Oppanna.com

ಅಪೂರ್ವ ಶಿಲ್ಪಕಲಾ ತಾಣ – ಲೇಪಾಕ್ಷಿ

ಬರದೋರು :   ತೆಕ್ಕುಂಜ ಕುಮಾರ ಮಾವ°    on   23/01/2012    10 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಕಳುದ ಆರು ವರ್ಷಂದ ಬೆಂಗ್ಳೂರಿನ ನಮ್ಮ ಹವೀಕರು ಸೌಹಾರ್ದಕೂಟದ ಹೆಸರಿಲಿ ಒಂದೊಂದು ವರ್ಷ ಒಂದೊಂದು ಜಾಗೆಗೊಕ್ಕೆ ಪ್ರಯಾಣ ಹೋಪ  ಅಪೂರ್ವ ಯೋಚನೆ – ಯೋಜನೆ ಮಡಿಕ್ಕೊಂಡಿದವು. ಸಾಧಾರಣವಾಗಿ ಜೆನವರಿ ತಿಂಗಳಿಲಿ ಇದರ ವೆವಸ್ತೆ ಮಾಡ್ತವು. ನಮ್ಮವೇ ಆದ ಕಜೆ ಗಿರಿಧರಣ್ಣ ಇದರ ಬಗ್ಗೆ ವಿಶೇಷ ಮುತುವರ್ಜಿ ತೆಕ್ಕೊಂಡು, ಹೋಗಿ ಬಪ್ಪ ವೆವಸ್ತೆ ಮಾಂತ್ರ ಅಲ್ಲ, ಇಡೀ ದಿನಾಣ ಊಟ, ಉಪಚಾರದ ವೆವಸ್ತೆಯನ್ನೂ ನೇರ್ಪಕ್ಕೆ ಮಾಡಿ,  ಎಲ್ಲೋರು ಯೇವತ್ತೂ ನೆಂಪು ಮಡಿಕ್ಕೊಂಬ ಒಂದು ಸಂತೋಷ ಕೂಟ ಅಪ್ಪ ಹಾಂಗೆ ನೋಡಿಗೊಳ್ತವು.  ಈ ವರ್ಷದ ನಮ್ಮ ಪ್ರಯಾಣಕ್ಕೆ  “ಶಿಲ್ಪಕಲಾ ಯಾನ” ಹೇಳ್ತ ಅನ್ವರ್ಥ ಹೆಸರು ಕೊಟ್ಟಿದವು, ಕಾರಣ ನಾವು ಹೋದ ಜಾಗೆ ಒಂದು ಅಪೂರ್ವ ಶಿಲ್ಪಕಲಾ ತಾಣ – ಅದುವೇ ಲೇಪಾಕ್ಷಿ.

ಲೇಪಾಕ್ಷಿ ಬೆಂಗಳೂರಿಂದ ಸುಮಾರು 100 ಮೈಲು ದೂರಲ್ಲಿ ಇಪ್ಪ ಒಂದು ಸಣ್ಣ ಹಳ್ಳಿ, ನೆರೆ ರಾಜ್ಯ ಆಂದ್ರಕ್ಕೆ ಸೇರಿದ್ದು. ಆಮೆಯಾಕಾರದ ಕಲ್ಲು ಬಂಡೆ ಇಪ್ಪ ಗುಡ್ಡೆ ಮೇಲೆ ಇಲ್ಲಿ ಒಂದು ಸುಂದರ ದೇವಸ್ಥಾನ ಇದ್ದು. ವೀರಭದ್ರಸ್ವಾಮಿ ಇಲ್ಲಿಯ ಮೂಲ ದೇವರು.

ಪುರಾಣ ಕತೆ

ಲೇಪಾಕ್ಷಿ ಹೆಸರಿನ ಹಿಂದೆ ಒಂದು ಪುರಾಣ ಕತೆ ಇದ್ದು. ರಾವಣ ಸೀತೆಯ ಅಪಹರಿಸಿಗೊಂಡು ಹೋಪ ಸಮಯಲ್ಲಿ, ಜಟಾಯು ತಡದಪ್ಪಗ ಆದ ಲಡಾಯಿಲಿ,  ರಾವಣ ರೆಕ್ಕೆ ಕಡುದ ಪರಿಣಾಮ, ಜಟಾಯು ಬಿದ್ದ ಜಾಗೆಯೇ ಇದು ಹೇಳ್ತವು. ಮುಂದೆ ರಾಮ -ಲಕ್ಷ್ಮಣರು ಸೀತೆಯ ಅರಸಿ ಬಂದಪ್ಪಗ ಪ್ರಾಣಾಪಾಯಲ್ಲಿ ಬಿದ್ದ ಪಕ್ಷಿಯ ಕಂಡು ಶ್ರೀರಾಮ ” ಲೇ, ಪಕ್ಷಿ” (ಏಳು, ಪಕ್ಷಿ) ಹೇಳಿ ಉದ್ಗಾರ ತೆಗವದ್ದೆ ಜಟಾಯು ಎದ್ದು ನಿಂದತ್ತಡ. ಅದೇ ಮುಂದೆ ಈ ಪ್ರದೇಶಕ್ಕೆ ಶಾಶ್ವತ ಹೆಸರು ಆತು ಹೇಳ್ತವು.

ದಕ್ಷ ಯಜ್ಞ ಸಮಯಲ್ಲಿ ದಾಕ್ಷಾಯಣಿ ಸತ್ತ ಶುದ್ದಿ ತಿಳುದು ಕೋಪೋದ್ರೇಕ ಗೊಂಡ ಶಿವನ ಜೆಟೆಂದ ಕಿತ್ತು ಬಂದ ತಲೆಕಸವು ಬಿದ್ದ ಜಾಗೆ ಇದು – ಹೇಳ್ತ ಕತೆಯೂ ಇಲ್ಲಿ ಪ್ರಚಲಿತವಾಗಿದ್ದು. ಶಿವನ ತಲೆಕಸವು ಬಿದ್ದ ಜಾಗೆಂದ ವೀರಭದ್ರ ಹುಟ್ಟಿದ್ದು ಮುಂದೆ ನಡದ ಕತೆ ಎಲ್ಲೊರಿಂಗೆ ಗೊಂತಿಪ್ಪದು. ಅದಾದ ಮೇಲೆ ಅಗಸ್ತ್ಯ ಮಹರ್ಷಿ ಈ ಜಾಗೆಲಿ ವೀರಭದ್ರಸ್ವಾಮಿಯ ಪ್ರತಿಷ್ಟಾಪನೆ ಮಾಡಿ ಪೂಜಿಸಿದ್ದು ಹೇಳಿ ಜೆನ ನಂಬಿಗೊಂಡಿದವು.

ಇತಿಹಾಸ

ವಿಜಯನಗರ ಸಾಮ್ರಾಜ್ಯದ ಅರಸು ಅಚ್ಯುತರಾಯನ ಕಾಲಲ್ಲಿ ( 1529 – 42), ಮಹರ್ಷಿ ಅಗಸ್ತ್ಯ ಋಷಿ ಮುಖೇನ ಪ್ರತಿಷ್ಟಾಪಿಸಲ್ಪಟ್ಟ ಗುಡಿಯ ಜಾಗೆಲಿ ಬೃಹತ್ ದೇವಸ್ಥಾನ ಕಟ್ಟುಸುವ ಸಂಕಲ್ಪ ಮಾಡಿದವು. ಅಚ್ಯುತರಾಯನ ಮಂತ್ರಿ ವಿರೂಪಣ್ಣ ಮತ್ತೆ ಅವನ ಸಹೋದರ ವೀರಣ್ಣ ಇದರ ಕಟ್ಟಿಸಿದ್ದು ಹೇಳಿ ಸ್ಥಳ ಚರಿತ್ರೆ ಹೇಳ್ತು. ವಿಜಯನಗರ ಸಾಮ್ರಾಜ್ಯದ ಕಾಲಲ್ಲಿ ನಿರ್ಮಾಣಗೊಂಡ  ಎಲ್ಲ ದೇವಸ್ಥಾನಂಗಳಲ್ಲಿ ಇಪ್ಪ ಹಾಂಗೆ ಸಭಾಮಂಟಪ. ಕಲ್ಯಾಣಮಂಟಪ, ವಸಂತಮಂಟಪ ಲೇಪಾಕ್ಷಿಲಿಯೂ ಇದ್ದು. ಪ್ರಾಕಾರ, ಗೋಪುರ ಅಲ್ಲದ್ದೆ ಮೂಲ  ಗರ್ಭಗೃಹದೊಟ್ಟಿಂಗೆ ಮತ್ತೂ ಕೆಲವು ಗರ್ಭಗೃಹ ಇಪ್ಪದು ವಿಜಯನಗರ ಕಾಲದ ದೇವಾಲಯಂಗಳ ವಿಶೇಷತೆ.  ಅದಲ್ಲದ್ದೆ – ” ವೈವಿಧ್ಯಪೂರ್ಣವೂ, ಸಂಕೀರ್ಣವೂ ಆದ ಕಂಬಂಗೊ ವಿಜಯನಗರ ಕಾಲದ ಶಿಲ್ಪ ಶೈಲಿಯ ವೈಶಿಷ್ಟ್ಯ” ಹೇಳಿ ಚರಿತ್ರಕಾರರು ಹೇಳಿದ  ತಥ್ಯವ ಲೇಪಾಕ್ಷಿಲಿ ಕಾಂಬಲಕ್ಕು. ವಿಜಯನಗರದ ಕಾಲಲ್ಲಿ ಚಿತ್ರಕಲೆಗೂ ಭಾರಿ ಪ್ರಾಮುಖ್ಯತೆ ಇದ್ದತ್ತು. ಹಾಂಗಾಗಿಯೇ ಇಲ್ಲಿ ದೇವಸ್ಥಾನದ ಒಳ ಮೇಲ್ಚಾವಣಿ ಪೂರ್ತಿ ನೂರಕ್ಕೂ ಹೆಚ್ಚು ಚಿತ್ರಂಗಳ ಕಾಂಬಲೆ ಸಿಕ್ಕುತ್ತು.

ವೀಕ್ಷಣೆ

ದೇವಸ್ಥಾನ ವಿಶಾಲವಾದ ಜಾಗೆಲಿ ಏಳು ಪ್ರಾಕಾರಲ್ಲಿ ಇದ್ದು. ಶುರುವಾಣ ಪ್ರಾಕಾರ ಈಗ ದೇವಸ್ಥಾನದ ಭಾಗವಾಗಿ ಇಲ್ಲೆ, ಅಲ್ಲಿ ಈಗ ಮನೆ, ಅಂಗಡಿಗೊ ಬಯಿಂದು. ದೇವಸ್ಥಾನದ ಒಳ ಗೋಡೆಗಳ ಚಪ್ಪಡಿ ಕಲ್ಲುಗಳಲ್ಲಿ ಹಳೆಗನ್ನಡದ ಬರಹಂಗಳ ಕಾಂಬಲೆ ಸಿಕ್ಕುತ್ತು.  ಗಣಪತಿ, ನಾಗಲಿಂಗ – ಏಳು ಹೆಡೆ ಸರ್ಪದೊಟ್ಟಿಂಗೆ ಇಪ್ಪ ಶಿವಲಿಂಗ ಅದ್ಭುತ. ಸುತ್ತಲೂ ಇಪ್ಪ ವಿಶಾಲ ಗೋಪುರ, ಅದರ ಕಂಬಂಗೊ, ಗೋಪುರದ ಚಾವಣಿಲಿ ವಿಶೇಷವಾದ “ಚೆಜ್ಜ”(ಅಂತರಮಾಡು) ಕುತೂಹಲ ಕೆರಳುಸುತ್ತು. ಒಳ ಮೂಲ ವಿಗ್ರಹದ (ವೀರಭದ್ರ ಸ್ವಾಮಿ) ಎದುರು ಗೋಪುರದ ಮೇಲ್ಚಾವಣಿಲಿ ವೀರಭದ್ರನ ದೊಡ್ಡ ಚಿತ್ರ ಇದ್ದು. ವಟಪತ್ರಶಾಯಿ ಬಾಲಕೃಷ್ಣನ ಚಿತ್ರ ಮನಮೋಹಕವಾಗಿದ್ದು. ಎದುರಿನ ನಾಟ್ಯಗೃಹದ ಸುತ್ತಲೂ ಇಪ್ಪ ಕಂಬಂಗಳಲ್ಲಿ ಆಳೆತ್ತರದ ವಿವಿಧ ಮೂರ್ತಿಗಳ ಲಾಲಿತ್ಯ ಮನಸೆಳೆತ್ತು. ರಂಬೆ, ಊರ್ವಶಿ, ದೇವ – ದೇವತೆಯರು, ವಾಸ್ತುಬ್ರಹ್ಮ ಮತ್ತೆ ನಾಟ್ಯರಾಣಿಯ ಮೂರ್ತಿಗೊ ವೈಶಿಷ್ಟ್ಯಪೂರ್ಣವಾಗಿದ್ದು.

ಬೃಹತ್ ಕಂಬಂಗಳ ನೋಡಿಗೊಂಡು ಸಭಾಮಂಟಪದ ಹೊಡೆಂಗೆ ಬಂದರೆ “ತೂಗಾಡ್ತ ಕಂಬ”(Hanging Pillar) ನಮ್ಮ ಗಮನ ಸೆಳೆತ್ತು. ಎಲ್ಲ ಕಂಬಂಗಳ ಹಾಂಗೆ ಇದು ತಳವ ಮುಟ್ಟಿಗೊಂಡಿಲ್ಲೆ, ಸುಮಾರು ಅರ್ಧ ಇಂಚಿನಷ್ಟು ಸಂದು ಇಪ್ಪದು ಸ್ಪಷ್ಟವಾಗಿ ಕಾಣುತ್ತು. ಅಲ್ಯಾಣ “ಗೈಡ್” ಗೊ ಹೇಳ್ತ ಕತೆ ಪ್ರಕಾರ, ಇದರ ಗುಟ್ಟು ತಿಳ್ಕೊಂಬಲೆ ಬೇಕಾಗಿ 1903 ರ ಸುಮಾರಿಲಿ ಬ್ರಿಟಿಷ್ ಅಧಿಕಾರಿ ಒಬ್ಬ ಈ ಕಂಬವ ಒಂದು ಹೊಡೆಂಗೆ ಜಾರ್ಸಿಯಪ್ಪಗ, ಹತ್ತರೆ ಆಚೀಚಿಕೆ ಇಪ್ಪ ಕಂಬಂಗೊ ಇದ್ದಲ್ಲಿ ರಜ್ಜ ತಿರುಗಿ “ಪುನರ್ ಜೋಡಣೆ” ಗೊಂಡಿದು. ಆ ಕುರುಹುಗಳ ಈಗಳೂ ಕಾಂಬಲಕ್ಕು. ಈಗ ಈ ಕಂಬದ ತಳ ಭಾಗವ ನೋಡಿರೆ  ಒಂದು ಮೂಲೆಲಿ  ತಳ ಮುಟ್ಟಿದ ಹಾಂಗೆ ಕಾಣುತ್ತು. ಏನೇ ಆಗಲಿ, ಅಷ್ಟು ದೊಡ್ಡ ಗಾತ್ರದ ಕಲ್ಲಿನ ಕಂಬವ ಈ ನಮುನೆ ನಿಲ್ಸುದು ಸೋಜಿಗದ ಸಂಗತಿಯೇ ಸರಿ. !

ಹೆರ ಬಂದು ಬಲತ್ತಿಂಗೆ ತಿರುಗಿದರೆ ಕಾಂಬದು ಕಲ್ಯಾಣ ಮಂಟಪ. ವಿಶಾಲವಾದ ಎತ್ತರದ ಚಾವಡಿಲಿ ವಿವಿಧ ರೀತಿಲಿ ಕೆತ್ತಿ ನಿಲ್ಸಿದ ಕಂಬದ ಸಾಲು ಕಾಣುತ್ತು. ಮೇಲೆ ಚಾವಣಿ ಇಲ್ಲದ್ದು ನೋಡಿರೆ ಇದು ಅಪೂರ್ಣ ಆಗಿರೆಕ್ಕು ಹೇಳ್ತ ಸಂಶಯ ಆರಿಂಗೂ ಬಕ್ಕು.ಕಾರಣ ಯೇವುದೇ ಆಗಲಿ, ಕಲ್ಯಾಣ ಮಂಟಪ ಅಪೂರ್ಣ ಆಗಿಯೇ ಒಳುದ್ದು. ವಿಶೇಷ ಕೆತ್ತನೆ ಕಾರ್ಯವೂ ಇಲ್ಲಿ ಕಾಂಬಲೆ ಸಿಕ್ಕುತ್ತು – ಮೂರು ಮೋರೆ ಇಪ್ಪ ಹಸು, ವಿಶಿಷ್ಟ ರೀತಿಲಿ ಕಾಂಬ ಕೋತಿಯ ಕೆತ್ತನೆ ಇತ್ಯಾದಿ. ಹತ್ತರೆ ಇಪ್ಪ ಲತಾ ಮಂಟಪದ ಸುಮಾರು ೪೨ ಕಂಬಂಗಳಲ್ಲಿ ವಿಧ ವಿಧದ ಬಳ್ಳಿಗಳ ಉದ್ದಕ್ಕೂ ಕೆತ್ತಿಗೊಂಡಿದ್ದು. ಈ ಕುಸುರಿಯ ಈಗಳೂ ಕೆಲವು ಹೊದಕ್ಕೆ ವಸ್ತ್ರಂಗಳ ಅಂಚಿಲಿ ಕಾಂಬಲೆ ಸಿಕ್ಕುಗು. ಇದು “ಲೇಪಾಕ್ಷಿ ಮುದ್ರೆ” ಹೇಳಿ ಹೆಸರುವಾಸಿ. ಲೇಪಾಕ್ಷಿಯ ಇನ್ನೊಂದು ಮುಖ್ಯ ಕೆತ್ತನೆ, ಅಲ್ಯಾಣ “ನಂದಿ” . 14 ಅಡಿ ಎತ್ತರ, 21 ಅಡಿ ಉದ್ದದ ಈ ಏಕಶಿಲಾ ಕೆತ್ತನೆ ವಿಶ್ವದ ಅತಿ ದೊಡ್ಡ ನಂದಿ ವಿಗ್ರಹ.( ತಂಜಾವೂರಿನ ಬೃಹದೀಶ್ವರ ದೇವಸ್ತಾನದ ನಂದಿ ಎರಡನೆದು, ಮೈಸೂರಿನ ಚಾಮುಂಡಿ ಬೆಟ್ಟದ ನಂದಿ ಮೂರನೆದು) ಇದರ ಸುತ್ತುಮುತ್ತ ಇಪ್ಪ ಹೂತೋಟ, ಹತ್ತರೆ ಇಪ್ಪ ಸಣ್ಣ ತಾವರೆ ಕೊಳ ಎಲ್ಲವೂ ಆಕರ್ಷಣೀಯ.

ಒಟ್ಟಾರೆಯಾಗಿ ಹೇಳ್ತರೆ ಲೇಪಾಕ್ಷಿಯ ವೀರಭದ್ರ ದೇಗುಲ ನಮ್ಮ ಪ್ರಾಚೀನ ಕಾಲದ ಶಿಲ್ಪ ಕಲೆಯ ವೈಭವದ ಪ್ರತೀಕ. !

ಕೆಲವು ಪಟಂಗೋ..


10 thoughts on “ಅಪೂರ್ವ ಶಿಲ್ಪಕಲಾ ತಾಣ – ಲೇಪಾಕ್ಷಿ

  1. “ಬೃಹತ್ ಕಂಬಂಗಳ ನೋಡಿಗೊಂಡು ಸಭಾಮಂಟಪದ ಹೊಡೆಂಗೆ ಬಂದರೆ “ತೂಗಾಡ್ತ ಕಂಬ”(Hanging Pillar) ನಮ್ಮ ಗಮನ ಸೆಳೆತ್ತು.”… ಬೈಲಿನ ಇಂಜಿನಿಯರ್ ಗ ಇವುಗಳ ಬಗ್ಗೆ ಎಲ್ಲ ಜಾಸ್ತಿ ಜಾಸ್ತಿ ಆಸಕ್ತಿ ತೋರುಸಿ ‘ಹಳೆ ಬೇರು ಹೊಸ ಚಿಗುರು ಸೇರಿರಲು ಮರ ಸೊಬಗು’ ಹೇಳಿ ಭಾರತದ ಗತ ವೈಭವ ಇನ್ನೊಂದರಿ ಮರುಕಳಿಸಲಿ…

  2. ಉತ್ತಮ ಲೇಖನ..
    ಸಣ್ಣಾದಿಪ್ಪಗ ಒಂದರಿ ಹೋಗಿತ್ತಿದ್ದೆ, ಇನ್ನೂ ಕೆಲವೆಲ್ಲ ನೆಂಪಿದ್ದು..ಚಿತ್ರಂಗೊ..ಶಿಲ್ಪಕಲೆ ಇತ್ಯಾದಿ…
    ಎಲ್ಲರೂ ಒಂದರಿ ಹೋಗಿ ನೋಡೆಕಾದ ಜಾಗೆ 🙂
    ಇಲ್ಲಿಗೆ ಹತ್ತರೆ ಇನ್ನೊಂದು ಹಳೇ ದೇವಸ್ಥಾನ ಇದ್ದು, ಕಲ್ಲಿಲ್ಲಿ ಕಟ್ಟಿದ್ದು. ಅಲ್ಲಿ ದೇವಸ್ಥಾನದ ನಡೂಕೆಲಿ ಒಮ್ದು ಕಂಬ ಇದ್ದು, ಆ ಕಂಬ ನೆಲಕ್ಕೆ ತಾಗುತ್ತೇ ಇಲ್ಲೆ ! ಕಂಬದ ಅಡಿಯಂದ ಕಾಗದವ ಅತ್ತಿತ್ತೆ ಮಾಡ್ಲಾವ್ತು ! ಅದು ವಿಶಿಷ್ಟ ಇಂಜಿನಿಯರಿಂಗ್ !! ಆ ದೇವಸ್ಥಾನದ ಹೆಸರು, ಜಾಗೆ ಹೆಸರು ನೆಂಪಿಲ್ಲೆ.

  3. {ಚರಿತ್ರೆ ಹೇಳುವ ಕಲ್ಲಿಲಿ ನೀಲಿ ಅಕ್ಷರಲ್ಲಿ ಬರದ್ದವೋ?}

    ಈ ಸರ್ತಿ ನಿನಗೆ ಇಂಗ್ಳೀಶಿಲಿ ಪಾಸು ಮಾರ್ಕು ಸಿಕ್ಕುಗು, ಹೆದರಿಕೆ ಇಲ್ಲೆ
    {ನಂದಿಯ ಹತ್ತರೆ ಬೈಲಿನ ಆರೋ ನಿಂದುಗೊಂಡಿದ್ದವು, ಆರದು?}

    ನಂದಿ ಹೇಳಿರೆ ಬಸವ, ಕಂಬ್ಳಲ್ಲಿ ಓಡುತ್ತದಲ್ಲ, ಆತೋ.?

  4. ಶುದ್ದಿ ಲಾಇಕಾಯಿದು ಮಾವ.
    ಎಂಗಳ ಕರಕ್ಕೊಂಡು ಹೋದ ಹಾಂಗೇ ಆತು ಒಂದರಿ.

    ಚರಿತ್ರೆ ಹೇಳುವ ಕಲ್ಲಿಲಿ ನೀಲಿ ಅಕ್ಷರಲ್ಲಿ ಬರದ್ದವೋ?
    ನಂದಿಯ ಹತ್ತರೆ ಬೈಲಿನ ಆರೋ ನಿಂದುಗೊಂಡಿದ್ದವು, ಆರದು?

  5. ಯೇ..! ಈ ಕುಮಾರ ಮಾವ ಅಂತೇ ತಿರುಗಲೆ ಹೋದ್ದಲ್ಲ ಎನ್ನ ಹಾಂಗೆ. ಲೇಪಾಕ್ಷಿ ಹೇಳಿರೆ ಎಂತದೋ ಲೇವಡಿ ಮಾಡ್ತದಾಯ್ಕು ಹೇಳಿ ಗ್ರೇಶಿದ್ದಪ್ಪ ಆನು ಸುರುವಿಂಗೆ. ಹೀಂಗೊಂದು ಪುರಾಣ ಇತಿಹಾಸ ವಿಶೇಷತೆ ಇಪ್ಪದರ ವಿಷಯ ಸಂಗ್ರಹಿಸಿ ಪಟ ಸಹಿತ ಬೈಲಿಲಿ ದಾಖಲೆಗೊಳಿಸಿದ್ದು ಸಾರ್ಥಕ ಆತು ಕುಮಾರಮಾವನ ಬಿಡುದಿನದ ಪ್ರವಾಸ ಹೇಳಿ ಮೆಚ್ಚಿತ್ತು- ‘ಚೆನ್ನೈವಾಣಿ’.

  6. ಅಪೂರ್ವ ಶಿಲ್ಪ ಕಲೆ ಇಪ್ಪ ಲೇಪಾಕ್ಷಿ ಬಗ್ಗೆ ಸವಿವರ ಲೇಖನ.
    ಜಾಗೆಗೆ ಸಂಬಂಧಿಸಿದ ಪುರಾಣ ಐತಿಹಾಸಿಕ ಮಾಹಿತಿಗೊ ಕೂಡಾ ಕೊಟ್ಟದು ಲಾಯಿಕ ಆತು.
    ಒಂದು ಪ್ರವಾಸೀ ತಾಣವ ಪರಿಚಯ ಮಾಡಿಸಿ ಕೊಟ್ಟ ಹಾಂಗೂ ಆತು.
    ಪಟಂಗೊ ಚೆಂದಕೆ ಇದ್ದುಗೊಂಡು, ಲೇಖನಕ್ಕೆ ಪೂರಕವಾಗಿ ಕೊಶೀ ಆತು.

  7. ಒಪ್ಪಂಗೊ ಮಾವಾ ,
    ಲೇಪಾಕ್ಷಿಯ ಪುರಾಣ, ಇತಿಹಾಸ ಸಮೇತ ಒಳ್ಳೆ ರೀತಿಲಿ ಪರಿಚಯ ಮಾಡಿಕೊಟ್ಟಿದಿ , ಪಟಂಗಳೂ ಲಾಯಿಕ ಬಯಿಂದು ನೋಡಿ ಕೊಶೀ ಆತು, ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×