Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 51 – 60

ಬರದೋರು :   ಚೆನ್ನೈ ಬಾವ°    on   30/05/2013    1 ಒಪ್ಪಂಗೊ

ಚೆನ್ನೈ ಬಾವ°

ಸ್ವಭಾವ ಸಹಜವಾದ ಕರ್ಮವ ನಿಷ್ಕಾಮಯುಕ್ತನಾಗಿ ಆಚರುಸುವುದು ಮೋಕ್ಷಸಾಧನೆಯ ದಾರಿ, ಅದರ ತಿಳಿವದೇ ಬ್ರಹ್ಮಜ್ಞಾನ, ಅದುವೇ ಆತ್ಮಸಾಕ್ಷಾತ್ಕಾರ ಹೇಳಿ ಭಗವಂತ° ಕಳುದವಾರದ ಭಾಗಲ್ಲಿ ಹೇಳಿದ್ದ°. ಜ್ಞಾನದ ಪರಿಪೂರ್ಣತೆ ಹೇಳಿರೆ ಪರಿಶುದ್ಧ ಕೃಷ್ಣಪ್ರಜ್ಞೆಯ ಪಡವದು. ಅದು ಪಡೆಯೇಕ್ಕಾರೆ ನಿತ್ಯ ಅನುಷ್ಠಾನಲ್ಲಿ ಆ ಪ್ರಜ್ಞೆ ಸದಾ ಇರೆಕು, ಆ ಪ್ರಜ್ಞೆಲಿಯೇ ಸಾಗುತ್ತಾ ಇರೆಕು. ಹಾಂಗೆ ಮುಂದುವರುದಲ್ಲಿ ಸಿದ್ಧಿಯ ಪ್ರಾಪ್ತಿ. ಹಾಂಗೆ ಸಿದ್ಧಿಯ ಪಡದಂವ° ಹೇಂಗೆ ಬ್ರಹ್ಮತತ್ವಲ್ಲಿ ಸೇರುತ್ತ° ಹೇಳ್ವದರ ಮುಂದೆ ಸಂಕ್ಷೇಪವಾಗಿ ಅರ್ಜುನಂಗೆ ಭಗವಂತ° ವಿವರುಸುತ್ತೆ ಹೇಳಿದಲ್ಯಂಗೆ ಕಳುದವಾರ ಶುದ್ದಿ ನಿಲ್ಸಿದ್ದದು. ಮುಂದೆ –

 

ಶ್ರೀಮದ್ಭಗವದ್ಗೀತಾ – ಅಷ್ಟಾದಶೋsಧ್ಯಾಯಃ – ಮೋಕ್ಷಸಂನ್ಯಾಸಯೋಗಃ – ಶ್ಲೋಕಾಃ – 51 – 60

 

ಶ್ಲೋಕ

ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ ।
ಶಬ್ದಾದೀನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ ॥೫೧॥BHAGAVADGEETHA

ವಿವಿಕ್ತಸೇವೀ ಲಘ್ವಾಶೀ ಯತವಾಕ್ಕಾಯಮಾನಸಃ ।
ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ॥೫೨॥

ಅಹಂಕಾರಂ ಬಲಂ ದರ್ಪ ಕಾಮಂ ಕ್ರೋಧಂ ಪರಿಗೃಹಮ್ ।
ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯ ಕಲ್ಪತೇ ॥೫೩॥

ಪದವಿಭಾಗ

ಬುದ್ಧ್ಯಾ ವಿಶುದ್ಧಯಾ ಯುಕ್ತಃ ಧೃತ್ಯಾ ಆತ್ಮಾನಮ್ ನಿಯಮ್ಯ ಚ । ಶಬ್ದಾದೀನ್ ವಿಷಯಾನ್ ತ್ಯಕ್ತ್ವಾ ರಾಗ-ದ್ವೇಷೌ ವ್ಯುದಸ್ಯ ಚ ॥

ವಿವಿಕ್ತ-ಸೇವೀ ಲಘು-ಆಶೀ ಯತ-ವಾಕ್-ಕಾಯ-ಮಾನಸಃ । ಧ್ಯಾನ-ಯೋಗ-ಪರಃ ನಿತ್ಯಮ್ ವೈರಾಗ್ಯಮ್ ಸಮುಪಾಶ್ರಿತಃ ॥

ಅಹಂಕಾರಮ್ ಬಲಮ್ ದರ್ಪಮ್ ಕಾಮಮ್ ಕ್ರೋಧಮ್ ಪರಿಗ್ರಹಮ್ । ವಿಮುಚ್ಯ ನಿರ್ಮಮಃ ಶಾಂತಃ ಬ್ರಹ್ಮ-ಭೂಯಾಯ ಕಲ್ಪತೇ ॥

ಅನ್ವಯ

ವಿಶುದ್ಧಯಾ ಬುದ್ಧ್ಯಾ ಯುಕ್ತಃ, ಧೃತ್ಯಾ ಆತ್ಮಾನಂ ನಿಯಮ್ಯ ಚ, ಶಬ್ದಾದೀನ್ ವಿಷಯಾನ್ ತ್ಯಕ್ತ್ವಾ, ರಾಗ-ದ್ವೇಷೌ ಚ ವ್ಯುದಸ್ಯ,

ವಿವಿಕ್ತ-ಸೇವೀ, ಲಘು-ಆಶೀ, ಯತ-ವಾಕ್-ಕಾಯ-ಮಾನಸಃ, ನಿತ್ಯಂ ಧ್ಯಾನ-ಯೋಗಃ ಪರಃ, ವೈರಾಗ್ಯಂ ಸಮುಪಾಶ್ರಿತಃ (ಚ),

ಅಹಂಕಾರಮ್, ಬಲಮ್, ದರ್ಪಮ್, ಕಾಮಮ್, ಕ್ರೋಧಮ್, ಪರಿಗ್ರಹಮ್ (ಚ) ವಿಮುಚ್ಯ, ನಿರ್ಮಮಃ, ಶಾಂತಃ (ನರಃ) ಬ್ರಹ್ಮ-ಭೂಯಾಯ ಕಲ್ಪತೇ ।

ಪ್ರತಿಪದಾರ್ಥ

ವಿಶುದ್ಧಯಾ – ಪೂರ್ಣಶುದ್ಧವಾದ, ಬುದ್ಧ್ಯಾ ಯುಕ್ತಃ – ಬುದ್ಧಿಂದ ನಿರತನಾದ, ಧೃತ್ಯಾ – ದೃಢ ನಿರ್ಧಾರಂದ, ಆತ್ಮಾನಮ್ ನಿಯಮ್ಯ – ತನ್ನ ನಿಯಂತ್ರಿಸಿಗೊಂಡು, ಚ – ಕೂಡ, ಶಬ್ದಾದೀನ್ ವಿಷಯಾನ್ – ಶಬ್ದ ಮೊದಲಾದ ಇಂದ್ರಿಯ ವಿಷಯಂಗಳ, ತ್ಯಕ್ತ್ವಾ – ತ್ಯಜಿಸಿ, ರಾಗ-ದೇಷೌ – ರಾಗ ದ್ವೇಷಂಗಳ (ಆಸಕ್ತಿ ದ್ವೇಷಂಗಳ), ಚ – ಕೂಡ, ವ್ಯುದಸ್ಯ – ಕರೇಂಗೆ ಮಡುಗಿ,
ವಿವಿಕ್ತ-ಸೇವೀ – ಏಕಾಂತಸ್ಥಳಲ್ಲಿ ವಾಸಿಸುವ, ಲಘು-ಆಶೀ – ಅತ್ಯಲ್ಪ ಅಹಾರ ಸೇವಿಸುವ, ಯತ-ವಾಕ್-ಕಾಯ-ಮಾನಸಃ – ನಿಯಂತ್ರಿತ ಮಾತು, ಶರೀರ, ಮನಸ್ಸುಗಳ ಮಡಿಕ್ಕೊಂಡು, ನಿತ್ಯಮ್ – ಸದಾ, ಧ್ಯಾನ-ಯೋಗಃ ಪರಃ – ಸಮಾಧಿಮಗ್ನನಾದ, ವೈರಾಗ್ಯಮ್ ಸಮುಪಾಶ್ರಿತಃ – ವೈರಾಗ್ಯವ ಆಶ್ರಯಿಸಿದ, (ಚ – ಕೂಡ),
ಅಹಂಕಾರಮ್ – ಅಹಂಕಾರವ, ಬಲಮ್ – ಮಿಥ್ಯಾಬಲವ, ದರ್ಪಮ್ – ಹುಸಿಗರ್ವವ, ಕಾಮಮ್ – ಕಾಮವ, ಪರಿಗ್ರಹಮ್ – ಐಹಿಕವಸ್ತುಗಳ ಸ್ವೀಕಾರವ, (ಚ – ಕೂಡ), ವಿಮುಚ್ಯ – ತ್ಯಜಿಸಿ, ನಿರ್ಮಮಃ – ಒಡೆತನದ ಭಾವನೆ ಇಲ್ಲದ್ದ, ಶಾಂತಃ – ಶಾಂತನಾದ, (ನರಃ – ಮನುಷ್ಯ°), ಬ್ರಹ್ಮ-ಭೂಯಾಯ ಕಲ್ಪತೇ – ಆತ್ಮಸಾಕ್ಷಾತ್ಕಾರಕ್ಕೆ (ಬಹ್ಮನ್ ಸ್ಥಿತಿಗೆ) ಅರ್ಹನಾವುತ್ತ° (ಆತ್ಮಸಾಕ್ಷಾರವ ಹೊಂದುತ್ತ°).

ಅನ್ವಯಾರ್ಥ

ಪೂರ್ಣಶುದ್ಧವಾದ ಬುದ್ಧಿಂದ ನಿರತನಾಗಿ, ದೃಢ ನಿರ್ಧಾರಂದ ತನ್ನ ನಿಯಂತ್ರಿಸಿಗೊಂಡು, ಶಬ್ದ ಮೊದಲಾದ ಇಂದ್ರಿಯ ವಿಷಯಂಗಳ ತ್ಯಜಿಸಿ, ರಾಗ ದ್ವೇಷಂಗಳ (ಆಸಕ್ತಿ ದ್ವೇಷಂಗಳ) ಕರೇಂಗೆ ಮಡುಗಿ, ಏಕಾಂತಸ್ಥಳಲ್ಲಿ ವಾಸಿಸುವ, ಅತ್ಯಲ್ಪ ಅಹಾರ ಸೇವಿಸುವ, ನಿಯಂತ್ರಿತ ಮಾತು, ಶರೀರ, ಮನಸ್ಸುಗಳ ಮಡಿಕ್ಕೊಂಡು, ಸದಾ ಸಮಾಧಿಮಗ್ನನಾದ, ವೈರಾಗ್ಯವ ಆಶ್ರಯಿಸಿದ, ಅಹಂಕಾರವ, ಮಿಥ್ಯಾಬಲವ, ಹುಸಿಗರ್ವವ, ಕಾಮವ, ಐಹಿಕವಸ್ತುಗಳ ಸ್ವೀಕಾರವ ತ್ಯಜಿಸಿ, ಒಡೆತನದ ಭಾವನೆ ಇಲ್ಲದ್ದ ಶಾಂತನಾದ ಮನುಷ್ಯ°, ಆತ್ಮಸಾಕ್ಷಾರವ ಹೊಂದುತ್ತ°.

ತಾತ್ಪರ್ಯ / ವಿವರಣೆ

ಬ್ರಹ್ಮನ್ ಸ್ಥಿತಿ ತಲುಪಲೆ ಎಂತ ಮಾಡೆಕು, ಯಾವ ನೆಲೆಲಿ ನಿಲ್ಲೆಕು ಹೇಳ್ವದರ ಭಗವಂತ° ಇಲ್ಲಿ ವಿವರಿಸಿದ್ದ°. ಆತ್ಮಸಾಕ್ಷಾತ್ಕಾರದ ಸ್ಥಿತಿಗೆ ನಿಶ್ಚಯವಾಗಿ ಏರುವಂವ° ಹೇಂಗಿರುತ್ತ° ಹೇಳಿರೆ – ಅಂವ ಬುದ್ಧಿಂದ ಪರಿಶುದ್ಧನಾಗಿರುತ್ತ°. ಧೃತಿಂದ ಮನಸ್ಸಿನ ನಿಯಂತ್ರುಸುತ್ತ°. ಇಂದ್ರಿಯ ತೃಪ್ತಿಯ ವಿಷಯಂಗಳ ಪೂರ್ಣವಾಗಿ ತ್ಯಜಿಸುತ್ತ°. ರಾಗದ್ವೇಷಂಗಳಿಂದ ಮುಕ್ತನಾಗಿರುತ್ತ°. ಏಕಾಂತಸ್ಥಳಲ್ಲಿ ವಾಸಮಾಡುತ್ತ°. ಅಲ್ಪಹಾರ ಮಾತ್ರವೇ ಸ್ವೀಕರುಸ್ತುತ್ತ°. ತನ್ನ ದೇಹ, ಮನಸ್ಸು ಮತ್ತೆ ವಾಕ್ ಸ್ವಾತಂತ್ರ್ಯವ ನಿಯಂತ್ರಿಸುತ್ತ°. ಸದಾ ಸಮಾಧಿಸ್ಥಿತಿಲಿ ಮಗ್ನನಾಗಿರುತ್ತ°. ಅಹಂಕಾರ, ದರ್ಪ, ಕಾಮ, ಕ್ರೋಧ ಮತ್ತೆ ಐಹಿಕ ಗಳಿಕೆಯ ಆಸಕ್ತಿಂದ ಮುಕ್ತನಾಗಿರುತ್ತ°. ಒಡೆತನದ ಭಾವನೆ ಇಲ್ಲದ್ದೆ ಪ್ರಶಾಂತ ಮನಸ್ಕನಾಗಿರುತ್ತ°.

ಬುದ್ಧಿಂದ ಪರಿಶುದ್ಧನಾದಂವ° ಸತ್ವಗುಣಲ್ಲಿ ಉಳಿತ್ತ°. ಮನಸ್ಸಿನ ಮತ್ತೆ ಇಂದ್ರಿಯಂಗಳ ಅರ್ಥಾತ್ ತನ್ನ ಸಂಪೂರ್ಣ ಹತೋಟಿಲಿ ಮಡಿಕ್ಕೊಂಡು ಮನಸ್ಸಿನ ಭಗವಂತನಲ್ಲಿ ಕೇಂದ್ರೀಕರಿಸಿ ಸದಾ ಧ್ಯಾನಮಗ್ನನಾಗಿ ಸಮಾಧಿಸ್ಥಿತಿಲಿ ಇರುತ್ತ°. ಹೀಂಗಿಪ್ಪ ಸ್ಥಿತಿಲಿ ಅವಂಗೆ ರಾಗದ್ವೇಷವಾಗಲಿ, ಕಾಮನೆಗೊ ಆಗಲೀ, ಅಥವಾ ಏನಾನ್ನಾರು ಐಹಿಕ ವಸ್ತು ವಿಷಯಂಗಳ ಗಳುಸೆಕು ಹೇಳ್ವ ಭಾವನೆಯೇ ಇರ್ತಿಲ್ಲಿ. ಅದರಿಂದ ಕಾಮ-ಕ್ರೋಧಂಗಳ ಗಾಳಿಯೇ ಅವನ ಹತ್ರ ಬೀಸುತ್ತಿಲ್ಲೆ. ಉಂಬಲೆ ತಿಂಬಲೆ ಇಂತದ್ದೇ ಆಯೇಕು ಹೇಳ್ವ ಇಚ್ಛೆ ಅವಂಗೆ ಇಲ್ಲೆ. ಅಲ್ಪಾಹಾರಲ್ಲಿ ತೃಪ್ತಿಯ ಕಾಣುತ್ತ°. ಬದುಕಿನ ದೈಹಿಕ ಪರಿಕಲ್ಪನೆ ಅವಂಗೆ ಇಲ್ಲೆ. ಹಾಂಗಾಗಿ ಅಹಂಕಾರವಾಗಲಿ, ದರ್ಪವಾಗಲಿ, ಕೋಪವಾಗಲಿ, ಇಲ್ಲದ್ದೆ  ಸದಾ ಭಗವಂತನ ಚಿಂತನೆಲಿ ನಿರತನಾದ ಅವನ ಮನಸ್ಸು ಪ್ರಶಾಂತವಾಗಿರುತ್ತು.
ಅಧ್ಯಾತ್ಮ ಸಾಧನೆಲಿ ನಮ್ಮ ಮನಸ್ಸು ಏವತ್ತೂ ಕೆಟ್ಟದ್ದರ ಯೋಚನೆ ಮಾಡ್ಳಾಗ. ಬುದ್ಧಿ ಸಂಪೂರ್ಣವಾಗಿ ಭಗವಂತನಲ್ಲಿ ನೆಲೆಗೊಳುಸಿ ಶುದ್ಧ ವಾಗಿರೆಕು. ಮನಸ್ಸಿನ ನಿಯಂತ್ರಿಸಿ, ಐಹಿಕ ವಿಚಾರಂಗಳ ಸಂಪೂರ್ಣವಾಗಿ ತ್ಯಜಿಸಿ, ಮನಸ್ಸಿನ ಕಲಂಕುಸುವ ಇಂದ್ರಿಯ ವಿಷಯಂಗಳಿಂದ ಮುಕ್ತನಾಗಿ, ಕೇಳುವ, ನೋಡುವ, ಮುಟ್ಟುವ, ಮೂಸುವ, ತಿಂಬ ಚಪಲಂದ ಪೂರ್ತಿ ಮುಕ್ತನಾಯೇಕು. ನಿರ್ಮಲ ಮನಸ್ಸು ಉಂಟಾಯೇಕು. ಆ ಸ್ಥಿತಿಲಿ ಪವಿತ್ರವಾದ ಏಕಾಂತ ಸ್ಥಳಲ್ಲಿದ್ದುಗೊಂಡು ಧ್ಯಾನಮಗ್ನನಾಯೇಕು. ನಿಯತ ಸಮಯಲ್ಲಿ ನಿಯತ ಆಹಾರ ಸೇವನೆ, ದೇಹದ ಚಟುವಟಿಕೆಗಳ ಮೇಲೆ ನಿಯಂತ್ರಣ, ಬಾಹ್ಯ ವಿಷಯಂಗಳ ಸಂಪೂರ್ಣವಾಗಿ ಮನಸ್ಸಿಂದ ತೊಲಗಿಸಿ ಧ್ಯಾನಮಗ್ನನಾಯೇಕು. ಹಾಂಗೇಳಿ ಎಲ್ಲವನ್ನೂ ಬಿಟ್ಟು ಹೋಯೇಕು ಹೇಳಿ ಹೇಳಿದ್ದಲ್ಲ. ಎಲ್ಲವುದರ ಒಟ್ಟಿಂಗೆ ಇದ್ದುಗೊಂಡು ಯಾವುದನ್ನೂ ಅಂಟಿಸಿಗೊಳ್ಳದ್ದೆ ನಿರ್ಲಿಪ್ತ ಭಾವನೆಂದ ಇರೆಕು. ಅಷ್ಟಪ್ಪಗ ಅಹಂಕಾರ, ಗರ್ವ, ಕಾಮ, ಕೋಪ ಬುದ್ಧಿಂದ ದೂರ ಉಳಿತ್ತು. ಮನಸ್ಸಿನ ಸಂಪೂರ್ಣವಾಗಿ ಭಗವಂತನಲ್ಲಿ ಕೇಂದ್ರೀಕರಿಸಿ ಭಗವಂತನ ಚಿಂತನೆಗೆ ಆಳವಾಗಿ ಇಳುದರೆ ಭಗವಂತನಲ್ಲಿ ಮನಸ್ಸು ನೆಲೆಗೊಳ್ಳುತ್ತು. ಆನು ಎನ್ನದು ಹೇಳ್ವ ಎಲ್ಲ ಮಮಕಾರವ ಬಿಟ್ಟು, ಮನಸ್ಸಿನ ಸಂಪೂರ್ಣವಾಗಿ ಭಗವಂತನಲ್ಲಿ ಏಕಾಗ್ರ ಮಾಡುವದರಿಂದ ಬ್ರಹ್ಮತತ್ವವ ಸೇರ್ಲಕ್ಕು.

ಶ್ಲೋಕ

ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ ।
ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್ ॥೫೪॥

ಪದವಿಭಾಗ

ಬ್ರಹ್ಮ-ಭೂತಃ ಪ್ರಸನ್ನ-ಆತ್ಮಾ ನ ಶೋಚತಿ ನ ಕಾಂಕ್ಷತಿ । ಸಮಃ ಸರ್ವೇಷು ಭೂತೇಷು ಮತ್-ಭಕ್ತಿಮ್ ಲಭತೇ ಪರಾಮ್ ॥

ಅನ್ವಯ

ಬ್ರಹ್ಮ-ಭೂತಃ ಪ್ರಸನ್ನ-ಆತ್ಮಾ (ಸನ್) ನ ಶೋಚತಿ, ನ ಕಾಂಕ್ಷತಿ (ಚ) । (ಸಃ),  ಸರ್ವೇಷು ಭೂತೇಷು ಸಮಃ (ಭೂತ್ವಾ) ಪರಾಂ ಮತ್-ಭಕ್ತಿಂ ಲಭತೇ ।

ಪ್ರತಿಪದಾರ್ಥ

ಬ್ರಹ್ಮ-ಭೂತಃ – ಪರಮೋನ್ನತದೊಂದಿಂಗೆ ಒಂದಾದವ° (ಬ್ರಹ್ಮನ್’ಲಿ ಒಂದಾದವ°), ಪ್ರಸನ್ನ-ಆತ್ಮಾ  (ಸನ್) – ಪೂರ್ಣ ಆನಂದಮಯನಾಗಿದ್ದುಗೊಂಡು, ನ ಶೋಚತಿ – ಎಂದೂ ದುಃಖಿಸುತ್ತನಿಲ್ಲೆ, ನ ಕಾಂಕ್ಷತಿ (ಚ) – ಏನನ್ನೂ ಬಯಸ್ಸುತ್ತನಿಲ್ಲೆ ಕೂಡಾ, ( ಸಃ – ಅಂವ°),  ಸರ್ವೇಷು ಭೂತೇಷು – ಎಲ್ಲ ಜೀವಿಗಳಲ್ಲಿ, ಸಮಃ (ಭೂತ್ವಾ) – ಸಮಾನ ಭಾವವುಳ್ಳವವನಾಗಿ, ಪರಾಮ್ – ದಿವ್ಯವಾದ, ಮತ್-ಭಕ್ತಿಮ್ – ಎನ್ನ ಭಕ್ತಿಸೇವೆಯ, ಲಭತೇ – ಪಡೆತ್ತ°.

ಅನ್ವಯಾರ್ಥ

ಹೀಂಗೆ ಪರಮೋನ್ನತಲ್ಲಿ ಒಂದಾದಂವ° (ಸಂಪೂರ್ಣ ಆಧ್ಯಾತ್ಮಿಕ ನೆಲೆಲಿ ನಿಂದಂವ°) (ಬಹ್ಮನ್ ಸಾಕ್ಷಾತ್ಕಾರವಾಗಿ), ಸಂಪೂರ್ಣ ಆನಂದಮಯ ಸ್ಥಿತಿಲಿರುತ್ತ°. ಅಂವ ಎಂತದಕ್ಕೂ ದುಃಖಿಸುತ್ತನಿಲ್ಲೆ, ಏನನ್ನೂ ಬಯಸುತ್ತನಿಲ್ಲೆ. ಅಂವ ಸಮಸ್ತವುಗಳಲ್ಲಿಯೂ ಸಮಾನ ಭಾವವುಳ್ಳವಂವನಾಗಿ, ದಿವ್ಯವಾದ ಎನ್ನ ಭಕ್ತಿಸೇವೆಯ (ಸೌಖ್ಯವ) ಪಡೆತ್ತ°.

ತಾತ್ಪರ್ಯ / ವಿವರಣೆ

ಮನಸ್ಸು ಸಂಪೂರ್ಣವಾಗಿ ಭಗವಂತನಲ್ಲಿ ನೆಲೆಗೊಂಡು (ಸಂಪೂರ್ಣ ಕೃಷ್ಣಪ್ರಜ್ಞಾ ಸ್ಥಿತಿಲಿ) ಇಪ್ಪ ಮನುಷ್ಯಂಗೆ ಆತ್ಮಸಾಕ್ಷಾತ್ಕಾರದ ಅನುಭವ ಉಂಟಾವ್ತು. ಬ್ರಹ್ಮನ್’ಲಿ ಅವನ ಮನಸ್ಸು ಲೀನವಾಗಿರುತ್ತು. ಅಂವ ಅದರ್ಲಿ ಸಂಪೂರ್ಣ ಸಂತೋಷ / ಆನಂದವ ಸವಿಯುತ್ತ°. ಅದಕ್ಕೆ ಸಮಾನವಾದ ಸುಖ ಇನ್ನೊಂದಿಲ್ಲೆ. ಅವನ ಮನಸ್ಸು ಸಂಪೂರ್ಣ ಸ್ವಚ್ಛವಾಗಿರುತ್ತು. ಆ ಸ್ಥಿತಿಲಿ ಅವಂಗೆ ಈ ಪ್ರಪಂಚದ ಯಾವುದೇ ವಿಷಯಲ್ಲಿ ಆಸೆ/ಮೋಹ/ರಾಗ/ದ್ವೇಷ/ದುಃಖಂಗೊ ಇರ್ತಿಲ್ಲೆ.  ಈ ಸ್ಥಿತಿಲಿ ಅಂವ° ಭಗವಂತನಲ್ಲಿ ಸರ್ವೋತ್ಕೃಷ್ಟ ಭಕ್ತಿಯ ಬೆಳಶುತ್ತ°. ಗುಣಪೂರ್ಣನಾದ ಭಗವಂತ° ಅವಂಗೆ ಪ್ರಪಂಚದ ಪ್ರತಿಯೊಂದರಲ್ಲಿಯೂ ಕಾಣಿಸುತ್ತ°. ಹಾಂಗಾಗಿ ಯಾವ ವಸ್ತು ವಿಷಯಲ್ಲಿಯೂ ತಾರತಮ್ಯವ ಕಾಣದ್ದೆ ಸಮಾನ ಭಾವವುಳ್ಳವವನಾಗಿ ಆ ಸಚ್ಚಿದಾನಂದ° ಚಿನುಮಯನ  ಭಕ್ತಿಲಿ ತೃಪ್ತಿಯ ಕಾಣುತ್ತ°.

ಶ್ಲೋಕ

ಭಕ್ತ್ಯಾ ಮಾಮಭಿಜಾನಾತಿ ಯಾವಾನ್ಯಶ್ಚಾಸ್ಮಿ ತತ್ತ್ವತಃ ।
ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನಂತರಂ ॥೫೫॥

ಪದವಿಭಾಗ

ಭಕ್ತ್ಯಾ ಮಾಮ್ ಅಭಿಜಾನಾತಿ ಯಾವನ್ ಯಃ ಚ ಅಸ್ಮಿ ತತ್ತ್ವತಃ । ತತಃ ಮಾಮ್ ತತ್ತ್ವತಃ ಜ್ಞಾತ್ವಾ ವಿಶತೇ ತತ್ ಅನಂತರಮ್ ॥

ಅನ್ವಯ

ಯಾವನ್ ಯಃ ಚ ಅಸ್ಮಿ,  ಮಾಂ ತತ್ತ್ವತಃ ಭಕ್ತ್ಯಾ ಅಭಿಜಾನಾತಿ, ತತಃ ತತ್ತ್ವತಃ ಮಾಂ ಜ್ಞಾತ್ವಾ ತತ್ ಅನಂತರಂ (ಮಾಮ್) ವಿಶತೇ ।

ಪದವಿಭಾಗ

ಯಾವನ್ – ಸಾಧ್ಯ ಇಪ್ಪಷ್ಟು (ಎಡಿಗಾಷ್ಟು), ಯಃ ಚ ಅಸ್ಮಿ – ಆನಿಪ್ಪಾಂಗೆ, ಮಾಮ್ – ಎನ್ನ, ತತ್ತ್ವತಃ – ಸತ್ಯಂದ, ಭಕ್ತ್ಯಾ – ಶುದ್ಧವಾದ ಭಕ್ತಿಂದ (ಭಕ್ತಿಸೇವೆಂದ), ಅಭಿಜಾನಾತಿ – ತಿಳಿತ್ತ°, ತತಃ – ಮತ್ತೆ (ಆನಂತರ), ತತ್ತ್ವತಃ – ಸತ್ಯಂದ, ಮಾಮ್ ಜ್ಞಾತ್ವಾ – ಎನ್ನ ತಿಳುದು (ಅರ್ತು), ತತ್ ಅನಂತರಮ್ – ಆ ಮತ್ತೆ, (ಮಾಮ್ – ಎನ್ನ), ವಿಶತೇ – ಪ್ರವೇಶಿಸುತ್ತ°.

ಅನ್ವಯಾರ್ಥ

(ಮನುಷ್ಯ°) ಶುದ್ಧವಾದ ಭಕ್ತಿಸೇವೆಂದ ಎಡಿಗಾಷ್ಟು ಮಟ್ಟಿಂಗೆ (ಸಾಧ್ಯ ಇಪ್ಪಷ್ಟು) ಎನ್ನ ಆನಿಪ್ಪಾಂಗೆ ತತ್ವರೀತಿಲಿ (ಸತ್ಯಂದ) ಅರ್ಥಮಾಡಿಗೊಳ್ಳುತ್ತ°. (ಅಭಿಜಾನಾತಿ). ಮತ್ತೆ ಸತ್ಯಂದ (ಕೃಷ್ಣಪ್ರಜ್ಞೆಂದ) ಎನ್ನ ಯಥಾರ್ಥವಾಗಿ ತಿಳಿತ್ತ°. ಆ ಬಳಿಕ ಎನ್ನ ವಸ್ತುನಿಷ್ಠವಾಗಿ / ಸರಿಯಾಗಿ ಅರ್ತು ಎನ್ನ ಪ್ರವೇಶಿಸುತ್ತ°.

ತಾತ್ಪರ್ಯ / ವಿವರಣೆ

ಭಗವಂತ° – ಮಹಾಮಹಿಮ°. ಭಗವಂತನ ವಿಷಯವ ತಿಳುದಷ್ಟೂ ಮತ್ತೂ ಮತ್ತೂ ಆಳವಾಗಿ ತಿಳಿವಲೇ ಇಪ್ಪದು. ಅದಕ್ಕೆ ಕೊನೆ ಇಲ್ಲೆ. ಅವನ ಚಿಂತನೆಲಿ ಆಳ ಆಳಕ್ಕೆ ಹೋದಷ್ಟೂ ಮತ್ತೂ ಮತ್ತೂ ಅವನ ಯಥಾರ್ಥವ ಸತ್ಯರೂಪಲ್ಲಿ ತಿಳಿವಲಕ್ಕು. ಅವನ ಸಂಪೂರ್ಣವಾಗಿ ಅರ್ಥಮಾಡಿಗೊಂಬಲೆ ಆರಿಂದಲೂ ಸಾಧ್ಯ ಇಲ್ಲೆ. ಅಂದರೂ ಅವನಲ್ಲೇ ಸಂಪೂರ್ಣ ನಂಬಿಕೆ ಮಡಿಗಿರೆ ನಮ್ಮ ಸ್ವಭಾವಕ್ಕೆ ತಕ್ಕಾಂಗೆ ನಮ್ಮ ಯೋಗ್ಯತೆಗನುಸಾರವಾಗಿ ಅವನ ತಿಳಿವಲೆ ಪ್ರಯತ್ನಿಸಲಕ್ಕು. ಅದನ್ನೇ ಭಗವಂತ° ಇಲ್ಲಿ ಹೇಳಿದ್ದದು ‘ಯಾವನ್’ ಹೇಳಿರೆ – ಯಾವತ್ ಶಕ್ಯಂ. ಅರ್ಥಾತ್ – ನಮ್ಮಿಂದ ಎಷ್ಟು ಎಡಿತ್ತೋ ಅಷ್ಟು ಅವನ ಮದಾಲು ತಿಳ್ಕೊಂಡು ಅವನಲ್ಲಿ ಮನಸ್ಸಿನ ಕೇಂದ್ರೀಕರಿಸಿ ಭಕ್ತಿ ಸೇವೆಂದ ಅವನ ಆರಾಧಿಸಿರೆ ಸಾಧನೆಂದ ಭಗವಂತನ ಮಹಿಮೆಯ ಜ್ಞಾನವ ಪಡವಲಕ್ಕು. ಆ ಜ್ಞಾನಂದ ಮತ್ತೆ ಮನಸ್ಸು ಸಂಪೂರ್ಣವಾಗಿ ಅವನಲ್ಲೇ ಕೇಂದ್ರೀಕರಿಸಿ ಸಾಧನೆಯ ಮುಂದುವರಿಸಿದರೆ ಕಡೇಂಗೆ ಆ ಬ್ರಹ್ಮತತ್ವವ ಪ್ರವೇಶಿಸಲೆ ಎಡಿಗು. ಇನ್ನು ಭಗವಂತನ ಯಾವ ರೀತಿಲಿ ತಿಳಿಯೆಕು ಹೇಳಿಯೂ ಭಗವಂತ° ಇಲ್ಲಿ ಸೂಚಿಸಿದ್ದ°-  ‘ಯಃ ಚ ಅಸ್ಮಿ’ – ಆನು ಆರು ಆಗಿದ್ದನೋ (ಆನಿಪ್ಪಾಂಗೆ), ಅದರ ‘ತತ್ತ್ವತಃ’ – ಸತ್ಯವಾಗಿ / ಯಥಾರ್ಥವಾಗಿ ತಿಳಿಯೇಕ್ಕಾದ್ದು ಮುಖ್ಯ. ಆದರೆ ಇದು ಹೇಂಗೆ ಸಾಧ್ಯ. ಆದಿಪುರುಷ°, ಪರಮೋನ್ನತನಾಗಿಪ್ಪ ಆ ಭಗವಂತನ ನವಗೆ ಎಷ್ಟು ತಿಳಿವಲೆ ಎಡಿಗು?!. ಅವನ ಮೂಲ ಎಲ್ಲಿ, ಕೊನೆ ಎಲ್ಲಿ ಹೇಳ್ವದಕ್ಕೆ ಮಿತಿಯೇ ಇಲ್ಲೆ. ಹಾಂಗಿದ್ದರೂ ಸಾಧನೆಲಿ ತೊಡಗುವಂವ° ಭಗವಂತನ ‘ಯಾವನ್’ ತನಗೆ ಎಡಿಗಪ್ಪಷ್ಟು ತಿಳಿವಲೆ ಪ್ರಯತ್ನಿಸುತ್ತ°. ಆ ಬಳಿಕ ಹಂತಹಂತವಾಗಿ ಅವನಲ್ಲಿ ಭಕ್ತಿಯ ನೆಲೆಗೊಳುಸಿ, ಮನಸ್ಸಿನ ಸ್ಥಿರಗೊಳುಸಿ, ಸಂಪೂರ್ಣ ಕೃಷ್ಣಪ್ರಜ್ಞೆಲಿ ಭಕ್ತಿಸೇವೆಯ ಮೂಲಕ ಭಗವಂತನ ಅರ್ತು ಅಕೇರಿಗೆ ಅವನ ಹೊಂದಲಕ್ಕು. ಹೀಂಗೆ ಅವನಲ್ಲೇ ಸಂಪೂರ್ಣ ಮನಸ್ಸಿನ ಮಡಿಕ್ಕೊಂಡು ಮನುಷ್ಯ° ಮುಂದುವರ್ಕೊಂಡು ಹೋದರೆ ಅಕೇರಿಗೆ ಭಗವಂತನ – ‘ವಿಶತೇ’  – ಪ್ರವೇಶಿಸುತ್ತ°, ಹೇಳಿರೆ- ಬ್ರಹ್ಮತತ್ವವ ಪ್ರವೇಶಿಸುತ್ತ°. / ಭಗವಂತನ ಸೇರುತ್ತ°.

ಶ್ಲೋಕ

ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ರಯಃ ।
ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್ ॥೫೬॥

ಪದವಿಭಾಗ

ಸರ್ವ-ಕರ್ಮಾಣಿ ಅಪಿ ಸದಾ ಕುರ್ವಾಣಃ ಮತ್-ವ್ಯಪಾಶ್ರಯಃ । ಮತ್-ಪ್ರಸಾದಾತ್ ಅವಾಪ್ನೋತಿ ಶಾಶ್ವತಮ್ ಪದಮ್ ಅವ್ಯಯಮ್ ॥

ಅನ್ವಯ

ಮತ್-ವ್ಯಪಾಶ್ರಯಃ ಸದಾ ಸರ್ವ-ಕರ್ಮಾಣಿ ಅಪಿ ಕುರ್ವಾಣಃ, ಮತ್-ಪ್ರಸಾದಾತ್ ಶಾಶ್ವತಮ್ ಅವ್ಯಯಂ ಪದಮ್ ಅವಾಪ್ನೋತಿ ।

ಪ್ರತಿಪದಾರ್ಥ

ಮತ್-ವ್ಯಪಾಶ್ರಯಃ – ಎನ್ನ ಆಶ್ರಯಲ್ಲಿ, ಸದಾ – ನಿತ್ಯ/ಏವತ್ತೂ, ಸರ್ವ-ಕರ್ಮಾಣಿ ಅಪಿ – ಎಲ್ಲ ಕರ್ಮಂಗಳನ್ನೂ, ಕುರ್ವಾಣಃ – ಮಾಡಿಗೊಂಡು (ಆಚರಿಸಿಗೊಂಡು), ಮತ್-ಪ್ರಸಾದಾತ್ – ಎನ್ನ ಅನುಗ್ರಹಂದ, ಶಾಶ್ವತಮ್ – ಶಾಶ್ವತವಾದ, ಅವ್ಯಯಮ್ – ಅವಿನಾಶಿಯಾದ, ಪದಮ್ – ಧಾಮವ, ಅವಾಪ್ನೋತಿ – ಹೊಂದುತ್ತ°.

ಅನ್ವಯಾರ್ಥ

( ಎನ್ನ ಪರಿಶುದ್ಧ ಭಕ್ತ° )  ಎನ್ನ ರಕ್ಷಣೆಲಿ (ಆಶ್ರಯಲ್ಲಿ) ನಿತ್ಯ ಎಲ್ಲಾ ಕರ್ಮಂಗಳನ್ನೂ (ಚಟುವಟಿಕೆಗಳನ್ನೂ/ ವ್ಯವಹಾರಂಗಳನ್ನೂ) ಮಾಡಿಗೊಂಡು ಎನ್ನ ಕೃಪೆಂದ ಶಾಶ್ವತವಾದ, ಅವಿನಾಶಿಯಾದ, ದಿವ್ಯವಾದ ಧಾಮವ ಸೇರುತ್ತ°.

ತಾತ್ಪರ್ಯ / ವಿವರಣೆ

ಈ ಮದಲೇ ಹೇಳಿಪ್ಪಾಂಗೆ ಸಾಧನೆಲಿ ತೊಡಗುವದು ಹೇಳಿರೆ ಎಲ್ಲವನ್ನೂ ಬಿಟ್ಟು ಕಾಡಿಂಗೆ ಹೋಗಿ ತಪಸ್ಸಿಲ್ಲಿ ಕೂಬದು ಅಲ್ಲ. ಎಲ್ಲವುದರ ಒಟ್ಟಿಂಗೆ ಇದ್ದುಗೊಂಡು ಏವುದನ್ನೂ ಅತಿಯಾಗಿ ಅಂಟಿಸಿಗೊಳ್ಳದ್ದೆ, ಆತ್ಮಸಂಯಮಲ್ಲಿದ್ದುಗೊಂಡು, ನಿತ್ಯವ್ಯವಹಾರವ ಮಾಡಿಗೊಂಡು, ಸದಾ ಭಗವಂತನ ಪ್ರಜ್ಞೆಲಿ ಬದುಕುವದೇ ಸಾಧನೆ. ಹಾಂಗಾಗಿ ಭಗವಂತ° ಇಲ್ಲಿ ಒತ್ತಿ ಹೇಳಿದ್ದದು – ‘ಸರ್ವ ಕರ್ಮಾನಿ ಅಪಿ ‘ – ಎಲ್ಲ ಕರ್ಮಂಗಳನ್ನೂ ಕೂಡ ಹೇಳಿ. ಎಲ್ಲವನ್ನೂ ಬಿಟ್ಟು ಹೇಳಿ ಅಲ್ಲ, ಎಲ್ಲವನ್ನೂ ಮಾಡಿಗೊಂಡು ಭಗವಂತನ ಸೇವೆ ಹೇಳಿ ಸಂಪೂರ್ಣ ಕೃಷ್ಣಪ್ರಜ್ಞೆಲಿ ಸ್ವಭಾವ ಸಹಜ ಕರ್ಮವ ಮಾಡುವದೇ ನಿಜವಾದ ಸಾಧನೆ. ಇದು ಎಲ್ಲರಿಂದಲೆ ಎಡಿಗಪ್ಪ ಕಾರ್ಯ ಅಲ್ಲ. ಮೊತ್ತಮೊದಲಾಗಿ ಅದಕ್ಕೆ ಭಗವಂತನ ಕರುಣೆ / ಆಶ್ರಯ ಬೇಕು. ಭಗವಂತನ ಆಶ್ರಯ ಸಿಕ್ಕೆಕ್ಕಾರೆ ಅವನಲ್ಲಿ ಅಚಲವಾದ ಶ್ರದ್ಧಾಭಕ್ತಿ ಇರೆಕು. ಮನಸ್ಸು ಪರಿಶುದ್ಧವಾಗಿರೆಕು. ಮತ್ತೆ ಲಕ್ಷ್ಯವೂ ಆ ಭಗವಂತನೇ ಆಗಿರೆಕು. ಅಷ್ಟಪ್ಪಗ ಅವನ ಕಾರ್ಯವ ಮುಂದುವರುಸಲೆ ಭಗವಂತನೇ ದಾರಿ ತೋರುಸುತ್ತ°. ಅವನ ಆಶ್ರಯಲ್ಲಿ ಸಾಧಕಂಗೆ ಮುನ್ನೆಡವಲೆ ಸಾಧ್ಯ. ಭಗವಂತನೇ ಸರ್ವಸ್ವ ಹೇಳಿ ಭಗವಂತನನ್ನೇ ಗುರಿಯನ್ನಾಗಿರಿಸಿ ಕರ್ಮವ ಮಾಡಿರೆ ಭಗವಂತನ ಕೃಪಾದೃಷ್ಟಿಗೆ ಪಾತ್ರನಾಗಿ, ಅವನ ಕರುಣಾಪ್ರಸಾದಂದ ಸಾಧಕ°  ಅಕೇರಿಗೆ ಅವ್ಯಯವಾದ, ಶಾಶ್ವತವಾದ ಅವನ ಆ ದಿವ್ಯವಾದ ಶಾಂತಿಧಾಮವ ಸೇರ್ಲಕ್ಕು.

ಶ್ಲೋಕ

ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಃ ।
ಬುದ್ಧಿಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ ॥೫೭॥

ಪದವಿಭಾಗ

ಚೇತಸಾ ಸರ್ವ-ಕರ್ಮಾಣಿ ಮಯಿ ಸಂನ್ಯಸ್ಯ ಮತ್-ಪರಃ । ಬುದ್ಧಿ-ಯೋಗಮ್ ಉಪಾಶ್ರಿತ್ಯ ಮತ್-ಚಿತ್ತಃ ಸತತಮ್ ಭವ ॥

ಅನ್ವಯ

(ತ್ವಂ) ಸರ್ವ-ಕರ್ಮಾಣಿ ಚೇತಸಾ ಮಯಿ ಸಂನ್ಯಸ್ಯ, ಮತ್-ಪರಃ (ಸನ್), ಬುದ್ಧಿ-ಯೋಗಮ್ ಉಪಾಶ್ರಿತ್ಯ, ಸತತಂ ಮತ್-ಚಿತ್ತಃ ಭವ ।

ಪ್ರತಿಪದಾರ್ಥ

(ತ್ವಮ್ – ನೀನು), ಸರ್ವ-ಕರ್ಮಾಣಿ – ಎಲ್ಲ  ಕರ್ಮಂಗಳ (ಕಾರ್ಯಂಗಳ/ ಕೆಲಸವ), ಚೇತಸಾ – ಬುದ್ಧಿಪೂರ್ವಕವಾಗಿ, ಮಯಿ ಸಂನ್ಯಸ್ಯ – ಎನ್ನಲ್ಲಿ ಬಿಟ್ಟು, ಮತ್-ಪರಃ (ಸನ್) – ಎನ್ನ ಆಶ್ರಯಲ್ಲಿದ್ದವನಾಗಿದ್ದು (ರಕ್ಷಣೆಲಿಪ್ಪವಂವನಾಗಿದ್ದುಗೊಂಡು), ಬುದ್ಧಿ-ಯೋಗಮ್ – ಭಕ್ತಿಕಾರ್ಯವ, ಉಪಾಶ್ರಿತ್ಯ – ಆಶ್ರಯಿಸಿ, ಸತತಮ್ – ಏವತ್ತೂ (ಸದಾ ಕಾಲ), ಮತ್-ಚಿತ್ತಃ ಭವ – ಎನ್ನ ಪ್ರಜ್ಞೆಲಿ ಇಪ್ಪವವನಾಗು.

ಅನ್ವಯಾರ್ಥ

ನೀನು ಎಲ್ಲ ಕರ್ಮವ (ಚಟುವಟಿಕೆಗಳ) ಬುದ್ಧಿಪೂರ್ವಕವಾಗಿ ಎನ್ನಲ್ಲಿ ಬಿಟ್ಟು, ಎನ್ನ ಅವಲಂಬಿಸಿ ಎನ್ನ ಆಶ್ರಯಲ್ಲಿಪ್ಪವಂವನಾಗಿದ್ದುಗೊಂಡವನಾಗಿ ಸದಾ ಭಕ್ತಿಸೇವಾಕಾರ್ಯಲ್ಲಿ ತಲ್ಲೀನನಾಗಿಪ್ಪವನಾಗಿ ಸದಾ ಎನ್ನ ಪ್ರಜ್ಞೆಲಿ ಇಪ್ಪವಂವನಾಗು.

ತಾತ್ಪರ್ಯ / ವಿವರಣೆ

ಭಗವಂತ ಅರ್ಜುನಂಗೆ ಕಿವಿಮಾತು ಮೂಲಕ ಅಭಯವ ಹೇಳುತ್ತ°- ಎನ್ನ ಬುದ್ಧಿಪೂರ್ವಕವಾಗಿ ಅರ್ತುಗೊಂಡು, ಎನ್ನ ಸಂಪೂರ್ಣವಾಗಿ ನಂಬಿ, ಮನಸ್ಸಿನ ಎನ್ನಲ್ಲಿ ನಿರಂತರ ಕೇಂದ್ರೀಕರಿಸಿ, ಎಲ್ಲ ಕರ್ಮವ ಎನಗೆ ಅರ್ಪುಸುವವನಾಗಿ ಇರು. ಇಲ್ಲಿ ನಾವು (ಸಾಧಕ°) ಮಾಡ್ತ ಕೆಲಸ ಹೇಂಗಿರೆಕು ಹೇಳಿ ಭಗವಂತ° ಹೇಳಿದಾಂಗೆ ಆತು. ನಾವು ಮಾಡುವ ಸಕಲ ಕರ್ಮವ ಭಗವದ್ ಪ್ರಜ್ಞೆಂದ ಭಗವಂತಂಗೆ ಅರ್ಪಿಸಿ ಮಾಡೆಕು ಹೇಳ್ವದು ಬಹುಮುಖ್ಯ ವಿಚಾರ. ಇಂದ್ರಾಣ ದಿನಲ್ಲಿ ಹೀಂಗಿರ್ತ ಕಾರ್ಯ ಇಲ್ಲವೇ ಆಗಿ ಹೋಯ್ದು. ಇದಕ್ಕೆ ಮೂಲ ಕಾರಣ ಅಜ್ಞಾನ. ನಾವು ಮಾಡ್ತ ಪೂಜೆ ಫಲದ ಅಪೇಕ್ಷೆಂದ. ಸಂಪೂರ್ಣ ಸಾತ್ವಿಕ ಭಾವ ಈಗ ಕಾಂಬಲೆ ಇಲ್ಲೆ. ಸಾಧನೆಲಿ ಸಾಧಿಸೆಕು ಹೇಳಿ ಆದರೆ ಮನಸ್ಸು ಪ್ರಶಾಂತವಾಗಿರೆಕು. ಮನಸ್ಸು ಪ್ರಸನ್ನವಾಗಿರೆಕಾರೆ ಐಹಿಕ ಏವುದರಲ್ಲಿಯೂ ಮೋಹ ಇಪ್ಪಲಾಗ. ಭಗವಂತನಲ್ಲಿ ಮನಸ್ಸು ನೆಲೆಗೊಳ್ಳೆಕು. ಭಗವಂತನ ಜ್ಞಾನ ಪ್ರಜ್ಞಾಪೂರ್ವಕವಾಗಿರೆಕು.

ಬನ್ನಂಜೆಯವು ಈ ಹಂತಲ್ಲಿ ಒಂದು ಉದಾಹರಣೆಯ ಹೇಳ್ತವು – ನಮ್ಮ ಕರ್ಮಲ್ಲಿ/ ಭಕ್ತಿಲಿ ಅಜ್ಞಾನ ಸಾಕಷ್ಟು ತುಂಬಿಗೊಂಡಿದ್ದು. ಇದರಿಂದಾಗಿ ನಿಜವಾದ ಆಧ್ಯಾತ್ಮಿಕ ಸಾಧನೆ  ಆವ್ತಿಲ್ಲೆ. ನಾವು ಮಾಡ್ತ ಪೂಜೆ ಪುರಸ್ಕಾರ ಯಜ್ಞ ಯಾಗಂಗೊ ಎಲ್ಲವೂ ಏವುದೋ ಒಂದು ಫಲದ ಅಪೇಕ್ಷೆಂದ ಆವ್ತಾ ಇದ್ದಷ್ಟೆ. ಕೆಲವೊಂದರಿ ಜ್ಯೋತಿಷಿಗೊ ಹೇಳ್ತವು – ಕುಜ ದೋಷ ಇದ್ದು, ನವಗ್ರಹ ದೋಷ ಇದ್ದು , ಆ ದೋಷ ಇದ್ದು, ಈ ದೋಷ ಇದ್ದು  ಇತ್ಯಾದಿ. ಸಾಮಾನ್ಯವಾಗಿ ಜ್ಯೋತಿಷಿಗೊ ಆ ರೀತಿ ಹೇಳಿಯಪ್ಪಗ ನವಗೆ ತಟ್ಟಾನೆ ಮನಸ್ಸಿಲ್ಲಿ ಬಂದು ಗಟ್ಟಿಕೂಬದು ಎಂತದೋ ಗ್ರಹದ ದೋಷ ಇದ್ದು ಹೇಳಿ. ನಿಜವಾಗಿ ಗ್ರಹಂಗೊ ಇಪ್ಪದು ದೋಷ ಕೊಡ್ಳೆ ಅಲ್ಲ, ಬದಲಾಗಿ ನಮ್ಮ ಸರಿದಾರಿಲಿ ಕೊಂಡೋಪಲೆ. ವಸ್ತುಷಃ ನಾವು ಆ ರೀತಿ ತಿಳ್ಕೊಂಬದೇ ನಮ್ಮ ದೋಷ. ಅದು ಆಗ್ಯಾನದ ಕಾರಣ. ದೋಷ ನಮ್ಮ ಪ್ರಾರಬ್ಧಕರ್ಮ. ಅದರ ಈ ಗ್ರಹ ಸೂಚಿಸುತ್ತು ಅಷ್ಟೆ. ಅದರ ನಾವು ತಪ್ಪಾಗಿ ತಿಳ್ಕೊಂಡು ಆ ಗ್ರಹವೇ ನಮ್ಮ ಬೆನ್ನು ಹಿಡುದ್ದು ಹೇಳಿ ಎಂತೆಂತದೋ ಪರಿಹಾರ, ಹರಕ್ಕಗೆ ಮುಂದಾವ್ತು. ಗ್ರಹಂಗ ಇಪ್ಪದು ನವಗೆ ಕಾಟ ಕೊಡ್ಳೆ ಅಲ್ಲ., ಬದಲಾಗಿ, ನಾವು ಆ ಪ್ರಾರಬ್ಧಂದ ಎಡವಿಬೀಳದ್ದಾಂಗೆ ಮತ್ತೆ ಸರಿದಾರಿಲಿ ಮುನ್ನೆಡೆಶುಲೆ. ನವಗೆ ಮುಂದೆ ಬಪ್ಪ ಕಷ್ಟಂಗಳ ಮುಂದಾಗಿಯೇ ನವಗೆ ಎಚ್ಚರಿಕೆ ನೀಡಿ, ಆ ಅನಿಷ್ಟವ ಎದುರುಸುಲೆ ಮಾನಸಿಕ ಸಿದ್ಧತೆ ಮಾಡ್ಳೆ ಗ್ರಹಂಗೊ ಸಹಯಾಕರಾಗಿರುತ್ತವು. ಹೀಂಗೊಂದು ಪ್ರಾರಬ್ಧ ಕರ್ಮ ಇದ್ದು ಹೇದು ಗೊಂತಾದಪ್ಪಗ, ಆ ಸಮಸ್ಯೆಯ ಎದುರುಸಿ, ಸಾಧನಾ ಮಾರ್ಗಲ್ಲಿ ಮುಂದೆ ನಡವಲೆ ಭಗವಂತನಲ್ಲಿ ಮೊರೆ ಹೋಯೇಕ್ಕಾದ್ದು ಪ್ರಾಯಶ್ಚಿತ್ತ ಪೂಜೆ ಹೊರತು ಗ್ರಹಶಾಂತಿ ಮಾಡಿ ಗ್ರಹಂಗೊಕ್ಕೆ ಲಂಚ ಕೊಡುವದು ಅಲ್ಲ. ಆ ಗ್ರಹಂಗಳ ಅಂತರ್ಯಾಮಿಯಾಗಿಪ್ಪ ಭಗವಂತನ ಪೂಜಿಸುವದೇ ಶಾಂತಿಕಾರ್ಯ ಪ್ರಕ್ರಿಯೆ. ವಿವಿಧ ದೇವತೆಗೊಕ್ಕೆ, ಗ್ರಹಂಗೊಕ್ಕೆ ಭಗವಂತನಿಂದ ಒಂದೊಂದು ಹೊಣೆ ನಿಯಮಿಸಲ್ಪಟ್ಟದ್ದು. ಆ ಭಗವಂತನ ಆಣತಿಯಂತೇ ಆ ದೇವತೆಗಳೂ ನಡಕ್ಕೊಂಬದು. ಅವನ ಅನುಜ್ಞೆ ಇಲ್ಲೆ ಏನನ್ನೂ ಮಾಡ್ವ ಸ್ವಾತಂತ್ರ್ಯ ಅವಕ್ಕಿಲ್ಲೆ. ಹಾಂಗಾಗಿ ಆ ಭಗವಂತನ ಪೂಜಿಸದ್ದೆ ಏವ ದೇವರ ಪೂಜೆ ಮಾಡಿರೆ ಅದು ಭಗವಂತಂಗೆ ಸಲ್ಲುತ್ತಿಲ್ಲೆ, ಏವ ದೇವತೆಗಳೂ ಅವಂಗೆ ಸಲ್ಲದ್ದ ಪೂಜೆಯ ಸ್ವೀಕರುಸುತ್ತವಿಲ್ಲೆ. ಹಾಂಗಾಗಿ ಏವುದೇ ಪೂಜೆ ಹೋಮ ಪರಿಹಾರ ಶಾಂತಿ ಆಗಲಿ, ಆಯಾ ದೇವತೆಗಳ ಮುಖೇನ ಸಾಕ್ಷಾತ್ ಆ ಭಗವಂತನ ಪೂಜೆಯೇ ಮಾಡೇಕ್ಕಾಗಿಪ್ಪದು. ಹಾಂಗಾಗಿ ಆವ್ತು ನಾವು ಮಾಡಿದ ಪ್ರತಿಯೊಂದು ಕಾರ್ಯದ ಅಕೇರಿಲಿ ಹೇಳುವದು ‘ಶ್ರೀ ಕೃಷ್ಣಾರ್ಪಣಮಸ್ತು’ – ಮಾಡಿದ ಎಲ್ಲ ಕರ್ಮ ಅವಂಗೆ ಅರ್ಪಣೆ ಹೇದು ಅರ್ಪಿಸಿ, “ಅವಾಹನಂ ನ ಜಾನಾಮಿ ….” ಪೂಜೆ ಪುರಸ್ಕಾರ ಏವುದೂ ಎನಗರಡಿಯ, ಸಂಪೂರ್ಣ ಭಕ್ತಿಂದ ಮಾಡಿದ ಸೇವೆಲಿ ಏವ ಕುಂದುಕೊರತೆಗೊ ಇದ್ದರೂ ಅವೆಲ್ಲ ಕ್ಷಮಿಸಿ ನಿನ್ನ ದಾಸನಾದ ಎನ್ನ ಉದ್ಧರುಸು ಹೇಳಿ ಆ ಭಗವಂತಂಗೆ ನೀಟಂಬ ಅಡ್ಡಬೀಳುವದು.

ಬನ್ನಂಜೆ ಇನ್ನೊಂದು ವಿಷಯವನ್ನೂ ಈ ಸಂದರ್ಭಲ್ಲಿ ನೆಂಪು ಮಾಡುತ್ತವು – ನಾರಾಯಣನ ಭಕ್ತನನ್ನೂ ಪ್ರಾರಬ್ಧ ಕರ್ಮ ಬಿಡುತ್ತಿಲ್ಲೆ. ನಮ್ಮ ಪ್ರಾರಬ್ಧಕ್ಕೆ ತಕ್ಕ ಹಾಂಗೆ ನಾವು ನಮ್ಮ ಗ್ರಹಚಾರವ ಅನುಭವುಸಲೇಬೇಕು. ಜ್ಞಾನಿಗೊಕ್ಕೂ ಇದು ಹೊರತಲ್ಲ. ಆದರೆ ಆ ಕಷ್ಟವ ಎದುರುಸುವ ಶಕ್ತಿ ನಮ್ಮಲ್ಲಿ ಇಲ್ಲೆ ಹೇಳಿ ಆ ಶಕ್ತಿಯ ನೀಡು ಹೇಳಿ ಭಗವಂತನ ಪ್ರಾರ್ಥಿಸೆಕ್ಕಾದ್ದು ಧರ್ಮ. ಇಲ್ಲಿ ಬಹುಮುಖ್ಯ ವಿಷಯ ಎಂತ ಹೇಳಿರೆ – ಏವ ಫಲಾಪೇಕ್ಷೆ ಇಲ್ಲದ್ದೆ ‘ಪಾಪೋಹಂ ಪಾಪಕರ್ಮಾಣಾಂ ಪಾಪಾತ್ಮಾ ಪಾಪಸಂಭವಃ…” – ‘ಏವುದೋ ಗೊಂತಿದ್ದೋ ಗೊಂತಿಲ್ಲದ್ದೆಯೋ  ಏವುದೋ ಹಿಂದಾಣ ಜನ್ಮಲ್ಲಿ ಮಾಡಿದ ಪಾಪಕರ್ಮದ ಫಲವಾಗಿ ಪಾಪಿಯಾಗಿ ಆನು ಹುಟ್ಟಿದ್ದೆ. ಕರುಣಾಮಯಿಯಾದ ನೀನೇ ಅದರ ಸಹಿಸುವ ಶಕ್ತಿಯ ನೀಡಿ ಉದ್ದರುಸು ದೇವರೇ’ ಹೇಳಿ ಅವನ ಪ್ರಾರ್ಥಿಸೆಕ್ಕಾದ್ದು ನಮ್ಮ ಕರ್ತವ್ಯ. ‘ಎನ್ನ ಮುಂದಿಪ್ಪ ಈ ಗ್ರಹಚಾರವ ನೀನು ಗ್ರಹಗಳ ಅಂತರ್ಯಾಮಿಯಾಗಿ ನಿಂದು ಎನಗೆ ತೋರಿಸಿದ್ದೆ. ನಿನಗೆ ಕೋಟಿ ಕೋಟಿ ನಮನ. ಎನಗೆ  ಅರಡಿಯದ್ದೆ ಮಾಡಿದ (ಆನು ಪ್ರಜ್ಞಾಪೂರ್ವಕವಾಗಿ ತಿಳಿಯದ್ದೆ ಮಾಡಿದ) ತಪ್ಪಿನ ಮನ್ನಿಸಿ, ಈ ಅನಿಷ್ಟವ ಎದುರುಸಿ ಜ್ಞಾನಮಾರ್ಗಲ್ಲಿ ಮುನ್ನೆಡೆದು ನಿನ್ನ ಸೇರ್ಲೆ ಎನಗೆ ದಾರಿ ತೋರುಸು, ಎನ್ನೊಳ ಇಪ್ಪ ನೀನು ನಿನ್ನ ಪೂಜೆಯ ಎನ್ನ ಮಾಧ್ಯಮವಾಗಿ ಬಳಸಿ ಮಾಡಿಸಿಗೊ, ಆನು ನಿನಗೆ ಸಂಪೂರ್ಣವಾಗಿ ಶರಣಾಗತನಾಯ್ದೆ’ ಹೇಳ್ವ ಅನುಸಂಧಾನಲ್ಲಿ ಭಗವಂತನ ಪೂಜೆಯ ಮಾಡೆಕು. ಹೀಂಗೆ ಭಗವಂತ° ಸರ್ವಶ್ರೇಷ್ಠ° ಹೇಳ್ವ ಎಚ್ಚರ ನಮ್ಮಲ್ಲಿ ಸದಾ ಇರೆಕು, ಏವ ದೇವರ ಪೂಜೆ ಮಾಡುವಾಗಲೂ ಈ ಪ್ರಜ್ಞೆ ನಮ್ಮಲ್ಲಿ ಇರೆಕು. ಅವರ ಅಂತರ್ಯಾಮಿಯಾಗಿಪ್ಪ ಭಗವಂತನ ಅರ್ತು, ಕರ್ಮವ ಮಾನಸಿಕವಾಗಿ ಭಗವಂತನಲ್ಲಿ ಅರ್ಪಿಸೆಕು. ಇದು ನಿಜವಾಗಿ ಮಾಡೇಕ್ಕಾದ ಕರ್ಮದ ವಿಧಾನ.

ಒಟ್ಟಿಲ್ಲಿ ಹೇಳ್ತದಾದರೆ, ನಾವು ನಮ್ಮ ಮನಸ್ಸಿನ ಬೇರೆ ದಿಕ್ಕಂಗೆ ಹೋಗದ್ದಾಂಗೆ ತಡದು, ಅದರ ಸಂಪೂರ್ಣವಾಗಿ ಭಗವಂತನಲ್ಲಿ ನೆಲೆನಿಂಬ ಹಾಂಗೆ ಮಾಡಿಕೊಳ್ಳೆಕು. ನಾವು ಮಾಡುವ ಎಲ್ಲ ಕರ್ಮಂಗಳೂ ಭಗವಂತನ ಪೂಜಾರೂಪವಾಗಿದ್ದು, ಅದರ ಭಗವಂತ° ನಮ್ಮ ಕೈಂದ ಮಾಡುಸುತ್ತಾ ಇದ್ದ° ಹೇಳ್ವ ಎಚ್ಚರ ನಮ್ಮ ಮನಸ್ಸಿಲ್ಲಿ ಸದಾ ನೆಲೆಗೊಳ್ಳೆಕು. ನಮ್ಮ ಅನುಷ್ಥಾನ, ಅನುಸಂಧಾನ ಆನಂದಮಯವಾಗಿರೆಕು. ಅಲ್ಲಿ ಏವುದೇ ಒತ್ತಡ, ಭಯ, ಫಲಾಪೇಕ್ಷೆ ಇಪ್ಪಲಾಗ.

ಶ್ಲೋಕ

ಮಚ್ಚಿತ್ತಃ ಸರ್ವದುರ್ಗಾಣಿ ಮತ್ಪ್ರಸಾದಾತ್ತರಿಷ್ಯಸಿ ।
ಅಥ ಚೇತ್ತ್ವಮಹಂಕಾರಾತ್ ನ ಶ್ರೋಷ್ಯಸಿ ವಿನಂಕ್ಷ್ಯಸಿ ॥೫೮॥

ಪದವಿಭಾಗ

ಮತ್-ಚಿತ್ತಃ ಸರ್ವ-ದುರ್ಗಾಣಿ ಮತ್-ಪ್ರಸಾದಾತ್ ತರಿಷ್ಯಸಿ । ಅಥ ಚೇತ್ ತ್ವಮ್ ಅಹಂಕಾರಾತ್ ನ ಶ್ರೋಷ್ಯಸಿ ವಿನಂಕ್ಷ್ಯಸಿ ॥

ಅವ್ವಯ

(ತ್ವಮ್) ಮತ್-ಚಿತ್ತಃ (ಸನ್), ಸರ್ವ-ದುರ್ಗಾಣಿ ಮತ್-ಪ್ರಸಾದಾತ್ ತರಿಷ್ಯಸಿ । ಅಥ ತ್ವಮ್ ಅಹಂಕಾರಾತ್ ನ ಶ್ರೋಷ್ಯಸಿ ಚೇತ್, ವಿನಂಕ್ಷ್ಯಸಿ ।

ಪ್ರತಿಪದಾರ್ಥ

(ತ್ವಮ್ – ನೀನು), ಮತ್-ಚಿತ್ತಃ (ಸನ್) –  ಎನ್ನ ಪ್ರಜ್ಞೆಲಿ ಇದ್ದುಗೊಂಡು, ಸರ್ವ-ದುರ್ಗಾಣಿ – ಎಲ್ಲ (ಕೋಟೆಗಳ) ಆತಂಕಂಗಳ, ಮತ್-ಪ್ರಸಾದಾತ್ – ಎನ್ನ ಅನುಗ್ರಹಂದ, ತರಿಷ್ಯಸಿ – ದಾಂಟುತ್ತೆ, ಅಥ – ಮತ್ತೆ, ತ್ವಮ್ – ನೀನು, ಅಹಂಕಾರಾತ್ – ಅಹಂಕಾರಂದ, ನ ಶ್ರೋಷ್ಯಸಿ ಚೇತ್ – ಕೇಳ್ತಿಲ್ಲೆ ಹೇದು ಆದರೆ, ವಿನಂಕ್ಷ್ಯಸಿ – ನಾಶವಾವ್ತೆ.

ಅನ್ವಯಾರ್ಥ

ನೀನು ಎನ್ನ ಪ್ರಜ್ಞೆಲಿ ಇದ್ದುಗೊಂದು ಎಲ್ಲ ಅಡ್ಡಿ ಆತಂಕಂಗಳ ಎನ್ನ ಅನುಗ್ರಹಂದ ದಾಂಟುವವನಾವುತ್ತೆ. ಮತ್ತೆ ನೀನು ಅಹಂಕಾರಂದ ಕೇಳದ್ದೆ ಇದ್ದರೆ ನಾಶವಾವ್ತೆ.

ತಾತ್ಪರ್ಯ / ವಿವರಣೆ

ಭಗವಂತನಲ್ಲೆ ಸಂಪೂರ್ಣವಾಗಿ ನೆಲೆಗೊಂಡವವನಾಗಿ ಕರ್ತವ್ಯವ ಮಾಡಿಗೊಂಡು ಹೋದರೆ ಭಗವಂತನ ಅನುಗ್ರಹಂದ ಎಲ್ಲ ರೀತಿಯ ಕಷ್ಟ ಕೋಟೆಗಳ ದಾಂಟಲೆ ಎಡಿಗು. ಅದು ಹೊರತು ಅಹಂಕಾರಂದ ಬೀಗಿದರೆ ನಾಶವೇ ಅಪ್ಪದು ಹೇಳ್ವ ಎಚ್ಚರವ ಭಗವಂತ° ಇಲ್ಲಿ ನೀಡಿದ್ದ°.

ಬನ್ನಂಜೆ ವಿವರುಸುತ್ತವು – ಮನಸ್ಸಿನ ಭಗವಂತನಲ್ಲಿ ಕೇಂದ್ರೀಕರಿಸಿ, ಬುದ್ಧಿಯ ಭಗವಂತನಲ್ಲಿ ನೆಟ್ಟು, ಚಿತ್ತಲ್ಲಿ ಭಗವಂತನ ಸ್ಥಿರಗೊಳುಸಿ, ಸುಪ್ತಪ್ರಜ್ಞೆಲಿಯೂ ಕೂಡ ಭಗವಂತನ ಸ್ಮರಣೆ ಶಾಶ್ವತಗೊಳಿಸಿಯಪ್ಪಗ ನಮ್ಮ ಎಲ್ಲ ಕ್ರಿಯೆಗೊ ಭಗವಂತನ ಪೂಜೆ ಆವ್ತು. ಇದರಿಂದ ನಮ್ಮ ಎಲ್ಲ ವ್ಯವಹಾರಂಗಳಲ್ಲಿ ಪೂರ್ಣ ಪ್ರಾಮಣಿಕತೆ ವ್ಯಕ್ತವಾವ್ತು. ಹಾಂಗೇ ಜೀವನಲ್ಲಿ ಬಪ್ಪ ಏವುದೇ ದುರ್ಗಮ ಸ್ಥಿತಿ, ಕಷ್ಟ ಕಾರ್ಪಣ್ಯಂಗಳ ಎದುರುಸುವ ಕ್ಷಮತೆ ಬತ್ತು. ಹೀಂಗೆ ಅನಿವಾರ್ಯವಾಗಿ ಜೀವನಲ್ಲಿ ಬಪ್ಪ ಆಪತ್ತುಗಳ ಜ್ಞಾನಿಯಾಗಿ ನಿರಾಯಾಸವಾಗಿ ದಾಂಟಿ ಮುನ್ನೆಡವಲೆ ಸಾಧ್ಯ. ಹೀಂಗೆ ಜೀವನವ ಸಾಗಿಸಿರೆ ಭಗವಂತ ನವಗೆ ಬಪ್ಪ ಸರ್ವ ಅನಿಷ್ಟಂಗಳಿಂದಲೂ ನಮ್ಮ ರಕ್ಷಿಸುತ್ತ°. ಅವನ ರಕ್ಷಾಕವಚ ನಮ್ಮ ಸದಾ ಆವರ್ಸಿ ಆಧರಿಸಿ ಸುತ್ತುವರಿತ್ತು. ಇದರಿಂದ ಜೀವನಲ್ಲಿ ಬಪ್ಪ ಏವುದೇ ಆಪತ್ತುಗಳಿಂದ ನವಗೆ ಪಾರಪ್ಪಲೆ ಸಾಧ್ಯ. ಇದರ ಬಿಟ್ಟು ವೇದಾಂತ ಬರೇ ಬೊಗಳೆ, ಅದರಲ್ಲಿ ಮಣ್ಣಾಂಗಟ್ಟಿ ಎಂತ ಮುರ್ಕೂ ಇಲ್ಲೆ ಹೇದು ನಂಬಿಕ್ಕೆ ಇಲ್ಲದ್ದೆ ಅಹಂಕಾರಂದ ಬೀಗಿರೆ, ನಮ್ಮ ಕೈಯಾರೆ ನಾವು ನಮ್ಮ ಭವಿಷ್ಯವ ಹಾಳುಮಾಡಿಗೊಂಡು ನಾವೇ ನಮ್ಮ ವಿನಾಶಕ್ಕೆ ಕಾರಣವಾವ್ತು.

ಶ್ಲೋಕ

ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ ।
ಮಿಥ್ಯೇಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ ॥೫೯॥

ಪದವಿಭಾಗ

ಯತ್ ಅಹಂಕಾರಮ್ ಆಶ್ರಿತ್ಯ ನ ಯೋತ್ಸೈ ಇತಿ ಮನ್ಯಸೇ । ಮಿಥ್ಯಾ ಏಷಃ ವ್ಯವಸಾಯಃ ತೇ ಪ್ರಕೃತಿಃ ತ್ವಾಮ್ ನಿಯೋಕ್ಷ್ಯತಿ ॥

ಅನ್ವಯ

ಯತ್ ಅಹಂಕಾರಮ್ ಆಶ್ರಿತ್ಯ ‘ನ ಯೋತ್ಸೈ’ ಇತಿ (ತ್ವಮ್) ಮನ್ಯಸೇ, (ತತ್) ಏಷಃ ತೇ ವ್ಯವಸಾಯಃ ಮಿಥ್ಯಾ (ಏವ ಅಸ್ತಿ), ಪ್ರಕೃತಿಃ ತ್ವಾಂ ನಿಯೋಕ್ಷ್ಯತಿ ।

ಪ್ರತಿಪದಾರ್ಥ

ಯತ್ – ಯಾವ, ಅಹಂಕಾರಂ – ಅಹಂಕಾರವ, ಆಶ್ರಿತ್ಯ – ಆಶ್ರಯಿಸಿ, ‘ನ ಯೋತ್ಸೈ’ – ‘ಆನು ಯುದ್ಧಮಾಡಿತ್ತಿಲ್ಲೆ’, ಇತಿ – ಹೇದು, (ತ್ವಮ್ – ನೀನು) , ಮನ್ಯಸೇ – ಯೋಚಿಸುತ್ತೆಯೋ, (ತತ್ – ಅದು), ಏಷಃ – ಈ, ತೇ ವ್ಯವಸಾಯಃ – ನಿನ್ನ ನಿರ್ಧಾರಂಗೊ, ಮಿಥ್ಯಾ (ಏವ ಅಸ್ತಿ) – ಸುಳ್ಳು ಆಗಿದ್ದು, ಪ್ರಕೃತಿಃ – ಪ್ರಕೃತಿಯು (ಸಹಜ ಸ್ವಭಾವವು), ತ್ವಾಮ್ – ನಿನ್ನ, ನಿಯೋಕ್ಷ್ಯತಿ – ತೊಡಗುಸುತ್ತು.

ಅನ್ವಯಾರ್ಥ

(ನೀನು ಇನ್ನು ) ಯಾವ ಅಹಂಕಾರಂದ ‘ಆನು ಯುದ್ಧಮಾಡುತ್ತಿಲ್ಲೆ’ ಹೇದು ಯೋಚಿಸುತ್ತೆಯೋ ಅದು ನಿನ್ನ ತಪ್ಪು (ಮಿಥ್ಯೆ/ಸುಳ್ಳು) ನಿರ್ಧಾರ ಆವ್ತು ಮತ್ತು ನಿನ್ನ ಸಹಜ ಸ್ವಭಾವವು (ಪ್ರಕೃತಿಗುಣ) ನಿನ್ನ (ಯುದ್ಧಲ್ಲಿ) ತೊಡಗುಸುತ್ತು.

ತಾತ್ಪರ್ಯ / ವಿವರಣೆ

ಭಗವದ್ಗೀತಾ ಉಪದೇಶ ಸುರುವಾದ್ದೇ ಅರ್ಜುನ ಯುದ್ಧಕ್ಷೇತ್ರಲ್ಲಿ ಭೀಷ್ಮ ದ್ರೋಣಾದಿ ಬಂಧು ಜನರ ನೋಡಿ ಅಜ್ಞಾನದ ಭ್ರಮೆಂದ  ಕಂಗಾಲಾಗಿ ‘ಆನು ಯುದ್ಧ ಮಾಡುತ್ತಿಲ್ಲೆ’ ಹೇದು ಕೈಲಿ ಎತ್ತಿದ ಧನುವ ಇಳುಹಿದ ಕಾರಣಂದ ಆವ್ತು. ಅದು ಕೇವಲ ತಾತ್ಕಾಲಿಕ ಭ್ರಮೆ. ನಿಜವಾದ ವಿಷಯ ಏನು ಎಂತರ ಹೇಳಿ ಈ ವರೇಂಗೆ ಭಗವಂತ° ಅರ್ಜುನಂಗೆ ಮನದಟ್ಟು ಮಾಡಿದ್ದದು. ಅದನ್ನೇ ಇಲ್ಲಿ ಭಗವಂತ° ಅರ್ಜುನಂಗೆ ಎಚ್ಚರಿಸಿ ಹೇಳುತ್ತ° – ‘ಆನು ಯುದ್ಧ ಮಾಡುತ್ತಿಲ್ಲೆ’ ಹೇದು ಹೇಳಿದ್ದದು ನಿನ್ನ ಅಹಂಕಾರಭರಿತ ಭ್ರಮೆ. ಒಂದು ವೇಳೆ ನೀನು ಅದನ್ನೇ ಹೇಳುತ್ತೆಯಾದರೂ ನೀನು ಎಂತರ ಮಾಡುತ್ತಿಲ್ಲೆ ಹೇಳಿ ಹೇಳಿದೆಯೋ ನಿನ್ನ ಪ್ರಕೃತಿಗುಣ ನಿನ್ನ ಅದನ್ನೇ ಮಾಡುಸುತ್ತು. ಎಂತಕೆ ಹೇಳಿರೆ ನಮ್ಮ ನಿಯಂತ್ರಣ ಮಾಡುವ ಶಕ್ತಿ ನಮ್ಮ ಮೂಲ ಪ್ರಕೃತಿ. ಇಲ್ಲಿ ನಮ್ಮ ಭೌತಿಕ ತೀರ್ಮಾನ ವ್ಯರ್ಥ. ನಮ್ಮ ಜೀವಸ್ವಭಾವ, ಅದಕ್ಕನುಗುಣವಾಗಿ ಅನುವಂಶೀಯ ಪ್ರಭಾವ, ಪರಿಸರದ ಪ್ರಭಾವ ಮತ್ತೆ ಈ ಎಲ್ಲವನ್ನೂ ನಿಯಂತ್ರಿಸುವ ಭಗವಂತನ ಇಚ್ಛೆಯ ಹಾಂಗೆ ಕ್ರಿಯೆ ನಡದೇ ನಡೆತ್ತು.

ಶ್ಲೋಕ

ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ ।
ಕರ್ತುಂ ನೇಚ್ಛಸಿ ಯನ್ಮೋಹಾತ್ ಕರಿಷ್ಯಸ್ಯವಶೋsಪಿ ತತ್ ॥೬೦॥

ಪದವಿಭಾಗ

ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ । ಕರ್ತುಮ್ ನ ಇಚ್ಛಸಿ ಯತ್ ಮೋಹಾತ್ ಕರಿಷ್ಯಸಿ ಅವಶಃ ಅಪಿ ತತ್ ॥

ಅನ್ವಯ

ಹೇ ಕೌಂತೇಯ!, (ಯತಃ) ಸ್ವಭಾವಜೇನ ಸ್ವೇನ ಕರ್ಮಣಾ ನಿಬದ್ಧಃ (ತ್ವಮ್) ಯತ್ ಮೋಹಾತ್ ಕರ್ತುಂ ನ ಇಚ್ಛಸಿ, ತತ್ ಅವಶಃ (ಸನ್) ಅಪಿ ಕರಿಷ್ಯಸಿ ।

ಪ್ರತಿಪದಾರ್ಥ

ಹೇ ಕೌಂತೇಯ! – ಹೇ ಕುಂತೀಪುತ್ರನಾದ ಅರ್ಜುನ!, (ಯತಃ – ಯಾವುದರಿಂದ), ಸ್ವಭಾವಜೇನ – ಸ್ವಭಾವಂದ ಹುಟ್ಟಿದ, ಸ್ವೇನ – ನಿನ್ನ ಸ್ವಂತ, ಕರ್ಮಣಾ – ಕರ್ಮಂಗಳಿಂದ, ನಿಬದ್ಧಃ – ಬದ್ಧನಾಗಿದ್ದೆಯೋ, (ತ್ವಮ್- ನೀನು), ಯತ್ ಮೋಹಾತ್ – ಯಾವ ಮೋಹಂದ, ಕರ್ತುಮ್ – ಮಾಡುವದಕ್ಕೆ, ನ ಇಚ್ಛಸಿ – ಇಷ್ಟಪಡುತ್ತಿಲ್ಲೆಯೋ, ತತ್ – ಅದು, ಅವಶಃ (ಸನ್) – ಸ್ವಂತ ಇಚ್ಛೆಯಿಲ್ಲದ್ದೆ ಇದ್ದುಗೊಂಡು, ಅಪಿ – ಕೂಡ, ಕರಿಷ್ಯಸಿ – ಮಾಡುವೆ.

ಅನ್ವಯಾರ್ಥ

ಹೇ ಅರ್ಜುನ!, ಯಾವುದರಿಂದ ನೀನು ನಿನ್ನ ಸ್ವಭಾವ ಸಹಜವಾಗಿ ಹುಟ್ಟಿಬಂದ ನಿನ್ನ ಕರ್ಮಂಗಳಿಂದ ನೀನು ಬದ್ಧನಾಗಿದ್ದೆಯೋ, ಯಾವ ಮೋಹಂದ ನೀನು ಆ ಕರ್ಮವ ಮಾಡ್ಳೆ ಇಷ್ಟಪಡುತ್ತಿಲ್ಯೋ, ಅದರ ಸ್ವ-ಇಚ್ಛೆ ಇಲ್ಲದ್ದೆ ಇದ್ದುಗೊಂಡು ಕೂಡ ನೀನು ಮಾಡುವೆ.

ತಾತ್ಪರ್ಯ / ವಿವರಣೆ

ಭಗವಂತ° ಅರ್ಜುನಂಗೆ ಎಚ್ಚರವ ನೀಡುತ್ತ° – ‘ಸ್ವಭಾವ ಸಹಜವಾದ ನಿನ್ನ ಕರ್ಮಂದ ನೀನು ಬದ್ಧನಾಗಿದ್ದೆ. ಅಜ್ಞಾನಂದಾಗಿ ಏದಏವುದರ ನೀನು ಮಾಡುತ್ತಿಲ್ಲೆ ಹೇದು ಗ್ರೇಶಿಗೊಂಡಿದ್ದೆಯೋ ಅದರ ನೀನು ನಿನಗರಡಿಯದ್ದೇ (ಭಗವದಿಚ್ಛೆಗೆ ವಶವಾಗಿ) ನೀನು ಮಾಡ್ಳೆ ಇದ್ದು’. ನಾವು ಹೀಂಗೆ ಮಾಡೆಕು, ಹಾಂಗೆ ಮಾಡೆಕು ಹೇದು ಅಹಂಕಾರಂದ ಗ್ರೇಶೋದು ನಮ್ಮ ಅಜ್ಞಾನಂದ. ಈ ರೀತಿ ಏವ ಯೋಚನೆ ಮಾಡಿರೂ ಅಕೇರಿಗೆ ಮಾಡುವದು ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿಯೇ. ಇದರ ನಿಯಂತ್ರಣ ನಮ್ಮ ಕೈಲಿ ಇಲ್ಲೆ. ಅದು ನವಗೆ ಅರಡಿಯದ್ದೆ, ಭಗವಂತನ ಇಚ್ಛೆಯಂತೆ ಆಗಿಯೇ ಆವ್ತು.

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 18 – SHLOKAS 51 – 60

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

 

One thought on “ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 51 – 60

  1. ಚೆನ್ನೈ ಭಾವ,
    ಕೆಲವೊಂದು ಮನಸ್ಸಿಂಗೆ ಮುದ ಕೊಡುವ ದೈವೀ ಅನುಭವಂಗ ಹೀಂಗೇ ಮುಗಿಯದ್ದೆ ಇದ್ದರೆ ಎಷ್ಟು ಒಳ್ಳೆದಿತ್ತು ಹೇಳಿ ಕಾಣ್ತು. ನಿಂಗಳ ಗೀತೆಯ ವಿವರಣೆಯೂ ಹಾಂಗಿಪ್ಪ ಒಂದು ವಿಷಯ. 18 ನೇ ಅಧ್ಯಾಯಲ್ಲಿ ಇನ್ನು 18 ಶ್ಲೋಕ ಮಾತ್ರ ಇಪ್ಪದು ಹೇಳಿ ನೆನಸೊಗ ಹೀಂಗಿಪ್ಪದೇ ಇನ್ನೊಂದು ವಿವರಣೆಯ ನಿಂಗೊ ಕೊಡೆಕ್ಕು ಹೇಳಿ ಅಭಿಲಾಶೆ, ಕೋರಿಕೆ. ನಿಂಗಳ ಪ್ರಯತ್ನಕ್ಕೆ ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×