Oppanna.com

ಪೆನ್ಸಿಲು ಭಾಗ – ಒಂದು

ಬರದೋರು :   ಶ್ಯಾಮಣ್ಣ    on   19/03/2013    36 ಒಪ್ಪಂಗೊ

ಶ್ಯಾಮಣ್ಣ

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳಿಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
******************************************************************

ಮಾಣಿಯ ಹೆಸರು ನಾಣಿ.

ನಾರಾಯಣ ಹೇಳಿ ಪೂರ್ತ ಹೆಸರು. ಆದರೆ ಎಲ್ಲೋರುದೆ ದಿನಿಗೇಳುದು ನಾಣಿ.

ನೋಡ್ಲೆ ಚೆಂದದ ಮಾಣಿ ಅಲ್ಲಲೇ ಅಲ್ಲ. ಹಲ್ಲೆರಡು ಮುಂದೆ, ಮಾಡು ಇಳಿಶಿ ಕಟ್ಟಿದಾಂಗೆ. ಮೂಗು ರಜ ದಪ್ಪ  ಹೇಳಿ ಹೇಳ್ಲಕ್ಕು. ಕಣ್ಣು  ದೊಡ್ಡ, ಪೋಳೆ ಕಣ್ಣು ಹೇಳ್ತವಲ್ಲ ಹಾಂಗೆ. ಮೈಬಣ್ಣ ಕಪ್ಪು ಒತ್ತಿ ಕಂದು ಬಣ್ಣ.naani

ಪಾಪದ ಮಾಣಿ. ಆರನೇ ಕ್ಲಾಸಿಲಿ ಓದುತ್ತ°. ಅಷ್ಟೆಂತ ತುಂಬಾ ಉಷಾರಿಯ ಮಾಣಿ ಅಲ್ಲ. ಹಾಂಗೇಳಿ ಪೈಲು ಆವುತ್ತಾಯಿಲ್ಲೆ.  ಪಾಸಪ್ಪಷ್ಟು  ಮಾರ್ಕು ತೆಗೆತ್ತ°.

ಇವಂಗೆ ಅಪ್ಪ ಇಲ್ಲೆ.  ಅಬ್ಬೆ ಮಾತ್ರ ಇಪ್ಪದು. ಬರೀ ಪಾಪದವು. ಆಸ್ತಿ ಪಾಸ್ತಿ ಇಲ್ಲೆ. ಸಣ್ಣದೊಂದು ಮುರುಕ್ಕಲು ಮನೆಲಿ ಇಪ್ಪದು. ಅಬ್ಬೆ ಅವರಿವರ ಮನೆಲಿ ಪಾತ್ರೆ ತೊಳವದೋ, ಅಡಿಗೆ ಮಾಡುದೊ ಮಾಡಿಂಡು ಮಗನ ಸಾಕಿಂಡು ಇದ್ದತ್ತು.

***

ನಾಣಿ ಶಾಲೆಗೆ ಹೆರಟ°. ಜೊಂಗ್ಳೀಸು ಕಾಕಿ ಚಡ್ಡಿ ಹಾಕಿ, ಕಿಸೆಗೆ ಕೈ ಹಾಕಿ ನೋಡಿದ°, ಸಮಾದಾನ ಆತು, ಅಬ್ಬೆ ಕಿಸೆ ಒಟ್ಟೆ ಆದ್ದರ ಹೊಲುದ್ದು. ನಿನ್ನೆ ಕಿಸೆಯೊಳ ಬೆರಳು ಹೋಪಷ್ಟು ದೊಡ್ಡ ಒಟ್ಟೇ ಇತ್ತು. ಬೆಳಿ ಅಂಗಿ ಹಾಕ್ಯೊಂಡ°. ಅದು ಹಳದಿ ತಿರಿಗಿದ್ದು, ಆದರುದೆ ಅವ° ಅದರ ಬೆಳಿ ಹೇಳಿಯೇ ಹೇಳುದು. ಟಂಗೀಸು ಚೀಲಲ್ಲಿ ಪುಸ್ತಕ, ಪೆನ್ಸಿಲು ಡಬ್ಬಿ ತೆಗದು ನೋಡಿದ°. ಛೆ, ಪೆನ್ಸಿಲು ಇಪ್ಪದು ಒಂದೇ ಇಂಚು ಉದ್ದದ್ದು, ಮೊನೆ ತುಂಡಾಯಿದು. ಇನ್ನು ಮೊನೆ ಮಾಡಿರೆ ಕೈಲಿ ಹಿಡ್ಕೊಂಬಲು ಎಡಿಯ. ನಿನ್ನೆ ಅದರ ಚಡ್ಡಿ ಕಿಸೆಲಿ ಹಾಕಿದ್ದಿದ್ದರೆ ಬಿದ್ದೇ ಹೋವ್ತಿತು. ಬೇರೆ ಪೆನ್ಸಿಲು, ಒಂದು ಉದ್ದದ್ದು ಬೇಕೆ ಬೇಕು. ನಿನ್ನೆ ಅಬ್ಬೆಯತ್ರೆ ಹೇಳಿ ಆಯಿದು. “ಈಗ ಪೈಸೆ ಇಲ್ಲೆ ಅಬ್ಬೊ, ಕೆಳಾಣ ಮನೆ ಚಿಕ್ಕಮ್ಮನ ಹತ್ತರೆ ಕೇಳ್ತೆ. ನಾಳೆ ಎಡಿಗಾರೆ ತೆಗದು ಕೊಡ್ತೆ” ಹೇಳಿ ನಿನ್ನೆಯೇ ಹೇಳೀತ್ತಿದ್ದು. ಅಕ್ಕು, ನಾಣಿ ಹಟ ಮಾಡುವ ಮಾಣಿ ಅಲ್ಲ. ಆದರೆ ಇಂದೀಗ ಬರವಲೆ ಪೆನ್ಸಿಲಿಂಗೆ ಎಂತ ಮಾಡುದು, ಹೇಂಗಾರೂ ಎಜಸ್ಟು ಮಾಡೆಕ್ಕಲ್ಲ..?

ಗೆದ್ದೆ ಹುಣಿಯ ಮೇಲಾಣ ದಾರಿಲಿ, ತೋಡಿನ ಕರೇಲಿ ಏವಗಳೂ ಹೋಪದು. ಇಂದೂ ಹಾಂಗೆ. ದಾರಿಲಿ ಒಂದೊಂದರಿ ತೋಡ ಕರೆಯಾಣ ಬಾಬು ಸಿಕ್ಕುತ್ತು. ಅವನ ಕ್ಲಾಸಿಂದೆ ಇನ್ನೊಂದು ಹುಡುಗ°. ಒಟ್ಟಿಂಗೆ ಕುಂಟಾಲ ಹಣ್ಣು, ಬೀಜ ಹಣ್ಣು ಸಿಕ್ಕಿದರೆ ಹೆರ್ಕಿಕೊಂಡು, ತಿಂದು ಕೊಂಡು ಹೋಪದು. ಇಂದು ಬಾಬು ಸಿಕ್ಕಿದ್ದಿಲ್ಲೆ. ಹಾಂಗಾಗಿ  ಒಬ್ಬನೇ. ಹುಣಿಲಿ ಒಂದು ಪರ್ಲಾಂಗು ಹೋಗಿ ಎಡತ್ತಿಂಗೆ ತೋಡಿನ ಪಾಪು ದಾಂಟಿ ಮುಂದೆ ಹೋಪಗ ಕೆಳಾಣ ಮನೆಂದ ಬಪ್ಪ ದಾರಿ ಕೂಡುತ್ತು. ನಾಣಿಯ ಮನೆ ಹಿಂದಾಣ ತೋಡಿನ ಆಚ ಕರೆಲಿ ಕೆಳಾಣ ಹೋಡೇಲಿ ಅಡಕ್ಕೆ ತೋಟ, ತೋಟಂದ ಆಚಿಗೆ ಇಪ್ಪ ಮನೆಯೇ ಕೆಳಾಣ ಮನೆ. ಅಲ್ಲೊಬ್ಬ ಮಾಣಿ ಇದ್ದ°. ಕೃಷ್ಣ ಹೇಳಿ ಹೆಸರು. ಅವ° ಹತ್ತನೇ ಕ್ಲಾಸಿಲಿ ಕಲಿವ ಮಾಣಿ. ನಾಣಿ ಅವನ ಕಿಟ್ಟಣ್ಣ ಹೇಳಿ ದಿನಿಗುದು. ಕಿಟ್ಟಣ್ಣಂಗೆ ನಾಣಿ ಹೇಳಿರೆ ಒಂತರಾ ಕನಿಕರ, ಪಾಪದ ಮಾಣಿ ಹೇಳಿ. ಅವನ ಹಳೆ ಪುಸ್ತಕ,  ಪೆನ್ಸಿಲು, ರಬ್ಬರು, ಒಂದೊಂದರಿ ಅವನ ಹಳೆ ಅಂಗಿ, ಹೀಂಗೆಲ್ಲ ಅವ° ಕೊಡ್ಳಿದ್ದು. ಹಾಂಗಾಗಿ ನಾಣಿಗೆ ಕಿಟ್ಟಣ್ಣ ಹೇಳಿರೆ ತುಂಬ ಖುಷಿ.

ದಾರಿ ಕೂಡುವಲ್ಲಿ  ಕಿಟ್ಟಣ್ಣ ಆರನ್ನೋ ಕಾದು ನಿಂದದು ಕಂಡತ್ತು ನಾಣಿಗೆ. ಕಿಟ್ಟಣ್ಣ ಇವನ ನೋಡಿ ಗುರ್ತದ ನೆಗೆ ಮಾಡಿದ°. ಇವಂದೆ ನೆಗೆ ಮಾಡಿದ°. ಇವ° ನೆಗೆ ಮಾಡದ್ರೂ ನೆಗೆ ಮಾಡಿದ ಹಾಂಗೇ ಕಾಣ್ತು.

ನಾಣಿ ಕೇಳಿದ° ” ಎಂತ ಕಿಟ್ಟಣ್ಣ, ಆರಿಂಗೆ ಕಾವದು?”

“ನಿನಗೇ ಕಾವದು ನಾಣಿ” ಕಿಟ್ಟಣ್ಣ  ಹೇಳಿದ°.

ಕಿಟ್ಟಣ್ಣ  ಚೀಲಕ್ಕೆ ಕೈ ಹಾಕಿ ಎಂತರನ್ನೋ ಹೆರ ತೆಗದ°. ಒಂದು ಹೊಸ ಪೆನ್ಸಿಲು…!

” ಇದ… ಇದು ನಿನಗೆ ನಾಣಿ”

” ನಿನ್ನೆ ನಿನ್ನ ಅಮ್ಮ  ಎನ್ನ ಅಮ್ಮನ ಹತ್ತರೆ ಹೇಳಿಗೊಂಡು ಇತ್ತು… ನಿನ್ನ ಪೆನ್ಸಿಲು ಮುಗುದ್ದಡ ಅಲ್ಲದ? ಎನ್ನತ್ರೆ  ಅಪ್ಪ ತಂದುಕೊಟ್ಟ ಎರಡು ಹೊಸ ಪೆನ್ಸಿಲು ಇದ್ದು. ಒಂದು ನಿನಗೆ ಕೊಡ್ತೆ ಆತಾ…”

ಕಿಟ್ಟಣ್ಣ ಅದರ ನಾಣಿಗೆ ಕೊಟ್ಟ°.

ನಾಣಿಗೆ ಭಯಂಕರ ಖುಷಿ ಆತು. ಎಂತ ಹೇಳೆಕ್ಕು ಹೇಳಿ ಗೊಂತಾಯಿದಿಲ್ಲೆ. ಕಿಟ್ಟಣ್ಣ ಸಾಕ್ಷಾತ್ ದೇವರೆ…!!

“ಕಿ.. ಕಿ…ಕಿಟ್ಟಣ್ಣ… ಇದು.. ಇದು….” ಬುಕ್ಕಿದ°.

“ಆತು ಮಾರಾಯ.. ಗೊಂತಾತು.. ನೀನು ತೇಂಕ್ಸು ಹೇಳೆಕ್ಕು ಹೇಳಿ ಇಲ್ಲೆ…” ಕಿಟ್ಟಣ್ಣ ನೆಗೆ ಮಾಡಿದ°.

ಇಬ್ರು ಒಟ್ಟಿಂಗೆ ಮುಂದೆ ಹೋದವು. ರಜ ದೂರ ಹೋಪಗ ಕಿಟ್ಟಣ್ಣನ ದಾರಿ ಹೈಸ್ಕೂಲು ಹೊಡೆಂಗೆ ತಿರುಗುತ್ತು. ನಾಣಿ ಪ್ರೈಮರಿ ಶಾಲೆ ಹೊಡೆಂಗೆ ಹೋಪದು.

ಕಿಟ್ಟಣ್ಣ ಅತ್ಲಾಗಿ ಹೋದ ಮೇಲೆ ನಾಣಿ ಪೆನ್ಸಿಲು ಹೆರತೆಗದ°.

ಎಷ್ಟು ಲಾಯಿಕ ಇದ್ದು!! ಕೆಂಪು ಬಣ್ಣದ್ದು, ಉದ್ದಕ್ಕೆ , ಕಪ್ಪು ಕಪ್ಪು ಉದ್ದದ ಗೀಟುಗ, ಹಿಂದಾಣ ಹೊಡೆಂಗೆ ಒಂದು ಇಂಚು ಉದ್ದಕ್ಕೆ ಕಪ್ಪು ಬಣ್ಣ, ಚಿನ್ನದ ಕಲರಿಲಿ ‘ನಟರಾಜ’ ಹೇಳಿ ಇಂಗ್ಲೀಷಿಲಿ ಬರಕ್ಕೊಂಡು ಇದ್ದು. ಇನ್ನುದೆ ಮೊನೆ ಮಾಡಿದ್ದಿಲ್ಲೆ. ಮೂಗಿಂಗೆ ಹಿಡುದು ನೋಡಿದ. ಎಂತ ಲಾಯಿಕದ ಪರಿಮ್ಮಳ!. ಇಷ್ಟರವರೆಗೆ ನಾಣಿಗೆ ಹೊಸ ಪೆನ್ಸಿಲು ಸಿಕ್ಕಿದ್ದಿಲ್ಲೆ, ಇದೇ ಅವಂಗೆ ಪಶ್ಟು, ಹೊಸಾ ಪೆನ್ಸಿಲು ಸಿಕ್ಕುದು! ಕಿಟ್ಟಣ್ಣಂಗೆ ಎಷ್ಟು ತೇಂಕ್ಸು ಹೇಳಿರೂ ಸಾಲ. ಇನ್ನು ಇಂದೀಗ ದಾಸಪ್ಪ ಮಾಷ್ಟಂಗೆ ಹೆದರೆಕ್ಕು ಹೇಳಿ ಇಲ್ಲೆ.  ನಾಣಿ ಪೆನ್ಸಿಲಿನ ಜಾಗ್ರತೆಲಿ  ಚೀಲದ ಒಳ ಮಡುಗಿದ°.

***

ದಾಸಪ್ಪ ಮಾಷ್ಟ°…..

ನಾಣಿಯ ಕ್ಲಾಸು ಮಾಷ್ಟ°. ಇ  ಇಂಗ್ಲೀಷು ಹೇಳ್ತದರ ಆರನೇ ಕ್ಲಾಸಿಲಿ ಕಲಿಶುಲೆ ಸುರುವಪ್ಪದಿದ. ಇಂಗ್ಲಿಷು ಕಲಿಶುವ ಮಾಷ್ಟನುದೆ ಇದೇ ದಾಸಪ್ಪ ಮಾಷ್ಟ°. ಶಾಲೆಲಿ ಹೆಡ್ ಮಾಷ್ಟ° ಇಲ್ಲದ್ರೆ, ಇದುವೇ ಹೆಡ್ಮಾಷ್ಟ°, ಹೇಳಿರೆ ಇದು ಅಶಿಶ್ಟೆಂಟ್ ಹೆಡ್ ಮಾಷ್ಟ°.ದಾಸಪ್ಪ ಮಾಷ್ಟ

ಅಷ್ಟೇ ಹೇಳಿರೆ ದಾಸಪ್ಪ ಮಾಷ್ಟನ ವಿಶಯ ಪೂರ್ತಿ ಗೊಂತಾಗ. ಅದರ ಕೈಲಿ ಏವಗಳೂ ಒಂದು ಮೂರು ಫೀಟು ಉದ್ದದ ಬೆತ್ತ ಇಕ್ಕು. ಅದರ ಸುಂಯ್ ಸುಂಯ್  ಬೀಜಿಕೊಂಡು ಕ್ಲಾಸಿಲಿ ಅತ್ತೆ ಇತ್ತೆ ಹೋಯ್ಕೊಂಡು ಇಕ್ಕು. ಕಾರಣ ಇದ್ದರೂ ಇಲ್ಲದ್ರೂ ನಡು ನಡುವಿಲಿ ಕೆಲವು ಹುಡುಗರ ಬೆನ್ನಿಂಗೆ ರಪ್ಪ ರಪ್ಪ ಬೀಳುಗು. ಒಂದೊಂದರಿ ಕೆಲವು ಹುಡುಗರಿಂಗೆ ಉಚ್ಚು ರಟ್ಟಿದ್ದೂ ಇದ್ದು, ಹೆದರಿ. ಹಾಂಗೇಳಿ ಕೂಸುಗ ಹೇಳಿರೆ ಅದಕ್ಕೆ ಕೋಪವೇ ಬಾರ.

ಇಂಗ್ಲಿಷಿಲಿ ಬ್ಯಾಡ್, ವರ್ಸ್, ವರ್ಸ್ಟ್ ಇದ್ದಲ್ಲದ? ಅದರ ಕೂಸುಗೊಕ್ಕೆ ” ಬ್ಯಾಡ್  ನಂತ್ರ ಮತ್ತೆಂತದಾ? ” ಹೇಳಿ ಕೇಳುಗು. ಅವು ” ಸಾರ್, ಅದು ಬ್ಯಾಡ್, ಬ್ಯಾಡರ್, ಬ್ಯಾಡೆಸ್ಟ್” ಹೇಳಿ ಹೇಳುಗು. “ಅದು ಹಾಗಲ್ವಾ… ತಪ್ಪು ಯಾಕೆಯಾ ಹೇಳುವುದೂ?” ಹೇಳಿ ಸರಿಯಾದ್ದರ ಹೇಳಿಕೊಡುಗು.

“ಗುಡ್ ನಂತ್ರದ್ದು ಹೇಳಿ” ಹುಡುಗರ ಹತ್ತರೆ ಕೇಳುಗು. ಅವು , ಪಾಪ, “ಗುಡ್ಡು, ಗುಡ್ಡರ್, ಗುಡ್ಡೆಸ್ಟ್…”ಹೇಳುಗು. ತೆಕ್ಕಾ…. ದಾಸಪ್ಪ ಮಾಷ್ಟನ ಪಿತ್ತ, ಮಲೇರಿಯ ಜ್ವರ ಏರಿದಾಂಗೆ ಏರುಗಿದಾ.

“ಮಲೆ ಮಂಗ, ಅಂಡೆ, ಕತ್ತೆ…. ಗುಡ್ಡೆಯಾ? ನಿಂಗೆ ಕಲೀಲಿಕ್ಕೆ ಸಂಕಟ…ನಿಂಗೆ… ಗುಡ್ಡೆಗೆ ಎಂತ ಚೆಂಬು ಹಿಡ್ಕೊಂಡು ಹೋಗ್ತಿಯ? ನಿನ್ನ ಚೋಲಿ ತೆಗೀತೇನೆ ನೋಡು…ಗುಡ್ಡೆ ಅಂತೆ ಗುಡ್ಡೆ…” ಹೇಳಿ ಬೆತ್ತಲ್ಲಿ ಬೆನ್ನಿಂಗೆ ರಪ ರಪ ಬಿಡ್ಲೆ ಸುರುಮಾಡಿರೆ ಪಾಪ, ಹುಡುಗರಿಂಗೆ ಪಸೆ ಇರ.

ಅಷ್ಟೇ ಅಲ್ಲ, ಈ ದಾಸಪ್ಪ ಮಾಷ್ಟ° ಅದೆಂತದೋ ಕಮ್ಮಿನಿಶ್ಟೆ ಪಾರ್ಟಿ ಹೇಳಿ ಒಂದು ಇದ್ದಡ, ಪೇಟೆಲಿ. ಇದು ಅದರ ಶೆಕ್ರೆಟ್ರಿ . ಬೀಡಿ ಕಟ್ಟುವೋರಿನ ಒಂದು ಪುಂಡು ಕಟ್ಟಿಕೊಂಡು ತಿಂಗಳಿಂಗೆ ಒಂದು ದಿನ ಪೇಟೆಲಿ ತಿರುಗುಲಿದ್ದು,  ” ಎಂಕ್ ಲಾಬ ಜಿಂಜ ಬೋಡು, ಎಂಕ್ಲಾ ಜಿಂಜಾ ಬೋಡು” ಹೇಳಿ ಬೊಬ್ಬೆ ಹೊಡಕ್ಕೊಂಡು, ಒಂದು ಕೆಂಪು ಕಲರಿನ ಬಾವುಟ ಹಿಡ್ಕೊಂಡು, ಒಟ್ಟಾರೆ ಜೆನ ನೋಡಿದಾಂಗೆ ಅಲ್ಲ ಅದು.

ಇಂತಿಪ್ಪ ದಾಸಪ್ಪ ಮಾಸ್ಟರಿಗೆ ಒಬ್ಬ ಸುಕುಮಾರನಿದ್ದನು.dinesa

ದಿನೇಸ ಹೇಳಿ ಅದರ ಹೆಸರು. ನಾಣಿಯ ಕ್ಲಾಸುಮೇಟು. ನೋಡ್ಲೆ ದೊಡ್ಡ ಗೋಣನಾಂಗೆ ಬೆಳದ್ದು ಅದು, ಬಡ್ಡ. ಅದರ ಕತೆ ಮಾತ್ರ ಕೇಳಿರಾಗ. ಮಹಾ ಅತ್ರಾಣದ ಹುಡುಗ. ಕ್ಲಾಸಿಲಿ ಮಾಡದ್ದ ಪುಂಡು ಇಲ್ಲೆ. ಮಕ್ಕಳ ಪುಸ್ತಕ, ಪೆನ್ಸಿಲು, ಲಬ್ಬರು ಕದಿವದು, ಮಕ್ಕ ಕೂಪ ಜಾಗೆಲಿ ಮೇಣ ಅಂಟುಸಿ ಮಡುಗುದು, ಒಳುದೋರೊಟ್ಟಿಂಗೆ ಕಾರಣವೇ ಇಲ್ಲದ್ದೆ ಜಗಳ ತೆಗವದು, ಒಂದಾ ಎರಡಾ… ಹೇಳಿ ಮುಗಿಯ. ಒಂದು ಸರ್ತಿ ಕೂಸುಗ ಕೂಪ ಬೆಂಚಿ ಮೇಗೆ ಉರ್ಸಣಿಗೆ ಹೊಡಿ ತಂದು ಉದ್ದಿ ಮಡುಗಿತ್ತಿದ್ದು. ಪುಣ್ಯಕ್ಕೆ ಮೊದಲೇ ಗೊಂತಾದ್ದಕ್ಕೆ ಕೂಸುಗ ಬಚಾವು. ಇಲ್ಲದ್ರೆ ಕತೆ ಕೈಲಾಸ ಆವುತಿತ್ತು.

ಶಾಲೆಯ ಒಳುದ ಮಾಷ್ಟಂಗೊ, ಟೀಚರುಗೋ ಇದರ ಸುದ್ದಿಗೆ ಹೋಗವು. ಎಂತಕೆ? ಇದು ದಾಸಪ್ಪ ಮಾಷ್ಟನ ಮಗ. ದಾಸಪ್ಪ ಮಾಷ್ಟನೂ ಇದರ ಸುದ್ದಿಗೆ ಹೋಗ. ಎಂತಕೆ? ದಾಸಪ್ಪ ಮಾಷ್ಟನ ಮನೆಲಿ ಒಂದು ಲೆಂಕಿಣಿ ಇದ್ದು, ಅದರ ಹೆಂಡತ್ತಿ, ಸುಗುಣ ಹೇಳಿ. ಇಪ್ಪದು ಸಪೂರಕ್ಕೆ ಆದರೂ ಆರ್ಬಟಿ ಕೊಟ್ರೆ ಎಂತವೂ ಹೆದರಿ ಓಡೆಕ್ಕು. ದಿನೇಸ ಅದರ ಕೊಂಡಾಟದ ಕೊಣಿಮುದ್ದು! ಹಾಂಗಿಪ್ಪಗ ದಾಸಪ್ಪ ಮಾಷ್ಟ ದಿನೇಸನ ತಂಟೆಗೆ ಹೋಗ. ಈ ಹೆಂಡತ್ತಿಯ ಮೇಲಾಣ ಕೋಪವ ಶಾಲೆಲಿ ಮಕ್ಕಳ ಮೇಲೆ ತೀರ್ಸುದು ಹೇಳಿ ಒಳುದ ಎಲ್ಲೋರುದೆ ನಂಬಿದ್ದವು. ಬಹುಮತ ಹಾಂಗಿಪ್ಪಗ, ನಾವುದೆ ಹಾಂಗೇ ನಂಬುವ°. “ನಂಬಿ ಕೆಟ್ಟವರಿಲ್ಲ, ನಂಬದೆ ಕೆಟ್ಟರೆ ಕೆಡಲಿ” ಹೇಳಿ ದಾಸರು ಹೇಳಿದ್ದವು, ದಾಸಪ್ಪ° ಅಲ್ಲ…!
ಹೀಂಗಿಪ್ಪ ದಿನೇಸಂಗೆ ಅಡ್ಡ ಹೆಸರು ‘ಪುಂಡೇಲ’ ಹೇಳಿ.

*****

ದಾಸಪ್ಪ ಮಾಷ್ಟ° ಕ್ಲಾಸಿನ ಒಳ ಬಂತು. ಪುಸ್ತಕವ ಮೇಜಿನ ಮೇಲೆ ಮಡುಗಿ, ಬೆತ್ತ ಹಿಡ್ಕೊಂಡು ಒಂದರಿ ಕ್ಲಾಸಿಲಿ ಅತ್ಲಾಗಿ ಇತ್ಲಾಗಿ ತಿರುಗಿತ್ತು. ಎರಡು ಹುಡುಗರ ಬೆನ್ನಿಂಗೆ ಕಾರಣವೇ ಇಲ್ಲದ್ದೆ ರಪ ರಪ ಬಿದ್ದತ್ತು. ಮತ್ತೆ ಬಂದು ಮೇಜಿನ ಮೇಲೆ ಅದರ ಹತ್ಯಾರು ಮಡುಗಿ ಕುರ್ಶಿಲಿ ಕೂದತ್ತು. ಹಾಜರಿ ಪುಸ್ತಕಲ್ಲಿ ಎಲ್ಲ ಹೆಸರು ದಿನಿಗಿಕ್ಕಿ ಆತು.

ಅಮೇಲೆ ದಪ್ಪದ ಕಪ್ಪು ಫ್ರೇಮಿನ ಕನ್ನಡ್ಕದ ಮೇಲಂದ ಗುಮ್ಮೆ ಹಕ್ಕಿ ನೋಡಿದಾಂಗೆ ಒಂದರಿ ಇಡೀ ಕ್ಲಾಸಿನ ನೋಡಿತ್ತು.

ಅದರ ಕಣ್ಣು ಆರತಿಯ ಮೇಲೆ ನಿಂದತ್ತು.arati

ವಿಶ್ವನಾಥ ರೈ ಡಾಕ್ಟ್ರನ ಮಗಳು ಆರತಿ, ನಾಣಿಯ ಆರನೇ ಕ್ಲಾಸಿಲಿಯೇ ಇಪ್ಪದು. ಯಾವಾಗಳು ತುಂಬ ಮಾರ್ಕು ತೆಗದು, ಕ್ಲಾಸಿಂಗೆ ಪಶ್ಟು ಬಪ್ಪ ಕೂಸು. ಶಾಲೆಗೆ ಪಿಯೆಟ್ಟು ಕಾರಿಲಿ ಆರಾದರು ಬಪ್ಪ ಮಕ್ಕ ಇದ್ದರೆ ಅದು ಈ ಆರತಿ ಮಾಂತ್ರ. ನೋಡ್ಲುದೆ ಬಾರಿ ಚೆಂದದ ಕೂಸು. ಬೆಳಿ ಉರುಟು ಮೋರೆ, ಬೊಗಸೆ ಕಣ್ಣು, ಉದ್ದ ಜೆಡೆಯ ಈ ಕೂಸಿನ ಕಂಡರೆ ಎಲ್ಲ ಟೀಚರು, ಮಾಷ್ಟಕ್ಕೊಗೆ ಬಾರೀ ಕೊಂಡಾಟ.

ಹೀಂಗಿಪ್ಪ ಆರತಿಗೆ ಇಂದೆಂತಾಯಿದು? ಮೋರೆಲಿ ನೆಗೆ ಹೇಳ್ತದು ಇಲ್ಲೆ. ಕಣ್ಣು ಕೆಂಪಾಯಿದು. ನೀರು ಕಣ್ಣಿಲಿ ತುಂಬಿದ್ದು. ಇನ್ನೆಂತ… ಕರಗಿ ಇಳಿವಲೆ ಬಾಕಿ, ಕೂಗುಲೆ ರೆಡೀ ಆಯಿದು.

“ಎಂತಾಯ್ತು ಆರತೀ….?” ದಾಸಪ್ಪ ಮಾಷ್ಟನ ಕೊಶ್ಟನು.

ಆರತಿ ಎಂತ ಹೇಳೆಕ್ಕು? ಅದರ ಹೊಸಾ ಪೆನ್ಸಿಲಿನ ಆರೋ ಕದ್ದಿದವು. ಉದಿಯಪ್ಪಗ ಬಪ್ಪಗ ಜನತಾ ಬುಕ್ ಸ್ಟಾಲಿನ ಎದುರು ಕಾರು ನಿಲ್ಲಿಸಿ ಅಪ್ಪ ತೆಗದು ಕೊಟ್ಟ ಪೆನ್ಸಿಲು. ಬೇಗಿಲಿತ್ತಿದ್ದು. ಲೆಕ್ಕದ ಪುಸ್ತಕವ ಟೀಚರ್ಸು ರೂಮಿಲಿ ಮಡುಗುಲೆ ಹೋದಿಪ್ಪಗ, ಬೇಗಿಂದ ಕದ್ದಿದವು. ಆರು ಕದ್ದದು ಹೇಳ್ತದರ ಆರತಿಯ ಫ್ರೆಂಡು ಲತಾ ಶೆಣೈ ನೋಡಿದ್ದು. ಅದರ ಆರತಿಗೆ ಹೇಳಿದ್ದು ಕೂಡಾ. ಹಾಂಗಾಗಿ ಕದ್ದದು ಆರು ಹೇಳಿ ಆರತಿಗೆ ಗೊಂತಿದ್ದು.

“ಸ..ಸಾರ್… ನ..ನನ್ನ ಹೊಸಾ ಪೆನ್ಸಿಲು ಕದ್ದಿದ್ದಾರೆ….”
“ಪೆನ್ಸಿಲಾ?”
“ಹೌದು ಸಾರ್…”
“ಹೊಸಾ ಪೆನ್ಸಿಲಾ?”
“ಹೌದು ಸರ್….”
“ಹೇಗುಂಟ ಪೆನ್ಸಿಲು?”
“ಸ..ಸರ್…ಕೆಂಪು ಬಣ್ಣದ್ದು, ಸಾರ್.. ಉ..ಉದ್ದಕ್ಕೆ , ಕಪ್ಪು ಕಪ್ಪು ಉದ್ದದ ಗೀಟುಂಟು ಸಾರ್…ಹಿ.. ಹಿಂದಿನ ತುದಿ ಒಂದು ಇಂಚು ಉ..ಉದ್ದಕ್ಕೆ ಕಪ್ಪು ಬಣ್ಣ, ಚಿ.. ಚಿನ್ನದ ಕಲರಿನಲ್ಲಿ ‘ನಟರಾಜ’ ಅಂತ ಇಂಗ್ಲಿಷಿನಲ್ಲಿ ಬರ್ಕೊಂಡುಂಟು… ಊಂಂಂ…” ಆರತಿಗೆ ಗ್ರೇಷಿ ಗ್ರೇಷಿ ಕೂಗುಲೆ ಬತ್ತಾ ಇದ್ದು…
“ಯಾವಾಗ ಕದ್ದದ್ದು?”
“ಇ..ಇವತ್ತು ಬೆಳಿಗ್ಗೆ ಬೇಗಿನಲ್ಲಿತ್ತು ಸರ್…ಈ.. ಈಗಿಲ್ಲಾಆಆಆಅ…ಊಂಂಂ…”
“ಕದ್ದದ್ದು ಯಾರು ಗೊತ್ತುಂಟ?”
“…………………… ಊಂಂಂ” ಆರತಿ ಹೇಂಗೆ ಹೇಳುದು ಆರು ಕದ್ದದು ಹೇಳಿ, ಎಂತಕೆ ಹೇಳಿರೆ… ಕದ್ದದು…

ದಾಸಪ್ಪ ಮಾಷ್ಟಂಗೆ ರಪಕ್ಕ ಅಂದಾಜಿ ಆತು, ಆರು ಕದ್ದದು ಹೇಳಿ….
ದಿನೇಸ!!!
ಅಪ್ಪು, ದಿನೇಸನೇ ಕದ್ದದು. ಆರತಿಗು ಗೊಂತಿದ್ದು… ಆದರೆ ಹೇಂಗೆ ಹೇಳುದು?

ಈಗ ದಾಸಪ್ಪ ಮಾಷ್ಟ° ಎಂತ ಮಾಡೆಕ್ಕು? ಸೀದ ದಿನೇಸನ ಹಿಡುದು ಜೋರು ಮಾಡಿ, ಅದರ ಬೇಗಿಂದ ಪೆನ್ಸಿಲು ಕಕ್ಕುಸುದ? ಹಾಂಗೆ ಮಾಡಿರೆ ಮತ್ತೆ ಮನೆಲಿ ಲೆಂಕಿಣಿಯ ಕೈಂದ ಬದ್ಕುದು ಹೇಂಗೆ?

” ನೀನೀಗ ಕೂಗ್ಬೇಡ ಆರತಿ, ಹುಡ್ಕುವ ಅಯ್ತಾ….”

ದಾಸಪ್ಪ ಮಾಷ್ಟನ ಕೈಗೆ ಬೆತ್ತ ಬಂತು.

ದನ ಕಡಿವ ಬ್ಯಾರಿ ದನಗಳ ನೋಡಿದಾಂಗೆ ಒಂದು ಸರ್ತಿ ಹುಡುಗರ ನೋಡಿತ್ತು.

“ಹೂಂ… ಒಬ್ಬೊಬ್ರೆ ನಿಮ್ಮ ಬ್ಯಾಗು ತೆಕ್ಕೊಂಡು ಇಲ್ಲಿ ಬನ್ನಿ” ಹುಡುಗರಿಂಗೆ ವಾರ್ಡ್ರು ಜಾರಿ ಆತು.

ಸರಿ, ಒಬ್ಬೊಬ್ಬನೆ ಬ್ಯಾಗು ತಂದು ದಾಸಪ್ಪನ ಎದುರು ಸೊರುಗುದು, ಅದು ಚೆಕ್ಕು ಮಾಡುದು ಸುರು ಆತು.

ಎರಡ್ಣೇ ಬೆಂಚಿನ ಆಚ ಕರೇಲಿ ನಾಣಿ ಕೂಪದು. ಅವಂದೆ ಎದ್ದ, ಟಂಗೀಸು ಬೇಗು ಹಿಡ್ಕೊಂಡು ಮಾಷ್ಟನ ಹತ್ರೆ ಬಂದ°.

ಬೇಗಿನ ಒಳ ಇತ್ತದರ ಎಲ್ಲ ಮಾಷ್ಟನ ಎದುರು ಸೊರುಗಿದ°.

‘ಟಪಕ್’ ಹೇಳಿ ಒಳುದ ಪುಸ್ತಕಂಗಳ ಒಟ್ಟಿಂಗೆ ಮಾಷ್ಟನ ಕಣ್ಣಿನ ಎದುರು ಪೆನ್ಸಿಲು ಉರುಳಿ ಬಿದ್ದತ್ತು.

ಹೊಸಾ ಪೆನ್ಸಿಲು, ಕೆಂಪು ಬಣ್ಣದ್ದು, ಕಪ್ಪು ಉದ್ದದ ಗೀಟು ಇಪ್ಪದು, ಹಿಂದಾಣ ಹೊಡೆಲಿ ಒಂದು ಇಂಚು ಉದ್ದಕ್ಕೆ ಕಪ್ಪು ಬಣ್ಣ ಇಪ್ಪದು, ಚಿನ್ನದ ಕಲರಿಲಿ ‘ನಟರಾಜ’ ಹೇಳಿ ಇಂಗ್ಲಿಷಿಲಿ ಬರಕ್ಕೊಂಡಿಪ್ಪ ಪೆನ್ಸಿಲು.

********************************************************************************

ಆನು ಬರದ ಕಥೆಯ ಮುಂದಿನ ಭಾಗ – ಬಪ್ಪವಾರ….

********************************************************************************

ಈ ಕತೆಲಿ ಮುಂದೆ ಎಂತಾತು? ಎನಗೆ ಬಾರೀ ಕುತೂಹಲ ಇದ್ದು… ಎಂತ ಆದಿಕ್ಕು?… ನಿಂಗೊಗೆ ಎಂತ ಅನುಸುತ್ತು..?
ಈ ಕಥೆಗೊಂದು ಅಂತ್ಯವ ನಿಂಗೊಗೆ ಊಹಿಸಿ ಬರವಲೆಡಿಗಾ? ನಿಂಗಳ ಒಪ್ಪಲ್ಲಿ ನಿಂಗಳ ಕಲ್ಪನೆಯ ಅಂತ್ಯವ ಬರೇರಿ

36 thoughts on “ಪೆನ್ಸಿಲು ಭಾಗ – ಒಂದು

  1. ಕಥೆ ಭಾರೀ ಲಾಯ್ಕಿದ್ದು. ಹೀಂಗಿಪ್ಪ ಕಥೆಗಳ ಓದುಲೆ ತುಂಬಾ ಕೊಶಿ ಎನಗೆ. ಎರಡನೇ ಭಾಗವನ್ನೂ ಓದಿದೆ.
    ಓದುಸಿಗೊಂಡು ಹೋತು… ಇನ್ನು ಮುಂದಾಣ ಭಾಗಕ್ಕೆ ಕಾಯ್ತಾ ಇದ್ದೆ. ನಾಣಿ ಪಾಪ ಪೆಟ್ಟು ತಿಂಬಗ ಎಲ್ಲೋರೂ ತಳೀಯದ್ದೆ ಕೂದವನ್ನೇಳಿ ಬೇಜಾರಾತು…

    1. ಅಲ್ಲದ್ದೆ ಮತ್ತೆ…..? …… ಆ ದಾಸಪ್ಪ ಮಾಸ್ಟ್ರನ ಎದುರ್ಲಿ ನಿಂಗಳೂ ಅದೇ ಮಾಡ್ತಿತ್ತಿ. 😀
      ಓಯ್ ಭಾವ… ಆ ದಾಸಪ್ಪ ಮಾಸ್ಟ್ರನ ಕುರ್ಚಿಗೆ ಉರುಸಣಿಕೆ ಉದ್ದಿಕ್ಕಿ ಬಪ್ಪನೋ ಹೋಗಿ?! ಶಾಲೆ ಗೇಟಿನವರೇಂಗೆ ಆನಿದ್ದೆ ನಿಂಗಳೊಟ್ಟಿಂಗೆ 😀 🙁

  2. ಕಥೆ ಬರೀ ಲಾಯಿಕ್ಕಿದ್ದು,ಧಾರಾವಾಹಿ ಆಗಿ ಬಂದರೂ ಒಳ್ಳೇದೇ…ಒಂದು ಸಣ್ಣ ಆಭಾಸ ಕಂಡತ್ತು…”ಶಾಲೆಗೆ ಮಾರುತಿ 800 ಕಾರಿಲಿ ಆರಾದರು ಬಪ್ಪ ಮಕ್ಕ ಇದ್ದರೆ ಅದು ಈ ಆರತಿ ಮಾಂತ್ರ”-ಐವತ್ತು ವರ್ಷದ ಮೊದಲು ನಮ್ಮ ಊರಿಲ್ಲಿ ಇತ್ತಿದ್ದದು “ಆಂಬಡೆಸಾಂಬಾರ್” ಅಥವಾ “ಪಿಯೆಟ್”ಕಾರು ಮಾತ್ರ..ಮಾರುತಿ ಪೆಟ್ಟಿಗೆ ಬಂದದು 1984ರಲ್ಲಿ…

    1. ನಿಂಗ ಹೇಳಿದ್ದು ಸರಿ. ಅವಾಗ ಮಾರುತಿ 800 ಇತ್ತಿದ್ದಿಲ್ಲೆ. ಕಥೆಯ ಪ್ರಕಟ ಮಾಡಿ ಆದ ಮೇಲೆ ಎನಗೆ ಅಂದಾಜಿ ಆತು. ಆರಿಂಗಾದ್ರೂ ಗೊಂತಾವ್ತೋ ಹೇಳಿ ಕಾದೊಂಡಿತ್ತೆ. ನಿಂಗೊಗೆ ಗೊಂತಾತದ… 🙂
      ಅದರ ಪಿಯೆಟ್ಟು ಕಾರು ಹೇಳಿ ಮಾಡುವೊ. ಆಗದಾ?

        1. ಹಹ… ಆರತಿ ಎನ್ನ ಹೀರೊಯಿನ್ ಅಲ್ಲ…. ಆರತಿಯ ಅಬ್ಬೆ ಈ ಕತೆಲಿ ಮುಂದಂಗೆ ಎಂಟ್ರಿ ಅಪ್ಪಲೂ ಸಾಕು…. ಆವಾಗ ನಿಂಗಳೆ ನೋಡಿ ಕಾರಿಲಿ ಜಾಗೆ ಸಾಕಕ್ಕೋ ಹೇಳಿ… 🙂
          ನಿಂಗೊಗೆ ಕತೆ ನಿಂಗಳ ಊರಿಲಿಯೇ ನಡದ್ದು ಹೇಳೀ ಆವ್ತಾ ಇದ್ದೋ ಹೇಂಗೆ?

  3. ಶಾಮಣ್ಣಾ… ಕಥೆ ಮನದಾಳಕ್ಕೆ ಮುಟ್ಟುವ ಹಾಂಗೆ ಬರದ್ದಿ. ನಮ್ಮ ಪಾಪದ ಮಾಣಿ (ನಾಣಿ) ಸೋಲುಲೆ ಆಗ. ನಾಣಿಗೆ ಒಂದು ಒಳ್ಳೆ ಉಪಾಯ ಹೊಳಗೋ..??

  4. ನಾವು ಬೆಂಗಳೂರಿಲಿ ಎಂತಾರು ಕಾರ್ಯಕ್ರಮ ಮಡಿಕೊಳೆಕ್ಕು. ಹೇಂಗೆ ಆಗದೊ?

  5. ವಾಹ್ .ಸೂಪರ್ ಆಯಿದು ನಿರೂಪಣೆ. ಕಣ್ಣೆದುರು ತಂದು ನಿಲ್ಲುಸುವಾಂಗಿಪ್ಪ ಘಟನೆಗೊ. ರೇಖಾ ಚಿತ್ರಂಗಳ ವೈಭವ ಕತೆಗೆ ಇನ್ನೂ ಮೆರುಗು ಕೊಟ್ಟತ್ತು.
    ಒಂದು ಕುತೂಹಲ ಘಟ್ಟಲ್ಲಿ ತಂದು ನಿಲ್ಸಿ, ಓದುಗರಿಂಗೆ ಚಿಂತನೆಗೆ ಅವಕಾಶ ಮಾಡಿ ಕೊಟ್ಟದು ಇನ್ನೂ ಲಾಯಿಕ ಆತು.

    1. ಎಂತ ಶರ್ಮಪ್ಪಚ್ಚಿ ಇನ್ನೂ ಎತ್ತಿದ್ದವಿಲ್ಲೆ ಹೇಳಿ ಗ್ರೇಷಿಕೊಂಡು ಇತ್ತಿದ್ದೆ…. ಅದಾ.. ಎತ್ತಿದವು…
      ನಿಂಗ ಇನ್ನುದೇ ಹೀಂಗೆ ಒಪ್ಪ ಕೊಟ್ಟುಕೊಂಡು ಇರೆಕ್ಕು…

    1. ತ್ಯಾಂಕ್ಸ್…ತ್ಯಾಂಕ್ಸ್…ತ್ಯಾಂಕ್ಸ್… 🙂

  6. ಪೆನ್ಸಿಲು ಕಥೆಯ ಓದುವಾಗ ಖುಶಿಯೂ ನೆಗೆಯೂ ಒಟ್ಟೊಟ್ಟಿಂಗೆ ಬಂದು ವಿವರುಸುಲೆ ಕಷ್ಟಪ್ಪಾಂಗೆ ಆಯ್ದು. ಜನತಾ ಬುಕ್ ಸ್ಟಾಲ್ ,ದಾಸಪ್ಪಮಾಷ್ಟ್ರು, ರೈ ಡಾಕ್ಟ್ರ ಮಗಳು ಆರತಿ ಎಲ್ಲಿಯೋ ನೋಡಿದ್ದು, ಕೇಳಿದ್ದು ಹೇಳಿಯೇ ಕಾಣ್ತು. ಓದಿದವಕ್ಕೆಲ್ಲಾ ಹೀಂಗೇ ಅಪ್ಪದು ಕತೆಯ ಸಾರ್ಥಕತೆಯೇ ಅಲ್ಲದಾ !
    ಪಾಪದ ಮಾಣಿ ನಾಣಿಗೆ ಪೆಟ್ಟು ಸಿಕ್ಕುಲೆ ಆರತಿದೇ ಲತಾಶೆಣೈದೇ ಬಿಡವು. ಒಪ್ಪ ಕೂಸುಗೊ ಅವು.ಅವಕ್ಕೆ ಗೊಂತಿದ್ದನ್ನೆ ಆರು ಕದ್ದದೂ ಹೇಳಿ! ಹೆಡ್ ಮಾಷ್ಟ್ರ ಲಾಗಾಯ್ತು ಎಲ್ಲಾ ಟೀಚರುಗಕ್ಕೂ ಆರತಿಯ ಭಾರೀ ಖುಶಿಯಲ್ಲದಾ .ಹಾಂಗಾಗಿ ದಿನೇಸಂಗೂ ಪೂ…ರ ಧೈರ್ಯ ಬಾರ ! ಆರತಿದೇ ಲತಾನುದೇ ಹೇಳುಗು ಹೇಳಿ ಎನ್ನ ಅಂದಾಜು -” ಏ..ನಾವು ನಾಣಿಗೆ ಪೆಟ್ಟು ಸಿಕ್ಲಿಕ್ಕೆ ಬಿಡ್ಬಾರ್ದು ಆಯ್ತಾ- ಪಾಪ ಅಲ್ವಾ ಅವ್ನು ! ಆ ದಿನೇಸನಿಗೆ ಸರೀ ಪೆಟ್ಟು ಬೀಳ್ಬೇಕು , ಸದಕುಟ್ಟಿ ,ಹಾಗೆ ಆಗ್ಬೇಕು ಎಷ್ಟು ಹಾಂಕಾರ ಅವ್ನಿಗೆ – ಮೊನ್ನೆ ನಮ್ಮನ್ನು ನಗಾಡಿದ್ದ ! ” ಹೀಂಗೆ ಹೇಳಿಗೊಂಡು ನಾಣಿ ಪರ ವಕಾಲತ್ತು ವಹಿಸಿಗೊಂಗು. ಮತ್ತೆ ಹಾಂಗೆ ಬೇಕಾದರೆ ಕಿಟ್ಟಣ್ಣನೂ ಇದ್ದನ್ನೆ ಸಾಕ್ಷಿಗೆ – ಬಕ್ಕು ಅವಂದೇ.

    ಶ್ಯಾಮಣ್ಣಾ, ಕತೆಯೇ ಲಾಯ್ಕಿತ್ತು ,ಹೇಳಿದ ಕ್ರಮ ಮತ್ತೂ ಲಾಯ್ಕಿದ್ದು -ಅಭಿನಂದನೆಗೊ.

    1. ಒಪ್ಪ ಕೊಟ್ಟದಕ್ಕೆ ತುಂಬಾ ಧನ್ಯವಾದಂಗ
      ನೋಡುವ… ಬಪ್ಪವಾರ.. ದಾಸಪ್ಪ ಮಾಷ್ಟ ಎಂತ ಮಾಡುತ್ತು ಹೇಳಿ…

  7. ಶಾಮಣ್ಣ..ಕಥೆ ಲಾಯಿಕಾಯಿದು..ಕೂತೂಹಲದ ಘಟ್ಟವ ಎಂಗೊಗೆ ಬಿಟ್ಟು ನಿಂಗೊ ಬಚಾವಾದಿ ಅಲ್ಲದಾ..ಃ)

    ಎನ್ನ ಪ್ರಯತ್ನ ಹೀಂಗಿದ್ದು..

    [‘ಟಪಕ್’ ಹೇಳಿ ಒಳುದ ಪುಸ್ತಕಂಗಳ ಒಟ್ಟಿಂಗೆ ಮಾಷ್ಟನ ಕಣ್ಣಿನ ಎದುರು ಪೆನ್ಸಿಲು ಉರುಳಿ ಬಿದ್ದತ್ತು.

    ಹೊಸಾ ಪೆನ್ಸಿಲು, ಕೆಂಪು ಬಣ್ಣದ್ದು, ಕಪ್ಪು ಉದ್ದದ ಗೀಟು ಇಪ್ಪದು, ಹಿಂದಾಣ ಹೊಡೆಲಿ ಒಂದು ಇಂಚು ಉದ್ದಕ್ಕೆ ಕಪ್ಪು ಬಣ್ಣ ಇಪ್ಪದು, ಚಿನ್ನದ ಕಲರಿಲಿ ‘ನಟರಾಜ’ ಹೇಳಿ ಇಂಗ್ಲಿಷಿಲಿ ಬರಕ್ಕೊಂಡಿಪ್ಪ ಪೆನ್ಸಿಲು] ದಾಸಪ್ಪ ಮಾಷ್ಟ್ರ ಕಣ್ಣು ಕೆಂಪಾತು..ನಮ್ಮ ನಾಣಿಗೆ ನಡುಗುಲೆ ಸುರುವಾತು…ಮಾಷ್ಟ್ರಿಗೆ ದಿನೇಸ ಕಳ್ಳಳಿ ಗೊತ್ತಿದ್ದ ಕಾರಣ ಪೆನ್ಸಿಲ್ ಕಂಡು ಆಶ್ಚರ್ಯವೂ ಆತು…
    ‘ಯಾವಾಗಿಂದ ಶುರು ಮಾಡಿದಿಯೋ ಈ ಕೆಲ್ಸ’ – ಮಾಷ್ತ್ರು ಗುಡುಗಿತ್ತು…
    ನಾಣಿ -‘ಇ..ಇಲ್ಲ..ಸಾ..ಕದ್ದಿದ್ದಲ್ಲ….ನಂಗೆ..’..
    ‘ಏನು? ಕದಿಯೋದು , ಅದ್ರೊಟ್ಟಿಗೆ ಸುೞು ಬೇರೆ ಹೇಳ್ತಿಯ… ಬೀಳುತ್ತೆ ವದೆ ಈಗ…ನಿಜ ಹೇಳು..
    ‘ನಂಗೆ.. ಕಿ ..ಕಿ..ಕಿಟ್ಟಣ್ಣ ಕೊಟ್ಟಿದ್ದು ಸಾ…’
    ‘ಯಾರೋ ಅದು ಕಿಟ್ಟಣ್ಣ…ಅವ್ನು ಯಾಕೆ ನಿಂಗೆ ಹೊಸ ಪೆನ್ಸಿಲ್ ಕೊಡ್ತಾನೆ..ಸುಳ್ಳು ಹೆಳೋದ್ರಲ್ಲಿ ಭಾರಿ ಜಾಣ ಆಗಿದಿಯ ನೀನು’…ಮಾಡ್ತಿನಿ ಇರು ನಿಂಗೆ.
    ಬೆತ್ತ ಹಿಡ್ಕೊಂಡು ಮಾಷ್ತ್ರು ಒಂದು ಕಾಲಿಗೆ ರಪಾ..ಕ್ಕನೆ ಬಿಟ್ಟತ್ತು….
    ನಾಣಿ ಬೇನೆಂದ ಕಿರ್ಚಿದ..’ಅಮ್ಮೋ..ಅಮ್ಮೋ….’

    ಹತ್ರ ಮನುಗಿದ್ದ ಅಮ್ಮ ಪ್ರೀತಿಂದ ಎಬ್ಬುಸಿ ಕೇಳಿತ್ತು …’ಮಗಾ, ನಾಣಿ..ಎಂತಾತು..ಕೆಟ್ಟ ಕನಸು ಬಿತ್ತಾ..’?
    ನಾಣಿ ತಡಬಡುಸಿ ಎದ್ದ…ಹಾಸಿಗೆ ಎಲ್ಲ ಚೆಂಡಿ…ಚೆಂಡಿ..
    ‘ಓ ದೇವರೆ, ಇಂದು ಶಾಲೆಲಿ ಎಂತ ಆಗದ್ದೆ ಇರ್ಲಿ’….ನಾಣಿ ದೇವರ ಪ್ರಾರ್ಥಿಸಿದ…ನಿತ್ಯ ವಿಧಿಗಳ ಮುಗಿಸಿ ಶಾಲೆಗೆ ಹೊರಟ, ಇಂದು ಕಿಟ್ಟಣ್ಣ ಪೆನ್ಸಿಲ್ ಕೊಟ್ಟರೆ ಎಂತ ಮಾಡುದು ಹೇಳುವ ಆಲೋಚನೆಲಿ…

    1. ನಿಂಗಳ ಒಪ್ಪವುದೇ, ಕಲ್ಪನೆಯೂ ಲಾಯ್ಕಿದ್ದು. ತುಂಬಾ ಧನ್ಯವಾದಂಗ.
      (ನಿಂಗೊ ಬಚಾವಾದಿ)
      ಬಚಾವಪ್ಪದಾ? ಇನ್ನೊಂದು ವಾರದೊಳ ಇನ್ನೊಂದು ಕಂತು ಕೊಡೆಕ್ಕಲ್ಲದಾ?

  8. ಶ್ಯಾಮಣ್ಣಾ, ಕತೆ ತುಂಬಾ ಲಾಯಿಕಲ್ಲಿ ರೈಸುವಗಳೆ ಬಪ್ಪ ವಾರಕ್ಕೆ ಕಾಯೆಕಾತನ್ನೇ?
    ನಾಣಿಗೆ ಪ್ರೀತಿಲಿ ಕಿಟ್ಟಣ್ಣ ಪೆನ್ಸಿಲು ಕೊಟ್ಟದು, ಅದರ ನೋಡಿ ನಾಣಿಗೆ ಖುಶಿ ಆದ್ದು ಓದುವಗ ಕಣ್ಣಿಲ್ಲಿ ನೀರು ಬಪ್ಪ ಹಾಂಗೆ ಆತು.
    ದಯಮಾಡಿ ನಾಣಿಗೆ ಆ ಕ್ರೂರ ಮಾಷ್ಟ್ರ ಕೈಂದ ಪೆಟ್ಟು ಸಿಕ್ಕುವ ಹಾಂಗೆ ಮಾಡಿಕ್ಕೆಡಿ.
    ರಘು ಮುಳಿಯ ಅಣ್ಣ ಬರದ ವಾಕ್ಯ ಓದಿ ನೆಗೆ ತಡೆಯ… ಅವು ಬರದ ಹಾಂಗೆ ಪೆನ್ಸಿಲಿನ ಕಡೆಯ ದೂಂಚಿ ಮಾಡಿದ್ದೆ ಹೇಳಿದರೆ ಸಾಕು ಆರತಿ. ಅಷ್ಟಪ್ಪಗ ಪಾಪದ ಮಾಣಿಗೆ ಪೆಟ್ಟು ಸಿಕ್ಕನ್ನೆ? ಲತಾ ಶೆಣೈ ನೋಡಿದ್ದರ ಧೈರ್ಯ ಮಾಡಿ ಹೇಳಿದರೆ ಸಾಕು.
    ಒಟ್ಟಾರೆ ಬಪ್ಪ ವಾರಕ್ಕೆ ಕಾಯ್ತೆ, ಹಾಂಗೆ ಬಾಕಿಯೋರ ಒಪ್ಪಲ್ಲಿ ಎಂತೆಲ್ಲ ಅಭಿಪ್ರಾಯ ಬತ್ತು ಹೇಳಿದೆ ಓದುತ್ತೆ…

    1. ನಿಂಗಳ ಒಪ್ಪ ಲಾಯ್ಕಿದ್ದು. ತುಂಬಾ ಧನ್ಯವಾದಂಗ.

  9. ನಿಂಗಳ ಒಪ್ಪವುದೇ ಬಯಂಕರ ಲಾಯ್ಕಿದ್ದು.

    [“ನಾನು ಪೆನ್ಸಿಲಿನ ಕಡೆಯನ್ನು ಕಟ್ಟರ್ನಲ್ಲಿ ಸ್ವಲ್ಪ ದೂ೦ಚಿ ಮಾಡಿದ್ದೆ” ] ಹಾಂಗೆ ಆರತಿ ಹೇಳಿದ್ದು ಹೇಳಿ ರಘು ಭಾವ ಹೇಳಿದವು.
    ಅದು ನಿಜಕ್ಕೂ ಹಾಂಗೆ ಹೇಳಿದ್ದ ಹೇಳಿ ಎನಗೆ ಗೊಂತಾಯಿದಿಲ್ಲೆ… ಅದರ ಹತ್ತರಯೇ ಕೇಳಿ ಆಯೆಕ್ಕಟ್ಟೆ ” ನೀನು ಹಾಗೆ ಹೇಳಿದ್ಯಾ ಆರತೀ..?” ಹೇಳಿ. 🙂

  10. ಯೋಪಾ… ಭಯಂಕರ ಲಾಯಕದ ಕತೆ ಶ್ಯಾಮಣ್ಣಂದು, ದಾಸಪ್ಪ ಮಾಟ್ರನ ಹಾಂಗೆ.
    ಅಲ್ಲಲ್ಲಿ ಉಪಮೆಗೊ, ವ್ಯಂಗ್ಯ ಸೇರ್ಸಿ ಬರದ ಶೈಲಿ ಅದ್ಭುತ ಆತು.” ಇಂಕ್ವಿಲಾಬ್ ಜಿಂದಾಬಾದ್” ಇದು ” ಎಂಕ್ ಲಾಬ ಜಿಂಜ ಬೋಡು, ಎಂಕ್ಲಾ ಜಿಂಜಾ ಬೋಡು” ಹೇಳಿ ತಿರುಗಿಸಿದ್ದು ಪಷ್ಟಾಯಿದು. ಓಯಿ , ನಿಂಗಳ ಚೀಲದೊಳ ಇನ್ನು ಹೀಂಗಿಪ್ಪದು ಇನ್ನೆಷ್ಟಿದ್ದು ? ಬರಲಿ ಇನ್ನುದೇ.
    ಮುಂದಾಣ ಕತೆಯ ರಘು ಭಾವ ಬರದ ಮತ್ತೆ ಇನ್ನೆಂತರ..? “ನಾನು ಪೆನ್ಸಿಲಿನ ಕಡೆಯನ್ನು ಕಟ್ಟರ್ನಲ್ಲಿ ಸ್ವಲ್ಪ ದೂ೦ಚಿ ಮಾಡಿದ್ದೆ” – ಅಲ್ಲಿಗೆ ಫೈಸಲ್ಲು ಆತನ್ನೆ ಭಾವ. ಚೆನ್ನೈ ಭಾವ ಓದಿಕ್ಕಿ ಎದ್ದು ಹೋದವನ್ನೆ. ಆನು ಎದ್ದು ಹೋಗಿ ಬಂದು, ಮತ್ತೆ ಓದಿದೆ.

  11. [ಎನ ಉಚ್ಚು ಬತ್ತೀಗ… ಮತ್ತೆ ಬತ್ತೆ 🙁 ]

    ಎಂತ ಭಾವ… ದಾಸಪ್ಪ ಮಾಷ್ಟನ ಬೆತ್ತದ ಹೆದರಿಕೆಯಾ?

  12. ಬೊಳುಂಬು ಮಾವ° ಗ್ರೇಶಿದಾಂಗೇ ಎನಗೂ ಆತು ಕತೆ ಓದುಸಿಗೊಂಡು ಹೋಪಗ.

    [ಒಂದೊಂದರಿ ಕೆಲವು ಹುಡುಗರಿಂಗೆ ಉಚ್ಚು ರಟ್ಟಿದ್ದೂ ಇದ್ದು, ಹೆದರಿ.] – ಎನ್ನ ಐದನೇ ಕ್ಲಾಸು ಇಡೀ ಒಂದು ವರ್ಷ ಎನ್ನ ಕಣ್ಣ ಮುಂದೆ ಬಂದಿಕ್ಕಿ ಹೋತು. ಯೋಪ…. ಆ ನಾಗರಾಜ ಮಾಷ್ಟ್ರ° ಆ ಸಮಯಲ್ಲಿ!!

    [ಕಿಟ್ಟಣ್ಣ ಇವನ ನೋಡಿ ಗುರ್ತದ ನೆಗೆ ಮಾಡಿದ°]. [ಇನ್ನು ಇಂದೀಗ ದಾಸಪ್ಪ ಮಾಷ್ಟಂಗೆ ಹೆದರೆಕ್ಕು ಹೇಳಿ ಇಲ್ಲೆ.] [ದಿನೇಸ] [ಇದರ ಸುದ್ದಿಗೆ ಹೋಗವು] [ಮೇಲಂದ ಗುಮ್ಮೆ ಹಕ್ಕಿ ನೋಡಿದಾಂಗೆ ಒಂದರಿ ಇಡೀ ಕ್ಲಾಸಿನ ನೋಡಿತ್ತು.][ದಾಸಪ್ಪ ಮಾಷ್ಟನ ಕೊಶ್ಟನು.] [ದನ ಕಡಿವ ಬ್ಯಾರಿ ದನಗಳ ನೋಡಿದಾಂಗೆ ಒಂದು ಸರ್ತಿ ಹುಡುಗರ ನೋಡಿತ್ತು] – ಭಾರೀ ಲಾಯಕ ಆಯ್ದು ನಿಜವೇ ಆಗಿಕ್ಕೇನೋ ಹೇಳ್ವಾಂಗೆ ಈ ಚಿತ್ರಣ.

    ಶ್ಯಾಮಣ್ಣನ ನಾಕು ಚಿತ್ರವೂ A1++ :D. ಮಾಣಿಯ ನೋಡಿರಂತೂ ಪಾಪನೇ ಅನ್ಸುತ್ತು 🙁

    {ಈ ಕತೆಲಿ ಮುಂದೆ ಎಂತಾತು? ಎನಗೆ ಬಾರೀ ಕುತೂಹಲ ಇದ್ದು… ಎಂತ ಆದಿಕ್ಕು?… ನಿಂಗೊಗೆ ಎಂತ ಅನುಸುತ್ತು..?} – ಶ್ಯಾಮಣ್ಣ.. ಎನ ಉಚ್ಚು ಬತ್ತೀಗ… ಮತ್ತೆ ಬತ್ತೆ 🙁

  13. ಕಥೆಯ ನಿರೂಪಣೆ, ಭಾಷೆಯ ಚೆ೦ದ,ಸರಳ ಸು೦ದರ ಉಪಮೆಗೊ (ಹಲ್ಲೆರಡು ಮುಂದೆ, ಮಾಡು ಇಳಿಶಿ ಕಟ್ಟಿದಾಂಗೆ) ಮತ್ತೆ ಮತ್ತೆ ಓದುವ ಹಾ೦ಗೆ ಮಾಡಿತ್ತು.
    ಕಥೆಯ
    ದಾಸಪ್ಪ ಮಾಷ್ಟ್ರನ ಕಣ್ಣು ದೊಡ್ಡ ಆತು..ಬಾಯಿ ಆಶ್ಚರ್ಯಲ್ಲಿ ಒಡದತ್ತು.”ಚೆಲ ಕತೆಯೇ,ಇದು ದಿನೇಸನ ಪಿಕ್ಲಾಟ ಅಲ್ಲದೋ ಹಾ೦ಗಾರೆ” ಹೇಳಿ ಒ೦ದರಿ ಕನ್ನಡ್ಕದೆಡೇ೦ದ ಮಗನ ನೋಡಿತ್ತು. ದಿನೇಸನೂ ಆಶ್ಚರ್ಯಲ್ಲಿ ಮೇಗೆ ಕೆಳ ನೋಡೊದು ಕ೦ಡತ್ತು,ಮೆಲ್ಲ೦ಗೆ ಒ೦ದು ಕೈ ಚೀಲದೊಳ ಹಾಕೊದು ಗಮನಕ್ಕೆ ಬ೦ತು.ಹ್ಮ್,”ಕು೦ಬ್ಳಕಾಯಿ ಕಳ್ಳ ,ಇದು ಉದ್ಧಾರ ಆಗ” ಹೇಳಿ ಮನಸ್ಸಿಲೇ ಹೇಳ್ಯೊ೦ಡು ” ಆರತೀ..ನಿನ್ನ ಪೆನ್ಸಿಲ್ ಇದುವಾ? ಸರೀ ನೋಡು ಗುರ್ತ ಸಿಕ್ತದಾ ಅ೦ತ ?” ಹೇಳಿಕ್ಕಿ ಒ೦ದರಿ ನಾಣಿಯನ್ನೇ ನೋಡಿದವು ಮಾಷ್ಟ್ರು. ನಾಣಿ ದೊಡ್ಡ ಕಣ್ಣುಗಳ ಬಿಟ್ಟಲ್ಲೇ ಬಾಕಿ.”ಅಯ್ಯೋ ಗ್ರಹಚಾರವೇ ! ಈ ಕಿಟ್ಟಣ್ಣ ಕೊಟ್ಟ ಹೇಳಿ ಕೊಶೀಲಿ ತೆಕ್ಕೊ೦ಡ ಪೆನ್ಸಿಲು ಈಗ ಹೀ೦ಗೆ ಧರ್ಮಕ್ಕೆ ಪೆಟ್ಟು ತಿ೦ಬ ಹಾ೦ಗೆ ಮಾಡಿತ್ತನ್ನೇ” ಹೇಳಿ ಮೋರೆ ಸಣ್ಣ ಮಾಡಿದ.
    ಅಷ್ಟಪ್ಪಗ ಆರತಿ ಹೇಳಿತ್ತು. ” ಇದು ನ೦ದಲ್ಲ ಸಾರ್,ನಾನು ಪೆನ್ಸಿಲಿನ ಕಡೆಯನ್ನು ಕಟ್ಟರ್ನಲ್ಲಿ ಸ್ವಲ್ಪ ದೂ೦ಚಿ ಮಾಡಿದ್ದೆ ” ಹೇಳಿ.
    ನಾಣಿ ಉಸುಲು ಬಿಟ್ಟ, ಇನ್ನು ದಿನೇಸನ ಸರದಿ..

    1. ರಘುಬಾವನ ಒಪ್ಪ ಲಾಯ್ಕಿದ್ದು…. ಕಲ್ಪನೆಯೂ ಲಾಯ್ಕಿದ್ದು

      [ನಾಣಿ ಉಸುಲು ಬಿಟ್ಟ, ಇನ್ನು ದಿನೇಸನ ಸರದಿ..]
      ಸದ್ಯ… ಎನ್ನ ಸರದಿ ಅಲ್ಲನ್ನೆ…. 😉
      ಬಚ್ಚಾವು….!!

  14. ಕತೆ ಕುತೂಹಲಕಾರಿಯಾಗಿದ್ದು . ಸುರುವಿಂಗೆ ಚಿತ್ರ ನೋಡಿ ನೆಗೆ ಬಂದರೂ ಕತೆ ಓದಿದ ಹಾಂಗೆ ರಜ ಬೇಜಾರು ಅಪ್ಪ ಹಾನ್ಗೆ ಇದ್ದು . ಎನ್ನ ಕಲ್ಪನೆಲಿ — ಪೆನ್ಸಿಲಿಂಗುದೆ ಕಷ್ಟ ಇದ್ದ ಆ ಮಾಣಿಯ ಜೀವಮಾನ ಇಡೀ ಪೆನ್ಸಿಲಿನ ಒಟ್ಟಿಂಗೆ ಬದುಕ್ಕುವ ಶ್ರೇಷ್ಟ ವ್ಯಂಗಚಿತ್ರಕಾರ ಮಾಡಿ ಬಿಡುವೆ
    . ದಾಸಪ್ಪ ಮಾಸ್ತರನ ಕೊರ್ಟಿಲಿ ಆರತಿದೆ ,ಲತಾಂದೆ ಸಾಕ್ಷಿಹೇಳುದು ,ನಾಣಿ ಹೇಳಿ ಕಿಟ್ಟಣ್ಣ ನನ್ನೂ ಬಪ್ಪಲೆ ಮಾಡುದು, ದಿನೀಶಂಗೆ ಅವನ ತಪ್ಪು ಗೊಂತಪ್ಪ ಹಾಂಗೆ ಮಾಡುದು , ದಾಸಪ್ಪ ಮಾಸ್ಟ ಪಶ್ಚಾತಾಪ ಪಡುವ ಹಾಂಗೆ ಅಪ್ಪದು ಇದು ಎನ್ನ ಕಲ್ಪನೆ

    ನಾಣಿಯ ಕೆಮಿ ರಜ್ಜ ವಿಶೇಷ ಕಾಣ್ತು.

    1. [ಪೆನ್ಸಿಲಿಂಗುದೆ ಕಷ್ಟ ಇದ್ದ ಆ ಮಾಣಿಯ ಜೀವಮಾನ ಇಡೀ ಪೆನ್ಸಿಲಿನ ಒಟ್ಟಿಂಗೆ ಬದುಕ್ಕುವ ಶ್ರೇಷ್ಟ ವ್ಯಂಗಚಿತ್ರಕಾರ]
      ಅಯ್ಯೋ… ನಿಂಗ ಎಂತ ಎನ್ನ ಜೀವನದ್ದೇ ಕತೆ ಇದು ಹೇಳೀ ಗ್ರೇಷಿದಿರೋ ಹೇಂಗೆ? 🙂

  15. ಎನಗುದೆ ನಾಣಿ ಕಳ್ಳ ಹೇಳಿ ಅಪ್ಪದು ಇಷ್ಟ ಇಲ್ಲೆ. 🙁

  16. ಶ್ಯಾಮಣ್ಣ, ಕಥೆ ಸೂಪರ್ ಹೇಳಿರೆ ಸೂಪರ್ ಆಯಿದು. ಎನ್ನದೇ ಕ್ಲಾಸಿಲ್ಲಿ ನೆಡದ ಕಥೆ ಹಾಂಗೆ ಅನಿಸಿತ್ತು. ಎಂಗಗುದೆ ದಾಸಪ್ಪನ ಹಾಂಗೇ ಇಪ್ಪ ಒಬ್ಬ ಮಾಸ್ಟ್ರು ಇತ್ತಿದ್ದ. ನೈಜ ಕಥೆ, ಶೈಲಿ ಅಂತೂ ಅದ್ಭುತ. ನಟರಾಜ ಪೆನ್ಸಿಲಿನ ವರ್ಣನೆ, ಅಸಿಸ್ಟೆಂಟು ಹೆಡ್ಮಾಶ್ಟ್ರು ಮಾತಾಡಿದ ಕ್ರಮ ಎಲ್ಲವು ಕಣ್ಣಿಂಗೆ ಕಟ್ಟಿತ್ತು. ಮಧ್ಯ ಮಧ್ಯ ವರ್ಣಚಿತ್ರಂಗೊ, ಇನ್ನುದೆ ಕೊಶಿ ಕೊಟ್ಟತ್ತು. ಇದು ಧಾರಾವಾಹಿ ಆಗಿ ಮುಂದುವರಿದರೆ, ಬೈಲಿಂಗಂತೂ ರಸಗವಳ ಅಕ್ಕು. ಸರಿಯಾದ ಕ್ಲೈಮಾಕ್ಸಿಂಗೆ ಇನ್ನಾಣ ವಾರದ ವರೆಗೆ ಕಾಯೆಕಾನೆ. ಎನ್ನ ತಲಗೆ ಎಂತಾರು ಹೊಸ ಎಂಡಿಂಗಿನ ಐಡಿಯಾ ಬಂದರೆ ಖಂಡಿತಾ ಹೇಳ್ತೆ. ಪಾಪ, ನಾಣಿಗೆ ಪೆಟ್ಟು ಬೀಳದ್ದೆ ಇರಳಿ.

    1. ಶುರುವಾಣ ಒಪ್ಪಕ್ಕೆ ಬೊಳುಂಬು ಭಾವಂಗೆ ಧನ್ಯವಾದ…. ನಿಂಗ ಹೇಳಿದಾಂಗೆ ಎಲ್ಲ ಶಾಲೆಗಳಲ್ಲಿಯೂ ಒಂದೊಂದು ದಾಸಪ್ಪ ಮಾಷ್ಟಂಗ ಇರ್ತವೋಳಿ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×