Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 19 – 25

ಬರದೋರು :   ಚೆನ್ನೈ ಬಾವ°    on   14/02/2013    1 ಒಪ್ಪಂಗೊ

ಚೆನ್ನೈ ಬಾವ°

ಈ ಹಿಂದಾಣ ಭಾಗಲ್ಲಿ ದೇಹ (ಕ್ಷೇತ್ರ), ಜ್ಞಾನ, ಜ್ಞಾನಕ್ಕೆ ಸಿಕ್ಕುತ್ತರ (ಜ್ಞೇಯವ) ಸಂಗ್ರಹವಾಗಿ ಹೇಳಿದ್ದಾತು. ಇದರ ಸಂಪೂರ್ಣವಾಗಿ ತಿಳುದು / ಅರ್ಥಮಾಡಿಗೊಂಡು ಎನ್ನ ಭಕ್ತ° ಎನ್ನ ಸ್ವಭಾವವ ಪಡೆತ್ತ° ಹೇಳಿ ಭಗವಂತ° ಹೇಳಿಕ್ಕಿ ಒಂದು ಹಂತವ ಮುಗಿಶಿದ°. ಮುಂದೆ ‘ಪ್ರಕೃತಿ – ಪುರುಷ’ ಬಗ್ಗೆ ಅರ್ಜುನಂಗೆ ವಿವರುಸಲೆ ಸುರುಮಾಡ್ತ° ಭಗವಂತ° –

ಶ್ರೀಮದ್ಭಗವದ್ಗೀತಾ – ತ್ರಯೋದಶೋsಧ್ಯಾಯಃ – ಕ್ಷೇತ್ರಕ್ಷೇತ್ರಜ್ಞವಿಭಾಗಯೋಗಃ – ಶ್ಲೋಕಾಃ – 19 – 25

 

ಶ್ಲೋಕ

ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ ।
ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿಸಂಭವಾನ್ ॥೧೯॥

ಪದವಿಭಾಗ

ಪ್ರಕೃತಿಮ್ ಪುರುಷಮ್ ಚ ಏವ ವಿದ್ಧಿ ಅನಾದೀ ಉಭೌ ಅಪಿ । ವಿಕಾರಾನ್ ಚ ಗುಣಾನ್ ಚ ಏವ ವಿದ್ಧಿ ಪ್ರಕೃತಿ-ಸಂಭವಾನ್ ॥

ಅನ್ವಯ

(ತ್ವಂ) ಪ್ರಕೃತಿಂ ಪುರುಷಂ ಚ ಉಭೌ ಅಪಿ ಅನಾದೀ ಏವ ವಿದ್ಧಿ । ವಿಕಾರಾನ್ ಚ ಗುಣಾನ್ ಚ ಪ್ರಕೃತಿ-ಸಂಭವಾನ್ ಏವ ವಿದ್ಧಿ ।

ಪ್ರತಿಪದಾರ್ಥ

(ತ್ವಮ್) – ನೀನು, ಪ್ರಕೃತಿಮ್ – ಭೌತಿಕ ಪ್ರಕೃತಿಯ, ಪುರುಷಮ್ – ಜೀವಿಯ, ಚ – ಕೂಡ, ಉಭೌ – ಎರಡನ್ನೂ, ಅಪಿ – ಕೂಡ, ಅನಾದೀ – ಆದಿ ಇಲ್ಲದ್ದು, ಏವ – ಖಂಡಿತವಾಗಿಯೂ, ವಿದ್ಧಿ – ತಿಳುಕ್ಕೊ, ವಿಕಾರಾನ್ – ಪರಿವರ್ತನೆಂಗಳ, ಚ – ಕೂಡ, ಗುಣಾನ್ –  ಪ್ರಕೃತಿ ಗುಣಂಗಳ, ಚ – ಕೂಡಾ, ಪ್ರಕೃತಿ-ಸಂಭವಾನ್ – ಭೌತಿಕಪ್ರಕೃತಿಯ ಉತ್ಪನ್ನಂಗೊ, ಏವ – ಖಂಡಿತವಾಗಿಯೂ, ವಿದ್ಧಿ – ತಿಳುಕ್ಕೊ.

ಅನ್ವಯಾರ್ಥ

ಪ್ರಕೃತಿ ಮತ್ತೆ ಜೀವಿ ಇವು ಎರಡರ ಅನಾದಿ ಹೇದು ತಿಳುಕ್ಕೊ. ಅವುಗಳ ಪರಿವರ್ತನೆ/ಮಾರ್ಪಾಡುಳ, ಗುಣಂಗಳ ಪ್ರಕೃತಿಂದ ಉಂಟಾದ್ದು ಹೇದು ತಿಳುಕ್ಕೊ.

ತಾತ್ಪರ್ಯ / ವಿವರಣೆ

ಇಲ್ಲಿ ಪ್ರಕೃತಿ ಹೇಳಿರೆ ಜಡಪ್ರಕೃತಿ ಮತ್ತೆ ಚೇತನಪ್ರಕೃತಿ, ಪುರುಷ ಹೇಳಿರೆ ಜೀವ ಮತ್ತೆ ಈಶ್ವರ. ಇವೆರಡೂ ಹುಟ್ಟಿಲ್ಲದ್ದವು ಹೇಳಿ ತಿಳಿಯೆಕು. ಅದು ಅನಾದಿ. ಮತ್ತೆ ಸ್ಥೂಲರೂಪಂಗೊ ಮತ್ತೆ ಗುಣತ್ರಯಂಗೊ ಪ್ರಕೃತಿಯ ಕಾರ್ಯಂಗೊ ಹೇಳಿ ತಿಳಿಯೆಕು.

ಬನ್ನಂಜೆ ವಿವರುಸುತ್ತವು – ಭಗವಂತ° ಏವುದೇ ಜೀವರನ್ನಾಗಲೀ, ಪ್ರಕೃತಿಯನ್ನಾಗಲಿ ಸೃಷ್ಟಿ ಮಾಡಿದ್ದನಿಲ್ಲೆ. ಜಡಪ್ರಕೃತಿ , ಚೇತನಪ್ರಕೃತಿ (ಪರಮಪುರುಷ°- ಭಗವಂತ°) ಮತ್ತೆ ಅವಾಂತರಪುರುಷರು (ಜೀವರು) ಎಲ್ಲರೂ ಅನಾದಿನಿತ್ಯರು. ಪ್ರಪಂಚ ಹೇಳಿರೆ ಪ್ರಕೃತಿಯ ವಿಕಾರ. ಒಂದು ಮಗು ಹುಟ್ಟಿತ್ತು ಹೇಳಿರೆ ಅಲ್ಲಿ ಅಪ್ಪದು ಜೀವದ ಸೃಷ್ಟಿ ಅಲ್ಲ. ಜೀವಕ್ಕೆ ಒಂದು ಆಕಾರದ ಸೃಷ್ಟಿ. ಜೀವ ಅಪ್ಪನ ದೇಹದ ಮುಖೇನ ಅಬ್ಬೆಯ ಗರ್ಭವ ಸೇರಿ ಅಲ್ಲಿ ಒಂದು ಆಕಾರವ ಪಡೆತ್ತು. ಈ ರೀತಿ ಭಗವಂತ ಜೀವಕ್ಕೆ ಪ್ರಕೃತಿಯ ಮೂಲಕ ಒಂದು ಆಕಾರ ಸೃಷ್ಟಿ ಮಾಡುತ್ತ°. ಸೃಷ್ಟಿಯ ಮೂಲಲ್ಲಿಯೂ ಲಕ್ಷ್ಮೀನಾರಾಯಣರು ಅಪ್ಪ-ಅಬ್ಬೆಯಾಗಿ ನಿಂದು ಪ್ರಪಂಚದ ಸೃಷ್ಟಿಂಗೆ ಚಾಲನೆ ಕೊಟ್ಟವು. ಸೃಷ್ಟಿಯ ಆದಿಲಿ ಜೀವರು ಲಕ್ಷ್ಮೀದೇವಿಯ ಉದರಲ್ಲಿತ್ತು. ಲಕ್ಷ್ಮೀದೇವಿ ಪರಮಪುರುಷನ (ಭಗವಂತನ) ಉದರಲ್ಲಿ ಇತ್ತು. ಸೃಷ್ಟಿಯ ಮೂಲಲ್ಲಿ ಲಕ್ಷ್ಮಿಯ ನೆತ್ತಿಂದ ಹೆರಹೊಮ್ಮಿ, ಭಗವಂತನ ನಾಭಿಯ ಮುಖೇನ ಚತುರ್ಮುಖಬ್ರಹ್ಮನ ಜನನ ಉಂಟಾತು. ಈ ಕಾರಣಂದ ಚತುರ್ಮುಖ ಬ್ರಹ್ಮನ ಲಕ್ಷ್ಮಿಯ ಶಿರಸ್ಸಿಂದ ಮತ್ತೆ ಭಗವಂತನ ನಾಭಿಂದ ಜನಿಸಿದವ° ಹೇಳಿ ಹೇಳುವದಾವ್ತು. ಒಟ್ಟಿಲ್ಲಿ, “ಜಗತ್ತಿಂಗೆ ಕಾರಣವಾಗಿಪ್ಪ ಜಡಪ್ರಕೃತಿ ನಿತ್ಯ, ಆ ಜಡಪ್ರಕೃತಿಂದ ಆಕಾರಗೊಂಡು ಸೃಷ್ಟನಾದ ಜೀವನೂ ನಿತ್ಯ; ಈ ಜಡಪ್ರಕೃತಿ ಮತ್ತೆ ಜೀವಂಗೆ ಕಾರಣಪುರುಷನಾದ ಲಕ್ಷ್ಮೀನಾರಯಣರೂ ನಿತ್ಯರು. ಪ್ರಪಂಚ ಹೇಳಿರೆ ಪ್ರಕೃತಿಯ ವಿಕಾರ”. ಈ ವಿಚಾರವ ಭಗವಂತ° ಇಲ್ಲಿ ಹೇಳಿದ್ದದು.

ಪ್ರಪ್ರಥಮವಾಗಿ ಸೃಷ್ಟಿ ವಿಸ್ತಾರಕ್ಕೆ ಬೇಕಾದ ಶಕ್ತಿಯ ಸೃಷ್ಟಿ ಆತು. ಅದೇ ಪ್ರಕೃತಿಯ ಅತ್ಯಂತ ಸೂಕ್ಷ್ಮ ಗುಣತ್ರಯಂಗೊ- ಸತ್ವ, ರಾಜ, ತಮ. ಈ ಶಕ್ತಿ ಕಂಪನಂದ ಇಡೀ ಪ್ರಪಂಚ ನಿಷ್ಪನ್ನವಾತು. ಆಕಾರ ಕೊಟ್ಟದು ಅಬ್ಬೆ ಲಕ್ಷ್ಮಿ. ಆಕಾರ ಪಡದ್ದದು ಜೀವಿಗೊ. ಆಕಾರ ಕೊಡುವವ ನಾರಾಯಣ. ಈ ಕಾರಣಂದ ಚತುರ್ಮುಖ ಬ್ರಹ್ಮಂದ ಹಿಡುದು ಸಮಸ್ತ ದೇವಾದಿ ಜೀವರೂ ಲಕ್ಷ್ಮೀನಾರಾಯಣರ ಮಕ್ಕೊ ಹೇಳಿ ಆವ್ತವು.

ಇನ್ನು ಇಲ್ಲಿ ಭಗವಂತ° ಪುರುಷ ಮತ್ತೆ ಪ್ರಕೃತಿ ಬಗ್ಗೆ ಹೇಳಿದ್ದ°. ಪುರುಷ ಹೇಳಿರೆ ಜೀವಾತ್ಮ ಮತ್ತೆ ಪರಮಾತ್ಮ. ಪ್ರಕೃತಿ ಹೇಳಿರೆ ಜಡಪ್ರಕೃತಿ ಮತ್ತೆ ಚೇತನಪ್ರಕೃತಿ. ಪ್ರಕೃತಿಯೂ ಜೀವಿಯೂ ನಿತ್ಯವಾದ್ದು. ಹೇಳಿರೆ, ಅವು ಸೃಷ್ಟಿಗೆ ಮದಲೇ ಇತ್ತಿದ್ದದು. ಪ್ರಕೃತಿಯ ಅಭಿವ್ಯಕ್ತಿ ಭಗವಂತನ ಶಕ್ತಿಂದ ಆದ್ದು, ಹಾಂಗೇ, ಜೀವಿಗಳೂ ಕೂಡ. ಆದರೆ ಜೀವಿಗೊ ಶ್ರೇಷ್ಠಶಕ್ತಿಗೆ ಸೇರಿದ್ದದು. ಈ ಸೃಷ್ಟಿ ರೂಪ ತಾಳ್ವ ಮದಲೇ ಜೀವಿಗಳೂ,  ಐಹಿಕ ಪ್ರಕೃತಿಯೂ ಅಸ್ತಿತ್ವಲ್ಲಿ ಇತ್ತಿದ್ದು. ಐಹಿಕ ಪ್ರಕೃತಿ ದೇವೋತ್ತಮ ಪರಮ ಪುರುಷನಾದ ನಾರಾಯಣನಲ್ಲಿ ಸೇರಿ ಹೋದ್ದು. ಅಗತ್ಯ ಬಪ್ಪಗ ಅದು ಮಹತ್ ತತ್ವದ ಮೂಲಕ ಪ್ರಕಟ ಆದ್ದು. ಹೀಂಗೆ ಜೀವಿಗೊ ಕೂಡ ಅವನಲ್ಲಿ ಇತ್ತಿದ್ದದು. ಅವು ಬದ್ಧವಾಗಿದ್ದದರಿಂದ ಅವಕ್ಕೆ ಭಗವಂತನ ಸೇವೆಯ ಮಾಡ್ಳೆ ಇಷ್ಟ ಇಲ್ಲೆ / ಅವಕಾಶ ಇಲ್ಲೆ. ಹಾಂಗೆ, ಅವು ಆಧ್ಯಾತ್ಮಿಕ ಗಗನವ ಪ್ರವೇಶಿಸಲೆ ಅವಕಾಶ ಇಲ್ಲೆ. ಆದರೆ ಐಹಿಕ ನಿಸರ್ಗವು ಹೆರ ಬಂದಪ್ಪಗ ಈ ಜೀವಿಗೊಕ್ಕೆ ಮತ್ತೆ ಐಹಿಕ ಜಗತ್ತಿಲ್ಲಿ ಕ್ರಿಯೆಲಿ ತೊಡಗಲೆ ಮತ್ತೆ ದಿವ್ಯ ಜಗತ್ತಿನ ಪ್ರವೇಶಿಸಲೆ ಸಿದ್ಧಮಾಡಿಗೊಂಬ ಇನ್ನೊಂದು ಅವಕಾಶ ಸೃಷ್ಟಿ ಆತು. ಇದು ಐಹಿಕ ಸೃಷ್ಟಿಯ ರಹಸ್ಯ. ಐಹಿಕ ಪ್ರಕೃತಿಲಿ ತ್ರಿಗುಣಂಗಳಿಂದ (ಸತ್ವ, ತಮ, ರಜ) ಅಪ್ಪ ಎಲ್ಲ ಪರಿವರ್ತನೆಗೊ ಐಹಿಕ ಪ್ರಕೃತಿಂದಲಾಗಿ ಉಂಟಪ್ಪದು. ಜೀವಿಗಳ ಸಂಬಂಧಿಸಿ ಎಲ್ಲ ಪರಿವರ್ತನೆಗೊಕ್ಕೂ (ವೈವಿಧ್ಯಕ್ಕೂ) ದೇಹವೇ ಕಾರಣ. ಚೇತನದ ಮಟ್ಟಿಂಗೆ ಎಲ್ಲ ಜೀವಿಗಳೂ ಒಂದೇ. ಇನ್ನು ಸೃಷ್ಟಿ ಪ್ರಕ್ರಿಯೆಲಿ ಈ ನಾಲ್ಕು ಪಾತ್ರಂಗಳ ಮಹತ್ವ ಎಂತರ ? –

ಶ್ಲೋಕ

ಕಾರ್ಯಕಾರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ ।
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ ॥೨೦॥

ಪದವಿಭಾಗ

ಕಾರ್ಯ-ಕಾರಣ-ಕರ್ತೃತ್ವೇ ಹೇತುಃ ಪ್ರಕೃತಿಃ ಉಚ್ಯತೇ । ಪುರುಷಃ ಸುಖ-ದುಃಖಾನಾಮ್ ಭೋಕ್ತೃತ್ವೇ ಹೇತುಃ ಉಚ್ಯತೇ ॥

ಅನ್ವಯ

ಪ್ರಕೃತಿಃ ಕಾರ್ಯ-ಕಾರಣ-ಕರ್ತೃತ್ವೇ ಹೇತುಃ ಉಚ್ಯತೇ । ಪುರುಷಃ ಸುಖ-ದುಃಖಾನಾಂ ಭೋಕ್ತೃತ್ವೇ ಹೇತುಃ ಉಚ್ಯತೇ ।

ಪ್ರತಿಪದಾರ್ಥ

ಪ್ರಕೃತಿಃ – ಭೌತಿಕ ಪ್ರಕೃತಿ, ಕಾರ್ಯ-ಕಾರಣ-ಕರ್ತೃತ್ವೇ – ಪರಿಣಾಮ ಮತ್ತೆ ಕಾರಣಂಗಳ ಸೃಷ್ಟಿಯ ವಿಚಾರಲ್ಲಿ, ಹೇತುಃ – ಸಾಧನವು (ಹೇದು), ಉಚ್ಯತೇ – ಹೇಳಲ್ಪಡುತ್ತು. ಪುರುಷಃ – ಜೀವಿಯು, ಸುಖ-ದುಃಖಾನಾಮ್ – ಸುಖದುಃಖಂಗಳ, ಭೋಕ್ತೃತ್ವೇ – ಅನುಭೋಗಲ್ಲಿ, ಹೇತುಃ – ಸಾಧನವು (ಹೇದು), ಉಚ್ಯತೇ – ಹೇಳಲ್ಪಡುತ್ತು.

ಅನ್ವಯಾರ್ಥ

ಎಲ್ಲ ಐಹಿಕ ಕಾರ್ಯಕಾರಣಂಗಳ ಕಾರಣವು ಪ್ರಕೃತಿ ಹೇದು ಹೇಳಲಾಯ್ದು. ಈ ಪ್ರಪಂಚಲ್ಲಿ ಎಲ್ಲ ಸುಖ-ದುಃಖಂಗೊಕ್ಕೆ ಜೀವಿಯು ಕಾರಣ ಹೇದು ಹೇಳಲಾವ್ತು.

ತಾತ್ಪರ್ಯ / ವಿವರಣೆ

ಜೀವಿಗಳಲ್ಲಿ ದೇಹವು ಮತ್ತೆ ಇಂದ್ರಿಯಂಗೊ ಬೇರೆ ಬೇರೆ ರೀತಿಲಿ ಪ್ರಕಟವಪ್ಪದಕ್ಕೆ ಐಹಿಕ ಪ್ರಕೃತಿಯೇ ಕಾರಣ. ಜೀವಿಗಳಲ್ಲಿ 84,00,000 ಬೇರೆ ಬೇರೆ ವರ್ಗಂಗೊ ಇದ್ದು. ಈ ಭಿನ್ನ ರೀತಿಗೊ ಐಹಿಕ ಪ್ರಕೃತಿಯ ಸೃಷ್ಟಿ. ಇವು ಜೀವಿಯ ಬೇರೆ ಬೇರೆ ಇಂದ್ರಿಯ ಸುಖಂದಲಾಗಿ ಹುಟ್ಟುತ್ತದು. ಜೀವಿ ಈ ದೇಹಲ್ಲಿ ಅಥವಾ ಆ ದೇಹಲ್ಲಿ ಇರೆಕು ಹೇಳಿ ಬಯಸುತ್ತು. ಆ ಜೀವಿಯ ಬೇರೆ ಬೇರೆ ದೇಹಲ್ಲಿ ಮಡಿಗಿಯಪ್ಪಗ ಬೇರೆ ಬೇರೆ ರೀತಿ ಸುಖದುಃಖಂಗೊ ಅನುಭವುಸುತ್ತ°. ಅವನ ಐಹಿಕ ಸುಖದುಃಖಂಗೊಕ್ಕೆ ಕಾರಣ ಅವ° ಇಪ್ಪ ರೀತಿಯಲ್ಲ ಬದಲಾಗಿ ಅವನ ದೇಹ. ಅವನ ಮೂಲಸ್ಥಿತಿಲಿ ಭೋಗದ ವಿಷಯಲ್ಲಿ ಸಂಶಯವೇ ಇಲ್ಲೆ. ಹಾಂಗಾಗಿ ಅದೇ ಅವನ ನಿಜವಾದ ಸಹಜ ಸ್ಥಿತಿ. ಐಹಿಕ ಪ್ರಕೃತಿಯ ಮೇಗೆ ಯಜಮಾಂತಿಗೆ ನಡೆಶೆಕು ಹೇಳ್ವ ಅಪೇಕ್ಷೆಂದಲಾಗಿ ಅವ° ಈ ಐಹಿಕ ಜಗತ್ತಿಲ್ಲಿದ್ದ°. ಆಧ್ಯಾತ್ಮಿಕ ಜಗತ್ತಿಲ್ಲಿ ಇಂತಾದ್ದು ಇಪ್ಪಲೇ ಇಲ್ಲೆ. ಆಧ್ಯಾತ್ಮಿಕ ಜಗತ್ತು ಪರಿಶುದ್ಧವಾದ್ದು. ಆದರೆ ಐಹಿಕ ಜಗತ್ತಿಲ್ಲಿ ಪ್ರತಿಯೊಬ್ಬನೂ ದೇಹಕ್ಕಾಗಿ ಬೇರೆ ಬೇರೆ ಬಗೆಯ ಸುಖವ ಪಡವಲೆ ಶ್ರಮಿಸುತ್ತ°. ಅದಕ್ಕೆ ದೇಹದ ಇಂದ್ರಿಯಂಗೊ ಕಾರಣ. ಬಯಕೆಯ ತೃಪ್ತಿಗೆ ಇಪ್ಪ ಸಾಧನಂಗೊ ಇಂದ್ರಿಯಂಗೊ. ದೇಹ ಮತ್ತೆ ಸಾಧನಂಗೊ ಆದ ಇಂದ್ರಿಯಂಗೊ ಒಟ್ಟಾಗಿ ಈ ಐಹಿಕ ಪ್ರಕೃತಿ ನೀಡುತ್ತದು.  ಜೀವಿಯ ಹಿಂದಾಣ ಬಯಕೆ ಮತ್ತೆ ಕರ್ಮಂಗೊಕ್ಕೆ ಅನುಗುಣವಾಗಿ ಅವಂಗೆ ಹಿತವಾದ ಅಥವಾ ಅಹಿತವಾದ ಸನ್ನಿವೇಶ ಲಭ್ಯ ಆವ್ತು. ಐಹಿಕ ಪ್ರಕೃತಿ ಮನುಷ್ಯನ ಬಯಕೆಯ ಮತ್ತೆ ಕರ್ಮಂಗೊಕ್ಕೆ ಅನುಗುಣವಾಗಿ ಅವನ ವಿವಿಧ ವಾಸಸ್ಥಳಲ್ಲಿ ಮಡುಗುತ್ತು. ಏವುದೇ ವಾಸಸ್ಥಳ ಲಭ್ಯವಾವ್ತದಕ್ಕೆ ಮತ್ತೆ ಅವಂಗೆ ಬಪ್ಪ ಸುಖದುಃಖಂಗೊಕ್ಕೆ ಆ ಜೀವಿಯೇ ಕಾರಣ. ದೇಹವು ಜಡವಸ್ತುವಾದ್ದರಿಂದ ಪ್ರಕೃತಿಯ ನಿಯಮಕ್ಕನುಗುಣವಾಗಿ ಕೆಲಸ ಮಾಡುತ್ತು. ಹಾಂಗಾಗಿ ಜೀವಿಯ ಒಂದು ನಿರ್ದಿಷ್ಟವಾದ ಬಗೆಯ ದೇಹಲ್ಲಿ ಮಡುಗುವದರಿಂದ ಅದು (ಜೀವಿ) ಪ್ರಕೃತಿಯ ನಿಯಂತ್ರಣಕ್ಕೆ ಬತ್ತು. ಪ್ರಕೃತಿಯ ನಿಯಮವ ಬದಲುಸಲೆ ಜೀವಿಗೆ ಶಕ್ತಿ ಇಲ್ಲೆ. ಜೀವಿಯ ಒಂದು ನಾಯಿಯ ದೇಹಲ್ಲಿ ಮಡಿಗಿದ್ದು ಹೇದು ನಾವು ಗ್ರೇಶಿಗೊಂಬೊ°. ನಾಯಿಯ ದೇಹಲ್ಲಿ ಮಡಿಗಿದ ಕೂಡ್ಳೆ ಅದು (ಜೀವಿ) ನಾಯಿಯ ಹಾಂಗೆ ನಡಕ್ಕೊಳ್ತು  ಹೊರತು ಬೇರೆ ರೀತಿಲಿ ನಡಕ್ಕೊಂಬಲೆ ಸಾಧ್ಯ ಇಲ್ಲೆ. ಜೀವಿಯ ಒಂದು ಹಂದಿಯ ದೇಹಲ್ಲಿ ಮಡಿಗಿದ್ದಾದರೆ ಅದು ಹಂದಿಯಾಂಗೇ ವರ್ತುಸೆಕು. ಹಾಂಗೇ ಜೀವಿಯ ಒಬ್ಬ ದೇವತೆಯ ದೇಹಲ್ಲಿ ಮಡಿಗಿರೆ ಅವ° ಆ ದೇಹಕ್ಕನುಗುಣವಾಗಿ ನಡಕ್ಕೊಳ್ಳೆಕು. ಇದು ಪ್ರಕೃತಿಯ ನಿಯಮ. ಆದರೆ ಈ ಎಲ್ಲ ಸನ್ನಿವೇಶಂಗಳಲ್ಲಿಯೂ ಪರಮಾತ್ಮ° ಜೀವಾತ್ಮನೊಟ್ಟಿಂಗೆ ಇರುತ್ತ°.

ಬನ್ನಂಜೆ ಹೇಳ್ತವು – ಭಗವಂತ° ಈ ಶ್ಲೋಕಲ್ಲಿ ಎರಡು ಮುಖ್ಯ ವಿಚಾರವ ಎತ್ತಿ ತೋರ್ಸಿದ್ದ°.  ನವಗೆ ಒಂದು ದೇಹ ಇದ್ದು. ದೇಹಲ್ಲಿ ಐದು ಬಗೆ ಸುಖದುಃಖಂಗಳ ಅನುಭವುಸಲೆ ಐದು ಬಗೆ ಇಂದ್ರಿಯಂಗೊ ಇದ್ದು. ಹೀಂಗೆ ಶರೀರ, ಶರೀರಲ್ಲಿ ಇಂದ್ರಿಯಂಗೊ. ಇಂದ್ರಿಯಂಗಳ ಮೂಲಕ ಸುಖ-ದುಃಖ ಭೋಗ – ಇದು ಜೀವನ. ಜೀವಂಗೆ ಅವ° ಹಿಂದೆ ಮಾಡಿದ ಕರ್ಮಕ್ಕನುಗುಣವಾಗಿ ಕಾರ್ಯ ಕಾರಣಂಗಳ ಕರ್ತೃತ್ವ. ಹೇಳಿರೆ, ನಮ್ಮ ಕರ್ಮಕ್ಕನುಗುಣವಾಗಿ ಭಗವಂತ° ಈ ಜನ್ಮಲ್ಲಿ ಒಂದು ರೂಪವ ಕೊಟ್ಟ°. ಈ ನಮ್ಮ ದೇಹ ರೂಪುಗೊಂಬಲೆ ಅಧಿಷ್ಠಾನ ಕಾರಣ ನಮ್ಮ ಅಪ್ಪ°-ಅಬ್ಬೆ. ನಮ್ಮ ದೇಹ ಜಡಪ್ರಕೃತಿಂದ ಆದ್ದು. ಅಬ್ಬೆಯ ಹೊಟ್ಟೆಲಿ ನವಗೆ ಈ ರೂಪವ ಕೊಟ್ಟೋಳು ಜಗನ್ಮಾತೆ ಶ್ರೀಲಕ್ಷ್ಮಿ. ಭಗವಂತನ ಅಂಗವಾಗಿ ಲಕ್ಷ್ಮಿ ದೇಹರಚನೆ ಮಾಡುತ್ತು. ಈ ರೀತಿ ದೇಹದ ಅಂಗಾಂಗ ಮತ್ತೆ ಇಂದ್ರಿಯಂಗೊ ಪಡದ ಜೀವ, ಅದರಿಂದ ಸುಖ-ದುಃಖದ ಭೋಗವ ಅನುಭವಿಸುತ್ತು. ಪರಮಪುರುಷ° ಭಗವಂತ° ಜೀವಂಗೆ ಸುಖ-ದುಃಖದ ಅನುಭವವ ಕೊಡುತ್ತ°. ಹೀಂಗಾಗಿ ದೇಹರಚನೆಲಿ ಚೇತನ ಮತ್ತೆ ಜಡಪ್ರಕೃತಿ ಒಳಗೊಂಡರೆ, ಭಗವಂತ° ಜೀವಂಗೆ ಭೋಕ್ತೃತ್ವದ ಅನುಭವವ ಸ್ವಯಂ ಅಂತರ್ಯಾಮಿಯಾಗಿದ್ದು ನೀಡುತ್ತ°. ಅದನ್ನೇ ಈ ಶ್ಲೋಕಲ್ಲಿ ಹೇಳಿದ್ದದು – ” ದೇಹ ಮತ್ತೆ ಇಂದ್ರಿಯಂಗಳ ನಿರ್ಮಾಣಲ್ಲಿ ಜಡಪ್ರಕೃತಿ (ಚೇತನಪ್ರಕೃತಿಯಾದ ಶ್ರೀತತ್ವ) ಕಾರಣವಾವ್ತು. ಸುಖ-ದುಃಖಂಗಳ ಅನುಭವಲ್ಲಿ ಜೀವ(ಪರಮಾತ್ಮ) ಕಾರಣೀಭೂತನಾಗಿದ್ದ°. ಹೀಂಗೆ, ಮೇಗೆ ಹೇಳಿದ ಸೃಷ್ಟಿ ಪ್ರಕ್ರಿಯೆಲಿ ಜೀವಾತ್ಮ -ಪರಮಾತ್ಮ, ಜಡಪ್ರಕೃತಿ-ಚೇತನಪ್ರಕೃತಿಯ ಒಂದು ಪಾತ್ರದ ಒಟ್ಟು ವಿವರಣೆ.

ಶ್ಲೋಕ

ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ಗುಣಾನ್ ।
ಕಾರಣಂ ಗುಣಸಂಗೋsಸ್ಯ ಸದಸದ್ಯೋನಿಜನ್ಮಸು ॥೨೧॥

ಪದವಿಭಾಗ

ಪುರುಷಃ ಪ್ರಕೃತಿಸ್ಥಃ ಹಿ ಭುಂಕ್ತೇ (ಭುಙ್ತೇ) ಪ್ರಕೃತಿಜಾನ್ ಗುಣಾನ್ । ಕಾರಣಮ್ ಗುಣ-ಸಂಗಃ ಅಸ್ಯ ಸತ್-ಅಸತ್ ಯೋನಿ-ಜನ್ಮಸು ॥

ಅನ್ವಯ

ಪುರುಷಃ ಪ್ರಕೃತಿಸ್ಥಃ (ಸನ್) ಪ್ರಕೃತಿಜಾನ್ ಗುಣಾನ್ ಭುಂಕ್ತೇ ಹಿ । ಗುಣ-ಸಂಗಃ ಅಸ್ಯ ಸತ್-ಅಸತ್ ಯೋನಿ-ಜನ್ಮಸು ಕಾರಣಮ್ (ಅಸ್ತಿ) ।

ಪ್ರತಿಪದಾರ್ಥ

ಪುರುಷಃ – ಜೀವಿ, ಪ್ರಕೃತಿಸ್ಥಃ (ಸನ್) – ಭೌತಿಕಶಕ್ತಿಲಿ ನೆಲೆಸಿಗೊಂಡು, ಪ್ರಕೃತಿಜಾನ್ ಗುಣಾನ್ – ಭೌತಿಕಪ್ರಕೃತಿಂದ ಉತ್ಪನ್ನವಾದ ಪ್ರಕೃತಿಗುಣಂಗಳ,  ಭುಂಕ್ತೇ – ಅನುಭೋಗಿಸುತ್ತ°, ಹಿ – ಖಂಡಿತವಾಗಿಯೂ, ಗುಣ-ಸಂಗಃ – ಪ್ರಕೃತಿಗುಣಂಗಳ ಸಂಗವು, ಅಸ್ಯ – ಇದರ (ಈ ಜೀವಿಯ), ಸತ್-ಅಸತ್ – ಒಳ್ಳೆಯ ಮತ್ತೆ ಕೆಟ್ಟ, ಯೋನಿ-ಜನ್ಮಸು – ಜೀವಜಾತಿಗಳ ಜನ್ಮಂಗಳಲ್ಲಿ, ಕಾರಣಮ್ (ಅಸ್ತಿ) – ಕಾರಣವಾಗಿದ್ದು.

ಅನ್ವಯ

ಐಹಿಕ ಪ್ರಕೃತಿಲಿ ಜೀವವು (ಜೀವಾತ್ಮ°) ಪ್ರಕೃತಿಲಿ ಉತ್ಪನ್ನವಾದ ಪ್ರಕೃತಿಯ ತ್ರಿಗುಣಂಗಳ ಅನುಭವಿಸುತ್ತ°. ಇದಕ್ಕೆ  ಐಹಿಕ ಪ್ರಕೃತಿಯೊಟ್ಟಿಂಗೆ ಅವನ ಸಹಯೋಗ (ಸಂಗವೇ) ಕಾರಣ. ಹಾಂಗೇ ಅವ° ಒಳ್ಳೆಯ ವಾ ತುಚ್ಛ ಜನ್ಮವೆತ್ತಲೆ ಇದೇ ಪ್ರಕೃತಿಯಗುಣಂಗಳೊಟ್ಟಿಂಗೆ ಅವಂಗಿಪ್ಪ ಸಂಬಂಧವೇ ಕಾರಣ.

ತಾತ್ಪರ್ಯ / ವಿವರಣೆ

ಜೀವಾತ್ಮ ಒಂದು ದೇಹಂದ ಇನ್ನೊಂದು ದೇಹಕ್ಕೆ ಹೇಂಗೆ ಸಾಗುತ್ತು ಹೇಳಿ ಅರ್ಥಮಾಡಿಗೊಂಬಲೆ ಈ ಶ್ಲೋಕ ಬಹು ಮುಖ್ಯವಾದ್ದು. ಮನುಷ್ಯ ಉಡುಪಿನ ಬದಲಾಯಿಸುತ್ತ ಹಾಂಗೆ ಜೀವಿ (ಜೀವಾತ್ಮ°) ದೇಹಂದ ದೇಹಕ್ಕೆ ಸಾಗುತ್ತ°. ಉಡುಪಿನ ಬದಲಾವಣೆಗೆ ಐಹಿಕ ಅಸ್ತಿತ್ವಲ್ಲಿ ಅವಂಗಿಪ್ಪ ಆಸಕ್ತಿಯೇ ಕಾರಣ. ಈ ಮಾಯಾ ಅಭಿವ್ಯಕ್ತಿಯು ಅವನ ಮೋಹಗೊಳಿಸಿದಷ್ಟು ಕಾಲವೂ ಅವ° ದೇಹಂದ ದೇಹಕ್ಕೆ ಸಾಗುತ್ತಲೇ ಇರೆಕ್ಕಾವ್ತು. ಐಹಿಕ ಪ್ರಕೃತಿಯ ಮೇಗೆ ಪ್ರಭುತ್ವ ನಡೆಶುವ ಅವನ ಆಸೆಂದಲಾಗಿ ಅವ° ಇಂತಹ ಅಪೇಕ್ಷಣೀಯವಲ್ಲದ್ದ ಸನ್ನಿವೇಶಂಗಳಲ್ಲಿ ಇರಿಸಲ್ಪಡುತ್ತ°. ಜೀವಿ ಒಂದರಿ ದೇವತೆಯಾಗಿ, ಒಂದರಿ ಮನುಷ್ಯನಾಗಿ, ಒಂದರಿ ಮೃಗವಾಗಿ, ಪಕ್ಷಿಯಾಗಿ, ಹುಳುವಾಗಿ, ಜಲಪ್ರಾಣಿಯಾಗಿ, ನುಸಿಯಾಗಿ ಕೂಡ ಹುಟ್ಟಲ್ಪಡುತ್ತ°. ಇದನ್ನೇ ಇಲ್ಲಿ ‘ಸತ್-ಅಸತ್-ಯೋನಿ-ಜನ್ಮಸು’ ಹೇಳಿ ಹೇಳಿದ್ದದು. ಇದು ಐಹಿಕ ಬಯಕೆಯ ಪ್ರಭಾವಂದಲಾಗಿ ಅಪ್ಪದು. ಇದು ನಡೆತ್ತಲೇ ಇರ್ತು. ಎಲ್ಲ ಆಗುಹೋಗುಗಳಲ್ಲಿಯೂ ಜೀವಾತ್ಮ° ತಾನು ಸನ್ನಿವೇಶದ ಪ್ರಭು ಎಂದೆಣಿಸಿಗೊಳ್ಳುತ್ತ°. ಆದರೆ ಅವ° ಐಹಿಕ ಪ್ರಕೃತಿಯ ಪ್ರಭಾವಲ್ಲಿಪ್ಪದಾವ್ತು ಕಾರಣ.

ಇದನ್ನೇ ಬನ್ನಂಜೆ ವಿಚಾರದೃಷ್ಟಿಂದ ನೋಡಿರೆ – ಪ್ರಕೃತಿ ನಿರ್ಮಿತವಾದ ದೇಹಲ್ಲಿ ಭಗವಂತ° ಇದ್ದ°, ದೇವತೆಗೊ (ಅಭಿಮಾನಿ ದೇವತೆಗೊ) ಇದ್ದವು. ಆದರೆ ದೇಹಲ್ಲಿದ್ದು ಸುಖ-ದುಃಖದ ಭೋಗವ ಅನುಭವುಸುವದು ಜೀವ. ದೇಹ ಪ್ರಕೃತಿಯ ಗುಣಂದ ನಿರ್ಮಾಣವಾಗಿರುತ್ತು. ಜೀವ ತನ್ನ ಸ್ವಭಾವಕ್ಕನುಗುಣವಾಗಿ, ಪೂರ್ವಜನ್ಮದ ಕರ್ಮಫಲಕ್ಕನುಗುಣವಾಗಿ ಈ ಜನ್ಮಲ್ಲಿ ದೇಹವ ಪಡೆತ್ತು.  ಈ ಮದಲೇ ಹೇಳಿಪ್ಪಂತೆ ಜೀವ ತನ್ನ ದೇಹವ ಬಿಟ್ಟು ಹೆರಹೋಪಗ ಏವುದರ ಗಾಢವಾಗಿ ಚಿಂತಿಸುತ್ತೋ ಅದಕ್ಕನುಗುಣವಾದ ಅದರ ಮುಂದಾಣ ಜನ್ಮ ನಿರ್ಧಾರವಾವ್ತು. (ಯಂ ಯಂ ವಾsಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಂ, ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ – ಭ.ಗೀ – 8.6). ಉತ್ತಮ ವಾ ಹೀನ ಯೋನಿಲಿ ಹುಟ್ಟಿಬಪ್ಪಲೆ ಜೀವಂಗೆ ತ್ರಿಗುಣಂಗಳ ನಂಟೇ ಕಾರಣ.

ಹೀಂಗೆ ಬೇರೆ ಬೇರೆ ದೇಹಂಗಳಲ್ಲಿ ಹೇಂಗೆ ಹುಟ್ಟುತ್ತ ಹೇಳ್ವದು ಹೇಳಿದ್ದಾತು. ಬೇರೆ ಬೇರೆ ಪ್ರಕೃತಿಯಗುಣಂಗಳ ಸಹಯೋಗವೇ ಇದಕ್ಕೆ ಕಾರಣ. ಹಾಂಗಾಗಿ ಮನುಷ್ಯ° ಮೂರು ಐಹಿಕ ಗುಣಂಗಳ ಮೀರಿ ದಿವ್ಯಸ್ಥಿತಿಯ ಸಾಧುಸೆಕು. ಇದಕ್ಕೆ ಕೃಷ್ಣಪ್ರಜ್ಞೆ ಹೇದು ಹೆಸರು. ಮನುಷ್ಯ° ಕೃಷ್ಣಪ್ರಜ್ಞೆಲಿ ನೆಲಸದ್ರೆ ಅವನ ಐಹಿಕ ಪ್ರಜ್ಞೆಯು ಅವನ ದೇಹಂದ ದೇಹಕ್ಕೆ ಸಾಗುವಂತೆ ಒತ್ತಾಯ ಮಾಡುತ್ತು. ಎಂತಕೆ ಹೇಳಿರೆ – ಅನಾದಿಕಾಲಂದ ಅವಂಗೆ ಐಹಿಕ ಬಯಕೆ ಇದ್ದೇ ಇರ್ತು. ಆದರೆ ಅವ° ಈ ಗ್ರಹಿಕೆಯ ಬದಲಾಯಿಸಿಗೊಳ್ಳೆಕು. ಅಧಿಕಾರಯುತ ಮೂಲಂದ ಕೇಳಿ ತಿಳುದರೆ ಮಾತ್ರ ಈ ಬದಲಾವಣೆಯ ಸಾಧುಸಲೆ ಎಡಿಗು. ಹೀಂಗೆ ಇಲ್ಲಿ ಜೀವಾತ್ಮ ಮತ್ತೆ ಜಡಪಕೃತಿ ಇವುಗಳ ಸಂಬಂಧ (ಪ್ರಭಾವ) ಅಥವಾ ಜೀವಾತ್ಮನಲ್ಲಿ ಜಡಪ್ರಕೃತಿಯ ಪಾತ್ರದ ಬಗ್ಗೆ ವಿವರಿಸಿದ್ದಾತು.

ಶ್ಲೋಕ

ಉಪದ್ರಷ್ಟಾನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ ।
ಪರಮಾತ್ಮೇತಿ ಚಾಪ್ಯುಕ್ತೋ ದೇಹೇsಸ್ಮಿನ್ಪುರುಷಃ ಪರಃ ॥೨೨॥

ಪದವಿಭಾಗ

ಉಪದ್ರಷ್ಟಾ ಅನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ । ಪರಮಾತ್ಮಾ ಇತಿ ಚ ಅಪಿ ಉಕ್ತಃ ದೇಹೇ ಅಸ್ಮಿನ್ ಪುರುಷಃ ಪರಃ ॥

ಅನ್ವಯ

ಉಪದ್ರಷ್ಟಾ, ಅನುಮಂತಾ, ಭರ್ತಾ, ಚ ಭೋಕ್ತಾ, ಮಹೇಶ್ವರಃ, ಅಪಿ ಚ ಪರಮಾತ್ಮಾ ಇತಿ ಉಕ್ತಃ ಪರಃ ಪುರುಷಃ ಅಸ್ಮಿನ್ ದೇಹೇ (ಅಸ್ತಿ) ।

ಪ್ರತಿಪದಾರ್ಥ

ಉಪದ್ರಷ್ಟಾ – ಮೇಲ್ವಿಚಾರಕ°, ಅನುಮಂತಾ – ಅನುಮತಿ ನೀಡುವವ°, ಭರ್ತಾ – ಎಲ್ಲವನ್ನೂ ಹೊತ್ತವ°,  ಚ – ಕೂಡ, ಭೋಕ್ತಾ – ಪರಮ ಭೋಕ್ತಾರ°, ಮಹೇಶ್ವರಃ – ಪರಮಪ್ರಭುವು, ಅಪಿ ಚ – ನಿಜವಾಗಿಯೂ ಕೂಡ, ಪರಮಾತ್ಮಾ (ಪರಮ-ಆತ್ಮಾ) – ಪರಮಾತ್ಮ°, ಇತಿ – ಹೇದು, ಉಕ್ತಃ – ಹೇಳಲಾಯ್ದು, ಪರಃ ಪುರುಷಃ – ದಿವ್ಯನಾದ ಪುರುಷ° (ಭಗವಂತ° / ಪರಮ ಭೋಕ್ತಾರ°),  ಅಸ್ಮಿನ್ ದೇಹೇ (ಅಸ್ತಿ) – ಈ ದೇಹಲ್ಲಿ ಇದ್ದ°.

ಅನ್ವಯ

ಎಲ್ಲದರ ಮೇಲಿದ್ದು ಎಲ್ಲವನ್ನೂ ನೋಡಿಗೊಂಬವ°/ ಮೇಲ್ವಿಚಾರಕ° (ಉಪದ್ರಷ್ಟಾ), ತನ್ನಿಷ್ಟದಂತೆ ಎಲ್ಲವನ್ನೂ ನಡೆಶುವವ (ಅನುಮತಿ ನೀಡುವವ° – ಅನುಮಂತಾ), ಎಲ್ಲವನ್ನೂ ಹೊತ್ತವ° (ಭರ್ತಾ), ಎಲ್ಲ ಸಾರವ ಉಂಬವ° (ಭೋಕ್ತಾರ°) – ಆ ಸವಶಕ್ತನಾದ ಮಹೇಶ್ವರನಾದ ಪರಮಾತ್ಮ°. ಅವನೇ ಈ ದೇಹಲ್ಲಿ ಪರಮಾತ್ಮ ಎಂದೆಣಿಸಿಗೊಂಡು ದೇಹದೊಳ ಇಪ್ಪ ಪರಮಪುರುಷ° ಆಗಿದ್ದ°.

ತಾತ್ಪರ್ಯ / ವಿವರಣೆ

ಏವತ್ತೂ ಜೀವಾತ್ಮನ ಒಟ್ಟಿಂಗೆ ಇಪ್ಪ ಪರಮಾತ್ಮ° ಪರಮಪುರುಷ° – ಭಗವಂತನ ಪ್ರತಿನಿಧಿ ಹೇಳ್ವದರ ಇಲ್ಲಿ ಹೇಳಲಾಯ್ದು.  ಆತ್ಮನೂ ಪರಮಾತ್ಮನೂ ಒಂದೇ ಅಲ್ಲ ಹೇಳ್ವ ತತ್ವವ ಇಲ್ಲಿ ಸ್ಪಷ್ಟಪಡಿಸಿದ್ದ° ಭಗವಂತ°. ಅದ್ವೈತ ತತ್ವಶಾಸ್ತ್ರಜ್ಞರು ಕ್ಷೇತ್ರಜ್ಞ° ಒಬ್ಬನೇ ಹೇದು ಭಾವಿಸಿ ಪರಮಾತ್ಮಂಗೂ ಜೀವಾತ್ಮಂಗೂ ವ್ಯತ್ಯಾಸ ಇಲ್ಲೆ ಹೇಳಿ ಪರಿಗಣಿಸುತ್ತವು. ಇದರ ಆ ರೀತಿ ಅಲ್ಲ ಹೇಳಿ ಸ್ಪಷ್ಟಪಡುಸಲೆ ಈ ಶ್ಲೋಕ ಒಳ್ಳೆ ಆಧಾರವಾವ್ತು. ವ್ಯಕ್ತಿಗತ ಆತ್ಮ ಒಂದು ವಿಶಿಷ್ಟ ಕ್ಷೇತ್ರದ ಚಟುವಟಿಕೆಗಳ ಅನುಭವುಸುತ್ತದು. ಆದರೆ ಭಗವಂತ° ಇಲ್ಲಿ ‘ಪರ’ – ಹೇಳಿರೆ ದಿವ್ಯ°. ಅವ° ಪರಮಾತ್ಮನಾಗಿ ಎಲ್ಲ ದೇಹದೊಳ ಇರ್ತ°. ಅಲ್ಲಿ ಪರಮಾತ್ಮ ಮಿತಿಗಳಿಪ್ಪ ಭೋಕ್ತೃವಾಗಿಯಾಗಲೀ, ದೇಹದ ಚಟುವಟಿಕೆಲಿ ಭಾಗವಹಿಸುವವನಾಗಿಯಾಗಲೀ ಅಲ್ಲಿರುತ್ತನಿಲ್ಲೆ. ಅವ° ಸಾಕ್ಷಿಯಾಗಿ, ಮೇಲ್ವಿಚಾರಕನಾಗಿ, ಅಪ್ಪಣೆಕೊಡುವವನಾಗಿ ಪರಮ ಭೋಕ್ತೃವಾಗಿ ಇರುತ್ತ°. ದೇಹಲ್ಲಿ ಅವಂಗೆ ಹೆಸರು ಆತ್ಮ ಹೇದಲ್ಲ. ಅವಂಗೆ ಪರಮಾತ್ಮ° ಹೇದು ಹೇಳುವದು. ಅವ° ದಿವ್ಯ°. ಹೀಂಗೆ ಆತ್ಮ ಪರಮಾತ್ಮ ಹೇಳಿರೆ ಬೇರೆ ಬೇರೆ. ಪರಮಾತ್ಮಂಗೆ ಎಲ್ಲೆಲ್ಲೂ ಕೈ ಕಾಲುಗೊ. ಆದರೆ ಜೀವಾತ್ಮಂಗೆ ಹಾಂಗಿಲ್ಲೆ. ಪರಮಾತ್ಮ ಪರಮಪ್ರಭುವಾಗಿಪ್ಪದರಿಂದ ಜೀವಾತ್ಮಂಗೆ ಇಪ್ಪ ಐಹಿಕ ಭೋಗದ ಬಯಕೆಗೆ ಅನುಮತಿ ನೀಡ್ಳೆ ಒಳ ಇದ್ದ°. ಪರಮಾತ್ಮನ ಅನುಮತಿ ಇಲ್ಲದ್ದೆ ಜೀವಾತ್ಮ° ಏನನ್ನೂ ಮಾಡುವಾಂಗಿಲ್ಲೆ. ವ್ಯಕ್ತಿ ‘ಭುಕ್ತ°’, ಹೇಳಿರೆ ಪಾಲಿತನಾದವ°; ಪರಮಾತ್ಮ ‘ಭೋಕ್ತಾ’ – ಪಾಲಕ°.

ಹೀಂಗೆ ವಾಸ್ತವಾಂಶವಾಗಿ, ಪ್ರತಿಯೊಂದು ಜೀವಿಯೂ ನಿರಂತರವಾಗಿ ಪರಮಪ್ರಭುವಿನ ವಿಭಿನ್ನಾಂಶ. ಅವರಿಬ್ರದ್ದು ಆತ್ಮೀಯ ಸ್ನೇಹಿತರ ಸಂಬಂಧ. ಆದರೆ ಜೀವಾತ್ಮಂಗೆ ಒಂದು ಪ್ರವೃತ್ತಿ ಇದ್ದು – ಅದು ಪರಮಪ್ರಭುವಿನ ಒಪ್ಪಿಗೆಯ ಕಡೆಗಣುಸಿ ಪ್ರಕೃತಿಯ ಮೇಗೆ ಯಜಮಾಂತಿಗೆ ನಡೆಶುಲೆ ಸ್ವತಂತ್ರವಾಗಿ ಕಾರ್ಯಪ್ರವೃತ್ತನಪ್ಪದು. ಈ ಪ್ರವೃತ್ತಿ ಇಪ್ಪದರಿಂದ ಅವನ ಪರಮ ಪ್ರಭುವಿನ ಅಲ್ಪಪ್ರಮಾಣದ ಶಕ್ತಿ ಹೇದು ಕರೆಯಲಾಯ್ದು. ಐಹಿಕ ಶಕ್ತಿಂದ ಅವ° ಎಲ್ಲಿಯವರೇಂಗೆ ಬಂಧಿತನಾಗಿರುತ್ತನೋ ಅಲ್ಲಿಯವರೇಂಗೆ  ಪರಮಾತ್ಮನದ ಭಗವಂತ° ಅವನೊಟ್ಟಿಂಗೆ ಇರುತ್ತ°. ಜೀವಿಯ (ಜೀವಾತ್ಮವ) ಆಧ್ಯಾತ್ಮಿಕ ಶಕ್ತಿಗೆ ಕರಕ್ಕೊಂಡು ಹೋಪದೇ ಭಗವಂತನ ಕಾತರ. ಆದರೆ ಅವನ ಅತ್ಯಲ್ಪ ಸ್ವಾತಂತ್ರ್ಯಂದಲಾಗಿ ಜೀವಿಯು ಆಧ್ಯಾತ್ಮಿಕ ಬೆಣಚ್ಚಿಯ ಸಹಯೋಗವ ಸದಾ ತಿರಸ್ಕರಿಸುತ್ತ°. ಇದಕ್ಕೆ ಅವಂಗೆ ಪ್ರಕೃತಿಯೊಟ್ಟಿಂಗೆ ಇಪ್ಪ ಸಹಯೋಗವೇ ಕಾರಣ. ಇದುವೇ ಅವಂಗೆ ಬದ್ಧಪ್ರಕೃತಿಲಿ ಅವನ ಐಹಿಕ ಘರ್ಷಣೆಗೆ ಕಾರಣ. ಹೀಂಗಾಗಿ ಭಗವಂತ° ಸದಾ ಪರಮಾತ್ಮನಾಗಿ ಜೀವಾತ್ಮನ ಒಟ್ಟಿಂಗೆ ಇದ್ದುಗೊಂಡು ಅಂತರಂಗಂದ ಮತ್ತೆ ಹೆರಂದ ಮಾರ್ಗದರ್ಶನ ಮಾಡುತ್ತಲೇ ಇರುತ್ತ°. ಹೀಂಗೆ ಜೀವತ್ಮನ ಚಿತ್ತಕ್ಕೆ ಪರಮಾತ್ಮನ ಮನವರಿಕೆ ಆದಪ್ಪಗ ಪರಮಾತ್ಮನಲ್ಲಿ ನಂಬಿಕೆ ಇರುಸಿಗೊಂಡು ಆಧ್ಯಾತ್ಮಿಕ ಬೆಣಚ್ಚಿಯತ್ತೆ ಮುನ್ನೆಡವಲೆ ತೊಡಗುತ್ತ°.

ಹೀಂಗೆ ಚಿತ್ ಪ್ರಕೃತಿ ಜಡಪ್ರಕೃತಿಂದ ದೇಹ ನಿರ್ಮಿಸುವಾಗ, ಜೀವ ಆ ದೇಹಲ್ಲಿದ್ದು ಇಂದ್ರಿಯಂಗಳ ಮುಖೇನ ಸುಖ-ದುಃಖಂಗಳ ಭೊಗುಸುವಾಗ ಎಲ್ಲದಕ್ಕೂ ಪ್ರೇರಕನಾಗಿ, ಎಲ್ಲವುದಕ್ಕಿಂತ ಎತ್ತರಲ್ಲಿದ್ದು ಎಲ್ಲವನ್ನೂ ಹತ್ರಂದ ಸಾಕ್ಷಾತ್ ಕಾಂಬ ಭಗವಂತ° – ಪರಪಮಪುರುಷ°. ಅವ° ನಮ್ಮ ಕರ್ಮವ ತಿಳುದವ°, ನಾವು ಏವ ರೀತಿಯ ಕರ್ಮಂದ ಎಂತಾಯೇಕು ಹೇದು ತಿಳುದವ°. ಅವ° ನಮ್ಮ ದೇಹದ ಒಳ ಕೂದು ಪ್ರೇರಣೆ ಮಾಡ್ತದರಿಂದ ಈ ದೇಹ ನಿಂದುಗೊಂಡಿದ್ದು. ಅವ ಹೆರಟುಹೋದರೆ ಅಲ್ಲಿ ಮತ್ತೆ ಜೀವತ್ಮನೂ ಇರ್ತನಿಲ್ಲೆ, ದೇಹ ಬಿದ್ದುಹೋವ್ತು. ಅವ ನಮ್ಮ ಒಳ ಇದ್ದುಗೊಂಡು ಯಾವ ಸುಖ-ದುಃಖದ ಸ್ಪರ್ಶವೂ ಇಲ್ಲದ್ದೆ ಸದಾ ಆನಂದಲ್ಲಿಪ್ಪ ಆನಂದ ಭೋಕ್ತ, ಎಲ್ಲ ಯಜ್ಞಂಗಳ ಭೋಕ್ತಾರ°. ಹೀಂಗೆ ಇಲ್ಲಿ ಸೃಷ್ಟಿಪ್ರಕ್ರಿಯೆಲಿ ಪರಮಪುರುಷ° ಮತ್ತೆ ಚೇತನಪ್ರಕೃತಿಯ ಪಾತ್ರದ ವಿವರಣೆ ನೀಡಿದ್ದ° ಭಗವಂತ°.

ಶ್ಲೋಕ

ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ ।
ಸರ್ವಥಾ ವರ್ತಮಾನೋsಪಿ ನ ಸ ಭೂಯೋsಭಿಜಾಯತೇ ॥೨೩॥

ಪದವಿಭಾಗ

ಯಃ ಏವಮ್ ವೇತ್ತಿ ಪುರುಷಮ್ ಪ್ರಕೃತಿಮ್ ಚ ಗುಣೈಃ ಸಹ । ಸರ್ವಥಾ ವರ್ತಮಾನಃ ಅಪಿ ನ ಸಃ ಭೂಯಃ ಅಭಿಜಾಯತೇ ॥

ಅನ್ವಯ

ಯಃ ಏವಂ ಪುರುಷಂ ಗುಣೈಃ ಸಹ ಪ್ರಕೃತಿಂ ಚ ವೇತ್ತಿ, ಸಃ ಸರ್ವಥಾ ವರ್ತಮಾನಃ ಅಪಿ ಭೂಯಃ ನ ಅಭಿಜಾಯತೇ ।

ಪ್ರತಿಪದಾರ್ಥ

ಯಃ – ಯಾವಾತ° , ಏವಮ್  – ಹೀಂಗೆ, ಪುರುಷಮ್ – ಜೀವಿಯ, ಗುಣೈಃ ಸಹ – ಪ್ರಕೃತಿಗುಣಂಗಳಿಂದ ಕೂಡಿ, ಪ್ರಕೃತಿಮ್ ಚ – ಭೌತಿಕ ಪ್ರಕೃತಿಯನ್ನೂ ಕೂಡ, ವೇತ್ತಿ – ತಿಳಿತ್ತನೋ, ಸಃ – ಅವ°, ಸರ್ವಥಾ – ಎಲ್ಲ ರೀತಿಲಿ, ವರ್ತಮಾನಃ – ಇಪ್ಪವವನಾಗಿ, ಅಪಿ – ಇದ್ದರೂ, ಭೂಯಃ – ಮತ್ತೆ, ನ ಅಭಿಜಾಯತೇ – ಜನ್ಮವೆತ್ತುತ್ತನಿಲ್ಲೆ.

ಅನ್ವಯಾರ್ಥ

ಯಾವಾತ° ಹೀಂಗೆ ಪ್ರಕೃತಿಯನ್ನೂ, ಜೀವಿಯನ್ನೂ ಮತ್ತೆ ಅವುಗಳ ಗುಣಂಗಳ ಪರಸ್ಪರ ಪ್ರಕ್ರಿಯೆ ಕುರಿತಾಗಿ ಈ ರೀತಿಯಾಗಿ ಅರ್ಥಮಾಡಿಗೊಳ್ಳುತ್ತನೋ, ಅವ° ಪ್ರಸ್ತುತ ಸನ್ನಿವೇಶಲ್ಲಿ ಹೇಂಗೆ ಇದ್ದರೂ ಮತ್ತೆ ಹುಟ್ಟಿಬತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಐಹಿಕ ಪ್ರಕೃತಿ, ಪರಮಾತ್ಮ, ಜೀವಿ ಮತ್ತೆ ಅವರ ಪರಸ್ಪರ ಪ್ರತಿಕ್ರಿಯೆ ಇವಿಷ್ಟರ ಸ್ಪಷ್ಟವಾಗಿ ಅರ್ಥಮಾಡಿಗೊಳ್ಳೆಕು. ಇದರಿಂದ ಮನುಷ್ಯ° ಮತ್ತೆ ಈ ಐಹಿಕ ಪ್ರಕೃತಿಗೆ ಹಿಂತುರುಗುವ ಒತ್ತಾಯ ಇಲ್ಲದ್ದೆ ಮುಕ್ತನಪ್ಪಲ್ಲೆ ಆಧ್ಯಾತ್ಮಿಕ ವಾತಾವರಣಕ್ಕೆ ಹೋಪಲೆ ಅರ್ಹನಾಗುತ್ತ°. ಇದು ಜ್ಞಾನದ ಫಲ. ಜೀವಿಯು ಅಕಸ್ಮಾತ್ತಾಗಿ ಈ ಐಹಿಕ ಅಸ್ತಿತ್ವಲ್ಲಿ ಬಿದ್ದಿದ° ಎಂಬುದರ ಸ್ಪಷ್ಟವಾಗಿ ಅರ್ಥಮಾಡಿಗೊಂಬದು ಜ್ಞಾನದ ಉದ್ದೇಶ. ಹೀಂಗೆ ಜ್ಞಾನವ ಸಂಪಾದಿಸಿಯಪ್ಪಗ ಅವ° ಕೃಷ್ಣಪ್ರಜ್ಞೆಗೆ ಸಹಜವಾಗಿ ತೆರಳುತ್ತ°. ಕೃಷ್ಣಪ್ರಜ್ಞೆ ಅಧ್ಯಾತ್ಮಿಕ ಹಾದಿಯ ಪ್ರಥಮ ಮೆಟ್ಳು. ಅಲ್ಲಿಂದ ಮುಂದೆ ಆಧ್ಯಾತ್ಮಿಕ ಸಾಧನೆಲಿ ಮುನ್ನೆಡವ ದಾರಿ ಸುಗುಮವಾವ್ತು. ಹಾಂಗೇ ಅಚಲವಾಗಿ ಮುಂದುವರುದರೆ ಅಧ್ಯಾತ್ಮಿಕ ಸಾಧನೆಯ ಗುರಿಯ ತಲುಪಲಕ್ಕು. ಒಂದರಿ ಗುರಿಯ ಸೇರಿದ ಹೇಳಿ ಆದರೆ ಮತ್ತೆ ಅವಂಗೆ ಈ ಐಹಿಕ ಅಸ್ತಿತ್ವಕ್ಕೆ ಮರಳಿ ಬರೆಕ್ಕಪ್ಪ ಅಗತ್ಯ ಇರ್ತಿಲ್ಲೆ. ಅವ° ಜ್ಞಾನಾನಂದ ಪ್ರಪಂಚಲ್ಲಿ ಸುಖಲಿ ನಿತ್ಯಾನಂದಲ್ಲಿ ಇರುತ್ತ°.

ಬನ್ನಂಜೆ ವ್ಯಾಖ್ಯಾನಲ್ಲಿ ಉಲ್ಲೇಖಿಸಿದ್ದರ ಗಮನಿಸಿರೆ – ಅನಾಧಿನಿತ್ಯವಾದ ಪ್ರಕೃತಿ (ಜಡ ಮತ್ತೆ ಚೇತನ), ಎಲ್ಲವುದಕ್ಕೂ ಕಾರಣ ಪುರುಷನಾದ ಪರಮಾತ್ಮ, ಅವನ ಅಧೀನವಾಗಿಪ್ಪ ಜೀವಜಾತ ಇದರ ಗುಣಂಗಳೊಟ್ಟಿಂಗೆ ಅರ್ತವ ಜ್ಞಾನಿ. ಇಂತಹ ಜ್ಞಾನಿ ಬಾಹ್ಯವಾಗಿ ಹೇಂಗೆ ಕಾಣಿಸಿಗೊಂಡರೂ (‘ಸರ್ವಥಾ ವರ್ತಮಾನೋsಪಿ’..)  ಸತ್ಯದ ಸಾಕ್ಷಾತ್ಕಾರಂದ ಅವ ಮೋಕ್ಷವ ತಲಪುತ್ತ°. ಇಲ್ಲಿ ಬಾಹ್ಯ ಸಂಸ್ಕಾರಕ್ಕಿಂತ ಜ್ಞಾನ ಎಷ್ಟು ಮುಖ್ಯ ಹೇಳ್ವದರ ಭಗವಂತ° ಒತ್ತಿ ಹೇಳಿದ್ದ°. ಮುಖವಾಡದ ಬದುಕಿಂದ ಎಂತ ಪ್ರಯೋಜನವೂ ಇಲ್ಲೆ. ಎಲ್ಲಕ್ಕಿಂತ ಮಿಗಿಲಾದ್ದು ಸತ್ಯದ ಸಾಕ್ಷಾತ್ಕಾರ. ಸತ್ಯದ ಸಾಕ್ಷಾತ್ಕಾರವಾದಪ್ಪಗ ತಾನಾಗಿಯೇ ಲೌಕಿಕ ಪ್ರಪಂಚ ಎಷ್ಟು ಅರ್ಥಹೀನ ಹೇಳ್ವದು ಗೊಂತಾವುತ್ತು. ಜ್ಞಾನಕ್ಕೆ ಮಿಗಿಲಾದ್ದು ಇನ್ನೊಂದು ಪವಿತ್ರ ಸಾಧನ ಇಲ್ಲೆ. ಕರ್ಮಾನುಷ್ಠಾನಲ್ಲಿ ಅಕಾಸ್ಮಾತ್ ಚ್ಯುತಿ ಆದರೂ (ಸರ್ವಥಾ ವರ್ತಮಾನೋsಪಿ..) ಜ್ಞಾನ ಮಾರ್ಗಲ್ಲಿ ಮುಂದುವರಿವವಂಗೆ ಅದು ಬಾಧಕವಾವ್ತಿಲ್ಲೆ. ಜ್ಞಾನ ಅವನ ಸರಿದಾರಿಲಿ ತಂದು ನಿಲ್ಲುಸುತ್ತು ಮತ್ತೆ ಅವ°  ‘ನ ಭೂಯಃ ಅಭಿಜಾಯತೇ’ – ಮರಳಿ ಹುಟ್ಟುತ್ತನಿಲ್ಲೆ., ಅರ್ಥಾತ್ ಮೋಕ್ಷವ ಹೊಂದುತ್ತ°.

ಹೀಂಗೆ ಪ್ರಕೃತಿ ಮತ್ತೆ ಪುರುಷನ ಗುಣಸಹಿತ ತಿಳಿವದು ಮೋಕ್ಷಕ್ಕೆ ಮಾರ್ಗ ಹೇಳಿ ಭಗವಂತ° ಇಲ್ಲಿ ಉಲ್ಲೇಖಿಸಿದ್ದ°. ಹಾಂಗಾರೆ ಇದರ ತಿಳಿತ್ತ ಬಗೆ ಹೇಂಗೆ ? –

ಶ್ಲೋಕ

ಧ್ಯಾನೇನಾತ್ಮನಿ ಪಶ್ಯಂತಿ ಕೇಚಿದಾತ್ಮಾನಮಾತ್ಮನಾ ।
ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ ॥೨೪॥

ಪದವಿಭಾಗ

ಧ್ಯಾನೇನ ಆತ್ಮನಿ ಪಶ್ಯಂತಿ ಕೇಚಿತ್ ಆತ್ಮಾನಮ್ ಆತ್ಮನಾ । ಅನ್ಯೇ ಸಾಂಖ್ಯೇನ ಯೋಗೇನ ಕರ್ಮ-ಯೋಗೇನ ಚ ಅಪರೇ ॥

ಅನ್ವಯ

ಕೇಚಿತ್ ಧ್ಯಾನೇನ ಆತ್ಮನಾ ಆತ್ಮನಿ ಆತ್ಮಾನಂ ಪಶ್ಯಂತಿ । ಅನ್ಯೇ ಸಾಂಖ್ಯೇನ ಯೋಗೇನ (ಆತ್ಮಾನಂ ಪಶ್ಯಂತಿ)। ಅಪರೇ ಚ ಕರ್ಮ-ಯೋಗೇನ (ಆತ್ಮಾನಂ ಪಶ್ಯಂತಿ) ।

ಪ್ರತಿಪದಾರ್ಥ

ಕೇಚಿತ್ – ಕೆಲವರು, ಧ್ಯಾನೇನ – ಧ್ಯಾನದ ಮೂಲಕ (ಧ್ಯಾನಂದ),  ಆತ್ಮನಾ – ಮನಸ್ಸಿಂದ, ಆತ್ಮನಿ – ಆತ್ಮನಲ್ಲಿ, ಆತ್ಮಾನಂ  – ಪರಮಾತ್ಮನ, ಪಶ್ಯಂತಿ – ನೋಡುತ್ತವು, ಅನ್ಯೇ – ಉಳುದ ಬಾಕಿದ್ದೋರು, ಸಾಂಖ್ಯೇನ ಯೋಗೇನ (ಆತ್ಮಾನಮ್ ಪಶ್ಯಂತಿ) – ತತ್ವಶಾಸ್ತ್ರದ ಚರ್ಚೆ/ಮಂಥನ, ಅಧ್ಯಯನಯ ಮೂಲಕ ಪರಮಾತ್ಮನ ನೋಡುತ್ತವು. ಅಪರೇ – ಮತ್ತೆ ಇತರರು (ಮತ್ತೆ ಬಾಕಿದ್ದೋರು), ಚ – ಕೂಡ, ಕರ್ಮ-ಯೋಗೇನ (ಆತ್ಮನಮ್ ಪಶ್ಯಂತಿ) – ಫಲಾಪೇಕ್ಷೆಯಿಲ್ಲದ್ದೆ ಕರ್ಮಮಾಡುವದರ ಮೂಲಕ /ಕರ್ಮಯೋಗಂದ ಪರಮಾತ್ಮನ ಕಾಣುತ್ತವು.

ಅನ್ವಯ

ಕೆಲವು ಜೆನಂಗೊ ಧ್ಯಾನಂದ (ಧ್ಯಾನದ ಮೂಲಕ) ಮನಸ್ಸಿಂದ ಆತ್ಮನಲ್ಲಿ ಪರಮಾತ್ಮನ ಕಾಣುತ್ತವು, ಮತ್ತೆ ಕೆಲವು ಜೆನಂಗೊ ಜ್ಞಾನವ ಬೆಳೆಶಿಗೊಂಡು (ಸಾಂಖ್ಯಯೋಗಂದ) ಮತ್ತೆ ಉಳುದೋರು ನಿಷ್ಕಾಮಕರ್ಮದ ಮೂಲಕ ತಮ್ಮೊಳ ಇಪ್ಪ ಪರಮಾತ್ಮನ ಕಾಣುತ್ತವು.

ತಾತ್ಪರ್ಯ / ವಿವರಣೆ

ಪರಮಾತ್ಮನ ಕಾಂಬ ಬಗೆ ಹೇಂಗೆ ಹೇಳ್ವದರ ಇಲ್ಲಿ ಭಗವಂತ° ವಿವರಿಸಿದ್ದ. ಕೆಲವರು ನೇರ ಸಂಪೂರ್ಣ ಕೃಷ್ಣಪ್ರಜ್ಞೆಂದ ಸಗುಣ ಭಕ್ತಿಯ ಧ್ಯಾನಯೋಗದ ಮೂಲಕ, ಮತ್ತೆ ಕೆಲವರು ತತ್ವಶಾಸ್ತ್ರ (ಸಾಂಖ್ಯಯೋಗ) ಜ್ಞಾನದ ಮೂಲಕ ಮತ್ತೆ ಉಳುದವು ನಿಷ್ಕಾಮಕರ್ಮ ಯೋಗದ ಮೂಲಕ ತನ್ನಲ್ಲಿಪ್ಪ ಪರಮಾತ್ಮನ ಕಾಣುತ್ತವು.  ಬನ್ನಂಜೆ ಈ ಭಾಗವ ವಿವರುಸುತ್ತವು – ಸಾಧನೆ ಮಾಡ್ಳೆ ಮದಾಲು ನವಗೆ ಸಾಧನಾ ಶರೀರ ಬೇಕು. ಹೀನಯೋನಿಲಿ ಪೂರ್ಣತೆ ಪಡೆಯದ್ದ ಶರೀರಲ್ಲಿ ಹುಟ್ಟಿಬಂದರೆ ಸಾಧನೆ ಸಾಧ್ಯ ಇಲ್ಲೆ. ಹಾಂಗಾಗಿ ನಾವು ಮದಾಲು ಮಾನವರಾಯೇಕು (ಪೂರ್ಣತೆಯ ಪಡದ ಶರೀರಲ್ಲಿ ನೆಲೆಸುವ ಪುರುಷನಾಯೇಕು). ಹಾಂಗಾಗಿ ದಾಸರು ಹಾಡಿದ್ದದು “ಮಾನವ ಜನ್ಮ ದೊಡ್ಡದು, ಅದನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ!”. ಸಾಧನೆಗೆ ಬೇಕಾದ ಸಾಧನಾ ಶರೀರ ಇಲ್ಲದ್ರೆ ಯಾವ ಸಾಧನೆಯೂ ಸಾಧ್ಯ ಇಲ್ಲೆ. ಮತ್ತೆ, ಕೆಲವರು ತಮ್ಮ ಸ್ವರೂಪ ಯೋಗ್ಯತೆಂದ ಹಾಂಗೂ ಭಗವದನುಗ್ರಹಂದ ಜನ್ಮತಃ ಜ್ಞಾನ ಪಡದು ಹುಟ್ಟುತ್ತವು (ಅದಕ್ಕೆ ಅವರ ಪೂರ್ವಜನ್ಮ ಸುಕೃತ ಫಲ ಕಾರಣ). ಇವಕ್ಕೆ ಜ್ಞಾನ ನಿಚ್ಛಳ. ಇಂಥವು ತಮ್ಮ ಜೀವ ಯೊಗ್ಯತೆಂದ ತಮ್ಮ ಜೀವ ಸ್ವರೂಪದೊಳ ಬಿಂಬರೂಪಿ ಭಗವಂತನ / ಪರಮಾತ್ಮನ ಕಾಂಬಲೆ ಎಡಿತ್ತವು. ಇಂಥವು ಏವುದೇ ಅಧ್ಯಯನ ಮಾಡದ್ದೆ ಸದಾ ಭಗವಂತನ ಅಂತರಂಗಲ್ಲಿ ಕಂಡುಗೊಂಡು ಭಗವಂತನ ಸೇರುತ್ತವು. ಅವಕ್ಕೆ ಜನ್ಮತಃ ಕೃಷ್ಣಪ್ರಜ್ಞೆ ಇರುತ್ತು. ಬ್ರಹ್ಮಾದಿ ಸಕಲ ದೇವತೆಗೊ, ದೇವಾಂಶ ಸಂಭೂತರು ಈ ರೀತಿ ಕಣ್ಮುಚ್ಚಿ ಭಗವಂತನ ಕಾಂಬಲೆ ಎಡಿಗಾವ್ತವು. ಇನ್ನು ಕೆಲವರು ಶುದ್ಧ ಆತ್ಮತತ್ವ ವಿಜ್ಞಾನಂದ ಮದಾಲು ಭಗವಂತನ ತಿಳಿತ್ತವು. ಜೀವವನ್ನೂ ಪರಮಾತ್ಮನನ್ನೂ ತಿಳಿವದೇ ಸಾಂಖ್ಯಯೋಗ. ಈ ರೀತಿ ಜ್ಞಾನಗಳುಸಿ, ಜ್ಞಾನಸ್ಫುರಣವ ಗಳುಸಿ, ಧ್ಯಾನದ ಮೂಲಕ ಇವು ಭಗವಂತನ ಕಂಡು ಭಗವಂತನ ಸೇರುತ್ತವು. ಮತ್ತೆ ಕೆಲವರು ತಮ್ಮ ನಿರಂತರ ನಿಷ್ಕಾಮಕರ್ಮಾನುಷ್ಠಾನಂದ ದೇಹಶುದ್ಧಿ ಸಾಧಿಸಿ ಅದರಿಂದ ಭಗವಂತನ ಒಲುಮೆಗೆ ಪಾತ್ರರಾಗಿ, ಜ್ಞಾನಗಳಿಸಿ, ಧ್ಯಾನಲ್ಲಿ ಭಗವಂತನ ಕಂಡು ಭಗವಂತನ ಸೇರುತ್ತವು.

ಶ್ಲೋಕ

ಅನ್ಯೇ ತ್ವೇವಮಜಾನಂತೋ ಶ್ರುತ್ವಾನ್ಯೇಭ್ಯ ಉಪಾಸತೇ ।
ತೇsಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾಃ ॥೨೫॥

ಪದವಿಭಾಗ

ಅನ್ಯೇ ತು ಏವಮ್ ಅಜಾನಂತಃ ಶ್ರುತ್ವಾ ಅನ್ಯೇಭ್ಯಃ ಉಪಾಸತೇ । ತೇ ಅಪಿ ಚ ಅತಿತರಂತಿ ಏವ ಮೃತ್ಯುಮ್ ಶ್ರುತಿ-ಪರಾಯಣಾಃ

ಅನ್ವಯ

ಅನ್ಯೇ ತು ಏವಮ್ ಅಜಾನಂತಃ ಅನ್ಯೇಭ್ಯಃ ಶ್ರುತ್ವಾ ಉಪಾಸತೇ, ತೇ ಶ್ರುತಿ-ಪರಾಯಣಾಃ ಚ ಅಪಿ ಮೃತ್ಯುಮ್ ಅತಿತರಂತಿ ಏವ ।

ಪ್ರತಿಪದಾರ್ಥ

ಅನ್ಯೇ ತು – ಇತರರಾದರೋ, ಏವಮ್ – ಹೀಂಗೆ, ಅಜಾನಂತಃ – ಅಧ್ಯಾತ್ಮ ಜ್ಞಾನ ಇಲ್ಲದ್ದೆ, ಅನ್ಯೇಭ್ಯಃ – ಬೇರೆಯೋರಿಂದ, ಶ್ರುತ್ವಾ – ಶ್ರವಣಮಾಡಿ (ಕೇಳಿ ತಿಳ್ಕೊಂಡು), ಉಪಾಸತೇ – ಉಪಾಸನೆಗೆ ತೊಡಗುತ್ತವು, ತೇ ಅಪಿ ಚ- ಅವ್ವೂ ಕೂಡ, ಶ್ರುತಿ-ಪರಾಯಣಾಃ – ಶ್ರವಣಲ್ಲಿ ನಿರತರಾದೋರು, ಮೃತ್ಯುಮ್ – ಮರಣವ, ಅತಿತರಂತಿ – ದಾಂಟುತ್ತವು, ಏವ – ಖಂಡಿತವಾಗಿಯೂ.

ಅನ್ವಯಾರ್ಥ

ಇನ್ನು ಕೆಲವರು, ಅಧ್ಯಾತ್ಮಜ್ಞಾನ ಇಲ್ಲದ್ದೋರು, ಇತರರಿಂದ ಅಧ್ಯಾತ್ಮ ವಿಷಯವ ಕೇಳಿ ತಿಳ್ಕೊಂಡು ಶ್ರವಣ ವಿಧಾನದ ಮೂಲಕ ತಮ್ಮ ಭಗವಂತನ ಉಪಾಸನೆಲಿ ತೊಡಗಿಸಿಗೊಳ್ಳುತ್ತವು. ಅವ್ವೂ ಕೂಡ ಈ ಶ್ರವಣಪ್ರವೃತ್ತಿಂದ ಮೃತ್ಯುಮಾರ್ಗವ ಖಂಡಿತವಾಗಿಯೂ ದಾಂಟುತ್ತವು.

ತಾತ್ಪರ್ಯ / ವಿವರಣೆ

ಈ ಶ್ಲೋಕ ಪ್ರಸಕ್ತ ಸಮಾಜಕ್ಕೆ ವಿಶೇಷವಾಗಿ ಅನ್ವಯ ಆವ್ತು. ಎಂತಕೆ ಹೇಳಿರೆ, ಆಧುನಿಕ ಸಮಾಜಲ್ಲಿ ಆಧ್ಯಾತ್ಮಿಕ ವಿಷಯಂಗಳಲ್ಲಿ ಶಿಕ್ಷಣವೇ ಇಲ್ಲೆ ಹೇಳ್ಳಕ್ಕು. ಕೆಲವರು ನಾಸ್ತಿಕರಾಗಿ ಅಥವಾ ಅಜ್ಞೇಯತಾವಾದಿಗಳಾಗಿ ಅಥವಾ ಈಗಾಣ ಭಾಷೆಲಿ ಹೇಳುತ್ತರೆ ‘ಬುದ್ಧಿಜೀವಿ’ ‘ತತ್ವಜ್ಞಾನಿ’ಗಳಾಗಿರುತ್ತವು. ಆದರೆ ವಾಸ್ತವವಾಗಿ ಅವಕ್ಕೆ ತತ್ವಜ್ಞಾನದ ಮೂಲ ತಿಳುವಳಿಕೆಯೇ ಇರ್ತಿಲ್ಲೆ. ಸಾಮಾನ್ಯ ಮನುಷ್ಯನ ವಿಷಯಲ್ಲಿ ಹೇಳ್ತದಾದರೆ, ಅವ° ಒಳ್ಳೆಯ ಮನುಷ್ಯನಾದರೆ ಇತರ ತಿಳುದೋರಿಂದ ಸತ್ಯವಿಷಯವ ಕೇಳಿ ತಿಳ್ಕೊಂಡು ಮುನ್ನೆಡವ ಸಾಧ್ಯತೆ ಇದ್ದು. ಇದಕ್ಕೆ ಶ್ರವಣ ವಿಧಾನ ಹೇಳ್ತದು. ಇದು ಈಗಾಣ ಕಾಲಲ್ಲಿ ಬಹುಮುಖ್ಯವಾದ್ದು. ಊಹಾತ್ಮಕ ಚಿಂತನೆಯ ಕೈಬಿಟ್ಟು, ಅಪಕ್ವ ವಾದಕ್ಕೆ ಮರುಳಾಗದ್ದೆ ಸತ್ಯಸಾಧನೆಲಿ ಮುನ್ನೆಡೆವ ಸಾಧಕರ ಮೂಲಕ ಕೇಳಿ, ಚರ್ಚಿಸಿ ಸ್ವಯಂಬುದ್ಧಿಯ ಉಪಯೋಗಿಸಿ ಜೀವನಲ್ಲಿ ತತ್ವವ ಅನುಸಂಧಾನ ಮಾಡಿಗೊಂಬದು ಅತೀ ಮುಖ್ಯ. ಏವುದೇ ವಿಷಯವ ಅಂತೇ ಕೇಳಿತ್ತು ಆಚರಣೆ ಮಾಡಿತ್ತು ಹೇಳಿ ಮಾಡುವದರಿಂದ ಎಂತ ಪ್ರಯೋಜನಕ್ಕೂ ಬತ್ತಿಲ್ಲೆ. ಮತ್ತೆ ಮತ್ತೆ ಸಂದೇಹ ಮತ್ತೆ ಸಂಧಿಗ್ಧ ಕ್ಲೇಶಂಗಳೇ ಮುಂದೆ ತಲೆದೋರುವದು. ಅದಕ್ಕಾಗಿ ತಿಳುದೋರಿಂದ ತಿಳ್ಕೊಳ್ಳೆಕು ಹೇಳಿ ಹೇಳುವದು. ಅದೇ ಸಮಯಲ್ಲಿ ತಿಳಿವಲ್ಲಿ ನಂಬಿಕೆ, ಶ್ರದ್ಧೆಯೂ ಮೂಲಭೂತವಾಗಿ ಇರೆಕು. ಪರಿಶುದ್ಧ ಮನಸ್ಕನಾಗಿ ಜ್ಞಾನದ ಆರ್ಜನೆಗೆ ತೊಡಗೆಕು. ಅಂಬಗ ಅದು ಮನಸ್ಸಿನಾಳಲ್ಲಿ ಸ್ಥಾಯಿಯಾಗಿ ಗಟ್ಟಿಯಾವ್ತು. ಅಶ್ರದ್ದೆಂದ ಅರ್ತದು ಮತ್ತೂ ಕ್ಲೇಶಕ್ಕೆ ಕಾರಣ ಆವ್ತು.

ಹೀಂಗೆ ಜನಸಾಮಾನ್ಯರು (ಅನ್ಯೇ ತೇ ) ಈ ಮದಲೆ ಹೇಳಿದ ಏವ ವಿಧಲ್ಲಿ ಸಾಧನೆ ಮಾಡ್ಳೆ ಎಡಿಗಾಗದ್ದವು ಇನ್ನೊಬ್ಬರಿಂದ (ವಸ್ತುಶಃ ಜ್ಞಾನಿಗಳಿಂದ) ಕೇಳಿ ತಿಳುದು ಸಾಧನೆಯ ಮೆಟ್ಳ ಏರ್ಲೆ ಸುರುಮಾಡುತ್ತವು. ಇದು ಸಾಧನೆಯ ಮಾರ್ಗದ ಅತ್ಯಂತ ಕೆಳಾಣ ಮೆಟ್ಳಾದರೂ , ಇವು ನಿರಂತರ ಶ್ರವಣ, ಮನನ, ನಿಧಿಧ್ಯಾಸಂದ, ಅಹಂಕಾರ ಇಲ್ಲದ್ದೆ ಜ್ಞಾನ ಸಂಪಾದಿಸಿ, ಆ ಜ್ಞಾನಂದ ಧ್ಯಾನಲ್ಲಿ ಭಗವಂತನ ಕಾಂಬಲಕ್ಕು. ಇದು ಸಾಮನ್ಯ ಮನುಷ್ಯರಿಂಗೆ ಭಗವಂತ° ತೋರುಸಿದ ಮೋಕ್ಷ ಮಾರ್ಗ. ಹೀಂಗೆ ಶ್ರವಣ ಮತ್ತು ಉಪಾಸನೆಂದ ಮೃತ್ಯುವಿನ ಗೆದ್ದು ಭಗವಂತನ ಶಾಶ್ವತ ಆನಂದ ಪ್ರಪಂಚವ ಸೇರ್ಲಕ್ಕು.

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 13 – SHLOKAS 19 – 25
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

 

One thought on “ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 19 – 25

  1. ಸೃಷ್ಟಿಯ ಕ್ರಿಯೆಯ ವಿವರಣೆ,ಆತ್ಮ-ಪರಮಾತ್ಮರ ಬ೦ಧ,ಪರಮಾತ್ಮಮನ ಕ೦ಡುಗೊ೦ಬ ವಿವಿಧ ಮಾರ್ಗ೦ಗೊ ಎಲ್ಲ ವಿವರವೂ ಸರಳ ,ಸು೦ದರವಾಗಿ ನಿರೂಪಣೆ ಆಯಿದು ಚೆನ್ನೈ ಭಾವ.
    ಧ್ಯಾನ,ಜ್ಞಾನ,ಕಾಯಕ – ಎಲ್ಲಾ ದಾರಿಗಳ ಗುರಿಯೊ೦ದೇ,ಪರಮಾತ್ಮನ ಕಾ೦ಬದು,ಲೀನ ಅಪ್ಪದು.
    ನಿ೦ಗಳ ನಿರ೦ತರ ಶ್ರಮಕ್ಕೆ ಅಡ್ಡ ಬೀಳ್ತೆ ಭಾವ.ಧನ್ಯವಾದ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×