Oppanna.com

ಕೊಡಗಿನಗೌರಮ್ಮ ಕಥಾಸ್ಪರ್ಧೆಯ 2013 ನೇ ಸಾಲಿನ ತೃತೀಯ ಬಹುಮಾನ

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   23/03/2014    14 ಒಪ್ಪಂಗೊ

ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾ ಮಂಡಲ ಸಹಯೋಗಲ್ಲಿ ಅಖಿಲ ಭಾರತ ಮಟ್ಟದ ವ್ಯಾಪ್ತಿಲಿ  ಪ್ರತಿವರ್ಷ ನಡದು ಬಪ್ಪ ಕಥಾಸ್ಪರ್ಧೆಯ 2013 ನೇ ಸಾಲಿನ  ತೃತೀಯ  ಬಹುಮಾನ  ನಮ್ಮ ಡಾ| ಲಕ್ಶ್ಮಿ ಜೆ ಪ್ರಸಾದ್ ಬರದ ಹೊಂಗಿರಣ ಕ್ಕೆ ಬಯಿಂದು.
ಬೆಳ್ಳಾರೆ ಪದವಿಪೂರ್ವ ಕಾಲೇಜಿಲ್ಲಿ ಉಪನ್ಯಾಸಕಿಯಾಗಿಪ್ಪ ಡಾ! ಲಕ್ಶ್ಮಿ ಒಳ್ಳೆ ಸಾಹಿತ್ಯ ಸಂಶೋಧಕಿಯೂ ಅಪ್ಪು.
ಸಂಸ್ಕೃತ  ಕನ್ನಡ, ಹಿಂದಿ ಈ ಮೂರರಲ್ಲೂ ಎಮ್.ಎ. ಮಾಡಿ, ಸಂಸ್ಕೃತಲ್ಲಿ  ಪ್ರಥಮ  ರೇಂಕ್ ಪಡದ್ದವು. ಇಪ್ಪತ್ತು ಕೃತಿಗಳನ್ನೂ ಪ್ರಕಟ ಮಾಡಿದ್ದವು.
ಇವಕ್ಕೆ ಮಹಿಳಾರತ್ನ, ಕರ್ನಾಟಕ ವಿಭೂಷಣ, ಕಲಾಜ್ಯೋತಿ, ಕಾವ್ಯಶ್ರೀ  ಹೀಂಗಿದ್ದ ಪುರಸ್ಕಾರಂಗಳೂ ಬಯಿಂದು.
ಲಕ್ಶ್ಮಿಗೆ ಅಭಿನಂದನಗೊ
ವಿಜಯತ್ತೆ
ಸಂಚಾಲಕಿ
ಕೊಡಗಿನಗೌರಮ್ಮ ಕಥಾಸ್ಪರ್ಧೆ
~~~

ಹೊಂಗಿರಣ

ಗಂಟೆ ನೋಡಿದೆ, ಹೊತ್ತಪ್ಪಗ ಅರೂವರೆ ತೋರುಸುತ್ತಾ ಇತ್ತು ವಾಚು “.ಇನ್ನೊಳುದೋರ ನಾಳೆ ಬಪ್ಪಲೆ ಹೇಳು “ ಹೇಳಿ ಹೇಳಿದೆ .ಹೆರ ಹೋಗಿ ಒಳ ಬಂದ ಪ್ಯೂನ್  ರಾಮ ಲಿಂಗ “ಮೇಡಂ ಇನ್ನು ಒಬ್ಬ ಮಾತ್ರ ಒಳುದ್ದ ,ಒಳ ಕಳುಸಕ್ಕ ,ನಾಳೆ ಬಪ್ಪಲೆ ಹೇಳಕ್ಕ ?ಹೇಳಿ ಕೇಳಿದ .ದೊಡ್ಡಕ್ಕೆ ಉಸುರೆಳದು ಆ ಕಡೆ ಈ ಕಡೆ ನೋಡಿದೆ .ಆಫೀಸು ಇಡೀ ಪ್ರಶಾಂತ ವಾಗಿದ್ದು .ಬಹುಶ ಕೆಲಸಗಾರರೆಲ್ಲ ಮನೆಗೆ ಹೋಗಿರೆಕ್ಕು ,ಅವರ ಸಮಯ ಕಳುದ್ದು . ಮ್ಯಾನೇಜರ್ ಆಗಿದ್ದ  ಅಚ್ಯುತನ್ ಇದ್ದಕಿದ್ದ ಹಾಂಗೆ ರಾಜೀನಾಮೆ ಕೊಟ್ಟು ಎಂಗಳ ಕಂಪನಿಗೆ ದಾಯಾದಿಗಳ ಹಾಂಗೆ   ಹೊಣಕ್ಕೊಂಡು ಇಪ್ಪ ಸಮಯ ಸಾಫ್ಟ್ ವೇರಿಂಗೆ ಸೇರಿದ ಕಾರಣ ಅವನ ಸ್ಥಾನಕ್ಕೆ ಯೋಗ್ಯರ ಆಯ್ಕೆ ಮಾಡಿ ತೆಕ್ಕೊಂಬದು ಅನಿವಾರ್ಯ ಆತು . ಈ ಸರ್ತಿ ಸಣ್ಣ ಪ್ರಾಯದ  ಚುರುಕಿನ ಮಾಣಿ ಅಥವಾ ಕೂಸಿನ ಅಆಯ್ಕೆ ಮಾಡುದು ಹೇಳಿ ನಿರ್ಧಾರ ಮಾಡಿ ಅರ್ಜಿ ದೆನಿಗೇಳಿತ್ತಿದೆಯ .ಸಾಪ್(sap) ಟ್ರೈನಿಂಗ್ ಕಂಪನಿಗೊಕ್ಕೆ ಸಾಫ್ಟ್  ಮೇಟಿರಿಯಲ್  ಸಪ್ಪ್ಲೈ  ಮಾಡುವ ಎಂಗಳ “ದಯಾ ಸಾಫ್ಟ್ವೇರ್ ಸೊಲ್ಯುಶನ್  ಲಿಮಿಟೆಡ್”  ಕಂಪನಿಗೆ ಸಾಕಷ್ಟು ಒಳ್ಳೆ ಹೆಸರಿದ್ದು .ಹಾಂಗಾಗಿ ಸುಮಾರು ೫೦೦ ಜನಂಗ ಅರ್ಜಿ ಹಾಕಿದ್ದವು ..ಅದರಲ್ಲಿ ಯೋಗ್ಯ ಅನ್ನಿಸಿದ 50 ಜನಂಗೊಕ್ಕೆಕ್ಕೆ  ಲಿಖಿತ ಪರೀಕ್ಷೆ ಕೊಟ್ಟು ಅದರಲ್ಲಿ ಒಳ್ಳೆದು ಬರದ 15  ಜನರ ಸಂದರ್ಶನಕ್ಕೆ  ಬಪ್ಪಲೆ ಹೇಳಿತ್ತಿದೆಯ.

ಉದಿಯಪ್ಪಗಂದ ಸಂದರ್ಶನ ಮಾಡಿ ಮಾಡಿ ಸಾಕಾಗಿ ಹೋಗಿತ್ತು ,ಹೆಂಗೋ ಇನ್ನೊಬ್ಬ ಮಾತ್ರ ಅನ್ನೆ ,ಅವಂದೂ ಮುಗಿಸಿ ಬಿಡುವ ಹೇಳಿ ಅವನ ಒಳ ಬಪ್ಪಲೆ ಹೇಳಿದೆ.ಎಲ್ಲರ  ಹಾಂಗೆ ಅವ (!) ಕೂಡಾ ವಿಶ್ ಮಾಡಿ ಕೂದ .ಅವನ ಸರ್ಟಿಫಿಕೆಟ್ ಗಳ ಎಲ್ಲ ನೋಡಿದೆ, ಎಲ್ಲ ಸರಿಯಾಗಿಯೇ ಇತ್ತು ಎಸ್ ಎಸ್ ಎಲ್ ಸಿ ಇಂದ ಹಿಡುದು  ಎಂಜಿನೀರಿಂಗ್ ತನಕ ಎಲ್ಲ ಹಂತಂಗಳಲ್ಲಿಯೂ   ರೇನ್ಕು ತೆಗದ್ದ ,ತೊಂದರೆ ಇಲ್ಲೆ ಮಾಣಿ ,ಬುದ್ದ್ಧಿವಂತ ಹೇಳಿ ಅನ್ಸಿತ್ತು! .ಅವಂಗೆ ಸುಮಾರು 26-27   ವರ್ಷ ಆದಿಕ್ಕು. ಮೋರೆಲಿ ಕಂಡೂ ಕಾಣದ್ದ ಹಾಂಗೆ ಇಪ್ಪ ತೆಳು ಸಣ್ಣ ಮೀಸೆ ,ಉರುಟು ಮೋರೆ ಸಣ್ಣ ಸಣ್ಣ ಬೆಳಿ ಹಲ್ಲುಗ ಒಳ್ಳೆ ಚೆಂದದ  ಮಾಣಿ ! ಕಣ್ಣಿಂಗೆ ಹಾಕಿದ ಕನ್ನಡಕದೆಡೆಲಿ ಕಣ್ಣಿನ ಭಾವನೆಗೆಲ್ಲ  ಹುಗ್ಗಿ ಕೂಯ್ದವು ,ಕಪ್ಪು ಪ್ಯಾಂಟು ,ಬೂದಿ ಬಣ್ಣದ ಫುಲ್ ಕೈ ಅಂಗಿ ಮೇಲೆ ಒಂದು ಕೋಟು ಟೈ ಕಟ್ಟಿ ಕೂದ ಪೋಸು ಎಂತಕೋ ಕೂಸಿನ ಹಾಂಗೆ ಕಾಣುತ್ತಾ ಇತ್ತು. ರಜ್ಜ ಉಬ್ಬಿದ ಎದೆ  ತೊಡೆಗ ಅವಂಗೆ ರಜ್ಜ ಕೂಸುಗಳ ನೋಟ   ಕೊಟ್ಟಿತ್ತಿದವು! .ಇನ್ನೊಂದರಿ ಅವನ ಅಪ್ಲಿಕೇಶನ್ ನೋಡಿದೆ .ಹೆಸರು ಕಿರಣ್  ,ಅಪ್ಪನ ಹೆಸರಿನ ಮುಂದೆ  ಎಂತ ಬರದ್ದಾ ಇಲ್ಲೆ .ಅಬ್ಬೆ ಹೆಸರು ವೆಂಕಟ ಲಕ್ಷ್ಮಮ್ಮ ಹೇಳಿ ಇತ್ತು. ಕೂಸ ಮಾಣಿಯಾ ಹೇಳಿಯೂ ಬರದ್ದಾ ಇಲ್ಲೆ ! .ಹಾಂಗಾಗಿ ಮೊದಲಿಲಿಂಗೆ  ಅಬ್ಬೆ ಅಪ್ಪನ ಬಗ್ಗೆ ಕೇಳಿದೆ .ಅಂಬಗ ಅವ ಹೇಳಿದ್ದಿಷ್ಟು !”ಅವ ಒಬ್ಬ ಅನಾಥ ಮಾಣಿ ಅಡ ,ಯಾರೋ ತಂದು ಊರಿನ ಗೋಳಿ ಮರದ ಹತ್ತರೆ ಬಿಟ್ಟು ಹೋದ ಎರಡು  ತಿಂಗಳ ಹಿಳ್ಳೆಯ ಮಕ್ಕ ಇಲ್ಲದ್ದ ಗೆಂಡ ಸತ್ತ ಹೆಮ್ಮಕ್ಕ ವೆಂಕಟ ಲಕ್ಷ್ಮಮ್ಮ ಕರುಣೆಲಿ ಹೆರ್ಕಿ ತಂದು ಪ್ರೀತಿಲಿ  ಸಾಂಕಿ ದೊಡ್ಡ ಮಾಡಿದ್ದಡ.ಬಡಪ್ಪತ್ತು ಇದ್ದರೂ ಕೂಡ ಆರಾರಿಂದ ಸಹಾಯ ಪಡದು ಸ್ಕಾಲರ್ಷಿಪ್ ಪಡದು ಎಂಜಿನೀರಿಂಗ್ ಓದಿ ನಂತರ ಎಂ ಬಿ ಎ ಮಾಡಿದ್ದ .ಅದು ಸರಿ ಲಿಂಗ ಸೂಚಿ ಕಾಲಂ ಎಂತಕೆ ಕಾಲಿ ಬಿಟ್ಟದು.ನೀನು ಮಾಣಿಯಾ ಕೂಸ ಹೇಳಿ ಹೇಂಗೆ ಗೊಂತಾಯಕ್ಕು ಎನ್ಗೊಗೆ? “ಹೇಳಿ ಸಂಶಯಲ್ಲಿ ಕೇಳಿದೆ ,ಕೇಳಿದ್ದೇ ತಡ !!ಅವ ದಡಕ್ಕನೆ ಎದ್ದು ನಿಂದು ಎನ್ನ ಕೈಲಿದ್ದ ಅವನ ಒರಿಜಿನಲ್ಸ್ ಇದ್ದ ಫೈಲಿನ ಎಳದು ತೆಕ್ಕೊಂಡು “ಥೂ ಎಲ್ಲಿ ಹೋದರೂ ಇದೇ  ಪ್ರಶ್ನೆ .ಗಂಡೋ ಹೆಣ್ಣೋ  ಹೇಳಿ ಎಂತದಕ್ಕೆ ಬೇಕು ?ಮನುಷ್ಯ ಆಗಿದ್ದರೆ ಸಾಲದ ?ಗಂಡು ಹೆಣ್ಣು ಸಮಾನ ಹೇಳಿ ಬೊಬ್ಬೆ ಹಾಕುವ ನಿಂಗಳಂತೋರಿಂದಲೂ ಇದೇ ಪ್ರಶ್ನೆ !!ನಿಂಗಳ ಪ್ರಶ್ನೆಗೆ ಎನ್ನ ಉತ್ತರ ಇಷ್ಟೇ! ಆನೊಬ್ಬ ಮನುಷ್ಯತ್ವ ಇಪ್ಪ ಪ್ರಾಮಾಣಿಕ ಮನುಷ್ಯ .ಇದರಂದ ಹೆಚ್ಚು ಕೇಳ್ತರೆ ನಿಂಗಳ ಕೆಲಸವೂ ಬೇಡ ….ಎಂತದೂ ಬೇಡ ! ನಮಸ್ಕಾರ “ಹೇಳಿದವ ಸೀದಾ ಎದ್ದು ಹೆರ ಹೋದ.!! ಅವನ ಅರ್ಜಿಲಿ ಇದ್ದ ಫೋಟೋ ಎನ್ನ ನೋಡಿ ನೆಗೆ ಮಾಡ್ತಾ ಇತ್ತು.ಮಾಣಿಯಾ ಕೂಸ ಹೇಳಿ ಕೇಳಿದ್ದರಲ್ಲಿ ತಪ್ಪೆಂತ ಇದ್ದು ?! ಎನಗಂತೂ ಅರ್ಥ ಆಯಿದಿಲ್ಲೆ .ಆದರೂ ಅವನ (?!)ಕೋಪಂದ  ಕೆಂಪಾದ ಮೊರೆಯ ಕೆಂಪಡರಿದ ಕಣ್ಣುಗ ಮಾತ್ರ ನೀರು ತುಂಬಿ ಅವ್ಯಕ್ತ ದುಃಖದ  ಹೇಳುತ್ತಾ ಇದ್ದವು ಹೇಳಿ ಎನ್ಸಿತ್ತೆನಗೆ .

ಎಂತಕ್ಕೋ ಏನೋ ಮನೆಗೆ ಹೋದ ಮೇಲೂ ಅವನ ಮೋರೆಯೇ ಕಣ್ಣಿಂಗೆ ಕಟ್ಟುತ್ತಾ ಇತ್ತು .ಅವನ ನಡೆ ನುಡಿ ನೋಡುವಗ  ಆವ  ಹಾನ್ಕಾರಿ ಹೇಳಿ ಆಗಲೀ, ಕೋಪಿಷ್ಠ ಹೇಳಿ ಆಗಲೀ ಎನಗೆ ಅನ್ಸಿದ್ದಿಲ್ಲೆ .ಆದರೂ ಅವನ ಆ ಕೋಪ ಆಕ್ರೋಶ ಎಂತಕೆ ?!,ಆನು ಕೇಳಿದ್ದದರಲ್ಲಿ ಅಷ್ಟು ಬೇಜಾರಪ್ಪದು ಎಂತ ಇದ್ದು ?! ಮನೇಲೂ ಏನೋ ಆಲೋಚಿಸುತ್ತ ಇಪ್ಪ ಎನ್ನ ಅನ್ಯ ಮನಸ್ಕತೆಯ ಗಮನಿಸಿದ  ಇವು  “ಏನು ಮೇಡಂ ?ಭಾರೀ ಯೋಚನೆ ಮಾಡ್ತಾ ಇದ್ದಿ ?!ಹೇಳಿ ಚುಡಾಯಿಸಿಯ ಪ್ಪಗ “ಸುಮ್ಮನೆ ಇರಿ ..ನಿಂಗೊಗೆ ಎಲ್ಲ ತಮಾಷೆ ..”ಹೇಳಿ ನಂತರ ಆನು ಇಂಟರ್ವ್ಯೂ ಮಾಡಿದ ಆ ಮಾಣಿಯ ವಿಚಿತ್ರ ನಡೆಯ ಬಗ್ಗೆ ಹೇಳಿದೆ .“ಈಗಣ ಮಾಣಿಯಂಗಳೇ ಹಾಂಗೆ ಮಾರಾಯ್ತಿ . ಕ್ಷಣ ಚಿತ್ತ ಕ್ಷಣ ಪಿತ್ತ….ಅದಕ್ಕೆ ಇಷ್ಟು ತಲೆ ಕೆಡಿಸಿ ಕೊಂಬಲೆ ಎಂತ ಇದ್ದು ?ಹೇಳಿ ಇವು ಹೇಳಿಯಪ್ಪಗ ಅಲ್ಲಿಯೇ ಇದ್ದ ಎಂಗಳ ಎಂ. ಬಿ. ಎ ಓದ್ತಾ ಇಪ್ಪ ಎಂಗಳ ಮಗ ಅಖಿಲ್ ಬಾಯಿ ಹಾಕಿ “ಅಮ್ಮಾ ಅವ ದ್ವಿಲಿಂಗಿ.. ಹೇಳ್ರೆ ನಪುಂಸಕ ಆದಿಕ್ಕಾ  ಏನ?ಇಲ್ಲೇ ಹೇಳಿ ಆದರೆ ಅವ ಎಂತಕೆ ಗಂಡು /ಹೆಣ್ಣು ಕಾಲಂ ತುಂಬಿದ್ದಾ ಇಲ್ಲೆ ?!ಎಲ್ಲ ಕಡೆ ಇದೇ ಕಾರಣಕ್ಕೆ ಅವಂಗೆ ಕೆಲಸ ಸಿಕ್ಕಿರ .ಅವನ ಹೆಣ್ಣ ಗೆಂಡ ಹೇಳಿ ಕೇಳಿ ಕೆಣಕಿ ಕೆಣಕಿ ಅವನ ಮರ್ಯಾದೆ ತೆಗದಿಕ್ಕು ಜೆನಂಗ ! .ಅದಕ್ಕೆ ಅವಂಗೆ ಅಷ್ಟು ಕೋಪ ಬಂದದು ಆದಿಕ್ಕು.”ಹೇಳಿ ಹೇಳಿದ !ಆದಿಪ್ಪಲೂ ಸಾಕು ಹೇಳಿ ಅನ್ಸಿತ್ತು .ಅದು ನಿಜ ಆಗಿದ್ದರೆ ಅವನ ಪರಿಸ್ಥಿತಿಯ ಜ್ಹಾನ್ಸಿ ಗೊಂಡು ಅನುಕಂಪ ಆತು.ಪಾಪ ಹೇಳಿ ಅನ್ಸಿತ್ತು.ಏನೇ ಆದರೂ ಅವನ ಬಗ್ಗೆ ಸರಿಯಾಗಿ ತಿಳಿಯಕ್ಕು,ನಾಳೆ ಅವನ ಮನೆಗೆ  ಸ್ವತಃ ಹೋಗಿ ಬಪ್ಪದು ‘ಹೇಳಿ ನಿರ್ಧಾರ ಮಾಡಿದೆ .ಮನಸ್ಸಿಂಗೆ ರಜ್ಜ ಸಮಾಧಾನ ಆತು .

ಉದಿಯಪ್ಪಗ ಯಾವಗಣಂದ ಬೇಗ ಹೆರಟಪ್ಪಗ “ಎಂತ ಡಿ ಎಂ ಸಾಹೇಬ್ರು ಬೇಗ ಹೆರಟದು ?ಆರ ಉದ್ದಾರ ಮಾಡುವ ಆಲೋಚನೆಲಿ ಇದ್ದಿ ?ಹೇಳಿ ನಾಟಕೀಯ ಶೈಲಿಲಿ ಇವು ಕೇಳಿಯಪ್ಪಗ “ನಿಂಗಳೂ ಬನ್ನಿ ಒಟ್ಟಿಂಗೆ ” ಹೇಳಿ ಆನುದೆ ತಮಾಷೆಲಿ ದೆನಿಗೇಳಿದೆ.” .ಅಯ್ಯಯ್ಯೋ  ..ಬೇಡಪ್ಪ ಎನಗೆ ತುಂಬಾ ಕೆಲಸ ಇದ್ದು ,ನೀನೇ ಹೋಗಿ ಬಾ “ಹೇಳಿ ಇವು ಹೇಳಿ ಅಪ್ಪಗ ಡ್ರೈವರಿಂಗೆ ಆ ಮಾಣಿಯ ಅಡ್ರೆಸ್ ಕೊಟ್ಟು ಅಲ್ಲಿಗೆ ಹೋಪಲೆ ಹೇಳಿ ಕಾರು ಹತ್ತಿ ಕೂದೆ .ಕಾರು ಮುಂದೆ  ಹೋದ ಹಾಂಗೆ ಎನ್ನ ನೆನಪಿನ ಚಿತ್ರಂಗಳ ಸುರುಳಿ ಬಿಡಿಸಿಕೊಂಡತ್ತು .

ಮಧ್ಯಮ ವರ್ಗದ ಅಡಕೆ ಕೃಷಿಗಾರರಾದ ಎಂಗಳ ಅಬ್ಬೆ ಅಪ್ಪಂಗೆ ಎಂಗ ಐದು  ಜನ ಮಕ್ಕ .ಇಬ್ರು ಕೂಸುಗಳ ನಂತರ ಹುಟ್ಟಿದ ಮೂರನೇ ಮಗಳು ಆನು .ಎನ್ನ ನಂತರ ಒಂದು ತಂಗೆ ,ಒಡ್ಕಕ್ಕೆ ತಮ್ಮ ಹುಟ್ಟಿದ್ದು .ಆರಕ್ಕೇರದ ಮೂರಕ್ಕಿಳಿಯದ ಸಂಸಾರ ಎಂಗಳದ್ದು .ಅಬ್ಬೆ ಅಪ್ಪನಲಿದ್ದ ಸಂಸ್ಕಾರಂದಾಗಿ ಎಂಗ ಎಲ್ಲರೂ ಸುಸಂಸ್ಕೃತರೇ ಅಗಿತ್ತಿದೆಯ.ಅಪ್ಪ ಹೇಳಿದ್ದಕ್ಕೆ ವಿರೋಧ ಹೇಳುವ ಪ್ರಶ್ನೆಯೇ ಎಂಗಳಲ್ಲಿ ಇತ್ತಿಲ್ಲೆ .ದೊಡ್ದಕ್ಕಂಗೆ ಎಸ್ ಎಸ್ ಎಲ್ ಸಿ ಆವುತ್ತಾ ಇದ್ದಾಂಗೆ ನಂತ್ರದ ವರ್ಷವೇ ಮಾಣಿ ನೋಡಿ ಮದುವೆ ಮಾಡಿದವು .ಆನು ಅಂಬಗ ಏಳನೇ ಕ್ಲಾಸಿಲಿ ಓದುತ್ತಾ ಇತ್ತಿದೆ .”ಅಕ್ಕ ಮದುವೆ ಆಗಿ ಬಾವನೊಟ್ಟಿನ್ಗೆ ಹೋಪಗ ಕೂಗುತ್ತಿದ್ದದು ಎಂಗಳ ಎಲ್ಲ ಬಿಟ್ಟು ಹೋಪ ದುಃಖಲ್ಲಿಯಾ ಅಥವಾ ಮುಂದೆ  ಓದುಲಾಯಿದಿಲ್ಲೆ ಹೇಳಿಯ ಹೇಳಿ ಎನಗೆ ಅರ್ಥ ಆಯಿದಿಲ್ಲೆ !.ಎಲ್ಲೊರು ಎಂಗಳ ಎಲ್ಲ ಬಿಟ್ಟು ಹೋಪ ದುಃಖಲ್ಲಿ ಕೂಗುದು ಹೇಳಿ ಜ್ಹಾನ್ಸಿದರೆ ಎನ್ನ ಮನಸ್ಸು ಮಾತ್ರ ಅದರ ಒಪ್ಪಿತ್ತಿಲ್ಲೆ.

ದೊಡ್ದಕ್ಕಂಗೆ ಮದು ವೆ ಆದ ಮೇಲೆ ಎನಗೆ ನಿಜವಾಗಿಯೂ ತುಂಬಾ ದುಃಖ ಆತು ಎಂತಕೆ ಹೇಳ್ರೆ  ಎನಗೆ ಮೊದಲು ಪೂರ್ತಿ ಸ್ವಾತಂತ್ರ್ಯ ಇತ್ತು .ಯಾವುದೊಂದೂ ಮನೆ ಕೆಲಸ ಮಾಡಕ್ಕಾಗಿತ್ತಿಲ್ಲೆ.ಆನು ಶಾಲೆಗೆ  ಹೋಗಿ ಬಂದು ಇಡೀ ದಿನ ಸಾಯಿಸುತೆ, ಉಷಾ ನವರತ್ನ ರಾಮ್,ಎಂ ಕೆ ಇಂದಿರಾ ,ರಾಧಾ ದೇವಿ ,ನಿರಂಜನ ಮೊದಲಾದೋರ ಕಾದಂಬರಿ ಕಥೆ ಓದಿಗೊಂದು ಗಮ್ಮತ್ತು ಮಾಡಿಗೊಂಡು ಇತ್ತಿದೆ .ಮನೆ ಕೆಲಸವ ಎಲ್ಲ ದೊಡ್ದಕ್ಕಂದೆ ಸಣ್ಣಕ್ಕಂದೆ  ಅಮ್ಮನೊಟ್ಟಿನ್ಗೆ ಸೇರಿ ಮಾಡ್ತಾ ಇತ್ತಿದವು .ಉಂಡ ಬಟ್ಲು ಕೂಡ ತೊಳದು ಎನಗೆ ಅಭ್ಯಾಸ ಇತ್ತಿಲ್ಲೆ .ಈಗ ದೊಡ್ದಕ್ಕಂಗೆ ಮದುವೆ ಅಪ್ಪದ್ದದ್ದೆ ಆನೂ ಸಣ್ಣಕ್ಕನ ಒಟ್ಟಿಂಗೆ  ಸೇರಿ ಪಾತ್ರ ತೊಳವದು ಉಡುಗುದು ,ಉದ್ದುದು ಮಾಡಕ್ಕಾಗಿ ಬಂತು !ಹಾಂಗಾಗಿ ಕಾದಂಬರಿ ಕಥೆ ಓದುಲೆ ಸಮಯ ಸಿಕ್ಕುತ್ತಿಲ್ಲೆ ಹೇಳಿ ಎನಗೆ ಭಯಂಕರ ದುಃಖ ಆಗಿತ್ತು  !!

ಆನು ಒಂಬತ್ತನೇ  ಕ್ಲಾಸಿಂಗೆ  ಕಾಲು ಮಡುಗಿಯಪ್ಪಗ ಎರಡನೇ ಅಕ್ಕಂಗು ಮದುವೆ ನಿಶ್ಚಯ ಆತು .ಅದು ಅಂಬಗ ಪಿ ಯು ಸಿ ಓದುತ್ತ ಇತ್ತು.ಅದು ಕಲಿವದರಲ್ಲಿ ತುಂಬಾ ಉಷಾರಿ ಕೂಸು ;ಅದಕ್ಕೆ ಎಂಜಿನೀರಿಂಗ್ ಓದಕ್ಕು ಹೇಳಿ ತುಂಬಾ ಆಸೆ ಇತ್ತು .ಆದರೆ ಅದರ ಓದುಸುವಷ್ಟು ಪೈಸೆ ಮತ್ತೆ ಧೈರ್ಯ ಎರಡೂ  ಅಪ್ಪಂಗೆ ಇತ್ತಿಲ್ಲೆ .ಬೆನ್ನಿಂಗೆ ಇಬ್ರು ಕೂಸುಗ ಇದ್ದವು !ಇದರ ಮದುವೆ ಮುಂದೆ  ಹಾಕಿಯರೆ ಎಲ್ಲರದ್ದೂ ಮುಂದೆ  ಹೋವುತ್ತು !ಅಲ್ಲದ್ದೆ ಹೆಚ್ಚು ಓದ್ಸಿದರೆ ಓದಿದ ಮಾಣಿ ಹುಡುಕುಲೇ ಬಂಗ ಹೇಳಿ ಚಿಂತೆ  !ಜೆನಂಗ ಎಂತ ಹೇಳವು ಹೇಳುವ ಅಳುಕುದೆ ಒಟ್ಟಿಂಗೆ  ! ಅಂತೂ ಎರಡನೇ ಅಕ್ಕನ ಬದ್ಧವೂ ಕಳುತ್ತು !ಪ್ರತಿಭಟಿಸುವ ಧೈರ್ಯ ಇಲ್ಲದ್ದೆ ಅದು ಸುಮ್ಮನೆ ಇತ್ತು .ಆದರೆ ಎನ್ನತ್ತರೆ ಮಾತ್ರ ಗುಟ್ಟಿಲಿ ಬಂದು “ವಿಜ್ಜಿ ನೀನು ಮಾತ್ರ ಬೇಗ ಮದುವೆ ಅಪ್ಪಲೇ ಒಪ್ಪಡ .ಎಂಜಿನೀರಿಂಗ್ ಓದಿ ಕೆಲಸಕ್ಕೆ ಸೇರಿದ ಮೇಲೆಯೇ ಮದುವೆ ಆಗು ಹೇಳಿ ಎನಗೆ ಹೇಳಿ ಕೊಟ್ಟತ್ತು .ಕಣ್ಣು ಮುಚ್ಚಿ ತೆಗವಷ್ಟರಲ್ಲಿ ಎರಡನೇ ಅಕ್ಕ ಕೂಡ ಮದುವೆ ಆಗಿ ಭಾವನ ಮನೆಗೆ ಹೋಗಿ ಸೇರಿತ್ತು

ಆನು ಪಿ ಯು ಸಿ ಓದುತ್ತಾ ಇಪ್ಪಗ ಎನಗೂ ಮಾಣಿ ನೋಡುಲೆ ಸುರು ಮಾಡಿದವು.ಅಂಬಗ ಸಣ್ಣಕ್ಕ ಹೇಳಿ ಕೊಟ್ಟ ಹಾಂಗೆ ಆನು “ಎನಗೆ ಎಂಜಿನೀರಿಂಗ್ ಓದಕ್ಕು “ಹೇಳಿ ಹಠ ಹಿಡುದೆ!ಎನ್ನ ಉಪವಾಸ ಸತ್ಯಾಗ್ರಹಕ್ಕೆ ಅಮ್ಮಂದು ಬೇರೆ ಹಿಂದಂದ ಕುಮ್ಮಕ್ಕು ಇತ್ತು! ಮನಕರಗಿದ ಅಪ್ಪ ಮುಂದೆ ಓದುಸುಲೆ ತಯಾರಿಪ್ಪ ಮಾಣಿಯ ಹುಡುಕುಲೆ ಸುರು ಮಾಡಿದವು.ಅಂತೂ ಇಂತೂ ಒಡ್ಕಕ್ಕೆ ಒಬ್ಬ ಮುಂದೆ ಓದುಸುಲೇ ತಯಾರಿಪ್ಪ ಮಾಣಿ ಅಪ್ಪಂಗೆ ಸಿಕ್ಕಿದ !ಅವನೊಟ್ಟಿಂಗೆ ಮದುವೆಯೂ ಆತು !ಎನ್ನ ಕೈ ಹಿಡುದೋವು  ಏನೋ ಮೊದಲು ಒಪ್ಪಿದಾಂಗೆ  ಮುಂದೆ ಓದುಸುಲೇ ತಯಾರಿತ್ತಿದವು .ಆದರೆ ಓದುದು ಮಾತ್ರ ಬಾಯಿಲಿ ಹೇಳಿದಷ್ಟು ಸುಲಭ ಇತ್ತಿಲ್ಲೆ .ಇದು 30- 35  ವರ್ಷ ಹಿಂದಣ ವಿಚಾರ .ಅಂಬಗ ಮದುವೆ ಆದ ಮೇಲೆ ನಮ್ಮೋರು ಕೂಸುಗ ಓದುದು ಹೇಳಿದರೆ ಅದೊಂದು ಕ್ರಾಂತಿಯೇ ಸರಿ !ಮನೆಯ ಸದಸ್ಯರ ವಿರೋಧದ ಒಟ್ಟಿಂಗೆ  ಸಮಾಜವ ಎದುರಿಸಿಕೊಂಡು  ಓದುಲೆ ಹೆರಟರೂ ಪೈಸೆಯ ಸಮಸ್ಯೆ .ಅಂತೂ ಇವರ ನಿರಂತರ ಪ್ರೋತ್ಸಾಹಂದ 5  ವರ್ಷ ಹಾಸ್ಟೆಲ್ ಲಿ ಇದ್ದು ಗೊಂಡು  ಎಂಜಿನೀರಿಂಗ್ ಓದಿದೆ .ಎಂ ಟೆಕ್ ಮಾಡಿದೆ .ಕೆಲಸವೂ ಸಿಕ್ಕಿತ್ತು .ಹತ್ತು ಹಲವು ಅಡ್ಡಿ ಅತಂಕಂಗಳ ಎಡೆಲಿಯೂ ಹಂತ ಹಂತವಾಗಿ ಮೇಲೆ ಬತ್ತಾ ಈಗ ಡಿವಿಜನಲ್ ಮ್ಯಾನೆಜೆರ್ ಆಯಿದೆ. ಇನ್ನು ಹತ್ತು ವರ್ಷ ಮಾತ್ರ ಸರ್ವಿಸ್ ಇದ್ದು . ಈಗ ಈ ಎತ್ತರಕ್ಕೆ ಮುಟ್ಟಿದ್ದರೂ ಆನು, ಆನು ನಡದು ಬಂದ ದಾರಿಯ ಮರದ್ದಿಲ್ಲೆ .ಆನು ನಡದ ದಾರಿ ಎಂದೂ ಹೂಗಿನ ಹಾಸಿಗೆ ಆಗಿತ್ತಿಲ್ಲೆ ಹಾಂಗೇಳಿ  ಅದು ಬರೀ  ಕಲ್ಲು ಮುಳ್ಳಿಂದಲೇ ಏನು ತುಂಬಿತ್ತಿಲ್ಲೇ ,ಎರಡರ ಮಿಶ್ರಣ ಆಗಿತ್ತದು .ಹಾಂಗಾಗಿ ಆನು ಕೆಲಸಕ್ಕೆ ಯಾವುದೇ ಅಭ್ಯರ್ಥಿಯ ಆಯ್ಕೆ ಮಾಡುವಗ ಯಾವುದೇ ವಶೀಲಿಗೆ ಬಗ್ಗುತ್ತಿಲ್ಲೆ .ಅಭ್ಯರ್ಥಿಯ ಬದ್ಧಿವಂತಿಕೆ, ಸಾಮರ್ಥ್ಯ  ,ನಡತೆ ಮತ್ತು ಅವರ ಪರಿಸ್ಥಿತಿ ನೋಡಿ ಆಯ್ಕೆ ಮಾಡುತ್ತೆ .

“ಮೇಡಂ ,ಮಾರ್ಗ ಇಲ್ಲಿಗೆ ಮುಗುತ್ತು ,ಬಹುಶ ಇನ್ನು ಒರುಂಕಿಲಿ  ನಡಕ್ಕೊಂಡು  ಹೋಯಕಕ್ಕು” ಹೇಳಿ ಡ್ರೈವರ್ ಹೇಳಿ ಅಪ್ಪಗಳೇ ಈ ಲೋಕಕ್ಕೆ ಆನು ಬಂದದು.”ಸರಿ,ಇಲ್ಲಿ ವೆಂಕಟ ಲಕ್ಷ್ಮಮ್ಮ ನ  ಮನೆ ಎಲ್ಲಿದ್ದು ಹೇಳಿ ತಿಳ್ಕೊಂಡು ಬಾ “ಹೇಳಿ ಅವನ ಕಳುಸಿದೆ .ತೀರಾ ಸಣ್ಣ ಗಲ್ಲಿ ಅದು. ಹರ್ಕಟೆ ಅಂಗಿ ಹಾಕಿದ ಸುಮಾರು ಮಕ್ಕ ಕಾರಿನ ಹತ್ತರೆ ಬಂದು ಮೆಲ್ಲಂಗೆ ಮುಟ್ಟಿ  ನೋಡಿ  ಕೊಶಿ ಪಡುವಗ ‘ಈ ಮಕ್ಕೊಗೆ ಕೊಡ್ಲೇ ಎಂತ ತಾರದ್ದದಕ್ಕೆ ಪೇಚಾಡಿದೆ ಮನಸ್ಸಿಲಿಯೇ.ಹತ್ತು ನಿಮಿಷ ಕಳಿವಷ್ಟರಲ್ಲಿ ಬಂದ ಡ್ರೈವರ್ :ಬನ್ನಿ ಮೇಡಂ ..ಇಲ್ಲೇ  ಐದು ನಿಮಿಷ ದಾರಿ “ಹೇಳಿ ಹೇಳಿಯಪ್ಪಗ ಅವನ ಹಿಂದಂದ  ಹೋದೆ .ತುಂಬಾ ಸಣ್ಣ ಮುಳಿ ಹುಲ್ಲಿನ ಮನೆ ಅದು .ಅದರೆದುರು ಸುಮಾರು 60-65 ವರ್ಷದ ವೆಂಕಟ ಲಕ್ಷ್ಮಮ್ಮ ನಿಂದಿತ್ತಿದವು .ಡ್ರೈವರ್ ನ ಹೆರ ನಿಂಬಲೆ ಹೇಳಿಕ್ಕಿ  ಆನು ಒಳ ಹೋದೆ. ಕಿರಣ್ ಹೆರ  ಹೊಗಿತ್ತಿದ.ಒಳ್ಳೆದೇ ಆತು ಹೇಳಿ ಜ್ಹಾನ್ಸಿಗೊಂಡೆ!

ಕಿರಣ್  ಬಗ್ಗೆ ವಿಚಾರಿಸಿದೆ .ಅಪ್ಪು ! ಮಗ ಅಖಿಲನ ಊಹೆ ಸರಿಯಾಗಿತ್ತು !

ಕಿರಣ್  ಮಾಣಿಯೂ ಅಲ್ಲ ಕೂಸೂ ಅಲ್ಲ !ಹುಟ್ಟಿದ ಶಿಶು  ಮಗು ನಪುಂಸಕ ಹೇಳಿ  ಗೊಂತಾಗಿ ಅಪ್ಪಗ ಯಾವುದೋ ನಿಷ್ಕರುಣಿ ಅಬ್ಬೆ ಅಪ್ಪ ಎರಡು ತಿಂಗಳ ಹಿಳ್ಳೆಯ ಇರುಳೋ ಇರುಳು ತಂದು ಗೋಳಿ ಮರದ ಅಡಿಲಿ ಇಡುಕ್ಕಿಕ್ಕಿ ಹೊಯಿದವು .ಪಾಪಿಗ !  ವೆಂಕಟ ಲಕ್ಷ್ಮಮ್ಮಂಗೆ  ಮನೇಲಿ ಬಡತನ ಇದ್ದರೂ ಹೃದಯ ಶ್ರೀಮಂತಿಕೆ ಧಾರಾಳ ಇತ್ತು .ಹಾಂಗಾಗಿ ಆ ಹಿಳ್ಳೆಯ ತಂದು ಸಾಂಕಿ ದೊಡ್ಡ ಮಾಡಿ ಅವರಿವರ ಕಾಲು ಹಿಡುದು ಪೈಸೆ ಹೊಂದಿಸಿ ಓದಿಸಿದ್ದವು. ಅವ ದ್ವಿಲಿಂಗಿ ಹೇಳುವ ಈ ಕಾರಣಕ್ಕೆ ಅವಂಗೆ ಎಲ್ಲಿಯೂ ಕೆಲಸ ಸಿಕ್ಕಿತ್ತಿದಿಲ್ಲೆ .ಕಿರಣ್ನ ಗಡಸು ಸ್ವರ ,ಎಳೆ ಮೀಸೆಯ ಕಾರಣಕ್ಕೆ ಅವನ ಮಾಣಿ ಹೇಳಿ ಹೇಳುಳಡ್ಡಿಯಿಲ್ಲೆ.ಹಾಂಗಾಗಿ ಅವಂದೇ ಮಾಣಿಯಂಗಳ ರೀತಿಯೇ ಡ್ರೆಸ್ ಮಾಡಿ ಗೊಂಡಿತ್ತಿದ.

ಎಂಗ ಮಾತಾಡುತ್ತ ಇದ್ದ ಹಾಂಗೆ ಕಿರಣ್  ಒಳ ಬಂದ ,ಎನ್ನ ಕಂಡು ಒಂದು ಕ್ಷಣ ಗಲಿ ಬಿಲಿ ಆದರೂ ಸುದಾರಿಸಿಗೊಂಡು ನಮಸ್ಕಾರ  ಮಾಡಿದ.ತಲೆ ತಗ್ಗುಸಿ :ಕ್ಷಮಿಸಿ  ಮೇಡಂ: ಹೇಳಿ ಹಿಂದಣ ದಿನ ಕೋಪಲ್ಲಿ ದಡಕ್ಕನೆ ಎದ್ದು ಬಂದದಕ್ಕೆ  ಕ್ಷಮೆ ಕೇಳಿದ .ಅವನ ವಿನಯ ವಿಧೇಯತೆ, ಪ್ರಸಂಗಾವಧಾನತೆ ತುಂಬಾ ಹಿಡಿಸಿತ್ತು ಎನಗೆ .ಜೊತೆಗೆ ತುಂಬಾ ಬುದ್ಧಿವಂತ, ಸಾಮರ್ಥ್ಯವಂತ . ಹಾಂಗಾಗಿ ಅ ಕೆಲಸವ ಅವಂಗೆ ಕೊಡುದು ನಿರ್ಧಾರ ಮಾಡಿ “ನಿನ್ನ ಕೆಲಸಕ್ಕೆ ಆಯ್ಕೆ ಮಾಡಿದ್ದೆ ,ನಿನ್ನ ಮಾಣಿ ಹೇಳಿಯೇ ಎಲ್ಲೋರಿಂಗೆ ಪರಿಚಯಿಸುತ್ತೆ .ಈ ರಹಸ್ಯ ಎನ್ನತ್ತರೆಯೇ ಇರ್ತು ಯೇವತ್ತಿಂಗೂ ಹೆರ ಬತ್ತಿಲ್ಲೆ “ಹೇಳಿ ಮಾತು ಕೊಟ್ಟು ಆರ್ಡರ್ ಬಂದ ಒಂದು ವಾರದ ಒಳ ಬಂದು ಕೆಲಸಕ್ಕೆ ಸೇರುಲೇ ಹೇಳಿಕ್ಕಿ  ಅಲ್ಲಿಂದದ ಹೆರಟೆ .ಅಬ್ಬೆ–ಮಗನ ಸಂಭ್ರಮ ಹೇಳಿ ಪ್ರಯೋಜನ ಇಲ್ಲೆ ! ಅದರ ಪದಂಗಳಲ್ಲಿ ವಿವರ್ಸುಲೆ ಅಸಾಧ್ಯ !! ಎನ್ನ ಮನಸ್ಸು ನಿರಾಳ ಆತು !

ಕಿರಣ್  ಎಂಗಳ ಕಂಪನಿಗೆ ಸೇರಿ 3 -4ವರ್ಷ ಆಯಿಕ್ಕೊಂಡು ಬಂತು. ಒಳ್ಳೆಯ ಪ್ರಾಮಾಣಿಕ ದಕ್ಷ ಕೆಲಸಗಾರ ಅವ, ಯೇವುದೇ ವಿಷಯಲ್ಲಿ ಅವನ ಮೇಲೆ ಒಂದೇ ಒಂದು ದೂರು ಹೇಳುವಾಂಗೇ ಇಲ್ಲೆ .ಅಷ್ಟು ಒಳ್ಳೆ ಕೆಲಸಗಾರ. ಅವನ ಮಾಣಿ ಹೇಳಿ ಭಾವಿಸಿದ ಸುಮಾರು ಜನ ಕನ್ಯಾ ಪಿತೃಗ ಅವನ ಕಂಡವು ಮದುವೆ ಪ್ರಸ್ತಾಪ ಮಾಡಿದವು  .ಮದುವೆಯ ಪ್ರಸ್ತಾಪವನ್ನೇ ಅವ ನಿರಾಕರಿಸುದರ ನೋಡಿ  ಕೆಲವು ಜನಂಗೊಕ್ಕೆ ಸಂಶಯ ಬಪ್ಪಲೆ ಸುರು ಆತು. ಅವನ ದೇಹ ಪ್ರಕೃತಿ ರಜ್ಜ ಕೂಸುಗಳ ಹಾಂಗೆ ಕಾಣುತ್ತಾ ಇದ್ದದೂ ಇದಕ್ಕೆ ಕಾರಣ ಆಗಿತ್ತು .ಅವನ ಬಗ್ಗೆ ತಿಳಿವಲೆ ಕೆಲವು ಕಂತ್ರಿಗ ಎಂತ ಆಟ ಮಾಡಿದರೂ ಪ್ರಯೋಜನ ಆತಿಲ್ಲೆ !!

ಈ ವರ್ಷ ಕಂಪನಿಗೆ ಒಳ್ಳೆ ಲಾಭ ಬಂದ ಕಾರಣ ಭಾರೀ ಸಂಭ್ರಮಂದ ಕಂಪನಿಯ ಎಲ್ಲೋರೂ ಸೇರಿ ಮೂರು ದಿನದ ಪ್ರವಾಸ ಹಾಕಿ ಕೊಂಡಿತ್ತಿದೆಯ  .ಮೊದಲ ದಿನ ಎಲ್ಲೆಲ್ಲೋ ತಿರುಗಿ ಬಂದು ಎರಡನೇ ದಿನ ಗೋಕರ್ಣಕ್ಕೆ ಬಂದೆಯ .ಎಂಗೊಗೆ  ಎಲ್ಲ ಬಚ್ಚಿ ಸಾಕಾಗಿ ಹೋಗಿತ್ತು .ಎಂಗ ಹೆಮ್ಮಕ್ಕ ಎಲ್ಲರು  ಹೋಟೆಲಿಲಿ ಹೊತ್ತಪ್ಪಗ ಮನುಗಿತ್ತಿದೆಯ.ಆದ್ರೆ ಸುನೀತ ಮಾತ್ರ ಗೆಂಡನೊಟ್ಟಿನ್ಗೆ ಸುತ್ತಿ ಬಪ್ಪಲೆ ಹೆರ ಹೋಗಿತ್ತು .ಹೊತ್ತಪ್ಪಗ ಕಸ್ತಲೆ ಆವುತ್ತಾ ಇತ್ತು .ಓಡಿಗೊಂಡು ಬಂದ ಸುನೀತ “ಮೇಡಂ ಮೇಡಂ ಅದೂ ..ಅದೂ ..ಕಿರಣ್  ..”ಎಂದು ಗಾಭರಿಯಿಂದ  ಹೇಳಿ ನಿಲ್ಲಿಸಿಯಪ್ಪಗ  ಹೆದರಿ  “ಎಂತಾತು?” ಹೇಳಿ  ವಿಚಾರಿಸಿದೆ!

ಸಮುದ್ರ ನೋಡುಲೆ ಹೋದೋರೆಲ್ಲ ಅಂಗಿ ತೆಗದು ಮಡುಗಿ ಮೀವಲೆ ಸಮುದ್ರಕ್ಕೆ ಇಳುದ್ದವು .ಕಿರಣ್ ನೀರಿಂಗೆ ಇಳಿಯದ್ದರೂ ಕೆಲವು ಮಾಣಿಯಂಗ ಎಂಗಳಲ್ಲಿ ಇಲ್ಲಿಪ್ಪೋರೆ  ಬಲಾತ್ಕಾರ ಮಾಡಿ ಅವನ ಕೋಟು ಅಂಗಿಗಳ ಬಿಚ್ಚಿದವು .ಉಬ್ಬಿದೆದೆಯ ಮುಚ್ಚುಲೆ ಬ್ರಾ ಹಾಕಿದ್ದ ಕಿರಣ್ ನಾಚಿಕೆಲಿ ಕುಗ್ಗಿ ಹೋಗಿ. ಓಡಿ ಹೋಗಿ ನೀರಿಂಗೆ ಹಾರಿದ್ದ .ಹತ್ತರೆ ಇದ್ದೊರು  ಓಡಿ  ಹೋಗಿ ಅವನ ಹಿಡುದು ನೆಗ್ಗಿ ತಂದು ಕರೆಂಗೆ ಹಾಕಿದ್ದವು.ನೀರು ಹೊಟ್ಟೆಗೆ ಹೋದ್ದರ ಹೆರ ತೆಗವಲೆ ಪ್ರಯತ್ನ ಮಾಡ್ತಾ ಇದ್ದವು .ಅವಂಗೆ ಇನ್ನೂ ಎಚ್ಚರ ಬೈಂದಿಲ್ಲೆ.”ಹೇಳಿ ಸುನೀತಾ ಗಾಭರಿಂದ ಹೇಳಿಯಪ್ಪಗ ಎಲ್ಲೊರು ಗಾಭರಿಂದ ಸಮುದ್ರ ಕರೆಂಗೆ ಓಡಿದೆಯ!

ಆ ಮಾಣಿಯಂಗಳ ಮೋರೆಲಿ ಪಶ್ಚಾತ್ತಾಪ ಗಾಭರಿ ಕಾಣುತ್ತಾ ಇತ್ತು !ತಪ್ಪಾತು  ಮೇಡಂ ಸುಮ್ಮನೆ ತಮಾಷೆಗೆ ಹೀಂಗೆ  ಮಾಡಿದೆಯ !ಹೀಂಗೆ ಅಕ್ಕು ಹೇಳಿ ಗ್ರೇಶಿತ್ತಿಲ್ಲೆಯ..! ಎಂಗಳ  ಕ್ಷಮಿಸಿ ಮೇಡಂ “ಹೇಳಿ ಎಂದು ಕಾಲು ಹಿಡುದು ಕೊಂಡಪ್ಪಗ “ನಿಂಗ ಎಲ್ಲ ಮನುಷ್ಯರೇ ಅಲ್ಲ ಪಿಶಾಚಿಗ !ಬೇರೆಯೋರ ಬದುಕಿಲಿ ಆಟ ಆಡುವ ಮುರ್ಗಂಗ “ಹೇಳಿ ಬೈದು  ಕಿರಣ್ ಹತ್ತರೆ ಹೋದೆ.ಕಿರಣಂಗೆ ಎಚ್ಚರ ಆಗಿತ್ತು .ಶಾಲು ಒಂದರ ಹೊದದು ಕೊಂಡಿತ್ತಿದ.ಎನ್ನ ಕಂಡ ಕೂಡಲೇ “ಮೇಡಂ ಆನು ಸಾಯಕ್ಕು ,ಸಾಯಕ್ಕು ಎನ್ನನ್ತೋರು ಪಾಪಿಗ ಬದುಕುಲೇ ಆಗ ,ಬದುಕುಲೇ ಇವೆಲ್ಲ ಬಿಡ್ತವಿಲ್ಲೇ.”.ಹೇಳಿ ಸಣ್ಣ ಮಕ್ಕಳ ಹಾಂಗೆ ಕೂಗುಲೆ ಸುರು ಮಾಡಿದ

.ಅಷ್ಟು ಸಮಯ ಕಟ್ಟಿಕೊಂಡ ಅವನ ದುಗುಡ, ಅನುಭವಿಸಿದ ಅವಮಾನ, ಬೇನೆ ಎಲ್ಲ ಕಣ್ಣೀರಿನ ರೂಪಲ್ಲಿ ಹೆರ ಬಂತು. ಹತ್ತರೆ ಹೋಗಿ ಅವನ ಕೈಯ ಹಿಡುದು “ನೋಡು ಕಿರಣ್  ಸಾವದು ಹೇಡಿಗ .ಸತ್ತ ಮಾತ್ರಕ್ಕೆ ಸಮಸ್ಯೆ ಪರಿಹಾರ ಆವುತ್ತ ?ನಿನ್ನ ಪ್ರೀತಿಲಿ ಸಾಂಕಿದ ಅಮ್ಮನ ನೆನಪು ಮಾಡಿಗ .ಈಸ ಬೇಕು ಇದ್ದು ಜಯಿಸಬೇಕು ಹೇಳಿ ನಮ್ಮ ಹಿರಿಯೋರು ಹೇಳಿದ್ದವಿಲ್ಲೆಯ .ನೀನು ಬದುಕಿ ನಿನ್ನ ಹಾಂಗೆ ಅಬ್ಬೆ ಅಪ್ಪಂದ ತಿರಸ್ಕ್ರುತರಾದ ಮಕ್ಕೊಗೆ ಆಸರೆ ಆಯಕ್ಕು.ಅವಕ್ಕೆ ನೀನು ಹೊಂಗಿರಣ ಆಯಕ್ಕು  .ಎನಗೆ ನೀನು ಬೇರೆ ಅಲ್ಲ, ಎನ್ನ ಮಗ ಬೇರೆ ಅಲ್ಲ .ಇನ್ನ್ನೊಂದರಿ ಸಾವ ಆಲೋಚನೆ ಮಾಡ್ತಿಲ್ಲೆ ಹೇಳಿ ಮಾತು ಕೊಡು “ಹೇಳಿ ಹೇಳಿದೆ .”ಅಪ್ಪು ಕಿರಣ್ ,ನೀನು ಚಿನ್ನದಂಥಾ ಮಾಣಿ , ಎಂಗೊಗೆ  ಬೇಕೇ ಬೇಕು ನೀನು ಬೇಕು, ಎಂಗಳದ್ದು ತಪ್ಪಾತು ,ಎಂಗಳ ತಪ್ಪಿನ ಹೊಟ್ಟೆಲಿ ಹಾಕಿ ಕ್ಷಮಿಸು “ಹೇಳಿ ಆ ಮಾಣಿಯಂಗ ಕ್ಷಮೆ ಕೇಳಿದವು

ರಜ್ಜ ಹೊತ್ತು ನೀರವ ಮೌನ .ತಲೆ ತಗ್ಗುಸಿ ಕೂಗುತ್ತ ಇದ್ದ  ಕಿರಣ್  ಕೂಗುದು ನಿಲ್ಲಿಸಿ ಶಾಲಿಂದ ಕಣ್ಣು ಮೋರೆ ಉದ್ದಿಕೊಂಡ ದೃಢವಾಗಿ ಎದ್ದು ನಿಂದ “ಅಪ್ಪು ಮೇಡಂ ಆನಿನ್ನು ಆನಾಗಿಯೇ ಸಾವಲೆ ಹೆರಡುತ್ತಿಲ್ಲೆ.ಮತ್ತು ಆನು ಮಾಣಿಯೂ ಅಲ್ಲ ಕೂಸೂ ಅಲ್ಲ ಹೇಳುವ ವಿಚಾರವ ಮುಚ್ಚಿಯೂ ಮಡುಗುತ್ತಿಲ್ಲೆ .ಸತ್ಯವ ಹೇಳಿಯೇ ಸಮಾಜವ ಎದುರುಸುತ್ತೆ .ಎನ್ನ ಹಾಂಗೆ ಇಪ್ಪೋರಿಂಗೆ ಬದುಕುವ ಚೈತನ್ಯವ ತುಂಬುತ್ತೆ .ಆನು ಹೇಡಿಯ ಹಾಂಗೆ ಸಾಯ್ತಿಲ್ಲೆ, ಬದುಕುತ್ತೆ.. ಬದುಕಿಯೇ ಬದುಕುತ್ತೆ “ಹೇಳಿ ಮೆಲ್ಲಂಗೆ ಆದರೆ ದೃಢವಾಗಿ ಹೇಳಿದ. ಸಮುದ್ರಲ್ಲಿ ಸೂರ್ಯ ಮುಳುಗಿತ್ತಿದ, ಆದರೆ ಚಂದ್ರ ತನ್ನ ಹೊಂಗಿರಣಗಳ ಎಲ್ಲೆಡೆ ಹರಡುತ್ತಾ ಇದ್ದದರ ನೋಡಿ ಎಂಗ ಎಲ್ಲೊರು  ಸಂಭ್ರಮಿಸಿದೆಯ

—   ಶುಭಂ  —

ಪ್ರಥಮ ಬಹುಮಾನಿತ ಕತೆ ಇಲ್ಲಿದ್ದು

14 thoughts on “ಕೊಡಗಿನಗೌರಮ್ಮ ಕಥಾಸ್ಪರ್ಧೆಯ 2013 ನೇ ಸಾಲಿನ ತೃತೀಯ ಬಹುಮಾನ

  1. ತಂಗೆ ಲಕ್ಶ್ಮಿ ಚಿಂತನಶೀಲ ,ಸಂಶೋಧನಾತ್ಮಕ ತುಂಬ,ತುಂಬಾ ಬರದ್ದು, ಕಥಾಸಾಹಿತ್ಯಲ್ಲಿ ಕಮ್ಮಿ ಬರದ್ದು ಹೇಳಿತ್ತು, ಆದರೆ ಬರದ್ದದು ಒಳ್ಲೆ ವಿಚಾರಶೀಲ! ಓದುಸಿಕೊಂಡು ಹೋಪಾಂಗಿದ್ದು, ಮುಂದೆ ಕಥಾ ಸಾಹಿತ್ಯ ವಿಭಾಗಲ್ಲೂ ಮುಂದುವರಿ ಇದೇ ವೇದಿಕೆಲಿಯೂ ಶುಭವಾಗಲಿ ಹೇಳಿ ಮನಃಪೂರ್ವಕ ಹಾರೈಕೆ

  2. ಅಭಿನಂದನೆಗೊ. ಒಳ್ಳೆ ಕತೆ.

  3. ಮನಮುಟ್ಟಿದ ಕತೆ.. ಅಭಿನ೦ದನೆಗೊ ಅತ್ತೇ..

  4. ಕಥೆ ಓದಿ ಖುಷಿ ಆತು… ಅಭಿನಂದನೆಗ… ಹರೇ ರಾಮ…

  5. ಇದು ಬರೇ ಕಥೆಯಲ್ಲ. ಸಮಾಜಲ್ಲಿ ಎಲ್ಲೋರೊಟ್ಟಿಂಗೆ ಬೆರದು ಜೀವನ ಮಾಡ್ಳೆ ಅವಕಾಶ ಸಿಕ್ಕದ್ದೆ ಬೆಂಗಳೂರಿನಂತ ಪೇಟೆಗಳಲ್ಲಿ ಬಿಕ್ಷೆ ಬೇಡಿ ಜೀವನ ಸಾಗುಸುವ ಹಲವಾರು ಜೆನರ ನೈಜ ಚಿತ್ರಣ. ಕಥೆ ಓದುವಾಗ, ಅವು ನಮ್ಮ ಅಣ್ಣ/ ತಂಗಿಯಾಗಿದ್ದರೇ ಹೇಳುವ ಯೋಚನೆ ಬತ್ತು. ಸಮಾಜಲ್ಲಿ ಅವಕ್ಕೂ ಸ್ಥಾನ ಮಾನ ಸಿಕ್ಕೆಕ್ಕು ಹೇಳಿ ಎನ್ನ ಆಶಯ. ಹರೇ ರಾಮ.

    1. ಅಪ್ಪು ,ಆನು ಸುಮಾರು 8 ವರ್ಷ ಮೊದಲು ಎನ್ನ ಸ್ಟೂಡೆಂಟ್ ಗಳ DD-1 ಚಾನೆಲ್ ಲಿ ಖೇಲ್ ಖೇಲ್ ಮೇ ಬದಲೋ ದುನಿಯಾ ಹೇಳುವ ಕಾರ್ಯ ಕ್ರಮ ಕೊದುಲೆ ಕರಕೊಂಡು ಹೋಪಗ ರೈಲಿಲಿ ಎನಗೆ ಇಬ್ರು ಲೈಂಗಿಕ ಅಲ್ಪ ಸಂಖ್ಯಾತರ ಪರಿಚಯ ಆತು.ಅವು ಹೇಳಿದ ವಿಚಾರ ಕೇಳಿ ಅಲ್ಲಿಯೇ ಎನಗೆ ಕಣ್ಣೀರು ಬಂದಿತ್ತು .”:ಗಂಡು ಮಗುವಿನ ಸಾಂಕುತ್ತವು ಹೆಣ್ಣು ಮಗುವನ್ನೂ ಸಾಂಕುತ್ತವು ಅಂಗ ವಿಕಲ ಮಕ್ಕಳನ್ನೂ ಸಾಂಕುತ್ತವು ಆದರೆ ಹುಟ್ಟಿದ ಹಿಳ್ಳೆ ನಪುಂಸಕ ಹೇಳಿ ಗೊಂತಾದರೆ ಅಬ್ಬೆ ಅಪ್ಪ ಅವರ ಎಲ್ಲೋ ತೆಕ್ಕೊಂಡು ಹೋಗಿ ಇಡ್ಕಿಕ್ಕಿ ಬತ್ತವು ,ಅಂಥಹ ಮಕ್ಕ ಎಂಗ !ಎಂಗಳ ಉಂಡೆಯ ತಿಂದೆಯ ಬದುಕ್ಕಿದ್ದೆಯ ಹೇಳಿ ಕೆಳುವೋರು ಇಲ್ಲೇ !ಎಂಗ ಹೆಚ್ಚಿನೋರು ಮಾದಕ ದ್ರವ್ಯ ವ್ಯಸನಿಗ ಆಗಿ ಇನ್ನೇನೋ ಚಟಗಳ ಹಿಡುದು ಆರೋಗ್ಯ ಹಾಳಾಗಿ ಆರೂ ಕೆಳುವೋರು ಇಲ್ಲದ್ದ ಅನಾಥರಾಗಿ ೪೦-45 ವರ್ಷದ ಒಳ ಸಾಯ್ತೆಯ !”ಹೇಳಿ ಅವು ಎಂಗಳ ಎಲ್ಲೊರು ಕುಹಕಲ್ಲಿ ಕಾಂಬದೆ ಹೊರತು ಮನುಷ್ಯರು ಹೇಳಿ ಭಾವಿಸುತ್ತವಿಲ್ಲೆ ,ಮೊದಲ ಬಾರಿಗೆ ನೀನು ಎಂಗಳ ಮನುಷ್ಯರು ಹೇಳಿ ಭಾವಿಸಿ ಮಾತಾಡಿದೆ ಯಾವತ್ತಿಂಗು ನಿನ್ನೆ ಎಂಗ ನೆನಪಿಲಿ ಮಡುಗುತ್ತೆಯ “ಹೇಳಿ ಕಣ್ಣೀರು ಹಾಕಿ ಝಾನ್ಸಿ ಹತ್ತರೆ ರೈಲು ಇಳುದಿಕ್ಕಿ ಹೊಯಿದವು .ಅವು ಹೇಳಿದ ವಿಚಾರ ಯಾವಾಗಲು ಎನಗೆ ನೆಂಪಾವುತ್ತಾ ಇತ್ತು ,ಹಾಂಗಾಗಿ ಈ ಕಥೆಯ ಆನು ಬರದ್ದು ,ಈ ಕಥೆ ಜನರ ಮನಸ್ಸು ತಟ್ಟಿದರೆ ಆನು ಬರದ್ದು ಸಾರ್ಥಕ ಆವುತ್ತು .ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಂಗ

  6. ಕಥೆ ಲಾಯ್ಕಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×