Oppanna.com

ಮತ್ತೆ ಉದಿ ಆತು

ಬರದೋರು :   ಗೋಪಾಲಣ್ಣ    on   08/02/2011    12 ಒಪ್ಪಂಗೊ

ಗೋಪಾಲಣ್ಣ

ಆ ದಿನ ಏವತ್ರಾಣ ಹಾಂಗೆ ಉದಿ ಆತು.
ಆದರೆ ಆ ವಟಾರ ಏವತ್ರಾಣ ಹಾಂಗೆ ಇತ್ತಿಲ್ಲೆ.

ಏವಾಗಳೂ ಬೆಣಚ್ಚಿ ಬಿಡೆಕಾರೆ ಎದ್ದು ನಡುಗುತ್ತ ಕೈ ಬೆರಳಿಂದ ತುಂಗಮ್ಮಜ್ಜಿ ಹೊಸ್ತಿಲಿಂಗೆ ಸೇಡಿಬರೆ ಎಳಗು.ಇಂದು ಅಜ್ಜಿ ಎದ್ದಿದವೇ ಇಲ್ಲೆ.
ಅವರ ಮನೆ ಬಾಗಿಲು ಹಾಕಿಕೊಂಡೇ ಇದ್ದು;ಇಡೀ ಬೈಲಿಂಗೆ ಬೆಣಚ್ಚಾದರೂ ಅಜ್ಜಿಯ ಮನೆ ಒಳ ಕಸ್ತಲೆ!

ತುಂಗಮ್ಮಜ್ಜಿ ಹಳೆ ಕಾಲದವು.
ಸಣ್ಣ ಪ್ರಾಯಲ್ಲೆ ಗೆಂಡನ ಕಳಕ್ಕೊಂಡರೂ ದೇವರ ಮೇಲೆ ನಂಬಿಕೆ ಮಡಗಿ,ಇಬ್ಬರು ಮಕ್ಕಳ ಬೆಳಶಿ,ದೊಡ್ಡ ಮಾಡಿದವು. ಇಪ್ಪಲೆ ಅವರ ಹತ್ರೆ ಎಂತ ಇದ್ದತ್ತು? ಒಂದು ಅರ್ಧ ಎಕ್ರೆ ತೋಟ,ಅಷ್ಟೆ.
ಹತ್ತರಾಣವಕ್ಕೆ ಅಡಿಗೆಲಿ ಸಕಾಯ ಮಾಡಿ,ರಜ ರಜ ಸಿಕ್ಕಿದ್ದರ ತಿಂದು ಸುಧಾರಿಸಿದವು.ಆದರೆ ….

ಅವರ ಮಕ್ಕಳೇ ಈಗ ಅವಕ್ಕೆ ದೂರ.
ಇಬ್ಬರೂ ದೂರ ಪೇಟೆಲಿ ಕೆಲಸಲ್ಲಿದ್ದವು..
ಒಬ್ಬರಾದರೂ ಅಬ್ಬೆಯ ಬಾ ಹೇಳಿ ದಿನುಗೋಳುವ ತಪ್ಪು ಮಾಡಿದ್ದವಿಲ್ಲೆ!ಅಜ್ಜಿ ಆನು ಬತ್ತೆ ಹೇಳಿದ್ದವೂ ಇಲ್ಲೆ!

ಒಂದೊಂದರಿ ಬಕ್ಕು, ಎರಡು ದಿನ ಇದ್ದು ಹೋಕು ಆ ಮಕ್ಕೊ.-ಅವಕ್ಕೆ ತೋರಿದರೆ ತುಂಗಮ್ಮಜ್ಜಿಗೆ ಕೆಲವು ಸರ್ತಿ ರಜ ಪೈಸೆ ಕೊಡುಗು.
ಅಜ್ಜಿ ಬೇಡ ಹೇಳವು- ಅದರ ಮೂಲಕ ಆರಿಂಗಾದರೂ ಸಕಾಯ ಮಾಡುಗು.
ಅಜ್ಜಿಗೆ ಮತ್ತಿದ್ದವಂಗೆ ಸಕಾಯ ಮಾಡೆಕ್ಕು ಹೇಳುವ ಮನಸ್ಸು ಇದ್ದದು ಹೀಂಗೆ ಈಡೇರಿಕೊಂಡಿತ್ತು.ಆದರೆ ಅಜ್ಜಿ ಮಕ್ಕಳ ಹತ್ರೆ ಪೈಸೆಯ ಎಂದೂ ಕೇಳವು.

ಹತ್ತರಾಣ ಮಾಣಿ ಮಹೇಶ ,”ಅಜ್ಜೀ,ಅಜ್ಜೀ”ಹೇಳಿ ಬಾಗಿಲು ಬಡಿದ. ಅವನ ಅಮ್ಮ, “ಎಂತದೊ ನಿನಗೆ? ಈ ಚಳಿಗೆ ಅಜ್ಜಿ ಪಾಪ ಎದ್ದು ಎಂತ ಮಾಡುದು? ಇನ್ನೂ ರಜಾ ಮನುಗಲಿ ಬಿಡು” ಹೇಳಿದವು.
ಮಾಣಿ ಆಚೆ ನೆಡದ.
ಇನ್ನೂ ಹೊತ್ತೇರಿತ್ತು. ಸರೀ ಬೆಣಚ್ಚಾತು,ಅಜ್ಜಿ ಎದ್ದಿದವಿಲ್ಲೆ.

ಅಂಬಗ ಮಹೇಶನ ಅಮ್ಮಂಗೂ ಹೆದರಿಕೆ ಆತು.
“ಇದಾ,ಇಲ್ಲಿ ಬನ್ನಿ,ತುಂಗಮ್ಮತ್ತೆ ಇನ್ನೂ ಎದ್ದಿದವಿಲ್ಲೆ .ನೋಡಿ ರಜಾ….”ಹೇಳಿದವು-ಮಹೇಶನ ಅಪ್ಪನತ್ರೆ.
“ಜೋರು ಚಳಿ ಅಲ್ಲದೊ?ಅತ್ತೆ ಮನಿಗಿಕ್ಕು,ಹಾಂಗೆ ಎಂತ ಕೆಲಸ ಇದ್ದು?”
“ಹಾಂಗಲ್ಲ ಹೇಳಿ.ಅತ್ತೆ ಇಷ್ಟು ಹೊತ್ತಾದರೂ ಮನುಗುತ್ತವೊ? ಎದ್ದು ಹೊಸ್ತಿಲಿಂಗೆ ಬರೆತ್ತವಿಲ್ಲೆಯೊ?”

ಅಜ್ಜಿ ಏವಗಳೂ ಹೊಸ್ತಿಲಿಂಗೆ ಬರವದರ ಒಂದು ವ್ರತದ ಹಾಂಗೆ ನಡೆಶಿಕೊಂಡು ಬೈಂದವು – ಅವರ ಮನೆಲಿ ಬರವ ಕೂಸುಗೊ ಆರೂ ಇಲ್ಲದ್ದರೂದೆ.
ಇದು ಎಲ್ಲೋರಿಂಗೂ ಗೊಂತಿಪ್ಪ ವಿಷಯವೇ.

ರಾಮ ಭಟ್ರು ಹೆಗಲಿಂಗೆ ಒಂದು ಶಾಲು ಏರಿಸಿ ತುಂಗಮ್ಮಜ್ಜಿಯ ಮನೆ ಜಗಲಿ ಹತ್ತಿದವು.
ಕಿಟಿಕಿ ಬಾಗಿಲು ರಜಾ ಓರೆ ಇತ್ತು-ಏವದಾರೂ ಪುಚ್ಚೆ ಒಳವೊ ಹೆರವೊ ಹೋಗಿಕ್ಕು.ಕಿಟಿಕಿಲಿ ನೋಡುವಾಗ ಅಜ್ಜಿ ದಿನಾಲೂ ಮನುಗುವಲ್ಲೆ ಮನುಗಿದ್ದು ಕಂಡತ್ತು.ಚಾವಡಿಯ ಮೂಲೆಲಿ ಮನುಗಿಕೊಂಡಿದ್ದವು.

ತುಂಗಮ್ಮತ್ತೇ….ತುಂಗಮ್ಮತ್ತೇ…-ರಾಮಭಟ್ರು ದೊಡ್ಡಾಕೆ ದಿನುಗೋಳಿದವು.

ಅಜ್ಜಿಯ ಸುದ್ದಿ ಇಲ್ಲೆ.
“ಅತ್ತೆಗೆ ಎಂತದೊ ಆಯಿದು…”ಸಣ್ಣಕೆ ಹೇಳಿದವು ಹೆಂಡತಿಯ ಹತ್ರೆ.

ಮಹೇಶ ಅಯ್ಯೊ-ಹೇಳಿ ಬೊಬ್ಬೆ ಹೊಡೆದು ಓಡಿದ.
ಅಜ್ಜಿಯ ಮನೆಯ ಹಿಂದೆ ಬರೆ ಹತ್ತಿದ-ಬರೆಂದ ಮಾಡಿಂಗೆ ಒಂದು ಲಾಗ ಹೊಡೆದ! ಓಡಿನ ನೆಗ್ಗಿ ಒಳಂಗೆ ಇಳಿದ!ಅದು ಅಟ್ಟುಂಬೊಳದ ಮೇಲಾಣ ಹೊಗೆ ಅಟ್ಟ-ಇಟ್ಟೇಣಿ ಮೆಟ್ಳು ಇಳಿದಪ್ಪಗ,ಅಲ್ಲಿಂದ ಚಾವಡಿಗೆ ಹೋಪ ಬಾಗಿಲು ತೆರಕ್ಕೊಂಡೇ ಇದ್ದತ್ತು-ಹಾಂಗಾಗಿ ಸುಲಭಲ್ಲಿ ಹೆರಾಣ ಬಾಗಿಲು ತೆರೆದ.

ರಾಮಭಟ್ರೂ,ಶಂಕರಿಯೂ ಒಳ ಬಂದವು.

ಒಂದು ಹುಲ್ಲಹಸೆಲಿ, ಹಳೆ ಕೈಮಗ್ಗದ ಸೀರೆ ಹಾಸ್ಯೊಂಡು ಅಜ್ಜಿ ಮನುಗಿದ್ದವು. ಒಂದು ಹಳೇ ಹೊದಕ್ಕೆ ಹೊದಕ್ಕೊಂಡಿದ್ದಿದ್ದವು.”ತುಂಗಮ್ಮತ್ತೆ,ಏಳಿ,ಏಳಿ…..”ಹೇಳಿ ಶಂಕರಿ ಅಜ್ಜಿಯ ಮೈಯ ಆಡಿಸಿದವು-ಅಜ್ಜಿಯ ಮೈ ಬೆಶಿ ಆರಿದ್ದು!

ಓಕೊಂಡಿದವಿಲ್ಲೆ,”ಅತ್ತೇ…ಹೋದಿರಾ….”ಹೇಳಿ ಶಂಕರಿ ಕೂಗಲೆ ಸುರು ಮಾಡಿದವು.

ರಾಮಭಟ್ರು ಅಜ್ಜಿಯ ಮೈ ಮುಟ್ಟಿ ನೋಡಿದವು; ಮೂಗಿಲಿ ಉಸುರು ಇದ್ದೊ ಹೇಳಿ ನೋಡಿದವು-ಎಂತದೂ ಇಲ್ಲೆ.

ಮಹೇಶ ಬೊಬ್ಬೆ ಹೊಡೆದು ಕೂಗಲೆ ಸುರು ಮಾಡಿದ.

ಅವಕ್ಕೆ ಅಜ್ಜಿ ನೆಂಟ್ರಲ್ಲ.ಆದರೆ ನೆಂಟ್ರಿಂದಲೂ ಹೆಚ್ಚಿನವು.

“ಅಜ್ಜಿ ಪುಣ್ಯಾದಿಗಿತ್ತಿ,ಆರಿಂಗೂ ಉಪದ್ರ ಕೊಡದ್ದೆ ಎದ್ದು ಹೋದ ಹಾಂಗೆ ಹೋದವು…ಕೂಗೆಡ ಮಗಾ….ಹೋಗು ಮಾಬಲ ಮಾವಂಗೂ,ಕಿಟ್ಟಪ್ಪ ಮಾವಂಗೂ ಹೇಳಿ ಬಾ…”
ಮಗಂಗೆ ಕೆಲಸ ಹೇಳಿ ಅವನ ಅಲ್ಲಿಂದ ಕಳಿಸಿದವು ರಾಮಭಟ್ರು.

ಮಾಪಣ್ಣ ಭಟ್ರು, ಕೃಷ್ಣ ಭಟ್ರು ಅವರ ಮನೆಯವು ಎಲ್ಲರೂ ಓಡಿ ಬಂದವು.

ಆರೋ ರಜಾ ದರ್ಭೆ ತಂದವು,ಕರಟಲ್ಲಿ ಸೇಡಿಹುಡಿ ಅಜ್ಜಿ ಮಡಗಿದ್ದದು ಅಲ್ಲಿಯೇ ಇದ್ದತ್ತು.
ನೆಲಕ್ಕಲ್ಲಿ ಬರೆ ಎಳದವು;ದರ್ಭೆ ಹಾಸಿದವು.ತುಂಗಮ್ಮಜ್ಜಿಯ ಶವವ ಎತ್ತಿ ಅದರ ಮೇಲೆ ಮನುಗಿಸಿದವು.
ತಲೆ ತೆಂಕಹೊಡೆಂಗೆ ಬಪ್ಪ ಹಾಂಗೇ ಮನುಗಿಸಿದವು.ತೆಂಕಂತಾಗಿ ಅಲ್ಲದೊ ಯಮಲೋಕ ಇಪ್ಪದು?

ರಾಮಭಟ್ರು ಒಂದು ತೆಂಗಿನಕಾಯಿ ತಂದು,ಮನೆಯ ಹೊಸ್ತಿಲಿಲಿ ನಿಂದು ಒಡದವು.ಶಂಕರಿ ದೇವರೊಳಂದ ಅನುಶುದ್ಧಿ ತಂದು ಕಾಯಿ ಕಡಿಗೆ ತುಂಬಿಸಿ ಶವದ ತಲೆ ಮೇಲ್ಕಟೆ ದೀಪ ಹೊತ್ತಿಸಿ ಮಡುಗಿದವು.
ಎಲ್ಲರೂ ಅಜ್ಜಿಯ ಬಾಯಿಗೆ ತುಳಸಿ ನೀರು ಬಿಟ್ಟವು.ಅದೊಂದು ಕ್ರಮ -ಸಾಯೆಕಾರೆ ಮೊದಲು ಮಾಡೆಕ್ಕಾದ್ದರ ಜೀವ ಹೋದ ಮೇಲೆ ಆದರೂ ಮಾಡಿ ಸಮಾಧಾನ ಪಡುದು ಮನುಷ್ಯನ ಗುಣ.

ರಾಮ ಭಟ್ರು ಮಗಂಗೆ ಎಂತದೊ ಸೂಚನೆ ಕೊಟ್ಟವು-ಮಹೇಶ ಪೇಂಟು ಏರಿಸಿಕೊಂಡು-“ಅಮ್ಮಾ,ಆನು ಇಂದು ಕಾಲೇಜಿಂಗೆ ಹೋವ್ತಿಲ್ಲೆ.ಅಜ್ಜಿಯ ಮಗಂಗೆ ಟೆಲಿಗ್ರಾಮು ಕಳಿಸೆಕ್ಕಡ”ಹೇಳಿ ಹೋದ.
ಅವ ನಾಲ್ಕು ಮೈಲು ದೂರ ಕುಂಬ್ಳೆಗೆ ಹೋಗಿ ಕಂಬಿ ಕಳಿಸೆಕ್ಕು-ಆವಗ ಅಲ್ಲಿಗೆ ಫೋನು ಬಯಿಂದಿಲ್ಲೆ.

ಹತ್ತರಾಣ ಕೂಸುಗೊ ಮಲ್ಲಿಗೆ ಮಾಲೆ ಕಟ್ಟಿ ಅಜ್ಜಿಯ ಮೇಲೆ ಹಾಕಿದವು-ಅವು ಎಲ್ಲಿಯೊ ನೋಡಿದ್ದವು ಶವಕ್ಕೆ ಹೂಗಿನ ಗೊಂಡೆ ಮಡಗುತ್ತರ.

ಜನ ಬಂದು ಸೇರುಲೆ ಸುರು ಆತು. ಆಳು ಬಟ್ಯ ಹೊಸ ಮಡಕ್ಕೆ ತಂದು ಮಡಗಿತ್ತು.ಮಡಲು,ಸಲಕ್ಕೆ ಎಲ್ಲಾ ತಯಾರು ಮಾಡಲೆ ಸುರು ಮಾಡಿದವು ,ಚಟ್ಟವ ಕಟ್ಟುಲೆ ಬೇಕಾಗಿ!-ಆರಿಂಗೂ ಹೇಂಗೆ ಮಾಡೆಕ್ಕು ಹೇಳಿ ಹೇಳೆಕ್ಕು ಹೇಳಿಯೇ ಇಲ್ಲೆ-ಎಲ್ಲರಿಂಗೂ ಗೊಂತಿದ್ದು ಬ್ರಾಹ್ಮಣರ ಕ್ರಮ!

“ಸೌದೆಗೆ ಹೇಂಗೂ ಅತ್ತೆದೇ ಮಾವಿನಮರ ಇದ್ದು-ಆಳುಗೊ ಕಡಿಯಲಿ;ಹೊಸ ವಸ್ತ್ರ ನಮ್ಮ ಶೀನಿ ಹೋಗಿ ತಕ್ಕು-ಮತ್ತೆ?”ಮಾಪಣ್ಣಭಟ್ರು ಕೇಳಿದವು.

“ಭಟ್ರಿಂಗೆ ಹೇಳೆಕ್ಕನ್ನೆ?”-ರಾಮಭಟ್ರು ಹೇಳಿದವು.

“ಅತ್ತೆಯ ಮಕ್ಕೊ ಬರೆಡದೊ?ಅವು ಬಾರದ್ದೆ ಭಟ್ರು ಬಂದು ಎಂತ ಮಾಡುದು? ಈಗಲೆ ಬೇಡದೊ ತೋರುತ್ತು….”

“ಅದು ಸರಿ ಮಾಪಣ್ಣ…ಭಟ್ರಿಂಗೆ ಎನ್ನ ಅಣ್ಣನ ಮಗ ಪುಟ್ಟ ಹೇಳುಗು-ಅವನ ಕಳುಗುತ್ತೆ. ಮಧ್ಯಾನ್ನ ಮೂರು ಗಂಟೆಗೆ ಅವು ಬಂದರೆ ಸಾಕು…”

“ಸರಿ, ಹಾಂಗೆ ಮಾಡು ರಾಮಣ್ಣ.ಈಗ ನಾವು ಹತ್ತರಾಣೋರು ಮಾಡದ್ದರೆ ಮತ್ತೆ ನಾವಿಪ್ಪದೆಂತಗೆ?”

ಹೋಮಕ್ಕೆ ಇಪ್ಪ ಸನ್ನಾಯ ಎಲ್ಲಾ ಮಾಡಿದವು-ಆರೂ ಬಾಯಿಗೆ ನೀರು ಹಾಕಿದ್ದವಿಲ್ಲೆ.

“ತುಂಗಮ್ಮತ್ತೆದು ಒಳ್ಳೆ ಮನಸ್ಸು,ಗಟ್ಟಿ ಜೀವ,ಅವರ ಮೋರೆ ನೋಡು-ಎಷ್ಟು ಕಳೆ ಇದ್ದು? ಏವ ಗೆಂಡು ಮಕ್ಕೊ ಇಲ್ಲದ್ದರೂ,ತೋಟದ ಕೃಷಿ,ಪೇಟೆಗೆ ಹೋಪದು ಎಲ್ಲಾ ಸುಧರಿಕೆ ಮಾಡಿದವು…ತುಂಬಾ ಗಟ್ಟಿಗಿತ್ತಿ….”ಕೃಷ್ಣಭಟ್ರು ಸತ್ತು ಹೋದ ಅಜ್ಜಿಯ ಗುಣಗಾನ ಸುರು ಮಾಡಿದವು.ಅವರ ಹೆಂಡತ್ತಿ ಶಾರದಮ್ಮ ಸೆರಗಿಂದ ಮೂಗು ಬಾಯಿ ಒರೆಸಿಕೊಂಡು-“ಈ ಅತ್ತೆ ಇದ್ದ ಕಾರಣ ಎಂಗಳ ಸುಬ್ಬಣ್ಣ ಹುಟ್ಟಿಯಪ್ಪಾಗ ಆನು ಬದುಕಿದ್ದು. ಮಾಣಿಯ ಮೀಶುದು,ಎನ್ನ ಮೀಶುದರಿಂದ ತೊಡಗಿ ಎಂಜಲು ತೆಗೆದು,ಪಾತ್ರೆ ತೊಳೆವಲ್ಲಿವರೆಗೆ ಎಲ್ಲಾ ಕೆಲಸ ಅತ್ತೆಯೇ ಮಾಡಿದ್ದು-ಏವ ಅಬ್ಬೆಯೂ,ಸ್ವಂತ ಮಗಳ ಬಾಳಂತನವನ್ನೂ ಕೂಡಾ ಇಷ್ಟು ಪ್ರೀತಿಲಿ ಮಾಡವು-ಎಂತ ಮಾಡುದು?ಅವು ಸಾವಾಗ ಒಂದು ಹುಂಡು ನೀರು ಬಿಡುವ ಭಾಗ್ಯ ಎನಗೆ ದೇವರು ಕೊಟ್ಟಿದ ಇಲ್ಲೆ….”ಹೇಳಿದವು.

*******

ಈ ಗೌಜಿಯ ಎಡಕ್ಕಿಲಿ ಒಬ್ಬ ಮಾಣಿ ಬಂದ.

ಅವ ಮಾಪಣ್ಣಭಟ್ರ ತಂಗೆಯ ಮಗ-ನವೀನ.ಎಮ್.ಬಿ.ಬಿ.ಎಸ್.ಮುಗಿಶಿ ರಜೆಲಿ ಅಜ್ಜನ ಮನೆಗೆ ಬಂದವ,ತುಂಗಮ್ಮಜ್ಜಿಯ ಕಾಂಬಲೆ ಬಂದ.

ಅಜ್ಜಿಯ ಮೋರೆ ನೋಡಿದ,ಮುಟ್ಟಿದ,ಕೊರಳು ಮತ್ತೆ ಎದೆಯ ಭಾಗ ಮುಟ್ಟಿ ನೋಡಿದ.

ಅವನ ಕಿಟ್ ಬ್ಯಾಗು ತಂದ,”ಅತ್ತೆ,ರಜಾ ನೀರು ತನ್ನಿ” ಹೇಳಿದ.

ಮಾಪಣ್ಣ ಭಟ್ರು-“ನವೀನ,ಎಂತ ಮಾಡುದೊ?”ಹೇಳಿ ಕೇಳಿದವು

“ನೋಡಿ ಮಾವ,ಈಗ ತಮಾಷೆ…..”ನೆಗೆ ಮಾಡಿದ ಅಳಿಯ ಕಿಟಿಕಿ ಪೂರಾ ತೆಗೆದ,ಅಜ್ಜಿಯ ಮೋರೆಗೆ ನೀರು ಹಾಕಿದ.ಏವದೊ ಒಂದು ಇಂಜೆಕ್ಶನು ತೆಗೆದು,ಅಜ್ಜಿಗೆ ಕುತ್ತಿದ!ಮೆಲ್ಲಂಗೆ ಅಜ್ಜಿಯ ಕೈಕಾಲು ಮಾಲಿಶು ಮಾಡಿದ.ಅವರ ಎದೆಯ ಮೆಲ್ಲಂಗೆ ಒತ್ತಿದ.

ರಜಾ ಹೊತ್ತು ಕಳಾತು.ಅಜ್ಜಿಯ ಉಸುರು ಆಡಲೆ ಸುರು ಆತು!

ಅಜ್ಜಿಯ ಬಾಯಿಂದ “ರಾಮಾ..ರಾಮ…ನಾರಾಯಣ…”ಹೇಳಿ ಶಬ್ದ ಹೊರಟತ್ತು!

ಕೈಕಾಲು ಹಂದಲೆ ಸುರು ಆತು….ಎಲ್ಲರೂ ದೇವರೆ….ದೇವರೇ…ಹೇಳಿ ಆಶ್ಚರ್ಯಂದ ಹೇಳಿದವು.

“ಎಂತದೋ ಇದು….ಮಂತ್ರವಾದ ಮಾಡಿದೆನ್ನೆ?”ಅಳಿಯನ ಮೆಚ್ಚಿಕೊಂಡು ಹೇಳಿದವು ಮಾಪಣ್ಣ ಭಟ್ರು.

“ಮಾವಾ,ಇದರಲ್ಲಿ ಮಾಟ,ಮಂತ್ರ,ಯಕ್ಷಿಣಿ ಎಂತದೂ ಇಲ್ಲೆ-ಇಲ್ಲಿ ನೋಡಿ-ಜಿರಳೆಯ ಕೊಲ್ಲುವ ಮದ್ದು-ಅಜ್ಜಿ ನುಸಿಗೆ ಇದು ಅಕ್ಕು ಹೇಳಿ ಪೇಟೆಂದ ತಂದು ಮಡಿಗಿದ್ದವು ಹೇಳಿ ಕಾಣ್ತು.ಮನುಗುವಂದ ಮೊದಲು ಎಲ್ಲಾ ಕಡೆಂಗೂ ಬಿಟ್ಟು ಬಾಗಿಲು ಹಾಕಿ ಮನುಗಿದ್ದವು.
ಮದ್ದು ಗಾಳಿಲಿ ಆವಿಯಾಗಿ ಬಂದು ಅಜ್ಜಿಯ ಶ್ವಾಸಕೋಶಲ್ಲಿ ತುಂಬಿ, ಅವು ಸತ್ತ ಹಾಂಗೆ ಕಾಣ್ತಾ ಇತ್ತು. ಅವು ಸತ್ತಿದವಿಲ್ಲೆ ಹೇಳಿ ಎನಗೆ ಅವರ ಮೋರೆ ನೋಡಿಅಪ್ಪಗ ಸಂಶಯ ಬಂತು,ಎದೆ ಚೂರು ಬೆಶಿ ಇತ್ತು ಹೇಳಿ ನೋಡಿ,ಅದು ಸ್ಪಷ್ಟ ಆತು.ವಿಷ ಇಳಿವಲೆ ಮದ್ದು ಕೊಟ್ಟೆ-ಅಷ್ಟೆ,….”ಹೇಳಿದ ಡಾ||ನವೀನ.

ಅಷ್ಟು ಹೊತ್ತಿಂಗೆ ತುಂಗಮ್ಮಜ್ಜಿ ಕಣ್ಣು ಬಿಟ್ಟವು.

ಎಲ್ಲೊರಿಂಗೂ ಮತ್ತೊಂದಾರಿ ಉದಿ ಆದ ಹಾಂಗೆ ತೋರಿತ್ತು-ಆ ದಿನ!

12 thoughts on “ಮತ್ತೆ ಉದಿ ಆತು

  1. ನುಸಿಂದ ನುಸಿಮದ್ದಿಂಗೆ ಹೆಚ್ಚು ಹೆದರೆಕ್ಕು.
    ಎಲ್ಲವೂ ವಿಷಮಯ.

    1. { ನುಸಿಂದ ನುಸಿಮದ್ದಿಂಗೆ ಹೆಚ್ಚು ಹೆದರೆಕ್ಕು. }
      – ಇದು ಪಷ್ಟಾಯಿದು ಜೋಯಿಶರೇ!! 🙂

      ಕತೆ ತುಂಬ ಚೆಂದ ಬರದ್ದಿ ಗೋಪಾಲಣ್ಣ, ಅಬ್ಬೆಕ್ಕಳ ನೋಡಿಗೊಂಬ ರೀತಿ ನಿಜವಾಗಿ ಒಂದರಿ ತಟ್ಟಿತ್ತು!

  2. ಗೋಪಾಲಣ್ಣ,

    ಕತೆ ಓದಿ ಭಾರಿ ಖುಶಿ ಅತು. ಬರವಣಿಗೆಯೂ ಲಾಯಿಕ್ಕಿದ್ದು. ಇನ್ನೂ ಹೀಂಗಿಪ್ಪ ಕತೆಗ ಬರಲಿ.

  3. ಸುಮಾರು ನೀತಿಗಳ ಒಳಗೊ೦ಡ ಮನೋರ೦ಜಕ ಕಥೆ!!

  4. ತು೦ಬ ಲಾಯಿಕ ಕಥೆ..ಸುರುವಿ೦ದ ಅಕೆರಿವರೆಗೂ ಓದಿಸಿಕೊ೦ಡು ಹೋತು

  5. ಗಣೇಶನೂ, ಬೊಳುಂಬು ಮಾವನೂ ಹೇಳಿದ್ದಕ್ಕೆ ಎನ್ನ ಪೂರ್ಣ ಸಹಮತ.
    ಒಂದು ವಿಚಾರ ಪ್ರಚೋದಕ ವಿಶಯವ ಸಸ್ಪೆನ್ಸ್ ಕತೆಯಾಗಿ ಹೇಳಿದ್ದು ಕೊಶಿ ಆತು. ಮಕ್ಕಳ ಸಹಕಾರ ಇಲ್ಲದ್ದರೂ, ನೆರೆಕರೆಯವರ ಸಹಕಾರ ಹೇಂಗೆ ಬೇಕಾವ್ತು ಹೇಳ್ತ ಸತ್ಯ ದರ್ಶನ ಈ ಕತೆಲಿ ಆಯಿದು.
    ಧನ್ಯವಾದಂಗೊ. ಇನ್ನೂ ಬರಲಿ ಹೀಂಗಿಪ್ಪ ಕತೆಗೊ

  6. ಹವ್ಯಕ ಭಾಷೆಲಿಯುದೆ ಒಂದು ಒಳ್ಳೆ “ಸಸ್ಪೆನ್ಸ್” ಕಥೆ ಬರವಲಾವುತ್ತು ಹೇಳ್ತಕ್ಕೆ ಒಂದು ಒಳ್ಳೆ ಉದಾಹರಣೆ ಗೋಪಾಲಣ್ಣ ಬರದ ಈ ಕಥೆ ! ಸುರುವಿಂಗೆ ಕಣ್ಣಿಲ್ಲಿ ರಜಾ ನೀರು ಬತ್ತ ಅನುಭವ ಅಪ್ಪಲಪ್ಪಗ, ಸುಖಾಂತ. ಒಳ್ಳೆ ಓದುಸೆಂಡು ಹೋವ್ತ ಕಥೆ. ಕಥೆಲಿ ನಿಜಜೀವನದ ಒಳ್ಳೆ ಯ / ಕೆಟ್ಟ ವಿಷಯಂಗಳುದೆ ಇದ್ದು. ಮಕ್ಕೊ ದೂರ ಮಾಡ್ತದು, ಕಷ್ಟಲ್ಲಿಪ್ಪಗ ನೆರೆಕರೆಯವರ ಸಹಾಯ. ಸತ್ತವರ ಗುಣಗಾನ, ಕೀಟ ನಾಶಕದ ಹಾನಿ ಎಲ್ಲವೂ ಬತ್ತು. ಗೋಪಾಲಣ್ಣನ ೩ನೆಯ ಕಥೆಯುದೆ ಮನವ ಗೆದ್ದತ್ತು. ಇಂತಹ ತುಂಬಾ ಕಥೆಗಳ ಗೋಪಾಲಣ್ಣ ಅಂಬಗಂಬಗ ಬೈಲಿಂಗೆ ಕೊಡ್ತಾ ಇರಳಿ.

  7. ಅರ್ರೇ ವ್ಹಾ.. ಒಳ್ಳೇ ಕತೆ… ರೋಲರ್ ಕೋಸ್ಟರಿಲ್ಲಿ ಹತ್ತಿ ಇಳುದ ಹಾ೦ಗೆ ಆತು. ಅಷ್ಟುದೆ ಏರಿಳಿತ೦ಗೊ ಅಲ್ಲದೊ ಕತೆಲಿ!! ಮಕ್ಕೊ ಅಬ್ಬೆ ಅಪ್ಪನ ಒಬ್ಬನೆ ಮಾಡಿ ದೂರ ಹೋಪದರಿ೦ದಾಗಿ ಬತ್ತ ಕಷ್ಟ೦ಗೊ, ಕಷ್ಟಕಾಲಲ್ಲಿ ನಾವು ಯಾವತ್ತೋ ಮಾಡಿದ ಒಳ್ಳೆ ಕೆಲಸ೦ಗಳ ಫಲ ದೇವರು ಬೇರೆ ಯಾವದಾದರೂ ಮೂಲ೦ದ ಸಕಾಯದ ರೂಪಲ್ಲಿ ಒದಗಿಸುವದು, ಮರಣದ ಹಾ೦ಗಿಪ್ಪ ಸ೦ದರ್ಭ೦ಗಳಲ್ಲಿ ನೆರೆಕರೆಯವು, ಹಿರಿಯವು ಅವ್ವವ್ವೇ ಮು೦ದಾಗಿ ಬೇಕಾದ ಕಾರ್ಯ೦ಗಳ ನೆಡಸುವದು, ಮರಣಾನ೦ತರ ಕ್ರಮ೦ಗಳ ವಿವರಿಸಿದ ರೀತಿ, ಕೀಟನಾಶಕ೦ಗಳ ಅತಿ ಉಪಯೋಗ / ಸರಿಯಲ್ಲದ್ದ ರೀತಿಲಿ ಉಪಯೋಗಿಸುವದರಿ೦ದ ಬತ್ತ ತೊ೦ದರೆಗೊ, ಎಲ್ಲವನ್ನುದೆ ವಿವರಿಸಿದ್ದದು ಪಷ್ಟಾಯಿದು. ಧನ್ಯವಾದ೦ಗೊ. ಇಷ್ಟೆಲ್ಲ ಆಗಿಯುದೆ ಆ ಡಾಕ್ಟರ ಸಮಯಕ್ಕೆ ಬ೦ದು ಇದರ ಕ೦ಡುಹಿಡಿಯದ್ದೆ ಇತ್ತಿದ್ದರೆ, ಅಜ್ಜಿ ಪರಲೋಕ ಸೇರ್ತಿತವು ಅಲ್ಲದೊ?

  8. ಸದ್ಯ,ಅ೦ತ್ಯ ಆಗದ್ದೆ ಸುಖಾ೦ತ್ಯ ಆಯಿದನ್ನೆ.ಕಡೆಯಾಣ ದೃಶ್ಯಲ್ಲಿ ಕಥೆಯೇ ತಿರುಗಿತ್ತು..ಹಿಡುದು ಕೂರುಸಿ ಓದುಶಿತ್ತು ಗೋಪಾಲಣ್ಣ ನಿ೦ಗಳ ಬರಹದ ಶೈಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×