Oppanna.com

ಭಾರತಕ್ಕೆ ಸ್ವಾತಂತ್ರ್ಯ ಬಂತು…

ಬರದೋರು :   ಗೋಪಾಲಣ್ಣ    on   26/04/2013    2 ಒಪ್ಪಂಗೊ

ಗೋಪಾಲಣ್ಣ

ಇತ್ತೀಚೆಗೆ ಮಣಿಪಾಲದ ಹತ್ತರೆ ಪರ್ಕಳದ ಪರೀಕ ಹೇಳುವಲ್ಲಿ ನಿಸರ್ಗ ಚಿಕಿತ್ಸೆಯ ಆಸ್ಪತ್ರೆಗೆ ಹೋಗಿ ಒಂದು ವಾರ ಇತ್ತಿದ್ದೆ.ಅಲ್ಲಿ ರಸಾಹಾರದ ಪಥ್ಯ ,ಯೋಗ,ಮಸಾಜು,ಮಣ್ಣಿನ ಸ್ನಾನ -ಇತ್ಯಾದಿ ಬೇರೇ ಲೋಕ.ನಮ್ಮ ಯುಗಾದಿ,ವಿಷು ಎಲ್ಲಾ ಈ ಸರ್ತಿ ಅಲ್ಲಿಯೇ ಕಳ್ತು!ಎನಗೆ ಪೂರ್ತಿ ಉಪವಾಸ. ಆದರೆ,ನಾಕು ಕೆ.ಜಿ. ತೂಕ ಕಮ್ಮಿ ಆಗಿ,ಮೈ-ಮನಸ್ಸು ಹಗುರಾತು.ಅದು ಧರ್ಮಸ್ಥಳದ ಶಾಂತಿವನದ್ದೇ ಶಾಖೆ.ಅದಕ್ಕೆ ಸೌಖ್ಯವನ ಹೇಳಿ ಹೆಸರು ಮಡುಗಿದ್ದವು.ನಮ್ಮ ಊರಿನವೇ ಆದ ಡಾ॥ ಶ್ಯಾಮರಾಜ ನಿಡುಗಳ ಅಲ್ಲಿ ಮುಖ್ಯ ವೈದ್ಯಾಧಿಕಾರಿ ಆಗಿ ಇದ್ದವು.ರೋಗರಹಿತವಾಗಿ ಬದುಕಲೆ ನಿಸರ್ಗ ಚಿಕಿತ್ಸೆ ಹೇಂಗೆ ಸಹಕಾರಿ ಹೇಳಿ ಅಲ್ಲಿ ವಿವರಿಸುತ್ತವು.ಅವು ಬರೆದ ಒಂದು ಪುಟ್ಟ ಪುಸ್ತಕ ಇದರ ಬಗ್ಗೆ ತಿಳಿಸುತ್ತು.ಸಾಧಕರಿಂಗೆ[ಅಲ್ಲಿ ರೋಗಿ ಹೇಳುವ ಶಬ್ದ ಉಪಯೋಗ ಆವುತ್ತಿಲ್ಲೆ]ಬೇಕಾಗಿ ಅಲ್ಲಿ ಒಂದು ಸಣ್ಣ ಪುಸ್ತಕಾಲಯ ಇದ್ದು.ತುಂಬಾ ಪುಸ್ತಕ ಅಲ್ಲಿ ಇಲ್ಲೆ; ಆದರೆ,ಅಲ್ಲಿ ಒಂದು ಹಳೆ ಪುಸ್ತಕ ಸಿಕ್ಕಿತ್ತು-ಮೌಲಾನಾ ಅಬುಲ್ ಕಲಂ ಆಜಾದ್ ಬರೆದ ಆಂಗ್ಲ ಪುಸ್ತಕ-ಇಂಡಿಯಾ ವಿನ್ಸ್ ಫ್ರೀಡಮ್.ಮೌಲಾನಾ ಉರ್ದುವಿಲಿ ಹೇಳಿದ ವಿಷಯವ ಅವನ ಕಾರ್ಯದರ್ಶಿ ಹುಮಾಯೂನ್ ಕಬೀರ್ ಇಂಗ್ಲಿಷಿಲಿ ನಿರೂಪಿಸಿದ್ದು. ೧೯೫೦ರ ದಶಕಲ್ಲಿ ಪ್ರಕಟ ಆದ ಪುಸ್ತಕ.
ಆ ಪುಸ್ತಕದ ಹೆಸರು ಆನು ಮೊದಲೇ ಕೇಳಿದ್ದೆ.ಆದರೆ,ಓದಿ ಅಪ್ಪಾಗ ಅದು ತುಂಬಾ ಬೇಸರ ಉಂಟುಮಾಡಿತ್ತು.ಮೌಲಾನಾ ಅಬುಲ್ ಕಲಮ್ ಆಜಾದ್ ಹುಟ್ಟಿದ್ದು ಮಕ್ಕಾ ನಗರಲ್ಲಿ.ಬೆಳದ್ದು ಕಲ್ಕತ್ತಲ್ಲಿ.ಜವಾಹರಲಾಲ್ ನೆಹರುವಿನ ಸ್ನೇಹಿತ-ನೆಹರುಗಿಂತ ಒಂದೇ ವರ್ಷ ದೊಡ್ಡವ.ದ್ವಿತೀಯ ಮಹಾಯುದ್ಧದ ಸಮಯಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷ ಆಗಿದ್ದು,ಭಾರತದ ಸ್ವಾತಂತ್ರ್ಯದ ನಂತರ ಶಿಕ್ಷಣ ಮಂತ್ರಿ ಆಗಿ ಇತ್ತಿದ್ದ ವ್ಯಕ್ತಿ.ಲೀಗಿನವರ ಹಾಂಗೆ ಪ್ರತ್ಯೇಕತಾವಾದಿ ಅಲ್ಲ. ರಾಷ್ಟ್ರೀಯ ಮುಸಲ್ಮಾನ.ಭಾರತ ಅಖಂಡ ಆಗಿರೆಕ್ಕು ಹೇಳಿ ಸ್ಪಷ್ಟವಾಗಿ ಹೇಳಿದ ವ್ಯಕ್ತಿ.ಅಬುಲ್ ಕಲಮ್ ಪ್ರಕಟಿಸಿದ ಪತ್ರಿಕೆಯ ಹೆಸರು ಆಜಾದ್ ಆದ ಕಾರಣ ಅವಂಗೆ ಆ ಹೆಸರು ಸೇರಿಸಿದ್ದು.
ಈ ಪುಸ್ತಕಲ್ಲಿ ೧೯೩೯ರ ನಂತರ ಭಾರತದ ಚರಿತ್ರೆಯ ವರ್ಣಿಸಿದ್ದು.ದ್ವಿತೀಯ ಮಹಾಯುದ್ಧ ೧೯೩೯ ಸೆಪ್ಟೆಂಬರ್ ೩ ರಂದು ಸುರು ಆತು. ಭಾರತದವರ ಅಭಿಪ್ರಾಯ ಕೇಳದ್ದೆ ಬ್ರಿಟಿಷರು ನಮ್ಮ ದೇಶವನ್ನೂ ಯುದ್ಧಕ್ಕೆ ಎಳದವು.ಆವಾಗ ಕಾಂಗ್ರೆಸ್ಸು ಅದರ ವಿರೋಧಿಸಿತ್ತು.ಕಾಂಗ್ರೆಸ್ಸು ಯುದ್ಧದ ಸಮಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟರೆ,ಭಾರತವೂ ಪ್ರಜಾಪ್ರಭುತ್ವವ ಒಳಿಶಲೆ ಬೇಕಾಗಿ ಯುದ್ಧಲ್ಲಿ ಬ್ರಿಟಿಷರ ಪರವಾಗಿ ಇರುತ್ತು ಹೇಳಿ ಹೇಳಿತ್ತು.ನೈತಿಕವಾಗಿ ಕಾಂಗ್ರೆಸ್ಸಿನ ವಾದ ಅತ್ಯಂತ ಸರಿಯಾಗಿತ್ತು.ಹಿಟ್ಲರ್,ಮುಸ್ಸೊಲಿನಿ ಮುಂತಾದ ಸರ್ವಾಧಿಕಾರಿಗಳ ವಿರುದ್ಧ ಪ್ರಜಾಪ್ರಭುತ್ವದ ಶಕ್ತಿಯ ಎತ್ತಿ ಹಿಡಿವಲೆ ಹೋರಾಡುವಾಗ ಬ್ರಿಟನ್ ಹೇಂಗೆ ಭಾರತವ ತುಳಿದೇ ಇಪ್ಪಲೆ ಸಾಧ್ಯ?
ಬ್ರಿಟನ್ ಮನಸ್ಸಿಲ್ಲದ್ದ ಮನಸ್ಸಿಂದ ಕ್ರಿಪ್ಸ್ ಆಯೋಗವ ಕಳಿಸಿತ್ತು.ಭಾರತಕ್ಕೆ ಸಾಮ್ರಾಜ್ಯಾಂತರ್ಗತ ಸ್ವರಾಜ್ಯವ ಕೊಟ್ಟು ಯುದ್ಧಾನಂತರ ಹೊಸ ಸಂವಿಧಾನ ಜಾರಿಗೆ ತಪ್ಪದೇ ಅದರ ಯೋಜನೆ.ಆದರೆ,ಭಾರತದ ನಾಯಕರು ಇದಕ್ಕೆ ಬಹುಪಾಲು ಒಪ್ಪಿದರೂ ಮತ್ತೆ ಕೆಲವರು ಒಪ್ಪದ್ದೆ ಆ ಆಯೋಗದ ಪ್ರಯತ್ನ ಸಫಲ ಆಯಿದಿಲ್ಲೆ.
ಆಗಸ್ಟ್ ೯,೧೯೪೨ ಕ್ಕೆ ಗಾಂಧೀಜಿಯ ಕರೆಯ ಪ್ರಕಾರ ಭಾರತ ಬಿಟ್ಟು ತೊಲಗಿ-ಹೇಳಿ ಚಳವಳಿ ಸುರು ಆತು.ಆದರೆ,ಕಾಂಗ್ರೆಸ್ಸಿನವು ಆಂದೋಲನ ಸುರು ಮಾಡಿ ಅಪ್ಪದ್ದೆ,ಸರಕಾರ ಎಲ್ಲಾ ನಾಯಕರ ಬಂಧಿಸಿತ್ತು.ಚಳವಳಿ ಆತು.ಆದರೆ,ಭಾರತ ಸ್ತಬ್ಧ ಆತು.ಬ್ರಿಟಿಷರ ಕೈಯೇ ೧೯೪೨-೪೫ರ ತನಕ ಮೇಲೆ ಇತ್ತು.
ಆದರೆ,ಇಲ್ಯಾಣ ಜನಂಗಳ ಮನಸ್ಸು ಎಂತರ ಹೇಳಿ ಸರಕಾರಕ್ಕೆ ಗೊಂತಾತು. ಯುದ್ಧ ಮುಗುದ ಮೇಲೆ ಸರಕಾರವೇ ಮಾತು ಕತೆಗೆ ಬಂತು.ಆಡಳಿತವ ಹಸ್ತಾಂತರ ಮಾಡಲೆ ಸೂತ್ರಂಗಳ ಮಾಡಿದವು.ಇದೆಲ್ಲಾ ವಿಷಯವ ಎಳೆ ಎಳೆಯಾಗಿ ಈ ಪುಸ್ತಕಲ್ಲಿ ವಿವರಿಸಿದ್ದವು.ಭಾರತಲ್ಲಿ ಒಂದು ಕೌನ್ಸಿಲ್[ಮಂತ್ರಿ ಮಂಡಲ]ವ ಭಾರತೀಯರ ಸದಸ್ಯತ್ವಲ್ಲೇ ಕಾಂಗ್ರೆಸ್ಸು -ಲೀಗಿನವರ ಸೇರಿಸಿ,ನೆಹರೂನ ನೇತೃತ್ವಲ್ಲಿ ಮಾಡಿದವು.ಇದು ೧೯೪೬ರಲ್ಲಿ.ಸುರುವಿಂಗೆ ಸೇರದ್ದ ಲೀಗು ಆ ಮೇಲೆ ಸೇರಿಕೊಂಡತ್ತು. ಗೃಹ ಮಂತ್ರಿ ಪಟೇಲ ತನ್ನ ಸ್ಥಾನವ ಲೀಗಿಂಗೆ ಬಿಡದ್ದ ಕಾರಣ ಲೀಗಿನ ಲಿಯಾಕತ್ ಆಲಿಗೆ ವಿತ್ತ ಖಾತೆಯ ಕೊಟ್ಟವು,ಆ ಜನ ಕಾಂಗ್ರೆಸ್ಸಿನವರ ಖಾತೆಗೆ ಸರಿಯಾದ ಹಣವ ಕೊಡದ್ದೆ ಕಿರಿಕಿರಿ ಉಂಟು ಮಾಡಿತ್ತು.
ಲೀಗಿನ ಮಂತ್ರಿಗೊ ನೆಹರೂನ ನೇತೃತ್ವಕ್ಕೆ ಗೌರವ ಕೊಡದ್ದೆ,ಸಾಮೂಹಿಕ ಜವಾಬ್ದಾರಿಯ ತತ್ವವ ಹೇಂಗೆ ಗಾಳಿಗೆ ತೂರಿದವು-ಹೇಳಿ ಆಜಾದ್ ವಿವರಿಸುತ್ತ.ಕಾಂಗ್ರೆಸ್ಸಿನ ಮಂತ್ರಿಗೊ ರೋಸಿ ಹೋದವು,ಲೀಗಿನೊಟ್ಟಿಂಗೆ ಅಧಿಕಾರ ಹಂಚಿಕೊಂಬದು ಸಾಧ್ಯ ಇಲ್ಲೆ ಹೇಳುವ ತೀರ್ಮಾನಕ್ಕೆ ಬಂದವು.ಇದುವೇ ನಿಧಾನಲ್ಲಿ ಭಾರತ-ಪಾಕಿಸ್ತಾನ ಹೇಳುವ ವಿಭಜನೆಗೆ ಕಾರಣ ಆತು.ಮಹಾತ್ಮ ಗಾಂಧೀಜಿ ಇದರ ವಿರೋಧಿಸಿರೂ ಮತ್ತೆ ಒಪ್ಪೆಕ್ಕಾಗಿ ಬಂತು.
ಭಾರತದ ವಿಭಜನೆಯ ತೀರ್ಮಾನ ಜೂನ್ ೧೯೪೭ರಲ್ಲಿ ಬ್ರಿಟಿಷ್ ಸರಕಾರ ಪ್ರಕಟಿಸಿತ್ತು. ಹಿಂದುಗೊ ಮುಸ್ಲಿಮರು ಎಲ್ಲಾ ಊರಿಲೂ ಹಂಚಿಕೊಂಡಿಪ್ಪಾಗ ಇಂತಾ ಒಂದು ವಿಚಿತ್ರ ತೀರ್ಮಾನ ಬಂದದು ಆಶ್ಚರ್ಯವೇ.ಒಟ್ಟಾರೆ ಜನಂಗಳ ಅಭಿಪ್ರಾಯ ಸರಿಯಾಗಿ ಕೇಳದ್ದೆ ಭಾರತ ವಿಭಜನೆ ಆತು.
ವಿಭಜನೆಗೆ ಮೊದಲು ವಾಯವ್ಯ ಗಡಿನಾಡ ಪ್ರಾಂತಲ್ಲಿ ಕಾಂಗ್ರೆಸ್ಸಿನ ಸರಕಾರ ಇತ್ತು.ಪಂಜಾಬಿಲೂ ಲೀಗ್ ಸರಕಾರ ಇತ್ತಿಲ್ಲೆ.ಯೂನಿಯನಿಸ್ಟ್ ಪಾರ್ಟಿ ಇತ್ತು. ಬಂಗಾಳ ಮತ್ತೆ ಸಿಂಧ್ ಪ್ರಾಂತಲ್ಲಿ ಲೀಗು ಪ್ರಬಲ ಇತ್ತು.ಆದರೂ ಮುಸ್ಲಿಮ್ ಬಾಹುಳ್ಯದ ಪ್ರಾಂತಂಗಳ ಪಾಕಿಸ್ತಾನ ಹೇಳಿ ಮಾಡಿ,ಲೀಗಿನವರ ವಶ ಕೊಟ್ಟವು.ಆವಾಗ ಕೆಲವು ಜಿಲ್ಲೆ ತಾಲೂಕುಗಳಲ್ಲಿ[ಸಿಂಧ್ ಲಿ] ಹಿಂದುಗೊ ಹೆಚ್ಚಿದ್ದರೂ ಅದರ ಪಾಕಿಸ್ತಾನಕ್ಕೇ ಕೊಟ್ಟವು.ಈ ಎಲ್ಲಾ ಕಾರ್ಯ ಹೇಂಗಾತು?
ಈ ಪುಸ್ತಕಲ್ಲಿ ಬರೆದ ವಿಷಯ ಅತಿ ಸ್ಪಷ್ಟವಾಗಿ ಸೂಚಿಸುತ್ತು-ಆವಾಗಿನ ನಾಯಕರು ಅಧಿಕಾರ ಹಂಚಿಗೊಂಬ ತರಾತುರಿಲಿ ದೇಶವ ಒಡೆದವು. ಅದರಿಂದ ಲಕ್ಷಾಂತರ ಜನ ನಿರ್ಗತಿಕರಾದವು.ಗಾಂಧೀಜಿಯ ಮಾತನ್ನೂ ಕೇಳುವ ಸ್ಥಿತಿಲಿ ಆಗಾಣ ನಾಯಕರು ಇತ್ತಿದ್ದವಿಲ್ಲೆ .
ಜಿನ್ನಾ ಬಳಗಕ್ಕೂ ನೆಹರೂ ಬಳಗಕ್ಕೂ ಹೊಂದಿಕೊಂಬ ಬುದ್ಧಿ ಇಲ್ಲದ್ದ ಕಾರಣ ದೇಶ ಒಡದತ್ತು. ಒಂದು ವೇಳೆ ,ನಾಯಕರು ಒಂದೇ ಬುದ್ಧಿಲಿ ಇದ್ದಿದ್ದರೆ,ಭಾರತ ಒಂದಾಗಿ ಬಲಿಷ್ಟವಾಗಿ ಇರುತ್ತಿತ್ತು. ಇಷ್ಟು ಜನರ ಜೀವ,ಆಸ್ತಿ-ಪಾಸ್ತಿ ನಷ್ಟ ಆವುತ್ತಿತ್ತಿಲ್ಲೆ.ಪಾಕಿಸ್ತಾನ ಹೇಳುವ ಕೃತಕ ದೇಶ ಆವುತ್ತಿತ್ತಿಲ್ಲೆ.ಏಕೆ ಹೇಳಿರೆ,ನೇತಾಜಿಯ ಆಜಾದ್ ಹಿಂದ್ ಸೇನೆಯ ವಿದ್ರೋಹದ ವಿಚಾರಣೆಲಿ,ನೌಕಾ ಬಂಡಾಯಲ್ಲಿ ದೇಶದ ಜನರ ಭಾವನೆ ಒಂದೇ ಇತ್ತು.೧೯೪೫-೪೬ರಲ್ಲಿ! ಸೈನ್ಯವೂ ಒಂದೇ ಆಗಿತ್ತು.ಒಡಕು ಇತ್ತಿಲ್ಲೆ.
ನಾಯಕರು ವಿಭಜನೆಗೆ ಒಪ್ಪದ್ದರೆ ಅಂತಃಕಲಹ ಅಕ್ಕು ಹೇಳುವ ಸಣ್ಣ ಸೂಚನೆಯೂ ಈ ಪುಸ್ತಕಲ್ಲಿ ಸಿಕ್ಕುತ್ತಿಲ್ಲೆ.ಭಾರತ,ಭರತ ಖಂಡ ಅನಾದಿ ಕಾಲಂದ ಒಂದು-ಗಂಗಾಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ ಕಾವೇರೀ ಸರಯೂ…ಹೇಳಿ ಕಾಳಿದಾಸ ವರ್ಣಿಸಿದ್ದು,ನಾವು ಮರವಲೆ ಸಾಧ್ಯವೊ? ಡಿಸ್ಕವರಿ ಆಫ್ ಇಂಡಿಯಾ ಬರೆದ ನೆಹರೂ ಕೂಡ ಇದರ ಮರೆದ್ದ ಇಲ್ಲೆ,ಆದರೆ,ಆಡಳಿತದ ಚುಕ್ಕಾಣಿ ಹಿಡಿವ ಸಂದರ್ಭಲ್ಲಿ ಇದೆಲ್ಲಾ ಆದರ್ಶ ಮರೆಯಾಗಿ ಹೋದದ್ದು ದುರಂತ.
ಹೀಂಗೆ ಈ ಪುಸ್ತಕ ಓದಿ ವಿಚಾರ ಮಾಡುವಾಗ ಎನಗೆ ಅನಿಸಿತ್ತು.ಮನಸ್ಸಿಂಗೆ ಬೇಜಾರ ಅಪ್ಪಲೆ ಅದೇ ಕಾರಣ.

2 thoughts on “ಭಾರತಕ್ಕೆ ಸ್ವಾತಂತ್ರ್ಯ ಬಂತು…

  1. [ಇದೆಲ್ಲಾ ಆದರ್ಶ ಮರೆಯಾಗಿ ಹೋದದ್ದು ದುರಂತ.] – ಗೋಪಾಲಣ್ಣನ ಹೃದಯಸ್ಪರ್ಶೀ ಶುದ್ದಿಗೆ ನಮೋ ನಮಃ .

    ಶುದ್ದಿಯ ಲಾಯಕ ವಿವರಿಸಿ ಓದುಗರ ಮನಮುಟ್ಟಿದ್ದಿ.

  2. ಭಗತ್ ಸಿ೦ಘ್, ರಾಜ್ ಗುರು, ಲಜಪತ್ ರಾಯ್ ಎಲ್ಲ ಸ್ವಾತ೦ತ್ರ್ಯಕ್ಕೆ ಬೇಕಾಗಿ ಪ್ರಾಣತೆತ್ತರೆ ಇನ್ನು ಕೆಲವು ಜೆನ ಅಧಿಕಾರಕ್ಕಾಗಿಯೆ ಬದುಕಿದವು, ದೇಶ ವಿಭಜನೆಗೆ ರಾಜಿ ಆದವು. ಮಗ್ಗುಲ ಮುಳಳಾದ ‘Fake Country’ ಯ ಹುಟ್ಟು ಹಾಕಿದವು. ಕೋಮು ಕಲಹವ ಖಾಯ೦ ಮಾಡಿದವು. ಈ ದುರ೦ತ ಕತೆಯ ಓದಿಯಪ್ಪಗ ಮನಸ್ಸಿ೦ಗೆ ಬೇಜಾರ ಆಗದ್ದೆ ಇಪ್ಪಲೆ ಹೇ೦ಗೆ ಸಾಧ್ಯ?
    ಲೇಖನ ಲಾಯಕ್ಕಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×