Oppanna.com

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 31 – 40

ಬರದೋರು :   ಚೆನ್ನೈ ಬಾವ°    on   29/03/2012    13 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ ।
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋsನ್ಯತ್  ಕ್ಷತ್ರಿಯಸ್ಯ ನ ವಿದ್ಯತೇ ॥೩೧॥

ಪದವಿಭಾಗ

ಸ್ವಧರ್ಮಮ್ ಅಪಿ ಚ ಅವೇಕ್ಷ್ಯ ನ ವಿಕಂಪಿತುಮ್ ಅರ್ಹಸಿ । ಧರ್ಮ್ಯಾತ್ ಹಿ ಯುದ್ಧಾತ್ ಶ್ರೇಯಃ ಅನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ ॥

ಅನ್ವಯ

ಸ್ವಧರ್ಮಮ್ ಚ ಅಪಿ ಅವೇಕ್ಷ್ಯ ವಿಕಂಪಿತುಂ ನ ಅರ್ಹಸಿ । ಕ್ಷತ್ರಿಯಸ್ಯ ಧರ್ಮ್ಯಾತ್ ಯುದ್ಧಾತ್ ಅನ್ಯತ್ ಶ್ರೇಯಃ ನ ವಿದ್ಯತೇ ಹಿ ।

ಪ್ರತಿಪದಾರ್ಥ

ಸ್ವಧರ್ಮಮ್ – ಸ್ವಧರ್ಮತತ್ವಂಗಳ, ಅಪಿ – ಕೂಡ, ಚ – ನಿಜವಾಗಿಯೂ, ಅವೇಕ್ಷ್ಯ – ಗಮನಿಸಿ,  ವಿಕಂಪಿತುಮ್ – ಹಿಂಜರಿಯಲೆ, ನ ಅರ್ಹಸಿ – ನೀನು ಅರ್ಹನಾಗಿಲ್ಲೆ, ಕ್ಷತ್ರಿಯಸ್ಯ – ಕ್ಷತ್ರಿಯನ (ಇಲ್ಲಿ ಕ್ಷತಿಯಂಗೆ ಹೇಳಿ ಅರ್ಥ), ಧರ್ಮ್ಯಾತ್ – ಧರ್ಮತತ್ವಂಗೊಕ್ಕಾಗಿ,  ಯುದ್ಧಾತ್ – ಯುದ್ಧಕ್ಕಿಂತ, ಅನ್ಯತ್ – ಇನ್ನಾವುದೂ, ಶ್ರೇಯಃ – ಉತ್ತಮವಾದ (ಶ್ರೇಯಸ್ಕರ) ಕೆಲಸ, ನ ವಿದ್ಯತೇ – ಇರುತ್ತಿಲ್ಲೆ,  ಹಿ – ನಿಜವಾಗಿಯೂ.

ಅನ್ವಯಾರ್ಥ

ನೀನು ಕ್ಷತ್ರಿಯನಾಗಿ ಸ್ವಧರ್ಮತತ್ವಂಗಳ ಗಮನಿಸಿರೆ ಧರ್ಮಕ್ಕಾಗಿ ಹೋರಾಡುವದಕ್ಕಿಂತ ಶ್ರೇಯಸ್ಕರ ಕಾರ್ಯ ಇನ್ನೊಂದಿಲ್ಲೆ ಹೇಳ್ವದರ ನೀನು ತಿಳ್ಕೊಳ್ಳೆಕ್ಕು. ಹಾಂಗಾಗಿ  ಹಿಂಜರಿವಲೆ ಅವಕಾಶವೇ ಇಲ್ಲೆ (ಅಗತ್ಯವೇ ಇಲ್ಲೆ).

ತಾತ್ಪರ್ಯ / ವಿವರಣೆ

ಬ್ರಾಹ್ಮಣ°, ಕ್ಷತ್ರಿಯ°,  ವೈಶ್ಯ°, ಶೂದ್ರ° ಹೇಳ್ವ ಚಾತುರ್ವಣ್ಯಲ್ಲಿ ಕ್ಷತ್ರಿಯ° ಹೇಳ್ವದು ಸಾಮಾಜಿಕ ಆಡಳಿತ ವರ್ಗಲ್ಲಿ ಎರಡನೇದು. ಕ್ಷತ್ ಹೇಳಿರೆ ತೊಂದರೆ, ತ್ರಾಯತೇ ಹೇಳಿರೆ ರಕ್ಷಿಸುವದು. ಹಾಂಗಾಗಿ ತೊಂದರೆಗಳಿಂದ ರಕ್ಷಿಸುವವನೇ ಕ್ಷತ್ರಿಯ°. ಸ್ವಧರ್ಮಲ್ಲಿ ಎರಡು ವಿಧ. ಮನುಷ್ಯನಾದವ° ಮುಕ್ತಿ ಪಡವಲೆ ತನ್ನ ವಿಶಿಷ್ಟ ದೇಹದ ಕರ್ತವ್ಯವ ಧಾರ್ಮಿಕ ತತ್ವಂಗೊಕ್ಕೆ ಅನುಗುಣವಾಗಿ ಮುಕ್ತಿ ಪಡವಲ್ಲಿವರೆಂಗೆ ಪಾಲುಸುವದು. ಮುಕ್ತಿಯು ಸಿಕ್ಕಿದ ಮತ್ತೆ ಮನುಷ್ಯನ ಸ್ವಧರ್ಮವು ಆಧ್ಯಾತ್ಮಿಕವಾವ್ತು. ಅದು ಐಹಿಕ ಶರೀರದ ಪರಿಕಲ್ಪನೆಗೆ ಒಳಪಡುತ್ತಿಲ್ಲೆ. ಬದುಕಿನ ದೈಹಿಕ ಗ್ರಹಿಕೆಲಿ ಎಲ್ಲೋರಿಂಗೂ ಅವಕ್ಕವಕ್ಕೆ ನಿಯೋಜಿಸಿದ ಸ್ವಧರ್ಮಂಗೊ ಇರ್ತು. ಈ ಸ್ವಧರ್ಮ ಅನಿವಾರ್ಯ. ಸ್ವಧರ್ಮವ ಭಗವಂತನೇ ವಿಧಿಸುವದು. (ಮುಂದೆ ನಾಲ್ಕನೇ ಅಧ್ಯಾಯಲ್ಲಿ ವಿವರ ಬಪ್ಪಲಿದ್ದು). ದೇಹದ ನೆಲೆಲಿ ಸ್ವಧರ್ಮಕ್ಕೆ ‘ವರ್ಣಾಶ್ರಮಧರ್ಮ’  ಹೇದು ಹೆಸರು. ಇದು ಮಾನವನ ಆಧ್ಯಾತ್ಮಿಕ ಅರಿವಿಂಗೆ ಸೋಪಾನ. ವರ್ಣಾಶ್ರಮಧರ್ಮ ಹೇಳಿರೆ ಹೇಹವು ಯಾವ ಪ್ರಕೃತಿಗುಣಂಗಳ ಪ್ರಭಾವಲ್ಲಿದ್ದೋ ಅದಕ್ಕೆ ಅನುಗುಣವಾಗಿ ಕರ್ತವ್ಯ. ಯಾವುದೇ ಕರ್ಮಕ್ಷೇತ್ರಲ್ಲಿ ಮೇಲಾಣ ಅಧಿಕಾರಿಗಳ ಅನುಜ್ಞೆಯ ಪ್ರಕಾರ ಕರ್ತವ್ಯ ಮಾಡುವುದು ಮನುಷ್ಯನ ಬದುಕಿಲ್ಲಿ ಉನ್ನತ ಸ್ಥಾನಕ್ಕೆ ಏರುಸುತ್ತು.

ಇಲ್ಲಿ ಅರ್ಜುನನ ಸನಾತನ ಧರ್ಮ ಯಾವುದು? ಸಮಾಜ ಧರ್ಮ ಯಾವುದು? ಸ್ವಧರ್ಮ ಯಾವುದು? ಸನಾತನ ಧರ್ಮದ ಪ್ರಕಾರ ಅನ್ಯಾಯದ ವಿರುದ್ಧ ಹೋರಾಡಲೇ ಬೇಕು., ಸಮಾಜ ಧರ್ಮ ಹೇಳುತ್ತು – ಕ್ಷತ್ರಿಯನಾದವ° ಅಧರ್ಮದ ವಿರುದ್ಧ ಹೋರಾಡೆಕ್ಕು, ಸಮಾಜ ರಕ್ಷಣೆ ಮಾಡೆಕ್ಕು ಮತ್ತು ಈ ಪುಣ್ಯ ಕಾರ್ಯಲ್ಲಿ ‘ತನ್ನವು’ ಹೇಳ್ವ ಭಾವುಕತೆ ಇಪ್ಪಲಾಗ. ಇನ್ನು ಅರ್ಜುನ ಮೂಲತಃ ಕ್ಷತ್ರಿಯನಾದ್ದರಿಂದ ಅವನ ಸ್ವಧರ್ಮ ‘ಅನ್ಯಾಯದ ವಿರುದ್ಧ ಹೋರಾಟ’. ಇಲ್ಲಿ ವ್ಯಕ್ತಿಧರ್ಮ, ಸಮಾಜಧರ್ಮ ಹಾಂಗೂ ಸನಾತನ ಧರ್ಮ ಒಂದೇ ವಿಷಯವ ಹೇಳ್ತಾ ಇದ್ದು. ಹಾಂಗಾಗಿ ಅನ್ಯಾಯದ ವಿರುದ್ಧ ಹೋರಾಡುವದೇ ಅರ್ಜುನಂಗೆ ಮಹಾಪುಣ್ಯದ ಕೆಲಸ. ಸಮಾಜ ಸುರಕ್ಷೆಗಾಗಿ ಹೋರಾಡುವದು ಕ್ಷತ್ರಿಯನ ಮಹಾತಪಸ್ಸು. ಇದರಿಂದ ಮಿಗಿಲಾದ ಪುಣ್ಯಕಾರ್ಯ ಇನ್ನೊಂದಿಲ್ಲೆ.

ಶ್ಲೋಕ

ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್ ।
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್ ॥೩೨॥

ಪದವಿಭಾಗ

ಯದೃಚ್ಛಯಾ ಚ ಉಪಪನ್ನಮ್ ಸ್ವರ್ಗ-ದ್ವಾರಮ್ ಅಪಾವೃತಮ್ । ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮ್ ಈದೃಶಮ್ ॥

ಅನ್ವಯ

ಹೇ ಪಾರ್ಥ!, ಯತ್ ಋಚ್ಛಯಾ ಚ ಉಪಪನ್ನಮ್ ಈದೃಶಮ್ ಅಪಾವೃತಮ್  ಸ್ವರ್ಗ-ದ್ವಾರಂ ಯುದ್ಧಂ ಸುಖಿನಃ ಕ್ಷತ್ರಿಯಾಃ ಲಭಂತೇ ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಮಗನೇ!, ಯದೃಚ್ಛಯಾ (ಯತ್ ಋಚ್ಛಯಾ) – ತಾನಾಗಿಯೇ, ಚ – ಕೂಡ, ಉಪಪನ್ನಮ್ – ಹತ್ರಂಗೆ ಬಂದ (ಎದುರಾದ/ಆಗಮಿಸಿದ), ಈದೃಶಮ್ – ಈ ರೀತಿಯ, ಅಪಾವೃತಮ್ – ವಿಶಾಲವಾಗಿ ಬಿಡುಸಿದ,  ಸ್ವರ್ಗ-ದ್ವಾರಮ್ – ಸ್ವರ್ಗಲೋಕದ ಬಾಗಿಲ, ಯುದ್ಧಮ್ – ಯುದ್ಧವ, ಸುಖಿನಃ – ಬಹಳ ಸುಖಿಗೊ ಆದ, ಕ್ಷತ್ರಿಯಾಃ – ಕ್ಷತ್ರಿಯರು, ಲಭಂತೇ – ಸಾಧಿಸುತ್ತವು(ಪಡೆತ್ತವು).

ಅನ್ವಯಾರ್ಥ

ಹೇ ಪಾರ್ಥ!, ಈ ರೀತಿಯ ಯುದ್ಧಮಾಡುವ ಅವಕಾಶಂಗೊ ತಾನಾಗಿ ಬಂದ ಸ್ವರ್ಗಲೋಕದ ಬಾಗಿಲುಗೊ, ಯಾವ ಕ್ಷತ್ರಿಯಂಗೊಕ್ಕೆ ಈ ರೀತಿಯಾಗಿ ವಿಶಾಲವಾಗಿ ಬಿಡಿಸಿಗೊಂಡಿರುತ್ತೋ, ಅಂತಹ ಕ್ಷತ್ರಿಯಂಗೊ ಬಹಳ ಸುಖಿಗಳೇ ಆವ್ತವು.

ತಾತ್ಪರ್ಯ / ವಿವರಣೆ

ಅರ್ಜುನ° ಆಗ ಮದಲೇ “ಈ ಹೋರಾಟಂದ ಎನಗೆ ಯಾವ ಒಳಿತೂ ಕಾಣುತ್ತಿಲ್ಲೆ. ಇದು ನರಕಲ್ಲಿ ನಿತ್ಯವಾಸವ ಉಂಟುಮಾಡುತ್ತು” ಹೇದು ಹೇದಿತ್ತಿದ್ದ. ದೇವೋತ್ತಮ ಪರಮ ಪುರುಷ ಭಗವಂತ° ಶ್ರೀಕೃಷ್ಣ° ಅರ್ಜುನನ ಈ ಮನೋಧರ್ಮವ ಈ ರೀತಿಯಾಗಿ ಖಂಡುಸುತ್ತ° ಇಲ್ಲಿ. ಅರ್ಜುನನ ಆ ಮಾತುಗೋ ಅಜ್ಞಾನಂದ ಬಂದದು. ಸ್ವಧರ್ಮ ಪಾಲನೆಲಿ ಅವ° ಅಹಿಂಸೆಂದ ನಡಕ್ಕೊಂಬಲೆ ಬಯಸಿತ್ತಿದ್ದ°. ಕ್ಷತ್ರಿಯನಾದವ° ಯುದ್ಧಭೂಮಿಲಿದ್ದೂ ಅಹಿಂಸೆಂದ ವರ್ತುಸುದು ಹೇಳಿರೆ ಅದು ಪರಮ ಮೂರ್ಖತನ ಹೇಳಿ ಅರ್ಜುನಂಗೆ ಕೃಷ್ಣ° ಬೋಧುಸುತ್ತ°. “ಕ್ಷತ್ರಿಯೋ ಹಿ ಪ್ರಜಾ ರಕ್ಷಾನ್ ಶಸ್ತ್ರಪಾಣಿಃ ಪ್ರದಂಡಯನ್। ನಿರ್ಜಿತ್ಯ ಪರಸೈನ್ಯಾದಿ ಕ್ಷಿತಿಂ ಧರ್ಮೇಣ ಪಾಲಯೇತ್ “ (ಪರಾಶರಸ್ಮೃತಿ). – ಪ್ರಜೆಗಳ ಎಲ್ಲ ಬಗೆಯ ಕಷ್ಟಂಗಳಿಂದ ರಕ್ಷಿಸುವದೇ ಕ್ಷತ್ರಿಯನ ಧರ್ಮ. ಹಾಂಗಾಗಿ ಅವ° ಶಾಸನ ಮತ್ತು ವ್ಯವಸ್ಥೆಗೊಕ್ಕೆ ಸಂಬಂದಿಸಿದ ಪ್ರಸಂಗಂಗಳಲ್ಲಿ ಸೂಕ್ತವಾಗಿ ಹಿಂಸೆಯ ಬಳಸೇಕು. ಶತ್ರುಗಳ ಸೇನೆಯ ಆತ° ಗೆಲ್ಲೆಕು. ಹೀಂಗೆ ಧಾರ್ಮಿಕ ತತ್ವಂಗೊಕ್ಕೆ ಅನುಗುಣವಾಗಿ ಪ್ರಪ್ರಂಚವ ಆಳೆಕು.

ಈ ಎಲ್ಲಾ ದೃಷ್ಟಿಕೋನಂಗಳಿಂದ ಅರ್ಜುನ° ಯುದ್ಧಮಾಡದ್ದೆ ಇರೆಕಾದ ಕಾರಣವೇ ಇಲ್ಲೆ. ಅವ° ಶತ್ರುಗಳ ಸೋಲಿಸಿರೆ ರಾಜ್ಯವ ಅನುಭವುಸಲಕ್ಕು, ಯುದ್ಧಲ್ಲಿ ಸತ್ತರೆ ಸ್ವರ್ಗವ ಪಡವಲಕ್ಕು. ಸ್ವರ್ಗದ ಬಾಗಿಲು ತಾನಾಗಿಯೇ ತೆರಗು. ಏನೇ ಆದರೂ ಯುದ್ಧ ಮಾಡುವದರಿಂದ ಅವಂಗೇ ಲಾಭ. ಇಲ್ಲಿ ಕೃಷ್ಣ ಅರ್ಜುನಂಗೆ ಯುದ್ಧ ಮಾಡು ಹೇದು ಎಂತಕೆ ಹೇಳ್ತ ಹೇಳ್ವದು ಸ್ಪಷ್ಟ ಆವ್ತು. – ಪ್ರತಿಯೊಬ್ಬ ಮನುಷ್ಯನೂ ಸನಾತನಧರ್ಮ, ಅದಕ್ಕನುಗುಣವಾಗಿ ಸಮಾಜಧರ್ಮ, ಸನಾತನಧರ್ಮ ಸಮಾಜಧರ್ಮಕ್ಕನುಗುಣವಾಗಿ ಸ್ವಧರ್ಮ. ಈ ನೆಲೆಲಿ ತನ್ನ ಕರ್ತವ್ಯವ ನಿರ್ವಹಿಸುಲೇ ಬೇಕು. ಈ ನೆಲೆಲಿ ಮಾಡಿದ ಯಾವ ಕಾರ್ಯವೂ ಪಾಪ ಆವ್ತಿಲ್ಲೆ ಹೇದು ಬನ್ನಂಜೆ ಇದರ ವ್ಯಾಖ್ಯಾನಿಸುತ್ತವು.

ಶ್ಲೋಕ

ಅಥ ಚೇತ್ತ್ವಮಿಮಂ ಧರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ।
ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ॥೩೩॥

ಪದವಿಭಾಗ

ಅಥ ಚೇತ್ ತ್ವಮ್  ಧರ್ಮ್ಯಮ್  ಸಂಗ್ರಾಮಮ್ ನ ಕರಿಷ್ಯಸಿ । ತತಃ ಸ್ವಧರ್ಮಮ್ ಕೀರ್ತಿಮ್ ಚ ಹಿತ್ವಾ ಪಾಪಮ್ ಅವಾಪ್ಸ್ಯಸಿ ॥

ಅನ್ವಯ

ಅಥ ತ್ವಮ್ ಇಮಂ ಧರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ ಚೇತ್, ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮ್ ಅವಾಪ್ಸ್ಯಸಿ ।

ಪ್ರತಿಪದಾರ್ಥ

ಅಥ – ಈಗ (ಇನ್ನು), ತ್ವಮ್ – ನೀನು , ಇಮಮ್  ಧರ್ಮ್ಯಮ್  – ಈ  ಧಾರ್ಮಿಕ ಕರ್ತವ್ಯವಾದ, ಸಂಗ್ರಾಮಮ್ – ಯುದ್ಧವ, ನ ಕರಿಷ್ಯಸಿ ಚೇತ್ – ಮಾಡದ್ದಿಲ್ಲೆ ಹೇದಾದರೆ,   ತತಃ – ಅಂಬಗ, ಸ್ವಧರ್ಮಮ್ – ನಿನ್ನ ಧಾರ್ಮಿಕ ಕರ್ತವ್ಯವ, ಕೀರ್ತಿಮ್ – ಕೀರ್ತಿಯ, ಚ – ಕೂಡ, ಹಿತ್ವಾ – ಕಳಕ್ಕೊಂಡು, ಪಾಪಮ್ – ಪಾಪವ, ಅವಾಪ್ಸ್ಯಸಿ – ನೀನು ಗಳುಸುತ್ತೆ.

 

ಅನ್ವಯಾರ್ಥ

ನೀನೆಲ್ಯಾರು ಯುದ್ಧಮಾಡೇಕ್ಕಾದ ನಿನ್ನ ಸ್ವಧರ್ಮವ ಮಾಡದ್ರೆ (ಪಾಲುಸದ್ರೆ) ನೀನು ನಿನ್ನ ಕರ್ತವ್ಯವ ಅಲಕ್ಷ್ಯಮಾಡಿದ ಪಾಪಕ್ಕೆ ಒಳಪ್ಪಡುತ್ತೆ. ಯೋಧನಾಗಿ ನಿನ್ನ ಕೀರ್ತಿಯ ಕಳಕ್ಕೊಳ್ಳುತ್ತೆ.

ತಾತ್ಪರ್ಯ / ವಿವರಣೆ

ಅರ್ಜುನ° ಪ್ರಸಿದ್ಧ ಯೋಧ°. ಶಿವನೂ ಸೇರಿದಾಂಗೆ ಹಲವು ಮಹಾದೇವತೆಗಳೊಟ್ಟಿಂಗೆ ಹೋರಾಡಿ ಕೀರ್ತಿಗಳಿಸಿದ್ದ°. ಬೇಡನ ರೂಲ್ಲಿ ಬಂದ ಶಿವನೊಟ್ಟಿಂಗೆ ಹೋರಾಡಿ ಅವನ ಸೋಲಿಸಿ ಅವನ ಸಂತೋಷ ಪಡುಸಿ ಅವನತ್ರಂದ ಪಾಶುಪತಾಸ್ತ್ರವ ಪಡಕ್ಕೊಂಡಿದ°. ದ್ರೋಣಚಾರ್ಯನ ಸಂತೋಷಗೊಳುಸಿ ತನ್ನ ಗುರುವನ್ನೇ ಕೊಲ್ಲುತ್ತಾಂಗಿಪ್ಪ ವಿಶಿಷ್ಟವಾದ ಅಸ್ತ್ರವ ಪಡಕ್ಕೊಂಡಿದ°. ದೇವೇಂದ್ರನತ್ರಂದಲೂ ಮನ್ನಣೆ ಪಡಕ್ಕೊಂಡಿದ°. ಇಂತಹ ಅನೇಕ ಯಶಸ್ಸು ಕೀರ್ತಿ ಪಡಕ್ಕೊಂಡದು ಈಗ ಯುದ್ಧವಿಮುಖನಾದರೆ ಅದೆಲ್ಲಾ ಅಪಕೀರ್ತಿಗೊಳಗಾವ್ತು. ಮತ್ತೆ ಮುಂದೆ ಅವನ ನರಕಕ್ಕೆ ರಾಜಮಾರ್ಗ ಕರಕ್ಕೊಂಡು ಹೋವ್ತು. ಯುದ್ಧ ಮಾಡಿ ನರಕಕ್ಕೆ ಹೋಪದಲ್ಲ, ಯುದ್ಧ ಮಾಡದ್ರೆ ನರಕಕ್ಕೆ ಹೋವ್ತ ಸನ್ನಿವೇಶ.

ಬನ್ನಂಜೆ ಹೇಳ್ತವು – ಇಲ್ಲಿ ನಡೆತ್ತಾ ಇಪ್ಪದು ಒಂದು ಧರ್ಮ ಸಂಗ್ರಾಮ. ಅರ್ಜುನ° ಧರ್ಮದ ಪರ ನಿಂದ ಮಹಾರಥಿ. ಇಂತಹ ಧರ್ಮ ಸಂಗ್ರಾಮಲ್ಲಿ ಧರ್ಮದ ಪರ ಅರ್ಜುನ ಹೋರಾಡದ್ರೆ ಸಹಜಧರ್ಮಕ್ಕೆ ವಿರುದ್ಧವಾಗಿ ಮತ್ತು ಸಾಮಾಜಿಕ ಧರ್ಮವ ಬಿಟ್ಟು ನಡದ ಹಾಂಗೆ ಆವ್ತು. ಇದೊಂದು ಅರ್ಜುನನ ಪಾಲಿಂಗೆ ಮಹಾ ಕಳಂಕ ಮತ್ತು ಪಾಪ .

ಶ್ಲೋಕ

ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇsವ್ಯಯಾಮ್ ।
ಸಂಭಾವಿತಸ್ಯ ಚಾಕೀರ್ತಿಃ ಮರಣಾದತಿರಿಚ್ಯತೇ ॥೩೪॥

ಪದವಿಭಾಗ

ಅಕೀರ್ತಿಮ್ ಚ ಅಪಿ ಭೂತಾನಿ ಕಥಯಿಷ್ಯಂತಿ ತೇ ಅವ್ಯಯಾಮ್ । ಸಂಭಾವಿತಸ್ಯ ಚ ಅಕೀರ್ತಿಃ ಮರಣಾತ್ ಅತಿರಿಚ್ಯತೇ ॥

ಅನ್ವಯ

ಅಪಿ ಚ ಭೂತಾನಿ ತೇ ಅವ್ಯಯಾಮ್ ಅಕೀರ್ತಿಂ ಕಥಯಿಷ್ಯಂತಿ । ಸಂಭಾವಿತಸ್ಯ ಚ ಅಕೀರ್ತಿಃ ಮರಣಾತ್ ಅತಿರಿಚ್ಯತೇ ॥

ಪ್ರತಿಪದಾರ್ಥ

ಅಪಿ – ಸಾನ/ಕೂಡ, ಚ – ಕೂಡ,  ಭೂತಾನಿ – ಎಲ್ಲಾ ಜನಂಗೊ, ತೇ – ನಿನ್ನ, ಅವ್ಯಯಾಮ್ – ಶಾಶ್ವತವಾದ, ಅಕೀರ್ತಿಮ್ – ಅಪಕೀರ್ತಿಯ, ಕಥಯಿಷ್ಯಂತಿ – ಮಾತಾಡಿಗೊಳ್ಳುತ್ತವು,  ಸಂಭಾವಿತಸ್ಯ – ಗೌರವಾನ್ವಿತಂಗೆ, ಚ – ಕೂಡ, ಅಕೀರ್ತಿಃ – ಅಪಕೀರ್ತಿಯು, ಮರಣಾತ್ – ಮರಣಕ್ಕಿಂತ, ಅತಿರಿಚ್ಯತೇ – ಅಧಿಕವಾಗಿಪ್ಪದಾವ್ತು.

ಅನ್ವಯಾರ್ಥ

ನಿನ್ನ ಈ ಕರ್ತವ್ಯ ಲೋಪಂದಾಗಿ ಅಪಕೀರ್ತಿಗೆ ಒಳಪಡುತ್ತೆ ನೀನು. ಸಂಭಾವಿತಂಗೆ (ಗೌರವಾನ್ವಿತಂಗೆ) ಅಪಕೀರ್ತಿ ಹೇಳ್ವದು ಮರಣಂದಲೂ ಅಧಿಕ ಹೀನ.

ತಾತ್ಪರ್ಯ / ವಿವರಣೆ

ಅರ್ಜುನಂಗೆ ಶ್ರೀಕೃಷ್ಣ° ಸ್ನೇಹಿತ°, ಮತ್ತೆ ತತ್ವದರ್ಶಿಯೂ ಕೂಡ. ತಾನು ಯುದ್ಧ ಮಾಡುತ್ತಿಲ್ಲೇದು ಕೂದ ಅರ್ಜುನನ ವರ್ತನೆಯ ಬಗ್ಗೆ ಶ್ರೀಕೃಷ್ಣ° ಹೇಳುತ್ತ° – ಅರ್ಜುನ!, ಯುದ್ಧ ಮಾಡೆಕ್ಕಾರೆ ಮದಲೇ ನೀನು ಯುದ್ಧಭೂಮಿಂದ ವಿಮುಖ° ಆದರೆ, ಜನಂಗೊ ನಿನ್ನ ಹೇಡಿ ಹೇದು ಹೇಳುಗು. ನೀನು ಗಳುಸಿದ ಕೀರ್ತಿಯ ಬಗ್ಗೆ ಹೀಯಾಳುಸುಗು. ಹೀಯಾಳದ ಮಾತುಗೊ ಗೌರವಾನ್ವಿತಂಗೆ ಸಾವಿಂದಲೂ ಕೊಳಕ್ಕು.  ಹಾಂಗಾಗಿ ಯುದ್ಧ ಮಾಡಿ ಸಾವದೇ ನಿನಗೆ ಕೀರ್ತಿ. ಅದೂ ನೀನೊಬ್ಬ° ಕ್ಷತ್ರಿಯನಾಗಿದ್ದುಗೊಂಡು ಹೇಡಿತನ ತೋರ್ಸಿರೆ ಬಂಧು ಸ್ನೇಹಕ್ಕಾಗಿ ಯುದ್ಧಂದ ಹಿಂದೆ ಸರುದ° ಹೇದು ನೀಚವಾಕ್ಯಂದ ನಿನ್ನ ಹೀಯಾಳುಸುಗು. ಇದು ಯಾವೊಬ್ಬ ಕ್ಷತ್ರಿಯಂಗೂ ಭೂಷಣ ಅಲ್ಲ.

ಶ್ಲೋಕ

ಭಯಾದ್ರಣಾದುಪರತಂ ಮಂಸ್ಯಂತೇ ತ್ವಾಂ ಮಹಾರಥಾಃ ।
ಯೇಷಾಂ ಚ ತ್ವಂ ಬಹುಮತೋ ಭೂತ್ವಾ ಯಾಸ್ಯಸಿ ಲಾಘವಮ್ ॥೩೫॥

ಪದವಿಭಾಗ

ಭಯಾತ್ ರಣಾತ್ ಉಪರತಮ್ ಮಂಸ್ಯಂತೇ ತ್ವಾಮ್ ಮಹಾರಥಾಃ । ಯೇಷಾಮ್ ಚ ತ್ವಮ್ ಬಹು-ಮತಃ ಭೂತ್ವಾ ಯಾಸ್ಯಸಿ ಲಾಘವಮ್ ॥

ಅನ್ವಯ

ಮಹಾರಥಾಃ ತ್ವಾಂ ಭಯಾತ್ ರಣಾತ್ ಉಪರತಂ ಮಂಸ್ಯಂತೇ । ಯೇಷಾಂ ಚ ತ್ವಂ ಬಹು-ಮತಃ ಭೂತ್ವಾ, ಲಾಘವಂ ಯಾಸ್ಯಸಿ ।

ಪ್ರತಿಪದಾರ್ಥ

ಮಹಾರಥಾಃ – ಮಹಾರಥರುಗೊ, ತ್ವಾಮ್ – ನಿನ್ನ, ಭಯಾತ್ – ಹೆದರಿಕೆಂದ,  ರಣಾತ್ – ರಣರಂಗಂದ, ಉಪರತಮ್ – ಬಿಟ್ಟುಹೋದವ°  ಹೇದು, ಮಂಸ್ಯಂತೇ – ಪರಿಗಣುಸುಗು, ಯೇಷಾಮ್ – ಆರಿಂಗೆ, ಚ – ಕೂಡ, ತ್ವಮ್ – ನೀನು , ಬಹು-ಮತಃ – ಬಹುಮಾನ್ಯ°, ಭೂತ್ವಾ – ಆಗಿದ್ದುಗೊಂಡು, ಲಾಘವಮ್ – ಹಗುರವಾಗಿ, ಯಾಸ್ಯಸಿ – ಹೋವ್ತೆಯೋ!.

ಅನ್ವಯಾರ್ಥ

ನಿನ್ನ ವಿಷಯಲ್ಲಿ ಅತ್ಯಂತ ಗೌರವ ಮಡಿಕ್ಕೊಂಡ ಮಹಾರಥರು,  ‘ನೀನು ಹೆದರಿಕೆಂದಲೇ ರಣರಂಗಂದ ಬಿಟ್ಟಿಕ್ಕಿ ಹೋದೆ’ ಹೇದು ಗ್ರೇಶುಗು. ಆರಿಂಗೆ ಈವರೆಗೆ ನೀನೊಬ್ಬ ‘ಬಹುಮಾನ್ಯ°’ ಹೇದು ಆಗಿತ್ತಿದ್ಯೋ ಅವೆಕ್ಕೆಲ್ಲ ನೀನೊಬ್ಬ ಹಗುರಮನುಷ್ಯ° ಆಗಿ ಹೋಪಲಿದ್ದು!

ತಾತ್ಪರ್ಯ ವಿವರಣೆ

ದುರ್ಯೋಧನ°, ಕರ್ಣನಾಂಗಿಪ್ಪ ಮಹಾರಥಂಗೊ ಅಲ್ಲದ್ದೆ ಮತ್ತೆ ಇತರ ನಿನ್ನ ಸಮಕಾಲೀನಂಗಳ ಇಲ್ಲಿ ನೋಡಿಕ್ಕಿ ನೀನು ನಿನ್ನ ಸಹೋದರ°, ಅಪ್ಪ°, ಅಜ್ಜ° ಹೇದು ಯುದ್ಧ ಭೂಮಿಂದ ಹಿಂದೆ ಹೋದರೆ, ಅವ್ವು ನಿನ್ನ ಅನುಕಂಪಂದ ಯುದ್ಧ ಭೂಮಿ ಬಿಟ್ಟು ಹೋದೆ ಹೇದು ಹೇಳವು. ನೀನು ಪ್ರಾಣಭಯಂದ ಹೋದೇ ಹೇದು ತಾತ್ಸಾರ ಮಾತುಗೊ ಹೇಳುಗು., ನಿನ್ನ ಗೌರವ ಭಾವನೆ ಮಣ್ಣುಪಾಲಕ್ಕು. ಆರಿಂಗೆ ನೀನು ಘನತೆಯ ವ್ಯಕ್ತಿ ಆಗಿದ್ದೆಯೋ ಅಂಥವರ ಮನಸ್ಸಿಲ್ಲಿ ನೀನು ಕೀಳಾಗಿ ತೋರಿಹೋಗೆಡ.  ನಿನ್ನ ವಿಷಯಲ್ಲಿ ಅತ್ಯಂತ ಗೌರವವ ಮಡಿಕ್ಕೊಂಡಿಪ್ಪ ಮಹಾರಥಂಗೊ ನೀನು ಭಯಂದಲೇ ರಣಭೂಮಿಯ ಬಿಟ್ಟುಹೋದೆ ಹೇಳಿ ಗ್ರೇಶಿಗೊಂಗು. ಅದಲ್ಲದ್ದೆ ಆರ ಮನಸ್ಸಿಲ್ಲಿ ನೀನೊಬ್ಬ ಮಹಾರಥ° ಹೇಳಿ ಅನಿಸಿಗೊಂಡಿತ್ತಿದ್ಯೋ ಅವ್ವೇ ನಿನ್ನ ವಿಷಯವಾಗಿ ಹಗುರವಾಗಿ ಪರಿಗಣಿಸಿಗೊಂಗು.

ಶ್ಲೋಕ

ಅವಾಚ್ಯವಾದಾಂಶ್ಚ ಬಹೂನ್ ವದಿಷ್ಯಂತಿ ತವಾಹಿತಾಃ ।
ನಿಂದಂತಸ್ತವ ಸಾಮರ್ಥ್ಯಂ ತತೋ ದುಃಖತರಂ ನು ಕಿಮ್ ॥೩೬॥

ಪದವಿಭಾಗ

ಅವಾಚ್ಯ-ವಾದಾನ್ ಚ ಬಹೂನ್ ವದಿಷ್ಯಂತಿ ತವ ಅಹಿತಾಃ । ನಿಂದಂತಃ ತವ ಸಾಮರ್ಥ್ಯಮ್ ತತಃ ದುಃಖತರಮ್ ನು ಕಿಮ್ ॥

ಅನ್ವಯ

ತವ ಸಾಮರ್ಥ್ಯಂ ನಿಂದಂತಃ ತವ ಅಹಿತಾಃ ಚ ಬಹೂನ್ ಅವಾಚ್ಯ-ವಾದಾನ್ ವದಿಷ್ಯಂತಿ । ತತಃ ಕಿಂ ನು ದುಃಖತರಮ್ ।

ಪ್ರತಿಪದಾರ್ಥ

ತವ – ನಿನ್ನ, ಸಾಮರ್ಥ್ಯಮ್ – ಸಾಮರ್ಥ್ಯವ, ನಿಂದತಃ – ನಿಂದನೆಮಾಡಿಗೊಂಡು, ತವ – ನಿನ್ನ, ಅಹಿತಾಃ – ಅಹಿತರು (ಶತ್ರುಗೊ), ಚ – ಕೂಡ, ಬಹೂನ್ – ಅನೇಕ,ಅವಾಚ್ಯ-ವಾದಾನ್ –  ಅವಾಚ್ಯವಾದ (ತರವಲ್ಲದ) ಶಬ್ದಂಗಳ (ವಾದಂಗಳ),   ವದಿಷ್ಯಂತಿ – ಹೇಳ್ಳೆಹೋವ್ತವು,   ತತಃ – ಅದಕ್ಕಿಂತ, ಕಿಮ್ – ಇನ್ನೇನಿದ್ದು, ನು – ಅಲ್ಲದ್ದೆ, ದುಃಖತರಮ್ – ಅತಿದುಃಖಕರವಾದ್ದು.

ಅನ್ವಯಾರ್ಥ

ನಿನ್ನ ಶತ್ರುಗೊ ನಿನ್ನ ವಿಷಯಲ್ಲಿ ಅವಾಚ್ಯ ಮಾತುಗಳ ಹೇಳುಗು, ನಿನ್ನ ಸಾಮರ್ಥ್ಯವ ನಿಂದುಸುಗು. ನಿನಗೆ ಈ ಅವಮಾನ ಇದಕ್ಕಿಂತ ಹೆಚ್ಚಿನ ದುಃಖಕರವಲ್ಲದ್ದೇ (ಸಂಕಟವಲ್ಲದ್ದೆ) ಬೇರೆಂತರ?

ತಾತ್ಪರ್ಯ / ವಿವರಣೆ

ಅರ್ಜುನ° ತನ್ನವರ ಬಗ್ಗೆ ಹುಸಿ ಅನುಕಂಪ ತೊರ್ಸುತ್ಸು ಅಗತ್ಯ ಇಲ್ಲೆ ಹೇಳಿ ಕೃಷ್ಣ ಎತ್ತಿ ತೋರ್ಸುತ್ತಾ ಇಪ್ಪದು ಈ ಮಾತುಗಳ ಮೂಲಕ.  ಆರು ನಿನ್ನ ನೋಡಿ ವಿನಯಾನ್ವಿತ ಗೌರವಂದ ನೋಡಿಗೊಂಡಿತ್ತಿದ್ದವು ಅವ್ವು ನಿನ್ನ ಬಗ್ಗೆ ಅಸಭ್ಯ ಮಾತುಗಳ ಹೇಳುಗು. ಇದರಿಂದ ನಿನ್ನ ಈ ಹಿಂದಾಣ ಸಾಧನೆ ಎಲ್ಲಾ ಅಕೀರ್ತಿಗೆ ಕಾರಣ ಆವ್ತು. ಒಬ್ಬ ‘ಉತ್ತಮ ನ್ಯಾಯಾಧೀಶ’ ಹೇಳಿ ಹೆಸರು ಪಡದ ವ್ಯಕ್ತಿ ಯಾವುದೋ ಒಂದು ಸಂದರ್ಭಲ್ಲಿ ತನ್ನ ಬಂಧುವಿಂಗೋಸ್ಕರವಾಗಿ ಅವನ ಪರವಾಗಿ ತೀರ್ಪು ಕೊಟ್ಟರೆ ಆತ° ತನ್ನ ಸಂಪೂರ್ಣ ವ್ಯಕ್ತಿತ್ವವ ಕಳಕ್ಕೊಳ್ತ°. ಅವನ ಹಿಂದಾಣ ಸಾಧನೆಗೊ ಪೂರಾ ಮಣ್ಣುಪಾಲಾವ್ತು. ಅವನಿಂದ ಶಿಕ್ಷೆಗೊಳಗಾದ ಅಪರಾಧಿಗೊ ಕೂಡ ಅವನ ಬಗ್ಗೆ ಅಸಭ್ಯ ಹಾಂಗೂ ಅನುಚಿತವಾಗಿ ನಿಂದುಸುಗು – ಹೇದು ಬನ್ನಂಜೆ ಈ ಸನ್ನಿವೇಶವ ವಿಶ್ಲೇಷಿಸುತ್ತವು.

ಶ್ಲೋಕ

ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ।
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ ॥೩೭॥

ಪದವಿಭಾಗ

ಹತಃ ವಾ ಪ್ರಾಪ್ಸ್ಯಸಿ ಸ್ವರ್ಗಮ್ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ । ತಸ್ಮಾತ್ ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತ-ನಿಶ್ಚಯಃ ॥

ಅನ್ವಯ

ಹತಃ ವಾ ಸ್ವರ್ಗಂ ಪ್ರಾಪ್ಸ್ಯಸಿ, ಜಿತ್ವಾ ವಾ ಮಹೀಂ ಭೋಕ್ಷ್ಯಸೇ । ಹೇ ಕೌಂತೇಯ!, ತಸ್ಮಾತ್ ಯುದ್ಧಾಯ ಕೃತ-ನಿಶ್ಚಯಃ ಉತ್ತಿಷ್ಠ ।

ಪ್ರತಿಪದಾರ್ಥ

ಹತಃ – ಕೊಲ್ಲಲ್ಪಟ್ಟು, ವಾ – ಅಥವಾ, ಸ್ವರ್ಗಮ್ – ಸ್ವರ್ಗವ, ಪ್ರಾಪ್ಸ್ಯಸಿ – ಪಡೆತ್ತೆ,  ಜಿತ್ವಾ – ಗೆಲ್ಲುವದರಿಂದ, ವಾ – ಅಥವಾ, ಮಹೀಮ್ – ಜಗತ್ತಿನ, ಭೋಕ್ಷ್ಯಸೇ – ಅನುಭೋಗುಸುತ್ತೆ, ಹೇ ಕೌಂತೇಯ! – ಏ ಕುಂತೀಪುತ್ರನೇ!, ತಸ್ಮಾತ್ – ಆದಕಾರಣ,  ಯುದ್ಧಾಯ – ಯುದ್ಧಕ್ಕಾಗಿ, ಕೃತ-ನಿಶ್ಚಯಃ  – ಮಾಡಲ್ಪಟ್ಟ ನಿರ್ಧಾರ ಇಪ್ಪವನಾಗಿ, ಉತ್ತಿಷ್ಠ – ಎದ್ದು ನಿಲ್ಲು.

ಅನ್ವಯಾರ್ಥ

ಏ ಕುಂತಿಯ ಮಗನಾದ ಅರ್ಜುನನೇ!, ನೀನು ಯುದ್ಧ ಮಾಡಿ ಸತ್ತರೆ ಸ್ವರ್ಗವ ಸೇರುತ್ತೆ. ಅಥವಾ, ಗೆದ್ದರೆ ಭೂಮಿಲಿ ರಾಜ್ಯ ಸುಖವ ಅನುಭವುಸಲೆ ಹೋವ್ತೆ. ಹಾಂಗಾದಕಾರಣ, ಯುದ್ಧಮಾಡ್ಳೆ ದೃಢನಿಶ್ಚಯಮಾಡಿದವನಾಗಿ ಎದ್ದು ನಿಲ್ಲು.

ತಾತ್ಪರ್ಯ / ವಿವರಣೆ

ಅರ್ಜುನನ ಪಕ್ಷಕ್ಕೆ ವಿಜಯ ಸಿಕ್ಕುತ್ತೋ ಇಲ್ಯೋ ಹೇಳುವುದು ಗೊಂತಿಲ್ಲೆ. ಆದರೂ ಸ್ವಧರ್ಮಕ್ಕಾಗಿ ಯುದ್ಧಮಾಡ್ಳೇ ಬೇಕು. ಎಂತಕೆ ಹೇದರೆ ಈ ಯುದ್ಧಲ್ಲಿ ಸತ್ತರೂ ವೀರಸ್ವರ್ಗ ನಿಶ್ಚಯ, ಗೆದ್ದರೆ ರಾಜಭೋಗ ಖಂಡಿತ. ಕರ್ತವ್ಯಂದ ವಿಮುಖನಾದರೆ ನರಕವೇ ಗತಿ. ಬನ್ನಂಜೆ ಹೇಳ್ತವು – ನಾವು ಮಾಡುವ ಕಾರ್ಯಲ್ಲಿ ಧರ್ಮದ ಪರಿಜ್ಞಾನ ಮುಖ್ಯ. ಯಾವುದೇ ಸ್ವಾರ್ಥ ಇಲ್ಲದ್ದೆ, ಧರ್ಮದ ಮಾರ್ಗವ ಅನುಸರುಸೇಕು. ಏವತ್ತೂ ಯಾವುದಕ್ಕೂ ಅಂಜೆಕ್ಕಾದ ಅಗತ್ಯ ಇಲ್ಲೆ. ಧರ್ಮ ಮಾರ್ಗಲ್ಲಿ ನಡದರೆ ಎನಗೆಂತಕ್ಕೋ ಹೇಳ್ವ ಭಯ ಬೇಡ. ಎಂತಕೆ ಹೇದರೆ, ಧರ್ಮದ ನಡೆಲಿ ಫಲಿತಾಂಶ ಏವುದೇ ಆದರೂ ಅದು ನಮ್ಮ ಮೋಕ್ಷಕ್ಕೆ ಕೊಂಡೊಯ್ಯುವ ಸಾಧನವಾವ್ತು.

ಶ್ಲೋಕ

ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ।
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ॥೩೮॥

ಪದವಿಭಾಗ

ಸುಖ-ದುಃಖೇ ಸಮೇ ಕೃತ್ವಾ ಲಾಭ-ಅಲಾಭೌ ಜಯ-ಅಜಯೌ । ತತಃ ಯುದ್ಧಾಯ ಯುಜ್ಯಸ್ವ ನ ಏವಮ್ ಪಾಪಮ್ ಅವಾಪ್ಸ್ಯಸಿ ॥

ಅನ್ವಯ

ಸುಖ-ದುಃಖೇ ಲಾಭ-ಅಲಾಭೌ ಜಯ-ಅಜಯೌ ಸಮೇ ಕೃತ್ವಾ ತತಃ ಯುದ್ಧಾಯ ಯುಜ್ಯಸ್ವ । ಏವಂ ಪಾಪಂ ನ ಅವಾಪ್ಸ್ಯಸಿ ।

ಪ್ರತಿಪದಾರ್ಥ

ಸುಖ-ದುಃಖೇ – ಸುಖ-ದುಃಖಲ್ಲಿ, ಲಾಭ-ಅಲಾಭೌ – ಲಾಭ ನಷ್ಟಲ್ಲಿ, ಜಯ-ಅಜಯೌ – ಜಯ ಅಪಜಯಲ್ಲಿ, ಸಮೇ ಕೃತ್ವಾ – ಸಮಭಾವಲ್ಲಿ ಇಪ್ಪಾಂಗೆ ಮಾಡಿ,  ತತಃ – ಮತ್ತೆ, ಯುದ್ಧಾಯ – ಯುದ್ಧಮಾಡ್ಳೆ, ಯುಜ್ಯಸ್ವ – ತೊಡಗು (ಹೋರಾಡು),  ಏವಮ್ – ಈ ರೀತಿಲಿ, ಪಾಪಮ್ – ಪಾಪವ, ನ ಅವಾಪ್ಸ್ಯಸಿ – ನೀನು ಹೊಂದೆ.

ಅನ್ವಯಾರ್ಥ

ಸುಖದುಃಖಂಗಳ , ಲಾಭನಷ್ಟಂಗಳ ಜಯಾಪಜಯಂಗಳ ಪರಿಗಣಿಸುದ್ದೆ, ಯುದ್ಧಮಾಡ್ಳೆ ಹೇಳಿಯೇ ಯುದ್ಧಕ್ಕೆ ತೊಡಗು. ಹೀಂಗೆ ಮಾಡಿರೆ ನಿನಗೆ ಪಾಪದ ಲೇಪ ಖಂಡಿತವಾಗಿ ಇಲ್ಲೆ.

ತಾತ್ಪರ್ಯ / ವಿವರಣೆ

ಅರ್ಜುನ° ಯುದ್ಧಮಾಡೇಕು ಹೇಳಿಯೇ ಕೃಷ್ಣನ ಅಪೇಕ್ಷೆ. ಹಾಂಗಾಗಿ ‘ಯುದ್ಧಮಾಡ್ಳೆ ಹೇಳಿಯೇ ಹೋರಾಡು’ ಹೇದು ನೇರ ಹೇಳ್ತ°. ಕೃಷ್ಣಪ್ರಜ್ಞೆಲಿ ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯ ಪರಿಗಣನೆಯೇ ಇಲ್ಲೆ. ಕೃಷ್ಣಂಗಾಗಿಯೇ ಇದರ ಮಾಡೆಕು ಹೇಳ್ವದು ಅಲೌಕಿಕ ಪ್ರಜ್ಞೆ. ಹಾಂಗಾಗಿ ಐಹಿಕ ಕರ್ಮಂಗೊಕ್ಕೆ ಐಹಿಕ ಫಲ ಇಲ್ಲೆ. ಸಾತ್ವಿಕ ಗುಣಂದ, ರಜೋಗುಣಂದ ತನ್ನ ಇಂದ್ರಿಯ ತೃಪ್ತಿಗಾಗಿ ಕರ್ಮ ಮಾಡಿರೆ ಕೆಟ್ಟ ಫಲವೇ ಲಭಿಸುಗಷ್ಟೆ. ಆದರೆ, ಕೃಷ್ಣಪ್ರಜ್ಞೆಯ ಕರ್ಮಂಗೊಕ್ಕೆ, ತನ್ನ ಸಂಪೂರ್ಣವಾಗಿ ಸಮರ್ಪಿಸಿಕೊಂಡವಂಗೆ ಬೇರೆ ಯಾವ ಹಂಗೂ ಅಗತ್ಯ ಇಲ್ಲೆ. ಯಾವ ಋಣವೂ ಇಲ್ಲೆ.

ಬನ್ನಂಜೆ ಇದರ ಈ ರೀತಿ ವ್ಯಾಖ್ಯಾನಿಸುತ್ತವುಜೀವನಲ್ಲಿ ಸುಖ-ದುಃಖ ಹೇಳ್ವದು ಅನಿವಾರ್ಯ. ಸುಖ-ದುಃಖ, ಸೋಲು-ಗೆಲುವು, ಲಾಭ-ನಷ್ಟ ಎಲ್ಲವನ್ನೂ ಸಮಾನವಾಗಿ ಕಾಂಬವಂಗೆ ಯಾವ ಪಾಪದ ಲೇಪವೂ ಅಂಟ. ಎಲ್ಲವನ್ನೂ ಸಮದೃಷ್ಟಿಂದ ಕಂಡು, ಕೇವಲ ಕರ್ತವ್ಯ ಪ್ರಜ್ಞೆಂದ ಹೋರಾಟ ಮಾಡುವದೇ ಬದುಕಿನ ಯಶಸ್ಸಿನ ಸೂತ್ರ. ಆನೇ ಗೆಲ್ಲೆಕು, ಎನಗೇ ಲಾಭ ಸಿಕ್ಕೆಕು, ಎನಗೆ ಸುಖವೇ ಬೇಕು ಹೇದು ಮಾತ್ರವೇ ಕಂಡುಕೊಳ್ಳದ್ದೆ ಎಲ್ಲವೂ ಭಗವಂತನ ಪ್ರಸಾದ ಹೇದು ತಿಳ್ಕೊಂಡು ತನ್ನ ಕರ್ತವ್ಯ ಪಾಪನೆ ಮಾಡುವದೇ ನಿಜ ಜೀವನ. ಭಗವಂತನ ಈ ನುಡಿಯ ತನ್ನ ಜೀವನಲ್ಲಿ ಅಳವಡಿಸಿಗೊಂಡರೆ ಎಂದಿಂಗೂ ದುಃಖ ಆಗ. ‘ಬಂದದ್ದೆಲ್ಲಾ ಬರಲಿ, ಗೋವಿಂದನ ದಯವೊಂದಿರಲಿ’ ಹೇದು ನಿಶ್ಚೈಸಿ, ಧರ್ಮ ಮಾರ್ಗಲ್ಲಿ ಮುನ್ನೆಡವವಂಗೆ ಸದಾ ಸ್ವರ್ಗದ ಬಾಗಿಲು ತೆಕ್ಕೊಂಡಿರ್ತು. ಅವಂಗೆ ದುಃಖ ದುಃಖವಾಗಿ, ಸೋಲು ಸೋಲಾಗಿ, ನಷ್ಟ ನಷ್ಟವಾಗಿ ಎಂದಿಂಗೂ ತೋರ. ಅವಂಗೆ ಇಹವೂ ಸ್ವರ್ಗ, ಪರವೂ ಸ್ವರ್ಗ.

ಶ್ಲೋಕ

ಏಷಾ ತೇsಭಿಹತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು ।
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಸಿ ॥೩೯॥

ಪದವಿಭಾಗ

ಏಷಾ ತೇ ಅಭಿಹಿತಾಃ ಸಾಂಖ್ಯೇ ಬುದ್ಧಿಃ ಯೋಗೇ ತು ಇಮಾಮ್ ಶೃಣು । ಬುದ್ಧ್ಯಾ ಯುಕ್ತಃ ಯಯಾ ಪಾರ್ಥ ಕರ್ಮ-ಬಂಧಮ್ ಪ್ರಹಾಸ್ಯಸಿ॥

ಅನ್ವಯ

ಹೇ ಪಾರ್ಥ!, ಏಷಾ ತೇ ಸಾಂಖ್ಯೇ ಬುದ್ಧಿಃ ಅಭಿಹಿತಾಃ, ಯೋಗೇ ತು ಇಮಾಂ (ಬುದ್ಧಿಂ) ಶೃಣು । ಯಯಾ ಬುದ್ಧ್ಯಾ ಯುಕ್ತಃ (ತ್ವಂ) ಕರ್ಮ-ಬಂಧಂ ಪ್ರಹಾಸ್ಯಸಿ ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಮಗನೇ!, ಏಷಾ – ಇದು, ತೇ – ನಿನಗೆ, ಸಾಂಖ್ಯೇ – ವಿಶ್ಲೇಷಣಾತ್ಮಕ ಅಧ್ಯಯನಲ್ಲಿ, ಬುದ್ಧಿಃ – ಬುದ್ಧಿಯು, ಅಭಿಹಿತಾಃ – ವಿವರಿಸಲ್ಪಟ್ಟವು, ಯೋಗೇ ತು – ಕಾಮ್ಯಫಲವಿಲ್ಲದ ಕಾರ್ಯಲ್ಲಿ ಆದರೋ, ಇಮಾಮ್ – ಇದರ (ಈ ಬುದ್ಧಿಯ), ಶೃಣು – ಕೇಳು, ಯಯಾ – ಯಾವುದರಿಂದ, ಬುದ್ಧ್ಯಾ – ಬುದ್ಧಿಶಕ್ತಿಂದ, ಯುಕ್ತಃ – ಒಡಗೂಡಿದವನಾಗಿ, ತ್ವಮ್ – ನೀನು, ಕರ್ಮ-ಬಂಧಮ್ – ಪ್ರತಿಕ್ರಿಯೆಯ ಬಂಧನವ, ಪ್ರಹಾಸ್ಯಸಿ – ಬಿಡುಗಡೆ ಹೊಂದುವೆ.

ಅನ್ವಯಾರ್ಥ

ಈವರೇಂಗೆ, ಆನು ಈ ಜ್ಞಾನವ ನಿನಗೆ ವಿಶ್ಲೇಷಣಾತ್ಮಕವಾಗಿ ತಿಳಿಶಿಕೊಟ್ಟಿದೆ. ಈಗ ಆನು ಇದರ ಯೋಗದ ರೀತಿಲಿ ಹೇಳುತ್ತೆ. ಕೇಳು, ಹೇ ಪಾರ್ಥನೇ!, ನೀನು ಇಂತಹ ಜ್ಞಾನಂದ ಕರ್ಮಲ್ಲಿ ತೊಡಗಿರೆ ಕರ್ಮಬಂಧಂದ ಮುಕ್ತನಪ್ಪೆ.

ತಾತ್ಪರ್ಯ / ವಿವರಣೆ

ವೇದದ ನಿಘಂಟಾದ ನಿರುಕ್ತಿಯ ಪ್ರಕಾರ, ‘ಸಂಖ್ಯಾ’ ಹೇಳಿರೆ ವಿಷಯವ ವಿವರವಾಗಿ ಹೇಳುವದು. ‘ಸಂಖ್ಯಾ’ ಹೇದರೆ ಇದು ವೈದಿಕ ಸಂಖ್ಯಾ – ಸಮ್ಯಕ್ ಖ್ಯಾತಿ ಅಥವಾ ಸರಿಯಾದ ಅರಿವು. ಸಾಂಖ್ಯ ಹೇದರೆ ಆತ್ಮದ ನಿಜಸ್ವರೂಪವ ವಿವರುಸುವ ದರ್ಶನ. ವೈದಿಕ ಸಾಂಖ್ಯವ ಪ್ರಚಾರಕ್ಕೆ ತಂದವ ಕಪಿಲವಾಸುದೇವ°. ಇದು ನಾಸ್ತಿಕವಾದದ ಕಪಿಲನ ಸಾಂಖ್ಯ ಸಿದ್ಧಾಂತ ಅಲ್ಲ. ಮೋಸಗಾರ° ಈ ಕಪಿಲನ ಸಾಂಖ್ಯ ಪ್ರತಿಪಾದನೆಗೆ ಎಷ್ಟೋ ಮದಲು ನಿಜವಾದ ಕಪಿಲವಾಸುದೇವ° ಇದರ ತನ್ನ ಅಬ್ಬೆ ದೇವಹೂತಿಗೆ ಶ್ರೀಮದ್ಭಾಗವತಲ್ಲಿ ವಿವರಿಸಿದ್ದನಡ. ಈ ಕಪಿಲವಾಸುದೇವ° ಶ್ರೀಕೃಷ್ಣನ ಅವತಾರ. ಯೋಗವು ಇಂದ್ರಿಯ ನಿಗ್ರಹವ ವಿಧಿಸುತ್ತು. ಯುದ್ಧಮಾಡುತ್ತಿಲ್ಲೆ ಹೇಳ್ವ ಅರ್ಜುನನ ನಿರ್ಧಾರಕ್ಕೆ ಇಂದ್ರಿಯ ತೃಪ್ತಿಯೇ ಆಧಾರ. ತನ್ನ ದಾಯಾದಿಗೊ, ಸೋದರಂಗೊ ಆದ ಧೃತರಾಷ್ಟ್ರನ ಮಕ್ಕಳ ಕೊಂದು ಆ ರಾಜ್ಯದ ಸುಖ ಅನುಭವಿಸುವದಕ್ಕಿಂತ ತನ್ನ ಬಂಧುಗಳ ಕೊಲ್ಲದ್ರೆ ತಾನು ಸುಖಿಯಾಗಿಪ್ಪೆ ಹೇದು ಅರ್ಜುನ ಗ್ರೇಶಿಗೊಂಡ°. ಹಾಂಗಾಗಿ ತನ್ನ ಮುಖ್ಯ ಕರ್ತವ್ಯವ ಮರದು ಯುದ್ಧ ವಿಮುಖನಪ್ಪಲೆ ಬಯಸಿದ°. ಎರಡೂ ರೀತಿಲೂ ಮೂಲಕಾರಣ ಇಂದ್ರಿಯ ತೃಪ್ತಿಯೇ. ಅವರ ಸೋಲುಸಿ ಬಪ್ಪ ಸಂತೋಷ ಮತ್ತು ಬಂಧುಗೊ ಬದುಕಿಪ್ಪದರ ನೋಡುವ ಸಂತೋಷ ಈ ಎರಡೂ ವಿವೇಕವ, ಕರ್ತವ್ಯವ ಬಲಿಕೊಟ್ಟು ಆದರೂ ಇಂದ್ರಿಯ ತೃಪ್ತಿ ಪಡೇಕು ಹೇಳ್ವ ಆಧಾರದ ಮೇಲೆ ಇದ್ದು. ಹಾಂಗಾಗಿ ಕೃಷ್ಣ° ಅರ್ಜುನಂಗೆ ತನ್ನ ತಾತನ ದೇಹವ ಕೊಲ್ಲುವದಿರಿಂದ ಅವ° ನಿಜವಾದ ಆತ್ಮವ ಕೊಲ್ಲುತ್ತನಿಲ್ಲೆ ಹೇದು ವಿವರಿಸಿದ°. ಭಗವಂತನೂ ಸೇರಿ ಎಲ್ಲ ವ್ಯಕ್ತಿಗೊ ನಿತ್ಯರೇ. ನಾವೆಲ್ಲ ಶಾಶ್ವತವಾಗಿ ಪ್ರತ್ಯೇಕ ಪ್ರತ್ಯೇಕ ಆತ್ಮಗಳಾದ್ದರಿಂದ, ಪ್ರತ್ಯೇಕ ಪ್ರತ್ಯೇಕ ವ್ಯಕ್ತಿಗೊ ಆಗಿತ್ತಿದ್ದವು. ಮತ್ತೆ , ಭವಿಷ್ಯಲ್ಲೂ ಪ್ರತ್ಯೇಕ ವ್ಯಕ್ತಿಗಳಾಗಿಯೇ ಇರ್ತವು. ದೇಹ ಹೇಳ್ವ ಉಡುಪಿನ ನಾವು ಬೇರೆ ಬೇರೆ ರೀತಿಲಿ ಬದಲಾಯಿಸುತ್ತಿಪ್ಪದು. ಆದರೆ, ವಾಸ್ತವವಾಗಿ ಪ್ರಾಪಂಚಿಕ ಉಡುಪಿನ ಬಂಧನಂದ ಮುಕ್ತರಾದ ಮೇಲೆಯೂ ನಾವು ನಮ್ಮ ಪ್ರತ್ಯೇಕತೆಯ ಉಳುಶಿಗೊಳ್ಳುತ್ತು. ಈ ರೀತಿಯಾಗಿ ಆತ್ಮ ಮತ್ತು ದೇಹದ ವಿಶ್ಲೇಷಣಾತ್ಮಕ ಅಧ್ಯಯನವ ಶ್ರೀಕೃಷ್ಣ° ಬಹು ಸ್ಪಷ್ಟವಾಗಿ ಅರ್ಜುನಂಗೆ ವಿವರಿಸಿದ್ದ°. ಆತ್ಮ ಮತ್ತು ದೇಹಂಗಳ ಬೇರೆ ಬೇರೆ ದೃಷ್ಟಿಂದ ಕಾಂಬ ಈ ವಿವರಣಾತ್ಮಕ ಜ್ಞಾನವ ನಿರುಕ್ತಿ ನಿಘಂಟಿಗನುಗುಣವಾಗಿ ಸಾಂಖ್ಯ ಹೇದು ಹೇದ್ದು.

ಅರ್ಜುನ° ಆಗಳೇ ತನ್ನ ಶ್ರೀಕೃಷ್ಣಂಗೆ ಸಮರ್ಪಿಸಿಗೊಂಡು ಅವನ ತನ್ನ ಗುರುವನ್ನಾಗಿ ಹೇಳಿಗೊಂಡಿದ. ಕೃಷ್ಣನೂ ಇದರ ಸ್ವೀಕರುಸಿಗೊಂಡು ಅರ್ಜುನ ತನ್ನ ಶಿಷ್ಯನಾಗಿ, ಅವಂಗೆ ಬುದ್ಧಿಯೋಗ ಅಥವಾ ಕರ್ಮಯೋಗ ಹೇಳಿರೆ ಭಗವಂತನ ಇಂದ್ರಿಯತೃಪ್ತಿಗಾಗಿಯೇ ಭಕ್ತಿಂದ ಸೇವೆ ಮಾಡುವದು. ಬುದ್ಧಿಯೋಗ ಹೇಳಿರೆ, ಪ್ರತಿಯೊಬ್ಬರ ಹೃದಯಲ್ಲಿ ಪರಮಾತ್ಮನಾಗಿ ಪೀಠಸ್ಥನಾಗಿಪ್ಪ ಭಗವಂತನೊಟ್ಟಿಂಗೆ ನೇರವಾದ ಸಂಪರ್ಕ. ಭಕ್ತಿಸೇವೆಲಿ ಅಥವಾ ಆಧ್ಯಾತ್ಮಿಕ ಸೇವೆಲಿ, ಹೇಳಿರೆ., ಕೃಷ್ಣಪ್ರಜ್ಞೆಲಿ ನಿಷ್ಠನಾಗಿಪ್ಪವ ಭಗವಂತನ ವಿಶೇಷ ಕೃಪೆಂದ ಬುದ್ಧಿಯೋಗದ ಈ ಸ್ಥಿತಿಯ ತಲಪುತ್ತ°. ದಿವ್ಯಪ್ರೇಮಂದ ಭಕ್ತಿಸೇವೆಲಿ ಸದಾ ನಿರತನಾಗಿಪ್ಪವಂಗೆ ಮಾತ್ರ ಪ್ರೇಮಭಕ್ತಿಯ ಪರಿಶುದ್ಧ ಜ್ಞಾನವ ತಾನು ಅನಗ್ರಹುಸುದಾಗಿ ಭಗವಂತ ಹೇಳುತ್ತ°. ಈ ರೀತಿಲಿ ಭಕ್ತ° ಭಗವಂತನ ನಿತ್ಯಸುಖದ ಸಾಮ್ರಾಜ್ಯಲ್ಲಿ ಅವನ ಸುಲಭವಾಗಿ ಸೇರ್ಲಕ್ಕು.

ಹೀಂಗೆ ಈ ಶ್ಲೊಕಲ್ಲಿ ಪ್ರಸ್ತಾಪಿಸಿಪ್ಪ ಬುದ್ಧಿಯೋಗವು ಭಗವಂತನ ಭಕ್ತಿಪೂರ್ವಕ ಸೇವೆ.

ಬನ್ನಂಜೆ ವ್ಯಾಖ್ಯಾನಿಸಿದ ಪ್ರಕಾರ – ಯೋಗ ಹೇದರೆ ಇದು ವೈದಿಕ ಯೋಗ ಹೊರತು ಪತಂಜಲಿ ಯೋಗ ಅಲ್ಲ. ಸಾಮಾನ್ಯ ಯೋಗಕ್ಕೆ ದೇವರ ದೃಢ ನಂಬಿಕೆ ಅಗತ್ಯ ಇಲ್ಲೆ. ಮನಸ್ಸಿನ ಯಾವುದೋ ಒಂದರ ಮೇಲೆ ನಿರಂತರ ಏಕಾಗ್ರತೆ ಮಾಡುವದರಿಂದ ಅನೇಕ ಪವಾಡಂಗಳ ಮಾಡ್ಳೆ ಎಡಿಗು. ಆದರೆ ಇದು ನಿಜವಾದ ಆತ್ಮ ಸಾಕ್ಷಾತ್ಕಾರವಲ್ಲ. ಹತ್ತು ವರ್ಷ ಯೋಗ ಅಭ್ಯಾಸ ಸಾಧನೆ ಮಾಡಿ ನೀರಿನ ಮೇಲೆ ನಡವಲೆ ಎಡಿಗಕ್ಕು. ಆದರೆ ಇದು ವೈದಿಕ ಯೋಗ ಅಲ್ಲ. ಈ ರೀತಿ ಯೋಗಂದ ಪವಾಡಂಗಳ ಕಲ್ತು ಪ್ರದರ್ಶಿಸುವದರ ವೈದಿಕ ಯೋಗ ನಿಷೇಧಿಸುತ್ತು. ಎಂತಹ ಅಂತಃಶಕ್ತಿ ಪಡಕ್ಕೊಂಡಿದ್ದರೂ ಅದರ ಪ್ರದರ್ಶಸಲೆ ಆಗ. ಇಂತಹ ಇಂದ್ರಜಾಲವ ಆರು ಬೇಕಾರು ಸಾಧನೆ ಮೂಲಕ ಮಾಡ್ಳೆ ಎಡಿಗು. ಇಲ್ಲಿ ಕೃಷ್ಣ ಹೇಳ್ತಾ ಇಪ್ಪದು ಆತ್ಮತತ್ವವ ಪಡವಲೆ ಜೀವನಲ್ಲಿ ಮಾಡೆಕ್ಕಪ್ಪ ಸಾಧನೆ. ಜ್ಞಾನದ ದಾರಿಲಿ ಮುನ್ನೆಡದು ಸಾಧನೆ ದಾರಿಲಿ ಕರ್ಮ ಬಂಧನಂದ ಪಾರಪ್ಪಲೆ ಇಪ್ಪ ಯೋಗ. ಅಧ್ಯಾತ್ಮದ ಸಾಧನೆ ಹೇಳಿರೆ ಇತರ ಐಹಿಕ ಸಾಧನೆಗಿಂತ ಬೇರೆಯೇ. ಇಲ್ಲಿ ಎಷ್ಟು ಸರ್ತಿ ಮೀಯೆಕು, ಯಾವ ವಸ್ತ್ರ ತೊಡೆಕು, ಯಾವ ರೀತಿಲಿ ಕೂರೆಕು, ಎಷ್ಟು ಹೊತ್ತು ಜಪ ಮಾಡಿಗೊಂಡು ಕೂರೆಕು, ಎಷ್ಟು ಮಂತ್ರ ಹೇಳೆಕು ಇತ್ಯಾದಿ ಬಾಹ್ಯಲ್ಲಿ ಹೆಂಗಿರೇಕು ಹೇಳ್ವದಕ್ಕಿಂತ ಅಂತರಂಗ ಹೇಂಗಿರೆಕು ಹೇಳ್ವದೇ ಮುಖ್ಯ. ಅಂತರಂಗ ಮತ್ತು ಬಹಿರಂಗ ಏಕವಾಗಿಪ್ಪ ಸ್ಥಿತಿ. ನಮ್ಮ ನಡೆ, ನಮ್ಮ ನಂಬಿಕೆ, ನಮ್ಮ ಪ್ರಾಮಾಣಿಕತೆಯೇ ನಮ್ಮ ನಿಜವಾದ ಧರ್ಮ. ಅಂತಹ ಅಂತರಂಗದ ಸಾಧನೆ ಅತಿ ಮುಖ್ಯ.

ಜ್ಞಾನ ಬೇಕು ನಿಜ, ಆದರೆ, ಆತ್ಮ ಜ್ಞಾನವ ಪಡವಲೆ ನಮ್ಮ ಸಾಧನೆ ಎಂತಿರೇಕು, ಈ ಸಂಸಾರ ಬಂಧವ ಕಳಚಿ ಸಾಧನೆ ಯಾವುದು ಇತ್ಯಾದಿ ಮುಂದೆ-

ಶ್ಲೋಕ

ನೇಹಾಭಿಕ್ರಮನಾಶೋsಸ್ತಿ ಪ್ರತ್ಯವಾಯೋ ನ ವಿದ್ಯತೇ ।
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ॥೪೦॥

ಪದವಿಭಾಗ

ನ ಇಹ ಅಭಿಕ್ರಮ-ನಾಶಃ ಅಸ್ತಿ ಪ್ರತ್ಯವಾಯಃ ನ ವಿದ್ಯತೇ । ಸ್ವಲ್ಪಮ್ ಅಪಿ ಅಸ್ಯ ಧರ್ಮಸ್ಯ ತ್ರಾಯತೇ ಮಹತಃ ಭಯಾತ್ ॥

ಅನ್ವಯ

ಇಹ ಅಭಿಕ್ರಮ-ನಾಶಃ ನ ಅಸ್ತಿ, ಪ್ರತ್ಯವಾಯಃ ನ ವಿದ್ಯತೇ, ಅಸ್ಯ ಧರ್ಮಸ್ಯ ಸ್ವಲ್ಪಂ ಅಪಿ ಅನುಷ್ಠಾನಂ ಮಹತಃ ಭಯಾತ್ ತ್ರಾಯತೇ ।

ಪ್ರತಿಪದಾರ್ಥ

ಇಹ – ಈ ಯೋಗಲ್ಲಿ, ಅಭಿಕ್ರಮ-ನಾಶಃ   – ಪರಿಶ್ರಮ (ಪ್ರಯತ್ನ) ನಷ್ಟ, ನ ಅಸ್ತಿ – ಇಲ್ಲೆ, ಪ್ರತ್ಯವಾಯಃ – ಕುಗ್ಗುವಿಕೆ, ನ ವಿದ್ಯತೇ – ಇಪ್ಪಲೆ ಇಲ್ಲೆ, ಅಸ್ಯ ಧರ್ಮಸ್ಯ – ಈ ಧರ್ಮದ, ಸ್ವಲ್ಪಮ್ ಅಪಿ ಅನುಷ್ಠಾನಮ್ – ಒಂದು ಸ್ವಲ್ಪ ಭಾಗ ಅನುಷ್ಠಾನ ಕೂಡ (ರಜಾ ಸಾಧನೆಯೂ  ಕೂಡ),  ಮಹತಃ – ಬಹುದೊಡ್ಡ, ಭಯಾತ್ – ಅಪಾಯಂದ, ತ್ರಾಯತೇ – ದಾಂಟುಸುತ್ತು,

ಅನ್ವಯಾರ್ಥ

ಈ ಯೋಗಪರಿಶ್ರಮಲ್ಲಿ ನಷ್ಟವಾಗಲೀ, ಕುಗ್ಗುವದಾಗಲೀ ಇಲ್ಲೆ. ಈ ಮಾರ್ಗಲ್ಲಿ ಸಾಧುಸುವ ತುಸು ಪ್ರಗತಿಯೂ ಮನುಷ್ಯನ ಮಹಾಭಯಂದ ಕಾಪಾಡುತ್ತು.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಲಿ ಕೆಲಸ ಮಾಡುವದು, ಅಥವಾ, ಇಂದ್ರಿಯತೃಪ್ತಿಯ ನಿರೀಕ್ಷಣೆ ಇಲ್ಲದ್ದೆ ಕೃಷ್ಣನ ಉಪಯೋಗಕ್ಕಾಗಿ ಕೆಲಸ ಮಾಡುವದು ಕರ್ಮದ ಅತ್ಯುನ್ನತ ಆಧ್ಯಾತ್ಮಿಕ ಲಕ್ಷಣ. ಇಂತಹ ಕರ್ಮದ ಅಲ್ಪ ಪ್ರಾರಂಭಕ್ಕೂ ಅಡ್ಡಿಯುಂಟಾವ್ತಿಲ್ಲೆ. ಈ ಅಲ್ಪ ಪ್ರಾರಂಭವು (ಸಾಧನೆಯು) ಯಾವ ಘಟ್ಟಲ್ಲಿಯೂ ನಷ್ಟವಾವ್ತಿಲ್ಲೆ. ಐಹಿಕ ಮಟ್ಟಲ್ಲಿ ಪ್ರಾರಂಭ ಮಾಡಿದ ಯಾವುದೇ ಕೆಲಸ ಸಂಪೂರ್ಣ ಮಾಡೆಕು. ಇಲ್ಲದ್ರೆ ಇಡೀ ಪ್ರಯತ್ನ ನಿಷ್ಪಲ. ಆದರೆ, ಕೃಷ್ಣಪ್ರಜ್ಞೆಂದ ಪ್ರಾರಂಭ ಮಾಡಿದ ಕೆಲಸ ಸಂಪೂರ್ಣಗೊಳುಸಲಾಗದ್ರೂ ಅದರ ಪರಿಣಾಮ ಶಾಶ್ವತವಾಗಿಯೇ ಇರ್ತು. ಇದರಿಂದ ನಷ್ಟವೇನೂ ಆವ್ತಿಲ್ಲೆ.

ಬನ್ನಂಜೆ ಹೇಳ್ತವು – ನಮ್ಮ ಜೀವನಲ್ಲಿ ಸಾಧಿಸಿದ ಐಹಿಕ ಧನ ಒಡವೆ ಕೀರ್ತಿ ಆಸ್ತಿ ಇತ್ಯಾದಿ ಸಂಪತ್ತು ಸತ್ತ ನಂತರ ನಮ್ಮೊಂದಿಂಗೆ ಬತ್ತಿಲ್ಲೆ. ಆದರೆ, ಅಧ್ಯಾತ್ಮ ಸಾಧನೆ ಹಾಂಗಲ್ಲ. ಒಂದು ಜನ್ಮಲ್ಲಿ ಮಾಡಿದ ಅಧ್ಯಾತ್ಮ ಸಾಧನೆ ಎಂದೂ ನಾಶ ಅಪ್ಪಲೆ ಇಲ್ಲೆ. ಈ ಜನ್ಮಲ್ಲಿ ಅಧ್ಯಾತ್ಮದ ಒಂದು ಮೆಟ್ಳ ಹತ್ತಿರೆ ಮುಂದಿನ ಜನ್ಮಲ್ಲಿ ನಾವು ಹುಟ್ಟುವಾಗಳೇ ಎರಡ್ನೇ ಮೆಟ್ಟಿಲಲ್ಲಿರ್ತು. ಹಿಂದಾಣ ಜನ್ಮಲ್ಲಿ ಎಲ್ಲಿ ನಿಂದಿತ್ತಿದ್ದೋ ಅಲ್ಲಿಂದ ಮುಂದುವರುಸುವ ಪರಿಸರಲ್ಲಿ ಮರುಜನನ ಆವ್ತು. ಸಾಮಾಜಿಕವಾಗಿ ಅಸಾಧಾರಣ ಪ್ರತಿಭೆಯಿಪ್ಪ ಮಕ್ಕೊ ಜನುಸುವದರ ಮತ್ತು ಅತ್ಯಂತ ಕಡಿಮೆ ಸಮಯಲ್ಲಿ ಮಹಾನ್ ಸಾಧನೆ ಮಾಡುವದರ ನಾವು ಕಾಣುತ್ತು. ಇದು ಅವರ ಹಿಂದಾಣ ಜನ್ಮಂದ ಪಡದು ಬಂದ ಜ್ಞಾನ. ಹಿಂದಾಣ ಜನ್ಮದ ಅಧ್ಯಾತ್ಮದ ಸಾಧನೆಯ ಮುಂದುವರಿದ ಭಾಗವೇ ಈ ಜನ್ಮ. ನಾವು ಆ ಜನ್ಮಲ್ಲಿ ಎಲ್ಲಿ ನಿಲ್ಲಿಸಿದ್ದೊ ಅಲ್ಲಿಂದಲೆ ಈ ಜನ್ಮದ ಸಾಧನೆ ಪ್ರಾರಂಭವಾಗಿ ಮುಂದುವರಿತ್ತು. ಒಂದುವೇಳೆ ನವಗೆ ಅಧ್ಯಾತ್ಮ ಸಾಧನೆ ಮಾಡೇಕು ಹೇಳ್ವ ಅಂತರಂಗ ತುಡಿತವಿದ್ದು, ಅದರ, ಈ ಜನ್ಮಲ್ಲಿ ಈ ವಾತಾವರಣಲ್ಲಿ ಸಾಧುಸಲೆ ಎಡಿಗಾಗದ್ರೆ, ಮುಂದಾಣ ಜನ್ಮಲ್ಲಿ ಸಾಧನೆಗೆ ಬೇಕಾದ ವಾತಾವರಣಲ್ಲಿ ನಮ್ಮ ಜನ್ಮ ಆವ್ತು. ಅದಕ್ಕೆ ನಮ್ಮ ಅಂತರಂಗಲ್ಲಿ ಬಲವಾದ ಶ್ರದ್ಧಾ-ಭಕ್ತಿ ಅಭಿಲಾಷೆ ಇರೆಕ್ಕು. ಈ ಕಾರಣಂದ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥ ಆವ್ತಿಲ್ಲೆ.  ಇಂದು ನಾವು ನಮ್ಮ ಜೀವನದ ಯಾವ ಘಟ್ಟಲ್ಲಿದ್ದರೂ ಸರಿ, ಆಧ್ಯಾತ್ಮ ಸಾಧನಗೆ ಇದು ಸಕಾಲವೇ. ಇಂದೇ ಸಾಧನೆಯ ಪ್ರಾರಂಭುಸಲೆ ಅಕ್ಕು. ಅದು ನಮ್ಮ ಮೋಕ್ಷ ಮಾರ್ಗದತ್ತೆ ಕೊಂಡೋವ್ತು. ಅಧ್ಯಾತ್ಮ ಪ್ರದರ್ಶನದ ವಸ್ತುವಲ್ಲ. ಅದು ಅಂತರಂಗದ ಸಾಧನೆ.

ಸಾಧಕರಲ್ಲಿ ಮೂರು ವಿಧ – ಉತ್ತಮ ಸಾಧಕ°, ಮಧ್ಯಮ ಸಾಧಕ°, ಅಧಮ ಸಾಧಕ°. ಉತ್ತಮ ಸಾಧಕ°, ದೇವರು ಒಬ್ಬನೇ ಹೇದು ನಂಬಿಗೊಂಡಿಪ್ಪವ°. ಇಂತವರ ಭಾಗವತರು ಹೇದು ಹೇಳುವದು. ಅವಂಗೆ ಭಗವಂತನಲ್ಲಿ ಏಕನಿಷ್ಠೆ. ಭಗವಂತನ ಯಾವ ಶಬ್ದಂದ ಹೇದರೂ ಅದು ಆ ಆದಿಶಕ್ತಿಯಾದ ಪರಶಕ್ತಿಯ ಹೇಳುತ್ತದು ಹೇಳ್ವ ಸತ್ಯವ ಅರ್ತುಗೊಂಡವು. ಇದು ನಿಜವಾದ ಸಾಧಕ° ಮತ್ತು ಸಾಧನೆಯ ನಿಜವಾದ ದಾರಿ. ಇನ್ನು ಮಧ್ಯಮ ಸಾಧಕರು. – ಇವ್ವು ಪ್ರತಿಯೊಂದು ದೇವತೆಗಳನ್ನೂ ವಿಧವಿಧವಾಗಿ ಪೂಜಿಸಿ ಅಕೇರಿಗೆ “ಶ್ರೀ ಕೃಷ್ಣಾರ್ಪಣಮಸ್ತು” ಹೇದು ಭಗವಂತಂಗೆ ಅರ್ಪುಸುವದು. ಇನ್ನು ಅಧಮ ಸಾಧಕರು. – ಇವ್ವು ದೇವರು ನೂರಾರು ಹೇಳಿ ನಂಬಿ ಪೂಜಿಸುವವ್ವು. ಇವಕ್ಕೆ ನಿಜವಾದ ಅಧ್ಯಾತ್ಮದ ಕಲ್ಪನೆ ಇಲ್ಲೆ. ಹಾಂಗಾಗಿ ಇದು ನಿಜವಾದ ಅಧ್ಯಾತ್ಮ ಸಾಧನೆ ಆಗ. ನಾವು ಏಕನಿಷ್ಠೆಂದ ಮಾಡುವ ಸಾಧನೆ ಎಂದೂ ವ್ಯರ್ಥ ಆವ್ತಿಲ್ಲೆ. ಇಲ್ಲಿ ತೋರ್ಪಡಿಕೆ ಅಗತ್ಯ ಇಲ್ಲೆ. ಆದರೆ ಪ್ರಾಮಾಣಿಕ ನಿಷ್ಠೆ ಅಗತ್ಯ. ಗಣಪತಿಯ ಪೂಜಿಸು, ವಾಯುವ ಅರ್ಚಿಸು, ಸೂರ್ಯನ ನೆನೆ, ಅಲ್ಲಾ ಯೇಸು, ಶಿವ, ವಿಷ್ಣು ಏನೇ ಹೇದು ಪೂಜಿಸಿದರೂ ಎಲ್ಲಾ ಶಬ್ಧಂಗೊ ಆದಿಶಕ್ತಿಯಾದ ಪರಶಕ್ತಿ ಎಂಬ ಸತ್ಯವ ತಿಳುದು, ಏಕನಿಷ್ಠೆ ಮಡಿಕ್ಕೊಂಡು, ಪರಿಶುದ್ಧ ಪ್ರಾಮಾಣಿಕ ಚಿಂತನೆ ಮಾಡಿರೆ ಅದು ನಿಜವಾದ ಅಧ್ಯಾತ್ಮ ಸಾಧನೆ ಆವ್ತು ಮತ್ತು ವ್ಯರ್ಥವಾಗದೆ ನಮ್ಮೊಂದಿಂಗೆ ಬತ್ತು. ಇಂತಹ ಸಾಧನೆಲಿ ದ್ವೇಷ, ಸ್ವಾರ್ಥ,ಅಹಂಕಾರ, ದುಃಖ ಯಾವುದೂ ಇಲ್ಲೆ. ಎಲ್ಲವೂ ಭಗವಂತನ ಪ್ರಸಾದ ಹೇಳ್ವ ಏಕಭಾವನೆ ನಮ್ಮ ಮುಂದಕ್ಕೆ, ಎತ್ತರಕ್ಕೆ ಕೊಂಡೊಯ್ಯುತ್ತು.

ಮುಂದೆ ಎಂತಾತು..   ಬಪ್ಪ ವಾರ ನೋಡುವೋ°

…… ಮುಂದುವರಿತ್ತು

BHAGAVADGEETHA – CHAPTER 02 – SHLOKAS 31 – 40 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

13 thoughts on “ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 31 – 40

  1. ಚೆನ್ನೈ ಭಾವ,
    ಓದಿದ ಮತ್ತೆ ಸರಿಯಾಗಿ ಓದೆಕ್ಕು ಹೇಳಿ ತೀರ್ಮಾನ ಮಾಡಿ ರಜಾ ಹಿ೦ದೆ ಒಳುದತ್ತಿದಾ.
    ಯೋಗ ಸಾಧನೆಯ ಈ ಕಲ್ಪನೆ ಭಾರೀ ಅರ್ಥಪೂರ್ಣ.ಅ೦ತರ೦ಗ – ಬಹಿರ೦ಗ ದ ಏಕತೆಯ ವಿಮರ್ಶೆ ಲಾಯ್ಕ ಆಯಿದು.
    ಆರು ಈ ಕಪಿಲ ? ಸಿದ್ಧಾ೦ತ೦ಗೊ ಎ೦ತದು?

    1. ಶ್ರೀಮದ್ಭಾಗವತಲಿ ಬಪ್ಪ ಕತೆ ಅದು. ಪ್ರಜಾಪತಿ ಬ್ರಹ್ಮ ಕರ್ದಮ ಮುನಿ ಮತ್ತು ಅವನ ಹೆಂಡತಿ ದೇವಹೂತಿಯ (ಸ್ವಾಯಂಭುವ ಮನುವಿನ ಮಗಳು)ಮಗ, ಮಹಾವಿಷ್ಣು ಅಂಶ ಸಂಭೂತ ಆದವ°,ಈ ಇಲ್ಲಿ ಉಲ್ಲೇಖಿಸಿಪ್ಪ ಕಪಿಲ ವಾಸುದೇವ. ಭಗವಂತನ ಸಾಂಖ್ಯಾವಾದವ ತನ್ನ ಅಬ್ಬೆ ದೇವಹೂತಿಗೆ ವಿವರಿಸಿದ ಹೇಳಿ ಕತೆ.

      http://vaniquotes.org/wiki/Kardama_Muni_is_one_of_the_Prajapatis,_or_creators_of_the_living_entities,_and_he_is_also_a_son_of_Brahma

  2. ಭಾವಾ,
    ಎನಗೆ ಹೀಂಗೂ ಅನಿಸುತ್ತು ಒಂದೊಂದರಿ,
    ನರ ನಾರಾಯಣರು ಹೇಳುವ ಹೆಸರಿನ ದಕ್ಷ ಪ್ರಜಾಪತಿಯ ಪುಳ್ಳಿಯಕ್ಕಳೇ, ಆ ಜನ್ಮಲ್ಲಿ ಮಾಡೆಕಾದ ಕೆಲಸ ಮಾಡ್ಲೆ ಎಡಿಯದ್ದೇ ಅಪ್ಪಗ (ಸಹಸ್ರಕವಚ ಸಂಹಾರ), ಆ ಜೋಲಿ ಮುಗಿಶಲೆ, ಅರ್ಜುನ ಕೃಷ್ಣರಾಗಿ ಮತ್ತೆ ಹುಟ್ಟಿ ಬಂದವು ಹೇಳಿ ಹೇಳ್ತವು. ಪುನಃ ಹುಟ್ಟಿಬಂದ ಕರ್ಣನ ಆ ಮೂಲಕ ಅವು ಇಬಾರೂ ಸೇರಿ ಕೊಲ್ಲುದು ಕಥೆ ಇದಾ?

    ಅಂಬಗ,
    ಈಗ ನಾವು ಭಗವದ್ಗೀತೆಲಿ ಕೃಷ್ಣ ಹೇಳಿದ ವಿಚಾರವ ಅದ್ವೈತದ ಕಣ್ಣಿಲ್ಲಿ ನೋಡ್ತು ಹೇಳಿ ಆದರೆ,
    ನಮ್ಮ ಗುರುಗೊ ಶ್ರೀ ಶಂಕರಾಚರ್ಯರಿಂಗೆ ಮೊನ್ನೆ ಆದಹಾಂಗೆ, ಓ ಮೊನ್ನೆ ಕೃಷ್ಣಂಗೂ ಎಂತಕೆ ಆಗಿಪ್ಪಲಾಗ?
    ಬಾಕಿ ಒಳುದ ಕೆಲಸ ಮುಗಿಶಲೆ ಬಂದ ನರ-ನಾರಾಯಣರಲ್ಲಿ ನಾರಾಯಣಂಗೆ ಆತ್ಮಜ ಜ್ನಾನ ಆವುತ್ತು. 🙂
    ಅವನೇ ಬ್ರಹ್ಮ-ವಿಷ್ಣು-ಶಿವ ಹೇಳಿ ಗೊಂತಾವುತ್ತು. ಅದನ್ನೇ ಅವ° “ಅಹಂ ತ್ವಾ ಸರ್ವಭೂತಾನಿ” ಹೇಳ್ತ°…
    ಹಾಂಗೇ,
    ಕಪಿಲ ಮುನಿಗೊಕ್ಕೂ ಅವರ “ತುರೀಯ ಅವಸ್ಥೆಯ” ಅಥವಾ ನಿಂಗೊ ಹೇಳಿದ “ಕೃಷ್ಣ ಪ್ರಜ್ನೆ”ಯ ಅನುಭವ ಆವುತ್ತು.
    ಹಾಂಗಾಗಿ ನಾವು ಅವರ ಅವತಾರ ಹೇಳ್ತು, ಶ್ರೀ ಶಂಕರಾಚಾರ್ಯರು ಶಿವ ದೇವರ ಅವತಾರ ಹೇಳುವ ಹಾಂಗೆ. 🙂

    ಇಬ್ಬರೂ ಹೇಳಿದ್ದು ಒಂದನ್ನೇ.
    “ಅಹಂ ಬ್ರಹ್ಮಾಸ್ಮಿ, ತತ್ ತ್ವಂ ಅಸಿ” ಹೇಳಿದ ಶ್ರೀ ಶಂಕರಾಚಾರ್ಯರು ಗುರುಗ ಆಗಿ ಕಾಂಬದಕ್ಕೂ,
    “ಅಹಂ ತ್ವಾ ಸರ್ವ ಭೂತಾನಿ, ಸ್ಥಾವರಾಣಿ ಚರಾಣಿ ಚ” ಹೇಳಿದ ಶ್ರೀ ಕೃಷ್ಣ ದೇವರಾಗಿ ಕಾಂಬದಕ್ಕೂ,
    ನಮ್ಮ interpretationನ್ನೇ ಕಾರಣ 🙂

    ಕೃಷ್ಣ – ವಿಷ್ಣುವಿನ ಅವತಾರ
    ಶಂಕರರು – ಶಿವನ ಅವತಾರ
    ಕಪಿಲರು- ವಿಷ್ಣುವಿನ ಅವತಾರ
    ದತ್ತಾತ್ರೇಯರೂ ಅವತಾರವೇ…!!
    ಅರ್ಥ ಇಷ್ಟೇ ಕಾಂಬದು ಎನಗೆ,
    ದೇಹಂದ ದೇಹಕ್ಕೆ ಬಂದು ಹೋಗಿ ಮಾಡಿಯೊಂಡಿಪ್ಪ ಏವದೋ ಕಾಲಲ್ಲಿ – ಒಂದರಿ – “ಆತ್ಮ ಪ್ರಜ್ನೆಯ”, “ಕೄಷ್ಣ ಪ್ರಜ್ನೆ”ಯ ಅರಿವು ಆವುತ್ತು..
    ಹೀಂಗೇ ಸುಮಾರು ಜೆನಂಗೊ ಸಿಕ್ಕುಗು ನವಗೆ 🙂

    ಎಂತಕೆ ಹೇಳಿರೆ, ಇಲ್ಲದ್ದರೆ, ದಶಾವತಾರದ ಲೆಕ್ಕಲ್ಲಿ ಕಪಿಲರೂ ಬರೆಕಿತ್ತು ಅಲ್ಲದ್ದರೆ 😉
    ದಶಾವತಾರ ಕಲ್ಪನೆ – ಜೀವ ವಿಕಾಸ ಸಿದ್ಧಾಂತವ ಕಲಿಶುಲೆ ಒಂದು formula ಅಷ್ಟೇ.. !

    ಭಗವದ್ಗೀತೆ, ಶುದ್ಧ್ಹ ಅದ್ವೈತವನ್ನೆ ಹೇಳ್ತು. 🙂
    ದ್ವೈತಲ್ಲಿ ಮಾತ್ರ ನೋಡಿರೆ, ಅದರ ಪೂರ್ತಿ ರುಚಿ ಸಿಕ್ಕುಲೆ ಕಷ್ಟ ಅಲ್ಲದಾ? 🙂

    ***

    ಉಮ್ಮ, ಇದು ಎನಗೆ ಕಂಡದು, ತಪ್ಪಿದ್ದರೆ Sorry 🙂
    ನಿಂಗಳೂ, ಈಐ ಮಾವನೂ ರಜ್ಜ ವಿಶಯ ಸೇರುಸಿ ಸರಿ ಮಾಡಿರೆ ಖುಶಿಯೇ…

  3. ಕಪಿಲ ವಾಸುದೇವ ಮತ್ತು ಕೃಷ್ಣ ಇಬ್ಬರು ಶ್ರೀ ಮಹಾ ವಿಷ್ಣು ವಿನ ಅವತಾರ — ಇದು ಸರಿ ಹೇಳಿ ಎನಗನುಸುತ್ತು | ಆದರೂ ವಿಷ್ಣು ವೆ ಶ್ರೀ ಕೃಷ್ಣ ನ ಅವತಾರ ಹೇಳುವ “ಕೃಷ್ಣ ಪಂಥೀಯರು” ಇದ್ದವು | ಅವರವರ ನಂಬಿಕೆ ಅವಕ್ಕವಕ್ಕೆ || ಹಾಂಗೆ ನಂಬಿಕೆ ದೈವ ಚಿಂತನೆ ಯ ಭಾಗ ಆದರೆ ಒಬ್ಬನ ನಂಬಿಕೆ ಯ ವಿಷಯ ಲ್ಲಿ ಇನ್ನೊಬ್ಬ “ಬುದ್ಧಿ ಬೇಧ” ಕ್ಕೆ ಪ್ರಯತ್ನಿಸದೆ ಇಪ್ಪದು ಪ್ರಭುದ್ಧತೆ |

  4. ಪ್ರತಿಯೊಬ್ಬಂಗೂ ಅವ° ಮಾಡಲೇ ಬೇಕಾದ ಕೆಲಸಂಗೊ ಇರ್ತು. ಆ ಕರ್ತವ್ಯವ ಅವನೇ ಮಾಡೆಕಿರ್ತು 🙂 ಹಾಂಗಿಪ್ಪ ಕರ್ತವ್ಯವ ಮಾಡದ್ದೇ ಹೋತು ಹೇಳಿ ಆದರೆ, ಅದೇ ತಪ್ಪಾಗಿ – ಪಾಪವಾಗಿ ಅಂಟಿಗೊಳ್ತು.
    ಆ ಕೆಲಸ ಎಂತ ಹೇಳಿ ತಿಳುಕ್ಕೊಂಬದೇ ವಿಷಯ ಇಪ್ಪದು.
    ಕಳೆದ ವಾರದ್ದರಲ್ಲಿ ಜಯಕ್ಕ ಹೇಳಿದಾಂಗೆ ಆ ‘ಸ್ಥಿತಪ್ರಜ್ನತೆ’ ಇದ್ದರೆ ಮಾತ್ರ ಕೆಲಸ ನೆಡಗಷ್ಟೇ ಅಲ್ಲದೋ?

  5. {ಈ ಕಪಿಲವಾಸುದೇವ ಶ್ರೀಕೃಷ್ಣನ ಅವತಾರ.} – ಮೊದಲು ಹುಟ್ಟಿದ್ದು ಕಪಿಲ° ಮತ್ತೆ ಕೃಷ್ಣ° ಹೇಳಿಯಪ್ಪಗ ಕಪಿಲವಾಸುದೇವ° ಶ್ರೀಕೃಷ್ಣನ ಅವತಾರ ಹೇಂಗಪ್ಪದು ಒಂದೋ ಕೃಷ್ಣ ಕಪಿಲನ ಅವತಾರ, ಅಥವಾ ಅವ್ವಿಬ್ಬರೂ ವಿಷ್ಣುವಿನ ಅವತಾರ ಹೇಳಿ ಆತಲ್ಲದೋ?

    ಅಲ್ಲ…! ಯಥಾರ್ಥ ನೋಡ್ತರೆ ಆ ಮೂರೂ ಒಂದೇ 🙂
    ಸುಮ್ಮನೇ ಹೇಳಿದ್ದು.
    😉

    1. ಅಲ್ಲಿ ಶ್ರೀಕೃಷ್ಣ° ಹೇಳಿರೆ ಬರೇ ಕೃಷ್ಣ° (ಎಂಟನೇ ಅವತಾರದ ಕೃಷ್ಣ) ಹೇಳ್ವ ಅರ್ಥಲ್ಲಿ ಅಲ್ಲ. ಅಲ್ಲಿ ಅವ° – ಭಗವಂತ°, ಅಂದರೆ, ದೇವದೇವೋತ್ತಮ ಪರಮಪುರುಷ°., ಹೇಳಿರೆ ಆರು ?.. ಹಾ° ಅವನೇ ನಿಂಗೊ ಹೇಳಿದ ಸಾಕ್ಷಾತ್ ಮಹಾವಿಷ್ಣು. ಅಂಬಗ ಇದೂ ಒಂದು ಬೇರೆ ಅವತಾರವೋ? ಕೇಳಿರೆ.. ಅಲ್ಲ. ಮಹಾವಿಷ್ಣುವಿನ ಅಂಶ ಅಷ್ಟೆ. ಹಾಂಗಾದ್ದರಿಂದ ಅಲ್ಲಿ ಕಪಿಲವಾಸುದೇವ° ಭಗವಂತನ ಅವತಾರ (ಶ್ರೀಕೃಷ್ಣನ ಅವತಾರ) ಹೇಳ್ವದಕ್ಕಿಂತ ಅವನ ಅಂಶ ಹೇಳಿ ಅರ್ಥೈಸಿಗೊಂಬೊದೇ ಸೂಕ್ತ ಹೇಳಿ ಎನಕಾಣುತ್ತು.

  6. {ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ।
    ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ॥೩೮॥}
    ಸುಖ-ದುಃಖ,ಸೋಲು-ಗೆಲುವು, ಲಾಭ-ನಷ್ಟ ಎಲ್ಲವನ್ನೂ ಸಮಾನವಾಗಿ ಸ್ವೀಕಾರ ಮಾಡೆಕ್ಕು ಹೇಳ್ತ ಸಂದೇಶದೊಟ್ಟಿಂಗೆ ಬಂದ ಈ ಸರ್ತಿಯಾಣ ವಿವರಣೆಯೂ ಒಳ್ಳೆದಿದ್ದು.

  7. ಏವತ್ರಾಣ ಹಾಂಗೆ ವಿವರಣೆ ಚೆಂದಕೆ ಬಯಿಂದು. ಧನ್ಯವಾದಂಗೊ.

  8. ಎಂದಿನಂತೆ ಈ ಭಾಗವೂ ಅತ್ಯುತ್ತಮವಾಗಿ ಮೂಡಿಬೈಂದು… ನಮೋ ನಮ:
    ದೇವಭೂತಿಯ(ಕಪಿಲನ) ಕಥೆ ಮಂಗಳೂರು ರಾಮಕಥೆಲಿ ಎರಡನೇ ದಿನ ಹೇಳಿದ್ದವು… ತುಂಬಾ ಲಾಯಕ ಇದ್ದು…

  9. ಕೃಷ್ಣ ಅರ್ಜುನಂಗೆ ಬುದ್ಧಿ ಹೇಳುದು ಪರಿಣಾಮಕಾರಿಯಾಗಿ ಮೂಡಿಬೈಂದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×