Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 10 – ಶ್ಲೋಕಂಗೊ 01 – 11

ಬರದೋರು :   ಚೆನ್ನೈ ಬಾವ°    on   01/11/2012    5 ಒಪ್ಪಂಗೊ

ಚೆನ್ನೈ ಬಾವ°

ಶ್ರೀ ಕೃಷ್ಣಪರಮಾತ್ಮನೇ ನಮಃ ॥

ಶ್ರೀಮದ್ಭಗವದ್ಗೀತಾ

ದಶಮೋsಧ್ಯಾಯಃ – ವಿಭೂತಿಯೋಗಃ – ಶ್ಲೋಕಂಗೊ 01 – 11

ಶ್ಲೋಕ

ಶ್ರೀಭಗವಾನುವಾಚ
ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ ।
ಯತ್ತೇsಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ ॥೦೧॥

ಪದವಿಭಾಗ

ಶ್ರೀ ಭಗವಾನ್ ಉವಾಚ
ಭೂಯಃ ಏವ ಮಹಾಬಾಹೋ ಶೃಣು ಮೇ ಪರಮಮ್ ವಚಃ । ಯತ್ ತೇ ಅಹಮ್ ಪ್ರೀಯಮಾಣಾಯ ವಕ್ಷ್ಯಾಮಿ ಹಿತ-ಕಾಮ್ಯಯಾ ॥

ಅನ್ವಯ

ಶ್ರೀ ಭಗವಾನ್ ಉವಾಚ
ಹೇ ಮಹಾಬಾಹೋ!, ಭೂಯಃ ಏವ ಮೇ ಪರಮಂ ವಚಃ ಶೃಣು । ಪ್ರೀಯಮಾಣಾಯ ತೇ ಯತ್ ಅಹಂ ಹಿತ-ಕಾಮ್ಯಯಾ ವಕ್ಷ್ಯಾಮಿ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಭಗವಂತ° ಹೇಳಿದ°, ಹೇ ಮಹಾಬಾಹೋ! – ಏ ಮಹಾಬಾಹುವಾದ ಅರ್ಜುನ!, ಭೂಯಃ – ಮತ್ತೆ, ಏವ ಮೇ  – ಖಂಡಿತವಾಗಿಯೂ ಎನ್ನ, ಪರಮಂ ವಚಃ – ಪರಮವಾದ ಉಪದೇಶವ, ಶೃಣು – ಕೇಳು, ಪ್ರೀಯಮಾಣಾಯ – ಎನಗೆ ನೀನು ಪ್ರಿಯ° ಹೇದು ತಿಳುದು, ತೇ – ನಿನಗೆ, ಯತ್  – ಯಾವುದರ, ಅಹಮ್ – ಆನು, ಹಿತ-ಕಾಮ್ಯಯಾ – ಹಿತಕ್ಕಾಗಿ, ವಕ್ಷ್ಯಾಮಿ – ಹೇಳುತ್ತೆ.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ°, ಭಗವಂತ° ಹೇಳಿದ°, ಏ ಮಹಾಬಾಹುವಾದ ಅರ್ಜುನ!, ಮತ್ತೆ ಈಗ ಆನು ಹೇಳ್ವದರ ಕೇಳು. ಎನಗೆ ಅತ್ಯಂತ ಪ್ರಿಯಕರನಾದ ನಿನಗೆ ನಿನ್ನ  ಹಿತಕ್ಕಾಗಿ ಇದರ ಹೇಳುತ್ತೆ.

ತಾತ್ಪರ್ಯ / ವಿವರಣೆ

ನಾವು ಉಪಾಸನೆ ಮಾಡೇಕಾದ ಭಗವಂತನ ಗುಣವ, ಜ್ಞಾನ ವಿಜ್ಞಾನ ರಹಸ್ಯವ ಅರ್ಜುನಂಗೆ ವಿವರಿಸಿದ ಭಗವಂತ° ಮತ್ತೆ ಅರ್ಜುನಂಗೆ ಮುಂದುವರುಸಿ ಹೇಳುತ್ತ°. ‘ನಿನ್ನಲ್ಲಿ ಅಂಕುರಿಸಿದ ಜ್ಞಾನ ತೃಷೆಯ ಗುರುತುಸಿ ನಿನ್ನ ಅಭಿವೃದ್ಧಿಗೆ ಸಹಾಯಕ ಅಪ್ಪಾಂಗೆ ಇನ್ನೂ ಕೆಲವು ಜ್ಞಾನ ಸ್ವರೂಪ ವಿಷಯವ ಹೇಳುತ್ತೆ. ಇದರಿಂದ ನಿನಗೆ ಹಿತವುಂಟಾವುತ್ತು’. ಸಾಮಾನ್ಯವಾಗಿ ಅಮೂಲ್ಯ ವಿದ್ಯೆಗಳ ಅಥವಾ ರಹಸ್ಯ ವಿಚಾರಂಗಳ ಗುರು ಸುಲಭಲ್ಲಿ ಬಹಿರಂಗಗೊಳುಸುತ್ತನಿಲ್ಲೆ. ಶಿಷ್ಯ ಗುರುವಿನತ್ರೆ ಪೂರ್ಣ ನಿಷ್ಠೆ ತೋರಿಸಿಯಪ್ಪಗ ಅವನ ಯೋಗ್ಯತೆಗನುಗುಣವಾಗಿ ಜ್ಞಾನವ ತುಂಬುಸುವದು. ಅಪಾತ್ರಂಗೆ ದಾನ ಮಾಡ್ಳಾಗ ಹೇಳುವದು ಇದನ್ನೆ. ಯೋಗ್ಯತೆ ಇಲ್ಲದ್ದವಂಗೆ ಜ್ಞಾನ ದಾನವೂ ಸರಿಯಲ್ಲ ಹೇಳ್ವ ತತ್ವವ ಈ ಮೂಲಕ ಕಂಡುಗೊಂಬಲಕ್ಕು. ಎಂತಕೆ ಹೇಳಿರೆ, ಯೋಗ್ಯತೆ ಇಲ್ಲದವಂಗೆ ಅದು ಪಥ್ಯವೂ ಆಗ. ಅಂತವರ ಮುಂದು ಅಂತಹ ವಿಚಾರಂಗಳ ಬಿಚ್ಚುತ್ತದು ದಂಡ ಮಾತ್ರವಲ್ಲ ತಥಾಕಲ್ಪಿತ ವ್ಯಾಖ್ಯಾನಂಗಳೂ, ಸ್ವಂತವಿಚಾರಂಗಳನ್ನೊ ಕಲಸಿ ಮೂಲ ಸ್ವಂತಿಕೆ ಕಳಕ್ಕೊಂಡು ಅಪಾರ್ಥವೇ ಅಪ್ಪದು ಅದು. ಹಾಂಗಾಗಿ ಗುರು ತನ್ನ ಶಿಷ್ಯನ ಪರೀಕ್ಷೆ ಮಾಡದ್ದೆ ಅಮೂಲ್ಯ ವಿಚಾರಂಗಳ ಹೇಳ್ತ ಕ್ರಮ ಇಲ್ಲೆ. ನಮ್ಮಲ್ಲಿ ಶಾಲೆಗಳಲ್ಲಿ ಪರೀಕ್ಷೆ ಹೇಳ್ವ ಮಾನದಂಡವೂ ಅದಕ್ಕೇ ಅಲ್ಲದೋ ಇಪ್ಪದು. ಈಗ ಎಷ್ಟು ಕಲ್ತಿದ°, ಮುಂದಾಣ ಕಲಿವಿಕಗೆ ಯೋಗ್ಯನೋ, ಎಷ್ಟು ಯೋಗ್ಯ ಹೇಳ್ವದರ ನಿರ್ಧರಿಸುವದೇ ಪರೀಕ್ಷೆ. ಗುರು ತನ್ನ ಶಿಷ್ಯನತ್ರೆ ಪೂರ್ಣ ನಿಷ್ಠೆಯ ಗುರುತಿಸಿಯಪ್ಪಗ ಅವ° ಕೇಳದ್ದರೂ ಗುರುವಿಂಗೆ ಅವನ ನಿಷ್ಠೆ ಮತ್ತೆ ಯೋಗ್ಯತೆಯ ಮನಗೊಂಡು ಮತ್ತಷ್ಟು ವಿಚಾರಂಗಳ ಅವನ ಅಭ್ಯುದಯಕ್ಕೆ ಬೇಕಾಗಿ ಶಿಷ್ಯಂಗೆ ಧಾರೆಯೆರೆತ್ತ°. ಇಲ್ಲಿ ಈ ಹಂತಲ್ಲಿ ಭಗವಂತಂಗೆ ಕಂಡದು ಅಂತಹ ಪೂರ್ಣ ನಿಷ್ಠೆ.
ಇಲ್ಲಿ ಭಗವಂತ ಹೇಳಿದ್ದ° “ಶೃಣು ಮೇ ಪರಮಂ ವಚಃ”. ಇಲ್ಲಿ ಪರಮಂ ಹೇಳಿರೆ ನಾವು ತಿಳ್ಕೊಳ್ಳೆಕ್ಕಾದ್ದು ಶ್ರೇಷ್ಠವಾದ ವಿಷಯ. ಅದು ಎಲ್ಲಕ್ಕಿಂತ ಮಿಗಿಲಾಗಿ ಪರತತ್ವದ ವಿಚಾರವ ತಿಳುಶುವ ಶ್ರೇಷ್ಠ ಜ್ಞಾನ. ಇಡೀ ಲೋಕಕ್ಕೇ ಉಪಕಾರವಪ್ಪಾಂತದ್ದು. ಇದರಿಂದ ಶ್ರೇಷ್ಠವಾದ್ದು ಇನ್ನೊಂದಿಲ್ಲೆ. ಹಾಂಗಾಗಿ ಅದು ‘ಪರಮಂ ವಚಃ’. ‘ಯುದ್ಧಭೂಮಿಲಿ ನಿಂದುಗೊಂಡು ಇದರ ಕೇಳಿ ನೀನು ಸಂತೋಷ ಪಡುವೆ. ಹಾಂಗಾಗಿ ನಿನ್ನ (ನಿನ್ನಾಂಗಿಪ್ಪವರ) ಹಿತಕ್ಕೋಸ್ಕರ ಅದರ ಆನು ಹೇಳುತ್ತೆ’ ಹೇಳಿ ಭಗವಂತ° ಮುಂದುವರುಶುತ್ತ°.

ಶ್ಲೋಕ

ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ ।
ಅಹಮಾದಿಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ ॥೦೨॥

ಪದವಿಭಾಗ

ನ ಮೇ ವಿದುಃ ಸುರ-ಗಣಾಃ ಪ್ರಭವಮ್ ನ ಮಹರ್ಷಯಃ । ಅಹಮ್ ಆದಿಃ ಹಿ ದೇವಾನಾಮ್ ಮಹರ್ಷೀಣಾಮ್ ಚ ಸರ್ವಶಃ ॥

ಅನ್ವಯ

ಸುರ-ಗಣಾಃ ಮಹರ್ಷಯಃ ಚ ಮೇ ಪ್ರಭವಂ ನ ವಿದುಃ । ಅಹಂ ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ ಆದಿ ಅಸ್ಮಿ ।

ಪ್ರತಿಪದಾರ್ಥ

ಸುರ-ಗಣಾಃ – ದೇವತೆಗೊ (ಎಲ್ಲ ದೇವತಾ ಗಣಂಗೊ), ಮಹರ್ಷಯಃ ಚ – ಮಹರ್ಷಿಗೊ ಕೂಡ, ಮೇ – ಎನ್ನ, ಪ್ರಭವಮ್ – ಮೂಲವ, ನ ವಿದುಃ – ತಿಳುದ್ದವಿಲ್ಲೆ. ಅಹಮ್ ಹಿ – ಆನೇ, ದೇವಾನಾಮ್ – ಸಮಸ್ತ ದೇವತೆಗಳ, ಮಹರ್ಷೀಣಾಮ್ ಚ – ಮಹರ್ಷಿಗಳ ಕೂಡ, ಸರ್ವಶಃ – ಎಲ್ಲ ವಿಧಂಗಳಲ್ಲಿಯೂ, ಆದಿ ಅಸ್ಮಿ – ಮೂಲ° ಆಗಿದ್ದೆ.

ಅನ್ವಯಾರ್ಥ

ದೇವತೆಗೊ ಆಗಲೀ, ಮಹರ್ಷಿಗೊ ಆಗಲೀ ಎನ್ನ ಮೂಲ ಸಿರಿಯ ತಿಳುದ್ದವಿಲ್ಲೆ. ಎಲ್ಲ ರೀತಿಲಿ ದೇವತೆಗೊಕ್ಕೂ ಮಹರ್ಷಿಗೊಕ್ಕೂ ಮೂಲ° ಆನೇ ಆಗಿದ್ದೆ.  

ತಾತ್ಪರ್ಯ / ವಿವರಣೆ

ಭಗವಂತ° ಇಲ್ಲಿ ಒಂದು ಮೂಲಭೂತವಾದ ಸಂಗತಿಯ ಹೇಳುತ್ತ°. “ಮೇ ಪ್ರಭವಂ ನ ವಿದುಃ” – ಮಹರ್ಷಿಗಳಿಂದ ಹಿಡುದು ಬ್ರಹಾದಿ ದೇವತೆಗಳೂ ಕೂಡ ಎನ್ನ ಮೂಲವ ತಿಳಿವಲೆ ಸಫಲರಾಯ್ದವಿಲ್ಲೆ. ಬನ್ನಂಜೆ ಹೇಳ್ತವು – ಇಲ್ಲಿ ‘ಪ್ರಭವ’ ಹೇಳಿರೆ ಮೂರು ಅರ್ಥಂಗೊ – ೧. ಮೂಲ ವಾ ಹುಟ್ಟು, ೨. ಸಾಮರ್ಥ್ಯ ವಾ ಹಿರಿಮೆ, ೩. ಜಗತ್ತಿನ ಉತ್ಪತ್ತಿ. “ಎನ್ನ ಮೂಲ, ಮಹಿಮೆ ಮತ್ತೆ ಎನ್ನಿಂದಾದ ಈ ಜಗತ್ತಿನ ಉತ್ಪತ್ತಿಯ ಮೂಲ ವಿಚಾರವ ಎನ್ನ ಸಾಕ್ಷಾತ್ಕರಿಸಿಗೊಂಡ ಮಾಹಾಜ್ಞಾನಿಗೊ ವಾ ಮಹರ್ಷಿಗಳಿಂದ ತೊಡಗಿ ಎನ್ನ ಅಪರೋಕ್ಷ ಜ್ಞಾನ ಪಡದ ಬ್ರಹ್ಮಾದಿ ದೇವತೆಗಳೂ ಪೂರ್ತಿ ತಿಳುದ್ದವಿಲ್ಲೆ” ಹೇಳಿ ಭಗವಂತ° ಹೇಳುತ್ತ°.  ಬಹುಮಂದಿಗೆ ಅವನ ವಾಸ್ತವಿಕ ಸ್ಥಿತಿಲಿ ಭಗವಂತನ ಅರ್ಥಮಾಡಿಗೊಂಬಲೆ ಸಾಧ್ಯ ಇಲ್ಲೆ. ಹಾಂಗಾಗಿ, ತನ್ನ ನಿಷ್ಕಾರಣ ಕರುಣೆಂದ ಅವ° ಹೀಂಗೆ ಊಹೆ ಮಾಡುತ್ತವಕ್ಕೆ ಕೃಪೆ ಮಾಡ್ಳೆ ಇಳುದು ಬತ್ತ°. ಭಗವಂತನ ಕಾರ್ಯಂಗೊ ಅಸಾಧಾರಣವಾದ್ದು. ಐಹಿಕಶಕ್ತಿಯ ಕಲ್ಮಷ ಸಂಪರ್ಕಂದಲಾಗಿ ಊಹಾಪೋಹ ಮಾಡುತ್ತವಕ್ಕೆ ಭಗವಂತನ ನಿಜವ ಅರ್ತುಗೊಂಬಲೆ ಸಾಧ್ಯ ಆವ್ತಿಲ್ಲೆ. ಭಗವಂತಂಗೆ ಸಂಪೂರ್ಣ ಶರಣಾಗತರಾದವರಿಂಗೆ ಮಾತ್ರ ಅವನ ಕೃಪೆಂದ ಅವನ ಅರ್ತುಗೊಂಬಲೆ ಸಾಧ್ಯ.  ಸಮಸ್ತ ಪ್ರಪಂಚದ ಎಲ್ಲವುದರ ಮೂಲ° ಆ ಭಗವಂತ°.

ಶ್ಲೋಕ

ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ ।
ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ ॥೦೩॥

ಪದವಿಭಾಗ

ಯಃ ಮಾಂ ಅಜಮ್ ಅನಾದಿಮ್ ಚ ವೇತ್ತಿ ಲೋಕ-ಮಹೇಶ್ವರಮ್ । ಅಸಮ್ಮೂಢಃ ಸಃ ಮರ್ತ್ಯೇಷು ಸರ್ವ-ಪಾಪೈಃ ಪ್ರಮುಚ್ಯತೇ ॥

ಅನ್ವಯ

ಯಃ ಮಾಮ್ ಅಜಮ್ ಅನಾದಿಂ ಲೋಕ-ಮಹೇಶ್ವರಂ ಚ ವೇತ್ತಿ, ಸಃ ಮರ್ತ್ಯೇಷು ಅಸಮ್ಮೂಢಃ ಭೂತ್ವಾ ಸರ್ವ-ಪಾಪೈಃ ಪ್ರಮುಚ್ಯತೇ ।

ಪ್ರತಿಪದಾರ್ಥ

ಯಃ – ಆರು, ಮಾಮ್ – ಎನ್ನ, ಅಜಮ್ – ಜನ್ಮರಹಿತ°, ಅನಾದಿಮ್ – ಆದಿಯಿಲ್ಲದ್ದವ°, ಲೋಕ-ಮಹೇಶ್ವರಮ್ – ಎಲ್ಲ ಲೋಕಂಗಳ  ಮಹಾ ಪ್ರಭುವ , ಚ – ಕೂಡ, ವೇತ್ತಿ – ತಿಳಿತ್ತನೋ, ಸಃ – ಅವ°, ಮರ್ತ್ಯೇಷು – ಮರಣಕ್ಕೆ ಒಳಪ್ಪಟ್ಟವರಲ್ಲಿ, ಅಸಮ್ಮೂಢಃ ಭೂತ್ವಾ – ಭ್ರಾಂತನಾಗದ್ದೆ, ಸರ್ವ-ಪಾಪೈಃ – ಸಮಸ್ತ ಪಾಪಂಗಳಿಂದ, ಪ್ರಮುಚ್ಯತೇ – ಬಿಡುಗಡೆ ಹೊಂದುತ್ತ°.

ಅನ್ವಯಾರ್ಥ

ಆರು ಎನ್ನ ಜನ್ಮ ಇಲ್ಲದ್ದವ°, ಅನಾದಿ ಮತ್ತೆ ಎಲ್ಲ  ಲೋಕಂಗಳ ಪರಮ ಪ್ರಭು ಹೇಳಿ ತಿಳ್ಕೊಳ್ಳುತ್ತನೋ, ಅವ° ಮಾಂತ್ರ, ಮನುಷ್ಯರಲ್ಲಿ (ಮರ್ತ್ಯೇಷು) ಭ್ರಾಂತಿ ಇಲ್ಲದ್ದವನಾಗಿ, ಎಲ್ಲ ಐಹಿಕ ಪಾಪಂಗಳಿಂದ ಬಿಡುಗಡೆ ಹೊಂದುತ್ತ°.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – ‘ಆನು ಹುಟ್ಟು ಇಲ್ಲದ್ದವ°, ಎಲ್ಲವನ್ನೂ ನಡೆಶುತ್ತ ಎಲ್ಲದರಿಂದಲೂ ಮದಲು ಇತ್ತಿದ್ದವ°, ಎಲ್ಲ ಲೋಕಂಗಳ ಒಡೆಯರಿಂಗೂ ಹಿರಿಯ ಒಡೆಯ ( ಲೋಕ ಮಹಾ-ಈಶ್ವರಃ) ಹೇದು ಆರು ಎನ್ನ ತಿಳಿತ್ತನೋ ಅವ° ಮನುಷ್ಯರಲ್ಲಿ ಭ್ರಾಂತರಹಿತನಾಗಿರುತ್ತ°, ಎಲ್ಲ ಪಾಪಂಗಳಿಂದ ಬಿಡುಗಡೆ ಹೊಂದುತ್ತ°. ಹೀಂಗೆ ಹೇಳಿಯಪ್ಪಗ ನವಗೆ ಸಹಜವಾಗಿ ಮನಸ್ಸಿಲ್ಲಿ ಒಂದು ಪ್ರಶ್ನೆ ಬಾಕಿ ಉಳಿತ್ತು. ಸಕಲ ಜೀವಜಾತವ ಭಗವಂತ° ಸೃಷ್ಟಿ ಮಾಡಿರೆ ಅವನ ಸೃಷ್ಟಿ ಮಾಡಿದ್ದಾರು ?! ಭಗವಂತನ ಇನ್ನೊಬ್ಬ ಸೃಷ್ಟಿ ಮಾಡಿದ್ದಾಗಿರುತ್ತಿದ್ರೆ ನಾವು ಮತ್ತೆ ಅವನ ದೇವರು ಹೇಳಿ, ಅವನೇ ಆದಿ ಹೇಳ್ತದರಲ್ಲಿ ಯಾವ ಅರ್ಥವೂ ಬತ್ತಿಲ್ಲೆ. ಹಾಂಗಾಗಿಯೇ ಭಗವಂತ° ಇಲ್ಲಿ ಅದರ ಸ್ಪಷ್ಟಪಡುಸಲೆ ಹೇಳಿದ್ದದು – “ಯೋ ಮಾಂ ಅಜಂ ಅನಾದಿಂ”. ಇಲ್ಲಿ ‘ಅಜ’ (ಜ – ಹುಟ್ಟು), ಹೇಳಿರೆ ಹುಟ್ಟು ಇಲ್ಲದ್ದದು. ಭಗವಂತ° ಹುಟ್ಟು ಸಾವಿನ ಮೀರಿ ನಿಂದುಗೊಂಡಿಪ್ಪವ°. ಹಾಂಗಾಗಿ ನಾವು ಹುಟ್ಟು-ಸಾವಿಂದ ಪಾರಾಯೇಕ್ಕಾರೆ ಅವನ ಉಪಾಸನೆಯನ್ನೇ ಮಾಡಿ ಅವನ ಸೇರೆಕು. ಭಗವಂತ° ಅನಾದಿ. ಅನಾದಿ (ಅನ+ಆದಿ) ಹೇಳಿರೆ ಸೃಷ್ಟಿಗೆ ಪ್ರೇರಣೆ ಮಾಡುತ್ತಿದ್ದವ° ಮತ್ತೆ ಸೃಷ್ಟಿ ಮಾಡಿ ಈ ಸೃಷ್ಟಿಲಿ ಸಮಸ್ಯ ವ್ಯವಹಾರವ ನಿಯಂತ್ರಣ ಮಾಡುವ ‘ಸರ್ವೋತ್ಕೃಷ್ಟ ಶಕ್ತಿ’. ಭಗವಂತ° ‘ಲೋಕಮಹೇಶ್ವರಃ’. ಬ್ರಹ್ಮಾದಿ ಸಮಸ್ತ ದೇವತೆಗೊ ‘ಲೋಕೇಶರರು’ ಅವರ ಹೆತ್ತ ಮಾತೆ ಲಕ್ಷ್ಮೀ – ‘ಲೋಕೇಶ್ವರಿ’. ಆ ಹೆತ್ತಬ್ಬಗೂ ಮಹಾನ್ ‘ಲೋಕಮಹೇಶ್ವರ’ ಆ ಭಗವಂತ°. ಅವನಿಂದ ಮಹತ್ತಾದ್ದು ಇನ್ನೊಂದು ತತ್ವ ಇಲ್ಲೆ. ಅವ ಹುಟ್ಟು ಸಾವ ಮೀರಿ ನಿಂದವ°.  ಮಹರ್ಷಿಗೊ (ಜ್ಞಾನವಂತರು), ದೇವತೆಗೊ ಹೀಂಗೆ ಎಲ್ಲರನ್ನೂ ಸೃಷ್ಟಿ ಮಾಡಿದ್ದದು ಆ ಭಗವಂತ°. ಇವ್ವಾರೂ ಭಗವಂತನ ಮಹಿಮೆಯ ಕೊಡಿಯ ಕಂಡಿದವಿಲ್ಲೆ. ಎಂತಕೆ ಹೇಳಿರೆ ಅದು ಅನಂತ.   

ಈ ಪ್ರಪಂಚದ ಸೃಷ್ಟಿ ಹೇಂಗೆ ಆತು ಹೇಳಿ ಆರೂ ತಿಳುದ್ದವಿಲ್ಲೆ. ಪ್ರಳಯ ಕಾಲಲ್ಲಿ ಎಲ್ಲವೂ ಭಗವಂತನ ಹೊಟ್ಟೆಯೊಳದಿಕ್ಕೆ ನಿದ್ರಾವಸ್ಥೆಲಿತ್ತಿದ್ದದು. ಮತ್ತೆ ಸೃಷ್ಟಿ ಕಾಲಲ್ಲಿ ಸುರೂಸುರುವಿಂಗೆ ಚತುರ್ಮುಖನ ಭಗವಂತ° ಸೃಷ್ಟಿ ಮಾಡಿದ°.  ಹಾಂಗಾಗಿ ಚತುರ್ಮುಖ ಬ್ರಹ್ಮನ ಹುಟ್ಟಿಂದ ಮದಲೇ ಸೃಷ್ಟಿ ಕಾರ್ಯ ನಡದತ್ತು, ಇದರ ಕಂಡವು ಆರೂ ಇಲ್ಲೆ. ಸೃಷ್ಟಿಯ ಮೊದಲ ಜೀವ – ಚತುರ್ಮುಖ ಬ್ರಹ್ಮ°. ಅವಂಗೇ ಸೃಷ್ಟಿಯ ಮೂಲದ ಬಗ್ಗೆ ಆಳ ಜ್ಞಾನ ಇಲ್ಲೆ ಹೇಳಿ ಆದಮತ್ತೆ ಸಾಮಾನ್ಯ ಮನುಷ್ಯರಾದ ನವಗೆಲ್ಲ ಹೇಂಗೆ ಯಥಾವತ್ ಸ್ಥಿತಿಯ ಅರ್ತುಗೊಂಬಲೆ ಎಡಿಗು!. ಭಗವಂತನ ಸೃಷ್ಟಿಯ ಈ ಪ್ರಪಂಚವೇ ಇಷ್ಟೊಂದು ಅದ್ಭುತ ಇಪ್ಪಗ, ಆ ಸೃಷ್ಟಿಕರ್ತನ ಮಹಿಮೆ ಎಷ್ಟಿರ!. ಹಾಂಗಾಗಿ ಭಗವಂತ° ಆದಿ, ಅನಂತ° ಹೇಳ್ವ ನಿಜವ ಅರ್ತು ಉಪಾಸನೆ ಮಾಡುವದು ಒಂದೇ ಮೋಕ್ಷಮಾರ್ಗ. ಆತಪ್ಪ, ಭಗವಂತನೇ ಸಕಲ ಸೃಷ್ಟಿಯ ಮೂಲ°. ಒಪ್ಪುತ್ತೆ. ‘ಈಗ ಎನಗೆ ಭಗವಂತನ ಗೊಂತಾತು’ ಹೇಳಿರೆ ಭಗವಂತನ ಅರ್ತುಗೊಂಡಾಂಗೆ ಆವುತ್ತಿಲ್ಲೆ. ಅದರ ಜ್ಞಾನಪೂರ್ವಕ, ಸ್ವ ಅನುಭವ ಪೂರ್ವಕ ತಿಳಿಯೇಕ್ಕಾಗಿಪ್ಪದು ಆಧ್ಯಾತ್ಮಿಕ ವಿಷಯ. ಅದಕ್ಕೆ ಭಗವಂತನಲ್ಲಿ ಸಂಪೂರ್ಣ ಶರಣಾಗತನಾಗಿ ಅವನ ನಿತ್ಯ ಆರಾಧಕನಾಗಿ ಸಂಪೂರ್ಣ ಕೃಷ್ಣಪ್ರಜ್ಞೆಲಿ ಅವನ ಚಿಂತನೆಯ ಆಳಕ್ಕೆ ಇಳಿಯೆಕು. ಆ ಸ್ಥಿತಿಲಿ ಭಗವಂತನ ಸಾಕ್ಷಾತ್ಕಾರ ಸಾಧ್ಯ. ಭಗವಂತನ ಬಗ್ಗೆ ಈ ನಿಜವ ತಿಳುದವ° -‘ಅಸಮ್ಮೂಢಃ’, ಅವ° ಯಾವ ಭ್ರಮೆಗೂ ಒಳಗಾವುತ್ತನಿಲ್ಲೆ. ಸದಾ ಎಲ್ಲೋರ ಪ್ರೀತಿಸಿಗೊಂಡು ಎಲ್ಲೋರಲ್ಲೂ ಭಗವಂತನ ಕಾಣುತ್ತ ಆನಂದಲ್ಲಿ ತಲ್ಲೀನರಾಗಿರುತ್ತ°. ಈ ಸತ್ಯವ ತಿಳುದ ಸಾಧಕ – ‘ಅಸಮ್ಮೂಢಃ’ ಹಾಂಗೇ ಸರ್ವ ಪಾಪಂಗಳಿಂದ ಮುಕ್ತನಾವುತ್ತ° ಹೇಳ್ವದು ಹೇಳಿ ಭಗವಂತ° ಭರವಸೆ ಹೇಳುತ್ತ°.

ಶ್ಲೋಕ

ಬುದ್ಧಿರ್ಜಾನಮಸಂಮೋಹಃ ಕ್ಷಮಾ ಸತ್ಯಂ ದಮಃ ಶಮಃ ।
ಸುಖಂ ದುಃಖಂ ಭವೋsಭಾವೋ ಭಯಂ ಚಾಭಯಮೇವ ಚ ॥೦೪॥

ಅಹಿಂಸಾ ಸಮತಾ ತುಷ್ಟಿಃ ತಪೋ ದಾನಂ ಯಶೋsಯಶಃ ।
ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ವಿಧಾಃ ॥೦೫॥

ಪದವಿಭಾಗ

ಬುದ್ಧಿಃ ಜ್ಞಾನಮ್ ಅಸಮ್ಮೋಹಃ ಕ್ಷಮಾ ಸತ್ಯಮ್ ದಮಃ ಶಮಃ । ಸುಖಮ್ ದುಃಖಮ್ ಭವಃ ಅಭಾವಃ ಭಯಮ್ ಚ ಅಭಯಮ್ ಏವ ಚ ॥

ಅಹಿಂಸಾ ಸಮತಾ ತುಷ್ಟಿಃ ತಪಃ ದಾನಮ್ ಯಶಃ ಅಯಶಃ । ಭವಂತಿ ಭಾವಾಃ ಭೂತಾನಾಮ್ ಮತ್ತಃ ಏವ ಪೃಥಕ್ ವಿಧಾಃ ॥

ಅನ್ವಯ

ಬುದ್ಧಿಃ, ಜ್ಞಾನಮ್, ಅಸಂಮೋಹಃ, ಕ್ಷಮಾ, ಸತ್ಯಮ್, ದಮಃ, ಶಮಃ, ಸುಖಮ್, ದುಃಖಮ್, ಭವಃ, ಅಭಾವಃ, ಭಯಂ ಚ ಏವ ಅಭಯಂ ಚ ।

ಅಹಿಂಸಾ, ಸಮತಾ, ತುಷ್ಟಿಃ, ತಪಃ, ದಾನಮ್, ಯಶಃ, ಅಯಶಃ, ಇಮೇ ಭೂತಾನಾಂ ಪೃಥಕ್-ವಿಧಾಃ ಭಾವಾಃ ಮತ್ತಃ ಏವ ಭವಂತಿ ।

ಪ್ರತಿಪದಾರ್ಥ

ಬುದ್ಧಿಃ – ಬುದ್ಧಿ, ಜ್ಞಾನಮ್ – ಜ್ಞಾನ, ಅಸಂಮೋಹಃ – ಸಂಶಯಂದ ಮುಕ್ತಿ, ಕ್ಷಮಾ – ಕ್ಷಮಾಗುಣ, ಸತ್ಯಮ್ – ಸತ್ಯ, ದಮಃ – ಇಂದ್ರಿಯ ನಿಗ್ರಹ, ಶಮಃ – ಮನಸ್ಸಿನ ನಿಗ್ರಹ, ಸುಖಮ್ – ಸುಖ, ದುಃಖಮ್ – ದುಃಖ, ಭವಃ – ಹುಟ್ಟು, ಅಭಾವಃ – ಸಾವು, ಭಯಮ್ – ಭೀತಿ, ಚ – ಕೂಡ, ಏವ – ಖಂಡಿತವಾಗಿಯೂ, ಅಭಯಮ್ – ನಿರ್ಭೀತಿ, ಚ – ಕೂಡ.

ಅಹಿಂಸಾ – ಅಹಿಂಸೆ, ಸಮತಾ – ಸಮಾನತೆ, ತುಷ್ಟಿಃ – ತೃಪ್ತಿ, ತಪಃ – ತಪಸ್ಸು, ದಾನ, – ದಾನ, ಯಶಃ – ಕೀರ್ತಿ, ಅಯಶಃ – ಅಪಕೀರ್ತಿ, ಇಮೇ ಭೂತಾನಾಮ್, – ಈ ಜೀವಿಗಳ, ಪೃಥಕ್-ವಿಧಾಃ – ವಿಧವಿಧವಾಗಿ (ಬೇರೆ ಬೇರೆ)ವ್ಯವಸ್ಥೆ ಮಾಡಲಾದ್ದು, ಭಾವಾಃ – ಸ್ವಭಾವಂಗೊ, ಮತ್ತಃ ಏವ – ಎನ್ನಂದಲೇ, ಭವಂತಿ – ಉಂಟಾವ್ತದು.

ಅನ್ವಯಾರ್ಥ

ಬುದ್ಧಿ, ಜ್ಞಾನ, ಸಂದೇಹ, ಭ್ರಾಂತಿಂದ ಬಿಡುಗಡೆ, ಕ್ಷಮಾಗುಣ, ಸತ್ಯ, ಇಂದ್ರಿಯನಿಗ್ರಹ, ಮನೋನಿಗ್ರಹ, ಸುಖದುಃಖಂಗೊ, ಹುಟ್ಟುಸಾವುಗೊ, ಭಯ, ನಿರ್ಭಯ, ಅಹಿಂಸೆ, ಸಮಚಿತ್ತತೆ, ತೃಪ್ತಿ, ತಪಸ್ಸು, ದಾನ, ಕೀರ್ತಿ, ಅಪಕೀರ್ತಿ – ಜೀವಿಗಳ ಈ ಎಲ್ಲ ಬೇರೆ ಬೇರೆ ಬಗೆಯ ಗುಣಂಗಳ ಸೃಷ್ಟಿಸಿದವ° ಆನೋಬ್ಬನೇ ಆಗಿದ್ದೆ.

ತಾತ್ಪರ್ಯ / ವಿವರಣೆ

ಜೀವಿಗಳ ಗುಣಂಗೊ ಒಳ್ಳೆದಾಗಿರಲಿ ವಾ ಕೆಟ್ಟದ್ದಾಗಿರಲಿ, ಈ ಎಲ್ಲವನ್ನೂ ಸೃಷ್ಟಿಸಿದವ ಭಗವಂತನೇ. ಭಗವಂತನ ಉಪಾಸನೆಲಿ ನಾವು ತಿಳುದಿರೆಕಾದ ಮುಖ್ಯವಾದ ವಿಚಾರಂಗಳ ಭಗವಂತ ಇಲ್ಲಿ ವಿವರುಸುತ್ತ°. ಬುದ್ಧಿ ಹೇಳಿರೆ ವಿಷಯಂಗಳ ಸರಿಯಾದ ದೃಷ್ಟಿಂದ ವಿಶ್ಲೇಷಣೆ ಮಾಡುವ ಶಕ್ತಿ. ಜ್ಞಾನ ಹೇಳಿರೆ ಚೇತನ ಏವುದು, ಜಡವಸ್ತು ಏವುದು ಹೇಳ್ವದರ ತಿಳ್ಕೊಂಬ ಶಕ್ತಿ. ಬರೇ ಪಾಠಪುಸ್ತಕಂದಲೋ, ವಿಶ್ವವಿದ್ಯಾಲಯಂದಲೋ ಕಲಿವದು ಸಾಮಾನ್ಯ ಜ್ಞಾನ ಜಡವಸ್ತುವಿಂಗೆ ಸಂಬಂಧಿಸಿದ್ದು. ಅದರ ಜ್ಞಾನ ಹೇಳಿ ಒಪ್ಪಿಕೊಂಬಲೆ ಆವ್ತಿಲ್ಲೆ. ಜ್ಞಾನ ಹೇಳಿರೆ ಚೇತನ ಮತ್ತೆ ಜಡವಸ್ತುಗಳ ನಡುವಣ ವ್ಯತ್ಯಾಸದ ತಿಳುವಳಿಕೆ. ಹೇಳಿರೆ, ವಸ್ತು ವಿಷಯವ  ವಾಸ್ತವವಾಗಿ ತಿಳ್ಕೊಂಡರೆ ಅದು ಜ್ಞಾನ. ಅಸಂಮೋಹ ಹೇಳಿರೆ ಭ್ರಾಂತಿಂದ ಬಿಡುಗಡೆಯಾಗಿಪ್ಪದು. ಮನುಷ್ಯ° ದ್ವಂದ್ವಂಗಳ  ಮನಸ್ಥಿತಿಲಿ ಇಲ್ಲದ್ದಿಪ್ಪಗ, ನಿಶ್ಚಿತವಾಗಿಪ್ಪಗ, ದೃಢವಾಗಿಪ್ಪಗ, ದಿವ್ಯತತ್ತ್ವಜ್ಞಾನವ ಅರ್ತುಗೊಂಬಲೆ ಸಾಧ್ಯ. ಆ ಸ್ಥಿತಿಲಿ ದಿಗ್ಭ್ರಮೆ/ಭ್ರಾಂತಿಂದ ಮುಕ್ತನಾಗಿರುತ್ತ°. ಎಂತದರನ್ನೂ ಕಣ್ಣುಮುಚ್ಚಿ ಸ್ವೀಕರುಸಲಾಗ, ಎಲ್ಲವನ್ನೂ ಎಚ್ಚರಿಕೆಂದ ತೆಕ್ಕೊಳ್ಳೆಕು. ಕ್ಷಮಾಗುಣ ಅಭ್ಯಾಸ ಮಾಡೆಕು, ಸಹನೆ ಇರೆಕು. ವಾಸ್ತವಾಂಶಂಗಳ ಇತರರ ಪ್ರಯೋಜನಕ್ಕಾಗಿ ಇದ್ದದರ ಇಪ್ಪಹಾಂಗೆ (ಸತ್ಯ) ನಿರೂಪಿಸೆಕು. ತಪ್ಪಾಗಿ ನಿರೂಪಣೆ ಮಾಡ್ಳಾಗ.  ಇತರಿರಿಂಗೆ ರುಚಿಸುವಾಗ ಮಾಂತ್ರ ಸತ್ಯವ ಹೇಳೆಕು. ಆದರೆ ಇದು ಸತ್ಯನಿಷ್ಠೆ ಅಲ್ಲ. ಇತರರು ವಾಸ್ತವಾಂಶಂಗಳ ತಿಳ್ಕೊಂಬಲೆ ಸಾಧ್ಯವಪ್ಪಂತೆ ನೇರವಾಗಿ ಹೇಳೆಕು. ಕೆಲವೊಂದರಿ ಸತ್ಯವು ಅಪ್ರಿಯವಪ್ಪಲೂ ಸಾಕು. ಆದರೆ ಅದರ ಹೇಳದ್ದೆ ಇಪ್ಪಲಾಗ. ಸತ್ಯನಿಷ್ಥೆ ಹೇಳಿರೆ ವಾಸ್ತವಾಂಶಂಗಳ ಇತರರ ಪ್ರಯೋಜನಕ್ಕಾಗಿ ಹೇಳೇಕ್ಕಾದ್ದು. ಇಂದಿರ್ಯ ನಿಗ್ರಹ ಹೇಳಿರೆ ಇಂದ್ರಿಯಂಗಳ ಅನಗತ್ಯವಾದ ವೈಯಕ್ತಿಕ ಭೋಗಕ್ಕಾಗಿ ಬಳಸದ್ದೆ ಇಪ್ಪದು. ಇಂದ್ರಿಯಂಗಳ ಯೋಗ್ಯವಾದ ಅಗತ್ಯಂಗಳ ತೃಪ್ತಿಪಡುಸುವದು ನಿಷಿದ್ಧ ಅಲ್ಲ. ಆದರೆ ಅನಗತ್ಯ ಇಂದ್ರಿಯ ಸುಖದ ಆಶೆ ಆಧ್ಯಾತ್ಮಿಕ ಮುನ್ನಡೆಗೆ ಅಡ್ಡಿ ಉಂಟುಮಾಡುವಂತಾದ್ದು. ಹಾಂಗಾಗಿ, ಅನಗತ್ಯವಾಗಿ ಇಂದ್ರಿಯಂಗಳ ಬಳಕಗೆ ಕಡಿವಾಣ ಹಾಕೆಕು. ಹಾಂಗೇ ಮನಸ್ಸಿನ ಅನಗತ್ಯ ಯೋಚನೆಗಳಿಂದ ದೂರಮಡುಗೆಕು. ಇದಕ್ಕೆ ‘ಶಮ’ ಹೇಳಿ ಹೇಳುತ್ತದು. ಪೈಸೆ ಮಾಡುತ್ತದೊಂದೇ ಮನಸ್ಸಿಲ್ಲಿ ಯೋಚನೆ ಅಪ್ಪಲಾಗ. ಮನುಷ್ಯನ ಪ್ರಧಾನ ಅಗತ್ಯಂಗಳ ಅರ್ಥಮಾಡಿಗೊಂಬಲೆ ಮನಸ್ಸಿನ ಬಳಸೆಕು. ಸತ್ಸಂಗಲ್ಲಿ ಯೋಚಾನಾಶಕ್ತಿಯ ಹರಿಯಬಿಡೆಕು. ಕೃಷ್ಣಪ್ರಜ್ಞೆಯ ಆಧ್ಯಾತ್ಮಿಕ ಜ್ಞಾನದ ಬೆಳವಣಿಗೆಗೆ ಏವುದು ನೆರವಾವೋ ಅದರಲ್ಲಿ ಸುಖವ ಕಾಣೆಕು. ಅದಕ್ಕೆ ಪ್ರತಿಕೂಲವಾಗಿಪ್ಪದೆಲ್ಲವೂ ದುಃಖಕರವಾದ್ದು. ಹಾಂಗಾಗಿ ಕೃಷ್ಣಪ್ರಜ್ಞೆಯ ಬೆಳವಣಿಗೆಗೆ ಸಹಾಯಕ ಅಪ್ಪದರ ಸ್ವೀಕರುಸೆಕು, ಪ್ರತಿಕೂಲವಾಗಿಪ್ಪದರ ತಿರಸ್ಕರಿಸೆಕು.

‘ಭವ’ ಹೇಳಿರೆ ಹುಟ್ಟು, ಹೇಳಿರೆ ದೇಹಕ್ಕೆ ಸಂಬಂಧಿಸಿದ್ದು. ಆತ್ಮದ ಮಟ್ಟಿಂಗೆ ಹುಟ್ಟೂ ಇಲ್ಲೆ ಸಾವೂ ಇಲ್ಲೆ. ಹುಟ್ಟು ಸಾವು ಈ ಐಹಿಕ ಜಗತ್ತಿಲ್ಲಿ ಮನುಷ್ಯ° ಪಡದ ದೇಹಕ್ಕೆ ಸಂಬಂಧಿಸಿದ್ದು. ಭವಿಷ್ಯದ ಕುರಿತು ತಳಮಳ ಭಯವ ಉಂಟುಮಾಡುತ್ತು. ಕೃಷ್ಣಪ್ರಜ್ಞೆಲಿಪ್ಪದರಿಂದ ಭಯ ಹೇಳ್ವ ವಿಷಯಕ್ಕೇ ಆಸ್ಪದ ಇಲ್ಲೆ. ಎಂತಕೆ ಹೇಳಿರೆ ಅವನ ಚಟುವಟಿಕೆಯ ಫಲವಾಗಿ ಅವ ಆಧ್ಯಾತ್ಮಿಕ ಗಗನಕ್ಕೆ ಮತ್ತೆ ಮುಂದೆ ಶಾಶ್ವತ ಶಾಂತಿಧಾಮಕ್ಕೆ ಹೋಪದು ಖಚಿತ. ಹಾಂಗಾಗಿ ಭವಿಷ್ಯ ಉಜ್ವಲವಾದ್ದು. ಬಾಕಿಪ್ಪೋರಿಂಗೆ ಭವಿಷ್ಯಲ್ಲಿ ಎಂತ ಅಡಗಿದ್ದು, ಮುಂದಾಣ ಜನ್ಮ ಎಂತ ಅಕ್ಕು ಹೇಳಿ ಗೊಂತಿಲ್ಲದ್ದೆ ಆತಂಕವೂ ಭಯವೂ ತುಂಬಿಗೊಂಡಿರುತ್ತು. ಆತಂಕಂದ ಬಿಡುಗಡೆ ಅಪ್ಪಲೆ ಕೃಷ್ಣಪ್ರಜ್ಞೆಯೇ ಉತ್ತಮ ದಾರಿ. ನಾವು ಮಾಯಾಶಕ್ತಿಲಿ ತನ್ಮಯರಾಗಿಪ್ಪದು ಭಯದ ಕಾರಣಂದ. ಹಾಂಗಾಗಿ ಕೃಷ್ಣಪ್ರಜ್ಞೆಲಿಪ್ಪದರಿಂದ ಎಲ್ಲ ಭಯಂದ ಮುಕ್ತರಪ್ಪಲೆ ಸಾಧ್ಯ. ಹೀಂಗೆ ಕೃಷ್ಣಪ್ರಜ್ಞೆಲಿ ಇದ್ದರೆ ನವಗೆ ‘ಅಭಯಂ’.  ಅಹಿಂಸಾ ಹೇಳಿರೆ ಇತರರಿಂಗೆ ದುಃಖ ಅಥವಾ ಗೊಂದಲವ ಉಂಟುಮಾಡದ್ದೇ ಇಪ್ಪದು. ‘ಸಮತಾ’  ಅಥವಾ ಸಮಚಿತ್ತ ಹೇಳ್ವದು ಮೋಹ ಮತ್ತೆ ಜಿಗುಪ್ಸೆಂದ ಬಿಡುಗಡೆ ಹೊಂದಿಪ್ಪ ಸ್ಥಿತಿ. ‘ತುಷ್ಟಿ’ ಅಥವಾ ತೃಪ್ತಿ ಹೇಳಿರೆ ಅನಗತ್ಯ ಚಟುವಟಿಕೆಂದ ಹೆಚ್ಚು ಹೆಚ್ಚು ಪ್ರಾಪಂಚಿಕ ವಸ್ತುಗಳ ಸಂಗ್ರಹಿಸುತ್ತರಲ್ಲಿ ಆಸಕ್ತಿ ಇಲ್ಲದ್ದೆ ಇಪ್ಪದು. ಭಗವಂತನ ಪಡವದರಲ್ಲಿ ತೃಪ್ತಿ ಕಾಣೆಕು. ‘ತಪಸ್ಸು’ ಹೇಳಿರೆ ವ್ರತ. ಉದಿಯಪ್ಪಗ ಬೇಗ ಏಳೆಕು, ಮೀಯೆಕು, ನಿತ್ಯಕರ್ಮ ನಿತ್ಯಾನುಷ್ಠಾನ ಮಾಡೆಕು, ಉಪವಾಸ ಕೂಬದು… ಇವೆಲ್ಲ ಕಷ್ಟದ ಕೆಲಸ. ಉದಿಯಪ್ಪಗ ಏಳುವದಂತೂ ಹಲವರಿಂಗೆ ಬಹು ಅಜೀರ್ಣ ವಿಷಯ. ಹಾಂಗಾಗಿ ಸ್ವ-ಇಚ್ಛೆಂದ ಪಡುವ ಶ್ರಮಕ್ಕೆ ತಪಸ್ಸು ಹೇಳಿ ಹೇಳ್ವದು. ಇನ್ನು ಉಪವಾಸ ಮಾಡುತ್ತದು.. ತಿಂಗಳಿನ ಕೆಲವು ದಿನಂಗೊ ಉಪವಾಸಕ್ಕೆ ಯೋಗ್ಯ ಹೇಳಿ ಹೇಳಿದ್ದು. ಕೃಷ್ಣಪ್ರಜ್ಞೆಲಿ ನಿರಂತರನಾಗಿಪ್ಪಲೆ ಈ ಉಪವಾಸ ಆಚರಣೆ ಬಹು ಉಪಯುಕ್ತ ಕಾರ್ಯ. ಆದರೆ ವೇದಂಗಳ ಆದೇಶಕ್ಕೆ ವಿರುದ್ಧವಾಗಿ, ಅನಗತ್ಯವಾಗಿ ಉಪವಾಸ ಮಾಡ್ಳಾಗ. ರಾಜಕೀಯ ಕಾರಣಕ್ಕೆ ಉಪವಾಸ ಮಾಡ್ಳಾಗ. ಇದು ಅಜ್ಞಾನದ ಉಪವಾಸ ಹೇಳಿ ಹೇಳ್ವದು. ಇನ್ನು ‘ದಾನ’, ಮನುಷ್ಯ° ತನ್ನ ಸಂಪಾದನೆಲಿ ಅರ್ಧ ಭಾಗವ ಏವುದಾರು ಒಳ್ಳೆ ಕಾರ್ಯಕ್ಕೆ ವಿನಿಯೋಗುಸಲೆ ಕೊಡೆಕು. ಒಳ್ಳೆ ಕಾರ್ಯ ಏವುದು? ಕೃಷ್ಣಪ್ರಜ್ಞೆಗೆ ಅನುಗುಣವಾಗಿ ನಡೆಶುವ ಕಾರ್ಯ – ಒಳ್ಳೆ ಕಾರ್ಯ. ಇಲ್ಲಿ ಅಹಂ ವಾ ಸ್ವಾರ್ಥದ ಲವಲೇಶವೂ ಇಪ್ಪಲಾಗ. ಸತ್ಪಾತ್ರರಿಂಗೆ ಉಪಯೋಗ ಅಪ್ಪಂತದಾಯೇಕು, ಭಗವಂತಂಗೆ ಮೆಚ್ಚುಗೆ ಆಯೇಕು. ಇಲ್ಲಿ ಇನ್ನೂ ಒಂದು ಮುಖ್ಯ ವಿಷಯವ ಚಿಂತುಸಲಕ್ಕು. ವೇದಂಗಳಲ್ಲಿ ಬ್ರಾಹ್ಮಣರಿಂಗೆ ದಾನವ ಕೊಡೆಕು ಹೇಳಿ ಹೇಳಿದ್ದು. ದಾನ ಕೊಡುವದು ಆರಿಂಗೂ ಕೊಡ್ಳಕ್ಕು ಆದರೆ ಸತ್ಪಾತ್ರರಿಂಗೆ ಅಯೇಕು, ಸದ್ವಿನಿಯೋಗ ಆಯೇಕು. ದಾನ ತೆಕ್ಕೊಂಡವ ಮುಂದೆ ಭಗವಂತನ ಚಿಂತನೆಲಿ ಮುನ್ನಡವಲೆ ಸಹಾಯಕ ಆಯೇಕು. ಇದರಿಂದ ಭಗವಂತಂಗೆ ಪ್ರೀತಿ. ಮತ್ತೆ ಎಂತಕೆ ಬ್ರಾಹ್ಮಣಂಗೆ ದಾನ ಕೊಡೆಕು ಹೇಳಿದ್ದದು? ಪಾರಿಭಾಷಿಕ ಅರ್ಥವ ಮಾಂತ್ರ ತೆಕ್ಕೊಳ್ಳದ್ದೆ, ‘ಬ್ರಹ್ಮ ಜಾನಾತೀತಿ ಬ್ರಾಹ್ಮಣಃ’ ಹೇಳಿ ಅರ್ಥೈಸೆಕು ಆ ವಿಷಯವ ಅರ್ಥಮಾಡಿಗೊಂಬಲೆ. ಬ್ರಾಹ್ಮಣ ಹೇಳಿರೆ ಬ್ರಹ್ಮನ್ ಅರ್ಥಮಾಡಿಗೊಂಬಲೆ ತನ್ನ ಇಡೀ ಜೀವನವ ಮುಡಿಪಾಗಿರಿಸಿಗೊಂಡವ ಹೇಳ್ವ ನಿರೀಕ್ಷೆ. ಅವ ಆಧ್ಯಾತ್ಮಿಕ ಜ್ಞಾನದ ಉನ್ನತ ಬೆಳವಣಿಗೆ ನಿರತನಾಗಿಪ್ಪವ° ಹೇಳ್ವ ವಿಷಯ. ಹೀಂಗೆ ಬ್ರಾಹ್ಮಣರು ಸದಾ ಉನ್ನತಮಟ್ಟಾದ ಆಧ್ಯಾತ್ಮಿಕ ಸೇವೆಲಿ ತೊಡಗಿಗೊಂಡಿರುತ್ತವು ಹೇಳಿ ಲೆಕ್ಕ. ಹಾಂಗಾಗಿ ಅವರ ಜೀವನ ಆಧ್ಯಾತ್ಮಿಕಲ್ಲೇ ನಿರತವಾಗಿಪ್ಪದರಿಂದ, ಅವರ ಜೀವನ ನಿರ್ವಹಣಗೆ ಸಂಪಾದುಸಲೆ ಸಮಯ ಇರುತ್ತಿಲ್ಲೆ. ಹಾಂಗಾಗಿ ಬ್ರಾಹ್ಮಣರಿಂಗೆ ದಾನ ಕೊಡೆಕು ಹೇಳಿ ಮಾಡಿದ್ದದು. ವೈದಿಕ ಸಾಹಿತ್ಯಲ್ಲಿ ಸನ್ಯಾಸಿಗೂ ದಾನ ಕೊಡೆಕು ಹೇಳಿ ಹೇಳಿದ್ದು. ಸನ್ಯಾಸಿಗೆ ಮನೆಂದ ಮನಗೆ ಹೋಗಿ ಭಿಕ್ಷೆ ಬೇಡುತ್ತವು. ಇದು ಪೈಸೆ ಮಾಡ್ಳೆ ಅಲ್ಲ. ಅವರದ್ದು ಧರ್ಮ ಪ್ರಸಾರದ ಕಾರ್ಯ, ಉದ್ದೇಶ. ಗೃಹಸ್ಥನ ಅಜ್ಞಾನದ ಒರಕ್ಕಿಂದ ಎಬ್ಬುಸಲೆ ಮನಮನಗೆ ತಿರುಗುತ್ತ ವ್ಯವಸ್ಥೆ. ಸಂಸಾರಿಗೊ ಏವತ್ತೂ ಸಂಸಾರ ವ್ಯವಹಾರಲ್ಲೇ ತೊಡಗಿರುತ್ತವು. ಇದರಿಂದ ಕೃಷ್ಣಪ್ರಜ್ಞೆಯನ್ನೂ ಮರದಿರುತ್ತವು. ಹಾಂಗಾಗಿ ಅವಕ್ಕೆ ಕೃಷ್ಣಪ್ರಜ್ಞೆಯ ಎಚ್ಚರುಸಲೆ, ಪ್ರೋತ್ಸಾಹಿಸುವದು ಸನ್ಯಾಸಿಗಳ ಕರ್ತವ್ಯ. ಹಾಂಗಾಗಿ ಸನ್ಯಾಸಿಗೊ ಜ್ಞಾನವ ಇತರರೊಂದಿಂಗೆ ಹಂಚಿಗೊಂಬದು ಹೇಳಿ ತಿಳ್ಕೊಂಡದು. ಹಾಂಗಾಗಿ ದಾನವ ಬ್ರಾಹ್ಮಣರಿಂಗೆ, ಸನ್ಯಾಸಿಗೊಕ್ಕೆ, ಮತ್ತೆ ಕೃಷ್ಣಪ್ರಜ್ಞೆಯ ಒಳ್ಳೆಯ ಉದ್ದೇಶಂಗೊಕ್ಕೆ ಬಳಸಿಗೊಳ್ಳೆಕು ಹೇಳ್ವದು ರೂಢಿ.   

ಮನುಷ್ಯ° ಕೃಷ್ಣಪ್ರಜ್ಞೆಲಿ ತೊಡಗಿ ಮುನ್ನೆಡೆ ಸಾಧುಸಿ ಯಶಸ್ಸು ಗಳುಸೆಕು. ಇದುವೇ ಅವಂಗೆ ಕೀರ್ತಿ. ಇದು ಇಲ್ಲದ್ದಿಪ್ಪದು ಅಪಕೀರ್ತಿ. ವಿಶ್ವಲ್ಲಿ ಎಲ್ಲ ದಿಕ್ಕೆಯೂ, ಇತರ ಲೋಕಂಗಳಲ್ಲಿಯೂ ವಿವಿಧ ಸ್ವರೂಪಂಗಳ ಜನಂಗೊ ಇರುತ್ತವು. ಈ ಗುಣಂಗೊ ಎಲ್ಲಾ ದಿಕ್ಕೆಯೂ ಇದ್ದು. ಕೃಷ್ಣಪ್ರಜ್ಞೆಲಿ ಮುನ್ನಡವಲೆ ಅಪೇಕ್ಷಿಸುವವಂಗೆ ಭಗವಂತ° ಈ ಎಲ್ಲ ಗುಣಂಗಳ ಸೃಷ್ಟಿ ಮಾಡಿದ್ದದು. ಆದರೆ ಮನುಷ್ಯ° ಅವುಗಳ ತನ್ನೊಳವೇ ಬೆಳೆಶಿಗೊಳ್ಳುತ್ತಾ ಇರುತ್ತ°. ಭಗವಂತನ ನಿಜ ಭಕ್ತಿಸೇವೆಲಿ ತೊಡಗಿದವ°, ಭಗವಂತನೇ ವ್ಯವಸ್ಥೆ ಮಾಡಿಪ್ಪಂತೆ ಎಲ್ಲ ಒಳ್ಳೆಯ ಗುಣಂಗಳ ತನ್ನಲ್ಲಿ ಬೆಳೆಶಿಗೊಳ್ಳುತ್ತ°. ಕೆಟ್ಟದ್ದರಿಂದ ದೂರ ಇರುತ್ತ°. ಒಳ್ಳೆದು ಕೆಟ್ಟದು ಎಲ್ಲವೂ ಆ ಭಗವಂತನದ್ದು ಹೇಳಿ ಅರ್ತುಗೊಂಡಿರುತ್ತ°. ಹೀಂಗೆ ನಾವು ಕಾಂಬ ಎಲ್ಲವುದರ ಮೂಲ, ಅವು ಒಳ್ಳೇದು ಆಗಿರಲಿ ಕೆಟ್ಟದ್ದು ಆಗಿರಲಿ, ಭಗವಂತನೆ. ಭಗವಂತನಲ್ಲಿ ಇಲ್ಲದ್ದು ಏವುದೂ ಈ ಐಹಿಕ ಜಗತ್ತಿಲ್ಲಿ ಪ್ರಕಟ ಆವುತ್ತಿಲ್ಲೆ. ಇದುವೇ ಜ್ಞಾನ. ವಸ್ತುಗೊ ಬೇರೆ ಬೇರೆ ರೂಪಲ್ಲಿ ವಾ ಸ್ಥಿತಿಲಿ ಇದ್ದು ಹೇಳಿ ನವಗೆ ಗೊಂತಿದ್ದರೂ ಎಲ್ಲವೂ ಆ ಭಗವಂತನಿಂದಲೇ ಬಪ್ಪದು ಹೇಳ್ವದರ ತಿಳ್ಕೊಳ್ಳೆಕು.

ಇದೇ ಶ್ಲೋಕದ ವಿವರಣೆಯ ಬನ್ನಂಜೆಯವರ ವ್ಯಾಖ್ಯಾನಂದ ನೋಡುವೊ.ನವಗೆ ಬುದ್ಧಿ, ಜ್ಞಾನ, ಅಸಂಮೋಹ, ಕ್ಷಮಾ, ಸತ್ಯ, ದಮ, ಶಮ ಎಲ್ಲವನ್ನೂ ಕೊಡುವವ° ಆ ಭಗವಂತ°. ಕೆಲವರಿಂಗೆ ತಾವು ತುಂಬ ಬುದ್ಧಿವಂತರು ಹೇಳ್ವ ಭ್ರಮೆ ಇರುತ್ತು. ಆದರೆ ಆ ಬುದ್ಧಿಶಕ್ತಿಯ ಕರುಣಿಸಿದ್ದು ಭಗವಂತ° ಹೇಳ್ವ ಸತ್ಯವ ತಿಳುದಿರುತ್ತವಿಲ್ಲೆ. ಭಗವಂತ° ಹೇಳುತ್ತ°- ಪ್ರಪಂಚಕ್ಕೆ ಪ್ರತಿಯೊಬ್ಬಂಗೂ ಬುದ್ಧಿ, ಜ್ಞಾನವ ಕೊಡುವದು ಆನೇ ಆಗಿದ್ದೆ. ಬುದ್ಧಿ ಹೇಳಿರೆ ಎಂತ ಮಾಡೇಕು ಎಂತ ಮಾಡ್ಳಾಗ ಹೇಳ್ವ ವಿವೇಕ. ಜ್ಞಾನ ಹೇಳಿರೆ ಒಂದು ವಸ್ತುವಿಲ್ಲಿಪ್ಪದರ ಕುರಿತು ಯಥಾಸ್ಥಿತಿಯ ತಿಳುವಳಿಕೆ. ನಮ್ಮಲ್ಲಿ ಬುದ್ಧಿ ಜ್ಞಾನ ಎರಡೂ ಇಪ್ಪಗ ಮಾಂತ್ರ ಎಂತ ಮಾಡೆಕು ಮಾಡ್ಳಾಗ ಹೇಳ್ವ ಸರಿಯಾದ ನಿರ್ಧಾರಕ್ಕೆ ಬಪ್ಪಲೆ ಸಾಧ್ಯ. ಜ್ಞಾನ ಇದ್ದು ಬುದ್ಧಿ ಇಲ್ಲದ್ರೆ ‘ವೇದ’ (ತಿಳ್ಕೊಳ್ಳೆಕ್ಕಪ್ಪದು) ನಮ್ಮಿಂದ ದೂರವಾವ್ತು. ಬನ್ನಂಜೆ ಹೇಳ್ತವು – “ಆಚಾರಹೀನಂ ನ ಪುನಂತಿ ವೇದಾಃ” ಹೇಳಿ ಹೇಳಿಪ್ಪಾಂಗೆ, ಒಬ್ಬ ಮನುಷ್ಯ° ಆಚಾರಹೀನ ಆಗಿದ್ದರೆ ಅವನ ಎಲ್ಲ ವೇದಂಗೊ ಕೈಬಿಡುತ್ತು. ರೆಕ್ಕೆಬಲಿತ ಹಕ್ಕಿಮರಿಗೊ ತಮ್ಮ ಗೂಡ ಬಿಟ್ಟು ಹಾರಿ ಹೋಪ ಹಾಂಗೆ ವೇದವಿದ್ಯೆ ಅವನ ಬಿಟ್ಟು ಹಾರಿ ಹೋವುತ್ತು. ಆಚಾರವಂತನಾಗಿರೆಕು ಹೇಳಿ ತಿಳ್ಕೊಂಡಿಪ್ಪದೇ ಜ್ಞಾನ. ಏವುದು ಆಚಾರ, ಏವುದು ಅನಾಚಾರ ಹೇಳ್ವ ವಿವೇಕ ಪ್ರಜ್ಞೆಯೇ – ‘ಬುದ್ಧಿ’. ಏವುದೇ ಸಂಶಯ ಇಲ್ಲದ್ದೆ ಸತ್ಯವ ತಿಳ್ಕೊಂಬ ಗ್ರಹಣಶಕ್ತಿ – ‘ಅಸಂಮೋಹ’. ಇವು ಬದುಕಿಂಗೆ ಆಸರೆಯಾಗಿಪ್ಪ ಮೂರು ಮುಖ್ಯ ಆಧಾರಸ್ತಂಭಂಗೊ. ಇದರ ತಿಳ್ಕೊಂಡು ನಾವು ಭಗವಂತನ ಉಪಾಸನೆ ಮಾಡೆಕು.

ಇನ್ನು ‘ಕ್ಷಮಾಗುಣ’, ಇದು ಅತ್ಯಂತ ದೊಡ್ಡ ಗುಣ. ಆರಾರು ನಮ್ಮ ಟೀಕೆ ಮಾಡಿರೆ, ಆ ಟೀಕೆಲಿ ನಮ್ಮ ನಾವು ತಿದ್ದಿಗೊಳ್ಳೆಕ್ಕಾದ ಅಂಶ ಇದ್ದರೆ ತಿದ್ದಿಗೊಂಬದು, ಅಲ್ಲದೆ ಅದು ಕೇವಲ ಅಸೂಯೆಯ ಟೀಕೆ ಆಗಿದ್ರೆ ಏವುದೇ ಪ್ರತೀಕಾರ ಇಲ್ಲದ್ದೆ ಆ ವಿಷಯವ ಅಲ್ಲೇ ಬಿಟ್ಟುಬಿಡುವುದು ‘ಕ್ಷಮಾ’. ಭಗವಂತ° ಮತ್ತೆ ಹೇಳಿದ್ದದು ಐದನೇದು ‘ಸತ್ಯಂ’ – ಪ್ರಾಮಾಣಿಕತೆ. ಇಪ್ಪದರ ಇಪ್ಪಂತೆ ಸ್ವೀಕರುಸುವದು, ಹೇಳ್ವದು ‘ಸತ್ಯಂ’.  ಅಲ್ಲದ್ದೆ ಅದರಲ್ಲಿ ಕೆಲವೊಂದು ಮುಖವಾಡಂಗಳ ಹೊರುಸಿ ಯಥಾರ್ತವ ಮರೆಮಾಚುವದು ‘ಅಸತ್ಯಂ’ – ಅಪ್ರಮಾಣಿಕತೆ. ನಮ್ಮಲ್ಲಿ ಪ್ರಾಮಾಣಿಕತೆ ಎಲ್ಲಿವರೇಂಗೆ ಬೆಳೆತ್ತಿಲ್ಲ್ಯೋ ಅಲ್ಲಿವರೇಂಗೆ ಯಾವ ಶಾಸ್ತ್ರವೂ ನಮ್ಮ ಉದ್ಧಾರ ಮಾಡುತ್ತಿಲ್ಲೆ. ನವಗೆ ಇಂತಹ ಪ್ರಾಮಾಣಿಕತೆಯ ಕೊಡು ಹೇಳಿ ಭಗವಂತನ ಉಪಾಸನೆ ಮಾಡೆಕು. ಆರನೇದು ‘ದಮಾಃ’. ಇದು ಇಂದ್ರಿಯಂಗೊಕ್ಕೆ ಸಂಬಂಧಿಸಿದ್ದು. ಇಂದ್ರಿಯಂಗೊ ನಾವು ಹೇಳಿದಾಂಗೆಲ್ಲ ಕೇಳುತ್ತಿಲ್ಲೆ. ಅದು ನಮ್ಮ ಬೇರೆ ಕಡೇಂಗೆ ಬಲುಗುತ್ತು. ಇದರಿಂದ ನೋಡ್ಳಾಗದ್ದರ ನೋಡುತ್ತು, ಬಯಸುತ್ತು, ಮಾಡ್ಳಾಗದ್ದರ ಮಾಡುಸುತ್ತು. ಇಂತದ್ದಕ್ಕೆ ಬುದ್ಧಿಪೂರ್ವಕವಾಗಿ ನವಗೆ ನಾವೇ ಕಡಿವಾಣ ಹಾಕಿಗೊಂಬದು – ‘ದಮಾಃ’ – ಇಂದ್ರಿಯ ನಿಗ್ರಹ. ಇಂದ್ರಿಯನಿಗ್ರಹಕ್ಕೆ ಏಕೈಕ ಮಾರ್ಗ ಭಗವಂತನಲ್ಲಿ ಸಂಪೂರ್ಣ ಶರಣಾಗತಿ. ಇನ್ನು ಏಳನೇದು ‘ಶಮಾಃ’ – ನಮ್ಮ ಮನಸ್ಸಿನ ಶಾಂತವಾಗಿರಿಸಿಗೊಂಬದು. ಇಂದು ನಾವೆಲ್ಲ ಬದುಕ್ಕುತ್ತಿಪ್ಪದು ಅಶಾಂತಿಯ ಮಡುವಿಲ್ಲಿ. ಇದಕ್ಕೆ ಕಾರಣ ನಾವು ನಮ್ಮ ಮನಸ್ಸಿನ ಲೌಕಿಕ ವಿಚಾರಲ್ಲೇ ಕೇಂದ್ರೀಕರಿಸಿ ಸಾಗುತ್ತಿಪ್ಪದು. ಲೌಕಿಕ ವಿಚಾರವ ಬಿಟ್ಟು, ಮನಸ್ಸಿನ ಭಗವಂತನಲ್ಲಿ ನೆಟ್ಟಪ್ಪಗ ಮನಸ್ಸು ಹಾಯಾಗುತ್ತು. ಇದುವೇ ಮನಸ್ಸಿನ ಶಾಂತಿ ಸ್ಥಿತಿ. ಜೀವನಲ್ಲಿ ಸಮಸ್ಯೆ ಬಂದರೆ ‘ಭಗವಂತ° ಇದ್ದ°, ಅವ° ಬಿಟ್ಟು ಹಾಕ° ಹೇಳ್ವ ದೃಢನಂಬಿಕೆ ಇಪ್ಪವ° ಈ ಸ್ಥಿತಿಯ ಅನುಭವುಶುಗು. ಒಟ್ಟಿಲ್ಲಿ ನಮ್ಮ ಒಳಪ್ರಪಂಚದ ಸರ್ವಸ್ವವೂ ಭಗವಂತ° ಹೇಳ್ವ ಪರಿಜ್ಞಾನಂದ ನಾವು ಭಗವಂತನ ಉಪಾಸನೆ ಮಾಡೆಕು.  

ಇನ್ನು ಸುಖ-ದುಃಖ, ಹುಟ್ಟು-ಸಾವು, ಭಯ-ಕೆಚ್ಚು ಹೀಂಗೆ ಈ ಎಲ್ಲ ಬಗೆ ಬಗೆಯ ಗುಣಂಗೊ ಭಗವಂತನಿಂದಲೇ ಉಂಟಾದ್ದು. ಸುಖ-ದುಃಖ ಹೇಳ್ವದು ದ್ವಂದ್ವ. ಜೀವನಲ್ಲಿ ಇವ್ವೆರಡು ಒಟ್ಟಿಂಗೇ ಇರುತ್ತು, ಒಂದರ ಮತ್ತೆ ಒಂದು ಹಗಲು ಇರುಳು ಇಪ್ಪ ಹಾಂಗೆ ಬಂದುಗೊಂಡೇ ಇರುತ್ತು. ಈ ಸತ್ಯದ ಜ್ಞಾನ ನವಗೆ ಇದ್ದರೆ ದುಃಖ ಹೇಳ್ವದು ಭಾರ ಅಪ್ಪಲಿಲ್ಲೆ. ನಮ್ಮ ಜೀವನಲ್ಲಿ ಏರಿಳಿತ ಹೇಳ್ವದ ಸಾಮಾನ್ಯ, ಹುಟ್ಟು-ಸಾವು ನೈಸರ್ಗಿಕ. ನಮ್ಮಲ್ಲಿ ಆ ಜ್ಞಾನ ಇದ್ದರೆ ಅದುವೇ ಅಭಯ, ಇಲ್ಲದ್ರೆ ಭಯ. ಇವೆಲ್ಲವೂ ಭಗವಂತನ ಅಧೀನ.

ಹೀಂಗೆ ಈ ಶ್ಲೋಕಲ್ಲಿ ಮನುಷ್ಯನ ಮನಸ್ಸಿಲ್ಲಿ ಮೂಡುವ ಎಲ್ಲ ಭಾವನೆಗಳ, ಆ ಭಾವನೆಗಳಿಂದ ಆಗತಕ್ಕ ಎಲ್ಲ ಪರಿವರ್ತನೆ ಮತ್ತೆ ಪರಿಣಾಮಂಗಳ ಹಿಂದೆ ಭಗವತ್ ಶಕ್ತಿ ಇದ್ದು ಹೇಳಿ ಭಗವಂತ° ಇಲ್ಲಿ ವಿವರಿಸಿದ್ದ°.  ಮುಂದೆ ನಾವು ಗಳುಸೆಕ್ಕಾದ ಏಳು ಮಾನಸಿಕ ಗುಣಂಗಳ ವಿವರುಸುತ್ತ°.

“ಅಹಿಂಸಾ ಸಮತಾ ತುಷ್ಟಿಃ….” – ಅಹಿಂಸೆ, ಸಮದೃಷ್ಟಿ, ತೃಪ್ತಿ, ತಪಸ್ಸು, ದಾನ, ಕೀರ್ತಿ, ಅಪಕೀರ್ತಿ – ಇವು ಏಳು ಗುಣಂಗಳೂ ಭಗವಂತನಿಂದಲೇ. ಇಲ್ಲಿ ಹಿಂಸೆ ಮತ್ತೆ ಸಮದೃಷ್ಟಿ ತುಂಬಾ ವಿಶೇಷವಾದ್ದು. ಎಂತಕೆ ಹೇಳಿರೆ ಕೆಲವೊಂದರಿ ಹಿಂಸೆಯೂ ಅಹಿಂಸೆಯಾವುತ್ತು ಹಾಂಗೇ ಅಸಮಾನತೆಯೂ ಸಮಾನತೆಯಾವುತ್ತು. ಹಾಂಗಾಗಿ ಇಲ್ಲಿ ಇದರ ಪ್ರತ್ಯೇಕವಾಗಿ ಭಗವಂತ° ಇದರ ಪ್ರಸ್ತಾಪಿಸಿದ್ದು. ಸುರುವಾಣದ್ದು ಅಹಿಂಸೆ – ಇನ್ನೊಬ್ಬಂಗೆ ತೊಂದರೆ ಆಗಾದ್ದಾಂಗೆ ಬದುಕುವದೇ ಅಹಿಂಸೆ. ಇಲ್ಲಿ ಅಹಿಂಸೆ ಹೇವಲ ಶಾರೀರಿಕವಾಗಿ ಮಾಂತ್ರ ಅಲ್ಲ, ಮನಸ್ಸು ಮತ್ತು ಮಾತಿಲ್ಲಿಯೂ ನಾವು ಅಹಿಂಸೆಯ ಸಾಧುಸೆಕು. ಕೆಲವೊಂದರಿ ಹಿಂಸೆಯೇ ಅಹಿಂಸೆಯಾವುತ್ತು. ಒಂದು ನರಭಕ್ಷಕ ಹುಲಿಯ ಕೊಲ್ಲುತ್ತದರಿಂದ ಊರ ಅನೇಕ ಜನರ ಪ್ರಾಣ ಉಳಿತ್ತರೆ ಅದರ ಕೊಲ್ಲುತ್ತದು ಅಹಿಂಸೆ. ಹೀಂಗಿರ್ತ ಅನೇಕ ದೃಷ್ಟಾಂತನ ಭಗವಂತನ ಅನೇಕ ಕೃತಿಗಳಲ್ಲಿ ಕಾಂಬಲಕ್ಕು. ದೊಡ್ಡ ಹಿಂಸೆಯ ತಡವದಕ್ಕೆ ಮಾಡ್ತ ಸಣ್ಣ ಸಣ್ಣ ಹಿಂಸೆ ಅಹಿಂಸೆ. ಇಲ್ಲಿ ಮಾಡುತ್ತದು ಬಹುಜನರ ನಿಜಒಳಿತಿಂಗೆ ಬೇಕಾಗಿ, ಅದು ಭಗವಂತನ ಮೇಲೆ ಭಾರ ಹಾಕಿ. ಇಲ್ಲಿ ಹಿಂಸೆಯು ಉದ್ದೇಶ ಅಲ್ಲ, ಅಹಿಂಸೆಯ ಕಾಪಾಡುವದು ಉದ್ದೇಶ. ಹಾಂಗೇ ನಾವು ನಮ್ಮ ಮಾತಿಂದ ಕೃತಿಂದ ಮನಸ್ಸಿಂದ ಇನ್ನೊಬ್ಬಂಗೆ ಹಿಂಸೆ ಆಗದ್ದಾಂಗೆ ನಡಕ್ಕೊಳ್ಳೆಕು. ಎರಡ್ನೇದು ‘ಸಮತಾಃ’   – ಸಮದೃಷ್ಟಿ. ಇಲ್ಲಿ ಸಮದೃಷ್ಟಿ ಹೇಳಿರೆ ಎಲ್ಲವನ್ನೂ ಏಕರೂಪಲ್ಲಿ ನೋಡುತ್ತದು ಹೇಳಿ ಅರ್ಥ ಅಲ್ಲ. ಇದು ಯೋಗ್ಯತೆಗನುಗುಣವಾಗಿ ಸಮದೃಷ್ಟಿ. ಶಾಲೆಲಿ ಲಾಯಕಕ್ಕೆ ಓದಿ ಬರವ ವಿದ್ಯಾರ್ಥಿ ಹಾಂಗೇ ಓದದ್ದೇ ಪೋಲಿಯಾಗಿಪ್ಪ ಇನ್ನೊಬ್ಬ ವಿದಾರ್ಥಿ ಸಮನಾದ ಅಂಕ ಕೊಡುತ್ತದು ಸಮಾನತೆ ಆವುತ್ತಿಲ್ಲೆ. ಅವರವರ ಯೋಗ್ಯತೆಗೆ ತಕ್ಕ ಮೌಲ್ಯಮಾಪನ. ಏವುದೇ ದ್ವೇಷೈಲ್ಲದ್ದ, ಶತ್ರು, ಮಿತ್ರ°, ಸ್ಥಿಳೀಯ, ಪರಕೀಯ ಹೇಳ್ವ ಭೇದಭಾವ ಇಲ್ಲದ್ದೆ ಅವರವರ ಯೋಗ್ಯತೆಗೆ ತಕ್ಕಂತೆ ಗೌರವಲ್ಲಿ ಕಾಂಬದು ಸಮದೃಷ್ಟಿ. ಮೂರನೇದು ‘ತೃಪ್ತಿ’. – ಮನುಷ್ಯಂಗೆ ಎಲ್ಲ ದುಃಖಂಗೊಕ್ಕೆ ಮುಖ್ಯ ಕಾರಣ ಅತೃಪ್ತಿ. ಬೇಕಾದ್ದೋ ಬೇಡದ್ದೋ ಹೇಳ್ವ ವಿವೇಚನೆಯನ್ನೂ ಮಾಡದ್ದೆ ಯಾವ್ಯಾವುದನ್ನೋ ಬಯಸಿ ಅದು ಸಿಕ್ಕದ್ದಿಪ್ಪಗ ಅತೃಪ್ತಿ, ಹತ್ರಾಣ ಮನೆಯೋರತ್ರೆ ಇದ್ದು ನಮ್ಮತ್ರೆ ಇಲ್ಲೆ ಹೇಳಿ ಗ್ರೇಶಿಗೊಂಬದು ಅತೃಪ್ತಿ. ಇಲ್ಲದ್ದರ ಯೋಚಿಸಿಗೊಂಡು ಕೊರಗಿಯೊಂಡು ಕೂರದ್ದೆ ಇಪ್ಪದರ ಬಗ್ಗೆ ಅಭಿಮಾನ ಪಟ್ಟು ಸಂತೋಷಗೊಂಬದೇ ನಿಜವಾದ ತೃಪ್ತಿ.

ನಾಲ್ಕನೇದು ತಪಸ್ಸು. ಇದರಲ್ಲೆ ಮೂರು ಬಗೆ – ಕಾಯಾ-ವಾಚಾ-ಮನಸಾ ತಪಃ. ದೇಹದ ಮೂಲಕ ತಪಸ್ಸು. ದೇಹದ ನಿಯಂತ್ರಣ ತಪ್ಪುವದು ಆಹಾರದ ವ್ಯತ್ಯಯಂದ. ಆಹಾರ ನಿಯಂತ್ರಣ ಮಾಡಿಯಪ್ಪಗ ಮನಸ್ಸೂ ನಿಯಂತ್ರಣಕ್ಕೆ ಬತ್ತು. ಮನಸ್ಸು ನಿಯಂತ್ರಣಲ್ಲಿದ್ದರೆ ದೇಹವೂ ಸ್ಥಿರವಾಗಿಪ್ಪಲೆ ಸಾಧ್ಯ. ಇದಕ್ಕಾಗಿ ನಾನಾರೀತಿಯ ನಿಯಂತ್ರಣ ಸಾಧನವಾದ ವೃತಾನುಷ್ಠಾನ ಮಾಡೆಕು ಹೇಳಿದ್ದು. ಒಟ್ಟಿಲ್ಲಿ ಅಹಂಕಾರ, ಅಸೂಯೆ ಪಡದೆ ಬಗ್ಗುವ ಗುಣ ಬಪ್ಪದು ದೇಹದ ತಪಸ್ಸಿಂದ. ಇನ್ನೊಬ್ಬಂಗೆ ಹಿತ ಅಪ್ಪ, ಸತ್ಯವಾದ, ಸಹಜ  ಮಾತುಗಳ ಹೇಳುವದು, ಶಾಸ್ತ್ರಂಗಳ ಶ್ರವಣ-ಮನನ ಮಾಡಿ ಮತ್ತೆ ಸ್ವಪ್ರವಚನ ಮಾಡಿ ಅಭ್ಯಸ ಮಾಡಿ ಅದರ ಅರಗಿಸಿಗೊಂಡು ಇನ್ನೊಬ್ಬಂಗೆ ಪ್ರವಚನ ಮಾಡಿ ಮುಂದಾಣ ತಲೆಮಾರಿಂಗೆ ಕೊಡುವದು – ‘ವಾಚ-ತಪಃ’ . ಮಾನಸಿಕವಾಗಿ ಸದಾ ಆಳವಾದ ಚಿಂತನೆ ಮಾಡುವದು ‘ಮನಸಾ-ತಪಃ’.

ಐದನೇದು ‘(ಅ)ದಾನ’ – ದಾನ ಹೇಳ್ತದಕ್ಕೆ ಎರಡು ಅರ್ಥಂಗೊ. ಒಂದು ‘ಕೊಡುತ್ತದು’, ಇನ್ನೊಂದು ‘ತುಂಡರುಸುವದು. ಕೊಡುವದರಿಂದ ಅದು ನಮ್ಮ ಪಾಪವ ತುಂಡರಿಸಿರೆ ಅದು ದಾನ. ನಮ್ಮ ಪುಣ್ಯವನ್ನೇ ತುಂಡರಿಸಿದೆ ಅದು ಅದಾನ. ನವಗೆ ಅನುಪಯುಕ್ತವಾದ ವಸ್ತುಗಳ ದೂಡಿಬಿಡ್ಳೆ ಕೊಡ್ತ ದಾನ ದಾನ ಆವುತ್ತಿಲ್ಲೆ. ನಮ್ಮತ್ರೆ ಹಾಳಾವ್ತನ್ನೇಳಿ ಕೊಡುತ್ತದೂ ದಾನ ಹೇಳಿ ಹೇಳ್ಳೆ ಬತ್ತಿಲ್ಲೆ. ಅತೀ ಅಗತ್ಯವಾದ ವಸ್ತು ಇನ್ನೊಬ್ಬನತ್ರೆ ಇಲ್ಲದ್ದೆ ಅದು ನಮ್ಮತ್ರೆ ಇದ್ದರೆ, ನಮ್ಮತ್ರೆ ಇಪ್ಪದರ ಹಂಚಿ ಅವನ ಕೊರತೆಯ ನೀಗುಸುವದು ನಿಜವಾದ ದಾನ. ದಾನಲ್ಲಿ ಅಶನ-ವಸನ-ಅನ್ನ, ಇದರ ಆರಿಂಗೆ ಬೇಕಾರೂ ದಾನ ಮಾಡ್ಳಕ್ಕು. ಇಪ್ಪದಕ್ಕೆ ತಾಣ, ಉಡ್ಳೆ ವಸ್ತ್ರ, ಹಶುವಾಗಿಪ್ಪವಂಗೆ ಅಶನ.  ಇದರ ದಾನ ಕೊಡುವದಕ್ಕೆ ಯೋಗ್ಯ-ಅಯೋಗ್ಯ ಹೇಳ್ತ ನಿರ್ಬಂಧ ಇಲ್ಲೆ. ಆದರೆ  ಇತರ ವಸ್ತುಗಳ ದಾನ ಮಾಡುವಾಗ ಏವುದು ಆರಿಂಗೆ ಅಗತ್ಯ ಮತ್ತೆ ಯೋಗ್ಯ (ಸೂಕ್ತ) ಹೇಳಿ ನೋಡಿಗೊಂಡು ದಾನ ಮಾಡೆಕು. ಪ್ರಚಾರಕ್ಕಾಗಿ ದಾನ ಮಾಡುವದು – ‘ಅದಾನ’. ಏವುದೇ ಬಯಕೆ ಇಲ್ಲದ್ದೆ ನಿಷ್ಪೃಹತೆಂದ, ಕರ್ತವ್ಯ ದೃಷ್ಟಿಂದ ಯೋಗ್ಯವಾದ ದೇಶಲ್ಲಿ, ಯೋಗ್ಯವಾದ ಕಾಲಲ್ಲಿ, ಯೋಗ್ಯನಾದ ವ್ಯಕ್ತಿಗೆ ಮಾಡುವ ದಾನ ನಿಜವಾದ ದಾನ.

ಅಕೇರಿಗೆ ಭಗವಂತ° ‘ಯಶಃ-ಅಯಶಃ’ ಹೇಳಿ ಎರಡು ವಿಷಯವ ಪ್ರಸ್ತಾಪಿಸಿದ್ದ°. ಇದು ತುಂಬಾ ವಿಚಿತ್ರವಾದ್ದು. ಒಬ್ಬ° ಕೆಟ್ಟಾದ್ದರ ಮಾಡಿಯೂ ಒಳ್ಳೆವ° ಹೇದು ಯಶಸ್ಸು ಗಳಿಸಿಗೊಂಬಲೆಡಿಗು. ಇನ್ನೊಬ್ಬ° ಜೀವಮಾನವೆಲ್ಲ ಒಳ್ಳೆ ಕೆಲಸ ಮಾಡಿ ಬೇಡದ್ದ ಅಪವಾದ ಕೇಳಿ ದುರಂತಕ್ಕೊಳಗಪ್ಪಲೂ ಸಾಕು. ಇದು ತೀರ್ಮಾನ ಅಪ್ಪದು ನಮ್ಮ ಜೀವನದ ನಡೆಯ ಮೇಗೆ. ಇದಕ್ಕಾಗಿ ಈ ವಿಷಯದ ಬಗ್ಗೆ ತಲೆಕೆಡಿಸಿಗೊಂಬಲಾಗ. ಅಪವಾದ ಬಂದಪ್ಪಗ ಹೇಂಗಿರೆಕು ಹೇಳ್ವದರ ಭಗವಂತ ತನ್ನ ಜೀವನ ಕ್ರಮಲ್ಲಿ ನವಗೆ ತೋರುಸಿಕೊಟ್ಟಿದ°. ಶಮಂತಕಮಣಿಯ ಕೃಷ್ಣ ಕದ್ದ° ಹೇಳ್ವ ಅಪವಾದ ಕೃಷ್ಣಂಗೆ ಬಂದಪ್ಪಗ ಕೃಷ್ಣನ ನಡೆ ಹೇಂಗಿತ್ತು ಹೇಳ್ವದು ಇದಕ್ಕೆ ಉತ್ತಮ ದೃಷ್ಟಾಂತ. ಹೀಂಗೆ “ಈ ಎಲ್ಲಾ ಭಾವಂಗೊ ಜೀವಜಾತಕ್ಕೆ ಬಪ್ಪದು ಎನ್ನಂದಲೇ” ಹೇಳಿ ಹೇಳುತ್ತ° ಭಗವಂತ°. ನಮ್ಮ ಮನಸ್ಸಿನ ಸ್ಥಿತಿಯ ಒಂದೊಂದು ಚಲನ-ವಲನ ಭಗವಂತನ ಅಧೀನ. ಇದು ನಾವು ನಮ್ಮ ಉಪಾಸನೆಲಿ ತಿಳುದಿರೆಕ್ಕಾದ ಮೂಲಭೂತ ಸತ್ಯ.

ಶ್ಲೋಕ

ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ ।
ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ ॥೦೬॥

ಪದವಿಭಾಗ

ಮಹರ್ಷಯಃ ಸಪ್ತ ಪೂರ್ವೇ ಚತ್ವಾರಃ ಮನವಃ ತಥಾ । ಮತ್ ಭಾವಾಃ ಮಾನಸಾಃ ಜಾತಾಃ ಯೇಷಾಮ್ ಲೋಕೇ ಇಮಾಃ ಪ್ರಜಾಃ॥

ಅನ್ವಯ

ಪೂರ್ವೇ ಸಪ್ತ ಮಹರ್ಷಯಃ ತಥಾ ಚತ್ವಾರಃ ಮನವಃ ಮತ್ ಭಾವಾಃ, ಮಾನಸಾಃ ಜಾತಾಃ  ಯೇಷಾಂ ಲೋಕೇ ಇಮಾಃ ಪ್ರಜಾಃ ।

ಪ್ರತಿಪದಾರ್ಥ

ಪೂರ್ವೇ – ಮದಲಿಂಗೆ, ಸಪ್ತ ಮಹರ್ಷಯಃ – ಏಳು ಮಹರ್ಷಿಗೊ, ತಥಾ – ಹಾಂಗೇ, ಚತ್ವಾರಃ ಮನವಃ – ನಾಲ್ಕು ಮನುಗೊ, ಮತ್ ಭಾವಾಃ – ಎನ್ನಿಂದ ಜನಿಸಿದ್ದದು, ಮಾನಸಾಃ ಜಾತಾಃ – ಮನಸ್ಸಿಂದಲೇ ಹುಟ್ಟಿದವು, ಯೇಷಾಮ್ ಲೋಕೇ – ಅವರ ಪ್ರಪಂಚಲ್ಲಿ, ಇಮಾಃ ಪ್ರಜಾಃ – ಈ ಎಲ್ಲ ಪ್ರಜೆಗೊ.

ಅನ್ವಯಾರ್ಥ

ಸಪ್ತ ಮಹರ್ಷಿಗೊ ಮತ್ತೆ ಅವರ ಪೂರ್ವದ ನಾಲ್ಕು ಮಹರ್ಷಿಗೊ ಎಲ್ಲೋರು ಎನ್ನಂದ ಬಂದವು. ಎನ್ನ ಮನಸ್ಸಿಂದ ಹುಟ್ಟಿದವು. ವಿವಿಧ ಲೋಕಲ್ಲಿಪ್ಪ ಜೀವಿಗೊ ಎಲ್ಲ ಅವರ ಸಂತಾನದವ್ವೇ ಆಗಿದ್ದವು.

ತಾತ್ಪರ್ಯ / ವಿವರಣೆ

ಭಗವಂತ° ಇಲ್ಲಿ ವಿಶ್ವದ ಜನತೆಯ ವಂಶವೃಕ್ಷವ ಸಂಗ್ರಹವಾಗಿ ನಿರೂಪಿಸಿದ್ದ°. ಹಿರಣ್ಯಗರ್ಭ ಹೇಳಿ ಹೆಸರಿಪ್ಪ ಆ ಭಗವಂತನ ಶಕ್ತಿಂದ ಮದಾಲು ಹುಟ್ಟಿದವ ಬ್ರಹ್ಮ. ಬ್ರಹ್ಮನಿಂದ ಸಪ್ತರ್ಷಿಗೊ. ಅವರಿಂದ ಮದಲು ಸನಕ, ಸನಂದ, ಸನಾತನ ಮತ್ತೆ ಸನತ್ಕುಮಾರ ಹೇಳ್ವ ನಾಲ್ಕು ಮಹರ್ಷಿಗೊ ಮತ್ತೆ ಮನುಗೊ ರೂಪ ಪಡದವು. ಈ ಇಪ್ಪತ್ತೈದು ಜೆನ ಮಹರ್ಷಿಗೊ ವಿಶ್ವದ ಎಲ್ಲ ಜೀವಿಗಳ ಪ್ರಜಾಪತಿಗೊ ಹೇಳಿ ಹೆಸರಾದವು. ಇವೆಲ್ಲೋರು ದೇವತೆಗೊ ಹೇಳಿ ಹೆಸರುಪಡದವು, ಭಗವಂತನ ಇಚ್ಛೆಂದಲೇ ಬಂದವು. ವಿಶ್ವದ ಈ ಜನಂಗೊ ಅವರದ್ದೇ ಸಂತತಿ.

ಇಡೀ ಬ್ರಹ್ಮಾಂಡ ಸೃಷ್ಟಿ ಭಗವಂತನಿಂದ ಆದ್ದು ಹೇಳ್ವದು ನಾವು ಈ ಮದಲೆ ಅರ್ಥಮಾಡಿಗೊಂಡಿದು. ಈಗ ಇಲ್ಲಿ ಭಗವಂತ° ಭಗವಂತನ ಉಪಾಸನೆಲಿ ತಿಳುದಿರೆಕ್ಕಾದ ಮತ್ತಷ್ಟು ಮುಖ್ಯ ವಿಷಯಂಗಳ ವಿವರುಸುತ್ತ°. ಸುರೂವಾಣ ಮನ್ವಂತರದ ಸಪ್ತರ್ಷಿಗೊ (ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ)  ಮತ್ತೆ ಮದಾಲ ನಾಲ್ಕು ಮನುಗಳ (ಸ್ವಾಯಂಭುವ, ಸ್ವಾರೋಚಿಷ, ಉತ್ತಮ, ರೈವತ) ಇಲ್ಲಿ ಪ್ರಸ್ತಾಪಿಸಿದ್ದ ಭಗವಂತ°. ಚತುರ್ಮುಖ ಬ್ರಹ್ಮನ ಮಾನಸ ಪುತ್ರಂಗೊ ಆದ ಇವು ಭಗವಂತನಿಂದಲೇ ಆದವು. ಪ್ರತಿಯೊಂದು ಮನ್ವಂತರಕ್ಕೂ ಬೇರೆ ಬೇರೆ ಸಪ್ತರ್ಷಿಗೊ. ದೇವತಾ ತಾರತಮ್ಯಲ್ಲಿ ಹದಿನಾರನೇ ಕಕ್ಷೆಲಿ ಬಪ್ಪ ಸುರೂವಾಣ ಮನ್ವಂತರದ ಈ ಸಪ್ತರ್ಷಿಗೊ ಋಷಿಮಂಡಲಲ್ಲೇ ಬಹು ಶ್ರೇಷ್ಠರು. ಚತುರ್ಮುಖ ಬಹ್ಮಂಗೆ ಸಹಾಯಕರಾಗಿ ಈ ಸಪ್ತಬ್ರಹ್ಮರು. ಈ ಏಳುಮಂದಿ ಋಷಿಗಳ ಒಟ್ಟಿಂಗೆ ಭೃಗು, ದಕ್ಷ ಇಬ್ರ ಸೇರ್ಸಿ ಪ್ರಜಾಪತಿ ಹೇಳಿ ದೆನಿಗೊಂಬದು. ಹತ್ತನೆಯವ ಬ್ರಹ್ಮ ಮಾನಸ ಪುತ್ರ ನಾರದ° ಬ್ರಹ್ಮಚಾರಿ. ಹಾಂಗಾಗಿ ಸೃಷ್ಟಿ ವಿಸ್ತಾರಲ್ಲಿ ಅವನ ಹೆಸರು ಬಳಸಲ್ಪಟ್ಟಿದಿಲ್ಲೆ. ಭಗವಂತ° ಚತುರ್ಮುಖನ ಸೃಷ್ಟಿ ಮಾಡಿ, ಅವನ ಮೂಲಕ ಸಪ್ತರ್ಷಿಗಳ ಸೃಷ್ಟಿ ಮಾಡಿದ. ಸೃಷ್ಟಿಲಿ ಮಾನವರ ವಂಶವಿಸ್ತಾರ ಸುರುವಿಲ್ಲಿ ಸ್ವಾಯಂಭುವ ಮನುವಿನ ಮೂಲಕ ಆತು. ಇವನಿಂದ ಮನು ವಂಶ ಬೆಳದು ಬಂತು. ಹಾಂಗಾಗಿ ಈ ಎಲ್ಲ ಕಾರಣಂದ ಸುರೂವಾಣ ನಾಲ್ಕು ಮನ್ವಂತರದ ಅಧಿಪತಿಗೊ, ಮತ್ತೆ ಸಪ್ತರ್ಷಿಗೊ ಪ್ರಧಾನವಾಗಿ ಉಪಾಸನೆಯಾಯೇಕ್ಕಾದ ಮದಲಾಣೋರು. ಪ್ರಪಂಚಲ್ಲಿಪ್ಪೋರು ಅವರದ್ದೇ ಸಂತಾನ.

ಬನ್ನಂಜೆ ಇನ್ನೂ ಹೇಳ್ತವು – ಮನು ಹೇಳ್ತದಕ್ಕೆ ಇನ್ನೊಂದು ಅರ್ಥವೂ ಇದ್ದು. ಭಗವಂತನ ಪರಿವಾರವಾದ ದೇವತೆಗಳನ್ನೂ ‘ಮನುಗೊ’ ಹೇಳಿ ಹೇಳ್ವದು. ತತ್ವಾಭಿಮಾನಿ ದೇವತೆಗೊ ಮುಖ್ಯವಾಗಿ ನಾಲ್ಕು ವಿಧ. ಇವು ಮನುಷ್ಯನ ನಾಲ್ಕು ಸ್ವಭಾವವ (ಬ್ರಾಹ್ಮಣ್ಯ, ಕ್ಷಾತ್ರ, ವೈಶ್ಯ, ಶೂದ್ರ) ನಿಯಂತ್ರುಸುವ ದೇವತೆಗೊ. ನಮ್ಮಲ್ಲಿ ಪ್ರತಿಯೊಬ್ಬನತ್ರೆಯೂ ಈ ನಾಲ್ಕು ಸ್ವಭಾವಂಗೊ ಇರುತ್ತು. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಿದ್ದೋ ಆ ವರ್ಗದ ಹೆಸರಿಂದ ಕರೆಸಿಗೊಂಬದು. ಇದು ಅಲ್ಲದ್ದೆ ‘ಮನು’  ಶಬ್ದವಾಚ್ಯ ಜೀವವರ್ಗ ನಾಲ್ಕು – ಸಮಸ್ತ ದೇವತೆಗೊ, ದೇವತೆಗಳಿಂದ ಸೃಷ್ಟಿಯಾದ ಋಷಿಗೊ (ಮಾನವರು), ಋಷಿಪರಂಪರೆಂದ ಬಂದ ಮಾನವಮಾನವರು, ಈ ಪರಂಪರೆಂದ ಬಂದ ಮನುಷ್ಯರು. ಇದು ಉಪಾಸನೆಲಿ ತಿಳುದಿರೆಕ್ಕಾಂದ ವಿಷಯಂಗೊ.  

ಒಟ್ಟಿಲ್ಲಿ, ಮದಾಲು ಭಗವಂತನಿಂದ ಈ ಬ್ರಹ್ಮಾಂಡ ಸೃಷ್ಟಿ ಆತು. ಬಳಿಕ ಚತುರ್ಮುಖ ಬ್ರಹ್ಮನ ಭಗವಂತನ ನಾಭಿಕಮಲಂದ ಸೃಷ್ಟಿಸಿದ°. ಬ್ರಹ್ಮನಿಂದ ಸನಕ, ಸನಂದ, ಸನಾತನ, ಸನತ್ಕುಮಾರ° ಬಂದವು. ಮತ್ತೆ ರುದ್ರ. ಮತ್ತೆ ಸಪ್ತರ್ಷಿಗೊ. ಅವರಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹೇಳ್ವ ಚತುರ್ಗುಣ ವರ್ಣಂಗೊ ಬೆಳದತ್ತು. ಇವೆಲ್ಲವ ಭಗವಂತ° ಇವರ ಮೂಲಕ ಸೃಷ್ಟಿಸಿದ್ದು. ಹಾಂಗಾಗಿ ಬ್ರಹ್ಮನ ಪಿತಾಮಹ°/ಅಜ್ಜ° ಹೇಳಿಯೂ ಭಗವಂತನ ಪ್ರಪಿತಾಮಹ°/ಮುತ್ತಜ್ಜ°  ಹೇಳಿಯೂ ಹೇಳುತ್ತದು.

ಶ್ಲೋಕ

ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ ।
ಸೋsವಿಕಂಪೇನ ಯೋಗೇನ ಯುಜ್ಯತೇ ನಾತ್ರ ಸಂಶಯಃ ॥೦೭॥

ಪದವಿಭಾಗ

ಏತಾಮ್ ವಿಭೂತಿಮ್ ಯೋಗಮ್ ಚ ಮಮ ಯಃ ವೇತ್ತಿ ತತ್ತ್ವತಃ । ಸಃ ಅವಿಕಂಪೇನ ಯೋಗೇನ ಯುಜ್ಯತೇ ನ ಅತ್ರ ಸಂಶಯಃ ॥

ಅನ್ವಯ

ಯಃ ಮಮ ಏತಾಂ ವಿಭೂತಿಂ ಯೋಗಂ ಚ ತತ್ತ್ವತಃ ವೇತ್ತಿ, ಸಃ ಅವಿಕಂಪೇನ ಯೋಗೇನ ಯುಜ್ಯತೇ ಅತ್ರ ಸಂಶಯಃ ನ ।

ಪ್ರತಿಪದಾರ್ಥ

ಯಃ – ಆರು, ಮಮ – ಎನ್ನ, ಏತಾಮ್ ವಿಭೂತಿಮ್  – ಈ ಎಲ್ಲ ಐಶ್ವರ್ಯವ, ಯೋಗಮ್ ಚ – ಯೋಗಶಕ್ತಿಯ ಕೂಡ, ತತ್ತ್ವತಃ – ಸರಿಯಾಗಿ, ವೇತ್ತಿ – ತಿಳಿತ್ತನೋ, ಸಃ – ಅವ°, ಅವಿಕಂಪೇನ – ವಿಚಲಿತನಾಗದ್ದೆ (ಹಂದದ್ದೆ), ಯೋಗೇನ ಯುಜ್ಯತೇ – ಭಕ್ತಿಸೇವೆಯಮೂಲಕ ನಿರತನಾವುತ್ತ°, ಅತ್ರ – ಇಲ್ಲಿ, ಸಂಶಯಃ ನ – ಸಂಶಯವೇ ಇಲ್ಲೆ.

ಅನ್ವಯಾರ್ಥ

ಎನ್ನ ಈ ಐಶ್ವರ್ಯವ ಮತ್ತೆ ಯೋಗಶಕ್ತಿಯ ಆರು ಯಥಾರ್ಥವಾತಿ ತಿಳಿತ್ತನೋ, ಅವ° ಎನ್ನ ಪರಿಶುದ್ಧವಾದ ಭಕ್ತಿಸೇವೆಲಿ ವಿಚಲಿತನಾಗದ್ದೆ ತೊಡಗುತ್ತ. ಇದರಲ್ಲಿ ಏವ ಸಂಶಯವೂ ಇಲ್ಲೆ.  

 ತಾತ್ಪರ್ಯ / ವಿವರಣೆ

ಆಧ್ಯಾತ್ಮಿಕ ಪರಿಪೂರ್ಣತೆ ಅತ್ಯುನ್ನತ ಶಿಖರ ಹೇಳಿರೆ ದೇವೋತ್ತಮ ಪರಮ ಪುರುಷನ ಬಗ್ಗೆ ಯಥಾರ್ಥ ಜ್ಞಾನ. ಭಗವಂತನ ವಿವಿಧ ವಿಭೂತಿ (ಸಿರಿ)ಲಿ ದೃಢವಾದ ವಿಶ್ವಾಸ ಇಲ್ಲದ್ರೆ ಮನುಷ್ಯ° ಭಕ್ತಿಸೇವೆಲಿ ನಿರತನಪ್ಪಲೆ ಸಾಧ್ಯ ಇಲ್ಲೆ. ಸಾಮಾನ್ಯವಾಗಿ ಮನುಷ್ಯರಿಂಗೆ ದೇವರು ದೊಡ್ಡವ° ಹೇದು ಗೊಂತಿರುತ್ತು. ಆದರೆ ದೇವರು ಹೇಂಗೆ ದೊಡ್ಡವ° ಹೇಳ್ವ ವಿವರ ಗೊಂತಿಲ್ಲೆ. ದೇವರು ಹೇಮ್ಗೆ ದೊಡ್ಡವ° ಹೇಳ್ವದು ತಿಳುದರೆ ಮನುಷ್ಯ° ಸಹಜವಾಗಿ ದೇವರಿಂಗೆ ಶರಣಾಗತನಾವುತ್ತ°, ನಂಬಿಕೆ, ವಿಶ್ವಾಸ, ಶ್ರದ್ಧಾಭಕ್ತಿಲಿ ಅವನ ಚಾಕ್ರಿ ಮಾಡ್ಳೆ ತೊಡಗುತ್ತ°. ಭಗವಂತನ ಯಥಾರ್ಥವ ತಿಳುದಮತ್ತೆ ತಿಳಿವಲೆ ಎಂತದೂ ಇರ್ತಿಲ್ಲೆ. ಹಾಂಗಾಗಿ ಅವನ ಮನಸ್ಸು ಕದಲದ್ದೆ ಭಗವಂತನಲ್ಲೇ ಸ್ಥಿರವಾಗಿ ಭಕ್ತಿಸೇವೆಲಿ ನಿರತನಪ್ಪಲೆ ಸಾಧ್ಯ ಆವುತ್ತು.

ಶ್ಲೋಕ

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ।
ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ ॥೦೮॥

ಪದವಿಭಾಗ

ಅಹಮ್ ಸರ್ವಸ್ಯ ಪ್ರಭವಃ ಮತ್ತಃ ಸರ್ವಮ್ ಪ್ರವರ್ತತೇ । ಇತಿ ಮತ್ವಾ ಭಜಂತೇ ಮಾಮ್ ಬುಧಾಃ ಭಾವ-ಸಮನ್ವಿತಾಃ ॥

ಅನ್ವಯ

ಅಹಂ ಸರ್ವಸ್ಯ ಪ್ರಭವಃ ಅಸ್ಮಿ, ಮತ್ತಃ ಸರ್ವಂ ಪ್ರವರ್ತತೇ, ಇತಿ ಮತ್ವಾ ಬುಧಾಃ ಭಾವ-ಸಮನ್ವಿತಾಃ ಮಾಂ ಭಜಂತೇ ।

ಪ್ರತಿಪದಾರ್ಥ

ಅಹಮ್ – ಆನು, ಸರ್ವಸ್ಯ – ಎಲ್ಲವುದರ, ಪ್ರಭವಃ ಅಸ್ಮಿ – ಉತ್ಪತ್ತಿಯ ಮೂಲ° ಆಗಿದ್ದೆ, ಮತ್ತಃ – ಎನ್ನಂದ, ಸರ್ವಮ್ – ಪ್ರತಿಯೊಂದೂ, ಪ್ರವರ್ತತೇ – ವ್ಯಕ್ತವಾವ್ತು, ಇತಿ ಮತ್ವಾ – ಹೀಂಗೆ ತಿಳುದು, ಬುಧಾಃ – ವಿದ್ವಾಂಸರುಗಳು, ಭಾವ-ಸಮನ್ವಿತಾಃ – ಅತ್ಯಂತ ಗಮನಪೂರ್ವಕವಾಗಿ,  ಮಾಮ್ ಭಜಂತೆ – ಎನ್ನ ಭಜಿಸುತ್ತವು (ಪೂಜಿಸುತ್ತವು).

ಅನ್ವಯಾರ್ಥ

ಎಲ್ಲ ಆಧ್ಯಾತ್ಮಿಕ ಮತ್ತೆ ಭೌತಿಕ ಜಗತ್ತುಗಳ ಮೂಲ° ಆನೇ ಆಗಿದ್ದೆ. ಎಲ್ಲವೂ ಎನ್ನಂದ ಉಂಟಪ್ಪದು (ನಡವದು), ಹೀಂಗೆ ಇದರ ಯಥಾರ್ಥವ ತಿಳುದ ವಿದ್ವಾಂಸರುಗೊ ಎನ್ನ ಭಕ್ತಿಸೇವೆಲಿ ಹೃದಯತುಂಬಿ ನಿರತರಾಗಿ ಪೂಜಿಸುತ್ತವು.

ತಾತ್ಪರ್ಯ / ವಿವರಣೆ

ಜ್ಞಾನಿಗೊ (ವಿದ್ವಾಂಸರುಗೊ) “ಎಲ್ಲವುದರ ನಿಯಾಮಕ ಭಗವಂತ°, ಎಲ್ಲವೂ ಭಗವಂತನಿಂದ ಸೃಷ್ಟಿಯಾಗಿಪ್ಪದು, ಎಲ್ಲವೂ ಭಗವಂತನಿಂದ ನಿಯತವಾಗಿಪ್ಪದು” ಹೇಳ್ವ ಸತ್ಯವ ಅರ್ತು ಭಗವಂತನ ಉಪಾಸನೆಲಿ ನಿಜಹೃದಯ ಭಕ್ತಿಂದ ನಿರತರಾವುತ್ತವು. ಹೀಂಗೆ  ಭಗವಂತನೇ ಎಲ್ಲವುದರ, ಎಲ್ಲ ತಲೆಮಾರುಗಳ ಮೂಲ, ಅವನೇ ಎಲ್ಲವುದರಲ್ಲಿ ಸಮರ್ಥ°, ಶ್ರೇಷ್ಠ°, ಸರ್ವಗತ, ಸರ್ವನಿಯಾಮಕ°, ಎಲ್ಲವೂ ಅವನ ಅಧೀನಲ್ಲಿ ನಡವದು, ಅವ° ಮಾಂತ್ರ ಆರನ್ನೂ ಆಶ್ರಯಿಸಿಲ್ಲೆ ಹೇಳ್ವ ಸತ್ಯವ ಜ್ಞಾನಪೂರ್ವಕವಾಗಿ ತಿಳುದು ಭಗವಂತನ ಉಪಾಸನೆಲಿ ಜ್ಞಾನಿಗೊ ನಿರಂತರವಾಗಿ ನೆಲೆಸಿ ಇರುತ್ತವು.

ಶ್ಲೋಕ

ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ ಪರಸ್ಪರಮ್ ।
ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ ॥೦೯॥

ಪದವಿಭಾಗ

ಮತ್ ಚಿತ್ತಾಃ ಮತ್ ಗತ-ಪ್ರಾಣಾಃ ಬೋಧಯಂತಃ ಪರಸ್ಪರಮ್ । ಕಥಯಂತಃ ಚ ಮಾಮ್ ನಿತ್ಯಮ್ ತುಷ್ಯಂತಿ ಚ ರಮಂತಿ ಚ ॥

ಅನ್ವಯ

ಮತ್ ಚಿತ್ತಾಃ ಮತ್ ಗತ-ಪ್ರಾಣಾಃ ಪರಸ್ಪರಂ ಮಾಂ ಬೋಧಯಂತಃ ಕಥಯಂತಃ ಚ ನಿತ್ಯಂ ತುಷ್ಯಂತಿ ಚ ರಮಂತಿ  ಚ ।

ಪ್ರತಿಪದಾರ್ಥ

ಮತ್ ಚಿತ್ತಾಃ – ಪೂರ್ಣಮನಸ್ಸಿಂದ ಎನ್ನಲ್ಲಿ ಲೀನರಾಗಿ, ಮತ್ ಗತ-ಪ್ರಾಣಾಃ – ಜೀವನವ ಎನ್ನಲ್ಲಿ ಅರ್ಪಿಸಿದವರಾಗಿ, ಪರಸ್ಪರಮ್ – ಅವರವರೊಳದಿಕೆ, ಬೋಧಯಂತಃ – ಬೋಧಿಸಿಗೊಂಡು, ಕಥಯಂತಃ – ಮಾತಾಡಿಗೊಂಡು, ಚ – ಕೂಡ, ನಿತ್ಯಮ್ – ನಿರಂತರವಾಗಿ, ತುಷ್ಯಂತಿ – ತೃಪ್ತರಾವುತ್ತವು, ಚ – ಕೂಡ, ರಮಂತಿ ಚ – ದಿವ್ಯಾನಂದವನ್ನೂ ಅನುಭವುಸುತ್ತವು.

ಅನ್ವಯಾರ್ಥ

ಪರಿಶುದ್ಧ ಭಕ್ತರ ಯೋಚನೆಗೊ ಪೂರ್ಣಮನಸ್ಸಿಲ್ಲಿ ಭಗವಂತನಲ್ಲೇ ನೆಲೆಸಿ, ಅವರ ಜೀವನವ ಭಗವಂತನಲ್ಲೇ ಅರ್ಪಿಸಿ, ಪರಸ್ಪರವಾಗಿ ಭಗವಂತನ ವಿಷಯವ ತಿಳಿಶಿಗೊಂಡು, ಮಾತಾಡಿಗೊಂಡು ತೃಪ್ತಿಯನ್ನೂ ದಿವ್ಯಾನಂದವನ್ನೂ ಪಡೆತ್ತವು.

ತಾತ್ಪರ್ಯ / ವಿವರಣೆ

ಹೀಂಗೆ ನಿಜವಾದ ಜ್ಞಾನ ಭಕ್ತಿ ಇಪ್ಪವರ ಚಿತ್ತಲ್ಲಿ ಸದಾ ಭಗವಂತನ ಚಿಂತನೆಯೇ ತುಂಬಿರುತ್ತು. ಅವರ ಮನಸ್ಸು ಭಗವನ್ಮಯವಾಗಿ ಬಿಡುತ್ತು. ಅವು ಎಲ್ಲವುದರಲ್ಲಿಯೂ ಭಗವಂತನನ್ನೇ ಕಾಣುತ್ತವು. ಪ್ರತಿ ಘಟನೆಯ ಹಿಂದೆ ಭಗವಂತ° ಇದ್ದ ಹೇಳ್ವದರ ನೆಂಪುಮಾಡಿಗೊಂಡಿರುತ್ತವು. ಅವರ ಮನಸ್ಸು ಭಗವಂತನಲ್ಲಿ ಶ್ರುತಿಗೊಂಡಿರುತ್ತು. ಸದಾ ಭಗವಂತನ ಹಿರಿಮೆಯ ಮಾತಾಡಿಗೊಂಡು, ಪರಸ್ಪರ ಚರ್ಚಿಸಿಗೊಂಡು ‘ಭಗವಂತನ ಸೃಷ್ಟಿ ಎಷ್ಟು ಅದ್ಭುತ’  ಹೇಳಿ ವಿಶ್ಲೇಷಣೆ ಮಾಡಿಗೊಂಡು, ತಮ್ಮ ಪಾಪ್ಲಿಂಗೆ ಬಂದದು ಭಗವದ್ ಪ್ರಸಾದ ಹೇಳಿ ಸ್ವೀಕರಿಸಿ ಭಗವಂತನ ಉಪಾಸನೆಲಿ ಮೈಮರದು ಮನಸ್ಸಿನ ತುಂಬ ತೃಪ್ತಿಯ ಪಟ್ಟುಗೊಂಡು ಭಗವಂತನ ದಿವ್ಯ ಆನಂದ ಅನುಭವವ ಪಡದು ಸಂತಸರಾವುತ್ತವು. ಅಂತವರ ಜೀವನ ಆನಂದಮಯವಾಗಿರುತ್ತು. ಏವ ಕೆಟ್ಟ ಯೋಚನೆಗೊ ಹತ್ರೆ ಸುಳಿತ್ತಿಲ್ಲೆ. ಮನಸ್ಸು ಸದಾ ನಿರ್ಮಲವಾಗಿರುತ್ತು. ಭಗವಂತನ ವಿಚಾರಲ್ಲೇ ಚಿಂತಿಸಿಗೊಂಡು ಆನಂದ ಪಡುತ್ತ ಇರುತ್ತವು.

ಶ್ಲೋಕ

ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ ।
ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ ॥೧೦॥

ಪದವಿಭಾಗ

ತೇಷಾಮ್ ಸತತ-ಯುಕ್ತಾನಾಮ್ ಭಜತಾಮ್ ಪ್ರೀತಿ-ಪೂರ್ವಕಮ್ । ದದಾಮಿ ಬುದ್ಧಿ-ಯೋಗಮ್ ತಮ್ ಯೇನ ಮಾಮ್ ಉಪಯಾಂತಿ ತೇ ॥

ಅನ್ವಯ

ಏವಂ ಸತತ-ಯುಕ್ತಾನಾಂ ಪ್ರೀತಿ-ಪೂರ್ವಕಂ ಭಜತಾಂ ತೇಷಾಂ ತಂ ಬುದ್ಧಿ-ಯೋಗಂ ದದಾಮಿ, ಯೇನ ತೇ ಮಾಮ್ ಉಪಯಾಂತಿ ।

ಪ್ರತಿಪದಾರ್ಥ

ಏವಮ್ – ಈ ರೀತಿಯಾಗಿ, ಸತತ-ಯುಕ್ತಾನಾಮ್ – ಸತತವಾಗಿ ನಿರತರಾದ, ಪ್ರೀತಿ-ಪೂರ್ವಕಮ್ ಭಜತಾಮ್ ತೇಷಾಮ್ – ಪ್ರೇಮ ಭಾವೋದ್ರೇಕಂದ ಭಕ್ತಿಸೇವೆಲಿಪ್ಪ ಅವರ, ತಮ್  ಬುದ್ಧಿ-ಯೋಗಮ್ – ಆ ನೈಜಬುದ್ಧಿಯ, ದದಾಮಿ – ನೀಡುತ್ತೆ, ಯೇನ ತೇ – ಯಾವುದರಿಂದ ಮತ್ತೆ ಅವು, ಮಾಮ್ – ಎನ್ನಲ್ಲಿಗೆ, ಉಪಯಾಂತಿ – ಬತ್ತವು.

ಅನ್ವಯಾರ್ಥ

ಎನ್ನ ಪ್ರೀತಿಪೂರ್ವಕ ಸೇವಗೆ ಸದಾ ಮುಡಿಪಾಗಿಪ್ಪವಕ್ಕೆ (ಸತತವಾಗಿ ನಿಜಪ್ರೀತಿ ಚಿತ್ತಪೂರ್ವಕ ಭಕ್ತಿಸೇವೆಲಿ ನಿರತರಾಗಿಪ್ಪವಕ್ಕೆ) ಅವು ಎನ್ನ ಹತ್ರಂಗೆ ಬಪ್ಪದಕ್ಕೆ ಅಗತ್ಯವಾದ ಬುದ್ಧಿಯೋಗವ ಆನು ಕೊಡುತ್ತೆ. 

ತಾತ್ಪರ್ಯ / ವಿವರಣೆ

ಇಲ್ಲಿ ‘ಬುದ್ಧಿಯೋಗ’ ಹೇಳ್ವದು ವಿಶೇಷವಾದ್ದು. ಬುದ್ಧಿಯೋಗ ಹೇಳಿರೆ ಕೃಷ್ಣಪ್ರಜ್ಞೆಲಿ ಕಾರ್ಯ ಮಾಡುವದು. ಅದುವೇ ಅತ್ಯುನ್ನತ ಬುದ್ಧಿವಂತಿಕೆ. ಬುದ್ಧಿ ಹೇಳಿರೆ ಯೋಚನಾಶಕ್ತಿ. ಯೋಗ ಹೇಳಿರೆ ಆಧ್ಯಾತ್ಮಿಕ ಕ್ರಿಯೆಗೊ ಅಥವಾ ಯೋಗಂದ ಉತ್ಥಾನ. ಮನುಷ್ಯ° ಭಗವದ್ಧಾಮಕ್ಕೆ ಹೋಪಲೆ ಪ್ರಯತ್ನುಸುವಾಗ ಭಕ್ತಿಸೇವೆಲಿ ಕೃಷ್ಣಪ್ರಜ್ಞೆಯ ಕೈಗೊಂಡಪ್ಪಗ ಅವನ ಕ್ರಿಯಗೆ ಬುದ್ಧಿಯೋಗ ಹೇಳಿ ಹೇಳ್ವದು. ಇನ್ನೊಂದು ರೀತಿಲಿ ಹೇಳ್ತದಾದರೆ, ಬುದ್ಧಿಯೋಗ ಮನುಷ್ಯನ ಈ ಜಗತ್ತಿನ ಯೇಚನೆಂದ ಪಾರುಮಾಡುವ ಪ್ರಕ್ರಿಯೆ. ಪ್ರಗತಿಯ ಅಕೇರಿಯಾಣ ಗುರಿ ಭಗವಂತ°. ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದು “ಆರು ಈ ರೀತಿಯಾಗಿ ಭಗವಂತನ° ನಿಸ್ಸಂಶಯವಾಗಿ ಯಥಾವತ್ ಅರ್ತು ಭಗವಂತನಲ್ಲಿ ಸಂಪೂರ್ಣ ಶರಣಾಗತನಾವುತ್ತನೋ ಅವಕ್ಕೆ ಅವನಲ್ಲಿಗೆ ಬಪ್ಪಲೆ ಬೇಕಾದ ಬುದ್ಧಿಯೋಗವ ನೀಡುತ್ತೆ”.  

ಈ ಶ್ಲೋಕಲ್ಲಿ “ಸತತಯುಕ್ತಾನಾಂ” ಎಂಬಲ್ಲಿ ಯುಕ್ತಿ ಹೇಳ್ವದಕ್ಕೆ ಹಲವು ಅರ್ಥಂಗೊ ಇದ್ದು. ಇಲ್ಲಿ ಇದು ಬಹಳ ಯೋಗ್ಯವಾದ ಆಚಾರನಿಷ್ಠೆ, ದಾರಿತಪ್ಪದ್ದೆ, ಜಾರದ್ದೆ ಬದುಕುವದು ಯುಕ್ತಿ. ಭಗವಂತನ ಅನುಸಂಧಾನಕ್ಕೆ ಪೂರಕವಾದ ವೇದಾಧ್ಯಯನವ ಅರ್ತುಗೊಂಬದು ಯುಕ್ತಿ, ಭಗವಂತನಲ್ಲಿ ಮನಸ್ಸಿನ ನೆಲೆಗೊಳುಸುವದು ಯುಕ್ತಿ. ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದದು – “ಯಾವ ಬುದ್ಧಿಯೋಗಂದ ಭಗವಂತನ ಸೇರ್ಲೆ ಸಾಧ್ಯವೋ, ಅಂತಹ ವಿಷಯಂಗಳ ಚಿಂತನೆ ಮಾಡುವ ಮನಸ್ಸು, ಭಕ್ತಿಂದ ಚಿಂತನೆ ಮಾಡುವ ಬುದ್ಧಿಯ, ನಿಶ್ಚಯವಾದ ಜ್ಞಾನವ ಆನೇ ಕೊಡುತ್ತೆ”. ಭಗವಂತನಲ್ಲಿ ಶರಣಾಗಿ ಪ್ರೀತಿಂದ ಅವನ ಸೇವೆ ಮಾಡಿರೆ ಭಗವಂತನ ಸೇರುವ ಮಾರ್ಗವ ಭಗವಂತನೇ ತೋರುಸುತ್ತ°.

ಶ್ಲೋಕ

ತೇಷಾಮೇವಾನುಕಂಪಾರ್ಥಮ್ ಅಹಮಜ್ಞಾನಜಂ ತಮಃ ।
ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ ॥೧೧॥

ಪದವಿಭಾಗ

ತೇಷಾಮ್ ಏವ ಅನುಕಂಪಾರ್ಥಮ್ ಅಹಮ್ ಅಜ್ಞಾನಜಮ್ ತಮಃ । ನಾಶಯಾಮಿ ಆತ್ಮ-ಭಾವಸ್ಥಃ ಜ್ಞಾನ-ದೀಪೇನ ಭಾಸ್ವತಾ॥

ಅನ್ವಯ

ತೇಷಾಮ್ ಏವ ಅನುಕಂಪಾರ್ಥಮ್ ಅಹಮ್ ಆತ್ಮ-ಭಾವಸ್ಥಃ ಸನ್ ಭಾಸ್ವತಾ ಜ್ಞಾನ-ದೀಪೇನ ಅಜ್ಞಾನಜಂ ತಮಃ ನಾಶಯಾಮಿ ।

ಪ್ರತಿಪದಾರ್ಥ

ತೇಷಾಮ್ – ಅವರ (ಅವಕ್ಕೋಸ್ಕರವಾಗಿ), ಏವ – ಖಂಡಿತವಾಗಿಯೂ, ಅನುಕಂಪಾರ್ಥಮ್ – ವಿಶೇಷ ದಯೆಯ ತೋರ್ಲೆ, ಅಹಮ್ ಆತ್ಮ-ಭಾವಸ್ಥಃ ಸನ್ – ಆನು ಅವರ ಹೃದಯಂಗಳಿ ನೆಲೆಸಿದವನಾಗಿದ್ದುಗೊಂಡು, ಭಾಸ್ವತಾ – ಪ್ರಕಾಶಿಸಿಗೊಂಡು, ಜ್ಞಾನ-ದೀಪೇನ – ಜ್ಞಾನದ ದೀಪಂದ, ಅಜ್ಞಾನಜಮ್ – ಅಜ್ಞಾನದ ಕಾರಣಂದ ಆದ, ತಮಃ – ಅಂಧಕಾರ, ನಾಶಯಾಮಿ – ಹೋಗಲಾಡಿಸುತ್ತೆ.

ಅನ್ವಯಾರ್ಥ

ಅವಕ್ಕೆ ವಿಶೇಷ ಅನುಕಂಪವ ತೋರ್ಲೆ ಆನು ಅವರ ಹೃದಯಲ್ಲಿದ್ದು ಜ್ಞಾನದ ದೀಪದ ಬೆಣಚ್ಚಿಂದ ಅವರ ಅಜ್ಞಾನದ ಕತ್ತಲೆಯ ನಾಶಮಾಡುತ್ತೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ಆನು ಅವರ ಮೇಗಾಣ ಕನಿಕರಂದ (ಅನುಕಂಪಂದ) ಅವರ ಹೃದಯಲ್ಲಿ ನೆಲೆಸಿ, ಜ್ಞಾನದೀಪಂದ ಅವರ ಅಜ್ಞಾನ ಕತ್ತಲೆಯ ಹೋಗಲಾಡುಸುತ್ತೆ”. ಭಗವಂತ ನಮ್ಮ ಉದ್ಧರುಸುವದು ಯಾವುದೋ ಸ್ವಾರ್ಥಕ್ಕೆ ಅಲ್ಲ. ಅದು ನಮ್ಮ ಮೇಲಿಪ್ಪ ಕರುಣೆಂದ. ಭಗವಂತನ ಅನನ್ಯ ಭಕ್ತಿಂದ ಭಜಿಸಿ ಆರಾಧನೆ ಮಾಡುವ ಭಕ್ತನ ಮೇಗೆ ಅನುಕಂಪಂದ ಅವ° ಭಕ್ತನ ಉದ್ಧರುಸುವದು. ಅವ° ನವಗೆ ಬುದ್ಧಿ ಕೊಡುವದು ಮಾಂತ್ರ ಅಲ್ಲ, ನಮ್ಮ ಬುದ್ಧಿಯ ಸದಾ ಕವಿದಿಪ್ಪ ತಮಸ್ಸಿನ (ಅಜ್ಞಾನದ) ಪೊರೆಯ ಕಳಚ್ಚುತ್ತದೂ ಅವನೇ. ಭಗವಂತನ ಸಕಾಯ ಇಲ್ಲದ್ದೆ ನಮ್ಮ ಮನಸ್ಸು ಬುದ್ಧಿಗೆ ಕವಿದಿಪ್ಪ ಅಜ್ಞಾನವ ನೀಗುಸಲೆ ನಮ್ಮಿಂದಲೇ ಎಡಿಯ. ತ್ರಿಗುಣಾತೀತನಾದ ಆ ಭಗವಂತನೊಬ್ಬನೇ ಆ ಕತ್ತಲೆಯ ನೀಗುಸುವದು. ಅವನೇ ಜ್ಞಾನ. ಇದರಿಂದ ಮಾಂತ್ರ ನಾವು ಯಥಾರ್ಥವ ಯಥಾವತ್ತಾಗಿ ತಿಳ್ಕೊಂಬಲೆ ಸಾಧ್ಯ. ನಾವು ಭಗವಂತನಲ್ಲಿ ಭಕ್ತಿಭಾವಲ್ಲಿ ತುಂಬಿರೆ, ಭಗವಂತ ನಮ್ಮ ಭಾವಲ್ಲಿ, ಭಕ್ತಿಲಿ ತುಂಬಿ, ನಮ್ಮ ಸಹಜಸ್ವರೂಪವ ಜಾಗೃತಗೊಳುಸಿ ಕೃಪಾದೃಷ್ಟಿಯ ಬೀರಿ, ಜ್ಞಾನದ ಬೆಣಚ್ಚಿಂದ ನಮ್ಮ ಹೃದಯಲ್ಲಿ ನೆಟ್ಟು ಮನಸ್ಸಿನ ಅಜ್ಞಾನ ಕತ್ತಲೆಯ ನೀಗಿ, ಯಥಾರ್ಥವ ಯಥಾರ್ಥವಾಗಿ ಕಾಂಬ ಹಾಂಗೆ ಮಾಡುತ್ತ. ‘ಎನ್ನೊಳ ಇಪ್ಪ ಕತ್ತಲೆಯ ನೀಗು ನೀ ಭಗವಂತ°’ ಹೇಳಿ ನಾವು ಅವನಲ್ಲಿ ಶರಣಾಗತರಾಯೇಕು. ಒಳ ಕತ್ತಲೆಯ ಮಡಿಕ್ಕೊಂಡು ಜ್ಞಾನಾನಂದದಾಯಕ ಭಗವಂತನ ಹುಡುಕ್ಕುವದಾದರೂ ಹೇಂಗೆ?!.  ವೇದ , ಶಾಸ್ತ್ರ ಓದುವಾಗಿ ನವಗೆ ಅದರಲ್ಲಿಪ್ಪ ಯಥಾರ್ಥ ತಿಳಿಯೆಕ್ಕಾರೆ ನಮ್ಮಲ್ಲಿ ಜ್ಞಾನ ಬೆಣಚ್ಚಿ ಇರೆಕು. ಇದಕ್ಕೆ ಭಗವಂತನಲ್ಲ್ಲಿ ಶರಣಾಗತಿ ಅತೀ ಮುಖ್ಯ.

ಮುಂದೆ ಎಂತರ….. ?     ಬಪ್ಪವಾರ ನೋಡುವೋ°.

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 10 – SHLOKAS 01 -11

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

 

5 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 10 – ಶ್ಲೋಕಂಗೊ 01 – 11

  1. ಎನ್ನ ಅಬ್ಬೆಗೆ (ವರ್ಷ 85) ಈ ನಿಂಗಳ ವ್ಯಾಖ್ಯಾನಂಗಳ ಓದಿ ಹೇಳುತ್ತಾ ಇದ್ದೆ. ಅವಗೆ ತುಂಬ ಖುಶಿ ಆಯಿದು. ಎನಗುದೇ. ನಿಂಗೊಗೆ ಎಷ್ಟು ಧನ್ಯವಾದಂಗಳ ಹೇಳಿರೂ ಕಡಮ್ಮಯೇ.

    1. ಧನ್ಯೋಸ್ಮಿ ಅಪ್ಪಚ್ಚಿ. ನಮೋ ನಮಃ ನಿಂಗೊಗು, ಅಜ್ಜಿಗೂ ಕೂಡ. ನಿಂಗಳ ಮೆಚ್ಹುಗೆ ಗೀತಾಚಾರ್ಯಂಗೆ ಅರ್ಪಣೆ. ಹರೇ ರಾಮ.

  2. ತುಂಬಾ ಲಾಯಿಕಾಯಿದು ಚೈನ್ನೈ ಭಾವ.

  3. ಭಗವಂತನಲ್ಲಿ ಶರಣಾಗತಿ ಎಂತಕೆ ಮುಖ್ಯ ಹೇಳಿ ಸವಿಸ್ತಾರವಾಗಿ ತಿಳುಶಿಕೊಟ್ಟಿದು.
    [ಭಗವಂತನಲ್ಲಿ ಶರಣಾಗಿ ಪ್ರೀತಿಂದ ಅವನ ಸೇವೆ ಮಾಡಿರೆ ಭಗವಂತನ ಸೇರುವ ಮಾರ್ಗವ ಭಗವಂತನೇ ತೋರುಸುತ್ತ°]
    ಮನುಷ್ಯನಲ್ಲಿ ಇರೆಕಾದ ಗುಣಂಗಳ ಬಗ್ಗೆ, ಪ್ರಪಂಚದ ಸೃಷ್ಟಿಯ ಬಗ್ಗೆ ವಿಶೇಷ ಜ್ನಾನ ಕೊಡುವ ವಿಚಾರಂಗೊ ತುಂಬಿದ್ದು ಈ ಸಂಚಿಕೆಲಿ.
    ಹರೇ ರಾಮ, ಹರೇ ಕೃಷ್ಣ.
    ಧನ್ಯವಾದಂಗೊ ಚೆನೈ ಭಾವಯ್ಯಂಗೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×