Oppanna.com

ಗರುಡಪುರಾಣ – ಅಧ್ಯಾಯ 14 – ಭಾಗ 02

ಬರದೋರು :   ಚೆನ್ನೈ ಬಾವ°    on   16/01/2014    3 ಒಪ್ಪಂಗೊ

ಚೆನ್ನೈ ಬಾವ°

ಧರ್ಮರಾಯನ ಪುರದ ವಿವರಣೆ, ಸಭೆಯ ವಿವರಣೆ ಆಗ್ಯೊಂಡಿತ್ತಿದ್ದು ಕಳುದವಾರ. ಧರ್ಮರಾಜನ ಪುರಕ್ಕೆ ಹೋಪಲೆ ನಾಕು ದ್ವಾರಂಗೊ ಇಪ್ಪದಾಗಿಯೂ, ಪಾಪಿಗೊ ಹೋಪ ತೆಂಕ ದ್ವಾರವ/ಮಾರ್ಗವ ಈ ಮದಲೆ ವಿವರಣೆ ಹೇಳಿಪ್ಪದಾಗಿಯೂ, ನಾನಾಶ್ಚರ್ಯ ಉಂಟುಮಾಡುವ ಕಾಮರೂಪೀ ಅದ್ಭುತ ರಮಣೀಯ ಯಮಸಭಾ ಪುಣ್ಯಾತ್ಮರುಗೊಕ್ಕೆ ಮಾಂತ್ರ ಹೋಪಲೆ ಎಡಿಗಪ್ಪದಾಗಿಯೂ ಕಳುದವಾರದ ಭಾಗಲ್ಲಿ ಓದಿದ್ದದು. ಪುಣ್ಯಾತ್ಮರುಗೊ ಹೋಪ ಪೂರ್ವಾದಿ ಮೂರು ಮಾರ್ಗಂಗಳ/ದ್ವಾರಂಗಳ ಬಗ್ಗೆ ಮುಂದೆ ವಿವರುಸುತ್ತೆ ಹೇಳಿದಲ್ಯಂಗೆ ಕಳುದವಾರದ ಭಾಗ ನಿಂದತ್ತು. ಮುಂದೆ –
 
ಗರುಡಪುರಾಣ – ಅಧ್ಯಾಯ 14 – ಭಾಗ 02
 
ಪೂರ್ವಮಾರ್ಗಸ್ತು ತತ್ರೈಕಃ ಸರ್ವಭೋಗಸಮನ್ವಿತಃ ।images
ಪಾರಿಜಾತತರುಚ್ಛಾಯಾಚ್ಛಾದಿತೋ ರತ್ನಮಂಡಿತಃ ॥೫೧॥
ಅಲ್ಲಿ ಒಂದು ಪೂರ್ವ ಮಾರ್ಗ ಇದ್ದು. ಅದು ಸರ್ವಭೋಗಂಗಳಿಂದಲೂ ಕೂಡಿ, ಪಾರಿಜಾತ ವೃಕ್ಷದ ತಣಿಲಿಂದ ಆಚ್ಛಾದಿತವಾಗಿ ರತ್ನಂಗಳಿಂದ ಅಲಂಕೃತವಾಗಿದ್ದು.
ವಿಮಾನಗಣಸಂಕೀರ್ಣೋ ಹಂಸಾವಲಿವಿರಾಜಿತಃ ।
ವಿದುಮಾರಾಮಸಂಕೀರ್ಣಪೀಯೂಷದ್ರವಸಂಯುತಃ ॥೫೨॥
ಬಹುಅಂತಸ್ತಿನ ಕಟ್ಟೋಣ ಸಂಕೀರ್ಣಂದ ತುಂಬಿ, ಹಂಸಗಳ ಪಂಕ್ತಿಗಳಿಂದ ಶೋಭಿತವಾಗಿ, ಹವಳದ ತೋಟಂದ ಸುಸಜ್ಜಿತವಾಗಿ ಕೋಟೆಂದ ಆವೃತವಾಗಿದ್ದು.
ತೇನ ಬ್ರಹ್ಮರ್ಷಯೋ ಯಾಂತಿ ಪುಣ್ಯಾ ರಾಜರ್ಷಯೋsಮಲಾಃ ।
ಅಪ್ಸರೋಗಣಗಂಧರ್ವವಿದ್ಯಾಧರಮಹೋರಗಾಃ ॥೫೩॥
ಆ ಮಾರ್ಗಂದ ಪುಣ್ಯಾತ್ಮರಾದ ಬ್ರಹ್ಮರ್ಷಿಗೊ, ನಿಷ್ಕಲ್ಮಶರಾದ ರಾಜರ್ಷಿಗೊ, ಅಪ್ಸರೆಯರ ಸಮೂಹ, ಗಂಧರ್ವರು, ವಿದಾಧರರು ಮತ್ತೆ ಮಹಾಸರ್ಪಂಗೊ ಹೋವುತ್ತವು.
ದೇವತಾರಾಧಕಾಶ್ಚಾನ್ಯೇ ಶಿವಭಕ್ತಿಪರಾಯಣಃ ।
ಗ್ರೀಷ್ಮೇ ಪ್ರಪಾದಾನರತಾ ಮಾಘೇ ಕಾಷ್ಠಪ್ರದಾಯಿನಃ ॥೫೪॥
ದೇವತೆಗಳ ಆರಾಧುಸುವವು, ಶಿವಭಕ್ತಿಲಿ ತತ್ಪರರಾದವು, ಗ್ರೀಷ್ಮಋತುವಿಲ್ಲಿ ಮಾರ್ಗದ ಕರೇಲಿ ನೀರುಕುಡಿವ ತಾಣವ ಕಟ್ಟಿದವು, ಮಾಘಮಾಸಲ್ಲಿ ಸೌದಿ ದಾನಮಾಡಿದವು,
ವಿಶ್ರಾಮಯಂತಿ ವರ್ಷಾಸು ವಿರಕ್ತಾನ್ದಾನಮಾನತಃ ।
ದುಃಖಿತಸ್ಯಾಮೃತಂ ಬ್ರೂತೇ ದದತೇ ಹ್ಯಾಶ್ರಮಂ ತು ಯೇ ॥೫೫॥
ಮಳೆಗಾಲಲ್ಲಿ ವಿರಕ್ತರಿಂಗೆ ದಾನಮಾನಂಗಳಿಂದ ವಿಶ್ರಾಂತಿಯ ಕೊಡುವವು, ದುಃಖಿತನಾದವಂಗೆ ಅಮೃತವಚನವ ಹೇಳುವವು ಮತ್ತೆ ಆಶ್ರಮವ ಕೊಡುವವು,
ಸತ್ಯಧರ್ಮರತಾ ಯೇ ಚ ಕ್ರೋಧಲೋಭವಿವರ್ಜಿತಾಃ ।
ಪಿತೃಮಾತೃಷು ಭಕ್ತಾ ಗುರುಶುಶ್ರೂಷಣೇ ರತಾಃ ॥೫೬॥
ಸತ್ಯಧರ್ಮಂಗಳಲ್ಲಿ ನಿರತರಾದವು, ಕ್ರೋಧ ಲೋಭಂಗಳ ವರ್ಜಿಸಿದವು, ಅಬ್ಬೆ ಅಪ್ಪನತ್ರೆ ಭಕ್ತಿ ಮಡಿಕ್ಕೊಂಡವು, ಗುರುವಿನ ಶುಶ್ರೂಷೆಲಿ ನಿರತರಾದವು,
ಭೂಮಿದಾ ಗೃಹದಾ ಗೋದಾ ವಿದ್ಯಾದಾನಪ್ರದಾಯಕಾಃ ।
ಪುರಾಣವಕ್ತೃಶ್ರೋತಾರಃ ಪಾರಾಯಣಪರಾಯಣಾಃ ॥೫೭॥
ಭೂದಾನ, ಗೃಹದಾನ, ಗೋದಾನ, ವಿದ್ಯಾದಾನ ಮಾಡಿದವು, ಪುರಾಣಂಗಳ ಹೇಳುವವು, ಕೇಳುವವು, ಪಾರಾಯಣಲ್ಲಿ ನಿರತರಾದವು,
ಏತೇ ಸುಕೃತಿನಶ್ಚಾನ್ಯೇ ಪೂರ್ವದ್ವಾರೇ ವಿಶಂತಿ ಚ ।
ಯಾಂತಿ ಧರ್ಮಸಭಾಯಾಂ ತೇ ಸುಶೀಲಾಃ ಶುದ್ಧಬುದ್ಧಯಃ ॥೫೮॥
ಇವು ಅಲ್ಲದ್ದೆ ಇನ್ನಿತರ ಸುಕೃತಿಗೊ ಪೂರ್ವದ್ವಾರಲ್ಲಿ ಪ್ರವೇಶಿಸುತ್ತವು. ಶೀಲವಂತರಾದ ಮತ್ತೆ ಪರಿಶುದ್ಧ ಬುದ್ಧಿಯಿಪ್ಪ ಅವು ಧರ್ಮರಾಜನ ಸಭಗೆ ಹೋವುತ್ತವು.
ದ್ವಿತೀಯಸ್ತೂತ್ತರೋ ಮಾರ್ಗೋ ಮಹಾರಥಶತೈರ್ವೃತಃ ।
ನರಯಾನಸಮಾಯುಕ್ತೋ ಹರಿಚಂದನಮಂಡಿತಃ ॥೫೯॥
ಎರಡ್ನೇದು ಬಡಗ ಮಾರ್ಗ, ನೂರಾರು ಮಹಾರಥಂಗಳಿಂದಲೂ, ಪಲ್ಲಕ್ಕಿಗಳಿಂದಲೂ ಕೂಡಿ ಹರಿಚಂದನ ಹೇಳ್ವ ದೇವಲೋಕದ ವೃಕ್ಷಂಗಳಿಂದ ಶೋಭಿತವಾಗಿದ್ದು.
ಹಂಸಸಾರಸಂಕೀರ್ಣಶ್ಚಕ್ರವಾಕೋಪಶೋಭಿತಃ ।
ಅಮೃತದ್ರವಸಂಪೂರ್ಣಸ್ತತ್ರ ಭಾತಿ ಸರೋವರಃ ॥೬೦॥
ಹಂಸ, ಕೊಕ್ಕರೆಗಳಿಂದ ತುಂಬಿಪ್ಪ. ಚಕ್ರವಾಕ ಪಕ್ಷಿಗಳಿಂದ ಶೋಭಿಪ, ಅಮೃತಸಮ ಜಲಂದ ತುಂಬಿದ ಸರೋವರ ಅಲ್ಲಿ ಶೋಭಿತವಾಗಿದ್ದು.
ಅನೇನ ವೈದಿಕಾ ಯಾಂತಿ ತಥಾsಭ್ಯಾಗತಪೂಜಕಾಃ ।
ದುರ್ಗಾಭಾನ್ವೋಶ್ಚ ಯೇ ಭಕ್ತಾಸ್ತೀರ್ಥಸ್ನಾತಶ್ಚ ಪರ್ವಸು ॥೬೧॥
ಈ ಮಾರ್ಗಂದ ವೇದವ ಓದಿದವು, ಮತ್ತೆ ಆರು ಅಭ್ಯಾಗತರ ಪೂಜುಸುತ್ತವೋ, ದುರ್ಗೆ ಮತ್ತೆ ಸೂರ್ಯನ ಭಕ್ತರೋ, ಪರ್ವದಿನಂಗಳಲ್ಲಿ ತೀರ್ಥಸ್ನಾನ ಮಾಡುತ್ತವೋ,
ಯೇ ಮೃತಾಧರ್ಮಸಂಗ್ರಾಮೇsನಶನೇನ ಮೃತಾಶ್ಚ ಯೇ ।
ವಾರಣಸ್ಯಾಂ ಗೋಗ್ರಹೇ ಚ ತೀರ್ಥತೋಯೇ ಮೃತಾವಿಧೇಃ ॥೬೨॥
ಆರು ಧರ್ಮಯುದ್ಧಲ್ಲಿ ಮೃತರಾವ್ತವೋ, ಆರು ಉಪವಾಸ ವ್ರತಲ್ಲಿ ಮೃತರಾವ್ತವೋ, ಆರು ಕಾಶಿಲಿ, ಗೋಶಾಲೆಲಿ ವಿಧಿವಶಾತ್ ತೀರ್ಥಜಲಲ್ಲಿ ಮೃತರಾವುತ್ತವೋ,
ಬ್ರಾಹ್ಮಣಾರ್ಥೇಸ್ವಾಮಿಕಾರ್ಯೇ ತೀರ್ಥಕ್ಷೇತ್ರೇಷು ಯೇ ಮೃತಾಃ ।
ಯೇ ಮೃತಾ ದೈವವಿಧ್ವಂಸೇ ಯೋಗಾಭ್ಯಾಸೇನ ಯೇ ಮೃತಾಃ ॥೬೩॥
ಆರು ಬ್ರಾಹ್ಮಣಂಗೆ ಬೇಕಾಗಿ, ಸ್ವಾಮಿ ಕಾರ್ಯಲ್ಲಿ, ತೀರ್ಥಕ್ಷೇತ್ರಲ್ಲಿ ಮೃತರಾವ್ತವೋ, ಆರು ದೇವ ಪ್ರತಿಮೆಗಳ ವಿಧ್ವಂಸವ ತಪ್ಪುಸಲೆ ಮೃತರಾವ್ತವೋ, ಆರು ಯೋಗಾಭ್ಯಾಸಂದ ಮೃತರಾವ್ತವೋ,
ಸತ್ಪಾತ್ರಪೂಜಕಾ ನಿತ್ಯಂ ಮಹಾದಾನರತಾಶ್ಚ ಯೇ ।
ಪ್ರವಿಶಂತ್ಯುತ್ತರೇ ದ್ವಾರೇ ಯಾಂತಿ ಧರ್ಮಸಭಾಂ ಚ ತೇ ॥೬೪॥
ಆರು ಸಜ್ಜನರ ಪೂಜಿಸುತ್ತವೋ, ಮತ್ತೆ ಆರು ಯಾವಗಲೂ ಮಹಾದಾನಂಗಳಲ್ಲಿ ನಿರತರಾಗಿರುತ್ತವೋ ಅವು ಬಡಗ ಬಾಗಿಲ್ಲಿ ಪ್ರವೇಶಿಸಿ ಧರ್ಮಸಭಗೆ ಹೋವುತ್ತವು.
ತೃತೀಯಃ ಪಶ್ಚಿಮೋ ಮಾರ್ಗೋ ರತ್ನಮಂದಿರ ಮಂಡಿತಃ ।
ಸುಧಾರಸಸದಾಪೂರ್ಣದೀರ್ಘಿಕಾಭಿರ್ವಿರಾಜಿತಃ ॥೬೫॥
ಮೂರನೇದು ಪಡುವಣ ಮಾರ್ಗ, ರತ್ನದ ಮಂದಿರಂಗಳಿಂದ ಶೋಭಿತವಾಗಿದ್ದು ಮತ್ತೆ ಏವತ್ತೂ ಅಮೃತರಸಂದ ತುಂಬಿದ ಕೊಳಂಗಳಿಂದ ವಿರಾಜಮಾನವಾಗಿದ್ದು.
ಐರಾವತಕುರೋದ್ಭೂತಮತ್ತಮಾತಂಗಸಂಕುಲಃ ।
ಉಚ್ಚೈಃಶ್ರವಸಮುತ್ಪನ್ನಹಯರತ್ನ ಸಮನ್ವಿತಃ ॥೬೬॥
ಈ ಮಾರ್ಗ, ಐರಾವತ ಕುಲಲ್ಲಿ ಹುಟ್ಟಿದ ಮದ್ದಾನೆಗಳ ಹಿಂಡುಗಳಿಂದಲೂ, ಉಚ್ಚೈಶ್ರವಂದ ಹುಟ್ಟಿದ ಉತ್ತಮವಾದ ಕುದುರೆಗಳಿಂದಲೂ ಕೂಡಿದ್ದು.
ಏತೇನಾತ್ಮ ಪರಾ ಯಾಂತಿ ಸಚ್ಛಾಸ್ತ್ರಪರಿಚಾರಕಾಃ ।
ಅನನ್ಯವಿಷ್ಣುಭಕ್ತಾಶ್ಚ ಗಾಯತ್ರೀಮಂತ್ರಜಾಪಕಾಃ ॥೬೭॥
ಈ ಮಾರ್ಗಂದ, ತಮ್ಮ ಆತ್ಮಲ್ಲಿ ನಿರತರಾದವು, ಉತ್ತಮ ಶಾಸ್ತ್ರಂಗಳ ಚಿಂತನೆ ಮಾಡುವವು, ವಿಷ್ಣುವಿನ ಅನನ್ಯ ಭಕ್ತರು ಮತ್ತೆ ಗಾಯತ್ರೀ ಮಂತ್ರವ ನಿತ್ಯ ಜೆಪಮಾಡುವವು,
ಪರಹಿಂಸಾಪರದ್ರವ್ಯಪರವಾದಪರಾಙ್ಮುಖಾಃ ।
ಸ್ವದಾರನಿರತಾಃ ಸಂತಃ ಸಾಗ್ನಿಕಾ ವೇದಪಾಠಕಾಃ ॥೬೮॥
ಪರಹಿಂಸೆ, ಪರರ ದ್ರವ್ಯ, ಪರರ ಒಟ್ಟಿಂಗೆ ವಾದ ಇವುಗಳಿಂದ ವಿಮುಖರಾಗಿಪ್ಪವು, ಸ್ವಪತ್ನಿಲಿ ತೃಪ್ತರಾದವು, ಸಜ್ಜನರು, ಅಗ್ನಿಗೊತ್ರ ಮಾಡುವವು ಮತ್ತೆ ವೇದಪಾಠಕರು,
ಬ್ರಹ್ಮಚರ್ಯವ್ರತಧರಾ ವಾನಪ್ರಸ್ಥಸ್ತಪಸ್ವಿನಃ ।
ಶ್ರೀಪಾದಸಂನ್ಯಾಸಪರಾಃ ಸಮಲೋಷ್ಟಾಶ್ಮಕಾಂಚನಾಃ ॥೬೯॥
ಬ್ರಹ್ಮಚರ್ಯವ್ರತನಿಷ್ಠರು, ವಾನಪ್ರಸ್ಥರು, ತಪಸ್ವಿಗೊ, ಶೀಪಾದ ಹೇಳ್ವ ಸಂನ್ಯಾಸವ ಸ್ವೀಕರಿಸಿದವು, ಮಣ್ಣು, ಕಲ್ಲು, ಚಿನ್ನಂಗಳ ಸಮಾನವಾಗಿ ಭಾವುಸುವವು,
ಜ್ಞಾನವೈರಾಗ್ಯಸಂಪನ್ನಾಃ ಸರ್ವಭೂತಹಿತೇ ರತಾಃ ।
ಶಿವವಿಷ್ಣುವ್ರತಕರಾಃ ಕರ್ಮಬ್ರಹ್ಮಸಮರ್ಪಕಾಃ ॥೭೦॥
ಜ್ಞಾನ ಮತ್ತೆ ವೈರಾಗ್ಯಂದ ಕೂಡಿದವು, ಎಲ್ಲ ಜೀವಂಗಳ ಹಿತಲ್ಲಿ ನಿರತರಾದವು, ಶಿವ-ವಿಷ್ಣುವಿನ ವ್ರತಾರಾಧಕರು, ಸಕಲಕರ್ಮಂಗಳ ಬ್ರಹ್ಮನಲ್ಲಿ ಸಮರ್ಪಣೆ ಮಾಡುವವು,
ಋಣೈಸ್ತ್ರಿಭಿರ್ವಿನಿರ್ಮುಕ್ತಾಃ ಪಂಚಯಜ್ಞರತಾಃ ಸದಾ ।
ಪಿತೄಣಾಂ ಶ್ರಾದ್ಧದಾತಾರಃ ಕಾಲೇ ಸಾಂಧ್ಯಮುಪಾಸಕಾಃ ॥೭೧॥
ಋಣತ್ರಯಂಗಳಿಂದ ಮುಕ್ತರಾದವು, ನಿತ್ಯವೂ ಪಂಚಯಜ್ಞಲ್ಲಿ ನಿರತರಾದೋರು, ಪಿತೃಗಳ ಶ್ರಾದ್ಧಂಗಳ ಮಾಡುವವು, ಸರಿಯಾದ ಕಾಲಲ್ಲಿ ಸಂಧ್ಯೋಪಾಸನೆ ಮಾಡುವವು,
ನೀಚಸಂಗವಿನಿರ್ಮುಕ್ತಾಃ ಸತ್ಸಂಗತಿಪರಾಯಣಾಃ ।
ಏತೇsಪ್ಸರೋಗಣೈರ್ಯುಕ್ತಾ ವಿಮಾನವರಸಂಸ್ಥಿತಾಃ ॥೭೨॥
ನೀಚರ ಸಹವಾಸಂದ ದೂರ ಇಪ್ಪವು, ಸತ್ಸಂಗಲ್ಲಿಯೇ ನಿರತರಾಗಿಪ್ಪೋರು – ಇವು ಅಪ್ಸರಗಣಂಗಳಿಂದ ಕೂಡಿ, ಶ್ರೇಷ್ಠವಾದ ವಿಮಾನಲ್ಲಿ ಕೂದೊಂಡು,
ಸುಧಾಪಾನಂ ಪ್ರಕುರ್ವಂತೋ ಯಾಂತಿ ತೇ ಧರ್ಮಮಂದಿರಮ್ ।
ವಿಶಂತಿ ಪಶ್ಚಿಮದ್ವಾರೇ ಯಾಂತಿ ಧರ್ಮಸಭಾಂತರೇ ॥೭೩॥
ಅಮೃತಪಾನ ಮಾಡಿಗೊಂಡು ಧರ್ಮಮಂದಿರಕ್ಕೆ ಹೋವುತ್ತವು. ಅಲ್ಲಿ ಪಶ್ಚಿಮದ್ವಾರಲ್ಲಿ ಪ್ರವೇಶಿಸಿ, ಧರ್ಮರಾಜನ ಸಭೆ ಮಧ್ಯಕ್ಕೆ ಹೋವುತ್ತವು.
ಯಮಸ್ತಾನಾಗತಾನ್ದೃಷ್ಟ್ವಾ ಸ್ವಾಗತಂ ವದತೇ ಮುಹುಃ ।
ಸಮುತ್ಥಾನಂ ಚ ಕುರುತೇ ತೇಷಾಂ ಗಚ್ಛತಿ ಸಂಮುಖಮ್ ॥೭೪॥
ಅವು ಬಪ್ಪದರ ಕಂಡು ಯಮಧರ್ಮರಾಜ° ಮತ್ತೆ ಮತ್ತೆ ಸ್ವಾಗತ ಹೇಳಿಗೊಂಡು ಎದ್ದು ನಿಂದು ಅವರ ಮುಂದೆ ಹೋವುತ್ತ°.
ತದಾ ಚತುರ್ಭುಜೋ ಭೂತ್ವಾ ಶಂಖಚಕ್ರಗದಾಸಿಭೃತ್ ।
ಪುಣ್ಯಕರ್ಮರತಾನಾಂ ಚ ಸ್ನೇಹಾನ್ಮಿತ್ರವದಾಚರೇತ್ ॥೭೫॥
ಅಷ್ಟಪ್ಪಗ ಧರ್ಮರಾಜ° ಚತುರ್ಭುಜನಾಗಿ ಶಂಖ, ಚಕ್ರ, ಗದೆ, ಕತ್ತಿಗಳ ಧರಿಸಿದವನಾಗಿ ಪುಣ್ಯಕರ್ಮಲ್ಲಿ ನಿರತರಾದೋರಿಂಗೆ ಪ್ರೀತಿಂದ ಮಿತ್ರರ ರೀತಿಲಿ ಉಪಚರುಸುತ್ತ°.
ಸಿಂಹಾಸನಂ ಚ ದದತೇ ನಮಸ್ಕಾರಂ ಕರೋತಿ ಚ ।
ಪಾದಾರ್ಘಂ ಕುರುತೇ ಪಶ್ಚಾತ್ಪೂಜತೇ ಚಂದನಾದಿಭಿಃ ॥೭೬॥
ಅವಕ್ಕೆ ಆಸನಕ್ಕೆ ಸಿಂಹಾಸನವ ಕೊಟ್ಟು ನಮಸ್ಕಾರ ಮಾಡಿ ಪಾದ್ಯ ಅರ್ಘ್ಯಂಗಳ ಕೊಟ್ಟು ಮತ್ತೆ ಚಂದನಾದಿಗಳಿಂದ ಪೂಜೆ ಮಾಡುತ್ತ°.
ನಮಸ್ಕುರ್ವಂತು ಭೋಃ ಸಭ್ಯಾ ಜ್ಞಾನಿನಂ ಪರಮಾದರಾತ್ ।
ಏಷ ಮೇ ಮಂಡಲಂ ಭಿತ್ತ್ವಾ ಬ್ರಹ್ಮಲೋಕಂ ಪ್ರಯಾಸ್ಯತಿ ॥೭೭॥
“ಓ ಸಭಾಸದರೇ!, ಜ್ಞಾನಿಗೆ ಅತ್ಯಂತ ಆದರಪೂರ್ವಕವಾಗಿ ನಮಸ್ಕಾರ ಮಾಡಿ, ಇವ° ಎನ್ನ ಮಂಡಲವ ಭೇದಿಸಿ ಬ್ರಹ್ಮಲೋಕಕ್ಕೆ ಹೋವುತ್ತ°.
ಭೋ ಭೋ ಬುದ್ಧಿಮತಾಂ ಶ್ರೇಷ್ಠಾ ನರಕಕ್ಲೇಶಭೀರವಃ ।
ಭವದ್ಭಿಃ ಸಾಧಿತಂ ಪುಣೈರ್ದೇವತ್ವಂ ಸುಖದಾಯಕಮ್ ॥೭೮॥
ಹೇ ಬುದ್ಧಿವಂತರಲ್ಲಿ ಶ್ರೇಷ್ಠರಾದವೇ!, ನರಕದ ಕ್ಲೇಶಂಗೊಕ್ಕೆ ಹೆದರೆಡಿ. ನಿಂಗೊ ಪುಣ್ಯಕರ್ಮಂಗಳಿಂದ ಸುಖದಾಯಕವಾದ ದೇವತ್ವವ ಸಾಧುಸಿದ್ದಿ.
ಮಾನುಷಂ ದುರ್ಲಭಂ ಪ್ರಾಪ್ಯ ನಿತ್ಯಂ ಯಸ್ತು ನ ಸಾಧಯೇತ್ ।
ಸ ಯಾತಿ ನರಕಂ ಘೋರಂ ಕೋsನ್ಯಸ್ತಸ್ಮಾದಚೇತನಃ ॥೭೯॥
ದುರ್ಲಭವಾದ ಮನುಷ್ಯ ಶರೀರವ ಪಡದೂ ಯಾವಾತ° ನಿತ್ಯ ಸಾಧನೆಯ ಮಾಡುತ್ತನಿಲ್ಲೆಯೋ, ಅವ° ಘೋರವಾದ ನರಕಕ್ಕೆ ಹೋವುತ್ತ°. ಅವನಿಂದ ಜಡ° ಇನ್ನಾರಿದ್ದವು?!
ಅಸ್ಥಿರೇಣ ಶರೀರೇಣ ಯೋsಸ್ಥಿರೈಶ್ಚ ಧನಾದಿಭಿಃ ।
ಸಂಚಿನೋತಿ ಸ್ಥಿರಂ ಧರ್ಮಂ ಸ ಏಕೋ ಬುದ್ಧಿಮಾನ್ನರಃ ॥೮೦॥
ಯಾವಾತ° ಅಸ್ಥಿರವಾದ ಶರೀರಂದ, ಅಸ್ಥಿರವಾದ ಧನಾದಿಗಳಿಂದ ಸ್ಥಿರವಾದ ಧರ್ಮವ ಸಂಚಯನಮಾಡುತ್ತನೋ ಅವ° ಒಬ್ಬನೇ ಬುದ್ಧಿವಂತ° ಮನುಷ್ಯ°”.
ತಸ್ಮಾತ್ಸರ್ವಪ್ರಯತ್ನೇನ ಕರ್ತವ್ಯೋ ಧರ್ಮಸಂಚಯಃ ।
ಗಚ್ಛಧ್ವಂ ಪುಣ್ಯವತ್ ಸ್ಥಾನಂ ಸರ್ವಭೋಗಸಮನ್ವಿತಮ್ ॥೮೧॥
ಹಾಂಗಾಗಿ ಎಲ್ಲ ಪ್ರಯತ್ನಂಗಳಿಂದಲೂ ಧರ್ಮಸಂಚಯನ ಮಾಡೆಕು. ಎಲ್ಲ ಸುಖಂಗಳಿಂದಲೂ ಯುಕ್ತವಾದ ಪುಣ್ಯವಂತರ ಸ್ಥಾನಕ್ಕೆ ಹೋಯೆಕು.
ಇತಿ ಧರ್ಮವಚಃ ಶ್ರುತ್ವಾ ತಂ ಪ್ರಣಮ್ಯ ಸಭಾಂ ಚ ತಾಮ್ ।
ಅಮರೈಃ ಪೂಜ್ಯಮಾನಾಸ್ತೇ ಸ್ತೂಯಮಾನಾ ಮುನೀಶ್ವರೈಃ ॥೮೨॥
ಧರ್ಮರಾಜನ ಈ ವಚನಂಗಳ ಕೇಟು ಸಭಗೆ ಬಂದ ಅವು ,ಅವಂಗೆ ಮತ್ತೆ ಆ ಸಭಗೆ ನಮಸ್ಕಾರ ಮಾಡಿ, ದೇವತೆಗಳಿಂದ ಗೌರವಿಸಲ್ಪಟ್ಟು, ಮುನೀಶ್ವರುರುಗಳಿಂದ ಕೊಂಡಾಡಲ್ಪಟ್ಟು,
ವಿಮಾನಗಣಸಂಕೀರ್ಣಾಃ ಪ್ರಯಾಂತಿ ಪರಮಂ ಪದಮ್ ।
ಕೇಚಿದ್ಧರ್ಮಸಭಾಯಾಂ ಹಿ ತಿಷ್ಠಂತಿ ಪರಮಾದರಾತ್ ॥೮೩॥
ವಿಮಾನಗಣದೊಟ್ಟಿಂಗೆ (ಸಂಪೂರ್ಣ ಸ್ವಾಭಿಮಾನ ಧನ್ಯತಾಭಾವದ ಸ್ವತಂತ್ರ ಸ್ಥಿತಿ = ವಿಮಾನ.  ವಿಶೇಷಾರ್ಥ ವಿವರ ಚಿಂತನೀಯಲ್ಲಿ ನೋಡಿ) ಪರಮಪದಕ್ಕೆ ಹೋವುತ್ತವು. ಕೆಲವು ಜೀವಾತ್ಮರುಗೊ ಪರಮಾದರಂದ ಧರ್ಮರಾಜನ ಸಭೆಲಿಯೇ ನಿಲ್ಲುತ್ತವು.
ಉಷಿತ್ವಾ ತತ್ರ ಕಲ್ಪಾಂತಂ ಭುಕ್ತ್ವಾ ಭೋಗಾನಮಾನುಷಾನ್ ।
ಪ್ರಾಪ್ನೋತಿ ಪುಣ್ಯಶೇಷೇಣ ಮಾನುಷ್ಯಂ ಪುಣ್ಯದರ್ಶನಮ್ ॥೮೪॥
ಅಲ್ಲಿ ಕಲ್ಪದ ಅಂತ್ಯವರೆಂಗೂ ವಾಸ ಮಾಡಿ, ದೈವೀಭೋಗಂಗಳ ಅನುಭವುಸಿ ಪುಣ್ಯಶೇಷಂದ ಪುಣ್ಯವ ದೊರಕುಸುವ ಮನುಷ್ಯರಾಗಿ ಹುಟ್ಟುತ್ತವು.
ಮಹಾಧನೀ ಚ ಸರ್ವಜ್ಞಃ ಸರ್ವಶಾಸ್ತ್ರವಿಶಾರದಃ ।
ಪುನಃ ಸ್ವಾತ್ಮವಿಚಾರೇಣ ತತೋ ಯಾತಿ ಪರಾಂ ಗತಿಮ್ ॥೮೫॥
ಮಹಾಧನಿಕ°, ಸರ್ವಜ್ಞ° ಮತ್ತೆ ಸಕಲ ಶಾಸ್ತ್ರಂಗಳಲ್ಲಿ ಪಂಡಿತರಾಗಿ ಮತ್ತೆ ಆತ್ಮ ವಿಚಾರಂದ ಪರಮಗತಿಯ ಹೊಂದುತ್ತವು.
ಏತತ್ತೇ ಕಥಿತಂ ಸರ್ವಂ ತ್ವಯಾ ಪೃಷ್ಟಂ ಯಮಾಲಯಮ್ ।
ಇದಂ ಶ್ರುಣ್ವನ್ನರೋ ಭಕ್ತ್ಯಾ ಧರ್ಮರಾಜಸಭಾಂ ವ್ರಜೇತ್ ॥೮೬॥
ನಿನ್ನಂದ ಕೇಳಲ್ಪಟ್ಟ ಪ್ರಶ್ನಗೆ ಯಮಾಲಯದ ವರ್ಣನೆಯೆಲ್ಲವನ್ನೂ ನಿನಗೆ ಹೇಳಿದ್ದಾತು. ಇದರ ಭಕ್ತಿಂದ ಕೇಳಿದ ಮನುಷ್ಯರು ಧರ್ಮರಾಜನ ಸಭಗೆ ಹೋವುತ್ತವು.
ಇತಿ ಶ್ರೀಗರುಡಪುರಾಣೇ ಸಾರೋದ್ಧಾರೇ ಧರ್ಮರಾಜನಗರನಿರೂಪಣಂ ನಾಮ ಚತುರ್ದಶೋsಧ್ಯಾಯಃ ॥
ಇಲ್ಲಿಗೆ ಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಯರ್ಮಧರ್ಮರಾಜನಗರದ ನಿರೂಪಣೆ’ ಹೇಳ್ವ ಹದಿನಾಲ್ಕನೇ ಅಧ್ಯಾಯ ಮುಗುದತ್ತು.
 
ಗದ್ಯರೂಪಲ್ಲಿ –
ಯಮಧರ್ಮರಾಯನ ಸಭೆಯ ತೆಂಕಹೊಡೆಯಾಣ ಮಾರ್ಗವ ಬಿಟ್ಟು ಬಾಕಿ ಪೂರ್ವಾದಿ ಮಾರ್ಗಂಗೊ ಸುಕೃತಿಗೊ ಹೋಪಂತಾದ್ದು. ಅದು ಪಾಪಿಗೊಕ್ಕೆ ದರ್ಶನ ಆವ್ತಿಲ್ಲೆ. ಸುಕೃತಿಗೊ ಮಾಂತ್ರ ಅದರ ಪ್ರವೇಶಿಸುತ್ತವು. ಭಗವಂತ° ಆ ಪೂರ್ವಾದಿ ಮಾರ್ಗಂಗಳ ವಿವರಣೆಯ ಹೇಳುತ್ತ° –
ಅಲ್ಲಿ ಒಂದು ಪೂರ್ವದ್ವಾರ ಇದ್ದು. ಆ ಮಾರ್ಗ ಸರ್ವಭೋಗ ಸಮನ್ವಿತವಾಗಿದ್ದು. ಪಾರಿಜಾತ ವೃಕ್ಷದ ನೆರಳಿಂದ ಆಚ್ಛಾದಿತವಾಗಿ ಮತ್ತೆ ರತ್ನಂಗಳಿಂದ ಅಲಂಕೃತವಾಗಿದ್ದು. ಆ ಮಾರ್ಗ ವಿಮಾನಂಗಳ ಸಮೂಹಂದ (ಕಟ್ಟೋಣಸಂಕೀರ್ಣ) ವ್ಯಾಪ್ತವಾಗಿದ್ದು ಮತ್ತೆ ಹಂಸಂಗಳ ಸಾಲುಗಳಿಂದ ಸುಶೋಭಿತವಾಗಿದ್ದು. ಹವಳದ (ವಿದ್ರುಮ) ಬಳ್ಳಿ, ಗೆಡು ಮರಗಳ ಉದ್ಯಾನಂಗಳಿಂದ ವ್ಯಾಪ್ತವಾಗಿದ್ದು ಮತ್ತೆ ಅಮೃತಮಯ ಜಲಯುಕ್ತವಾಗಿದ್ದು. ಆ ಮಾರ್ಗಲ್ಯಾಗಿ ಪುಣ್ಯಾತ್ಮರಾದ ಮಹರ್ಷಿಗೊ ಮತ್ತೆ ಪವಿತ್ರರಾದ ರಾಜರ್ಷಿಗೊ, ಅಪ್ಸರೆಯರ ಗಣ, ಗಂಧರ್ವ, ವಿದ್ಯಾಧರ, ವಾಸುಕಿ ಮುಂತಾದ ಮಹಾನ್ ನಾಗಂಗೊ ಹೋವ್ತವು.
ಅನೇಕ ದೇವತೆಗಳ ಆರಾಧನೆ ಮಾಡುವವು, ಶಿವಭಕ್ತರು, ಗ್ರೀಷ್ಮಋತುವಿಲ್ಲಿ ಮಾರ್ಗಲ್ಲಿ ಜಲಕಟ್ಟೆಯ ದಾನ ಮಾಡುವವು, ಮಾಘಮಾಸಲ್ಲಿ ಚಳಿಕಾಸಲೆ ಮರಮಟ್ಟು ನೀಡುವವು, ವರ್ಷಋತುವಿಲ್ಲಿ ವಿರಕ್ತ ಸಂತರಿಂಗೆ ದಾನ-ಮಾನಾದಿ ಪ್ರದಾನಿಸಿ ಅವಕ್ಕೆ ವಿಶ್ರಾಂತಿ ಒದಗುಸುವವು, ದುಃಖಿತ ಜನಂಗೊಕ್ಕೆ ಅಮೃತಮಯ ಮಾತುಗಳಿಂದ ಸಂತೋಷ ನೀಡುವವು ಮತ್ತೆ ಆಶ್ರಯ ನೀಡುವವು, ಸತ್ಯ ಮತ್ತೆ ಧರ್ಮಂದ ನಡವವು, ಕ್ರೋಧ ಮತ್ತೆ ಲೋಭರಹಿತರು, ಅಬ್ಬೆ-ಅಪ್ಪನಲ್ಲಿ ಭಕ್ತಿ ಮಡಿಕ್ಕೊಂಡಿಪ್ಪವು, ಗುರುಶುಶ್ರೂಷೆ ನಿರತರು, ಭೂದಾನ ಮಾಡುವವು, ಮನೆದಾನ ಮಾಡುವವು, ವಿದ್ಯಾದಾನ ನೀಡುವವು, ಪುರಾಣಂಗಳ ಹೇಳುವವು, ಕೇಳುವವು, ಮತ್ತೆ ಪುರಾಣಂಗಳ ಪಾರಾಯಣ ಮಾಡುವವು.. , ಇವೆಲ್ಲೊರು ಮತ್ತೆ ಈ ರೀತಿಯ ಅನ್ಯ ಪುಣ್ಯಾತ್ಮರುಗೊ ಕೂಡ ಪೂರ್ವದ್ವಾರಂದ ಶುದ್ಧಬುದ್ಧಿಯವರಾಗಿ ಧರ್ಮರಾಜನ ಸಭಾಭವನಕ್ಕೆ ಪ್ರವೇಶ ಮಾಡುತ್ತವು.
ಎರಡ್ನೇದು ಉತ್ತರಮಾರ್ಗ, ಅದು ನೂರಾರು ವಿಶಾಲ ರಥಂಗಳಿಂದ ಮತ್ತೆ ಪಲ್ಲಕ್ಕಿ ಮುಂತಾದ ನರಯಾನಂಗಳಿಂದ ಪರಿಪೂರ್ಣವಾಗಿದ್ದು. ಅದು ಹರಿಚಂದನದ ವೃಕ್ಷಂದ ಸುಶೋಭಿತವಾಗಿದ್ದು. ಆ ಮಾರ್ಗಲ್ಲಿ ಹಂಸ ಮತ್ತೆ ಸಾರಸ ಪಕ್ಷಿಗಳಿಂದ ವ್ಯಾಪ್ತವಾಗಿ, ಚಕ್ರವಾಕ ಪಕ್ಷಿಗಳಿಂದಲೂ ಸುಶೋಭಿತವಾಗಿ, ಅಮೃತತುಲ್ಯ ಜಲಂದ ಪರಿಪೂರ್ಣವಾದ ಒಂದು ಮನೋಹರ ಸರೋವರಂದ ಕೂಡಿದ್ದು. ಈ ಮಾರ್ಗದ ಮೂಲಕ ವೈದಿಕ ಬ್ರಾಹ್ಮಣರು, ಅಭ್ಯಾಗತರ ವಿಶೇಷ ಆದರಾಥಿತ್ಯಂಗಳಿಂದ ಪೂಜೆ ಮಾಡುವವು, ದುರ್ಗಾ ಮತ್ತೆ ಸೂರ್ಯನ ಭಕ್ತರು, ಹಬ್ಬ-ಹರಿದಿನಂಗಳಲ್ಲಿ ತೀರ್ಥಸ್ನಾನ ಮಾಡುವವು, ಧರ್ಮಸಂಗ್ರಾಮಲ್ಲಿ ಅಥವಾ ಅನಶನ ವ್ರತಂದ ಪ್ರಾಣತ್ಯಾಗ ಮಾಡುವವು, ವಾರಣಾಸಿಲಿ, ಗೋಶಾಲೆಲಿ ಅಥವಾ ತೀರ್ಥ ಜಲಲ್ಲಿ ವಿಧಿವತ್ತಾಗಿ ಪ್ರಾಣತ್ಯಾಗ ಮಾಡುವವು, ಬ್ರಾಹ್ಮಣರ ನಿಮಿತ್ತ ಅಥವಾ ತಮ್ಮ ಯಜಮಾನನ ಕಾರ್ಯಕ್ಕಾಗಿ ಹಾಂಗೂ ತೀರ್ಥಕ್ಷೇತ್ರಂಗಳಲ್ಲಿ ಮರಣ ಹೊಂದುವವು, ದೇವಪ್ರತಿಮೆ ಇತ್ಯಾದಿಗಳ ವಿಧ್ವಂಸವಪ್ಪದರ ತಡವ ಪ್ರಯತ್ನಲ್ಲಿ ಪ್ರಾಣತ್ಯಾಗ ಮಾಡಿದವು, ಯೋಗಾಭ್ಯಾಸಂದ ಪ್ರಾಣತ್ಯಾಗ ಮಾಡಿದವು, ಸತ್ಪಾತ್ರರ ಪೂಜೆ ಮಾಡುವವು ಹಾಂಗೂ ನಿತ್ಯ ಮಹಾದಾನ ನೀಡ್ವವು ಈ ಉತ್ತರ ದ್ವಾರಂದ ಧರ್ಮಸಭಾಭವನವ ಪ್ರವೇಶಿಸುತ್ತವು.
ಇನ್ನು ಮೂರ್ನೇದು ಪಶ್ಚಿಮ ದ್ವಾರ. ಅದು ರತ್ನಖಚಿತ ಭವನಂಗಳಿಂದ ಸುಶೋಭಿತವಾಗಿದ್ದು. ಅದು ಸದಾ ಅಮೃತರಸಂದ ಪರಿಪೂರ್ಣವಾಗಿಪ್ಪ ಬಾವಿ ಕೊಳಂಗಳಿಂದ ವಿರಾಜಿತವಾಗಿದ್ದು. ಆ ಮಾರ್ಗ ಐರಾವತ ಕುಲೋತ್ಪನ್ನ ಮದೋನ್ಮತ್ತ ಆನೆಗಳಿಂದ ಹಾಂಗೂ ಉಚ್ಚೈಃಶ್ರವಂದ ಉತ್ಪನ್ನ ಅಶ್ವರತ್ನಂಗಳಿಂದ ಯುಕ್ತವಾಗಿದ್ದು. ಈ ಮಾರ್ಗಂದ, ತಮ್ಮ ಆತ್ಮಲ್ಲಿ ನಿರತರಾದವು, ಉತ್ತಮ ಶಾಸ್ತ್ರಂಗಳ ಚಿಂತನೆ ಮಾಡುವವು, ವಿಷ್ಣುವಿನ ಅನನ್ಯ ಭಕ್ತರು ಮತ್ತೆ ಗಾಯತ್ರೀ ಮಂತ್ರವ ನಿತ್ಯ ಜೆಪಮಾಡುವವು, ಪರಹಿಂಸೆ, ಪರರ ದ್ರವ್ಯ, ಪರರ ಒಟ್ಟಿಂಗೆ ವಾದ ಇವುಗಳಿಂದ ವಿಮುಖರಾಗಿಪ್ಪವು, ಸ್ವಪತ್ನಿಲಿ ತೃಪ್ತರಾದವು, ಸಜ್ಜನರು, ಅಗ್ನಿಗೊತ್ರ ಮಾಡುವವು ಮತ್ತೆ ವೇದಪಾಠಕರು, ಬ್ರಹ್ಮಚರ್ಯವ್ರತನಿಷ್ಠರು, ವಾನಪ್ರಸ್ಥರು, ತಪಸ್ವಿಗೊ, ಶೀಪಾದ ಹೇಳ್ವ ಸಂನ್ಯಾಸವ ಸ್ವೀಕರಿಸಿದವು, ಮಣ್ಣು, ಕಲ್ಲು, ಚಿನ್ನಂಗಳ ಸಮಾನವಾಗಿ ಭಾವುಸುವವು, ಜ್ಞಾನ ಮತ್ತೆ ವೈರಾಗ್ಯಂದ ಕೂಡಿದವು, ಎಲ್ಲ ಜೀವಂಗಳ ಹಿತಲ್ಲಿ ನಿರತರಾದವು, ಶಿವ-ವಿಷ್ಣುವಿನ ವ್ರತಾರಾಧಕರು, ಸಕಲಕರ್ಮಂಗಳ ಬ್ರಹ್ಮನಲ್ಲಿ ಸಮರ್ಪಣೆ ಮಾಡುವವು, ಋಣತ್ರಯಂಗಳಿಂದ ಮುಕ್ತರಾದವು, ನಿತ್ಯವೂ ಪಂಚಯಜ್ಞಲ್ಲಿ  ನಿರತರಾದೋರು, [ಪಂಚಯಜ್ಞಂಗೊ = ೧. ಬ್ರಹ್ಮಯಜ್ಞ – ಸ್ವಾಧ್ಯಾಯ, ೨. ದೇವಯಜ್ಞ – ಹೋಮಾದಿ ವ್ರತಾಚರಣೆಗೊ, ೩. ಭೂತಯಜ್ಞ – ಇಂದ್ರಾದಿ ದೇವತೆಗಳ ಸಹಿತ ವಿಭಿನ್ನ ಜೀವಿಗಳ ನಿಮಿತ್ತ ಮನೆಯ ಹೆರ ಅನ್ನ ಬಲಿ ಕೊಡುವದು, ೪. ಪಿತೃಯಜ್ಞ – ಪಿತೃಗಳ ತರ್ಪಣ ಮತ್ತೆ ಶ್ರಾದ್ಧಾದಿ ಕಾರ್ಯಂಗೊ, ೫. ಅನುಷ್ಯಯ ಯಜ್ಞ – ಅತಿಥಿ ಸತ್ಕಾರ ಮಾಡುವದು], ಪಿತೃಗಳ ಶ್ರಾದ್ಧಂಗಳ ಮಾಡುವವು, ಸರಿಯಾದ ಕಾಲಲ್ಲಿ ಸಂಧ್ಯೋಪಾಸನೆ ಮಾಡುವವು, ನೀಚರ ಸಹವಾಸಂದ ದೂರ ಇಪ್ಪವು, ಸತ್ಸಂಗಲ್ಲಿಯೇ ನಿರತರಾಗಿಪ್ಪೋರು – ಇವು ಅಪ್ಸರಗಣಂಗಳಿಂದ ಕೂಡಿ, ಶ್ರೇಷ್ಠವಾದ ವಿಮಾನಲ್ಲಿ ಕೂದೊಂಡು, ಅಮೃತಪಾನ ಮಾಡಿಗೊಂಡು ಧರ್ಮಮಂದಿರಕ್ಕೆ ಹೋವುತ್ತವು. ಅಲ್ಲಿ ಪಶ್ಚಿಮದ್ವಾರಲ್ಲಿ ಪ್ರವೇಶಿಸಿ, ಧರ್ಮರಾಜನ ಸಭೆ ಮಧ್ಯಕ್ಕೆ ಹೋವುತ್ತವು. ಅವು ಬಂದದರ ನೋಡಿ ಧರ್ಮರಾಜ° ಸ್ವಾಗತ ಕುಶಲೋಪರಿ ಮಾತುಗಳ ತೊಡಗುತ್ತ°. ಎದ್ದು ನಿದ್ದು ಅವಕ್ಕೆ ಗೌರವ ಆದರ ಆತಿಥ್ಯವ ನೀಡ್ಳೆ ಅವರ ಎದುರಂಗೆ ಬತ್ತ°.
ಆ ಸಮಯಲ್ಲಿ ಧರ್ಮರಾಯ° ಭಗವಂತ° ವಿಷ್ಣುವಿನ ಹಾಂಗೆ ಚತುರ್ಭುಜ ರೂಪ, ಶಂಖ-ಚಕ್ರ-ಗದಾ ಹಾಂಗೂ ಖಡ್ಗ ಧಾರಣೆ ಮಾಡಿಗೊಂಡು, ಪುಣ್ಯಮಾಡಿದ ಆ ಜೀವಿಗಳತ್ರೆ ಸ್ನೇಹಪೂರ್ವಕ ಸ್ನೇಹಿತನ ಹಾಂಗೆ ಆಚರಣೆ ಮಾಡುತ್ತ°. ಅವಕ್ಕೆ ಕೂಬಲೆ ಸಿಂಹಾಸನವ ಕೊಟ್ಟು, ನಮಸ್ಕರಿಸಿ, ಪಾದ್ಯ ಅರ್ಘ್ಯಾದಿಗಳ ಕೊಟ್ಟು ಚಂದನಾದಿಕ ಪೂಜಾ ಸಾಮಾಗ್ರಿಗಳಿಂದ ಅವರ ಪೂಜೆ ಮಾಡುತ್ತ°. ಮತ್ತೆ ಯಮಧರ್ಮರಾಜ° ಹೇಳುತ್ತ° – “ಹೇ ಸಭಾಸದರೇ!, ಈ ಜ್ಞಾನಿಗೊಕ್ಕೆ ಪರಮ ಆದರ ಪೂರ್ವಕ ನಮಸ್ಕಾರ ಮಾಡಿ, ಇವು ನಮ್ಮ ಮಂಡಲದ ಭೇದನ ಮಾಡಿ ಬ್ರಹ್ಮಲೋಕಕ್ಕೆ ಹೋಪೋರು. ಹೇ ಬುದ್ಧಿವಂತ ಶ್ರೇಷ್ಠರೇ! ಹಾಂಗೂ ನರಕದ ಯಾತನೆಂದ ಭಯಭೀತರಪ್ಪ ಪುಣ್ಯಾತ್ಮರೇ!, ನಿಂಗೊ ಎಲ್ಲೊರು ನಿಂಗಳ ಪುಣ್ಯಕರ್ಮಾನುಷ್ಠಾನಂಗಳಿಂದ ಸುಖ ಪ್ರದಾಯಕ ದೈವತ್ವವ ಹೊಂದಿದ್ದಿ. ದುರ್ಲಭ ಮನುಷ್ಯ ಯೋನಿಯ ಪ್ರಾಪ್ತಿ ಹೊಂದಿ, ಆರು ನಿತ್ಯ ವಸ್ತು-ಧರ್ಮದ ಸಾಧನೆಯ ಮಾಡುತ್ತವಿಲ್ಲೆಯೋ ಅವು ಘೋರ ನರಕಲ್ಲಿ ಬೀಳುತ್ತವು. ಅವಕ್ಕಿಂತ ದೊಡ್ಡ ಜಡ° ಅಜ್ಞಾನಿ ಇನ್ನಾರಿಪ್ಪಲೆ ಎಡಿಗು?!. ಅಸ್ಥಿರ ಶರೀರಂದ ಮತ್ತೆ ಅಸ್ಥಿರ ಧನಾದಿಗಳಿಂದ ಆರು ಧರ್ಮದ ಸಂಚಯ ಮಾಡುತ್ತನೋ ಅವನೇ ನಿಜವಾದ ಬುದ್ಧಿವಂತ° ವ್ಯಕ್ತಿ ಆಗಿರುತ್ತ°. ನಿಂಗೊ ಎಲ್ಲೊರು ಭೋಗಂದ ಪರಿಪೂರ್ಣ ಪುಣ್ಯಾತ್ಮರ ಸ್ಥಾನ ಸ್ವರ್ಗಕ್ಕೆ ಹೋಗಿ. ಹಾಂಗಾಗಿ ಎಲ್ಲ ಪ್ರಯತ್ನಂಗಳಿಂದಲೂ ಧರ್ಮಸಂಚಯನ ಮಾಡೆಕು. ಎಲ್ಲ ಸುಖಂಗಳಿಂದಲೂ ಯುಕ್ತವಾದ ಪುಣ್ಯವಂತರ ಸ್ಥಾನಕ್ಕೆ ಹೋಯೆಕು”.
ಈ ಪ್ರಕಾರ ಧರ್ಮರಾಜನ ಮಾತುಗಳ ಕೇಟು, ಧರ್ಮರಾಜಂಗೆ ಮತ್ತೆ ಅವನ ಸಭಗೆ ನಮಸ್ಕಾರ ಮಾಡಿಕ್ಕಿ ಅವು ದೇವತೆಗಳಿಂದ ಪೂಜಿತರಾಗಿ ಮತ್ತೆ ಮುನೀಶ್ವರರುಗಳಿಂದ ಸ್ತುತಿಸಲ್ಪಟ್ಟು ವಿಮಾನ ಸಮೂಹಂಗಳ ಮೂಲಕ ಪರಮ ಪದಕ್ಕೆ ಹೆರಡುತ್ತವು. ಕೆಲವು ಪುಣ್ಯಾತ್ಮರುಗೊ ಪರಮ ಆದರಂದ ಧರ್ಮರಾಜನ ಸಭೆಲಿಯೇ ಉಳಿತ್ತವು. ಮತ್ತೆ ಅಲ್ಲಿ ಒಂದು ಕಲ್ಪ ಪರ್ಯಂತ ಇದ್ದು ಮನುಷ್ಯರಿಂಗೆ ದುರ್ಲಭವಾದ ಭೋಗಂಗಳ ಉಪಭೋಗುಸಿ, ಶೇಷ ಪುಣ್ಯದನುಸಾರ ನಿರ್ಮಲ ಮನುಷ್ಯ ಯೋನಿಲಿ ಮತ್ತೆ ಜೆನ್ಮ ತಾಳುತ್ತವು. ಈ ಲೋಕಲ್ಲಿ ಅವು ಮಹಾ ಧನಿಕನಾಗಿ, ಸರ್ವಜ್ಞನಾಗಿ ಹಾಂಗೇ ಸಕಲ ಶಾಸ್ತ್ರ ಪಾರಂಗತರಾವುತ್ತವು. ಮತ್ತೆ ಪುನಃ ಆತ್ಮಚಿಂತನೆಯ ಮೂಲಕ ಪರಮಗತಿಯ ಹೊಂದುತ್ತವು.
ಹೇ ಗರುಡ!, ನೀನು ಯಮಲೋಕದ ವಿಷಯವಾಗಿ ಕೇಳಿದ್ದಕ್ಕೆ ಎಲ್ಲ ವಿವರಣೆಯನ್ನೂ ವರ್ಣಿಸಿದ್ದೆ. ಇದರ ಭಕ್ತಿಪೂರ್ವಕವಾಗಿ ಕೇಳುವ ಮನುಷ್ಯರು ಧರ್ಮರಾಜನ ಸಭಗೆ ಹೋವುತ್ತವು.
ಇಲ್ಲಿಗೆ ಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಯರ್ಮಧರ್ಮರಾಜನಗರದ ನಿರೂಪಣೆ’ ಹೇಳ್ವ ಹದಿನಾಲ್ಕನೇ ಅಧ್ಯಾಯ ಮುಗುದತ್ತು.
 
[ ಚಿಂತನೀಯಾ –
 
ಪಾಪಾತ್ಮರು ಇಹಲೋಕವ ಬಿಟ್ಟಿಕ್ಕಿ ಸೂಕ್ಷ್ಮಶರೀರಂದ ಯಮನರಕಕ್ಕೆ ಹೋಗಿ ಸೇರಿ ಅಲ್ಲಿ ಘೋರ ನರಕಯಾತೆನೆಯ ಅನುಭವುಸುತ್ತವು. ಯಮಲೋಕ ಹೇದ ಕೂಡ್ಳೆ ಮೈ-ಕೈ-ಕಾಲು ನಡುಗಲೆ ಸುರುವಾವ್ತು, ಬೆಗರ್ಲೆ ಸುರುವಾವ್ತು. ಆದರೆ ಅದು ಒಂದು ಹೊಡೆ ಮಾತ್ರ. ಅದೇ ಯಮಲೋಕ ಪುಣ್ಯಾತ್ಮರಿಂಗೆ ಪರಮಾದರ ಸೌಖ್ಯವ ನೀಡುವ ಸಂತೋಷ ತಾಣ ಕೂಡ ಅಪ್ಪು ಹೇಳ್ವದು ನವಗೀ ಭಾಗಂದ ಗೊಂತಾವ್ತು. ಸತ್ಯನಿಷ್ಠೆಲಿ ನಿಸ್ವಾರ್ಥ ಮನೋಭಾವಂದ ಭಗವದ್ಭಕ್ತನಾಗಿ ಬದುಕುವ ಜೀವಿಗೆ ಪರಲೋಕದ ಚಿಂತೆ ಬೇಕಾಗಿಲ್ಲೆ. ನಿತ್ಯ ಸಂಧ್ಯೋಪಾಸನೆ, ಪಂಚಯಜ್ಞಪರಾಯಣನಾಗಿ ತಮ್ಮ ಮುಂದಾಣ ಹಾದಿಯ ಸುಗಮಗೊಳುಸೆಕ್ಕಾದ್ದು ಮನುಷ್ಯನಾದವನ ಕರ್ತವ್ಯ.  ಗೀತೆಲಿ ಭಗವಂತ° ಹೇಳಿದ ಮಾತುಗೊ –  
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋsಸ್ತ್ವಕರ್ಮಣಿ ॥ಭ.ಗೀ. ೨.೪೭॥ –  ನಿನಗೆ ನಿಯೋಜಿತ ಕರ್ತವ್ಯಂಗಳ ಮಾಡ್ವದಕ್ಕಷ್ಟೇ ಅಧಿಕಾರ. ಆದರೆ, ಕರ್ಮಫಲಕ್ಕೆ ನಿನಗೆ ಅಧಿಕಾರ ಇಲ್ಲೆ. ಕರ್ಮಫಲಕ್ಕೆ ನೀನು ಕಾರಣ ಹೇದು ಗ್ರೇಶೆಡ, ಕರ್ಮವ ಬಿಡೆಕು ಹೇಳಿ ನಿನಗೆ ಮನಸ್ಸು ಆಗದ್ದಿರಳಿ.
 ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್ । ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಂ ॥ಭ.ಗೀ. ೧೮.೪೭॥ ಸರಿಯಾಗಿ (ಪರಿಪೂರ್ಣವಾಗಿ) ಆಚರಿಸ್ದ ಪರಧರ್ಮಕ್ಕಿಂತ ಸರಿಯಾಗಿ ಆಚರುಸದ್ದ (ಆಚರಣೆಲಿ ಕೊರತೆಯಿದ್ದರೂ) ಸ್ವಧರ್ಮವೇ ಮಿಗಿಲು (ಶ್ರೇಯಸ್ಕರ/ಉತ್ತಮ) ಆಗಿದ್ದು.  ಸ್ವಭಾವಕ್ಕನುಗುಣವಾಗಿ ವಿಹಿತ ಕರ್ಮವ ಮಾಡುವದರಿಂದ ಮನುಷ್ಯ° ದೋಷವ ಪಡೆತ್ತನಿಲ್ಲೆ.
ಈ ಎರಡು ಎಚ್ಚರಿಕೆ ಸದಾ ನಮ್ಮಲ್ಲಿದ್ದುಗೊಂಡು ಕರ್ಮಾನುಷ್ಠಾನಲ್ಲಿ ನಿರತನಾದರೆ ಇದರಿಂದ ಸಕಲಾಭೀಷ್ಟವ ಪಡವಲಕ್ಕು.
ಸಗುಣೋಪಾಸನೆಯೋ ನಿರ್ಗುಣೋಪಾಸನೆಯೋ ಏವುದಾರೂ ಅಡ್ಡಿ ಇಲ್ಲೆ. ಶಿವಭಕ್ತಿಯೋ ವಿಷ್ಣು ಭಕ್ತಿಯೋ ಯಾವುದಾರೂ ಅಡ್ಡಿ ಇಲ್ಲೆ. ಎಲ್ಲದಕ್ಕೂ ಕಾರಣನೂ ಶ್ರೇಷ್ಠನೂ, ಸತ್ಯವೂ ಅವ° ಒಬ್ಬನೇ ಹೇಳ್ವದು ಮಾತ್ರ ಸದಾ ನೆಂಪಿಲ್ಲಿ ಇದ್ದರೆ ಆತು.
‘ವಿಮಾನ’ ಹೇಳ್ತದಕ್ಕೆ ವಿಶೇಷ ಅರ್ಥ ಇದ್ದಡ. ‘ಸಾಯಿಬೋಧಾಮೃತಾಗರ’ಲ್ಲಿ ಈ ಬಗ್ಗೆ ಒಂದು ವಿವರಣೆ ಹೇಳಿದ್ದವು – ‘ವಿಮಾನ’ ಹೇಳ್ವದರ ಅರ್ಥ ‘ಮಾನ’ (ಗರ್ವ-ಅಹಂಕಾರ)ವ ವಿಸರ್ಜಿಸಿಪ್ಪದು. ಅಂತ ವ್ಯಕ್ತಿ ಸ್ವರ್ಗಕ್ಕೇರ್ಲೆ ಯೋಗ್ಯ°. ಇನ್ನೊಂದು ಕೋನಲ್ಲಿ ಅದರ ಹೀಂಗೂ ಅರ್ಥ ಮಾಡಿಗೊಂಬಲಕ್ಕು – ‘ವಿ’ ಹೇದರೆ ಪಕ್ಷಿ. ‘ಮಾನ’ ಹೇದರೆ ಅಳತೆ/ಪ್ರಮಾಣ. ಹಾಂಗಾಗಿ ಪರಲೋಕಯಾತ್ರೆಯ ವಿಮಾನಲ್ಲಿ ಹೋವ್ತ ಹೇಳ್ವ ಕಲ್ಪನೆ. ಒಂದು ಪಕ್ಷಿ ಆಕಾಶಲ್ಲಿ ಏವ ತಡೆಯೂ ಇಲ್ಲದ್ದೆ ಹೋವ್ತ ಹಾಂಗೆ ಆತ್ಮ ಅನಂತತೆಲಿ ಹೋವ್ತು ಹೇದೂ ಅರ್ಥೈಸಿಗೊಂಬಲಕ್ಕು. ಪುಣ್ಯಾತ್ಮ ವ್ಯಕ್ತಿ ಅಷ್ಟು ಸ್ವಾತ್ರಂತ್ಯವ ಪಡಕ್ಕೊಂಡಿರುತ್ತ°.
ಹಾಂಗಾಗಿ ಎಲ್ಲೋರು ವಿಮಾನಲ್ಲಿ ಹೋಪಾಂಗೆ ಆಗಲಿ ಹೇದು ಈ ಭಾಗಕ್ಕೆ ಹರೇ ರಾಮ ]
**

3 thoughts on “ಗರುಡಪುರಾಣ – ಅಧ್ಯಾಯ 14 – ಭಾಗ 02

  1. ಯಮನ ಭವನಕ್ಕೆ ಹೋಪಗ, ಮೂರು ದ್ವಾರಂಗಳಲ್ಲಿ ಅವರವರ ಕರ್ಮಕ್ಕೆ ಸರಿಯಾಗಿ ಯಾವದರ ಮೂಲಕ ಪ್ರವೇಶ ಮಾಡ್ಲೆ ಅರ್ಹತೆ ಸಿಕ್ಕುತ್ತು ಹೇಳಿ ನಿರೂಪಣೆ ಮನ ಮುಟ್ಟುವ ಹಾಂಗಿದ್ದು.
    ಧನ್ಯವಾದಂಗೊ

  2. “ಬಹುಅಂತಸ್ತಿನ ಕಟ್ಟೋಣ ಸಂಕೀರ್ಣಂದ ತುಂಬಿ…” ಅ೦ದ್ರೆ ಆಗಿನ ಕಾಲ್ದಾಗೇ ಅಪಾರ್ಟ್‍ಮೆ೦ಟ್ ಸಿಸ್ಟಮ್ ಇತ್ತು ಅ೦ತ ಆತು, ಅಲ್ದಾ? ಕುತೂಹಲಕಾರಿಯಾಗಿದ್ದು!
    ಗರುಡ ಪುರಾಣಲ್ಲಿ ರಾಶಿ ಇದ್ದು ತಿಳ್ಕೊ೦ಬುದು. ಚೆನ್ನೈಭಾವನ ಪರಿಶ್ರಮಕ್ಕೆ ನಾವೊ೦ದು “ಲಾಯ್ಕಾಯಿದು’ ಅ೦ತ ಒಪ್ಪ ಕೊಡುವ.

  3. ಉತ್ತರಾಯಣ ಪುಣ್ಯ ಕಾಲಲ್ಲಿ ಧರ್ಮ ರಾಜನ ಆಸ್ಠಾನದ ದಾರಿಯ ವಿವರಿಸಿ, ಆ ದಾರಿಲಿ ಹೋಯೆಕ್ಕಾರೆ ಬೇಕಾದ ಅರ್ಹತೆಗಳನ್ನೂ ತಿಳಿಸಿದ್ದಿ. ನಾವೆಲ್ಲಾ ಅದರ ಸಾಧುಸಲೆ ಪ್ರಯತ್ನ ಮಾಡುವೊ. ಧನ್ಯವಾದ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×