Oppanna.com

ಶರಣರ ಬದುಕು ಮರಣದಲಿ ನೋಡು- ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಲಿ ದ್ವಿತೀಯ ಬಹುಮಾನಿತ ಕತೆ-೨೦೧೨

ಬರದೋರು :   ವಿಜಯತ್ತೆ    on   28/07/2013    3 ಒಪ್ಪಂಗೊ

ಬೈಲಿನ ಸಕ್ರಿಯ ಸದಸ್ಯೆ ಶ್ರೀಮತಿ ಅನುಪಮಾ ಉಡುಪುಮೂಲೆ ಬರದ ಈ ಕತೆಗೆ ೨೦೧೨ನೇ ಸಾಲಿನ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಲಿ ದ್ವಿತೀಯ ಬಹುಮಾನ ಪ್ರಾಪ್ತಿ ಆಯಿದು.

ಶರಣರ ಬದುಕು  ಮರಣದಲಿ  ನೋಡು

ಉದಿಯಪ್ಪಗಂದ  ಮಧ್ಯಾಹ್ನದವರೆಗೆ ಒಂದೇ ಸಮನೆ ಹನಿಕಡಿಯದ್ದೆ ಜೆಡಿಗುಟ್ಟಿ ಮಳೆ ಬಂದು ಬಿಟ್ಟದಷ್ಟೆ. ಮೆಡಿ ಉಪ್ಪಿನಕಾಯಿ ಹಾಕ್ಯೊಂಡು  ಬೆಶಿ ಬೆಶಿ ತುಪ್ಪ ಹೆಜ್ಜೆ ಉಂಡಿಕ್ಕಿ ಹಾಂಗೆ ಒಂದು ಸಣ್ಣ  ವರಕ್ಕು  ವರಗುವ ಹೇಳಿ ಹೆರಟದೇ ಉಳ್ಳೊ. ಅದಾ ಫೋನ್ ಬಡ್ಕೊಂಡತ್ತು. ಮೇಗಾಣ ಮನೆ ಪಾತಜ್ಜಿಯ ದಿನ ಕಳುದತ್ತಡ ಈಗ ಒಂದೂ ಕಾಲಕ್ಕೆ ಹೇದು ಫೋನು ಮಡುಗಿ ಅತ್ತೆ ಕಣ್ಣೀರು ಹಾಕ್ಯೊಂಡು ಬಂದವು. ಅಜ್ಜಿ ಮನುಗಿದಲ್ಲೇ ಆಗಿ ೩-೪ ತಿಂಗಳೇ ಆತು. ಬರೇ ನೀರು ಮಾಂತ್ರ ದೊಂಡೆಲಿ  ಇಳ್ಕೊಂಡು ಇದ್ದದು. ಆಗಲಿ ; ಆ ಹೆರಿ ಜೀವಕ್ಕೆ ಇಂದಾರು ಮುಕ್ತಿ ಸಿಕ್ಕಿತ್ತನ್ನೆ. ಭಾರೀ ಬಙ ಬಂದ ಜೀವ ಅದು. ಈ ಮಳೆಕಾಲಲ್ಲಿ ಮುಂದಾಣ ಕಾರ್ಯ ಎಲ್ಲ ಹೇಂಗೆ ಮಾಡ್ತವೋ….? ಎಂಥ ಕಥೆಯೋ….? ಉತ್ತರಾಯಣಲ್ಲೇ ಆದ್ದು ಒಳ್ಳೆದಾತು.  ೪ ದಿನ ಕಳುದಿದ್ದರೆ…… ಪಾತಜ್ಜಿಯ ಮಗಳು ಬೆಂಗ್ಳೂರಿಂದ ಕಳುದ ತಿಂಗಳು ಬಂದದು ಒಟ್ಟಿಂಗೇ ಇದ್ದಡ. ಮಗಂದಿರೂ , ಸೊಸೆಯಕ್ಕಳೂ , ಶ್ಯಾಮನೂ, ಲಕ್ಷ್ಮಿಯೂ ಎಲ್ಲ ಮನೆಲೇ ಇದ್ದವಡ. ಎಲ್ಲರು ಮನೆಲಿ ಇಪ್ಪ ದಿನವೇ ಜೀವ ಹೋದ್ದು ವಿಶೇಷ. ಎಂತದೇ ಆಗಲಿ ಅಜ್ಜಿಯ ನೋಡಿಕ್ಕಿ ಬಪ್ಪ° ಹೇಳ್ಯೊಂಡು ಗುಡ್ಡೆ ಹತ್ತಿ ಅವರ ಮನಗೆ ಹೆರಟೆಯ°.
ಪಾತಜ್ಜಿಯ ದೊಡ್ಡ ಮಗನ ಅಕೇರಿಯಾಣ ಮಗನೇ ಶ್ಯಾಮ. ಆವನ ಹೆಂಡತಿ ಲಕ್ಷ್ಮಿ. ಅದೂ ,  ಆನೂ ಒಟ್ಟಿಂಗೇ ಆಡಿ ಬೆಳದೋರು. ದೇಹ ಎರಡಾದರೂ ಜೀವ ಒಂದೇ ಹೇಳ್ತ ಆತ್ಮೀಯತೆ ಎಂಗಳಲ್ಲಿ. ಅದು ಸಿಕ್ಕಿಪ್ಪಗೆಲ್ಲ  ಅಜ್ಜಿಯ ಸುದ್ದಿ ಹೇಳ್ಯೊಂಡೇ ಇಕ್ಕು. ಪಾತಜ್ಜಿಯ ನಿಜವಾದ ಹೆಸರು ಪಾರ್ವತಿ. . ಎಂಟು ವರ್ಷ ಪ್ರಾಯಲ್ಲೇ ಮದುವೆ ಆಯ್ದಡ. ಮದುವೆ ಅಪ್ಪಗಲೇ ಮಾವ° ಇಲ್ಲೆಡ. ಅತ್ತೆ ಮಾಂತ್ರ ಇದ್ದದು. ಮಾವನ ಅಣ್ಣ ತಮ್ಮಂದಿರು ಆಸ್ತಿ ಪಾಲು ಪಂಚಾಯ್ತಿಗೆ ಮಾಡುಗ ಪೂರ ನುಂಗಿ ಹಾಕಿ ಇವಕ್ಕೆ ಅನ್ಯಾಯ ಮಾಡಿದವು. ಪಾತಜ್ಜಿಯ ಅತ್ತೆ ಶಂಕರಿ . ಅವರ ಎಲ್ಲರೂ ಸಂಕಜ್ಜಿ ಹೇಳಿಯೇ ದಿನಿಗೇಳಿಗೊಂಡಿದ್ದದು. ಸಂಕಜ್ಜಿ ಮಗನನ್ನೂ, ಸೊಸೆಯನ್ನೂ ಕಟ್ಯೊಂಡು ಅಪ್ಪನ ಮನೆ ಸೇರಿತ್ತಡ. ಅಪ್ಪ -ಅಬ್ಬೆ ಇಲ್ಲದ್ದರೂ ಅಣ್ಣ ಇವರೆಲ್ಲರ ಚೆಂದಕೆ ನೋಡ್ಯೊಳ್ತೆ ಹೇಳಿ ಬಪ್ಪಲೆ ಮಾಡಿದವಡ.  ಹಾಂಗೇಳಿ ಅಣ್ಣನ ಮನೆಯವು ದೊಡ್ದ ಸ್ಥಿತಿವಂತರಲ್ಲ. ಇದೇ ಬೈಲಿಲಿ ಆರದ್ದೋ ಗೆದ್ದೆ, ತೋಟವ ಗೇಣಿಗೆ ಬೇಸಾಯ ಮಾಡ್ಯೊಂಡು ಇತ್ತಿದ್ದವು. ಅಣ್ಣಂಗೂ ೭-೮ ಮಕ್ಕ. ಅಲ್ಲದ್ದೆ ಈ ಸಂಸಾರವೂ ಅಪ್ಪಗ ತಲಗೆ ಎಳದರೆ ಕಾಲಿಂಗೆ ಇಲ್ಲೆ, ಕಾಲಿಂಗೆ ಎಳದರೆ ತಲಗೆ ಇಲ್ಲೆ  ಹೇಳ್ತ ಪರಿಸ್ಥಿತಿ. ಆದರೂ ಸುಧಾರ್ಸಿಗೊಂಡು ಹೋಗ್ಯೊಂಡು ಇತ್ತವು.
ಈ ಪಾತಜ್ಜಿ ಸುಮ್ಮನೆ ಕೂರ್ತ ಜನ ಅಲ್ಲ . ಎಷ್ಟಾದರೂ ಇದ್ದದು ತನ್ನ ಗೆಂಡನ ಸೋದರ ಮಾವನ ಮನೆಲಿ ಅಲ್ಲದಾ….? ಅವರ ಹಂಗು ಹೇಳಿ ಅಲ್ಲದ್ದರೂ ಸ್ವಾಭಿಮಾನಕ್ಕೆ ಕುಂದು ಬಾರದ್ದ ಹಾಂಗೆ ಇತ್ತಿದ್ದವು. ಗೆದ್ದೆ ಬೇಸಾಯಲ್ಲಿ , ತೋಟದ ಕೆಲಸಲ್ಲಿ ಗಂಡಾಳಿಂಗೆ ಸಮ ಸಮ ದುಡಿಗು. ಸೊಪ್ಪು ಕಡುದು ತಪ್ಪದು, ಹಟ್ಟಿಂದ ಗೊಬ್ಬರ ಹೊರುದು, ಅಡಕ್ಕೆ ಕೊಯ್ಲಿನ ಸಮಯಲ್ಲಿ ಅಡಕ್ಕೆ, ಕಾಯಿ ಹೊರುದು, ನೇಜಿ ನೆಡುದು, ಗೆದ್ದೆ ಕೊಯ್ವದು, ಹಟ್ಟಿ ಕೆಲಸ ಎಲ್ಲ ಮಾಡುಗು. ಹೆಚ್ಚು ಕಡಮ್ಮೆ ೨೫ ವರ್ಷ ಅಪ್ಪಲಪ್ಪಗ  ೩ ಮಕ್ಕಳ ಅಬ್ಬೆಯೂ ಆಗಿ ಆತು. ಈ ಮಕ್ಕಳಂದ ಮದಲೇ ಒಬ್ಬ ಮಾಣಿ ಹುಟ್ಟಿದ್ದನಡ. ಆದರೆ ಅವಂಗೆ  ೫ ವರ್ಷ ಪ್ರಾಯ ಅಪ್ಪಗ ಎಂತದೋ ಜ್ವರ ಬಂದು ಆ ಮಾಣಿ ತೀರಿಹೋದನಡ.  ‘ತೊಟ್ಟು ಮುರುದು ಮೇಣ ನಕ್ಕುದು ‘ ಹೇಳ್ತ ಪರಿಸ್ಥಿತಿ.ಹೊತ್ತಿಂಗೆ ಸರಿ ಉಂಬಲೆ ಅಶನ ಇಲ್ಲದ್ದೆ  ಗುಜ್ಜೆಯೋ , ದೀವುಗುಜ್ಜೆಯೋ ,ಗೆಣಂಗೋ ಬೇಯ್ಸಿ ತಿಂದು ಬದುಕಿಗೊಂಡಿತ್ತ ಕಾಲ. ರೋಗಂಗೊಕ್ಕೆ ಸರಿಯಾದ ಚಿಕಿತ್ಸೆ ಕೊಡ್ಸುಲೆ ಎಡಿಗಾ………?
ಹಾದಿಯುದ್ದಕ್ಕೂ ಈ ನೆಂಪುಗಳ ಮೆಲುಕಿಲಿ ಮನಗೆ ಎತ್ತಿದ್ದೇ ಗೊಂತಾಯ್ದಿಲ್ಲೆ. ಚಾವಡಿಲಿ ದರ್ಭೆ ಹಾಸಿ ಅಜ್ಜಿಯ ಮನಿಶಿ ಆಗಿತ್ತು. ತಲೆಯ ಹತ್ತರೆ ಎರಡು ಹಿಡಿ ಅಕ್ಕಿ ಮಡುಗಿ , ಅದರ ಮೇಲೆ ಒಡದ ಕಾಯಿಲಿ ಕೋಲ್ತ್ರಿ ಕುತ್ತಿ, ತುಪ್ಪ ಹಾಕಿ ಹೊತ್ಸಿ ಮಡುಗಿತ್ತವು. ಬೆಳಿ ವಸ್ತ್ರದ ಮುಸುಕಿಲಿ ಅಜ್ಜಿಯ ದೇಹ ತಣ್ಣಂಗೆ ಶವವಾಗಿ ಮನುಗಿತ್ತು. ಹರುದ ಅಂಗಿಯ ಕಳಚಿ ಇಡುಕ್ಕುವ ಹಾಂಗೆ ಆತ್ಮ ದೇಹವ ಬಿಟ್ಟು ಹೋತು. ಆ ಆತ್ಮ ದೇಹಲ್ಲಿ ಇಪ್ಪಗ ಮಾಡಿದ ಒಳ್ಳೆ ಕೆಲಸಂಗಳ ಎಲ್ಲ ನೆಂಪು ಮಾಡ್ಯೊಂಡು ಮೋರೆಂದ ವಸ್ತ್ರ ಸರಿಸಿ ಗಂಗೋದಕ ಬಾಯಿಗೆ ಬಿಟ್ಟು ಹೊಡಾಡಿದೆ. ಅಲ್ಲೇ ಕರೆಲಿ ಕೂದ ಲಕ್ಷ್ಮಿಯ ಹತ್ತರೆ ಹೋಗಿ ಕೂದೆ. ‘ಮಧ್ಯಾಹ್ನ ಒಂದು ಗಂಟೆ ಅಪ್ಪಗ  ಅಜ್ಜಿಗೆ ಒಂದು ಗ್ಲಾಸ್ಸು ತೆಳಿ ಕುಡಿಶಿ , ಊಟಕ್ಕೆ ಬಟ್ಳು ಮಡುಗುಲೆ ಹೆರಟದೇ ಉಳ್ಳೊ. ಅಜ್ಜಿಯ ಒಂದು ಎಕ್ಕುಡು ದೊಡ್ಡಕೆ ಕೇಳಿತ್ತು.  ಓಡಿ ಹೋಗಿ ಅಜ್ಜಿಯ ತೆಗಲೆ ಉದ್ದುಗ  ದೊಡ್ದಕೆ 3 ಸರ್ತಿ ಉಸುರು ಮೇಲೆ ಕೆಳ ಹೋಗಿ ನಿಂದತ್ತು. ಸಂಶಯ ಆಗಿ ಅತ್ತೆಯ ದಿನಿಗೇಳಿದೆ. ಅತ್ತೆ ನೋಡಿ ದಿನ ಕಳುದ ಹಾಂಗೆ ಕಾಣುತ್ತು ಹೇಳಿ ಬಾಯಿಗೆ ಎಲ್ಲರೂ ಗಂಗಾಜಲ ಬಿಟ್ಟೆಯ°. ಆದರೂ ಧೈರ್ಯಕ್ಕೆ ಮನೆ ಹತ್ರಾಣ ಡಾಕ್ಟ್ರ ಬಪ್ಪಲೆ ಮಾಡಿ ಆತು. ಅವು ಬಂದು ಮುಂದಾಣ ಕಾರ್ಯದ ಬಗ್ಗೆ ಆಲೋಚನೆ ಮಾಡ್ಳೆ   ಹೇಳಿಕ್ಕಿ ಹೋದವು ‘ ಹೇಳಿ ಕಣ್ಣೀರು  ಹಾಕ್ಯೊಂಡು ಹೇಳಿತ್ತು. ‘ಎಲ್ಲರೂ ಒಂದು ದಿನ ಹೋಯೆಕ್ಕಾದ್ದೆ ಅಲ್ಲದಾ…? ಮನುಗಿದಲ್ಲೇ ಆಗಿ ಬಂಙ ಬಪ್ಪದಕ್ಕಿಂತ,  ಹೆಚ್ಚು ನರಕಬಾರದ್ದೆ ಹೋದವನ್ನೆ ಹೇದು ಸಮಾಧಾನ ಪಟ್ಟುಗ ‘ ಹೇಳಿ ಸಮಾಧಾನ ಮಾಡಿದೆ.
ಮುಂದಾಣ ಕಾರ್ಯಕ್ಕೆ ಅಣಿ ಮಾಡಿ ಆತು. ಹೊಲೆಯರು ಬಂದೂ ಆತು. ಬಟ್ಟಮಾವಂಗೆ ವಿಷಯ ತಿಳಿಶಿತ್ತು. ಅಂಬಗ  ಆರಾದರೂ  ಬಪ್ಪಲೆ  ಬಾಕಿ ಇದ್ದಾ ಹೇಳಿ ಬಟ್ಟಮಾವ°  ಕೇಳಿದವಡ.  ಬೆಂಗ್ಳೂರಿಂದ ಅಜ್ಜಿಯ ಅಳಿಯ°, ಪುಳ್ಯಕ್ಕ ಎಲ್ಲ ಹೆರಟಿದವು.ಅವು ಬಾರದ್ದೆ ಮುಂದುವರ್ಸುಲೆ ಎಡಿಯನ್ನೆ ಹೇದು ಆತು. ಅಂಬಗ ದಹನ ಅಪ್ಪಗ ಇರುಳಕ್ಕು ಹೇದು ಅತ್ತೆ ಮನಗೆ ಹೆರಟವು.ಆನು ಎಲ್ಲಾ ಕಳುದಿಕ್ಕಿಯೇ ಬಪ್ಪದು ಹೇಳಿ ಕೂದೆ.ಪಾತಜ್ಜಿಗೆ ಮರಿಪುಳ್ಳಿ (ಲಕ್ಶ್ಮಿಯ ಮಗ°) ಹೇದರೆ ಜೀವ . ಏವುಗಲು ಅವನ   ‘ಎನ್ನ ದೇವರ ಕುಞ್ಞಿ ‘ ಹೇದು ಕೊಂಡಾಟ ಮಾಡಿಗೊಂಡಿಕ್ಕು. ಆರನ್ನೂ ಗುರ್ತ ಸಿಕ್ಕದ್ದ ಹಾಂಗೆ ಆಗಿದ್ದರೂ ಅವನ ಮಾಂತ್ರ ಗುರ್ತ ಸಿಕ್ಯೊಂಡು ಇದ್ದತ್ತು. ಇಂದು ಉದಿಯಪ್ಪಗ ಅವ° ಶಾಲಗೆ ಹೆರಡುವಾಗಲೂ ಅವನ ತಲೆ ಉದ್ದಿ ಎಲ್ಲ ಮಾಡಿದ್ದವಡ! ಅವ° ಶಾಲೆಂದ ಮನಗೆ ಬಂದೆತ್ತಿಯಪ್ಪಗ ಮುದಿಅಜ್ಜಿ ಇನ್ನಿಲ್ಲೆ ಹೇಳ್ತ ಸುದ್ದಿ ಗೊಂತಾಗಿ ಅವನ ಬೇಜಾರು, ಸಂಕಟ ನೋಡ್ಳೆ ಎಡಿಯ. ಅವನ ಸಮಾಧಾನ ಮಾಡೆಕ್ಕಾರೆ ಎಲ್ಲರಿಂಗೂ ಸಾಕು ಬೇಕು ಆತು. ಆಚೀಚೆ ಮನೆಯ ಪಟ್ಳಾಮೇ ಅಜ್ಜಿಯ ನೋಡಿಕ್ಕಿ ಹೋಪಲೆ ಹೇದು ಬಪ್ಪಲೆ ಶುರುವಾತು. ಅವರ ಕಣ್ಣೀರ ಧಾರೆಯೇ ಅಜ್ಜಿಯ ಬದುಕಿನ ಕಥೆಯ ತೆರದು ಮಡುಗಿತ್ತು.

ಈ ಪಾತಜ್ಜಿಯ ಗೆಂಡ ಭಾರಿ ಸಾಧು ಸ್ವಭಾವದ  ಮನುಷ್ಯ. ಆರ ರಗಳೆಗೂ ಹೋಗವು. ಅವರ ಸೋದರಮಾವ° ಭಯಂಕರ ಕೋಪಿಷ್ಠ. ಯಾವುದೋ ವಿಷಗಳಿಗೆಲಿ ಮಾವನ ಹತ್ತರೆ ಕೋಪ್ಸಿಗೊಂಡು ಮನೆ ಬಿಟ್ಟಿಕ್ಕಿ ಹೋದವು. ಗೆಂಡ ಮನೆ ಬಿಟ್ಟಿಕ್ಕಿ ಹೋಗಿಯಪ್ಪಗ ಪಾತಜ್ಜಿಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಂಗೆ ಆತು. ಆದರೂ ಮನಸ್ಸಿನ ಕಲ್ಲಿನ ಹಾಂಗೆ ಗಟ್ಟಿ ಮಾಡಿಗೊಂಡವು. ಮಕ್ಕ ಇನ್ನೂ ಸಣ್ಣ . ಅವರ ಬೆಳೆಶಿ ಒಂದು ಹಂತಕ್ಕೆ ತರೆಕ್ಕು ಹೇದು ಮೊದಲಾಣ ದುಡಿತದ ಒಟ್ಟಿಂಗೇ ದನ , ಎಮ್ಮೆ ತಂದು ಸಾಂಕಿ ಹಾಲು, ತುಪ್ಪ ಮಾರಿ ಪೈಸೆಗೆ ಪೈಸೆ ಕೂಡ್ಸಿ ಮನೆ ಜವಾಬ್ದಾರಿಗೆ ಹೆಗಲು ಕೊಟ್ಟು ನಿಂದವಡ. ಅಜ್ಜಿಯ ಪರಿಸ್ಥಿತಿ ಮುಳ್ಳಿಂಗೆ ಸಿಕ್ಕಿದ  ಸೀರೆಯ ಸೆರಗಿನ ಹಾಂಗೆ ಇದ್ದತ್ತು. ತಾನು ಎಷ್ಟು ಜವಾಬ್ದಾರಿ  ತೆಕ್ಕೊಂಡರೂ ಕಳಂಕ ಬಾರದ್ದ ಹಾಂಗೆ ಜಾಗ್ರತೆಯು ಮಾಡೆಕ್ಕನ್ನೇ !  ಮಕ್ಕ ಹಾದಿ ತಪ್ಪಿದರೂ  ‘ಅಪ್ಪ ಇಲ್ಲದ್ದ ಮಕ್ಕೊ ಮತ್ತೆಂತ ಅಕ್ಕು ‘ ಹೇಳ್ತ  ಮಾತು ಕೇಳೆಕ್ಕು. ತಾನು ಹಾದಿ ತಪ್ಪಿದರೂ ‘ಗೆಂಡ ಬಿಟ್ಟು ಹೋದ ಮೇಲೆ ಇದೆಂತ ಮಾಡುಗು ‘ ಹೇಳ್ತ ಮಾತು ಕೇಳೆಕ್ಕು. ಒಟ್ಟಾರೆ ಬಾಳಂಕತ್ತಿಯ ಬಾಯಿಯ ಮೇಲೆ ನಡದ ಹಾಂಗೆ.
ಸಂಕಜ್ಜಿಯ ಅಣ್ಣ ರಜ ರಜ ಮಂತ್ರವೂ ಕಲ್ತಿತ್ತವು. ಭಟ್ರೊಟ್ಟಿಂಗೆ ಶಿವಪೂಜೆಗೋ, ದುರ್ಗಾ ನಮಸ್ಕಾರಕ್ಕೋ ಅಲ್ಲಾ ಗಣಪತಿ ಹೋಮಕ್ಕೋ ಹೋಗ್ಯೊಂಡು ಇತ್ತವು. ಅಲ್ಲಿ ಸಿಕ್ಕಿದ ಅಕ್ಕಿ – ಕಾಯಿ ಮನಗೆ ತಂದರೆ ಅಷ್ಟಾರು ಆತನ್ನೇ…! ಮನೆಲಿ ಇಪ್ಪ ವಸ್ತುಗಳ ಹಾಳಾಗದ್ದ ಹಾಂಗೆ ಉಪಯೋಗ್ಸುತ್ತ ಕಲೆ ಪಾತಜ್ಜಿಯ ನೋಡಿ ಕಲಿಯೆಕ್ಕು! ಆ ರೀತಿಯ ಆದರ್ಶ ಜೀವನ ಅವರದ್ದು. ಸಾಮಾನು ಕಟ್ಟಿ ತಂದ ಪೇಪರನ್ನೂ ಚೆಂದಕೆ ಉದ್ದಿ ಮಡುಸಿ ಅಂಗಡಿಗೆ ವಾಪಾಸು ಕೊಟ್ಟು ಬೇರೆ ಸಾಮಾನು ತೆಕ್ಕೊಂಡು ಬಕ್ಕು. ಇಷ್ಟು ಬಙ ಇದ್ದರೂ ಅಜ್ಜಿ ಮಾಡಿದ ದಾನ  ಧರ್ಮಕ್ಕೆ ಲೆಕ್ಕ ಇಲ್ಲೆ. ಮನಗೆ ಬಂದ ಆರನ್ನೂ ಬರಿ ಹೊಟ್ಟೆಲಿ ಕಳುಸವು. ನೆರೆಕರೆಯವು ಬಂದು ಮಕ್ಕೊಗೆ ಉಂಬಲೆ ಎಂತದೂ ಇಲ್ಲೆ ಹೇದರೆ ಇದ್ದ ಅಕ್ಕಿಲೇ ರಜ ತೆಗದು ಕೊಡುಗು. ಅಲ್ಲಿ -ಇಲ್ಲಿ ಪೂಜೆಲಿ ಸಿಕ್ಕಿದ ರವಕ್ಕೆ ಕಣವೋ, ಲಂಗದ ಚೀಟೋ ಇದ್ದರೆ ಕೊಡುಗು. ಆಚೆಕರೆ ಬಟ್ಯನ ಹೆಂಡತಿ ಹೆತ್ತಪ್ಪಗ ಬಾಳಂತನ  ಅದರ ಗೆಂಡನ ಮನೆಲೇ ಆದ್ದಡ. ಪಾತಜ್ಜಿ ಅವರ ನೋಡಿಕ್ಕಿ ಬತ್ತೆ ಹೇದು ಹೋಗಿಯಪ್ಪಗ ‘ಅಪ್ಪನ  ಮನೆಯವ್ವು ಎಂತದೋ  ಕೋಪಲ್ಲಿ ಮನೆ ಪಗರುಲೆ ಕೂಡ ಎನ್ನ ಕರಕ್ಕೊಂಡು ಹೋಯ್ದವಿಲ್ಲೆ ‘ ಹೇದು ಹೇಳಿ ಕೂಗಿತ್ತಡ. ಅದಕ್ಕೆ ಈ ಪಾತಜ್ಜಿ ಅದರ ಮನಗೆ ಬಪ್ಪಲೆ ಮಾಡಿ ಪಾಯಸದಡಿಗೆ ಮಾಡಿ ಬಳುಸಿ ‘ ನಿನ್ನ ಅಪ್ಪನ ಮನೆ ಹೇದು ಗ್ರೇಶಿಗ ‘  ಹೇಳಿ ಸೀರೆಯೋ, ರವಕ್ಕೆ ಕಣವೋ  ಎಲ್ಲ ಕೊಟ್ಟು ಕಳುಗಿದವಡ. ಅಷ್ಟೂ ಧಾರಾಳಿ. ಇನ್ನು ಅಜ್ಜಿಯ ಮುಗ್ಧ ಭಕ್ತಿಯ ವಿಷಯ ಹೇಳ್ಲೆ ಶಬ್ದಂಗಳೇ ಇಲ್ಲೆ. ಮದುವೆ ಆದ ಲಾಗಾಯ್ತಿಂದ ಉದೆಕಾಲಕ್ಕೆ ಎದ್ದು , ಮಿಂದು ನೈವೇದ್ಯ ಮಡುಗಿ, ದೇವರ ತೊಳದು , ಸಾಹಿತ್ಯ ತಯಾರಿ ಮಾಡಿ ನಿತ್ಯ ಪೂಜೆಗೆ ಅಣಿ ಮಾಡುಗು . ಅಜ್ಜಿಗೆ ಹೇದು ಬೇರೆಯೇ ಮಂಟಪ ಇದ್ದತ್ತು. ಅಲ್ಲಿ ಒಂದು ಪುಟ್ಟು  ಕೃಷ್ಣನ ವಿಗ್ರಹ . ದಿನಾ ಕೃಷ್ಣಂಗೆ ಅವಲಕ್ಕಿ ನೈವೇದ್ಯ ಮಾಡುಗು. ದೇವರ ಎದುರು ಕೂದು ಮಾತಾಡ್ಳೆ ಸುರು ಮಾಡಿದರೆ ಮಕ್ಕಳತ್ತರೆ ಮಾತಾಡ್ತ ಹಾಂಗೆ ಮಾತಾಡುಗು. ಕೃಷ್ಣನ ಹೊಗಳುಗು, ಬೈಗು , ಎಲ್ಲ ಕಥೆ ಹೇಳಿ ಕಣ್ಣೀರು ಹಾಕುಗು. ಎಂತಾರು ಕಷ್ಟ ಬಂದಪ್ಪಗ ಅಲ್ಲಿ ಕೂದು ಬೈದು ,’ ಇನ್ನು ಮುಂದೆ ನಿನಗೆ ಪೂಜೆಯೇ ಮಾಡ್ತಿಲ್ಲೆ ನಿನಗೆ ಅವಲಕ್ಕಿ ಕೊಡ್ತಿಲ್ಲೆ ‘ ಹೇದು ಪರಂಚುಗು. ಮತ್ತೆ ಮರದಿನ ಬಂದು ಯಥಾಪ್ರಕಾರ ಪೂಜೆ. ಒಂದರಿ ಎಂತದೋ ಸಮಸ್ಯೆ ಬಂದು ಸುಲಭಲ್ಲಿ ಬಗೆ ಹರುದತ್ತು  ಹೇದು ಕೈಲಿ ಇತ್ತಿದ್ದ ಉಂಗುರವನ್ನೇ ಕರಗ್ಸಿ ಕೃಷ್ಣಂಗೆ ಕೊಳಲು ಮಾಡ್ಸಿ ಹಾಕಿದ್ದವು. ಇದು ಭಕ್ತಿಯ ಪರಾಕಾಷ್ಠೆ ಅಲ್ಲದಾ…..?  ಮಧೂರು , ಮಲ್ಲ , ಕುಂಬ್ಳೆ , ಪೆರಡಾಲ ದೇವಸ್ಥಾನಂಗೊಕ್ಕೆ ತಿಂಗಳಿಂಗೆ ಒಂದರಿ ಆದರೂ ಹೋಗಿ ಬಲಿವಾಡು ಕೊಟ್ಟು ಉಂಡಿಕ್ಕಿ ಬಕ್ಕು.
ಅಪ್ಪ ಇಲ್ಲದ ಕೊರತೆ ಕಾಣದ್ದ ಹಾಂಗೆ ಮಕ್ಕಳ ಬೆಳೆಶಿದ ಪಾತಜ್ಜಿಗೆ ಮಕ್ಕಳೇ ಜೀವ. ಒಂದರಿ ಮಗ° ನಡಿರುಳು ಎದ್ದು ‘ ಎನಗೆ ಸೇಮಗೆ ತಿನ್ನೆಕ್ಕು ಹೇದು ಆವ್ತಬ್ಬೆ’ ಹೇಳಿದ್ದಕ್ಕೆ ಅಂಬಗಲೇ ಅಕ್ಕಿ ಬೆಶ್ನೀರಿಲಿ ಬೊದುಲುಲೆ ಹಾಕಿ ಕಡದು ಹಿಟ್ಟು ಕಾಸಿ , ಉಂಡೆ ಮಾಡಿ , ಸೇಮಗೆ ಒತ್ತಿ  ಕೊಟ್ಟಿದವಡ !  ಮಾತೃ ಹೃದಯ ಹೇಳಿರೆ ಇದುವೇ ಅಲ್ಲದೋ….! ಅಂತೂ ಮಕ್ಕ ಬೆಳದು ದೊಡ್ದ ಆದವು. ಮಾಣ್ಯಂಗ ಕಲ್ತು ಮೇಷ್ಟ್ರ ಕೆಲಸಕ್ಕೆ ಸೇರಿದವು. ಇಪ್ಪ ಒಂದು ಕೂಸಿಂಗೂ ಒಳ್ಳೆ ವಿದ್ಯಾಭ್ಯಾಸ ಕೊಟ್ಟು  ಬೇಂಕಿನ ಕೆಲಸಕ್ಕೆ ಸೇರ್ಸಿದವು. ಇಷ್ಟೆಲ್ಲ ಅಪ್ಪಗ ಸಂಕಜ್ಜಿಯ ಅಣ್ಣಂಗೆ ಹುಶಾರಿಲ್ಲದ್ದೆ ಆಗಿ ಮನುಗಿದಲ್ಲೇ ಆದವು. ಅವರ ಹೆಂಡತಿ ಹುಶಾರಿಲ್ಲದ್ದೆ ಆಗಿ ಮೊದಲೇ ಶಿವನ ಪಾದ ಸೇರಿ ಆಯ್ದು. ಅವರ ಮಕ್ಕಳಲ್ಲಿ ಕೂಸುಗೊಕ್ಕೆಲ್ಲ ಮದುವೆ ಆಗಿ ಗೆಂಡನ ಮನೆ ಸೇರಿದ್ದವು. ಮಾಣಿಯಂಗ ಅವರಷ್ಟಕ್ಕೇ ಎಲ್ಲೋ ಇತ್ತಿದ್ದವು. ಮನಗೆ ಸರಿಯಾದ ಗೆಂಡು ದಿಕ್ಕು ಇಲ್ಲೆ ಹೇದು ಪಾತಜ್ಜಿಯ ದೊಡ್ಡ ಮಗ° ಮಾಷ್ಟ್ರತ್ತಿಗೆ ಬಿಟ್ಟು ಬರೆಕ್ಕಾಗಿ ಬಂತು. ಅಜ್ಜ ಹೋವುತ್ತ ಹಾಂಗೆ ಇವುದೆ ಪುಜೆಯೋ , ಹೋಮವೋ ಇದ್ದರೆ ಬಟ್ರೊಟ್ಟಿಂಗೆ ಹೋಕು. ಹಾಂಗೆ ಸಿಕ್ಕಿದ ವಸ್ತ್ರವೋ, ಉತ್ತರೀಯವೋ ಇದ್ದರೆ ಅದರೆಲ್ಲ ತೆಗದು ಮಡುಗಿ ಸರಿಯಾದ ವ್ಯವಸ್ಥೆ ಮಾಡುಗು ಈ ಪಾತಜ್ಜಿ. ದೊಡ್ದ ಮಗಂಗೆ ಮದುವೆ ಕಳುದತ್ತು. ಮಗಳಿಂಗೂ ಒಳ್ಳೆ ಪೊದು ಬಂದು ಮಗಳ ಮದುವೆಯೂ ಕಳುದತ್ತು. ಸಣ್ಣ ಮಗನೂ  – ಸೊಸೆಯು ಕೆಲಸದ ನಿಮಿತ್ತ ಬೇರೆ ಊರಿಲಿ  ಇದ್ದರೂ ಹಬ್ಬ – ಹರಿದಿನವ ಊರಿಂಗೆ ಬಂದು ಒಟ್ಟಿಂಗೇ ಆಚರ್ಸುತ್ತಿತ್ತವು. ಪುಳ್ಯಕ್ಕ  ಹುಟ್ಟಿ ಆತು.
ಎಲ್ಲ ಚೆಂದಕೆ ನಡಕ್ಕೊಂಡು ಇಪ್ಪಗ ಒಂದು ಬಿರುಗಾಳಿ ಬೀಸಿತ್ತಿದಾ….! ಎಂತದೋ ಕಾನೂನು ಬಂತು ಹೇದು ಒಕ್ಕಲು ಇಪ್ಪವರ ಪೂರ ಏಳ್ಸುಲೆ ಸುರು ಮಾಡಿದವು. ಇವು ಗಟ್ಟಿ ಕೂದರೆ ಇವರ ಹಂದ್ಸುಲೆ ಆರಿಂಗೂ ಎಡಿತ್ತಿತ್ತಿಲ್ಲೆ. ಆದರೆ ಇವು ಕಲಿಯುಗದ ಧರ್ಮರಾಯ. ಕೇಳುವ ಮದಲೇ ಎಲ್ಲ ಬಿಟ್ಟು ಕೊಟ್ಟವು. ಸಂಕಜ್ಜಿಯ ಅಣ್ಣ ಯಾವುದೋ ಕಾಲಲ್ಲಿ ತೆಗದು ಮಡುಗಿದ ಹತ್ತು ಎಕರೆ ಬೋಳು ಗುಡ್ಡೆಯ ಪಾತಜ್ಜಿಯ ಎರಡು ಮಗಂದಿರ ಹೆಸರಿಂಗೆ ಬದಲಾಯ್ಸಿದವು. ಪಾತ್ರ, ಪಗಡಿ ಮಾಂತ್ರ ಇದ್ದದು. ಅಲ್ಲಿಗೆ ಹೋದ ಮೇಲೆ ವ್ಯವಸ್ಥೆಗ ಪೂರ ಸುರುವಿಂದ ಆಗಿ ಆಯೆಕ್ಕಷ್ಟೆ. ಬರೇ ಬೋಳು ಗುಡ್ದೆ . ಮುಳಿ ಹುಲ್ಲು ಬಿಟ್ಟರೆ ಒಂದು ಸೊಪ್ಪಿನ ಸೆಸಿಯೂ ಇಲ್ಲೆ.  ಸೆಸಿ ಮಡುಗ್ಸಿ ಅಡಕ್ಕೆ, ತೆಂಗಿನ ತೋಟ ಮಾಡಿದವು. ಬಾಕಿ ಜಾಗೆಲಿ ಬೀಜದ ಸೆಸಿ ಹಾಕ್ಸಿದವು. ಎಂತ ನೆಟ್ಟರೂ ಬೇಸಗೆಲಿ ಬಾವಿಲಿ ನೀರೇ ಇಲ್ಲೆ. ಕುಡಿವಲೆ ಹೇಂಗಾದರೂ ಸುಧಾರ್ಸಿದರೂ ಮೈಲು ದೂರ ಹೋಗಿ ವಸ್ತ್ರ ತೊಳದಿಕ್ಕಿ ಬರೆಕ್ಕು. ಅಂತೂ ಬೋರ್ ಹಾಕ್ಸಿ ನೀರು ಸಿಕ್ಕಿತ್ತು. ಭೂಮಿ ರಜಾ ಪಚ್ಚೆ ಅಪ್ಪಲೆ ಸುರುವಾತು. ಇಷ್ಟೆಲ್ಲ ಅಪ್ಪಗ ಸಂಕಜ್ಜಿಯೂ , ಅವರ ಅಣ್ಣನೂ ಶಿವನ ಪಾದ ಸೇರಿದವು. ಪುಳ್ಯಕ್ಕಳೂ ಕಲ್ತು ಡಾಕುಟ್ರು, ಇಂಜಿನಿಯರ್ ಹೇದು ಒಳ್ಳೆ ಸ್ಥಾನಕ್ಕೆ ಏರಿದವು. ಪುಳ್ಯಕ್ಕಳ ಮದುವೆ ಒಂದು ಪೈಸೆ ಸಾಲ ಇಲ್ಲದ್ದೆ ಪಾತಜ್ಜಿಯೇ ಮಾಡ್ಸಿದವು. ಹೊಟ್ಟೆ ,ಬಟ್ಟೆ ಕಟ್ಟಿ ಬೆಳೆಶಿದ್ದಕ್ಕೆ ಎಲ್ಲರೂ ಒಂದು ಹಂತಕ್ಕೆ ಎತ್ತಿದವು.
ಪಾತಜ್ಜಿ ಆಗಾಣ ಕಾಲದ ಅರ್ಧನೇ ಕ್ಲಾಸು ಕಲ್ತದಾದರೂ ಎಲ್ಲಾ ವ್ಯವಹಾರಂಗಳೂ ಅರಡಿಗು. ಯಾವ ಆಫೀಸಿಂಗೆ ಬೇಕಾದರೂ ಹೋಗಿ ಕೆಲಸ ಮಾಡ್ಯೊಂಡು ಬಕ್ಕು. ಯಾವ ಬೇಂಕಿಲಿ ಎಷ್ಟು ಬಡ್ಡಿ ಹೇದು ತಿಳ್ಕೊಂಡು ಮಕ್ಕೊಗೆ, ಪುಳ್ಯಕ್ಕೊಗೆ ಹೇಳಿ ಪೈಸೆ ಕೂಡಿ ಮಡುಗುಗು. ಕೃಷಿಗೆ ತೆಗದ ಲೋನಿನ ಕಂತು ಕಟ್ಟುದರಂದ ಹಿಡುದು ಎಲ್ಲಾ ವ್ಯವಹಾರಂಗಳೂ ಅಜ್ಜಿಯೇ ಮಾಡ್ಯೊಂಡು ಬಕ್ಕು. ಸರಿಯಾದ ಕಲಿಯುವಿಕೆ ಇದ್ದಿದ್ದರೆ ಈ ಅಜ್ಜಿ ಎಂತ ಮಾಡ್ತಿತ್ತವೋ ಏನೋ….! ಪ್ರಧಾನ ಮಂತ್ರಿಯೇ ಆಗಿದ್ದರೂ ಆಶ್ಚರ್ಯ ಇಲ್ಲೆ. ಪಾತಜ್ಜಿ ಒಂದರಿಯು ಶೀತ ಜ್ವರ ಬಂದು ಮನುಗಿದೋರಲ್ಲ . ಬಿ.ಪಿ. , ಡಯಾಬಿಟೀಸ್ ಹತ್ತರೆಯೇ ಸುಳುದ್ದಿಲ್ಲೆ. ಹಲ್ಲು ಮಾಂತ್ರ ಸರಿ ಇಲ್ಲೆ ಹೇದು ಸೆಟ್ಟು ಮಾಡ್ಸಿಗೊಂಡಿತ್ತವು. ಆದರೆ ಹಲ್ಲಿನ ಡಾಕ್ಟ್ರಿಂಗೂ ಅಜ್ಜಿ ಹೇಳಿರೆ ಭಾರಿ ಪ್ರೀತಿ. ಹಾಂಗಾಗಿ ಪೈಸೆಯೇ ತೆಕ್ಕೊಳ್ಳವು. ಹಾಂಗಾಗಿ ಅಜ್ಜಿ ಹೋಪಗ ಹೋಪಗ ಉಪ್ಪಿನಕಾಯಿಯೋ, ತುಪ್ಪವೋ, ಬಾಳೆಹಣ್ಣೋ ತೆಕ್ಕೊಂಡು ಹೋಗಿ ಕೊಡುಗು. ಅತ್ತೆ – ಸೊಸೆ ಹೇಳಿರೆ ನಾಯಿ- ಪುಚ್ಚೆಯ ಹಾಂಗೆ ಕಚ್ಚಾಡುಗು ಹೇಳ್ತ ಮಾತಿದ್ದು. ಆದರೆ ಇಲ್ಲಿ ನಾಯಿ- ಪುಚ್ಚೆಗೊ ಭಾರಿ ಅನ್ಯೋನ್ಯ ! ಇಲ್ಲಿ ಅತ್ತೆ – ಸೊಸೆಯಕ್ಕ ಲಡಾಯಿ ಕುಟ್ಟಿದ್ದೇ ಇರ. ಸೊಸೆಯಕ್ಕಳ ಮಗಳಕ್ಕಳ ಹಾಂಗೆ ನೋಡಿಗೊಂಡಿದವು. ಅವರ ಬಾಣಂತನವೂ  ಪಾತಜ್ಜಿಯೇ ಮಾಡಿದ್ದು. ಅವಕ್ಕೆ ಮದಲಿಂದಲೂ ಮಕ್ಕ ಎಲ್ಲರೂ ಒಟ್ಟಿಂಗೇ ಇರೆಕ್ಕು ಹೇದು ಆಶೆ. ಹಾಂಗೆ ಅವರ ಸಣ್ಣ  ಮಗ ಸೊಸೆ ದೂರ ಇದ್ದೋರು ನಿವೃತ್ತಿ ಆದ ಮೇಲೆ ಮನಗೇ ಬಂದು ಒಟ್ಟಿಂಗೇ ಇದ್ದವು. ಮರಿ ಮಕ್ಕಳನ್ನೂ ಕಂಡಾತು.  ಇಷ್ಟೆಲ್ಲ ಅಪ್ಪಗ ಪಾತಜ್ಜಿಯ ಪ್ರಾಯ 85.
ಎಲ್ಲ ಚೆಂದಕೆ ಹೋಗ್ಯೊಂಡಿಪ್ಪಗ ಒಂದು ಸೆಡ್ಳು ಬಡುದ ಹಾಂಗೆ ಆತಿದಾ…! ಅಜ್ಜಿಗೆ ಮರೆವು ರೋಗ ಸುರುವಾತು. ಸುರು ಸುರುವಿಂಗೆ ಆರಿಂಗೂ ಗೊಂತಾಗಿಗೊಂಡಿತ್ತಿಲ್ಲೆ. ಮನೆಯವಕ್ಕೆ ಗೊಂತಾಗಿ ಮದ್ದು ಮಾಡಿರೂ ನಾಟಿದ್ದಿಲ್ಲೆ. ರಜ ಸಮಯ ಕಳಿವಗ ಭ್ರಾಂತು ಜೋರಾತು. ನಡು ಇರುಳು ಎದ್ದು  ಪೈಸೆ ಲೆಕ್ಕ ಮಾಡುದು, ಚಿನ್ನ ಎಲ್ಲ ಇದ್ದಾ ಇಲ್ಲೆಯಾ ಹೇದು ನೋಡುದು. ಪೈಸೆಯ ವಸ್ತ್ರದ ಎಡಕ್ಕಿಲಿ ಎಲ್ಲ ಹುಗ್ಗುಸುದು, ಮರದಿನ ಅದನ್ನೇ ಹುಡುಕ್ಕುದು , ಸಿಕ್ಕದ್ದಪ್ಪಗ ಆರೋ ತೆಗದ್ದವು ಹೇದು ಪರಂಚುದು ಹೀಂಗೆ ಎಂತೆಲ್ಲ ಮಾಡ್ತಾ ಇತ್ತಿದ್ದವು. ಆರ ಮೇಲೂ ನಂಬಿಕೆ ಇಲ್ಲೆ. ಮದ್ದು ಮಾಡ್ಳೆ ಹೆರಟರೂ ‘ಎನ್ನ ಎಂತದೋ ಮಾಡ್ಳೆ ಹೆರಟಿದವು ‘ ಹೇದು ಸಂಶಯ.  ಎಲ್ಲರೂ ಒಟ್ಟಿಂಗೇ ಇದ್ದರೂ ಆರ ಗುರ್ತವೂ ಇಲ್ಲದ್ದ ಅವಸ್ಥೆ. ಉಂಡದು, ತಿಂದದು, ಮಿಂದದು ಯಾವುದೂ ನೆಂಪಿಲ್ಲೆ.  ಸುಖ ಪಡೆಕ್ಕಾದ ಕಾಲಕ್ಕೆ ಹೀಂಗಾತನ್ನೇ ಹೇದು ಮನೆಯವಕ್ಕೆಲ್ಲ ಭಾರೀ ಬೇಜಾರು. ಹಾಂಗೂ ಹೀಂಗೂ ಪ್ರಾಯ 92 ಕಳುದತ್ತು. ಈಗ 4 ತಿಂಗಳಿಂದ ಮನುಗಿದಲ್ಲೇ ಆಯ್ದವು. ನರ್ಸ್ ಗಳ ಮಾಡಿರೆ ಅವು ಪೈಸೆ ತಿಂದಿಕ್ಕಿ ಚೆಂದಕ್ಕೆ ನೋಡ್ಯೊಳ್ಳದ್ದರೆ ಹೇಳಿ ಮನೆಯೋರೇ ಚೆಂದಕೆ ನೋಡ್ಯೊಂಡು ಇತ್ತವು. ದಿನಾ ಅಬ್ಬಿ ಕೊಟ್ಟಗೆಗೆ  ಹೊತ್ತುಗೊಂಡು ಹೋಗಿ ಮೀಶಿಗೊಂಡಿತ್ತವು. ಎಲ್ಲ ಗ್ರೇಶುಗ ಎನ್ನ ಕಣ್ಣಿಲೂ ನೀರಿಳುದತ್ತು.
ಗಂಟೆ ಹತ್ತಾತು. ಬೆಂಗ್ಳೂರಿಂದ ಬಪ್ಪೋರೆಲ್ಲ ಬಂದಾತು. ಬಟ್ಟ ಮಾವನ ನೇತೃತ್ವಲ್ಲಿ ಕಾರ್ಯ ಮುಂದುವರುದತ್ತು. ಅಜ್ಜಿಯ ಜಾಲಿಲಿ ಮನಿಶಿ ತಣ್ಣೀರಿಲಿ ಮೀಶಿದವು. ಹಸಿ ಮಡಲು ಹಾಕಿ ಮನಿಶಿ ಕಟ್ಟುಗ ಬೇನೆ ಅಕ್ಕೋ ಹೇದು ಕಂಡತ್ತು. ಕಾಷ್ಠದ ಮೇಲೆ ಮನಿಶಿ ಕಿಚ್ಚು ಕೊಟ್ಟಪ್ಪಗ ಸಂಕಟ ಆತು. ಅಲ್ಲಿದ್ದ ಎಲ್ಲರೂ ಧರ್ಮ ಕಾಷ್ಠ ಅರ್ಪಿಸಿ ಮನಗೆ ಬಂದೆಯ°. ಈ ಎಲ್ಲ ಕಾರ್ಯಂಗಳ ಜೀವನಲ್ಲೇ ಸುರು ನೋಡಿದ  ಎನಗೆ ನಾಳಂಗೆ ನಮ್ಮ ಕಥೆ ಇಷ್ಟೇ ಅಲ್ಲದಾ ಹೇಳಿ ಅನಿಸಿತ್ತು. ಆಶ್ಚರ್ಯ ಹೇದರೆ ಮಧ್ಯಾಹ್ನ ಬಿಟ್ಟ ಮಳೆ ಈ ಎಲ್ಲ ಕಾರ್ಯಂಗ ಮುಗುದರೂ ಸುಳುದ್ದೇ ಇಲ್ಲೆ. ಎಲ್ಲವೂ ನಿರ್ವಿಘ್ನವಾಗಿ ನೆರವೇರಿತ್ತು. ಅದಕ್ಕೆ ಹೇಳಿಯೇ ಬಿಟ್ಟದು ಹೇಳ್ತ ಹಾಂಗೆ ಉದೆಕಾಲ 4 ಗಂಟೆ ಅಪ್ಪಗ ಮಳೆ ಧಾರಾಕಾರವಾಗಿ ಸುರುದತ್ತು. ಆ ಹೊತ್ತಿಂಗೆ ಪಾತಜ್ಜಿಯ ದೇಹ ಪಂಚಭೂತಲ್ಲಿ ಲೀನ ಆಗಿ ಆಗಿತ್ತು. ಮತ್ತೆ ಸುರುವಾದ ಮಳೆ 2 ದಿನ ಹನಿಕಡಿಯದ್ದೆ ಬಂತಿದಾ….ಮುಂದಾಣ ಕಾರ್ಯಕ್ರಮಂಗೊಕ್ಕೆ ಬಙ ಆತನ್ನೆ ಹೇದು ಗ್ರೇಶುಗ ಸಂಚಯನದ ದಿನ ಬಿಟ್ಟ ಮಳೆ ಮತ್ತೆ ಬಂದದು ಪತಂಗ ಕಳುದಪ್ಪಗಲೇ. ಅಂತೂ ಮಳೆಗೂ ಅಜ್ಜಿಯ ಕಾರ್ಯಕ್ರಮಂಗೊಕ್ಕೆ ಅಡ್ಡಿ ಪಡುಸುಲೆ ಆಗ ಹೇಳಿ ಗೊಂತಾಗಿ ಹೋಯಿದೋ ಏನೋ……!
ಅಜ್ಜಿ , ಸೌದೆ ಒಡವಲೆ ಬಪ್ಪ ತುಕ್ರನತ್ತರೆ ಹೇಳಿ ಒಡೆಶದ್ದೆ ಮಡುಗ್ಸಿದ  ಮರದ ಕುಂಟೆಗ  ಕೊಟ್ಟಗೆಲಿ ಸುಮಾರು ಸಮಯಂದ ಹಾಂಗೇ ಇದ್ದತ್ತು. ಅದು ಈಗ ಅಜ್ಜಿಯ ದಹನಕ್ಕೇ ಉಪಯೋಗಕ್ಕೆ ಬಂತು. ಅಜ್ಜಿ ದೊಡ್ಡ ಮಗನ ಹೆಸರಿಲಿ ಮಡುಗಿದ ಪೈಸೆ ವಾಯಿದೆ ಆತು ತೆಗವಲಕ್ಕು ಹೇದು ಅಜ್ಜಿ ತೀರಿಹೋದ ನಾಲ್ಕನೇ ದಿನ ಕಾಗದವೂ ಬಂತು. ಅಜ್ಜಿ ಏವುಗಲು ಒಂದು ಮಾತು ಹೇಳುಗು’ ಎನ್ನ ಬೊಜ್ಜಕ್ಕೆ ಆರಿಂಗೂ ಬಙ ಅಪ್ಪಲಾಗ ‘ ಹೇಳಿ . ಅಜ್ಜಿ ಹೇಂಗೆ ಹೇಳಿದ್ದವೋ ಹಾಂಗೇ ನಡಕ್ಕೊಂಡಿದವನ್ನೆ ಹೇಳಿ ಆಶ್ಚರ್ಯ ಆತು. ವಿಶೇಷ ಹೇದರೆ ಅಜ್ಜಿಯ ಉತ್ತರಕ್ರಿಯೆಗೆ ವೈದಿಕರಿಂಗೆ  ಕೊಡ್ಳೆ ಬೇಕಾದ ಹೊಸ ವಸ್ತ್ರ , ಉತ್ತರೀಯಂಗಳೂ ಅಜ್ಜಿಯ ಹೇಮಾರಿಕೆಲಿ ಇದ್ದತ್ತು ! ಆನೆ ಇದ್ದರೂ ಸಾವಿರ ಸತ್ತರೂ ಸಾವಿರ ಹೇಳ್ತ ಮಾತಿದ್ದು. ಅದು ಖರ್ಚಿನ ವಿಷಯಕ್ಕೆ ಆತು. ಆದರೆ ಪಾತಜ್ಜಿ ಇಪ್ಪಗಲೂ ಉಪಕಾರಿ ಸತ್ತ ಮೇಲೂ ಉಪಕಾರಿ ಹೇಳಿ ಹೇಳ್ಲೆ ಅಕ್ಕಲ್ಲದಾ…….? ವೈಕುಂಠ ಸಮಾರಾಧನೆ ದಿನ ಬಂದ ಊರಿನ ಜೆನಂಗೊ ಅಜ್ಜಿ ಮಾಡಿದ ಸಹಾಯವ ಎಲ್ಲವನ್ನೂ ಒಂದೊಂದಾಗಿ ನೆಂಪು ಮಾಡ್ಯೊಂಡು ಹೇಳಿದ ಘಟನೆಗೊ ಎಲ್ಲವುದೆ ದಾಖಲಿಸಿದರೆ ಒಂದೊಂದೂ ಸ್ವತಂತ್ರ ಕಥೆಗಳೇ ! ಅಜ್ಜಿಂದ ಸಹಾಯ ಪಡೆಯದ್ದವು ಆ ನೆರೆಕರೆಲಿ ಆರೂ ಇಲ್ಲೆ. ಪೈಕಿಯವುದೆ ಹೇಳಿದ್ದು ಇದನ್ನೇ. ಹೆಚ್ಚಿನ  ಕಥೆಗಳೂ ಹೆರ ಹೆರಟದು ಅಜ್ಜಿ ಇಹಲೋಕದ ಯಾತ್ರೆ ಮುಗಿಶಿದ ಮೇಲೆಯೇ…. ಇದೆಲ್ಲ ನೋಡುಗ ಎನಗೆ ಕಂಡದು ‘ಶರಣರ ಬದುಕು ಮರಣದಲಿ ನೋಡು ‘ ಹೇಳ್ತ ವಚನಕಾರರ ಮಾತಿನ ಧ್ವನಿ ಇದೇ ಆದಿಕ್ಕೋ…….?

 ~~~****~~~

3 thoughts on “ಶರಣರ ಬದುಕು ಮರಣದಲಿ ನೋಡು- ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಲಿ ದ್ವಿತೀಯ ಬಹುಮಾನಿತ ಕತೆ-೨೦೧೨

  1. ಅನುಪಮಕ್ಕ೦ಗೆ ಅಭಿನ೦ದನೆಗೊ. ಸಾಹಿತ್ಯ ಕ್ರುಶಿ ಹೀ೦ಗೇಯೇ ನಡಕ್ಕೊ೦ಡಿರಲಿ

  2. ಹರೇರಾಮ, ಅನುಪಮನ ಬಹುಮಾನಿತ ಕತೆ ನಮ್ಮ ಬಯಲಿಲ್ಲಿ ಪ್ರಕಟಮಾಡಿದ ಸಂಪಾದಕರಿಂಗೆ ಧನ್ಯವಾದಂಗೊ, ಸೊಸಗೆ ಮಂದಿನ ಹಂತಲ್ಲಿ ಪ್ರಶಸ್ತಿ ಸಿಕ್ಕಲಿ ಹೇಳಿ ಶುಭ ಹಾರೈಕೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×