Oppanna.com

ನೆಟ್ಟು ಬೆಳೆಶುವ ಸುಖ

ಬರದೋರು :   ಕಜೆವಸಂತ°    on   13/10/2013    6 ಒಪ್ಪಂಗೊ

ಕಜೆವಸಂತ°
Latest posts by ಕಜೆವಸಂತ° (see all)

ದೇವರೋ, ಪ್ರಕೃತಿಯೋ (ಅವ್ವವ್ವು ನಂಬಿಗೊಂಡ ಹಾಂಗೆ) ಯಾವದು ಹೇಳಿ ಗೊಂತಿಲ್ಲದ್ದ ಒಂದು ಶಕ್ತಿ ಸಂತತವಾದ, ಸುರು-ಅಖೇರಿ (ಕಡೆಕೊಡಿ) ಇಲ್ಲದ್ದ ಈ‌ ಜೀವರಾಶಿಯ ಚಕ್ರವ ನಡೆಶಿಗೊಂಡು ಬಯಿಂದನ್ನೆ? ಕೆಲವು ಲಕ್ಷ ಜಾತಿಯ ಹಲವು ಶತಕೋಟಿ ಸಂಖ್ಯೆಯ ಈ ಜೀವರಾಶಿಯ ತಾನು ಒಬ್ಬನೇ‌ ಹುಟ್ಟುಸಿ, ಬೆಳೆಶುದು ಆಗಿಮುಗಿವ ಕೆಲಸ ಅಲ್ಲ ಹೇಳಿ ಆ ಜವಾಬ್ದಾರಿಯ ಆ ದೇವರು ಅವಕ್ಕೆಲ್ಲ (ನಮ್ಮನ್ನೂ ಸೇರ್ಸಿ) ಸಮನಾಗಿ ಹಂಚಿಬಿಟ್ಟಿದ°! ಅವಕ್ಕವಕ್ಕೆ ಗೊಂತಿಲ್ಲದ್ದೇ‌ ಈ‌  ಹೊಣೆಯ ಹೊತ್ತುಗೊಂಡಿಪ್ಪ ಒಂದೊಂದು ಜೀವಂಗೊ ತಮ್ಮದೇ ವಂಶವ ಹೊತ್ತು, ಹೆತ್ತು ಸಾಂಕುದಲ್ಲದ್ದೆ ಇತರೆ ನೂರಾರು ಜಾತಿಯ ಜೀವಿಗಳ ಸೃಷ್ಟಿ, ಸ್ಥಿತಿ (ಲಯ) ಪ್ರಕ್ರಿಯೆಲಿ ಪಾಲ್ಗೊಂಬದು ನಮಗೆ ರಜ ಗಮನಿಸಿದರೆ ಸುಲಭಲ್ಲಿ ಗೊಂತಪ್ಪ ಸತ್ಯ. ಮಾತ್ರೆಯ ಹೆರಾಣ ಶುಗರ್ ಕೋಟಿಂಗಿನ ಹಾಂಗೆ ಈ‌ ಪ್ರಕ್ರಿಯೆಲಿ ಒಂದು ಸುಖ, ನೆಮ್ಮದಿ, ಆನಂದದ ಅನುಭವ ಅಲ್ಲಲ್ಲಿ ಮಡುಗಿದ ಕಾರಣ ಪ್ರತಿಯೊಂದು ಜೀವಿಗೊ ಈ ಮಹದು ಕೆಲಸವ ಕೋಟ್ಯಂತರ ವರ್ಷಂಗಳಿಂದ ಅನೂಚಾನವಾಗಿ ನಡೆಶಿಗೊಂಡು ಬಯಿಂದವು.
ಜೇನುಹುಳು ಒಂದರ ಉದಾಹರಣೆ ನೋಡುವ°. ಅದರ ಗುರಿ ಏನಿದ್ದರೂ ಮಕರಂದ ಮತ್ತು ಪರಾಗವ ಸಂಗ್ರಹಿಸುದು, ಅದರ ಪೋಷಣೆಲಿ ಸಂಸಾರವ ಬೆಳೆಶುದು. ಆದರೆ ಒಂದು ಜೇನುಹುಳು ಉದಿಯಪ್ಪಗ ಹೆರಟು ಸುರುವಿಂಗೆ ಮಾವಿನಮರಕ್ಕೆ, ಅಲ್ಲಿಂದ ಅಡಕ್ಕೆ ಮರಕ್ಕೆ, ಅಲ್ಲಿಂದ ರಬ್ಬರಿಂಗೆ, ರಬ್ಬರಿಂದ ಕುಂಟಾಲಕ್ಕೆ ಹಾರಿದರೆ ಎಂತಕ್ಕು? ಮಾವಿನ ಪರಾಗ ಅಡಕ್ಕೆಗೆ, ಅಡಕ್ಕೆಯ ಪರಾಗ ರಬ್ಬರಿಂಗೆ, ರಬ್ಬರಿಂದು ಕುಂಟಾಲಕ್ಕೆ ಬೀಳುಗು. ಯಾವುದರ್ಲಿಯೂ ಹಣ್ಣಾಗ, ಬಿತ್ತಾಗ. ಅವುಗಳ ವಂಶ ಮುಂದುವರಿಯ. ಆ ಮರಂಗೊ ಎಲ್ಲ ಪ್ರಾಯ ಆಗಿ ಸತ್ತರೆ ಮತ್ತೆ ಜೇನಿಂಗೆ ಮಧು ಸಿಕ್ಕ. ಕೊನೆಗೆ ಅದೂ ಸಾಯಿಗು. ಆದರೆ ಪ್ರಕೃತಿ ಜಾಣೆ. ಜೇನುಹುಳುವಿಂಗೆ ಅದೊಂದು ವಿಶಿಷ್ಟ ಸ್ಮರಣ ಶಕ್ತಿ ಕೊಟ್ಟಿದು. ಜೇನು ಉದಿಯಪ್ಪಗ ಶುರುವಿಂಗೆ ಮಾವಿನ ಮರಂದ ಸುರುಮಾಡಿದರೆ ಮತ್ತೆ ಮಾವಿನ ಹೂಗಿಂದ ಮಾವಿನ ಹೂಗಿಂಗೇ ಹಾರ್ತು. ಕುಂಟಾಲಲ್ಲಿ ಸುರುಮಾಡಿದರೆ ಕುಂಟಾಲಕ್ಕೇ. ಜೇನಿಂಗೆ ಮಧುದೇ‌ ಆತು; ಮರಕ್ಕೆ ಪರಾಗ ಸ್ಪರ್ಶವುದೆ!. ಜೇನು ಹುಳುವಿನ ಈ ಸ್ವಭಾವವ ಪರಾಗಸ್ಪರ್ಶದ ವಿಜ್ಞಾನ Floral Constancy ಹೇಳಿ ದಿನುಗೇಳ್ತು.
ಈ‌ ಗುಣ – ‘ಎನ್ನ ಸಾಂಕುವ ಮರದ ಸಂತತಿ ಒಳಿಯಲಿ’ ಹೇಳುವ ಉಪಕಾರ ಪ್ರವೃತ್ತಿಯೋ ಅಥವಾ ‘ಅದು ಒಳಿಯದ್ರೆ ನಾಳಂಗೆ ಎನ್ನ ವಂಶ ಒಳಿಯ’ ಹೇಳುವ ಸಣ್ಣ ಸ್ವಾರ್ಥವೋ – ಯಾವುದು ಹೆಚ್ಚು ಹೇಳುದು ಕಷ್ಟ. ಹೀಂಗೆ ಒಂದು ಉಗುರಿನಷ್ಟಿಪ್ಪ ಜೇನುಹುಳುವಿನ ಹತ್ತು ಜನ ಸೇರಿ ಸುತ್ತುಕಟ್ಟುವಷ್ಟು ದೊಡ್ಡ ಮಾವಿನ ಮರದೊಟ್ಟಿಂಗುದೇ, ಈ ಎರಡನ್ನುದೆ ಇತರೆಲ್ಲ ಸಣ್ಣದೊಡ್ಡ ಸಸ್ಯಪ್ರಾಣಿಗಳೊಟ್ಟಿಂಗುದೇ ನಮಗೆ ಕಾಣದ್ದ ಬಂಧವೊಂದರ ಉಪಯೋಗಿಸಿ ಹೆಣದು ಮಡುಗಿದ ದೇವರು, ತಾನು ಸ್ವತ: ಏನೂ ಮಾಡದ್ದೆ ಸುಮ್ಮನೆ ನಮ್ಮಗಳ ಹೊಂದಾಣಿಕೆಯ ಆಟ ನೋಡಿಗೊಂದು ಕೂಯಿದ°! ಈ ಆಟದ ಒಂದು ಸಣ್ಣ ಆಯಾಮವ ಆನು ಕಳುದ ಲೇಖನಲ್ಲಿ ಬರದ್ದೆ.
ಹೀಂಗೆ ಇತರೆ ಜೀವಿಗಳ ಸೃಷ್ಟಿಲಿ ಪಾಲ್ಗೊಳ್ಳುದು ಪ್ರತಿಯೊಂದು ಜೀವಿಯ ಕರ್ತವ್ಯ. ಬಿತ್ತುದು, ನೆಡುದು, ಬೆಳೆಶುದು ನಮ್ಮಗಳ (ಮನುಷ್ಯ ಮತ್ತು ಇತರೆ ಹಲವು ಪಕ್ಷಿ ಪ್ರಾಣಿಗಳ) ಆನಂದ ಮತ್ತು ಅನಿವಾರ್ಯತೆ. ಉಂಬ ಪ್ರತಿಯೊಬ್ಬನ ಬಾಧ್ಯತೆ. ಆಸಕ್ತ ಗಿಡಗೆಳೆಯರಿಂಗೆ ಅದೊಂದು ಗೌಜಿ, ಸಂಭ್ರಮ.
ಈಗ ನೆಡೆಕ್ಕಾರೆ ಈ‌ಗ ಬಿತ್ತಿದರೆ ಸಾಕ? ಕೆಲವಕ್ಕೆ ಸಾಕು ಕೆಲವಕ್ಕೆ ಸಾಕಾಗ. ಸೀದ ನೆಲಕ್ಕೆ ಬಿತ್ತಿದರೆ ಎಷ್ಟೋ ಗೆಡುಗೊ ಹುಟ್ಟವು, ಸುಲಬಲ್ಲಿ ಬೆಳೆಯವು. ಅದಕ್ಕೆ ಮೊದಲಿಂದ ತಯಾರಿ ಮಾಡೆಕಕ್ಕು. ಎನ್ನ ಅನುಭವದ ಮಟ್ಟಿಂಗೆ ಮಾರ್ಚಿ, ಎಪ್ರಿಲಿನ ಸೆಖೆ ಮತ್ತು ತೇವಾಂಶ ಬಿತ್ತು ಹುಟ್ಟುಲೆ ಅತ್ಯಂತ ಸೂಕ್ತ. ಅವಗ ಹೊಯಿಗೆ ಮಣ್ಣು ಹರಡಿ ಬೆಡ್ಡು ಮಾಡಿಯೋ, ಅಥವಾ ತೊಟ್ಟೆಲಿ ತುಂಬ್ಸಿಯೋ ಬಿತ್ತು ಹಾಕೆಕ್ಕು. ದೊಡ್ಡ ಹೆಮ್ಮರ ಆಗಿ ಬೆಳವ ಎಷ್ಟೆಷ್ಟೋ‌ ಮರಂಗೊ ಸುರುವಪ್ಪದು ಒಂದು ಉಗುರೆಡೆಲಿ ಹಿಡಿವಷ್ಟು ದೊಡ್ಡ ಬಿತ್ತಿಂದ. ಮುಚ್ಚೀರಿನ ಮರ ಎಷ್ಟು ದೊಡ್ಡಾವ್ತು ಆದರೆ ಅದರ ಬಿತ್ತು ಒಂದು ಏಲಕ್ಕಿ ಕಾಳಿನಷ್ಟೇ! ಆ ಬಿತ್ತಿನೊಳ ಮರದ ಗುಣ ಲಕ್ಷಣ, ಹಣ್ಣಿನ ಹುಳಿ/ಸೀವು ಎಲ್ಲದರ ಜಾತಕವ ಅಬ್ಬೆ ಮರದ ಹೂಗು, ಅಪ್ಪ ಮರದ ಪರಾಗರೇಣು ಸೇರಿ ಬರದು ಬಿಡ್ತವು. ಈ‌ ಬಿತ್ತಿನ ಮಣ್ಣಿಲಿ ಊರಿ ನಾವು ಕೆಲವು ದಿನ ಕಾಯೆಕ್ಕಾವ್ತು. ದಿನಾಗೊಳೂ ಹುಟ್ಟಿತ್ತ ಹೇಳಿ ಆಶೆಲಿ ನೋಡೆಕ್ಕಾವ್ತು. ಬಿತ್ತು ಹುಟ್ಟಿ ಮೊಳಕೆ ಒಡವ ಪ್ರಕ್ರಿಯೆ ಅತಿ ಸುಂದರ!, ಒತ್ತಿ ಮಡಿಗಿದ ಜೀವಶಕ್ತಿ ಸಿಡಿದು ಹೆರಬಪ್ಪ ಅದ್ಭುತ!
resize_germination1
ಮನುಷ್ಯರಲ್ಲಿ ಭ್ರೂಣಕ್ಕೆ ಎರಡು ಮೂರು ವಾರ ಅಪ್ಪಷ್ಟರೊಳ ಕಣ್ಣು, ಕೆಮಿ, ತಲೆ, ಕೈ, ಕಾಲಿನ ಮೂಲ ರಚನೆ ಇಪ್ಪ ಹಾಂಗೆ ಬಿತ್ತಿನ ಒಳ ಇಪ್ಪ ಮುಂಗೆಲಿಯುದೇ‌ ತಾಯಿಬೇರು, ಕಾಂಡದ ಮೂಲ ರೂಪ ಇರ್ತು (ಗೇರುಬೀಜದ ಹುಟ್ಟುತ್ತಾ ಇಪ್ಪ ಬಿತ್ತಿನ ಚಿತ್ರ ನೋಡಿ – ಸುರುವಾಣ ಎಲೆ ಸ್ಪಷ್ಟವಾಗಿ ಕಾಣ್ತು). ಬಿತ್ತು ಒಣಗಿಗೊಂಡಿಪ್ಪಗ ನಿದ್ರಾವಸ್ಥೆಲಿ (seed dormancy) ಇಪ್ಪ ಮುಂಗೆ, ಬಿತ್ತು ನೀರು ಹೀರಿ ಉಬ್ಬಿಗೊಂಡಪ್ಪಗ (imbibition) ಬಿತ್ತಿನ ಒಳ ಇಪ್ಪ ಆಹಾರವ(endosperm) ಉಪಯೋಗಿಸಿ ಬೆಳವಲೆ ಸುರು ಅವ್ತು. ಬೀಜ ಮೊಳಕೆ ಒಡದ ಕೂಡ್ಲೆ ಸುರುವಿಂಗೆ ಹೆರಬಪ್ಪದು ನೆಲಕ್ಕೆ ಊರುಲಿಪ್ಪ ಒಂದು ಗೂಂಟ(radicle) – ಇದರ ಒಂದು ಸಣ್ಣ ಭಾಗ ನೆಲದ ಮೇಲೆ ಒಳಿತ್ತು, ಮತ್ತಾಣದ್ದು ಮಣ್ಣಿನೊಳ ತಾಯಿಬೇರಾವ್ತು.
resize_DSC_4907 (copy)
ಒಂದು ಪಾದವ ನೆಲಕ್ಕೆ ಗಟ್ಟಿ ಊರಿ ಇನ್ನೊಂದರ ನೆಗ್ಗೆಕ್ಕು ಹೇಳಿ ತಿಳುದೋರು ಹೇಳಿದಾಂಗೆ, ಮೊಳಕೆಯುದೆ ಮೇಲಂಗೆ ಬೆಳವ ಮೊದಲು ತಾಯಿಬೇರಿನ ಅಡಿಯಂಗೆ ಊರ್ತು. ಅಬ್ಬೆ ಕಟ್ಟಿ ಕೊಟ್ಟ ಬಿತ್ತಿನ ಆಹಾರದ ಬುತ್ತಿ ಎಷ್ಟು ದಿನ ಬಕ್ಕು?‌ ಅದು ಕಟ್ಟಿ ಮಡುಗಿದ ಪೈಸೆಯ ಹಾಂಗೆ ಖರ್ಚಾಗಿ ಮುಗಿಗು. ಅದು ಮುಗಿವದರೊಳ ಮುಂಗೆ ಗೆಡು ಆಗಿ ಬದಲಾಗಿ ಆಯೆಕ್ಕನ್ನೆ? ಅದಕ್ಕೆ ಬಿತ್ತಿಲಿ ಇಪ್ಪ ಎರಡು ದಳಂಗಳ (ದ್ವಿದಳ ಬೀಜದ ಉದಾಹರಣೆ ತೆಕ್ಕೊಂಡರೆ) ಎತ್ತಿ ಬಿಡುಸಿ ಸೂರ್ಯನ ಹೊಡೆಂಗೆ ಹಿಡಿಯೆಕ್ಕು. ತಾಯಿಬೇರಿನ ನೆಲಕ್ಕೆ ಊರಿದ ಜಾಗೆಯ ಆಧಾರವಾಗಿ ಮಡುಗಿ, ಬಿತ್ತಿನೊಳಾಣ ಆಹಾರ ಹೀರಿ ಒಂದು ಕೊಂಬಿನ ಹಾಂಗಿಪ್ಪ ದಂಟು ಹೆರಬತ್ತು (ಮುಂಗೆ ಬರ್ಸುಲೆ ಮಡುಗಿದ ಹಸರು ನೆಂಪು ಮಾಡಿಗೊಳ್ಳಿ). ಬಗ್ಗಿಗೊಂಡಿಪ್ಪ ಈ ದಂಟು ಬಲ ಹಾಕಿ ಬಿತ್ತಿನ ಎರಡು ದಳಂಗಳ ಎತ್ತಿ ಸೂರ್ಯನ ಹೊಡೆಂಗೆ ನೆಗ್ಗಿ ಹಿಡುದಪ್ಪಗ ರಜ ನೆಮ್ಮದಿ. ಆಹಾರ ತಯಾರಿಯ ಹಾದಿ ಸುಗಮ. ಬಿಚ್ಚಿ ನಿಂದ ಬಿತ್ತಿನ ದಳಂಗಳ ಮಧ್ಯಲ್ಲಿ ಇಪ್ಪ ಸುರುವಾಣ ಎಲೆ ಈ‌ಗ ಬೆಳವಲೆ ಶುರುವಾಗಿ ನೂರಾರು ವರ್ಷಗಳ ಜೀವನಪ್ರಯಾಣ ಹೆರಡ್ತು. ಇಷ್ಟಪ್ಪಗ ನೆಲಕ್ಕೆ ಊರಿದ ತಾಯಿಬೇರಿಂದ ನೀರು ಆಹಾರ ಮೇಲೆ ಬಪ್ಪಲೆ ಮೊದಲಾಗಿ ಮುಂಗೆ ಸ್ವತಂತ್ರ ಗೆಡು ಆದ ಹಾಂಗೆ. ಬಿತ್ತಿಲಿಪ್ಪ ಆಹಾರ ಮುಗುದ ಮೇಲೆ ಅದು ಒಣಗಿ ಹೊಕ್ಕುಳ ಬಳ್ಳಿ ಉದುರಿದ ಹಾಂಗೆ ಉದುರಿ ಹೋವ್ತು.
ನರ್ಸರಿಲಿಪ್ಪ ಗೆಡುವಿನ ಇನ್ನೊಂದು ರಜ ದಿನ ಕಾಳಜಿ ಮಾಡಿ ನೆಲದ ಮಡಿಲಿಂಗೆ ಹಾಕಿದರೆ ಹೆಣ್ಣುಹೆತ್ತ ಅಬ್ಬೆಪ್ಪನ ಹಾಂಗೆ ನಮ್ಮ ಜವಾಬ್ದಾರಿ ಮುಗುದಾಂಗೆ – ಆ ಗೆಡುವಿನ ಮಟ್ಟಿಂಗೆ. ಸ್ವಾಭಾವಿಕವಾಗಿ ಪ್ರಕೃತಿಲಿ ಹುಟ್ಟುವ ಯಾವ ಗೆಡುವೂ ಭೂಮಿತಾಯಿಯ ಒಕ್ಕಿ ಅಗದು ಮಾಡ್ತವಿಲ್ಲೆ. ಆದರೆ ನಾವು ಕಷ್ಟಬಂದು ಬೆಳೆಶಿದ ಗೆಡುವಿನ ಹಾಂಗೆ ಮಾಡುಲಾವ್ತೊ? ಗುಂಡಿ ಮಾಡಿ ಕ್ರಮಾಗತಲ್ಲಿ ನೆಟ್ಟರೆ ಲಾಯಿಕ ಬಕ್ಕು. ಒಂದು, ಒಂದೂವರೆ ಫೀಟು ಗುಂಡಿ ಮಾಡಿ ರಜ ಕುಂಬಾದ ಸೊಪ್ಪು ತುಂಬ್ಸಿ ಒಕ್ಕಿದ ಮಣ್ಣಿನ ಪುನ ಗುಂಡಿಗೆ ತುಂಬ್ಸಿ ನುಸುಲು ಮಣ್ಣು ಸಿಕ್ಕುವ ಹಾಂಗೆ ಗೆಡುವಿನ ನೆಟ್ಟರೆ ಆಗಿ ಹೋತು. ತೊಟ್ಟೆಂದ ಗೆಡು ತೆಗವಗ ತೊಟ್ಟೆಯ ಹರಿವದು ಅನಿವಾರ್ಯ ಅಲ್ಲ. ತೊಟ್ಟೆಯ ತಲೆಕೆಳ ಮಾಡಿ ಜಾಗ್ರತೆಲಿ ತೆಗವಲಾವ್ತು, ಗೆಡು ತೊಟ್ಟೆಯೊಳ ಹೆಚ್ಚು ಬೆಳೆಯದ್ರೆ. ತೊಟ್ಟೆ ಇನ್ನೊಂದರಿಯಂಗಾವ್ತು. ಎಂತಗೆ ಹೇಳಿದೇಳಿದರೆ, ನಾವು ತೊಟ್ಟೆ ಉಪಯೋಗ್ಸುದು ತಪ್ಪು. ಅದರ ಪಾಪವ ರಜ ಕಡಮ್ಮೆ ಮಾಡಿಗೊಂಬಲಕ್ಕು. ನೆಡುವಗ ನಾವೇ ಸ್ವತ: ಗುಂಡಿಮಾಡಿದರೆ ವಿಶೇಷ – ನಮ್ಮ ಮೈ ರಜ ಗಟ್ಟಿ ಅಕ್ಕು – ಕೊಟ್ಟು ಪಿಕ್ಕಾಸು ನೆಗ್ಗಿ ಹಾಕಿದರೆ. ಒಂದು ಐದಾರಾದರೆ ಆನು ನೆಡ್ತೆ. ಅದರಿಂದ ಹೆಚ್ಚು ಸದ್ಯಕ್ಕೆ ಎಡಿತ್ತಿಲ್ಲೆ, ಎಂಗಳ ಪದ್ಮಶೆಟ್ಟಿಯ ಸಹಾಯ ಬೇಕಾವ್ತು . ಒಂದರಿ ನೆಟ್ಟಾದರೆ, ಇನ್ನು ಬೆಳವದು ಅದರ ಕೆಲಸ. ನೋಡಿ ಸಂತೋಷಪಡುದು ನಮಗೆ ಸಿಕ್ಕುವ ಸುಖ. ಮಳೆಗಾಲ ಕಳುದು ಚಳಿಗಾಲ ಬಪ್ಪವರೆಗೆ ಗೆಡುಗೊ ರಮ್ಮನೆ ಬೆಳೆತ್ತವು. ಮತ್ತೆ ನೀರಿಂಗೆ ತತ್ವಾರ. ಅವಗ ಗೆಡುಗೊ ಸೊಪ್ಪು ಉದುರ್ಸಿ ಮಿತವ್ಯಯಕ್ಕೆ ಶರಣಾವ್ತವು. ಮುಂಗಾರು ಸುರುವಾಗಿ ಮಳೆ ಬೀಳುವಗ ಪುನಾ ಚಿಗುರ್ತವು. ಒಂದೆರಡು ವರ್ಷ ಹೀಂಗೆ ದಾಂಟಿದರೆ ಮತ್ತೆ ಹೆದರಿಕೆ ಇಲ್ಲೆ. ಮತ್ತೆ ಕಾಲ ಬಂದಪ್ಪಗ ಹೂಗು, ಹಣ್ಣು ಅಕ್ಕು. ಅಲ್ಲಿಗೆ ‘ಮುಕ್ತ ಮುಕ್ತ’ಲ್ಲಿ ಬಂದುಗೊಂಡಿದ್ದ ಹಾಂಗೆ ಅದು ‘ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ’.
ಪ್ರತಿಯೊಬ್ಬ ಕೃಷಿಕನೂ ಸ್ವಂತ ಉಪಯೋಗಕ್ಕೆ ಒಂದು ಸಣ್ಣ ನರ್ಸರಿ ಮಾಡೆಕ್ಕು ಹೇಳುದು ಎನ್ನ ಖಚಿತವಾದ ಅಭಿಪ್ರಾಯ. ಗೆಡು ಕ್ರಯಕ್ಕೆ ಸಿಕ್ಕುತ್ತಿಲ್ಲೆ ಹೇಳಿ ಅಲ್ಲ. ನಮ್ಮ ಮನೆಯ ನರ್ಸರಿ ನಮಗೆ ಗೆಡು ಕೊಡುದಲ್ಲದ್ದೆ ಗೆಡುಗಳ ಬಗ್ಗೆ ಅದೆಷ್ಟೋ ವಿಷಯಂಗಳ ಕಲಿಶುತ್ತು. ಕೃಷಿಕನ ಉದ್ದೇಶ ಕೃಷಿಯ ಒಂದು ಬರೀ ‘ಉದ್ಯೋಗ’ವಾಗಿ ಸ್ವೀಕರಿಸುದಿದ್ದರೆ ಈ‌ ವಿಷಯಂಗಳ ಕಲಿವಿಕೆ ಅನಿವಾರ್ಯ ಅಲ್ಲ. ಆದರೆ ನಮ್ಮ ಸುತ್ತುಮುತ್ತಲಿನ ಪರಿಸರವ ಕಲಿವದು, ಕೃಷಿಯ ಒಂದು ಜೀವನಧರ್ಮವಾಗಿ ಸ್ವೀಕರಿಸುದು ನಮ್ಮ ಉದ್ದೇಶ ಆಯೆಕ್ಕಾರೆ ಇದೆಲ್ಲ ಬೇಕಾವ್ತು. ಹೆರ ನರ್ಸರಿಗಳಲ್ಲಿ ನಮಗೆ ವಾಣಿಜ್ಯಿಕ, ಅಲಂಕಾರಿಕ ಗೆಡುಗೊ ಧಾರಾಳ ಸಿಕ್ಕುಗು. ಆದರೆ ಬಳ್ಳಿ ಕಾಸರಕ, ಕರಂಡೆ, ಪುಚ್ಚೆ ಹಣ್ಣು, ಐರೋಳು ಗಡ್ಡೆ.. ಹೀಂಗೆ ಎಲ್ಲೋರು ಕಡೆಗಣಿಸಿದ ಸಾವಿರಾರು ಅನರ್ಘ್ಯ ಔಷಧೀಯ, ಆಹಾರ್ಯ ರತ್ನಂಗೊ ಸಿಕ್ಕುಗೊ? ಅದರ ನಾವೇ‌ ಒಳಿಶಿ ಬೆಳೆಶಕಷ್ಟೆ. ಅದು ಕೃಷಿಕನ ಬಹಳ ಮುಖ್ಯವಾದ ಜವಾಬ್ದಾರಿ.
ದೇವರು ಎಲ್ಲ ಜೀವಿಗೊಕ್ಕೆ ಒಂದೇ ನಮುನೆಗೆ ಹಂಚಿದ ಈ‌ ಕೆಲಸವ ಒಳುದವೆಲ್ಲ ಮನಸ್ಸು ಮಡಿಗಿ ಮಾಡ್ತವು, ಆದರೆ ಮನುಷ್ಯ ಮಾಂತ್ರ ಹಕ್ಕಿಂಗೆ ಮಾಂತ್ರ ಇದ್ದ, ಕರ್ತವ್ಯಕ್ಕಪ್ಪಗ ಇಲ್ಲೆ. ನಿಸರ್ಗದ ಸಹಜ ಸೃಷ್ಟಿ, ಸ್ಥಿತಿ, ಲಯ ಕ್ರಿಯೆಗೊ ಒಂದು ಸಮತುಲನೆಲಿದ್ದರೆ ನಾವು ಉದ್ದೇಶಪೂರ್ವಕ ಅರಣ್ಯೀಕರಣ ಮಾಡುವ ಅಗತ್ಯವೇ ಇಲ್ಲೆ. ಆದರೆ ಈಗ ಕಡಿವ, ಮಾರುವ, ಸೈಟು ಮಾಡುವ, ಫ್ಲಾಟು ತೆಕ್ಕೊಂಬ, ವರುಷಕ್ಕೊಂದು ಹೊಸ ಮೊಬೈಲು ಕೈಲಿ ಹಿಡಿವ, ಭೂಮಿಯ ಬಸುರು ಬಗದು ಮೈನಿಂಗು ಮಾಡುವ ಭರಾಟೆಲಿ ಪ್ರಕೃತಿಯ ಗರ್ಭಕ್ಕೆ ಮನುಷ್ಯ ಕತ್ತಿ ಹಾಕುತ್ತಾ ಇದ್ದ°. ಇಪ್ಪದರ ಒಳಿಶಿ ಹೊಸತ್ತರ ಬೆಳೆಶುವ ಅಗತ್ಯ ಈ‌ಗ ಇದ್ದು. ನಾವೆಲ್ಲ ರಜ ಕೈಜೋಡ್ಸಿ ಶ್ರಮ ಪಟ್ಟರೆ, ನೆಟ್ಟರೆ ಕಾಪಾಡಿದರೆ, ಎಲ್ಲೋರು ಒಳಿಗು.
ಮಳೆಬಂದ ಮೇಲೆ ಪ್ರತಿದಿನವೂ ವನಮಹೋತ್ಸವವೇ. ಜುಲೈ ಮೊದಲ ವಾರಕ್ಕೆ ಕಾಯೆಕ್ಕು ಹೇಳಿ ಇಲ್ಲೆ.
ಆದರೂ‌ ನೆಡುವ ಸಂತೋಷಕ್ಕೆ ವನಮಹೋತ್ಸವ ಒಂದು ನೆಪ ಆಗಲಿ.
ನೆಡದ್ದವಕ್ಕೂ ಅವಗ ನೆಡುವ ನೆಂಪಾಗಲಿ.
ಪ್ರಕೃತಿಯ ‘ಒಳಿಶುವ’ ವಿಷಯ ಸೈಡಿಲಿ ಇರ್ಲಿ; ಸುಮ್ಮನೆ ನಾವು ನೆಟ್ಟ ಗೆಡು ಬೆಳೆವದರ ನೋಡುವ ಪ್ರಕ್ರಿಯೆಲಿ ಭಾಗಿ ಅಪ್ಪ ಸುಖಕ್ಕೆ ಬೇಕಾಗಿ ನೆಡುವೊ°.
ನೆಟ್ಟು ಬೆಳೆಶುವ ಸುಖ ಎಲ್ಲೋರದ್ದಾಗಲಿ..
[ಲೇಖನಲ್ಲಿ ತೋರ ಮಟ್ಟಿಂಗೆ ಬರದ್ದದು ದ್ವಿದಳ ಸಸ್ಯ (dicot) ಮೊಳಕೆ ಒಡವ ಕ್ರಮ. ಏಕದಳ(monocot)ದ್ದು – ಅಡಕ್ಕೆ, ತೆಂಗು, ತಾಳಿ ಇತ್ಯಾದಿ – ಕ್ರಮ ರಜ ಬೇರೆ ಇದ್ದು. ಅದರ ಇನ್ನೊಂದು ಸರ್ತಿ ಬರತ್ತೆ.]

6 thoughts on “ನೆಟ್ಟು ಬೆಳೆಶುವ ಸುಖ

  1. ಬೋಟನಿಯ ಇಷ್ಟು ಚೆಂದಕೆ ನಮ್ಮ ಭಾಷೆಲಿ ಬರವಲೆಡಿತ್ತು ಹೇಳಿ ಗೊಂತಾತು. ತುಂಬಾ ಚೆಂದಕಿತ್ತು ವಿವರಣೆ. ಧನ್ಯವಾದಂಗೊ.
    ಹುಟ್ಟಿದ ಬೀಜದ ಬೊಂಡಿನ ಫೊಟೊ ಕಂಡು ಹಳ್ಳಿಯ ಸುಮದುರ ಜೀವನ ನೆಂಪಾತು.

  2. ಓದಿ ಪ್ರತಿಕ್ರಿಯಿಸಿದ ಎಲ್ಲೋರಿಂಗೂ ಧನ್ಯವಾದಂಗೊ. ಡಾ. ಲಕ್ಷ್ಮಿಯಕ್ಕ, ನಿಂಗೊ ಬರದ ಕೆಲವು ಬರೆಹಂಗಳ ಓದಿದೆ.
    ವಂದನೆಗೊ.
    ವಸಂತ ಕಜೆ.

  3. ಇದೇ ರೀತಿ ದೇವರು ಮಳೆಯನ್ನೂ ಕಾಲಕ್ಕೆ ತಕ್ಕಹಾಂಗೆ ಸ್ರುಷ್ಟಿ ಮಾಡಿದ್ದ. ಬಿತ್ತಿದ ಬೀಜ ಕೊಚ್ಚಿ ಹೋಗದ್ದ ಹಾಂಗೆ ಒಂದೊಂದು ತಿಂಗಳೂ ಒಂದೊಂದು ರೀತಿಯಾಗಿ ಮಳೆಯಾವುತ್ತು. ಹರೇ ರಾಮ.

  4. ವಸಂತಣ್ಣ ಎಲ್ಲರಿಂಗೂ ಅರ್ಥ ಅಪ್ಪಾಂಗೆ ಲಾಯಿಕ ಬರದ್ದಿ.
    ಹೀಂಗೆ ಬರೆತ್ತಾ ಇರಿ. ಇಂತಾ ಲೇಖನಂಗೊ ಓದಿ ನಾವು ನಮಗೆ ಅಪ್ಪಷ್ಟು ಕೃಷಿ ಮಾಡ್ಲೆ ಸ್ಪೂರ್ತಿ ಕೊಡ್ಲಿ.
    ಜಾಗೆ ಇಲ್ಲೆ ಹೇಳ್ತವು ಟಾರೀಸಿಲಿ ಎರಡು ಚಟ್ಟಿಲಿ ಗಿಡ ಬೆಳಸಲಿ ಹೇಳಿ ಆಶಯ 🙂

  5. “ನೆಡುವಗ ನಾವೇ ಸ್ವತ: ಗುಂಡಿಮಾಡಿದರೆ ವಿಶೇಷ – ನಮ್ಮ ಮೈ ರಜ ಗಟ್ಟಿ ಅಕ್ಕು – ಕೊಟ್ಟು ಪಿಕ್ಕಾಸು ನೆಗ್ಗಿ ಹಾಕಿದರೆ. .”
    ಓದಿ ಭಾರಿ ಕೊಶಿ ಆತು ವಸಂತಣ್ಣ
    ,ನಾವು ಸ್ವಂತ ಕೃಷಿ ಕಾರ್ಯವ ಮಾಡುವ ಅಭ್ಯಾಸ ತುಂಬಾ ಒಳ್ಳೇದು ,ಅಷ್ಟಪ್ಪಗ ಸೆಸಿಗೂ,ನಮಗೂ ಒಂದು ಬಾಂಧವ್ಯ ಹುಟ್ಟುತ್ತು,ನರ್ಸರಿಂದ ಒಂದು ಪಾಟ್ ಲಿಪ್ಪ ಸೆಸಿಯ ತಂದು ಸಾಂಕುದಕ್ಕೂ ,ನಾವೇ ಬಿತ್ತು ಸಾಕಿ ಸೆಸಿ ಮಾಡಿ ಬೆಳೆಸುದಕ್ಕೂ ತುಂಬಾ ವ್ಯತ್ಯಾಸ ಇದ್ದು ಅಲ್ಲದ ?ಬಿತ್ತು ಹಾಕಿದ ಮೇಲೆ ದಿನ ನಿತ್ಯ ಅದು ಕೊಡಿಪ್ಪಿದ್ದ,ಸಣ್ಣ ಎಲೆ ಬಿಟ್ಟಿದ ,ಗೆಲ್ಲು ಬಿಟ್ಟತ್ತ ಹೇಳಿ ನೋಡುವಾಗ ಸಿಕ್ಕುವ ತೃಪ್ತಿಯೇ ಬೇರೆ !
    ಇನ್ನು ಕೆಲವು ವರ್ಷಲ್ಲಿ ಅಕ್ಕಿಗೆ ಕಿಲಕ್ಕೆ 500 ರುಪಾಯಿ ಆವುತ್ತಡ,ಮೊದಲೊಂದು ಕಾಲಲ್ಲಿ ಅಕ್ಕಿಗೆ ಬರ ಬಂದಿಪ್ಪಗ ಜೆನಂಗ ಕರಟಕ್ಕೆ ಮಣ್ಣು ತುಂಬುಸಿ ,ಮತ್ತೆ ಮನೆ ಮಾಡಿಲಿ ಕೂಡಾ ಬತ್ತ ಬೆಳೆಸಿದ್ದವಡ,ಹಾಂಗೆ ಮುಂದೆದೆ ಮಾಡಕ್ಕಾಗಿ ಬಪ್ಪ ಕಾಲದೆ ಬಪ್ಪಲೂ ಸಾಕು !
    ಹಾಂಗಾಗಿ ಬಿತ್ತು,ಮಣ್ಣು ,ಸೆಸಿಗಳ ನೆಂಟಸ್ತನವ ನಾವು ಬೆಳೆಸಿ ಕೊಂಬದು ಒಳ್ಳೆದು
    ಬಿತ್ತು,ಸೆಸಿಗಳ ಬಗ್ಗೆ ವೈಜ್ಞಾನಿಕ ಮಾಹಿತಿ ,ವಿವರಣೆ ಮನ ಮುಟ್ಟುವ ಹಾಂಗೆ ಇದ್ದು ,
    ಅಭಿನಂದನೆಗ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×