Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 09 – ಶ್ಲೋಕಂಗೊ 18 – 26

ಬರದೋರು :   ಚೆನ್ನೈ ಬಾವ°    on   18/10/2012    3 ಒಪ್ಪಂಗೊ

ಚೆನ್ನೈ ಬಾವ°

ಶ್ರೀಮದ್ಭಗವದ್ಗೀತಾ – ನವಮೋsಧ್ಯಾಯಃ – ರಾಜವಿದ್ಯಾರಾಜಗುಹ್ಯಯೋಗಃ – ಶ್ಲೋಕಾಃ 18 – 26

ಶ್ಲೋಕ

ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್ ।
ಪ್ರಭವಃ ಪ್ರಲಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್ ॥೧೮॥

ಪದವಿಭಾಗ

ಗತಿಃ ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಮ್ ಸುಹೃತ್ । ಪ್ರಭವಃ ಪ್ರಲಯಃ ಸ್ಥಾನಮ್ ನಿಧಾನಮ್ ಬೀಜಮ್ ಅವ್ಯಯಮ್॥

ಅನ್ವಯ

ಅಹಂ ಗತಿಃ, ಭರ್ತಾ, ಪ್ರಭುಃ, ಸಾಕ್ಷೀ, ನಿವಾಸಃ, ಶರಣಮ್, ಸುಹೃತ್, ಪ್ರಭವಃ, ಸ್ಥಾನಮ್, ನಿಧಾನಮ್, ಅವ್ಯಯಮ್ ಬೀಜಮ್  ಚ ಅಸ್ಮಿ ।

ಪ್ರತಿಪದಾರ್ಥ

ಅಹಮ್ – ಆನು, ಗತಿಃ – ಗುರಿಯು, ಭರ್ತಾ – ಪೋಷಕ°, ಪ್ರಭು – ಒಡೆಯ, ಸಾಕ್ಷೀ – ಸಾಕ್ಷಿ, ನಿವಾಸಃ – ವಾಸಸ್ಥಾನ, ಶರಣಮ್ – ಆಶ್ರಯ, ಸುಹೃತ್ – ಅತ್ಯಂತ ಆತ್ಮೀಯ ಮಿತ್ರ°, ಪ್ರಭವಃ – ಸೃಷ್ಟಿ, ಪ್ರಲಯಃ – ಪ್ರಳಯ, ಸ್ಥಾನಮ್ – ತಳಹದಿ, ನಿಧಾನಮ್ – ವಿಶ್ರಾಂತಿ ಸ್ಥಾನ, ಅವ್ಯಯಮ್ ಬೀಜಮ್ – ನಾಶರಹಿತನಾದ ಬೀಜವೂ ಆಗಿದ್ದೆ.

ಅನ್ವಯಾರ್ಥ

ಇಡೀ ಈ ಜಗತ್ತಿಂಗೆ ಆನೇ ಪರಮೋನ್ನತ ಗುರಿ, ಪೋಷಕ°, ಯಜಮಾನ° (ರಾಜ°, ಒಡೆಯ°), ಸಾಕ್ಷಿ, ವಾಸಸ್ಥಾನ, ಆಶ್ರಯ°, ಆಪ್ತ ಮಿತ್ರ°, ಸೃಷ್ಟಿ, ಸ್ಥಿತಿ, ಪ್ರಳಯ, ಆಧಾರ°, ವಿಶ್ರಾಂತಿಸ್ಥಾನ, ಮತ್ತೆ ಶಾಶ್ವತವಾದ ಬೀಜವೂ ಆಗಿದ್ದೆ.

ತಾತ್ಪರ್ಯ / ವಿವರಣೆ

ಈ ಜಗತ್ತಿನೊಟ್ಟಿಂಗೆ ತನ್ನ ಸಂಬಂಧವ ವಿವರಿಸಿಗೊಂಡಿದ್ದ ಭಗವಂತ° ಮತ್ತೆ ಮುಂದುವರುಸುತ್ತ°. ‘ಅಹಮ್ ಗತಿಃ’  – ಕಟ್ಟಕಡೆಯ ಗಮ್ಯ / ಗುರಿ ಹೇಳ್ವದರ ಗತಿ ಹೇಳಿ ಹೇಳುವದು. ಜೀವಿಯ ಕಟ್ಟಕಡೆಯ ಗುರಿ ಭಗವಂತನ ಸೇರುವದು. ಇಲ್ಲಿ ಬದುಕ್ಕುವದಕ್ಕೆ ಅವಕಾಶವೇ ಇಲ್ಲೆ ಹೇಳಿ ಅಪ್ಪಗ ‘ಆನಿದ್ದೆ’ ಹೇಳಿ ರಕ್ಷಣೆ ಕೊಡುವವ ‘ಗತಿ’. ಸಂಸಾರಲ್ಲಿ ಮಾತ್ರವಲ್ಲ, ಮೋಕ್ಷಲ್ಲಿಯ್ಯೂ ಆಶ್ರಯ ಕೊಡುವವ° ಭಗವಂತ – ಗತಿಃ, ಅವನೇ ಸದ್ಗತಿಃ. ತಪ್ಪು ಮಾಡಿರೆ ಅವನೇ ದುರ್ಗತಿ ಕೂಡ. ವಿಶ್ವದ ಸಮಸ್ತ ಹೊಣೆಯನ್ನೂ ಹೊತ್ತು , ಪ್ರಪಂಚಲ್ಲಿ ಪ್ರತಿಯೊಬ್ಬನೂ ಎಂತ ಮಾಡುತ್ತ°, ಹೇಂಗಿದ್ದ° ಹೇಳಿ ನೋಡಿಗೊಂಬ ಪ್ರಭು ಅವ°. ಅಂತರಂಗಲ್ಲಿಯೂ ಬಹಿರಂಗಲ್ಲಿಯೂ ಎಂತಕೆ, ಸರ್ವತ್ರವ್ಯಾಪಿಯಾಗಿಪ್ಪ ಭಗವಂತ° – ಸಮಸ್ತ ಕಾರ್ಯಂಗೊಕ್ಕೆ ನಿಜವಾದ ಸಾಕ್ಷಿ. ನಾವು ವಾಸಮಾಡುತ್ತಿಪ್ಪದು ಆ ಭಗವಂತನ ಮನೆಲಿ – “ಈಶಾವಾಸ್ಯಮ್ ಇದಮ್ ಸರ್ವಮ್ ….”. ಈ ವಿಶ್ವವೆಂಬ ಮನೆಯ ನಿರ್ಮಿಸಿ ಅದರಲ್ಲಿ ನವಗೆ ಆಶ್ರಯ ಕೊಟ್ಟು, ನವಗೆ ಬದುಕ್ಕಲೆ ವ್ಯವಸ್ಥೆ ಮಾಡಿದ ಆ ಭಗವಂತ° – ನಿವಾಸಃ, ಅವನೇ ಎಲ್ಲೋರಿಂಗು ಆಸರೆ, ಆಪತ್ಕಾಲಲ್ಲಿ ರಕ್ಷಣೆ (ಶರಣ) ಕೊಡುವ ಆತ್ಮೀಯ ಗೆಳೆಯ° ಆ ಭಗವಂತ°. ಇಲ್ಲಿ ‘ಸುಹೃತ್’-  ಯಾವತ್ತೂ ಒಟ್ಟಿಂಗೇ ಇಪ್ಪ ಗೆಳೆಯ° – ಸಖ ಹೇಳಿ ಹೇಳುವದು, ಹೇಳಿರೆ ಒಡನಾಡಿ. ಸುಹೃತ್ ಹೇಳಿರೆ ದೂರ ಇರಲಿ ಹತ್ರೆ ಇರಲಿ , ನಮ್ಮ ಹೃದಯಕ್ಕೆ ಸ್ಪಂದಿಸಿ ಹಿತಚಿಂತಕನಾಗಿಪ್ಪವ°. (“ಪಾಪಾನ್ನಿವಾರಯತಿ ಯೋಜಯತೇ ಹಿತಾಯ, ಗುಹ್ಯಂ ನಿಗೂಹತಿ ಗುಣಾನ್ಪ್ರಕಟೀಕರೋತಿ, ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ, ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ” ಹೇಳಿ ಸನ್ಮಿತ್ರ ಲಕ್ಷಣವ ಸುಭಾಶಿತಲ್ಲಿ ಹೇಳಿದ್ದು). ಭಗವಂತ° ಹೃತ್ಕಮಲ ಮಧ್ಯ ನಿವಾಸಿಯಾಗಿ ನವಗೆ ಸಖನಾಗಿ , ಆಪ್ತನಾಗಿ  ನಮ್ಮ ಕೂಗಿಂಗೆ ಸದಾ ಸ್ಪಂದುಸುವ ‘ಸುಹೃತ್’ ಆಗಿದ್ದ°.

ನಮ್ಮಲ್ಲಿ ಸಾಮಾನ್ಯ ತಿಳುವಳಿಕೆ ಸೃಷ್ಟಿ-ಸ್ಥಿತಿ-ಲಯಕ್ಕೆ ಬ್ರಹ್ಮ-ವಿಷ್ಣು-ಮಹೇಶ್ವರ ಹೇಳಿ. ಇಲ್ಲಿ ಭಗವಂತ° ಹೇಳುತ್ತ° ಅಹಂ “ಪ್ರಭವಃ ಪ್ರಲಯಃ ಸ್ಥಾನಮ್…”  ಜಗತ್ತಿನ ಈ ಸೃಷ್ಟಿಗೆ ಮೂಲ ಕಾರಣ° ಭಗವಂತ°, ಇದರ ಪಾಲುಸುವವ° ಭಗವಂತ°, ಅಕೇರಿಗೆ ಪ್ರಳಯಕಾಲಲ್ಲಿ ಎಲ್ಲವೂ ಅವನಲ್ಲೇ ಹೋಗಿ ಲೀನ ಆವ್ತು .ಹಾಂಗಾಗಿ ಲಯನೂ ಅವನೇ ಆಗಿದ್ದ°. ಪ್ರಳಯಕಾಲಲ್ಲಿ ಸಮಸ್ತ ಜೀವಜಾತವ ಸೂಕ್ಷ್ಮಸ್ಥಿತಿಲಿ ತನ್ನ ಹೊಟ್ಟೆಲಿ ಮಡಿಕ್ಕೊಂಡು ಸಾಂಕುವವನೂ ಆ ಭಗವಂತ°. ಆ ಸೂಕ್ಷ್ಮ ಮತ್ತೆ ಸೃಷ್ಟಿ ಕಾಲಲ್ಲಿ ಚಿಗುರಿ ಅರಳಿ ಹೆಮ್ಮರವಾಗಿ ಬೆಳೆತ್ತಹಾಂಗೆ ಬೀಜಕ್ಷೇಪವ ಮಾಡುವವ, ಎಂದೂ ಅಳಿವಿಲ್ಲದ ಅವ್ಯಯ – ಆ ಭಗವಂತ° ಆಗಿದ್ದ°.

ಶ್ಲೋಕ

ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ ।
ಅಮೃತಂ ಚೈವ ಮೃತ್ಯುಶ್ಚ ಸದಸಚಾಹಮರ್ಜುನ॥೧೯॥

ಪದವಿಭಾಗ

ತಪಾಮಿ ಅಹಮ್ ಅಹಮ್ ವರ್ಷಮ್ ನಿಗೃಹ್ಣಾಮಿ ಉತ್ಸೃಜಾಮಿ ಚ । ಅಮೃತಮ್ ಚ ಏವ ಮೃತ್ಯುಃ ಚ ಸತ್ ಅಸತ್ ಚ ಅಹಮ್ ಅರ್ಜುನ ॥

ಅನ್ವಯ

ಹೇ ಅರ್ಜುನ!, ಅಹಂ ತಪಾಮಿ, ಅಹಂ ವರ್ಷಂ ನಿಗೃಹ್ಣಾಮಿ ಉತ್ಸೃಜಾಮಿ ಚ, ಅಹಮ್ ಏವ ಅಮೃತಂ ಮೃತ್ಯುಃ ಚ, ಅಹಮ್ ಏವ ಸತ್ ಅಸತ್ ಚ ಅಸ್ಮಿ ।

ಪ್ರತಿಪದಾರ್ಥ

ಹೇ ಅರ್ಜುನ! – ಏ ಅರ್ಜುನ!, ಅಹಮ್ ತಪಾಮಿ – ಆನು ಶಾಖವ ನೀಡುತ್ತೆ, ಅಹಮ್ ವರ್ಷಮ್ – ಆನು ಮಳೆಯ, ನಿಗೃಹ್ಣಾಮಿ ಉತ್ಸೃಜಾಮಿ ಚ – ತಡೆಹಿಡಿತ್ತೆ ಕಳುಸುತ್ತೆ ಕೂಡ, ಅಹಮ್ ಏವ ಅಮೃತಮ್ ಮೃತ್ಯುಃ ಚ – ಆನೇ ಅಮರತ್ವವೂ ಮೃತ್ಯುವೂ ಆಗಿದ್ದೆ, ಅಹಮ್ ಏವ – ಆನೇ, ಸತ್ ಅಸತ್ ಚ ಅಸ್ಮಿ – ಚೇತನವೂ ಜಡವೂ ಕೂಡ ಆಗಿದ್ದೆ.

ಅನ್ವಯಾರ್ಥ

ಏ ಅರ್ಜುನ!, ಈ ಪ್ರಪಂಚಕ್ಕೆ ಶಾಖವ ಕೊಡುವವ° ಆನೇ ಆಗಿದ್ದೆ. ಆನೇ ಮಳೆಯ ತಡೆಹಿಡಿವವ° ಕೊಡುವವ° ಆಗಿದ್ದೆ.  ಅಮೃತವೂ ಮೃತ್ಯುವೂ ಆನೇ ಆಗಿದ್ದೆ. ಚೇತನ ಹಾಂಗೂ ಜಡವೂ ಆನೇ ಆಗಿದ್ದೆ.

ತಾತ್ಪರ್ಯ / ವಿವರಣೆ

ಸೂರ್ಯನಲ್ಲಿ ಸನ್ನಿಹಿತನಾಗಿ, ಭೂಮಿಗೆ ಸೌರಶಕ್ತಿಯ ಪಸರಿಸಿ ಬದುಕು ಕೊಡುವವ° ಆ ಭಗವಂತ°. ಕಾಲ ಕಾಲಕ್ಕೆ ಮಳೆ ಬಪ್ಪಹಾಂಗೆ ಮಾಡುತ್ತದು, ಅಕಾಲಲ್ಲಿ ಮಳೆ ಬಾರದ್ದಾಂಗೆ ಮಾಡುತ್ತದೂ ಅವನೇ. ಮಳೆ ಬರೇಕ್ಕಪ್ಪಗ ಬಾರದ್ದೆ ಇಪ್ಪದು, ಮಳೆ ಬಪ್ಪಲಾಗದ್ದಿಪ್ಪಗ ಮಳೆ ಬತ್ತದೂ ಆ ಭಗವಂತನ ಮೂಲಕವಾಗಿಯೇ. ಕಾಂಬ ಕ್ರಿಯೆಯ ಹಿಂದಾಣ ಕಾರಣ ಶಕ್ತಿ ಆ ಭಗವಂತ°. ನವಗೆ ಬದುಕ್ಕಿಲ್ಲಿ ಉಸುರು ಕೊಟ್ಟು ಬದುಕುಸುವ ಅಮೃತ, ಆಯಸ್ಸು ಮುಗುದಪ್ಪಗ ಉಸುರು ನಿಲ್ಲುಸಿ ಕರೆಸಿಗೊಂಬವ° – ಆ ಭಗವಂತ. ಕಣ್ಣಿಂಗೆ ಕಾಂಬದು – ‘ಸತ್’, ಕಣ್ಣಿಂಗೆ ಕಾಣದ್ದೆ ಇಪ್ಪದು ‘ಅಸತ್’., ಹೀಂಗೆ ಸಮಸ್ತ ವಿಶ್ವವ ನಿರ್ವಹಿಸುವವ° ಆ ಭಗವಂತ°. ಹೀಂಗೆ ಪೂರ್ಣ ಪ್ರಮಾಣಲ್ಲಿ ಭಗವಂತನ ಅನುಸಂಧಾನಕ್ಕೆ ಬೇಕಾದ ಸಮಗ್ರ ಸಂಗತಿಗಳ ಅರ್ಜುನನ ಮೂಲಕ ವಿವರಿಸಿದ್ದ° ಆ ಭಗವಂತ°.

ಶ್ಲೋಕ

ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾ ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ ।
ತೇ ಪುಣ್ಯಮಾಸಾದ್ಯ ಸುರೇಂದ್ರಲೋಕಂ ಅಶ್ನಂತಿ ದಿವ್ಯಾಂದಿವಿ ದೇವಭೋಗಾನ್ ॥೨೦॥

ಪದವಿಭಾಗ

ತ್ರೈ-ವಿದ್ಯಾಃ ಮಾಮ್ ಸೋಮಪಾಃ ಪೂತ-ಪಾಪಾಃ ಯಜ್ಞೈಃ ಇಷ್ಟ್ವಾಸ್ವರ್ಗತಿಮ್ ಪ್ರಾರ್ಥಯಂತೇ । ತೇ ಪುಣ್ಯಮ್ ಆಸಾದ್ಯ ಸುರೇಂದ್ರ-ಲೋಕಮ್ ಅಶ್ನಂತಿ ದಿವ್ಯಾನ್ ದಿವಿ ದೇವ-ಭೋಗಾನ್ ॥

ಅನ್ವಯ

ತ್ರೈ-ವಿದ್ಯಾಃ ಸೋಮಪಾಃ ಪೂತ-ಪಾಪಾಃ ಮಾಂ ಯಜ್ಞೈಃ ಇಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ । ತೇ ಪುಣ್ಯಂ ಸುರೇಂದ್ರ-ಲೋಕಮ್ ಆಸಾದ್ಯ, ದಿವಿ ದಿವ್ಯಾನ್ ದೇವ-ಭೋಗಾನ್ ಅಶ್ನಂತಿ ।

ಪ್ರತಿಪದಾರ್ಥ

ತ್ರೈ-ವಿದ್ಯಾಃ ಸೋಮಪಾಃ ಪೂತ-ಪಾಪಾಃ – ಮೂರು ವೇದಂಗಳ ತಿಳುದು, ಸೋಮರಸವ ಪಾನಮಾಡಿ, ಪರಿಶುದ್ಧರಾದ ಪಾಪಿಗೊ, ಮಾಮ್ – ಎನ್ನ, ಯಜ್ಞೈಃ ಇಷ್ಟ್ವಾ – ಯಜ್ಞಂಗಳಿಂದ ಪೂಜಿಸಿ, ಸ್ವರ್ಗತಿಮ್ (ಸ್ವಃಗತಿಮ್) – ಸ್ವರ್ಗದ ಮಾರ್ಗವ, ಪ್ರಾರ್ಥಯಂತೇ – ಪ್ರಾರ್ಥಿಸುತ್ತವು. ತೇ – ಅವು, ಪುಣ್ಯಮ್ ಸುರೇಂದ್ರ ಲೋಕಮ್ – ಪುಣ್ಯವಾದ ದೇವೇಂದ್ರನ ಲೋಕವ, ಆಸಾದ್ಯ – ಹೊಂದಿ (ಸೇರಿ), ದಿವಿ – ಸ್ವರ್ಗಲ್ಲಿ, ದಿವ್ಯಾನ್ ದೇವ-ಭೋಗಾನ್  – ಸ್ವರ್ಗೀಯ ದೇವತಾ ಸುಖವ, ಅಶ್ನಂತಿ – ಭೋಗಿಸುತ್ತವು.

ಅನ್ವಯಾರ್ಥ

ಮೂರು ವೇದಂಗಳ ಅಭ್ಯಾಸಮಾಡಿ, ಸೋಮರಸಪಾನ ಮಾಡಿ, ಯಜ್ಞ ಯಾಗಾದಿ ಪ್ರಕ್ರಿಯೆಂದ ಎನ್ನ ಪರೋಕ್ಷವಾಗಿ ಆರಾಧಿಸಿ ಸಂಪ್ರಾರ್ಥಿಸಿ ಸ್ವರ್ಗಲೋಕವ ಯಾಚಿಸುತ್ತವು. ಪಾಪ ಪ್ರತಿಕ್ರಿಯೆಗಳಿಂದ ಬಿಡುಗಡೆಯಾಗಿ ಪರಿಶುದ್ಧರಾಗಿ ಅವು ಪುಣ್ಯ ಸ್ವರ್ಗಲೋಕವ ಸೇರುತ್ತವು, ಅಲ್ಲಿ ಸ್ವರ್ಗ ಸುಖವ ಸವಿಯುತ್ತವು.

ತಾತ್ಪರ್ಯ / ವಿವರಣೆ

ತ್ರೈವಿವ್ಯಾಃ – ಋಕ್, ಯಜು, ಸಾಮ ಹೇಳ್ವ ಮೂರು ವೇದಂಗಳ ಸೂಚಿಸುವದು. ಈ ಮೂರು ವೇದಂಗಳ ಅಧ್ಯಯನ ಮಾಡಿದ ಬ್ರಾಹ್ಮಣಂಗೆ ‘ತ್ರಿವೇದೀ’ ಹೇಳಿ ಹೇಳುವದು. ಈ ಮೂರು ದೇದಂಗಳ ಸಾರವತ್ತಾಗಿ ಕಲ್ತವ ಉತ್ತಮ ಜ್ಞಾನಲ್ಲಿ ಬೆಳಗಿ ಸಮಾಜಲ್ಲಿ ಉತ್ತಮ ರೀತಿಲಿ ಗೌರವಿಸಲ್ಪಡುತ್ತ°. ಆದರೆ ದುರದೃಷ್ಟಂದ ವೇದವಿದ್ವಾಂಸರಲ್ಲಿ ಹಲವರಿಂಗೆ ಅವುಗಳ ಅಧ್ಯಯನ ಮಾಡ್ತದರ ಪರಮ ಉದ್ದೇಶ ಎಂತ ಹೇಳಿ ಗೊಂತಿರುತ್ತಿಲ್ಲೆ. ಅವರ ಲಕ್ಷ್ಯ ಜ್ಞಾನ ಸಂಪಾದನೆ ಮೂಲಕ ಮುಂದೆ ಆರ್ಥಿಕ ಗಳಿಕೆ ಆಗಿರುತ್ತು. ಹೀಂಗಿರ್ತ ಜ್ಞಾನಂದ ಏಳಿಗೆ ಇಲ್ಲೆ. ಅದಕ್ಕೇ ಭಗವಂತ° ಇಲ್ಲಿ ಹೇಳಿದ್ದು – ತ್ರಿವೇದೀಗೊಕ್ಕೆ ಕಟ್ಟಕಡೆಯ ಗುರಿ ಆನು ಹೇಳಿ. ಹೊರತು ಜ್ಞಾನ ಸಂಪಾದನೆ ಮಾಡಿ ಇತರರ ಮೋಡಿ ಮಾಡ್ಳೋ ವಾ ಅಹಂಕಾರ ಪಟ್ಟುಗೊಂಬಲೋ ಅಲ್ಲ. ನಿಜವಾದ ತ್ರಿವೇದಿಗೊ ಭಗವಂತನ ಚರಣಕಮಲದಡಿಲಿ ಆಶ್ರಯ ಪಡೆತ್ತವು, ಭಗವಂತನ ಪ್ರಸನ್ನಗೊಳುಸಿ ಪರಿಶುದ್ಧ ಭಕ್ತಿಸೇವೆಲಿ ನಿರತರಾವುತ್ತವು.

ಭಗವಂತ° ಹೇಳುತ್ತ° – ಈ ‘ತ್ರಿವೇದಿ’ಗೊ (ತ್ರೈವಿದ್ಯರು) ಮೂರು ವೇದಂಗಳ ಮೊರೆಹೊಕ್ಕ ಹಂಬಲಿಗೊ. ಯಜ್ಞಾದಿ ಪ್ರಕ್ರಿಯೆಂದ ಎನ್ನ ಆರಾಧಿಸಿ, ಸೋಮರಸವ ಕುಡುದು, ಪಾಪ ಕಳದು, ಸ್ವರ್ಗದ ದಾರಿಯ ಬೇಡುತ್ತವು. ಅವು ಪುಣ್ಯದ ಫಲವಾಗಿ ದೇವೇಂದ್ರನ ನಾಡು ಸ್ವರ್ಗವ ಸೇರಿ, ಆ ಸ್ವರ್ಗಲ್ಲಿ ದೇವಭೋಗಂಗಳ ಉಣ್ಣುತ್ತವು.

ಬನ್ನಂಜೆ ಹೇಳುತ್ತವು – ತ್ರೈವಿದ್ಯರು ಹೇಳಿರೆ ತ್ರಿಪಥಗಾಮಿಗೊ!. ಇವು ಭಗವಂತನ ಹತ್ರೆ ಅನೇಕವ ಹಂಚಿಗೊಂಡವು. ಇವು ಸ್ವರ್ಗದ ಬಯಕೆ, ಲೌಕಿಕ ಬಯಕೆಯ ಮುಂದು ಇರಿಸಿ ಭಗವಂತನ ಭಕ್ತಿಸೇವೆಲಿ ನಿರತರಾವುತ್ತವು. ಇವು ನಿಜವಾದ ಕೃಷ್ಣಪ್ರಜ್ಞೆ ಇಪ್ಪವು ಅಲ್ಲ. ಪರಿಪೂರ್ಣ ಭಕ್ತರಲ್ಲ. ಇವಕ್ಕೆ ವೇದಂಗಳಲ್ಲಿ ಹೇಳಿದ ಕರ್ಮಕಾಂಡವೇ ಮುಖ್ಯ. ಜ್ಯೋತಿಷ್ಟೋಮ ಯಾಗದಾಂಗಿಪ್ಪ ಯಾಗವ ಕೇವಲ ಸ್ವರ್ಗದ ಬಯಕೆಂದ ಮಾಡಿ ನೇರ ಭಗವಂತನ ಬಯಸದೆ ಸ್ವರ್ಗವ ಬಯಸುತ್ತವು. ಹೀಂಗೆ ಭಕ್ತಿ ಸೇವೆಲಿ ನಿರತರಾಗಿ ಅಕೇರಿಗೆ ಅವು ಇಚ್ಛಿಸುವ ಇಂದ್ರನ ನಾಡಾದ ಸ್ವರ್ಗವ ಸೇರಿ ಅಲ್ಲಿ ಸ್ವರ್ಗ ಭೋಗವ ಅನುಭವಿಸುತ್ತವು.

ಶ್ಲೋಕ

ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ ।
ಏವಂ ತ್ರಯೀಧರ್ಮಮನುಪ್ರಪನ್ನಾ ಗತಾಗತಂ ಕಾಮಕಾಮಾ ಲಭಂತೇ ॥೨೧॥

ಪದವಿಭಾಗ

ತೇ ತಮ್ ಭುಕ್ತ್ವಾ ಸ್ವರ್ಗ-ಲೋಕಮ್ ವಿಶಾಲಮ್  ಕ್ಷೀಣೇ ಪುಣ್ಯೇ ಮರ್ತ್ಯ-ಲೋಕನ್ ವಿಶಂತಿ । ಏವನ್ ತ್ರಯೀ-ಧರ್ಮಮ್ ಅನುಪ್ರಪನ್ನಾಃ ಗತ-ಆಗತಮ್ ಕಾಮ-ಕಾಮಾಃ ಲಭಂತೇ ॥

ಅನ್ವಯ

ತೇ ತಂ ವಿಶಾಲಂ ಸ್ವರ್ಗ-ಲೋಕಂ ಭುಕ್ತ್ವಾ, ಪುಣ್ಯೇ ಕ್ಷೀಣೇ ಮರ್ತ್ಯ-ಲೋಕಂ ವಿಶಂತಿ । ಏವಂ ತ್ರಯೀ-ಧರ್ಮಮ್ ಅನುಪ್ರಪನ್ನಾಃ  ಕಾಮ-ಕಾಮಾಃ ಗತ-ಆಗತಂ ಲಭಂತೇ ।

ಪ್ರತಿಪದಾರ್ಥ

ತೇ – ಅವು, ತಮ್ ವಿಶಾಲ ಸ್ವರ್ಗ-ಲೋಕಮ್  – ಆ ವಿಶಾಲವಾದ ಸ್ವರ್ಗಲೋಕವ, ಭುಕ್ತ್ವಾ – ಅನುಭವುಸಿ, ಪುಣ್ಯೇ ಕ್ಷೀಣೇ – ಪುಣ್ಯ ಕ್ಷೀಣವಾದಪ್ಪಗ,  ಮರ್ತ್ಯ-ಲೋಕಮ್ – ಸಾವಿಪ್ಪ ಭೂಲೋಕಕ್ಕೆ, ವಿಶಂತಿ – ಪತನ ಹೊಂದುತ್ತವು, ಏವಮ್ – ಈ ರೀತಿಯಾಗಿ, ತ್ರಯೀ-ಧರ್ಮಮ್ –  ಮೂರು ವೇದಂಗಳ, ಅನುಪ್ರಪನ್ನಾಃ – ಅನುಸರುಸಿಗೊಂಡು, ಕಾಮ-ಕಾಮಾಃ – ಇಂದ್ರಿಯಭೋಗಂಗಳ ಆಶಿಸಿಗೊಂಡು, ಗತ-ಆಗತಮ್ – ಸಾವು ಹುಟ್ಟುಗಳ, ಲಭಂತೆ – ಹೊಂದುತ್ತವು.

ಅನ್ವಯಾರ್ಥ

ಹೀಂಗೆ ಅವು ಸ್ವರ್ಗಲೋಕದ ಅಪಾರವಾದ ಭೋಗಂಗಳ ಉಂಡು, ತಮ್ಮ ಪುಣ್ಯಕಾರ್ಯಂಗಳ ಫಲಂಗೊ ಕ್ಷಯಿಸಿಯಪ್ಪಗ ಈ ಮರ್ತ್ಯಲೋಕಕ್ಕೆ ಹಿಂದುರುಗುತ್ತವು. ಹೀಂಗೆ ಮೂರು ವೇದಂಗಳ ತತ್ವಂಗಳ ಅನುಸರಣೆಂದ ಇಂದ್ರಿಯ ಸುಖವಷ್ಟನ್ನೇ ಅರಸುವವು ಮತ್ತೆ ಮತ್ತೆ ಹುಟ್ಟಿ ಸಾವದರಷ್ಟನ್ನೇ ಸಾಧಿಸುತ್ತವು. 

ತಾತ್ಪರ್ಯ / ವಿವರಣೆ

ವೈದಿಕ ಕರ್ಮಂಗಳ ಮೊರೆಹೊಕ್ಕಿ, ಬಯಕೆಗಳ ಬೆನ್ನು ಹಿಡ್ಕೊಂಡು ಸ್ವರ್ಗದ ಸುಖವ ಆಸೆಪಟ್ಟುಗೊಂಡು ಕರ್ಮಮಾಡುತ್ತವು ಅಕೇರಿಗೆ ಸ್ವರ್ಗವ ಸೇರಿ ಅಲ್ಲಿಯಾಣ ಭೋಗಂಗಳ ಅವರ ಪುಣ್ಯಕಾಲ ಇಪ್ಪನ್ನಾರ ಅನುಭವುಸುತ್ತವು. ಪುಣ್ಯ ಕ್ಷಯಿಸಿಯಪ್ಪಗ ಪುನಃ ಹುಟ್ಟು ಸಾವಿನ ತಾಣವಾದ ಈ ಭೂಮಿಗೆ ಮರಳುತ್ತವು. ಈ ಕಾರಣಂದ ಅವು ಅತ್ಯಂತ ಹಿರಿದಾದ ಸುಖ ಮೋಕ್ಷಂದ ಮತ್ತು ಭಗವಂತನಿಂದ ವಂಚಿತರಾವುತ್ತವು. ಇದು ಭಗವಂತನ ಬಗ್ಗೆ ತಿಳುವಳಿಕೆ ಇಲ್ಲದ್ದೆ ಬರೇ ವೇದಂಗಳ ಓದಿ ಅದರಲ್ಲಿ ಹೇಳಿದ ಕರ್ಮವ ಮಾಡಿ ಸ್ವರ್ಗ ಪಡವವರ ಕತೆ. ಇವಕ್ಕೆ ಭಗವಂತನ ನಿಜವಾದ ಸುಖ ಏವುದು ಹೇಳಿ ಗೊಂತಿರುತ್ತಿಲ್ಲೆ. ಹಾಂಗಾಗಿ ಹೀಂಗೆ ಕಾರ್ಯ ಮಾಡಿದವು ಹುಟ್ಟುಸಾವಿನ ಚಕ್ರಲ್ಲಿ ಸುತ್ತಿಗೊಂಡೇ ಇರುತ್ತವು. ಶಾಶ್ವತವಾದ ಜ್ಞಾನಾನಂದವ ಸವಿಯೆಕ್ಕಾರೆ ಭಗವಂತನಲ್ಲಿ ಸಂಪೂರ್ಣ ಕೃಷ್ಣಪ್ರಜ್ಞೆಯ ಅನುಸರುಸಿ ಭಗವಂತನ ಆಧ್ಯಾತ್ಮಿಕ ಲೋಕದ ಗುರಿಯ ಮಾರ್ಗವ ಹೊಂದೆಕು.

ಶ್ಲೋಕ

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ।
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ॥೨೨॥

ಪದವಿಭಾಗ

ಅನನ್ಯಾಃ ಚಿಂತಯಂತಃ ಮಾಮ್ ಯೇ ಜನಾಃ ಪರ್ಯುಪಾಸತೇ । ತೇಷಾಮ್ ನಿತ್ಯ-ಅಭಿಯುಕ್ತಾನಾಮ್ ಯೋಗ-ಕ್ಷೇಮಮ್ ವಹಾಮಿ ಅಹಮ್ ॥

ಅನ್ವಯ

ಅನನ್ಯಾಃ ಚಿಂತಯಂತಃ ಯೇ ಜನಾಃ ಮಾಂ ಪರ್ಯುಪಾಸತೇ, ತೇಷಾಂ ನಿತ್ಯ-ಅಭಿಯುಕ್ತಾನಾಂ ಯೋಗ-ಕ್ಷೇಮಮ್ ಅಹಂ ವಹಾಮಿ ।

ಪ್ರತಿಪದಾರ್ಥ

ಅನನ್ಯಾಃ – ಅನ್ಯ ಗುರಿ ಇಲ್ಲದ್ದೆ, ಚಿಂತಯಂತಃ – ಕೇಂದ್ರೀಕರಿಸಿ, ಯೇ ಜನಾಃ – ಏವ ಜನಂಗೊ, ಮಾಮ್ – ಎನ್ನ, ಪರ್ಯುಪಾಸತೇ – ಸರಿಯಾಗಿ ಆರಾಧಿಸುತ್ತವೋ, ತೇಷಾಮ್ – ಅವರ, ನಿತ್ಯ-ಅಭಿಯುಕ್ತಾನಾಮ್ – ಸದಾ ಭಕ್ತಿಲಿ ನೆಲೆಸಿದ, ಯೋಗ-ಕ್ಷೇಮಮ್ – ಯೋಗಕ್ಷೇಮವ (ಅಪೇಕ್ಷೆಯ ರಕ್ಷಣೆಯ), ಅಹಮ್ ವಹಾಮಿ – ಆನು ವಹಿಸಿಗೊಳ್ಳುತ್ತೆ.

ಅನ್ವಯಾರ್ಥ

ಅನ್ಯಚಿಂತೆಯಿಲ್ಲದ್ದೆ ಒಂದೇ ಮನಸ್ಸಿಂದ ಆರು ಎನ್ನ ದಿವ್ಯರೂಪವ ಭಕ್ತಿಂದ ಧ್ಯಾನಿಸುತ್ತವೋ ಅವರ ಯೋಗಕ್ಷೇಮವ ಆನು ನೋಡಿಗೊಳ್ಳುತ್ತೆ. 

ತಾತ್ಪರ್ಯ / ವಿವರಣೆ

ನಿಜಭಗವದ್ಭಕ್ತರಿಂಗೆ (ಕೃಷ್ಣಪ್ರಜ್ಞೆಲಿಪ್ಪೋರಿಂಗೆ) ಭಗವಂತನ ಚಿಂತನೆ ಬಿಟ್ರೆ ಬೇರೆ ಚಿಂತನೆಯೇ ಇರುತ್ತಿಲ್ಲೆ. ಅವರ ಪರಮ ಲಕ್ಷ್ಯ ಆ ಭಗವಂತನೇ ಹೊರತು  ಅನ್ಯ ಏವುದರಲ್ಲಿಯೂ ಅವರ ಚಿಂತೆ ಇಲ್ಲೆ. ಅವು ಅನನ್ಯವಾಗಿ ಭಗವಂತನ ಮಾಂತ್ರ ಬಯಸುವದು. ಏವುದೋ ಬಯಕೆಗೆ ಕಟ್ಟುಬಿದ್ದು ಅವು ವಿವಿಧ ಪೂಜೆ / ಕಾರ್ಯಲ್ಲಿ ತೊಡಗುತ್ತವಿಲ್ಲೆ. ಇವು ಎಲ್ಲರಲ್ಲಿಯೂ ಎಲ್ಲವುದರಲ್ಲಿಯೂ ಭಗವಂತನನ್ನೇ ಕಾಂಬದು. ಎಲ್ಲವೂ ಭಗವಂತನ ಅಂತಃಶಕ್ತಿಂದ ನಡವದು, ಎಲ್ಲ ಮಾಡುಸುವದು ಭಗವಂತ°, ಎಲ್ಲ ದೇವರಲ್ಲಿಯೂ ಅಂತರ್ಗತನಾಗಿ ಭಗವಂತ° ಇಪ್ಪದು, ಎಲ್ಲಾ ಪೂಜೆ ಅವಂಗೆ ಸಲ್ಲುತ್ತದು ಹೇಳ್ವ ಪ್ರಜ್ಞೆ. ಇದುವೇ ಏಕಭಕ್ತಿ, ಭಗವಂತನ ಸೇರ್ಲೆ ಅನುಸರುಸೆಕಾದ ಮಾರ್ಗ.

ನಾವು ಪೂಜೆ ಮಾಡುವಾಗ ಸಂಕಲ್ಪ ಮಾಡುತ್ತು. ಸಾಮಾನ್ಯವಾಗಿ ಐಹಿಕ ಬಯಕೆಂದಲೇ ಸಾಮಾನ್ಯರು ಪೂಜೆ ಮಾಡುವದು. “ಶ್ರೀ ಪರಮೇಶ್ವರ ಪ್ರೀತ್ಯರ್ಥವಾಗಿ ಈ ಕಾರ್ಯವ ಮಾಡುವದರ ಒಟ್ಟಿಂಗೆ ಈ ಕಾರ್ಯಸಿದ್ಧಿಗಾಗಿ / ಈ ಬಯಕೆ ಈಡೇರ್ಲೆ ಈ ಪೂಜೆ/ವ್ರತ/ನಿಷ್ಠೆಯ ಮಾಡುತ್ತೆ ಹೇಳಿ ಸಂಕಲ್ಪ ಮಾಡುವುದೇ ಸಾಮಾನ್ಯ ಎಲ್ಲಾ ದಿಕ್ಕೆ ಕಾಂಬದು. ಇದು ನಮ್ಮ ಐಹಿಕ ಬಯಕೆಯ ಬುದ್ಧಿ. ನಿಜಭಕ್ತಿಯ ಪೂಜೆಲಿ ಎಲ್ಲವೂ ಭಗವಂತನ ಸಂಪ್ರೀತಿಗೆ. ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಹೇಳಿ ಅಷ್ಟೇ ಸಂಕಲ್ಪ ಇರೆಕ್ಕಾದ್ದು. ನಮ್ಮ ಭಕ್ತಿಗೆ ಮೆಚ್ಚಿ ಭಗವಂತ° ಕೊಟ್ರೆ ಅದು ಭಗವದ್ ಪ್ರಸಾದ. ಅದು ನಮ್ಮ ಯೋಗ್ಯತೆಗೆ ಭಗವಂತ° ಕೊಡುತ್ತದು. ನಮ್ಮ ಯೋಗ್ಯತೆ ನೋಡಿಗೊಳ್ಳದ್ದೆ ನಾವು ಕೇಳಿದ ಮಾತ್ರಕ್ಕೆ ಭಗವಂತ° ಏನನ್ನೂ ಕೊಡುತ್ತನಿಲ್ಲೆ. ಹಾಂಗಾಗಿ ನಮ್ಮ ಲಕ್ಷ್ಯ ಆ ಭಗವಂತ° ಆಗಿರೆಕು. ಕೇವಲ ಜ್ಞಾನ, ಭಕ್ತಿ, ಮೋಕ್ಷ ಇದು ನಮ್ಮ ಸಂಕಲ್ಪ ಆಗಿರೆಕು. ನಶ್ವರವಾದ ಬಯಕೆಯ ಮುಂದಿಟ್ಟು ಪೂಜೆ ಮಾಡಿರೆ ನಾವು ಮಹತ್ತಾದ ಫಲವ ಕಳಕ್ಕೊಳ್ಳುತ್ತು. ನವಗೆ ಎಂತ ಬೇಕು ಎಂತ ಅಗತ್ಯ ಇಲ್ಲೆ ಹೇಳ್ವದು ಭಗವಂತಂಗೆ ಸರಿಯಾಗಿ ಗೊಂತಿದ್ದು. ಅವ° ನಮ್ಮ ಎಂದೂ ಕೈಬಿಡುತ್ತನಿಲ್ಲೆ. ನಮ್ಮ ಪೂಜೆ ಕೇವಲ ಭಗವಂತನ ಪ್ರೀತ್ಯರ್ಥವಾಗಿ ಮಾಡಿ ಅವನಲ್ಲಿ ಅನನ್ಯ ಭಕ್ತಿಯ ತೋರಿರೆ ಭಗವಂತ° ನಮ್ಮ ನೋಡಿಗೊಳ್ತ°. ಅದಕ್ಕಾಗಿಯೇ ಇಲ್ಲಿ ಹೇಳಿದ್ದು ಭಗವಂತ°, “ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ” – ‘ಇಂತಹ ಭಕ್ತರುಗಳ ಯೋಗಕ್ಷೇಮವ ಆನು ನೋಡಿಗೊಳ್ತೆ’ ಹೇಳಿ. ಇಲ್ಲಿ ನಮ್ಮಲ್ಲ್ಲಿ ಇರೆಕ್ಕಪ್ಪದು ಅನನ್ಯ ಭಕ್ತಿ, ಗಾಢ ಭಕ್ತಿ, ಗಾಢ ಶ್ರದ್ಧೆ, ಗಾಢ ನಂಬಿಕೆ, ಗಾಢ ವಿಶ್ವಾಸ. ಇದರಿಂದ ಏವತ್ತೂ ವಿಚಲಿತರಪ್ಪಲಾಗ. ಭಗವಂತ° ಎಂತಕೊಟ್ಟರೂ ಅದರ ಮಹಾಪ್ರಸಾದ ಹೇದು ಸ್ವೀಕರುಸಿ ಸಂಪೂರ್ಣ ಅವಂಗೆ ಶರಣಾಗತರಾಯೇಕು. ಇಂತಹ ಸ್ಥಿತಿಲಿ ನವಗೆ ಏನೂ ದುಃಖ ಉಂಟಾವುತ್ತಿಲ್ಲೆ. ಬದುಕು ಆನಂದಮಯವಾಗಿರುತ್ತು. ಜೀವನದಲ್ಲಿ ಏನೇ ಘಟನೆ ಸಂಭವಿಸಿರೂ “ಭಗವಂತನ ಚಿತ್ತದಂತೆ ಆತು” ಹೇಳಿ ಅದರ ಸಂತೋಷಂದ ಸ್ವೀಕರುಸುವ ಮನೋವೃತ್ತಿ ನಮ್ಮದಾಯೇಕು. ಇದುವೇ ಮೋಕ್ಷದ ಹೆಬ್ಬಾಗಿಲು.

ಶ್ಲೋಕ

ಯೇsಪ್ಯನ್ಯದೇವತಾಭಕ್ತಾ ಯಜಂತೇ ಶ್ರದ್ಧಯಾನ್ವಿತಾಃ ।
ತೇsಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್ ॥೨೩॥

ಪದವಿಭಾಗ

ಯೇ ಅಪಿ ಅನ್ಯ-ದೇವತಾ-ಭಕ್ತಾಃ ಯಜಂತೇ ಶ್ರದ್ಧಯಾ ಆನ್ವಿತಾಃ । ತೇ ಅಪಿ ಮಾಮ್ ಏವ ಕೌಂತೇಯ ಯಜಂತಿ ಅವಿಧಿ-ಪೂರ್ವಕಮ್ ॥

ಅನ್ವಯ

ಅಪಿ ಯೇ ಅನ್ಯ-ದೇವತಾ-ಭಕ್ತಾಃ ಶ್ರದ್ಧಯಾ ಆನ್ವಿತಾಃ ಯಜಂತೇ, ತೇ ಅಪಿ ಹೇ ಕೌಂತೇಯ!, ಅವಿಧಿ-ಪೂರ್ವಕಂ ಮಾಮ್ ಏವ ಯಜಂತಿ ।

ಪ್ರತಿಪದಾರ್ಥ

ಅಪಿ ಯೇ – ಆರಾದರೂ, ಅನ್ಯ-ದೇವತಾ-ಭಕ್ತಾಃ – ಇತರ ದೇವತೆಗಳ ಭಕ್ತರು, ಶ್ರದ್ಧಯಾ ಆನ್ವಿತಾಃ – ಶ್ರದ್ಧೆಯಿಂದೊಡಗೂಡಿ, ಯಜಂತೇ – ಪೂಜಿಸುತ್ತವೋ, ತೇ ಅಪಿ – ಅವು ಕೂಡ, ಹೇ ಕೌಂತೇಯ – ಏ ಅರ್ಜುನ!, ಅವಿಧಿ-ಪೂರ್ವಕಮ್ – ತಪ್ಪುಮಾರ್ಗಲ್ಲಿ, ಮಾಮ್ ಏವ ಯಜಂತಿ – ಎನ್ನನ್ನೇ ಪೂಜಿಸುತ್ತವು.

ಅನ್ವಯಾರ್ಥ

ಆರು ಬೇರೆ ದೇವತೆಗಳ ಭಕ್ತರಾಗಿ ಶ್ರದ್ಧೆಂದ ಅವರ ಆರಾಧಿಸುತ್ತವೋ, ಅಂಥವೂ ಕೂಡ ತಪ್ಪುದಾರಿಲಿ ಎನ್ನನ್ನೇ ಆರಾಧಿಸುತ್ತವು.

ತಾತ್ಪರ್ಯ / ವಿವರಣೆ

ಭಗವಂತ° ಇಲ್ಲಿ ಹೇಳುತ್ತ° – ವಿವಿಧ ದೇವತೆಗಳ ಪೂಜೆಲಿ ನಿರತರಾದವು ಪರೋಕ್ಷವಾಗಿ ಎನ್ನನ್ನೇ ಪೂಜಿಸುತ್ತವು. ಆದರೆ ಅವು ಹೆಚ್ಚು ಬುದ್ಧಿವಂತರಲ್ಲ. ದೇವತೆಗೊ ಭಗವಂತನ ಶಕ್ತಿಗಳೇ. ಅವಕ್ಕೆ ಸ್ವತಂತ್ರತೆ ಇಲ್ಲೆ. ಎಲ್ಲವೂ ಭಗವಂತನ ಒಪ್ಪಿಗೆಂದಲೇ ಕರ್ತವ್ಯ ನಿರ್ವಹಿಸುವದು. ಬೇರೆ ಬೇರೆ ದೇವತೆಗಳ ಮೂಲಕ ಭಗವಂತನ ಪೂಜಿಸಲಕ್ಕು. ಎಲ್ಲ ದೇವರ ಪೂಜೆ ಅಕೇರಿಗೆ ಹೋಗಿ ಸೇರುತ್ತದು ಭಗವಂತನನ್ನೇ. ಮನುಷ್ಯ ಅನುಸರುಸೇಕ್ಕಾದ್ದು ಸರಕಾರದ ಕಾನೂನಿನ ಹೊರತು ಅಧಿಕಾರಿಗೊ ವಾ ನಿರ್ದೇಶಕರು ಮಾಡಿದ ಕಾನೂನಿನ ಅಲ್ಲ. ಅಧಿಕಾರಿಗೊ ಸರಕಾರದ ಪ್ರತಿನಿಧಿ ಮಾಂತ್ರ. ಸರಕಾರದ ನಿಯಮವ ಯಥಾವತ್ ಪಾಲಿಸಿರೆ ಅದು ಅಧಿಕಾರಿಗಳನೂ ತೃಪ್ತಿಪಡಿಸಿದ ಹಾಂಗೆ. ಅಧಿಕಾರಿಗೊಕ್ಕೆ ಅಥವಾ ನಿರ್ದೇಶಕರುಗಳಿಂಗೆ ಲಂಚ ಕೊಡುತ್ತದು ಕಾನೂನಿಂಗೆ ವಿರುದ್ಧವಾದ್ದು. ಇದನ್ನೇ ಇಲ್ಲಿ ‘ಅವಿಧಿಪೂರ್ವಕಂ’ ಹೇಳಿ ಹೇಳಿದ್ದು. ಇನ್ನೊಂದು ರೀತಿಲಿ ಹೇಳುತ್ತದಾದರೆ ಭಗವಂತ° ವಿವಿಧ ದೇವತೆಗಳ ಅನಗತ್ಯ  ಪೂಜಿಸುವದರ ಇಲ್ಲಿ ಸಮ್ಮತಿಸುತ್ತನಿಲ್ಲೆ. ಅಂದರೂ ಆ ದೇವತೆಗಳ ಮೂಲಕ ಮಾಡುವ ಪೂಜೆ ಅವಂಗೆ ಸಲ್ಲುತ್ತದು ಅಕೇರಿಗೆ ಹೇಳ್ವದರ ಇಲ್ಲಿ ಒತ್ತಿ ಹೇಳಿದ್ದ°.

ಶ್ಲೋಕ

ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ ।
ನ ತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ ॥೨೪॥

ಪದವಿಭಾಗ

ಅಹಂ ಹಿ ಸರ್ವ-ಯಜ್ಞಾನಾಮ್ ಭೋಕ್ತಾ ಚ ಪ್ರಭುಃ ಏವ ಚ । ನ ತು ಮಾಮ್ ಅಭಿಜಾನಂತಿ ತತ್ತ್ವೇನ ಅತಃ ಚ್ಯವಂತಿ ತೇ ॥

ಅನ್ವಯ

ಅಹಂ ಹಿ ಸರ್ವ-ಯಜ್ಞಾನಾಂ ಭೋಕ್ತಾ ಚ ಪ್ರಭುಃ ಏವ ಚ ಅಸ್ಮಿ । ಮಾಂ ತು ತತ್ತ್ವೇನ ನ ಅಭಿಜಾನಂತಿ, ಅತಃ ತೇ ಚ್ಯಂವತಿ ।

ಪ್ರತಿಪದಾರ್ಥ

ಅಹಂ ಹಿ – ಖಂಡಿತವಾಗಿಯೂ ಆನೇ, ಸರ್ವ-ಯಜ್ಞಾನಾಮ್ – ಎಲ್ಲ ಯಜ್ಞಂಗಳ, ಭೋಕ್ತಾ ಚ – ಭೋಕ್ತಾರನು (ಅನುಭವಿಸುವವ°) ಕೂಡ, ಪ್ರಭುಃ ಏವ ಚ ಅಸ್ಮಿ – ಒಡೆಯನೂ ಕೂಡ ಆಗಿದ್ದೆ, ಮಾಮ್ ತು – ಎನ್ನ ಆದರೋ, ತತ್ತ್ವೇನ – ಯಥಾವತ್ತಾಗಿ, ನ ಅಭಿಜಾನಂತಿ – ತಿಳಿತ್ತವಿಲ್ಲೆ, ಅತಃ – ಹಾಂಗಾಗಿ, ತೇ – ಅವು, ಚ್ಯವಂತಿ – ಪತನಗೊಳ್ಳುತ್ತವು.

ಅನ್ವಯಾರ್ಥ

ಆನೊಬ್ಬನೇ ಎಲ್ಲ ಯಜ್ಞಂಗಳ ಭೋಕ್ತಾರ° ಹಾಂಗೂ ಯಜಮಾನ°. ಇದರ ಯಥಾವತ್ತಾಗಿ ಜನರು ಅರ್ಥಮಾಡಿಗೊಳ್ಳುತ್ತವಿಲ್ಲೆ. ಹಾಂಗಾಗಿ ಅಂಥವು ಪತನ ಹೊಂದುತ್ತವು.

ತಾತ್ಪರ್ಯ / ವಿವರಣೆ

ವೈದಿಕ ಸಾಹಿತ್ಯಲ್ಲಿ ಅನೇಕ ಬಗೆಯ ಯಜ್ಞಾಚರಣೆಯ ಮಾಡೆಕು ಹೇಳಿ ಹೇಳುತ್ತು. ಆದರೆ ವಾಸ್ತವವಾಗಿ ಅವೆಲ್ಲವುಗಳ ಉದ್ದೇಶ ಪರಮ ಪ್ರಭುವಿನ ತೃಪ್ತಿಯೇ ಹೇಳಿ ಇಲ್ಲಿ ಸ್ಪಷ್ಟಪಡುಸುತ್ತ° ಭಗವಂತ°. ಯಜ್ಞ ಹೇಳಿರೆ ವಿಷ್ಣು (ಯತ್ ಜ್ಞಾತವ್ಯಂ ಯಜ್ಞಃ). ಭಗವದ್ಗೀತೆಲಿ ಈ ಮದಲೇ ಹೇಳಿಪ್ಪಂತೆ  ಮನುಷ್ಯ° ‘ಯಜ್ಞ’ನ ಅಥವಾ ವಿಷ್ಣುವಿನ ತೃಪ್ತಿ ಪಡುಸಲೆ ಮಾಂತ್ರ ಕೆಲಸ ಮಾಡೆಕು ಹೇಳಿದೆ. ಪುನಃ ನೆಂಪು ಮಾಡುವದು ಭಗವಂತನ ಸಂಪ್ರೀತಿಗೆ ಮಾಡುವ ಯಾವುದೇ ಸತ್ಕಾರ್ಯ ‘ಯಜ್ಞ’ ಹೇಳಿ ಹೇಳುವದು. ವರ್ಣಾಶ್ರಮ ಧರ್ಮ ಎಂದು ಕರೆಸಿಗೊಂಬ ಮನುಷ್ಯನ ನಾಗರಿಕತೆಯ ಪರಿಪೂರ್ಣ ರೂಪದ ಉದ್ದೇಶವು ಭಗವಂತನ ತೃಪ್ತಿಗೊಳುಸಲೇ ಹೇಳಿದ್ದು. ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದು – “ಆನೇ ಎಲ್ಲ ಯಜ್ಞಂಗಳ ಭೋಕ್ತಾರ, ಆನೇ ಎಲ್ಲೋದರ ಯಜಮಾನ°. ಸಾಕಷ್ಟು ತಿಳುವಳಿಕೆ ಇಲ್ಲದ್ದೆ ಮನುಷ್ಯರು ಈ ವಿಷಯವ ತಿಳಿಯದ್ದೆ, ತಾತ್ಕಾಲಿಕ ಪ್ರತಿಫಲಕ್ಕಾಗಿ ವಿವಿಧ ದೇವತೆಗಳ ಪೂಜೆಲಿ ತೊಡಗುತ್ತವು. ಇದರಿಂದ ಭಗವಂತನ ದಿವ್ಯಸ್ವಭಾವವ ಗುರುತಸಲೆ ಸಾಧ್ಯವಾಗದ್ದೆ ಪುನಃ ಐಹಿಕ ಜಗತ್ತಿಂಗೆ ಪತನಗೊಳ್ಳುತ್ತವು. ಬದುಕಿನ ಅಪೇಕ್ಷೆಯ ಗುರಿಯ ಮುಟ್ಟುತ್ತವಿಲ್ಲೆ. ಆದರೆ, ಆರಿಂಗೇ ಆದರೂ ಐಹಿಕ ಬಯಕೆ ಇದ್ದರೆ, ಅದು ಪರಿಶುದ್ಧ ಭಕ್ತಿ ಅಲ್ಲದ್ದರೂ ಅವ° ಪರಮ ಪ್ರಭುವಿನ ಪ್ರಾರ್ಥಿಸುವುದೇ ಉತ್ತಮ. ಆ ಮೂಲಕ ತಾನು ಬಯಸಿದ ಫಲವ ಪಡೆತ್ತ°. ಆದರೆ ಐಹಿಕ ಬಯಕೆಂದಲಾಗಿ ಪರಮೋನ್ನತ ಗುರಿಯ ಸಾಧುಸಲೆ ಸಾಧ್ಯನಾಗದ್ದೆ ಐಹಿಕ ಜಗತ್ತಿಲ್ಲಿಯೇ ಬಾಕಿಯಾವುತ್ತ°.

ಶ್ಲೋಕ

ಯಾಂತಿ ದೇವವ್ರತಾ ದೇವಾನ್ ಪಿತೄನ್ ಯಾಂತಿ ಪಿತೃವ್ರತಾಃ ।
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋsಪಿ ಮಾಮ್ ॥೨೫॥

ಪದವಿಭಾಗ

ಯಾಂತಿ ದೇವ-ವ್ರತಾಃ ದೇವಾನ್ ಪಿತೄನ್ ಯಾಂತಿ ಪಿತೃ-ವ್ರತಾಃ । ಭೂತಾನಿ ಯಾಂತಿ ಭೂತ-ಇಜ್ಯಾಃ ಯಾಂತಿ ಮತ್ ಯಾಜಿನಃ ಅಪಿ ಮಾಮ್ ॥೨೫॥

ಅನ್ವಯ

ದೇವ-ವ್ರತಾಃ ದೇವಾನ್ ಯಾಂತಿ, ಪಿತೃ-ವ್ರತಾಃ ಪಿತೄನ್ ಯಾಂತಿ, ಭೂತ-ಇಜ್ಯಾಃ ಭೂತಾನಿ ಯಾಂತಿ, ಮತ್ ಯಾಜಿನಃ ಅಪಿ ಮಾಂ ಯಾಂತಿ ।

ಪ್ರತಿಪದಾರ್ಥ

ದೇವ-ವ್ರತಾಃ – ದೇವತೆಗಳ ಆರಾಧಕರು, ದೇವಾನ್  ಯಾಂತಿ – ದೇವತೆಗಳಲ್ಯಂಗೆ ಹೋವುತ್ತವು (ದೇವತೆಗಳ ಸೇರುತ್ತವು, ಯಾಂತಿ = ಯಾನಮ್ ಕುರ್ವಂತಿ), ಪಿತೃ-ವ್ರತಾಃ – ಪೂರ್ವಜಕರ ಆರಾಧಕರು, ಪಿತೄನ್ ಯಾಂತಿ – ಪಿತೃಗಳಲ್ಯಂಗೆ ಹೋವುತ್ತವು, ಭೂತ-ಇಜ್ಯಾಃ – ಭೂತಂಗಳ ಆರಾಧುಸುವವು, ಭೂತಾನಿ ಯಾಂತಿ – ಭೂತಂಗಳಲ್ಯಂಗೆ ಹೋವುತ್ತವು, ಮತ್ ಯಾಜಿನಃ ಅಪಿ – ಎನ್ನ ಭಕ್ತರಾದರೋ (ಎನ್ನ ಅಪೇಕ್ಷಿಸುವವು/ ಯಾಚಿಸುವವು), ಮಾಮ್ ಯಾಂತಿ – ಎನ್ನಲ್ಲ್ಯಂಗೆ ಹೋವುತ್ತವು.

ಅನ್ವಯಾರ್ಥ

ದೇವತೆಗಳ ಪೂಜಿಸುವವು ದೇವರ ಸೇರುತ್ತವು, ಪಿತೃಗಳ ಪೂಜಿಸುವವು ಪಿತೃಗಳ ಹತ್ರಂಗೆ ಹೋವುತ್ತವು, ಭೂತಂಗಳ ಆರಾಧಕರು ಭೂತಂಗಳ ಮಧ್ಯೆ ಸೇರುತ್ತವು, ಎನ್ನ ಪೂಜಿಸುವವರಾದರೋ ಎನ್ನೊಟ್ಟಿಂಗೇ ಇರುತ್ತವು.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° –  “ನೀನು ಆರ ಪೂಜಿಸುತ್ತೆಯೋ ಅವರನ್ನೇ ಪಡೆತ್ತೆ”. ದೇವತೆಗಳ ಪೂಜಿಸುವವು ದೇವತೆಗಳ, ಪಿತೃಗಳ ಪೂಜಿಸುವವು ಪಿತೃಗಳ, ದೇವತಾಗಣ ಭೂತಪ್ರೇತಂಗಳ ಪೂಜಿಸುವವು ಭೂತಪ್ರೇತಂಗಳ ಪಡೆತ್ತವು. ಆದರೆ, ಆರು ಭಗವಂತನ  ಏಕ ಭಕ್ತಿಂದ  ಅನನ್ಯ ಭಕ್ತಿಂದ ಪೂಜಿಸುತ್ತವೋ ಅವು  ಆ ಭಗವಂತನನ್ನೇ ಸೇರುತ್ತವು. ದೇವತೆಗಳ ಪೂಜಿಸಿ ಸ್ವರ್ಗವ ಪಡವಲಕ್ಕು, ಆದರೆ ಮರಳಿ ಹುಟ್ಟದ ಮೋಕ್ಷವ ಪಡವಲೆಡಿಯ. ಯಾವ ಪೂಜೆ ಮಾಡಿರೂ ಸರಿ, ಪ್ರತಿಯೊಂದು ಕ್ರಿಯೆಯ ಹಿಂದೆ ಭಗವಂತನ ಅರಿವಿದ್ದು ಆ ಮೂಲಕ ಅವನನ್ನೇ ಆರಾಧಿಸುವದು ನಿಜವಾದ ಭಗವಂತನ ಪೂಜೆ. ಅರಿವಿಲ್ಲದ ಪೂಜೆ ಎಂದೂ ನಮ್ಮ ಮೋಕ್ಷದತ್ತ ಕೊಂಡೋವುತ್ತಿಲ್ಲೆ. ಭಗವಂತನ ಲೋಕವ ಬಿಟ್ಟು ಎಲ್ಲವೂ ನಶ್ವರವಾದ್ದು. ಭಗವಂತನ ಸಾನ್ನಿಧ್ಯ ಒಂದೇ ಶಾಶ್ವತವಾದ್ದು, ನಿತ್ಯಾನಂದದಾಯಕವಾದ್ದು. ಬ್ರಹ್ಮಾದಿ ಸಮಸ್ತ ದೇವತಾ ಪರಿವಾರ ಸಮೇತನಾಗಿಪ್ಪ ಭಗವಂತನ ಆರಾಧನೆ ಮಾಡಿರೆ ಆ ಭಗವಂತ° ನವಗೆ ಒಲಿತ್ತ°. ನವಗೆ ಮೋಕ್ಷವ ಕೊಡುವವ° ಅವ° ಒಬ್ಬನೇ ಸರಿ. ಇದು ಶಾಸ್ತ್ರದ ವ್ಯವಸ್ಥೆ.   

ಹಾಂಗಾರೆ ನಮ್ಮ ನಿತ್ಯ ಜೀವನಲ್ಲಿ ಗಣಹೋಮ, ನವಗ್ರಹ ಶಾಂತಿ, ದೈವಾರಾಧನೆ, ಸಂಕಷ್ತಿ, ತ್ರಿಕಾಲಪೂಜೆ, ಇತ್ಯಾದಿ ಇತ್ಯಾದಿ ಉಪಾಸನೆ ಮಾಡುತ್ತದು ಎಂತಕೆ? ಇದು ತಪ್ಪೋ?!. ಬನ್ನಂಜೆ ವಿವರುಸುತ್ತವು – ಯಾವುದೇ ಪ್ರತೀಕದ ಅಂತರ್ಯಾಮಿ ಭಗವಂತನ ಪೂಜೆ ತಪ್ಪಲ್ಲ. ಆದರೆ ಅದರ ಹಿಂದಿಪ್ಪ ನಮ್ಮ ಸಂಕಲ್ಪ ತಪ್ಪು. ಉದಾಹರಣೆಗೆ ನವಗ್ರಹ ಹೋಮ. ಒಂದು ಸಮಯ, ನಾವು ಯಾವ ಫಲ ಕಾಮನೆ ಇಲ್ಲದ್ದೆ, ಕೇವಲ ಮೋಕ್ಷಪ್ರಾಪ್ತಿಗೆ, ಸಕಲ ದೇವತಾಪರಿವಾರನಾದ, ನವಗ್ರಹ ಅಂತರ್ಗತ ನಾರಾಯಣ ಪ್ರೀತ್ಯರ್ಥ ನವಗ್ರಹ ಹೋಮ ಮಾಡಿರೆ ಏನೂ ತಪ್ಪಿಲ್ಲೆ. ಆದರೆ ಅಲ್ಲಿ ನಾವು ‘ನವಗ್ರಹ ಅಂತರ್ಗತ ನಾರಾಯಣ ಪ್ರಸನ್ನನಾಗಿ ಆ ಮೂಲಕ ನವಗ್ರಹ ದೋಷ ಪರಿಹಾರ ಮಾಡಲಿ ಹೇಳಿ ಸಂಕಲ್ಪ ಮಾಡಿಯಪ್ಪಗ ಅದು ತ್ರೈವಿಧ್ಯ ಧರ್ಮ ಆವುತ್ತು. ಸಂಕಲ್ಪ ಮಾಡುವಾಗ ಯಾವುದೇ ಕಾಮನೆ ಸೇರುಸದ್ದೆ ಬರೇ ಭಗವದ್ ಪ್ರೀತ್ಯರ್ಥ ಹೇಳಿ ಯಾವ ಕಾಮ್ಯ ಕರ್ಮ ಮಾಡಿರೂ ಅದು ಭಾಗವತ ಧರ್ಮ ಆವ್ತು. ಭಗವಂತ° ಸುಪ್ರೀತನಾದರೆ ಎಲ್ಲವೂ ಸಿದ್ಧಿಸಿದ ಹಾಂಗೆ. ಮತ್ತೆ ಅವ° ಕೊಟ್ಟದರ ಸಂತೋಷಂದ ಸ್ವೀಕರುಸಿ ಅನುಭೋಗುಸು, ಕೊಡದ್ದರ ಬಯಸೇಡ, ಅದು ಬೇಕು ಇದು ಬೇಕು ಹೇಳಿ ಪೂಜಗೆ ಇಳಿಯೇಡ, ಜ್ಞಾನ ವೈರಾಗ್ಯ ಭಕ್ತಿ ಮೋಕ್ಷವ ಕೊಡು ಹೇಳಿ ಪ್ರಾರ್ಥಿಸೆಕು. ನಮ್ಮ ರಕ್ಷಣೆಯ ಭಾರ ಆ ಭಗವಂತನದ್ದು. ನಮ್ಮ ರಕ್ಷಣೆಯ ಬಗ್ಗೆ ನಾವು ತಲೆಕೆಡುಸೆಕ್ಕಾದ್ದಿಲ್ಲೆ. ಅದು ಸ್ವಾರ್ಥ ವಾ ಐಹಿಕ ಭೋಗದ ಲಕ್ಷಣ ಆವ್ತು. ನಿತ್ಯ ಜೀವನಲ್ಲಿ ನಡವದು ಆಕಸ್ಮಿಕ ಅಲ್ಲ, ಅದು ಭಗವಂತನ ಇಚ್ಛೆ ಹೇಳ್ವದರ ಮನಸಾರೆ ಒಪ್ಪಿಗೊಳ್ಳೆಕು. ಯಾವುದೋ ಸಂಕಷ್ಟ ನಿವಾರಣೆ ಮಾಡು ಹೇಳಿ ಭಗವಂತನ ಪೂಜಿಸುವದಲ್ಲ, ಭಗವಂತನ ಸೇರ್ಲೆ ಭಗವಂತನ ಪೂಜಿಸೆಕು. ಈ ರೀತಿ ನಾವು ನಮ್ಮ ಸಂಕಲ್ಪವ ಅನುಸಂಧಾನ ಮಾಡಿರೆ ಅದು ಭಾಗವತ ಧರ್ಮ ಆವ್ತು. ಒಬ್ಬ ತ್ರೈವಿಧ್ಯ° ತನ್ನ ಗುರುವಿಂಗೆ ‘ಎನ್ನ ಗುರು’ ಹೇಳಿ ನಮಸ್ಕಾರ ಮಾಡಿರೆ ಅದು ಗುರುವಿನ ಒಳ ಇಪ್ಪ ಭಗವಂತಂಗೆ ಸಲ್ಲುಸುವ ನಮಸ್ಕಾರ, ಆ ಗುರುವಿನ ಒಳ ಇಪ್ಪ ಭಗವಂತ ಜ್ಞಾನವ ನೀಡುವದು. ಹಾಂಗಾಗಿ, ದೇವತಾ ಪರಿವಾರದ ಪೂಜೆ ಹೇಳಿರೆ ದೇವತಾ ಪರಿವಾರ ಸಮೇತನಾದ ಆ ಭಗವಂತನ ಸಂತೃಪ್ತಿಗೊಳುಸಲೆ ಮಾಡ್ವ ಪೂಜೆ ಹೇಳ್ವ ಅನುಸಂಧಾನ ನಮ್ಮದಾಯೆಕು. ಯಾವ ಪ್ರತಿಫಲಾಪೇಕ್ಷೆ ಇಲ್ಲದ್ದೆ ಭಗವಂತನ ಪ್ರೀತಿ ಮತ್ತು ಮೋಕ್ಷ ಒಂದೇ ನಮ್ಮ ಬಯಕೆ ಆಯೆಕು. ಅಲ್ಲದ್ರೆ ಯಾವುದೋ ಒಂದು ಪ್ರತಿಫಲಾಪೇಕ್ಷೆಂದ ವಿವಿಧ ದೇವತಾ ಪೂಜೆ ಮಾಡಿರೆ ಆ ಪ್ರತಿಫಲ ಮಾಂತ್ರ ದಕ್ಕಿಸಿಗೊಂಡಾಂಗೆ ಅಕ್ಕಷ್ಟೆ.

ಶ್ಲೋಕ

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।
ತದಹಂ ಭಕ್ತ್ಯುಪಹೃತಂ ಅಶ್ನಾಮಿ ಪ್ರಯತಾತ್ಮನಃ ॥೨೬॥

ಪದವಿಭಾಗ

ಪತ್ರಮ್ ಪುಷ್ಪಮ್ ಫಲಮ್ ತೋಯಮ್ ಯಃ ಮೇ ಭಕ್ತ್ಯಾ ಪ್ರಯಚ್ಛತಿ । ತತ್ ಅಹಮ್ ಭಕ್ತಿ-ಉಪಹೃತಮ್ ಅಶ್ನಾಮಿ ಪ್ರಯತ-ಆತ್ಮನಃ

ಅನ್ವಯ

ಯಃ ಪತ್ರಂ ಪುಷ್ಪಂ ಫಲಂ ತೋಯಂ ಭಕ್ತ್ಯಾ ಮೇ ಪ್ರಯಚ್ಛತಿ, ತಸ್ಯ ಪ್ರಯತ-ಆತ್ಮನಃ ಭಕ್ತಿ-ಉಪಹೃತಂ ತತ್ ಅಹಮ್ ಅಶ್ನಾಮಿ ।

ಪ್ರತಿಪದಾರ್ಥ

ಯಃ – ಆರು, ಪತ್ರಮ್ ಪುಷ್ಪಮ್ ಫಲಮ್ ತೋಯಮ್ – ಒಂದು ಎಲೆಯ (ಎಸಳ), ಒಂದು ಹೂವಿನ, ಒಂದು ಹಣ್ಣಿನ, ಒಂದು ಹುಂಡು ನೀರಿನ, ಭಕ್ತ್ಯಾ – ಸಂಪೂರ್ಣ ಭಕ್ತಿಂದ, ಮೇ – ಎನಗೆ, ಪ್ರಯಚ್ಛಂತಿ – ಅರ್ಪಿಸುತ್ತನೋ, ತಸ್ಯ ಪ್ರಯತ-ಆತ್ಮನಃ – ಶುದ್ಧಪ್ರಜ್ಞೆಇಪ್ಪವವನಿಂದ (ಅವನಿಂದ),  ಭಕ್ತಿ-ಉಪಹೃತಮ್ – ಭಕ್ತಿಂದ ಅರ್ಪಿಸಿದ್ದರ, ತತ್ – ಅದರ, ಅಹಮ್ ಅಶ್ನಾಮಿ – ಆನು ಸ್ವೀಕರುಸುತ್ತೆ.

ಅನ್ವಯಾರ್ಥ

ಆರು ಎನಗೆ ನಿಜ ಪ್ರೀತಿ ಹಾಂಗೂ ಭಕ್ತಿಂದ ಒಂದು ಎಸಳು ಹೂಗೋ, ಪತ್ರವೋ, ಹಣ್ಣೋ, ವಾ ಒಂದು ಹುಂಡು ನೀರು ಅರ್ಪುಸುತ್ತವೋ ಆನು ಅವರ ನಿಜ ಪ್ರಯತ್ನಂದ ಅರ್ಪಿಸಿದ ಅದರ ಪ್ರೀತಿಂದ ಸ್ವೀಕರುಸುತ್ತೆ.

ತಾತ್ಪರ್ಯ / ವಿವರಣೆ

ಮಹೋನ್ನತನಾದ ಭಗವಂತನ ಪೂಜಗೆ ಮೂಲವಾಗಿ ಬೇಕಪ್ಪದು ತನ್ನ ತಾನು ಸಂಪೂರ್ಣ ಶ್ರದ್ಧಾ ಭಕ್ತಿಂದ ತೊಡಗಿಸಿಗೊಂಬದು. ಮನಸ್ಸು ತುಂಬಿ ಆರಾಧನೆ ಮಾಡುವದು. ಅನನ್ಯ ಭಕ್ತಿ. ಮನಸ್ಸಿಲ್ಲಿ ಅನನ್ಯ ಭಕ್ತಿಂದ ತುಂಬಿ ತುಳಸಿ/ಬಿಲ್ವ ಪತ್ರವನ್ನೋ, ಸುಗಂಧ ಹೂವಿನ ಎಸಳನ್ನೋ ಅರ್ಪಿಸಿರೆ ಅದರ ಭಗವಂತ° ಪ್ರೀತಿಂದ ಸ್ವೀಕರುಸುತ್ತ°. ಇಲ್ಲಿ ಬಂಗಾರದ ಪೀಠವಾಗಲೀ, ಬೆಳ್ಳಿಯ ಹರಿವಾಣವಾಗಲಿ, ಪಂಚಪಾತ್ರೆಯಾಗಲೀ ಏವುದೂ ಬೇಡ. ಮನೆಲಿ, ಮನೆ ತೋಟಲ್ಲಿ ಎಂತ ಇದ್ದೋ ಅದರನ್ನೇ ಅರ್ಪುಸು. ಭಗವಂತಂಗೆ ಅರ್ಪುಸಲೆ ಹೇಳಿ ಇನ್ನಾರದ್ದೋ ತೋಟಕ್ಕೋ ಅಂಗಡಿಗೋ ಹೋಗಿ ಹುಡುಕ್ಕುವದು ಬೇಡ. ಏಪ್ಪುಲು, ಮುಸುಂಬಿ ಹಣ್ಣೇ ಆಯೇಕು ಹೇಳಿ ಇಲ್ಲೆ, ಬಾಳೆ ಹಣ್ಣೋ, ತೆಂಗಿನಕಾಯಿಯೂ ಅಕ್ಕು, ಹಾಲೂ ಅಕ್ಕು.., ಎಂತ ಇಲ್ಯೋ.., ಒಂದು ಹುಂಡು ನೀರೂ ಸಾಕು. ಭಕ್ತಿಂದ ಅರ್ಪುಸು. ಅದರ ಹಿಂದೆ ಭಾವಶುದ್ಧಿ ಇರಲಿ ಅಷ್ಟೇ. ಭಗವಂತ° ಹೇಳಿದ್ದು “ಯೋ ಮೇ ಭಕ್ತ್ಯಾ ಪ್ರಯಚ್ಛತಿ” ಹೇಳಿ. ಭಗವಂತ ಬಯಸುವದು ನಮ್ಮಿಂದ ವೈಭವವ ಅಲ್ಲ, ನಮ್ಮ  ಅಂತರಂಗದ ಪ್ರೀತಿ ಹಾಂಗೂ ಹೃದಯವಂತಿಕೆಯ.   ಭಗವಂತಂಗೆ ಬೇಕಾದ್ದು ಆಡಂಬರ ಅಲ್ಲ, ಅವ ನಮ್ಮತ್ರೆ ನೋಡ್ತದು ನಮ್ಮ ಅಂತರ್ಯದ ನಿಜ ಭಕ್ತಿ ಗುಣವ.  “ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ” – ನಿಜಭಕ್ತಿಂದ ಕೊಟ್ಟದರ ಆನು ಪ್ರೀತಿಂದ ಸ್ವೀಕರುಸುತ್ತೆ ಹೇಳಿ ಭಗವಂತ° ಹೇಳಿದ್ದು. ರಾಮಾಯಣಲ್ಲಿ ಬಪ್ಪ ಶಬರಿಯ ಕಥೆ ಭಗವಂತನ ಈ ನುಡಿಗೆ ಒಂದು ಉತ್ತಮ ದೃಷ್ಟಾಂತ.

ಭಗವಂತ° ಇಲ್ಲಿ ಹೇಳಿದ್ದು “ಪತ್ರಂ ಪುಷ್ಪಂ ಫಲಂ ತೋಯಂ”. ಭಗವಂತ° ಸಾತ್ವಿಕರಿಂಗೆ ಸಾತ್ವಿಕ°. ಮನುಷ್ಯನ ಜೀವನಕ್ಕೆ ಬೇಕಾದ್ದು ಸಾತ್ವಿಕ ಆಹಾರ. ಭಗವಂತನ ಸೇವಗೆ ಬೇಕಾದ್ದು ಸಾತ್ವಿಕ ಗುಣ. ಸಾತ್ವಿಕ ಗುಣ ನಮ್ಮ ಆಹಾರಂದ ಒಳಗೊಂಡಿರುತ್ತು. ಆಧ್ಯಾತ್ಮಿಕ ಸಾಧನಗೆ ಬೇಕಾದ್ದು ಸಾತ್ವಿಕ ಸದಾಚಾರ. ತನ್ನಲ್ಲಿ ಇದ್ದು ಹೇಳಿ ಇಪ್ಪದರೆಲ್ಲ ತಂದು ಅವನೆದುರು ಮಡುಗಿ ಆಡಂಬರ ತೋರ್ಸೆಕ್ಕಾದ್ದು ಇಲ್ಲೆ. ಹಾಂಗಾಗಿ ಭಗವಂತನ ಭಕ್ತಿಸೇವಗೆ ಅಪೇಕ್ಷಣೀಯ ವಸ್ತುಗೊ ಇದ್ದರೆ ಸಾಕು. ಅಪೇಕ್ಷಣೀಯವಲ್ಲದ್ದರ ಅಥವಾ ಭಗವಂತ° ಕೇಳದ್ದರ ಅವನ ಮುಂದೆ ತಂದು ಸೊರುಗಿದರೆ ಅದು ನಮ್ಮ ಡಂಬಾಚಾರ ಅಕ್ಕಷ್ಟೆ. ಸುಗಂಧ ಪತ್ರ, ಪುಷ್ಪ, ಸಾತ್ವಿಕ ಆಹಾರ. ಶುದ್ಧ ಜಲ ಅಷ್ಟೇ ಸಾಕು. ಮೀನು ಮೊಟ್ಟೆ ಮಾಂಸ ವಾ ಮಸಾಲೆ ಪದಾರ್ಥಂಗೊ ಭಗವಂತಂಗೆ ಅರ್ಪುಸಲೆ ಭಗವಂತ° ಹೇಳಿದ್ದನಿಲ್ಲೆ. ನೈವೇದ್ಯಕ್ಕೆ ಹಣ್ಣುಗೊ, ಇಲ್ಲದ್ರೆ ಹಾಲು, ಅದೂ ಇಲ್ಲದ್ರೆ ಒಂದು ಹುಂಡು ನೀರಿಂದಲೂ ಭಗವಂತ° ತೃಪ್ತನಾವುತ್ತ°.   ಅವ° ಅದು ಯಾವುದೂ ತನಗೆ ಬೇಕು ಹೇಳಿ ತೆಗದು ತಿಂತ° ಇಲ್ಲೆ. ಇಲ್ಲಿ ನಾವು ಭಕ್ತಿಂದ ನಾವು ತೆಕ್ಕೊಂಬದರ ಅವಂಗೆ ಅರ್ಪಿಸಿಯೇ ಅವನ ಪ್ರಸಾದ ಹೇಳಿ ಗ್ರೇಶಿ ತೆಕ್ಕೊಂಬದು ತಿಂಬದು ಹೇಳ್ವ ಧ್ವನಿ. ಇವಿಷ್ಟು ಸಾತ್ವಿಕ ಭಕ್ತಂಗೆ ಹೇಳಿದ ವಿಚಾರಂಗೊ. ರಾಜಸ ತಾಮಸರ ನೇವೇದ್ಯ ವಿಷಯದ  ಬಗ್ಗೆ ಇನ್ನಾಣ ಶ್ಲೋಕಲ್ಲಿ  ಬರದ್ದು.

ಮುಂದೆ ಎಂತರ…?     ಬಪ್ಪ ವಾರ ನೋಡುವೋ°.

  ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 09 – SHLOKAS 18 – 26 by CHENNAI BHAAVA
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

3 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 09 – ಶ್ಲೋಕಂಗೊ 18 – 26

  1. “ಕೆರೆಯ ನೀರನು ಕೆರೆಗೆ ಚೆಲ್ಲಿ…… ಹರಿ ಸಮರ್ಪಣೆ ಮಾಡಿ ಬದುಕಿರೊ.” ಕನಕದಾಸರ ನೆ೦ಪಾತು. “ಪತ್ರ೦ ಪುಷ್ಪ೦……..”ಎಲ್ಲವುದೆ ಅವ° ಕೊಟ್ಟದು, ಹಾ೦ಗಾರೆ ನಾವು ಕೊಡುವದೆ೦ತರ? ಅಚಲ ಶ್ರದ್ಧೆ-ಭಕ್ತಿ ಇವೆರಡರಿ೦ದ ಅರ್ಪಣೆ ಮಾಡುವದರಿ೦ದ ಆ ದೇವರು ಸುಪ್ರೀತ ಆವುತ್ತಾ.° ರಾಮಾಯಣದ ಶಬರಿ ಹಣ್ಣಿನ ಕಚ್ಚಿ ಕೊಟ್ಟರೂ ರಾಮ ಸ್ವೀಕಾರ ಮಾಡಿದ°. ಭಕ್ತಿಲಿ ವಿದುರ ಒ೦ದು ಮುಕ್ಳಿ ಹಾಲು ಕೊಟ್ಟದು ಕೃಷ್ಣ ಕುಡ್ದು ಕಡೆ ಬಾಯಿಲಿ ಬಿಟ್ಟ ಹಾಲ ಹನಿ೦ದ ಹಸ್ತಿನಾವತಿಲಿ ಹಾಲ ಹೊಳೆ ಹರ್ದತ್ತಡ! ಕುಚೇಲ(ಸುದಾಮ)ಮುಷ್ಟಿ ಪೃಥುಕ(ಅವಲಕ್ಕಿ)ಕೃಷ್ಣ ಬಾಚಿ ತಿ೦ದ ಪರಿಣಾಮ-ಈ ಎಲ್ಲಾ ಸನ್ನಿವೇಶ೦ಗಳ ನೆ೦ಪು ಮಾಡ್ಸಿತ್ತು ನಿ೦ಗಳ ವಿವರಣೆ. ನಮ್ಮ ಭಕ್ತಿ ನಿಷ್ಕಾಮವಾಗಿರೆಕು ಹೇಳ್ವ ವಿವರಣೆ ತು೦ಬಾ ಕೊಶಿ ಕೊಟ್ಟತ್ತು. ಸರಳವಾಗಿ, ಹೃದ್ಯವಾದ ವ್ಯಾಖ್ಯಾನ ಮುಚ್ಚುವಾ೦ಗಿದ್ದು. ಒ೦ದೇ ಮಾತಿಲ್ಲಿ ಹೇಳ್ತರೆ ಅದ್ಭುತವಾಗಿ ಬತ್ತಾ ಇದ್ದು ಗೀತೋಪದೇಶ!ನಿ೦ಗಳ ಶೈಲಿ ಲಾಯಕಿದ್ದು. ಧನ್ಯ!………… ಧನ್ಯ!………. ಧನ್ಯವಾದ೦ಗೊ!………

  2. ಭಕ್ತಿಯ ಪಾರಮ್ಯವ ಬೋಧಿಸುವ ಸಾಲುಗೊ.ನಮಗೆ ಯಾವ ರೂಪ ಇಷ್ಟವೋ ಆ ರೂಪಲ್ಲಿ ದೇವರ ಆರಾಧಿಸಲಕ್ಕು-ಕೃಷ್ಣನಷ್ಟು ವಿಶಾಲಮನಸ್ಸಿನ ನಾಯಕ ಬೇರೆ ಆರೂ ಇಲ್ಲೆ. ಆರಾಧನಾ ಸ್ವಾತಂತ್ರ್ಯವ ನಮ್ಮ ಮತಲ್ಲಿ ಕೊಟ್ಟ ಹಾಂಗೆ ಕೊಟ್ಟ ಬೇರೆ ಮತ ಇಲ್ಲೆ. ಇದಲ್ಲದೊ ನಿಜವಾದ ಸಹಿಷ್ಣುತೆ ಮತ್ತೆ ಜಾತ್ಯತೀತತೆ?

  3. {ಪತ್ರಂ ಪುಷ್ಪಂ ಫಲಂ ತೋಯಂ ……… } – ಇದು ನಾವು ಆ ಭಗವಂತಂಗೆ ಅರ್ಪುಸುದು.
    ಇದೇ ಭಾವಲ್ಲಿ ” ಧನ್ಯವಾದ ಭಾವ” ಹೇಳಿ ನಿಂಗೊಗೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×