Oppanna.com

ಅಬ್ಬೇ..,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,         (ಬಾಗ-12)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   19/09/2016    9 ಒಪ್ಪಂಗೊ

ಅರುಂಧತಿ ಕತೆಯ ಪೂರ್ವ ಕಂತುಗೊ:
ಭಾಗ 1 : ಸಂಕೊಲೆ
ಭಾಗ 2 : ಸಂಕೊಲೆ
ಭಾಗ 3 : ಸಂಕೊಲೆ
ಭಾಗ 4 : ಸಂಕೊಲೆ
ಭಾಗ 5 : ಸಂಕೊಲೆ
ಭಾಗ 6 : ಸಂಕೊಲೆ
ಭಾಗ 7 : ಸಂಕೊಲೆ
ಭಾಗ 8 : ಸಂಕೊಲೆ
ಭಾಗ 9 : ಸಂಕೊಲೆ
ಭಾಗ 10 : ಸಂಕೊಲೆ
ಭಾಗ 11 : ಸಂಕೊಲೆ

ಹದಿನೆಂಟು ದಿನಂಗಳ ಆಸ್ಪತ್ರೆಲಿ ಕಳುದಿಕ್ಕಿ ಹರಿಣಿ, ಮೋಹನ ಮನೆಗೆ ವಾಪಾಸಾದವು. ನಲುವತ್ತೆಂಟು ವರ್ಷಂಗಳಲ್ಲಿ ಕಲಿಯದ್ದ ಒಂದು ಪಾಠವ ಹರಿಣಿ ಆಸ್ಪತ್ರೆಯ ವಾಸದ ಅವಧಿಲಿ ಕಲ್ತತ್ತು. ನಮ್ಮ ಮಾತು, ನಡತೆ ಹೇಳ್ತದು ಸರಳವೂ ನೇರವೂ ಸಾತ್ವಿಕವೂ ಆದಪ್ಪಗ ಮನುಷ್ಯ ಸಂಬಂಧ ಹೇಳ್ತದು ಎಷ್ಟು ಚೆಂದಕೆ ಮುಂದೆ ಹೋವುತ್ತು ಹೇಳಿ ಹರಿಣಿ ಗಮನಿಸುವ ಹಾಂಗಾತು. ಹಾಂಗಿಪ್ಪ ನವಿರಾದ ಬದಲಾವಣೆಗೆ ಬೇಕಾಗಿ ನಾವು ಒಂದುಸಣ್ಣ ತ್ಯಾಗ ಮಾಡೇಕಾವುತ್ತು. ಅದೆಂತರ ಹೇಳೀರೆ ನಮ್ಮ ಅಹಂ ಹೇಳ್ತದ್ರ ರಜ್ಜ ಕರೇಂಗೆ ಮಡುಗೇಕು. ಅಳಿಯ, ಮಗಳು ಆಸ್ಪತ್ರೆಗೆ ಬಂದ ದಿನ ಹರಿಣಿ ಮೋರೆ ಕೊಟ್ಟು ಮಾತೇ ಆಡಿತ್ತಿದ್ದಿಲ್ಲೆ. ಮೋಹನ ಹೇಂಗಾರೂ ರೋಗಿ ಹೇಳಿ ಆತನ್ನೆ? ಹಾಂಗಾದ ಕಾರಣ ಅಂವ ಮಾತಾಡೇಕು ಹೇಳ್ತ ನಿರೀಕ್ಷೆಯೂ ಆರಿಂಗೂ ಇತ್ತಿದ್ದಿಲ್ಲೆ ಹೇಳುವೋಂ. ಸುರಭಿಯಾದ್ರೂ ಅಷ್ಟೆ. ಆರದ್ದೋ ಒತ್ತಾಯಕ್ಕೆ ಬಯಿಂದೆ ಹೇಳ್ತ ಹಾಂಗಿದ್ದ ನಡವಳಿಕೆ. ಆದಿತ್ಯ ಒಬ್ಬನೇ ಸಹಜವಾಗಿ ಇತ್ತಿದ್ದದು. ಇಷ್ಟನ್ನಾರವೂ ಸುರಭಿಯ ಕುಟುಂಬವ ಅಂವ ಭೇಟಿಯೇ ಆಗಿರದಿದ್ರೂ ಒಂದು ರಜ್ಜವೂ ಅಳುಕು, ಹಿಂಜರಿಕೆ, ಅಪರಾಧೀ ಮನೋಭಾವಂಗೊ ಇಲ್ಲದ್ದೆ ಸಲೀಸಾಗಿ ಅತ್ತೆ ಮಾವನೊಟ್ಟಿಂಗೆ ಮಾತನಾಡಿದ. ನಚ್ಚಣ್ಣ, ಪುಟ್ಟಣ್ಣ, ಅವರ ಕುಟುಂಬದವರತ್ರೆ  “ನೀವು ಯಾವುದೇ ಟೆನ್ಶನ್ ಇಲ್ಲದ್ದೆ ಊರಿಗೆ ಹೋಗಿ ಬನ್ನಿ, ಮಾವ, ಅತ್ತೆಯ ಬೇಕು ಬೇಡಗಳನ್ನು ನಾವು ನೋಡಿಕೊಳ್ಳುತ್ತೇವೆ…’ ಹೇಳಿ ಅವರ ಮನೆಗೆ ಕಳ್ಸಿದಂ. ಮೋಹನಂಗೆ ಫಿಸಿಯೋಥೆರಪಿ ಮಾಡುವಾಗ ಸಹಾಯ ಮಾಡುವದು, ಮುಂದೆ ಒಂದೆರಡು ದಿನಂಗಳಲ್ಲಿ ಆ ವ್ಯಾಯಾಮಂಗಳ ಮಾಡ್ಸುತ್ತ ಕ್ರಮವ ನೋಡಿ ಕಲ್ತು ಮತ್ತೆ ಅಂವನೇ ಸ್ವತಃ ಅದರ ಮಾವಂಗೆ ಮಾಡ್ಸಲೂ ಸುರುಮಾಡಿದ. ಮೋಹನಂಗೆ ಕೊಡೇಕಾದ ಬೇರೆ ಬೇರೆ ಮದ್ದುಗೋ ಯೇವದೆಲ್ಲ ಹೇಳಿ ತಿಳ್ಕೊಂಡು ಅಂವನೇ ಹೋಗಿ ಅದರೆಲ್ಲ ತಪ್ಪದು, ಹರಿಣಿಗೆ ಬೇಕಾದ ಊಟ,ತಿಂಡಿಗಳ ಹರೀಶನ ಮನೆಂದ ತಂದು ಕೊಡುವದು, ಎಡೆ ಎಡೆಲಿ ಅತ್ತೆಯ ಮಾತಿಂಗೆಳವ ಪ್ರಯತ್ನ….,ಆದಿತ್ಯನ ಈ ಎಲ್ಲಾ ಕೆಲಸಲ್ಲಿಯೂ ಸುರಭಿಯ ಸಮಪಾಲೂ ಇತ್ತಿದ್ದು ಹೇಳುವೋಂ. ಅಂದರೆ ಆದಿತ್ಯನ ನಡವಳಿಕೆಲಿಪ್ಪ ಆ ಸರಳತೆ, ಸಿದಾಸಾದಾತನವ ಮೈಗೂಡ್ಸಿಗೋಂಬಲೆ ಸುರಭಿಗೆ ಎಡಿಗಾಯಿದಿಲ್ಲೆ. ಎಂತಕೆ ಹೇಳಿದ್ರೆ ಅದರ ಮನದಾಳಲ್ಲಿ ಅಪರಾಧೀ ಪ್ರಜ್ಞೆ ಜಾಗೃತವಾಗಿಯೇ ಇತ್ತಿದ್ದು.

ಸುರು ಸುರೂವಿಂಗೆ ಹರಿಣಿ ಮಗಳು, ಅಳಿಯನ ಹತ್ರೆ ರಜ್ಜ ಅಸಹನೆಂದ ಮಾತಾಡಿದ್ದದೂ ಸತ್ಯವೇ. “ಅತ್ತೇ, ನಿಮ್ಮ ಊಟ ತಂದಿದೀನಿ…ಬನ್ನಿ ಊಟ ಮಾಡಿಯಲ್ಲ…?” ಹೇಳಿ ಅಳಿಯ ಹೇಳಿಯಪ್ಪಗ ಹರಿಣಿ “ಹೂಂ…,ಅಲ್ಲಿಟ್ಟುಬಿಡಿ…,ಈಗ ನನ್ಗೆ ಹಸಿವು ಆಗಿಲ್ಲ..,ಆ ಮೇಲೆ ಮಾಡ್ತೀನಿ…” ಹೇಳಿ ಮೋರೆ ತಿರುಗುಸಿಯೊಂಡಿತ್ತಿದ್ದು. ಅಂದರೆ ಅದು ಎಷ್ಟೇ ಮೋರೆ ಪೀಂಟಿಸಿದ್ರೂ, ಎಷ್ಟೇ ಅಂತರ ಮಡುಗಿ ಮಾತಾಡಿದ್ರೂ ಆದಿತ್ಯನ ಮಾತುಕತೆ, ನಡವಳಿಕೆಲಿ ಅದೇ ಸೌಜನ್ಯತೆ, ಅದೇ ಸರಳತನ. ಮೋಹನ ಅಂತೂ ಮಗಳು ಅಳಿಯನ ಬಗ್ಗೆ `ಕೆಸುವಿನೆಲೆಯ ಮೇಲಣ ನೀರ ಹನಿಯಂತೆ’ ಹೇಳ್ತ ಹಾಂಗಿತ್ತಿದ್ದ. ಮಾತಿಲ್ಲೆ, ನೆಗೆ ಇಲ್ಲೆ, ಮಗಳು ಅಳಿಯಂ ಕೇಳಿದ್ದಕ್ಕೆ ತಕ್ಕ ಬೇಕೋ ಬೇಡದೋ ಹೆಳ್ತ ಹಾಂಗಿದ್ದ ಉತ್ತರ. ಇರುಳಪ್ಪಗ ಅತ್ತೆ, ಮಾವನ ಸಕಲ ಬೇಕು ಬೇಡಂಗಳ ಮುಗುಶಿಕ್ಕಿ ಸುರಭಿಯೂ ಆದಿತ್ಯನೂ ಹೋದ ಮತ್ತೆಯೇ ಮೋಹನ, ಹರಿಣಿಯ ಸಹಜ ಮಾತುಕತೆ ಸುರುವಪ್ಪದು. ಅವಿಬ್ರೂದೆ ಸುರಭಿಯತ್ರಾಗಲೀ ಆದಿತ್ಯನತ್ರಾಗಲೀ ಅವು ಉಳ್ಕೋಂಡದು ಎಲ್ಲಿ? ಆದಿತ್ಯನ ಅಬ್ಬೆ ಅಪ್ಪ ಆರು? ಅವರ ಕುಟುಂಬದ ಸಂಗತಿಗೊ ಎಂತರ? ಇತ್ಯಾದಿಗಳ ಕೇಳ್ಲೆ ಮನಸ್ಸು ಮಾಡಿತ್ತಿದ್ದವಿಲ್ಲೆ. ಮಕ್ಕೊ ಅದರ ಬಗ್ಗೆ ಹೇಳಿದ್ದವೂ ಇಲ್ಲೆ. ಅಂದರೆ ಇದೆಲ್ಲ ಹೆಚ್ಚು ದಿನ ನೆಡದತ್ತಿಲ್ಲೆ. ಮನುಷ್ಯ ಮೂಲತಃ ಸಂಘಜೀವಿ ಅಲ್ಲದೋ ಹೇಳಿ? ದ್ವೇಷ ಮನಸ್ಸಿನ ಕಲ್ಲು ಮಾಡುವ ಹಾಂಗೇ ಪ್ರೀತಿ, ಸೌಜನ್ಯತೆಗೊ ಮನಸ್ಸಿನ ಹೂಗಿನಷ್ಟು ಮೃದು ಮಾಡ್ತು. ಆದಿತ್ಯನ ಎಷ್ಟೇ ಗಣ್ಯ ಮಾಡ್ಲಾಗ ಹೇಳಿ ಹರಿಣಿ ಜಾನ್ಸೀರೂ ಅಂವನ ಸಭ್ಯ ನಡವಳಿಕೆ, ಸರಳ ಸುಂದರ ವ್ಯಕ್ತಿತ್ವ, ಹಿತಮಿತವಾದ ಮಾತು, ಇದೆಲ್ಲದ್ರಿಂದ ಹೆಚ್ಚಾಗಿ ಅಂವನ ಸ್ಪಷ್ಟ ಕನ್ನಡ ಮಾತುಗಳ ಅದು ಮನಸಾರೆ ಮೆಚ್ಚಿದ್ದು ಲೊಟ್ಟೆ ಅಲ್ಲ. ಮಚ್ಚುಗೆ ಹೇಳ್ತದು ಒಂದಾರಿ ಮನಸ್ಸಿಲ್ಲಿ ಮೊಳಕೆಯೊಡೆದತ್ತು ಹೇಳಿಯಾದ್ರೆ ಮತ್ತೆ ಅಲ್ಲಿ ನಿರ್ಲಕ್ಷ್ಯಕ್ಕೋ ಅಸಹನೆಗೋ ಜಾಗೆ ಎಲ್ಲಿದ್ದು ಹೇದು ಬೇಕನ್ನೇ?

“ಆದಿತ್ಯಾ…, ಹರೀಶನ ಹೆಂಡತಿ ಊಟ ತುಂಬಾ ಜಾಸ್ತಿ ಕಳ್ಸಿಬಿಟ್ಟಿದ್ದಾಳೆ…,ನಾವಿಬ್ಬರು ರಾತ್ರಿ ಇಷ್ಟು ಊಟ ಮಾಡೋದಿಲ್ಲ, ನೀವಿಬ್ರೂ ಇದ್ರಲ್ಲೇ ಊಟ ಮಾಡಬಹುದು…” ಒಂದು ದಿನ ಹರಿಣಿ ಹೀಂಗೆ ಹೇಳಿಯಪ್ಪಾಗಳೇ ಆದಿತ್ಯಂಗೆ ಗೊಂತಾತು, `ಅತ್ತೆಗೆ ನನ್ನ ಬಗ್ಗೆ ಒಳ್ಳೆ ಅಭಿಪ್ರಾಯ ಮೂಡ್ತಾ ಇದೆ’ ಹೇಳಿ. ನಿಧಾನಕೆ ಹರಿಣಿ ಆದಿತ್ಯನ ಹತ್ರೆ ಮನಸ್ಸು ಬಿಚ್ಚಿ ಮಾತಾಡ್ಲೆ ಸುರು ಮಾಡಿತ್ತು. ಸುರಭಿಯೂ ಅದಕ್ಕೆ ಧ್ವನಿ ಕೂಡ್ಸಿತ್ತದ. ಮೋಹನ ಬಾಯಿಲಿ ಎಂತ ಹೇಳದ್ರೂ ಅಳಿಯನ ಬಗ್ಗೆ ಅವಂಗೆ ಒಳ್ಳೇ ಅಭಿಪ್ರಾಯವೇ ಇದ್ದು ಹೇದು ಅಂವನ ಕಣ್ಣುಗಳೇ ಹೇಳಿತ್ತು. ಸುರಭಿ ಅದರಷ್ಟಕೆ ಮದುವೆ ಆಯಿದು ಹೇಳಿ ಗೊಂತಾದ ಲಾಗಾಯ್ತಿಂದ ಹರಿಣಿ, ಮೋಹನ ಇಬ್ರ ಚಿಂತೆಯೂ ಮಗಳ ಗೆಂಡನ ಬಗ್ಗೆಯೇ ಆಗಿತ್ತಿದ್ದು. `ಹೇಂಗಿಪ್ಪ ಹುಡುಗನೋ…? ಯೇವ ಜಾತಿಯೋ…? ಎಂತೆಂತ ಕೆಟ್ಟ ಉದ್ದೇಶ ಮಡುಗಿಯೊಂಡು ಸುರಭಿಯ ಮಂಕಾಡ್ಸಿ ಮಂಕುಬೂದಿ ಹಾಕಿ ಇನ್ನು ಎಂತೆಲ್ಲ ಮಾಡ್ತನೋ….? ಸುರಭಿಯ ಜೀವನ ಬೀದಿಪಾಲಾದ್ರೆ ಅದಕ್ಕೆ ಮುಂದೆ ಆರು ಗತಿ….?’ ಹೀಂಗಿದ್ದ ಯೋಚನೆಗಳೇ ಅವರ ಹಣ್ಣು ಮಾಡಿತ್ತಿದ್ದದು. ಅಂದರೆ ಈಗ ಹರಿಣಿಗೆ ಅಳಿಯನ ಬಗ್ಗೆಯಾಗಲೀ ಮಗಳ ಬಗ್ಗೆಯಾಗಲೀ ಅಸಮಾಧಾನ ಇಲ್ಲಲೇ ಇಲ್ಲೆ. ಆದಿತ್ಯನೊಟ್ಟಿಂಗೆ ಮಾಡಿದ ಸರಳ ಮಾತು ಕತೆಗೊ ಅದರ ಮನಸ್ಸಿನ ಭಾರವ ಪೂರಾ ಕಡಮ್ಮೆ ಮಾಡಿತ್ತು. ಮೋಹನ ಮಾಂತ್ರ ಯೇವದೇ ಭಾವನೆಗಳನ್ನೂ ತೋರ್ಸದ್ದೆ ಇತ್ತಿದ್ದಂ. ಅಳಿಯನ ಮಾತಿಲ್ಲಿಹರಿಣಿಗೆ ಗೊಂತಾದ್ದದು ಎಂತರ ಹೇಳಿರೆ ಕೋಲ್ಕೊತ್ತಾದ ಮಧ್ಯಮ ವರ್ಗದ ಕುಟುಂಬಲ್ಲಿ ಆದಿತ್ಯ ಹುಟ್ಟಿದ್ದದು. ಅಬ್ಬೆ, ಅಪ್ಪ ಇಬ್ರೂ ಅಲ್ಯಾಣ ಒಂದು ಕೋಲೇಜಿಲ್ಲಿ ಮಾಷ್ಟ್ರಕ್ಕೊ. ಇಂವ ಒಬ್ಬನೇ ಮಗ, ಕೆಲಸದ ನಿಮಿತ್ತ ಬೆಂಗ್ಳೂರಿಂಗೆ ಬಂದು ನಾಕು ವರ್ಷ ಆತು. ಸಾಹಿತ್ಯ, ಕಲೆಗಳಲ್ಲಿ ತುಂಬ ಆಸಕ್ತಿ ಇಪ್ಪ ಆದಿತ್ಯ ಸುರಭಿಯ ಡೇನ್ಸುಗಳ ಒಂದೂ ಬಿಡದ್ದೆ ನೋಡಿದ್ದನಾಡ. ಅವರಿಬ್ರೊಳಾಣ ಪ್ರೀತಿ, ಪ್ರೇಮಕ್ಕೆ ಅಂವನ ಅಬ್ಬೆ ಅಪ್ಪ ಎಂತ ಅಡ್ಡಿಯೂ ಹೇಳಿದ್ದವಿಲ್ಲೆಯಾಡ. ಅಂದರೆ ಸುರಭಿಯ ಅಬ್ಬೆ, ಅಪ್ಪಂಗೆ ಅದು ಸುತಾರಾಂ ಇಷ್ಟ ಇಲ್ಲೆ ಹೇಳಿ ಗೊಂತಾಗಿಯಪ್ಪಗ ರಿಜಿಸ್ಟರ್ ಮದುವೆ ಸಾಕು ಹೇಳಿದವಾಡ.

ಆದಿತ್ಯ ಇಷ್ಟು ಹೇಳಿಯಪ್ಪಗ ಹರಿಣಿಗೆ ಒಂದು ಸಂಶಯ ಬಂತು. ಅದರನ್ನೇ ಕೇಳಿತ್ತೂದೆ,

“ಆದಿತ್ಯ…,ಸುರಭಿ ಒಂದೇ ಒಂದು ಸಲವಾದ್ರೂ ನಿಮ್ಮೊಳಗಿನ ವಿಷಯವನ್ನು ನಮ್ಮೊಡನೆ ಹೇಳಲೇ ಇಲ್ವಲ್ಲಾ….ಮತ್ತೆ ಹೇಗೆ ಹೇಳ್ತೀರಾ ನಿಮ್ಮ ಮದುವೆ ನಮಗೆ ಇಷ್ಟವೇ ಇರಲಿಲ್ಲವೆಂದು…?”

“ಅತ್ತೇ. ಮೈಸೂರು ದಸರೆಯ ಸಮಯದಲ್ಲಿ ಸುರಭಿಯ ಪ್ರೋಗ್ರೇಮ್ ಇತ್ತಲ್ವಾ…? ಅದಕ್ಕಾಗಿ ಅವಳು ನಾಲಕ್ದಿನ ಮೊದಲೇ ಬೆಂಗಳೂರಿಗೆ ಬಂದಿದ್ಲಲ್ವಾ…?  ಆ ದಿನಗಳಲ್ಲೇ ಮಾವನೂ ಬೆಂಗಳೂರಿಗೆ ಬಂದಿದ್ರು ತಾನೇ? ಒಂದು ದಿನ ಅವರ ಕೆಲಸ ಬೇಗ ಮುಗಿದಿತ್ತು. ಸುರಭಿಯನ್ನು ಭೇಟಿಯಾಗೋಣ ಎಂದು ಅವಳ ಪಿ.ಜಿ. ಗೆ ಹೋಗಿದ್ರು. ಅವಳು ಅಲ್ಲಿ ಇರಲಿಲ್ಲ. ಫೋನು ಕರೆಗೆ ಉತ್ತರಿಸಿರಲಿಲ್ಲ. ವತ್ಸಲಾ ಮ್ಯಾಡಂಗೆ ಕರೆ ಮಾಡಿ ಕೇಳಿದಾಗ `ಅವಳು ಗೆಳೆಯನೊಡನೆ ಹೊರಗೆ ಹೋಗಿದ್ದಾಳೆ’ ಎಂದರಂತೆ. ಮಾವನಿಗೆ ಕಸಿವಿಸಿಯಾಗಿ ಇದನ್ನು ಹೀಗೇ ಬಿಡಬಾರದೆಂದು ಸುರಭಿಯನ್ನು ಕಾದು ಭೇಟಿ ಮಾಡಿದ್ದರಂತೆ. ಅವಳು ಉಡಾಫೆಯಿಂದ ಉತ್ತರಿಸಿದಾಗ ತುಂಬಾ ಬೇಜಾರು ಪಟ್ಟುಕೊಂಡರಂತೆ. ವತ್ಸಲಾ ಮ್ಯಾಡಂ ಬಳಿಯಲ್ಲಿ ಹೇಳಿಕೊಂಡರಂತೆ. ಅವರು ಕಡಕ್ಕಾಗಿ ಹೇಳಿಬಿಟ್ಟರಂತೆ, `…ಅದು ಅವಳ ಪರ್ಸನಲ್ ವಿಷಯ. ನಮಗೆ ಬೇಕಿದ್ದುದು ಅವಳು ವೃತ್ತಿಯಲ್ಲಿ ಮಾಡುವ ಸಾಧನೆ. ಅವಳ ಮತ್ತು ಆದಿತ್ಯನ ಸ್ನೇಹವಾದ ನಂತರ ನಮಗೆ ತುಂಬಾನೇ ಲಾಭವಾಗಿದೆ. ಪ್ರಣಯದ ದೃಶ್ಯಗಳನ್ನು ಅಭಿನಯಿಸುವಾಗಂತೂ ಬಹಳ ಸಹಜವಾಗಿ ಅಭಿನಯಿಸುತ್ತಿದ್ದಾಳೆ. ಆದುದರಿಂದಲೇ ಶ್ರೀಕೃಷ್ಣ ಪಾರಿಜಾತ, ದುಶ್ಯಂತ,ಶಕುಂತಳೆಯಂತಹ ನೃತ್ಯ ಬ್ಯಾಲೆಗಳ ಪ್ರದರ್ಶನಕ್ಕೆ ಮತ್ತೆ ಮತ್ತೆ ಬೇಡಿಕೆಗಳು ಬರುತ್ತಿವೆ. ಅವಳ ವೈಯಕ್ತಕ ಬದುಕು ಗೋಜಲಾದ್ರೆ ನೃತ್ಯದಲ್ಲಿ ಭಾವಾಭಿನಯಕ್ಕೆ ತೊಂದರೆಯಾಗುತ್ತೆ….,ಆದುದರಿಂದ ನಿಮಗೆ ಅವಳ ಪ್ರೇಮ, ಪ್ರಣಯಗಳು ಇಷ್ಟವಿಲ್ಲವೆಂದಾದರೆ ಒಂದೋ ಸುರಭಿಯನ್ನು ಇಲ್ಲಿಂದ ಕಳಿಸಬೇಕಾಗುತ್ತೆ…ಅಲ್ಲವಾದರೆ ನೀವು ಅವಳ ಬದುಕಿನಲ್ಲಿ ತಲೆ ಹಾಕಬೇಡಿ’ ಎಂದಿದ್ದರಂತೆ. ಬಹುಷಃ ಮಾವ ಈ ವಿಷಯಗಳನ್ನು ನಿಮ್ಮೊಡನೆ ಹೇಳಿರಲಿಲ್ಲವೇನೋ…?”

ಆದಿತ್ಯ ಹೇಳಿದ ಈ ವಿಷಯಂಗೊ ಹರಿಣಿಗೆ ಇಷ್ಟ್ರವರೆಂಗೆ ಗೊಂತೇ ಇತ್ತಿದ್ದಿಲ್ಲೆ. ಅದಕ್ಕೆ ಈಗ ತಲೆಗೆ ಹೋತು…,ಅಂದು ಮೋಹನ ಬೆಂಗ್ಳೂರಿಂದ ಬಂದ ಮತ್ತೆ ಎಂತಕೆ ಅಷ್ಟು ಕಂಗಾಲು ಆದ್ದದು ಹೇಳಿ. ಆದಿತ್ಯನೂ ಅದೂದೆ ಮೋಹನನ ಕೋಣೆಂದ ಹೆರ ಇಪ್ಪ ವೆರಾಂಡಲ್ಲಿ ಕೂದೊಂಡು ಮಾತಾಡಿದ ಕಾರಣ ಮೋಹನಂಗೆ ಇವರ ಮಾತುಗೋ ಕೇಳಿದ್ದೇ ಇಲ್ಲೆ. ಸುರಭಿ ಇವು ಕೂದಲ್ಲೇ ಮೌನವಾಗಿ ತಲೆ ತಗ್ಗಿಸಿ ಕೂದೊಂಡಿತ್ತದ್ದಷ್ಟೆ ಹೊರತಾಗಿ ಕಮಕ್ ಕಿಮಕ್ ಹೇಳಿದ್ದಿಲ್ಲೆ. ಯೋ…ದೇವರೇ…,ಹಾಂಗಾದ್ರೆ ಎನಗೆ ಬೇಜಾರು ಅಕ್ಕು ಹೇದೇ ಮೋಹನ ಈ ವಿಷಯಂಗಳ ಎಲ್ಲ ಒಬ್ಬನೇ ಎಷ್ಟೋ ದಿನಂಗಳ ಕಾಲ ನುಂಗಿಯೊಂಡೇ ಇತ್ತಿದ್ದದು…? ಹೇಳಿ ಹರಿಣಿ ಜಾನ್ಸಿಯೋಂಡತ್ತು.

 

(ಇನ್ನೂ ಇದ್ದು)

 

9 thoughts on “ಅಬ್ಬೇ..,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,         (ಬಾಗ-12)

  1. ಅಳಿಯನ ಬಹುವಚನಲ್ಲಿ ದಿನಿಗೇಳಿದ್ದು ಇಲ್ಲಿಯ ಮಟ್ಟಿಂಗೆ ಸರಿಯಾಗಿಯೇ ಇದ್ದು. ಶೀಲಕ್ಕನ ಆಲೋಚನೆ ಸಹಜವಾಗಿಯೇ ಇದ್ದು. ಅಳಿಯ ಆದರೂ ಕನ್ನಡ ಮಾತಾಡ್ತ್ತ ಅಪರಿಚಿತನ ಹತ್ರೆ ಬಹುವಚನ ತನ್ನಿಂತಾನೇ ಬಂದು ಹೋವ್ತು.

  2. ಶಿವರಾಮಣ್ಣ, `ಚಾಕಿರಿ’ ಯಿಂದ ಬೇಜಾರು ಕಮ್ಮಿ ಆಗ. ಆದರೆ ಆ ಮೂಲಕ ಸಾಂಗತ್ಯ ಬೆಳವಾಗ ಸಂಪರ್ಕ ಹೆಚ್ಚಾವುತ್ತಲ್ಡ? ಅಷ್ಟಪ್ಪಗ ಮನಸ್ಸಿನ ಅಂತರ ಕಮ್ಮಿ ಆವುತ್ತಿಲ್ಯೋ? ಮನಸ್ಸು ಹತ್ರೆ ಆತು ಹೇಳಿರೆ ಅರ್ಥ ಎಂತರ? ವೈಮನಸ್ಯ ವೋ ಬೇಜಾರೋ ಪ್ರಾಧಾನ್ಯತೆ ಕಳಕ್ಕೊಂಡತ್ತು ಹೇಳಿಯೇ ಅಲ್ದೊ?
    ನಮ್ಮಲ್ಲಿ ಅಳಿಯನ ಅತ್ತೆ ಬಹುವಚನಲ್ಲಿ ಸಂಬೋದನೆ ಮಾಡುವ ಕ್ರಮ ಇಲ್ಲೆ. ಆದರೆ ಇಲ್ಲಿಯ ವಿಷಯ ಬೇರೆ. ಅಳಿಯ ತೀರಾ ಅಪರಿಚಿತ, ಬೇರೆ ಜಾತಿಯಂವ. ಇಷ್ಟೆಲ್ಲಾ ಆಗಿದ್ದರೂ `ನೀನು’ ಹೇಳಿಯೇ ದಿನುಗೊಂಬಲಾವುತ್ತಿತು ಯಾವಾಗ ಹೇಳಿರೆ ಅಂವ ಹವ್ಯಕ ಭಾಷೆ ಮಾತನಾಡುತ್ತಿದ್ರೆ… ಅಂಬಗ ಅಂವ `ಬೇರೆ’ ಹೇಳ್ತ ಭಾವನೆ ಹರಿಣಿಗೆ ಬತ್ತಿತ್ತಿಲ್ಲೆ. ನಮ್ಮಲ್ಲಿ ಸಾಧಾರಣ ಕ್ರಮ ಹೆಂಗೆ ಹೇಳಿರೆ ಕನ್ನಡ ಭಾಷೆ ಮಾತಾಡುವಾಗ ಬರೀ ಸಣ್ಣ ಮಕ್ಕಳ ಹೊರತುಪಡಿಸಿ ಆರತ್ರೆ ಮಾತಾಡ್ತರೂ ಬಹುವಚನ ಉಪಯೋಗಿಸಿಯೇ ಮಾತಾಡ್ತದು ಅಲ್ದೊ ? ತುಂಬಾ ಸಲಿಗೆ ಬೆಳದ ಮೇಲೆ ಮಾತ್ರವೇ ಏಕವಚನ ನಮ್ಮ ಬಾಯಿಂದ ಬಪ್ಪದಷ್ಟೇ ಅಲ್ದೊ? ಹರಿಣಿಯು ಈ ಅಭ್ಯಾಸಕ್ಕೆ ಹೊರತಲ್ಲ ಹೇಳುವ ರೀತಿಲಿ ಚಿತ್ರಣ ಮೂಡಿ ಬಯಿಂದಷ್ಟೇ….

  3. ಅಳಿಯ ಮಗಳ ಚಾಕಿರಿಂದ ಅಬ್ಬೆ ಅಪ್ಪನ ಬೇಜಾರ ಕಮ್ಮಿ ಅಕ್ಕೋ. ಮತ್ತೆ ಅಳಿಯನ ಅತ್ತೆ ಬಹುವಚನಲ್ಲಿ ಸಂಬೋಧನೆ ಮಾಡುವ ಕ್ರಮ ನಮ್ಮಲ್ಲಿ ಇದ್ದೋ.

  4. ಭಾಗ್ಯಕ್ಕಾ,ನಮಸ್ಕಾರ.
    ಶ್ರಮ ತೆಕ್ಕೊಂಡು ಮನಃಪೂರ್ವಕವಾಗಿ ಬರೆದ ನಿಂಗಳ ಅಭಿಪ್ರಾಯಂಗೊಕ್ಕೆ ಧನ್ಯವಾದಂಗೊ. ಅಪ್ಪು, ಎಷ್ಟು ಬರದ್ದೆ ಹೇಳ್ತದ್ರಿಂದ ಎಂತ ಬರದ್ದೆ ಹೇಳ್ತದು ಮುಖ್ಯ.ಅಂಬಗ ಆ ಬರವಣಿಗೆ ಜನಮೆಚ್ಚುಗೆ ಗಳುಸುತ್ತು ಹೇಳ್ತದು ಎನ್ನ ಅಭಿಪ್ರಾಯವೂ ಅನುಭವವೂ…ಮೂರು ನಾಕು ಕಂತಿಲ್ಲಿ ಮುಗುಶೇಕು ಹೇಳಿಯೇ ಕಥೆ ಸುರುವಾದ್ದದು. ಆದರೆ ವಾಟ್ಸ್ಯಾಪಿಲ್ಲಿ ಓದುಗರ ಬಿಚ್ಚು ಮನಸ್ಸಿನ ಅಭಿಪ್ರಾಯಂಗೊ , ಸಂಶಯಂಗೊ ಬಪ್ಪದು ನೋಡಿ ಎನಗೆ ಎಂತ ಕಂಡತ್ತು ಹೇಳಿರೆ `ಇದೀಗ ಓದುಗರಿಂಗೆ ಬೇಕಾಗಿ ಬರೆತ್ತಾ ಇಪ್ಪ ಕಥೆ…,ಎನಗೆ ಬೇಕಾಗಿ ಅಲ್ಲ…ಹಾಂಗಾದ ಕಾರಣ ಓದುಗರ ಮನಸ್ಸಿನ ತೃಪ್ತಿಗಾಗಿ ಆನು ಬರವಲೀ ಬೇಕು….’
    ಈಗ ಎಂತಾಯಿದು ಹೇಳಿರೆ ಕಥಾ ಪಾತ್ರಂಗೊ ಎನ್ನ ಕಲ್ಪನೆಗೂ ಮೀರಿ ಬೆಳೆತ್ತಾ ಇದ್ದವು. ಆ ಬೆಳವಣಿಗೆಯ ಕೆತ್ತಿ ಚೆಂದದ ಶಿಲ್ಪವಾಗಿ ಮಾಡ್ತ ಕೆಲಸ ಮಾತ್ರ ಎನ್ನದು. ಓದಿ ಸಂತಸಪಟ್ಟು ಇಲ್ಲಿ ನಿಂಗೊ(ಓದುಗರು) ನಾಲ್ಕು ಗೆರೆ ಗೀಚಿ ಹಾಕಿದ್ರೆ ಅಷ್ಟರಮಟ್ಟಿಂಗೆ ಆನು ಧನ್ಯೆ. ಇದರಿಂದ ಹೆಚ್ಚು ಆನೆಂತ ಹೇಳಲಿ?
    ಕಿಮ್ಸ್ ಆಸ್ಪತ್ರೆ ಎನ್ನ ಜೀವನದ ಅವಿಭಾಜ್ಯ ಅಂಗ ಅಲ್ಡೋ? ಅಷ್ಟಪ್ಪಗ ಬರೆಹಲ್ಲಿ ಅದರ ಸಾಮ್ಯತೆ ಬಪ್ಪದೂದೇ ಸಹಜವೇ…

  5. ನಮಸ್ತೇ ಶೀಲಕ್ಕಾ ,
    ಕಥೆ ಲಾಯಿಕಾ ಬತ್ತಾ ಇದ್ದು . ಎಲ್ಲವನ್ನ್ನೂ ಓದಿದ್ದೆ . ೩, ೪ ಕಂತುಗಳಲ್ಲಿ ಮುಗಿಗು;ಮತ್ತೆಯೇ ಎನ್ನ ಅಭಿಪ್ರಾಯ ಬರವಲಕ್ಕು ಹೇಳಿ ಗ್ರೇಶಿಗೊಂಡಿತ್ತಿದ್ದೆ .
    ಪ್ರತಿಯೊಂದು ವಯಸ್ಸಿನವರನ್ನೂ ,ಪ್ರತಿಯೊಂದು ಉದ್ಯೋಗಲ್ಲಿಪ್ಪವರನ್ನು ಆಯಾ ವೃತ್ತಿಗನುಗುಣವಾಗಿ ಅವಕ್ಕೆ ಬಪ್ಪ ವಿಚಾರ೦ಗಳನ್ನೂ , ಮನಸ್ಸಿನ ಸೂಕ್ಷ್ಮ೦ಗಳನ್ನೂ ಸಂದರ್ಭಕ್ಕನುಸಾರವಾಗಿ ಬರದು ಕಥೆಲಿ ವಾಸ್ತವದ ಚಿತ್ರಣ ಮೂಡುಸಿದ್ದಿ. ಕಾಲಕ್ಕೆ ಹೊಂದುವ ಹಾಂಗೆ ತುಂಬ ನೈಜವಾಗಿದ್ದು . ಮೊದಲಾಣ ಕಂತುಗಳಲ್ಲಿ ಬಂದ ಆಸ್ಪತ್ರೆಯ ಚಿತ್ರಣಲ್ಲಿ ಕಾಸ್ರೋಡು ನರ್ಸಿಂಗ್ ಹೋಮ್ (ಕಿಮ್ಸ್)ನ ಚಿತ್ರಣವೇ ಕಣ್ಣಿಂಗೆ ಕಟ್ಟಿದ ಹಾಂಗೆ ಆತು. ಅದು ಮಾತ್ರ ಅಲ್ಲದ್ದೆ ಹವ್ಯಕರು ಉಪಯೋಗಿಸುವ ಗಾದೆಗೋ ,ಹವ್ಯಕ ಭಾಷೆಲಿ ಮಾತ್ರ ಬಳಸುವ ಕೆಲವು ಪದ೦ಗೊ ಅದರೆಲ್ಲ ತುಂಬ ಅಚ್ಚುಗಟ್ಟಲಿ ನಿಂಗೊ ಉಪಯೋಗಿಸಿದ್ದಿ . ಓದುಗರಿಂಗೆ ಉತ್ತಮ ಸಾಹಿತ್ಯವ ಕೊಡೆಕ್ಕು ಹೇಳುವ ನಿಂಗಳ ದೃಷ್ಟಿ ಅಭಿನಂದನೀಯ . ಅದಕ್ಕಾಗಿ ನಿಂಗೊ ತೆಕ್ಕೊ೦ಬ ಶ್ರಮಕ್ಕೆ ಧನ್ಯವಾದ .

  6. ನಿನ್ನೆ ಕತೆ ಬೈಲಿಂಗೆ ಬಾರದ್ದೇಕೆ ಹೇಳಿ ಬೇಜಾರಾತು. ಇರಳಿ. ರಜ್ಜ ಆಚೀಚೆ ಆವ್ತಪ್ಪಾ.
    ಅಂತೂ ಒಳ್ಳೆ ಗುಣದ ಅಳಿಯನೇ ಸಿಕ್ಕಿದ. ಕೆಲವೊಂದರಿ ನಮ್ಮವೇ ಆಗಿದ್ದು ಚೆಂದುಳ್ಳಿ ಚೆಲುವ ಆದರುದೆ, ಗುಣ ಸರಿಯಿಲ್ಲದ್ರೆ ಎಂತ ಪ್ರಯೋಜನ. ಕತೆ ಮುಗುದತ್ತೋ, ಮುಂದುವರಿಯಲಿದ್ದೊ ? ೧೨ ವಾರ ಮುಗುದ್ದೇ ಗೊಂತಾಯಿದಿಲ್ಲೆ. ಶೀಲಕ್ಕನ ಕತೆಗೊ ಬೈಲಿಲ್ಲಿ ಬತ್ತಾ ಇರಳಿ, ರಂಜಿಸುತ್ತಾ ಇರಳಿ. ಅಲ್ಲಾ, ಎಲ್ಲೋರುದೆ ವಾಟ್ಸ್ ಅಪ್ಪ್ಲಿಲ್ಲಿ ಮುಳುಗಿದ್ದವೋ ಹೇಳಿ. ಆರ ಶುದ್ದಿಯುದೆ ಇಲ್ಲೆ.

    1. ಅಪ್ಪು ಗೋಪಾಲಣ್ಣ, ನಿಂಗೊ ಎಲ್ಲೋರು ಕಾದುಗೊಂಡಿರ್ತೀರಿ ಹೇಳುವ ಅಂದಾಜಿತ್ತಿದ್ದು. ಆದರೆ ಅನಿವಾರ್ಯ ಅನಾನುಕೂಲತೆ ಆಗಿ ಒಂದು ದಿನ ತಡವಾಗಿ ಹೋತು. ಇನ್ನು ಮುಂದೆ ಹಾಂಗೆ ಆಗದ್ದ ಹಾಂಗೆ ಎಚ್ಚರ ವಹಿಸುತ್ತೆ.
      ಕಥೆ ಮುಗುದ್ದಿಲ್ಲೆ. ಈ ಕಂತಿನ ಕಡೆಂಗೆ `ಇನ್ನು ಇದ್ದು’ ಹೇಳಿ ಬರವಲೆ ಬಿಟ್ಟೋತು ಅಷ್ಟೇ…ಅದರ ಈಗ ಸರಿ ಮಾಡಿದೆ. ಧನ್ಯವಾದಂಗೊ ನಿಂಗಳ ಬೆನ್ನು ತಟ್ಟುವ ನುಡಿಗೊಕ್ಕೆ. ಖಂಡಿತಕ್ಕೂ ಬೈಲಿಂಗೆ ಎನ್ನ ಖಾಯಂ ಹಾಜರಾತಿ ಇದ್ದೇ ಇರ್ತು. ಮುಂದೆಯೂ…

  7. ಪ್ರಿಯ ಓದುಗ ಬಂಧುಗಳೇ, ಈ ಕಂತು ಒಂದು ದಿನ ತಡವಾಗಿ ಪ್ರಕಟವಾದ್ದದಕ್ಕೆ ಕ್ಷಮೆ ಇರಲಿ. ಇದುವರೆಗಾಣ ಪ್ರೋತ್ಸಾಹವೇ ಮುಂದೆಯೂ ಇರಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×