ°    on   02/05/2013    9 ಒಪ್ಪಂಗೊ

ಚೆನ್ನೈ ಬಾವ°

ಹೋ..ಹು!! ಅಡಿಗೆ ಸತ್ಯಣ್ಣನ ಮನೆಲಿ ಹೋದವಾರ ಗೌಜಿಯೋ ಗೌಜಿ..

ರಮ್ಯ ಪಾಸಾದ ಲೆಕ್ಕಲ್ಲಿ ಮನೇಲಿ ಗಮ್ಮತು ಮಾಡಿತ್ತವು ..

ಅಬಾವ° ಕುಬಾವ° ಡೈಬಾವ° ಹೇದು ಬೈಲ ಬಾವಂದ್ರು ಅಲ್ಪ ಜೆನ ಬಂದಿತ್ತವಡೊ. ಆ ಅಕ್ಕ ಈ ಅಕ್ಕ ಆ ಅತ್ತೆ ಈ ಚಿಕ್ಕಮ್ಮ ಎಲ್ಲೋರು ಸೇರಿ ಭಜನೆಯೂ ಮಾಡಿದ್ದವಡೋ..

ಪರೀಕ್ಷೆ ಗ್ರೇಶಿದಷ್ಟು ಸುಲಬ ಇಲ್ಲದ್ದ ಕಾರಣ ಗ್ರೇಶಿದಷ್ಟು ಮಾರ್ಕೂ ಸಿಕ್ಕಿದ್ದಿಲ್ಲೆಡೋ ರಮ್ಯಂಗೆ..

ಅಂದರೂ ಮುಂದೆ ಕೋಲೇಜಿಂಗೆ ಸೇರ್ತಕ್ಕೆ ಅಡ್ಡಿ ಆಗ ಹೇದು ಧೈರ್ಯ ಹೈದವು ಬಂದ ಬೈಲ ಬಾವಂದ್ರು. ಬೇಕಾರೆ ಹೇಳಿ.. ಎಂಗಳ ಊರ್ಲಿ ಕೋಲೇಜಿಂಗೆ ವ್ಯವಸ್ಥೆ ಮಾಡ್ಸುವೋ ಹೇದು ಆಶ್ವಾಸನೆಯನ್ನೂ ಕೊಟ್ಟಿಕ್ಕಿ ಬೈಂದವಡಪ್ಪ ಇವ್ವು..

ಹೇದಾಂಗೆ ಕೋಲೇಜಿಲ್ಲಿ ಎಂತರ ತೆಕ್ಕೊಂಬದು ಇನ್ನು ಹೇಳ್ತದೇ ಈಗಾಣ ತಲೆಬೆಶಿ..

ರಮ್ಯಂಗೆ ಮೇತ್ಸು ಕಷ್ಟ, ಇಂಗ್ಲೀಷು ತಲಗೆ ಹೋವ್ತಿಲ್ಲೆ, ಸೈನ್ಸು ಎಳ್ಪ ಇಲ್ಲೆ,  ಸೋಶಲು ಬರದಷ್ಟು ಸಾಕಾವ್ತಿಲ್ಲೆ.. ಮುಂದೆ ಏವುದರ ಕಲಿವಲಕ್ಕು ಹೇದು ನಿಂಗಳತ್ರೆ ಕೇಳ್ತಾ ಇದ್ದು. ನಿಂಗೊ ಅರಡಿತ್ತೋರು ಆದ ಕಾರಣ ಬೇಕಾದಾಂಗೆ ಅದಕ್ಕೆ ಹೇಳಿಕ್ಕೊಟ್ಟಿಕ್ಕಿ ಮಿನಿಯಾ.

 

ಈ ವಾರ ಅಡಿಗೆ ಸತ್ಯಣ್ಣನ ಶುದ್ದಿ ಎಂತಲ್ಲ ಆತು ನೋಡ್ವೊ ಇನ್ನು –

 

1.

ಅಡಿಗೆ ಸತ್ಯಣ್ಣ° ವಿಟ್ಲಲ್ಲಿ ಪೋಲಿಸುಗೊಕ್ಕೆ ಹೋಳಿಗೆ ಕಟ್ಟು ಕೊಟ್ಟು ಜಾರಿದ್ದದು ಬೈಲಿಲಿ ಇಡೀ ಪ್ರಚಾರ ಆಯ್ದು..

ಎಲ್ಲೋರು ಅದರ ಗ್ರೇಶಿ ಗ್ರೇಶಿ ನೆಗೆಮಾಡ್ತವಡಾ..

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

ಹೋಳಿಗೆ ಹೋಳಿಗೆ ತಾತ್ಸರ ಮಾಡ್ತದೆಂತಕೆ ಹೋಳಿಗೆಯೇ ಅಲ್ಲದ ಭಕ್ಷ್ಯಂಗಳ ರಾಜ°, ಪೋಕುಮುಟ್ಟುವಾಗ ಅದುವೇ ಅಲ್ಲದ ಉಪಾಯಕ್ಕೆ ಸಿಕ್ಕಿದ್ದದು ಹೇಳಿ ಸತ್ಯಣ್ಣ ಅದಕ್ಕೆಲ್ಲ ಕೆಮಿಕೊಡ್ಳೆ ಇಲ್ಲೆ. ಇರ್ಲಿ.

ಸತ್ಯಣ್ಣ° ಹೊಸಮನೆಕಟ್ಟಿ ನಾಕು ವೊರಿಶ ಆವ್ತು ನಾಡ್ದು ಹದಿನೆಂಟಕ್ಕೆ..

ಸತ್ಯಣ್ಣನ ಕೈಲಿ ಪೈಸೆ ಇದ್ದುಗೊಂಡು ಅಲ್ಲ ಅಂವ ಮನೆಕಟ್ಟಿದ್ದದು. ಲಾಂಡ್ ಮೋರ್ಟುಗೇಜು ಬ್ಯಾಂಕಿಂದ ಸಾಲ ತೆಕ್ಕೊಂಡಿದ. ವೊರಿಶ ವೊರಿಶ ಕಂತು ಕಟ್ಟಿಗೊಂಡೂ ಬತ್ತ°..

ಆದರೆಂತ ಮಾಡೋದು.., ಈ ವೊರಿಶ ಅನುಪತ್ಯ ತುಂಬಾ ಕಮ್ಮಿ. ಹುಟ್ಟುವಳಿ ಹೇದು ಬೇರೆಂತೂ ಇಲ್ಲೆ..

ರಂಗಣ್ಣ ಕೇಳಿದ° – ಅಂಬಾಗ ಈ ವೊರಿಶ ಕಂತು ಕೇಳ್ಳೆ ಬಂದರೆ ಹೋಳಿಗೆ ಕಟ್ಟ ಕೊಟ್ಟು ಜಾರಿಕ್ಕಲೆಡಿಗೋ?!

ಸತ್ಯಣ್ಣ ಹೇದ° – ಏ ಮೋಂಞಾ!, ಅದಕ್ಕಲ್ಲದೋ° ಈಗ ತೋಟಕ್ಕೆ ಮಣ್ಣು ಹಿಡುಶುತ್ತೇದು ಬರದು ಕೊಟ್ಟಿಕ್ಕಿ ಗ್ರಾಮೀಣ ಬೇಂಕಿಂದ ಸಾಲ ತೆಕ್ಕೊಂಡದು!! 😀

~~

2.

ಬೊಳುಂಬು ಮಾವನ ಮಾಣಿಯ ಉಪ್ನಾನಕ್ಕೆ ಸತ್ಯಣ್ಣಂದೇ ಅಡಿಗೆ ಆಯೇಕು ಹೇದು ಗ್ರೇಶಿತ್ತವು..

ಸತ್ಯಣ್ಣಂಗೆ ಬೇರೆ ಒಪ್ಪಿದ್ದು ಇತ್ತಿದ್ದ ಕಾರಣ ಅಂದಿಗೆ ಅಲ್ಲಿಗೆ ಬೇರೆ ಜೆನ್ರ ಒಪ್ಪಿಸಿದ್ದು..

ಸರಿ ಅಂಬಗ., ಉಪಾಕರ್ಮಕ್ಕಾದರೂ ನೀನೇ ಬಂದಿಕ್ಕು ಹೇದು ವಿನಂತಿ ಮಾಡ್ಳೆ ಬೊಳುಂಬು ಮಾವನ ಮನಗೆ ಸೀದಾ ಹೋದವು ಒಂದು ದಿನ..

ಅಡಿಗೆ ಸತ್ಯಣ್ಣ° ಅಂದು ಮನೇಲಿ ಇತ್ತಂವ° ಪೇಟಗೆ ಹೋಪಲೆ ಅಂಗಿ ಸುರ್ಕೊಂಡು ಪಕೀಟು ಬಿಡ್ಸಿ ಹಾಕಿ ತುಂಬ್ಸಿಗೊಂಡಿತ್ತ°..

ಬೊಳುಂಬು ಮಾವ ಒಳ ಪ್ರವೇಶ ಅಪ್ಪಗ ಸತ್ಯಣ್ಣನ ಪಕೀಟಿಂದ ನಾಲ್ಕೈದು ಕ್ರೆಡಿಟು ಕಾರ್ಡ್ ಉದುರಿತ್ತು..

ಬೊಳುಂಬು ಮಾವಂಗೇ ಆಶ್ಚರ್ಯ ಇಷ್ಟೊಂದು ಕ್ರೆಡಿಟ್ ಕಾರ್ಡ್ ಸತ್ಯಣ್ಣನ ಕೈಲಿ!!

ಅಂತೇ ಕೇಟವು – ಇಷ್ಟೊಂದು ಕಾರ್ಡ್ ಮಡಿಕ್ಕೊಂಡು ಭಂಙ ಆವ್ತಿಲ್ಯೋ ಸತ್ಯಣ್ಣ?

ಸತ್ಯಣ್ಣ° ಹೇದ°- ಇದು ನಿಂಗಳಾಂಗಿರ್ತವಕ್ಕಷ್ಟೇ ಭಂಙ. ಒಂದು ಕಾರ್ಡಿಂದ ಪೈಸೆ ತೆಗದತ್ತು ಖರ್ಚಿ ಮಾಡಿತ್ತು. ಅದರ ವಾಯ್ದೆ ಅಪ್ಪಲಪ್ಪಗ ಆಚ ಕಾರ್ಡಿಂದ ಪೈಸೆ ತೆಗದು ಈಚದಕ್ಕೆ ಕಟ್ಟೆಕು. ಹಾಂಗೆ ನಾಲ್ಕೈದು ಕೈಲಿ ಇದ್ದರೆ ವೊರಿಶ ಹೋಪದು ಗೊಂತಾವ್ತಿಲ್ಲೆ ! 😀

~~

3.

ಪುತ್ತೂರ್ಲಿ ಕಾನಾವು ಡಾಕುಟ್ರ ಮನೆ ಒಕ್ಕಲಿನ ದಿನಾವೆ ವಿಟ್ಲಲ್ಲಿ ಕೂಳಕ್ಕೋಡ್ಳ ಡಾಕುಟ್ರ ಮನೆ ಒಕ್ಕಲು..

ಅಲ್ಲಿಯೂ ಹೋಳಿಗೆ!, ಇಲ್ಲಿಯೂ ಹೋಳಿಗೆ..!!

ಕಾನಾವಿಂಗೆ ಬೇರೆ ಜೆನ ಕಳ್ಸುತ್ತೆ, ಆನು ಕೂಳಕ್ಕೋಡ್ಳ ಅಡಿಗ್ಗೆ ಹೋವೆ ಹೇಳಿಯಪ್ಪಗ ಕಾನಾವಕ್ಕ° ಒಪ್ಪಿದ್ದವಿಲ್ಲೆ..

“ಅದಾಗ, ಅಲ್ಲಿಗೆ ನೀ ಜೆನ ಮಾಡು, ಇಲ್ಲಿಗೆ ನೀನೇ ಖುದ್ದಾಗಿ ಬಂದಿಕ್ಕು” ಹೇದವು ಕಾನಾವಕ್ಕ°..

ಕಾನಾವಕ್ಕ° ಒಂದು ಹೇಳಿರೆ ಮತ್ತೆ ಬದಲ್ಸುವ ಹಾಂಗಿಲ್ಲೆ – ಅಡಿಗೆ ಸತ್ಯಣ್ಣಂಗೂ ಗೊಂತಿದ್ದು.

ಹಾಂಗಾಗಿ ಅಡಿಗೆ ಸತ್ಯಣ್ಣ° ಕಾನಾವಿಂಗೂ, ಮೀಯಪ್ಪದವು ಹೊಳ್ಳಣ್ಣ° ಕೂಳಕ್ಕೋಡ್ಳಿಂಗೂ ಮಾತಾಡಿ ಒರ್ಮೈಸ್ಯೋಂಡವು..

ಹಾಂಗಾಗಿ ಅಡಿಗೆ ಸತ್ಯಣ್ಣನ ಕಾಣೆಕು ಹೇದು ಕೂಳಕ್ಕೋಡ್ಳ ಮನೆ ಒಕ್ಕಲಿಂಗೆ ಹೋದ ಕುಂಜತ್ತೋಡಿ ಬಾವಂಗೆ ಅಡಿಗೆ ಸತ್ಯಣ್ಣನ ಕಾಂಬಲೆ ಸಿಕ್ಕಿದ್ದಿಲ್ಲೆ..

ಮನಗೆ ಬಂದ ಕುಂಜತ್ತೋಡಿ ಭಾವ° ಮನೆಲಿ ಹೇಳಿದವಡ.. – “ನೀನೇ ಹೋಗಿದ್ದರೆ ಸಾಕಾವ್ತಿತ್ತು ಮಾರಾಯ್ತಿ ಇಂದು ಮನೆ ಒಕ್ಕಲಿಂಗೆ”  😀

~~

4.

ಹೋದ ಆದಿತ್ಯವಾರ ಬೈಲು ಪ್ರತಿಷ್ಠಾನದ ಬಾಬ್ತು ಪುತ್ತೂರ್ಲಿ ಅಷ್ಟವಧಾನ ..ಅಲ್ಪ ಜೆನವೂ ಆಯ್ದು ಹೇದು ಎಲ್ಲೋರಿಂಗೂ ಗೊಂತಿಪ್ಪದೇ..

ಬೈಲಿನ ಬಾಬ್ತು ಜೆಂಬ್ರ ಆದಕಾರಣ ಬಂಡಾಡಿ ಅಕ್ಕನ  ಬೇಂಕು ಪರೀಕ್ಷೆ ಬಿಟ್ರೆ ಬೇರೆ ಅನುಪ್ಪತ್ಯಂಗ ಏವುದೂ ಇತ್ತಿಲ್ಲೆ.

ಬೈಲಿನದ್ದೇ ಜೆಂಬ್ರ  ಆದಕಾರಣ ಅಡಿಗೆ ಸತ್ಯಣ್ಣನೂ ಬಂದಿತ್ತ°..

ಸತ್ಯಣ್ಣನೊಟ್ಟಿಂಗೆ ಶಾರದೆ ಬಾರದ್ದಕ್ಕೂ ರಮ್ಯ ಬಾರದ್ದಕ್ಕೂ ಬೇರೆಯೇ ಕಾರಣ.. ಅದೆಂತರ ಹೇದು ನವಗೂ ಬೇಡದ್ದು..

ಸತ್ಯಣ್ಣ ಬಪ್ಪಗ  ಜುಬ್ಬಲ್ಲಿ ಬಂದ್ಸು . ಅದೂ ಕೆಂಪು ಜುಬ್ಬ.. ಅದು ಹದಾ ನಸು  ಕೆಂಪು ಹೊಸ ಜುಬ್ಬಾ..

ಅಡಿಗೆ ಸತ್ಯಣ್ಣ° ಕೆಂಪು ಜುಬ್ಬಲ್ಲಿ ಬಂದ್ಸು  ನಿಂಗಳೂ ಅಲ್ಲಿ ಕಂಡಿಪ್ಪಿ.. [ಕಾಣದ್ರೆ ಒಂದರಿ ಅಂದ್ರಾಣ ವೀಡಿಯೋ ಇಡೀ ನೋಡಿ. ಗೊಂತಕ್ಕು]

ಏವತ್ತೂ ಸಾದಾ ಅಂಗಿಲಿ ಅದೂ ಗುಬ್ಬಿ ಏವ್ಯೇವುದೋ ಒಟ್ಟಗೆ ತುರ್ಕಿಸಿ ಅಂಬೇರ್ಪಿಲ್ಲಿ ಹೆರಟೊಂಡು ಬಪ್ಪ ಅಡಿಗೆ ಸತ್ಯಣ್ಣ ಅಂದು ಕೆಂಪು ಜುಬ್ಬಲ್ಲಿ ಬಂದದೆಂತಕೆ ಹೇದು ಚಾವಡಿಲಿ ಕೆಲೋರು ಕೂದೊಂಡು ಚರ್ಚೆ ಮಾಡಿದವು..

ಕಡೇಂಗೆ ಅಡಿಗೆ ಸತ್ಯಣ್ಣನೇ ಒಪ್ಪಿಗೊಂಡ°…

ಓ ಅಂದು ತೆಂಕ್ಲಾಗಿ ಅನುಪ್ಪತ್ಯದ ಅಡಿಗ್ಗೆ ಹೋಯ್ಕಿ ಬಪ್ಪಗ ಅಡಿಗೆ ಸತ್ಯಣ್ಣ° ಕಲ್ಲಿಕೋಟೆಂದ ಒಂದು ಹೊಸ ಜುಬ್ಬ ತಂದಿತ್ತಿದ್ದ°. ಅದೂ ಹದಾ ನಸು ಕೆಂಪು ಜುಬ್ಬ .

ಬೈಲ ಜೆಂಬ್ರ ಸಾಧಾರಣ ಎಲ್ಲಿ ಇದ್ದರೂ ಶಾರದೆಯ ಸಣ್ಣ ತಂಗೆ, ಶಾರದೆ ಅಪ್ಪ° ಬಾರದ್ದೆ ಇರ್ತವಿಲ್ಲೆ..

ಹಾಂಗೆ ಇಂದೇನಾರು ಬಂದರೆ ಹೊಸ ಜುಬ್ಬಲ್ಲಿ ಸತ್ಯಣ್ಣನ ನೋಡಿ “ಜುಬ್ಬಲ್ಲಿ ನಿಂಗೊ ಚಂದ ಕಾಣ್ತಿ ಭಾವ” ಹೇಳಿರಾತನ್ನೇ ಹೇದು ಸಣ್ಣ ಒಂದು ಆಶೆ!. ಹೇಂಗೆ ಸತ್ಯಣ್ಣನ ಕೆಣಿ!! 😀

~~

5.

ಅಡಿಗೆ ಸತ್ಯಣ್ಣ ನಮ್ಮಷ್ಟು ಶಾಲಗೆ ಹೋಯಿದನಿಲ್ಲೆ. ಲೆಕ್ಕ ಅವಂಗೆ ಲೆಕ್ಕಕ್ಕೇ ಬಾರ. ಇಂಬ್ಲೀಷು ಹೇಳಿರೆ ಆಗಲೇ ಆಗ ಅವಂಗೆ.

ಹೇಂಗೋ ನಾಕನೇ ವರೇಂಗೆ ಹೋಗಿ ಪೈಲಾದಿಕ್ಕಿ ಮತ್ತೆ ಅಪ್ಪನೊಟ್ಟಿಂಗೆ ಅಡಿಗ್ಗೆ ಸುರುಮಾಡಿದ್ದದಿದಾ..

ಅಂದರೂ ಅವ° ಕಲ್ತ ವಿದ್ಯೆ ಅವಂಗೆ ಧಾರಾಳ ಸಾಕಾವ್ತು ಚೆಂದಕೆ ಜೀವನ ನಡೆಶುಲೆ..

ಹೀಂಗೆ, ಅಡಿಗೆ ಸತ್ಯಣ್ಣಂಗೆ ಮೊನ್ನೆ ಒಂದಿಕ್ಕೆ – ಸಣ್ಣಕೆ ತಿಥಿ ಅಡಿಗ್ಗೆ..

ಕೆಲಸ ಎಲ್ಲ ಮುಗಿಶಿ ಪಾತ್ರೆ ಸಮಾಲ್ಸಿ ಎಲ್ಲ ಮಾಡಿ ಕೊಟ್ಟಿಕ್ಕಿ ಸತ್ಯಣ್ಣ ಅಂಗಿ ಹಾಕಿದ°..

ಯಜಮಾನ ಕೇಳಿದ° – “ಎಷ್ಟು ಸತ್ಯಣ್ಣೋ°?”

ಸತ್ಯಣ್ಣ° ಆರತ್ರೆಯೂ ಇಂತಿಷ್ಟು ಹೇದು ಈ ವರೇಂಗೆ ಕೇಳಿದಂವ° ಅಲ್ಲ. ಕೈ ಮಡುಸಿ ಕೊಟ್ಟದರ ಹಾಂಗೆ ಕಿಸೆಗೆ ತುಂಬ್ಸಿ ಚೆರ್ಪು ಸುರ್ಕಂಬದು ಕ್ರಮ.

ಇಲ್ಲಿಯೂ ಸತ್ಯಣ್ಣ – “ನಿಂಗೊ ಅಲೋಚನೆ ಮಾದಿ ಕೊಡಿಪ್ಪಾ..” ಹೇದ°..

ಯಜಮಾನಂಗೆ ಮತ್ತೂ ಅಂದಾಜಿ ಆತಿಲ್ಲೆ ಎಷ್ಟು ಕೊಡೆಕು ಹೇದು. ಕೊಟ್ಟದು ಮತ್ತೆ ಹೆಚ್ಚಿಗೆ ಅಪ್ಪಲಾಗನ್ನೇ!

ಯಜಮಾನನ ತಮ್ಮ ಬೆಂಗ್ಳೂರಿಲಿಪ್ಪೋನು ಬಂದಿತ್ತ ತಿಥಿಗೆ.

ತಮ್ಮನತ್ರೆ ಕೇಟ° – ಎಷ್ಟು ಕೊಡೆಕು.?

ತಮ್ಮ ಹೇದ° – “ಟೂ ಫಿಫ್ಟಿ…    ಟೂ ಫಿಫ್ಟಿ “

ಇಂಗ್ಲೀಷಿಲ್ಲಿ ಏನಾರು ಹೇಳಿರೆ ಅರ್ಥ ಆಗದ್ದ ಸತ್ಯಣ್ಣಂಗೆ ಹಾಂಗೇಳಿರೆ ಎಷ್ಟು ಹೇದು ಅಂದಾಜಿ ಆಯ್ದಿಲ್ಲೆ..

ಸತ್ಯಣ್ಣ° ಬಾಯಿಬಿಟ್ಟು ಹೇದ° “ಅಷ್ಟೆಲ್ಲ ಬೇಡ ಭಾವ.. ಬರೇ ತಿಥಿ ಅಡಿಗ್ಗೆ ಅಲ್ಲದೋ, ಮುನ್ನೂರು ಕೊಡಿ ಸಾಕು.”  😀

~~

6.

ಅಡಿಗೆ ಸತ್ಯಣ್ಣ ಆತು , ಅವನ ಅಡಿಗೆ ಆತು.

ಅದರಿಂದ ಹೆಚ್ಚಿಗೆ ನೇರಂಪೋಕಿಂಗೆಲ್ಲ ಅವಂಗೆ ಪುರುಸೊತ್ತಿಲ್ಲೆ.

ಪುರುಸೊತ್ತಿಲ್ಲದ್ದವಂಗೆ ಹವ್ಯಾಸವೂ ಇಲ್ಲೆ ಹೇಳಿ ಇನ್ನು ಪ್ರತ್ಯೇಕ ಹೇಳ್ಳೆ ಇಲ್ಲೆ..

ಹಾಂಗೇಳಿ ಯಾವದಕ್ಕೂ ಅವನ ವಿರೋಧವೂ ಇಲ್ಲೆ. ಒಟ್ಟಿಂಗೆ ಹೋಪಗ ಎಲ್ಲದರಲ್ಲಿಯೂ ಇದ್ದ°..

ಸತ್ಯಣ್ಣ ಪಲ್ಸರುಬೈಕು ತೆಗವಂದ ಮದಲೆ ಒಂದಿನ ..

ಗೋಳಿತ್ತಡ್ಕ ಅಡಿಗೆ ಮುಗುಶಿ ಇರುಳೇ ಹೆರಟವು ಮನಗೆ ನೆರೆಕರೆಯವೂ ಇದ್ದವನ್ನೆ ಒಟ್ಟಿಂಗೇದು ನಡಕ್ಕೊಂಡೇ

ಪೆರ್ಲಲ್ಲಿ ಅಂದು ಆಟ..  ಒಟ್ಟಿಂಗೆ ಇಪ್ಪೋರು ರಜಾ ಹೊತ್ತು ಆಟ ನೋಡಿಕ್ಕಿ ಹೋಪೋ ಹೇದು ಒತ್ತಾಯ ಮಾಡಿದವು..

ಸರಿ ಹೇದು ಮನಸ್ಸಿಲ್ಲದ್ದರೂ ಸತ್ಯಣ್ಣ° ಆಟ ನೋಡ್ಳೆ ನಿಂದ..  ಸುಧನ್ವಾರ್ಜುನ ಪ್ರಸಂಗ.. ಸುಧನ್ವ ಪ್ರಭಾವತಿಯ ಭಾಗ ನಡಕ್ಕೊಂಡಿತ್ತಿದ್ದು… ಹೊಳ್ಳನ ಲಾಯಕ ಪದ, ಜೆನವೂ ಅಲ್ಪ..

ಅದಾದಿಕ್ಕಿ ಹಂಸಧ್ವಜ ಶಂಖಲಿಖಿತರು ಬಂದಪ್ಪಗ ಸತ್ಯಣ್ಣಂಗೆ ಉದಾಸನ ಅಪ್ಪಲೆ ಸುರುವಾತು. ಮೆಲ್ಲಂಗೆ ಹೆರಟ° ಮನಗೆ.

ಸತ್ಯಣ್ಣಂಗೆ ಆಟಲಾಯಕ ಆಯ್ದೋ ಇಲ್ಯೋ ಪದ ಮಾತ್ರ ಭಾರೀ ಕೊಶಿ ಆಗಿತ್ತು…

ಹೊಳ್ಳಣ್ಣನ ಸತಿಗೆ ಶೋಡಷದ ಋತುಸಮಯ…. ರಾಗ ಹಾಕಿ ಎಂಟು ಹತ್ತು ಆವೃತ್ತಿ ಹಾಕಿದ್ದರ್ಲಿ ಸತ್ಯಣ್ಣಂಗೂ ಪದ ಬಾಯಿಪಾಠ ಆಯ್ದು..

 

ಮರುದಿನ ಏನಂಕೋಡ್ಳಿಲ್ಲಿ ಅನುಪತ್ಯ. ಸತ್ಯಣ್ಣನ ಅಡಿಗೆ..

ಸತ್ಯಣ್ಣಂಗೆ ಒಂದು ಪದ ಮಾತ್ರ ಭಾರೀ ಕೊಶಿ ಆಗಿತ್ತು. ಅಂಬಗಂಬಗ ಬಾಯಿಲಿ ಸಣ್ಣಕೆ ಭಾಗವತಿಗೆ ಸುರುಮಾಡಿದ – ಸತಿಗೆ ಶೋಡಷದ ಋತು ಸಮಯ…………  [ಪದ ಮಾಂತ್ರ ಮುಗಿತ್ತಿಲ್ಲೆ..]

ಒಬ್ಬ ಭಾವಯ್ಯ ಕೇಳಿದ° – “ಸತ್ಯಣ್ಣ ಎಂತ ನಿನ್ನೆ ಆಟಕ್ಕೆ ಹೋಯ್ದೆಯೋ?.. ಪದ್ಯಕ್ಕೆ ರಘುರಾಮನೋ?..

ಸತ್ಯಣ್ಣ° ಹೇಳಿದ° – ಇಲ್ಲೆ ., ರಘುರಾಮ ಬೈಂದನಿಲ್ಲೆ .. ಹೊಳ್ಳ° ಬಂದ್ಸು ನಿನ್ನೆ!! 😀

~~

7.

ಅಂದೊಂದು ದಿನ ಎಂತಾತು ಕೇಳಿರೆ..

ಅಡಿಗೆ ಸತ್ಯಣ್ಣ° ಇರುಳು ಉಂಡಿಕ್ಕಿ ಬಸ್ಸಿಲ್ಲಿ ಕೂದ್ದು ಬೇಂಗಳೂರು ಮಗಳ ಮನಗೆ ಹೋದೋನು ವಾಪಾಸು ಊರಿಂಗೆ ಬಪ್ಪಲೆ.

ಬಸ್ಸು ಮೈಸೂರು ಮಡಿಕೇರಿ ಸುಳ್ಯ ಆಗಿ ಪುತ್ತೂರಿಂಗೆ ಎತ್ತುವಾಗ ಸತ್ಯಣ್ಣಂಗೆ ಬಸ್ಸು ಬಿಟ್ಟಿಕ್ಕಿ ಇಳುದಾರಾತು..

ಇರುಳು ಹತ್ತು ಮುಕ್ಕಾಲಕ್ಕೆ ಮೆಜೆಸ್ಟಿಕಿಂದ ಹೆರಟ ಬಸ್ಸು ಢಂಗಣ ಢಂಗಣ ಮಾಡಿಗೊಂಡು ಮೈಸೂರು ದಾಂಟಿ ಕುಶಲನಗರ ಹೊಡೆಲಿ ಬಂದುಗೊಂಡಿತ್ತು.

ಅಂದು ಅಮಾಸೆ ಬೇರೆ ಕರ್ಕೂಡಿ ಕತ್ತಲೆ.. ಸಾಲದ್ದಕ್ಕೆ ಮೋಡವೂ ಬೇರೆ.

ಗಂಟೆ ಎರಡೂವರೆ ಕಳುದಿಕ್ಕು… ಎಲ್ಲೋರು ಗಾಢ ನಿದ್ರೆಲಿ ತೇಲಾಡಿಗೊಂಡಿತ್ತವು..

ಸತ್ಯಣ್ಣಂಗೆ ಕಣ್ಣಡ್ಡ ಆದರೂ ಬಸ್ಸಿಲ್ಲಿ ಒರಕ್ಕು ಬಾರ..

ಒಂದು ತೊಂಡ ಡ್ರೈವರು ಓಡ್ಸಿಗೊಂಡಿತ್ತು ..ಬಸ್ಸು ಹೋಗಿಯೊಂಡಿತ್ತು.

ಗಂಟೆ ಮೂರುವರೆ… ಕುಶಲನಗರಕ್ಕಿನ್ನು ಮುವತ್ತೇ ಮಿನುಟು ಬೇಕಾದ್ದು.

ಎದುರೆ ಒಂದು ಐದಾರು ಜೆನಂಗೊ ಕತ್ತಿ ದೊಣ್ಣೆ ಟಾರ್ಚಿ ಲೈಟು ಹಾಕ್ಯೊಂಡು ಬಸ್ಸಿಂಗೆ ಅಡ್ಡ ಬಂದು ನಿಂದವು ಆ ಕಾಡ ನಡುಕೆ ಬಸ್ಸು ಹೋಗಿಯೊಂಡಿಪ್ಪಗ. .

ಡ್ರೆವರಂಗೆ ಎಂತಾತು, ಏನಾರು ಅವಘಡ ಮಣ್ಣೋ ಆಯ್ದಾಯ್ಕು ಹೇಳಿ ಬಸ್ಸು ನಿಲ್ಲಿಸಿತ್ತು ಹೆದರಿ, ಆ ಮನುಷ್ಯರ ನೋಡಿ. ಬಸ್ಸು ನಿಂದಪ್ಪದ್ದೆ ದಢಬಡನೆ ಬಾಗುಲ ಎಳದು ಬಸ್ಸಿನೊಳ ಏರಿ ಬಂದವು ಆ ಮನುಷ್ಯರು. ಕೂದೊಂಡು ಒರಗಿಯೊಂಡಿತ್ತವರ ತಲಗೆ ಬೆನ್ನಿಗ್ಗೆ ಹೆಟ್ಟಿ ಏಳ್ಸಿದವು.. ಜೆನಂಗೆ ಗಾಬರಿಯಾಗಿ ಬೊಬ್ಬೆ ಹಾಕಲೆ ಸುರುಮಾಡೆಕ್ಕಾರೆ, ‘ಸೊರ ಎತ್ತಿರೆ ಜಾಗ್ರತೆ!’ ಹೇದು ಠುಯ್ಕನೆ ತಲಗೆ ಕುಟ್ಟಿದವು. 🙁  ಅಲ್ಲಿಂದ ಬೇಗುಗಳ ಚೆಲ್ಲಪಿಲ್ಲಿ ಮಾಡಿ ದೋಚಿ ಮನುಷ್ಯರ ಕೈಲಿ ಕಿಸೆಲಿ ಇಪ್ಪದರ ಎಲ್ಲ ದೋಚಿಗೊಂಡು ಅವು ಕೆಳ ಇಳುದಿಕ್ಕಿ ಬಸ್ಸಿಂಗೆ ‘ರೈಟು, ಹೋಗಲಿ ಗಾಡಿ’ ಹೇಳಿದವು.. 🙂

ಛೇ ಗ್ರಾಚರವೇ ಹೇದು ಎಲ್ಲೋರು ಕೂಗಲೆ ಸುರುಮಾಡಿದವು.. ಬಸ್ಸು ಮುಂದೆ ಹೋವ್ತಾ ಇತ್ತು..

ಸತ್ಯಣ್ಣನತ್ರೆ ದೋಚಲೆ ಎಂತೂ ಇತ್ತಿಲ್ಲೆ. ಐವತ್ತರ ಒಂದು ನೋಟೂ, ಹತ್ತರ ಒಂದು ನೋಟು ಮಾತ್ರ ಇತ್ತಿದ್ದದು ಅಂಗಿ ಕಿಸೆಲಿ. ಪುಣ್ಯ! ಚಡ್ಡಿ ಕಿಸೆಲಿ ನೂರರ ಐದು ನೋಟು ಇತ್ತಿದ್ದದು ಅವಕ್ಕೆ ಗೊಂತಾಯ್ದಿಲ್ಲೇದು ನಿಟ್ತಿಸುರು ಬಿಟ್ಟುಗೊಂಡ ಸತ್ಯಣ್ಣ°..

ಬಸ್ಸು ಮುಂದೆ ಹೋವ್ತಾ ಇತ್ತು. ಮಡಿಕೇರಿ ದಾಂಟಿತ್ತು.. ಘಾಟಿ ಇಳಿವಲೆ ಸುರುವಾತು. ಗಂಟೆನೋಡ್ಳೆ ವಾಚಿ ಇದ್ದರಲ್ಲದೋ  🙁

ಬಸ್ಸು ಸಮಧಾನಕ್ಕೇ ಘಾಟಿ ಇಳಿತ್ತಾ ಇದ್ದು..   ಕಲ್ಲುಗುಂಡಿ ಹತ್ರೆ ಎತ್ತಲಾತು..

ಎದುರಂದ ಒಂದು ಮರದ ಲೋರಿ ಮೇಗಂತಾಗಿ ಬತ್ತಾ ಇತ್ತಿದ್ದದು.. ಮಂಗ., ರೋಂಗ್ ಸೈಡಿಲಿ ಬತ್ತಾ ಇದ್ದತ್ತು.

ಬಸ್ಸಿನ ಡ್ರೈವರ ಬಸ್ಸ ಬಲದ ಹೊಡೆಲಿ ತೆಕ್ಕೊಂಡ°. ಲಾರಿ ಪಾಸಾವ್ತಾ ಇದ್ದಾಂಗೆ ಲಾರಿಯ ಹಿಂದಾಣ ಹೊಡೆ ಬಸ್ಸಿನ ಹಿಂದಾಣ ಹೊಡೆಂಗೆ ಢಮಾಲನೆ ಹೆಟ್ಟಿತ್ತು.. ಹೋ! ಹಾ..! ಹೇಳ್ವನ್ನೊಳ ಬಸ್ಸತ್ತೆ ಬಲದ ಹೊಡೆಂಗೆ ಕೆಳಂತಾಗಿ ಉರುಳಿತ್ತು. 🙁

ಪುಣ್ಯ ಅಲ್ಲಿ ಮರಂಗಳ ಕಾಡೇ ಇತ್ತಿದ್ದರಿಂದ ನಾಲ್ಕೈದು ಪಲ್ಟಿ ಎಲ್ಲ ಆಯ್ದಿಲ್ಲೆ. ಆದರೆ ಬಸ್ಸು ಸಮಕ್ಕೆ ಎದುರಾಣ ಹೊಡೆ ಜಖಂ ಆಗಿತ್ತು. ಅಂದರೂ ಒತ್ತೆ ಒಬ್ಬ ಮನುಷ್ಯಂಗೆ ಜೀವಾಪಾಯ ಆಯ್ದಿಲ್ಲೆ. ಬರೇ ಪೆಟ್ಟು ಗಾಯ ನೆತ್ತರು ಅಷ್ಟೇ..

ಸತ್ಯಣ್ಣ ಮೆಲ್ಲಂಗೆ ಬಸ್ಸಿಂದ ಇಳಿತ್ತೇನೆ ಹೇದು ಮೋಂಟಿಸಿಗೊಂಡು ಹೆರಟು ಬಸ್ಸಿಂದ ಕೆಳ ಇಳುದ್ದನಷ್ಟೇ.. ಸತ್ಯಣ್ಣನ ಹತ್ರೆ ಇತ್ತಿದ್ದ ಮೊಬೈಲು ರಿಂಗಾತು.

ಆ ವಿಚಿತ್ರ ರಿಂಗ್ ಸೌಂಡ್ ಕೇಳಿ ಸತ್ಯಣ್ಣ° ಕೈಲಿ ಪರಡಿ ಮೊಬೈಲ್ ಕೈಲಿ ತೆಕ್ಕೊಂಡ°..  ಕಣ್ಣುಮುಚ್ಚಿಗೊಂಡೇ ಮೊಬೈಲ ಕೆಮಿಗೆಂಡಗೆ ಮಡಿಕ್ಕೊಂಡು ‘ಹರೇ ರಾಮ’ ಹೇಳಿರೆ… ಆಚೊಡೆಂದ ರಂಗಣ್ಣ° – ಇಂದು ಬೈಕಿಲಿ ಹೋಪದಾ, ಕಾರ್ಲಿ ಹೋಪದಾ ಕಲ್ಲುಗುಂಡಿ  ಅಡಿಗ್ಗೆ, ಎಷ್ಟೊತ್ತಿಂಗೆ ನಾವು ಹೆರಡುಸ್ಸು ಇತ್ಯಾದಿ…

ಬೇಕು ಬೇಕಾದಾಂಗೆ ಹೇಳಿಕ್ಕಿ ಸತ್ಯಣ್ಣ ಬಿಡ್ತೆ ಹೇಳಿಕ್ಕಿ ಮೊಬೈಲ ಅಲ್ಲೆ ಕರೇಂಗೆ ಜಾರ್ಸಿದ°.

ಅಲ್ಲಿಂದಲೇ ಕಣ್ಣು ಒಡದು ಎಕ್ಕಳಿಸಿ ನೋಡಿರೆ –  ಕಿಟಿಕಿ ಬಾಗಿಲ್ಲಿ ಆಗಳೇ ಸೂರ್ಯೋದಯ ಆದಾಂಗೆ ಕಂಡತ್ತು!. ಗೋಡೆಗಡಿಯಾರಲ್ಲಿ ಗಂಟೆ ಮುಳ್ಳು ಎಂಟಕ್ಕೆ ಎತ್ತಿದ್ದು. ಇನ್ನು ಮನಿಗಿರೆ ಆಗ ಹೇದು ಸತ್ಯಣ್ಣ ಹಸೆ ಮಡುಸಿದ°.  😀

~~

8.

ಅಡಿಗೆ ಸತ್ಯಣ್ಣಂಗೆ ಅಡಿಗೆ ಅವನಪ್ಪನ ಕಾಲಂದಲೇ ಬಂದ ಬಳುವಳಿ..

ಹೋದಲ್ಲೆಲ್ಲ ಒಳ್ಳೆ ಅಡಿಗೆದೇ..,  ಒಳ್ಳೆ ಹೆಸರುದೇ..

ಆದರೆಂತದೋ ಗ್ರಾಚಾರ ಒಂದರಿ ಅವಂಗೆ…  ಈ ಅಡಿಗೆ ಕೆಲಸವೇ ಬೇಡ ಹೇಳಿ ಆತು.

ತೆಂಕ್ಲಾಗಿ ಕೃಷ್ಣ ದೇವಸ್ಥಾನದ ಪೂಜಗೆ ಹೋದ°..

ಅಲ್ಲಿ ಪೂಜಗೆ ಸೇರಿದ ದಿನವೇ ಒಬ್ಬ ಅಮೇರಿಕಾದಂವ° ಬಂದ°..

ಸತ್ಯಣ್ಣ° ದೇವರಿಂಗೆ ಆರತಿ ಎತ್ತಿಕ್ಕಿ ಇವನ ಎದುರು ಹಿಡುದಪ್ಪಗ ಈ ಅಮೇರಿಕದ ಸಾಯ್ಬ°…

“ಹ್ಯಾಪೀ ಬರ್ತ್ ಡೇ ಟು ಯೂ ಕೃಷ್ಣಾ… ” – ಹೇಳಿಗೊಂಡು ಆ ಆರತಿಯತ್ತೆ ನಂದ್ಸಿದ°! 🙁

ಸತ್ಯಣ್ಣ° ಟೆಟ್ಟೆಟ್ಟೇ….. ಮತ್ತಾಣ ರೈಲಿಲ್ಲಿಯೇ ಊರಿಂಗೆ ! 😀

 

ಓಯ್., ಸತ್ಯಣ್ಣ° ಈಗ ಊರ್ಲಿಯೇ ಇದ್ದ°. ಎಂತಾರು ಅನುಪತ್ಯ ಇದ್ದರೆ ಫೋನ್ ಮಾಡಿಕ್ಕಿ ಆತ. 😀 😀

 

~~

9.

 

ತೆಂಕ್ಲಾಗಿಂದ ಬಂದ ಅಡಿಗೆ ಸತ್ಯಣ್ಣ° ಮನಗೆ ಬಂದು ಎರಡು ದಿನ ಆತು..

ಮಗಳು ರಮ್ಯ ತನಗೆ ಕಂಪ್ಯೂಟರ್ ಆಗ್ಬೇಕು, ಅಪ್ಪನತ್ರೆ ತೆಗದು ಕೊಡ್ಳೆ ಹೇಳು ಹೇದು ಅಮ್ಮನತ್ರೆ ಭಾರೀ ಒತ್ತಾಯ ಮಾಡ್ಳೆ ಸುರುಮಾಡಿತ್ತು..

ಸಂದರ್ಭ ಸಿಕ್ಕಿಯಪ್ಪಗೆಲ್ಲಾ ಶಾರದೆಯೂ ಸತ್ಯಣ್ಣನ ಕೆಮಿ ತುಂಬಿಸಿತ್ತು ಎಡಿಗಾಷ್ಟು..

ಅಪ್ಪಪ್ಪು ಈಗಾಣ ಕಾಲಲ್ಲಿ ಕಂಪ್ಯೂಟರ್ ಇಲ್ಲದ್ರೆ ಬರೇ ಹೆಡ್ಡ ಹೇದು ಅಡಿಗೆ ಸತ್ಯಣ್ಣಂಗೂ ತೋರಿತ್ತು..

ಅಂತೂ ಮನಗೆ ಕಂಪ್ಯೂಟರೂ ಬಂತು .., ಬ್ರೋಡ್ಬ್ಯಾಂಡ್ ಕನೆಕ್ಷನ್ ಕೂಡ ಆತು..

ಒಂದಿನ ಇರುಳಪ್ಪಗ ಬ್ರೋಡ್ಬ್ಯಾಂಡ್ ಕನೆಕ್ಷನ್ ತುಂಡಾತು. ರಮ್ಯ ಏನ ಮಾಡಿರೂ ಎಷ್ಟು ಹೊತ್ತಾರೂ ನೆಟ್ ಕೆಲಸ ಮಾಡುತ್ತಿಲ್ಲೆ..

ಏನೋ ಹಾಳಾಯ್ದು ಹೇಳ್ತ ತೀರ್ಮಾನಕ್ಕೆ ಬಂದವು ..

ಕೂಡ್ಳೆ ಅಡಿಗೆ ಸತ್ಯಣ್ಣ ರಮ್ಯಂಗೆ ಎಚ್ಚರಿಕೆ ಕೊಟ್ಟ° – ಇದ ಮಗಳೊ, ನೆಟ್ ಕೆಲಸಮಾಡುತ್ತಿಲ್ಲೆನ್ನೆ.., ಹೇಂಗೂ ಮೊಬೈಲ್ ಇದ್ದನ್ನೆ.., ನೀನು ನಿನ್ನ ಗುರ್ತ ಇಪ್ಪೋರಿಂಗೆ ಎಲ್ಲ ಫೋನ್ ಮಾಡಿ ತಿಳಿಶಿಕ್ಕು – “ನೆಟ್ ಹಾಳಾದ ಕಾರಣ ಈಗ ಆರು ಮೈಲು ಕಳಿಸಿಕ್ಕೆಡಿ.., ಸಿಕ್ಕ”

 

~~~ 😀 😀 😀 ~~~

 ಪ್ರಿಯ ಓದುಗರೇ,

ವಿ.ಸೂ :
[ಹೇಳ್ತಷ್ಟು ಹೇದಾಯ್ಕಿ ಇದೆಂತರಿನ್ನು ವಿ.ಸೂ ಹೇದು ಆಶ್ಚರ್ಯ ಪಟ್ಟಿರೋ..! ಅದೂ ಸರಿಯೇ 😀 ]

ಆದರೆ ಸಂಗತಿ ಎಂತ ಹೇದರೆ ಈ ಸತ್ಯಣ್ಣನ ಹಾಸ್ಯ ಹೇಳ್ಸು ಬರೇ ಹಾಸ್ಯ ಮಾಂತ್ರ ಅಲ್ಲ. ಬರೇ ನೆಗೆಮಾಡ್ಳೆ  ಮಾಡ್ಳೆ ಇಪ್ಪದಲ್ಲ. ಬರೇ ನೆಗೆ ಮಾಡ್ತದಕ್ಕೆ ಹಾಸ್ಯ ಹೇದು ಹೆಸರಲ್ಲ. ಅದು ವ್ಯಂಗ್ಯವೋ, ತಮಾಷೆಯೋ, ಗೇಲಿ ಮಾಡ್ಸೋ ಮತ್ತಂದೋ ಹೇದು ಹೇಳೇಕ್ಕಷ್ಟೆ.  ಹಾಸ್ಯಲ್ಲಿ ಚಿಂತನೆಗೆ ಅವಕಾಶ ಇರೆಕು, ಉತ್ತಮ ವಿಷಯ ಅಂತರ್ಗತ ಆಗಿರೆಕು. ‘ಅಡಿಗೆ ಸತ್ಯಣ್ಣ°’ – ಇದು ಹವ್ಯಕ ಭಾಷೆಯ, ಭಾವನೆಯ, ಪರಂಪರೆಯ ಅಭಿವ್ಯಕ್ತಿ.  ಉದಾಹರಣೆಗೆ, ಮೇಗಾಣ ಕಾನಾವು ಮನೆಒಕ್ಕಲ್ಲಿ ಎಂತ ಇದ್ದಪ್ಪ ಹೇದು ನೋಡಿರೆ ಎಂತದೂ ಇಲ್ಲೆ. ಇಲ್ಯೋ ಹೇದು ನೋಡಿರೆ ಇದ್ದು. ಎಂತರ? –

೧. ತಾನು ಹೋಯೇಕ್ಕಾದಲ್ಯಂಗೆ ಜೆನ ಕಳ್ಸಿರೆ ಸಮಾಧಾನ ಆಗದ್ದಪ್ಪದು (ಸತ್ಯಣ್ಣನ ಪಾತ್ರಲ್ಲಿ)
೨. ಗ್ರೇಶಿದ್ದು ಗ್ರೇಶಿದಾಂಗೆ ಆಗದ್ರೆ ಸಮಾಧಾನ ಆಗದ್ದಪ್ಪದು, ಒಬ್ಬನತ್ರೆ ಇಪ್ಪ ಗಟ್ಟಿ ಧೈರ್ಯ ವಿಶ್ವಾಸ ನಂಬಿಕೆ (ಕಾನಾವಕ್ಕನ ಪಾತ್ರಲ್ಲಿ)
೩. ಭಟ್ಟ, ಅಡಿಗೆಯಂವ ಹೇದು ಸಾಮಾನ್ಯರ ಸಸಾರ ಗ್ರೇಶಿರೆ ಲೆಕ್ಕಾಚಾರ ತಲೆಕೆಳ ಆವ್ತು (ಭಾವಯ್ಯನ ಪಾತ್ರಲ್ಲಿ)

ಹೀಂಗೆ ಪ್ರತಿಯೊಂದು ಹಾಸ್ಯಲ್ಲಿಯೂ ಒಂದೊಂದು ತತ್ವಂಗೊ ಅಡಗಿದ್ದು.

ಹೇಂಗೆ ? ಅಪ್ಪೋ ಅಲ್ಲದೋ. ಹೋ! ಅಪ್ಪು ನೀ ಹೇಳಿಯಪ್ಪಗ ಗೊಂತಾತು ಹೇಳ್ತೀರೋ..!! ..ಪ್ಪ್..ಪ್ಹೇ!!  😀 😀

9 thoughts on “‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 8

  1. ಲೇಖನದ ಅಖೇರಿಗೆ ನಿಂಗೊ ಹೇಳಿದ್ದು ನೂರಕ್ಕೆ ನೂರು ಸತ್ಯ. ತಿಳಿ ಹಾಸ್ಯದ ಒಟ್ಟಿಂಗೆ ತತ್ವಂಗಳುದೆ ಸೇರಿ ಸತ್ಯಣ್ಣನ ಜೋಕುಗಳ ಓದುಲೆ ಖುಶಿ ಆವ್ತು..

  2. ಬಾಲಣ್ಣ: ಆನು ನಿಂಗಳ ನೆರೆಕರೆ ಮಾವಾ. ಕೊರತ್ತಿಗುಳಿಲಿಪ್ಪದು. ಏತಡ್ಕಂದ ಬಂದದು.

  3. ಅಪ್ಪಪ್ಪಾ,ಈಗಳುದೆ ಕೆಲಸ ಬತ್ತಾ ಇದ್ದು. ಪುಸ್ತಕದ ಮುಖ ಪುಟ,ಒಳಾಣ ಚಿತ್ರಂಗೊ ಹೀಂಗೇ…

    * ಈ ‘ಸಂದೇಶ’ ಆರು ಗೊಂತಾತಿಲ್ಲೆನ್ನೇ..

  4. ಬಾಲಣ್ಣ: ನಿಂಗ ಈಗಳೂ ಚಿತ್ರ ಮಾಡ್ತೀರೋ ಮಾವ? ನಿಂಗ ಬೈಕ್ಕಿಲಿ ಟುರೂನೆ ಹೋಪಗ ನೋಡಿದ್ದೆ ಆನು!

  5. ಅಡಿಗೆ ಸತ್ಯಣ್ನ’ ಟೂ ಫಿಫ್ಟಿ ‘ ತೆಕ್ಕೊಳದ್ದೆ ಬರೇ ಮುನ್ನೂರು ರೂಪಾಯಿ ಮಾಂತ್ರ ತೆಕ್ಕೊಂಡದು ಅವನ ದೊಡ್ದ ಮನಸ್ಸೇ ಸರಿ! .ಅದೂ ತಿಥಿ ಅಡಿಗೆ … ಲಾಯಕ್ಕಾಯಿದು ಭಾವಾ .

  6. ಸತ್ಯಣ್ಣ ಕಾರ್ಡಿನ ಕೆಣಿ ಸರೀ ಅರ್ತುಗೊ೦ಡಿದ° ,ಅಪ್ಪೊ ಭಾವ!

  7. ನಿಂಗ ಅಕೇರಿಗೆ ಹೇಳಿದ ಮಾತು ಅಕ್ಷರಶಃ ಸತ್ಯ ಹಾಸ್ಯಲ್ಲಿಯೂ ತತ್ವಂಗೊ ಇದ್ದು. ಸತ್ಯಣ್ಣನ ಹಾಸ್ಯಲ್ಲಿಯಂತೂ ಇದ್ದೇ ಇದ್ದು, ಉದೆಕಾಲ ಕಂಡ ಕನಸು ನಿಜ ಆವ್ತಾಡ! ಉಮ್ಮಪ್ಪ!!

  8. ಯಾವತ್ತಿನ ಹಾಂಗೆ ಭಾರಿ ಪಸ್ಟ್ ಆಯಿದು.ಈಗಾಣ ಬುಸ್ಯ್ ಜೀವನಲ್ಲಿ ನವಿರಾದ ಹಾಸ್ಯದ ಅವಶ್ಯಕತೆ ಇದ್ದು.ಹಾಸ್ಯಂಗು ನಮ್ಮ ಲವಲವಿಕೆಲಿ ಮಡುಗುತ್ತು ಮತ್ತೆ ನಮ್ಮ ಆಯಸ್ಸ್ಸನ್ನು ಹೆಚ್ಚಿಸುತ್ತು.

  9. ಅಡಿಗೆ ಸತ್ಯಣ್ಣ ಬಸ್ಸಿಲಿ ಬಪ್ಪ ಪ್ರಸಂಗ ಓದುವಗ ಸತ್ಯಣ್ಣಂಗೆ ಎಂತಾತಪ್ಪ ಹೇಳಿ ಹೆದರಿಕೆ ಆತು. ಅದು ಕನಸು ಹೇಳಿ ಗೊಂತಾದಪ್ಪಗ ಮನಸ್ಸಿಂಗೆ ನೆಮ್ಮದಿ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×