Oppanna.com

ದೇಶ ಭಕ್ತಿ-೨೦೧೭ರ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.

ಬರದೋರು :   ವಿಜಯತ್ತೆ    on   15/07/2017    17 ಒಪ್ಪಂಗೊ

                     ದೇಶ ಭಕ್ತಿವಿಜಯಲಕ್ಷ್ಮಿ

 ಮಧ್ಯಾಹ್ನ ಒಂದು ಗಂಟೆಯ ಹೊತ್ತಿಂಗೆ ಊಟ ಮುಗುಶಿಕ್ಕಿ, ಪೇಪರು ಓದುವದು ಶ್ರೀಪತಿಯ ದಿನನಿತ್ಯಾಣ ಕೆಲಸ.ಕೂದವ ಏಳೆಕ್ಕಾದರೆ ಮತ್ತೆ ಮೂರು ಗಂಟೆ ಆಯೆಕ್ಕು.ಸರ್ವ ವಿಚಾರಂಗಳನ್ನೂ ತಿಳುಕ್ಕೊಂಬ ಉಮೇದು.ಗೆಂಡಂಗೆ ಓದಿಯಪ್ಪದ್ದೆ ಒಳಾಣ ಕೆಲಸ ಮುಗುಶಿಕ್ಕಿ ಬಂದ “ಪಾರ್ವತಿ”ಯುದೆ ಓದುಲೆ ಕೂದುಕೊಂಡತ್ತು.”ಇಂದು ಎಂದ್ರಾಣ ಹಾಂಗಲ್ಲ..!ಪೇಪರು ಓದಿಕ್ಕಿ ಎಂತದೋ ಯೇಚನೆಲಿ ತಲ್ಲೀನ ಆಗಿಬಿಟ್ಟಿದವು..”ಹೆಂಡತಿ ಗೆಂಡನ ನೋಡಿಕೊಂಡೇ ಬಾಕಿ!”ಎಂತಾತು..?”ಹೇಳುವಗ,”ಪಾರ್ವತೀ..ಎದೆ ಉರುದ ಹಾಂಗೆ ಆವುತ್ತು..ನಮ್ಮ ಗಿರೀಶನ ಅಮೇರಿಕಂದ ಬಪ್ಪಲೆ ಹೇಳೆಕ್ಕು…”ಹೇಳುವಗ ಶ್ರೀಪತಿಗೆ ಧ್ವನಿ ಕಟ್ಟಿದ ಹಾಂಗಾತು.!”ಎದೆ ಬೇನೆ ಅಪ್ಪದಕ್ಕೂ ಗಿರೀಶ ಅಮೇರಿಕಂದ ಬಪ್ಪದಕ್ಕೂ ,ಎಂತರ ಸಂಬಂಧ..?ತಲೆಗೆ ಹೊಳದ್ದಿಲ್ಲೆ ಪಾರ್ವತಿಗೆ.”ನಿಂಗೊ ಹೇಳಿಯಪ್ಪದ್ದೆ ಬಪ್ಪಲೆ “ಅಮೇರಿಕಾ” ಹೇಳಿದರೆ ಆಚಮನೆಯೋ..?ನಮ್ಮ ಏವದೇ ಕಷ್ಟಂಗಳ ಮಗನ ಹತ್ತರೆ ಹೇಳದ್ದೆ ನಾವೇ ಸುಧಾರಿಸಿಯೊಂಡು ಹೋಯೆಕ್ಕು ಹೇಳಿ ನಿಂಗಳೇ ಹೇಳಿದ್ದಲ್ಲದಾ..?ಇಂದು ಎಂತ ಹೀಂಗೆ ಹೇಳ್ತಿ..?ಎನಗೊಂದೂ ಅರ್ಥವೇ ಆವುತ್ತಿಲ್ಲೆ.”ಪಾರ್ವತಿ ಗೆಡ್ಡಕ್ಕೆ ಕೈ ಮಡಗಿತ್ತು.ಹಾಂಗೂ ಹೀಂಗೂ ಮಾತಾಡಿಯಪ್ಪಗಳೇ ಹತ್ತು ನಿಮಿಷ ಕಳುದತ್ತು.ನಾವು ಪಟ್ಟಾಂಗ ಹೊಡಕ್ಕೊಂಡು ಕೂದರೂ ಗೋಡೆಲಿಪ್ಪ ಗಂಟೆಗೆ ಕೂಪ ಕ್ರಮ ಇಲ್ಲೆನ್ನೆ.ಅರ್ಧ ಗಂಟೆಲಿ ಪೇಪರು ಓದಿ ಆಯೆಕ್ಕು.ಮೇಲಂದ ಮೇಲೆ ಮುಖ್ಯಾಂಶಗಳ ನೋಡಿಕ್ಕಿ ಕುತೂಹಲ ಅಪ್ಪ ವಿಷಯಂಗೊ ಇದ್ದರೆ ಅದರ ಸಂಪೂರ್ಣ ಓದಿಕ್ಕಿ,ಪಾರ್ವತಿಗೆ ರಜ್ಜ ವಿಶ್ರಾಂತಿ ತೆಕ್ಕೊಂಬ ಕ್ರಮ.ಪೇಪರು ಬಿಡುಸಿಯಪ್ಪಗ ದಪ್ಪ ಅಕ್ಷರಂಗಳಲ್ಲಿ ಈಗಾಣ ಅಮೇರಿಕದ ಅಧ್ಯಕ್ಷನ ಹೊಸ ಹೊಸ ಕಾನೂನುಗೊ ಅಚ್ಚು(ಮುದ್ರಣ)ಆದ್ದದು ಕಂಡತ್ತು.ದಿನಾಗ್ಳೂ ಒಂದಲ್ಲ ಒಂದು ವಿಷಯವ “ಅಮೇರಿಕಲ್ಲಿಪ್ಪ ಭಾರತೀಯರಿಂಗೆ”ಹೇಳುವ ವಾಕ್ಯದೊಟ್ಟಿಂಗೆ ಸೇರುಸಿ ವಿವರಣೆ ಬಂದುಕೊಂಡು ಇತ್ತಿದ್ದು.ಅದರೊಟ್ಟಿಂಗೆ ನಮ್ಮ ದೇಶದ ಮಕ್ಕಳ ಗುಂಡು ಹಾಕಿ ಕೊಂದ ವಿಷಯಂಗೊ!ಹೀಂಗಿಪ್ಪ ಕಾಲಲ್ಲಿ,ಅಮೇರಿಕಲ್ಲಿ ಇಪ್ಪ ಮಕ್ಕಳ ಹೆತ್ತೋರಿಂಗೆ ತಲೆಬೆಶಿ ಆಗದ್ದೆ ಇಕ್ಕಾ..?ಗೆಂಡಂಗೂ,ಹೆಂಡತಿಗೂ ಮಗನದ್ದೇ ಚಿಂತೆ.ಕೂದರೂ,ನಿಂದರೂ,ಮನುಗಿದರೂ ,ಶ್ರೀಮಂತ ದೇಶದ ಪರಿಸ್ಥಿತಿಯ ಕಂಡು ಮನಸ್ಸು ಆಲೋಚನೆಯ ಗೂಡಾಗಿ ಹೋತು!!.

   ಶ್ರೀಪತಿಗೂ,ಪಾರ್ವತಿಗೂ ಮದುವೆಯಾಗಿ ಸುಮಾರು ವರ್ಷದವರೆಗೂ ಮಕ್ಕೊ ಆಯಿದವಿಲ್ಲೆ.”ಯಾವುದಕ್ಕೂ ಯೋಗ ಕೂಡಿ ಬಾರದ್ರೆ ಆವುತ್ತಿಲ್ಲೆನ್ನೆ”ಹೇಳುವ ಹೆರಿಯೋರ ಮಾತಿನ ಹಾಂಗೆ ಶ್ರೀಪತಿಗೆ ನಲುವತ್ತು ದಾಂಟುವಗ”ಅಪ್ಪ°”ಅಪ್ಪ ಯೋಗ ಕೂಡಿ ಬಂತು.ಮಗಂಗೆ “ಗಿರೀಶ” ಹೇಳಿ ಹೆಸರು ಮಡಗಿದವು.ಮಧ್ಯಮ ವರ್ಗದ ಶ್ರೀಪತಿಗೆ ಕೃಷಿಲಿ ಅಷ್ಟೇನೂ ಆಸಕ್ತಿ ಇತ್ತಿದ್ದಿಲ್ಲೆ.ತೋಟದ ಅಭಿವೃದ್ಧಿಗೆ ಬೇಕಾಗಿ ಎಂತದೂ ಮಾಡಿದ್ದಾಯಿಲ್ಲೆ.ಅಂತೂ ದಿನ ಹೋಗಿಯೊಂಡು ಇತ್ತಿದ್ದು. ಮಗನ ವಿದ್ಯಾಭ್ಯಾಸ ಪಿ.ಯು.ಸಿ ಹಂತಕ್ಕೆ ಮುಟ್ಟಿತ್ತು.ಅಂಬಗಾಣ ದಿನಂಗಳಲ್ಲಿ ಮಕ್ಕಳ ವಿದೇಶಕ್ಕೆ ಕಳುಹಿರೆ ಅವಕ್ಕೆ ಭಾರೀ ಬೆಲೆ ಇತ್ತಿದ್ದು.ಜೆಂಬಾರಂಗಳಲ್ಲಿ ಮಕ್ಕಳ ಅಬ್ಬೆ,ಅಪ್ಪದ್ರಿಂಗೆ ಹೆರ ದೇಶಲ್ಲಿಪ್ಪ ಮಕ್ಕಳ ಶುದ್ದಿ ಹೇಳಿ ಪೋರ‍್ಸು ತೋರ‍್ಸುವ ಕೆಲಸ.ಒಂದು ದಿನ ಆಚಕರೆ ಸದಾಶಿವಣ್ಣನ ಮನೆಗೆ “ಸತ್ಯನಾರಾಯಣ ಪೂಜೆ”ಗೆ ಹೋಗಿಪ್ಪಗ,ಶ್ರೀಪತಿಗೆ ಆದ ಅನುಭವ ಅಷ್ಟಿಷ್ಟಲ್ಲ.ಅವನ ಮಗಳು ಅಮೇರಿಕಲ್ಲಿ ಇಪ್ಪದು.ಎಲ್ಲೋರೂ ಅದರ ಹತ್ತರೆ ಶುದ್ದಿ ಕೇಳುವವೇ!.ಅವರ ಮಕ್ಕಳ ಕಥೆ ಕೇಳಿದರೆ..,ಅವಕ್ಕೆ ನಮ್ಮ ಭಾಷೆ ರಜ್ಜವೂ ಬತ್ತಿಲ್ಲೆ.ಮಾತಾಡುವಗ ಮೋರೆಗೆ ನೋಡ್ತವು.ಏನೂ ಕಲಿಯದ್ದ ಅಜ್ಜಿಯಕ್ಕಳೂ ಪುಳ್ಳಿಯಕ್ಕೊಗೆ ಬೇಕಾಗಿ”ಯಸ್”,”ನೋ”ಹೇಳುವ ಶಬ್ದಂಗಳ ಕಲ್ತುಕೊಂಡು ಅವರೊಟ್ಟಿಂಗೆ ಮಾತಾಡುಲೆ ಪೇಚಾಡಿಯೊಂಡು ಇತ್ತಿದ್ದವು.ನಮ್ಮ ಭಾಷೆ ಮಾತಾಡುವವು ಅಲ್ಲಿ ಆರೂ ಇಲ್ಲದ್ದೆ ಆಗಿ ಹೋತು!ಮಕ್ಕೊಗೆ ಭಾರೀ ಖುಷಿಯಾಗಿಯೊಂಡು ಇತ್ತಿದ್ದು.ಎಲ್ಲೋರ ಹತ್ತರೆ ಬಂದು ಇಂಗ್ಲೀಷಿಲ್ಲಿ ಮಾತಾಡಿಯೊಂಡು,ನೆಗೆ ಮಾಡಿಯೊಂಡು ಇತ್ತಿದ್ದವು.ಶ್ರೀಪತಿ ಮಗನೊಟ್ಟಿಂಗೆ ಕೂದುಕೊಂಡು ಇಪ್ಪಗ “ವಾಟ್ ಈಸ್ ಯುವರ್ ನೇಮ್?”(ನಿನ್ನ ಹೆಸರು ಹೇಂಗೆ?)ಹೇಳಿ ಕೇಳಿತ್ತು.ಶ್ರೀಪತಿ ಮಗನ ಮೋರೆ ನೋಡಿದ.”ಯೂ ಟೆಲ್ ಮಿ”(ನೀನು ಹೇಳು) ಹೇಳಿಕ್ಕಿ ಅವನ ಹತ್ತರೆ ಬಂದು ನಿಂದತ್ತು.”ಎನ್ನ ಹೆಸರು ಗಿರೀಶ”ಹೇಳಿದ. ಅವಂಗೆ ಇಂಗ್ಲೀಷಿಲ್ಲಿ ಹೇಳ್ಲೆ ಅರಡಿತ್ತಿಲ್ಲೆ ಆಯಿಕ್ಕು ಹೇಳಿ ಅಲ್ಲಿದ್ದವು ನೆಗೆ ಮಾಡಿದವು.ಕೂಸು ರಜ್ಜ ಹೊತ್ತು ಕೊಣುದಿಕ್ಕಿ ಅದರಷ್ಟಕ್ಕೆ ಆಡುಲೆ ಹೋತು.ಮನೆಗೆ ಬಂದಪ್ಪಗ ಅಪ್ಪ ಕೇಳಿದ”ನೀನು ಎಂತ್ಸಕೆ ನಮ್ಮ ಭಾಷೆಲಿ ಮಾತಾಡಿದ್ದು.ಅಲ್ಲಿ ಎಲ್ಲೋರು ನೆಗೆ ಮಾಡಿ ಮರ್ಯಾದೆ ತೆಗದವು.””ಅವು ನೆಗೆ ಮಾಡಿದರೆ ನವಗೆಂತಾ?ನಮ್ಮ ಜ್ಞಾನ ನಮ್ಮತ್ರೆ ಇದ್ದನ್ನೆ.ಇಲ್ಲಿ ಹುಟ್ಟಿ ಬೆಳದವು ಇಂಗ್ಲೀಷು ಮಾತಾಡೆಕ್ಕು ಹೇಳಿ ಎಂತ?ನಾವು ಅವಕ್ಕೆ ನಮ್ಮ ಭಾಷೆಯ ಕಲುಶೆಕ್ಕಾದ್ದದು ನಮ್ಮ ಕೆಲಸ.ಅಲ್ಲಿಗೆ ಹೋಗಿ ಅದರನ್ನೇ ಮಾತಾಡಲಿ.ಆರು ಬೇಡ ಹೇಳಿ ಹೇಳ್ತವು?ಇಲ್ಲಿಗೆ ಬಂದಿಪ್ಪಗ ನಮ್ಮ ಭಾಷೆಲೇ ಮಾತಾಡೆಕ್ಕು.ಅದು ಬಿಟ್ಟು ನಾವೆಲ್ಲೋರು ಇಂಗ್ಲೀಷರ ಹಾಂಗೆ ಇಂಗ್ಲೀಷು ಭಾಷೆ ಮಾತಾಡುವದು ಎಂತ್ಸಕೆ?”ಮಗ ವಿವರುಸಿ ಹೇಳಿದರೂ ಅಪ್ಪಂಗೆ ಸಮಾಧಾನವೇ ಆಯಿದಿಲ್ಲೆ.“ದೂರದ ಬೆಟ್ಟ ಕಣ್ಣಿಂಗೆ ನುಣ್ಣಂಗೆ ಕಾಂಬದು”ಹೇಳ್ತ ಹಾಂಗೆ ಬೇರೆಯವು ಮಾಡಿದ್ದೆಲ್ಲ ಸರಿಯಾದ್ದದೇ.ಆನುದೆ ಅವರ ಹಾಂಗೆ ಆಯೆಕ್ಕು ಹೇಳುವ ಆಶೆ.”ವಿದೇಶಕ್ಕೆ ಹೋಪದು ಹೇಳಿದರೆ ಸ್ವರ್ಗ ಲೋಕಕ್ಕೆ ಹೋಪದೋ”ಹೇಳುವಷ್ಟುಅಲ್ಲಿಯಾಣ ಮೋಹ ಅಂಟಿಕೊಂಡು ಇತ್ತಿದ್ದು.ನಮ್ಮ ದೇಶಲ್ಲಿ ಎಂತ ಇದ್ದು ಮಣ್ಣಂಗಟ್ಟಿ!ಅಮೇರಿಕಕ್ಕೆ ಹೋದರೆ ಸೌಖ್ಯಲ್ಲಿ ಜೀವನ ತೆಗವಲಕ್ಕು.”ಮಗ ಸಂಪಾದನೆ ಮಾಡಿ ಕಳುಹುಗು”ಹೇಳುವ ದೂರಾಲೋಚನೆಯೂ ಶ್ರೀಪತಿಗೆ ಇತ್ತಿದ್ದು.ಹೇಂಗಾದರೂ ಮಾಡಿ ಮಾಣಿಯ ಅಲ್ಲಿಗೆ ಕಳುಹೆಕ್ಕು ಹೇಳುವ ದೃಢ ನಿರ್ಧಾರ ಮಾಡಿಯೊಂಡ.

   ಗಿರೀಶ ಮೈಸೂರು ಕಾಲೇಜಿಲ್ಲಿ ಇಂಜಿನಿಯರಿಂಗ್ ಮುಗುಶಿಯಪ್ಪಗ ಅಲ್ಲಿಯಾಣವು ಲೆಕ್ಚರರ್ ಆಗಿ ಬಪ್ಪಲೆ ಹೇಳಿದವು.ಮನೆಲಿ ಶುದ್ದಿ ಹೇಳಿಯಪ್ಪಗ ಅಪ್ಪಂಗೆ ರಜ್ಜವೂ ಮನಸ್ಸಿತ್ತಿದ್ದಿಲ್ಲೆ.ಗಿರೀಶಂಗೆ ಸಣ್ಣಾದಿಪ್ಪಗಳೇ ಹೆರ ದೇಶ ಹೇಳಿದರೆ ಆಗ!”ಅಲ್ಲಿಗೆ ಹೋಗಿ ಎಂತ ಮಾಡ್ಲಿದ್ದು?ನಮ್ಮ ಹುಟ್ಟಿದ ದೇಶ ಬಿಟ್ಟು ಹೋಪದು ಎಂತ್ಸಕೆ?ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದ್ದು.ಆನು ಇಲ್ಲಿಯೇ ಕೆಲಸ ಮಾಡಿ ಕೈತುಂಬಾ ಸಂಪಾದುಸುತ್ತೆ.ನಿಂಗೊ ಒಪ್ಪಿಗೆ ಕೊಡಿ ಅಪ್ಪಾ..ಈಗ ಅಮೇರಿಕಕ್ಕೆ ಹೋಯೆಕ್ಕಾದರೆ ಕಲಿವಲೆ ಹೇಳಿ ಹೋಯೆಕ್ಕಷ್ಟೆ.ಆರ ಹತ್ತರೆ ಅಷ್ಟೊಂದು ಪೈಸೆ ಇದ್ದು?”ಮಗ ಅವನ ಮನಸ್ಸಿಲ್ಲಿ ಇಪ್ಪದರ ಹೇಳಿದ.”ಎಂತಾದರೂ ಮಾಡಿ ಪೈಸೆ ಹೊಂದುಸುವದು ಎನ್ನ ಕೆಲಸ.ನೀನು ಹೋಪಲೆ ಒಪ್ಪಿಗೆ ಕೊಟ್ಟರೆ ಸಾಕು.”ಹೇಳುವ ಅಪ್ಪನ ವಿಪರೀತ ಒತ್ತಾಯಕ್ಕೆ,”ಅಲ್ಲಿ ಹೋಗಿ ಇರೆಕ್ಕಾದ್ದದು ಆನು.ಎನ್ನ ಮನಸ್ಸಿಂಗೆ ಹಿತ ಅಲ್ಲದ್ದರ ಆನು ಹೇಂಗೆ ಮಾಡಲೀ..?”ಮಗ ಬೇಜಾರು ಮಾಡಿಯೊಂಡು ಹೇಳಿದ.ನಾಲ್ಕು ಜೆನರ ಎದುರು”ಎನ್ನ ಮಗ ಅಮೇರಿಕಲ್ಲಿ ಇಪ್ಪದು”ಹೇಳಿ ಹೇಳುವ ಕಾಲ ಯಾವಗ ಬತ್ತು..ಹೇಳಿ ಕಾದುಕೊಂಡು ಇದ್ದವಂಗೆ ಮಗನ ಮಾತಿಂದ ತಲೆಬೆಶಿ ಅಪ್ಪಲೆ ಸುರುವಾತು.ಹೆರಾಣ ಜೆಗಿಲಿಯ ಚಿಟ್ಟೆಲಿ ಕೂದುಕೊಂಡು ಇತ್ತಿದ್ದ ಶ್ರೀಪತಿಗೆ ತಲೆ ತಿರುಗಿದ ಹಾಂಗಾತು.”ಪಾರ್ವತೀ..ರಜ್ಜ ನೀರು ತೆಕ್ಕೊಂಡು ಬಾ..”ಹೇಳಿಕ್ಕಿ ಹೆಂಡತಿ ಹತ್ತರಂಗೆ ಎತ್ತೆಕ್ಕಾದರೆ,ಕೆಳಾಂಗೆ ಬಿದ್ದು ಆಯಿದು.ಮೋರೆ ಚಿಟ್ಟೆಯ ಗೋಡಗೆ ಬಡುದ ಕಾರಣ ನೆತ್ತರು ಬಪ್ಪಲೆ ಸುರುವಾತು!ಮಗ ಓಡಿಯೊಂಡು ಬಂದು ಅಪ್ಪನ ಏಳುಸಿದ.ವಸ್ತ್ರವ ಸಿಗುದು ನೆತ್ತರಿನ ಉದ್ದಿ,ಅದಕ್ಕೆ ಗಾಯದ ಹೊಡಿ ಹಾಕಿದ.ಅಪ್ಪಂಗೆ ಬೋದವೇ ಆಯಿದಿಲ್ಲೆ.ಆಸ್ಪತ್ರೆಗೆ ಕರಕ್ಕೊಂಡು ಹೋದವು.ಡಾಕ್ಟ್ರ ಪರೀಕ್ಷೆ ಮಾಡಿ”ಮಾನಸಿಕ ವ್ಯಥೆ”ಆದ್ದದು ಹೇಳಿದ.ಮಗನ ಹತ್ತರೆ ವಿವರ ಎಲ್ಲ ಹೇಳಿದ.ಅಪ್ಪನ ಮನಸ್ಸಿಂಗೆ ಬೇಜಾರಾಗಿ ಹೀಂಗೆಲ್ಲ ಆದ್ದದು. ವಿದೇಶಕ್ಕೆ ಹಾರಿಕೊಂಡು ಹೋಪವ್ವೇ ಹೆಚ್ಚು. ಮನೆಯವು ಬೇಡ ಹೇಳಿದರೂ ಕೇಳದ್ದೆ,ಮಕ್ಕೊ ಅಲ್ಲಿಗೆ ಹೋವುತ್ತವು.ಹೀಂಗಿಪ್ಪ ಕಾಲಲ್ಲಿ ಅಪ್ಪ ಹೇಳಿದರೂ ಹೋಪಲೆ ಮನಸ್ಸಿಲ್ಲದ್ದ ಈ ಮಾಣಿಯ ದೇಶಪ್ರೇಮವ ಕಂಡು ಡಾಕ್ಟ್ರಂಗೆ ಆಶ್ಚರ್ಯ ಆತು.”ನೀನು ಎಂತ ಮಾಡ್ತೆ?ಹೇಳುವದು ನಿನಗೆ ಬಿಟ್ಟದು.ಅಪ್ಪಂಗೆ ಬೇಕಾಗಿಯಾದರೂ ನೀನು ಹೆರದೇಶಕ್ಕೆ ಹೋಯೆಕ್ಕಾವುತ್ತು.ಸಂಪಾದನೆ ಮಾಡ್ಲೆ ನಿನಗೆ ಎಲ್ಲಿಯಾದರೂ ಎಂತ?ಅಲ್ಲಿಗೆ ಹೋದರೆ ಎರಟ್ಟಿ(ಡಬ್ಬಲ್)ಪೈಸೆ ಮಾಡ್ಲಕ್ಕನ್ನೆ.ಈಗಾಣ ಪರಿಸ್ಥಿತಿಯ ನೋಡಿದರೆ ಅಪ್ಪನ ಆರೋಗ್ಯ ನಿನ್ನ ಕೈಲಿ ಇದ್ದು…”ಡಾಕ್ಟ್ರನ ಉಪದೇಶ ಕೇಳಿದ ಗಿರೀಶ ಭರವಸೆಯ ಮಾತು ಹೇಳಿಕ್ಕಿ ಬಂದ.ಅಪ್ಪನ ಹತ್ತರಂಗೆ ಹೋಗಿ ಸಮಾಧಾನ ಮಾಡಿದ.”ನಿಂಗೊ ಹೇಳಿದ ಹಾಂಗೆ ಮಾಡುವ.ನಿಂಗಳ ಸಂತೋಷವೇ ಎನ್ನ ಸಂತೋಷ” ಹೇಳಿಯೊಂಡ.ಅವನ ಮನಸ್ಸಿಲ್ಲಿ ನಮ್ಮ ದೇಶದ ಚಿತ್ರಣ ಮೂಡಿಕೊಂಡು ಇತ್ತಿದ್ದು…”ನಾವು ಹುಟ್ಟಿದ್ದು ಭಾರತ ದೇಶಲ್ಲಿ.ನಮ್ಮ ಭಾಷೆ,ಸಂಸ್ಕೃತಿ,ಪ್ರಕೃತಿ…ಇವೆಲ್ಲವು ಎಷ್ಟು ಒಳ್ಳೆದಿದ್ದು!ಬೇರೆ ದೇಶಕ್ಕೆ ಹೋಲುಸಿಯಪ್ಪಗ, “ನಮ್ಮ ಜನ್ಮಭೂಮಿಯೇ ಶೇಷ್ಠ “ಹೇಳುವ ಸತ್ಯ ಎಲ್ಲೋರಿಂಗೂ ಗೊಂತಿದ್ದು.ಆದರೆ,ನಮ್ಮ ಮನಸ್ಸಿಲ್ಲಿ ಹೆರಾಣ ಪ್ರಪಂಚಲ್ಲಿಯೇ ಸುಖ ಇಪ್ಪದು..ಹೇಳುವ ಗ್ರಹಿಕೆಯೇ ಎಲ್ಲವನ್ನೂ ಹಾಳು ಮಾಡುವದು.ನಮ್ಮ ಒಡಹುಟ್ಟಿದವರ ಎಲ್ಲಾ ಬಿಟ್ಟು ದೂರ ಹೋಗಿ ಜೀವನ ನೆಡಶುವದು ನಿಜವಾಗಿಯೂ ಭೂಷಣ ಅಲ್ಲ.ಸಂಪಾದನೆ ಮಾಡುವವಕ್ಕೆ ಎಲ್ಲಿ ಯಾದರೂ ಮಾಡ್ಲಕ್ಕು.ಕೃಷಿ ಕ್ಷೇತ್ರ,ವ್ಯಾಪಾರ ಕ್ಷೇತ್ರ, ಐ.ಟಿ.ಕ್ಷೇತ್ರ, ಶಿಕ್ಷಣ ಕ್ಷೇತ್ರ,ವೈದ್ಯಕೀಯ ಕ್ಷೇತ್ರ…ಹೀಂಗೆ ಯಾವ ವಿಧಲ್ಲಿ ಬೇಕಾದರೂ ಪೈಸೆ ಮಾಡಿ ಕೂಡಿ ಮಡಗಲಕ್ಕು.ಇದಕ್ಕೆಲ್ಲಾ ವ್ಯವಸ್ಥೆಯೂ ನಮ್ಮಲ್ಲಿಯೇ ಇಪ್ಪಗ ನಮ್ಮ ಬುದ್ಧಿವಂತಿಕೆಯ ಇನ್ನೊಂದು ದೇಶಲ್ಲಿ ಪ್ರಯೋಗ ಮಾಡೆಕ್ಕಾದ ಅಗತ್ಯ ಇಲ್ಲೆ”.ಯೇಚನೆ ಮಾಡಿಕೊಂಡೇ ಅವನ ಮುಂದಾಣ ದಾರಿಯನ್ನೂ ನಿಘಂಟು ಮಾಡಿಕೊಂಡ.”ಅಪ್ಪಂಗೆ ಆನು ಅಮೇರಿಕಲ್ಲಿ ಇದ್ದೆ ಹೇಳಿದರೆ ಅದರಷ್ಟು ಸಂತೋಷ ಬೇರೊಂದಿಲ್ಲೆ.ಅವರ ಮನಸ್ಸಿಲ್ಲಿ ಎನ್ನ ಅಮೇರಿಕ ಜೀವನವ ನಿರ್ಮಾಣ ಮಾಡೆಕ್ಕು.”ಹೇಳುವ ನಿರ್ಧಾರದೊಟ್ಟಿಂಗೆ ಅಬ್ಬೆ-ಅಪ್ಪನ ಶುಭ ಆಶೀರ್ವಾದಂಗಳ ಪಡಕ್ಕೊಂಡು ಮುಂದಡಿ ಮಡಗಿದ.

   ಅಬ್ಬೆ,ಅಪ್ಪಂಗೆ ಮಗನ ಹೆರದೇಶಕ್ಕೆ ಕಳುಹುವ ಗೌಜಿ.ಅಬ್ಬೆಗೆ ಸುಮಾರು ದಿನಂದ ತಯಾರು ಮಾಡುವದೇ ಕೆಲಸ.ತುಪ್ಪ,ಹಪ್ಪಳ,ಸೆಂಡಗೆ,ಚಕ್ಕುಲಿ,ತಂಬಿಟ್ಟುಂಡೆ,ಉಪ್ಪಿನಕಾಯಿ..ಹೀಂಗಿಪ್ಪ ತಿಂಬ ಸಾಮಾನುಗೊ ಎಲ್ಲ ಸೂಟುಕೇಸಿನೊಳ ತುಂಬಿಕೊಂಡತ್ತು.ಇದರೊಟ್ಟಿಂಗೆ ಗೆಣಮೆಣಸು, ಶುಂಠಿ, ದಶಮೂಲಾರಿಷ್ಠ, ಚ್ಯವನಪ್ರಾಶ ಲೇಹ(ಶೀತಕ್ಕೆ), ಪುನರ್ಪುಳಿ ಓಡು(ಪಿತ್ತಕ್ಕೆ).. ಹೀಂಗಿಪ್ಪ ಮದ್ದಿನ ಸಾಮಾನುಗಳ ಒಂದು ಚೀಲವೇ ಇತ್ತಿದ್ದು.ಅಪ್ಪ,ಇದ್ದ ಅಡಕ್ಕೆಯ ಪೈಸೆ,ಅಬ್ಬೆಯ ಚಿನ್ನ ಎಲ್ಲ ಸೇರುಸಿ ಮಗಂಗೆ ಹೋಪಲೆ,ಕಲಿವಲೆ ಇಪ್ಪ ವ್ಯವಸ್ಥೆ ಮಾಡಿದ.ಹೆತ್ತೋರು ಎನ್ನ ವಿದೇಶಕ್ಕೆ ಕಳುಹಲೆ ಮಾಡಿದ ಶತಪ್ರಯತ್ನವ ಕಂಡು ಗಿರೀಶಂಗೆ ಆಶ್ಚರ್ಯವೂ,ಬೇಜಾರೂ ಆತು.ಶ್ರೀಪತಿಗೆ ಮಗನ ವಿಮಾನ ಹತ್ತುಸಲೆ ಹೇಳಿ ವಿಮಾನ ನಿಲ್ದಾಣಕ್ಕೆ ಹೋಯೆಕ್ಕು ಹೇಳುವ ಆಶೆ ಇತ್ತಿದ್ದು.ಆದರೆ ಪ್ರಯಾಣ ಮಾಡುಲೆ ಆಗ ಹೇಳಿ ಡಾಕ್ಟ್ರ ಹೇಳಿದ ಕಾರಣ ಗಿರೀಶ ಒಬ್ಬನೇ ಹೋಯೆಕ್ಕಾಗಿ ಬಂತು.ಅಬ್ಬೆ-ಅಪ್ಪನ ಕಾಲಿಂಗೆ ಬಿದ್ದು ನಮಸ್ಕಾರ ಮಾಡಿಕ್ಕಿ ಮಗ ಮನೆಂದ ಹೆರಟ.

  ಶ್ರೀಪತಿಗೆ ದಿನಾಗ್ಳೂ ಮಗನ ಫೋನಿಂಗೆ ಕಾವದೇ ಕೆಲಸ.ಮೂರು ವರ್ಷಂಗಳ ಕಲಿವಿಕೆ ಮುಗುದತ್ತನ್ನೆ ಹೇಳಿ ಲೆಕ್ಕ ಹಾಕಿದ ಅಪ್ಪ.ಮಗನ ಹತ್ತರೆ ಮದುವೆಯ ಶುದ್ದಿ ಹೇಳಿದ.ಗಿರೀಶನ ಮದುವೆಯ ವಿಷಯಲ್ಲಿ ಹೆರಿಯೋರಿಂಗೆ ಪೊದು ಹುಡುಕ್ಕುವ ಕೆಲಸವೇ ಇತ್ತಿದ್ದಿಲ್ಲೆ.ಅವ ಸರಿಯಾದ ಜೋಡಿ(ಹೆಂಡತಿ)ಯ ಹುಡುಕ್ಕಿಕೊಂಡು ಅಬ್ಬೆ, ಅಪ್ಪ, ಕಳೀಯಬಾರದ್ದ ನೆಂಟರಿಷ್ಟರ ಸಮ್ಮುಖಲ್ಲಿ ಸರಳವಾಗಿ ಮದುವೆ ಕಳುಶಿದ.

ಹೀಂಗೆ ದಿನಂಗೊ,ತಿಂಗಳುಗೊ,ವರುಷಂಗೊ ಉರುಳಿಕೊಂಡು ಹತ್ತು ವರುಷ ಕಳುದತ್ತು.ವರ್ಷಕ್ಕೆ ಎರಡು ಸರ್ತಿ ಊರಿಂಗೆ ಬಂದು ಅಬ್ಬೆ,ಅಪ್ಪನ ವಿಚಾರುಸಿಕ್ಕಿ ಹೋಕು.

  ಈಗ ಶ್ರೀಪತಿಗೆ ಇನ್ನೊಂದು ಚಿಂತೆ ಸುರುವಾಯಿದು.ಮನುಷ್ಯಂಗೆ ತೃಪ್ತಿ ಹೇಳುವದೇ ಇಲ್ಲೆ.ಒಂದಲ್ಲದ್ರೆ ಒಂದು ಆಶೆ ಇದ್ದೇ ಇದ್ದು.ಮಗ ವಿದೇಶಕ್ಕೆ ಹೋದ ಮತ್ತೆ ಎಲ್ಲೋರೂ ವಿಚಾರುಸುವವೇ!ಒಟ್ಟಿಂಗೆ ಸಾವಿರ ವಿಚಾರಂಗಳ ತಲೆಗೆ ಹೊಕ್ಕುವ ಹಾಂಗೆ ಮಾಡದ್ರೆ ಅವಕ್ಕೆ ಒರಕ್ಕೇ ಬಾರ.ತೋಟದಮೂಲೆ ಶಂಕರಣ್ಣನುದೆ,ಶ್ರೀಪತಿಯುದೆ ಚಡ್ಡಿ ದೋಸ್ತಿಗೊ. ಶಂಕರಣ್ಣನ ಮಗಳು ,ಮಗ ಎಲ್ಲೋರೂ ಅಮೇರಿಕಲ್ಲಿ ಇಪ್ಪದು.ಮಗಳ ಬಾಣಂತನಕ್ಕೆ ಗೆಂಡಂದೆ ಹೆಂಡತಿಯುದೆ ಅಲ್ಲಿಗೆ ಹೋಗಿ ಎರಡು ತಿಂಗಳು ಕೂದಿಕ್ಕಿ ಬಯಿಂದವು. ಸೊಸೆಯ ಅಪ್ಪನ ಮನೆಯವಕ್ಕೆ ತಿಂಗಳುಗಟ್ಲೆ ಮನೆ ಬಿಟ್ಟು ಹೋಪಲೆ ಎಡಿಗಾಗದ್ದ ಪರಿಸ್ಥಿತಿ! ಅವರಲ್ಲಿ ನಿತ್ಯ ಪೂಜೆ, ಹಾಲುಕರೆಯಾಣ, ನಿರ್ಧಿಷ್ಟ ದಿನಕ್ಕೆ ಅಪ್ಪ ತಿಥಿ, ಅಷ್ಟಗೆ…ಇದೆಲ್ಲದರ ಮೂಲಗೆ ಹಾಕಿಕ್ಕಿ ಹೋಪದಾದರೂ ಹೇಂಗೆ? ಹಾಂಗಾಗಿ ಈ ಚಾನ್ಸುದೇ ಶಂಕರಣ್ಣಂಗೆ ಸಿಕ್ಕಿತ್ತು.ಅಲ್ಲಿಗೆ ಹೋಯಿಕ್ಕಿ ಬಂದು ಶ್ರೀಪತಿಯ ಹತ್ತರೆ ರಂಗು ಮಾಡಿ ಅಲ್ಲಿಯಾಣ ಸುಖ ಜೀವನ ಕ್ರಮಂಗಳ ಯೇಪಿಸಿ ಬಿಟ್ಟಿದ.ಮತ್ತೆ,”ನಿನ್ನ ಮಗ ಅಮೇರಿಕಕ್ಕೆ ನಿನ್ನ ಯಾವಾಗ ಕರಕ್ಕೊಂಡು ಹೋವುತ್ತನಡ?” ಹೇಳ್ತ ಚಾಲಾಕಿ ಪ್ರಶ್ನೆ!ಹೀಂಗೆ ಹೇಳುದರ ಕೇಳೀ ಕೇಳಿ ಶ್ರೀಪತಿಗೆ ಅಲ್ಲಿಗೆ ಹೋದರಕ್ಕು ಹೇಳುವ ಅತಿ ಆಶೆ ಸುರುವಾತು.ಮಗ ಕರಕ್ಕೊಂಡು ಹೋಪಲೆ ಬಪ್ಪದರನ್ನೇ ಕಾದುಕೊಂಡು ಇತ್ತಿದ್ದ ಶ್ರೀಪತಿಗೆ ಸದ್ಯದ ಪರಿಸ್ಥಿತಿ ಪೇಪರು ನೋಡಿಯಪ್ಪಗ ಗೊಂತಾತದ!!ಅಲ್ಲಿಯಾಣ ಜನಾಂಗೀಯ ದ್ವೇಷಕ್ಕೆ ಭಾರತದ ಮಕ್ಕೊ ಬಲಿಯಪ್ಪದರ ಕೇಳಿಯಪ್ಪಗ ಶ್ರೀಪತಿಗೆ ಎದೆಗೆ ಸೂಜಿ ಕುತ್ತಿದ ಹಾಂಗಾತು! ಮಗ ಹೆರದೇಶಲ್ಲಿ ಹಾಯಾಗಿದ್ದ ಹೇಳಿ ಸಂತೋಷಲ್ಲಿದ್ದ ಅಪ್ಪಂಗೆ ಎದೆ ಬೇನೆಯ ಉಪದ್ರ ಮತ್ತೆ ಬಯಿಂದೇ ಇಲ್ಲೆ.ಆದರೆ..

ಈಗ! ತಡವಲೆ ಎಡಿಯದ್ದ ಉರಿ ಎದೆಲಿ!”ಪಾರ್ವತೀ..”ಹೇಳಿಯೊಂಡು ಅಲ್ಲೇ ಬಿದ್ದ.ಗೆಂಡನ ಅವಸ್ಥೆಯ ನೋಡಿ ಹೆಂಡತಿಗೆ ಎಂತ ಮಾಡೆಕ್ಕು ಹೇಳಿ ಗೊಂತಾಯಿದಿಲ್ಲೆ. ಅಂದು ಅಲ್ಲಿಗೆ ಮಗ ಹೋಯೆಕ್ಕು ಹೇಳುವ ನೆಪಲ್ಲಿ ಸೌಖ್ಯ ಇಲ್ಲದ್ದೆ ಆತು.ಈಗ ಅಲ್ಲಿಂದ ಮಗ ಬರೆಕ್ಕು ಹೇಳುವ ಆತುರಲ್ಲಿ ಬಂದ ಸಂಕಟ!” ಅಪ್ಪದರ ತಡವಲೆ ಎಡಿಯನ್ನೆ”. ಡಾಕ್ಟ್ರ ಪರೀಕ್ಷೆ ಮಾಡಿ ಮದ್ದು ಬರದು ಕೊಟ್ಟ.”ಆದಷ್ಟು ಬೇಗ ಮಗನ ಬಪ್ಪಲೆ ಹೇಳು”ಹೇಳುವ ಒಂದೇ ಹಟ ಶ್ರೀಪತಿಗೆ.ಮಗನ ಫೋನು ಬಂದಪ್ಪಗ “ಆನೇ ಮಾತಾಡ್ತೆ”ಹೇಳಿ,ಫೋನು ಹಿಡ್ಕೊಂಡ.”ಒಂದು ಕ್ಷಣ ಅಲ್ಲಿ ನಿಲ್ಲೆಡ.ಕೂಡ್ಲೆ ಬಾ “ಅಪ್ಪನ ಉದ್ವೇಗದ ಮಾತಿಂಗೆ” ಹಾಂಗೆ ಕೂಡ್ಲೆ ಬಪ್ಪದು ಹೇಂಗೆ ಅಪ್ಪಾ.. ಇಲ್ಲಿಯಾಣ ಕೆಲಸವ ಅಷ್ಟು ಬೇಗ ಬಿಡುವದು ಹೇಂಗೆ?ಎಂತ ತೊಂದರೆ ಇಲ್ಲೆ ಇಲ್ಲಿ.ನಿಂಗೊ ಧೈರ್ಯಲ್ಲಿ ಇರಿ.”ಗಿರೀಶ ನಿಧಾನಕ್ಕೆ ಹೇಳಿದ.”ನಿನ್ನ ನೋಡದ್ರೆ ಎನಗೆ ಗುಣವೇ ಆಗ.ಇಲ್ಲಿಯೇ ಕೆಲಸ ಮಾಡ್ಲಕ್ಕು. ಹೆಚ್ಚು ಯೇಚನೆ ಮಾಡದ್ದೆ ಕೂಡ್ಲೇ ಬಾ.ಎನಗೆ ಸಂಕಟ ತಡವಲೆ ಎಡಿತ್ತಿಲ್ಲೆ.ನಮ್ಮ ಭೂಮಿಯೇ ನವಗೆ ಸಾಕು.ಆರಾರ ಗುಂಡಿಂಗೆ ನಾವು ಗುಂಡಿಗೆ ಒಡ್ಡುವದು ಎಂತ್ಸಕೆ?”ಶ್ರೀಪತಿ ಬಾಯಿ ಬಡ್ಕೊಂಡು ಮಾತಾಡಿದ.”ಅಪ್ಪನ ಮಾತು ಮುಗಿವ ಲಕ್ಷಣ ಕಾಣ್ತಿಲ್ಲೆ”ಹೇಳಿ ಅಂದಾಜು ಮಾಡಿದ ಮಗ “ಆನು ಹೆರಟಿಕ್ಕಿ ಬತ್ತೆ.ನಿಂಗೊ ಚಿಂತೆ ಮಾಡೆಡಿ”ಹೇಳಿದ.”ಹುಶ್..ಅಪ್ಪಾ..”ಹೇಳಿ ಶ್ರೀಪತಿ ನಿಟ್ಟುಸಿರು ಬಿಟ್ಟೊಂಡ.

  ಶ್ರೀಪತಿಗೆ ಇರುಳಿಡೀ ಒರಕ್ಕೇ ಬಾರ.ಮಗ ಮನೆಗೆ ಬಪ್ಪನ್ನಾರ ಯಾವುದೇ ಕೆಲಸ ಮಾಡ್ಲೂ ಮನಸ್ಸು ಬಯಿಂದಿಲ್ಲೆ.ಇದ್ದ ಒಬ್ಬನೇ ಮಗನ “ಅಮೇರಿಕಕ್ಕೆ ಹೋಗು”ಹೇಳಿ ಒತ್ತಾಯ ಮಾಡಿ ಕಳುಹಿಕೊಟ್ಟಿಕ್ಕಿ ಈಗ ಅಯ್ಯನಮಂಡೆ ಆಯಿದು.”ಕಷ್ಟ ಕಾಲಕ್ಕೆ ದೇವರ ನೆಂಪಪ್ಪದು”ಹೇಳ್ತ ಹಾಂಗೆ ಚಾಮುಂಡೇಶ್ವರಿ ದೇವಿಗೆ ಹರಕ್ಕೆ ಹೊತ್ತುಕೊಂಡ.ದುಷ್ಟ ಜೆನಂಗಳಿಂದ ರಕ್ಷಣೆ ಮಾಡೆಕ್ಕಾದರೆ ಚಾಮುಂಡಿಯೇ ಆಯೆಕ್ಕಷ್ಟೆ ಹೇಳಿ ದುರ್ಗೆಯ ಪ್ರಾರ್ಥನೆ ಮಾಡಿಯಪ್ಪದ್ದೆ ಕಾಕತಾಳೀಯದ ಹಾಂಗೆ ಗೇಟಿನ ಹತ್ತರೆ ಕಾರಿನ ಶಬ್ದ ಕೇಳಿತ್ತು.”ಅಜ್ಜಾ..,ಅಜ್ಜೀ..”ಹೇಳಿ ಓಡಿಯೊಂಡು ಬಂದ ಪುಳ್ಳಿಯಕ್ಕಳ ನೋಡಿಯಪ್ಪದ್ದೆ ಅಜ್ಜನ ಹೃದಯ ಹಗುರ ಆತು.ಮಗ,ಸೊಸೆ ಇಬ್ರು ಒಳಾಂಗೆ ಬಂದಪ್ಪಗ ಹೆರಿ ಜೀವಂಗೊಕ್ಕೆ ಹೊಸ ಹುರುಪು ಹುಟ್ಟಿಕೊಂಡತ್ತು.”ಇನ್ನು ಎಲ್ಲಿಗೂ ಹೋಪಲಿಲ್ಲೆ.ಇಲ್ಲಿಯೇ ಇಪ್ಪದು.”ಅಪ್ಪ ಸಂತೋಷಲ್ಲಿ ಹೇಳಿದ.”ಅದು ಹೇಂಗಪ್ಪದು?ಜೀವನ ಹೋಯೆಕ್ಕನ್ನೆ.ಇಂದ್ರಾಣ ದಿನಂಗಳಲ್ಲಿ ಖರ್ಚಿಗೆ ಎಷ್ಟು ಇದ್ದರೂ ಸಾಲ.ಇಲ್ಲಿಯಾಣ ಸಣ್ಣ ಉತ್ಪತ್ತಿಲಿ ಬದುಕ್ಕುವದು ಹೆಂಗಪ್ಪಾ..?”ಮಗ ನಿರಾಶೆಂದ ಹೇಳಿದ.”ದಿನಿಗೋಳಿ ಕೆಲಸ ಕೊಡ್ತೆಯೋ ಹೇಳಿದವು ಈಗ ಎಂತ ಮಾಡ್ತವೋ..?”ಸುಮಾರು ವರ್ಷ ಮೊದಲಾಣ ಶುದ್ದಿಯ ಅಪ್ಪ ಮಗನ ಹತ್ತರೆ ಕೇಳಿದ.”ಅದೆಲ್ಲ ಆಲೋಚನೆ ಮಾಡುವೋ.ನಿಂಗಳ ಅಮೇರಿಕಕ್ಕೆ ಕರಕ್ಕೊಂಡು ಹೋಗಿ ಆಯಿದಿಲ್ಲೆನ್ನೆ?”ಮಗ ಹೇಳಿಯಪ್ಪದ್ದೆ “ನೀನು ಅದರ ಯೇಚನೆ ಬಿಡು.ಎನಗೆ ಅಲ್ಲಿಗೆ ಹೋಪ ಆಶೆಯೇ ಕಡುದ್ದು!”ಅಪ್ಪನ ಮನಸ್ಸು ಬದಲಿದ್ದರ ಕಂಡು “ಒಂದು ಅಧ್ಯಾಯ ಮುಗುದತ್ತನ್ನೆ…”ಹೇಳಿ ಮಗಂಗೆ ಮನಸ್ಸಿನ ಒಳಾದಿಕೆ ಸಂತೋಷ ಆತು.

   ಕಸ್ತಲಪ್ಪಗ ಎಲ್ಲೋರು ಕೂದುಕೊಂಡು ಮಾತಾಡಿಕೊಂಡು ಇತ್ತಿದ್ದವು.ಮಕ್ಕೊ ಅವರಷ್ಟಕ್ಕೆ ಕಂಬದ ಆಟ ಆಡಿಯೊಂಡು ಬೊಬ್ಬೆ ಹಾಕಿಯೊಂಡು ಇಪ್ಪಗ ಗಿರೀಶ ಅವರ ದಿನಿಗೋಳಿದ.”ಮಕ್ಕಳೇ..ಇಲ್ಲಿ ಬನ್ನಿ.ನಾವು ಹೋಪಗ ಅಜ್ಜ,ಅಜ್ಜಿಯ ಕರಕ್ಕೊಂಡು ಹೋಪನಾ..?”ಅಪ್ಪ ಹೇಳಿಯಪ್ಪದ್ದೆ ಮಕ್ಕೊಗೆ ಭಾರೀ ಖುಷಿ ಆತು.”ಅಕ್ಕು.ಮೈಸೂರಿಲ್ಲಿ ನಿಂಗೊಗೆ ನೋಡೆಕ್ಕಾದ್ದದು ಸುಮಾರು ಇದ್ದು.ಈಗ ಎಂಗೊಗೆ ರಜೆ ಅಜ್ಜಾ..ನಿಂಗಳ ಎಲ್ಲ ಕಡೆಂಗೆ ಕರಕ್ಕೊಂಡು ಹೋವುತ್ತೆಯೋ.”ಹೇಳಿಯೊಂಡು ಅಜ್ಜಿ,ಅಜ್ಜನ ಕೈ ಹಿಡ್ಕೊಂಡು ಕೂದವು.”ಮೈಸೂರಿಂಗಾ..?ಅಲ್ಲಿ ಆರಿದ್ದವು?”ಮಗ,ಪುಳ್ಳಿಯಕ್ಕೊ ಎಂತರ ಹೇಳ್ತವು ಹೇಳುವದು ಶ್ರೀಪತಿಗೂ ಪಾರ್ವತಿಗೂ ಅರ್ಥವೇ ಆಯಿದಿಲ್ಲೆ.ಇಬ್ರು ಮೋರೆ ನೋಡಿಯೊಂಡವು.”ಅಪ್ಪಾ..ಅಬ್ಬೇ..ನಿಂಗಳ ವಿಶೇಷ ಜಾಗಗೆ ಕರಕ್ಕೊಂಡು ಹೋವುತ್ತೆ.ಹಾಂಗಾಗಿ ನಾಳಂಗೆ ನಿಂಗೊ ಬೇಗ ಹೆರಟು ರೆಡಿ ಆಯೆಕ್ಕು.”ಕುತೂಹಲಂಗಳ ಮನಸ್ಸಿಲ್ಲಿ ಮಡಗಿಕೊಂಡೇ ಅಜ್ಜ,ಅಜ್ಜಿ,ಪುಳ್ಳಿಯಕ್ಕಳೊಟ್ಟಿಂಗೆ ಕಾರಿಲ್ಲಿ ಕೂದುಕೊಂಡವು.ದಾರಿಯುದ್ದಕ್ಕೂ ಗಿರೀಶ ನಮ್ಮ ದೇಶಲ್ಲಿ ಆವುತ್ತ ಒಳ್ಳೆ ವಿಷಯಂಗಳ ವಿವರುಸಿದ.”ಭಾರತಲ್ಲಿ ಹುಟ್ಟಿದ ನಾವು ನಿಜಕ್ಕೂ ಪುಣ್ಯವಂತರು ಹೇಳಿ ಹೇಳೆಕ್ಕು.ದೇಶದ ಗಡಿಭಾಗಲ್ಲಿ ಹಗಲಿರುಳು ಜೀವದ ಆಶೆ ಬಿಟ್ಟು ಹೋರಾಡುವ ವೀರ ಸೈನಿಕರು ನಮ್ಮ ರಕ್ಷಣೆ ಮಾಡ್ತವು.ಯಾವ ರೀತಿಲಿ ಬೇಕಾದರೂ ಜೀವನ ಸೌಕರ್ಯಂಗಳ ಮಾಡಿಯೊಂಬ ಸ್ವಾತಂತ್ರ್ಯ ನವಗೆಲ್ಲೋರಿಂಗೂ ಇದ್ದು.ವಿಜ್ಞಾನ ಕ್ಷೇತ್ರಲ್ಲಿ ನಮ್ಮ ವಿಜ್ಞಾನಿಗೊ ಉನ್ನತ ಮಟ್ಟದ ಸಾಧನೆ ಮಾಡ್ತಾ ಇದ್ದವು ಹೇಳಿ ಹೆಮ್ಮೆಂದ ಹೇಳುವ ಕಾಲ ಬಯಿಂದು.ನಾವೆಲ್ಲೋರು “ನಮ್ಮ ದೇಶ,ನಮ್ಮ ಭೂಮಿ”ಹೇಳುವ ಅಭಿಮಾನಂದ ಜೀವನ ನೆಡಶಿದರೇ ದೇಶದ ಉದ್ಧಾರ ಅಕ್ಕಷ್ಟೆ.ಇದಕ್ಕೆ ನಾವೆಲ್ಲೋರೂ ಕೈ ಜೋಡುಸೆಕ್ಕು ಅಲ್ಲದೋ?”ಬೆಶಿ ನೆತ್ತರಿನ ಕಣ ಕಣಂಗಳಲ್ಲಿಯೂ ಉಕ್ಕಿ ಹರಿವ ದೇಶಾಭಿಮಾನ ಕಂಡು ಶ್ರೀಪತಿಗೆ ಜ್ಞಾನೋದಯ ಆತು.

  ವಿಶಾಲವಾಗಿಪ್ಪ ಜಾಗೆಲಿ ಚೆಂದದ ಮನೆ.ಎದುರಿಂಗೆ ಘಮ್ಮನೆ ಪರಿಮ್ಮಳ ಬಪ್ಪ ಮಲ್ಲಿಗೆ ಬಳ್ಳಿಯ ಸ್ವಾಗತ ಕಮಾನು.ಬಲದ ಹೊಡೆಲಿ ತೊಳಶಿ, ಸಾಂಬ್ರಾಣಿ, ಕಾಮಕಸ್ತೂರಿ, ಉರಗೆ, ಕರಿಕ್ಕೆ,ಅಮೃತ ಬಳ್ಳಿ…ಹೀಂಗಿಪ್ಪ ಮದ್ದಿಂಗೆ ಬೇಕಪ್ಪ ಸೆಸಿಗೊ ಒಂದಕ್ಕೊಂದು ಅಪ್ಪಿಕೊಂಡು ಇತ್ತಿದ್ದು. ಎಡದ ಹೊಡೆಲಿ ಬಸಳೆ, ತೊಂಡೆಕಾಯಿ, ಹರುವೆ, ಬದನೆ, ಅಳತ್ತೊಂಡೆ, ಕುಂಬಳಕಾಯಿ..ಹೀಂಗಿಪ್ಪ ನೆಟ್ಟಿಕಾಯಿ ಬಳ್ಳಿಗೊ ಹೂಗು,ಕಾಯಿಯೊಟ್ಟಿಂಗೆ ಬಗ್ಗಿಯೊಂಡು ನಮಸ್ಕಾರ ಮಾಡ್ತ ಹಾಂಗೆ ಇತ್ತಿದ್ದು.ಸುತ್ತಲೂ ಎತ್ತರದ ಕಲ್ಲು ಕಟ್ಟಿದ ಗೋಡೆ.ಅದರ ಮೇಲೆ ಅನಾನಸಿನ(ಪರಂಗಿಚೆಕ್ಕೆ)ಸೆಸಿಗೊ ನಕ್ಷತ್ರದ ಹಾಂಗೆ ಇದ್ದು,ಇಡೀ ಮನೆಯ ಅಲಂಕಾರ ಮಾಡಿದ ಹಾಂಗೆ ಕಂಡುಕೊಂಡು ಇತ್ತಿದ್ದು.ಶ್ರೀಪತಿಯು,ಪಾರ್ವತಿಯು ನೊಡಿದಲ್ಲೇ ಬಾಕಿ!”ಅತ್ತೆ…,ಮಾವಾ…ಬನ್ನಿ ಒಳಾಂಗೆ”ಸೊಸೆ ಕೂಪಲೆ ಹೇಳಿತ್ತು.ಹೆಗಲಿಂಗೆ ಶಾಲು ಹಾಕಿದ,ಜೆನಿವಾರ ಇಪ್ಪ ಹದ ಪ್ರಾಯದವ ತಟ್ಟೆಲಿ ಆಸರಿಂಗೆ ತಂದು ಕೊಟ್ಟ.”ಇಲ್ಲಿ ನಿಂಗೊ ರಜ್ಜ ಹೊತ್ತು ವಿಶ್ರಾಂತಿ ತೆಕ್ಕೊಳ್ಳಿ.”ಮಗ ದೊಡ್ಡ ಉಗ್ರಾಣದ ಬಾಗಿಲು ತೆಗದು ಹೇಳಿದ.ದೊಡ್ಡ ಮಂಚಲ್ಲಿ ದಪ್ಪ ಹಾಸಿಗೆ.”ಅರಮನೆ ಹಾಂಗಿಪ್ಪ ಈ ಮನೆಗೆ ಬಾಡಿಗೆ ವಿಪರೀತ ಇಕ್ಕು.”ಗೆಂಡನು,ಹೆಂಡತಿಯು ಮಾತಾಡಿಯೊಂಡವು.

  ಕಸ್ತಲಪ್ಪಗ ಐದು ಗಂಟಗೆ ಎಲ್ಲೋರೂ ತೋಟ ಸುತ್ತಿಕ್ಕಿ ಬಪ್ಪಲೆ ಹೆರಟವು. ಕಣ್ಣೆವೆ ಎತ್ತದ್ದಷ್ಟು ಜಾಗೆಲಿ ಬಾಳೆ, ತೆಂಗು, ಅಡಕ್ಕೆ. ಗೆಣಮೆಣಸು, ಹಲಸು, ಮಾವು, ಚಿಕ್ಕು, ಪೇರಳೆ..ಹೇಳ್ತ ಹಾಂಗೆ ಇಲ್ಲಿ ಇಲ್ಲದ್ದ ಅಲ ಫಲ ಇಲ್ಲೆ.ಕಣ್ಣಿಂಗೆ ಸೊಂಪಾಗಿ ಕಾಂಬ ಕೃಷಿ ಭೂಮಿಯ ಕಂಡು ಹೆರಿಯೋರಿಂಗೆ ಮನಸ್ಸು ಹಿರಿ ಹಿರಿ ಹಿಗ್ಗಿತ್ತು.”ಹೀಂಗೆ ನಮ್ಮ ತೋಟವೂ ಇತ್ತಿದ್ದರೆ..?”ಹೇಳುವ ಆಲೋಚನೆ ಆತು.”ನಿಂಗೊಗೆ ಹೇಂಗನುಸುತ್ತು..?”ಮಗ ಕೇಳಿಯಪ್ಪಗ “ಭಾರೀ ಒಳ್ಳೆ ಜಾಗೆ.ಇದರ ಕ್ರಯಕ್ಕೆ ತೆಕ್ಕೊಳ್ಳೆಕ್ಕಾದರೆ ಸಾಧಾರಣಕ್ಕೆ ಪೂರೈಶ!ಶ್ರೀಪತಿ ಮಗನ ಹತ್ತರೆ ಹೇಳಿದ.”ತೆಕ್ಕೊಂಬಲೂ ಇಲ್ಲೆ.ಕೊಡ್ಲೂ ಇಲ್ಲೆ.ಇದೆಲ್ಲ ನಮ್ಮದೇ ಭೂಮಿ ಅಪ್ಪಾ..”ಮಗ ನೆಗೆ ಮಾಡಿಯೊಂಡು ಹೇಳಿಯಪ್ಪಗ ,ಶ್ರೀಪತಿಗೆ ಆಶ್ಚರ್ಯ,ಸಂತೋಷ ಒಟ್ಟಿಂಗೇ ಆತು.”ಇಷ್ಟೆಲ್ಲಾ ವ್ಯವಸ್ಥೆ ಮಾಡುಲೆ ನಿನಗೆ ಆರು ಸಕಾಯ ಮಾಡಿದವು?”ಅಪ್ಪನ ಕುತೂಹಲದ ಪ್ರಶ್ನೆಗೆ ಮಗ ಸಂಪೂರ್ಣ ವಿವರಣೆ ನೀಡಿದ.

   “ಇದು ಒಂದೆರಡು ದಿನದ ಶ್ರಮ ಅಲ್ಲ.ಹತ್ತು ವರ್ಷದ ಎನ್ನ ದುಡಿಮೆಯ ಫಲವ ಇಲ್ಲಿಗೆ ಹಾಕಿದ್ದೆ. ಆನು ಅಮೇರಿಕಕ್ಕೆ ಹೋಪದು ಹೇಳಿ ನಿಂಗಳ ಹತ್ತರೆ ಹೇಳಿಕ್ಕಿ ಬಂದದು ಇಲ್ಲಿಗೆ.”ನಂಜನಗೂಡು”ಹೇಳಿ ಇಲ್ಲಿಯಾಣ ಹೆಸರು.ಇಲ್ಲಿಂದ ಅರ್ಧ ಗಂಟೆಯ ದಾರಿ ಎನಗೆ ಕಾಲೇಜಿಂಗೆ ಹೋಪಲೆ.ಮೈಸೂರಿನ ಎಂಜಿನಿಯರಿಂಗ್ ಕಾಲೇಜಿಲ್ಲಿ ಆನು ಮಕ್ಕೊಗೆ ಪಾಠ ಮಾಡುವ ಕೆಲಸ ಮಾಡ್ತಾ ಇದ್ದೆ.ಎನ್ನ ಹೆಂಡತಿ ದಿನಲ್ಲಿ ಒಂದು ಗಂಟೆ ಹೊತ್ತು ಇಲ್ಲೇ ಹತ್ತರಾಣವಕ್ಕೆ ಸಂಗೀತ ಪಾಠ ಹೇಳಿ ಕೊಡ್ತು.ಇಡೀ ಜಮೀನಿನ ಸಂಪೂರ್ಣ ಜವಾಬ್ದಾರಿ ಎನ್ನ ಹೆಂಡತಿ “ಭಾಗೀರಥಿ”ದು. ಕಷ್ಟ ಅಪ್ಪದಕ್ಕೆ ಅಡಿಗೆ ಭಟ್ಟನ ಮಾಡಿಕೊಂಡಿದೆ.ತಿಂಗಳಿಂಗೆ ಒಂದರಿ ಎಲ್ಲೋರು ಬೇರೆ ಬೇರೆ ಪ್ರೇಕ್ಷಣೀಯ ಜಾಗಗೆ ಹೋವುತ್ತೆಯೊ.ವರ್ಷಕ್ಕೆ ಒಂದು ಸರ್ತಿ ಜರ್ಮನಿ,ಜಪಾನ್,ಶ್ರೀಲಂಕಾ..ಹೀಂಗಿಪ್ಪ ಹೆರಾಣ ದೇಶಕ್ಕೆ ಹೋಗಿ

ಅಲ್ಲಿಯಾಣ ಜೆನಂಗೊ ಹೇಂಗೆ ಜೀವನ ನೆಡಶುತ್ತವು ಹೇಳುದರ ತಿಳುಕ್ಕೊಂಬ ಪ್ರಯತ್ನ. ಹೇಳಿದ ಹಾಂಗೆ, ಇನ್ನಾಣ ವರ್ಷ ಅಜ್ಜ, ಅಜ್ಜಿಯೊಟ್ಟಿಂಗೆ ನಮ್ಮ ವಿದೇಶ ಪ್ರಯಾಣ ಅಮೇರಿಕಕ್ಕೆ!ಆಗದಾ..ಅಪ್ಪಾ..?”ಅಪ್ಪ ನಿಟ್ಟುಸಿರು ಬಿಟ್ಟ.“ನಿನ್ನ ಸಾಧನೆ ಮೆಚ್ಚೆಕ್ಕಾದ್ದದೆ. ಎನ್ನ ಕಣ್ಣೊಡಶಿದೆ ಮಗನೇ..”ಹೇಳಿ ಗಿರೀಶನ ಅಪ್ಪಿ ಹಿಡ್ಕೊಂಡ.” ಸಣ್ಣಾದಿಪ್ಪಗ ಕಲ್ತ ವಿದ್ಯೆಯ ಪ್ರಭಾವ ಇದು.ಅಬ್ಬೆ ದಿನಾಗ್ಳೂ ದೇಶಭಕ್ತಿಯ ಕಥೆಗಳ ಹೇಳಿಕೊಂಡಿತ್ತಿದ್ದವು. ಎನಗೆ ಕಥೆ ಪುಸ್ತಕಲ್ಲಿ ಇಪ್ಪ ಆಸಕ್ತಿಯ ಕಂಡು ನಿಂಗೊ ತರತರದ ಪುಸ್ತಕಗಳ ತಂದು ಕೊಟ್ಟು,ಮನಸ್ಸಿಲ್ಲಿ ಇಪ್ಪ ದೇಶಪ್ರೇಮವ ಹೆಚ್ಚುವ ಹಾಂಗೆ ಮಾಡಿದ್ದಿ.ಇದೆಲ್ಲಾ ನಿಂಗಳ ಕೊಡುಗೆಯೇ.”ಗಿರೀಶ ಅಬ್ಬೆ-ಅಪ್ಪನ ಕಾಲು ಮುಟ್ಟಿ ನಮಸ್ಕಾರ ಮಾಡಿದ.”ಎಂಗಳ ಊರಿಂಗೆ ಯಾವಗ ಕರಕ್ಕೊಂಡು ಹೋವುತ್ತೆ?”ಅಪ್ಪನ ಮಾತು ಕೇಳಿ ಮಗಂಗೆ ಆಶ್ಚರ್ಯ ಆತು. “ಇದು ನಿಂಗಳದ್ದೇ ಮನೆ. ಎಂಗಳ ಒಟ್ಟಿಂಗೆ ನಿಂಗಳೂ ಇರೆಕ್ಕು..ಹೇಳುವದು ಎಂಗಳ ಅಭಿಪ್ರಾಯ.”ಮಗ,ಸೊಸೆ ಇಬ್ರೂ ಹೇಳಿದವು.”ಅದಕ್ಕೆಲ್ಲ ಕಾಲ ಕೂಡಿ ಬಯಿಂದಿಲ್ಲೆ.ಎನ್ನ ಕೈ,ಕಾಲು ಗಟ್ಟಿ ಇಪ್ಪನ್ನಾರ ಹುಟ್ಟೂರಿಲ್ಲಿಯೇ ಜೀವನ ನೆಡಶುವ ಆಶೆ.” ಶ್ರೀಪತಿ ಒಳ್ಳೆ ಉತ್ಸಾಹಲ್ಲಿಯೇ ಹೇಳಿದ. “ನಿಂಗಳ ಅಭಿಪ್ರಾಯಕ್ಕೆ ಆನು ಏವತ್ತೂ ಅಡ್ಡಿ ಮಾಡ್ತಿಲ್ಲೆ.” ಹೇಳಿಕ್ಕಿ,ಸಣ್ಣ ಕೈಚೀಲವ ತಂದು ಅಪ್ಪಂಗೆ ಕೊಟ್ಟ. “ನಿಂಗೊ ಅಂದು ಅಮೇರಿಕಕ್ಕೆ ಹೋಪಲೆ ಹೇಳಿ ನಿಂಗಳ ಸರ್ವಸ್ವವನ್ನೂ ಎನಗೆ ಕೊಟ್ಟ ಸಂಪತ್ತು. ಇಂದು ನಿಂಗೊಗೆ ಅಗತ್ಯವಾಗಿ ಬೇಕಪ್ಪದು. ಕೃಷಿ ಭೂಮಿಯ ಸಂಪನ್ನಗೊಳುಶೆಕ್ಕಾದರೆ ಖರ್ಚಿಗೆ ಬೇಕನ್ನೆ.”ಮಗನ ಮಾತುಗೊ ಅಪ್ಪಂಗೆ ಸರಿ ಕಂಡತ್ತು. ಹೃದಯ ತುಂಬಿ ಬಂತು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿಯ ದಿವ್ಯ ಸನ್ನಿಧಿಲಿ,ಸಂತೃಪ್ತ ಮನಸ್ಸಿಲ್ಲಿ ಶ್ರೀಪತಿ ಹೊತ್ತುಕೊಂಡ ಹರಕ್ಕೆಯ ಪೂರೈಶಿದ.ಹುಟ್ಟಿದ ದೇಶದ ಮಹತ್ವ ಗೊಂತಾಗಿ ಪರಿವರ್ತನೆ ಹೊಂದಿ ಗೌರವಾನ್ವಿತ ವ್ಯಕ್ತಿ ಆಗಿ ಬಾಳಿದ.“ಹೆರಿಯೋರಿಂದ ಕಿರಿಯವು ಕಲಿವದು”ಹೇಳುವ ಲೋಕರೂಢಿ ಇದ್ದರೂ,ಕೆಲವು ಸಂದರ್ಭಂಗಳಲ್ಲಿ ವಿಷಯಂಗಳ ಕಿರಿಯೋರ ಹತ್ತರಂದ ಹೆರಿಯೋರು ಕಲಿಯೆಕ್ಕಾವುತ್ತು.. ಹೇಳುದರ ಶ್ರೀಪತಿ ಅರ‍್ತುಕೊಂಡ.

         ~~~***~~~~

ವಿಜಯಲಕ್ಷ್ಮಿ.ಕಟ್ಟದಮೂಲೆ.

17 thoughts on “ದೇಶ ಭಕ್ತಿ-೨೦೧೭ರ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.

  1. ಕಥೆ ತುಂಬಾ ಲಾಯ್ಕ ಆಯಿದು ಅಕ್ಕಾ..ಅಪ್ಪಂಗೆ ವಿದೇಶದ ವ್ಯಾಮೋಹ ಇದ್ದರೂ ಅಕೇರಿಗೆ ಬದಲಾದವನ್ನೇ.ಅಷ್ಟು ಸಮಯ ಆದರೂ ಪುಳ್ಳಿಯಕ್ಕಳ ಬಾಯಿಂದ ಕೂಡ ಸತ್ಯ ಗೊಂತಾಗದ್ದದು ವಿಶೇಷ. ನಿರೂಪಣೆ ,ಭಾಷಾ ಶೈಲಿ ತುಂಬಾ ಇಷ್ಟಾತು..ಪ್ರಥಮ ಬಹುಮಾನಕ್ಕೆ ನಿಜವಾಗಿಯೂ ಅರ್ಹ ಕತೆ ಇದು.ಅಭಿನಂದನೆ..

  2. ಒಳ್ಳೆ ಕತೆ.ಅಮೇರಿಕ ಹೇಳಿ ನಂಜನಗೂಡಿಲಿ ನೆಲೆಸಿದ್ದು ಊರಿಲಿ ಆರಿಂಗೂ ಗೊಂತಾಗದ್ದೆ ಹೋದ್ದದು ರಜಾ ಅಸಹಜವಾಗಿ ಕಂಡರೂ ಕತೆಯ ತಿರುಳು ಒಳ್ಳೆದಾಯಿದು.

  3. ಕಾನಕಲ್ಲಟೆ ಬಳ್ಳಿ ಏಕೆ ನೆಟ್ಟಿದ್ದಾಯಿಲ್ಲೆಯೋ?

  4. ವಿಜಯಕ್ಕ, ಗಾದೆ ಒಳ್ಳೆದಿದ್ದು. ಎನ್ನ ಅತ್ತೆಯ ಅಪ್ಪ ಹೇದ ಹಾಂಗೆ, ಹೆಚ್ಚು ಬರೆದವನಲ್ಲ, ಮೆಚ್ಚಿ ಸಲು ಬರದಿಲ್ಲ. ತಿಡ್ಡಿ ತೀದಿ ಬರೆವೆ.ನಿತ್ಯ ನೂತನವಾದ ನಿನ್ನ ಗಾದಗೆ ಸುಸ್ವಾಗತ ಹೇದು ಹೇಳಲಕ್ಕು. ಶಿವರಾಮ ಸ್ವಾಗತ ಮಾಡಿ ದ್ದ.

    1. ಶಂಕರಣ್ಣ, ನಿಂಗೊ ಗಾದೆ ಓದಿದ್ದೆಲ್ಲಿ?, ಅದಕ್ಕೆ ರಿಪ್ಲೈ ಕೊಡುವದೆಲ್ಲಿ?. ತೊಂದರೆ ಇಲ್ಲೆ ಹೇಳುವೊಂ ಎನಗೆ ಅರ್ಥಾತು.

      1. ಆನು ಅದನ್ನೇ ಹೇಳೆಕ್ಕು ಹೇದು ಗ್ರೇಶಿಯೊಂಡಿತ್ತಿದ್ದೆ.

  5. ಓದುವವು,ಪ್ರೋತ್ಸಾಹಿಸುವವು ಇಲ್ಲದ್ರೆ, ಏವದೇ ಸಾಹಿತ್ಯ.ಅಡಿಗ್ಗೆ ಉಪಯೋಗಾಗದ್ದ ಅಕ್ಕಿ ಹಾಂಗೆ!. ನಮ್ಮ ಕೊಡಗಿನಗೌರಮ್ಮ ಕಥಾಸ್ಪರ್ಧೆಯ, ಹವ್ಯಕ ಭಾಷೆಯ, ಹಾಂಗೇ ಬಹುಮಾನ ಪಡಕ್ಕೊಂಡ ಕಥೆಯ, ಓದಿದ, ಇಲ್ಲಿ ಒಪ್ಪಕೊಟ್ಟ ಎಲ್ಲಾ ಸಹೃದಯರಿಂಗೂ ಎನ್ನ ಪ್ರೀತಿಪೂರ್ವಕ ಧನ್ಯವಾದಂಗೊ.

  6. ಕಥೆ ತುಂಬಾ ಲಾಯಕಿತ್ತು. ಅಪ್ಪಂಗಿಲ್ಲದ್ದ ದೇಶ ಪ್ರೇಮ ಮಗನಲ್ಲಿ ಕಂಡು ಬಂದದು ಆಶ್ಚರ್ಯವೇ ಆತು. ಕಡೇಂಗೆ ಕತೆಲಿ ಬಂದ ತಿರುಗಾಸುದೆ ಕೊಶಿ ಕೊಟ್ಟತ್ತು. ಕತೆ ಒಳ್ಳೆ ಓದುಸೆಂಡು ಹೋವ್ತು. ಶೈಲಿಯುದೆ ಲಾಯಕಿದ್ದು. ಬಹುಮಾನ ಪಡದ ಕಟ್ಟದ ಮೂಲೆ ಅಕ್ಕಂಗೆ ಅಭಿನಂದನೆಗೊ.

    1. ಕೂಲಂಕಷವಾಗಿ ಅವಲೋಕನ ಮಾಡಿ ಅಭಿನಂದಿಸಿ ಪ್ರೋತ್ಸಾಹಿಸಿದ ಬೊಳುಂಬು ಗೋಪಾಲಣ್ಣಂಗೆ ಧನ್ಯವಾದಂಗೊ.

      1. ಈ ಕಥೇಲಿ ಎಪುಸು ಹೇದರೆ ಅಲ್ಲಿಯಾಣ ಕ್ರಮಂಗಳ ಬಗ್ಗೆ ವಿವರಣೆ ಕೊಡುದು ಹೇದು helalakkallada

  7. ಹೆರದೇಶದ ವ್ಯಾಮೋಹ ಇಪ್ಪ ಅಪ್ಪ, ಅದಕ್ಕೆ ಪೂರಕವಾಗಿತ್ತಿದ್ದ ಅವರ ಪರಿಸರ, ದೇಶಭಕ್ತಿಯ ಮೈಗೂಡಿಸಿದ ಮಗ, ಎಲ್ಲವೂ ತುಂಬಾ ಚೆಂದಕೆ ನಿರೂಪಣೆಗೊಂಡಿದು.
    ಅಭಿನಂದನೆಗೊ ಲೇಖಕಿ ಕಟ್ಟದಮೂಲೆ ಅಕ್ಕಂಗೆ

    1. ವಿಮರ್ಶಾತ್ಮಕವಾಗಿ ಪ್ರತಿಕ್ರಯಿಸಿದ ಶರ್ಮಣ್ಣ೦ಗೆ ಮನ ತುಂಬಿದ ಕೃತಜ್ಞತೆಗೊ.

    2. ಶರ್ಮಪ್ಪಚ್ಚಿ, ವಾಟ್ಸ್ ಅಪ್ಪಿಲ್ಲಿ ಬಪ್ಪ ಮನಮೋಹನಣ್ಣ ಬನಾರಿಯವರ ಲೇಖನಂಗೊ ನಮ್ಮ ಬೈಲಿಂಗು ಬಂದರೆ ಲಾಯಕಕ್ಕು. ಅವು ಬರದ ಶುದ್ದಿಗಳ ಸಂಗ್ರಹವು ಮಾಡಿದ ಹಾಂಗಾವ್ತು. ಎಂತ ಹೇಳ್ತಿ. ಎಡಿಗಾರೆ ಪ್ರಯತ್ನ ಮಾಡಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×