Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 18 – 27

ಬರದೋರು :   ಚೆನ್ನೈ ಬಾವ°    on   14/03/2013    9 ಒಪ್ಪಂಗೊ

ಚೆನ್ನೈ ಬಾವ°

ಹಿಂದಾಣ ಭಾಗಲ್ಲಿ ಸತ್ವ-ರಜ-ತಮೋಗುಣಂಗೊ ಹೇಳ್ವ ಪ್ರಕೃತಿಯ ತ್ರಿಗುಣಂಗೊ ಮನುಷ್ಯನ ಏವ ರೀತಿಲಿ ಕೊಣುಶುತ್ತು ಹೇಳ್ವದರ ಓದಿದ್ದು. ಈ ಹಂತಲ್ಲಿ ಬನ್ನಂಜೆಯವು ಇನ್ನು ಕೆಲವೊಂದು ಸೂಕ್ಷ್ಮ ವಿಷಯಂಗಳ ಹೇಳಿದ್ದವು. ಮುಂದಾಣ ಭಾಗಕ್ಕೆ ಹೋಪಂದ ಮದಲೆ ಅದೆಂತರ ಹೇಳ್ವದನ್ನೂ ನಾವು ಇಲ್ಲಿ ನೋಡುವೊ°.

ಸತ್ವ-ರಜ-ತಮಂಗೊಕ್ಕೆ ಇನ್ನೊಂದು ಮುಖವೂ ಇದ್ದು. ಪೂಜೆಲಿ ಹೇಳ್ವ “ಸಂ ಸತ್ತ್ವಾಯ ನಮಃ, ರಂ ರಜಸೇ ನಮಃ, ತಂ ತಮಸೇ ನಮಃ” – ಭಗವಂತನ ಅನುಸಂಧಾನ ಮಾಡುವ ಮದಲೆ ಹೇಳ್ವ ಮಂತ್ರಂಗೊ. ಇದರ ಶ್ರೀತತ್ತ್ವ ಆರಾಧಕರು ಇನ್ನೊಂದು ರೀತಿಲಿ ಹೇಳ್ತವು – “ಸಂ ಸತ್ತ್ವಾಯ ಶ್ರಿಯೈ ನಮಃ , ರಂ ರಜಸೇ ಭೂವೇ ನಮಃ, ತಂ ತಮಸೇ ದುರ್ಗಾಯ ನಮಃ”. ಇದು ಮಂತ್ರ ಅಲ್ಲ. ಮೂಲರೂಪದ ಮಂತ್ರ – “ಸಂ ಸತ್ತ್ವಾಯ ನಮಃ, ರಂ ರಜಸೇ ನಮಃ, ತಂ ತಮಸೇ ನಮಃ”. ಇಲ್ಲಿ ಸಂ ಸತ್ವಾಯ ನಮಃ ಹೇಳಿರೆ ಸತ್ವಗುಣಕ್ಕೆ ನಮಸ್ಕಾರ ಮಾಡುತ್ತದು ಅಲ್ಲ. ಸತ್ವಮಾನಿನಿಯಾದ ಶ್ರೀ ದೇವಿಗೆ ನಮಸ್ಕಾರ ಮಾಡುವದು. ರಂ ರಜಸೇ ನಮಃ ಹೇದರೆ ರಜೋಮಾನಿನಿಯಾದ ಭೂದೇವಿಗೆ ನಮಸ್ಕಾರ. ತಂ ತಮಸೇ ನಮಃ ಹೇಳಿರೆ ತಮೋಮಾನಿನಿಯಾದ ದುರ್ಗಾದೇವಿಗೆ ನಮಸ್ಕಾರ. ಇವು ಲಕ್ಷ್ಮಿಯ ಮೂರು ರೂಪಂಗೊ. ಲಕ್ಷ್ಮಿಯ ಮೂಲ ರೂಪಕ್ಕೆ ‘ಮಹಾಲಕ್ಷ್ಮಿ’  ಹೇದು ಹೇಳುವದು. ಈ ಮೂಲರೂಪಂದ ಮೂರು ಆವೇಶ ರೂಪಂಗೆ – ಶ್ರೀ, ಭೂ, ದುರ್ಗಾ.

ಇಲ್ಲಿ ಸತ್ವವ ಜಾಗೃತಗೊಳುಸುವದು ಶ್ರೀದೇವಿ, ರಜಸ್ಸಿನ ಜಾಗೃತಗೊಳುಸುವದು ಭೂದೇವಿ, ತಮೋಗುಣವ ಜಾಗೃತಗೊಳುಸುವದು ತಮೋ ಮಾನಿನಿಯಾದ ದುರ್ಗಾದೇವಿ. “ಸತ್ವಾತ್ ಸಂಜಾಯತೇ ಜ್ಞಾನಂ” – ಹೇಳಿರೆ, ಸತ್ವಗುಣ್ದ ಅಭಿಮಾನಿನಿಯಾದ ಲಕ್ಷ್ಮಿ ಜ್ಞಾನಪ್ರದೆ. ನಾರಾಯಣನ ಜ್ಞಾನ ಬರೇಕ್ಕಾರೆ ಶ್ರೀ ದೇವಿಯ ಅನುಗ್ರಹ ಬೇಕು. ‘ಶ್ರೀ’ ಸಂಪತ್ತಿನ ಕೊಡ್ವೋಳು. ಇದು ಐಹಿಕ ಸಂಪತ್ತಿನ ವಿಷಯ ಅಲ್ಲ, ಬದಲಾಗಿ, ಜ್ಞಾನವೆಂಬ ಮಹಾಸಂಪತ್ತಿನ ಕೊಡ್ತೋಳು ಹೇದು ತಿಳ್ಕೊಳ್ಳೆಕು. ಪೈಸೆ ಸಂಪತ್ತು ಅಪ್ಪು, ಆದರೆ ‘ಜ್ಞಾನ’ ಹೇಳ್ವದು ಮಹಾಸಂಪತ್ತು. ನಮ್ಮೊಳ ‘ಜ್ಞಾನ’ ಜಾಗೃತ ಆಯೇಕ್ಕಾರೆ ಸುರುವಾಣ ಅಬ್ಬೆಯ ‘ಶ್ರೀ’ ರೂಪವ ಉಪಾಸನೆ ಮಾಡೆಕು. ಭಗವಂತನ ಜ್ಞಾನವ ಕರುಣುಸು ಹೇದು ಆ ಅಬ್ಬೆಯ ಬೇಡೆಕು.

ಭಗವಂತನ ಕಡೆಂಗೆ ನಮ್ಮ ಮನಸ್ಸು ಹರಿಯೆಕ್ಕಾರೆ ಮದಾಲು ನಾವು ಮನೋsಭಿಮಾನಿ ದೇವತೆಯ ಪ್ರಾರ್ಥಿಸೆಕು. ಶಿವ° ವಿಶೇಷತಃ ಮನೋsಭಿಮಾನಿ ದೇವತೆ. ಜ್ಞಾನ ಬೇಕು ಹೇಳುವವರ ಮನಸ್ಸಿನ ತಮೋಗುಣವ /ಕಸ್ತಲೆಯ ಓಡುಸಿ ಬೆಣಚ್ಚಿ ತುಂಬುವವು ‘ಶಿವ-ಪಾರ್ವತಿ’. ಈ ಕಾರಣಕ್ಕಾಗಿ ಜ್ಞಾನಕ್ಕಾಗಿ ಮದಾಲು ನಾವು ಪ್ರಾರ್ಥನೆ ಮಾಡೇಕ್ಕಾಗಿಪ್ಪದು ಶಿವತತ್ವವ. ಶಿವ° ಜ್ಞಾನ ಕೊಟ್ಟ ಮತ್ತೆ ಅದು ಚಿತ್ತಲ್ಲಿ ಸ್ಮರಣಶಕ್ತಿಯಾಗಿ ಒಳಿವಲೆ ನಾವು ಪ್ರಾರ್ಥಿಸೆಕ್ಕಾದ್ದು ಪ್ರಾಣಶಕ್ತಿಯ (ಬ್ರಹ್ಮ-ವಾಯು, ಸರಸ್ವತಿ-ಭಾರತಿ). ನವಗೆ ಬಂದ ಜ್ಞಾನ ಮರೆಯಾಗದ್ದೆ ಸ್ಥಿರವಾಗಿಪ್ಪಂತೆ ಮಾಡುವ ಪ್ರಮುಖ ಶಕ್ತಿ – ಪ್ರಾಣಶಕ್ತಿ (ಆಂಜನೇಯ°). ಈ ರೀತಿ ಸ್ಥಿರವಾದ್ದು ಮತ್ತೆ ಎತ್ತರಕ್ಕೆ ಹೋಗಿ ಭಗವಂತನ ಮುಟ್ಳೆ ಅನುಕೂಲ ಮಾಡುವದು ಸದಾ ಭಗವಂತನ ಒಟ್ಟಿಂಗೆ ಇಪ್ಪ ಲಕ್ಷ್ಮೀದೇವಿ. ಇಂಥಹ ಲಕ್ಷ್ಮಿ ತನ್ನ ಎಲ್ಲಾ ರೂಪಲ್ಲಿ ಜ್ಞಾನವ ಕೊಡುತ್ತಿಲ್ಲೆ. ಅದು ತನ್ನ ಶ್ರೀರೂಪಲ್ಲಿ ಜ್ಞಾನರೂಪವಾದ ಸಂಪತ್ತಿನ ಕರುಣಿಸುತ್ತು. ‘ಶ್ರೀ’ ಮಹಾಲಕ್ಷ್ಮಿಯ ಅವತಾರಂಗಳಲ್ಲಿ ಒಂದು. ಸತ್ವವ ನಿಯಮನ ಮಾಡಿ ಜಗತ್ತಿನ ರಕ್ಷಣಗೆ ವಿಷ್ಣುವಿನ ಒಟ್ಟಿಂಗೆ ಸ್ಥಿರವಾಗಿ ನಿಂದಿಪ್ಪ ರೂಪ ಇದು. ಹಾಂಗಾಗಿ ಜ್ಞಾನ ಮಾರ್ಗಲ್ಲಿ ಸಾಗುವವಂಗೆ ಮುಖ್ಯವಾದ್ದು ಲಕ್ಷ್ಮಿಯ ಶ್ರೀ ನಾಮಕ ಅನುಗ್ರಹ.

ಬನ್ನಂಜೆ ಇನ್ನೂ ರಜಾ ವಿಷಯಂಗಳ ಹೇಳುತ್ತವಿಲ್ಲಿ. ನಾವು ಶಿವ°, ಪ್ರಾಣದೇವರು ಮತ್ತೆ ಶ್ರೀ ದೇವಿ ಅನುಗ್ರಹಂದ ಜ್ಞಾನಮಾರ್ಗಲ್ಲಿ ಮುನ್ನಡದು ಭಗವಂತನ ಸೇರ್ಲಕ್ಕು ಹೇಳಿ ವಿಶ್ಲೇಷಿಸಿದ್ದರ ಕಂಡತ್ತು. ಮುಂದೆ ಭೂತತ್ವದ ಬಗ್ಗೆ ನೋಡುವೋ°. ಅದ್ರಂದ ಮದಲು ಶಾಂತಿಮಂತ್ರ ಮತ್ತೆ ಗಣಪತಿಯ ಪ್ರಾರ್ಥನೆಯ ಮಹತ್ವವ ಬನ್ನಂಜೆ ವಿವರುಸುತ್ತವು. ಏವುದೇ ಶಾಸ್ತ್ರವ ಓದುವ ಮದಲು ಓಂ ಶಾಂತಿಃ, ಶಾಂತಿಃ ಶಾಂತಿಃ ಹೇದು ಶಾಂತಿ ಮಂತ್ರವ ಪಠಿಸುತ್ತು. ಜ್ಞಾನಾನಂದದ ಪರಾಕಾಷ್ಠೆಯಾದ ಭಗವಂತನೇ, ಎನ್ನ ಜ್ಞಾನಾನಂದದ (ಶಾ+ಅಂತಿ) ದಾರಿಲಿ ನೆಡೆಶು ಹೇಳ್ವದು ಈ ಶಾಂತಿ ಮಂತ್ರದ ಅರ್ಥ. ಇದೇ ರೀತಿ, ಪ್ರತಿ ಪೂಜೆಂದ ಮದಲು ಗಣಪತಿ ಪ್ರಾರ್ಥನೆ ಮಾಡುತ್ತು. ಎಂತಕೆ ಹೇಳಿರೆ ಶಿವ-ಪಾರ್ವತಿಯರ ಮಗ° ಗಣಪತಿ – ಆಕಾಶದ ದೇವತೆ. ಈ ಆಕಾಶ ಭಗವಂತನ ನಾಭಿಂದ ಸೃಷ್ಟಿಯಾದ್ದು. ಹಾಂಗಾಗಿ ಗಣಪತಿ ನಮ್ಮ ನಾಭಿದೇವತೆ. “ನಾಭ್ಯ ಆಸೀದಂತರಿಕ್ಷಂ । ಶೀರ್ಷ್ನೋಧ್ಯೋ ಸಮವರ್ತತ । ಪಧ್ಭ್ಯಾಂ ಭೂಮಿರ್ ದಿಶ ಶ್ರೋತ್ರಾತ್ । ತತಾ ಲೋಕಾ ಅಕಲ್ಪಯನ್” ॥ ನಮ್ಮ ನಾಭಿಯ ಹತ್ರೆ ಇಪ್ಪ ಮೂರು ಚಕ್ರಂಗೊ – ಮೂಲಾಧಾರ, ಸ್ವಾದಿಷ್ಟಾನ, ಮಣಿಪುರ. ನಾಭಿಂದ ಮೇಗೆ ಹೃತ್ಕಮಲಲ್ಲಿ ನಿಜವಾದ ಸಾಧನೆಯ ‘ಅನಾಹತ ಚಕ್ರ’ ಇಪ್ಪದು. ಮೂಲಾಧಾರ, ಸ್ವಾದಿಷ್ಟಾನ, ಮಣಿಪುರ ಚಕ್ರಂಗಳ ಮೀರಿ ಹೃದಯವ ಪ್ರವೇಶಿಸೆಕ್ಕಾರೆ ನಾಭಿಯ ಬಾಗಿಲ ಗಣಪತಿ ಬಿಡುಸೆಕು. ಹಾಂಗಾಗಿ ನಾವು ಗೆಣವತಿಯತ್ರೆ ಪ್ರಪ್ರಥಮವಾಗಿ ಪ್ರಾರ್ಥನೆ ಮಾಡುವದು. ಪ್ರತೀ ಯಜ್ಞದ ಮದಲು ಗಣಪತಿ ಮಂಡಲ ಬರದು ಪೂಜಿಸಿ , ಪ್ರಾರ್ಥಿಸಿ ಮತ್ತೆ ಯಜ್ಞ (ಯಾವುದೇ ಕರ್ಮ) ಪ್ರಾರಂಭ ಅಪ್ಪದು. ಗಣಪತಿ ನಾಭಿಯ ಬಾಗಿಲ ಬಿಡಿಸಿಯಪ್ಪಗ ಹೃತ್ಕಮಲ ತಾನೇ ತಾನಾಗಿ ಬಿಡಿಸಿಗೊಳ್ತು. ಈ ಸ್ಥಿತಿಲಿ ‘ವೃಷಾಹ’ ಹೇಳಿ ಹೆಸರು. ಭಗವಂತ° ಈ ಸ್ಥಿತಿಲಿ ನಮ್ಮ ಪೂಜೆಯ ವೃಷಾಹೀಯಾಗಿ ಸ್ವೀಕರುಸುತ್ತ. ಇಂಥಹ ಭಗವಂತನ ‘ವೃಷಾಹೀ’ ಹೇಳಿ ದೆನಿಗೊಂಬದು.

“ರಜಸೋ ಲೋಭ ಏವ ಚ” ರಜಸ್ಸು ಹೇಳಿರೆ ರಜೋಗುಣದ ಅಭಿಮಾನಿನಿಯಾದ ‘ಭೂದೇವಿ’. ಇಲ್ಲಿ ಭೂದೇವಿ ಹೇಳಿರೆ ಭೂಮಿಯ ನಿಯಮನ ಮಾಡುವ ಹದಿನೆಂಟನೇ ಕಕ್ಷೆಲಿಪ್ಪ ದೇವತೆ ಭೂದೇವಿ ಅಲ್ಲ. ಆ ಭೂದೇವಿಯನ್ನೂ ನಿಯಮನ ಮಾಡುವ ಲಕ್ಶ್ಮಿಯ ಅವೇಶರೂಪ ‘ಭೂ’. ಅದು ಸೃಷ್ಟಿಗೆ ಕಾರಣವಾದ್ದು. ರಂಜನೆ, ಆಕರ್ಷಣೆ, ಎಳೆತ, ಮೋಹ ಇತ್ಯಾದಿ ರಜೋಗುಣದ ಮುಖಂಗೊ. ಹಾಂಗಾಗಿ ಒಬ್ಬರ ಒಬ್ಬ° ಪ್ರೀತಿಸುವದಕ್ಕೆ ಮೂಲಭೂತವಾಗಿ ಬೇಕಾಗಿಪ್ಪದು – ರಂಜನ. ಗೆಂಡು-ಹೆಣ್ಣಿನ ಸೆಳೆತವೇ ಸೃಷ್ಟಿಗೆ ಕಾರಣವಾದ್ದು. ಸೃಷ್ಟಿಗೆ ಬೇಕಾದ ಸೆಳೆತವ ಕೊಟ್ಟು ಸೃಷ್ಟಿ ಮಾಡುವ, ಅದೇ ಸೆಳೆತಂದ ದಾರಿ ತಪ್ಪುಸುವ ಅಂಶ ರಜೋಗುಣಲ್ಲಿ ಇದ್ದು. ಅಂತಹ ರಜೋಗುಣದ ಸ್ವಭಾವವ ಕೊಡ್ತೋಳು – ಭೂದೇವಿ. ಎನ್ನ ಆಸ್ತಿ, ಎನ್ನ ಮನೆ , ಎನ್ನ ದುಡಿಮೆ, ಎನ್ನ ಪೈಸೆ ಇತ್ಯಾದಿ ಮೋಹಂಗೊ ರಜೋಗುಣಂದ ಬಪ್ಪಂತಾದ್ದು.

“ಪ್ರಮಾದ ಮೋಹೌ ತಮಸಃ ಭವತಃ ಅಜ್ಞಾನಂ ಏವ ಚ” – ಭೌತಿಕವಾಗಿ ನಮ್ಮ ವಿನಾಶದತ್ತೆ ಕೊಂಡೋಪ, ಸಂಹಾರ ಶಕ್ತಿಯಾದ, ತಮೋಗುಣದ ಅಭಿಮಾನಿನಿ – ‘ದುರ್ಗೆ’. ಅದು ಸಂಹಾರದತ್ತೆ ಹೋಪ ಬುದ್ದಿ ಕೊಡುವದು. ತಪ್ಪನ್ನೇ ಸರಿ ಹೇದು ತಿಳುದು ತಪ್ಪು ಮಾಡುವದು, ಅದರಿಂದ ಜಾರಿ ಬೀಳುವದು, ವಿಪರೀತ ಜ್ಞಾನ, ಜ್ಞಾನದ ಅಭಾವ ಇತ್ಯಾದಿ ತಮೋಗುಣದ ಪ್ರಭಾವಂದ ಬಪ್ಪಂತಾದ್ದು.

ಹೀಂಗೆ, ಚಿತ್ಪ್ರಕೃತಿಯ ಮೂರು ಆವೇಶರೂಪಂಗಳಾದ ‘ಶ್ರೀ-ಭೂ-ದುರ್ಗಾ’ ಸತ್ವ-ರಜಸ್ಸು-ತಮಸ್ಸಿನ ಅಭಿಮಾನಿನಿಗಳಾಗಿ ತ್ರಿಗುಣಂಗಳಿಂದ ನಮ್ಮ ಬಂಧಿಸುತ್ತು. ಹಾಂಗಾಗಿ ಚಿತ್ಪ್ರಕೃತಿಯ ಚೈತನ್ಯದ ಮೂರು ರೂಪಂಗಳೇ ಸತ್ವ-ರಜಸ್ಸು-ತಮಸ್ಸು.

ಇವಿಷ್ಟರ ಮನಸ್ಸಿಲ್ಲಿ ಮಡಿಕ್ಕೊಂಡು ಭಗವಂತ° ‘ಸತ್ವ-ರಜ-ತಮ’ದ ಬಗ್ಗೆ ಮುಂದೆ ಎಂತ ಹೇಳಿದ್ದ° ಹೇಳ್ವದರ ನಾವಿಲ್ಲಿ ನೋಡುವೋ° –

 

ಶ್ರೀಮದ್ಭಗವದ್ಗೀತಾ ಚತುರ್ದಶೋsಧ್ಯಾಯಃ – ಗುಣತ್ರಯವಿಭಾಗಯೋಗಃ – ಶ್ಲೋಕಾಃ 18 – 27

BHAGAVADGEETHA

ಶ್ಲೋಕ

ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯಗುಣವೃತ್ತೀಸ್ಥಾ ಅಧೋ ಗಚ್ಛಂತಿ ತಾಮಸಾಃ ॥೧೮॥

ಪದವಿಭಾಗ

ಊರ್ಧ್ವಮ್ ಗಚ್ಛಂತಿ ಸತ್ತ್ವಸ್ಥಾಃ ಮಧ್ಯೇ ತಿಷ್ಠಂತಿ ರಾಜಸಾಃ । ಜಘನ್ಯ-ಗುಣ-ವೃತ್ತಿಸ್ಥಾಃ ಅಧಃ ಗಚ್ಛಂತಿ ತಾಮಸಾಃ ॥

ಅನ್ವಯ

ಸತ್ತ್ವಸ್ಥಾಃ ಊರ್ಧ್ವಂ ಗಚ್ಛಂತಿ, ರಾಜಸಾಃ ಮಧ್ಯೇ ತಿಷ್ಠಂತಿ, ಜಘನ್ಯ-ಗುಣ-ವೃತ್ತಿಸ್ಥಾಃ ತಾಮಸಾಃ ಅಧಃ ಗಚ್ಛಂತಿ ।

ಪ್ರತಿಪದಾರ್ಥ

ಸತ್ತ್ವಸ್ಥಾಃ – ಸತ್ವಗುಣಲ್ಲಿಪ್ಪವು, ಊರ್ಧ್ವಮ್ ಗಚ್ಛಂತಿ – ಮೇಗಂತಾಗಿ ಹೋವುತ್ತವು, ರಾಜಸಾಃ – ರಜೋಗುಣಲ್ಲಿಪ್ಪೋರು, ಮಧ್ಯೇ ತಿಷ್ಠಂತಿ – ನೆಡುಕ್ಕೆ ನಿಲ್ಲುತ್ತವು, ಜಘನ್ಯ-ಗುಣ-ವೃತ್ತಿಸ್ಥಾಃ ತಾಮಸಾಃ – ಕೀಳುಗುಣದ ವೃತ್ತಿಯ ತಮೋಗುಣದೋರು, ಅಧಃ ಗಚ್ಛಂತಿ – ಕೆಳಂತಾಗಿ ಹೋವುತ್ತವು.

ಅನ್ವಯಾರ್ಥ

ಸತ್ವಗುಣಲ್ಲಿಪ್ಪೋರು ಕ್ರಮೇಣ ಊರ್ಧ್ವಲೋಕಂಗೊಕ್ಕೆ ಏರಿ ಹೋವುತ್ತವು, ರಜೋಗುಣಲ್ಲಿಪ್ಪೋರು ಮಧ್ಯೇ – ನೆಡುಕೆ, ಹೇಳಿರೆ ಭೂಲೋಕಲ್ಲಿ ನಿಲ್ಲುತ್ತವು. ಅಸಹ್ಯಕರವಾದ ತಾಮಸಗುಣಲ್ಲಿಪ್ಪೋರು ಕೆಳಂತಾಗಿ ನರಕಲೋಕಂಗೊಕ್ಕೆ ಇಳಿತ್ತವು.

ತಾತ್ಪರ್ಯ / ವಿವರಣೆ

ತ್ರಿಗುಣಂಗಳ ಸ್ವಭಾವಂಗಳ ಹೇಳಿದ ಭಗವಂತ° ಅದರ ಪರಿಣಾಮದ ಬಗ್ಗೆ ಇಲ್ಲಿ ಹೇಳುತ್ತ°. ಸತ್ವಗುಣಲ್ಲಿ ನೆಲೆಗೊಂಡೋರು ಮಾನಸಿಕವಾಗಿ ಮೇಲೇರಿ ಮೇಗಂತಾಗಿ, ಹೇಳಿರೆ., ಉತ್ತಮವಾದ ಊರ್ಧ್ವ ಲೋಕಂಗೊಕ್ಕೆ ಏರುತ್ತವು. ರಜೋಗುಣಲ್ಲಿಪ್ಪೋರಿಂಗೆ ಏವ ಏಳಿಗೆಯೂ ಇಲ್ಲೆ. ನೆಡುಕೆ ಬಾಕಿ. ನೆಡುಕೆ ಹೇಳಿ ಊರ್ಧ್ವ, ಅಧಃ ಲೋಕಂಗಳ ನೆಡುಕೆ ಹೇಳಿರೆ ಭೂಲೋಕಲ್ಲಿಯೇ ಬಾಕಿಯಾಗಿ ನಿಲ್ಲುತ್ತವು. ಇನ್ನು ತಮೋಗುಣಲ್ಲಿಪ್ಪೋರು ನರಕ ಸದೃಶವಾದ ಕೆಳಾಣ ಲೋಕಕ್ಕೆ ತಳ್ಳಲ್ಪಡುತ್ತವು.

ಬನ್ನಂಜೆ ಹೇಳ್ತವು – ಇಲ್ಲಿ ಊರ್ಧ್ವ ಹೇಳಿರೆ ಎಲ್ಲಕ್ಕಿಂತ ಮೇಗಿಪ್ಪ ಭಗವಂತ°. ಸತ್ವಲ್ಲಿ ಮೇಗಂತಾಗಿ ಹೋಪದು ಹೇಳಿರೆ ಭಗವಂತನ ಕಡೆಂಗೆ ಮುಖಮಾಡಿ ಚಲುಸುವದು. ಅವ ಮುಂದೆ ಮುಂದೆ ಹೋದಾಂಗೆ ಭಗವಂತಂಗೆ ಹತ್ರೆ ಆವ್ತಾ ಹೋವ್ತ°. ಹಾಂಗೆ ತಮಸ್ಸಿಲ್ಲಿಪ್ಪವ° ಭಗವಂತಂಗೆ ಬೆನ್ನು ಹಾಕಿ ಚಲುಸುತ್ತ. ಇದರಿಂದಾಗಿ ಅಧೋಲೋಕವ ಸೇರುತ್ತ°. ಮತ್ತೆ ರಾಜಸ° ಇದ್ದಲ್ಲೇ ಅತಂತ್ರ ಸ್ಥಿತಿಲಿ ಮುಂದುವರಿತ್ತ°.

ದೇವತೆಗಳ ಬಂಧನಲ್ಲಿ ಮಡಿಕ್ಕೊಂಬ (ನಿಯಮನ ಮಾಡುವ) ಶಕ್ತಿ – ‘ಶ್ರೀದೇವಿ’. ಮಾನವರ ನಿಯಮನಲ್ಲಿ ಮಡಿಕ್ಕೊಂಬ ಶಕ್ತಿ – ‘ಭೂದೇವಿ’, ಮತ್ತೆ ರಾಕ್ಷಸರ ನಿಯಾಮಕ ಶಕ್ತಿ – ‘ದುರ್ಗಾದೇವಿ’. ಸಾತ್ವಿಕರು ಸತ್ವಮಾನಿನಿಯಾದ ಶ್ರೀದೇವಿಯ ಕೃಪೆಗೆ ಪಾತ್ರರಾಗಿ ಮೇಗಾಣ ಲೋಕವ ಪಡೆತ್ತವು. (ಭೂಮಿಯ ಮೇಗಂತಾಗಿ ಇಪ್ಪ ಆರು ಸೂಕ್ಷ್ಮ ಲೋಕಂಗಳ ದಾಂಟಿರೆ ಮತ್ತೆ ಸಿಕ್ಕುವದು ಮೋಕ್ಷ). ರಾಜಸರು ಭೂದೇವಿಯ ಬಂಧನಲ್ಲಿ ಭೂಮಿಲಿಯೇ ಬಾಕಿಯಾವ್ತವು. ತಾಮಸರು ದುರ್ಗಾದೇವಿಯ ನಿಯಂತ್ರಣಲ್ಲಿಪ್ಪ ತಾಮಸ ಲೋಕ (ಭೂಮಿಂದ ಕೆಳಂತಾಗಿಪ್ಪ ಏಳು ಸೂಕ್ಷ್ಮಲೋಕಂಗೊ)ವ ಸೇರುತ್ತವು.

ಶ್ಲೋಕ

ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾನುಪಶ್ಯತಿ ।
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋsಧಿಗಚ್ಛತಿ ॥೧೯॥

ಪದವಿಭಾಗ

ನ ಅನ್ಯಮ್ ಗುಣೇಭ್ಯಃ ಕರ್ತಾರಮ್ ಯದಾ ದ್ರಷ್ಟಾ ಅನುಪಶ್ಯತಿ । ಗುಣೇಭ್ಯಃ ಚ ಪರಮ್ ವೇತ್ತಿ ಮತ್-ಭಾವಮ್ ಸಃ ಅಧಿಗಚ್ಛತಿ ॥

ಅನ್ವಯ

ಯದಾ ದ್ರಷ್ಟಾ ಗುಣೇಭ್ಯಃ ಅನ್ಯಂ ಕರ್ತಾರಂ ನ ಅನುಪಶ್ಯತಿ, ಗುಣೇಭ್ಯಃ ಚ ಪರಂ (ಆತ್ಮಾನಮ್) ವೇತ್ತಿ, (ತದಾ) ಸಃ ಮತ್-ಭಾವಮ್ ಅಧಿಗಚ್ಛತಿ ।

ಪ್ರತಿಪದಾರ್ಥ

ಯದಾ – ಏವಾಗ, ದ್ರಷ್ಟಾ – ದ್ರಷ್ಟಾರ° (ಮನುಷ್ಯ°), ಗುಣೇಭ್ಯಃ – ಗುಣಂಗಳಿಂದ, ಅನ್ಯಮ್ ಕರ್ತಾರಮ್ – ಇನ್ನೊಬ್ಬ° ಕರ್ತಾರನ, ನ ಅನುಪಶ್ಯತಿ – ನೋಡುತ್ತನಿಲ್ಲೆಯೋ (ಕಾಣುತ್ತನಿಲ್ಲೆಯೋ), ಗುಣೇಭ್ಯಃ ಚ – ಗುಣಂಗೊಕ್ಕೆ ಕೂಡ, ಪರಮ್ – ಅತೀತನಾದವ°, (ಆತ್ಮಾನಮ್ – ಪರಮಾತ್ಮನ) ವೇತ್ತಿ – ಹೇದು ತಿಳಿತ್ತನೋ,  (ತದಾ – ಅಂಬಗ), ಸಃ – ಅವ°, ಮತ್-ಭಾವಮ್ – ಎನ್ನ ಸ್ವಭಾವಕ್ಕೆ, ಅಧಿಗಚ್ಛತಿ – ಸೇರುತ್ತ°.

ಅನ್ವಯಾರ್ಥ

ಏವಾಗ ಮನುಷ್ಯ° ತ್ರಿಗುಣಂಗಳಿಲ್ಲದ್ದ ಇನ್ನೊಬ್ಬ ಕರ್ತೃವಿನ (ಕರ್ತಾರ°) ಕಾಣುತ್ತನಿಲ್ಲೆಯೋ, ಮತ್ತೆ, ತ್ರಿಗುಣಂಗೊಕ್ಕೂ ಅತೀತನಾದವ ಪರಮಾತ್ಮ ಹೇದು ತಿಳಿತ್ತನೋ ಅಂಬಗ ಅವ° ಭಗವಂತನ ಭಾವವ (ಮತ್-ಭಾವಂ) (ಹೇಳಿರೆ ಆಧ್ಯಾತ್ಮಿಕ ಭಾವವ) ಪಡೆತ್ತ°.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° ನಾನ್ಯಂ ಗುಣೇಭ್ಯಃ ಕರ್ತಾರಮ್” – ಎಲ್ಲ ಚಟುವಟಿಕೆಗಳಲ್ಲಿ ಈ ತ್ರಿಗುಣಂಗೊ ಇಲ್ಲದ್ದ ಇನ್ನೊಬ್ಬ° ಕರ್ತೃ ಇಲ್ಲೆ, ಗುಣೇಭ್ಯಶ್ಚ ಪರಂ ವೇತ್ತಿ” – ತ್ರಿಗುಣಂಗೊಕ್ಕೂ ಅತೀತನಾದವ ಪರಮಾತ್ಮ° ಹೇದು  ತಿಳಿತ್ತನೋ, ಸಃ ಮತ್-ಭಾವಮ್ ಅಧಿಗಚ್ಛತಿ” – ಅವ° ಎನ್ನ ಭಾವವ ಪಡೆತ್ತ°. ಇಲ್ಲಿ ಮದ್ಭಾವಮ್’ (ಮತ್-ಭಾವಮ್) ಹೇಳಿರೆ ಭಗವಂತನ ಭಾವವ (ಸ್ವಭಾವವ) ಅರ್ಥಾತ್ ಆಧ್ಯಾತ್ಮಿಕ ಸ್ವಭಾವವ ಪಡೆತ್ತ ಹೇದು ಅರ್ಥ.

ನಮ್ಮ ಜೀವನಲ್ಲಿ ಎಂತೆಂತ ನಡೆತ್ತೋ ಅದು ಈ ತ್ರಿಗುಣಂಗ ಪ್ರಕ್ರಿಯೆ. ನಾವು ನಾವಾಗಿ ಏನನ್ನೂ ಮಾಡುತ್ತಿಲ್ಲೆ. ಬದಲಿಂಗೆ, ಎಲ್ಲವೂ ತ್ರಿಗುಣಂಗಳ ಪ್ರಭಾವಂದಲಾಗಿ ನಮ್ಮತ್ರಂದ ನಡೆತ್ತು. ಪ್ರಕೃತಿಂದ ಬಂದು ನಮ್ಮ ಸ್ವರೂಪವ ಮುಚ್ಚಿ ಆ ತ್ರಿಗುಣಂಗೊ ಕೆಳಸ ಮಾಡುತ್ತು. ಹಾಂಗಾಗಿ ಒಬ್ಬ° ವ್ಯಕ್ತಿಯ ಮೇಲ್ನೋಟದ ವರ್ತನೆಂದ ಅವನ ನಿಜ ಸ್ವಭಾವವ ತಿಳಿವದು ಕಷ್ಟ. ಹಾಂಗಾಗಿ ನಾವು ಪ್ರಪಂಚಲ್ಲಿ ನಡವ ಘಟನೆಗಳ ನಿರ್ವೀಕಾರರಾಗಿ ಕಾಂಬಲೆ ಅಭ್ಯಾಸ ಮಾಡೆಕು ಹೇದು ಬನ್ನಂಜೆ ವ್ಯಾಖ್ಯಾನಿಸಿದ್ದವು.

ಸತ್ವಕ್ಕೆ ಶ್ರುತಿಗೂಡಿದ ಮನಸ್ಸು ಸತ್ವಕ್ಕೆ ಅನುಗುಣವಾದ ವಿಷಯವ ಗ್ರಹಿಸುತ್ತು. ಅಂಥಹ ವ್ಯಕ್ತಿ ಎಂದೂ ‘ಆನು ಮಾಡಿದೆ’ ಹೇದು ಭ್ರಮೆ ಪಡುತ್ತನಿಲ್ಲೆ. ಇಲ್ಲಿ ಗುಣಂಗಳಿಂದ ಬೇರೆಯಾದ ಕರ್ತಾ ಇಲ್ಲೆ. ಜಡಕ್ಕೆ ಎಂದೂ ಕರ್ತಾ ಹೇದು ಹೇಳುತ್ತಿಲ್ಲೆ. ಆದ್ದರಿಂದ ಗುಣ ಹೇದರೆ ಕೇವಲ ಜಡವಾದ ಗುಣ ಅಲ್ಲ. ಅದಕ್ಕೆ ಅಭಿಮಾನಿಯಾದ ಚೈತನ್ಯವ ತಿಳಿ ಹೇದು ಈ ಶ್ಲೋಕಲ್ಲಿ ಸಂದೇಶ. ಕರ್ತೃತ್ವಲ್ಲಿ ಅನೇಕ ವಿಧ. ಇಚ್ಛಾಪೂರ್ವಕ ಕೃತಿ ಎಲ್ಲಿದ್ದೋ ಅದು ಕರ್ತಾ. ಇದು ಇಪ್ಪದು ಚೇತನಕ್ಕೆ ಮಾಂತ್ರ. ಆದರೆ ನಿಜವಾದ ಕರ್ತೃತ್ವ ‘ಸ್ವತಂತ್ರ ಇಚ್ಛಾಪೂರ್ವಕ ಕೃತಿ’ ಇದು ಇಪ್ಪದು ಕೇವಲ ಭಗವಂತನಲ್ಲಿ. ನಾಹಂ ಕರ್ತಾ ಹರಿಃ ಕರ್ತಾ’ – ಹೇಳ್ವ ಪ್ರಸಿದ್ಧ ಉಕ್ತಿ ನಾವು ಈ ಮದಲೇ ಓದಿದ್ದು. ನಾಹಂ ಕರ್ತಾ ನ ಕರ್ತಾ ತ್ವಂ ಕರ್ತಾಯಸ್ತು ಸದಾ ಪ್ರಭುಃ” – ಆನೂ ಮಾಡಿದ್ದಿಲ್ಲೆ, ನೀನೂ ಮಾಡಿದ್ದಿಲ್ಲೆ, ಕರ್ತೃವಾದರೋ ಸದಾ ಆ ಪ್ರಭುವೇ. ‘ಅವ° ನಮ್ಮಿಂದ ಮಾಡುಸಿದ’ ಹೇಳ್ವ ಎಚ್ಚರ ಸದಾ ನವಗೆ ಇದ್ದರೆ ನವಗೆ ಕರ್ಟುತ್ವದ ಅಹಂಕಾರ ಬತ್ತಿಲ್ಲೆ. ಇದರಿಂದ ದ್ವೇಷ ಇಲ್ಲೆ, ಮಮಕಾರ ಇಲ್ಲೆ. ಆನು ಮಾಡಿದ್ದು, ಎನ್ನಂದ ಆತು ಹೇಳ್ವದೆಲ್ಲ ಕೇವಲ ಭ್ರಮೆ. ಈ ಜಗತ್ತಿಲ್ಲೆ ಏನೇ ನಡದರೂ ಅದು ಸತ್ವ-ರಜಸ್ಸು-ತಮಸ್ಸುಗಳೆಂಬ ಈ ಮೂರು ಗುಣಂಗಳ ಪ್ರಭಾವಂದ ನಡವದು. ಅದರ ಮೀರಿ ನಮ್ಮಿಷ್ಟಕ್ಕೆ ನಾವೆಂತರನ್ನೂ ಮಾಡ್ಳೆ ಸಾಧ್ಯ ಇಲ್ಲೆ. ಈ ಜ್ಞಾನ ನಮ್ಮಲ್ಲಿ ಏವತ್ತೂ ಇರೆಕು. ಅಂಬಗ ನವಗೆ ಆದ್ಯಾತ್ಮ ಚಿಂತನೆಗೆ ಮನಸ್ಸು ಸಿದ್ಧವಾಗಿರುತ್ತು.

ತ್ರಿಗುಣಂಗಳ ಪ್ರಭಾವ ಜಡಲ್ಲಿಯೂ ಇದ್ದು, ಚೇತನಲ್ಲಿಯೂ ಇದ್ದು. ಅದರ ಪ್ರಭಾವಂದ ಕ್ರಿಯೆ ನಡೆತ್ತು. ಅರೋ ನವಗೆ ಬೈದ ಹೇಳಿ ಆದರೆ ಅದು ಅವನಲ್ಲಿ ಆ ಕ್ಷಣಲ್ಲಿ ರಜೋಗುಣ ಜಾಗೃತವಾಗಿ ಕೆಲಸ ಮಾಡುತ್ತಿದ್ದು ಹೇದರ್ಥ. ಈ ಪರಿಜ್ಞಾನಂದ ನಾವು ಆ ಕ್ಷಣಲ್ಲಿ ಅರ್ತುಸೆಕು. ಎಂತಕೆ ಹೇಳಿರೆ ಒಬ್ಬ° ವ್ಯಕ್ತಿಲಿ ರಜೋಗುಣ ಕೆಲಸ ಮಾಡುತ್ತಿಪ್ಪಗ, ಅವನೊಟ್ಟಿಂಗೆ ನಾವೂ ರಜೋಗುಣಂದ ವರ್ತಿಸಿರೆ ಕ್ಲೇಶವೇ ಉಂಟಪ್ಪದು. ಇದು ಬಹಳ ಅಪಾಯಕಾರಿ. ಹಾಂಗಾಗಿ ರಜೋಗುಣಕ್ಕೊಳಗಾದವನೊಟ್ಟಿಂಗೆ ನಾವೂ ರಜೋಗುನವುಳ್ಳವನಪ್ಪಲಾಗ. ತಟಸ್ಥನಾಗಿ ದೂರ ನಿಲ್ಲೆಕು. ಅಷ್ಟಪ್ಪಗ ರಜೋಗುಣ ತನ್ನಷ್ಟಕ್ಕೆ ಕುಸಿತ್ತು. ಕೋಪಿಸಿಗೊಂಬವೆದುರು ಮೌನಿ ಆದರೆ ಅವನ ಕೋಪ ಬೇಗಲ್ಲಿ ಕರಗುತ್ತು. ಹೀಂಗೆ ನಾವು ಈ ಗುಣಂಗಳ ಪ್ರಭಾವವ ಗುರುತಿಸಿರೆ ನಮ್ಮ ಬದುಕಿನ ನಡೆಯೂ ಬೇರೆಯಾವುತ್ತು.

ಬನ್ನಂಜೆ ವಿವರುಸುತವು – ನಾವು ಇವಿಷ್ಟು ವಿಷಯವ ಮಾಂತ್ರ ತಿಳುದರೆ ಸಾಲ. ಈ ತ್ರಿಗುಣಂಗಳ ಮೀರಿ ನಿಂದುಗೊಂಡಿಪ್ಪವ° ಭಗವಂತ°. ಆ ಭಗವಂತನ ಸೇರ್ಲೆ ನಾವು ಈ ತ್ರಿಗುಣಂಗಳ ಪ್ರಭಾವಂದ ಮೀರಿ ಹೆರಬರೆಕು. ಭಗವಂತ° ಹೇಳ್ತ° – ಅಷ್ಟಪ್ಪಗ, “ಸಃ ಮದ್ಭಾವಂ ಅಧಿಗಚ್ಛತಿ” –   ‘ಎನ್ನ ಭಾವವ ಪಡೆತ್ತ°’, – ಹೇಳಿರೆ ಅಂಥವರ ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುತ್ತು ಮತ್ತೆ ಅದರಿಂದಾಗಿ ಅವು ಮುಂದೆ ಭಗವಂತನ ಹೋಗಿ ಸೇರಿ ನೆಲೆಸುತ್ತವು.

ಬನ್ನಂಜೆ ಈ ಶ್ಲೋಕದ ಇನ್ನೊಂದು ಮುಖವನ್ನೂ ವಿವರಿಸಿದ್ದವು – “ಗುಣೇಭ್ಯಃ ಅನ್ಯಂ ಕರ್ತಾರಂ ಯದಾ ದ್ರಷ್ಟಾ ಅನುಪಶ್ಯತಿ ತದಾ ಸಃ ‘ನಾ’ ಭವತಿ”. ಇಲ್ಲಿ ‘ಗುಣೇಭ್ಯಃ ಅನ್ಯಮ್’ ಹೇಳಿರೆ ತ್ರಿಗುಣಮಾನಿನಿಯಾಗಿಪ್ಪಂತಹ, ಗುಣಶಬ್ದವಾಚ್ಯೆ ಶ್ರೀ-ಭೂ-ದುರ್ಗಾ’ ನಾಮಕೆಯಾದ ಮಹಾಲಕ್ಷ್ಮಿಂದಲೂ ಅತೀತವಾದ ಒಂದು ಶಕ್ತಿ. ಅವನೇ ನಿಜವಾದ ಕರ್ತಾ. ಆರು ಚತುರ್ಮುಖಂಗೂ ಅಪ್ಪನೋ, ಆರು ಚಿತ್ಪ್ರಕೃತಿಗೂ ನಿಯಾಮಕನೋ, ಆರು ಸಮಸ್ತ ವೇದಂಗಳಿಂದ ವಾಚ್ಯನೋ ಅವ° ಒಬ್ಬನೇ ‘ಕರ್ತಾ’. ಇದರ ತಿಳುದವ ನಿಜವಾದ ಮನುಷ್ಯ°.

ಎಲ್ಲ ಅಧ್ಯಾತ್ಮ ಸಾಧನೆ ಮಾಡುವ ಸೌಕರ್ಯ ಇಪ್ಪ ಶರೀರ ಹೇಳಿರೆ ಅದು ಮನುಷ್ಯ ಶರೀರ ಮಾಂತ್ರ. ಅಂಥಹ ಶರೀರವ ಉಪಯೋಗುಸುವವ° ‘ನರ’. ಧರ್ಮ-ಅರ್ಥ-ಕಾಮಂಗಳಿಂದ ಬಿಡಿಸಿಗೊಂಬದು ಹೇಳಿರೆ ಸತ್ವ-ರಜ-ತಮೋಗುಣಂಗಳಿಂದ ಬಿಡಿಸಿಗೊಂಡು ಭಗವಂತನ ಸೇರುವದು. ಇದು ಮನುಷ್ಯನ ಜೀವನದ ಗುರಿ. “ಈ ಮೂರು ಗುಣಂಗೊ ಎನ್ನಲ್ಲಿ ಕೆಲಸ ಮಾಡುತ್ತಾ ಇದ್ದು., ಆನು ಈ ಪ್ರಭಾವಂದ ಬಿಡಿಸಿಗೊಂಡು ಮೇಲೇರೆಕು” ಹೇಳ್ವ ಎಚ್ಚರ ಮನಷ್ಯಂಗೆ ಮಾಂತ್ರ. ಈ ಎಚ್ಚರಂದಾಗಿ “ಮತ್-ಭಾವಂ ಸಃ ಅಧಿಗಚ್ಛತಿ” – ಅವನಲ್ಲಿ ಭಕ್ತಿಜ್ಞಾನ ಮನಸ್ಸಿಲ್ಲಿ ತುಂಬಿ ಅವ ಮೋಕ್ಷವ ಸೇರುತ್ತ° ಹೇದು ಬನ್ನಂಜೆಯವು ಸೊಗಸಾಗಿ ಈ ಶ್ಲೋಕವ ನಿರೂಪಿಸಿದ್ದವು.

ಶ್ಲೋಕ

ಗುಣಾನೇತಾನತೀತ್ಯತ್ರೀನ್ ದೇಹೀ ದೇಹಸಮುದ್ಭವಾನ್ ।
ಜನ್ಮಮೃತ್ಯುಜರಾದುಃಖೈಃ ವಿಮುಕ್ತೋsಮೃತ ಮಶ್ನುತೇ ॥೨೦॥

ಪದವಿಭಾಗ

ಗುಣಾನ್ ಏತಾನ್ ಅತೀತ್ಯ ತ್ರೀನ್ ದೇಹೀ ದೇಹ-ಸಮುಧ್ಭವಾನ್ । ಜನ್ಮ-ಮೃತ್ಯು-ಜರಾ-ದುಃಖೈಃ ವಿಮುಕ್ತಃ ಅಮೃತಮ್ ಅಶ್ನುತೇ ॥

ಅನ್ವಯ

ದೇಹೀ ಏತಾನ್ ದೇಹ-ಸಮುದ್ಭವಾನ್ ತ್ರೀನ್ ಗುಣಾನ್ ಅತೀತ್ಯ, ಜನ್ಮ-ಮೃತ್ಯು-ಜರಾ-ದುಃಖೈಃ ವಿಮುಕ್ತಃ (ಸನ್) ಅಮೃತಮ್ ಅಶ್ನುತೇ ।

ಪ್ರತಿಪದಾರ್ಥ

ದೇಹೀ – ದೇಹಿಯು (ಮನುಷ್ಯ°/ಜೀವಿ), ಏತಾನ್  ದೇಹ-ಸಮುದ್ಭವಾನ್ ಗುಣಾನ್ – ಶರೀರಂದ ಉತ್ಪನ್ನವಾದ ಈ ಎಲ್ಲ ಗುಣಂಗಳ, ಅತೀತ್ಯ – ದಾಂಟಿ (ಮೀರಿ), ಜನ್ಮ-ಮೃತ್ಯು-ಜರಾ-ದುಃಖೈಃ ವಿಮುಕ್ತಃ (ಸನ್) – ಜನ್ಮಮೃತ್ಯುಮುಪ್ಪುದುಃಖಂಗಳಿಂದ ಮುಕ್ತನಾಗ್ಯೊಂಡು ಅಮೃತತ್ವವ ಅನುಭೋಗಿಸುತ್ತ°.

ಅನ್ವಯಾರ್ಥ

ಜೀವಿಯು ದೇಹಲ್ಲಿ ಮೂಡುವ ಈ ಎಲ್ಲ ಮೂರುಗುಣಂಗಳ ದಾಂಟಿರೆ ಹುಟ್ಟು ಸಾವು ಮುಪ್ಪು ದುಃಖಂದ ಪಾರಾಗಿ ಅಮೃತತ್ವವ ಹೊಂದುತ್ತ° (ಅಮರನಾವುತ್ತ°).

ತಾತ್ಪರ್ಯ/ವಿವರಣೆ

ನಮ್ಮ ಸ್ವರೂಪವ ಮುಚ್ಚಿ ಗಾಢವಾಗಿ ಪರಿಣಾಮ ಬೀರುವ ಈ ಮೂರು ಗುಣಂಗಳ ನಾವು ದಾಂಟೆಕು. ಇಲ್ಲಿ ಮೂರುಗುಣಂಗಳಲ್ಲಿ ಸತ್ವವ ದಾಂಟುದು ಹೇಳಿರೆ ಸ್ಥೂಲ ಸತ್ವವ ದಾಂಟಿ ಸೂಕ್ಷ್ಮ ಸತ್ವವ ಸೇರುವದು ಹೇಳಿ ಅರ್ಥ. ಹೀಂಗೆ ಮೂರು ಗುಣಂಗಳ ದಾಂಟಿ ತ್ರಿಗುಣಾತೀತನಾದರೆ, ನಾವು ಈ ಸಂಸಾರದ ಹುಟ್ಟು-ಸಾವು-ರೋಗ-ಮುಪ್ಪು-ದುಃಖಂಗಳ ದಾಂಟಿ ಭಗವಂತನ ಸೇರಿ ಅಮರರಪ್ಪಲಕ್ಕು. ಇದರಂದ ಮತ್ತೆ ಎಂದೂ ಹುಟ್ಟು ಸಾವಿಲ್ಲದ್ದ ಆನಂದದ ಸ್ಥಿತಿಯಾದ ಮೋಕ್ಷವ ಪಡವಲೆ ಸಾಧ್ಯ ಹೇಳಿ ಭಗವಂತ° ಭರವಸೆ ಹೇಳಿದ್ದ° ಇಲ್ಲಿ.

ಹೀಂಗೆ ತ್ರಿಗುಣಂಗಳ ಪ್ರಭಾವಲ್ಲಿ ಇಪ್ಪನ್ನಾರ ಮನುಷ್ಯಂಗೆ ಅಧ್ಯಾತ್ಮ ಏಳಿಗೆ ಇಲ್ಲೆ ಹೇಳ್ವದು ಸ್ಪಷ್ಟ ಆತು. ಆಧ್ಯಾತ್ಮಿಕ ಜ್ಞಾನಲ್ಲಿ ಮುಂದುವರಿಯೆಕ್ಕಾರೆ ನಾವು ಮದಾಲು ಮನುಷ್ಯನ ಪ್ರಕೃತಿ ಗುಣಂಗಳ ಪ್ರಭಾವಂದ ಬಿಡಿಸಿಗೊಳ್ಳೆಕು (ಮುಕ್ತರಾಯೇಕು). ಅಷ್ಟಪ್ಪಗ ತಟಸ್ಥ ಧೋರೆಣೆಂದಲಾಗಿ ತ್ರಿಗುಣಂಗಳ ಪ್ರಭಾವಕ್ಕೆ ಮಣಿಯದ್ದೆ, ವಿಕಾರಕ್ಕೆ ಒಳಗಾಗದ್ದೆ, ವಿಚಲಿತನಾಗದ್ದೆ ಈ ದೇಹಲ್ಲಿಯೇ ಆಧ್ಯಾತ್ಮಿಕ ಜೀವನದ ಸುಖವ ಅನುಭವುಸಲೆ ಎಡಿಗು. ಮುಂದೆ ಈ ದೇಹವ ಬಿಟ್ಟು ನಿಶ್ಚಯವಾಗಿಯೂ ಆಧ್ಯಾತ್ಮಿಕ ಗಗನಕ್ಕೆ ಸೇರಿ ಭಗವಂತನ ಶಾಂತಿ ಪರಂಧಾಮದ ನಿತ್ಯಾನಂದ ಬ್ರಹ್ಮಾನಂದ ಸವಿಯ ಉಂಬಲಕ್ಕು.

ಶ್ಲೋಕ

ಅರ್ಜುನ ಉವಾಚ

ಕೈರ್ಲಿಂಗೈಸ್ತ್ರೀನ್ ಗುಣಾನೇತಾ ನತೀತೋ ಭವತಿ ಪ್ರಭೋ ।
ಕಿಮಾಚಾರಃ ಕಥಂ ಚೈತಾನ್ ತ್ರೀನ್ ಗುಣಾನತಿವರ್ತತೇ ॥೨೧॥

ಪದವಿಭಾಗ

ಅರ್ಜುನಃ ಉವಾಚ

ಕೈಃ ಲಿಂಗೈಃ ತ್ರೀನ್ ಗುಣಾನ್ ಏತಾನ್ ಅತೀತಃ ಭವತಿ ಪ್ರಭೋ । ಕಿಮ್ ಆಚಾರಃ ಕಥಮ್ ಚ ಏತಾನ್ ತ್ರೀನ್ ಗುಣಾನ್ ಅತಿವರ್ತತೇ ॥

ಅನ್ವಯ

ಅರ್ಜುನಃ ಉವಾಚ –

ಹೇ ಪ್ರಭೋ!, ಏತಾನ್ ತ್ರೀನ್ ಗುಣಾನ್ ಅತೀತಃ (ಜೀವಃ) ಕೈಃ ಲಿಂಗೈಃ (ಜ್ಞಾತಃ) ಭವತಿ? (ಸಃ) ಚ ಕಿಮ್ ಆಚಾರಃ? (ಸಃ) ಚ ಏತಾನ್ ತ್ರೀನ್ ಗುಣಾನ್ ಕಥಮ್ ಅತಿವರ್ತತೇ?

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಪ್ರಭೋ! – ಏ ಪ್ರಭುವೇ!,  ಏತಾನ್ ತ್ರೀನ್ ಗುಣಾನ್ – ಈ ಎಲ್ಲ ಮೂರು ಗುಣಂಗಳ, ಅತೀತಃ (ಜೀವಃ) – ದಾಂಟಿದವನಾದ ಜೀವವು (ಜೀವಿಯು), ಕೈಃ – ಏವೆಲ್ಲ, ಲಿಂಗೈಃ – ಸಂಕೇತಂಗಳಿಂದ, (ಜ್ಞಾತಃ) ಭವತಿ – ಗೊಂತಿಪ್ಪವನಾಗಿರುತ್ತ°?, (ಸಃ – ಅವ°), ಚ – ಕೂಡ, ಕಿಮ್ ಆಚಾರಃ – ಏವ ಆಚಾರ? (ಸಃ -ಅವ°), ಚ – ಕೂಡ, ಏತಾನ್ ತ್ರೀನ್ ಗುಣಾನ್ – ಈ ಎಲ್ಲ ಮೂರು ಗುಣಂಗಳ, ಕಥಮ್ – ಹೇಂಗೆ, ಅತಿವರ್ತತೇ – ದಾಂಟುತ್ತ°.

ಅನ್ವಯಾರ್ಥ

ಅರ್ಜುನ° ಹೇಳಿದ°, ಏ ಪ್ರಭುವೇ!/ಒಡೆಯನೇ!, ಈ ಗುಣತ್ರಯಂಗಳ ಮೀರಿದವ° ಏವೆಲ್ಲ ಲಕ್ಷಣಂಗಳಿಂದ (ಕೈಃ ಲಿಂಗೈಃ – ಇಲ್ಲಿ ಲಿಂಗೈಃ ಹೇಳಿರೆ ಲಕ್ಷಣಂಗೊ, ಸಂಕೇತಂಗೊ) ಇರುತ್ತ°? ಅವ° ಏವ ಆಚಾರಂದ ಇರುತ್ತ° (ಹೇಂಗೆ ನಡಕ್ಕೊಳ್ಳುತ್ತ°)? ಅವ°ಹೇಂಗೆ ಈ ಪ್ರಕೃತಿ ತ್ರಿಗುಣಂಗಳ ದಾಂಟುತ್ತ°/ಮೀರುತ್ತ°?

ತಾತ್ಪರ್ಯ/ವಿವರಣೆ

ಭಗವಂತ° ಹೇಳಿದ್ದರ್ಲಿ ಎಲ್ಲವೂ ಸ್ಪಷ್ಟವಾಗಿರೆಕು, ಎಲ್ಲೋರಿಂಗೂ ಸರಿಯಾಗಿ ಅರ್ಥ ಆಯೇಕು ಹೇಳ್ವ ಉದ್ದೇಶಂದ ಅರ್ಜುನ° ಅದೇ ವಿಷಯವ ವಿಷದೀಕರುಸಲೆ ಮತ್ತೆ ಭಗವಂತನತ್ರೆ ಪ್ರಶ್ನೆ ಮಾಡಿ ಒಕ್ಕಿ ಕೇಳುತ್ತ°. ಮದಲಾಣ ಶ್ಲೋಕಲ್ಲಿ ಗುಣತ್ರಯಂಗಳ ಮೀರಿ ನಿಂದವ ಜನ್ಮಮೃತ್ಯುಜರಾದುಃಖಂಗಳ ಮೀರಿ ಅಮೃತತ್ವವ ಸವಿಯುತ್ತ° ಹೇಳಿ ಭಗವಂತ° ಹೇಳಿದ್ದ°. ಗುಣತ್ರಯಂಗಳ ಮೀರಿ ನಿಂಬದು ಹೇಳಿರೆ ಅಷ್ಟು ಸುಲಭದ ಕೆಲಸ ಅಲ್ಲ. ಜನ್ಮಾಂತರ ಸಾಧನೆಯೇ ಬೇಕಕ್ಕು. ಅಚಲವಾಗಿ ಅನನ್ಯ ಭಕ್ತಿಂದ ಆಧ್ಯಾತ್ಮಿಕಲ್ಲಿ ಸ್ಥಿರವಾಗಿ ನೆಲೆಗೊಂಡವಂಗೆ ಮಾತ್ರ ತ್ರಿಗುಣಂಗಳ ಗೆಲ್ಲುವ ಶಕ್ತಿ ಬಪ್ಪದು. ಅರ್ಜುನ° ಇಲ್ಲಿ ಭಗವಂತನತ್ರೆ ಪ್ರಶ್ನೆ ಮಾಡುತ್ತ° – ಹಾಂಗಾರೆ ಈ ಪ್ರಕೃತಿ ಸಹಜ ತ್ರಿಗುಣಂಗಳ ಮೀರಿದ ಮನುಷ್ಯ° ಹೇಂಗೆ ಜೀವಿಸುತ್ತ°? ಅವನ ಲಕ್ಷಣಂಗೊ ಎಂತೆಲ್ಲ? ಅವ° ಹೇಂಗೆ ಪ್ರಕೃತಿ ಗುಣಂಗಳ ಪ್ರಭಾವವ ಗೆಲ್ಲುತ್ತ°? ಮತ್ತೆ, ಅವನ ಚಟುವಟಿಕೆಗೊ ಏವುದೆಲ್ಲ? / ನಡತೆಗೊ ಹೆಂಗೆಲ್ಲ?. ಇಲ್ಲಿ ಅರ್ಜುನಂಗೆ ಮನುಷ್ಯ° ಏವಾಗಲೂ ಆಧ್ಯಾತ್ಮಿಕವಾಗಿ ನೆಲೆಗೊಂಬಲೆ ನೇರವಾದ ಮಾರ್ಗ ಏವುದು ಹೇಳ್ವದರ ಭಗವಂತನಿಂದ ತಿಳಿಯೇಕು ಹೇಳ್ವ ಉದ್ಧೇಶ. ಇಲ್ಲಿ ಅರ್ಜುನ° ಭಗವಂತನಲ್ಲಿ ಪೂರ್ತಿ ಶರಣಾಗತಿಯ ಧ್ವನಿ ಸೂಚುಸಲೆ ‘ಪ್ರಭೋ’ ಹೇಳಿ ದೆನಿಗೊಂಡಿದ°.

ಶ್ಲೋಕ

ಶ್ರೀಭಗವಾನುವಾಚ

ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ ।
ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ ॥೨೨॥

ಪದವಿಭಾಗ

ಶ್ರೀಭಗವಾನ್ ಉವಾಚ

ಪ್ರಕಾಶಮ್ ಚ ಪ್ರವೃತ್ತಿಮ್ ಚ ಮೋಹಮ್ ಏವ ಚ ಪಾಂಡವ । ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ ॥

ಅನ್ವಯ

ಶ್ರೀಭಗವಾನ್ ಉವಾಚ

ಹೇ ಪಾಂಡವ!, ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಂ ಏವ ಚ ಸಂಪ್ರವೃತ್ತಾನಿ ನ ದ್ವೇಷ್ಟಿ, ನಿವೃತ್ತಾನಿ (ಚ) ನ ಕಾಂಕ್ಷತಿ ।

ಪ್ರತಿಪದಾರ್ಥ

ಶ್ರೀಭಗವಾನ್ ಉವಾಚ – ದೇವೋತ್ತಮ ಪರಮಪುರುಷ° ಭಗವಂತ° ಹೇಳಿದ°, ಹೇ ಪಾಂಡವ! – ಏ ಪಾಂಡುಮಗನೇ!, ಪ್ರಕಾಶಮ್ – ಬೆಣಚ್ಚಿಯ (ಲೌಕಿಕ ಬೆಣಚ್ಚಿಯ), ಚ – ಕೂಡ/ಮತ್ತೆ, ಪ್ರವೃತ್ತಿಮ್ ಚ – ಆಸಕ್ತಿಯ ಕೂಡ (ಕಾಯಕದ ಆಸಕ್ತಿ) , ಮೋಹಮ್ ಚ – ಮೋಹವನ್ನು (ಭ್ರಾಂತಿ) ಕೂಡ, ಸಂಪ್ರವೃತ್ತಾನಿ – ಇಪ್ಪದರ, ನ ದ್ವೇಷ್ಟಿ – ದ್ವೇಷಿಸುತ್ತನಿಲ್ಲೆ,  ನಿವೃತ್ತಾನಿ (ಚ) ನ ಕಾಂಕ್ಷತಿ – ಇಲ್ಲದ್ದದರ ಕೂಡ ಬಯಸುತ್ತನಿಲ್ಲೆ.

ಅನ್ವಯಾರ್ಥ

ದೇವೋತ್ತಮ° ಪರಮಪುರುಷ° ಹೇಳಿದ° – ಏ ಪಾಂಡುಮಗನೇ!, (ತ್ರಿಗುಣಂಗಳ ಮೀರಿದವ°) ಲೌಕಿಕದ ತಿಳಿವಿನ ಬೆಣಚ್ಚಿಯನ್ನಾಗಲೀ, ಕಾಯಕದ ಹುರುಪನ್ನಾಗಲೀ, ಭ್ರಾಂತಿಯನ್ನಾಗಲೀ ಇಪ್ಪಗ ದ್ವೇಷಿಸುತ್ತನಿಲ್ಲೆ, ಇಲ್ಲದ್ದಿಪ್ಪಗ ಬಯಸುತ್ತನೂ ಇಲ್ಲೆ.

ತಾತ್ಪರ್ಯ / ವಿವರಣೆ

ಅರ್ಜುನನ ಸಂಶಯಂಗೊಕ್ಕೆ ಭಗವಂತ° ಇಲ್ಲಿ ಉತ್ತರ ಕೊಡುತ್ತ° –   ತ್ರಿಗುಣಂಗಳ ಮೀರಿನಿಂದವ°/ದಾಂಟಿದವ° ಐಹಿಕ ಬೆಣಚ್ಚಿಯ, ಹೇಳಿರೆ., ಅನಪೇಕ್ಷವಾದ್ದು ಬಂದಪ್ಪಗ ಅದರ ದ್ವೇಷಿಸುತ್ತನಿಲ್ಲೆ. ಇದನ್ನೇ ಇಲ್ಲಿ ಹೇಳಿದ್ದದು ಪ್ರಕಾಶಂ … ಸಂಪ್ರವೃತ್ತಾನಿ ನ ದ್ವೇಷ್ಟಿ’. ಸಂಪೃವೃತ್ತಾನಿ ಹೇಳಿರೆ ಐಹಿಕಲ್ಲಿ ಇಪ್ಪವುಗೊ. ಅದು ಅನಪೇಕ್ಷಾರ್ಹ. ಒಂದುವೇಳೆ ಅದು ಬಂದರೆ ಅದರ ದ್ವೇಷಿಸುಲೆ ಇಲ್ಲೆ. ಹಾಂಗೇ., ‘ನಿವೃತ್ತಾನಿ ಚ ನ ಕಾಂಕ್ಷತಿ’ – ಅಪೇಕ್ಷಿತವಾದ್ದು ಬಾರದ್ದೆ ಇಪ್ಪಗ ಅದರ ಬಯಸುತ್ತನೂ ಇಲ್ಲೆ. ನಿವೃತ್ತಾನಿ ಹೇಳಿರೆ ಬರೇಕು, ಬೇಕು ಹೇಳಿ ಇಪ್ಪದು ಬಾರದ್ದೆ ಇಪ್ಪವುಗೊ.  ‘ಏವುದು ಬೇಕು, ಏವುದು ಬೇಡ ಹೇಳ್ವದ ಎನ್ನಂದ ಲಾಯಕಕ್ಕೆ ಆ ಭಗವಂತಂಗೇ ಗೊಂತಿದ್ದು. ಅದಕ್ಕಾಗಿ ಆನೆಂತಕೆ ತಲೆ ಕೆಡುಸೆಕು’ ಹೇಳ್ವ ನಿರ್ಲಿಪ್ತತೆ ಅವನಲ್ಲಿರುತ್ತು. ಒಂದು ರೀತಿಯ ತಟಸ್ಥ ಧೋರಣೆ. ಇದ್ದರೆ ಇದ್ದೋ ಇರ್ಲಿ, ಇಲ್ಯೋ ಆತು ಇಲ್ಲೆ ಬೇಡ, ಅಗತ್ಯ ಇಲ್ಲೆ ಹೇಳ್ವ ಮನೋಧರ್ಮ. ಜೀವನಲ್ಲಿ ಎಂತ ಬಂತೋ ಅದರ ಸ್ವಾಗತುಸುವದು. ಹೀಂಗೆ ತ್ರಿಗುಣಂಗಳ ಗೆದ್ದವ°, ಐಹಿಕ ವಿಷಯಂಗೊ ಬಂದಪ್ಪಗ ಬೇಡ ಹೇಳಿ ದ್ವೇಷಿಸುತ್ತನೂ ಇಲ್ಲೆ, ಇಲ್ಲದ್ದರ ಬೇಕು ಹೇಳಿ ಬಯಸುತ್ತನೂ ಇಲ್ಲೆ. ಎಲ್ಲವನ್ನೂ ನಿರ್ವೀಕಾರನಾಗಿ ನೋಡ್ಯೊಂಡು ತುಂಬಿದ ಕೊಡ ತುಳುಕದ್ದ ಹಾಂಗೆ ಬದುಕುತ್ತ° ಹೇಳಿ ಬನ್ನಂಜೆಯವು ಸೊಗಸಾಗಿ ವಿಶ್ಲೇಷಿಸಿದ್ದವು.

ಲೋಕಲ್ಲಿ ಕೆಲವರಿಂಗೆ ಸತ್ವಲ್ಲಿ ಆಸಕ್ತಿಯಾದರೆ ಇನ್ನು ಕೆಲವರಿಂಗೆ ಕೇವಲ ಪ್ರವೃತ್ತಿ. ಮತ್ತೆ ಕೆಲೋರಿಂಗೆ ಏವ ಆಸಕ್ತಿಯೂ ಇಲ್ಲೆ – ಕಸ್ತಲೆಯ ಕಸ್ತಲು ಹೇದು ತಿಳಿಯದ್ದೆ ಕಸ್ತಲೆಲೇ ಬದುಕುವವು ಇದ್ದವು. ತ್ರಿಗುಣಂಗಳ ಮೀರಿ ನಿಂದವು ಇವುಗಳ ನೋಡಿ ವಿಕಾರಕ್ಕೆ ತುತ್ತಾವ್ತವಿಲ್ಲೆ. ‘ಅವರವರ ಗುಣ ಪ್ರಭಾವಕ್ಕನುಗುಣವಾಗಿ ಎಲ್ಲವೂ ನಡೆತ್ತಾ ಇದ್ದು’ ಹೇದು ತಟಸ್ಥರಾಗಿರುತ್ತವು. ಸತ್ಯ ಹೇದು ಕಂಡದ್ದರ ಇವು ಹೇಳುತ್ತವು ಆದರೆ ಎಂದೂ ವಾದವಿವಾದ ಬೆಳೆಸುತ್ತವಿಲ್ಲೆ. ಎಲ್ಲವೂ ಭಗವಂತನ ಲೀಲೆ, ಅವ° ಮಾಡಿದ ವ್ಯವಸ್ಥೆ ಹೇದು ಎಲ್ಲವನ್ನೂ ತಟಸ್ಥ ಧೋರಣೆಂದ ಸ್ವೀಕರುಸುತ್ತವು.

ಇಲ್ಲಿ ಅರ್ಜುನನ ‘ಪಾಂಡವ’ ಹೇದು ದೆನಿಗೊಂಡಿದ°. ‘ಪಾಂಡಾ’ ಹೇಳಿರೆ ಜ್ಞಾನಿ, ‘ಪಾಂಡವ’ ಹೇಳಿರೆ ಜ್ಞಾನವ ಗುರುತುಸಿ ತಲೆಬಾಗುವವ° ಹೇದರ್ಥ. ‘ತ್ರಿಗುಣಾತೀತನಪ್ಪಂದ ಮದಲು ನೀನು ಪಾಂಡವನಾಗು’ ಹೇಳ್ವ ಧ್ವನಿ ಇಲ್ಲಿ ಸೂಚಕ ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದದು.

ಶ್ಲೋಕ

ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ ।
ಗುಣಾ ವರ್ತಂತ ಇತ್ಯೇವಂ ಯೋsವತಿಷ್ಠತಿ ನೇಂಗತೇ ॥೨೩॥

ಪದವಿಭಾಗ

ಉದಾಸೀನವತ್ ಆಸೀನಃ ಗುಣೈಃ ಯಃ ನ ವಿಚಾಲ್ಯತೇ । ಗುಣಾಃ ವರ್ತಂತೇ ಇತಿ ಏವಮ್ ಯಃ ಅವತಿಷ್ಠತಿ ನ ಇಂಗತೇ ॥

ಅನ್ವಯ

ಯಃ ಉದಾಸೀನವತ್ ಆಸೀನಃ ಗುಣೈಃ ನ ವಿಚಾಲ್ಯತೇ, ಯಃ (ಚ) ಗುಣಾಃ ವರ್ತಂತೇ ಇತಿ (ಮತ್ವಾ) ಏವಮ್ ಅವತಿಷ್ಠತಿ, (ಸಃ) ನ ಇಂಗತೇ ।

ಪ್ರತಿಪದಾರ್ಥ

ಯಃ ಉದಾಸೀನವತ್ – ಆರು ಉದಾಸನಂದ, ಆಸೀನಃ – ಇದ್ದು (ನೆಲೆಸಿ), ಗುಣೈಃ – ಗುಣಂಗಳಿಂದ, ನ ವಿಚಾಲ್ಯತೇ – ವಿಚಲಿತನಾವ್ತನಿಲ್ಯೋ, ಯಃ – ಆರು (ಚ – ಕೂಡ) ಗುಣಾಃ  – ಗುಣಂಗೊ, ವರ್ತಂತೇ ಇತಿ (ಮತ್ವಾ) – ವರ್ತಿಸುತ್ತಿದ್ದು ಹೇದು ತಿಳ್ಕೊಂಡು, ಏವಮ್ ಅವತಿಷ್ಠತಿ – ಹೀಂಗೆ ಉಳಿತ್ತನೋ, (ಚ – ಕೂಡ), (ಸಃ – ಅವ°), ನ ಇಂಗತೇ – ತತ್ತರಿಸುತ್ತನಿಲ್ಲೆ.

ಅನ್ವಯಾರ್ಥ

ಯಾವತ° ಗುಣಂಗಳ (ತ್ರಿಗುಣಂಗಳ) ಸೆಳೆತಕ್ಕೆ ಕದಲುತ್ತನಿಲ್ಲೆಯೋ (ಗುಣಂಗಳ ಪ್ರಭಾವಕ್ಕೆ ವಿಚಲಿತನಾಗದ್ದೆ ಅದರ ಬಗ್ಗೆ ಉದಾಸನ ಪ್ರವೃತ್ತಿಂದ ನಿಶ್ಚಲನಾಗಿ ನೆಲೆಸಿ), ಗುಣಂಗೊ (ತ್ರಿಗುಣಂಗೊ) ಇಪ್ಪಂಥದ್ದೇ ಹೇದು ತಿಳ್ಕೊಂಡು ತಳಿಯದ್ದೆ ಇದ್ದು ಬಿಡುತ್ತನೋ ಅವ° ಆ ಬಗ್ಗೆ ತತ್ತರುಸುತ್ತನಿಲ್ಲೆ.

ತಾತ್ಪರ್ಯ / ವಿವರಣೆ

ತ್ರಿಗುಣಂಗಳ ಗೆದ್ದು ನಿಂದವ° ತ್ರಿಗುಣಂಗಳ ಸೆಳೆತಕ್ಕೆ ಕದಲದ್ದೆ ಉದಾಸನಂದ ಇದ್ದುಬಿಡುತ್ತ°. ತ್ರಿಗುಣಂಗೊ ಪ್ರಕೃತಿಲಿ ಇಪ್ಪಂಥಾದ್ದೇ ಹೇದು ತಿಳ್ಕೊಂಡು ತಳಿಯದ್ದೆ ಇದ್ದು ಬಿಡುತ್ತ°. ತ್ರಿಗುಣಂಗಳ ತಾಳಕ್ಕೆ ತಾನು ಕುಣಿತ್ತನಿಲ್ಲೆ. ಪ್ರಾಪಂಚಿಕ ವ್ಯವಹಾರಲ್ಲಿ ಇವ° ಉದಾಸೀನನ ಹಾಂಗೆ ಇದ್ದು ಬಿಡುತ್ತ°. ನವಗೆ ಬೇಕು ಬೇಡಂಗೊ ಬಪ್ಪದು ತ್ರಿಗುಣಂಗಳಿಂದ. ತ್ರಿಗುಣಾತೀತ° ಹಾಂಗಾಯೇಉ, ಹೀಂಗೆ ಬೇಕು ಹೇದು ಏನನ್ನೂ ಬಯಸುತ್ತನಿಲ್ಲೆ. ಹೇಂಗಾಯೇಕೋ ಹಾಂಗೆ ಭಗವಂತ° ಮಾಡುತ್ತ°, ಮಾಡುಸುತ್ತ° ಹೇಳ್ವ ನಂಬಿಕೆ ಅವನಲ್ಲಿರುತ್ತು.

ಪ್ರಪಂಚಲ್ಲಿ ನಡವ ಘಟನೆಗೊ ನಮ್ಮ ಅಧೀನ ಅಲ್ಲ. ನಾವು ಅಪ್ಪಲಾಗ ಹೇಳಿ ಗ್ರೇಶುವದು ಆಗಿ ಹೋವ್ತು, ಆಯೇಕು ಹೇಳಿ ಗ್ರೇಶೋದು ಆಗದ್ದೇ ಇಕ್ಕು. ಹಾಂಗಾಗಿ ‘ಹೀಂಗೇ ಆಯೇಕು’ ಹೇದು ವ್ಯರ್ಥವಾಗಿ ಮನಸ್ಸಿನ ಉದ್ವೇಗಪಡಿಸಿಗೊಂಬದರಲ್ಲಿ ಅರ್ಥ ಇಲ್ಲೆ. ಹೀಂಗೆ ಬದುಕಿಯಪ್ಪಗ ಬಯಸಿದ್ದು ನಡೆಯದ್ದಿಪ್ಪಗ ಕೋಪ-ಹಾರಟವ ಎಳಗುಸದ್ದೆ ಮನಸ್ಸು ಪ್ರಸನ್ನವಾಗಿಪ್ಪಲೆಡಿಗು. ಇಂದ್ರಿಯಂಗೊ ಗುಣಂಗಳಲ್ಲಿ ಇರುತ್ತು. ಇಂದ್ರಿಯಂಗಳ ಹಿಂದೆ ಗುಣಂಗೊ ಇರ್ತು. ಆದರೆ ತ್ರಿಗುಣಾತೀತ° ಇವೆಲ್ಲವ ಅರ್ತು ತಲೆತೊರುಸದ್ದೆ, ಏವುದೇ ಕ್ರಿಯೆಲಿಯೂ ಚಪಲತೆ ತೋರದ್ದೆ ನಿಶ್ಚಲನಾಗಿಪ್ಪಲೆಡಿಗು. ನೆಮ್ಮದಿ, ಶಾಂತಿ ಮನಸ್ಸಿಂಗೆ ಸಿಕ್ಕುಗು.

ಶ್ಲೋಕ

ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮಕಾಂಚನಃ ।
ತುಲ್ಯಪ್ರಿಯಾಪ್ರಿಯೋ ಧೀರಃ ತುಲ್ಯನಿಂದಾತ್ಮಸಂಸ್ತುತಿಃ ॥೨೪॥

ಪದವಿಭಾಗ

ಸಮ-ದುಃಖ-ಸುಃಖ ಸ್ವಸ್ಥಃ ಸಮ-ಲೋಷ್ಟ-ಅಶ್ಮ-ಕಾಂಚನಃ । ತುಲ್ಯ-ಪ್ರಿಯ-ಅಪ್ರಿಯಃ ಧೀರಃ ತುಲ್ಯ-ನಿಂದಾ-ಆತ್ಮ-ಸಂಸ್ತುತಿಃ ॥

ಅನ್ವಯ

(ಯಃ) ಸಮ-ದುಃಖ-ಸುಖಃ, ಸ್ವಸ್ಥಃ, ಸಮ-ಲೋಷ್ಟ-ಅಶ್ಮ-ಕಾಂಚನಃ, ತುಲ್ಯ-ಪ್ರಿಯ-ಅಪ್ರಿಯಃ, ಧೀರಃ, ತುಲ್ಯ-ನಿಂದಾ-ಆತ್ಮ-ಸಂಸ್ತುತಿಃ,

ಪದವಿಭಾಗ

(ಯಃ – ಆರು), ಸಮ-ದುಃಖ-ಸುಖಃ – ದುಃಖ-ಸುಖಲ್ಲಿ ಸಮಾನನಾಗಿ, ಸ್ವಸ್ಥಃ – ತಾನಿದ್ದು, ಸಮ-ಲೋಷ್ಟ-ಅಶ್ಮ-ಕಾಂಚನಃ – ಮಣ್ಣಹೆಂಟೆ-ಕಲ್ಲು-ಚಿನ್ನಲ್ಲಿ ಸಮಾನವಾಗಿ ಕಾಂಬ, ತುಲ್ಯ-ಪ್ರಿಯ-ಅಪ್ರಿಯ – ಪ್ರಿಯವಾದ್ದರ-ಅಪ್ರಿಯವಾದ್ದರ ಸಮಾನವಾದ ಭಾವವ ಮಡಿಕ್ಕೊಂಡಿದ್ದನೋ, ತುಲ್ಯ-ನಿಂದಾ-ಆತ್ಮ-ಸಂಸ್ತುತಿಃ – ನಿಂದೆ-ತನ್ನ ಹೊಗಳಿಕೆಗಳ ಸಮಾನವಾಗಿ ಕಾಣುತ್ತನೋ

ಅನ್ವಯಾರ್ಥ

ಯಾವಾತ° ಸುಖ-ದುಃಖಲ್ಲಿ ಸಮಾನನಾಗಿ, ಮಣ್ಣು-ಕಲ್ಲು-ಚಿನ್ನವ ಸಮಾನವಾಗಿ ಕಂಡು, ಪ್ರಿಯ-ಅಪ್ರಿಯಂಗಳಲ್ಲಿ ಸಮಾನ ಭಾವವ ಹೊಂದಿರುತ್ತನೋ, ತನ್ನ ಹೊಗಳಿಕೆ-ನಿಂದೆಗಳನ್ನೂ ಸಮಾನವಾಗಿ ಕಾಣುತ್ತನೋ

ಶ್ಲೋಕ

ಮಾನಾಪಮಾನಯೋಸ್ತುಲ್ಯಃ ತುಲ್ಯೋ ಮಿತ್ರಾರಿಪಕ್ಷಯೋಃ ।
ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ ॥೨೫॥

ಪದವಿಭಾಗ

ಮಾನ-ಅಪಮಾನಯೋಃ ತುಲ್ಯಃ ತುಲ್ಯಃ ಮಿತ್ರ-ಅರಿ-ಪಕ್ಷಯೋಃ । ಸರ್ವ-ಆರಂಭ-ಪರಿತ್ಯಾಗೀ ಗುಣಾತೀತಃ ಸಃ ಉಚ್ಯತೇ ॥

ಅನ್ವಯ

(ಯಃ) ಮಾನ-ಅಪಮಾನಯೋಃ ತುಲ್ಯಃ, ಮಿತ್ರ-ಅರಿ-ಪಕ್ಷಯೋಃ ತುಲ್ಯಃ, ಸರ್ವ-ಆರಂಭ-ಪರಿತ್ಯಾಗೀ (ಚ ಅಸ್ತಿ), ಸಃ ಗುಣಾತೀತಃ ಇತಿ ಉಚ್ಯತೇ ।

ಪ್ರತಿಪದಾರ್ಥ

(ಯಃ – ಯಾವಾತ°), ಮಾನ-ಅಪಮಾನಯೋಃ – ಮಾನ ಅಪಮಾನಂಗಳಲ್ಲಿ ಸಮಾನ ದೃಷ್ಟಿ, ಮಿತ್ರ-ಅರಿ-ಪಕ್ಷಯೋಃ – ಮಿತ್ರ ಶತ್ರು ಪಕ್ಷಂಗಳಲ್ಲಿ, ತುಲ್ಯಃ – ಸಮಾನ ಭಾವನೆ, ಸರ್ವ-ಆರಂಭ-ಪರಿತ್ಯಾಗೀ – ಎಲ್ಲ ಪ್ರಯತ್ನಂಗಳ ಪರಿತ್ಯಾಗಿ ,(ಚ ಅಸ್ತಿ – ಕೂಡ ಆಗಿದ್ದನೋ), ಸಃ – ಅವ°, ಗುಣಾತೀತಃ (ಇತಿ) ಉಚ್ಯತೇ – ಗುಣಾತೀತ° ಹೇದು ಹೇಳಲ್ಪಡುತ್ತ°.

ಅನ್ವಯಾರ್ಥ

ಮಾನ ಅಪಮಾನಂಗಳಲ್ಲಿ ಸಮದೃಷ್ಟಿ, ಮಿತ್ರ ಶತ್ರು ಪಕ್ಷಂಗಳಲ್ಲಿ ಸಮಾನವಾದ ಭಾವನೆ, ಎಲ್ಲ ಐಹಿಕ ಕಾಮ್ಯಕರ್ಮಂಗಳ ಪ್ರಯತ್ನದ ಪರಿತ್ಯಾಗಿ ಆಗಿದ್ದನೋ, ಅವ° ಗುಣಾತೀತ° ಹೇದು ಹೇಳಲ್ಪಡುತ್ತ°.

ತಾತ್ಪರ್ಯ / ವಿವರಣೆ

ತ್ರಿಗುಣಾತೀತ° ಹೇಂಗಿರುತ್ತ°, ಅವನ ಕ್ರಮ / ಲಕ್ಷಣಂಗೊ ಹೇಂಗೆ ಹೇಳುವದು ಇಲ್ಲಿ ಭಗವಂತ° ವಿವರಿಸಿದ್ದ°. ಮೇಗಾಣ ಎರಡು ಶ್ಲೋಕಂಗಳ ಒಟ್ಟಿಂಗೆ ತೆಕ್ಕೊಂಡು ವಿಶ್ಲೇಷಣೆ ನೋಡುವೋ°.

“ಸಮದುಃಖಸುಖಃ ಸ್ವಸ್ಥಃ ……. ” – ಜೀವಾತ್ಮನ ಐಹಿಕ ಬಂಧನಲ್ಲಿ ಸಿಲುಕುಸುವ, ಅವನ ನಾನಾ ಕರ್ಮಲ್ಲಿ ತೊಡಗುಸುವ ಪ್ರಕೃತಿಯ ತ್ರಿಗುಣಂಗಳ ಪ್ರಭಾವವ ಮೀರಿ ನಿಂದವ° – ತ್ರಿಗುಣಾತೀತ°. ತ್ರಿಗುಣಾತೀತ° ಸತ್ವ-ರಜಸ್ಸು-ತಮಸ್ಸು ಎಲ್ಲವೂ ಒಂದೇ ಸಮಾನ. ಏವ ಪ್ರಭಾವಕ್ಕೂ ಉದ್ವೇಗಗೊಳ್ಳುತ್ತನಿಲ್ಲೆ. ಸರ್ವ ರೀತಿಯ ಸುಖ-ದುಃಖಂಗಳ ಸಮಾನವಾಗಿ ಕಾಣುತ್ತ°. ಮೇಲ್ನೋಟಕ್ಕೆ ನವಗೆ ಸುಖಕರವಾಗಿ ಕಾಂಬದು ನಿಜವಾದ ಸುಖವಾಗಿರಿಕು ಹೇದು ಏನಿಲ್ಲೆ. ಹಾಂಗೇ, ದುಃಖವೂ ಕೂಡ. ಇದರ ನಿಜಾರ್ಥಲ್ಲಿ ಅರ್ಥಮಾಡಿಗೊಂಡರೆ ಎಲ್ಲವೂ ಭಗವಂತನ ಲೀಲೆ ಹೇಳ್ವ ಭಾವನೆ ಮನಸ್ಸಿಲ್ಲಿ ಸ್ಥಿರಗೊಳ್ಳುತ್ತು. ಅಷ್ಟಪ್ಪಗ ಎಲ್ಲವನ್ನೂ ಸಮಾನವಾಗಿ ಕಾಂಬ ಕ್ಷಮತೆ ನಮ್ಮಲ್ಲಿ ಬತ್ತು. ನಾವು ವೇದಿಕೆಲಿ ಕಾಂಬ ನಾಟಕವನ್ನೋ, ಟಿ.ವಿ.ಲಿ ಕಾಂಬ ದೃಶ್ಯಂಗಳ ಹೇಂಗೆ ಬರೇ ಒಬ್ಬ ಪ್ರೇಕ್ಷಕನಾಗಿ ನೋಡುತ್ತೋ ಹಾಂಗೇ ಪ್ರಪಂಚಲ್ಲಿ ನಡವ ಎಲ್ಲ ಘಟನೆಗಳ ಪ್ರೇಕ್ಷಕನಾಂಗೆ ನೋಡ್ವ ಅಭ್ಯಾಸ ಮಾಡಿಗೊಳ್ಳೆಕು. ಅದು ಸುಖಮಯವಾಗಿಕ್ಕು, ದುಃಖಮಯವಾಗಿಕ್ಕು. ಆದರೆ ಎಲ್ಲವೂ ಕ್ಷಣಿಕ. ಆದರೆ ಅವೆಲ್ಲವೂ ಭಗವಂತನ ಕ್ರಿಯೆ ಹೇದು ಆಸ್ವಾದಿಸೆಕು. ಜೀವನಲ್ಲಿ ಬಪ್ಪ ತಾತ್ಕಾಲಿಕ ದುಃಖ ಮುಂದೆ ನಮ್ಮ ಶಾಶ್ವತ ಸುಖಕ್ಕೆ ಕಾರಣವಾಗಿಪ್ಪಲೂ ಸಾಕು. ಆದರೆ ಅದು ನವಗೆ ಗೊಂತಿರುತ್ತಿಲ್ಲೆ. ತ್ರಿಗುಣಾತೀತನಾದವ ಈ ವಿಷಯವ ಅರ್ಥಮಾಡಿಗೊಂಡು ಸುಖದುಃಖಲ್ಲಿ ಸಮಭಾವವ ತಾಳಿರುತ್ತ°, ಸ್ವಸ್ಥನಾಗಿರುತ್ತ°.

ಹಿಂದೆ ಎರಡ್ನೇ ಅಧ್ಯಾಯಲ್ಲಿ ೫೪ನೇ ಶ್ಲೋಕಲ್ಲಿ ಅರ್ಜುನ° “ಸ್ಥಿತಪ್ರಜ್ಞಸ್ಯ ಕಾ ಭಾಷಾ..” ಕೇಳಿಪ್ಪಗ, ಸ್ಥಿತಪ್ರಜ್ಞ° ಮತ್ತೆ ನಿಜಭಕ್ತರ ಲಕ್ಷಣಂಗಳ ಹೇಳುವಾಗಲೂ ಭಗವಂತ° ಇದೇ ಮಾತುಗಳ ಹೇಳಿದ್ದ°. ತ್ರಿಗುಣಾತೀತನಾದವಂಗೆ ಮಣ್ಣು ಹೊನ್ನು ಮುತ್ತು ರತ್ನ ಎಲ್ಲವೂ ಒಂದೇ. ಚಿನ್ನವೂ ಕೂಡ ಅವಂಗೆ ಅಮೂಲ್ಯ ಹೇಳಿ ಕಾಣುತ್ತಿಲ್ಲೆ. ಅವಂಗೆ ಅಮೂಲ್ಯ ಹೇಳುವದು ಭಗವಂತನ ಜ್ಞಾನ ಒಂದೇ. ಹಾಂಗಾಗಿ ಪೈಸೆಲಿಯಾಗಲೀ ಚಿನ್ನಲ್ಲಿಯಾಗಲೀ ಭೂಮಿಗೆ ಆಗಿಲಿ ಏವುದೇ ವ್ಯಾಮೋಹವ ತಾಳಿರುತ್ತನಿಲ್ಲೆ. ಹಾಂಗಾಗಿ ಅವ° ಸಂತೋಷಲ್ಲಿ ಸದಾ ಇರುತ್ತ°. ಅವನ ಚಿಂತನೆ ಎಲ್ಲವೂ ಭಗವಂತ° ಒಂದೇ. ಅವನ ಲಕ್ಷ್ಮ್ಯ ಆ ಭಗವಂತ° ಮಾಂತ್ರ.

ತ್ರಿಗುಣಾತೀತ° ಒಬ್ಬ° ಜ್ಞಾನಿಯ ಹಾಂಗೆ. ಇನ್ನೊಬ್ಬ ಅವನ ಅರೆಬೆಗುಡ° ಹೇಳಿ ನಿಂದೆ ಮಾಡ್ಳೂ ಸಾಕು. ಆದರೆ ಅದೇವುದೂ ಅವನ ಮೇಗೆ ಪರಿಣಾಮ ಬೀರ. ಅವಂಗೆ ಮಾನ ಅಪಮಾನ ಎರಡೂ ಸಮಾನ. ಅವನ ಇತರರು ಹೊಗಳೆಕು, ಮೆಚ್ಚೆಕು ಹೇಳಿಯೂ ಅವ° ಗ್ರೇಶುತ್ತನಿಲ್ಲೆ. ಮಾನ-ಅಪಮಾನಂಗಳಲ್ಲಿ ಸಮ ಭಾವ. ಅಂತವಂಗೆ ಮತ್ತೆ ಮಿತ್ರರು ಶತ್ರುಗೊ ಹೇಳಿ ಎಲ್ಲಿಂದ. ಎಲ್ಲೋರು ಒಂದೇ ಸಮಾನ. ಹಾಂಗಾಗಿ ಮಿತ್ರರ ಬಗ್ಗೆ ಸ್ನೇಹವಾಗಲೀ ಶತ್ರುಗಳ ಬಗ್ಗೆ ದ್ವೇಷವಾಗಲೀ ಇಲ್ಲೆ. ತ್ರಿಗುಣಾತೀತನಾದವ ಭಗವಂತಂಗೆ ವಿರುದ್ಧವಾದ ಯಾವ ಕ್ರಿಯೆಲಿಯೂ (ಚಟುವಟಿಕೆಲಿಯೂ) ಪ್ರಯತ್ನಕ್ಕೆ ತೊಡಗದ್ದೆ ಭಗವದ್ ಪ್ರೀತಿಗೆ ಏವುದು ಯೋಗ್ಯವೋ ಅದರಲ್ಲಿ ನಿರತರಾಗಿರುತ್ತವು. ಅದನ್ನೇ ಇಲ್ಲಿ ಹೇಳಿದ್ದದು ‘ಸರ್ವಾರಂಭಪರಿತ್ಯಾಗೀ” ಹೇದು. ಹೇಳಿರೆ ಭಗವಂತನ ಭಕ್ತಿಗೆ ವಿರುದ್ಧವಾದ ಏವುದೇ ಚಟುವಟಿಕೆಯ ಆರಂಭ ಮಾಡುವ ಕಾರ್ಯಲ್ಲಿ ತ್ಯಾಗೀ. ಆ ಕಾರ್ಯಕ್ಕೆ ತನ್ನ ತೊಡಗುಸಲೆ ಇಲ್ಲೆ. ಅವನ ಸದಾ ಚಿಂತನೆ ಭಗವದ್ ಪ್ರೀತಿ ಒಂದೇ. ಅದರಲ್ಲೇ ತನ್ನ ತಾನು ತೊಡಗಿಸಿಗೊಂಡು ಸಂತೋಷಮಯ ಜೀವನವ ಸವಿಯುತ್ತ°.

ಹೀಂಗೆ ತ್ರಿಗುಣಾತೀತನಾದ ಮನುಷ್ಯ° ಭಗವದ್ ಪ್ರೀತಿಗೆ ತನ್ನ ತೊಡಗಿಸಿಗೊಳ್ಳುತ್ತ°.  ಆದರೆ ಪ್ರಕೃತಿಲಿಯೇ ಹಾಸುಹೊಕ್ಕಾಗಿಪ್ಪ ಈ ಗುಣತ್ರಯಂಗಳ ಮೀರಿ ನಿಂಬದು ಹೇಳಿರೆ ಅಷ್ಟು ಸುಲಭವೋ?! ಅದು ಕಲ್ಪನಾತೀತವೇ ಸರಿ. ಹಾಂಗಾರೆ, ತ್ರಿಗುಣಾತೀತ° ಆಯೇಕ್ಕಾರೆ ಎಂತ ಮಾಡೆಕು? ಹೇಂಗೆ ?! –

ಶ್ಲೋಕ

ಮಾಂ ಚ ಯೋsವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।
ಸ ಗುಣಾನ್ ಸಮತೀತೈತಾನ್ ಬ್ರಹ್ಮಭೂಯಾಯ ಕಲ್ಪತೇ ॥೨೬॥

ಪದವಿಭಾಗ

ಮಾಮ್ ಚ ಯಃ ಅವ್ಯಭಿಚಾರೇಣ ಭಕ್ತಿ-ಯೋಗೇನ ಸೇವತೇ । ಸಃ ಗುಣಾನ್ ಸಮತೀತ್ಯ ಏತಾನ್ ಬ್ರಹ್ಮ-ಭೂಯಾಯ ಕಲ್ಪತೇ ॥

ಅನ್ವಯ

ಯಃ ಮಾಂ ಚ ಅವ್ಯಭಿಚಾರೇಣ ಭಕ್ತಿ-ಯೋಗೇನ ಸೇವತೇ, ಸಃ ಏತಾನ್ ಗುಣಾನ್ ಸಮತೀತ್ಯ, ಬ್ರಹ್ಮ-ಭೂಯಾಯ ಕಲ್ಪತೇ ।

ಪ್ರತಿಪದಾರ್ಥ

ಯಃ – ಆರು, ಮಾಮ್ – ಎನ್ನ, ಚ – ಕೂಡ, ಅವ್ಯಭಿಚಾರೇಣ – ತಪ್ಪದ್ದೆ, ಭಕ್ತಿ-ಯೋಗೇನ – ಭಕ್ತಿಸೇವೆಂದ, ಸೇವತೇ – ಸೇವೆಮಾಡುತ್ತವೋ (ಉಪಾಸನೆ ಮಾಡುತ್ತವೋ), ಸಃ – ಅವ°, ಏತಾನ್ ಗುಣಾನ್ – ಈ ಎಲ್ಲ ಗುಣಂಗಳ, ಸಮತೀತ್ವ – ಮೀರಿ (ಸಮಾನವಾಗುಸಿ), ಬ್ರಹ್ಮ-ಭೂಯಾಯ ಕಲ್ಪತೇ – ಬ್ರಹ್ಮವೇದಿಕೆಗೆ ಏರಿದವವ° ಆವುತ್ತ°.

ಅನ್ವಯಾರ್ಥ

ಆರು ಎನಗೆ ಏವ ಸನ್ನಿವೇಶಲ್ಲಿಯೂ ತಪ್ಪದ್ದೆ ಸಂಪೂರ್ಣ ಭಕ್ತಿಂದ ಭಕ್ತಿಸೇವೆಯ ಮಾಡುತ್ತನೋ, ಅವ° ಪ್ರಕೃತಿಯ ಈ ಎಲ್ಲ ಗುಣಂಗಳ ಮೀರಿ ( ಸಮಾನವಾಗುಸಿ) ಬ್ರಹ್ಮನ್ ಹಂತಕ್ಕೆ ಏರಿಬಿಡುತ್ತ°.

ತಾತ್ಪರ್ಯ / ವಿವರಣೆ

ನವಗೆ ತ್ರಿಗುಣಾತೀತ° ಅಪ್ಪಲೆ ಇಪ್ಪ ಏಕಮಾತ್ರ ಮಾರ್ಗ ಏವುದು ಹೇಳ್ವದರ ಭಗವಂತ° ಇಲ್ಲಿ ಹೇಳಿದ್ದ°. ನಾವು ತ್ರಿಗುಣಾತೀತರಾಯೇಕು ಹೇಳಿಗೊಂಡು ಕೂದರೆ ಅದು ನಡೆಯ. ಅದಕ್ಕೆ ಅವಿರತ ಪ್ರಯತ್ನ ಬೇಕು. ಹೇಂಗಿಪ್ಪ ಪ್ರಯತ್ನ? – ನಾವು ಈ ವಿಷಯಲ್ಲಿ ಯಶಸ್ಸು ಕಾಣೇಕ್ಕಾರೆ ನಾವು ಭಕ್ತಿಯೋಗಲ್ಲಿ ಸಂಪೂರ್ಣ ತೊಡಗೆಕು. ಅದು ನಿರಾತಂಕವಾಗಿ ಸಾಗೆಕು. ಎಡೆಲಿ ಎನ್ನಂದಾಗಪ್ಪ, ಇದು ಭಂಙ ಆವ್ತಪ್ಪ ಹೇಳಿ ಬಿಡ್ಳೆ ಇಲ್ಲೆ. ಅದನ್ನೇ ಭಗವಂತ° ಇಲ್ಲಿ ಹೇಳಿದ್ದದು ‘ಅವ್ಯಭಿಚಾರೇಣ’ – ತಪ್ಪದ್ದೆ /ಬಿಡದ್ದೆ/ಅವಿರತವಾಗಿ ಹೇದು. ಐಹಿಕಲ್ಲಿ ನಮ್ಮ ಎಲ್ಲ ಯೋಚನೆಗೊ ತ್ರಿಗುಣಲ್ಲೇ ಸುತ್ತುತ್ತಾ ಇರುತ್ತು. ಇದೊಂದು ಚಕ್ರಭ್ರಮಣ. ಈ ಚಕ್ರಭ್ರಮಣಂದ ಪಾರಾಗಿ ಬರೇಕಾರಿ ಆ ಚಕ್ರಧಾರಿಗೆ ಸಂಪೂರ್ಣ ಶರಣಾಗತರಾಗಿ ಅವನ ಒಲುಮೆಯ ಗಳುಸೆಕು ಹೇದು ಬನ್ನಂಜೆ ವರ್ಣಿಸಿದ್ದವು. ಹಾಂಗಾಗಿ ತ್ರಿಗುಣಾತೀತನಾಯೇಕ್ಕಾರೆ ಭಗವಂತನಲ್ಲಿ ಸಂಪೂರ್ಣ ಶ್ರದ್ಧೆ, ಭಕ್ತಿ, ನಂಬಿಕೆ, ವಿಶ್ವಾಸವ ಮಡಿಕ್ಕೊಂಡು ಸಂಪೂರ್ಣ ಶರಣಾಗತನಾಗಿ ಸರ್ವಗುಣಾತೀತ, ಸರ್ವಗುಣಪರಿಪೂರ್ಣನಾದ ಆ ಭಗವಂತನ ಅನನ್ಯ ಭಕ್ತಿಂದ ಉಪಾಸನೆ ಮಾಡುತ್ತಾ ಇರೆಕು. ಅದು ಏಕನಿಷ್ಠಾ ಭಕ್ತಿ ಆಗಿರೆಕು. ಲಕ್ಷ್ಮೀಸಮೇತನಾದ ಆ ಭಗವಂತನ ಏಕನಿಷ್ಠೆಂದ ಅನನ್ಯ ಭಕ್ತಿಪೂರ್ವಕ ಉಪಾಸನೆ ಮಾಡುವದರಿಂದ ಲಕ್ಷ್ಮಿಂದ ಹದಿನೈದು ಬಂಧನದ ಬೇಲಿಯ ಧರಿಸಿ ಪ್ರಪಂಚಕ್ಕೆ ಬಂದ ನಾವು ಈ ಎಲ್ಲ ಬಂಧಂಗಳ ಕಳಚಿ ಆ ಭಗವದ್ಧಾಮವ ಸೇರ್ಲೆ ಯೋಗ್ಯರಪ್ಪಲಕ್ಕು.

ಶ್ಲೋಕ

ಬ್ರಹ್ಮಣೋ ಹಿ ಪ್ರತಿಷ್ಠಾಹಂ ಅಮೃತಸ್ಯಾವ್ಯಯಸ್ಯ ಚ ।
ಶಾಶ್ವತಸ್ಯ ಚ ಧರ್ಮಸ್ಯ ಸುಖಸೈಕಾಂತಿಕಸ್ಯ ಚ ॥೨೭॥

ಪದವಿಭಾಗ

ಬ್ರಹ್ಮಣಃ ಹಿ ಪ್ರತಿಷ್ಠಾ ಅಹಮ್ ಅಮೃತಸ್ಯ ಅವ್ಯಯಸ್ಯ ಚ । ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯ ಏಕಾಂತಿಕಸ್ಯ ಚ ॥

ಅನ್ವಯ

ಅಮೃತಸ್ಯ ಅವ್ಯಯಸ್ಯ ಚ ಬ್ರಹ್ಮಣಃ, ಶಾಶ್ವತಸ್ಯ ಚ ಧರ್ಮಸ್ಯ, ಏಕಾಂತಿಕಸ್ಯ ಸುಖಸ್ಯ ಚ ಹಿ ಅಹಂ ಪ್ರತಿಷ್ಠಾ (ಅಸ್ಮಿ) ।

ಪ್ರತಿಪದಾರ್ಥ

ಅಮೃತಸ್ಯ – ಅಮರನ, ಅವ್ಯಯಸ್ಯ – ಅವ್ಯಯನ, ಚ – ಕೂಡ, ಬ್ರಹ್ಮಣಃ – ನಿರಾಕಾರ ಬ್ರಹ್ಮಜ್ಯೋತಿಯ, ಶಾಶ್ವತಸ್ಯ ಚ ಧರ್ಮಸ್ಯ , ಶಾಶ್ವತನಾದ ಸ್ವರೂಪಸ್ಥಿತಿಯ, ಏಕಾಂತಿಕಸ್ಯ – ಒಂದೇ ಅಂತಿಮವಾದ (ಕಡೇ ಅಕೇರಿಯವ°), ಸುಖಸ್ಯ – ಸುಖಕರನ, ಚ – ಕೂಡ, ಹಿ – ಖಂಡಿತವಾಗಿಯೂ, ಅಹಮ್ ಪ್ರತಿಷ್ಠಾ (ಅಸ್ಮಿ) – ಆನು ಆಶ್ರಯನಾಗಿದ್ದೆ.

ಅನ್ವಯಾರ್ಥ

ಅಮರವೂ, ಅವ್ಯಯವೂ, ಶಾಶ್ವತವೂ, ಧರ್ಮವೂ ನಿರತಿಶಯ ಸುಖವೂ ಆದ ಬ್ರಹ್ಮಕ್ಕೇ ಆನೇ ಆಶ್ರಯ ಸ್ಥಾನ ಆಗಿದ್ದೆ.

ತಾತ್ಪರ್ಯ / ವಿವರಣೆ

ತ್ರಿಗುಣಂಗಳ ಮೀರಿ ನಿಂದಪ್ಪಗ ಅವ° (ಸಾಧಕ°) ಬ್ರಹ್ಮನ್ ಯೋಗ್ಯತೆಗೆ ಪಾತ್ರನಾವುತ್ತ°. ಆ ಸ್ಥಿತಿಲಿ ಬ್ರಹ್ಮತತ್ವವಾದ ಚಿತ್- ಪ್ರಕೃತಿ (ಶ್ರೀಲಕ್ಷ್ಮಿ)ಗೂ ಆಸರೆಯಾದ ಭಗವಂತನ ಮೋಕ್ಷಲ್ಲಿ ಸೇರ್ಲಕ್ಕು ಹೇಳಿ ಭಗವಂತ° ಭರವಸೆಯ ಇಲ್ಲಿ ಹೇಳಿದ್ದ°.

ಬ್ರಹ್ಮನ್’ನ ಸ್ವರೂಪ ಅಮರತ್ವ, ಅವಿನಾಶಿತ್ವ, ನಿತ್ಯತೆ ಮತ್ತೆ ಸುಖ. ಬ್ರಹ್ಮನ್ ದಿವ್ಯ ಸಾಕ್ಷಾತ್ಕಾರದ ಸುರು. ಪರಮಾತ್ಮ° ದಿವ್ಯ ಸಾಕ್ಷಾತ್ಕಾರಲ್ಲಿ ಎರಡ್ನೇ ಘಟ್ಟ. ದೇವೋತ್ತಮ ಪರಮ ಪುರುಷ° ಪರಿಪೂರ್ಣ ಸತ್ಯದ ಪರಮ ಸಾಕ್ಷಾತ್ಕಾರ. ಹಾಂಗಾಗಿ ಪರಮಾತ್ಮನೂ ನಿರಾಕಾರ ಬ್ರಹ್ಮನೂ ಪರಮ ಪುರುಷನಲ್ಲಿ ಇಪ್ಪದು. ಕೆಳಮಟ್ಟದ ಐಹಿಕ ಪ್ರಕೃತಿಗೆ ಮೇಲ್ಮಟ್ಟದ ಪ್ರಕೃತಿಯ ಅಂಶಂಗಳ ನೀಡಿ ಭಗವಂತ° ಅದಕ್ಕೆ ಗರ್ಭಾಧಾನ ಮಾಡುತ್ತ°. ಐಹಿಕ ಪ್ರಕೃತಿಗೆ ಇದು ಆಧ್ಯಾತ್ಮಿಕ ಸ್ಪರ್ಶ. ಈ ಐಹಿಕ ಪ್ರಕೃತಿಂದ ಬದ್ಧನಾದ ಜೀವಿ ಆಧ್ಯಾತ್ಮಿಕ ಜ್ಞಾನವ ಬೆಳೆಶಿಗೊಂಬಲೆ ಸುರುಮಾಡಿಯಪ್ಪಗ ಅವ° ಐಹಿಕ ಅಸ್ತಿತ್ವಂದ ಮೇಲೇರುತ್ತ°. ಕ್ರಮೇಣ, ಅವ° ಪರಮ ಸತ್ಯದ ಬ್ರಹ್ಮನ್ ಪರಿಕಲ್ಪನೆಗೆ ಏರುತ್ತ°. ಬದುಕಿನ ಬ್ರಹ್ಮನ್ ಪರಿಕಲ್ಪನೆಯ ಸಾಧನೆ ಆತ್ಮಸಾಕ್ಷಾತ್ಕಾರಲ್ಲಿ ಸುರುವಾಣ ಹಂತ. ಈ ಹಂತಲ್ಲಿ ಬ್ರಹ್ಮಸಾಕ್ಷಾತ್ಕಾರ ಪಡದವ ಐಹಿಕ ಸ್ಥಿತಿಯ ಮೀರುತ್ತ°. ಆದರೆ ಈ ಹಂತಲ್ಲಿ ವಾಸ್ತವವಾಗಿ ಅವ ಬ್ರಹ್ಮ ಸಾಕ್ಷಾತ್ಕಾರಲ್ಲಿ ಪರಿಪೂರ್ಣ ಆವ್ತನಿಲ್ಲೆ. ಅವ° ಬಯಸಿರೆ ಬ್ರಹ್ಮ ಸ್ಥಿತಿಲಿಯೇ ಮುಂದುವರಿಯಲಕ್ಕು. ಮತ್ತೆ ಅವ° ಕ್ರಮೇಣ ಪರಮಾತ್ಮ ಸಾಕ್ಷಾತ್ಕಾರಕ್ಕೆ ಏರಿ ಅಲ್ಲಿಂದ ದೇವೋತ್ತಮ ಪರಮ ಪುರುಷನ ಸಾಕ್ಷಾತ್ಕಾರಕ್ಕೆ ಏರ್ಲಕ್ಕು.

ಜೀವಿಯು ಸ್ವಭಾವಂದ ಬ್ರಹ್ಮನ್ ಆದರೂ ಐಹಿಕ ಜಗತ್ತಿನ ಮೇಗೆ ಪ್ರಭುತ್ವ ನಡೆಶುಲೆ ಬಯಸುತ್ತ°. ಇದರಿಂದ ಅವ° ತನ್ನ ಮೂಲ ಸ್ಥಿತಿ ಸ್ವಭಾವಂದ ಕೆಳಬೀಳುತ್ತ°. ಜೀವಿ ತನ್ನ ಸ್ವರೂಪಲ್ಲಿ ಐಹಿಕ ಪ್ರಕೃತಿಯ ಗುಣತ್ರಯಂಗಳ ಮೀರಿದವ°. ಆದರೆ ಐಹಿಕ ಪ್ರಕೃತಿಯ ಸಹವಾಸಂದಲಾಗಿ ಅವನ ಸತ್ವ-ರಜಸ್ಸು-ತಮಸ್ಸುಗಳೆಂಬ ಗುಣತ್ರಯಂಗೊ ಅವನ ಐಹಿಕ ಪ್ರಕೃತಿಯ ಗುಣಂಗಳಲ್ಲಿ ಒಂದಾಗುಸುತ್ತು. ಈ ಗುಣತ್ರಯಂಗಳ ಪ್ರಭಾವಂದ ಅವನಲ್ಲಿ ಐಹಿಕ ಜಗತ್ತಿನ ಮೇಲೆ ಯಜಮಾಂತಿಕೆ ನಡೆಶುವ ಬಯಕೆ ಹುಟ್ಟುತ್ತು. ಸಂಪೂರ್ಣ ಕೃಷ್ಣಪ್ರಜ್ಞೆಲಿ ಭಕ್ತಿಸೇವೆಲಿ ಅನವರತ ತೊಡಗುವದರಿಂದ ಅವ° ಕೂಡ್ಳೆ ದಿವ್ಯಸ್ಥಿತಿಲಿ ನೆಲೆಗೊಳ್ಳುತ್ತ°, ಐಹಿಕ ಪ್ರಕೃತಿಯ ತಾನು ನಿಯಂತ್ರುಸೆಕು ಹೇಳ್ವ ಅವನ ನೀತಿಬಾಹಿರ ಅಪೇಕ್ಷೆ ಹೆರಟುಹೋವ್ತು. ಇಂತಹ ಸನ್ನಿವೇಶಲ್ಲಿ ನಿಜಗುರುವಿನ ಆಶ್ರಯವ ಪಡದು ಅವನ ಮಾರ್ಗದರ್ಶನಲ್ಲಿ ಮುನ್ನಡೆ ಮಡುಗೆಕು. ಪರಮ ಪ್ರಭುವಿನ ಪ್ರೇಮಪೂರ್ವಕ ದಿವ್ಯ ಸೇವೆಲಿ ದೃಢವಾಗಿ ನೆಲೆಗೊಳ್ಳೆಕು.  ಇಂತಹ ಪ್ರಕೃಯೆಲ್ಲಿ ತನ್ನ ತಾನು ತೊಡಗುಸುವದರಿಂದ ಮನುಷ್ಯ° ಎಲ್ಲ ಐಹಿಕ ಚಟುವಟಿಕೆಗಳ ವಿಷಯಲ್ಲಿ ಸಂಪೂರ್ಣ ನಿರ್ಲಿಪ್ತನಾಗಿ ಬ್ರಹ್ಮಜ್ಯೋತಿಯ ನೆಲೆಲಿ ನೆಲೆಗೊಂಡು ಮುಂದೆ ದೇವೋತ್ತಮ ಪರಮ ಪುರುಷನ ಪಾದವ ಸೇರುತ್ತ° ಹೇಳ್ವಲ್ಯಂಗೆ –

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಗುಣತ್ರಯವಿಭಾಗಯೋಗೋ  ನಾಮ ಚತುರ್ದಶೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಗುಣತ್ರಯವಿಭಾಗಯೋಗಃ ಹೇಳ್ವ ಹದಿನಾಲ್ಕನೇ ಅಧ್ಯಾಯ ಮುಗುದತ್ತು.

 

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

 

॥ ಶ್ರೀಕೃಷ್ಣಾರ್ಪಣಮಸ್ತು ॥

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

 

9 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 18 – 27

  1. ಚೆನ್ನೈ ಭಾವ…,
    ನಿಂಗಳ ಶ್ರದ್ಧಾಭಕ್ತಿಗೆ ನಮೋನ್ನಮಃ
    ಪ್ರತಿಯೊಂದು ಭಾಗವನ್ನೂ ಪೀಠಿಕೆಲಿ ಸುರು ಮಾಡಿ, ಶ್ಲೋಕರೂಪಂಗಳ ಚೆಂದಲ್ಲಿ ವಿವರ್ಸಿ ಬರೆತ್ತಾ ಇಪ್ಪದರ ಮನಸ್ಸು ಮಡುಗಿ ಓದಿದವಂಗೆ ಈ ಜನ್ಮಕ್ಕೆ ಬೇಕಪ್ಪ ಎಲ್ಲ ಜ್ಞಾನವೂ ಸಿಕ್ಕುತ್ತಿದಾ!!! ಅಂದು ತೀರಾ ಹತಾಶನಾದ ಅರ್ಜುನಂಗೆ ಭಗವಂತನಾದ ಕೃಷ್ಣ ಬೋಧಿಸಿದ್ದದರ ನಿಂಗೊ ಹಲವು ಸರ್ತಿ ಮಥನ ಮಾಡಿ ಸರಳ ಮಾಡಿ ಕೊಡ್ತಾ ಇದ್ದಿ. ಆ ಜಗದ್ಗುರುವಿನ ಪೂರ್ಣ ಅನುಗ್ರಹ ನಿಂಗೊಗೆ ಸಿಕ್ಕಲಿ ಹೇಳ್ತ ಹಾರೈಕೆ.

    [ನವಗೆ ತ್ರಿಗುಣಾತೀತ° ಅಪ್ಪಲೆ ಇಪ್ಪ ಏಕಮಾತ್ರ ಮಾರ್ಗ ಏವುದು ಹೇಳ್ವದರ ಭಗವಂತ° ಇಲ್ಲಿ ಹೇಳಿದ್ದ°. ನಾವು ತ್ರಿಗುಣಾತೀತರಾಯೇಕು ಹೇಳಿಗೊಂಡು ಕೂದರೆ ಅದು ನಡೆಯ. ಅದಕ್ಕೆ ಅವಿರತ ಪ್ರಯತ್ನ ಬೇಕು. ಹೇಂಗಿಪ್ಪ ಪ್ರಯತ್ನ? – ನಾವು ಈ ವಿಷಯಲ್ಲಿ ಯಶಸ್ಸು ಕಾಣೇಕ್ಕಾರೆ ನಾವು ಭಕ್ತಿಯೋಗಲ್ಲಿ ಸಂಪೂರ್ಣ ತೊಡಗೆಕು. ಅದು ನಿರಾತಂಕವಾಗಿ ಸಾಗೆಕು. ಎಡೆಲಿ ಎನ್ನಂದಾಗಪ್ಪ, ಇದು ಭಂಙ ಆವ್ತಪ್ಪ ಹೇಳಿ ಬಿಡ್ಳೆ ಇಲ್ಲೆ. ಅದನ್ನೇ ಭಗವಂತ° ಇಲ್ಲಿ ಹೇಳಿದ್ದದು ‘ಅವ್ಯಭಿಚಾರೇಣ’ – ತಪ್ಪದ್ದೆ /ಬಿಡದ್ದೆ/ಅವಿರತವಾಗಿ ಹೇದು. ಐಹಿಕಲ್ಲಿ ನಮ್ಮ ಎಲ್ಲ ಯೋಚನೆಗೊ ತ್ರಿಗುಣಲ್ಲೇ ಸುತ್ತುತ್ತಾ ಇರುತ್ತು. ಇದೊಂದು ಚಕ್ರಭ್ರಮಣ. ಈ ಚಕ್ರಭ್ರಮಣಂದ ಪಾರಾಗಿ ಬರೇಕಾರಿ ಆ ಚಕ್ರಧಾರಿಗೆ ಸಂಪೂರ್ಣ ಶರಣಾಗತರಾಗಿ ಅವನ ಒಲುಮೆಯ ಗಳುಸೆಕು]
    ಈ ವಾಕ್ಯಂಗಳಲ್ಲಿ ನಾವು ನಿರತನಿರಂತರ ಭಕ್ತಿ ಮಾರ್ಗಲ್ಲಿ ನೆಡೆಯೆಕ್ಕು ಹೇಳಿ ಎಚ್ಚರಿಕೆ ಮಾತು ಹೇಳಿದ ಹಾಂಗೆ ಆಯಿದು. ತುಂಬಾ ಲಾಯ್ಕಾಯಿದು..

    ಧನ್ಯವಾದ ಭಾವ.
    ಹರೇರಾಮ.

  2. ಆನೆಂತಕೆ ಕೇಳಿದ್ದು ಹೇಳಿರೆ ಇಲ್ಲಿ ಶ್ರೀದೇವಿ, ಭೂದೇವಿ, ದುರ್ಗೆಯರು ಅಧಿಪತಿಗ ಹೇಳಿ ಇದ್ದಲ್ಲದ?
    ಅಂಬಗ ತ್ರಿಮೂರ್ತಿಗೊಕ್ಕೆ ಇಲ್ಲಿ ಕನೆಕ್ಷನ್ ಇದ್ದಾ?

    1. ಒಪ್ಪ ಕೊಟ್ಟು ಪ್ರೋತ್ಸಾಹಿಸ್ಯೊಂಡಿಪ್ಪ ಎಲ್ಲೋರಿಂಗೂ ಸಹೃದಯ ಮನದಾಳದ ಧನ್ಯವಾದಂಗೊ.

      ಶ್ಯಾಮಣ್ಣನ ಜಿಜ್ಞಾಸೆ ಸಹಜವಾದ್ದು. ಆದರೆ, ಈ ಅಧ್ಯಾಯದ ಪ್ರಾರಂಭಲ್ಲಿ ಹೇಳಿದ ಪ್ರಕಾರ ತ್ರಿಗುಣಂಗೊ ಮದಲಿಂದಲೇ ಪ್ರಕೃತಿಲಿ ಇಪ್ಪದು. ತ್ರಿಗುಣಂಗಳ ಆರೂ ಹೊಸತ್ತಾಗಿ ಸೃಷ್ಟಿ ಮಾಡಿದ್ದಲ್ಲ. ಮತ್ತೆ., ಪ್ರಕೃತಿ-ಪುರುಷರ ಸಂಯೋಗಂದ ಸೃಷ್ಟಿ ಕಾರ್ಯ ನಡೆತ್ತು ಹೇಳಿ ಭಗವಂತ° ಹೇಳಿದ್ದ°. ಇಲ್ಲಿ ಪ್ರಕೃತಿ ಹೇಳಿರೆ ಶ್ರೀ ತತ್ವ = ಲಕ್ಷ್ಮೀ. ಅಲ್ಲಿ ಶ್ರೀ , ಭೂ , ದೇವಿ ಮೂರು ಲಕ್ಷ್ಮಿಯ ಅಂಶಂಗೊ. ಅದು ಸತ್ವ ರಜ ತಮೋ ಗುಣಕ್ಕೆ ಅಧಿಪತಿ. ಸೃಷ್ಟಿಯಾದ ಪ್ರತಿಯೊಬ್ಬನಲ್ಲೂ ಈ ಮೂರು ಗುಣಂಗೊ ಇದ್ದು. ಒಬ್ಬನಲ್ಲಿ ಇಂತದ್ದೇ ಒಂದು ಗುಣ ಮಾಂತ್ರ ಇಪ್ಪದು ಹೇಳಿ ಹೇಳ್ಳೆ ಎಡಿಯ. ಮೂರು ಗುಣಂಗಳ ಸಂಮಿಶ್ರ ಪ್ರತಿಯೊಬ್ಬನಲ್ಲೂ. ಇದಕ್ಕೆ ಬ್ರಹ್ಮಾದಿ ದೇವತೆಗಳೂ ವ್ಯತಿರಿಕ್ತವಲ್ಲ. ಆರಲ್ಲಿ ಯಾವ ಗುಣ ಅಧಿಕ ವಾಗಿದ್ದೋ ಆ ಗುಣಂದ ಅವನ ಗುರುತುಸುವದು ಮಾಂತ್ರ ಪ್ರಾಪಂಚಿಕವಾಗಿ. ಬ್ರಹ್ಮ ವಿಷ್ಣು ಮಹೇಶ್ವರರು ಈ ತ್ರಿಗುಣಂಗೊಕ್ಕೆ ಪ್ರತೀಕ ಮಾಂತ್ರ. ಅವ್ವೇ ತ್ರಿಗುಣಂಗೊ ಅಥವಾ ಅವ್ವೇ ಅದರ ಯಜಮಾನಂಗೊ ಹೇಳಿ ಹೇಳ್ಳೆ ಇಲ್ಲೆ. ಅದರ ಆಳ್ವ ಅಧಿಕಾರವನ್ನೂ ಅವಕ್ಕೆ ಕೊಟ್ಟಿದವಿಲ್ಲೆ. ಸತ್ವ ರಜೋ ಗುಣ ಅಧಿಕರಾಗಿ ಅದಕ್ಕನುಗುಣವಾಗಿ ಕಾರ್ಯಭಾರ ಮಾಡ್ವ ಅಧಿಕಾರ ಮಾಂತ್ರ ಅವಕ್ಕೆ ಕೊಟ್ಟದು. ಸೃಷ್ಟಿಯ ಕತೆಯ ನೋಡಿರೆ ವಿಷ್ಣುವೇ ಆದಿನಾರಾಯಣ. ಅಂವ ಎಲ್ಲಿಂದ ಹುಟ್ಟಿದ ಹೇಳ್ವದಕ್ಕೆ ಮೂಲ ಇಲ್ಲೆ. ಹಾಂಗಾಗಿ ಅವನೇ ಆದಿಮೂಲ°. ಅಂವ ಅವನೇ ಪ್ರಕೃತಿಯ ಬಳಸಿ ಸೃಷ್ಟಿ ಕೆಲಸವ ಮಾಡಿದ್ದದು. ಬಾಕಿದ್ದೆಲ್ಲವೂ ಅವನಿಂದ ಮತ್ತೆ ಸೃಷ್ಟಿಯಾತು.

      ಹರೇ ರಾಮ ಶ್ಯಾಮಣ್ಣ.

      1. ಅಂಬಗ ತ್ರಿಗುಣಂಗ ಪ್ರತಿಯೊಂದು ಜೀವಿಗೂ ಮೂಲ ಗುಣ ಹೇಳಿ ಆತು. ಹಾಂಗಾಗಿ ತ್ರಿಗುಣ ಹೇಳ್ತದು ಹುಟ್ಟು ಗುಣ ಹೇಳಿ ಹೇಳ್ಲಕ್ಕು.
        ಆತ್ಮ ದೇಹಲ್ಲಿ ಇಲ್ಲದ್ದೇ ಇಪ್ಪಗ ಅದಕ್ಕೆ ತ್ರಿಗುಣಂಗ ಇಲ್ಲದ್ದೇ ಇಕ್ಕು… ಆದರೆ ಸಾಧನೆ ಮಾಡೆಕ್ಕಾರೆ ದೇಹ ಬೇಕೆ ಬೇಕು. ದೇಹದೊಳ ಹೊಕ್ಕಿದ ಕೂಡ್ಲೆ ತ್ರಿಗುಣಂಗ ಅಂಟಿಕೊಳ್ತು , ಹುಟ್ಟುಗುಣದ ರೂಪಲ್ಲಿ.
        ಒಂದು ಗಾದೆ ಇದ್ದು…. ‘ಹುಟ್ಟು ಗುಣ ಸುಟ್ಟು ತಿಂದರೂ ಹೋಗ’ ಹೇಳಿ…
        ದೇಹ ಇದ್ದರೆ ತ್ರಿಗುಣ ಅಂಟೀಕೊಂಡೇ ಇರ್ತು. ತ್ರಿಗುಣಕ್ಕೆ ಅತೀತ ಆಯೆಕ್ಕಾರೆ ದೇಹವ ಬಿಡೆಕ್ಕಾವ್ತು.
        ಅಂಬಗ ಈ ತ್ರಿಗುಣಂಗಳ ಮೀರಿ ನಿಂಬದು ಹೇಂಗೆ?
        ತ್ರಿಮೂರ್ತಿಗಳೂ ಈ ತ್ರಿಗುಣಂಗೊಕ್ಕೆ ಹೊರತಲ್ಲ.
        ತ್ರಿಮೂರ್ತಿಗೊಕ್ಕೇ ಸಾಧ್ಯ ಇಲ್ಲದ್ದದು ಸಾಮಾನ್ಯರಿಂಗೆ ಸಾಧ್ಯವಾ?

        1. [ಅಂಬಗ ಈ ತ್ರಿಗುಣಂಗಳ ಮೀರಿ ನಿಂಬದು ಹೇಂಗೆ? ತ್ರಿಮೂರ್ತಿಗಳೂ ಈ ತ್ರಿಗುಣಂಗೊಕ್ಕೆ ಹೊರತಲ್ಲ.
          ತ್ರಿಮೂರ್ತಿಗೊಕ್ಕೇ ಸಾಧ್ಯ ಇಲ್ಲದ್ದದು ಸಾಮಾನ್ಯರಿಂಗೆ ಸಾಧ್ಯವಾ] – ಸಹಜವಾದ ಜಿಜ್ಞಾಸೆ. ಮುಂದಾಣ ಅಧ್ಯಾಯಂಗಳಲ್ಲಿ ಇದಕ್ಕೆ ಉತ್ತರ ಸಿಕ್ಕುತ್ತು. ಶ್ಯಾಮಣ್ಣಂಗೆ ಧನ್ಯವಾದಂಗೊ.

  3. ಚೆನ್ನೈ ಭಾವನ ಗೀತಾ ಲಹರಿ ತುಂಬಾ ಚೆಂದಕ್ಕೆ ಬತ್ತ ಇದ್ದು.

    ಎನಗೆ ಈ ತ್ರಿಗುಣ ದ ಬಗ್ಗೆ ಓದುವಗ ಕೆಲವು ಸಂಶಯಂಗ ಬತ್ತ ಇದ್ದು.
    ನಮ್ಮ ಯಕ್ಶಗಾನ ಇದ್ದಲ್ಲದ, ಇದಲ್ಲಿ ದೇವಿ ಮಹಾತ್ಮೆ ಪ್ರಸಂಗಲ್ಲಿ, ಸುರುವಿಂಗೆ ಬ್ರಹ್ಮ- ವಿಷ್ಣು- ಮಹೇಶ್ವರರ ಮಧ್ಯೆ ವಾಗ್ವಾದ ನಡವದು ನವಗೆ ಗೊಂತಿದ್ದು….
    ಇಲ್ಲಿ ವಿಷ್ಣು ಅರ್ಥ ಹೇಳುವಗ “ವಿಷ್ಣು ಸತ್ವ ಗುಣಕ್ಕೆ, ಬ್ರಹ್ಮ ರಜೋಗುಣಕ್ಕೆ, ಶಿವ ತಮೋಗುಣಕ್ಕೆ ಪ್ರತೀಕ- ಮತ್ತೆ ಅಧಿಪತಿಗ” ಹೇಳಿ ಹೇಳುದರ ಕೇಳಿದ್ದೆ.
    ಈ ಅರ್ಥ ಸರಿಯಾ?

  4. ಮನುಷ್ಯನ ಪ್ರಕೃತಿ ಗುಣ೦ಗಳಿ೦ದ ಅತೀತರಾಗಿ ನೆಡವಲೆ ನಿರ೦ತರ ಭಕ್ತಿಮಾರ್ಗವೇ ದಾರಿ .ಮತ್ತೆ ಮತ್ತೆ ಓದುಸಿತ್ತು ಈ ವಾರದ ಗೀತಾ ಭಾಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×