Oppanna.com

ಕುಂಬಳಕಾಯಿ ಜೆಪ

ಬರದೋರು :   ವಾಣಿ ಚಿಕ್ಕಮ್ಮ    on   18/12/2012    10 ಒಪ್ಪಂಗೊ

ವಾಣಿ ಚಿಕ್ಕಮ್ಮ
Latest posts by ವಾಣಿ ಚಿಕ್ಕಮ್ಮ (see all)

ನಮ್ಮ ಜೀವನಲ್ಲಿ ದಿನನಿತ್ಯ ನೆಡವ ಕೆಲವು ಘಟನೆಗಳ ಅಂಬಗ ನವಗೆ ಯೋಚಿಸುಲೇ ಸಮಯ ಇರ್ತಿಲ್ಲೆ, ರಜ ದಿನ ಕಳುದ ಮತ್ತೆ ಅದೇ ಘಟನೆಗಳ ಜಾನ್ಸಿಯಪ್ಪಗ ಹಾಸ್ಯವೋ ಸ್ವಾರಸ್ಯವೋ ಕಾಣ್ತು. ಹಾಂಗಿಪ್ಪ ಒಂದು ಪ್ರಸಂಗವ ನಿಂಗೋಗೆ ಒಂದು ಶುದ್ದಿ ಹೇಳುವ ಪ್ರಯತ್ನ…

ಎಂಗಳ ಮಗಳು ಹೆರಿಗೆಗೆ ಎಂಗಳಲ್ಲಿಗೆ ಬಂದಿತ್ತು. ಮಗಳಿಂಗೆ ಡಾಕ್ಟ್ರು,ಸಿಸೇರಿಯನ್ ಆಯೆಕ್ಕಷ್ಟೇ ಹೇಳಿ ಹೇಳಿತ್ತಿದ್ದವು. ತಿಂಗಳು ತುಂಬಿಯಪ್ಪಗ ಒಂದು ಒಳ್ಳೆ ದಿನ ನೋಡಿ ಬನ್ನಿ ಹೇಳಿ ಎಂಗೊಗೆ ಮೊದಲೇ ತಿಳಿಶಿತ್ತವು.ಆ ಪ್ರಕಾರ ಸಿಸೇರಿಯನ್ ಮಾಡ್ಲೆ ಆಸ್ಪತ್ರೆಗೆ ಹೋಪ ಮುನ್ನಾಣ ದಿನ ಮಗಳ ಗೆಂಡ ಅಳಿಯ ಮನೆಗೆ ಬಯಿಂದ.ಎಂಗಳಲ್ಲಿ ಹೆಮ್ಮಕ್ಕೋ ಹೇಳಿ ಆನು ಒಬ್ಬನೇ ಇಪ್ಪದು. ‘ಇವಕ್ಕೆ’ ಅಡಿಗೆ ಕೆಲಸ ಅಷ್ಟು ಅಭ್ಯಾಸ ಇಲ್ಲೆ. ಆದರೂ ಇಂಥ ಸಂದರ್ಭಲ್ಲಿ ಆನು ಮಗಳ ಹತ್ತಾರೆ ಇರೆಕ್ಕಾದ್ದು ಅನಿವಾರ್ಯತೆ ಇಪ್ಪ ಕಾರಣ ಆಸ್ಪತ್ರೆಗೆ ಹೆರಟಿದೆ.
ಹಾಂಗೆ ಹೊತ್ತೊಪಗ ೫ ಗಂಟಗೆ ಮನೆಂದ ಹೆರಡುದು ಹೇಳಿ ಮಾತಾಡಿದ್ದೆಯ. ಅದೇ ದಿನ ಮನೆ ಹತ್ತರೆ, ಇವರ ಸೋದರತ್ತಿಗೆಯ ಮನೇಲಿ ಮನೆಒಕ್ಕಲಿನ ಕಾರ್ಯಕ್ರಮ ಇತ್ತಿದ್ದು.
ಅಲ್ಲಿಗೆ ಹೋಗಿ ಬಂದು ನಿತ್ಯ ಕೆಲಸಂಗಳ ಗಡಿಬಿಡಿಲಿಯೇ ಮುಗಿಶಿದೆ.

ಮನೆಂದ ಆಸ್ಪತ್ರೆಗೆ ೧೮ ಕಿ.ಮೀ ದೂರ ಇದ್ದು. ೬ ಗಂಟೆಗೆ ಡಾಕ್ಟ್ರು ಬಪ್ಪಲೆ ಹೇಳಿದ್ದವು.ಹೆರಟಪ್ಪಗ ೫ ಗಂಟೆ ೧೦ ಮಿನಿಟು. ಮಗಳು ಅಳಿಯ ಹೋಪೋ ಹೋಪೋ ಹೇಳಿ ಅಂಬೇರ್ಪು ಮಾಡ್ಲೆ ಸುರು ಮಾಡಿದವು. ಇನ್ನೆಂತ ಆನುದೇ ಹೇರಡುದು ಹೇಳಿಯಪ್ಪಗ – ಒಳಾಣ ಕೋಣೆಲಿ ಕುಂಬಳಕಾಯಿ ಪರಿಮ್ಮಳ ಎನ್ನ ಮೂಗಿಂಗೆ ಬಡುದತ್ತು. ಕೋಣೆ ಒಳಂಗೆ ಹೋಗಿ ಅಲ್ಲಿಪ್ಪ ೧೦-೧೨ ಕುಂಬಳಕಾಯಿಯನ್ನೂ ಪಕ್ಕ ಪಕ್ಕ ಮುಟ್ಟಿ ನೋಡಿದೆ.ಮುಟ್ಟುತ್ತಾ ಇದ್ದ ಹಾಂಗೆ ಒಂದರ ತೊಟ್ಟು ಎನ್ನ ಕೈಲಿಯೇ ಬಂತು.ಛೆ!!ಇದೆಂತ ಹೀಂಗೆ ಆತು ಹೇಳಿ ಗ್ರೆಶಿಗೊಂಡು ಇತ್ತಿದ್ದೆ.

ಈ ರೀತಿಯ ‘ಪರಿಮ್ಮಳ’ ಬಂದರೆ ಮುಂದೆ ಅದು ಹಾಳಪ್ಪ ಸೂಚನೆ ಹೇಳಿ ಲೆಕ್ಕ.
ಆನು ಆಸ್ಪತ್ರೆಂದ ಬಪ್ಪಗ ಏನಿಲ್ಲೇ ಹೇಳಿರೂ ನಾಕು ದಿನ ಕಳಿತ್ತು.(ಇವು ಕುಂಬಳಕಾಯಿ ಕೊರವ ಶುದ್ದಿಗೆ ಹೋಗವು!)ಈ ಕುಂಬಳಕಾಯಿ ಪರಿಮ್ಮಳ ಬಪ್ಪ ವಿಷಯವ ಮನೇಲಿ ಹೇಳಿದೆ. ಆರಿಂದಲೂ ಎಂತದೂ ಪ್ರತಿಕ್ರಿಯೆ ಬಯಿಂದಿಲ್ಲೆ. ಇದರ ಎಲ್ಲ ಆಲೋಚನೆ ಮಾಡಿಗೊಂಡು ಕೂಪ ಸಮಯ ಇದಲ್ಲ ಹೇಳಿ ಎಂಗೊ – ಆನು, ಮಗಳು ಅಳಿಯ – ಮೂರು ಜನ ಕಾರಿಲಿ ಆಸ್ಪತ್ರೆಗೆ ಹೆರಟೆಯ. ಸುಮಾರು ೧೦ ಮಿನಿಟು ಕಾರಿಲಿ ಮೌನ. ಆರುದೆ ಮಾತಾಡ್ತವಿಲ್ಲೇ. ಅಷ್ಟಪ್ಪಗ ಅಳಿಯ ಮೆಲ್ಲಂಗೆ ಸೊರ ತೆಗದ. ಅತ್ತೇ – ನಿಂಗೋಗೆ ಆನು ಪೇಟೆಂದ ಮತ್ತೆ ಬಪ್ಪಗ ಒಂದು ಗೆನಾ ಕುಂಬಳಕಾಯಿ ತಂದು ಕೊಡ್ತೆ – ಹೇಳಿ ಹೇಳಿದ. ಈ ಸಂದರ್ಭಲ್ಲಿ ಇವ ಹೀಂಗೆ ಎಂತಕೆ ಹೇಳ್ತಾ ಇದ್ದ ಹೇಳಿ ಎನಗೆ ತಲಗೆ ಹೊಯಿದಿಲ್ಲೇ. ಎನ್ನದು ಮೌನವೇ ಉತ್ತರ!
ಎನಗೆ ಕುಂಬಳಕಾಯಿ ಹಾಳಾವ್ತನ್ನೇ ಹೇಳಿ ಅಂಥಾ ಬೇಜಾರು ಇಲ್ಲೆ.ಆದರೂ ಗೃಹಿಣಿಯ ಜವಾಬ್ದಾರಿ ಇದ್ದನ್ನೇ.!
ನಾಳೆ ಮನೇಲಿ ಅಡಿಗೆ ಮಾಡಿ ಬಳುಸೆಕ್ಕನ್ನೇ!!!!

ಆನು ಆಸ್ಪತ್ರೆಗೆ ಹೋಗಿ ಬಪ್ಪಗ ಕುಂಬಳಕಾಯಿ ವಾಸನೆ ಇನ್ನುದೇ ಹೆಚ್ಚಕ್ಕನ್ನೇ ಹೇಳಿ ಗ್ರೇಶಿ ತಲೆಬೇಶಿ ಆತು. ಮತ್ತೆ ಮನಗೆ ಫೋನು ಮಾಡಿ ಇವರತ್ರೆ ಹೇಳಿ ಎಂತಾರು ವೆವಸ್ತೆ ಮಾಡುವ ಹೇಳಿ ಗ್ರೆಶಿದೆ. ಫೋನು ಮಾಡಿದೆ ಮಾಡಿದೆ. ತೆಗತ್ತವಿಲ್ಲೇ. ಇನ್ನು ಆಕೇರಿಯಾಣ ಕೆಲಸ!!! ಒಂದು ಎಸ್ಸೆಮ್ಮೆಸ್ಸು ಮಾಡಿದೆ..ಇಷ್ಟು ಕೆಲಸ ಅಪ್ಪಗ ಕಾರು ಆಸ್ಪತ್ರೆ ಎದುರು ನಿಂದಿತ್ತು.
ಡಾಕ್ಟ್ರು ಬಂದವು.ಮಗಳ ಪರೀಕ್ಷೆ ಮಾಡಿದವು. “ನಾಳೆ ಉದಿಯಪ್ಪಗ ೦೭.೩೦ಕ್ಕೆ ಸಿಸೇರಿಯನ್ ಮಾಡುದು” ಹೇಳಿದವು.

ಕುಂಬ್ಳಕಾಯಿ ಜೆಪ
ಕುಂಬ್ಳಕಾಯಿ ಜೆಪ

ಮರುದಿನ ಉದಿಯಪ್ಪಗ ಸೂರ್ಯನ ಹಿತವಾದ ಬೆಶಿಲಿಂಗೆ ಹೋಗು ಮುಗುಳ್ನಗೆ ಬೀರುವ ಹೊತ್ತಿಂಗೆ ತಣ್ಣನೆ ಗಾಳಿ ಬೀಸಿಯೊಂಡಿತ್ತು. ಆನು,ಅಳಿಯ,ಅತ್ತಿಗೆ(ಮಗಳ ಅತ್ಯೋರು) ಮನಸ್ಸಿಲಿ ದೇವರ ನೆಂಪು ಮಾಡ್ತಾ ಒಂದು ಸಂತೋಷದ ಕ್ಷಣಕ್ಕಾಗಿ ಕಾಯ್ತಾ ಇತ್ತಿದ್ದೆಯ. ಆನು ಅಜ್ಜಿ ಆವ್ತಾ ಇದ್ದೆ ಹೇಳಿ!!! ಅರ್ದ ಗಂಟೆ ಕಳಿವಾಗ ನರ್ಸಮ್ಮ ಪುಟ್ಟು ಬಾಬೆಯ ಕರಕ್ಕೊಂಡು ಬಂದು ಅತ್ತಿಗೆಯ ಕೈಲಿ ಕೊಟ್ಟಿಕ್ಕಿ “ಹೆಣ್ಣು ಮಗು” ಹೇಳಿಯಪ್ಪಗ ಎಂಗೊಗೆಲ್ಲ ತುಂಬಾ ಖುಷಿ ಆತು…
ಈ ಸೀವಿನ ಶುದ್ದಿಯ ಮನೆಯವಕ್ಕೆ,ಮಗಳ ಮನೆಗೆ ಹತ್ತರಾಣ ನೆಂಟರುಗೋಕ್ಕೆ ತಿಳಿಶಿದೆಯ..
ಅಬ್ಬೆ,ಮಗಳು ಆರೋಗ್ಯಲ್ಲಿ ಇತ್ತಿದ್ದವು.ಅವರ ನೋಡ್ಲೆ ಬಪ್ಪಲೆ ಅನುಕೂಲ ಆದವು ಬಯಿಂದವು. ಎಂಗಳ ಆಚಮನೆಂದ ಮೈದುನ,ಬಯಿಂದವು. ಅವರತ್ರೆ ನೆಂಪಿಲಿ ಹೇಳಿದೆ.’ಮನೇಲಿ ಒಂದು ಕುಂಬಳಕಾಯಿ ಪರಿಮ್ಮಳ ಬಪ್ಪಲೆ ಸುರು ಆಯಿದು..ಅದರ ತೆಕ್ಕೊಂಡು ಹೋಗಿ’ ಹೇಳಿ ಹೇಳಿದೆ. ಅವು ಅಕ್ಕು ಹೇಳಿ ಹೇಳಿದವು. ಆಸ್ಪತ್ರೆಗೆ ಹೋಗಿ ಮೂರು ದಿನ ಕಳುದಪ್ಪಗ,ಅತ್ತಿಗೆ ಹೇಳಿತ್ತು, “ನೀನು ಮನೆಗೆ ಹೋವ್ತಾರೆ ಹೋಗು. ಆನು ಇಲ್ಲಿ ಇರ್ತೆ”.

ಹಾಂಗೆ ಆನು ಮನೆಗೆ ಬಂದೆ. ಮನೆಗೆ ಬಂದಪ್ಪಗ ಇವು ಹೇಳಿದವು. ಕುಂಬಳಕಾಯಿ ಆಚಮನೆಗೆ ಕೊಟ್ಟಿದೆ. ಅಲ್ಲಿಂದ ಅದರ ಬೆಂದಿ ಕೊಟ್ಟಿದವು ಹೇಳಿ.
ಇಲ್ಲಿಗೆ ಆ ಕುಂಬಳಕಾಯಿ ಕತೆ ಒಂದರಿಂಗೆ ಮುಗುದ ಹಾಂಗೆ ಆತು.

ಆದರೆ ಮುಗುದ್ದಿಲ್ಲೆ. ಇನ್ನೇ ಇಪ್ಪದು ಸ್ವಾರಸ್ಯ…!!!
ಒಂದು ವಾರ ಕಳುದಪ್ಪಗ ಮಗಳ, ಪುಳ್ಳಿಯ ಆಸ್ಪತ್ರೆಂದ ಮನಗೆ ಕರಕ್ಕೊಂಡು ಬಂದವು. ಅತ್ತಿಗೆಯೂ ಅವರ ಜೆತೆಲಿ ಬಂದು ನಾಲ್ಕು ಇದ್ದು ಅವರ ಮನೆಗೆ ಹೋದ್ದದು.
ಪುಳ್ಳಿ ಹುಟ್ಟಿದ ಸಂಭ್ರಮ ಮನೆಲಿ,ಕೈ ತುಂಬಾ ಕೆಲಸ. ಒಂದು ಮಿನಿಟೂ ಪುರುಸೋತ್ತಿಲ್ಲೆ ಹೇಳಿ ಹೇಳುವ ಹಾಂಗೇ!!
ಕೂಸು ಎಂತ ರಗಳೆ ಮಾಡದ್ದೇ ಲಾಯ್ಕ ಒರಗಿಯೊಂಡು ಇತ್ತು. ಮೀಶುವಗ ಸುಮ್ಮನೆ ಮನುಗಿಯೊಂಡಿದ್ದ ಕಾರಣ ಎನಗೆ ದೊಡ್ಡ ಕಷ್ಟ ಹೇಳಿ ಆಯಿದಿಲ್ಲೆ…

ಕೆಲವು ದಿನ ಕಳಿವಾಗ ಎಲ್ಲಾ ಕೆಲಸ ಅಭ್ಯಾಸ ಆಗಿಯೊಂಡು ಹೋತು.. ಯಾವಾಗಲೂ ಕೂಸಿನ ಮೀಶಿ, ಒರಗುಸಿಕ್ಕಿ ಎಂಗೋ ನಿತ್ಯಕೆಲಸಕ್ಕೆ ಹೋಪದು.
ಒಂದು ದಿನ ಹೀಂಗೆ ಎಂಗೋ ಅಬ್ಬೆ ಮಗಳ ಮಾತುಕತೆ ಅಡಿಗೆ ಒಳ ನೆಡೆತ್ತಾ ಇಪ್ಪಗ ಮಗಳು ನೆಂಪಿನ ಸುರುಳಿಯ ಬಿಚ್ಚುತ್ತಾ ಹೇಳಿತ್ತು..
ಅಬ್ಬಗೆ ಆಸ್ಪತ್ರೆಗೆ ಹೋಪಗ ಕುಂಬಳಕಾಯಿ, ಕುಂಬಳಕಾಯಿ ಹೇಳಿ ಒಂದೇ ಜೆಪ“!!!

ಎನಗೆ ಜೋರು ನೆಗೆ ಬಂತು. ಇಬ್ರಿಂಗೂ ನೆಗೆ ತಡವಲೇ ಎಡಿಯ.!
ವಿಷಯ ಎಂತಾದ್ದು ಹೇಳಿರೆ, ಕುಂಬಳಕಾಯಿ ಪರಿಮ್ಮಳ ಬಪ್ಪ ಜಾಗೆಲಿ ಒಂದು ಗೆನಾದು ಬಂದು ಕೂದ್ದದು ಆರಿಂಗೂ ಗೊಂತಿಲ್ಲೆ.
ಅಂಬಗ ಬೆಂದಿ ಮಾಡಿಪ್ಪಗ ಆನು ಅಂತೂ ಮನೇಲಿ ಇತ್ತಿಲ್ಲೇ. ಲೆಕ್ಕಕ್ಕೆ ಲೆಕ್ಕ ಆತು..
ಎಂಗೊಗೆ ವಿಷಯ ಗೊಂತಾಗಿ ನೆಗೆ ಮಾಡಿ ಸಾಕಾತು, “ಆನು ಮಗಳತ್ರೆ ಹೇಳಿದೆ. ಈ ಶುದ್ಧಿಯ ಬೈಲಿಲಿ ಹೇಳಿಕ್ಕಿ ಬತ್ತೆ”.
ಅಂಬಗ ಮಗಳು ಹೇಳಿತ್ತು.. “ಅಬ್ಬೇ, ಗೆದ್ದೆ ಕರೆಲಿ ಇಪ್ಪ ಬಳ್ಳಿ ಕುಂಬ್ಳ ಬಳ್ಳಿಯ ಹಾಂಗೆ ಕಾಣ್ತು..ಅಪ್ಪೋ?”
ಅದು ಕೆಂಬುಡೆ ಬಳ್ಳಿ ಮಗಳೇ, ಹೇಳಿ ಕುಂಬಳಕಾಯಿ ವಿಷಯ ಎನಗೆ ಪುನಾ ನೆಂಪಾತು. ನೆಗೆ ಮಾಡಿಯೊಂಡು ಬೈಲ ಕರೆಗೆ ಹೆರಟೆ..

ಮತ್ತೆ ಮೂರು ತಿಂಗಳು ಅವರ ಜೆತೆಲಿ ಹೇಂಗೆ ಕಳುದ್ದು ಹೇಳಿಯೇ ಗೊಂತಾಯಿದಿಲ್ಲೇ..

ನಿತ್ಯ ಜೀವನಲ್ಲಿ ಕೆಲವು ಘಟನೆಗೋ ನವಗೆ ಆ ವಸ್ತುವ ನೋಡಿಯಪ್ಪಗ ನೆಂಪಾವ್ತು..
ಹಾಂಗೆ ಕುಂಬಳಕಾಯಿ ಕಂಡಪ್ಪಗ ಎನಗೆ ಈ ಶುದ್ಧಿ ಮನಸ್ಸಿಂಗೆ ಬತ್ತು..
ಹೀಂಗಿಪ್ಪ ಮನಸ್ಸಿಂಗೆ ಹತ್ತರೆ ಇಪ್ಪ ವ್ಯಕ್ತಿಗಳ ಹಾಸ್ಯಂಗೊ ನವಗೆ ಮನಸ್ಸಿಂಗೆ ಕೊಶಿ ಕೊಡ್ತು..ನಿಂಗಳ ಜೀವನಲ್ಲೂ ಹೀಂಗಿಪ್ಪ ಘಟನೆಗ ಇದ್ದರೆ ತಿಳಿಶಿಕ್ಕಿ
ಕುಂಬಳಕಾಯಿ ಜಪಕ್ಕೆ ಮುಕ್ತಾಯ ಹಾಡುತ್ತೆ..

10 thoughts on “ಕುಂಬಳಕಾಯಿ ಜೆಪ

  1. ಬಿ.ಟಿ.ಗುಳ್ಲ ನ ಕಾಲಲ್ಲಿ ಕು೦ಬಳ ಕಮ್ಮೆನೆ ಬ೦ದದು ವಿಶೇಷವೆ.

  2. ಭಾರೀ ಲಾಯಿಕಾಯಿದು ಬರದ್ದು ದೊಡ್ಡ ಚಿಕ್ಕಮ್ಮಾ…
    ಅದು ಹೇಂಗೆ ಹಾಂಗೆ ಆದ್ದು? ಅಲ್ಲಿ ಹೊಸತ್ತು ಹೇಂಗೆ ಬಂದದು?
    ದೊಡ್ಡ ಅಪ್ಪಚ್ಚಿ ಹೊಸತ್ತರ ಅಲ್ಲಿ ಮಡಿಗಿದ್ದಾ? ಅಲ್ಲ ವಾಸನೆ ಬಂದದು ಮಾತ್ರವಾ? ಅದು ಹಾಳಾಗಿತ್ತಿದ್ದಿಲ್ಲೆಯಾ? ಆಸ್ಪತ್ರೆಗೆ ಹೋಪ ಗಡಿಬಿಡಿಲಿ ಹಾಂಗೆಲ್ಲ ಆದ್ದಾ?
    ಇಡೀ ಶುಧ್ಧಿ ಓದುವಗ ಹರಿಯೊಲ್ಮೆ ಮನೆ, ಮನೆ ಮಂದಿ, ಮನೆ ಹತ್ರಾಣ ಪರಿಸರ ಎಲ್ಲ ಕಣ್ಣಿಂಗೆ ಕಟ್ಟಿತ್ತು ಚಿಕ್ಕಮ್ಮಾ…

  3. ಚೆನ್ನೈ ಭಾವಯ್ಯನ ಸಂಶಯ ಎನಗೂ ಬಂತು. ಘನವಾದ ಕುಂಬಳಕಾಯಿ ಬಂತು ಎಲ್ಲಿಂದ ???
    ಕುಂಬಳಕಾಯಿಯ ಕತೆಯೊಟ್ಟಿಂಗೆ ನವಿರಾಗಿ ಮಗಳ ಹೆರಿಗೆ ವಿಷಯ ತಂದದು ಸೂಪರ್ ಆಯಿದು.

  4. ಅಂಬಗ ಆ ಗೆನಾ ಕುಂಬಳಕಾಯಿ ಅಲ್ಲಿಗೆ ಬಂದದು ಎಲ್ಲಿಂದ ?!!!

    [ಒಂದು ಗೆನಾದು ಬಂದು ಕೂದ್ದದು] – ಇದರ ನೋಡಿಕ್ಕಿ ನೆಗೆಮಾಣಿ ಪಿಸಕ್ಕನೆ ನೆಗೆಮಾಡಿಕ್ಕಿ ಹೋದ°ನ್ನೇ. ಎಂತಕಪ್ಪಾ ?!!

    1. ಸ್ವಾರಸ್ಯವಾಗಿ ಘಟನೆ ನಿರೂಪಣೆ ಆಯಿದು.
      [ಅಳಿಯ ಮೆಲ್ಲಂಗೆ ಸೊರ ತೆಗದ. ಅತ್ತೇ – ನಿಂಗೋಗೆ ಆನು ಪೇಟೆಂದ ಮತ್ತೆ ಬಪ್ಪಗ ಒಂದು ಗೆನಾ ಕುಂಬಳಕಾಯಿ ತಂದು ಕೊಡ್ತೆ – ಹೇಳಿ ಹೇಳಿದ.]-ಅವನೇ ತಂದು ಮಡುಗಿದನೋ?
      ಅಲ್ಲ, ಆಚಮನೆಗೆ ಕೊಟ್ಟಪ್ಪಗ, ಆ ಜಾಗೆಲಿ ಬೇರೊಂದು ಗೆನಾದ್ದು ಮಡುಗಿದ್ದು ಮನೆ ಯಜಮಾನರೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×