Oppanna.com

ಶ್ರೀಮದ್ಭಗವದ್ಗೀತಾ – ಷಷ್ಠೋsಧ್ಯಾಯಃ – ಆತ್ಮಸಂಯಮಯೋಗಃ (ಧ್ಯಾನಯೋಗಃ) – ಶ್ಲೋಕಂಗೊ 40 – 47

ಬರದೋರು :   ಚೆನ್ನೈ ಬಾವ°    on   16/08/2012    7 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಶ್ರೀಭಗವಾನುವಾಚ
ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ ।
ನ ಹಿ ಕಲ್ಯಾಣಕೃತ್ಕಶ್ಚಿದ್ ದುರ್ಗತಿಂ ತಾತ ಗಚ್ಛತಿ ॥೪೦॥

ಪದವಿಭಾಗ

ಶ್ರೀ ಭಗವಾನ್ ಉವಾಚ
ಪಾರ್ಥ ನ ಏವ ಇಹ ನ ಅಮುತ್ರ ವಿನಾಶಃ ತಸ್ಯ ವಿದ್ಯತೇ । ನ ಹಿ ಕಲ್ಯಾಣ-ಕೃತ್ ಕಶ್ಚಿತ್ ದುರ್ಗತಿಮ್ ತಾತ ಗಚ್ಛತಿ ॥

ಅನ್ವಯ

ಶ್ರೀ ಭಗವಾನ್ ಉವಾಚ
ಹೇ ಪಾರ್ಥ!, ನ ಇಹ ನ ಏವ ಚ ಅಮುತ್ರ ತಸ್ಯ ವಿನಾಶಃ ವಿದ್ಯತೇ । ಹೇ ತಾತ! ಕಶ್ಚಿತ್ ಕಲ್ಯಾಣ-ಕೃತ್ ದುರ್ಗತಿಂ ನ ಗಚ್ಛತಿ ಹಿ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ಭಗವಂತ° ಹೇಳಿದ°, ಹೇ ಪಾರ್ಥ! – ಏ ಪೃಥೆಯ ಮಗನೇ! (ಏ ಅರ್ಜುನ°!), ನ ಇಹ – ಈ ಭೌತಿಕ ಜಗತ್ತಿಲ್ಲೆ ಇಲ್ಲೆ, ನ ಏವ ಚ ಅಮುತ್ರ –  ಮುಂದಾಣ ಜನ್ಮಲ್ಲಿ ಕೂಡ ಎಂದಿಂಗೂ ಇಲ್ಲೆ, ತಸ್ಯ – ಅವನ, ವಿನಾಶಃ – ನಾಶವು, ವಿದ್ಯತೇ – ಇರುತ್ತು. (ಅಮುತ್ರ ಚ ನ ವಿದ್ಯತೇ ಇತಿ ಅರ್ಥಃ – ಮುಂದಾಣ ಜನ್ಮಲ್ಲಿಯೂ  ಕೂಡ ನಾಶ ಇಲ್ಲೆ ಹೇಳಿ ಅರ್ಥ), ಹೇ ತಾತ! –  ಏ ಮಿತ್ರನೇ!, ಕಶ್ಚಿತ್ – ಆರೊಬ್ಬನೂ, ಕಲ್ಯಾಣ-ಕೃತ್ – ಮಂಗಳಕಾರ್ಯಲ್ಲಿ ಸುರುಮಾಡಿದವ°, ದುರ್ಗತಿಮ್ – ದುರ್ಗತಿಯ, ನ ಗಚ್ಛತಿ – ಹೋವ್ತನಿಲ್ಲೆ, (ಹೊಂದುತ್ತನಿಲ್ಲೆ), ಹಿ – ಖಂಡಿತವಾಗಿಯೂ

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ°, ಭಗವಂತ° ಹೇಳಿದ – ಪಾರ್ಥ!, ಕಲ್ಯಾಣಕಾರ್ಯಂಗಳ ಮಾಡುವ ಆಧ್ಯಾತ್ಮವಾದಿಗೆ ಈ ಲೋಕಲ್ಲಾಗಲೀ, ಆಧ್ಯಾತ್ಮಿಕ ಲೋಕಲ್ಲಾಗಲೀ ನಾಶ ಹೇಳ್ವದು ಇಲ್ಲೆ. ಕಲ್ಯಾಣಕಾರ್ಯಂಗಳ ಮಾಡುವವ ಎಂದಿಂಗೂ ದುರ್ಗತಿಯ ಖಂಡಿತವಾಗಿಯೂ ಹೊಂದುತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಹಿಂದಾಣ ಭಾಗಲ್ಲಿ ಅರ್ಜುನ° ಭಗವಂತನತ್ರೆ, ಆಧ್ಯಾತ್ಮಕಾರ್ಯಲ್ಲಿ ತೊಡಗಿ ಸಂಪೂರ್ಣ ಸಾಧನೆ ಪೂರೈಸಲೆ ಎಡಿಗಾಗದ್ದೆ ಅರ್ಧಲ್ಲಿ ಕೈಬಿಟ್ಟವನ ಅವಸ್ಥೆ ಎಂತರ ಹೇಳಿ ಪ್ರಶ್ನಿಸಿದ್ದ°. ಅದಕ್ಕೆ ಉತ್ತರರೂಪವಾಗಿ  ಇಲ್ಲಿ ದೃಢಭರವಸೆಯ ಭಗವಂತ° ಇಲ್ಲಿ ಹೇಳುತ್ತ° –    ಕೃಷ್ಣಪ್ರಜ್ಞೆಂದ ಆಧ್ಯಾತ್ಮ ಕಾರ್ಯವ ತೊಡಗಿದ ಯಾವೊಬ್ಬನ ಸಾಧನೆಯೂ ವ್ಯರ್ಥ ಆವುತ್ತಿಲ್ಲೆ. ಅವಂಗೆ ಇಹ-ಪರಲ್ಲಿ ಒಳಿತೇ ಅಪ್ಪದು. ಏ ಎನ್ನ ಪ್ರೀತಿಯ ಗೆಳೆಯನೇ ( ಚಂಙಾಯಿಯೇ!), ಒಳ್ಳೆದು ಮಾಡಿದವು ಎಂದೂ ಕೆಟ್ಟದ್ದರ ಪಡೆತ್ತವಿಲ್ಲೆ. ಇದು ಪ್ರಕೃತಿಯ ನಿಯಮ. ಇಲ್ಲಿ ಭಗವಂತ° ಅರ್ಜುನನ ಪಾರ್ಥ (ಪೃಥೆಯ ಮಗ°) ಹೇಳಿ ದೆನಿಗೊಂಡಿದ°. ಪಾರ್ಥ ಹೇದರೆ ಪಾರವ (ದಡವ) ತಿಳುದವ° ಹೇಳಿಯೂ ಅರ್ಥ. ಸಾಧನೆಯ ಹಾದಿಲಿ ಹೆಜ್ಜೆ ಇಟ್ಟವ° ಒಮ್ಮಿಂದೊಮ್ಮೆಲೆ ಭಗವಂತನ ಕಾಂಬಲೆ ಸಾಧ್ಯ ಇಲ್ಲೆ. ಹಂತಹಂತವಾಗಿ ಸಾಧನೆಯ ಕೈಗೊಂಡು ಅಕೇರಿಗೆ ಪರಾಕಾಷ್ಠತೆಯ ತಲಪುವದು. ಇದಕ್ಕೆ ಅವಿರತ ಪ್ರಯತ್ನ, ಸಂಯಮ,  ಸಾಧನೆ ಅಗತ್ಯ. ಬಹುಸುಲಭವೂ ಅಲ್ಲ. ಆದರೆ, ಸಾಧನೆಯ ಅರ್ಧ ಪೂರೈಸಿದವ ಅರ್ಧಲ್ಲಿ ಮುಂಗುತ್ತನಿಲ್ಲೆ. ಸಾಧನೆಯ ಆಚ ದಡವ ಮುಂದೆ ಸೇರಿಯೇ ಸೇರುತ್ತ°. ಬನ್ನಂಜೆ ಹೇಳುತ್ತವುನಾವು ಜೀವನಲ್ಲಿ ಸಾಮಾನ್ಯವಾಗಿ ಹೇಳುತ್ತದು ಕೇಳುತ್ತು – ” ಆನು ಆರಿಂಗೂ ಈ ಜೀವನಲ್ಲಿ ಎಂದೂ ಕೆಟ್ಟದ್ದು ಮಾಡಿದ್ದದು ಇಲ್ಲೆ, ಗ್ರೇಶಿದ್ದದೂ ಇಲ್ಲೆ., ಅಂದರೂ ಎಂತಕೆ ಭಗವಂತ° ಎನಗೆ ಈ ರೀತಿಯ ಕಷ್ಟವ ಕೊಡುತ್ತಾ ಇದ್ದ?!” ನಾವು ಜೀವನಲ್ಲಿ ಕೆಟ್ಟದ್ದು ಮಾಡಿದ್ದದು ಇಲ್ಲೆ, ಎಣಿಸಿದ್ದದೂ ಇಲ್ಲೆ.. ಆದಿಕ್ಕು. ಆದರೆ, ನಮ್ಮ ಜ್ಞಾನ ಈ ಜನ್ಮಕ್ಕೆ ಮಾತ್ರ ಸೀಮಿತ. ಜನ್ಮ ಹೇಳ್ವದು ಪೂರ್ವಸುಕೃತ ಫಲಂದ ಬಪ್ಪದು. ಪ್ರಾರಬ್ಧ, ಸಂಚಿತ, ಆಗಾಮಿ ಹೇಳಿ ಕರ್ಮಫಲದ ಮೂರು ವಿಷಯಂಗೊ. ಪ್ರಾರಬ್ಧ ಹೇಳ್ವದು ಮದಲಾಣದ್ದು (ಪತ್ತಾಯಲ್ಲಿಪ್ಪದು), ಸಂಚಿತ ವಾ ಆರ್ಜಿತ ಹೇಳ್ವದು ಈಗ ಸಂಪಾದಿಸಿದ್ದು, ಆಗಾಮಿ ಹೇಳಿರೆ ಈಗ ಮಾಡಿದ ಕರ್ಮಕ್ಕೆ ಮುಂದೆ ಬಪ್ಪಲಿಪ್ಪ ಫಲ.  ನಾವು ಈ ಜನ್ಮಲ್ಲಿ ಯಾವುದೋ ಒಂದು ದುರಂತಕ್ಕೆ ಒಳಗಾಗಿದ್ರೆ ಅದು ಈ ಜನ್ಮಲ್ಲೇ ಮಾಡಿದ ಕರ್ಮಫಲದ ಪರಿಣಾಮ ಆಗಿರೇಕು ಹೇದು ಏನಿಲ್ಲೆ. ಪೂರ್ವಜನ್ಮದ ಕರ್ಮಫಲದ ಪ್ರಕ್ರಿಯೆ ಆದಿಪ್ಪಲೂ ಸಾಕು. ಅರ್ಥಾತ್ ಈ ಸಂಕಷ್ಟಕ್ಕೆ ಕಾರಣಭೂತವಾಗಿಪ್ಪ ಇನ್ನೊಂದು ಕ್ರಿಯೆ ನಮ್ಮಿಂದ ನಡದಿಪ್ಪಲೇ ಬೇಕು. ಕೆಟ್ಟದ್ದು ಮಾಡದ್ದವ ಕೆಟ್ಟದ್ದರ ಪಡೆತ್ತನಿಲ್ಲೆ, ಒಳ್ಳೆದು ಮಾಡಿದವ ಒಳ್ಳೆ ಫಲವ ಪಡೆಯದ್ದೆ ಇರುತ್ತನಿಲ್ಲೆ. ಇದು ಸಾರ್ವಕಾಲಿಕ ಸತ್ಯ. ಇದಕ್ಕೆ ಅಪವಾದವೇ ಇಲ್ಲೆ.

ಶ್ಲೋಕ

ಪ್ರಾಪ್ಯ ಪುಣ್ಯಕೃತಾಂ ಲೋಕಾನ್ ಉಷಿತ್ವಾ ಶಾಶ್ವತೀಃ ಸಮಾಃ ।
ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋsಭಿಜಾಯತೇ ॥೪೧॥

ಪದವಿಭಾಗ

ಪ್ರಾಪ್ಯ ಪುಣ್ಯ-ಕೃತಾಮ್ ಲೋಕಾನ್ ಉಷಿತ್ವಾ ಶಾಶ್ವತೀಃ ಸಮಾಃ । ಶುಚೀನಾಮ್  ಶ್ರೀಮತಾಮ್ ಗೇಹೇ ಯೋಗ-ಭ್ರಷ್ಟಃ ಅಭಿಜಾಯತೇ ॥ 

ಅನ್ವಯ

ಯೋಗ-ಭ್ರಷ್ಟಃ ಪುಣ್ಯ-ಕೃತಾಂ ಲೋಕಾನ್ ಪ್ರಾಪ್ಯ, ( ತತ್ರ )ಶಾಶ್ವತೀಃ ಸಮಾಃ ಉಷಿತ್ವಾ, ಶುಚೀನಾಂ ಶ್ರೀಮತಾಂ ಗೇಹೇ ಅಭಿಜಾಯತೇ ।

ಪ್ರತಿಪದಾರ್ಥ

ಯೋಗ-ಭ್ರಷ್ಟಃ – ಆತ್ಮಸಾಕ್ಷಾತ್ಕಾರ ಮಾರ್ಗಂದ ಭ್ರಷ್ಟನಾದವ°(ಹೆರಹೋದವ°, ಪತನಗೊಂಡವ°), ಪುಣ್ಯ-ಕೃತಾಮ್ ಲೋಕಾನ್ – ಪುಣ್ಯಕಾರ್ಯಂಗಳ ಆಚರಿಸಿದವರ ಲೋಕಂಗಳ, ಪ್ರಾಪ್ಯ – ಹೊಂದಿ (ಪಡದ ಮತ್ತೆ), (ತತ್ರ- ಅಲ್ಲಿ) , ಶಾಶ್ವತೀಃ – ಅನೇಕ, ಸಮಾಃ – ವರ್ಷಂಗಳ, ಉಷಿತ್ವಾ – ವಾಸಿಸಿದಮತ್ತೆ, ಶುಚೀನಾಮ್ – ಪುಣ್ಯವಂತರ, ಶ್ರೀಮತಾಮ್ – ಶ್ರೀಮಂತರ, ಗೇಹೇ – ಮನೆಲಿ, ಅಭಿಜಾಯತೇ – ಜನ್ಮತಾಳುತ್ತ°.

ಅನ್ವಯಾರ್ಥ

ಯೋಗಸಿದ್ಧಿ ಇಲ್ಲದ್ದೆ ಕೊನೆಗೊಂಡವ° (ಸಾವನ್ನಪ್ಪಿದವ°, ಅಥವಾ ಯೋಗಭ್ರಷ್ಟ°) ಪುಣ್ಯವಂತರುಗಳ ಲೋಕಲ್ಲಿ ಅನೇಕ ವರ್ಷ ಸುಖವ ಪಡದು ಮತ್ತೆ ಶ್ರೇಷ್ಠರ (ಶ್ರೀಮಂತರ) ಮನೆಲಿ ಜನ್ಮತಾಳುತ್ತ°

ತಾತ್ಪರ್ಯ / ವಿವರಣೆ

ಯಶಸ್ಸಿನ ಸಾಧುಸುವ ಯೋಗಿಗಳಲ್ಲಿ ಎರಡು ವರ್ಗಂಗೊ. ಒಂದನೇದು ಅತ್ಯಲ್ಪ ಪ್ರಗತಿಯ ಸಾಧಿಸಿ ಭ್ರಷ್ಟರಾದವು, ಇನ್ನೊಂದು ದೀರ್ಘಕಾಲ ಯೋಗಾಭ್ಯಾಸ ಮಾಡಿ ಭ್ರಷ್ಟರಾದವು. ಸಣ್ಣಕಾಲದ ಅಭ್ಯಾಸ ಮಾಡಿ ಭ್ರಷ್ಟನಾದ ಯೋಗಿಯು ಪುಣ್ಯಜೀವಿಗೊ ಪ್ರವೇಶುಸುವ ಆ ಪುಣ್ಯಲೋಕವ ಪ್ರವೇಶಿಸುತ್ತ. ಅಲ್ಲಿ ಬಹುಕಾಲ ಇದ್ದು ಅದಾದನಂತರ ಮತ್ತೆ ಈ ಲೋಕಲ್ಲಿ ಉತ್ತಮ ವರ್ಗಲ್ಲಿ, ಮನೆತನಲ್ಲಿ ಜನಿಸುವಂತೆ ಕಳುಸಲಾವ್ತು. ಇಲ್ಲಿ ಶ್ರೀಮತಾಂ ಹೇಳಿರೆ ಬರೇ ಶ್ರೀಮಂತ ಹೇಳ್ವ ಅರ್ಥ ಅಲ್ಲ. ಶ್ರೀಮಂತ, ಶ್ರೇಷ್ಠ ಹೇಳ್ವ ಅರ್ಥವೂ ಕೂಡ ಆವ್ತು.  ಯೋಗಾಭ್ಯಾಸದ ನಿಜವಾದ ಉದ್ದೇಶ ಕೃಷ್ಣಪ್ರಜ್ಞೆಯ ಅತ್ಯುನ್ನತ ಪರಿಪೂರ್ಣತೆಯ ಸಾಧುಸುವದು. ಅರ್ಥಾತ್, ಆತ್ಮಸಾಕ್ಷಾತ್ಕಾರ ಮಾಡಿ ಮೋಕ್ಷವ ಪಡವದು. ಆದರೆ ಇಷ್ಟರಮಟ್ಟಿಂಗೆ ಪಟ್ಟುಬಿಡದ್ದೆ, ಶ್ರಮಪಡದ್ದೆ ಇಪ್ಪವಕ್ಕೆ, ಮತ್ತೆ ಐಹಿಕ ಪ್ರಲೋಭನೆಯ ದೆಸೆಂದ ಅದರ ಪ್ರಭಾವಕ್ಕೆ ತುತ್ತಾಗಿ ವಿಫಲರಾದವಕ್ಕೆ ಭಗವಂತನ ಕೃಪೆಂದ ತಮ್ಮ ಐಹಿಕ ಪ್ರವೃತ್ತಿಗಳ ಸಂಪೂರ್ಣವಾಗಿ ಬಳಸಿಗೊಂಬಲೆ ಅವಕಾಶ ಲಭ್ಯವಾವುತ್ತು. ಅದಾದ ಮತ್ತೆ ಅವಕ್ಕೆ ಧರ್ಮಿಷ್ಠ, ಶ್ರೇಷ್ಠ ಕುಟುಂಬಂಗಳಲ್ಲಿ ಅನುಕೂಲಸ್ಥಿತಿಲಿ ಬಾಳಲೆ ಅವಕಾಶ ಲಭ್ಯ ಆವುತ್ತು. ಇಂತಹ ಸಂಸಾರಲ್ಲಿ ಹುಟ್ಟಿ ಮತ್ತೆ ಕೃಷ್ಣಪ್ರಜ್ಞೆಂದ ನಿಜವಾದ ಸಾಧನೆ ಮಾಡ್ಳೆ ಅವಕಾಶ ಸಿಕ್ಕುತ್ತು. ಭಗವಂತ° ಇಲ್ಲಿ ಮತ್ತೂ ಸ್ಪಷ್ಟಪಡುಸುತ್ತ ಅರ್ಜುನನ ಸಂದೇಹಕ್ಕೆ – ಯೋಗಾಭ್ಯಾಸ ಮಾಡಿ ಭಗವಂತನ ಧ್ಯಾನಕ್ಕೆ ಪ್ರಯತ್ನಿಸಿ, ರಜಾ ಪ್ರಗತಿಯ ಪಡದು, ಮನೋವಿಕ್ಷೇಪಂದಲೋ, ಆಯಸ್ಸು ಮುಗುದ್ದದರಿಂದಲೋ, ಅಂತೂ ಅರ್ಧಲ್ಲೇ ಬಿಟ್ಟವಂಗೆ ತಾನು ಮಾಡಿದ ಆ ತನಕದ ಸಾಧನೆ ವ್ಯರ್ಥ ಆವ್ತಿಲ್ಲೆ. ಸಾಧನೆ ಅರ್ಧಲ್ಲಿ ನಿಂದದಕ್ಕೆ ಚಿಂತುಸೆಕ್ಕಾದ್ದಿಲ್ಲೆ. ಎಂತಕೆ ಹೇಳಿದರೆ, ದೇಹತ್ಯಾಗದ ಮತ್ತೆ ಅವ°,  ಪುಣ್ಯವಂತರುಗೊಕ್ಕೆ ಇಪ್ಪ ಲೋಕದ ಭಾಗ್ಯವ ಸೇರುತ್ತ. ಅಲ್ಲಿ ಬಹುಕಾಲ ಅ ಸುಖವ ಅನುಭವಿಸಿ ಮತ್ತೆ ಭೂಮಿಲಿ ಸ್ವಚ್ಛವಾದ, ಶ್ರೇಷ್ಠವಾದ, ಶ್ರೀಮಂತ ವೇದಜ್ಞರ ಮನೇಲಿ ಅವ° ಹುಟ್ಟಿಗೊಳ್ಳುತ್ತ°. ಅವಂಗೆ ಯಾವುದೇ ಐಹಿಕ ಭೋಗದ  ಕೊರತೆ ಕಾಡ್ಳೆ ಇಲ್ಲೆ. ಹಾಂಗೇ ಯೋಗಸಾಧನಗೆ ಬೇಕಾದ ಅತ್ಯುತ್ತಮ ವಾತಾವರಣವೂ ಅವಂಗೆ ದೊರಕ್ಕುತ್ತು. ಆದರೆ ಬುದ್ಧಿಪೂರ್ವಕ ಕಾರ್ಯಕ್ಕೆ ಇಳಿಯೆಕ್ಕಪ್ಪದು ಅವಂಗವಂಗೆ ಬಿಟ್ಟದು.

ಶ್ಲೋಕ

ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಮ್।
ಏತದ್ಧಿ ದುರ್ಲಭತರಂ ಲೋಕೇ ಜನ್ಮ ಯದೀದೃಶಮ್ ॥೪೨॥

ಪದವಿಭಾಗ

ಅಥವಾ ಯೋಗಿನಾಮ್ ಏವ ಕುಲೇ ಭವತಿ ದೀಮತಾಮ್ । ಏತತ್ ಹಿ ದುರ್ಲಭತರಮ್ ಲೋಕೇ ಜನ್ಮ ಯತ್ ಈದೃಶಮ್ ॥

ಅನ್ವಯ

ಅಥವಾ ಧೀಮತಾಂ ಯೋಗಿನಾಮ್ ಏವ ಕುಲೇ ಭವತಿ, ಯತ್ ಏತತ್ ಈದೃಶಂ ಜನ್ಮ ಲೋಕೇ ದುರ್ಲಭತರಂ ಹಿ ।

ಪ್ರತಿಪದಾರ್ಥ

ಅಥವಾ – ಅಥವಾ, ಧೀಮತಾಮ್ ಯೋಗಿನಾಮ್ – ಮಹಾಜ್ಞಾನಿಗಳಾದ ಯೋಗಿಗಳ/ವಿದ್ವಾಂಸರಾದ ಆಧ್ಯಾತ್ಮವಾದಿಗಳ, ಏವ – ಖಂಡಿತವಾಗಿಯೂ , ಕುಲೇ ಭವತಿ – ವಂಶಲ್ಲಿ ಹುಟ್ಟುತ್ತ° (ಕುಲಲ್ಲಿ ಜನಿಸುತ್ತ°), ಯತ್ – ಯಾವ, ಏತತ್ – ಈ ,  ಈದೃಶಮ್ – ಈ ರೀತಿಯ (ಬಗೆಯ), ಜನ್ಮ – ಹುಟ್ಟು, ಲೋಕೇ – ಈ ಪ್ರಪಂಚಲ್ಲಿ, ದುರ್ಲಭತರಮ್ – ಬಹಳ ಅಪರೂಪವಾದ್ದು, ಹಿ – ಖಂಡಿತವಾಗಿಯೂ.

ಅನ್ವಯಾರ್ಥ

ಅಥವಾ (ದೀರ್ಘಕಾಲದ ಯೋಗಾಭ್ಯಾಸದ ಮತ್ತೆ ವಿಫಲನಾಗಿದ್ದಲ್ಲಿ) ಪ್ರಜ್ಞಾವಂತರಾದ ಯೋಗಿಗಳ ವಂಶಲ್ಲಿಯಾದರೂ ಜನಿಸುತ್ತ°. ನಿಜವಾಗಿ ಅಂತಹ ಜನ್ಮ ಬಹಳ ಅಪರೂಪವಾದ್ದು.

ತಾತ್ಪರ್ಯ / ವಿವರಣೆ

ಭಗವಂತ° ಇಲ್ಲಿ ಧೀಮಂತರಾದ ಯೋಗಿಗಳ ಕುಟುಂಬಲ್ಲಿ ಜನ್ಮತಾಳುತ್ತದರ ಹೊಗಳಿದ್ದ°. ಇಂತಹ ಸಂಸಾರಲ್ಲಿ ಹುಟ್ಟಿದ ಮಗುವಿಂಗೆ ಅವನ ಬಾಳಿನ ಸುರುವಿಂದಲೇ ಒಂದು ಆಧ್ಯಾತ್ಮಿಕ ಚಾಲನಾಶಕ್ತಿ ಸಿಕ್ಕುತ್ತು. ಪರಂಪರೆಂದಲೂ, ಶಿಕ್ಷಣಂದಲೂ ಇಂತಹ ಸಂಸಾರಂಗಳಲ್ಲಿ ವಿದ್ವತ್ತು, ದೈವಭಕ್ತಿ ಇರುತ್ತು. ಆದ್ದರಿಂದ ಅವು ಗುರುಗಾಳಿಗಿರುತ್ತವು. ನಮ್ಮಲ್ಲಿ ಹೀಂಗಿಪ್ಪ ಕುಟುಂಬಂಗೊ ಅನೇಕ ಇದ್ದು. ಆದರೆ ಸಾಕಷ್ಟು ವಿದ್ಯೆ ಮತ್ತೆ ತರಭೇತಿ ಇಲ್ಲದ್ದೆ ಅವು ಹೀನಸ್ಥಿತಿಲಿ ಇದ್ದು. ಇದು ಅವರ ಪ್ರಾರಬ್ಧವೂ ಕಾರಣವಾಗಿಪ್ಪಲೂ ಸಾಕು. ಭಗವಂತನ ಕೃಪೆ ಅದು. ನಮ್ಮಲ್ಲಿ ಭಗವಂತನ ಕೃಪೆಂದ ಪ್ರತಿ ಪೀಳಿಗೆಲಿಯೂ ಯೋಗಿಗಳ ಬೆಳೆಶುವ ಇಂತಹ ಕುಟುಂಬಂಗೊ ಇಪ್ಪದು ಕಾಂಬಲೆಡಿಗು. ಇಂತಹ ಸಂಸಾರಂಗಳಲ್ಲಿ ಜನ್ಮತಾಳುವದು ಹೇಳಿರೆ ಅದೊಂದು ಭಗವದ್ಕೃಪೆಯೇ ಸರಿ. ಇದು ಒಂದು ಸೌಭಾಗ್ಯ ಅಪರೂಪವಾದ್ದು ಹೇಳಿ ಭಗವಂತ° ಇಲ್ಲಿ ಹೇಳಿದ್ದ°. 

ಬನ್ನಂಜೆ ವಿವರಿಸುತ್ತವು ಭಗವಂತ° ಇಲ್ಲಿ ಹೇಳುತ್ತ° – ಯೋಗ ಸಾಧಕರಲ್ಲದ್ರೆ ಯೋಗ ಸಿದ್ಧರ ಮನೆಲಿ ಅವ° ಹುಟ್ಟುತ್ತ°. ಇದರಿಂದ ಗರ್ಭಂದಲೇ ಅವಂಗೆ ಯೋಗದ ದೀಕ್ಷೆಯಾವುತ್ತು. ಹಿಂದಾಣ ಜನ್ಮಲ್ಲಿ ಅವ° ಸಾಧನೆಯ ಯಾವ ಮೆಟ್ಳ ಹತ್ತಿದ್ದನೋ ಆ ಮೆಟ್ಳ ಸುಲಭವಾಗಿ ಅವ ತಲುಪಿ ಅಲ್ಲಿಂದ ಮುಂದಾಣ ಸಾಧನೆ ಮಾಡುವ ಅವಕಾಶ ಅವಂಗೆ ಸಿಕ್ಕುತ್ತು. ಇದು ಆಧ್ಯಾತ್ಮ ಸಾಧೆನಿಲಿಪ್ಪ ವಿಶೇಷ. ಒಂದು ಜನ್ಮಲ್ಲಿ ಎರಡು ಮೆಟ್ಳು ಏರಿದ್ದಿದ್ದರೆ ಮುಂದಾಣ ಜನ್ಮಲ್ಲಿ ನೇರವಾಗಿ ಮೂರನೇ ಮೆಟ್ಳಿಂಗೆ ಹೆಜ್ಜೆ. ಹೀಂಗಾಗಿ ಆಧ್ಯಾತ್ಮ ಸಾಧನೆಲಿ ಯಾವ ಸಾಧನೆಯೂ ವ್ಯರ್ಥ ಆವುತ್ತಿಲ್ಲೆ. ಆ ಬಗ್ಗೆ ಎಂದೂ ನಿರಾಶೆಪಡೆಕ್ಕಾದ್ದಿಲ್ಲೆ. ಲೋಕಲ್ಲಿ ಯೋಗಸಿದ್ಧರ ಮನೆಲಿ ಹುಟ್ಟು ಬಹಳ ದುರ್ಲಭ. ಸಾಧನೆಯ ಹಾದಿಲಿ ಅಷ್ಟು ಎತ್ತರಕ್ಕೇರಿದವಕ್ಕೆ ಮಾತ್ರ ಈ ಭಾಗ್ಯ.

ಶ್ಲೋಕ

ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೇಹಿಕಮ್ ।
ಯತತೇ ಚ ತತೋ ಭೂಯಃ ಸಂಸಿದ್ಧೌ ಕುರುನಂದನ ॥೪೩॥

ಪದವಿಭಾಗ

ತತ್ರ ತಮ್ ಬುದ್ಧಿ-ಸಂಯೋಗಮ್ ಲಭತೇ ಪೌರ್ವ-ದೇಹಿಕಮ್ । ಯತತೇ ಚ ತತಃ ಭೂಯಃ ಸಂಸಿದ್ಧೌ ಕುರುನಂದನ ॥

ಅನ್ವಯ

ಹೇ ಕುರುನಂದನ!, (ಸಃ) ತತ್ರ ತಂ ಪೌರ್ವ-ದೇಹಿಕಂ ಬುದ್ಧಿ-ಸಂಯೋಗಂ ಲಭತೇ, ತತಃ ಚ ಭೂಯಃ ಸಂಸಿದ್ಧೌ ಯತತೇ ।

ಪ್ರತಿಪದಾರ್ಥ

ಹೇ ಕುರುನಂದನ! – ಏ ಕುರುಪುತ್ರನೇ!, ತತ್ರ – ಅಲ್ಲಿ, ತಮ್ ಪೌರ್ವ-ದೇಹಿಕಮ್ – ಆ ಹಿಂದಾಣ ದೇಹಂದ, ಬುದ್ಧಿ-ಸಂಯೋಗಮ್ – ಪ್ರಜ್ಞೆಯ ಪುನರುಜ್ಜೀವನವ, ಲಭತೇ – ಪಡೆತ್ತ°, ತತಃ – ಅಲ್ಲಿಂದ, ಚ – ಕೂಡ, ಭೂಯಃ – ಮತ್ತೆ, ಸಂಸಿದ್ಧೌ – ಪರಿಪೂರ್ಣತೆಗಾಗಿ, ಯತತೇ – ಪ್ರಯತ್ನಿಸುತ್ತ°.

ಅನ್ವಯಾರ್ಥ

ಕುರುನಂದನ!, ಇಂತಹ ಜನ್ಮವ ಪಡದ ಮತ್ತೆ ಅವ° ತನ್ನ ಪೂರ್ವಜನ್ಮದ ದೈವೀಪ್ರಜ್ಞೆಯ ಮತ್ತೆ ಎಚ್ಚರಿಸಿಕೊಳ್ಳುತ್ತ° ಮತ್ತೆ ಸಂಪೂರ್ಣ ಯಶಸ್ಸುಗಳುಸಲೆ ಇನ್ನೂ ಪ್ರಗತಿಯ ಸಾಧುಸಲೆ ಪ್ರಯತ್ನಿಸುತ್ತ°.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – ಅರ್ಜುನ!, ಅಂತಹ ವ್ಯಕ್ತಿ ಪೂರ್ವಜನ್ಮಲ್ಲಿ ಬಿಟ್ಟ ಯೋಗಸಿದ್ಧಿಯ ಈ ಜನ್ಮಲ್ಲಿ ಪಡದು ಪೂರ್ಣಸಿದ್ದಿಗಾಗಿ ಮತ್ತೆ ಪ್ರಯತ್ನವ ಕೈಗೊಳ್ಳುತ್ತ°. ಹಿಂದಾಣ ಜನ್ಮಲ್ಲಿ ಅವ° ಎಂತ ಸಾಧನೆ ಮಾಡಿದ್ದ ಅದು ಸುಪ್ತಪ್ರಜ್ಞೆಲಿ ಹುದುಗಿದ್ದು ಅದಕ್ಕೆ ಅನುಗುಣವಾದ ವಾತಾವರಣ ಸಿಕ್ಕಿಯಪ್ಪಗ ಅದು ಜಾಗೃತ ಆವ್ತು. ಇದು ಇಲ್ಲೆ ಪೂರ್ವಜನ್ಮಲ್ಲಿ ತಾನು ಏನಾಗಿದ್ದೆ, ಎಂತೆಂತ ಮಾಡಿದ್ದೆ ಹೇಳ್ವ ತಿಳುವಳಿಕೆ ಬಪ್ಪದು ಅಲ್ಲ. ಬದಲಾಗಿ, ಪೂರ್ವಜನ್ಮದ ಸುಕೃತಫಲವಾಗಿ ಈ ಜನ್ಮಲ್ಲಿ ಉತ್ತಮ ವಾತಾವರಣಲ್ಲಿ ಜನಿಸಿ ಜನ್ಮಸಹಜವಾಗಿಯೇ ತೀಕ್ಷ್ಣಬುದ್ಧಿಯುಳ್ಳವನಾಗಿ ಬೆಳವದು. ಹಾಂಗಾಗಿ ಈ ಜನ್ಮದ ಬೆಳವಣಿಗೆ ಹೇಳಿರೆ ಹಿಂದಾಣ ಜನ್ಮದ ಬೆಳವಣಿಗೆ ಬಿಟ್ಟುಹೋದ ಭಾಗ (ಉತ್ತರಾರ್ಧ). ಒಂದು ವೇಳೆ ಹಿಂದಾಣ ಜನ್ಮಲ್ಲಿ ದೊಡ್ಡದೇನೂ ಸಾಧನೆ ಮಾಡಿದ್ದದು ಇಲ್ಲದ್ರೆ, ಅದರ ಈಗ ಪ್ರಾರಂಭಿಸೆಕೇ ಹೊರತು ಆ ಬಗ್ಗೆ ಚಿಂತುಸಿಗೊಂಡಿಪ್ಪದಲ್ಲ. ಪೂರ್ವಜನ್ಮದ ಸಂಸ್ಕಾರ ಸದಾ ನಮ್ಮೊಂದಿಂಗೆ ಇರುತ್ತು. ಆ ಸಂಸ್ಕಾರದೊಟ್ಟಿಂಗೆ ನಾವು ಸಾಧನೆಯ ಹಾದಿಲಿ ಮುಂದುವರಿಯೆಕ್ಕಪ್ಪದು. ಧ್ಯಾನಯೋಗ ಹೇಳ್ವದು ಒಂದು ಜನ್ಮದ ಸಾಧನೆ ಅಲ್ಲ ಹೇಳಿ ಬನ್ನಂಜೆಯವರ ವಿವರಣೆ.

ಶ್ಲೋಕ

ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋsಪಿ ಸಃ ।
ಜಿಜ್ಞಾಸುರಪಿ ಯೋಗಸ್ಯ ಶಬ್ದಬ್ರಹ್ಮಾತಿವರ್ತತೇ ॥೪೪॥

ಪದವಿಭಾಗ

ಪೂರ್ವ-ಅಭ್ಯಾಸೇನ ತೇನ ಏವ ಹ್ರಿಯತೇ ಹಿ ಅವಶಃ ಅಪಿ ಸಃ । ಜಿಜ್ಞಾಸುಃ ಅಪಿ ಯೋಗಸ್ಯ ಶಬ್ದ-ಬ್ರಹ್ಮ ಅತಿವರ್ತತೇ ॥

ಅನ್ವಯ

ತೇನ ಪೂರ್ವ-ಅಭ್ಯಾಸೇನ ಏವ ಸಃ ಅವಶಃ ಅಪಿ ಹ್ರಿಯತೇ ,  ಯೋಗಸ್ಯ ಜಿಜ್ಞಾಸುಃ ಅಪಿ ಶಬ್ದ-ಬ್ರಹ್ಮ ಅತಿವರ್ತತೇ ಹಿ ।

ಪ್ರತಿಪದಾರ್ಥ

ತೇನ  ಪೂರ್ವ-ಅಭ್ಯಾಸೇನ -ಆ ಹಿಂದಾಣ ಅಭ್ಯಾಸಂದ, ಏವ – ಖಂಡಿತವಾಗಿಯೂ, ಸಃ – ಅವ°, ಅವಶಃ ಅಪಿ – ತನ್ನಷ್ಟಕ್ಕೆ ತಾನೇ ಕೂಡ, ಹ್ರಿಯತೇ – ಆಕರ್ಷಿತನಾವುತ್ತ°, ಯೋಗಸ್ಯ ಜಿಜ್ಞಾಸುಃ – ಯೋಗದ ವಿಚಾರಂಗಳ ತಿಳಿವಲೆ ಬಯಸುವ, ಅಪಿ – ಕೂಡ, ಶಬ್ದ-ಬ್ರಹ್ಮ – ಧರ್ಮಗ್ರಂಥಂಗಳ ವಿಧ್ಯುಕ್ತ ಆಚರಣೆಂಗಳ, ಅತಿವರ್ತತೇ – ಮೀರುತ್ತ°.

ಅನ್ವಯಾರ್ಥ

ಆ ಪೂರ್ವಜನ್ಮ ಸಂಸ್ಕಾರ ಫಲಂದ ಅನಾಯಾಸವಾಗಿ ಅವ ಮುಂದಕ್ಕೆ ಬತ್ತ°. ಈ ಯೋಗವ (ಯೋಗವಿಚಾರಂಗಳ) ತಿಳುಕ್ಕೊಂಬಲೆ ಉದ್ಯುಕ್ತನಾಗಿ ಜಿಜ್ಞಾಸುವಾದ ಆಧ್ಯಾತ್ಮಿಕವಾದಿ ಶಾಸ್ತ್ರಗ್ರಂಥಂಗಳ ವಿಧಿಗಳ ತತ್ವಂಗಳನ್ನೂ ಮೀರಿರುತ್ತ°.

ತಾತ್ಪರ್ಯ / ವಿವರಣೆ

ಪ್ರಬುದ್ಧ ಯೋಗಿಗೊಕ್ಕೆ ಶಾಸ್ತ್ರಗ್ರಂಥಂಗಳ ವಿಧಿಗಳ ಆಕರ್ಷಣೆ ಹೆಚ್ಚಿರುತ್ತಿಲ್ಲೆ. ಆದರೆ ಅವರ ಯೋಗತತ್ವಂಗೊ ಹೆಚ್ಚು ಆಕರ್ಷಿಸುತ್ತು. ಈ ತತ್ವಂಗೊ ಅವರ ಯೋಗದ ಅತ್ಯುನ್ನತ ಪರಿಪೂರ್ಣತೆಯಾದ ಪೂರ್ಣಕೃಷ್ಣಪ್ರಜ್ಞೆಗೆ ಕೊಂಡೋಕು. ಭಗವಂತನ ಪಾವನನಾಮ ಸಂಕೀರ್ತನೆ ಮಾಡುವವು ನಾಯಿಯ ತಿಂಬ ಕುಟುಂಬಲ್ಲೇ ಹುಟ್ಟಿದವಾಯಿಕ್ಕು. ಆದರೂ ಆಧ್ಯಾತ್ಮಿಕ ಜೀವನಲ್ಲಿ ಅವು ತುಂಬಾ ಮುಂದುವರುದವರಾಗಿರುತ್ತವು. ಹೀಂಗೆ ಸಂಕೀರ್ತನೆ ಮಾಡುವವು ನಿಶ್ಚಯವಾಗಿಯೂ ಎಲ್ಲ ಬಗೆಯ ವ್ರತ-ಯಜ್ಞಂಗಳ ಮಾಡಿ ಮೀರಿದವು. ಅರ್ಥಾತ್ ಅವಕ್ಕೆ ಶಾಸ್ತ್ರಗ್ರಂಥಂಗಳ ತತ್ವಂಗಳಲ್ಲಿ ಆಸಕ್ತಿ ಇಲ್ಲೆ. ಬದಲಾಗಿ ನೇರವಾದ ಕೃಷ್ಣಪ್ರಜ್ಞೆ.  ಇಲ್ಲಿ ‘ಶಬ್ದ-ಬ್ರಹ್ಮ’ ಹೇಳಿರೆ ವೈದಿಕ ಶಾಸ್ತ್ರಗ್ರಂಥ ತತ್ವಂಗೊ. ನಾವೆಲ್ಲ ಅದನ್ನೆ ಮಹಾ ಹೇಳಿ ನಂಬಿ ಅರೆಕೊರೆ ಆಚರಣೆ ಮಾಡಿಯೊಂಡಿದ್ದು. ನಿಜವಾದ ಕೃಷ್ಣಪ್ರಜ್ಞೆ ಇಪ್ಪವಂಗೆ ಇದಾವುದು ಅಗತ್ಯ ಇಲ್ಲೆ. ಅವಂಗೆ ಸರ್ವಸ್ವವೂ ಭಗವಂತ° ಮಾತ್ರ. ಅವಂಗೆ ಆಯೇಕ್ಕಾದ್ದು ಆತ್ಮಸಾಕ್ಷಾತ್ಕಾರ ಮಾತ್ರ. ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದು ತನ್ನ ಹಿಂದಾಣ ಜನ್ಮದ ದೈವೀಪ್ರಜ್ಞೆಯ ಪ್ರಭಾವಂದ ಇಹಜನ್ಮಲ್ಲಿ ಯಾವುದೇ ಶಾಸ್ತ್ರಗ್ರಂಥಂಗಳ ತತ್ವಂಗೊಕ್ಕೆ ಆಕರ್ಷಿತನಾಗದ್ದೆ ಅವೆಲ್ಲವನ್ನೂ ಮೀರಿ ನೇರವಾಗಿ ಆಧ್ಯಾತ್ಮಿಕ ಚಿಂತನೆಗೆ ಮುಂದುವರಿತ್ತ°.

ಹಿಂದಾಣ ಅಭ್ಯಾಸ ಬಲಂದ ಅವಂಗೆ ಗೊಂತಿಲ್ಲದ್ದೇ ಅವನ ಮನಸ್ಸು ಚಿಂತನೆ ಆಧ್ಯಾತ್ಮದತ್ತ ಹರಿತ್ತು. ಈ ರೀತಿ ಧ್ಯಾನಯೋಗವ ತಿಳಿವಲೆ ನಿಜವಾಗಿ ಇಳುದವ ಶಬ್ದಬ್ರಹ್ಮದಾಚಿಗಾಣ ಪರಬ್ರಹ್ಮನ ಸೇರುತ್ತ°. ಒಂದುವೇಳೆ ವೇದಜ್ಞರ ಮನೆಲಿ ಹುಟ್ಟದೇ ಇದ್ದರೂ ಕೂಡ ಹಿಂದಾಣ ಜನ್ಮದ ಸಾಧನೆಯ ಫಲಂದ ನವಗೆ ಗೊಂತಿಲ್ಲದ್ದೆ ನಮ್ಮ ಮನಸ್ಸು ಸಾಧನೆಯತ್ತ ಹರಿತ್ತು. ಪ್ರಹ್ಲಾದ, ಪಿಂಗಳನ ಕಥೆ ಇದಕ್ಕೆ ಉತ್ತಮ ದೃಷ್ಟಾಂತ ಹೇಳಿ ಬನ್ನಂಜೆ ವ್ಯಾಖ್ಯಾನಿಸುತ್ತವು. ಅಂತರಂಗಲ್ಲಿ ಸದಾ ಆಧ್ಯಾತ್ಮದ ಬಗ್ಗೆ ತುಡಿತ, ಅತ್ಯಂತ ಉತ್ಕಟವಾದ ಕಳಕಳಿ ಇದ್ದರೆ ಅವು ಶಾಸ್ತ್ರ ಓದಿದವರನ್ನೂ ಮೀರಿ ಎತ್ತರಕ್ಕೇರುತ್ತವು.

ಶ್ಲೋಕ

ಪ್ರಯತ್ನಾದ್ಯತಮಾನಸ್ತು ಯೋಗೀ ಸಂಶುದ್ಧಕಿಲ್ಬಿಷಃ ।
ಅನೇಕಜನ್ಮ ಸಂಸಿದ್ಧಃ ತತೋ ಯಾತಿ ಪರಾಂ ಗತಿಮ್ ॥೪೫॥

ಪದವಿಭಾಗ

ಪ್ರಯತ್ನಾತ್ ಯತಮಾನಃ ತು ಯೋಗೀ ಸಂಶುದ್ಧ-ಕಿಲ್ಬಿಷಃ । ಅನೇಕ-ಜನ್ಮ-ಸಂಸಿದ್ಧಃ ತತಃ ಯಾತಿ ಪರಾಮ್ ಗತಿಮ್ ॥

ಅನ್ವಯ

ತತಃ ಪ್ರಯತ್ನಾತ್ ಯತಮಾನಃ ಸಂಶುದ್ಧ-ಕಿಲ್ಬಿಷಃ ಯೋಗೀ ತು ಅನೇಕ-ಜನ್ಮ-ಸಂಸಿದ್ಧಃ ಪರಾಂ ಗತಿಂ ಯಾತಿ ।

ಪ್ರತಿಪದಾರ್ಥ

ತತಃ – ಮತ್ತೆ, ಪ್ರಯತ್ನಾತ್ – ಕಟ್ಟುನಿಟ್ಟಾದ ಅಭ್ಯಾಸಂದ (ಪ್ರಯತ್ನಂದ), ಯತಮಾನಃ – ಪ್ರಯತ್ನಿಸುವ,  ಸಂಶುದ್ಧ-ಕಿಲ್ಬಿಷಃ – ಸಕಲ ಪಾಪಂಗಳ ಶುದ್ಧವಾದ, ಯೋಗೀ – ಅಂತಹ ಆಧ್ಯಾತ್ಮಿಕವಾದಿ, ತು – ಮತ್ತು, ಅನೇಕ-ಜನ್ಮ-ಸಂಸಿದ್ಧಃ – ಅನೇಕಾನೇಕ ಜನ್ಮಂಗಳಲ್ಲಿ ಪರಿಪೂರ್ಣತೆಯಹೊಂದಿಪ್ಪವನಾಗಿ, ಪರಾಮ್ ಗತಿಮ್ – ಅತ್ಯುನ್ನತ ಗತಿಯ, ಯಾತಿ – ಹೊಂದುತ್ತ°.

ಅನ್ವಯಾರ್ಥ

ಹೀಂಗೆ ನಿರಂತರವಾದ ಕಟ್ಟುನಿಟ್ಟಾದ ಅಭ್ಯಾಸಂದ ಧ್ಯಾನಯೋಗಲ್ಲಿ ಮುನ್ನುಗ್ಗುವ ಯೋಗಿಯು ಅನೇಕಾನೇಕ ಜನ್ಮಂಗಳ ಪಾಪಂಗಳ ಕೊಳೆಯ ನೀಗಿ ಪರಿಪೂರ್ಣನಾಗಿ ಅತ್ಯುನ್ನತ ಪದವಿಯ (ಗತಿ) ಅರ್ಥಾತ್ ಮೋಕ್ಷವ ಪಡೆತ್ತ°.

ತಾತ್ಪರ್ಯ / ವಿವರಣೆ

ಹೀಂಗೆ ಅವ° ತನ್ನ ಅಪೂರ್ಣವಾಗಿ ಬಿಟ್ಟುಹೋದ ಕಾರ್ಯವ ದೃಢಸಂಕಲ್ಪಂದ ಮುಂದುವರಿಸುತ್ತ. ಹೀಂಗೆ ಅವ° ತನ್ನ ಎಲ್ಲ ಐಹಿಕ ಕಲ್ಮಷಂಗಳ ತೊಳದುಹಾಕಿ ಪರಿಶುದ್ಧನಾಗಿ ಅತ್ಯುನ್ನತ ಪರಿಪೂರ್ಣತೆಯಾದ ಕೃಷ್ಣಪ್ರಜ್ಞೆಯ ಸಾಧಿಸುತ್ತ. ಅಕೇರಿಗೆ ‘ಪರಾಂಗತಿಂ’ ಮೋಕ್ಷವ ಹೊಂದುತ್ತ°.

ಮದಲೇ ಹೇಳಿದ ಹಾಂಗೆ ನಮ್ಮ ಸಾಧನೆ ಅನೇಕ ಜನ್ಮಂಗಳದ್ದು. ಮದಾಲು ನಮ್ಮಲ್ಲಿ ಇಚ್ಛೆ ಹುಟ್ಟಿತ್ತು. ಹಾಂಗಾಗಿ ಆ ಇಚ್ಛೆ ಪೂರ್ಣಮಾಡಿಗೊಂಬ ವಾತಾವರಣವ ಮುಂದಾಣ ಜನ್ಮಲ್ಲಿ ಭಗವಂತ° ಕೊಟ್ಟ°. ಅಲ್ಲಿ ಸತತ ಪ್ರಯತ್ನ ಮಾಡಿ ಒಳಾಣ ಕೊಳೆ ತೊಳದಾತು. ಸಾಧನೆಂದ ಸ್ವಚ್ಛವಾದ ಜ್ಞಾನ ಪ್ರಾಪ್ತಿ ಆತು. ಈ ಜ್ಞಾನ ಮತ್ತೆ ಸಾಧನೆಂದ ಅನೇಕ ಜನ್ಮಂಗಳ ನಂತರ ಶಬ್ದಬ್ರಹ್ಮವ ಮೀರಿ ಭಗವಂತನ ಕಾಂಬಲೆ ಸಾಧ್ಯ. ಹೀಂಗೆ ಅಂತರಂಗಲ್ಲಿ ಉತ್ಕಟವಾದ ಕಳಕಳಿ ಇಪ್ಪ ಜಿಜ್ಞಾಸು ಎಂತಹ ಐಹಿಕ ಶಾಸ್ತ್ರಪಂಡಿತರುಗಳನ್ನೂ ಮೀರಿ ಮೋಕ್ಷವ ಪಡೆತ್ತ°. ಸಾಧನೆಲಿ ಬಹಳ ಮುಖ್ಯವಾದ್ದು ಅಂತರಂಗ ಪ್ರಪಂಚದ ಸಾಧನೆ. ಹೆರಾಣ ಮೀಯಾಣ, ಪೂಜೆ, ಹೋಮ-ಯಾಗ-ಹವನ ಇತ್ಯಾದಿ ಏನೇ ಮಾಡಿದರೂ ಅವೆಲ್ಲಕ್ಕಿಂತಲೂ ಮಿಗಿಲಾದ್ದು ಅಂತರಂಗ ಪ್ರಪಂಚ. ಅಂತರಂಗ ಶುದ್ಧಿಯಾಗದ್ದೆ ಬರೇ ಬಹಿರಂಗ ಶುದ್ಧಿ ಎಂಬುದು ಬಾಹ್ಯ ಪ್ರಪಂಚಕ್ಕೆ ತೋರ್ಪಡಿಕೆಗೆ ಮಾಂತ್ರ ಅಕ್ಕಷ್ಟೆ.

ಶ್ಲೋಕ

ತಪಸ್ವಿಭ್ಯೋsಧಿಕೋ ಯೋಗೀ ಜ್ಞಾನಿಭ್ಯೋsಪಿ ಮತೋsಧಿಕಃ ।
ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ಯೋಗೀ ಭವಾರ್ಜುನ ॥೪೬॥

ಪದವಿಭಾಗ

ತಪಸ್ವಿಭ್ಯಃ ಅಧಿಕಃ ಯೋಗೀ ಜ್ಞಾನಿಭ್ಯಃ ಅಪಿ ಮತಃ ಅಧಿಕಃ । ಕರ್ಮಿಭ್ಯಃ ಚ ಅಧಿಕಃ ಯೋಗೀ ತಸ್ಮಾತ್ ಯೋಗೀ ಭವ ಅರ್ಜುನ ॥

ಅನ್ವಯ

ಯೋಗೀ ತಪಸ್ವಿಭ್ಯಃ ಅಧಿಕಃ, ಜ್ಞಾನಿಭ್ಯಃ ಅಪಿ ಚ ಅಧಿಕ ಮತಃ, ಯೋಗೀ ಕರ್ಮಿಭ್ಯಃ ಚ ಅಧಿಕಃ, ತಸ್ಮಾತ್ ಹೇ ಅರ್ಜುನ! ತ್ವಂ ಯೋಗೀ ಭವ ।

ಪ್ರತಿಪದಾರ್ಥ

ಯೋಗೀ – ಯೋಗಿಯು, ತಪಸ್ವಿಭ್ಯಃ – ತಪಸ್ವಿಗೊಕ್ಕಿಂತ, ಅಧಿಕಃ – ದೊಡ್ಡವ°, ಜ್ಞಾನಿಭ್ಯಃ ಅಪಿ – ಜ್ಞಾನಿಗಳಿಂದಲೂ ಕೂಡ, ಅಧಿಕಃ – ದೊಡ್ಡವ°, ಮತಃ – ತಿಳಿಯಲ್ಪಡುತ್ತ°, ಯೋಗೀ – ಯೋಗಿಯು, ಕರ್ಮಿಭ್ಯಃ ಚ- ಕಾಮ್ಯಕರ್ಮಿಗೊಕ್ಕಿಂತಲೂ ಕೂಡ, ಅಧಿಕಃ – ದೊಡ್ಡವ°, ತಸ್ಮಾತ್ – ಹಾಂಗಾಗಿ, ಹೇ ಅರ್ಜುನ! – ಏ ಅರ್ಜುನ!, ತ್ವಂ – ನೀನು, ಯೋಗೀ ಭವ – ಯೋಗೀ (ಆಧ್ಯಾತ್ಮಿಕವಾದಿ) ಆಗು.

ಅನ್ವಯಾರ್ಥ

ಯೋಗಿಯು ತಪಸ್ವಿಗೊಕ್ಕಿಂತಲೂ, ಜ್ಞಾನಿಗೊಕ್ಕಿಂತಲೂ, ಫಲಾಪೇಕ್ಷಿತ ಕಾಮ್ಯಕರ್ಮಿಗೊಕ್ಕಿಂತಲೂ ಶ್ರೇಷ್ಠನಾದವ°. ಹಾಂಗಾಗಿ, ಏ ಅರ್ಜುನ!, ನೀನು ಎಲ್ಲ ಸನ್ನಿವೇಶಂಗಳಲ್ಲಿಯೂ ಯೋಗಿ ಆಗು.

ತಾತ್ಪರ್ಯ / ವಿವರಣೆ

ಯೋಗದ ವಿಷಯ ಮಾತಾಡುವಾಗ ನಮ್ಮ ಪ್ರಜ್ಞಗೆ ಪರಮ ಪರಿಪೂರ್ಣ ಸತ್ಯದೊಟ್ಟಿಂಗೆ ಸಂಪರ್ಕವ ಕಲ್ಪುಸುವ ವಿಷಯದ ಕುರಿತಾವ್ತು ಮಾತಾಡುವದು. ಅನುಸರುಸುವ ವಿಶಿಷ್ಟ ವಿಧಾನಕ್ಕೆ ಹೊಂದಿಗೊಂಡು ಈ ಪ್ರಕ್ರಿಯೆಗೆ ಬೇರೆ ಬೇರೆ ಸಾಧಕಂಗೊ ಬೇರೆ ಬೇರೆ ಹೆಸರುಗಳ ಹೇಳ್ತವು. ಸಂಪರ್ಕ ಸಾಧುಸುವ ಪ್ರಕ್ರಿಯೆ ಪ್ರಧಾನವಾಗಿ ಕಾಮ್ಯಕರ್ಮಾಚರಣೆ ಆಗಿದ್ದರೆ ಅದರ ಕರ್ಮಯೋಗ ಹೇದೂ, ಅದು ಪ್ರಧಾನವಾಗಿ ಅನುಭವಗಮ್ಯವಾಗಿದ್ದರೆ ಜ್ಞಾನಯೋಗ ಹೇಳಿಯೂ, ಪ್ರಧಾನವಾಗಿ ಭಗವಂತನ ಹತ್ರೆ ಭಕ್ತಿಯ ಬಾಂಧವ್ಯವ ಸಾಧುಸುವದಾದರೆ ಅದಕ್ಕೆ ಭಕ್ತಿಯೋಗ ಹೇಳಿಯೂ ಹೆಸರು. ಭಕ್ತಿಯೋಗ ಅಥವಾ ಕೃಷ್ಣಪ್ರಜ್ಞೆ ಎಲ್ಲ ಯೋಗಂಗಳ ಅಂತಿಮ ಪರಿಪೂರ್ಣ ಸ್ವರೂಪ. ಭಗವಂತ ಭಕ್ತಿಯೋಗವೇ ಶ್ರೇಷ್ಠ ಹೇಳ್ವದರ ಈ ಮದಲೇ ಒತ್ತಿ ಹೇಳಿದ್ದ°. ಭಕ್ತಿಯೋಗವು ಪೂರ್ಣ ಆಧ್ಯಾತ್ಮಿಕಜ್ಞಾನ. ಹಾಂಗಾಗಿ ಯಾವುದೂ ಅದರ ಮೀರ್ಲೆ ಇಲ್ಲೆ. ಆತ್ಮಜ್ಞಾನ ಇಲ್ಲದ್ದ ತಪಸ್ಸು ಅಪರಿಪೂರ್ಣ. ಪರಮ ಪ್ರಭು ಭಗವಂತಂಗೆ ಶರಣಾಗತನಾಗದ್ದ್ ಅನುಭವಗಮ್ಯ ಜ್ಞಾನ ಅಪರಿಪೂರ್ಣ. ಕೃಷ್ಣಪ್ರಜ್ಞೆ ಇಲ್ಲದ್ದೆ ಕಾಮ್ಯಕರ್ಮಂದಲೂ ಕಾಲಹರಣ ಮಾಂತ್ರ. ಹಾಂಗಾಗಿ ಇಲ್ಲಿ ಹೇಳಿಪ್ಪ ಯೋಗಾಭ್ಯಾಸದ ಅತ್ಯಂತ ಪ್ರಶಂಸನೀಯ ರೂಪ – ಭಕ್ತಿಯೋಗ.

ಬನ್ನಂಜೆ ವ್ಯಾಖ್ಯಾನಿಸುತ್ತವುಆರು ಅಂತರಂಗಲ್ಲಿ ಏಕಾಗ್ರವಾಗಿ ಭಗವಂತನ ಧ್ಯಾನಿಸುತ್ತನೋ, ಅವ° ತಪಸ್ಸು ಮಾಡುವವನಿಂದ ದೊಡ್ಡವ° ಹೇಳಿ ಭಗವಂತ ಹೇಳುತ್ತ°. ಇಲ್ಲಿ ತಪಸ್ಸು ಹೇದರೆ, ನಾವು ಮಾಡುವ ವೃತಾಚರಣೆಗೊ, ದೇಹದಂಡನೆ, ಏಕಾದಶಿ ಉಪವಾಸ, ಬ್ರಹ್ಮಚರ್ಯಪಾಲನೆ ಇತ್ಯಾದಿ. ಬಾಹ್ಯವಾದ ನೂರಾರು ವೃತಾಚರಣೆ, ಹೋಮ-ಹವನ ಮಾಡುವವಕ್ಕಿಂತಲೂ ಅಂತರಂಗಲ್ಲಿ ಧ್ಯಾನ ಮಾಡುವವನೇ ಭಗವಂತಂಗೆ ಹೆಚ್ಚು ಪ್ರಿಯ°. ಅವ° ಇತರ ಜ್ಞಾನಿಗೊಕ್ಕಿಂತಲೂ ದೊಡ್ಡವ° ಹೇದು ಹೇಳುತ್ತ° ಇಲ್ಲಿ ಭಗವಂತ°. ಹೇದರೆ, ಧ್ಯಾನದ ಬಗ್ಗೆ, ಅಥವಾ,   ಶಾಸ್ತ್ರದ ಬಗ್ಗೆ ಕೇವಲ ಗೊಂತಿದ್ದು, ತಿಳ್ಕೊಂಡಿದು ಹೇಳುವವರಿಂದಲೂ ಅದರ ಕಾರ್ಯರೂಪಲ್ಲಿ ಆಚರುಸುವವ, ಜೀವನಲ್ಲಿ ಅನುಸಂಧಾನ ಮಾಡುವವ (ಯೋಗೀ) ದೊಡ್ಡವ. ಇಂದು ಆಧ್ಯಾತ್ಮದ ಬಗ್ಗೆ ಮಾತಾಡುವವು ಧಾರಾಳ ಸಿಕ್ಕುತ್ತವು. ಆದ್ರೆ, ಅದರ ನಿಜ ಜೀವನಲ್ಲಿ ಪಾಲುಸುವ ನಿಜವಾದ ಯೋಗಿಗೊ ಅತೀ ವಿರಳ. ಇನ್ನು ನಮ್ಮಲ್ಲಿ ಕರ್ಮಟರು. ಯಜ್ಞ-ಯಾಗಂಗಳ ಮಾಡುವದು, ಅಗ್ನಿ ಮುಖೇನ ಭಗವಂತನ ಆರಾಧನೆ ಮಾಡುವವು ಧಾರಾಳ. ಅಂತರಂಗಲ್ಲಿ ಇಪ್ಪ ಭಗವಂತನ ಕಾಂಬಲೆ ಈ ಕರ್ಮ. ಇದೇ ರೀತಿ ಪ್ರತಿಮಾಪೂಜೆ. ನಮ್ಮ ಪೂಜೆ ಕೇವಲ ದೇವರ ಪ್ರತಿಮೆಗೆ ಮೀಸಲಾಗದ್ದೆ ಅದು ಅಂತರಂಗಲ್ಲಿ ಭಗವಂತನ ಕಾಂಬಲೆ ಸಹಾಯ ಮಾಡುವ ಸಂಕೇತ ಹೇಳ್ವ ಜ್ಞಾನ ನವಗಿರೆಕು. ಮಾನಸ ಪೂಜೆ ಇಲ್ಲದ್ದೆ ಬಾಹ್ಯ ಪೂಜೆ ಅರ್ಥಹೀನ. ಹಾಂಗಾಗಿ ಬರೇ ಕರ್ಮಟ°ನಾಗಿ ಬಾಹ್ಯಪೂಜೆ ಮಾಡುವವನಿಂದಲೂ ಮಾನಸ ಪೂಜೆ ಮಾಡುವ ಯೋಗಿಯೇ ಶ್ರೇಷ್ಠ° ಹೇಳಿ ಭಗವಂತ° ಇಲ್ಲಿ ಒತ್ತಿ ಹೇಳಿದ್ದು. ಹಾಂಗಾಗಿ ನೀನು ಜೀವನಲ್ಲಿ ಧ್ಯಾನಯೋಗಿಯಾಗು. ಅಂತರಂಗದ ಧ್ಯಾನಲ್ಲಿ ತೊಡಗು. ಆ ಧ್ಯಾನಲ್ಲಿ ತೊಡಗಿದ ಮತ್ತೆ ನಿನ್ನ ಬಾಹ್ಯ ಕರ್ಮಂಗೊ ನಿನಗೆ ಲೇಪ ಆವ್ತಿಲ್ಲೆ. ಹಾಂಗಾದಪ್ಪಗ ಈ ಯುದ್ಧವೂ ಕೂಡಾ ಭಗವದ್ ಪೂಜೆ ಹೇಳಿ ಅರ್ಜುನಂಗೆ ಭಗವಂತನ ಸಂದೇಶ.

ಶ್ಲೋಕ

ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ ।
ಶ್ರದ್ಧಾವಾನ್ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ ॥೪೭॥

ಪದವಿಭಾಗ

ಯೋಗಿನಾಮ್ ಅಪಿ ಸರ್ವೇಷಾಮ್ ಮತ್ ಗತೇನ ಅಂತರ-ಆತ್ಮನಾ । ಶ್ರದ್ಧಾವಾನ್ ಭಜತೇ ಯಃ ಮಾಮ್ ಸಃ ಮೇ ಯುಕ್ತತಮಃ ಮತಃ ॥

ಅನ್ವಯ

ಸರ್ವೇಷಾಂ  ಯೋಗೀನಾಮ್ ಅಪಿ ಯಃ ಶ್ರದ್ಧಾವಾನ್, ಮತ್ ಗತೇನ ಅಂತರ-ಆತ್ಮನಾ ಮಾಂ ಭಜತೇ, ಸಃ ಮೇ ಯುಕ್ತತಮಃ ಮತಃ ।

ಪ್ರತಿಪದಾರ್ಥ

ಸರ್ವೇಷಾಮ್  ಯೋಗೀನಾಮ್ –  ಎಲ್ಲ ಬಗೆಯ ಯೋಗಿಗಳ, ಅಪಿ – ಕೂಡ, ಯಃ – ಆರು, ಶ್ರದ್ಧಾವಾನ್ – ಪೂರ್ಣಶ್ರದ್ಧೆಲಿ ಇಪ್ಪ, ಮತ್ ಗತೇನ – ಎನ್ನಲ್ಲೇ ನಿಲೆಸಿ ( ಸದಾ ಚಿಂತಿಸಿ), ಅಂತರ-ಆತ್ಮನಾ – ತನ್ನ ಒಳವೇ, ಮಾಮ್ – ಎನ್ನ, ಭಜತೇ – ಭಜಿಸುತ್ತನೋ, ಸಃ – ಅವ°, ಮೇ – ಎನ್ನಿಂದ, ಯುಕ್ತತಮಃ – ಅತ್ಯುನ್ನತಯೋಗಿ ಹೇದು, ಮತಃ – ಪರಿಗಣಿಸಲ್ಪಡುತ್ತ°.

ಅನ್ವಯಾರ್ಥ

ಆರು ಸದಾ ಎನ್ನಲ್ಲಿಯೇ ಇರುತ್ತನೋ, ತನ್ನಲ್ಲೇ ಇಪ್ಪ ಎನ್ನ ಕುರಿತು ಚಿಂತಿಸುತ್ತನೋ, ಎನ್ನ ಭಜಿಸುತ್ತನೋ ಅವನೇ ಎಲ್ಲ ಯೋಗಿಗಳಲ್ಲಿ, ಯೋಗಲ್ಲಿ  (ಯಾವತ್ತೂ, ಸದಾ)  ಎನ್ನತ್ರೆ ಅತ್ಯಂತ ಆತ್ಮೀಯವಾಗಿ ಒಂದಾಗಿರುತ್ತ°, ಅವನೇ ಎಲ್ಲೋರಿಂದ ಶ್ರೇಷ್ಠನಾದವ ಹೇಳ್ವದು ಎನ್ನ ಅಭಿಪ್ರಾಯ.

ತಾತ್ಪರ್ಯ / ವಿವರಣೆ

ಇಲ್ಲಿ ‘ಭಜತೇ’ ಹೇಳ್ವ ಪದ ಮಹತ್ವಪೂರ್ಣವಾದ್ದು. ಇದು ಭಜಿಸುವದೋ, ಪೂಜಿಸುವದೋ, ಗೌರವಿಸುವದೋ ಹೇದು ಸೀಮಿತ ಅರ್ಥ ಅಲ್ಲ. ಇದು ದೇವೋತ್ತಮ ಪರಮ ಪುರುಷ° ಭಗವಂತನ ವಿಷಯಲ್ಲಿ ಸಂಪೂರ್ಣ ಭರವಸೆಯುಳ್ಳವನಾಗಿ, ಸಂಪೂರ್ಣ ಕೃಷ್ಣಪ್ರಜ್ಞೆಂದ ಪ್ರೀತಿ, ಶ್ರದ್ಧೆಂದ ಕೂಡಿದ ಭಗವದ್ ಸೇವೆ. ಈ ಪ್ರಪಂಚ ಸರ್ವವೂ ಅವನಿಂದ, ಇಲ್ಲಿಪ್ಪದೆಲ್ಲವೂ ಅವಂಗಾಗಿ, ಅವನ ಸೇವೆ/ಸಂತೋಷಕ್ಕಾಗಿ,  ಅವಂಗಾಗಿ ಅವನ ಸೇವಕನಾದ ಭಕ್ತ° ಮಾಡುವ ಭಕ್ತಿಪೂರ್ವಕ ಸೇವೆ ಹೇಳಿ ಅರ್ಥ. ಈ ರೀತಿಯಾದ ಭಾವನೆಯ ಮನಸ್ಸಿಲ್ಲಿ ಮಡಿಕ್ಕೊಂಡು ಅಂತರಂಗಲ್ಲಿ ಭಗವಂತನ ಕಾಂಬವನೇ ಎಲ್ಲೋರಿಂದಲೂ ಶ್ರೇಷ್ಠ ಭಕ್ತ°/ ಯೋಗೀ ಹೇಳಿ ಭಗವಂತ° ಇಲ್ಲಿ ಅಭಿಪ್ರಾಯ ಪಡುತ್ತ°. 

ಬನ್ನಂಜೆ ವ್ಯಾಖ್ಯಾನಿಸುತ್ತವುಧ್ಯಾನ ಹೇಳಿರೆ ಅದು ಭಗವಂತನ ಧ್ಯಾನ. ಧ್ಯಾನ ಮಾಡುವಾಗ ನಾವು ಮನಸ್ಸಿನ ಯಾವುದರ ಮೇಲೆ ಬೇಕಾರು ಏಕಾಗ್ರ ಮಾಡಿ ಧ್ಯಾನ ಮಾಡ್ಳೆಡಿಗು. ಜನಂಗೊ ಬೇರೆ ಬೇರೆ ರೂಪಲ್ಲಿ ಚಿತ್ತವಿಟ್ಟು ಉಪಾಸನೆ ಮಾಡ್ಳಕ್ಕು. ಮೂರ್ತಿಪೂಜೆ, ಬೇರೆ ಬೇರೆ ದೇವರುಗಳ ಆರಾಧನೆ ಮೂಲಕ, ಬೇರೆ ಬೇರೆ ಭೂತ-ಪ್ರೇತಂಗಳ ಮೂಲಕ. ಆದರೆ ಸರ್ವೋತ್ತಮ° ಮಾಂತ್ರ ಆ ಭಗವಂತ°. ಭಗವಂತ° ಹೇಳುತ್ತ°- “ಆರು ಭಗವಂತನಲ್ಲೇ ಸದಾ ಮನಸ್ಸು ಕೇಂದ್ರೀಕರುಸಿ ಧ್ಯಾನ /ಉಪಾಸನೆ ಮಾಡುತ್ತನೋ, ಅವನೇ ಶ್ರೇಷ್ಠನಾದ ಯೋಗಿ”. ಭಗವಂತನ ಬಿಟ್ಟು ಬೇರೆ ಆರನ್ನೋ ಧ್ಯಾನ ಮಾಡಿರೆ ಏನೂ ಪ್ರಯೋಜನ ಆವ್ತಿಲ್ಲೆ. ನಾವು ಸಾಮಾನ್ಯವಾಗಿ ಇಂತಹ ಗ್ರಹಚಾರಕ್ಕೆ ಇಂತಹ ದೇವತೆಯ ಉಪಾಸನೆ ಮಾಡು, ಇಂತಹ ಪೂಜೆ, ಹೋಮ, ಬಲಿ, ಆರಾಧನೆ ಮಾಡು ಹೇಳಿ ಎಲ್ಲ ಹೇಳ್ವದು ಕೇಳುತ್ತು. ಅದರರ್ಥ, ಭಗವಂತನ ಆ ಪ್ರತೀಕಲ್ಲಿ ಕಾಣು ಹೇದು ಅಷ್ಟೆ. ಯಾವುದೇ ದೇವತೆಯ ಉಪಾಸನೆ ಮಾಡುವಾಗ ಆ ಪ್ರತೀಕಲ್ಲಿ ಭಗವಂತನ ಉಪಾಸನೆ ಮಾಡದ್ರೆ ಅದು ನಿಜವಾದ ಯೋಗ ಆವುತ್ತಿಲ್ಲೆ. ಧ್ಯಾನಲ್ಲಿ ಕೇವಲ ಭಗವಂತನ ಕಾಣೆಕು ಹೇಳ್ವ ಬಯಕೆ, ಮತ್ತೆ, ಎಲ್ಲ ಪ್ರತೀಕಲ್ಲಿಯೂ ಅವನನ್ನೇ ಕಾಂಬದು ಶ್ರೇಷ್ಠವಾದ ಯೋಗ. ಅದಕ್ಕಾಗಿಯೇ ‘ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ’ ಹೇಳಿ ಹೇಳ್ವದು. ಈ ರೀತಿ ಬದುಕಿಯಪ್ಪಗ ನಮ್ಮ ಬದುಕೇ ಒಂದು ಯೋಗ ಆವುತ್ತು ಹೇಳಿ ಹೇಳಿದಲ್ಯಂಗೆ – 

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಆತ್ಮಸಂಯಮಯೋಗೋನಾಮ (ಧ್ಯಾನಯೋಗೋನಾಮ) ಷಷ್ಠೋsಧ್ಯಾಯಃ

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಆತ್ಮಸಂಯಮಯೋಗ (ಧ್ಯಾನಯೋಗ) ಹೇಳ್ವ ಆರ್ನೇ ಅಧ್ಯಾಯ ಮುಗುದತ್ತು.

|| ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ || ಗೀತಾ ಮಾತಾ ಕೀ …. ಜೈ || ಗೋಪಾಲಕೃಷ್ಣ ಭಗವಾನ್ ಕೀ .. ಜೈ ||

॥ ಶ್ರೀಕೃಷ್ಣಾರ್ಪಣಮಸ್ತು ॥

ಮುಂದುವರಿತ್ತು.

 

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 06 – SHLOKAS 40 – 47 by CHENNAI BHAAVA

 

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

 

7 thoughts on “ಶ್ರೀಮದ್ಭಗವದ್ಗೀತಾ – ಷಷ್ಠೋsಧ್ಯಾಯಃ – ಆತ್ಮಸಂಯಮಯೋಗಃ (ಧ್ಯಾನಯೋಗಃ) – ಶ್ಲೋಕಂಗೊ 40 – 47

  1. ಬನ್ನಂಜೆ ವ್ಯಾಖಾನ ಉತ್ಕೃಷ್ಟವಾಗಿದ್ದು ಅದರ ಹವ್ಯಕಲ್ಲಿ ಬರದ ಚೆನ್ನೈ ಭಾವಂಗೆ ಧನ್ಯವಾದ |

    ಕರ್ಮಂಗಳ ಬಗ್ಯೆ ಇಲ್ಲಿ ಕೆಲವು ಪ್ರಾಜ್ಞರ ಮತ ಹೀಂಗಿದ್ದು — ೧. ಸಂಚಿತ ಕರ್ಮ ೨. ಪ್ರಾರಬ್ಧ ಕರ್ಮ ೩. ಆಗಾಮಿ ಕರ್ಮ — ಕೆಲವು ಪ್ರಾಜ್ಞರ ಪ್ರಕಾರ ಇವು ಹೀಂಗಿದ್ದು – ೧. ಸಂಚಿತ ಕರ್ಮ — ಈ ಹಿಂದೆ ಮಾಡಿ ಮುಗುದ ಕರ್ಮ ( ಇದು ದುಷ್ಕರ್ಮ ಆದರೆ – ಇದರ ನಾಶ – ದೇವರ ಮುಂದೆ ಪ್ರಾಮಾಣಿಕ ವಾದ ಪಶ್ಚಾತ್ತಾಪದಿಂದ ಕೂಡಿದ ನಿಜ ಭಕ್ತಿಯ ಶರಣಾಗತಿಯಿಂದ ಸಾಧ್ಯ) – ೨. ಪ್ರಾರಬ್ಧ ಕರ್ಮ — ಇದು ಸುರು ಮಾಡಲ್ಪಟ್ಟ ಕರ್ಮ — ಇದರ ಪರಿಣಾಮವ ನಿಲುಸುಲೇ ಎಡಿಯದ್ದ ಸ್ಥಿತಿ (ಒಂದರಿ ಬಿಟ್ಟ ಬಾಣ ವ ನಿಲುಸಲೇ ಎಡಿಯ, ಮತ್ತೆ ಬೇಡ ಹೇಳಿ ಕಂಡರೂ ಆಗದ್ದ ಅಸಹಾಕ ಸ್ತಿತಿ, ಕೌರವ /ಸುಯೋಧನ ಹೇಳಿದ ಹಾಂಗೆ ” ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ, ಜನಾಮ್ಯಧರ್ಮಂ ನ ಚ ಮೇ ನಿವೃತ್ತಿಃ” – ಅರ್ಥ – ಆನು ಮಾಡುದು ಅಧರ್ಮ ಹೇಳಿ ಎನಗೆ ಗೊಂತಿದ್ದು –ಆದರು ಅದರ ಬಿಡುವ ಸ್ಥಿತಿ ಲಿ ಆನಿಲ್ಲೇ – ಹಾಂಗೆ ಎನಗೆ “ಧರ್ಮ” ವಿಷಯ ಗೊಂತಿದ್ದು -ಆದರೆ ಅದರ ಹೊಂದುವ ಸ್ಥಿತಿಲಿ ಆನಿಲ್ಲೇ -ಹೇಳಿ ) — ಈ ಕರ್ಮದ ಫಲ ಅನುಭವಿಸಿಯೇ ತೀರೆಕ್ಕಾವುತ್ತು — ಹೇಳಿ ಹೇಳುದು ಕೆಲವು ಪ್ರಾಜ್ಞರು ೩. ಆಗಾಮಿ ಕರ್ಮ — ಇದು ಮುಂದೆ ಮಾಡುತ್ತೆ ಹೇಳಿ “ಸಂಕಲ್ಪಿಸಿದ ” ಕರ್ಮಂಗೋ — ಅಷ್ಟರಲ್ಲೇ ಜ್ಞಾನೋದಯ ಆಗಿದ್ದರೆ ಈ ಕರ್ಮಂಗಳ ಮಾಡದ್ದೆ ಇಪ್ಪ ಲೇ ಎದಿಗೂ — ಹೇಳಿದರೆ ತಪ್ಪುಸುಲು ಎದಿಗೂ ಹೇಳಿ ||

    1. ಧನ್ಯವಾದ ಎದುರ್ಕಳ ಮಾವಂಗೆ. ಒಳ್ಳೆ ವಿವರಣೆ ತಿಳಿಶಿದ್ದಿ.

  2. ಚೆನ್ನೈಭಾವಂಗೆ ಅಭಿನಂದನೆಗೊ, ಹೀಂಗೆ ಮುಂದುವರಿಯಲಿ.
    || ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ || ಗೀತಾ ಮಾತಾ ಕೀ …. ಜೈ || ಗೋಪಾಲಕೃಷ್ಣ ಭಗವಾನ್ ಕೀ .. ಜೈ ||

  3. “ಅಂತರಂಗಲ್ಲಿ ಇಪ್ಪ ಭಗವಂತನ ಕಾಂಬಲೆ ಈ ಕರ್ಮ. ಇದೇ ರೀತಿ ಪ್ರತಿಮಾಪೂಜೆ. ನಮ್ಮ ಪೂಜೆ ಕೇವಲ ದೇವರ ಪ್ರತಿಮೆಗೆ ಮೀಸಲಾಗದ್ದೆ ಅದು ಅಂತರಂಗಲ್ಲಿ ಭಗವಂತನ ಕಾಂಬಲೆ ಸಹಾಯ ಮಾಡುವ ಸಂಕೇತ ಹೇಳ್ವ ಜ್ಞಾನ ನವಗಿರೆಕು. ಮಾನಸ ಪೂಜೆ ಇಲ್ಲದ್ದೆ ಬಾಹ್ಯ ಪೂಜೆ ಅರ್ಥಹೀನ”
    ಇದು ಬಹಳ ಅರ್ಥ ಪೂರ್ಣ.

    ಅ೦ದ ಹಾಗೆ ಚೆನ್ನೈ ಭಾವಾ, “ಯೋಗ ಸಿದ್ಧರು” ಅ೦ದರೆ ಏರು? ಯೋಗ ಜ್ಞಾನಿಗಳೋ ಅಥವಾ ಬ್ರಹ್ಮಜ್ಞಾನಿಗಳೋ…?

    ಲಾಯ್ಕಾಗಿ ಬರ್ತಾ ಇದ್ದು, ಹಿ೦ಗೇ ಮುದುವರೆಸಿ.

    1. ಹರೇ ರಾಮ ದೊಡ್ಮನೆ ಭಾವ. ಒಪ್ಪಕ್ಕೆ ಧನ್ಯವಾದ ಯಾವತ್ತೂ, ಎಲ್ಲೋರಿಂಗೂ. ನಿಂಗೊ ಎಲ್ಲರು ಕೊಡುವ ಪ್ರೋತ್ಸಾಹ ಮತ್ತೂ ಮತ್ತೂ ಬರವಲೆ ಉತ್ತೇಜನ ನೀಡುತ್ತು.

      ಇಲ್ಲಿ ಹೇಳಿಪ್ಪ ಯೋಗಸಿದ್ಧರು – ಯೋಗಸಾಧನೆಲಿ ಸಿದ್ಧಿಯ ಪಡದವು, ಹೇಳಿರೆ., ಪರಿಪೂರ್ಣತೆಯ ಸಾಧಿಸಿದವು. ಇನ್ನೂ ನೇರವಾಗಿ ಹೇಳ್ತರೆ ಆತ್ಮಸಾಕ್ಷಾತ್ಕಾರವ ಹೊಂದಿದವು. [ಯೋಗಸಿದ್ಧಿಯ ಬಗ್ಗೆ ಇನ್ನಾಣ ಅಧ್ಯಾಯಲ್ಲಿ (ಭ.ಗೀ 7.3) ಭಗವಂತ° ಹೇಳುತ್ತ° ನೋಡಿ.] {ಗೀತೆಲಿ ಬಪ್ಪ- ‘ಯೋಗ, ಯೋಗೀ, ಆತ್ಮ, ಬ್ರಹ್ಮ , ಭೂತ .. ‘ ಇತ್ಯಾದಿ ಶಬ್ದಂಗೊಕ್ಕೆ ವಿವಿಧ (ಹಲವು) ಅರ್ಥಂಗೊ. ಸಾಂದರ್ಭಿಕವಾಗಿ ಅರ್ಥೈಸೆಕ್ಕಾವ್ತು.}

  4. || ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ || ಗೀತಾ ಮಾತಾ ಕೀ …. ಜೈ || ಗೋಪಾಲಕೃಷ್ಣ ಭಗವಾನ್ ಕೀ .. ಜೈ ||

  5. ಮಂಗಲಕರ ಕೆಲಸ ಮಾಡುವವಂಗೆ ದುರ್ಗತಿ ಆವ್ತಿಲ್ಲೆ.
    ಜಟ್ಟಿ ಕುಸ್ತಿಲಿ ಸೋಲುಗು-ಆದರೆ ಕುಸ್ತಿ ಕಲಿವಲೆ ಅವ ಮಾಡುವ ಅಂಗಸಾಧನೆಂದ ಅವನ ಆರೋಗ್ಯ ಉತ್ತಮ ಅಕ್ಕು.[ಡಿ.ವಿ.ಜಿ.ಯವರ ಮಾತು].ಅದೇ ಅವಂಗೆ ಸಿಕ್ಕುವ ಸತ್ಫಲ.
    ಈ ಸಾಲುಗೊ ಕುಶಿ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×