Oppanna.com

ಆರು ಬುದ್ಧಿ ಇಲ್ಲದ್ದವು?

ಬರದೋರು :   ಗೋಪಾಲಣ್ಣ    on   17/06/2012    19 ಒಪ್ಪಂಗೊ

ಗೋಪಾಲಣ್ಣ

ಉದಿಯಪ್ಪಗ ಒಂಬತ್ತುವರೆ ಗಂಟೆ. ಆ ದಿನ ಆದಿತ್ಯವಾರ;  ಮಾಷ್ಟ್ರು ರಾಗಣ್ಣಂಗೆ ರಜೆ.
ಮಕ್ಕೊಗೆ ರಜೆ ಆದರೆ ಮನೆ ಕೆಲಸ ಇರುತ್ತು; ರಾಗಣ್ಣಂಗೆ ಅಂದು ಎಂತ ಕೆಲಸವೂ ಇಲ್ಲೆ.
ಎಲ್ಲಿಗೂ ಜಂಬ್ರಕ್ಕೆ ಹೋಪಲೆ ಹೇಳಿಕೆಯೂ ಇಲ್ಲೆ. ತಿಂಡಿ ಆತು. ಮಾತಾಡಲೆ ಆರೂ ಇಲ್ಲೆ.
ಅವನ ಮಕ್ಕೊ ಆಡಲೆ ಎಲ್ಲಿಗೋ ಹೋಯಿದವು; ಹೆಂಡತಿ ಲಲಿತ ಒಳ ಮದ್ಯಾನ್ನದ ಊಟದ ಅಟ್ಟಣೆಗೆ ಬೇಕಾಗಿ, ಎಂತದೋ ಕೆಲಸಲ್ಲಿ ಇದ್ದು.
ಹಾಂಗೆ ಹೇಳಿ ರಾಗಣ್ಣ ಸುಮ್ಮನೆ ಪತ್ರಿಕೆ ತಿರುಗಿಸಿಕೊಂಡು ಕೂದ.
ಅದೇ ಹೊತ್ತಿಂಗೆ ಸಿಂಗಣ್ಣ ಬಂದ.

“ಬಾ ಬಾ ಸಿಂಗಣ್ಣ,ಇಂದು ಎಂತ ಇಲ್ಲಿಗೆ ಸವಾರಿ? ಆಸರಿಂಗೆ ಬೇಕೊ?”
“ಆಸರಿಂಗೆ ಬೇಡ…”ಕುರ್ಚಿಲಿ ಕೂರುತ್ತಾ ಹೇಳಿದ ಸಿಂಗಣ್ಣ.
“ಎಂತ ಕಾರ್ಬಾರು? ಇಂದು ಎಲ್ಲಿಯೂ ಅನುಪತ್ಯ ಇಲ್ಲೆಯೊ?”
ತನ್ನ ದೊಡ್ದ ಗಂಟಿನ ಕೆಳ ಮಡುಗಿದ ಸಿಂಗಣ್ಣ.
ಅದರಲ್ಲಿ ಹಳೆ ವಸ್ತ್ರ,ನಾಕು ಅಂಗಿ,ಬನಿಯನ್ನು-ಹೀಂಗೆಲ್ಲಾ ಇಪ್ಪದು. ಒಂದು ಮುರ್ಕಟೆ ಕೊಡೆಯೂ, ಚಿಲ್ಲರೆ ಪೈಸೆಯೂ ಇಕ್ಕು.
ರಾಗಣ್ಣನ ಕಣ್ಣು ಚೀಲದ ಮೇಲೆ – ಈ ಗ್ರಾಯಕಿಹತ್ತರೆ ಎಂತ ಇದ್ದಪ್ಪಾ. ಇಷ್ಟು ಗಂಟು ಕಟ್ಟಲೆ, ಹೇಳಿ ನೆಗೆ ಬಂತು.
“ಇಂದು ಇಲ್ಲೇ ಹತ್ತರೆ ಕೃಷ್ಣಣ್ಣನ ಅಪ್ಪನ ಬೊಜ್ಜ ಅಲ್ಲದೊ? ಅದಕ್ಕೆ ಬಂದೆ..”
“ಅವು ವಾಸಜ್ಜ….ಇಲ್ಲೇ ತೆಂಕಗುಡ್ಡೆಯ ಎರಡು ಫರ್ಲಾಂಗು ಆಚೆ… ಪದ್ಯರಲ್ಲದೊ? ಸರಿ, ಹಾಂಗೆ ಸಮಾ ಹೊಡವಲಿದ್ದು ಮದ್ಯಾನ್ನ ಅಲ್ಲದೊ?”
“ಅಪ್ಪು, ನಿಂಗಳೂ ಬತ್ತೀರೊ ಅಲ್ಲಿಗೆ?” ಸಿಂಗಣ್ಣನ ಚೋದ್ಯ.
“ಅಯ್ಯೋ, ಎನಗೆ ಹೇಳಿಕೆ ಇಲ್ಲೆನ್ನೆ? ನಿನಗೆ ಆದರೆ ಹೇಳಿಕೆ ಬೇಡನ್ನೆ?”
“ಹಾಂಗೆಂತೂ ಇಲ್ಲೆ- ಬೊಜ್ಜಕ್ಕೆ ಹೇಳಿಕೆ ಇಲ್ಲೆ ಹೇಳಿ ಆದರೂ ಸಾರ ಇಲ್ಲೆ; ಮೊದಲೆಲ್ಲ ಬೊಜ್ಜಕ್ಕೆ ತಿಳಿಸುದು ಮಾಂತ್ರ, ಎಲ್ಲೊರೂ ಬನ್ನಿ ಹೇಳಿ ಬಗೆತ್ತರಲ್ಲಿ ಹೇಳುತ್ತ ಕ್ರಮ ಇಲ್ಲೆ”
“ಅದು ನಮ್ಮ ನೆಂಟರೊಳ-ಹೀಂಗೆ ಬಾಕಿ ಬ್ರಾಹ್ಮರ ಬೊಜ್ಜಕ್ಕೆ ಅಲ್ಲ. ನೀನು ಏವಾಗ ಇಷ್ಟು ಉಶಾರಿ ಆದ್ದದು ಸಿಂಗಣ್ಣ- ಭಾರೀ ಕ್ರಮ ಗೊಂತಿದ್ದನ್ನೆ ನಿನಗೆ?” ರಾಗಣ್ಣ ನೆಗೆ ಮಾಡಿದ.
ಸಿಂಗಣ್ಣ ಬೋಸ, ಅಂಡೆ – ಹೇಳಿ ಕೆಲವರು ಹೇಳುಗು.. ಅವನೂ ನೆಗೆ ಮಾಡಿದ.

ಅವನ ನಿಜ ಹೆಸರು ನರಸಿಂಹ ಹೇಳಿ. ಅವನ ಅಪ್ಪ ಸತ್ತು ಹೋಯಿದವು. ಅಬ್ಬೆ ಅವನ ಅಣ್ಣನ ಒಟ್ಟಿಂಗೆ ಇಪ್ಪದು. ಅಣ್ಣ ಅಡಿಗೆಗೆ ಹೋವುತ್ತ, ತಮ್ಮನಾದ ಸಿಂಗಣ್ಣ ಅವಂಗೆ ಸಕಾಯ ಮಾಡಿದ್ದರೆ ಸಾಕಿತ್ತು. ಆದರೆ ಅವ ಅಕ್ಕರಕಡ್ಡಿ ಎತ್ತಿ ಮಡಗ.
ಆಚೆ ಈಚೆ ತಿರುಗುಗು, ಎಲ್ಲಿಯೇ ಆಗಲಿ, ಪೂಜೆ, ಮದುವೆ, ಉಪ್ನಾನ, ಸಟ್ಟುಮುಡಿ, ಬೊಜ್ಜ-ಹೇಳಿ ಗೊಂತಾದರೆ ಅಲ್ಲಿಗೆ ಎತ್ತುಗು.
ಬೇರೆ ಎಲ್ಲಿಯೂ ಊಟ ಇಲ್ಲದ್ದರೆ ಮನೆ ಇದ್ದು.ಅಬ್ಬೆಯೋ ಅತ್ತಿಗೆಯೋ ಅವಂಗೆ ಒಂದು ಮುಷ್ಟಿ ಚೋರು ಹಾಕುಗು.
ಹಾಂಗೆ ಬಂದರೆ, ಅವನ ಅಬ್ಬೆ ಅಸ ಪಟ್ಟೊಂಡು ಅವನ ವಸ್ತ್ರ ತೊಳದು ಹಾಕುಗು. ಅಲ್ಲದ್ದರೆ ಅವ ವಸ್ತ್ರ ತೊಳೆಯ. ಮೀಯಾಣ ಹೇಳಿ ಎಲ್ಲಾದರೂ ಹೋದಲ್ಲಿ ಮೈ ಚೆಂಡಿ ಮಾಡುಗು. ಜಂಬಾರಕ್ಕೆ ಹೋದರೆ,ಅವನ ಎಲ್ಲರೂ ತಮಾಶೆ ಮಾಡುಗು.
ಅವಂಗೆ ಕೋಪ ಬಾರ.ಅವಂಗೆ ಕೋಪ ಬಪ್ಪದು ಅವನ ಮನೆಲಿ-ಅಬ್ಬೆಯೊ ಅಣ್ಣನೊ ಎಂತಾದರೂ ಕೆಲಸ ಹೇಳಿರೆ ಮಾಂತ್ರ. ಹಾಂಗಾಗಿ ಅವನ ಮನೆಲಿ ಅವನ ಆಶೆ ಬಿಟ್ಟಿದವು. ಎಬ್ಬಿದ ಹಾಂಗೆ ಹೋಗದ್ದರೆ ಹೋದ ಹಾಂಗೆ ಎಬ್ಬುದು ಅಲ್ಲದೊ?

ಅಷ್ಟಪ್ಪಾಗ ರಾಗಣ್ಣನ ಕಣ್ಣು ಸಿಂಗಣ್ಣನ ಬೆರಳ ಮೇಲೆ ಹೋತು.
“ಇದೆಂತಾ ಸಿಂಗಣ್ಣ? ಉಂಗಿಲು? ಎಲ್ಲಿಂದ?ನಿನ್ನ ಮಾವಗಳು ಕೊಟ್ಟದೊ? ಬದ್ಧ ಕಳಾತೊ?”ರಾಗಣ್ಣ ಕೀಟಲೆಯ ಸ್ವರಲ್ಲಿ ಕೇಳಿದ. ಈ ಪೆದ್ದಂಗೆ ಆರು ಕೂಸು ಕೊಡುಗು ಹೇಳಿ ಮನಸ್ಸಿಲೇ ಹೇಳಿಕೊಂಡ.
“ಹೆ, ಹೆ..ಮಾವಗಳು! ಅಲ್ಲಪ್ಪಾ..ನಿಂಗೊ ಹೀಂಗೆಲ್ಲಾ ಕೇಳಿರೆ ಎನಗೆ ನಾಚಿಕೆ ಆವುತ್ತು ಮಾಷ್ಟ್ರೆ…”ನಿಜವಾಗಿಯೂ ನಾಚಿಕೊಂಡು ಹೇಳಿದ ಸಿಂಗಣ್ಣ.
“ಹೋ, ನಿನಗೆ ನಾಚಿಕೆಯೂ ಇದ್ದೊ? ಅದಿರಲಿ, ಇದು ಎಲ್ಲಿ ಸಿಕ್ಕಿತ್ತು? ಹೋದಲ್ಲಿ ಹಾರಿಸಿ ತಂದೆಯೊ? ನಿಜಾ ಹೇಳು…”-ಲೊಟ್ಟೆ ಕೋಪಲ್ಲಿ ಕೇಳಿದ ರಾಗಣ್ಣ.
“ಅಲ್ಲ ಮಾಷ್ಟ್ರೇ, ಹೀಂಗೆ ಎನಗೆ ಸಿಕ್ಕಿದ ದಕ್ಷಿಣೆ ಪೈಸೆ, ಅಣ್ಣ ಕೊಟ್ಟದು ಎಲ್ಲಾ ಮಡುಗಿ, ಮಡುಗಿ ಇದರ ತಂದೆ… ನಾರಾಯಣಾಚಾರಿಯ ಹತ್ತರೆ ಮಾಡಿಸಿದ್ದು. ನಿಂಗೊ ಬೇಕಾರೆ ಕೇಳಿ..” -ತನ್ನ ಸಪೂರದ ಉಂಗಿಲಿನ ಅಭಿಮಾನಲ್ಲಿ ನೋಡ್ತಾ ಹೇಳಿದ ಸಿಂಗಣ್ಣ.
ಸುಮಾರು ಅರ್ಧ ಪವನಿನ ಸಣ್ಣ ಉಂಗಿಲು. ಆದರೆ ಚಿನ್ನದ ಈ ಕ್ರಯಲ್ಲಿ ಇವ ಮಾಡಿಸಿದ್ದು ವಿಶೇಷವೇ.

“ಆತು,ಉಂಗುರ ಆತನ್ನೆ? ಇನ್ನು ಕೂಸು ಹುಡುಕ್ಕಿರೆ ಆತು. ಪೇಪೇ ಪೇ ಊದುದೇ..”ರಾಗಣ್ಣ ಹೇಳಿದ.
ಅಷ್ಟು ಹೊತ್ತಿಂಗೆ ಲಲಿತ ಚಾಯ ತಂದು ಸಿಂಗಣ್ಣಂಗೆ ಕೊಟ್ಟತ್ತು.
“ಚಾಯಕ್ಕೆ ಕೂಡಲೆ ಎಂತರ?” ಸಿಂಗಣ್ಣ ಬಾಯಿ ಬಿಟ್ಟು ಕೇಳಿ ಅಪ್ಪಗ, ಲಲಿತ ಬಾಳೆ ಕೀತಿಲಿ ಎರಡು ದೋಸೆ ಹಾಕಿ ಕೊಟ್ಟತ್ತು. ಅದರ ತಿಂದ ಸಿಂಗಣ್ಣ ಮೀಯೆಕು ಹೇಳಿ ಬೆಶಿನೀರ ಕೊಟ್ಟಗೆಗೆ ಹೋದ. ಅವ ಹೋಪಾಗ ಉಂಗಿಲಿನ ಜಾಗ್ರತೆಲಿ ತೆಗೆದು ಟಿ.ವಿ.ಯ ಹತ್ತರೆ ಮಡುಗಿ ಹೋದ. ರಾಗಣ್ಣ ಅದರ ನೋಡಿಂಡು ಇತ್ತಿದ್ದ. ಹೆಂಡತ್ತಿಗೆ ಕಣ್ಣು ಸನ್ನೆ ಮಾಡಿದ.
ಲಲಿತ ಅದರ ತೆಗದು ಒಳ ಮಡುಗಿತ್ತು.
ಅದೇ ಹೊತ್ತಿಂಗೆ ದಾಸಯ್ಯ ಬಂತು ,ಶಂಖ ಉರುಗಿತ್ತು. ಮನೆಯ ಒಳವೇ ಉರುಗಿದ್ದದು, ಮತ್ತೆ ಪೈಸೆ ತೆಕ್ಕೊಂಡು ಹೋತು.
ಸಿಂಗಣ್ಣ ಮಿಂದಿಕ್ಕಿ ಬಂದ.ಟಿ.ವಿ.ಹತ್ತರೆ ಉಂಗಿಲಿಲ್ಲೆ. ಅಲ್ಲಿ ಸುತ್ತ ಮುತ್ತ ಇಲ್ಲೆ..”ಎಂತರ ನೋಡುದು ಸಿಂಗಣ್ಣ?” ರಾಗಣ್ಣ ಕೇಳಿದ.
“ಮಾಷ್ಟ್ರೇ,ಎನ್ನ ಉಂಗಿಲು ಕಾಣುತ್ತಿಲ್ಲೆ…”ಕೂಗಲೇ ಸುರು ಮಾಡಿದ ಸಿಂಗಣ್ಣ.
“ಅಲ್ಲಿಯೇ ಇಕ್ಕು..ನೋಡು..” ರಾಗಣ್ಣನೂ ಹುಡ್ಕಲೆ ಸೇರಿದ-“ಇದಾ,ಈ ಮದುಮ್ಮಾಯನ ಉಂಗಿಲು ಕಂಡಿದೆಯೊ ನೀನು? ಇಲ್ಲಿ ಬಾ..” ಹೇಳಿ ಬೊಬ್ಬೆ ಹಾಕಿದ.
ಲಲಿತ ಓಡಿ ಬಂತು.ಅದೂ ಎಲ್ಲಾ ಜಾಗೆ ಹುಡುಕ್ಕಿತ್ತು.ಪುಸ್ತಕ ಎಲ್ಲಾ ನೆಗ್ಗಿ ನೆಗ್ಗಿ ನೋಡಿತ್ತು. ಎಲ್ಲಿಯೂ ಉಂಗಿಲು ಇಲ್ಲೆ.
“ನಿಂಗೊ ಇಲ್ಲಿಯೇ ಇದ್ದಿದ್ದೀರನ್ನೆ? ಆ ದಾಸ ಬಂತಲ್ಲಾ ಅದು ಏನಾದರೂ ಕೊಂಡೋತೊ ಏನೊ?”
ಲಲಿತನ ಮಾತು ಕೇಳಿ ಅಪ್ಪಾಗ ಸಿಂಗಣ್ಣಂಗೂ ಅಪ್ಪು ಹೇಳಿ ತೋರಿತ್ತು..”ಆನು ಕಂಡಿದಿಲ್ಲೆ, ಕಂಡಿದ್ದರೆ ಆನು ಬಿಡುತ್ತಿತ್ತೆನೊ?”ಹೇಳಿದ ರಾಗಣ್ಣ. ಸಿಂಗಣ್ಣ ಬೆರೇನೆ ಕೂಗಿದ.
“ಏ ಸಿಂಗಣ್ಣ..ಕೂಗೆಡ..ಕೂಗಿರೆ ಸಿಕ್ಕುಗೊ? ಆ ದಾಸ ಇನ್ನೊಂದಾರಿ ಬಕ್ಕು, ಆವಾಗ ಆನು ಕೇಳುವೆ.. ನೀನು ಈಗ ಹೆರಡು. .ಊಟಕ್ಕೆ ಹೋಯೆಕನ್ನೆ..” ಹೇಳಿದ ರಾಗಣ್ಣ.
“ಎನ್ನ ಉಂಗಿಲು ತೆಗೆದ ಆ ದಾಸನ ಕೈ ತುಂಡಾಗಲಿ.. ಅದು ಹುಳು ಆಗಿ ಸಾಯಲಿ..” ಹೀಂಗೆ ಶಾಪ ಹಾಕಿದ ಸಿಂಗಣ್ಣ ವಸ್ತ್ರ, ಅಂಗಿ ಹಾಕಿಕೊಂಡ.
ಅಷ್ಟಪ್ಪಾಗ ರಾಗಣ್ಣ “ಸಿಂಗಣ್ಣ,ಎನ್ನ ಮನೆಗೆ ಬಂದು ನಿನ್ನ ಉಂಗಿಲು ಹೋತನ್ನೆ ಹೇಳಿ ಎನಗೆ ಬೇಜಾರ. ಆರ ಹತ್ತರೂ ಹೇಳೆಡ..ಇದಾ ಎನ್ನ ಹತ್ತರೆ ಹೆಚ್ಚಿಗೆ ಪೈಸೆ ಇಲ್ಲೆ.. ನಿನಗೆ ಹೊಸ ಉಂಗಿಲು ಮಾಡುಸಲೆ ಇದರ ತೆಕ್ಕೊ..” ಹೇಳಿ ಐನೂರು ರೂಪಾಯಿಯ ಅವನ ಕೈಲಿ ಹಾಕಿದ.
ಕೂಗುದು ನಿಲ್ಲಿಸಿದ ಸಿಂಗಣ್ಣ ಹಿ ಹಿ ಹೇಳಿ ನೆಗೆ ಮಾಡಿದ.

ಮತ್ತೆ ರಜಾ ಹೊತ್ತಿಲಿ ಸಿಂಗಣ್ಣ ಗಂಟು ನೆಗ್ಗಿಂಡು ಅಲ್ಲಿಂದ ಹೆರಟ-ಕರ್ಹಾಡಸ್ಥರ ಮನೆಗೆ.
ಅವ ಹೋದ ಮೇಲೆ ರಾಗಣ್ಣನೂ ಲಲಿತೆಯೂ ಗಟ್ಟಿಯಾಗಿ ನೆಗೆ ಮಾಡಿದವು-“ಅಯ್ಯೋ, ಇವ ಬರೇ ಅರೆಮರುಳ…ಹೆ..ಹೆ.. ಒಂದಿಷ್ಟೂ ಬುದ್ಧಿ ಇಲ್ಲೆ…ಬರೇ ಬೆಪ್ಪ…
ಅವರ ವಿಕಟವಾದ ನೆಗೆ ಗೋಡೆಗೆ ಬಡಿದು ಅವರ ಕೆಮಿಗೇ ಪ್ರತಿಧ್ವನಿ ಆತು!

~*~*~

19 thoughts on “ಆರು ಬುದ್ಧಿ ಇಲ್ಲದ್ದವು?

  1. Gopala. Congratulations & thanks, very good story, barada shyli thumba layika aayidu. Thumba nyjavagi baradde. All the very best to you, Gopala.

  2. naataka bhaari olledaidu aaru doddavu naataka kathe barada abhinayisida elloroo doddave

  3. ನಿನ್ನೆ [೫-೧-೧೪] ನಂತೂರು ಶ್ರೀ ಭಾರತೀ ಕೊಲೇಜಿಲಿ ಹವ್ಯಕ ಮಹಾಸಭೆಯ ವಾರ್ಷಿಕೋತ್ಸವಲ್ಲಿ ಬೊಳುಂಬು ಗೋಪಾಲಣ್ಣನ ತಂಡ ಎನ್ನ ಈ ಕತೆಯನ್ನೂ ಮಹೇಶನ ಒಂದು ಶುದ್ದಿಯನ್ನೂ ಸೇರ್ಸಿ ಆರು ದೊಡ್ದವು? ಹೇಳಿ ನಾಟಕ ಮಾಡಿದ್ದವು.ಬೊಳುಂಬು ಗೋಪಾಲಣ್ಣ ಮತ್ತೆ ಅವರ ಸಹಕಲಾವಿದರಿಂಗೆ ಅಭಿನಂದನೆ ಮತ್ತೆ ಧನ್ಯವಾದ.

    1. ನಿಂಗೊ ಬರದ ಕತೆ ಓದಿಯಪ್ಪಗಳೇ ಇದು ನಾಟಕಕ್ಕೆ ಸೂಕ್ತವಾಗಿದ್ದು ಹೇಳಿ ಕಂಡಿತ್ತು. ಮತ್ತೆ ಒಪ್ಪಣ್ಣನ ಶುದ್ದಿಯುದೆ ಸೇರಿಯಪ್ಪಗ ನಾಟಕದ ವಸ್ತು ಗಟ್ಟಿ ಆತು. ನಮ್ಮ ಭಾಷೆಗೆ ಹೇಳಿ ಮಾಡುಸಿದ ಹಾಂಗಿತ್ತು ಕಥಾ ವಸ್ತು. ಎಲ್ಲೋರ ಸಹಕಾರಂದ ನಾಟಕ ಒಂದು ಚೆಂದಕೆ ನೆಡದತ್ತು. ಬೋಚಭಾವನ ಹಾಂಗೆ ವೇದಿಕೆಗೆ ಬಪ್ಪಲೆ ಕಾರಣವುದೆ ಸಿಕ್ಕಿತ್ತು. ಇಡೀ ನಾಟಕವ ನೋಡಿ ಅಭಿನಂದಿಸಿದ ಗೋಪಾಲಣ್ಣಂಗೆ, ಸುಬ್ರಾಯಣ್ಣಂಗೆ ಹೃದಯಪೂರ್ವಕ ಧನ್ಯವಾದಂಗೊ.

  4. ಸಿಂಗಣ್ಣ ಬೋಸ ,ಬೆಪ್ಪ ಆದರೆ ಮೇಲೊಬ್ಬ ನೋಡುವವ ಇದ್ದ ,ಅವ ಬೆಪ್ಪ ಅಲ್ಲ ಹೇಳಿ ರಾಗಣ್ಣಗೆ ನೆನಪಾಯಿದಿಲ್ಲೆಯ ?ರಾಗಣ್ಣನ ಮೇಲೆ ನಂಬಿಕೆ ಮದುಗಿದ , ಒಂದಿನಿತೂ ಸಂಶಯಿಸದ್ದ ಮುಗ್ಧ ಬಡಪಾಯಿ ಸಿಂಗಣ್ಣನ ಉಂಗಿಲನ್ನೂ ಹೊಡವ ಹೇಳಿ ಕಂಡತ್ತನ್ನೇ.ಇಂಥಾದ್ದು ಬೇರೆಡೆ ನಡದ್ದು ,ನಡೆತ್ತಾ ಇದ್ದು .ಇಂಥ ವಿಶ್ವಾಸ ದ್ರೋಹಿಗಳ ಬಗ್ಗೆ ಎಚ್ಚರಿಕೆಯ ಧ್ವನಿಯೂ ಇದರಲ್ಲಿದ್ದು

    ಒಳ್ಳೆ ಕಥೆಯಾ ಎಂಗೊಗೆ ಓದುಲೇ ಅವಕಾಶ ಮಾಡಿಕೊಟ್ಟದಕ್ಕೆ ಧನ್ಯವಾದಂಗ

  5. ಎಲ್ಲರ ಸಹೃದಯ ಅಭಿಪ್ರಾಯಂಗೊಕ್ಕೆ ಧನ್ಯವಾದಂಗೊ.
    ವಿಭಿನ್ನ ಅಂತ್ಯ ಸೂಚಿಸಿದವಕ್ಕೆ ವಂದನೆ.ಅಪ್ಪು,ಹಾಂಗೆ ಮಾಡಲಾವುತ್ತಿತ್ತು.ಆದರೆ ಕತೆಯ ಪರಿಣಾಮ ,ತೀವ್ರತೆಗೆ ಧಕ್ಕೆ ಬತ್ತೋ ಹೇಳಿ ಎನಗೆ ಅಂಜಿಕೆ.
    ಈ ಕತೆಲಿ ಬೋಸಂಗಳ ತಮಾಷೆ ಮಾಡುವ,ಮೋಸ ಮಾಡುವವರ ಒಂದು ಅತಿಶಯ ವರ್ಣನೆ ಮಾಡಿ ಎತ್ತಿ ತೋರಿಸುದು ಮಾತ್ರ ಎನ್ನ ಉದ್ದೇಶ.

  6. ಸಿ೦ಗಣ್ಣನ ಹಾ೦ಗಿರ್ತ ಮುಗ್ಧ ತನ್ನ ಜೀವನಲ್ಲಿ ಒಳುಶಿದ ಐಶ್ವರ್ಯವ ಹೀ೦ಗೂ ಲಪಟಾಯಿಸೊದಾ? ಓದುಗರಿ೦ಗೆ ಸರಿ ತಪ್ಪುಗಳ ತೋರ್ಸಿಕೊಡುವ ಗೋಪಾಲಣ್ಣನ ನಿರೂಪಣಾಶೈಲಿ ಅದ್ಭುತ.
    ಎನಗೂ ಶ್ಯಾಮಣ್ಣನ ತರ್ಕ ಹಿಡುಸಿತ್ತು.

  7. ಗೋಪಾಲಣ್ಣ,
    ಯೇವತ್ರಾಣ ಹಾಂಗೆ ಮನಸ್ಸಿಂಗೆ ಮುಟ್ಟುವ ಹಾಂಗಿಪ್ಪ ಕತೆ. ದೊಡ್ಡ ಮನುಷ್ಯರ ‘ದೊ(ದ)ಡ್ಡ’ ಗುಣಂಗ ಅಲ್ಲದಾ ಇದು?
    ಅವನ ಸ್ವಂತ ಗಳಿಕೆಯ ಪೈಸೆಯ ಅಂತೇ ಮಡುಗುದಕ್ಕೆ ಉಂಗಿಲ ಆದರೂ ಇರಲಿ ಹೇಳಿ ಮಾಡ್ಸಿದ ಪಾಪ! ಅವ° ಅಷ್ಟಾದರೂ ಜೀವನಲ್ಲಿ ಸಂತೋಷ ಕಂಡುಗೊಂಡನ್ನೆ ಹೇಳಿ ಕೊಶಿ ಪಡುದು ಬಿಟ್ಟು ಅವನ ಸೊತ್ತನ್ನೇ ಅಪಹರಿಸಿದ ರಾಗಣ್ಣನ ಹಾಂಗೆ ಇಪ್ಪವ್ವು ನಮ್ಮೆಡಕ್ಕಿಲಿ ತುಂಬಾ ಜನ ಇದ್ದವು.
    ಒಳ್ಳೆ ಕತೆ ಬೈಲಿಂಗೆ ಕೊಟ್ಟದಕ್ಕೆ ತುಂಬಾ ತುಂಬಾ ಧನ್ಯವಾದಂಗೋ.

  8. ಪಾಪದ ಸಿಂಗಣ್ಣಂಗೆ ಹಾಂಗೆ ಮೋಸ ಆದ್ದು ಓದಿ ಬೇಜಾರ ಆತು. ಹೊಟ್ಟೆ ಎಲ್ಲ ಒಂದು ನಮೂನೆ ಆತು ಬೇಜಾರಲ್ಲಿ ಅವ ಕೂಗಿದ್ದೆಲ್ಲ ಓದುವಗ…
    ಎನಗೆದೆ ಹಾಂಗೆ ಆವುತ್ತು, ಅದು ಚಿನ್ನದ ಉಂಗಿಲು ಆಗಿಪ್ಪಲಾಗ, ಪಾಪದ ಸಿಂಗಣ್ಣ ನಂಬಿಕೆಲಿ ಅಲ್ಲಿ ತೆಗದು ಮಡಿಗಿದ್ದಕ್ಕೆ ಅವಂಗೆ ೫೦೦ ರೂಪಾಯಿ ಸಿಕ್ಕೆಕ್ಕು ಹೇಳಿ.

  9. ವಿದ್ಯಾವಂತರು, ಪ್ರತಿಷ್ಠಿತರು ಹೇಳಿ ಹೆರಜಗತ್ತಿಂಗೆ ಸ್ವಯಂ ಪ್ರದರ್ಶನ ಮಾಡಿಗೊಂಡು ಆಂತರ್ಯಲ್ಲಿ ಈ ಕತೆಯ ರಾಗಣ್ಣನ ಹಾಂಗೆ ಅತಿ ನಿಕೃಷ್ಟರು ಅಗಿಪ್ಪವು ಸಮಾಜಲ್ಲಿ ಇಪ್ಪದು ನಿಜ ಗೋಪಾಲಣ್ಣಾ.. ಕಥಾ ವಸ್ತು-ನಿರೂಪಣೆ ಎರಡೂ ಏವತ್ರಾಣಾಂಗೆ ಲಾಯಿಕ ಆಯಿದು.
    ಮುಗ್ಧ ಸಿಂಗಣ್ಣನ ಅವಸ್ಥೆ ಕಾಂಬಗ ‘ಅಯ್ಯೋ ಪಾಪನೇ!’ ಹೇಳಿ ಕನಿಕರ ಆವ್ತು.

  10. ಗೋಪಾಲಣ್ಣ… ಇದಕ್ಕೆ ಇನ್ನೊಂದು ರೀತಿಲಿಯೂ end ಕೊಟ್ಟರೆ ಹೇಂಗೆ?
    ” ನಿಜಕ್ಕಾದರೆ ಆ ಉಂಗಿಲ ಸಿಂಗಣ್ಣಂಗೆ ಊರ ಜಾತ್ರೆ ಗೆದ್ದೆಲಿ ಬಿದ್ದುಸಿಕ್ಕಿದ್ದಡ…. ಸಂತೆಲಿ ಸಿಕ್ಕುವ ಇಪ್ಪತೈದು ರೂಪಾಯಿದು… ರಾಗಣ್ಣಂಗೆ ಒಳಹಾಕುವ ಗಡಿಬಿಡಿಲಿ ಅಂದಾಜೇ ಆಯಿದಿಲ್ಲೆ…”
    🙂

    1. ಶ್ಯಾಮಣ್ಣ ಹೇಳಿದ ವಿಶಯವ(ಅ೦ತ್ಯ) ಗೊಪಾಲಣ್ಣ ಅವರವರ ಅಲೊಚನಗೆ ಬಿಟ್ಟು ಪ್ರತಿಯೊಬ್ಬ ಓದುಗನನ್ನು ಬುದ್ದಿವನ್ಥರಾಗಿ ಮಾಡಿದ್ದವು!!!
      ಆನು ಎನ್ನ ಸಮಾಧಾನಕ್ಕೆ ಉನ್ಗಿಲು ಗಿಲೀಟಿ೦ದು ಹೇಳಿ ಅ೦ತ್ಯ ಕೊಟ್ಟು೦ಡಿದೆ.ಃ)

  11. ಹೀಂಗೆಲ್ಲ ಆವುತ್ತೋ..ಛೆ..!!!
    ಹೀಂಗೆ ಅಪ್ಪದು ಹೇಳೆಕ್ಕಷ್ಟೆ. ಕತೆ ಲಾಯಿಕಿದ್ದು.

  12. ಗೋಪಾಲಣ್ಣನ ಶುದ್ದಿಗೆ ಗೋಪಾಲಮಾವನ ಒಪ್ಪದೊಟ್ಟಿಂಗೆ ನಮ್ಮದೂ ಅದೇ ‘ಚೆನ್ನೈವಾಣಿ’. ಕತೆಯ ಸುರುವಿಂದ ಓದಿಗೊಂಡುಗೊಂಡು ಹೋದಾಂಗೆ ಲಾಯಕ ಆವ್ತಾ ಇದ್ದ ಹಾಂಗೆ ರಾಗಣ್ಣನ ಕೀಳ್ತನ ಮನೋಭಾವ ಎದೆ ಧಸ್ಸಕ್ಕ ಹೇಳಿತ್ತು – ಹೀಂಗಿರ್ತ ಮನುಷ್ಯರೂ ಇದ್ದವನ್ನೇದು.

  13. ಬೋಸನ ಮೋಸ ಮಾಡಿ ತಾನು ಲಾಭ ಮಾಡಿದೆ ಹೇಳಿ ತಿಳಿವ ಜೆನಂಗಳ ಮನಸ್ಥಿತಿಯ ಲಾಯಿಕಲಿ ನಿರೂಪಿಸಿದ ಕತೆ.

  14. ರಾಗಣ್ಣ ಮಾಷ್ಟ್ರ ದುಷ್ಟ ಬುದ್ದಿ ಕಂಡು ತುಂಬಾ ಬೇಜಾರು ಆತು. ಸಿಂಗಣ್ಣ ಬೋಸ ಆದರೂ, ಅವನ ಮನಸ್ಸಿಲ್ಲಿ ಹುಳುಕು ಇಲ್ಲೆ. ಕಲಿಯುವಿಕೆ ಇದ್ದ ಮಾಸ್ಟ್ರ ಬಗ್ಗೆ ವಿಶ್ವಾಸ ಮಡಗಿ ಮನಗೆ ಬಂದ ಬೋಸಂಗೆ ಮಾಸ್ಟ್ರೇ ಚದಿ ಮಾಡಿದ್ದು, ಚೆ.
    ಹೀಂಗಿಪ್ಪವುದೆ ಇದ್ದವು.

    ಗೋಪಾಲಣ್ಣನ ಕತೆ ಏವತ್ರಾಣ ಹಾಂಗೆ, ದಿ ಬೆಸ್ಟ್.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×