Oppanna.com

ಶ್ರೀಮದ್ಭಗವದ್ಗೀತಾ – 'ಪರಿಸಮಾಪ್ತಿ'

ಬರದೋರು :   ಚೆನ್ನೈ ಬಾವ°    on   27/06/2013    7 ಒಪ್ಪಂಗೊ

ಚೆನ್ನೈ ಬಾವ°

ಪರಿಸಮಾಪ್ತಿ –
‘ಶ್ರೀಮದ್ಭಗವದ್ಗೀತಾ’ ಹಿಂದೂ ಧರ್ಮದ ಪರಮ ಶ್ರೇಷ್ಠ ಗ್ರಂಥ. ಭಾರತದ ದೇಶೀಯ ಗ್ರಂಥ – ಭಗವದ್ಗೀತಾ. ಸಕಲ ವೇದ, ಶಾಸ್ತ್ರ, ಉಪನಿಷತ್ತುಗಳ ಸಾರ ಭಗವದ್ಗೀತೆಲಿ ಇಪ್ಪದು. ಆದ್ದರಿಂದಲೇ ‘ಪಂಚಮವೇದ’ ಹೇಳುವ ಖ್ಯಾತಿ ಕೂಡ, ವಿಶ್ವಲ್ಲೇ ಮಾನ್ಯತೆ ಇಪ್ಪದು ಭಗವದ್ಗೀತೆಗೆ. ಭಗವದ್ಗೀತೆ ಮನುಷ್ಯನ ಜೀವನ ಕ್ರಮವ ಬದಲಿಸಿ ಸದಾಚಾರ ಪ್ರವೃತ್ತಿಲ್ಲಿ ಕೊಂಡೋಪ ಶಕ್ತಿ ಅಡಗಿಪ್ಪಾಂತಾದ್ದು. ಜೀವನ ಮೌಲ್ಯ ಅಡಕವಾಗಿಪ್ಪದು. ಪ್ರತಿಯೊಬ್ಬ ‘ಹಿಂದು’ವಿನ ಮನೇಲಿ ಇರೆಕ್ಕಪ್ಪದು ಭಗವದ್ಗೀತೆ ಪುಸ್ತಕ. ಬರೇ ಪುಸ್ತಕ ಇದ್ದರೆ ಸಾಲ. ಅದರ ಪಠಣ ಕೂಡ ಆಯೇಕು. ಇಡೀ ಪುಸ್ತಕ ಪಠಣ ಆವ್ತಾ ಇರೆಕು. ಎಡಿಯದ್ರೆ ಅರ್ಧ ಆದರೂ ಓದುತ್ತಾ ಇರೇಕು ನಿತ್ಯವೂ, …….ಎಡಿಯದ್ರೆ  ಒಂದು ಅಧ್ಯಾಯವಾದರೂ., ಅದೂ ಎಡಿಯದ್ರೆ ಒಂದು ಶ್ಲೋಕ ನಿತ್ಯ, ಅಲ್ಲದ್ರೆ ಒಂದು ಚರಣವಾದರೂ.  ಇಲ್ಲಿ ಎಡಿಯದ್ರೆ ಇಷ್ಟನ್ನಾರು ಓದೇಕು ಹೇಳಿದ್ದು ಇದರ ನಿತ್ಯ ಪಾರಾಯಣ ಆಯೇಕು ಹೇಳ್ತ ಅರ್ಥಲ್ಲಿ ವಿನಃ , ಹೋ! ಇಷ್ಟು ಓದಿರೂ ಸಾಕೋ ಹೇಳ್ವ ಭಾವನೆಗೆ ಅಲ್ಲ. ಹಾಂಗಾಗಿಯೇ ಅಲ್ಲಲ್ಲಿ ಭಗವದ್ಗೀತಾ ಅಭಿಯಾನ ಹೇಳಿ ಸುರುವಾದ್ದು. ಗೀತಾ ಅಧ್ಯಯನ ಕೇಂದ್ರ, ಶಿಬಿರ, ಪ್ರವಚನ ಇತ್ಯಾದಿಗಳ ಮೂಲಕವೂ ಧಾರ್ಮಿಕ ಮುಖಂಡರು ಭಗವದ್ಗೀತಾ ಪ್ರಚಾರ ಕೈಂಕರ್ಯ ತೊಡಗಿಸಿಗೊಂಡಿದವು.   ಭಗವದ್ಗೀತೆಯ ನಿತ್ಯ ಅಧ್ಯಯನ, ಜ್ಞಾನಯಜ್ಞಕ್ಕೆ ಸಮಡ.BHAGAVADGEETHA
ಕುರುಕ್ಷೇತ್ರಲ್ಲಿ ಅರ್ಜುನ ಮೋಹಪಾಶಕ್ಕೆ ಸಿಲುಕಿ ವಿಮುಖನಾಗಿ ಶಸ್ತ್ರತ್ಯಾಗ ಮಾಡಿ ಯುದ್ಧವೇ ಬೇಡ ಹೇಳಿ ವಿಷಣ್ಣವದನನಾಗಿ ಇಪ್ಪಗ ಭಗವಂತ° ಶ್ರೀಕೃಷ್ಣ ಪರಮಾತ್ಮ ಎಲ್ಲಾ ಉಪನಿಷತ್ತುಗಳ ಸಾರವ ೭೦೦ ಶ್ಲೋಕಲ್ಲಿ ಪ್ರೀತಿಪೂರ್ವಕವಾಗಿ ಬೋಧಿಸಿಯಪ್ಪಗ ಅವನ ಮೋಹ ಮಾಯ ಆತಡ. ತಾನು ಆರು, ಎಂತರ, ಎಂತಕೆ ಎಂಬಿತ್ಯಾದಿ ಕರ್ತವ್ಯ ಪ್ರಜ್ಞೆ ಮೂಡಿಬಂದು, ಯುದ್ಧಕ್ಕೆ ಸಿದ್ದನಾದನಡ. ಅಂಬಗ ಭಗವಂತ° ಅಪ್ಪಣೆ ಕೊಡಿಸಿದ್ದು – “ ಈ ಗೀತಾಮೃತವ ಆನು ಈ ಮದಲು ಸೂರ್ಯಂಗೆ ಬೋಧಿಸಿತ್ತಿದ್ದೆ. ಸೂರ್ಯ ಮುಂದೆ ಮನುವಿಂಗೆ , ಮನುವು ಇಕ್ಷ್ವಾಕುವಿಂಗೂ ಬೋಧಿಸಿದವು. ಪರಂಪರಾನುಗತವಾಗಿ ಬಂದ ಈ ಯೋಗವ ರಾಜರ್ಷಿಗೊ ಮಾಂತ್ರ ಗೊಂತುಮಾಡಿದ್ದವು. ಕಾಲ ಅತಿ ಗತಿಸಿದ್ದರಿಂದ ಅವೆಲ್ಲಾ ಈಗ ನಷ್ಟ ಆದಿಕ್ಕು. ನೀನು ಎನಗೆ ಅತ್ಯಂತ ಪ್ರಿಯನಾದ್ದರಿಂದ ಅದೇ ಪುರಾತನ ರಹಸ್ಯವ ನಿನಗೆ ಬೋಧಿಸಿದ್ದೆ. ಇದರ ನೀನು ಎನ್ನ ಭಕ್ತರಿಂಗೆಲ್ಲ ಪ್ರಚಾರ ಮಾಡೆಕ್ಕು.
ಯ ಇಮಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ ।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಶ್ಯಷ್ಯತ್ಯ ಸಂಶಯಃ ॥ (ಶ್ರೀಮದ್ಭಗವದ್ಗೀತಾ – ಅಧ್ಯಾಯ ೧೮ , ಶ್ಲೋಕ ೬)
 – ಆರು ಎನ್ನಲ್ಲಿ ಪರಮ ಪ್ರೇಮಂದ ಈ ಪರಮ ರಹಸ್ಯಯುತವಾದ ಗೀತಾಶಾಸ್ತ್ರವ ಎನ್ನ ಭಕ್ತರಲ್ಲಿ ಪ್ರಚಾರ ಮಾಡ್ತವೋ ಅವ್ವು ನಿಸ್ಸಂದೇಹವಾಗಿ ಕಡೇಂಗೆ ಎನ್ನನ್ನೇ ಸೇರುತ್ತವು
ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ ।
ಭವಿತಾ ನ ಚ ಮೇ ತಸ್ಮಾತ್ ಅನ್ಯಃ ಪ್ರಿಯತರೋ ಭುವಿ ॥ (ಶ್ರೀಮದ್ಭಗವದ್ಗೀತಾ- ಅಧ್ಯಾಯ ೧೮, ಶ್ಲೋಕ ೬೯)
 – ಮತ್ತು ಮನುಷ್ಯರಲ್ಲಿ ಅಂತವರಿಂದ ಮಿಗಿಲಾಗಿ ಎನ್ನ ಪ್ರಿಯಕಾರ್ಯ ಮಾಡುವವು ಆರೂ ಇಲ್ಲೆ. ಮಾತ್ರವಲ್ಲದ್ದೆ ಪೃಥ್ವಿಲಿ ಅವರಿಂದ ಮಿಗಿಲಾದ ಪ್ರೀತಿಪಾತ್ರರು ಬೇರೆ ಆರೂ ಇಪ್ಪಲಿಲ್ಲೆ.
ಪ್ರತಿನಿತ್ಯವೂ ಗೀತಾಪಾರಾಯಣ ಮತ್ತೆ ಅರ್ಥ ಮನನ ಮಾಡುವದರಿಂದ ಗೀತಾಯಜ್ಞದ ಮೂಲಕ ಪರಮಾತ್ಮನ ಆರಾಧನೆ ಮಾಡಿದ ಹಾಂಗೆ ಆವುತ್ತು. ಅರ್ಥವ ಮೆಲುಕು ಹಾಕುವದರಿಂದ ಸುಪ್ತಚಿತ್ತಲ್ಲಿಪ್ಪ ಜನ್ಮ ಜನ್ಮಾಂತರ ಪಾಪ ನಿವಾರಣೆ ಆವ್ತು. ಒಟ್ಟು ೭೦೦ ಶ್ಲೋಕಂಗಳ ಒಳಗೊಂಡ, ೧೮ ಅಧ್ಯಾಯಂಗಳ ಒಳಗೊಂಡ ಇಡೀ ಭಗವದ್ಗೀತೆಯ ನಿತ್ಯ ಪಾರಾಯಣ ನಮ್ಮ ನಿತ್ಯ ಜೀವನಲ್ಲಿ ಪ್ರಾಯೋಗಿಕ ಅಸಾಧ್ಯ ಎಂಬುದಂತೂ ಸತ್ಯ. ಅಂದರೂ ಆಚಾರ್ಯವರೇಣ್ಯರ ಆದೇಶ ಪ್ರಕಾರ, ಪರಮಾತ್ಮನ ಆದೇಶ ಪ್ರಕಾರ, ನಮ್ಮಿಂದ ಎಡಿಗಪ್ಪಷ್ಟು ಪ್ರಯತ್ನ ಮಾಡೆಕ್ಕಪ್ಪದು ನಮ್ಮೆಲ್ಲರ ಧರ್ಮ. ಈ ಉದ್ದೇಶಂದ ವಾರಕ್ಕೆ ೧೦ ಶ್ಲೋಕಂಗಳ ಬೈಲಿಂಗೆ ತಪ್ಪ ಕಿರು ಪ್ರಯತ್ನ ಇದು. ನಿತ್ಯ ಪಾರಾಯಣ ಮಾಡುವ ಪ್ರಯತ್ನ ಮಾಡಿರೆ ವಾರ ವಾರಕ್ಕೆ ೧೦ ಶ್ಲೋಕಂಗಳ, ದಿನಕ್ಕೆರಡೋ ಮೂರೋ ಶ್ಲೋಕಂಗಳ ಹಾಂಗೆ ಕಂಠಸ್ಥ ಕಲ್ತುಗೊಂಬ ಸದವಕಾಶ ಕೂಡ ಈ ಮೂಲಕ. ಎಲ್ಲೋರಿಂಗೂ ಅನುಕೂಲವಾಗಲಿ. ಶ್ರೀ ಗುರುದೇವತಾನುಗ್ರಹ ಪ್ರಾಪ್ತಿಸಲಿ ಹೇಳಿ ನಮ್ಮ ಆಶಯ. ಈ ಮೂಲಕ ನಮ್ಮ ಭವ್ಯ ಸಂಸ್ಕೃತಿಯ ಉನ್ನತ ಧ್ಯೇಯೋದ್ದೇಶಂಗಳ ಪ್ರಚಾರಪಡಿಸಿ, ಹೇಮರ್ಸಿ, ಮುಂದಾಣ ಪೀಳಿಗೆಗೂ ಲಭ್ಯ ಆಯೇಕು ಹೇಳಿ ಮಠಾಧಿಪತಿಗೊ, ವಿವಿಧ ಗೀತಾ ಕೇಂದ್ರಂಗೊ, ಶಿಬಿರಂಗೊ ಕಂಕಣ ಬದ್ದರಾಗಿ ಮಾಡುವ ಕಾರ್ಯಕ್ಕೆ ಪೂರಕವಾಗಿ ನಮ್ಮ ಬೈಲಿಲಿ ನಮ್ಮೀ ಈ ಸೇವೆಯ ಉದ್ದೇಶ.
ಯಥಾಜ್ಞಾನಲ್ಲಿ ತಿಳುದು, ಶಕ್ತಿಗೆ ತಿಳುದ್ದರ ಇಲ್ಲಿ ಬರವಲೆ ಪ್ರಯತ್ನಿಸಿದ್ದೆ. ಮಾನುಷ ಪ್ರಯತ್ನಲ್ಲಿ ಎಲ್ಲಿಯಾರು ಲೋಪದೋಷಂಗೊ ಆಗಿದ್ದರೆ ಅವೆಲ್ಲವ ಕ್ಷಮಿಸಿ ತಿದ್ದಿಕೊಡೆಕು ಹೇಳಿ ಭಗವದ್ ಸ್ವರೂಪಿಗಳಾದ ನಿಂಗೊ ಎಲ್ಲೋರತ್ರೆಯೂ ಕೇಳಿಗೊಂಡು ಗೀತಾಚಾರ್ಯ ಶ್ರೀಕೃಷ್ಣಂಗೆ ಇದರ ನಮ್ಮ ಬೈಲಿನ ಮೂಲಕ ಸಮರ್ಪಿಸುತ್ತೆ.
ಸುದೀರ್ಘ ಧಾರವಾಹಿಯಾಂಗೆ ಕಳುದ ವೊರಿಶ ಜನವರಿಂದ ತೊಡಗಿ ಇಂದಿನವರೆಂಗೆ ವಾರವಾರವೂ ಎಡೆಬಿಡದ್ದೆ ನಮ್ಮ ಬೈಲಿಲಿ ಅನಾವರಣಗೊಂಬಲೆ ಪ್ರೋತ್ಸಾಹಿಸಿದ ಬೈಲ ಗುರಿಕ್ಕಾರಿಂಗೆ ನಮೋ ನಮಃ . ಓದಿ ಅಭಿಪ್ರಾಯವನ್ನೂ ಒಪ್ಪವನ್ನೂ ಕೊಟ್ಟು ಪ್ರೋತ್ಸಾಹಿಸಿದ ನಿಂಗೊ ಸಮಸ್ತರಿಂಗೂ ನಮೋ ನಮಃ .
ಶ್ರೀಮದ್ಭಗವದ್ಗೀತಾ ಈ ಶುದ್ದಿ ಬರವಲೆ ಆನು ಆಧಾರವಾಗಿ ತೆಕ್ಕೊಂಡದು ಎನಗೆ ಅಂತರ್ಜಾಲಲ್ಲಿ ಸಿಕ್ಕಿದ ಗೀತಾನ್ವಯಸಂಧಿವಿಗ್ರಹ, ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ ಆಧಾರಿತ ‘ಭಗವದ್ಗೀತಾ – ಭಗವಂತನ ನಲ್ನುಡಿ’, ಮತ್ತೆ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರವರ ಭಗವದ್ಗೀತಾ – ಯಥಾರೂಪ ಕಡತಕ್ಕೆ ಚಿರಋಣಿ. ಅವರ ಜ್ಞಾನಕ್ಕೆ ನಮೋ ನಮಃ . ಇದು ಮಾತ್ರವಲ್ಲದ್ದೆ, ಇನ್ನು ಈ  ‘ಶ್ರೀಮದ್ಭಗವದ್ಗೀತಾ’ ವಿವರಣೆಯ ಆನು ಬರದ್ದದು ಹೇದು ಹೇಳಿಗೊಂಬಲೆ ಇಲ್ಲೆ. ಇದು ಸಂಪೂರ್ಣವಾಗಿ ಮೇಗೆ ಹೇಳಿದ ವಿದ್ವಾಂಸರ ವಿವರಣೆಯ ಆಧಾರಂದ ಸಂಗ್ರಹಿಸಿ ಬರದ ವಿಷಯಂಗಳೇ ಆಗಿದ್ದು ಹೇದು ಹೇಳ್ವದು ಪ್ರಾಮಣಿಕ ಸತ್ಯ.
ಬಹುತೇಕ ಎಲ್ಲೋರಲ್ಲಿ ಇಪ್ಪಾಂಗೆ ಎನ್ನಲ್ಲಿಯೂ ಭಗವದ್ಗೀತೆ ಪೂಜಾಕೋಣೆಲಿ ಇತ್ತಿದ್ದದು, ಓದಲೆ ಅವಕಾಶ ಇಲ್ಲದ್ದಾತೋ, ಸಮಯ ಕೂಡಿಬಾರದ್ದೆ ಒಳುದತ್ತೋ.. ಏನೋ, ಒಂದರಿ ಭಗವದ್ಗೀತೆಯ ಓದಿ, ಗೀತೆಲಿ ಎಂತ ಹೇಳಿದ್ದು ತಿಳ್ಕೊಂಬೊ ಹೇಳಿ ಓದಲೆ ಸುರುಮಾಡಿಯಪ್ಪಗ, ಅಂತರ್ಜಾಲಲ್ಲಿ ಸಿಕ್ಕಿದ ಈ ಕಡತ ಗೀತೆಯ ಯಥಾಶಕ್ತಿ ಅರ್ಥೈಸುಲೆ ಸಹಾಯಕ ಆತು. ಓದಿದ್ದರ ಬೈಲಿಂಗೂ ತಿಳುಶುವೋ° ಹೇಳ್ತ ಯೋಚನೆಲಿ ಸುರುಮಾಡಿ, ಶ್ಲೋಕವೂ ಅನ್ವಯಾರ್ಥವೂ ಬರವದು ಹೇದು ಹೆರಟಪ್ಪಗ ಬೈಲಿಂಗೆ ಎದುರ್ಕಳ ಮಾವನ ಪ್ರವೇಶ ಆತು. ಅವರ ಪ್ರೋತ್ಸಾಹ ಮತ್ತಷ್ಟು ಊಕ, ಜವಾಬ್ದಾರಿಯನ್ನೂ ಕೊಟ್ಟತ್ತು. ಹಾಂಗಾಗಿ ‘ಸುರು ಓದುಗರಿಂಗೂ’ ಅನುಕೂಲವಾಗಲಿ, ವಿವರವಾಗಿ ಶ್ಲೋಕವ ಅರ್ಥೈಸಿ ಓದುವವಕ್ಕೂ ಅನುಕೂಲ ಆಗಲಿ, ವಿಶೇಷವಾಗಿ ಸಂಸ್ಕೃತ ಕಲಿವವಕ್ಕೆ ಪ್ರಯೋಜನ ಆಗಲಿ ಹೇದು ಪದವಿಭಾಗವನ್ನೂ, ಅನ್ವಯ, ಪ್ರತಿಪದಾರ್ಥ, ತಾತ್ಪರ್ಯ / ವಿವರಣೆಯನ್ನೂ ಬರವಲೆ ಸುರುಮಾಡಿ ಮುಂದುವರಿಸಿದ್ದದು. ಡಾ. ಮಹೇಶಣ್ಣ, ಅದರ ರಜಾ ಆಯ್ತ ಮಾಡಿ, ಬಣ್ಣ ಹಚ್ಚಿ ಹಾಕಿರೆ ಇನ್ನೂ ಆಕರ್ಷಕ ಮತ್ತು ಆಸಕ್ತಿದಾಯಕವಾಗಿ ಇಕ್ಕು ಹೇಳಿ ಸೂಚನೆ ಕೊಟ್ಟು ಪ್ರೋತ್ಸಾಹಿಸಿದವು. ಎದುರ್ಕಳ ಮಾವಂಗೂ, ಡಾ.ಮಹೇಶಣ್ಣಂಗೂ ಧನ್ಯವಾದ. ಪ್ರತಿವಾರವೂ ಸುದೀರ್ಘವಾಗಿಯೇ ಬಂದುಗೊಂಡಿದ್ದ ಈ ಶುದ್ಧಿಯ ಓದಿ ಒಪ್ಪಕೊಟ್ಟುಗೊಂಡಿದ್ದ ಪ್ರತಿಯೊಬ್ಬ ಓದುಗರಿಂಗೂ, ಓದಿ ಒಪ್ಪಕೊಡದ್ದೇ ಅಲ್ಲಿಂದಲೇ ಹರಸಿದ ಬೈಲ ಬಾಂಧವರಿಂಗೂ ಮನದಾಳದ ಅನಂತಾನಂತ ಧನ್ಯವಾದಂಗೊ.
ಗೀತೆಯ ಓದುವ ಒಟ್ಟಿಂಗೆ ಶ್ಲೋಕಂಗಳ ಕೇಳಿಗೊಂಡು ಓದಿರೆ ಇನ್ನೂ ಉತ್ತಮ ಅಕ್ಕು ಹೇದು ಧ್ವನಿಸಹಿತ ಬೈಲಿಂಗೆ ತಪ್ಪಲೆ ಆಶೆಪಟ್ಟತ್ತು. ಓದಲೂ, ಕಲಿವಲೂ ಸುಲಭ ಆವ್ತಾಂಗೆ ಪಾರಾಯಣ ಮಾಡಿದ ಸಿ.ಡಿ ‘ಗಿರಿ ಟ್ರೇಡಿಂಗ್’ನವರದ್ದು ಕಂಡತ್ತು. ಆದರೆ ಅದರ ಕದ್ದು ಹಾಕುವದು ಕಾನೂನು ರೀತ್ಯಾ ಅಪರಾಧವೇ ಆವ್ತು. ನಮ್ಮ ಕಾರ್ಯವ ಇಲ್ಲಿಯಾಣ ‘ಗಿರಿ ಟ್ರೇಡಿಂಗಿ’ ರಂಗನಾಥ ಭಾವಯ್ಯನತ್ರೆ ಹೇಳಿಯಪ್ಪಗ ಅವ್ವಾಗಿಯೇ ಲಿಖಿತ ಒಪ್ಪಿಗೆಯನ್ನೇ ಕೊಟ್ಟವು. ಅವಕ್ಕೆ ಮನದಾಳದ ಧನ್ಯವಾದಂಗೊ ಸೂಚಿಸಲೇ ಬೇಕು.
ಎಲ್ಲೋರಿಂಗೂ ಒಳ್ಳೆದಾಗಲಿ. ಎಲ್ಲೋರಿಂಗೂ ಗೀತಾಚಾರ್ಯ° ಆ ಭಗವಂತನ ಸಂಪೂರ್ಣ ಕೃಪಾಕಟಾಕ್ಷ ಉಂಟಾಗಲಿ.  ‘ಹರೇ ರಾಮ’ ಹೇಳಿ ಮತ್ತೊಂದರಿ ಹೇಳಿಗೊಂಡು ವಿರಮಿಸುತ್ತೆ.
ಓಂ ತತ್ಸತ್ ॥ ಶ್ರೀ ಕೃಷ್ಣಾರ್ಪಣಮಸ್ತು ॥ ಹರೇ ರಾಮ ॥

7 thoughts on “ಶ್ರೀಮದ್ಭಗವದ್ಗೀತಾ – 'ಪರಿಸಮಾಪ್ತಿ'

  1. ಚೆನ್ನೈ ಭಾವ, ನಿಂಗಳ ಮಹಾ ಸಾಹಸಕ್ಕೆ ಅಭಿನಂದನೆಗೊ.

    1. ಚೆನ್ನೈ ಭಾವ,
      ಹರೇ ರಾಮ;ಬಹಳ ಒಳ್ಳೆ ಕಾರ್ಯ ಒ೦ದರ ಲಾಯ್ಕಕಕೆ ಸ೦ಪನ್ನ ಮಾಡಿದ್ದಿ. ಅಬಿನ೦ದನಗೊ.ಆದಷ್ಟು ಬೇಗ ಇದು ಪುಸ್ತಕ ರೂಪಲ್ಲಿ ಪ್ರಕಟವಾಗಲಿ ಹೇದು ಹಾರೈಕೆ.ನಮಸ್ತೇ.

  2. ನಿಜವಾಗಿಯೂ ಅಭಿನಂದನೀಯ ಕಾರ್ಯ. ಇದು ಪುಸ್ತಕ ರೂಪಲ್ಲಿಯೂ ಬಂದು ಎಲ್ಲೋರಿಂಗೂ ಸಿಕ್ಕುತ್ತ ಹಾಂಗಾಗಲಿ.

  3. ಇದು ನಮ್ಮ ಭಾಷೆಯ ಸ್ಥಿರ ಆಸ್ತಿ. ಚೆನ್ನೈಭಾವನ ಪಯತ್ನಕ್ಕೆ ನಮನ೦ಗೊ.

  4. ಅಭಿನಂದನೀಯ ಮತ್ತೆ ಸ್ತುತ್ಯರ್ಹ ಕಾರ್ಯ.
    ಎಲ್ಲದರ ಸಂಗ್ರಹ ಹೇಳಿ ವಿನೀತರಾಗಿ ಹೇಳಿದರೂ ಇದರ ಹಿಂದೆ ಇಪ್ಪ ಶ್ರಮ ಅಪಾರ. ಇದರ ಬೈಲಿನ ಎಲ್ಲರಿಂಗೂ ಒದಗುಸುತ್ತೆ ಹೇಳ್ತ ಮನೋಭಾವ ಹಾಂಗೂ ಅದಕ್ಕಾಗಿ ಪಟ್ಟ ಶ್ರಮಂಗೊಕ್ಕೆ ನಮೋ ನಮಃ.
    ಹವ್ಯಕ ಭಾಷೆಲಿ ಇಷ್ಟೊಂದು ದೀರ್ಘವಾಗಿ, ಎಲ್ಲರಿಂಗೂ ಅರ್ಥ ಆವ್ತ ಹಾಂಗೆ ನ ಭೂತೋ ನ ಭವಿಷ್ಯತಿ ಆಗಿ ಲೇಖನ ಮಾಲೆ ಮೂಡಿ ಬಂತು.
    ಭಗವದ್ಗೀತೆ ಪುಸ್ತಕಂಗಳ ತೆಕ್ಕೊಂಡರೆ ಅದರಲ್ಲಿ ಸಿಕ್ಕುವ ವಿವರಂಗೊ ಬರೇ ಭಾವರ್ಥ ವಿವರಣೆಗೆ ಸೀಮಿತವಾಗಿರ್ತು. ಆದರೆ ಇಲ್ಲಿ ಪದವಿಭಾಗವ, ಅನ್ವಯ, ಪ್ರತಿಪದಾರ್ಥ, ತಾತ್ಪರ್ಯ ವಿವರಣೆಯನ್ನೂ ಕೊಟ್ಟು ಲೇಖನ ಶ್ರೀಮಂತ ಆತು, ಸಂಸ್ಕೃತ ಅಭ್ಯಾಸಿಗೊಕ್ಕೆ ಸಕಾಯ ಕೂಡಾ ಆತು.
    ಇನ್ನು ಮುಂದೆಯೂ ಹೀಂಗಿಪ್ಪ ಕೃತಿಗಳ ನಿರೀಕ್ಷೆಲಿ ಒಂದೊಪ್ಪ

  5. ಚೆನ್ನೈಭಾವನ ಶ್ರಮಕ್ಕೆ ಅಭಿನಂದನೆ ಸಲ್ಲಿಸಿ, ಆದಷ್ಟು ಬೇಗ ಇದು ಪುಸ್ತಕ ರೂಪಲ್ಲಿ ಬರಲಿ ಹೇಳಿ ಹಾರೈಸುತ್ತೆ…

  6. ಶುಭಮಸ್ತು. ಚೆನ್ನೈ ಭಾವಂಗೆ ಧನ್ಯವಾದ ಮತ್ತೆ ಅಭಿನಂದನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×