Oppanna.com

ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 1 – 10

ಬರದೋರು :   ಚೆನ್ನೈ ಬಾವ°    on   09/02/2012    20 ಒಪ್ಪಂಗೊ

ಚೆನ್ನೈ ಬಾವ°

ಧೃತರಾಷ್ಟ್ರ° ಮತ್ತು ಪಾಂಡು – ಕುರುವಂಶಕ್ಕೆ ಸೇರಿದ ಅಣ್ಣತಮ್ಮಂದ್ರು. ಒಂದು ಕಾಲಲ್ಲಿ ಇಡೀ  ಭೂಮಂಡಲವನ್ನೇ ಅಖಂಡವಾಗಿ ಆಳಿದ ರಾಜ°- ಭರತನ ವಂಶಜಂಗೊ. ಹಾಂಗಾಗಿ ಆ ಭರತನಿಂದಲಾಗಿ ಮಹಾಭಾರತ ಹೇಳ್ವ ಹೆಸರು ಬಂದದಡ. ಅಣ್ಣನಾದ ಧೃತರಾಷ್ಟ್ರ° ಹುಟ್ಟುಕುರುಡ°. ಹಾಂಗಾಗಿ  ತಮ್ಮ ಪಾಂಡುವಿಂಗೆ ಸಿಂಹಾಸನ ಪ್ರಾಪ್ತವಾದ್ದು. ಪಾಂಡು ಸಣ್ಣಪ್ರಾಯಲ್ಲೇ ಮರಣಹೊಂದಿದ°. ಅವನ ಐದು ಜನ ಮಕ್ಕೊ – ಯುಧಿಷ್ಠಿರ°, ಭೀಮ°, ಅರ್ಜುನ°, ನಕುಲ° ಮತ್ತು ಸಹದೇವ° ಧೃತರಾಷ್ಟ್ರನ ಪೋಷಣಗೆ ಒಳಗಾದವು.

ಆ ಕಾಲಕ್ಕೆ ವಸ್ತುತಃ ಧೃತರಾಷ್ಟ್ರನೇ ಅರಸ° ಆದ°. ಹೀಂಗೆ ಧೃತರಾಷ್ಟ್ರನ ಮತ್ತು ಪಾಂಡುವಿನ ಮಕ್ಕೊ ಒಂದೇ ರಾಜಕುಟುಂಬಲ್ಲಿ ಬೆಳದವು. ಶಸ್ತ್ರನಿಪುಣರಾದ ದ್ರೋಣಾಚಾರ್ಯರಿಂದ ಅವಕ್ಕೆ ಸಮರ ಕಲೆ ಶಿಕ್ಷಣ ಆತು, ಕುಲದ ಪಿತಾಮಹ° ಹೇಳಿಸಿಗೊಂಡ ಭೀಷ್ಮ° ಅವಕ್ಕೆ ಮಾರ್ಗದರ್ಶಕರಾಗಿತ್ತಿದ್ದ°.
ಆದರೆ, ಧೃತರಾಷ್ಟ್ರನ ಮಕ್ಕೊಗೆ, ಅದರ್ಲಿಯೂ ಸುರೂಕಣವ ಆದ ದುರ್ಯೋಧನಂಗೆ ಸಣ್ಣಾಗಿಪ್ಪಂದಲೇ ಪಾಂಡವರು ಹೇಳಿರೆ ದ್ವೇಷ, ಅಸೂಯೆ. ದುರ್ಬಲನೂ ಕುರುಡನೂ ಆದ ಧೃತರಾಷ್ಟ್ರಂಗೂ ಮುಂದೆ ರಾಜ್ಯ ತನ್ನ ಮಕ್ಕೊಗೆ ಹೋಯೇಕು ಹೊರತು, ಪಾಂಡವರಿಂಗೆ ಅಲ್ಲಾ ಹೇದು ಅಪೇಕ್ಷೆ.
ಧೃತರಾಷ್ಟ್ರನ ಮರೆಒಪ್ಪಿಗೆಂದ ದುರ್ಯೋಧನ° ಪಾಂಡುಮಕ್ಕಳ ಕೊಲ್ಲಲೆ ಹಲವು ಸಂಚಿಕೆ ಹಾಕಿದ°. ಆದರೆ, ಅಪ್ಪಚ್ಚಿ ವಿದುರ° ಮತ್ತು  ಶ್ರೀಕೃಷ್ಣನ ಎಚ್ಚರಿಕೆಯ ರಕ್ಷಣೆಂದಲಾಗಿ ಪಾಂಡವರು ಪ್ರತಿ ಸರ್ತಿಯೂ ಪಾರಾದವು. ಶ್ರೀಕೃಷ್ಣ° ಸಾಮಾನ್ಯ ಮನುಷ್ಯ° ಅಲ್ಲ. ಅವ° ದೇವದೇವೋತ್ತಮ°, ಪರಮಪುರುಷ°. ಅವ° ಭೂಮಿಲಿ ಅವತರಿಸಿ,  ಯದುವಂಶಲ್ಲಿ ರಾಜಕುಮಾರನ ಪಾತ್ರ ವಹಿಸಿದ°.  ಅವ° ಪಾಂಡವರ ಅಬ್ಬೆ- ಕುಂತಿಯ ಸೋದರಳಿಯ°. ಹೀಂಗೆ ನೆಂಟನಾಗಿ ಮತ್ತು ನಿತ್ಯ ಧರ್ಮೋದ್ಧಾರಕನಾಗಿ ಶ್ರೀಕೃಷ್ಣ°,  ಧರ್ಮಿಷ್ಠ ಪಾಂಡವರ ಪರವಾಗಿದ್ದು ಅವರ ರಕ್ಷಣೆ ಮಾಡಿದ°.

ಪಾಂಡವರ ನಿರ್ಮೂಲನ ಮಾಡ್ಳೆ, ಮಹಾಚಾಣಕ್ಷ° ದುರ್ಯೋಧನ°, ಅರಗಿನಾಲಯ ದಹನ ಪ್ರಕರಣಲ್ಲಿ ಸೋತು, ಪಾಂಡವರ ದ್ಯೂತಕ್ಕೆ ಅಹ್ವಾನಿಸಿ ತನ್ನ ಮಾವ° ಶಕುನಿಯ ಸಹಾಯಂದ ಪಾಂಡವರ ಸೋಲುಸಿ, ದ್ರೌಪದಿ ವಸ್ತ್ರಾಪಹರಣಕ್ಕೆ ಮುಂದಾಗಿ, ಸೋತು, ಪಾಂಡವರ ರಾಜ್ಯಭ್ರಷ್ಠರನ್ನಾಗಿಸಿ  ಹದಿಮೂರು ವರ್ಷ ವನವಾಸ ಮತ್ತೆ ಒಂದು ವರ್ಷ ಅಜ್ಞಾತವಾಸಕ್ಕೆ  ಹೊಣೆಮಾಡಿಸಿದ°. ದೇಶಾಂತರ ಹೋಗಿ ವಾಪಾಸ್ಸು ಬಂದ ಪಾಂಡವರಿಂಗೆ ನ್ಯಾಯವಾಗಿ ರಾಜ್ಯ ಹಿಂತುರುಗುಸದ್ದೆ, ಅನಭಿಷಿಕ್ತ ದೊರೆಯಾಗಿದ್ದ ದುರ್ಯೋಧನ°, “ಐದು ಗ್ರಾಮಂಗಳನ್ನಾದರೂ ಕೊಡು ಮಾರಾಯ!” ಹೇದು ಸಂಧಾನಕ್ಕೆ ಬಂದ ಶ್ರೀಕೃಷ್ಣನತ್ರೆ, “ಸೂಜಿಮೊನೆ ಜಾಗೆಯನ್ನೂ ಕೊಡೆ”- ಹೇದು ರಣವೀಳ್ಯವ ಕೊಟ್ಟ°.
ಅರ್ಜುನನ ಸಾರಥಿಯಾಗಿ ಶ್ರೀಕೃಷ್ಣನ ಬೆಂಗಾವಲಿಲಿ ಪಾಂಡವರ ಏಳು ಅಕ್ಷೌಹಿಣಿ ಸೇನೆ ಒಂದು ಹೊಡೆ, ಹನ್ನೊಂದು ಅಕ್ಷೌಹಿಣಿ ಸೇನೆಯ ಕೂಡ್ಯೊಂಡು ಕೌರವನ ಪಡೆ ಇನ್ನೊಂದು ಹೊಡೆಲಿ ಸಜ್ಜಾಗಿ ಯುದ್ಧಸನ್ನದ್ಧರಾಗಿ ಕುರುಕ್ಷೇತ್ರಲ್ಲಿ ಸೇರಿದವು. ಪಾಂಡವಿರಿಂಗೆ ರಾಜ್ಯ ಹೋಕೋ!, ಶ್ರೀಕೃಷ್ಣನ ಕೃಪಾಕಟಾಕ್ಷಲ್ಲಿ ಅವ್ವು ಗೆಲುವು ಸಾಧುಸುಗೊ!, ತನ್ನ ಮಕ್ಕೊ ಕೌರವಾದಿಗಳ ಪರಿಸ್ಥಿತಿ ಬಗ್ಗೆ ಶಂಕೆ ಆತಂಕ, ಉದ್ವೇಗ, ಕಳವಳಲ್ಲಿ ಇತ್ತಿದ್ದ ಕುರುಡ°, ರಾಜಕೀಯಲ್ಲಿಯೂ ಅಧ್ಯಾತ್ಮಿಕವಾಗಿಯೂ ಕುರುಡನೇ ಆಗಿತ್ತಿದ್ದ ಧೃತರಾಷ್ಟ್ರ°, ತನ್ನ ಆಪ್ತನಾದ ಸಂಜಯನ ಮೂಲಕ “ಅವೆಂತ ಮಾಡಿದವು?” ಹೇದು ಆತಂಕಲ್ಲಿಯೇ ಕೇಟು ಅರ್ತುಗೊಂಡಿತ್ತಿದ್ದ°. ಈ ರೀತಿ ಆ ಸಂದರ್ಭಲ್ಲಿ ವ್ಯಾಸ ಶಿಷ್ಯ- ಸಂಜಯ°, ಆ ಧೃತರಾಷ್ಟ್ರಂಗೆ ರಣಕ್ಷೇತ್ರದ ಚಿತ್ರಣ ಮಾಡಿಕೊಡುವ ಸಂವಾದವೇ ಭಗವದ್ಗೀತೆಯ ಪ್ರಾರಂಭ. 

ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಭಗವದ್ಗೀತೆಯ ವ್ಯಾಖ್ಯಾನಲ್ಲಿ ಸಮಕಾಲೀನ ವ್ಯಾವಹಾರಿಕ ಜೀವನಲ್ಲಿ ಗೀತಾರ್ಥಚಿಂತನೆಯ ಮಾಡುತ್ತಾ ಹೇಳುತ್ತವು – “ಭಗವದ್ಗೀತೆ ಹೇಳ್ವದು ಐದು ಸಾವಿರ ವರ್ಷಂಗಳ ಹಿಂದೆ ಕೌರವ ಪಾಂಡವರ ನಡುವೆ ನಡದ ಇತಿಹಾಸ ಚಿತ್ರಣ ಅಷ್ಟೇ ಅಲ್ಲ., ಇದು ನಮ್ಮ ಜೀವನ ಮುಖ್ಯವಾದ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ, ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳ ನಮ್ಮ ದಾರಿ ತಪ್ಪುಸುವ ಕೌರವಂಗೊ ಇದ್ದವು, ಎಚ್ಚರುಸುವ ಪಾಂಡವರೂ ಇದ್ದವು. ಹದಿನೆಂಟು ಅಕ್ಷೌಹಿಣಿ ಸೇನೆಯೂ ಇದ್ದು. ಆದರೆ ನಮ್ಮ ಹೋರಾಟಲ್ಲಿ ಪಾಂಡವರು ಸೋತು ಕೌರವಂಗೊ ಗೆದ್ದುಬಿಡುವ ಸಂಭವ ಹೆಚ್ಚು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವ ಆ ಭಗವಂತನ ಕೈಗೊಪ್ಪುಸೇಕು. ಇದುವೇ ನರ(ಅರ್ಜುನ)ನ ಮೂಲಕ ನಾರಾಯಣ ನವಗೆ ಕೊಟ್ಟ ಗೀತೋಪದೇಶ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟದ್ದು ಅಲ್ಲ. ಇದು ಮಾನವ ಜೀವನ ಮೌಲ್ಯವ ಎತ್ತಿ ಹಿಡಿಯುವ ಕೈ-ಕನ್ನಾಟಿ. ನಮ್ಮ ಯೋಗ್ಯತೆಗೆ ತಕ್ಕಂತೆ ಸಮಕಾಲೀನವನ್ನೂ ಅನ್ವಯಿಸಿಗೊಂಡು ಗೀತಾರ್ಥವ ಅರ್ತುಗೊಂಬಲೆ ಪ್ರಯತ್ನುಸೆಕ್ಕು”.

ಯುದ್ಧ ಸುರುವಪ್ಪ ಪೂರ್ವ ಕ್ಷಣಲ್ಲಿ ಯುದ್ಧ ಭೂಮಿಲಿ ನಿಂದುಗೊಂಡಿತ್ತಿದ್ದ ಕೌರವ° ಮತ್ತು ಅರ್ಜುನನ ಮನಸ್ಥಿತಿ ಹೇಂಗೆ ಇತ್ತಿದ್ದು ಹೇಳ್ವ ಅಪೂರ್ವ ವಿಶ್ಲೇಷಣೆಯೊಟ್ಟಿಂಗೆ ಭಗವದ್ಗೀತೆಯ ಪ್ರಥಮ ಅಧ್ಯಾಯ ಪ್ರಾರಂಭ. ಅರ್ಜುನನ ಗೊಂದಲಕ್ಕೆ ಶ್ರೀಕೃಷ್ಣ ಪರಿಹಾರದ ಉಪದೇಶದ ಮೂಲಕ ಜೀವನ ರಹಸ್ಯವ ತಿಳಿಶಿದ್ದರ್ಲಿ ಅರ್ಜುನ ತನ್ನ ಅಂತರಾಳವ ಅರ್ತು ಗೆದ್ದುಗೊಂಡ°. ಕೌರವ ಗೊಂದಲಲ್ಯೇ ಅವಸಾನ ಉಂಡ°. ಇದು ನಮ್ಮ ದೈನಂದಿನ ಜೀವನಕ್ಕೆ ಅನ್ವಯಿಸಿ ಅರ್ಥೈಸಿಕೊಳ್ಳೆಕ್ಕಾದ್ದು ಭಗವದ್ಗೀತೆಯ ಮುಖ್ಯ ರಹಸ್ಯ. ಭಗವದ್ಗೀತೆ ಸುರುವಪ್ಪದು ಧೃತರಾಷ್ಟ್ರನ ಪ್ರಶ್ನೆಂದ. ಧೃತರಾಷ್ಟ್ರ° ಹೇದರೆ ರಾಷ್ಟ್ರವ ಧಾರಣೆ ಮಾಡಿದವ° ಹೇದು ಅರ್ಥಡ. ಅಂದರೆ, ಸತ್ಯದ ಬಗ್ಗೆ ಕುರುಡಾಗಿ ಮನಿಗಿಪ್ಪ ಜೀವವೇ ಧೃತರಾಷ್ಟ್ರ°. ದುರ್ಯೋಧನ° ಹೇಳ್ವದು ನಮ್ಮೊಳ ಇಪ್ಪ ದುಷ್ಟತನದ ಪರಾಕಾಷ್ಠೆಯ ಸಂಕೇತ. ಭೀಷ್ಮ-ದ್ರೋಣ-ಕೃಪಾ-ಶಲ್ಯ-ಕರ್ಣ ಇವೆಲ್ಲೋರೂ ನಮ್ಮ ಇಂದ್ರಿಯಂಗೊ ಇಪ್ಪ ಹಾಂಗೆ.  ನಮ್ಮ ಮನಸ್ಸಿನ ಕೆಟ್ಟತನಂದ ನಮ್ಮಲ್ಲಿಪ್ಪ ಇಂದ್ರಿಯಂಗಳ ಕೆಟ್ಟಕಾರ್ಯಕ್ಕೆ ಬಳಸುತ್ತು. ವಸ್ತುತಃ ಇಂದ್ರಿಯಂಗೊ ಕೆಟ್ಟದ್ದು ಅಲ್ಲ. ಆದರೆ, ಕೆಟ್ಟದ್ದರ ಜೊತೆ ಸೇರಿ ಕೆಟ್ಟತನವ ಮಾಡುತ್ತು. ಈ ರೀತಿ ಗೀತೆಯ ಪ್ರತಿಯೊಂದು ಶ್ಲೋಕಲ್ಲಿಯೂ ಮಹಾಭಾರತದ ಪ್ರತಿಯೊಂದು ಪಾತ್ರಲ್ಲಿಯೂ ಗುಹ್ಯವಾದ ಅರ್ಥ ಇದ್ದು ಹೇಳಿ ಬನ್ನಂಜೆಯವರ ವ್ಯಾಖ್ಯಾನ.

 

~*~

|| ಓಂ ಶ್ರೀಕೃಷ್ಣಪರಮಾತ್ಮನೇ ನಮಃ ||

|| ಅಥ ಶ್ರೀಮದ್ಭಗವದ್ಗೀತಾ ||

|| ಪ್ರಥಮೋsಧ್ಯಾಯಃ – ಅರ್ಜುನವಿಷಾದಯೋಗಃ ||

ಶ್ಲೋಕ

ಧೃತರಾಷ್ಟ್ರ ಉವಾಚ –

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ! ||೦೧||

ಪದವಿಭಾಗ
ಧೃತರಾಷ್ಟ್ರಃ ಉವಾಚ-

ಧರ್ಮ-ಕ್ಷೇತ್ರೇ ಕುರು-ಕ್ಷೇತ್ರೇ ಸಮವೇತಾಃ ಯುಯುತ್ಸವಃ । ಮಾಮಕಾಃ ಪಾಂಡವಾಃ ಚ ಏವ ಕಿಮ್ ಅಕುರ್ವತ ಸಂಜಯ? ॥

ಅನ್ವಯ

ಧೃತರಾಷ್ಟ್ರಃ ಉವಾಚ – ಹೇ ಸಂಜಯ!, ಧರ್ಮ-ಕ್ಷೇತ್ರೇ, ಕುರು-ಕ್ಷೇತ್ರೇ, ಯುಯುತ್ಸವಃ ಸಮವೇತಾಃ ಮಾಮಕಾಃ ಪಾಂಡವಾಃ ಚ ಏವ ಕಿಮ್ ಅಕುರ್ವತ ?

ಪ್ರತಿಪದಾರ್ಥ

ಧೃತರಾಷ್ಟ್ರಃ ಉವಾಚ – ರಾಜ° ಧೃತರಾಷ್ಟ್ರ°  ಹೇಳಿದ°, ಸಂಜಯ! – ಏ ಸಂಜಯ!,  ಧರ್ಮ-ಕ್ಷೇತ್ರೇ – ಧರ್ಮಕ್ಷೇತ್ರವಾದ (ವೇದಕಾಲಲ್ಲಿ ಕುರುಕ್ಷೇತ್ರ ಪ್ರಸಿದ್ಧ ಪೂಜಾ/ಯಾತ್ರಾ ಸ್ಥಳ ಆಗಿತ್ತಡ), ಕುರು-ಕ್ಷೇತ್ರೇ – ಕುರುಕ್ಷೇತ್ರ ಜಾಗೆಲಿ (ಯುದ್ಧಕ್ಕೇದು ನಿರ್ಧರಿತ ಕುರುಕ್ಷೇತ್ರ ಹೇಳ್ವ  ಜಾಗೆಲಿ), ಯುಯುತ್ಸವಃ – ಯುದ್ಧಮಾಡ್ಳೆ ಅಪೇಕ್ಷಿಸುವವರಾದ, ಸಮವೇತಾಃ ಸೇರಿದವರಾದ, ಮಾಮಕಾಃ – ಎನ್ನ ಪಕ್ಷದವು (ಎನ್ನವರು, ಎನ್ನ ಪುತ್ರರು), ಪಾಂಡವಾಃ – ಪಾಂಡುಪುತ್ರರು, ಚ – ಮತ್ತು, ಏವ – ಖಂಡಿತವಾಗಿ, ಕಿಮ್ – ಏನ (ಎಂತರ), ಅಕುರ್ವತ – ಮಾಡಿದವು]

ಅನ್ವಯಾರ್ಥ

ಧೃತರಾಷ್ಟ್ರ ಹೇಳಿದ° – ಹೇ ಸಂಜಯ, ಯುದ್ಧಾಪೇಕ್ಷವುಳ್ಳವುವಾಗಿದ್ದ  ಎನ್ನ ಮಕ್ಕೊ ಮತ್ತು ಪಾಂಡವರು ಧರ್ಮಕ್ಷೇತ್ರವಾದ ಕುರುಕ್ಷೇತ್ರಲ್ಲಿ ಸೇರಿದವು ಮತ್ತೆ ಎಂತ ಮಾಡಿದವು?

ತಾತ್ಪರ್ಯ / ವಿವರಣೆ

ಹುಟ್ಟುಕುರುಡನಾದ ಧೃತರಾಷ್ಟ್ರ°  ಸಂಜಯನತ್ರೆ ಕೇಳ್ತ° – ಹೋರಾಟವ ನಿರ್ಧರಿಸಿ ಪರಶುರಾಮರಿಂದ ಸಮಂತಪಂಚಕ (ಸುತ್ತಲೂ ಐದು ಸರೋವರ) ನಿರ್ಮಿಸಲ್ಪಟ್ಟು ಧರ್ಮಕ್ಷೇತ್ರವೆನಿಸಿ,  ಮುಂದೆ ‘ಕುರು’ ಹೇಳ್ವಎಂಬ ರಾಜನ ಕಾಲಲ್ಲಿ ಪರಮ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಗೊಂಡ ಕುರುಕ್ಷೇತ್ರಲ್ಲಿ ಎನ್ನವು ಮತ್ತು ಪಾಂಡವರುಗೊ ಎಂತ ಮಾಡಿದವು?.

ಧೃತರಾಷ್ಟ್ರನ ದೌರ್ಬಲ್ಯ, ಮಾನಸಿಕ ಸಂಘರ್ಷ ಇಲ್ಲಿ ವ್ಯಕ್ತ ಆವ್ತು. ವಾಸ್ತವಿಕ ಜೀವನಕ್ಕೆ ಅನ್ವೈಸಿರೆ ನಮ್ಮ ಹೃದಯವೇ- ‘ಧರ್ಮಕ್ಷೇತ್ರ’. ಯಾವುದು ಧರ್ಮ,  ಯಾವುದು ಅಧರ್ಮ  ಹೇಳ್ವದರ ತೀರ್ಮಾನ ಮಾಡುವ ಮನಸ್ಸೇ- ‘ಕುರುಕ್ಷೇತ್ರ’ , ‘ಕರ್ಮಕ್ಷೇತ್ರ’. ಮನಸ್ಸಿನ ಸಂಘರ್ಷಣೆಯೇ- ಮಹಾಭಾರತ ಯುದ್ಧ ಹೇಳ್ವದು ವಿದ್ವಾಂಸರ ವ್ಯಾಖ್ಯಾನ.

ಶ್ಲೋಕ

ಸಂಜಯ ಉವಾಚ –
ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ ।
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ॥೦೨।।

ಪದವಿಭಾಗ

ಸಂಜಯ: ಉವಾಚ – ದೃಷ್ಟ್ವಾ ತು ಪಾಂಡವ-ಅನೀಕಮ್ ವ್ಯೂಢಮ್ ದುರ್ಯೋಧನಃ ತದಾ | ಆಚಾರ್ಯಮ್ ಉಪಸಂಗಮ್ಯ ರಾಜಾ ವಚನಮ್ ಅಬ್ರವೀತ್ ॥
ಅನ್ವಯ
ಸಂಜಯಃ ಉವಾಚ – ತದಾ ತು ಪಾಂಡವ-ಅನೀಕಂ ವ್ಯೂಢಂ ದೃಷ್ಟ್ವಾ ರಾಜಾ ದುರ್ಯೋಧನಃ ಆಚಾರ್ಯಮ್ ಉಪಸಂಗಮ್ಯ (ಇದಂ) ವಚನಮ್ ಅಬ್ರವೀತ್ ।
ಪ್ರತಿಪದಾರ್ಥ

ಸಂಜಯಃ ಉವಾಚ – ಸಂಜಯ ಹೇಳಿದ°, ತದಾ – ಅಷ್ಟಪ್ಪಗ, ತು – ಆದರೆ (ಆದರೋ), ಪಾಂಡವ-ಅನೀಕಮ್ – ಪಾಂಡವರ ಸೇನೆಯ, ವ್ಯೂಢಮ್ – ವಿಶಿಷ್ಟ ವಿನ್ಯಾಸವ/ಶಿಸ್ತುಬದ್ಧ, ವ್ಯೂಹದ ವ್ಯವಸ್ಥೆಲಿದ್ದ, ದೃಷ್ಟ್ವಾ – ನೋಡಿ, ರಾಜಾ ದುರ್ಯೋಧನಃ – ರಾಜನಾದ ದುರ್ಯೋಧನ°, ಆಚಾರ್ಯಮ್ – ಗುರುಗಳ (ದ್ರೋಣ), ಉಪಸಂಗಮ್ಯ – ಸಮೀಪಿಸಿ,  (ಇದಮ್) ವಚನಮ್ – ಈ ಮಾತಿನ, ಅಬ್ರವೀತ್ – ಹೇಳಿದ°

ಅನ್ವಯಾರ್ಥ

ಸಂಜಯಃ ಉವಾಚ – ಸಂಜಯ ಹೇಳಿದ°, ರಾಜನೇ!, ಪಾಂಡವರ ಸೇನಾವ್ಯೂಹವ ನೋಡಿ ರಾಜಾ ದುರ್ಯೋಧನ° ತನ್ನ ಗುರು ದ್ರೋಣನ ಬಳಿ ಹೋಗಿ ಹೇಳಿದ°.

ತಾತ್ಪರ್ಯ / ವಿವರಣೆ

ಸುಯೋಧನ°,  ‘ರಾಜ’ ಹೇದು ಹೇಳಿಸಿಗೊಂಡಿದ್ದರೂ, ಸನ್ನಿವೇಶ ಗಂಭೀರವಾಗಿತ್ತಿದ್ದರಿಂದ, ಅವಂಗೆ ಸೈನ್ಯಾಧಿಪತಿಯ ಹತ್ರೆ ಹೋಗದ್ದೆ ಇಪ್ಪಲೆಡಿಗಾಯ್ದಿಲ್ಲೆ. ಪಾಂಡವರ ಸೇನಾವ್ಯೂಹವ ಕಂಡಪ್ಪಗ ಸುಯೋಧನಂಗೆ ಆದ ಒಳಭಯವ ಸೇನಾಧಿಪತಿಯೂ,  ಗುರುಗಳೂ ಆದ ದ್ರೋಣಾಚಾರ್ಯನ ಹತ್ರೆ ಹೇಳಿಗೊಳ್ಳದ್ದೆ ಅವನಿಂದ ಮುಚ್ಚಿಮಡಿಕ್ಕೊಂಬಲೆ ಎಡಿಗಾಯ್ದಿಲ್ಲೆ. ಅಂದರೂ ತಾನು ರಾಜ ಹೇಳ್ವ ದರ್ಪ ಇದ್ದೇ ಇದ್ದತ್ತು. ದೃಷ್ಟ್ವಾ ತು – ತನ್ನಲ್ಲಿ ಹನ್ನೊಂದು ಅಕ್ಷೌಹಿಣಿ ಸೇನೆ ಇತ್ತಿದ್ದರೂ ಪಾಂಡವರತ್ರೆ ಇತ್ತಿದ್ದ ಏಳು ಅಕ್ಷೌಹಿಣಿ ಸೇನೆಯ ಒಂದು ಪುಟ್ಟ ತುಕಡಿಯ ಕಂಡಪ್ಪದ್ದೇ ಸುಯೋಧನ° ಮಾನಸಿಕ ತುಮುಲಕ್ಕೆ ಒಳಗಾದ°.

ಶ್ಲೋಕ

ಪಶ್ಯೈತಾಂ ಪಾಂಡುಪುತ್ರಾಣಾಮ್ ಆಚಾರ್ಯ ಮಹತೀಂ ಚಮೂಮ್ ।
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ॥೦೩॥

ಪದವಿಭಾಗ

ಪಶ್ಯ ಏತಾಮ್ ಪಾಂಡು-ಪುತ್ರಾಣಾಮ್ ಆಚಾರ್ಯ ಮಹತೀಮ್ ಚಮೂಮ್ । ವ್ಯೂಢಾಮ್ ದ್ರುಪದ-ಪುತ್ರೇಣ ತವ ಶಿಷ್ಯೇಣ ಧೀ-ಮತಾ ।

ಅನ್ವಯ
ಹೇ ಆಚಾರ್ಯ!, ತವ ಧೀಮತಾ ಶಿಷ್ಯೇಣ, ದ್ರುಪದ-ಪುತ್ರೇಣ ವ್ಯೂಢಾಂ, ಪಾಂಡು-ಪುತ್ರಾಣಾಮ್ ಏತಾಂ ಮಹತೀಂ ಚಮೂಂ ಪಶ್ಯ ।
ಪ್ರತಿಪದಾರ್ಥ
ಹೇ ಅಚಾರ್ಯ! – ಓ ಗುರುಗಳೇ!, ತವ – ನಿನ್ನ, ಧೀ-ಮತಾ  ಶಿಷ್ಯೇಣ – ಬಹಳ ಬುದ್ಧಿವಂತನಾದ ಶಿಷ್ಯನಿಂದ (ಶಿಷ್ಯನಮೂಲಕ ರಚಿತವಾದ), ದ್ರುಪದ-ಪುತ್ರೇಣ – ದ್ರುಪದನ ಮಗನಿಂದ (ರಚಿತವಾದ), ವ್ಯೂಢಾಮ್ – ವ್ಯೂಹರಚೆನೆಲಿಪ್ಪ, ಪಾಂಡು-ಪುತ್ರಾಣಾಮ್ – ಪಾಂಡುಮಕ್ಕಳ, ಏತಾಮ್ – ಈ, ಮಹತೀಮ್ – ಮಹತ್ತಾದ, ಚಮೂಮ್ – ಸೇನಾಬಲವ, ಪಶ್ಯ– ನೋಡು.
 

ಅನ್ವಯಾರ್ಥ

ಓ ಆಚಾರ್ಯರೇ, ನಿಂಗಳ ಚತುರ ಶಿಷ್ಯನಾದ ದ್ರುಪದನ ಮಗ° ಕೌಶಲಂದ ವ್ಯೂಹರೂಪವಾಗಿ ನಿಲ್ಲಿಸಿದ ಈ ಪಾಂಡವ ಸೈನ್ಯವ ನೋಡಿ.

ತಾತ್ಪರ್ಯ / ವಿವರಣೆ

ದುರ್ಯೋಧನ° ಸೇನಾಧಿಪತಿ ಭೀಷ್ಮನತ್ರೆ ಹೋಗದ್ದೆ ದ್ರೋಣಾಚಾರ್ಯರ ಹತ್ರೆ ಹೋಗಿ ಭೀಷ್ಮಂಗೆ ಕೇಳ್ತಾಂಗೆ ಆಚಾರ್ಯ ದ್ರೋಣನತ್ರೆ ನಂಜಿನ ಮಾತು ಹೇಳ್ತ°. ಇಲ್ಲಿ ದ್ರೋಣ° ‘ಪಾಂಡವರ ಆಚಾರ್ಯ°’ ಹೇದು ತನ್ನ ಪ್ರೀತಿಯ ಶಿಷ್ಯಂದ್ರು ಪಾಂಡವರು ಹೇಳ್ವ ಔದಾರ್ಯ ತೋರ್ಸುಲಾಗ ಎಂಬ ಸಂದೇಶಲ್ಲಿ ಓರಗೆ ಚುಚ್ಚುತ್ತ° – “ಓ ಆಚಾರ್ಯರೇ!, ನಿಂಗಳ ಚತುರ ಶಿಷ್ಯನಾದ ದ್ರುಪದನ ಮಗ° ಕೌಶಲಂದ ವ್ಯೂಹರೂಪವಾಗಿ ನಿಲ್ಲಿಸಿದ ಈ ಪಾಂಡವ ಸೈನ್ಯವ ನೋಡಿ”.

ವ್ಯವಹಾರಚತುರ° ಆದ ಸುಯೋಧನ° ತನ್ನ ಸೇನಾಧಿಪತಿಯಾಗಿಪ್ಪ ತನ್ನ ಗುರು, ಬ್ರಾಹ್ಮಣ ದ್ರೋಣನ ದೋಷಂಗಳ ಎತ್ತಿ ತೋರ್ಸಲೆಬೇಕಾಗಿ ಮಹಾಬುದ್ದಿವಂತಿಕೆಲಿ ಹೇಳ್ತ°. ದ್ರೋಣಂಗೂ ದ್ರುಪದಂಗೂ ಮದಲಿಂಗೆ ಒಂದು ರಾಜಕೀಯ ಕಲಹ ಆಗಿತ್ತು. ಕಲಹದ ಫಲವಾಗಿ ದ್ರುಪದ ಒಂದು ಮಹಾಯಾಗವ ಮಾಡಿ ದ್ರೋಣಾಚಾರ್ಯನ ಕೊಲ್ಲಲೆ ಎಡಿಗಪ್ಪ ಒಬ್ಬ° ಮಗನ ಪಡವ ವರ ಗಳಿಸಿಗೊಂಡ°. ಇದು ದ್ರೋಣಾಚಾರ್ಯಂಗೂ ಗೊಂತಿತ್ತಿದ್ದು. ಅಂದರೂ ದ್ರುಪದನ ಮಗ ಧೃಷ್ಟದ್ಯುಮ್ನಂಗೆ ಯುದ್ಧವಿದ್ಯೆ ಕಲುಶುಲೆ ದ್ರೋಣನತ್ರೆ ಒಪ್ಪಿಸಿಪ್ಪಗ, ಉದಾರ ಮನಸ್ಸಿನ ಬ್ರಾಹ್ಮಣನಾಗಿ ಅವಂಗೆ ತನಗೊಂತಿಪ್ಪ ಎಲ್ಲಾ ಅಸ್ತ್ರ ಶಸ್ತ್ರ ರಹಸ್ಯಂಗಳ ಹೇಳಿಕ್ಕೊಡ್ಳೆ ಹಿಂಜರುದ್ದನಿಲ್ಲೆ. ಕುರುಕ್ಷೇತ್ರ ಯುದ್ಧಲ್ಲೀಗ ಧೃಷ್ಟದ್ಯುಮ್ನ ಪಾಂಡವರ ಪಕ್ಷಲ್ಲಿ ಸೇರಿಗೊಂಡು ದ್ರೋಣನತ್ರಂದಲೇ ಕಲ್ತ ವಿದ್ಯೆಯ ಉಪಯೋಗಿಸಿ ಸೇನಾವ್ಯೂಹ  ರಚನೆ ಮಾಡಿದ್ದ°. ಈ ಸಂದರ್ಭಲ್ಲಿ ದ್ರೋಣನ ತಪ್ಪಿನ ಎತ್ತಿ ತೋರ್ಸಿ ಯುದ್ಧಲ್ಲಿ ಬಿಗಿಯಾಗಿರೇಕು, ತನ್ನ ಅತ್ಯಂತ ಪ್ರೀತಿಪಾತ್ರ ಮತ್ತು ತೀಕ್ಷ್ಣ ಬುದ್ಧಿಯ ಶಿಷ್ಯ° ಧೃಷ್ಟದ್ಯುಮ್ನನ ಮೇಲೆ ಔದಾರ್ಯ ತೋರುಸಲಾಗ ಹೇಳಿ ಒತ್ತಿ ಹೇಳ್ವ ಚಾಣಕ್ಷತನ ದುರ್ಯೋಧನನದ್ದು!.

ಇಲ್ಲಿ ಅಂತರಂಗಲ್ಲಿ ಭಯಗೊಂಡ ದುರ್ಯೋಧನ° ಕ್ಷಣಕ್ಷಣಕ್ಕೂ ಮಾಡುತ್ತಿಪ್ಪ ತಪ್ಪ ಸೂಕ್ಶ್ಮವಾಗಿ ಗಮನುಸೆಕ್ಕಾದ್ದು. ತಾನೇ ರಾಜನಾಯೇಕು ಹೇಳ್ವ ಆಸೆ, ಅದರಿಂದ ದ್ವೇಷ, ಅದರಿಂದ ಅಸೂಯೆ, ಅದರಿಂದ ಮಾನಸಿಕ ಸ್ಥಿಮಿತ ತಪ್ಪುವಿಕೆ, ಅದರಿಂದ ಮಾಡ್ಳಾಗದ್ರ ಮಾಡುವದು- ಇದು ನಾವು ದೈನಂದಿನ ಜೀವನಲ್ಲಿ ಕಾಂಬ ಸಾಮನ್ಯ ವಿಚಾರ. ಮನುಷ್ಯ° ದಾರಿತಪ್ಪುವ ವಿವಿಧ ಹಂತಗೊ ಇವು ಹೇದು ಬನ್ನಂಜೆಯವು ವ್ಯಾಖ್ಯಾನಿಸಿದ್ದವು.

ಶ್ಲೋಕ

ಅತ್ರ ಶೂರಾ ಮಹೇಷ್ವಾಸಾಃ ಭೀಮಾರ್ಜುನಸಮಾ ಯುಧಿ ।
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ ॥೦೪॥

ಪದವಿಭಾಗ

ಅತ್ರ ಶೂರಾಃ ಮಹಾ-ಇಷು-ಆಸಾಃ ಭೀಮ-ಅರ್ಜುನ-ಸಮಾಃ ಯುಧಿ । ಯುಯುಧಾನಃ ವಿರಾಟಃ ಚ ದ್ರುಪದಃ ಚ ಮಹಾ-ರಥಃ ॥

ಅನ್ವಯ

ಅತ್ರ ಭೀಮ-ಅರ್ಜುನ-ಸಮಾಃ, ಯುಧಿ ಶೂರಾಃ, ಮಹಾ-ಇಷು-ಆಸಾಃ, ಮಹಾ-ರಥಃ ಯುಯುಧಾನಃ, ವಿರಾಟಃ ಚ ದ್ರುಪದಃ ಚ ।

ಪ್ರತಿಪದಾರ್ಥ

ಅತ್ರ – ಇಲ್ಲಿ, ಭೀಮ-ಅರ್ಜುನ-ಸಮಾಃ – ಭೀಮ ಅರ್ಜುನರಿಂಗೆ ಸಮಾನರಾದ,  ಯುಧಿ – ಯುದ್ಧಲ್ಲಿ, ಶೂರಾಃ – ಶೂರರಾದ, ಮಹಾ-ಇಷು-ಆಸಾಃ – ಮಹಾ ಬಿಲ್ಲುಗಾರರಾಗಿಪ್ಪೋರು, ಮಹಾ-ರಥಃ – ಮಹಾಯೋಧನಾದ, ಯುಯುಧಾನಃ – ಯುಯುಧಾನ°, ವಿರಾಟಃ – ವಿರಾಟ°, ಚ – ಕೂಡ, ದ್ರುಪದಃ – ದ್ರುಪದ°, ಚ – ಸಾನ (ಇದ್ದವು)

ಅನ್ವಯಾರ್ಥ

ಹೋರಾಟಲ್ಲಿ ಭೀಮಾರ್ಜುನರಿಂಗೆ ಸಮಾನರಾದ ಅನೇಕ ವೀರ ಬಿಲ್ಲಾಳುಗೊ ಈ ಸೈನ್ಯಲ್ಲಿ ಇದ್ದವು. ಯುಯುಧಾನ°, ವಿರಾಟ°, ಮತ್ತೆ ದ್ರುಪದನ ಹಾಂಗಿಪ್ಪ ಮಹಾರಥರುಗೊ ಇದ್ದವು.

ತಾತ್ಪರ್ಯ / ವಿವರಣೆ

ಸಾಮಾನ್ಯವಾಗಿ ನವಗೆ ಆರ ಬಗ್ಗೆ ಭಯ ಇರ್ತೋ, ಅವ್ವೇ ಎಲ್ಲದಿಕ್ಕೆ ಇಪ್ಪ ಹಾಂಗೆ ಭಾಸ ಆವ್ತು. ಕಂಸಂಗೆ ಕೃಷ್ಣ° ಕಂಡ ಹಾಂಗೆ, ಇಲ್ಲಿ ದುರ್ಯೋಧನಂಗೆ ಭೀಮಾರ್ಜುನರ ಭಯ. ಹಾಂಗಾಗಿಯೇ ಅವ° ಹೇಳ್ತ°- ಅಲ್ಲಿಪ್ಪವೆಲ್ಲಾ ಭೀಮಾರ್ಜುನರಿಂಗೆ ಸಮಾನರು. ಆ ಕಾಲಲ್ಲಿ ಇದ್ದ ಮಹಾಬಿಲ್ಲು ಹೇಳಿರೆ ‘ಗಾಂಡೀವ’ ಡ. ಗಾಂಡೀವ ಹಿಡುದು ಯುದ್ಧ ಮಾಡಬಲ್ಲವು ಹೇದರೆ ಅರ್ಜುನ°, ಭೀಮ°, ಮತ್ತು ಶ್ರೀಕೃಷ್ಣ° ಮಾತ್ರಡ. ಹಾಂಗಾಗಿ  ಆ ಸಮಯಲ್ಲಿ ದುರ್ಯೋಧನಂಗೆ ಪಾಂಡವ ಪಡೆಲಿ ಇಪ್ಪ ಮಹಾವೀರರೆಲ್ಲೋರು ಭೀಮಾರ್ಜುನರಿಂಗೆ ಸಮಾನ ಹೇಳಿ ಕಾಣುತ್ತಡ. ಮುಂದೆ ದುರ್ಯೋಧನ° ಪಾಂಡವರ ಪಕ್ಷಲ್ಲಿ ಇಪ್ಪ ವೀರರ ಒಬ್ಬೊಬ್ಬನ ಹೆಸರರೆತ್ತಿ ಹೇದು ಎಚ್ಚರುಸುತ್ತ°. “ಸಾತ್ಯಕಿ, ವಿರಾಟ°, ದ್ರುಪದರಂತಹ ಮಹಾರಥರು ಇದ್ದವು”. ಈ ಮೂವರೂ ಕೌರವನ ಕಡೇಂಗೆ ಬರೇಕ್ಕಾಗಿದ್ದವು. ಹಿಂದೆ ಜರಾಸಂಧನ ಒಟ್ಟಿಂಗೆ ಇದ್ದು ಕೃಷ್ಣನ ವಿರುದ್ದ ಹೋರಾಡಿದ ದ್ರುಪದನ ಹಿಂದೆ ಕಟ್ಟಿಹಾಕಿ  ಅವನ ಅರ್ಧ ರಾಜ್ಯವ ಕಿತ್ತು ದ್ರೋಣಂಗೆ ಪಾಂಡವರು ಕೊಟ್ಟವು . ಆದರೆ ದ್ರುಪದನ ಮಗಳು ದ್ರೌಪದಿಯ ಪಾಂಡವರಿಂಗೆ ಕೊಟ್ಟು ಸಂಬಂಧ ಬೆಳೆಶಿದ ದ್ರುಪದ°, ಪಾಂಡವರ ಪಕ್ಷಲ್ಲಿ ನಿಂದುಗೊಂಡ°. ವಿರಾಟ° ಮದಲು ಕೀಚಕಂಗೆ ಹೆದರಿ ರಾಜ್ಯಭಾರ ಮಾಡಿಗೊಂಡ್ಯೊಪ್ಪಗ ಕೀಚಕನ ಭೀಮ° ಕೊಂದು ಸಹಾಯ ಮಾಡಿದ್ದರಿಂದ ವಿರಾಟ° ಪಾಂಡವರ ಪಾಳಯ ಸೇರಿಗೊಂಡ°.  ಇನ್ನು ಬಲರಾಮ° “ಯುದ್ಧಮಾಡುತ್ತಿಲ್ಲೆ” ಹೇದು ತೀರ್ಥಯಾತ್ರಗೆ ಹೆರಟಕಾರಣ, ಸಾತ್ಯಕಿ, ಶ್ರೀಕೃಷ್ಣ ಇಪ್ಪ  ಪಾಂಡವರ ಪಕ್ಷಲ್ಲಿ ಸೇರಿಗೊಂಡ°. ದುರ್ಯೋಧನನ ಲೆಕ್ಕ ಪ್ರಕಾರ ಈ ಮೂವರೂ ತನ್ನ ಕಡೆ ಇರೆಕ್ಕಾಗಿತ್ತಿದ್ದವು ಪಾಂಡವರ ಪಕ್ಷಲ್ಲಿ ಸೇರಿಬಿಟ್ಟವನ್ನೇದು ಅವಂಗೆ ಈಗ ಬೇನೆ ಹೇದು ಬನ್ನಂಜೆಯವು ವ್ಯಾಖ್ಯಾನಿಸಿದ್ದವು.

ದ್ರೋಣಾಚಾರ್ಯನ ಯುದ್ಧಕಲೆ ಶಕ್ತಿಯ ಎದುರ್ಲಿ ಧೃಷ್ಟದ್ಯುಮ್ನ° ದೊಡ್ಡ ತಡೆಯಾಗಿರದ್ದಿಪ್ಪಲೂ ಸಾಕು, ಆದರೆ, ಆತಂಕವುಂಟುಮಾಡ್ಳೆ ಎಡಿಗಪ್ಪ ಇನ್ನೂ ಅನೇಕರಿತ್ತಿದ್ದವು. ಪ್ರತಿಯೊಬ್ಬನೂ ಭೀಮಾರ್ಜುನರಷ್ಟೇ ಪರಾಕ್ರಮಿಗೊ. ಹಾಂಗೆ, ಕೌರವನ ಜಯಕ್ಕೆ ಅಡ್ಡಿಯಕ್ಕೋ ಹೇಳ್ವ ಆತಂಕಂದ ಭೀಮಾರ್ಜುನರ ಶಕ್ತಿಯ ಮನಸ್ಸಿಲ್ಲಿ ಮಡಿಕ್ಕೊಂಡು ಇತರರ ಅವಕ್ಕೆ ಹೋಲಿಸಿಗೊಂಡು ಹೇಳುತ್ತ° –

ಶ್ಲೋಕ

ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ ।
ಪುರುಜಿತ್ ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ ॥೦೫॥

ಪದವಿಭಾಗ

ಧೃಷ್ಟಕೇತುಃ ಚೇಕಿತಾನಃ ಕಾಶಿರಾಜಃ ಚ ವೀರ್ಯವಾನ್ । ಪುರುಜಿತ್ ಕುಂತಿಭೋಜಃ ಚ ಶೈಬ್ಯಃ ಚ ನರ-ಪುಂಗವಃ ॥

ಅನ್ವಯ

ಧೃಷ್ಟಕೇತುಃ ಚೇಕಿತಾನಃ ಚ, ವೀರ್ಯವಾನ್ ಕಾಶಿರಾಜಃ ಚ , ಪುರುಜಿತ್ ಕುಂತಿಭೋಜಃ ಚ, ನರ-ಪುಂಗವಃ ಶೈಬ್ಯಃ ಚ ।

ಪ್ರತಿಪದಾರ್ಥ
ಧೃಷ್ಟಕೇತುಃ – ಧೃಷ್ಟಕೇತು, ಚೇಕಿತಾನಃ – ಚೇಕಿತಾನ°,  ಚ – ಮತ್ತೆ, ವೀರ್ಯವಾನ್ ಕಾಶಿರಾಜಃ – ಮಹಾಬಲಶಾಲಿಯಾದ ಕಾಶಿರಾಜ°, ಚ – ಕೂಡ,   ಪುರುಜಿತ್ – ಪುರುಜಿತ°, ಕುಂತಿಭೋಜಃ – ಕುಂತಿಭೋಜ°, ಚ – ಮತ್ತೆ, ನರ-ಪುಂಗವಃ  ಶೈಬ್ಯಃ – ಮಾನವಸಮಾಜಲ್ಲಿ ಶ್ರೇಷ್ಠನಾದ ಶೈಬ್ಯ°,  ಚ – ಕೂಡ (ಇದ್ದವು)

ಅನ್ವಯಾರ್ಥ

ಧೃಷ್ಟಕೇತು, ಚೇಕಿತಾನ°, ಕಾಶಿರಾಜ°, ಪುರುಜಿತ್, ಕುಂತಿಭೋಜ° ಮತ್ತು ಶೈಬ್ಯನಂತಹ ನರಪುಂಗವಂಗೊ ಇದ್ದವು.

ತಾತ್ಪರ್ಯ / ವಿವರಣೆ

ಬನ್ನಂಜೆಯವರ ವ್ಯಾಖ್ಯಾನಲ್ಲಿಪ್ಪಂತೆ – ಮೇಲ್ನೋಟಕ್ಕೆ ಇಲ್ಲಿ ಇಪ್ಪದು ಆರು ಮಂದಿ ವೀರರ ಹೆಸರುಗೊ. ಆದರೆ ಇಲ್ಲಿ ಆರು ವ್ಯಕ್ತಿಗಳ ವಿಷಯ ಅಲ್ಲ. ಇವರ ಹೆಸರುಗಳ ಎತ್ತಿ ಹೇಳುವ ದುರ್ಯೋಧನನ ಮನಸ್ಥಿತಿ. ಅವೆಲ್ಲೋರು ತನ್ನ ಪಕ್ಷಲ್ಲಿ ಇರೆಕ್ಕಾಗಿತ್ತು. ರಾಜಸೂಯ ಯಾಗಲ್ಲಿ ಪಾಂಡವರಿಂದ ಹತನಾದ ಶಿಶುಪಾಲನ ಮಗ° ಧೃಷ್ಟಕೇತು, ಯಾದವ ವೀರ° ಚೇಕಿತಾನ° ಮತ್ತೆ ಮಹಾವೀರನಾದ ಕಾಶಿರಾಜ ಹಾಂಗೂ ಕುಂತಿಭೋಜ, ಪುರುಜಿತ್, ಶೈಭ್ಯ° ಮೊದಲಾದ ನರಪುಂಗವಂಗೊ (ನರಪುಂಗವಃ = ಗೂಳಿಯಾಂಗೆ ನಡಿಗೆಯಿಪ್ಪ ಗಂಡುಗಲಿ).. ಇವೆಲ್ಲ ಪಾಂಡವರ ಪಕ್ಷಲ್ಲಿ ಇದ್ದವನ್ನೇದು ದುರ್ಯೋಧನನ ಸಂಕಟ.  

ಶ್ಲೋಕ

ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ ।
ಸೌಭದ್ರೋ ದ್ರೌಪದೇಯಾಶ್ಚ ಸರ್ವೇ ಏವ ಮಹಾರಥಾಃ ॥೦೬॥

ಪದವಿಭಾಗ

ಯುಧಾಮನ್ಯುಃ ಚ ವಿಕ್ರಾಂತಃ ಉತ್ತಮೌಜಾಃ ಚ ವೀರ್ಯ-ವಾನ್ । ಸೌಭದ್ರಃ ದ್ರೌಪದೇಯಾಃ ಚ ಸರ್ವೇ ಏವ ಮಹಾ-ರಥಾಃ ॥
 

ಅನ್ವಯ

ವಿಕ್ರಾಂತಃ ಯುಧಾಮನ್ಯುಃ ಚ, ವೀರ್ಯ-ವಾನ್ ಉತ್ತಮೌಜಾಃ, ಸೌಭದ್ರಃ ಚ, ದ್ರೌಪದೇಯಾಃ ಚ ಸರ್ವೇ ಮಹಾ-ರಥಾಃ ಏವ ।

ಪ್ರತಿಪದಾರ್ಥ

ವಿಕ್ರಾಂತಃ – ಮಹಾಬಲಶಾಲಿಯಾದ, ಯುಧಾಮನ್ಯುಃ – ಯುಧಾಮನ್ಯುವು, ಚ – ಮತ್ತೆ, ವೀರ್ಯ-ವಾನ್ – ಮಹಾಬಲಿಷ್ಠನಾದ, ಉತ್ತಮೌಜಾಃ – ಉತ್ತಮೌಜ°, ಸೌಭದ್ರಃ – ಸೌಭದ್ರೆಯ ಮಗ°, ಚ – ಮತ್ತೆ, ದ್ರೌಪದೇಯಾಃ – ದ್ರೌಪದಿಯ ಮಕ್ಕೊ, ಚ – ಮತ್ತೆ, ಸರ್ವೇ – ಎಲ್ಲೋರೂ, ಮಹಾ-ರಥಾಃ – ಮಹಾರಥಿಕರಾಗಿಪ್ಪವು,  ಏವ – ನಿಶ್ಚಯವಾಗಿಯೂ.

ಅನ್ವಯಾರ್ಥ

ಬಲಶಾಲಿ  ಯುಧಾಮನ್ಯು, ಬಹುಶಕ್ತಿವಂತ° ಉತ್ತಮೌಜ°, ಸುಭದ್ರೆಯ ಮಗ (ಅಭಿಮನ್ಯು), ದ್ರೌಪದಿಯ ಮಕ್ಕೊ ಇವೆಲ್ಲೋರು ಇದ್ದವು. ಇವೆಲ್ಲೋರು ಖಂಡಿತವಾಗಿಯೂ ಮಹಾರಥಂಗೊ.

ತಾತ್ಪರ್ಯ / ವಿವರಣೆ

ಇನ್ನು ಒಂದೇ ಮನೆಂದ ಬಂದವರ ಬಗ್ಗೆ ದುರ್ಯೋಧನ ಪ್ರಸ್ತಾಪುಸುತ್ತ°- ಯುಧಾಮನ್ಯು, ಉತ್ತಮೌಜ, ದ್ರುಪದನ ಮಕ್ಕೊ ಮಹಾ ವಿಕ್ರಮಿಗೊ. ಹಾಂಗೇ ಸುಭದ್ರೆಯ ಮಗ ಅಭಿಮನ್ಯು ಪ್ರಾಯಪ್ರಬುದ್ಧ° ಅಲ್ಲದ್ರೂ ಮಹಾವೀರ°, ದ್ರೌಪದಿಯ ಮಕ್ಕೊ.. ಇವೆಲ್ಲೋರು ವೀರ ಪರಾಕ್ರಮಿಗಳೆ. ತನ್ನ ಹತ್ರೆ ಹನ್ನೊಂದು ಅಕ್ಷೌಹಿಣಿ ಸೇನಾಬಲ ಇದ್ದರೂ ತನ್ನ ಸೇನೆಯ ಹುರಿದುಂಬುಸುವುದು ಬಿಟ್ಟು ಪಾಂಡವರ ಸೈನ್ಯಲ್ಲಿಪ್ಪ ವೀರರ ಬಗ್ಗೆ ಮಾತಾಡುತ್ಸು ಹೇದರೆ, ದುರ್ಯೋಧನನ ಭೀತಿ ಮನಸ್ಥಿತಿಯ ಸೂಚಿಸುತ್ತಲ್ಲದ್ದೆ ಮತ್ತೆಂತರ!. ಭಗವಂತನಿಂದ ದೂರ ನಿಂದು ಅಧರ್ಮಿಯಾದ ಪ್ರತಿಯೊಬ್ಬನ ಪಾಡು ಹೀಂಗೇಡ.  ಯೇವತ್ತೂ ಅಂತರಂಗಲ್ಲಿ ಭಯಲ್ಲೇ ಬದುಕುತ್ಸು. ಆ ಭಯವ ಮುಚ್ಚಿಮಡುಗಲೆ ಹೀಂಗೆ ಅಪ್ರಸ್ತುತವಾಗಿ ಮಾತಾಡುತ್ಸು ಅಂತವರ ಮನೋಧರ್ಮ. ಅಂತವರಲ್ಲಿ ಎಷ್ಟೇ ಬಾಹ್ಯ ಬಲ ಇದ್ದರೂ ಆತ್ಮವಿಶ್ವಾಸ ಇರ್ತಿಲ್ಲೆ.

ಶ್ಲೋಕ

ಅಸ್ಮಾಕಂ ತು ವಿಶಿಷ್ಟಾಯೇ ತಾನ್ನಿಬೋಧ ದ್ವಿಜೋತ್ತಮ ।
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ॥೦೭॥

ಪದವಿಭಾಗ

ಅಸ್ಮಾಕಮ್ ತು ವಿಶಿಷ್ಟಾಃ ಯೇ ತಾನ್ ನಿಬೋಧ ದ್ವಿಜೋತ್ತಮ । ನಾಯಕಾಃ ಮಮ ಸೈನ್ಯಸ್ಯ ಸಂಜ್ಞಾ-ಅರ್ಥಮ್ ತಾನ್ ಬ್ರವೀಮಿ ತೇ ॥
ಅನ್ವಯ
ಹೇ ದ್ವಿಜ-ಉತ್ತಮ!, ಅಸ್ಮಾಕಂ ತು ಯೇ ವಿಶಿಷ್ಟಾಃ ಮಮ ಸೈನ್ಯಸ್ಯ ನಾಯಕಾಃ, ತಾನ್ ನಿಬೋಧ । ತಾನ್ ತೇ ಸಂಜ್ಞಾ-ಅರ್ಥಂ ಬ್ರವೀಮಿ ।
 ಪ್ರತಿಪದಾರ್ಥ

ಹೇ ದ್ವಿಜ-ಉತ್ತಮ! – ಓ ಬ್ರಾಹ್ಮಣಶ್ರೇಷ್ಠರೇ!, ಅಸ್ಮಾಕಮ್ – ನಮ್ಮ , ತು – ಆದರೋ, ಯೇ – ಆರೆಲ್ಲ, ವಿಶಿಷ್ಟಾಃ ವಿಶೇಷವಾಗಿ ಬಲಿಷ್ಠರಾದ, ಮಮ – ಎನ್ನ, ಸೈನ್ಯಸ್ಯ – ಸೈನ್ಯದ, ನಾಯಕಾಃ – ಸೇನಾಪತಿಗೊ, ತಾನ್ – ಅವರ, ನಿಬೋಧ – ಗಮನಿಸಿ,  ತಾನ್ – ಅವರ, ತೇ (ತುಭ್ಯಮ್) – ನಿಂಗೊಗೆ,  ಸಂಜ್ಞಾ-ಅರ್ಥಮ್ – ತಿಳುವಳಿಕೆಗಾಗಿ, ,  ಬ್ರವೀಮಿ – ಹೇಳುತ್ತೆ. 

ಅನ್ವಯಾರ್ಥ

ಹೇ ದ್ವಿಜೋತ್ತಮನೇ, ನಮ್ಮ ಸೇನೆಲಿ  ಎನ್ನ ಸೈನ್ಯವ ನಡೆಸುಲೆ ವಿಶೇಷ ಅರ್ಹತೆಯಿಪ್ಪ (ವಿಶೇಷ ಬಲಿಶಾಲಿಗಳಾದ)  ನಾಯಕರುಗಳ ಗಮನಿಸಿ.  ನಿಂಗೊಗೆ ತಿಳುವಲೆಬೇಕಾಗಿ  ಅವರ ಹೇಳ್ಳೆ ಬಯಸುತ್ತೆ.

ತಾತ್ಪರ್ಯ / ವಿವರಣೆ

ಯುದ್ಧ ಸನ್ನದ್ದವಾದ ಸ್ಥಿತಿಲಿ ಎದುರು ಪಕ್ಷಲ್ಲಿ ಇಪ್ಪ ಸೇನಾನಾಯಕರುಗಳ ಕಂಡಪ್ಪಗ ದುರ್ಯೋಧನಂಗೆ ಒಳಂದೊಳ ತನ್ನ ಸೈನ್ಯಲ್ಲಿ ಇಪ್ಪವು ಏನೂ ಸಾಲ ಹೇಳ್ವ ಚಿಂತೆ. ಹಾಂಗಾಗಿ ಈ ಹೆದರಿಕೆಯ ನೇರವಾಗಿ ಒಪ್ಪಿಗೊಂಬಲೆ ತಯಾರಿಲ್ಲದ್ದ ಹುಂಬ° ದುರ್ಯೋಧನ° ಆಚಾರ್ಯರತ್ರೆ ಹೇಳ್ತ° –

ಶ್ಲೋಕ

ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ ।
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ॥೦೮॥

ಪದವಿಭಾಗ

ಭವಾನ್ ಭೀಷ್ಮಃ ಚ ಕರ್ಣಃ ಚ ಕೃಪಃ ಚ ಸಮಿತಿಂಜಯಃ । ಅಶ್ವತ್ಥಾಮಾ ವಿಕರ್ಣಃ ಚ ಸೌಮದತ್ತಿಃ ತಥಾ ಏವ ಚ ॥

ಅನ್ವಯ

ಭವಾನ್ ಭೀಷ್ಮಃ ಚ, ಕರ್ಣಃ ಚ, ಸಮಿತಿಂಜಯಃ ಕೃಪಃ ಚ, ಅಶ್ವತ್ಥಾಮಾ ವಿಕರ್ಣಃ ಚ, ತಥಾ ಏವ ಚ ಸೌಮದತ್ತಿಃ ।

ಪ್ರತಿಪದಾರ್ಥ
ಭವಾನ್ – ನಿಂಗೊ (ತಾವು), ಭೀಷ್ಮಃ – ಪಿತಾಮಹನಾದ ಭೀಷ್ಮಚಾರ್ಯ°,  ಚ – ಕೂಡ, ಕರ್ಣಃ – ಕರ್ಣ°, ಚ – ಮತ್ತೆ, ಸಮಿತಿಂಜಯಃ – ಯುದ್ಧಲ್ಲಿ ಸದಾ ಜಯಶಾಲಿಯಾದ, ಕೃಪಃ – ಕೃಪ°, ಚ – ಮತ್ತೆ,   ಅಶ್ವತ್ಥಾಮಾ – ಅಶ್ವತ್ಥಾಮ°, ವಿಕರ್ಣಃ – ವಿಕರ್ಣ°, ಚ –ಮತ್ತೆ, ತಥಾ ಏವ –  ಹಾಂಗೆಯೇ, ಖಂಡಿತವಾಗಿಯೂ, ಚ – ಕೂಡ, ಸೌಮದತ್ತಿಃ – ಸೌಮದತ್ತನ ಮಗ°.
ಅನ್ವಯಾರ್ಥ

ನಿಂಗೊ- ಭೀಷ್ಮರು, ಕರ್ಣ°, ಕೃಪ°, ಅಶ್ವತ್ಥಾಮ°, ವಿಕರ್ಣ°, ಸೋಮದತ್ತನ ಮಗ° (ಭೂರಿಶ್ರವ°)- ಇವೆಲ್ಲೋರು ಯೇವತ್ತೂ ಯುದ್ಧಲ್ಲಿ ವಿಜಯಿಗೊ ಅಪ್ಪೋರೆ.

ತಾತ್ಪರ್ಯ / ವಿವರಣೆ

ತನ್ನ ಬಳಿ ಪರಾಕ್ರಮಿಗಳಾಗಿ ದೊಡ್ಡ ಹೆಸರು  ಗಳಿಸಿದ ಇಪ್ಪ ಸಮರ್ಥಂಗೊ ಎಲ್ಲಾ ಯಾವುದೋ ಒಂದು ನಿರ್ಬಂಧಕ್ಕಾಗಿ ಇದ್ದವಷ್ಟೇ ಹೇಳಿ ಕುಹಕವಾಗಿ ಹೇಳುತ್ತಾ ಇದ್ದ° – ದುರ್ಯೋಧನ°.

ಶ್ಲೋಕ

ಅನ್ಯೇ ಚ ಬಹವಃ ಶೂರಾಃ ಮದರ್ಥೇ ತ್ಯಕ್ತಜೀವಿತಾಃ ।
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ॥೦೯॥

ಪದವಿಭಾಗ

ಅನ್ಯೇ ಚ ಬಹವಃ ಶೂರಾಃ ಮತ್-ಅರ್ಥೇ ತ್ಯಕ್ತ-ಜೀವಿತಾಃ । ನಾನಾ-ಶಸ್ತ್ರ-ಪ್ರಹರಣಾಃ ಸರ್ವೇ ಯುದ್ಧ-ವಿಶಾರದಾಃ ॥
ಅನ್ವಯ
ಅನ್ಯೇ ಚ ಬಹವಃ ಶೂರಾಃ, ಸರ್ವೇ ಮತ್-ಅರ್ಥೇ ತ್ಯಕ್ತ-ಜೀವಿತಾಃ., ನಾನಾ-ಶಸ್ತ್ರ-ಪ್ರಹರಣಾಃ ಯುದ್ಧ-ವಿಶಾರದಾಃ (ಸಂತಿ) ।
 
ಪ್ರತಿಪದಾರ್ಥ

ಅನ್ಯೇ – ಬಾಕಿಪ್ಪೋರು,  ಚ – ಕೂಡ, ಬಹವಃ – ಬಹುಸಂಖ್ಯೇಲಿ, ಶೂರಾಃ – ಶೂರರುಗೊ, ಮತ್ -ಅರ್ಥೇ – ಎನ್ನ ಸಲುವಾಗಿ, ತ್ಯಕ್ತ-ಜೀವಿತಾಃ – ಪ್ರಾಣಾರ್ಪಣಗೆ ಸಿದ್ಧರಾದವು, ನಾನಾ – ಅನೇಕ, ಶಸ್ತ್ರ – ಆಯುಧಂಗಳಿಂದ, ಪ್ರಹರಣಾಃ – ಸಜ್ಜಿತರಾದವು, ಸರ್ವೇ – ಎಲ್ಲೋರೂ,  ಯುದ್ಧ-ವಿಶಾರದಾಃ (ಸಂತಿ) – ಯುದ್ಧಲ್ಲಿ ಅನುಭವಪಡೆದವು ಆಗಿದ್ದವು.

ಅನ್ವಯಾರ್ಥ

ಎನಗೆ ಬೇಕಾಗಿ ಪ್ರಾಣವನ್ನೇ ಕೊಡ್ಳೆ ಸಿದ್ಧರಾಗಿಪ್ಪ ಇನ್ನೂ ಅನೇಕ ವೀರಂಗೊ ಇದ್ದವು. ಅವೆಲ್ಲೋರು ವಿವಿಧ ಅಸ್ತ್ರ ಶಸ್ತ್ರವ ಹೊಂದಿದವು. ಎಲ್ಲಾರು ಯುದ್ಧ ವಿಶಾರದಂಗಳೆ.
ತಾತ್ಪರ್ಯ / ವಿವರಣೆ
ಜಯದ್ರಥ°, ಕೃತವರ್ಮ°, ಶಲ್ಯ° ಮುಂತಾದವರ ನೆಂಪಿಸಿಗೊಂಡು ಇವೆಲ್ಲರ ಬೆಂಬಲ ಇಪ್ಪಗ ವಿಜಯ ತನಗೆ ಸಿಕ್ಕುಗೋ ಹೇಳ್ವ ಒಂದು ರೀತಿ ಹುಸಿ ವಿಶ್ವಾಸವೂ ಒಳಂದೊಳ.

ಮೇಲ್ನೋಟಕ್ಕೆ ನೋಡಿರೆ ದುರ್ಯೋಧನ° ತನ್ನ ಕಡೆಯ ವೀರರ ಬಗ್ಗೆ ಹೇಳುತ್ತಾಂಗೆ ಕಂಡರೂ ಅವ ಹೇಳುತ್ತಿಪ್ಪ ವಿಷಯವೇ ಬೇರೆ. “ಎಲ್ಲೋರು ಇಲ್ಲಿ ತಮ್ಮ ಪ್ರಾಣ ಕೊಡ್ಳೆ ಬಂದವು” ಹೇಳುವ ಕುಹಕೋಕ್ತಿ.

ಶ್ಲೋಕ

ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ ।
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ॥೧೦॥

ಪದವಿಭಾಗ

ಅಪರ್ಯಾಪ್ತಮ್ ತತ್ ಅಸ್ಮಾಕಮ್ ಬಲಮ್ ಭೇಷ್ಮ-ಅಭಿರಕ್ಷಿತಮ್ । ಪರ್ಯಾಪ್ತಮ್ ತು ಇದಮ್ ಏತೇಷಾಮ್ ಬಲಮ್ ಭೀಮ-ಅಭಿರಕ್ಷಿತಮ್ ॥
ಅನ್ವಯ
ಅಸ್ಮಾಕಂ ಭೀಷ್ಮ-ಅಭಿರಕ್ಷಿತಂ ತತ್ ಬಲಮ್ ಅಪರ್ಯಾಪ್ತಮ್, ಏತೇಷಾಂ ತು ಭೀಮ-ಅಭಿರಕ್ಷಿತಮ್ ಇದಂ ಬಲಂ ಪರ್ಯಾಪ್ತಮ್  (ಅಸ್ತಿ) ।

ಪ್ರತಿಪದಾರ್ಥ

ಅಸ್ಮಾಕಮ್ – ನಮ್ಮ, ಭೀಷ್ಮ-ಅಭಿರಕ್ಷಿತಮ್ (ಭೀಷ್ಮೇನ ಅಭಿರಕ್ಷಿತಮ್) – ಪಿತಾಮಹ ಭೀಷ್ಮರಿಂದ ಪರಿಪೂರ್ಣವಾಗಿ ರಕ್ಷಿತವಾಗಿಪ್ಪ, ತತ್ ಬಲಮ್ – ಆ ಬಲವು, ಅಪರ್ಯಾಪ್ತಮ್ – ಅಪರಿಮಿತವಾದ್ದು (ಅಳವಲೆಡಿಯದ್ದು), ಏತೇಷಾಮ್ ತು – ಇವರದ್ದಾದರೋ (ಈ ಪಾಂಡವರದ್ದದಾರೋ), ಭಿಮ-ಅಭಿರಕ್ಷಿತಮ್ (ಭೀಮೇನ ಅಭಿರಕ್ಷಿತಮ್) – ಭೀಮನಿಂದ ಬಹು ಎಚ್ಚರಿಕೆಂದ ರಕ್ಷಿತವಾಗಿಪ್ಪ, ಇದಮ್ ಬಲಮ್ – ಈ  ಬಲವು, ಪರ್ಯಾಪ್ತಮ್ (ಅಸ್ತಿ) – ಪರಿಮಿತವಾದ್ದು (ಸೀಮಿತವಾದ್ದು) ಆಗಿದ್ದು. 

ಅನ್ವಯಾರ್ಥ

ಅಜ್ಜ° ಭೀಷ್ಮನಿಂದ ಪರಿಪೂರ್ಣವಾಗಿ ರಕ್ಷಿತವಾಗಿಪ್ಪ ನಮ್ಮ  ಆ ಸೇನಾಬಲವು ಅಪರಿಮಿತವಾದ್ದಾಗಿದ್ದು (ಅಳತೆಗೆ ಮೀರಿದ್ದಾಗಿದ್ದು/ಬಲವಂತವಾದ್ದು). ಭೀಮನಿಂದ ರಕ್ಷಿಸಲ್ಪಟ್ಟ ಈ (ಪಾಂಡವರ) ಸೇನಾಶಕ್ತಿಯಾದರೋ ಪರಿಮಿತವಾಗಿಪ್ಪದಾಗಿದ್ದು (ಸೀಮಿತವಾಗಿಪ್ಪದಾಗಿದ್ದು/ಬಲಹೀನವಾದ್ದು).

ತಾತ್ಪರ್ಯ / ವಿವರಣೆ

ಇಲ್ಲಿ ದುರ್ಯೋಧನ° ಎರಡು ಸೈನ್ಯಂಗಳ ಶಕ್ತಿಯ ಹೋಲುಸಿ ಅಂದಾಜು ಮಾಡ್ತ ಇದ್ದ°. ಬಲಶಾಲಿ ಭೀಮನ ಕಣ್ಗಾವಲಿಲ್ಲಿಪ್ಪ ಈ ಪಾಂಡವರಸೇನೆ ಎಷ್ಟಾರೂ ಪರಿಮಿತವಾದ್ದೆ (ಅಲ್ಪವಾದ್ದೆ), ಭೀಷ್ಮನ ಮುಂದಾಳುತ್ವಲ್ಲಿ ಇಪ್ಪ ಆ ನಮ್ಮ ಸೇನೆ ಅಪರಿಮಿತವಾದ್ದು ಹೇದು ಕುಹಕತನದ ಮಾತು.  ಮಹಾಸಮರ್ಥರು ಹೊಂದಿಪ್ಪ ಈ ಪಾಂಡವರ ಗೆಲ್ಲುಲೆ ಎಡಿಗೊ ಹೇಳ್ವ ಸಂದೇಹ ಬಲವಾಗಿ ಇಪ್ಪದಾದರೂ ಅದ್ವಿತೀಯ ಅನುಭವಶಾಲೀ ಪಿತಾಮಹ° ಭೀಷ್ಮರಂತಹ ದಂಡನಾಯಕ° ಮತ್ತು ಇತರ ಶಕ್ತಿಗೊ ತನ್ನ ವಶ ಇಪ್ಪಗ ಆ ಭೀಮನಂತವು ಯಾವ ಲೆಕ್ಕ!, ಹಾಂಗಾಗಿ ತಾನೇ ಜಯಶಾಲ ಆಗಿ ಬಿಡ್ವೆ ಹೇಳ್ವ ಹುಸಿ ಧೈರ್ಯ ನಿರ್ಣಯ ತನ್ನಷ್ಟಕ್ಕೇ ದುರ್ಯೋಧನಂಗೆ!.

ಮೇಲ್ನೋಟಕ್ಕೆ ಇಲ್ಲಿ ನೇರ ಅರ್ಥ ಒಂದು ಕೊಡುತ್ತ ಇದ್ದರೆ ಅಂತರಾರ್ಥ ಬೇರೆಯೇ ಎದ್ದು ಕಾಣುತ್ತು. ಅಪರ್ಯಾಪ್ತಂ , ಪರ್ಯಾಪ್ತಂ ಹೇಳ್ವ ಪದಂಗೊ ಇಲ್ಲಿ ವಿಶಿಷ್ಠವಾಗಿ ಜೋಡಿಸಿಯೊಂಡಿದ್ದು. ಮೇಲ್ನೋಟಕ್ಕೆ ಅಪರ್ಯಾಪ್ತಂ ಅಪರಿಮಿತವಾಗಿದ್ದು ಹೇಳ್ವ ಅರ್ಥ ಹೇಳುತ್ತರೂ ಇಲ್ಲಿ ನ ಪರ್ಯಾಪ್ತಂ ಹೇಳ್ವ ಅಂತರಂಗದ ಹೆದರಿಕೆ ಸೂಚಿಸುತ್ತು. ಪರ್ಯಾಪ್ತಂ -ಮಿತವಾಗಿಪ್ಪದು ಹೇಳ್ತದು ಸಾಕಷ್ಟು ಇದ್ದು ಹೇಳ್ತ ದುರ್ಯೋಧನನ ಕುಹಕೋಕ್ತಿ. ಭೀಷ್ಮಾದಿ ಪ್ರಮುಖರ ಗಡಣವೇ ನಮ್ಮೊಟ್ಟಿಂಗೆ ಇದ್ದರೂ ಭೀಮನ ಮಿತವಾದ ಸೇನಾಬಲದ ಎದುರೆ ನಮ್ಮ ಈ ಸೇನಾಬಲ ಶಕ್ತಿ ಸಾಕೋ ಹೇದು ಭೀಷ್ಮಂಗೆ ಮಾತಿಲ್ಲಿ ಹೆಟ್ಟುತ್ತ ಇದ್ದ ಕೌರವ.

 

   

ಒಂದು ಅಕ್ಷೌಹಿಣೀ ಹೇಳಿರೆ –

{ಏಕೋ ರಥೋ ಗಜಶ್ಚೈಕೋ ನರಾಃ ಪಂಚ ಪದಾತಯಃ ।
ತ್ರಯಶ್ಚ ತುರಗಾಸ್ತಸ್ತಂಜ್ಞೈಃ ಪತ್ತಿರಿತ್ಯಭಿಧೀಯತೇ ॥
ಪತ್ತಿಂ ತು ತ್ರಿಗುಣಾಮೇತಾಮಾಹುಃ ಸೇನಾಮುಖಂ ಬುಧಾಃ ।
ತ್ರೀಣಿ ಸೇನಾಮುಖಾನ್ಯೇಕೋ ಗುಲ್ಮ ಇತ್ಯಭಿಧೀಯತೇ॥
ತ್ರಯೋ ಗುಲ್ಮ ಗಣೋ ನಾಮ ವಾಹಿನೀ ತು ಗಣಾಸ್ತ್ರಯಃ ।
ಸ್ಮೃತಾಸ್ತಿಸ್ರಸ್ತು ವಾಹಿನ್ಯಃ ಪೃತನೇತಿ ವಿಚಕ್ಷಣೈಃ ॥
ಚಮೂಸ್ತು ಪೃತನಾಸ್ತಿಸ್ರಸ್ತಿಸ್ತ್ರಶ್ಚಂವಸ್ತ್ವನೀಕಿನೀ ।
ಅನೀಕಿನೀಂ ದಶಗುಣಾಂ ಪ್ರಾಹುರಕ್ಷೌಹಿಣೀಂ ಬುಧಾಃ ॥ (ಮ.ಭಾ.೧.೨.೨ = ೧೯-೨೨)

೧ ಗಜ + ೧ ರಥ + ೫ ಪದಾತಿಗೊ + ೩ ಅಶ್ವಂಗೊ  = ೧ ಪತ್ತಿ.
೩ ಪತ್ತಿಗೊ = ೧ ಸೇನಾಮುಖ
೩ ಸೇನಾಮುಖಂಗೊ = ೧ ಗುಲ್ಮ
೩ ಗುಲ್ಮಂಗೊ = ೧ ಗಣ
೩ ಗಣಂಗೊ = ೧ ವಾಹಿನೀ
೩ ವಾಹಿನಿಗೊ = ೧ ಪೃತನಾ
೩ ಪೃತನಂಗೊ = ೧ ಚಮೂ
೩ ಚಮೂಗೊ = ೧ ಅನೀಕಿನೀ
೧೦ ಅನೀಕಿನಿಗೊ = ೧ ಅಕ್ಷೌಹಿಣೀ

೧ ಅಕ್ಷೌಹಿಣೀ = ೨೧೮೭೦ ಆನೆಗೊ + ೨೧೮೭೦ ರಥಂಗೊ + ೬೫೬೧೦ ಕುದುರೆಗೊ + ೧೦೯೩೫೦ ಪದಾತಿಗೊ.}

 (ಮುಂದುವರಿತ್ತು..)

~*~*~

ಭಗವದ್ಗೀತಾ ಶ್ರವಣಕ್ಕೆ:
ಮೊದಲ ಹತ್ತು ಶ್ಲೋಕಂಗೊ:

[audio:audio/Bhagavadgeete/CHAPTER_01_SHLOKA_1-10.mp3]

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtsey: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

20 thoughts on “ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 1 – 10

  1. >>> ಅಜ್ಜ° ಭೀಷ್ಮನಿಂದ ಪರಿಪೂರ್ಣವಾಗಿ ರಕ್ಷಿತವಾಗಿಪ್ಪ ನಮ್ಮ ಆ ಸೇನಾಬಲವು ಅಪರಿಮಿತವಾದ್ದಾಗಿದ್ದು (ಅಳತೆಗೆ ಮೀರಿದ್ದಾಗಿದ್ದು). ಭೀಮನಿಂದ ರಕ್ಷಿಸಲ್ಪಟ್ಟ ಈ (ಪಾಂಡವರ) ಸೇನಾಶಕ್ತಿಯಾದರೋ ಪರಿಮಿತವಾಗಿಪ್ಪದಾಗಿದ್ದು (ಸೀಮಿತವಾಗಿಪ್ಪದಾಗಿದ್ದು).
    ಬನ್ನಂಜೆಯವರ ವ್ಯಾಖ್ಯಾನಲ್ಲಿ ಇದಕ್ಕೆ ವಿರುದ್ಧವಾಗಿ ಬಪ್ಪದು. ಅಪರ್ಯಾಪ್ತ ಹೇಳಿರೆ ಅಸಮರ್ಥ. ಹಾಂಗೆ ಹೇಳಿರೆ ಇವರ ಈ ಸೇನೆಗಿಂತ ನಮ್ಮ ಆ ಸೇನೆ ಅಸಮರ್ಥ ಹೇಳಿ ಬನ್ನಂಜೆಯವರ ವಿವರಣೆ ಆವುತ್ತು.

  2. ನಮ್ಮ ಭಾಷೆಲಿ ಭಗವದ್ಗೀತೆಯ ಅರ್ಥ!
    ತುಂಬಾ ಒಳ್ಳೆ ಪ್ರಯತ್ನ ಚೆನ್ನೈಅಣ್ಣೊ. ಖುಶೀ ಆತು.
    ಮಕ್ಕೊಗೆ ಶಾಲೆಲಿ ಗೀತಾಕಂಠಪಾಠ ಸ್ಪರ್ಧೆ ಇದ್ದರೆ ಮಾತ್ರ ಭಗವದ್ಗೀತೆಯ ಪುಸ್ತಕ ಬಿಡುಸುವ ಅಭ್ಯಾಸ ಮಡಿಕ್ಕೊಂಡವು ಹಲವು ಜನ.

    ನಿಂಗಳ ಈ ಪ್ರಯತ್ನ ಸಕಾರಾತ್ಮಕ ಬದಲಾವಣೆ ತರಳಿ ಹೇಳಿ ಆಶಿಸುತ್ತೆ.

  3. ಲಾಯಿಕಲ್ಲಿ ವಿವರುಸಿ ಸ೦ಶಯ ನಿವಾರಿದ್ದಕ್ಕೆ ಗುರಿಕ್ಕಾರರಿ೦ಗೂ, ಚೆನ್ನೈ ಭಾವ೦ಗೂ ಧನ್ಯವಾದ೦ಗೊ.

  4. ಉತ್ತಮ ಪ್ರಯತ್ನ.

    ಮ೦ಗಳುರು ಮಾಣಿ ಹೇಳಿದ ” ಅ೦ಬ್ರೀಪು ಮಾಡಡಿ” ಹೇಳಿದ ವಿಶಯ ಎನಗುದೆ ಹಾನ್ಗೆ ತೋರಿತ್ತು.

    ಏಕಲವ್ಯನ ಹೆಬ್ಬೆರಳು ಕೇಳಿದ ದ್ರೊಣಾಚಾರ್ಯ ಪಕ್ಶಪಾತ ಮಾಡಿದ್ದು ಮಾ೦ತ್ರ ಗೊನ್ತಿತ್ತು. ಅವನ ಇನ್ನೊ೦ದು ಹೊಡೆಲಿಪ್ಪ ನಿಷ್ಪಕ್ಶಪಾತ ಬುದ್ದಿ ಗೊನ್ತಿತ್ತಿಲ್ಲೆ.

    ಪಾನ್ದವರು ಹೇಳುವಲ್ಲಿ ಪಾನ್ದವನ್ಗೊ ಹೇಳುದು ಸರಿಯೊ?
    ಮಹಾರಥರು =ಮಹಾರಥ೦ಗೊ?
    ಸಮರ್ಥರು= ಸಮರ್ಥ೦ಗೊ?
    ಸ೦ಶಯ ನಿವಾರಣೆ ಮಾಡುವಿ ಹೇಳಿ ಗ್ರೇಶುತ್ತೆ.

    1. ಭಾಗ್ಯಕ್ಕಂಗೆ ನಮಸ್ಕಾರಂಗೊ.
      ಚೆನ್ನೈಭಾವ ಅಂಬೆರ್ಪು ಇಲ್ಲದ್ದೇ, ಹದ್ನೆಂಟು ಅಧ್ಯಾಯವನ್ನುದೇ ನಿಧಾನಕ್ಕೆ ವಿವರವಾಗಿ ಬೈಲಿಂಗೆ ಹೇಳ್ತವು.
      ನಿಂಗೊ ಭಗವದ್ಗೀತೆಯ ತುಂಬ ಓದುತ್ತ ಸಂಗತಿ ನವಗೆ ಗೊಂತಿದ್ದು; ಭಗವದ್ಗೀತೆಯ ಈ ಶುದ್ದಿಯ ನಿಂಗಳ ಪೈಕಿಯೋರಿಂಗೂ ತಿಳುಶಿ. ಎಲ್ಲೋರುದೇ ಅದರ ಅರ್ತ ತಿಳ್ಕೊಂಬೊ°.
      ಚೆನ್ನೈಭಾವನ ಪ್ರಯತ್ನಕ್ಕೆ ಪ್ರೋತ್ಸಾಹ ಕೊಡುವೊ°.

      ನಿಂಗೊ ಕೇಳಿದ ಭಾಷಾ ಸಂಬಂಧಿ ಪ್ರಶ್ನೆಗೆ ಉತ್ತರ ಕೊಡ್ಳೆ ಪ್ರಯತ್ನ ಮಾಡ್ತೆ.
      ಪಾಂಡುವಿನ ಮಕ್ಕಳ ಪಾಂಡವರು – ಹೇಳ್ತವು.
      ತಪ್ಪೇನಿಲ್ಲೆ! ಕನ್ನಡವುದೇ ನಮ್ಮ ಭಾಶೆಯೇ.
      ಮೂಡ್ಳಾಗಿಯಾಣ ಹವ್ಯಕಲ್ಲಿ ಕನ್ನಡ ಪ್ರತ್ಯಯಂಗೊ ಧಾರಾಳ ಇದ್ದು.
      ಸಾಮಾನ್ಯವಾಗಿ ಕನ್ನಡ ಬಳಕೆಯನ್ನೇ ಉಪಯೋಗುಸಿದ ನವಗುದೇ ಪಕ್ಕನೆ ಬಂದಿಕ್ಕುದು ’ಪಾಂಡವರು’ ಹೇಳಿಯೇ.

      ಕನ್ನಡಲ್ಲಿ ಬಹುವಚನಕ್ಕೆ ’ವರು’ ಹೇಂಗೆ ಸೇರುಸುತ್ತೋ, ಕುಂಬ್ಳೇಸೀಮೆ ಹವ್ಯಕಲ್ಲಿ ’ವಂಗೊ’ ಹೇಳಿ ಸೇರುಸುಗು.
      ಹಾಂಗಾಗಿ ಪಾಂಡುವಿನ ಮಕ್ಕೊ ಪಾಂಡವಂಗೊ – ಹೇಳುಗು.
      ಆ ರೀತಿಲಿ ನೋಡಿರೆ ಕೌರವಂಗೊ, ಮಹಾರಥಂಗೊ, ಅಧ್ಯಾಯಂಗೊ – ಎಲ್ಲವುದೇ ಸರಿ.

      ಒಟ್ಟಾಗಿ ಹೇಳ್ತರೆ, ಪಾಂಡವಂಗೊ ಹೇಳಿರೆ ಕುಂಬ್ಳೆ ಸೀಮೆಯ ಭಾಶೆಗೆ ಹೆಚ್ಚು ಹತ್ತರೆ ಆಗಿರ್ತು; ಅಂತೂ – ನಮ್ಮ ಬೈಲಿಲಿ ಎರಡೂ ಬಳಕೆಯೂ ಸರಿಯೇ.

      ಭಗವದ್ಗೀತೆಯ ಎಲ್ಲಾ ಸಂಚಿಕೆಗೂ, ನಿಂಗಳ ಅರ್ಥಗರ್ಭಿತ ಒಪ್ಪಂಗೊ ಬರಳಿ.
      ಹರೇರಾಮ, ಹರೇಕೃಷ್ಣ

    2. ಗುರಿಕ್ಕಾರ್ರಿಂಗೆ ಧನ್ಯವಾದಂಗೊ. ಗುರಿಕ್ಕಾರ್ರ ಅಭಿಮತವೇ ಎನ್ನ ವಿಚಾರವೂ. ಬಳಕೆಲಿ ಹವ್ಯಕ ಭಾಷೆ ಸ್ಥಳಂದ ಸ್ಥಳಕ್ಕೆ ಚೂರು ವ್ಯತ್ಯಾಸ ಇದ್ದು. ಅದರ ಅಶುದ್ಧ ಹೇಳಿ ಹೇಳ್ಳೆ ಎಡಿಯ. ಕುಂಬ್ಳೆ ಸೀಮೆಲಿ ‘ಎನಗೆ’ ಹೇಳಿರೆ ಪಂಜ ಸೀಮೆಲಿ ಪುಚ್ಚೆಪ್ಪಾಡಿ ಮಹೇಶಣ್ಣ ‘ಎನಿಗೆ’ ಹೇಳುವದು. ಆವ್ತಿಲ್ಲೆ – ಆಗ್ತಿಲ್ಲೆ., ಅಪ್ಪಚ್ಚಿ – ಚಿಕ್ಕಯ್ಯ, ಮಡುಗು – ಇರ್ಸು. ಜನರು ಹೇಳ್ವದರ ಜನಂಗೊ (ಜನರುಗೊ) ಹೇಳಿ ಹೇಳ್ತಾಂಗೆ.

      ಭಾಗ್ಯಕ್ಕಂಗೂ ಧನ್ಯವಾದ.

      1. ಸರಿಯಾಗಿ ಹೇಳ್ತರೆ ಅದು ‘ಪಾಂಡವಂಗೊ’ ಅಲ್ಲ ‘ಪಾಂಡವಂದಿರು’ ಅಥವಾ ‘ಪಾಂಡವಂದ್ರು’. ಹೀಂಗಿಪ್ಪ ಪ್ರತ್ಯಯ ಈಗಾಣ ಕನ್ನಡದ ನಿತ್ಯದ ಬಳಕೆಲಿ ಇಲ್ಲದ್ದರೂ ಕನ್ನಡ ಭಾಷೆಲಿ ಇಪ್ಪದು ನಿಜವೇ.
        ನಾವು ಭಟ್ಟಕ್ಕೊ ಹೇಳಿ ಹೇಳ್ತು.
        ಭಟ್ಟರ್ + ಕಳ್ = ಭಟ್ಟರ್ಕಳ್ > ಭಟ್ಟಕ್ಕೊ > [ಭಟ್ಟರುಗೊ]

        1. ಅಕ್ಕು ಭಾವ. ಆಡುಮಾತಿಲ್ಲಿ ಬಪ್ಪಾಂಗೆ ಬರಕ್ಕೊಂಡು ಹೋದ್ದಿದರ. ಇನ್ನು ವ್ಯಾಕರಣ ಶುದ್ಧವಾಗಿ ನೋಡಿದ್ದಿಲ್ಲೆ. ಬೊಳುಂಬು ಭಾವಂಗೆ ಧನ್ಯವಾದ.

  5. ಧುರ್ಯೋಧನ ಹೇಳ್ತಾ ಇಪ್ಪದು ಗುರುವಿಂಗೋ, ಅಥವಾ ಅವಂಗೋ ಹೇಳುದೇ ಸಂಶಯ…
    ಒಂದೇ ಮಾತಿಲ್ಲಿ ಗುರುಗಳ (ನಿಂಗಳ ಯುಧ್ಧ ನೀತಿ ಪ್ರಯೋಜನ ಇಲ್ಲೆ ಹೇಳಿ) ಕುತ್ತಿದ ಹಾಂಗೂ ಆಯೆಕು,
    ಸಂತಕ್ಕೆ ಧರ್ಯ ತುಂಬಿದ ಹಾಂಗೂ ಆಯೆಕು..
    ಕವಿಯ ಮೆಚ್ಚೆಕಾದ್ದೇ..
    ತುಂಬ ಸರಳವಾಗಿ ಕೊಟ್ಟಿದಿ ಭಾವಾ..
    ಸ್ವರವೂ ಸಿಕ್ಕಿದ್ದು ಖುಶಿ ಆತಿದಾ.

  6. ಶ್ಲೋಕಂಗೊ, ಅದರ ಧ್ವನಿ, ಶ್ಲೋಕಂಗಳ ಬಿಡುಸಿ ಬಿಡುಸಿ ಅರ್ಥ, ಒಟ್ಟು ಭಾವಾರ್ಥ, ಅದರ ಹಿನ್ನೆಲೆ.
    ಎಲ್ಲವನ್ನೂ ಕೊಟ್ಟು ಬಾಬೆಗೊಕ್ಕೆ ಅಶನವ ನುರುದು ರೆಜ ರೆಜವೇ ಬಾಯಿಗೆ ಹಾಕಿದ ಹಾಂಗೆ ಆತು.
    ಧನ್ಯವಾದಂಗೊ

  7. ಚೆನ್ನೈ ಭಾವ ಬರೆದ್ದು ಲಾಯ್ಕ ಆಯಿದು.ದುರ್ಯೋಧನ ಎರಡು ಬಲಂಗಳ ವರ್ಣಿಸಿದ ಹೇಳುವಲ್ಲಿ ಅಪರ್ಯಾಪ್ತ=ಅಳೆಯಲಾಗದ,ಮತ್ತೆ ಪರ್ಯಾಪ್ತ=ಪರಿಮಿತವಾದ ಹೇಳಿ ಅರ್ಥ.ಅದೇ ದುರ್ಯೋಧನನ ಮನಸ್ಸಿಲಿದ್ದದು.
    ಆದರೆ,ವಿಧಿಯ ವಿಪರೀತವ ನೋಡಿ!
    ಅಪರ್ಯಾಪ್ತ=ಸಾಕಾಗದ್ದಷ್ಟು, ಪರ್ಯಾಪ್ತ=ಬೇಕಾದಷ್ಟು ಹೇಳುವ ಅರ್ಥಲ್ಲಿ ಪರಿಣಮಿಸಿತ್ತು-ಯುದ್ಧದ ಅಕೇರಿಗೆ![ಈ ಶಬ್ದಂಗೊಕ್ಕೆ ಪ್ರಸಿದ್ಧವಾಗಿ ಈಗ ಇಪ್ಪ ಅರ್ಥ ಗಮನಿಸಿ]
    ವ್ಯಾಸ ಮಹರ್ಷಿಗೆ ನಮೋ ನಮಃ

    1. ಭಗವದ್ಗೀತೆಯ ಅನುಭವಿಸಿ ಓದಿದ ಪ್ರತಿಯೋಬ್ಬಂಗೂ ಅನಂತಾನಂತ ಧನ್ಯವಾದಂಗೋ. ಅಂತೇ ಓದಿರೆ ಬರೇಶ್ಲೋಕಾರ್ಥ ಕಂಡುಗೊಂಬಲೆಡಿಗಷ್ಟೇ. ಗೀತೆಯೊಳಹೊಕ್ಕಿ ಚಿಂತಿಸಿರೆ ‘ನಿತ್ಯಜೀವನ ಸಾರ’ ಇಪ್ಪದು ಕಂಡುಗೊಂಬಲಕ್ಕು. ಅಂದಿಂಗೂ ಇಂದಿಂಗೂ ಪ್ರಚಲಿತ ಜೀವನ ಕ್ರಮಕ್ಕೆ ಅನ್ವಯಿಸಿ ಅರ್ಥಮಾಡಿಗೊಂಬಲಕ್ಕು. ಪ್ರತಿಯೊಂದು ಮನೇಲಿಯೂ ಭಗವದ್ಗೀತೆ ಝೇಂಕರಿಸಲಿ.

      ನಿಂಗೊ ಎಲ್ಲೋರ ಪ್ರೋತ್ಸಾಹ ಸದಾ ಇರಲಿ.

      1. ಭಾವಾ.. ನಿಂಗಳ ಪ್ರಯತ್ನ ಸ್ವಾಗತಾರ್ಹ..
        ಹಳೇ ವಿಷಯಂಗಳ ಹೊಸ ಹೊಸತ್ತಾಗಿ ಓದ್ಲೆ ಆತಿದಾ.. :):)

        (ಓ ಭಾವಾ,
        ಆಯಿದಿಲ್ಲೆ ಇಡೀ ಓದಿ. ನಾವೆಲ್ಲ ಒಪ್ಪ ಕೊಟ್ಟು ಆಯೆಕಷ್ಟೆ.
        ನಿಂಗಳದ್ದೆಂತ ಧನ್ಯವಾದಕ್ಕೆ ಅರ್ಜೆಂಟಪ್ಪದು?)

  8. ವಿವರಣೆ ಲಾಯ್ಕಾಯಿದು ಮಾವ..ಧನ್ಯವಾದ೦ಗೊ

  9. ಭಗವದ್ಗೀತೆಯ ಅರ್ಥವ ಹವ್ಯಕ ಭಾಷೆಲಿ ಓದುತ್ತ ಭಾಗ್ಯವ ಒದಗುಸಿಕೊಟ್ಟ ಚೆನ್ನೈಭಾವಂಗೆ ಧನ್ಯವಾದಂಗೊ. ಧ್ವನಿಯನ್ನುದೆ ಜೊತೆಲಿ ಕೊಟ್ಟದು ಲಾಯಕಾತು. ಉತ್ತಮ ಆಲೋಚನೆ, ಮುಂದುವರಿಯಲಿ ಸರಣಿ.

  10. ಚೆನ್ನೈ ಭಾವನ ಸಾಧನೆಗೆ ನಮೋ ನಮಃ, ಹೀಂಗೇ ಮುಂದುವರಿಯಲಿ. ಧನ್ಯವಾದಂಗೊ.

  11. ಶುರುವಿಂಗೆ ಶಬ್ದಾರ್ಥ ವಿವರಿಸಿ, ಮತ್ತೆ ಭಾವಾರ್ಥ ಕೊಡುವ ನಿಂಗಳ ಕ್ರಮ ತುಂಬ ಮೆಚ್ಚಿಕೆ ಆತು, ಭಾವ.
    ಹೀಂಗೆ ಮುಂದುವರಿಯಲಿ.

  12. ಅರ್ಥ ಸಹಿತ ವಿವರಣೆ ಕೊಟ್ಟದು ಚೆಂದ ಆಯಿದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×