Oppanna.com

ಬದುಕೇ ಹಸಿರು ಪ್ರೀತಿ ಬೆರೆತಾಗ

ಬರದೋರು :   ಸುವರ್ಣಿನೀ ಕೊಣಲೆ    on   21/03/2012    21 ಒಪ್ಪಂಗೊ

ಸುವರ್ಣಿನೀ ಕೊಣಲೆ

ಚೆಕ್ಕೆಮನೆ ಪ್ರಸನ್ನಕ್ಕ ಬರದ ಸಾಂಸಾರಿಕ-ಸಾಮಾಜಿಕ ಕತೆಗಳ ಸುವರ್ಣಿನಿ ಅಕ್ಕ ಬೈಲಿಂಗೆ ಹಂಚುತ್ತಾ ಇದ್ದವು.
ಇಬ್ರಿಂಗೂ ಅಭಿನಂದನೆಗೊ.

ಬದುಕೇ ಹಸಿರು ಪ್ರೀತಿ ಬೆರೆತಾಗ

ಶ್ರೀಮತಿ ಪ್ರಸನ್ನಾ ವೆಂಕಟಕೃಷ್ಣ,
ಚೆಕ್ಕೆಮನೆ

ಆಫೀಸಿಂದ ಬಂದ ಮೋಹನಂಗೆ ಮನೆ ಬಾಗಿಲು ತೆಕ್ಕೊಂಡಿಪ್ಪದು ಕಂಡು ಆಶ್ಚರ್ಯವೇ ಆತು.
‘ಇದೆಂಥ ಹೀಂಗೇ’ ಹೇಳಿ ಗ್ರೇಶಿಯೊಂಡೇ ಒಳಾಂಗೆ ಬಂದ ಅವಂಗೆ ಅಲ್ಲಿ ಅವನ ಹೆಂಡತ್ತಿ ಗೀತ ಸೋಫಾಲ್ಲಿ ಕೂದೊಂಡು ಟಿ.ವಿ. ನೋಡುದು ಕಾಂಬಗ ಮತ್ತೂ ಆಶ್ಚರ್ಯ ಆತು.
ಅಂದರೂ ಮಾತಾಡದ್ದೆ ವಸ್ತ್ರ ಬದಲ್ಸುಲೆ ಒಳಾಣ ರೂಮಿಂಗೆ ಹೋದ. ಯಾವಾಗಳು ಹಿಂದಂದಲೇ ಬಪ್ಪ ಹೆಂಡತ್ತಿ ಇಂದು ಬಾರದ್ದದು ಕಾಂಬಗ ‘ಅದರ ಕೋಪ ಇನ್ನೂ ತಣ್ದಿಲ್ಲೇಳಿ’ ಗ್ರೇಶಿದ.
ಅವ ಕೈ ಕಾಲು ತೊಳದು ಬಪ್ಪಗ ಗೀತ ಕಾಫಿ ತಂದು ಕೊಟ್ಟತ್ತು.”ನೀನಿಂದು ಉದಿಯಪ್ಪಗ ಅಪ್ಪನಮನಗೆ ಹೆರಟ ಗೌಜಿ ನೋಡುವಗ ಇನ್ನಲ್ಲಿಂದ ಬಪ್ಪಲೇ ಇಲ್ಲೇಳಿ ಗ್ರೇಶಿದ್ದೆ”.
ಕಾಫಿ ತುಟಿಗೆ ಮಡುಗಿಂಡು ಕೇಳಿದ. ಗೀತ ಮಾತಾಡದ್ದೆ ಮೋರೆ ತಿರುಗಿಸಿತ್ತು.

“ಅಲ್ಲಾ…ಹಾಂಗೆ ಹೋದ ಜೆನ ಇಂದೇ ವಾಪಸ್ ಬರೇಕ್ಕಾರೆ ಏಂತಾರು ದೊಡ್ದ ಕಾರಣವೇ ಬೇಕನ್ನೇ “ ,“ಕಾರಣ ಎಂತಕೆ ನಿಂಗೊಗೆ, ಎನಗೆ ಬೇಕಪ್ಪಗ ಅಪ್ಪನಮನೆಗೆ ಹೋವ್ತೆ ಬರೇಕೂಳಿ ಅಪ್ಪಗ ಬತ್ತೆ”,
ಅದರ ಮಾತು ಕೇಳಿ ಅವಂಗೆ ನೆಗೆ ಬಂದರೂ ಬೇರೆಂತ ಕೇಳಿದ್ದ ಇಲ್ಲೆ. ಗೀತಂಗೆ ರಜ್ಜ ಸಮಾಧಾನ ಆತು. ಉದಿಯಪ್ಪಗ ಗೆಂಡನತ್ತರೆ ಜಗಳ ಮಾಡಿದ ವಿಷಯ ಅದಕ್ಕೆ ಮರತ್ತೇ ಹೋಯ್ದು.
ಅಪ್ಪನ ಮನೆಲಿ ನಡದ ವಿಷಯವೇ ಅದರ ತಲೆ ತಿಂದೊಂಡಿತ್ತಿದ್ದು. ಇರುಳು ಮನುಗುಲೆ ಬಂದಪ್ಪಗಳೂ ಮೋಹನ ಪುನಃ ಅದೇ ಪ್ರಶ್ನೆ ಕೇಳಿದ. “ಎನ್ನ ಗೀತೆಯಲ್ಲದ ನೀನು? ಎಂತಾತು ನಿನ್ನ ಅಪ್ಪನ ಮನೆಲಿಳಿ ಒಂದರಿ ಸರಿಯಾಗಿ ಹೇಳು ಮಾರಾಯ್ತಿ”.

ಅಷ್ಟು ಸುಲಭಲ್ಲಿ ಅಪ್ಪನ ಮನೆಯವರ ಬಿಟ್ಟು ಕೊಡ್ಲೆ ಗೀತ ಒಪ್ಪಿದ್ದಿಲ್ಲೆ.
ಅಪ್ಪನ ಮನೆಯವರ ಬೆಂಬಲ ಎನಗೆ ಇದ್ದು ಹೇಳಿ ಗೋಂತಿದ್ದ ಕಾರಣ ’ಇವು’ ಈಗ ಎನ್ನ ಹೆಚ್ಚು ಬೊಡುಶುತ್ತವಿಲ್ಲೆ.
ಇಲ್ಲದ್ರೆ ಯಾವಗಳೇ ’ಇವು’ಹೇಳಿದ ಹಾಂಗೆ ’ತಗ್ಗಿ ಬಗ್ಗಿ’ ನಡೆಕಾವ್ತಿತ್ತು.”ಸರಿ ಹೇಳ್ಲೆ ಎಂತ ಇದ್ದು? ತಪ್ಪು ಹೇಳ್ಲೆ ಎಂತಯಿದ್ದು ? ನಿಂಗೊಂದಾರಿ ಸುಮ್ಮನೆ ಮನುಗಿ” ಗೀತ ರಜಾ ಕೋಪಲ್ಲಿ ಹೇಳ್ಯಪ್ಪಗ ಮೋಹನ ಮನಸ್ಸಿಲ್ಲಿಯೇ ನೆಗೆಮಾಡಿಂಡು ತಿರುಗಿ ಮನುಗಿದ.
’ಒಳ್ಳೆದಾತೂಳಿ ಗ್ರೇಶಿತ್ತು ಗೀತಂದೆ. ಇಲ್ಲದ್ರೆ ಎಂತಾರು ಕೇಳಿಂಡೇ ಇರ್ತಿತವು.ಅಂದರೂ ಗೆಂಡಂಗೆ ಹಾಂಗೊಂದು ಸಂಶಯ ಬಂದದರ್ಲಿ ತಪ್ಪಿಲ್ಲೇಳಿ ಅದಕ್ಕೂ ಗೊಂತಿದ್ದು.
ಎಂತಾ ಹೇಳಿರೆ ಅದು ಯಾವತ್ತೂ ಅಪ್ಪನ ಮನೆಗೆ ಹೋದರೆ ಅಂದೇ ತಿರುಗಿ ಬಂದ ಜೇನವೇ ಅಲ್ಲ.
ಕಡಮ್ಮೆ ಹೇಳಿರೆ ಒಂದು ವಾರ ಆದರೂ ಅಲ್ಲಿ ಕೊದು, ಅಪ್ಪನೋ – ಅಣ್ಣಂದ್ರೋ ತೆಗೆದುಕೊಟ್ಟ ಹೊಸ ಸೀರೆ ಸುತ್ಯೊಂಡು, ಅಲ್ಲಿಂದ ಬೇಕಾದ್ದು, ಬೇಡದ್ದು ಹೇಳಿ ಒಂದಿಷ್ಟು ಸಾಮಾನುಗಳನ್ನು ಕಟ್ಟ್ಯೊಂಡು, ಅಣ್ಣಂದ್ರೊಟ್ಟಿಂಗೆ ಕಾರಿಲ್ಲಿ ಬಂದರೆ ಮತ್ತೆ ಹದಿನೈದು ದಿನ ಕಳುದು ಅಪ್ಪನ ಮನೆಗೆ ಹೋಪನ್ನಾರವೂ ಅಲ್ಲ್ಯಾಣದ್ದೇ ಜಪ!
ಹಾಂಗಿಪ್ಪಗ ಇಂದು ಉದಿಯಪ್ಪಗ ಹೋಗಿಕ್ಕಿ, ಅಂಬಗಳೇ ತಿರುಗಿ ಬರೆಕಾರೆ,ಅದೂದೆ ಹೋದ ಹಾಂಗೆ!

ಮೋಹನಂಗೆ ಒರಕ್ಕು ಬಂದರೂ ಅದಕ್ಕೆ ಒರಕ್ಕು ಬೈಂದೇ ಇಲ್ಲೆ.
ಸಾಧಾರಣ ಸ್ಥಿತಿವಂತರ ಮನೆಲಿ ಹುಟ್ಟಿದ ಗೀತಂಗೆ ಸಣ್ಣಾಗಿಪ್ಪಗಳೇ ಬೇಕೊಳಿ ಗ್ರೇಶಿದ್ದೆಲ್ಲಾ ಕೈಗೆ ಸಿಕ್ಕಿಂಡಿದ್ದತ್ತು.
ಅದರ ಬಾಯಿಂದ ಎಂತ ಬೇಡಿಕೆ ಬತ್ತೂಳಿ ಕೇಳಿ ಅದೆಲ್ಲ ತಂದುಕೊಡ್ಲೆ ಎರಡು ಜೆನ ಅಣ್ಣಂದ್ರೂ, ಅಪ್ಪನೂ ಕೊಡಿಕಾಲಿಲ್ಲಿ ನಿಂದೊಂಡಿತ್ತಿದ್ದವು.
ಹಾಂಗಾಗಿ ಅದಕ್ಕೆ ಪೈಸೆಯ ಬೆಲೆ ಎಂತರ ಹೇಳಿಯೇ ಗೋಂತಿಲ್ಲೆ. ಒಂದೊಂದರಿ ಅದರ ಅಜ್ಜಿ ಶಾರದಕ್ಕ ”ಎಂತಕೆ ಹೀಂಗೊಂದು ಅಂಗಿ,ವಸ್ತ್ರ,ಮೆಟ್ಟು,ಬ್ಯಾಗು… ಹೇಳಿ ರಾಶಿ ರಾಶಿ ತೆಗೆದು ಹಾಳು ಮಾಡ್ತೆ ?” ಹೇಳಿ ಕೇಳಿರೆ ಗೀತ “ನೀನೊಂದರಿ ಸುಮ್ಮನೆ ಕೂರಜ್ಜಿ” ಹೇಳಿ ಅಜ್ಜಿಯ ಬಾಯಿ ಮುಚ್ಚಿಯೊಂಡಿತ್ತು.
ಹಾಂಗೂ ಹೀಂಗೂ ಡಿಗ್ರಿ ಮುಗಿಶಿ ಮನೆಲಿ ಕೊದ ಗೀತಂಗೆ ಮುಂದೆ ಕಲಿವ ಮನಸ್ಸೂ ಇತ್ತಿದ್ದಿಲ್ಲೆ, ಅಷ್ಟಕ್ಕೆ ತಕ್ಕ ಮಾರ್ಕೂ ಇತ್ತಿದ್ದಿಲ್ಲೆ.
ಕೂಸು ಕಲ್ತು ಮನೆಲಿ ಕೂದಪ್ಪಗ ಎಲ್ಲೋರೂ ಜಾತಕ ಕೇಳ್ಲೆ ಸುರು ಮಾಡಿದವು.
ಗೀತಂಗೆ ಅದರ ಗೆಳತಿಯರೆಲ್ಲ ಪೇಟೆಲಿಪ್ಪವರ ಮದುವೆಯಾದರೆ ಒಳ್ಳೆದೂಳಿ ಮಾತಾಡುದು ಕೇಳಿ ’ಆನೂ ಪೇಟೆಲಿಪ್ಪವನನ್ನೇ ಮದುವೆಯಪ್ಪದೂಳಿ ಹಠ ಹಿಡ್ದತ್ತು. ಅದರ ಚೆಂದ ನೋಡಿ ಕೆಲವು ಪೇಟೆಲಿಪ್ಪ ಮಾಣಿಯಂಗೊ ಒಪ್ಪಿರೂ, ಅಬ್ಬೆ ಅಪ್ಪನೊಟ್ಟಿಂಗೆ ಇಪ್ಪವರ ಗೀತನೇ ಬೇಡಾ ಹೇಳಿತ್ತು. ದೊಡ್ಡ ಕೆಲಸಲ್ಲಿಪ್ಪ ಮಾಣಿ ಆಯೆಕು, ಕಾಂಬಲೆ ಚೆಂದ ಬೇಕು, ಗೀತಂಗೆ ಕೆಲಸಕ್ಕೆ ಹೋಪಲೆ ಮನಸ್ಸಿಲ್ಲೆ, ಅದರ ಕೆಲಸಕ್ಕೆ ಕಳ್ಸುಲಾಗ…..’ ಹೀಂಗೆ ಅದರ ಒಂದೊಂದು ಬೇಡಿಕೆಗಳ ಕೇಳಿ ಶಾರದಕ್ಕಂಗೆ ತಲೆಬೆಶಿ ಆಗಿಂಡಿದ್ದತ್ತು.
ಮಗಳಿಂಗೆ ಎಷ್ಟೋ ಸರ್ತಿ ಬುದ್ಧಿ ಹೇಳ್ಲೆ ಎಡಿತ್ತಾ ಹೇಳಿ ನೋಡಿ ಸೋತು ಹೋದವು.
ಅಪ್ಪನೂ,ಅಣ್ಣಂದ್ರೂ ಅದರ ಹೊಡೆಂಗೇ ಇದ್ದ ಕಾರಣ ಗೀತಂಗೆ ಅಬ್ಬೆಯ ಮಾತುಗಳ ಕೆಮಿಗೆ ತೆಕ್ಕೊಳೆಕೂಳಿ ಕೂಡ ಕಂಡಿದಿಲ್ಲೆ.

ಅಕೇರಿಗೂ ಗೀತ ಮೋಹನನ ಪೊದು ಬಂದಪ್ಪಗ ಬೇಗ ಒಪ್ಪಿತ್ತು. ಅವ ಡಿಪ್ಲೊಮಾ ಮಾಡಿ ಮಂಗ್ಳೂರಿಲ್ಲಿ ಕೆಲಸಲ್ಲಿತ್ತಿದ್ದ.
ಅವನ ಅಬ್ಬೆಅಪ್ಪ ಹಳ್ಳಿಲಿ ಅವನ ಅಣ್ಣನೊಟ್ಟಿಂಗೆ ಇತ್ತಿದ್ದವು. ಮೋಹನನ ಮಾತು, ನೆಗೆ,ರೂಪ ಎಲ್ಲ ಎಲ್ಲೋರಿಂಗೂ ಖುಶಿಯಾತು.
ಹಾಂಗೆ ಗೀತ ಮೋಹನನ ಹೆಂಡತ್ತಿಯಾಗಿ ಪೇಟೆಲಿ ಹೊಸ ಸಂಸಾರ ಸುರು ಮಾಡಿತ್ತು. ಅಂದರೂ ಅದರ ಗುಣ ರಜ್ಜವು ಬದಲಿದ್ದಿಲ್ಲೆ.
ಕಣ್ಣಿಂಗೆ ಚೆಂದ ಕಂಡದ್ದೆಲ್ಲಾ ಬೇಕು ಹೇಳುವ ಅದರ ಸ್ವಭಾವ ನೋಡಿ ಮೋಹನಂಗೂ ಒಂದೊಂದಾರಿ ಕೋಪ ಬಂದೊಂಡಿತ್ತಿದ್ದು. ಅಂದರೂ ಅದರ ಕಣ್ಣೀರಿನ ಮುಂದೆ ಅವ ಸೋತು ಹೋಗಿಂಡಿತ್ತಿದ್ದ.
ಒಂದು ಸರ್ತಿ ಅವು ಪೇಟೆಗೆ ಹೋಗಿಪ್ಪಗ ಯಾವುದೋ ಒಂದು ವಸ್ತು ಪ್ರದರ್ಶನಲ್ಲಿ ಒಂದು ಚೆಂದದ ಸೀರೆಯಿತ್ತಿದ್ದು, ಏಳೆಂಟು ಸಾವಿರ ಬೆಲೆಯಿಪ್ಪ ಆ ಸೀರೆ ತೆಗೆದು ಕೊಡೆಕೂಳಿ ಗೀತ ಅಲ್ಲಿಯೇ ಹಠ ಮಾಡಿತ್ತು.
ಅವನ ಕೈಲಿ ಅಂಬಗ ಅಷ್ಟೊಂದು ಪೈಸೆಯೂ ಇತ್ತಿದ್ದಿಲ್ಲೆ.ಹೆಂಡತ್ತಿಗೂ ಗಂಡನ ಆರ್ಥಿಕ ಸ್ಥಿತಿ ಗೊಂತಾಯೆಕೂಳಿ ಅವನ ಅಭಿಪ್ರಾಯ. ಹಾಂಗಾಗಿ ಅವ ಸೀದಾ “ಎನ್ನತ್ರೆ ಈಗ ಅಷ್ಟು ಪೈಸೆಯಿಲ್ಲೆ, ಇನ್ನೊಂದಾರಿ ನೋಡುವಾ” ಹೇಳಿದ.

ಗೀತಂಗೆ ಕೋಪವೆ ಬಂತು “ಎನ್ನ ಅಪ್ಪನೋ ಅಣ್ಣಂದ್ರೋ ಆಗಿದ್ದರೆ ಈಗಲೇ ತೆಗೆದು ಕೊಡ್ತಿತವು.
ಅವು ನಿಂಗಳ ಹಾಂಗೆ ’ಕುರೆ’ ಅಲ್ಲ” ಹೇಳಿ ಅವನ ಮೋರೆಗೆ ಬಡುದ ಹಾಂಗೆ ಹೇಳಿತ್ತು. ದಾರಿಲಿ ಎಂತಕೆ ಜಗಳ ಹೇಳಿ ಅವ ಮಾತಾಡ್ಲೇ ಹೋಯಿದಾಯಿಲ್ಲೆ.
ಮರುದಿನವೇ ಗೀತ ಅಪ್ಪನ ಮನೆಗೆ ಹೋತು. ಹದಿನ್ಯೈದು ದಿನ ಕಳುದು ಅಲ್ಲಿಂದ ಬಪ್ಪಗ ಅದು ತೆಗೆಕೂಳಿ ಗ್ರೇಶಿದ ಆ ಸೀರೆಯನ್ನೇ ಸುತ್ತಿಂಡು ಸೇಲೆ ಮಾಡಿಂಡು ಬಂತು. ಬಂದ ಅದಕ್ಕೆ ಗೆಂಡ ಹೇಳಿರೆ ಸಸಾರ.
ಹೀಂಗೆ ದಿನ ಹೋದಾಂಗೆ ಸೀರೆ, ಒಡವೆ, ಅದೂ..ಇದೂ..ಳಿ ಈ ಪಟ್ಟಿ ಉದ್ದಕೆ ಬೆಳೆವದು ಕಾಂಬಗ ಸ್ವಾಭಿಮಾನಿಯಾದ ಮೋಹನಂಗೆ ಕೋಪವೇ ಬಂದುಕೊಂಡಿತ್ತಿದ್ದು.
ಒಂದೆರೆಡು ಸರ್ತಿ ಹೆಂಡತ್ತಿಯತ್ತರೆ ಹೇಳಿ ನೋಡಿದ “ನಿನಗೆಂತಾರು ಬೇಕಾರೆ ಎನ್ನತ್ರೆ ಹೇಳ್ಲಾಗದ ? ಎಲ್ಲ ಅಪ್ಪನ ಮನೆಂದ ತಪ್ಪದೆಂತಕೆ ?”
ಗೆಂಡನ ಬಾಯಿಂದ ಆ ಮಾತು ಬಿದ್ದಪ್ಪಗಳೇ ಗೀತಂಗೆ ಕೋಪ ಏರಿತ್ತು.”ನೀಂಗೊ ಭಾರೀ ದೊಡ್ದ ಆಫೀಸರ್ ಅಲ್ಲದಾ? ಕಡಮ್ಮೆ ಸಂಬಳ ಹೇಳಿ ಹೇಳ್ಲೆ ನಾಚಿಕೆಯಾಗಿ ’ ಜಾಗ್ರತೆ ಮಾಡಿ ಖರ್ಚು ಮಾಡು ’ ಹೇಳಿ ಎನಗೆ ಉಪದೇಶ ಕೊಡುದಲ್ಲದ ನಿಂಗೊ?
ಎನ್ನ ಅಣ್ಣಂದ್ರಿಬ್ರೂ ನಿಂಗಳ ಹಾಂಗಲ್ಲ , ಅವು ಸರಿಯಾದ ಇಂಜಿನಿಯರುಗಳೇ , ನಿಂಗಳ ಹಾಂಗೆಪ್ಪ ’ಕುರೆ’ ಬುದ್ದಿಯವು ಅವಲ್ಲ”, ಹೀಂಗೆಲ್ಲ ಹೇಳಿ ಅಪ್ಪನ ಮನೆಯವರ ಹೊಗಳಿ ಗೆಂಡನ ಅಪಮಾನ ಮಾಡಿತ್ತು.

ಅಂದೂದೆ ಹಾಂಗೇ ಆದ್ದದು. ಮಂಗ್ಳೂರಿಲ್ಲಿ ಎಲ್ಲಿಯೋ ಎಂತದೋ ಆಭರಣ ಪ್ರದರ್ಶನ,ಮಾರಾಟ ಹೇಳುದು ಕೇಳಿ ಗೀತಂಗೆ ಹೋಯಕೂಳಿ ಆತು.
ಇಬ್ರೂ ಹೋದವು. ಅಲ್ಲಿಗೆತ್ತಿಯಪ್ಪಗ ಗೀತಂಗೆ ಓಲೆ, ನೆಕ್ಲೇಸ್, ಬಳೆ ಎಲ್ಲ ಇಪ್ಪ ಒಂದು ಸೆಟ್ ಆಭರಣ ತೆಗೆಕೂಳಿ ಆತು.
ಅದಕ್ಕೆ ಆರು ಸಾವಿರ ಹೇಳಿ ಕ್ರಯ ಹೇಳಿಯಪ್ಪಗ ಮೋಹನ ಸಹಜವಾಗಿಯೇ “ ಆನು ಅಷ್ಟು ಪೈಸೆ ತಯಿಂದಿಲ್ಲೇಳಿ ಹೇಳಿದ. ಅಷ್ಟೇ ಸಾಕಾತು ಗೀತಂಗೆ ”ನಿಂಗೊ ಮೊನ್ನೆ ಹೇಳಿದ್ದೆಂತರ ? ನೀನು ಬೇಕೂಳಿ ಹೇಳಿದ್ದೆಲ್ಲಾ ತೆಗೆದುಕೊಡ್ತೇಳಿ ಅಲ್ಲದಾ ? ಈಗ ಎಂತರ ಹೇಳುದು ? ಎನ್ನ ಅಣ್ಣ ಆಗಿದ್ದರೆ…”

ಗೀತ ಅಷ್ಟು ಹೇಳ್ಯಪ್ಪಗ ಮೋಹನಂಗೂ ಅಷ್ಟು ದಿನದ ಕೋಪ ಎಲ್ಲ ಒಟ್ಟಿಂಗೆ ಹೆರ ಬಂತು.” ಎಂತ ಹೇಳಿರೂ ಅಪ್ಪನ ಮನೆಯವರ ಹೊಗಳಿಂಡು ಕೂರು, ನಿನಗೆ ಗೆಂಡ ಹೇಳಿರೆ ರಜವೂ ಬೆಲೆ ಇಲ್ಲೆ”, ಅಲ್ಲ ಮತ್ತೆ ಹೆಂಡತ್ತಿಗೆ ಬೇಕಾದ ಹಾಂಗೆ ತೆಗೆದುಕೊಡ್ಲೆ ಎಡಿಯದ್ದವು ಮದುವೆಯಾದ್ದೆಂತಕೆ ? ಸಾಕಾತೆನಗೆ ನಿಂಗಳೊಟ್ಟಿಂಗೆ….”
“ ಸಾಕಾದರೆ ನಡೆ ನಿನ್ನಪ್ಪನ ಮನೆಗೆ, ಎನ್ನ ಮದುವೆ ಆಯೆಕಾರೆ ಮೊದಲೇ ನಿನಗೆ ಗೊಂತಿತ್ತಿದ್ದಿಲ್ಲ್ಯಾ, ಎನಗೆ ಎಷ್ಟು ಸಂಬಳ ಇದ್ದೂಳಿ, ಮತ್ತೆಂತಕೆ ಮದುವೆಗೆ ಒಪ್ಪಿಗೆ ಕೊಟ್ಟದು,”
“ನಿಂಗಳ ಬಾಯಿಂದ ಇಷ್ಟು ಮಾತು ಕೇಳಿದ ಮತ್ತೆ ಆನಿಲ್ಲಿಯೇ ನಿಲ್ಲುತ್ತನಾ ? ಬೇಡಾಳಿ, ಎನಗೆಂತದೂ ಬೇಡ, ಆನೀಗಳೇ ಅಪ್ಪನಮನೆಗೆ ಹೋವ್ತೆ “ ಹೇಳಿಕ್ಕಿ ಗೀತ ಕೈಗೆ ಸಿಕ್ಕಿದ ಸೀರೆ, ಸಾಮಾನುಗಳ ಎಲ್ಲ ಬ್ಯಾಗಿಂಗೆ ತುಂಬಿಸಿ ಗೆಂಡನ ಮೋರೆ ಕೂಡ ನೋಡದ್ದೆ ಅಂಬಗಳೇ ಅಪ್ಪನ ಮನೆಗೆ ಹೆರಟತ್ತು.
ಮೋಹನಂಗೆ ಒಂದರಿ ಎಂತ ಮಾಡಕೂಳಿ ಅಯಿದಿಲ್ಲೆ.  ಗೀತನ ’ಹೋಗೆಡಾ ಹೇಳಿ ಹೇಳೆಕೂಳಿ ’ ಅವನ ಮನಸ್ಸು ಹೇಳಿಂಡಿದ್ದರೂ ಅವನ ಬಾಯಿಂದ ಒಂದೇ ಒಂದು ಶಬ್ಧವೂ ಹೆರಟಿದ್ದಿಲ್ಲೆ.
ಅದರ ಮೊಬ್ಯೆಲಿಂಗೆ ’ ರಿಂಗ್ ’ ಕೊಟ್ಟರೂ ಅದು ತೆಗೆದ್ದೇ ಇಲ್ಲೆ.ಮೋಹನ ಬೇರೆ ದಾರಿ ಕಾಣದ್ದೆ ಸುಮ್ಮನೆ ಮನೆಲಿ ನಿಂಬದೆಂತಕೇಳಿ ಹೆರಟು ಆಫೀಸಿಂಗೆ ಹೋದ.

ಗೆಂಡನತ್ರೆ ಕೋಪಲ್ಲಿ ಗೀತ ನಿಂದ ಕಾಲಲ್ಲೇ ಅಪ್ಪನ ಮನೆಗೆ ಬಂದರೂ ಈ ಸರ್ತಿ ಅದರ ಆರೂ ಗೂಮಾನವೇ ಮಾಡಿದ್ದವಿಲ್ಲೆ.
ಅಬ್ಬೆ ಕೂಡ ಒಂದರಿ ಬಂದಿಕ್ಕಿ ನೋಡಿಕ್ಕಿ ಒಳಹೋದಪ್ಪಗ ’ ಆನಿಲ್ಲಿಗೆ ಬಂದದು ತಪ್ಪಾತ’ಳಿ ಆತು ಅದಕ್ಕೆ.
ಅಷ್ಟೊತ್ತಿಂಗೆ ಒಳಾಂದ ದೊಡ್ದಣ್ಣ ಗಿರೀಶ ಅಪ್ಪನತ್ತರೆ “ ಅಪ್ಪ, ಅದು ಪುನಾ ಬಯಿಂದು, ಪ್ರತಿ ಸರ್ತಿ ಬಂದಪ್ಪಗಳೂ ಅದೂ ತೆಗೆದು ಕೊಡು, ಇದು ತೆಗೆದು ಕೊಡು ’ ಹೇಳಿ ನಿಂಗೊ ಹೇಳಿದ ಹಾಂಗೆ ಕೇಳ್ಯೊಂಡಿತ್ತಿದ್ದೆ , ಇನ್ನೆನಗೆ ಹಾಂಗೆಲ್ಲ ತೆಗೆದು ಕೊಡ್ಲೆಡಿಯ “ಅಷ್ಟಪ್ಪಗ ಅಪ್ಪನುದೆ “ಆನೂ ನಿನ್ನತ್ರೆ ಅದರನ್ನೇ ಹೇಳಕೂಳಿ ಗ್ರೇಶಿದ್ದೆ.
ಮದುವೆ ಕಳ್ದ ಮತ್ತೆ ಕೂಸುಗೊ ಗೆಂಡನತ್ರೆ ಹೆಳದ್ದೆ, ಎಲ್ಲವನ್ನೂ ಅಪ್ಪನಮನೆಯವೇ ತೆಗೆದುಕೊಡೆಕೂಳಿ ಹೇಳಿರೆ ಹೇಂಗೆ ? “

ಅವರ ಆ ಮಾತುಗೊ ಎಲ್ಲ ಗೀತನ ಎದೆಗೆ ಚೂರಿ ಹಾಂಗೆ ಕುತ್ತಿತ್ತು. ಅದಕ್ಕೆ ತಡವಲೇ ಎಡ್ತಿದಿಲ್ಲೆ,’ಇದೆಂತ ಹೀಂಗೆ?’ ಹೇಳಿ ಅಬ್ಬೆಯತ್ರೆ ಕೇಳಿತ್ತು.
“ ನೋಡು ಗೀತ , ನೀನು ಹೀಂಗೆ ಇಲ್ಲಿಗೆ ಬಂದು ಎಲ್ಲದಕ್ಕೂ ಒರಂಜದು ಅಷ್ಟು ಸರಿಯಲ್ಲ , ಮದುವೆ ಕಳುದ ಮತ್ತೆ ಕೂಸುಗೊ ಗೆಂಡ ಹೇಳಿದ ಹಾಂಗೆ ಕೇಳೆಕು” ಹೇಳಿ ಅಬ್ಬೆಯೂ ಹೇಳ್ಯಪ್ಪಗ ಗೀತಂಗೆ ತಲೆಗೆ ಆರೋ ಬಡ್ದ ಹಾಂಗಾತು.
ಮತ್ತೆ ಒಂದು ಕ್ಷಣವೂ ಅದಲ್ಲಿ ನಿಂತಿದೆ ಇಲ್ಲೆ. ಬಂದ ದಾರಿಗೆ ಸುಂಕ ಇಲ್ಲೆ ’ ಹೇಳಿ ಅಂಬಗಳೇ ತಿರುಗಿ ಗಂಡನ ಮನೆಗೆ ಬಂತು, “ಉಂಡಿಕ್ಕಿ ಹೋಗು ಗೀತಾ “ ಹೇಳಿ ಕೂಡ ಆರೂ ಹೇಳಿದ್ದವಿಲ್ಲೆ, ಇರುಳಿಡೀ ಕೂಗಿ ಕೂಗಿ ಅದರ ತಲೆದಿಂಬು ಚೆಂಡಿಯಾತು.

ಇದೆಲ್ಲಾ ನಡದು ತಿಂಗಳೊಂದು ಕಳುದತ್ತು. ಈಗ ಗೀತ ಗೆಂಡನ ಎದುರೆ ಅಪ್ಪನ ಮನೆಯ ಶುದ್ದಿಯೆತ್ತುತ್ತಿಲ್ಲೆ.
ಅವನ ಎಲ್ಲಾ ಗುಣವೂ ಅದಕ್ಕೆ ಖುಷಿಯಪ್ಪಲೆ ಸುರುವಾತು,ಅತ್ತೆ ಮಾವಂದ್ರನ್ನೂ ಇಲ್ಲಿಗೆ ಒತ್ತಾಯ ಮಾಡಿ ಬಪ್ಪಲೆ ಹೇಳಿ ಕರಕೊಂಡು ಬಂತು, ಅಂದರೂ ಮನಸ್ಸಿನ ಒಳ ಅಪ್ಪನಮನಗೆ ಹೋಗದ್ದ ಬೇಜಾರ ಹಾಂಗೇ ಇತ್ತಿದ್ದು, ಮೋಹನಂಗೂ ಹೆಂಡತ್ತಿಯ ಈ ಬದಲಿದ ಗುಣ ನೋಡಿ ಆಶ್ಛರ್ಯ ಆತು.
ಈಗ ಗೀತ ಅವನ ಯಾವುದಕ್ಕೂ ಹಂಗುಸುತ್ತಿಲ್ಲೆ,ಬೈತ್ತಿಲ್ಲೆ, ಅವ ಹೇಳಿದ ಹಾಂಗೇ ಕೇಳಿ ಚೆಂದಕೆ ಸಂಸಾರ ಮಾಡ್ಲೆ ಸುರುಮಾಡಿತ್ತು.
ಆದರೂ ಅಪ್ಪನ ಮನೆಯವರ ಬಗ್ಗೆ ಅದಕ್ಕೆಂತೋ ಬೇಜಾರ ಇದ್ದೂಳಿ ಅವಂಗೆ ಗೊಂತಾಯಿದು. ಅಂದರೂ ಅಬ್ಬೆ-ಅಪ್ಪ ಒಟ್ಟಿಂಗೆ ಇದ್ದ ಕಾರಣ ಗೀತನತ್ರೆ ಹೆಚ್ಚು ಒತ್ತಾಯ ಮಾಡಿದ್ದನೂ ಇಲ್ಲೆ.

ಒಂದು ದಿನ ಹೊತ್ತೋಪಗ ಮೋಹನ ಆಫೀಸಿಂದ ಬೇಗ ಬಂದ, ಗೀತ ಹೇರವೇ ಇದ್ದತ್ತು, ಬೈಕಿನ ಪೆಟ್ಟಿಗೆಂದ ಒಂದು ಕಟ್ಟ ತೆಗೆದು ಅದರ ಕೈಗೆ ಕೊಟ್ಟ,ಅದು ’ಎಂತರ ಇದೂಳಿ ’ ಅವನ ಮೋರೆ ನೋಡಿತ್ತು. “ಒಳ ಬಂದು ಬಿಡುಸಿ ನೋಡು” ಅವ ನೆಗೆ ಮಾಡಿಂಡು ಹೇಳ್ಯಪ್ಪಗ ಅದು ಅವನೊಟ್ಟಿಂಗೆ ಒಳ ಬಂದು ಕಟ್ಟ ಬಿಡ್ಸಿ ನೋಡಿತ್ತು, ಅಂದು ಅದು ತೆಗೆಕೂಳಿ ಹಠ ಮಾಡಿದ ಆಭರಣಂಗಳ ಜೊತೆ ಅದು! ಅದರಿಂದಾಗಿಯೇ ಅಲ್ಲದಾ ಅಪ್ಪನಮನೆಗೆ ಹೋಗದ್ದ ಹಾಂಗೆ ಆದ್ದರೂಳಿ ಗ್ರೇಶಿಯಪ್ಪಗ ಗೀತನ ಕಣ್ಣಿಂದ ನೀರೇ ಬಂತು.
ಎನ್ನ ಗೀತೆಂತಾತು ? ಎಂತ ಇದು ಲಾಯ್ಕ ಇಲ್ಲೆಯಾ ? ಎಂತಕೆ ಕೂಗುದು” ಗೆಂಡ ಕೇಳ್ಯಪ್ಪಗ ಅದಕ್ಕೆ ದುಃಖ ತಡವಲೆ ಎಡ್ತಿದಿಲ್ಲೆ.
ಎನಗೆ ಇದೆಂತದೂ ಬೇಕಾತಿಲ್ಲೆ, ನಿಂಗಳ ಪ್ರೀತಿ ಮಾತ್ರ ಸಾಕು….” ಬೇರೆ ಎಂತ ಹೇಳಲೂ ಅದಕ್ಕೆ ಎಡಿಗಾಯಿದೇ ಇಲ್ಲೆ.

ಎನ್ನ ಪ್ರೀತಿ ಮಾತ್ರ ಸಾಕೂಳಿ ಆದರೆ ಅಂದೆನ್ನ ಬಿಟ್ಟಿಕ್ಕಿ ಹೋಪಲೆ ಹೆರಟದೆಂತಕೆ ?
ಎನಗೂ ನಿನ್ನ ಬಿಟ್ಟು ಇಪ್ಪಲೆಡಿಗಾ? ಅದಕ್ಕೆ ಬೇಕಾಗಿ ನಿನ್ನ ಅಪ್ಪನ ಮನೆಯವರತ್ರೆ ನೀನು ಬಂದಪ್ಪಗ ’ಹಾಂಗೆ ಹೇಳೆಕೂಳಿ ’ ಹೇಳಿದ್ದದು ಆನೇ.
“ನಿಂಗೊ ಹೇಳುದು ಸತ್ಯವಾ ? “ ಗೀತ ಅವನ ಮೋರೆ ನೋಡಿಂಡು ಕೇಳಿತ್ತು. “ ನಿಜವಾಗಿಯೂ ಅಪ್ಪು , ಎರಡು ತಿಂಗಳು ನಿನಗೆ ಪೋನ್ ಮಾಡುದಾಗಲೀ ಇಲ್ಲಿಗೆ ಬಪ್ಪದಾಗಲೀ ಬೇಡಾಳಿ ಹೇಳಿದ್ದೆ , ಅಂದರೂ ಇಂದು ನಿನ್ನ ಹುಟ್ಟುಹಬ್ಬ ಅಲ್ಲದಾ ?
ಈಗಳೇ ಹೆರಡು ನಾವಿಬ್ರೂ ಅಲ್ಲಿಗೆ ಹೋಪ , ಗೀತಂಗೆ ಸಂತೋಷಾತು. ಅಪ್ಪನ ಮನೆಯವರದ್ದೆಂತ ತಪ್ಪಿಲ್ಲೇಳಿ ಗೊಂತಾದ್ದದರ ಒಟ್ಟಿಂಗೆ ಗೆಂಡನ ಜಾಣತನ ಬಗ್ಗೆ ಹೆಮ್ಮೆಯೂ ಆತು.

’ಇವು’ ಹಾಂಗೆ ಹೇಳದ್ರೆ ಆನು ಇನ್ನೂದೆ ಮೊದಲಾಣ ಹಾಂಗೇ ಇರ್ತಿತೇಳಿ ಗ್ರೇಶಿಂಡು ’ಅಪ್ಪನ ಮನೆಗೆ ಹೋಪ ಶುದ್ದಿಯ’ ಅತ್ತೆಗೆ ಹೇಳ್ಲೆ ಬೇಕಾಗಿ ಅದು ಒಳ ಹೋಪಗ ಮೋಹನನ ಮೊಬೈಲ್ ರಿಂಗಾತು.
ಅತ್ಲಾಗಿಂದ ಗೀತನ ಅಣ್ಣ “ ಭಾವ , ಗೀತನ ನೋಡದ್ದೆ ಎಂಗೊಗೆ ತುಂಬಾ ಅಸಕ್ಕ ಆವ್ತಾ ಇದ್ದು , ನಿಂಗಳ ವಾಯಿದೆವರೆಗೆ ಕಾವಷ್ಟು ತಾಳ್ಮೆ ಎಂಗೊಗಿಲ್ಲೆ ಭಾವ , ಅದರ ಹುಟ್ಟುಹಬ್ಬವ ಇಷ್ಟ್ರವರೆಗೆ ಎಂಗೊ ಎಲ್ಲೋರೂ ಸೇರಿ ಗೌಜಿಲಿ ಮಾಡಿ ಕೊಂಡಿದ್ದದು.
ಹಾಂಗಾಗಿ ಎಂಗೊ ಎಲ್ಲೋರೂ ಈಗ ಅಲ್ಲಿಗೆ ಬತ್ತಾ ಇದ್ದೆಯಾ. ನಿಂಗೊ ಮನೇಲಿ ಇದ್ದೀರನ್ನೇ..?”
“ನಿನ್ನ ಅಣ್ಣ ಹೀಂಗೆ ಹೇಳಿದ್ದಾಳಿ” ಗೀತಂಗೆ ಮೋಹನ ಹೇಳ್ಯಪ್ಪಗ ಸಂತೋಷಂದ ಅದರ ಕಣ್ಣಿಲ್ಲಿ ಕಣ್ಣೀರು ಉಕ್ಕಿ ಬಂತು.

~*~*~

21 thoughts on “ಬದುಕೇ ಹಸಿರು ಪ್ರೀತಿ ಬೆರೆತಾಗ

  1. ಕಥೆ ಭಾರೀ ಲಾಯ್ಕಾಯ್ದು…
    ಪೈಸೆಗಿಂತಲೂ, ಭಾವನೆಗೊಕ್ಕೆ ಒತ್ತು ಮತ್ತೆ ಪ್ರಾಮುಖ್ಯತೆ ಕೊಡುವ
    ಜೀವನ ಸಂತೋಷಲ್ಲಿ ಸಾಗುತ್ತು…ಕಥೆ ಮಾತ್ರ ಅಲ್ಲ, ನಿಜ ಜೀವನಲ್ಲಿ ಕೂಡ.

    1. ತುಂಬಾ ಸತ್ಯ… ಎನಗೂ ಅನುಭವ ಇದ್ದು…

  2. ಪ್ರಸನ್ನಕ್ಕನ ಕತೆ ಹೃದಯಕ್ಕೆ ಹತ್ತರೆ ಇದ್ದು.
    ನಮ್ಮ ಬೈಲಿನ ಎಲ್ಲಾ ಅಕ್ಕಂದ್ರು ಇದರ ಓದಿ ಮನನ ಮಾಡಿಂಡ್ರೆ ತುಂಬಾ ಒಳ್ಳೆದು.
    ಅಲ್ಲಿಪ್ಪ ಪಾತ್ರಂಗೊ, ಅದರ ಮಧ್ಯೆ ನೆಡವ ಮಾತುಗೊ, ಭಾವನಾತ್ಮಕ ಸಮ್ಮಂದಂಗಳ ಹತ್ತರಂದ ವರ್ಣನೆ ಮಾಡಿದ ನಮುನೆ ತೋರ್ತು.
    ಇಷ್ಟೊಳ್ಳೆ ಕತೆಯ ಬೈಲಿಂಗೆ ಕೊಟ್ಟದಕ್ಕೆ ನಿಂಗೊಗೂ, ಅದರ e-ರೂಪ ಕೊಟ್ಟು ಬೈಲಿಂಗೆ ಬಿಟ್ಟ ಸುವರ್ಣಿನಿಅಕ್ಕಂಗೂ ಅಭಿನಂದನೆಗೊ.

    ನಿಂಗ ಇಬ್ರ ಜುಗಲ್ ಬಂದಿಲಿ ಮುಂದೆಯೂ ಹೀಂಗೇ ಕತೆಗೊ, ಬರಹಂಗೊ ಬರಳಿ.

  3. ಇಷ್ಟು ಲಾಯ್ಕ ಬರೆತ್ತ ಪ್ರಸನ್ನಕ್ಕ ಎ೦ಗಳ ಸೀಮೆಲಿಯೇ ಇದ್ದುಕೂಡಾ ಆನು ಇಶ್ಟರವರೇ೦ಗುದೆ ಇವರ ಕತೆಗಳ ಓದಿದ್ದಿಲ್ಲೆನ್ನೆ!! ಛೆ…
    ಧನ್ಯವಾದ೦ಗೊ..

  4. ಜೀವನಲ್ಲಿ ಪ್ರೀತಿಯ ಸಾಮರಸ್ಯ ಇರೆಕು, ಬರೇ ಆಡಂಬರ ಅಲ್ಲ ಹೇಳ್ತರ ಲಾಯಿಕಲಿ ನಿರೂಪಿಸಿದ್ದವು.
    ಗೀತನ ಅಣ್ಣ ಫೋನ್ ಮಾಡಿ “ತಂಗೆಯ ಹುಟ್ಟು ಹಬ್ಬ ಆಚರಣೆಗೆ ನಿಂಗಳಲ್ಲಿಗೇ ಬತ್ತೆ” ಹೇಳ್ತದು ಒಳ್ಳೆ ಅಂತ್ಯ ಕೊಟ್ಟಿದು.
    ಇಲ್ಲಿ ಪ್ರಸ್ತುತ ಪಡಿಸಿದ ಸುವರ್ಣಿನಿಗೆ ಧನ್ಯವಾದಂಗೊ

  5. ಮನಮುಟ್ಟುವ ಕತೆ…ಹೊಕ್ಕ ಮನೆಯ ತನ್ನದು ಹೇಳಿ ಗ್ರೇಶೆಕು,ಸ್ವಾಭಿಮಾನಲ್ಲಿ ಬಾಳ್ವೆ ಮಾಡೆಕು ಹೇಳುವ ಸಂದೇಶ ಇಪ್ಪ ಕತೆ.ಲಾಯ್ಕ ಆಯಿದು.

  6. ಪ್ರಸನ್ನ ಬರದ ಕಥೆ ಲಾಯಿಕ ಇದ್ದು. ಕೊಡಗಿನ ಗೌರಮ್ಮ ದತ್ತಿ ನಿಧಿ ಕಥಾ ಸ್ಪರ್ದೆಲಿ ಪ್ರಸನ್ನಂಗೆ ಬಹುಮಾನ ಸಿಕ್ಕಿದ್ದಲ್ಲದೋ?
    ಕಥೆಯ ಇಲ್ಲಿ ಹಂಚಿದ ಕೊಣಲೆ ಅಕ್ಕಂಗೆ ಧನ್ಯವಾದ. ಪ್ರಸನ್ನ ಸಾಹಿತ್ಯ ಲೋಕಲ್ಲಿ ಉತ್ತ ರೋತ್ತರ ಅಭಿವ್ರಿ ದ್ದಿ ಹೊಂದಲಿ..ಹೇಳಿ ಹಾರೈಸುತ್ತೆ…

  7. ನ್ಯಾಯ ಎಲ್ಲಿದು? ಹೇಳಿ ವಿಮರ್ಶೆ ಮಾಡಿ ಅಳಿಯನ ಸ್ವಾಭಿಮಾನ, ಬುದ್ದಿವ೦ತಿಕೆಗೆ ಗೌರವ ತೋರುಸಿದ ಗೀತನ ಅಪ್ಪನ ಮನೆಯ ಎಲ್ಲೊರನ್ನು ಮೆಚೆಕ್ಕು. ಎರಡು ಮನೆಯ ಬೆಸವ ಮದುವೆ ಆದ ಕೂಸುಗೊ ಆ ಸ್ಥಾನದ ಜವಾಬ್ದರಿಯ ತಿಳ್ಕೊ೦ಡು
    ಕಾರ್ಯ ನಿರ್ವಹಿಸಿದರೆ ಎರಡು ಮನೆಯವಕ್ಕೂ ನೆಮ್ಮದಿ.
    ಚೆಕ್ಕೆಮನೆ ಅಕ್ಕನ ಕಥೆಯ ‘ರುಚಿ’ ಹಿಡಿಶಿದ ಸುವರ್ಣಿನಿ ಅಕ್ಕನ್ಗೆ ಧನ್ಯವಾದ೦ಗೊ.

  8. ಬದುಕೇ ಹಸಿರು ಪ್ರೀತಿ ಬೆರೆತಾಗ …..ತು೦ಬಾ ಲಾಯಿಕಾಯಿದು… ಬೈಲಿ೦ಗೆ ಹಾಕಿ ಎ೦ಗೂಗೆಸಾ ಓದುವಾ೦ಗೆ ಮಾಡಿದ ಸುವರ್ಣಿನಿಗೆ ದನ್ಯವಾದ..

  9. ಧನ್ಯವಾದಂಗೊ. ಲಾಯಕ ಆಯ್ದು. ಇನ್ನೂ ಇನ್ನೂ ಬೈಲಿಂಗೆ ಕೊಡುಗೆ ಇರಲಿ.

  10. “ಪ್ರೀತಿ ಬೆರೆತಾಗ ಬದುಕೇ ಹಸಿರು…” ಹೇಳಿ ಹಸಿರಿನ ಮಧ್ಯಲ್ಲಿ ವಾಸಿಸುತ್ತಾ ಇಪ್ಪ ಪ್ರಸನ್ನಾ ಅಕ್ಕ ಬರದ ಕಥೆ ತುಂಬಾ ಒಳ್ಳೇದು ಇದ್ದು…

    ಯಾವುದೇ ಮನೇಲಿ ಆಗಲಿ… ಎಲ್ಲಿಯೇ ಆಗಲಿ ಸಣ್ಣ ಒಡಕು ಕಾಂಬ ಲಕ್ಷಣ ಇದ್ದು ಹೆಳುವಗಲೇ (ಗುಸು ಗುಸು ಮಾತನಾಡಿಗೊಂಬ ಬದಲು) ಅದರ ನೋಡಿ ಅಲ್ಲಿ ಪ್ರೀತಿಯ ಬೆಸುಗೆಂದ ಆ ಕೊಂಡಿಯ ಬಲ ಪಡಿಸುಲೇ ನಾವು ಪ್ರಯತ್ನ ಪಡೆಕ್ಕು… ಪ್ರತಿಯೊಬ್ಬನೂ ಈ ತರ ಪ್ರಯತ್ನ ಪಟ್ಟರೆ ಅದೆಷ್ಟು ಸುಂದರ ಸಮಾಜ ನಿರ್ಮಾಣ ಅಕ್ಕು…

  11. ನಮ್ಮ ಭಾಷೆಲಿ ಓದುಲೆ ಭಾರೀ ಸ೦ತೋಷ ಆವುತ್ತು.ಶೀರ್ಷಿಕೆಯೂ ಲಾಯ್ಕ ಇದ್ದು.
    ಕತೆಯ ನಿರೂಪಣೆ,ನೀತಿ ಮನಸ್ಸಿ೦ಗೆ ಮುಟ್ಟಿತ್ತು. ಮೋಹನನ ಯೋಜನೆಯ ಮಾವ”ಗಳ” ಮನೆಲಿ ಒಪ್ಪಿಗೊ೦ಡು ಒಳ್ಳೆ ಕೆಲಸ ಮಾಡಿದವು. ಕಡೇಲಿ ಗೀತನ ಅಣ್ಣನ ಮಾತುಗೊ ಭಾವನಾತ್ಮಕ ಆಯಿದು.
    ಸುವರ್ಣಿನಿ ಅಕ್ಕ, ಪ್ರಸನ್ನಕ್ಕನ ಪರಿಚಯ ಮಾಡ್ಸಿ,ಅವರ ಕಥಾಸಾಹಿತ್ಯವ ಬೈಲಿನ ನೆ೦ಟ್ರಿ೦ಗೆಲ್ಲ ಹ೦ಚಿದ್ದಕ್ಕೆ ಧನ್ಯವಾದ.ಇನ್ನೂ ಹೀ೦ಗಿರ್ತ ಶುದ್ದಿಗೊ ಬೈಲಿ೦ಗೆ ಬರಳಿ ಹೇಳಿ ಒ೦ದು ಕೋರಿಕೆ..

    1. ಧನ್ಯವಾದ 🙂
      ಮೋಹನನ ಮಾವಗಳ ಮನೆಯವ್ವು ಸಂದರ್ಭವ ಅರ್ಥಮಾಡಿಗೊಂಡು ತನ್ನ ಮಗಳ ಜೀವನ ಸುಗಮ ಅಪ್ಪಲೆ ಪ್ರಯತ್ನ ಮಾಡಿದ್ದವು, ಎಲ್ಲ ಅಬ್ಬೆ ಅಪ್ಪನೂ ಇದರ ಅರ್ಥ ಮಾಡಿಗೊಂಡರೆ ಎಲ್ಲ ಸಂಸಾರದ ಹೆಚ್ಚಿನ ಸಮಸ್ಯೆ ದೂರ ಅಕ್ಕು , ಅಲ್ಲದಾ?

  12. ಒಬ್ಬಕ್ಕೊಬ್ಬನ ಅರ್ಥ ಮಾಡ್ಯೊಂಡು ಬದುಕುದೇ ನಮ್ಮ ಜೀವನಲ್ಲಿ ನೆಮ್ಮದಿಗೆ ಮೂಲ. ಎರಡು ಮನಸ್ಸು, ಮನೆಗಳ ನಡುಕೆ ಭಾವನಾತ್ಮಕ ಸಂಬಂಧ ತೋರ್ಸುವ ಈ ಕತೆ ನೈಜವಾಗಿದ್ದು. ಇನೂ ಹೇಂಗಿಪ್ಪ ಹವ್ಯಕ ಕತೆಗಳ ಬೈಲಿನೋರಿಂಗೆ ಓದುವ ಅವಕಾಶ ಸಿಕ್ಕಲಿ.

    1. ಅಪ್ಪು, ಅರ್ಥ ಮಾಡಿಗೊಂದು ಬದುಕುದರಿಂದ ನಮ್ಮ ಕುಟುಂಬಲ್ಲಿಯೂ ಸಮಾಜಲ್ಲಿಯೂ ಶಾಂತಿ, ನೆಮ್ಮದಿ ಇರ್ತು 🙂
      ಬದುಕ್ಕುಲೆ ಎಲ್ಲಕ್ಕಿಂತ ಮುಖ್ಯ ಬೇಕಾದ್ದು ಅದುವೇ ಅಲ್ಲದಾ?
      🙂 ಧನ್ಯವಾದ

  13. ಪ್ರಸನ್ನಕ್ಕ ಬರದ್ದದು ಕಥೆಯಾದರುದೆ ಒಂದು ನೆಡದ ಸತ್ಯ ಘಟನೆ ಹಾಂಗೆ ಕಾಣ್ತಾ ಇದ್ದು. ಕಥೆಲಿ ಹಾಂಗಿಪ್ಪ ನೈಜತೆ ಬಯಿಂದು. ಬರದ ಶೈಲಿ ಅಂತೂ ಅದ್ಭುತ, ಮನಸ್ಸಿಂಗೆ ಹತ್ರ ಬತ್ತು. ಮದುವೆ ಆದ, ಅಪ್ಪಲಿಪ್ಪ ಕೂಸುಗವಕ್ಕೆ ಉತ್ತಮ ಸಂದೇಶವನ್ನೂ ಕೊಟ್ಟಿದು. ಪ್ರಸನ್ನಕ್ಕನ ಕಥೆಗೊ ಬೈಲಿಂಗೆ ಇನ್ನುದೆ ಬತ್ತಾ ಇರಳಿ.

    1. ಧನ್ಯವಾದ 🙂
      ಅಪ್ಪು, ಪ್ರಸನ್ನಕ್ಕ ಬರವ ಕಥೆಗಳಲ್ಲಿ ನೈಜತೆ ಇರ್ತು, ಅಲ್ಲದ್ದೆ ನಮ್ಮ ಸಮಾಜಲ್ಲಿ ನಡವ ಘಟನೆಗಳ ಬಗ್ಗೆ ಅವ್ವು ಕಥೆ ಬರೆತ್ತವು. ನಾವು ಆಲೋಚನೆ ಮಾಡೆಕಾದ ವಿಷಯಂಗೊಕ್ಕೆ ಕಥೆಯ ರೂಪ ಕೊಡ್ತವು 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×