Oppanna.com

ಶ್ರೀಮದ್ಭಗವದ್ಗೀತಾ – ಷಷ್ಠೋsಧ್ಯಾಯಃ – ಆತ್ಮಸಂಯಮಯೋಗಃ (ಧ್ಯಾನಯೋಗಃ) – ಶ್ಲೋಕಂಗೊ 11 – 19

ಬರದೋರು :   ಚೆನ್ನೈ ಬಾವ°    on   26/07/2012    3 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ ।
ನಾತ್ಯುಚ್ಛ್ರಿತಂ ನಾತಿನೀಚಂ ಚೈಲಾಜಿನಕುಶೋತ್ತರಮ್ ॥೧೧॥

ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಃ ।
ಉಪವಿಶ್ಯಾಸನೇ ಯುಂಜ್ಯಾತ್ ಯೋಗಮಾತ್ಮವಿಶುದ್ಧಯೇ ॥೧೨॥

ಪದವಿಭಾಗ

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮ್ ಆಸನಮ್ ಆತ್ಮನಃ । ನ ಅತಿ-ಉಚ್ಛ್ರಿತಮ್ ನ ಅತಿ ನೀಚಮ್ ಚೈಲ-ಅಜಿನ-ಕುಶ-ಉತ್ತರಮ್ ।।

ತತ್ರ ಏಕಾಗ್ರಮ್ ಮನಃ ಕೃತ್ವಾ ಯತ-ಚಿತ್ತ-ಇಂದ್ರಿಯ-ಕ್ರಿಯಃ । ಉಪವಿಶ್ಯ ಆಸನೇ ಯುಂಜ್ಯಾತ್ ಯೋಗಮ್ ಆತ್ಮ-ವಿಶುದ್ಧಯೇ ॥

ಅನ್ವಯ

ಶುಚೌ ದೇಶೇ, ನ ಅತಿ-ಉಚ್ಛ್ರಿತಮ್, ನ ಅತಿ-ನೀಚಮ್, ಚೈಲ-ಅಜಿನ-ಕುಶ-ಉತ್ತರಮ್, ಆತ್ಮನಃ ಸ್ಥಿರಮ್ ಆಸನಂ ಪ್ರತಿಷ್ಠಾಪ್ಯ ತತ್ರ ಆಸನೇ ಉಪವಿಶ್ಯ, ಮನಃ ಏಕಾಗ್ರಂ ಕೃತ್ವಾ, ಯತ-ಚಿತ್ತ-ಇಂದ್ರಿಯ-ಕ್ರಿಯಃ (ಸನ್) ಆತ್ಮ-ವಿಶುದ್ಧಯೇ ಯೋಗಂ ಯುಂಜ್ಯಾತ್ ।

ಪ್ರತಿಪದಾರ್ಥ

ಶುಚೌ ದೇಶೇ – ಶುದ್ಧವಾಗಿಪ್ಪ ಭೂಮಿಲಿ (ಶುದ್ಧಜಾಗೆಲಿ), ನ ಅತಿ-ಉಚ್ಛ್ರಿತಮ್ – ಬಹಳ ಎತ್ತರ ಅಲ್ಲದ್ದು, ನ ಅತಿ-ನೀಚಮ್ – ಬಹಳ ತಗ್ಗು ಅಲ್ಲದ್ದು, ಚೈಲ-ಅಜಿನ-ಕುಶ-ಉತ್ತರಮ್  -ಮೃದುವಸ್ತ್ರ, ಮೃಗಚರ್ಮ,  ದರ್ಭೆಗಳ,  ಹೊದುಶಿದ, ಆತ್ಮನ – ತನ್ನ, ಸ್ಥಿರಮ್ – ಸ್ಥಿರವಾಗಿ, ಆಸನಮ್ – ಆಸನವ, ಪ್ರತಿಷ್ಠಾಪ್ಯ – ಇರಿಸಿ, ತತ್ರ – ಅಲ್ಲಿ, ಆಸನೇ – ಆಸನಲ್ಲಿ, ಉಪವಿಶ್ಯ – ಕೂದುಗೊಂಡು, ಮನಃ – ಮನಸ್ಸಿನ, ಏಕ-ಅಗ್ರಮ್ (ಏಕಾಗ್ರಮ್) ಕೃತ್ವಾ – ಏಕಾಗ್ರತೆಯ ಮಾಡಿಗೊಂಡು, ಯತ-ಚಿತ್ತ ಇಂದ್ರಿಯ-ಕ್ರಿಯಃ (ಸನ್)  – ಮನಸ್ಸಿನ (ಚಿತ್ತವ) ಇಂದ್ರಿಯಂಗಳ ನಿಯಂತ್ರಿಸಿ ಕ್ರಿಯೆಗಳುಳ್ಳವನಾಗಿದ್ದುಗೊಂಡವನಾಗಿ, ಆತ್ಮ-ವಿಶುದ್ಧಯೇ – ಹೃದಯ ಶುದ್ಧಿಗಾಗಿ, ಯೋಗಮ್ – ಯೋಗಾಭ್ಯಾಸವ, ಯುಂಜ್ಯಾತ್ – ಆಚರುಸೆಕು.

ಅನ್ವಯಾರ್ಥ

ಯೋಗಾಭ್ಯಾಸ ಮಾಡ್ಳೆ ಏಕಾಂತವಾದ ಸ್ಥಳಕ್ಕೆ ಹೋಯೆಕು. ಕೆಳ ನೆಲಕ್ಕಲ್ಲಿ ದರ್ಭೆಯ ಹಾಸಿ, ಅದರ ಮೇಲೆ ಜಿಂಕೆಯ ಚರ್ಮ ಮತ್ತು ಮೃದುವಾದ ವಸ್ತ್ರಂದ ಮುಚ್ಚೆಕು. ಕೂಬ ಆ ಪೀಠ (ಆಸನ) ಬಹು ಎತ್ತರವಾಗಿಯೂ, ತಗ್ಗು ಆಗಿಯೂ ಇಪ್ಪಲಾಗ ಮತ್ತು ಪವಿತ್ರ ಸ್ಥಳಲ್ಲಿಯೇ (ಜಾಗೆಲಿ)  ಇರೆಕು. ಯೋಗಿಯು ಅದರ ಮೇಗೆ ದೃಢ (ಸ್ಥಿರ)ವಾಗಿ ಕೂದುಗೊಂಡು, ತನ್ನ ಮನಸ್ಸನ್ನೂ ಇಂದ್ರಿಯಂಗಳನ್ನೂ ಮತ್ತು ಕಾರ್ಯಂಗಳನ್ನೂ ನಿಗ್ರಹಿಸಿ ಮನಸ್ಸಿನ ಏಕಾಗ್ರವಾಗಿರಿಸಿ (ಒಂದು ಕೇಂದ್ರಬಿಂದುವಿಲ್ಲಿ ಇರಿಸಿ) ಹೃದಯ ಶುದ್ಧಿಗಾಗಿ ಯೋಗಾಭ್ಯಾಸ ಮಾಡೆಕು.

ತಾತ್ಪರ್ಯ/ವಿವರಣೆ

ಪವಿತ್ರಸ್ಥಳ ಹೇಳಿರೆ ಯಾತ್ರಾಸ್ಥಳಂಗೊ. ಭಾರತಲ್ಲಿ ಯೋಗಿಗೊ ಆಧ್ಯಾತ್ಮಿಕವಾದಿಗೊ ಅಥವಾ ಭಕ್ತರು ಎಲ್ಲೊರು ಮನೆಯ ಬಿಟ್ಟು ಪ್ರಯಾಗ, ಮಥುರಾ, ವೃಂದಾವನ, ಹೃಷೀಕೇಶ, ಹರಿದ್ವಾರ ಮುಂತಾದ ಪುಣ್ಯಕ್ಷೇತ್ರಂಗಳಲ್ಲಿ ವಾಸಮಾಡುತ್ತವು. ಯಮುನಾ, ಗಂಗಾ ಮುಂತಾದ ಪವಿತ್ರ ನದಿಗೊ ಹರಿವ ಏಕಾಂತ ಜಾಗೆಲಿ ಯೋಗಾಭ್ಯಾಸ ಮಾಡುತ್ತವು. ಆದರೆ ಹಲವು ಬಾರಿ ಹಲವರಿಂಗೆ ಅದು ಅಲ್ಲಿ ಎಡಿಗಾವ್ತಿಲ್ಲೆ. ಪೇಟಗಳಲ್ಲಿ ಯೋಗಸಂಸ್ಥೆಗೊ ಹೇಳಿ ಪ್ರಾಪಂಚಿಕ ಲಾಭವಹಿವಾಟಿನ ಕೇಂದ್ರಂಗೊ ತೆಕ್ಕೊಂಡಿರ್ತು. ಆದರೆ ಅಲ್ಲಿಯೂ ನಿಜವಾದ ಆಧ್ಯಾತ್ಮಿಕ ಯೋಗಾಭ್ಯಾಸಕ್ಕೆ ಪ್ರಶಸ್ತ ಸ್ಥಳ ಅಲ್ಲ. ಮನೋನಿಗ್ರಹ ಇಲ್ಲದ್ದವು, ಮನೋಕ್ಷೋಭೆ ಇಪ್ಪವು ಆ ವಾತಾವರಣಲ್ಲಿ ನಿಜ ಧ್ಯಾನಾಸಕ್ತನಪ್ಪಲೆ ಎಡಿಗಾಗ. ಈಗಾಣವಕ್ಕೆ ಆಯಸ್ಸುದೇ ಕಡಮ್ಮೆ. ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಹೆರಡ್ಳೆ ಸೋಮಾರಿಗೊ ಎಂದೆಣಿಸಲ್ಪಟ್ಟಂಗೆ ಇರ್ತವು. ಇಂತಹ ಸಂದರ್ಭಲ್ಲಿ ಅಂತಹ ವಾತಾವರಣಲ್ಲಿ ಹೋಗಿ ಯೋಗಾಭ್ಯಾಸ ಮಾಡುತ್ತೆ ಹೇಳಿ ಹೆರಟ್ರೆ ಅರ್ಧಲ್ಲೇ ಕೊನೆಗೊಳ್ಳೆಕ್ಕಾವ್ತು.

ಈ ಶ್ಲೋಕಲ್ಲಿ ಹೇಳಿಪ್ಪ ವಿಷಯಂಗಳ ಬನ್ನಂಜೆಯವರ ವ್ಯಾಖ್ಯಾನಲ್ಲಿ ನೋಡಿರೆ

ಧ್ಯಾನಕ್ಕೆ ಕೂಪ ಜಾಗೆ ಸ್ವಚ್ಚವಾಗಿರೆಕು. ಮದಲೇ ಹೇಳಿದಾಂಗೆ ಧ್ಯಾನ ಹೇಳಿರೆ ಎಲ್ಲಾ ಬಿಟ್ಟು ಕಾಡಿಂಗೆ ಹೋಗಿ ತಪಸ್ಸಿಂಗೆ ಕೂಪದು ಅಲ್ಲ. ಮನೆಲಿ ಇದ್ದುಗೊಂಡು ಸ್ವಧರ್ಮ ನಿಯತ್ತಿಲ್ಲಿದ್ದುಗೊಂಡು ಮನೋನಿಗ್ರಹ ಇಂದ್ರಿಯನಿಗ್ರಹ ಮಾಡಿಗೊಂಡು ಸಮಚಿತ್ತನಾಗಿ ಆಧ್ಯಾತ್ಮಕದತ್ತ ಮುಂದುವರಿವದು. ಮನೆಲಿ ಸಾತ್ವಿಕ ಕಂಪನ ಇಪ್ಪ ಜಾಗೆಯ ಧ್ಯಾನಕ್ಕೆ ಆರಿಸಿಗೊಳ್ಳೆಕು. ಅದಕ್ಕಾಗಿಯೇ ಮದಲಾಣೋರು  ಮನೇಲಿ ದೇವರ ಕೋಣೆ ಹೇಳಿ ಅಂತಹ ಕಂಪನ ಇಪ್ಪ ಜಾಗೆಯ ಆಯ್ದು ಒಂದು ಪ್ರತ್ಯೇಕ ಕೋಣೆ ಮದಲಿಂದಲೇ ಮಾಡುವ ಆಚರಣೆಗೆ ಬಂದದು. ದುರದೃಷ್ಟವಶಾತ್ ಈಗಾಣ ಕಾಲಲ್ಲಿ ಮನೆಕಟ್ಟುವಾಗ ಶಾಸ್ತ್ರಕ್ಕೆ ಹೇಳಿ ಎಲ್ಲಿ ಜಾಗೆ ಬಾಕಿ ಒಳಿತ್ತೋ ಅಲ್ಲಿ ದೇವರಕೋಣೆ ಹೇಳಿ ಪರಿವರ್ತನೆ ಸುರುವಾದ್ದು! ನಾವು ಮನೆಲಿ ಯಾವ ಭಾಗಲ್ಲಿ ಕೂದಪ್ಪಗ ನಮ್ಮ ಮನಸ್ಸು ಪ್ರಸನ್ನವಾಗಿ ದೇವರ ಧ್ಯಾನಕ್ಕೆ ಪೂರಕವಾವ್ತೋ ಅಲ್ಲಿ ಸಾತ್ವಿಕ ಕಂಪನ ಹೆಚ್ಚಿರುತ್ತು ಹೇಳಿ ಸುಲಭವಾಗಿ ಗುರುತುಸಲಕ್ಕು. ಇದನ್ನೇ ಇಲ್ಲಿ ‘ಶುಚೌ ದೇಶೇ’ (ಶುಚಿಯಾಗಿಪ್ಪ ಜಾಗೆಲಿ) ಹೇಳಿ ಹೇಳಿದ್ದು.

ನಾವು ಬರೇ ಸಾತ್ವಿಕ ಕಂಪನ ಇಪ್ಪ ಸ್ಥಳವ ಗುರುತಿಸಿರೆ ಸಾಲ. ಅಲ್ಲಿ ಎಷ್ಟು ಒಳ್ಳೆಯ ಸಾತ್ವಿಕ ಕಂಪನ ಇದ್ದರೂ ನಾವು ನೆಲಕ್ಕಲ್ಲಿ ಕೂದರೆ ಅಲ್ಲಿ ನೆಲಕ್ಕಲ್ಲಿ ಇಪ್ಪ ಕೆಟ್ಟಕಂಪನಂಗಳೂ ನಮ್ಮ ದೇಹವ ಪ್ರವೇಶಿಸುಗು. ಹಾಂಗಾಗಿ ನಾವು ಕೂರ್ತಲ್ಲಿ ಆಸನ ವ್ಯವಸ್ಥೆ ಮಾಡಿಗೊಳ್ಳೆಕು. ಸ್ಥಿರವಾದ ಆಸನ ಅತೀ ಮುಖ್ಯ. ಮುರ್ಕಟೆ ಮಣೆ ಮಡಿಕ್ಕೊಂಡು ಕೂದರೆ ಮಣೆ ಹಂದುವಾಗ ನಮ್ಮ ಚಿತ್ತವೂ ಹಂದಲೆ ಸುರುವಕ್ಕು. ಹಾಂಗೇಳಿ ಮನೆಲಿಪ್ಪ ಸೋಫಾವನ್ನೋ ಇಸೀಚೇರನ್ನೋ ತುಂಡರಿಸಿ ಅಲ್ಲಿ ಮಡಿಕ್ಕೊಂಬದಲ್ಲ. ಭಗವಂತ° ಇಲ್ಲಿ ಧ್ಯಾನಕ್ಕೆ ಹೇಂಗಿಪ್ಪ ಆಸನ ಆಯೇಕು ಹೇಳಿ ಪ್ರತ್ಯೇಕವಾಗಿ ವಿವರಿಸಿದ್ದ. “ನಾ ಅತಿ ಉಚ್ಛ್ರಿತಂ ನಾ ಅತಿ ನೀಚಂ” –  ದಣಿಯ ಎತ್ತರದ್ದೂ ಅಪ್ಪಲಾಗ ಅತಿ ತಗ್ಗಿನದ್ದೂ ಅಪ್ಪಲಾಗ. ಸರಿಯಾಗಿ ನೇರ್ಪಕ್ಕೆ ಕೂದುಗೊಂಬಲೆ ಯೋಗ್ಯವಾಗಿಪ್ಪದಾಗಿರೆಕು. ಕೆಲವು ದಿಕ್ಕೆ ಮಣೆ ದಾನ ಕೊಡ್ತದು ಕಾಣುತ್ತು – ಕೆರೆಮಣೆಯೋ ಮೆಟ್ಟುಕತ್ತಿಯೋ ಅಷ್ಟು ಎತ್ತರಕ್ಕೆ!, ಅದೂ ಕೂಪಲೆ ನೇರ್ಪಕ್ಕೆ ಎಡಿಯದ್ದಾಂಗಿಪ್ಪದು ! ಒಟ್ಟಾರೆ ಒಂದು ಮಣೆಕೊದಂಟಿ ಹೇಳಿ ಅಕ್ಕಷ್ತೇ ಹಾಂಗಿರ್ತದು. ಭಗವಂತ ಈ ಶ್ಲೋಕಲ್ಲಿ ಹೇಳುತ್ತ° –  “ಚೈಲಾಜಿನಕುಶೋತ್ತರಂ” – ಮದಾಲು ಕುಶ. ಕೂಪ ಜಾಗೆಲಿ ಸುರುವಿಂಗೆ ದರ್ಭೆಯ ಚಾಪೆ ಹಾಸೆಕು. ‘ಉತ್ತರಮ್'(ಕುಶಃ ಉತ್ತರಮ್) – ಅದರ ಮತ್ತೆ / ಮೇಗೆ ‘ಅಜಿನ’. ಅಜಿನ ಹೇಳಿರೆ ಮೃಗಚರ್ಮ. ಕೃಷ್ಣಾಜಿನ (ಸಂಸಾರಿಗೊಕ್ಕೆ), ವ್ಯಾಘ್ರಾಜಿನ (ಸನ್ಯಾಸಿಗೊಕ್ಕೆ / ನೈಷ್ಥಿಕಬ್ರಹ್ಮಚಾರಿಗೊಕ್ಕೆ). ಅಜಿನ ಕೆಟ್ಟ ಕಂಪನ ಶರೀರ ಪ್ರವೇಶಿಸದ ಹಾಂಗೆ ನಿಯಂತ್ರುಸಲೆ ಇಪ್ಪದು. ಅದರ ಮೇಗೆ ‘ಚೇಲ’, ಹೇಳಿರೆ., ವಸ್ತ್ರ , ಚೈಲ – ವಸ್ತ್ರಂದ ತಯಾರಿಸಿದ ಮೃದು ಬಟ್ಟೆ. ಇದು ಧ್ಯಾನಕ್ಕೆ ಅತ್ಯಂತ ಶ್ರೇಷ್ಠ ಆಸನ.

ಇಲ್ಲಿ ಮದಾಲು ದರ್ಭೆಯ ಉಪಯೋಗುಸಲೆ ಹೇಳಿದ್ದವು. ಮೇಲ್ನೋಟಕ್ಕೆ ದರ್ಭೆ ವ್ಯರ್ಧವಾಗಿ ತೋಡಕರೆಲಿಯೋ ಗೆದ್ದೆ ಕರೆಲಿಯೋ ತೋಟಕರೆಲಿಯೋ ಗುಡ್ಡೆಕರೆಲಿಯೋ ಬೆಳೆತ್ತ ಹುಲ್ಲು. ಆದರೆ ವಾತಾವರಣಲ್ಲಿಪ್ಪ ದುಷ್ಟಶಕ್ತಿಯ ನಿಯಂತ್ರಿಸುವ ಅಮೋಘ ಶಕ್ತಿ ದರ್ಭೆಲಿ ಇದ್ದು. ಅದಕ್ಕಾಗಿಯೇ ಪೂಜಾಹವನಾದಿಲಿ ದರ್ಭೆಯ ಪವಿತ್ರ ಉಂಗಿಲಾಗಿ ಧರಿಸಿಗೊಂಬದು, ಕೂರ್ಚೆಯ ಸ್ವಸ್ತಿಕಲ್ಲಿಯೋ, ಕಲಶ ಕಾಯಿ ಮೇಗೆಯೋ ಮಡುಗುವದು, ಹೋಮಕುಂಡದ ಸುತ್ತಲೂ ದರ್ಭೆಯ ಪರಿಸ್ತರಣ ಮಡುಗುವದು. ಧ್ಯಾನಕಾಲಲ್ಲಿ ಯಾವ ದುಷ್ಟಶಕ್ತಿಯೂ ನವಗೆ ಉಪದ್ರ ಕೊಡದ್ದಿರಲಿ ಹೇಳಿ ದರ್ಭಾಸನವ ಮಾಡುವದು. ಕೃಷ್ಣಾಜಿನ ಮತ್ತೆ ಪಟ್ಟೆವಸ್ತ್ರ ಕೆಟ್ಟ ಕಂಪನವ ನಿಯಂತ್ರಿಸಿ ಸಾತ್ವಿಕ ಕಂಪನ ನಮ್ಮೊಳ  ಪ್ರವೇಶಿಸುಲೆ ಸಕಾಯ ಮಾಡುತ್ತು. ಇನ್ನು ಮಣೆಲಿ ಕೂಪದು. ಇದು ಕೂಡ (ಮಣೆ) ಧ್ಯಾನದ ಮೂಲಕ ನಮ್ಮಲ್ಲಿ ಸಂಗ್ರಹಿತವಾದ ಶಕ್ತಿಯ ನೆಲಕ್ಕೆ ತಾಗಿ ನಾಶ ಆಗದ್ದ ಹಾಂಗೆ ತಡೆಕಟ್ಟುಲೆ ಇಪ್ಪದು. ಮಣೆಲಿ ಕೂಬಗೆ ಸಂಪೂರ್ಣವಾಗಿ ಮಣೆಲಿ ಕೂರುತ್ತ ಹಾಂಗೆ ಇರೆಕು. ನಮ್ಮ ಶರೀರದ ಭಾಗಂಗೊ ನೆಲಕ್ಕೆ ತಾಗಲಾಗ. ಹಾಂಗಿಪ್ಪ ಮಣೆ ಆಯೆಕು. ಅದಕ್ಕಾಗಿಯೇ ಭಗವಂತ° ಮೇಗೆ ಹೇಳಿದ ‘ಚೈಲಾಜಿನಕುಶೋತ್ತರಂ’ ಆಸನ ಧ್ಯಾನಕ್ಕೆ ಯೋಗ್ಯವಾದ್ದು. ಈ ರೀತಿಯ ಆಸನವ ತಯಾರಿಸಿಗೊಂಡು ‘ಸ್ಥಿರಮಾಸನಮಾತ್ಮನ’ ನಮ್ಮ ಶರೀರದ ಭಂಗಿಯ ನೆಟ್ಟಂಗೆ ಮಡಿಕ್ಕೊಳ್ಳೆಕು. ನಮ್ಮಂದ ಎಡಿಗಾಗದ್ದ ಭಂಗಿಲಿ ಕಷ್ಟಪಟ್ಟು ಬಲವಂತವಾಗಿ ಕೂದರೆ ಹೆಚ್ಚುಹೊತ್ತು ಕೂಪಲೆ ಎಡಿಗಾಗ. ಸಮಾನ್ಯವಾಗಿ ವಜ್ರಾಸನ ಧ್ಯಾನಕ್ಕೆ ಪ್ರಸಿದ್ದ. ಈ ಆಸನಲ್ಲಿ ನಮ್ಮ ದೇಹ ನೆಟ್ಟಂಗೆ ಇರುತ್ತು ಮತ್ತು ಧ್ಯಾನಕ್ಕೆ ಪೂರಕ.

ಹೀಂಗೆ ಮೇಗೆ ಹೇಳಿದ ಆಸನವ ಸಿದ್ಧಪಡಿಸಿಗೊಂಡು ಕೂದುಗೊಂಡು ತಕ್ಷಣ ಧ್ಯಾನಕ್ಕೆ ಸುರುಮಾಡುವದಲ್ಲ. ಆಸನಲ್ಲಿ ಸೂಕ್ತ ಭಂಗಿಲಿ ಕೂದು, ಮನಸ್ಸಿನ ಭಗವಂತನಲ್ಲಿ ಏಕಾಗ್ರಗೊಳುಸೆಕು. ಏಕಾಗ್ರ ಹೇಳಿರೆ ಏಕ+ಅಗ್ರ – ಬಾಣದ ತುದಿ ಒಂದೇ ಗುರಿಯ ಹೊಂದಿಪ್ಪ ಹಾಂಗೆ. ಯಾವುದಕ್ಕೆ ಗುರಿ ಹೇಳಿರೆ, ‘ಏಷ ಏವ ಕರೋತೀತಿ ಏಕಾಗ್ರಹಃ’ – ಯಾವಾತ° ಸಮಸ್ತ ಜಗತ್ತಿನ ಸೃಷ್ಠಿ-ಸ್ಥಿತಿ-ಲಯ-ನಿಯಮನ-ಜ್ಞಾನಾಜ್ಞನ-ಬಂಧ-ಮೋಕ್ಷಂಗೊಕ್ಕೆ ಕಾರಣನಾಗಿದ್ದನೋ° ಅವ°; ಅವನಲ್ಲಿ ಮನಸ್ಸಿನ ಏಕಾಗ್ರಗೊಳುಸುವದು. ಬಾಲ್ಯಂದ ಬೆಳೆಶಿಗೊಂಡು ಬಂದ ಅಭ್ಯಾಸಂಗಳ ಬಿಟ್ಟು ಹೊಸ ಅಭ್ಯಾಸಕ್ಕೆ ತನ್ನ ತಾನು ಅಣಿಗೊಳುಸೆಕ್ಕಾದರೆ ಮನಸ್ಸಿಂಗೆ ಬಹಳ ಸಂಯಮ ಬೇಕಾವ್ತು. ಹೀಂಗಾಗಿ ಧ್ಯಾನಕ್ಕೆ ಕೂದಕೂಡ್ಳೆ ಮನಸ್ಸು ಏಕಾಗ್ರ ಆವ್ತಿಲ್ಲೆ ಹೇಳಿ ಪದ್ರಾಡು (ಪಲಾಯನ) ಆಯೇಕ್ಕಾದ್ದು ಇಲ್ಲೆ. ನಿರಂತರ ಪ್ರಯತ್ನ ಕೈಗೊಳ್ಳೆಕ್ಕು. ಛಲ ಇರೆಕು. ಇದರಿಂದ ಏಕಾಗ್ರತೆ ಸಾಧ್ಯ.

ಮನಸ್ಸು ಏಕಾಗ್ರ ಆದನಂತರ, ‘ಯತ-ಚಿತ್ತ-ಇಂದ್ರಿಯ-ಕ್ರಿಯಃ’ – ಎಲ್ಲ ಬಾಹ್ಯ ಇಂದ್ರಿಯಕ್ರಿಯೆಗಳ ಸಂಪೂರ್ಣವಾಗಿ ಸ್ಥಬ್ಧಗೊಳುಸೆಕು. ಆ ಸ್ಥಿತಿಲಿ ಹೆರಾಣ ಶಬ್ದ ನವಗೆ ಕೇಳ. ಬಾಹ್ಯ ಕಂಪು ಮೂಗಿಂಗೆ ನಾಟ. ಎರುಗು ನುಸಿ ಕಚ್ಚಿರೂ ಗೊಂತಾಗ. ಒಂದು ಗಾಢ ಒರಕ್ಕಿಲ್ಲಿ ಇಪ್ಪ ಹಾಂಗೆ ಆಗಿಬಿಡೆಕು. ಆದರೆ ಲೌಕಿಕ ಒರಕ್ಕಿಲ್ಲಿ ನವಗೆ ಅಂತರಂಗ ಪ್ರಪಂಚ ಎಚ್ಚರ ಇರ್ತಿಲ್ಲೆ. ಆದರೆ, ಧ್ಯಾನಲ್ಲಿ ಅಂತರಂಗ ಪ್ರಪಂಚ ಎಚ್ಚರ ಇರುತ್ತು. ಹೀಂಗೆ ಬಾಹ್ಯೇಂದ್ರಿಯ ಕ್ರಿಯೆಗಳ ಸ್ಥಗಿತಗೊಳುಸಿ ಚಿತ್ತವ ನಿಯಂತ್ರುಸೆಕು. ನಮ್ಮ ಚಿತ್ತಲ್ಲಿ ಅದೆಷ್ಟು ವಿಚಾರಂಗೊ ಸಂಗ್ರಹವಾಗಿರುತ್ತೊ!. ಅದರ ಹಿಂದೆ ದಾಖಲಾಗಿಪ್ಪ ವಿಷಯಂಗೊ ಅದೆಷ್ಟೋ!! . ಅವೆಲ್ಲವನ್ನೂ ಬಿಟ್ಟು ಕೇವಲ ಭಗವಂತನ ಗುಣದ ಅಂಶವ ಮಾತ್ರ ಧ್ಯಾನಕ್ಕೆ ತೆಕ್ಕೊಳ್ಳೆಕು. ಹೀಂಗೆ ನಮ್ಮ ಮನಸ್ಸು ಚಿತ್ತವ ನಿಯಂತ್ರಿಸುಲೆ ಕಠಿಣ ಛಲ ಇರೆಕು, ಬಹುದಿನದ ಸಾಧನೆ ಬೇಕು. ಹಲವು ಮಂದಿಗೊ ಈ ಸಾಧನೆ ನಿರಂತರ ಪ್ರಯತ್ನ ಮಾಡಿ ಯಾವುದೇ ಸಿದ್ಧಿ ಫಲುಸದ್ದೆ ನಿರಾಶೆ ಅಪ್ಪದೂ ಇದ್ದು. ಆದರೆ ಮದಲೇ ಹೇಳಿಪ್ಪಂತೆ ನಾವು ಅಧ್ಯಾತ್ಮಲ್ಲಿ ಮಾಡುವ ಒಂದು ಹೆಜ್ಜೆಯೂ ವ್ಯರ್ಥ ಆವ್ತಿಲ್ಲೆ. ಈ ಜನ್ಮಲ್ಲಿ ಸ್ತಿದ್ಧಿ ಸಾಧ್ಯವಾಗದ್ದೆ ಹೋದ್ರೆ ಖಂಡಿತ ಮುಂದಾಣ ಜನ್ಮಲ್ಲಿ ನಮ್ಮ ಸಾಧನೆ ಈ ಜನ್ಮಲ್ಲಿ ಎಲ್ಲಿ ನಿಂದಿರುತ್ತೋ ಅಲ್ಲಿಂದ ಆರಂಭ ಆವುತ್ತು. ಆದ್ದರಿಂದ ಆಧ್ಯಾತ್ಮಿಕ ಸಾಧನೆಲಿ ಎಂದೂ ನಿರಾಶೆ ಬೇಕಾದ್ದಿಲ್ಲೆ. ನಿರಂತರ ಪ್ರಯತ್ನ ಕೈಗೊಳ್ಳೆಕು. ಹೀಂಗೆ ನಮ್ಮ ಮನಸ್ಸು ಮತ್ತು ಚಿತ್ತ ನಿಯಂತ್ರಣಕ್ಕೆ ಬಂದ ಮತ್ತೆ ನಾವು ಅದರ ಅದೇ ಸ್ಥಿತಿಲಿ ಹಿಡುದುಮಡಿಕ್ಕೊಂಡು – ‘ಯುಂಜ್ಯಾತ್ ಯೋಗಂ’  ಯೋಗಾಭ್ಯಾಸವ (ಧ್ಯಾನವ) ಮುಂದುವರುಸೆಕು. ಆ ಸ್ಥಿತಿಲಿ ನಮ್ಮ ಜ್ಞಾನಾನಂದಮಯವಾದ ಆತ್ಮಕ್ಕೆ ಹಿಡುದು ಕೊಳೆ ತೊಳದುಹೋಗಿ ಆತ್ಮಶುದ್ಧಿಯಾವುತ್ತು. ಇಂತಹ ಶುದ್ಧವಾದ ಆತ್ಮಂದ ಪವಿತ್ರನಾದ ಭಗವಂತನ ಕಾಂಬಲೆ ಎಡಿಗು.

ಶ್ಲೋಕ

ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ ।
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್ ॥೧೩॥

ಪ್ರಶಾಂತಾತ್ಮಾ ವಿಗತಭೀಃ ಬ್ರಹ್ಮಚಾರಿವ್ರತೇ ಸ್ಥಿತಃ ।
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ॥೧೪॥

ಪದವಿಭಾಗ

ಸಮಮ್ ಕಾಯ-ಶಿರಃ-ಗ್ರೀವಮ್ ಧಾರಯನ್ ಅಚಲಮ್ ಸ್ಥಿರಃ । ಸಂಪ್ರೇಕ್ಷ್ಯ ನಾಸಿಕ-ಅಗ್ರಮ್ ಸ್ವಮ್ ದಿಶಃ ಚ ಅನವಲೋಕಯನ್ ॥

ಪ್ರಶಾಂತ-ಆತ್ಮಾ ವಿಗತ-ಭೀಃ ಬ್ರಹ್ಮಚಾರಿ-ವ್ರತೇ ಸ್ಥಿತಃ । ಮನಃ ಸಂಯಮ್ಯ ಮತ್-ಚಿತ್ತಃ ಯುಕ್ತಃ ಆಸೀತ ಮತ್-ಪರಃ ॥

ಅನ್ವಯ

ಸ್ಥಿರಃ (ಭೂತ್ವಾ) ಕಾಯ-ಶಿರಃ-ಗ್ರೀವಮ್ ಅಚಲಂ ಸಮಂ ಧಾರಯನ್, ಸ್ವಂ ನಾಸಿಕ-ಅಗ್ರಂ ಸಂಪ್ರೇಕ್ಷ್ಯ, ದಿಶಃ ಚ ಅನವಲೋಕಯನ್, ಪ್ರಶಾಂತ-ಆತ್ಮಾ ವಿಗತ-ಭೀಃ ಬ್ರಹ್ಮಚಾರಿ-ವ್ರತೇ ಸ್ಥಿತಃ, ಮನಃ ಸಂಯಮ್ಯ, ಮತ್-ಚಿತ್ತಃ, ಮತ್-ಪರಃ ಯುಕ್ತಃ  ಆಸೀತ ।

ಪ್ರತಿಪದಾರ್ಥ

ಸ್ಥಿರಃ (ಭೂತ್ವಾ) – ಸ್ಥಿರವಾಗಿ (ನಿಶ್ಚಲವಾಗಿ), ಕಾಯ-ಶಿರಃ-ಗ್ರೀವಮ್ – ಶರೀರ, ತಲೆ, ಕಂಠವ (ಕೊರಳ), ಅಚಲಮ್ – ಹಂದಾಡುಸದ್ದೆ, ಸಮಮ್ – ನೆಟ್ಟಂಗೆ, ಧಾರಯನ್ – ನಿಲ್ಲುಸಿ (ಧರಿಸಿ, ಸರ್ತ ನೆಟ್ಟಂಗೆ ಮಾಡಿಗೊಂಡು), ಸ್ವಮ್ – ತನ್ನ, ನಾಸಿಕ ಅಗ್ರಮ್ – ಮೂಗಿನ ಕೊಡಿಯ, ಸಂಪ್ರೇಕ್ಷ್ಯ – ನೋಡಿಗೊಂಡು, ದಿಶಃ ಚ- ಏವ ದಿಕ್ಕುಗಳನ್ನೂ ಕೂಡ, ಅನವಲೋಕಯನ್ – ನೋಡದ್ದೆ (ಯಾವಹೊಡೆಯನ್ನೂ ನೋಡದ್ದೆ),  ಪ್ರಶಾಂತ-ಆತ್ಮಾ – ಪ್ರಶಾಂತವಾದ (ಅನುದ್ವಿಗ್ನವಾದ) ಮನಸ್ಸುಳ್ಳವನಾಗಿ, ವಿಗತ ಭೀಃ – ಭಯರಹಿತನಾಗಿ (ಭೀತಿಯ ತೊರದವನಾಗಿ), ಬ್ರಹ್ಮಚಾರಿವ್ರತೇ – ಬ್ರಹ್ಮಚರ್ಯವ್ರತಲ್ಲಿ, ಸ್ಥಿತಃ – ಇಪ್ಪವನಾಗಿ (ನೆಲೆಸಿದವನಾಗಿ), ಮನಃ – ಮನಸ್ಸಿನ, ಸಂಯಮ್ಯ – ಸಂಪೂರ್ಣವಾಗಿ ನಿಯಂತ್ರಿಸಿ, ಮತ್-ಚಿತ್ತಃ – ಎನ್ನಲ್ಲಿ ಚಿತ್ತವ ಕೇಂದ್ರೀಕರಿಸಿದವನಾಗಿ, ಮತ್-ಪರಃ – ಎನ್ನ ಅಂತಿಮಗುರಿಯಿರಿಸಿಗೊಂಡವನಾಗಿ, ಯುಕ್ತಃ – ವಾಸ್ತವಿಕ ಯೋಗಿಯು, ಆಸೀತ – ಕೂದುಗೊಳ್ಳೆಕು.

ಅನ್ವಯಾರ್ಥ 

ದೇಹ, ಕಂಠ ಮತ್ತು ತಲೆಯ ಒಂದೇ ಪಂಕ್ತಿಲಿ ನೆಟ್ಟಂಗೆ ಸ್ಥಿರವಾಗಿರಿಸಿಗೊಂಡು ಮೂಗಿನ ಕೊಡಿಯ ಒಂದೇಹಾಂಗೆ ದೃಷ್ತಿಸೆಕು. ಪ್ರಶಾಂತಾತ್ಮನಾಗಿ, ನಿರ್ಭಯನಾಗಿ, ಬ್ರಹ್ಮಚಾರಿಯಾಗಿ ಮತ್ತು ಹೃದಯಲ್ಲಿ ಎನ್ನನ್ನೇ ಅಂತಿಮಗುರಿಯನ್ನಾಗಿಸಿ  ಎನ್ನನ್ನೇ ಧ್ಯಾನ ಮಾಡೆಕು.

ತಾತ್ಪರ್ಯ/ವಿವರಣೆ

ಭಗವಂತನ ತಿಳುಕ್ಕೊಂಬದೇ ಜೀವನದ ಗುರಿ. ಅವ° ಪರಮಾತ್ಮನಾಗಿ ಪ್ರತಿಯೊಬ್ಬನ ಹೃದಯಲ್ಲಿಯೂ ನೆಲೆಸಿದ್ದ°. ಯೋಗ ಪ್ರಕೃಯೆಯ ಅಭ್ಯಾಸ ಮಾಡುವದರ ಮೂಲಕ ಹೃದಯಸ್ಥನಾದ ಆ ಭಗವಂತನ ಅಂತರ್ಯಾಮಿ ರೂಪವ ನೋಡುವುದೇ ಯೋಗದ ಗುರಿ. ಹೃದಯಲ್ಲಿ ಇಪ್ಪ ಆ ಭಗವಂತನ ಕಾಣೆಕ್ಕಾರೆ ಮದಾಲು ನಮ್ಮ ಸರ್ವ ಅಹಂಕಾರ, ಮೋಹ, ಮದ, ಲೋಭಾದಿಗಳ ತ್ಯಜಿಸಿ, ಇಂದ್ರಿಯ ಚಪಲವನ್ನೂ ಬಿಟ್ಟು, ಮನಸ್ಸಿನ ಭಗವಂತನಲ್ಲೇ ಕೇಂದ್ರಿಕರಿಸಿ ಭಗವಂತನ ಪರಮ ಭಕ್ತನಾಗಿ ಸಂಪೂರ್ಣ ಕೃಷ್ಣಪ್ರಜ್ಞೆಯುಳ್ಳವನಾಗಿ ಧ್ಯಾನಕ್ಕೆ ತೊಡಗೆಕು.

ಹಾಂಗೆ ಧ್ಯಾನಕ್ಕೆ ಕೂರೆಕ್ಕಾರೆ ನಾವು ಮಾಡೆಕ್ಕಪ್ಪ ಪೂರ್ವ ಸಿದ್ಧತೆ ಎಂತೆಲ್ಲ ಹೇಳಿ ಭಗವಂತ° ಈ ಮದಲಾಣ ಶ್ಲೋಕಲ್ಲಿ ವಿವರಿಸಿದ್ದ°. ಮದಾಲು ಶುಚಿಯಾದ ಏಕಾಂತಸ್ಥಳಲ್ಲಿ ಮತ್ತು ಸ್ಥಿರ ಆಸನನಾಗಿ ಕೂದು, ಏಕಾಗ್ರ ಚಿತ್ತವ ಮಾಡಿಗೊಳ್ಳೆಕು. ಈ ಶ್ಲೋಕಲ್ಲಿ ಭಗವಂತ°, ಧ್ಯಾನಕ್ಕೆ ಕೂಪ ಭಂಗಿ ಹೇಂಗಿರೆಕು ಹೇಳಿ ಹೇಳುತ್ತ°.  “ಸಮಂ ಕಾಯ-ಶಿರೋಗ್ರೀವಂ..” ಸ್ಥಿರಾಸನಲ್ಲಿ ಕೂದುಗೊಂಡು ಬೆನ್ನು-ತಲೆ-ಕೊರಳ ನೆಟ್ಟಂಗೆ (ಸರ್ತಕ್ಕೆ) ನಿಲ್ಲುಸಿ, ಅತ್ತಿತ್ತೆ ಹಂದದ್ದೆ, ಅತ್ತಿತ್ತೆ ನೋಡದ್ದೆ, ತನ್ನ ಮೂಗಿನ ಕೊಡಿಲಿ ನೋಟವ ಮಡಿಕ್ಕೊಂಡು, ಮನಸ್ಸಿಲ್ಲಿಪ್ಪ ಎಲ್ಲಾ ಬಾಹ್ಯ ವಿಚಾರಂಗಳ ಬಿಟ್ಟು , ಹೆರಾಣ ಯಾವ ವಿಷಯಕ್ಕೂ ಚಿತ್ತವ ಹರಿಯಗೊಡದ್ದೆ, ಹೆದರದ್ದೆ, ಬ್ರಹ್ಮಚರ್ಯಲ್ಲಿದ್ದುಗೊಂಡು, ಎನ್ನನ್ನೇ (ಮತ್-ಪರಃ) ಸರ್ವಸ್ವ / ಪರದೈವ ಹೇಳಿ ನಂಬಿ, ಎನ್ನನ್ನೇ ಧ್ಯಾನಿಸಿಗೊಂಡು ಸಮಾಧಿ ಸ್ಥಿತಿಯ ಸಾಧುಸೆಕು.

ಬನ್ನಂಜೆ ವಿವರುಸುತ್ತವುಧ್ಯಾನಕ್ಕೆ ಕೂದಪ್ಪಗ ಸೊಂಟಂದ ಮೇಗಾಣ ನಮ್ಮ ಶರೀರವ ಸರೂತಕ್ಕೆ ಸರಳರೇಖೆಲಿ ಇಪ್ಪ ಹಾಂಗೆ ಮಾಡಿಗೊಳ್ಳೆಕು. ಬೆನ್ನು ಬಗ್ಗುಸಿ, ಕೊರಳು ಮಾಲುಸಿ, ತಲೆ ತಗ್ಗಿಸಿ ಕೂಪಲಾಗ. ದೇಹವ ನಿಶ್ಚಲಗೊಳುಸೆಕು. ರಜವೂ ಹಂದಲಾಗ. ಹಾಂಗೆ ಕೂರದ್ರೆ ಮನಸ್ಸಿನ ಸ್ಥಿರತೆ ಬತ್ತಿಲ್ಲೆ. ಮನಸ್ಸು ಈ ದೇಹವೆಂಬ ಪಾತ್ರದ ಒಳ ಇಪ್ಪ ನೀರಿನ ಹಾಂಗೆ. ಪಾತ್ರ ಹಂದಿರೆ ಮನಸ್ಸೆಂಬ ನೀರಿನ ಅಲೆಗೊ ಮೂಡುತ್ತು. ಇದರಿಂದ ಏಕಾಗ್ರತೆ ಭಂಗ ಆವುತ್ತು. ಇನ್ನು ದೇಹಲ್ಲಿ ಇನ್ನೊಂದು ಪ್ರಮುಖ ಅಂಗ ಕಣ್ಣು. ದೇಹವ ಸ್ಥಿರಗೊಳುಸಿದ ಮತ್ತೆ ಕಣ್ಣಿನ ಸ್ಥಿರಗೊಳುಸೆಕು. ಕಣ್ಣಿಂಗೆ ಕಣ್ಣ ಎದುರು ಎಂತೆಂತದೋ ಕಾಣುತ್ತು. ಅದು ಚಿತ್ತಕ್ಕೆ ಸಂಕೇತವ ರವಾನುಸುತ್ತು. ಅದಕ್ಕಾಗಿ ಆ ಕಣ್ಣಿನ ಹತೋಟಿ ಮಾಡ್ಳೆ ಆ ದೃಷ್ಠಿಯ ಮೂಗಿನ ಕೊಡಿಯಂಗೆ ಕೇಂದ್ರೀಕರುಸೆಕು. ಕಣ್ಣೆದುರ ಯಾವ ಆಕೃತಿಯೂ ಕಾಂಬಲಾಗ. ಅದಕ್ಕೇಳಿ ಕಣ್ಣ ಮುಚ್ಚಿರಕ್ಕೋ . ಕಣ್ಣು ಮುಚ್ಚಿರೆ ಒರಕ್ಕು ಬಂದು ಹೋದರೆ?! . ಅದಕ್ಕಾಗಿಯೇ ಅರ್ಧ ತೆರೆದ ಕಣ್ಣುಳ್ಳವನಾಗಿ ಆ ಕಣ್ಣುಗಳೆರಡರನ್ನೂ ಮೂಗಿನ ಅಗ್ರ ಭಾಗಕ್ಕೆ ಕೇಂದ್ರೀಕರುಸೆಕು. ಅಷ್ಟಪ್ಪಗ – ‘ಪ್ರಶಾಂತಾತ್ಮಾ ವಿಗತ ಭೀಃ ..”   ಮನಸ್ಸು ಪ್ರಶಾಂತ ಆವುತ್ತು. ಯಾವ ಗೊಂದಲವೂ ಇಲ್ಲದ್ದ ಆ ವಿಚಿತ್ರ ಆನಂದದ ಸ್ಥಿತಿಲಿ ಯಾವ ಭಯವೂ ಉಂಟಾವ್ತಿಲ್ಲೆ. ಧ್ಯಾನಕ್ಕೆ ಬೇಕಾದ ಇನ್ನೊಂದು ಮುಖ್ಯ ವಿಷಯ – ಬ್ರಹ್ಮಚಾರಿವ್ರತಪಾಲನೆ. ಇಲ್ಲಿ ಬ್ರಹ್ಮಚಾರಿ ಹೇಳ್ತದಕ್ಕೆ ಮೂರು ಅರ್ಥ ಇದ್ದು. ಧ್ಯಾನ / ಯೋಗ/ ಸಾಧನೆ / ಆಧ್ಯಾತ್ಮ ಹೇಳಿರೆ ಎಲ್ಲವನ್ನೂ ಏಕಾಏಕಿ ಬಿಟ್ಟಿಕ್ಕಿ ಹೋಗಿ ಕಾಡಿಲ್ಲಿ ತಪಸ್ಸಿಂಗೆ ಕೂಪದು ಅಲ್ಲ. ಬ್ರಹ್ಮಚಾರಿಯಾಗಿದ್ದವ° ಬ್ರಹ್ಮಚಾರಿಯಾಗಿದ್ದುಗೊಂಡೇ, ಸಂಸಾರಿಯಾಗಿದ್ದವ° ಸಂಸಾರಿಯಾಗಿಯಾಗಿದ್ದುಗೊಂಡೇ ಧ್ಯಾನಲ್ಲಿ ತೊಡಗಿ ಸಾಧನೆಯ ಕೈಗೊಂಬದು. ಅದರೆ ಯಾವುದನ್ನೂ ಅತಿಯಾಗಿ ಅಂಟುಸಿಗೊಳ್ಳದ್ದೆ ಇಪ್ಪದು. ಇಲ್ಲಿ ಈಗ ಬ್ರಹ್ಮಚರ್ಯ ಹೇಳಿರೆ, ಪರಬ್ರಹ್ಮನ ಕಡೆಂಗೆ ಹೋಪ ದೀಕ್ಷೆ ಬ್ರಹ್ಮಚರ್ಯ, ನಿರಂತರ ವೇದಾಧ್ಯಯನದ ಬ್ರಹ್ಮಚರ್ಯ, ಸಂಸಾರಿಯಾಗಿದ್ದವಂಗೆ ನಿಯಮಿತ ಕಾಮದ ಪಾಲನೆ ಮತ್ತೆ ವಿರಕ್ತಿಗಳ (ನೈಷ್ಠಿಕ ಬ್ರಹ್ಮಚಾರಿ) ಲೈಂಗಿಕಮುಕ್ತ ಜೀವನ – ಬ್ರಹ್ಮಚರ್ಯ. ಭಗವಂತನೇ ಸರ್ವೋತ್ತಮ ಹೇಳ್ವ ಅಚಲವಾದ ಭಕ್ತಿ. ಭಗವಂತನಲ್ಲೇ ಸಂಪೂರ್ಣ ಭರವಸೆಯ ಮಡಿಕ್ಕೊಂಡು, ಸದಾ ಭಗವಂತನನ್ನೇ ಧ್ಯಾನಿಸಿಗೊಂಡು, ನಿರಂತರವಾಗಿ (ಎಡೇಡೆಲಿ ಕೈಬಿಡದ್ದೇ) ಎಂದೂ ಎದೆಗುಂದದ್ದೆ ಸಮಾಧಿಯ ಸಾಧುಸುವದು.

ಹಾಂಗಾರೆ ಹೀಂಗಿಪ್ಪ ಧ್ಯಾನದ ಪರಿಣಾಮ ಎಂತರ ? ನಾವೆಂತಕೆ ಧ್ಯಾನ ಮಾಡೇಕು ? –

ಶ್ಲೋಕ

ಯುಂಜನ್ನೇವಂ ಸದಾssತ್ಮಾನಂ ಯೋಗೀ ನಿಯತಮಾನಸಃ ।
ಶಾಂತಿಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ ॥೧೫॥

ಪದವಿಭಾಗ

ಯುಂಜನ್ ಏವಮ್ ಸದಾ ಆತ್ಮಾನಮ್ ಯೋಗೀ ನಿಯತ-ಮಾನಸಃ । ಶಾಂತಿಮ್ ನಿರ್ವಾಣ-ಪರಮಾಮ್ ಮತ್-ಸಂಸ್ಥಾಮ್ ಅಧಿಗಚ್ಛತಿ ॥

ಅನ್ವಯ

ಏವಂ ಸದಾ ಆತ್ಮಾನಂ ಯುಂಜನ್, ನಿಯತ-ಮಾನಸಃ ಯೋಗೀ ನಿರ್ವಾಣ-ಪರಮಾಂ ಮತ್-ಸಂಸ್ಥಾಂ ಶಾಂತಿಮ್ ಅಧಿಗಚ್ಛತಿ ।

ಪ್ರತಿಪದಾರ್ಥ

ಏವಮ್ – ಈ ರೀತಿಯಾಗಿ, ಸದಾ – ನಿರಂತರವಾಗಿ, ಆತ್ಮಾನಮ್ – ದೇಹ, ಮನಸ್ಸು, ಮತ್ತೆ ಆತ್ಮವ, ಯುಂಜನ್ – ಅಭ್ಯಾಸಮಾಡಿಗೊಂಡು, ನಿಯತ-ಮಾನಸಃ – ನಿಯಂತ್ರಿತ ಮನಸ್ಸುಳ್ಳವನಾಗಿ, ಯೋಗೀ – ಆಧ್ಯಾತ್ಮಿಕವಾದಿ, ನಿರ್ವಾಣ-ಪರಮಮ್ – ಭೌತಿಕ ಅಸ್ತಿತ್ವದ ನಿಲುಗಡೆಯ, ಮತ್-ಸಂಸ್ಥಾಮ್ – ಪರವ್ಯೋಮವ (ಭಗವದ್ಧಾಮವ), ಶಾಂತಿಮ್ – ಶಾಂತಿಯ, ಅಧಿಗಚ್ಛತಿ – ಹೊಂದುತ್ತ°.

ಹೀಂಗೆ ದೇಹ, ಮನಸ್ಸು, ಮತ್ತೆ ಕಾರ್ಯಂಗಳ ನಿರಂತರ ನಿಯಂತ್ರಣ ಮಾಡಿಗೊಂಡು ಆಧ್ಯಾತ್ಮಿಕ ಅಭ್ಯಾಸಮಾಡಿಗೊಂಡು ಯೋಗಿಯು ತನ್ನ ಮನಸ್ಸಿನ ನಿಯತಗೊಳುಸಿ  ಐಹಿಕ ಅಸ್ತಿತ್ವದ ಅಂತ್ಯದ ಮೂಲಕ ಭಗವಂತನ ರಾಜ್ಯದ ಪರಮ ಶ್ರೇಷ್ಠವಾದ ಶಾಂತಿಯ ಪಡೆತ್ತ°.

ತಾತ್ಪರ್ಯ/ವಿವರಣೆ

ಯೋಗಾಭ್ಯಾಸದ ಅಂತಿಮ ಗುರಿಯ ಭಗವಂತ° ಇಲ್ಲಿ  ಸ್ಪಷ್ಟಪಡಿಸಿದ್ದ°. ಅದರ ಗುರಿ ಎಲ್ಲ ಐಹಿಕ ಅಸ್ತಿತ್ವವ ಕೊನೆಗಾಣುಸುವದು. ಭಗವಂತನ ಪ್ರಕಾರ ಆರೋಗ್ಯವ ಉತ್ತಮಗೊಳುಸಲೆ  ಯೋಗಭ್ಯಾಸದವ ಕೈಗೊಂಬವ° ಯೋಗಿ ಅಲ್ಲ. ಐಹಿಕ ಅಸ್ತಿತ್ವವ ಕೊನೆಗಾಣುಸುವದು ಹೇಳಿರೆ ಶೂನ್ಯವ ಪ್ರವೇಶಿಸುವದೂ ಅಲ್ಲ. ಭಗವಂತನ ಸೃಷ್ಟಿಲಿ ಎಲ್ಲಿಯೂ ಶೂನ್ಯ ಇಲ್ಲೆ. ಐಹಿಕ ಅಸ್ತಿತ್ವದ ಅಂತ್ಯಂದ ಮನುಷ್ಯ° ಭಗವಂತನ ನಿವಾಸವಾದ ಆಧ್ಯಾತ್ಮಿಕ ಗಗನವ ಪ್ರವೇಶಿಸುವದು. ಭಗವಂತನ ನಿವಾಸ ಹೇಳಿರೆ ಸೂರ್ಯ ಚಂದ್ರ ವಿದ್ಯುಚ್ಛಕ್ತಿ ಯಾವುದರ ಅಗತ್ಯವೂ ಇಲ್ಲದ್ದ ಪರಮ ಶ್ರೇಷ್ಠ ಸ್ಥಳ. ಭಗವಂತನ ರಾಜ್ಯ ಎಲ್ಲೆಲ್ಲಿಯೂ ಇದ್ದು. ಆದರೆ ಆಧ್ಯಾತ್ಮಿಕ ಗಗನವ ಪರಂಧಾಮ ಹೇಳಿ ಹೇಳುವದು. ಇಲ್ಲಿ ಭಗವಂತನೇ ಹೇಳಿದಾಂಗೆ ಮತ್ ಚಿತ್ತಃ, ಮತ್ ಪರಃ, ಮತ್ ಸ್ಥಾನಂ – ಭಗವಂತನನ್ನೇ ಕೇಂದ್ರೀಕರಿಸಿ ಭಗವಂತನನ್ನೆ ಅರ್ಥಮಾಡಿಗೊಂಬದರಲ್ಲಿ ಪರಿಪೂರ್ಣನದ ಯೋಗಿ ನಿಜವಾದ ಶಾಂತಿಯ ಪಡೆತ್ತ ಮತ್ತೆ ಅವನ ಪರಂಧಾಮವಾದ ಭಗವದ್ ಲೋಕವ ತಲಪುತ್ತ. ಅದುವೇ ಗೋಲೋಕ, ಅದುವೇ ವೈಕುಂಠ. ಆದ್ದರಿಂದ ಕೃಷ್ಣಪ್ರಜ್ಞೆಲಿ ಕೆಲಸ ಮಾಡುವವನ ಮನಸ್ಸು ಸದಾ ಕೃಷ್ಣನ ಕಾರ್ಯಂಗಳಲ್ಲಿಯೇ ಮಗ್ನವಾಗಿರುತ್ತು, ಅವ° ಪರಿಪೂರ್ಣ ಯೋಗಿ. ನಿಜವಾದ ಯೋಗಪದ್ಧತಿಯ ಪರಿಪೂರ್ಣತೆ ಹೇಳಿರೆ ಐಹಿಕ ಅಸ್ತಿತ್ವಂದ ಬಿಡುಗಡೆ ಹೊಂದುವದು ಹೊರತು ಮುಗ್ಧರಿಂಗೆ ಮೋಸ ಮಾಡುವ ಯಕ್ಷಿಣಿ ಅಲ್ಲ, ಅಂಗಸಾಧನೆಯ ಕಸರತ್ತುಗಳೂ ಅಲ್ಲ.

ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿದ್ದವುಇದು ಮನಸ್ಸಿಂದ ಮಾಡುವ ಧ್ಯಾನ. ಬಾಹ್ಯ ಇಂದ್ರಿಯಂಗಳ ಸ್ಥಬ್ಧಗೊಳುಸಿ, ಚಿತ್ತ ಮತ್ತೆ ಮನಸ್ಸಿನ ನಿಯಂತ್ರಿಸಿ ಮಾಡುವದು ‘ಧ್ಯಾನ’. ಇದರಿಂದಾಚಿಗೆ ಇಪ್ಪದು ‘ತುರಿಯಾವಸ್ಥೆ’. ನಮ್ಮ ಮನಸ್ಸಿನ ಸಂಪೂರ್ಣ ಸ್ಥಬ್ಧಗೊಳುಸಿ ಆತ್ಮಸ್ವರೂಪಭೂತವಾದ ಜೀವ ನೇರವಾಗಿ ಭಗವಂತನ ನೋಡುವ ಸ್ಥಿತಿ – ತುರಿಯಾವಸ್ಥೆ. ಧ್ಯಾನಲ್ಲಿ ನಾವು ಕಾಂಬದು ನೇರ ಭಗವಂತನ ಅಲ್ಲ, ಅದರ ಬದಲು ಭಗವಂತನ ಪ್ರತೀಕವ. ಮನಸ್ಸು ನೇರವಾಗಿ ಜ್ಞಾನಾನಂದಸ್ವರೂಪಭೂತನಾದ ಭಗವಂತನ ಗ್ರಹಿಸ. ಭಗವಂತನ ದರ್ಶನ ಆಯೇಕ್ಕಾರೆ, ಧ್ಯಾನಂದಾಚಿಗೆ ತುರಿಯಾವಸ್ಥೆಗೆ ಹೋಯೆಕು. ಜೀವಸ್ವರೂಪದ ಕಣ್ಣಿಂದ ಭಗವಂತನ ಕಾಣೆಕು. ಮನಸ್ಸಿನ ನಿರಂತರವಾಗಿ ಭಗವಂತನಲ್ಲಿ ನೆಲೆಗೊಳುಸಿ, ಮನಸ್ಸಿನ ಮೂಲಕ ಧ್ಯಾನಲ್ಲಿ ಭಗವಂತನ ಮಾನಸರೂಪ ಗೋಚರವಾದ ಮತ್ತೆ ಮನಸ್ಸಿನ ಸ್ಥಬ್ಧಗೊಳುಸೆಕು. ಅಷ್ಟಪ್ಪಗ ತುರಿಯಾವಸ್ಥೆ ಜಾಗೃತವಾವುತ್ತು. ಈ ಹಂತಲ್ಲಿ ಆತ್ಮಸ್ವರೂಪಕ್ಕೆ ಭಗವಂತನ ಸಂಯೋಗ ಆವ್ತು. ಆವಾಗ, ಅದು ನೇರವಾಗಿ ಭಗವಂತನ ಕಾಣುತ್ತು. ಈ ಸ್ಥಿತಿಯ ತಲುಪಿದವ ಧ್ಯಾನಯೋಗಿ ನಿಜವಾದ ಯೋಗಿ ಎನಿಸಿಗೊಳ್ಳುತ್ತ°.

ಒಂದು ಜೀವ ತನ್ನ ಸಾಧನೆಯ ಹಾದಿಲಿ ಪಡೆಯಬಹುದಾದ ಅತ್ಯಂತ ಮಹತ್ತರ ಆನಂದದ ಪರಕಾಷ್ಠೆ – ಭಗವಂತನ ಸಾಕ್ಷಾತ್ಕಾರ. ಇದಕ್ಕಿಂತ ಮಿಗಿಲಾದ ಅರಿವು, ಆನಂದದ ದರ್ಶನ ಇನ್ನೊಂದಿಲ್ಲೆ. ಈ ರೀತಿ ಭಗವಂತನ ಸಾಕ್ಷಾತ್ಕಾರವಾದವ ಮುಂದೆ ಎಂದೂ ಈ ಸಂಸಾರ ಬಂಧನಲ್ಲಿ ಸಿಲುಕತ್ತನಿಲ್ಲೆ. ಅವ° ಭಗವಂತನಲ್ಲೇ ನೆಲೆಸಿ ಮೋಕ್ಷವ ಪಡೆತ್ತ°.

ಹಾಂಗಾರೆ ಸಮಾಧಿಯ ಅಭ್ಯಾಸ ಮಾಡ್ತವರ ಜೀವನಕ್ರಮ ಹೇಂಗಿರೆಕು ? –

ಶ್ಲೋಕ

ನಾತ್ಯಶ್ನತಸ್ತು ಯೋಗೋsಸ್ತಿ ನ ಚೈಕಾಂತಮನಶ್ನತಃ
ನ ಚಾತಿಸ್ವಪ್ನಶೀಲಸ್ಯ ಜಾಗೃತೋ ನೈವ ಚಾರ್ಜುನ ॥೧೬॥

ಪದವಿಭಾಗ

ನ ಅತಿ ಅಶ್ನತಃ ತು ಯೋಗಃ ಅಸ್ತಿ ನ ಚ ಏಕಾಂತಮ್ ಅನಶ್ನತಃ । ನ ಚ ಅತಿ-ಸ್ವಪ್ನ-ಶೀಲಸ್ಯ ಜಾಗೃತಃ ನ ಏವ ಚ ಅರ್ಜುನ ॥

ಅನ್ವಯ

ಹೇ ಅರ್ಜುನ!, ಅತಿ ಅಶ್ನತಃ ತು  ಯೋಗಃ ನ ಅಸ್ತಿ, ಏಕಾಂತಮ್ ಅನಶ್ನತಃ ಚ ನ  । ಅತಿ-ಸ್ವಪ್ನ-ಶೀಲಸ್ಯ ಚ ನ, ಜಾಗೃತಃ  ಚ ನ ಏವ ।

ಪ್ರತಿಪದಾರ್ಥ

ಹೇ ಅರ್ಜುನ! – ಏ ಅರ್ಜುನ°!, ಅತಿ ಅಶ್ನತಃ – ಅತಿ ಹೆಚ್ಚು ತಿಂಬವನ (ತಿನ್ನುವವಂಗೆ), ತು – ಆದರೋ, ಯೋಗಃ ನ ಅಸ್ತಿ – ಪರಮೋನ್ನತದೊಂದಿಂಗೆ ಸಂಬಂಧವು ಇಲ್ಲೆ, ಏಕಾಂತಮ್ ಅನಶ್ನತಃ – ತೀರ/ಏನೂ ತಿನ್ನದ್ದವಂಗೂ, ಚ – ಕೂಡ, ನ – ಇಲ್ಲೆ, ಅತಿ-ಸ್ವಪ್ನ-ಶೀಲಸ್ಯ – ಅತಿಯಾಗಿ ಒರಗುತ್ತವಂಗೂ, ಚ – ಕೂಡ, ನ – ಇಲ್ಲೆ, ಜಾಗೃತಃ – ಇರುಳಿಡೀ ಜಾಗರಣೆ ಮಾಡುವವಂಗೂ, ಚ – ಕೂಡ, ನ – ಇಲ್ಲೆ,  ಏವ – ಖಂಡಿತವಾಗ್ಯೂ.

ಅನ್ವಯಾರ್ಥ

ಏ ಅರ್ಜುನ!, ಹೊಟ್ಟೆಬಾಕನ ಹಾಂಗೆ ಅತಿಯಾಗಿ ತಿಂಬವಂಗೂ, ಮತ್ತೆ, ಏನೂ ತಿನ್ನದ್ದ ಕುರೆಪ್ಪಾಟಿಂಗೂ, ಹಾಂಗೆಯೇ ಬೋಧ ಇಲ್ಲದ್ದೆ ಬಿದ್ದು ಒರಗುತ್ತವಂಗೂ, ಅಥವಾ ಇರುಳಿಡೀ ಕೂದು ಜಾಗರಣೆ ಮಾಡುತ್ತವಂಗೂ ಯೋಗ ಸಿದ್ಧಿಸುತ್ತಿಲ್ಲೆ.   

ತಾತ್ಪರ್ಯ/ವಿವರಣೆ

ಇಲ್ಲಿ ಯೋಗಿಗೊಕ್ಕೆ ಊಟ ಮತ್ತು ಒರಕ್ಕಿನ ವಿಷಯಲ್ಲಿ ನಿಯಂತ್ರಣ ಇರೆಕು ಹೇಳುತ್ತದರ ಸೂಚಿಸುತ್ತ° ಭಗವಂತ°. ಅತಿಯಾಗಿ ತಿಂಬದು ಹೇಳಿರೆ ಹೊಟ್ಟಬಾಕನ ಹಾಂಗೆ ಯಾವ ನಿಯಂತ್ರಣ ಇಲ್ಲದ್ದೆ ಮುಕ್ಕುವದು (ತಿಂಬದು). ಅರ್ಥಾತ್ ದೇಹ ಮತ್ತೆ ಆತ್ಮವ ಒಟ್ಟಿಂಗೆ ಇರಿಸಿಗೊಂಬಲೆ ಎಡಿಗಾಗದ್ದ ಹಾಂಗೆ ಅಗತ್ಯಕ್ಕಿಂತ ಹೆಚ್ಚಿಗೆ ತಿಂಬದು. ಧ್ಯಾನಕ್ಕೆ ಯೋಗ್ಯವಾಗಿರುಸಲೆ ನಮ್ಮ ಶರೀರಕ್ಕೆ ಎಷ್ಟು ಬೇಕೋ ಅಷ್ಟೇ ತಿನ್ನೆಕು. ಬಾಯಿಗೆ ರುಚಿಯಾವ್ತು ಹೇಳಿ ಮಾಂಸಾಹಾರವನ್ನೋ, ಕೊಬ್ಬು, ಅಥವಾ ಪ್ರಚೋದನಾತ್ಮಕ ಮಾನಸಿಕ ಸ್ಥಿತಿಗೆ ತಳ್ಳುವ ಆಹಾರಂಗಳನ್ನೋ ತಿಂಬಲಾಗ. ನಮ್ಮ ಶರೀರಕ್ಕೆ ಬೇಕಪ್ಪ ಪೌಷ್ಟಿಕ ಸತ್ವವ ಧಾನ್ಯಂಗೊ, ತರಕಾರಿಗೊ, ಹಣ್ಣು, ಹಾಲು ಸಮೃದ್ಧಿಯಾಗಿ ಕೊಡುತ್ತು. ಇಂತಹ ಸರಳವಾದ ಆಹಾರವು ಸಾತ್ವಿಕ ಗುಣಕ್ಕೆ ಹೊಂದಿಕೊಂಡಿಪ್ಪದು. ಮಾಂಸಹಾರ ತಾಮಸಿಗೊಕ್ಕೆ ಇಪ್ಪದು. ತಾಮಸಲ್ಲಿ ಯೋಗಕ್ಕೆ ಅವಕಾಶ ಇಲ್ಲೆ. ಯೋಗಕ್ಕೆ ಸಾತ್ವಿಕ ಗುಣ ಇರೆಕು. ಇದಲ್ಲದೆ ಮದ್ಯಪಾನ, ಧೂಮಪಾನ ಮೊದಲಾದ ಮಾದಕ ವಸ್ತುಗಳಿಂದ ದೂರ ಇರೆಕು. ಇಂದ್ರಿಯ ಸಂತೋಷಕ್ಕಾಗಿ ತಿಂಬದು ವರ್ಜಿತ. ಕೃಷ್ಣಪ್ರಜ್ಞೆಲಿಪ್ಪವ ಭಗವಂತಂಗೆ ಸಮರ್ಪಿಸದ್ದೆ ಯಾವ ವಸ್ತುವನ್ನೂ ಸ್ವೀಕರುಸುತ್ತನಿಲ್ಲೆ. ಅದು ಪಾಪವ ತಿಂಬದಕ್ಕೆ ಸಮಾನ ಹೇಳಿ ತಿಳಿತ್ತ°.    ಹಾಂಗಾಗಿ ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ° ಮಾತ್ರ ಯೋಗಾಭ್ಯಾಸಲ್ಲಿ ಪರಿಪೂರ್ಣನಪ್ಪಲೆಡಿಗು. ತನ್ನ ವೈಯಕ್ತಿಕ ಉಪವಾಸ ರೀತಿಯ ರಚಿಸಿಗೊಂಡು ಕೃತಕ ರೀತಿಲಿ ಆಹಾರವ ಬಿಡುವವನೂ ಯೋಗಾಭ್ಯಾಸವ ಮಾಡ್ಳೆ ಎಡಿಯ. ಕೃಷ್ಣಪ್ರಜ್ಞೆ ಇಪ್ಪ ಮನುಷ್ಯ° ಶಾಸ್ತ್ರಂಗಳಲ್ಲಿ ಹೇಳಿದ ಉಪವಾಸ ಮಾಡುತ್ತ°. ಅವ ಅಗತ್ಯಕ್ಕಿಂತ ಹೆಚ್ಚಿಗೆ ತಿಂತನೂ ಇಲ್ಲೆ, ಅಗತ್ಯಕ್ಕಿಂತ ಹೆಚ್ಚಿಗೆ ಉಪವಾಸ ಕೂರುತ್ತನೂ ಇಲ್ಲೆ. ಹೇಳಿರೆ, ಆಹಾರ ಪದ್ಧತಿಲಿ ನಿಯಂತ್ರಣ ಮಡಿಕ್ಕೊಳ್ಳೆಕು. ಆರೋಗ್ಯವ ಸಹಜವಾಗಿ ಕಾಪಾಡಿಗೊಂಡಿರೆಕು. ಅಗತ್ಯಕ್ಕಿಂತ ಹೆಚ್ಚು ತಿಂಬದು, ಅಥವಾ ತಿನ್ನದ್ದೆ ಕೂಬದು ಮನುಷ್ಯನ ಒರಕ್ಕಿನತ್ತ ತಳ್ಳುತ್ತು. ಪರಿಣಾಮವಾಗಿ ಅಗತ್ಯಕ್ಕಿಂತ ಹೆಚ್ಚಿಗೆ ಒರಕ್ಕಿಂಗೆ ಬೀಳೆಕ್ಕಾವ್ತು. ಆ ರೀತಿಯಾಗಿ ಸೋಮಾರಿಗಳಪ್ಪಲಾಗ. ಅಥವಾ ನಿದ್ರೆಗೆಟ್ಟು ಮರುದಿನಕ್ಕೆ ಸ್ವಾಸ್ಥ್ಯ ಹದೆಗೆಡಿಸಿಗೊಂಬಲೂ ಆಗ. ಇಂತವು ಯೋಗಾಭ್ಯಾಸ ಮಾಡ್ಳೆ ಅನರ್ಹರು.

ಬನ್ನಂಜೆ ವಿವರುಸುತ್ತವುಅತಿಯಾಗಿ ತಿಂಬವಂಗೆ ಧ್ಯಾನ ಅಸಾಧ್ಯ. ಹೊಟ್ಟಗೆ ಹೆಚ್ಚು ಆಹಾರ ಹೋದಪ್ಪಗ ಮನಸ್ಸು ನಿಸ್ತೇಜ ಆವುತ್ತು. ಹಾಂಗಾಗಿ ಅನಗತ್ಯ ತಿಂಬ್ರಾಂಡಿ ಹಾಂಗೆ ಅಪ್ಪಲಾಗ. ಅತಿಯಾದ ಆಹಾರ ಸೇವನೆಯೂ ಒಳ್ಳೆದಲ್ಲ. ಔತಣಕೂಟಂಗಳಲ್ಲಿ ಒತ್ತಾಯ ಪೂರ್ವಕ ಬಳುಸಿ ತಿನುಸುವದೂ ತಪ್ಪು. ಇದರಿಂದ ಆಹಾರವೂ ವ್ಯರ್ಥ ಮತ್ತು ತಿಂದವನ ಶರೀರವೂ ಮನಸ್ಸೂ ಹಾಳು. ಮಾಡೆಕ್ಕಪ್ಪ ಕಾರ್ಯಕ್ಕೆ ಅಣಿಯಪ್ಪಲೆ ಎಡಿಗಾಗದ್ದೆ ಒರಗಲೆ ವಾ ಸೋಮಾರಿಯಪ್ಪಲೆ ಪ್ರಚೋದಿಸುತ್ತು. ಅದೇ ರೀತಿ, ಯಾವತ್ತೊ ಸರಿಯಾಗಿ ತಿನ್ನದ್ದೆ ಇದ್ದರೆ ದೇಹದ ಆರೋಗ್ಯ  ಶಕ್ತಿ ಕುಗ್ಗುತ್ತು. ಭಗವಂತನ ಸಾಕ್ಷಾತ್ಕಾರ ಅಪ್ಪದು ಈ ಶರೀರದ ಮೂಲಕವೇ. ಆದ್ದರಿಂದ ನಿಯತವಾದ ಆಹಾರ ಪದ್ಧತಿಯ ನಿಯತಕಾಲಲ್ಲಿ ಅನುಸರುಸೆಕು. ಆಹಾರದ ಒಟ್ಟಿಂಗೆ ನಮ್ಮ ಒರಗುವ ಅಭ್ಯಾಸವೂ ನಿಯತವಾಗಿರೆಕು. ನಾವು ಹೇಂಗೆ ಅಭ್ಯಾಸಮಾಡಿಗೊಳ್ಳುತ್ತೋ ಹಾಂಗೇ ಮನಸ್ಸೂ ಅದಕ್ಕೆ ಒಗ್ಗಿಬಿಡುತ್ತು. ಅತಿಯಾದ ಒರಕ್ಕು ಸೋಮಾರಿತನವ ಸ್ವಾಗತಿಸುತ್ತು, ಹಾಂಗೆ ಒರಗದ್ದೆ ಕೂಪದೂ ಸ್ವಾಸ್ಥ್ಯವ ಹಾಳುಮಾಡುತ್ತು. ಧ್ಯಾನಕ್ಕೆ ಮಸಸ್ಸು ಶುದ್ಧಿಯಾಗಿಪ್ಪಂತೆ ಶರೀರವೂ ಸ್ವಾಸ್ಥ್ಯವಾಗಿರೆಕು.

ಶ್ಲೋಕ

ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು ।
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ॥೧೭॥

ಪದವಿಭಾಗ

ಯುಕ್ತ-ಆಹಾರ-ವಿಹಾರಸ್ಯ ಯುಕ್ತ-ಚೇಷ್ಟಸ್ಯ ಕರ್ಮಸು । ಯುಕ್ತ-ಸ್ವಪ್ನ-ಅವಬೋಧಸ್ಯ ಯೋಗಃ ಭವತಿ ದುಃಖಹಾ ॥

ಅನ್ವಯ

ಯುಕ್ತ-ಆಹಾರ-ವಿಹಾರಸ್ಯ, ಕರ್ಮಸು ಯುಕ್ತ-ಚೇಷ್ಟಸ್ಯ, ಯುಕ್ತ-ಸ್ವಪ್ನ-ಅವಬೋಧಸ್ಯ ಯೋಗಃ ದುಃಖಹಾ ಭವತಿ।

ಪ್ರತಿಪದಾರ್ಥ

ಯುಕ್ತ-ಆಹಾರ-ವಿಹಾರಸ್ಯ – ನಿಯಂತ್ರಿತವಾದ ಆಹಾರ ವಿಹಾರ ಇಪ್ಪವನ (ಇಪ್ಪವಂಗೆ), ಕರ್ಮಸು – ಕರ್ಮಂಗಳಲ್ಲಿ (ಕರ್ತವ್ಯನಿರ್ವಹಣೆಗಳಲ್ಲಿ), ಯುಕ್ತ-ಚೇಷ್ಟಸ್ಯ – ನಿಯಂತ್ರಿತವಾದ ಪೋಷಣೆ ಕೆಲಸ ಮಾಡುವವವನ (ಮಾಡುವವಂಗೆ), ಯುಕ್ತ-ಸ್ವಪ್ನ-ಅವಬೋಧಸ್ಯ – ನಿಯಂತ್ರಿತವಾದ ನಿದ್ರೆ ಮತ್ತು ಎಚ್ಚರ ಇಪ್ಪವನ (ಇಪ್ಪವಂಗೆ), ಯೋಗಃ – ಯೋಗಾಭ್ಯಾಸವು, ದುಃಖಹಾ – ನೋವುಗಳ ಕಡಮ್ಮೆಮಾಡುವಂತಾದ್ದು, ಭವತಿ – ಆವುತ್ತು.

ಅನ್ವಯಾರ್ಥ

ಆಹಾರ, ನಿದ್ರೆ, ವಿಹಾರ ಮತ್ತೆ ಕರ್ಮಂಗಳ (ಕೆಲಸಂಗಳ) ಅಭ್ಯಾಸಂಗಳಲ್ಲಿ ನಿಯತ್ತಿಲ್ಲಿಪ್ಪವವಂಗೆ (ನಿಯಂತ್ರಣಲ್ಲಿಪ್ಪವಂಗೆ) ಯೋಗಪದ್ಧತಿಯ ಅಭ್ಯಾಸವು ಎಲ್ಲ ಐಹಿಕ ದುಃಖಂಗಳ ಕಡಮ್ಮೆ ಮಾಡುವ ಸಾಧನವಾಗಿ ಆವುತ್ತು.

ತಾತ್ಪರ್ಯ/ವಿವರಣೆ

ಅಹಾರ ವಿಹಾರಂಗಳಲ್ಲಿ, ಕರ್ಮಕಾರ್ಯಂಗಳಲ್ಲಿ, ಒರಕ್ಕು ಮತ್ತು ಎಚ್ಚರಲ್ಲಿ ಇತಿಮಿತಿಯಾಗಿ ಯುಕ್ತನಾಗಿಪ್ಪವವಂಗೆ ಯೋಗಾಭ್ಯಾಸವು ಸುಖಕರವಾಗಿ ಸುಲಭವಾಗಿ ಸಿದ್ಧಿಸುತ್ತು. ತಿಂಬದು, ಒರಗುವದು, ಎಚ್ಚರ, ರಕ್ಷಣೆ ಮತ್ತೆ ಮೈಥುನ ಇದೆಲ್ಲವೂ ದೇಹದ ಅಗತ್ಯಂಗೊ. ಇವು ಅತಿಯಾದರೆ ಯೋಗಾಭ್ಯಾಸದ ಪ್ರಗತಿಗೆ ದೊಡ್ಡ ಅಡ್ಡಿಯಾವುತ್ತು. ಅಹಾರವ ಭಗವದ್ ಪ್ರಸಾದರೂಪವಾಗಿ ಸ್ವೀಕರುಸೆಕು. ಸಾತ್ವಿಕವಲ್ಲದ ಆಹಾರವ ಸೇವುಸಲೆ ಆಗ. ಕೃಷ್ಣಪ್ರಜ್ಞೆಲಿಪ್ಪವಂಗೆ ಸಾತ್ವಿಕ ಆಹಾರ ಸ್ವೀಕರಿಸಿದ ಹಾಂಗೆ ತಂತಾನೇ ನಿಯಂತ್ರಣ ಶಿಕ್ಷಣವೂ ಲಭಿಸುತ್ತು. ಕೃಷ್ಣಪ್ರಜ್ಞೆಲಿಪ್ಪವ° ತನ್ನ ಕರ್ತವ್ಯಂಗಳ ನಿರ್ವಹಿಸಲೆ ಸದಾ ಜಾಗೃತನಾಗಿರುತ್ತ°. ಅನಗತ್ಯ ಒರಗಿ ಕಾಲಕಳವದು ವ್ಯರ್ಥ ಹೇಳಿ ತಿಳುದಿರುತ್ತ°. ಸಾತ್ವಿಕ ಆಹಾರಪದ್ಧತಿ ಮತ್ತು ನಿಯಂತ್ರಿತ ನಿದ್ರೆ ಮತ್ತು ಜಾಗರಣೆ ಇಂದ್ರಿಯಂಗಳ ಹತೋಟಿಗೆ ಸಹಾಯಕ ಆವ್ತು. ಅವನಲ್ಲಿ ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿಪ್ಪದರಿಂದ ಇಂದ್ರಿಯ ತೃಪ್ತಿಯ ಸೋಂಕು ಇರುತ್ತಿಲ್ಲೆ. ಇಂದ್ರಿಯತೃಪ್ತಿಯ ಪ್ರಶ್ನೆಯೇ ಇಲ್ಲದಿಪ್ಪದರಿಂದ ಕೃಷ್ಣಪ್ರಜ್ಞೆಲಿಪ್ಪವ° ಐಹಿಕ ವಿರಾಮಕ್ಕೆ ಇಳಿತ್ತನಿಲ್ಲೆ. ಅವನ ಎಲ್ಲಾ ಚಟುವಟಿಕೆಗೊ ನಿಯತಲ್ಲಿ ಇಪ್ಪದರಿಂದ ಅವಂಗೆ ಐಹಿಕವಾದ ದುಃಖಂಗೊ ಎದುರಾವುತ್ತಿಲ್ಲೆ.

ಬನ್ನಂಜೆಯವರ ವ್ಯಾಖ್ಯಾನಲ್ಲಿ ಗಮನಿಸಿದರೆತಕ್ಕ ತಿನಸು-ತಿರುಗಾಟ, ತಕ್ಕ ಕಾಯಕ, ತಕ್ಕ ನಿದ್ರೆ-ಎಚ್ಚರ ಸಾಧಿಸಿದವಂಗೆ ಧ್ಯಾನಯೋಗಂದ ದುಃಖ ದೂರ ಆವ್ತು. ಯೋಗಾಭ್ಯಾಸ ಮಾಡುವಾಗ ನಮ್ಮ ಜೀವನಕ್ರಮವೂ ಶಿಸ್ತುಬದ್ಧವಾಗಿರೆಕು. ನಿಯಮಿತವಾದ ಮತ್ತೆ ಯೋಗ್ಯವಾದ ಆಹಾರ ಸೇವನೆ ಬಹುಮುಖ್ಯ. ಧ್ಯಾನಕ್ಕೆ ಮನಸ್ಸಿನ ಅಣಿಗೊಳುಸುವಾಗ ಸಾತ್ವಿಕ ಆಹಾರ ಸೇವನೆ ಧ್ಯಾನಕ್ಕೆ ಪೂರಕ. ಕೆಲವು ಆಹಾರಂಗೊ ನಮ್ಮ ಮನಸ್ಸಿನ ಮೇಲೆ ನೇರ ಕೆಟ್ಟ ಪರಿಣಾಮವ ಉಂಟುಮಾಡುತ್ತು. ಉದಾಹರಣೆಗೆ ನೀರುಳ್ಳಿ, ಬೆಳ್ಳುಳಿ, ನುಗ್ಗೆ ಇತ್ಯಾದಿ. ಇವು ತಿಂಬಲೆ ರುಚಿ ಆದಿಕ್ಕು, ಔಷಧೀಯ ಗುಣಂಗಳೂ ಇಕ್ಕು, ಆದರೆ, ಇವುಗೊ ಮನಸ್ಸಿನ ಮೇಲೆ ಪ್ರಚೋದನಾತ್ಮಕವಾಗಿ ಕೆಟ್ಟ ಪರಿಣಾಮವ ಉಂಟುಮಾಡುತ್ತು. ಆದರೆ, ವೈದ್ಯರು ಆರೋಗ್ಯದೃಷ್ಟಿಂದ ಇದರ ಔಷಧವಾಗಿ ಸೇವಿಸಲೆ ಹೇಳಿರೆ ಅಂಬಗ ತಿಂಬದರಿಂದ ಯಾವ ದೋಷವೂ ಇಲ್ಲೆ. ಎಂತಕೆ ಹೇಳಿರೆ ಅಧ್ಯಯನಕ್ಕೆ ಮೊತ್ತಮೊದಲು ಆರೋಗ್ಯ ಅವಶ್ಯಕ. ಅದನ್ನೇ ಇಲ್ಲಿ ಹೇಳಿದ್ದು ಆರೋಗ್ಯಕ್ಕೆ ಬೇಕಾಗಿಪ್ಪ ತಕ್ಕುದಾದ ಅಹಾರ ಪದ್ಧತಿ ಹೇಳಿ. ವೇದಾಧ್ಯಯನ, ಧ್ಯಾನ, ನಿಷ್ಠೆ, ವ್ರತಂಗಳ ಆಚರುಸುವವು ಇಂತಹ ಆಹಾರಂಗಳ ವರ್ಜಿಸೆಕು. ನಮ್ಮ ದೇಹದ ಪೋಷಣೆಯ ಒಟ್ಟಿಂಗೆ ನಮ್ಮ ಮನಸ್ಸಿಂಗೆ ಸಾತ್ವಿಕ ಪೋಷಣೆ ಕೊಡುವ ಆಹಾರವ ಇಲ್ಲಿ ಭಗವಂತ° “ಯುಕ್ತಾಹಾರ” ಹೇಳಿ ಹೇಳಿದ್ದ°.  

ಇನ್ನು ನಮ್ಮ ಮನಸ್ಸಿಂಗೆ ನಾವು ಎಷ್ಟು ಬೇಕೋ ಅಷ್ಟು ವಿರಾಮ ಕೊಡೆಕ್ಕಾದ್ದೂ ಬಹು ಅಗತ್ಯ. ಆದರೆ ಈ ವಿರಾಮ ಸೋಮಾರಿಯಾಗಿ ರೂಪುಗೊಳ್ಳಲೆ ಬಿಡ್ಳಾಗ. ಮನಸ್ಸಿಂಗೆ ವಿರಾಮ ಕೊಡುವಾಗ ಯಾವ ಚಿಂತನೆಯೂ ಇಲ್ಲದ್ದೆ ಸಂಪೂರ್ಣ ವಿಶ್ರಾಂತಿಯ ಕೊಡೆಕು. ಮತ್ತಿನ್ನಲ್ಲಿ ಬ್ರೇಕ್ ಟೈಮ್ ಫೀಡಿಂಗು ಸುರುಮಾಡ್ಳೆ ಇಲ್ಲೆ. ಹಾಂಗೆ ವಿಶ್ರಾಂತಿಗೊಂಡ ಮನಸ್ಸು ಧ್ಯಾನಕ್ಕೆ ಪೂರಕವಾಗಿ ಚುರುಕಾಗಿರ್ತು. ಮತ್ತೆ ಇನ್ನು.,  “ಯುಕ್ತಚೇಷ್ಟಸ್ಯ ಕರ್ಮಸು” – ನಾವು ಮಾಡೇಕ್ಕಾದ ಕೆಲಸ ಕಾರ್ಯವ ಕ್ರಮಬದ್ಧವಾಗಿ, ಪ್ರಮಾಣಬದ್ಧವಾಗಿ ನಾವೇ ಮಾಡೆಕು. ಮಾಡೇಕ್ಕಾದ ಕೆಲಸಲ್ಲಿ ಸೋಮಾರಿತನ ಇಪ್ಪಲಾಗ. ಹೀಂಗೆ – ‘ಶಾಸ್ತ್ರೀಯವಾದ ಶುದ್ಧವಾದ ಕ್ರಮಬದ್ಧವಾದ ಆಹಾರ ಸೇವನೆ, ತಕ್ಕ ಕಾಲಲ್ಲಿ ತಕ್ಕಷ್ಟು ನಿದ್ದೆ-ಎಚ್ಚರ ಮತ್ತೆ ಕ್ರಮಬದ್ಧವಾದ ಪರಿಶ್ರಮ ಮತ್ತೆ ವಿರಾಮ’  ಹೀಂಗೆ ಆದಪ್ಪಗ, ‘ಯೋಗೋ ಭವತಿ ದುಃಖಹಾ’  –  ದುಃಖರಹಿತವಾದ ಆನಂದಮಯ ಜೀವನ ಸಾಧ್ಯ.

ಧ್ಯಾನಯೋಗಂದ ಮನಸ್ಸು ಒಂದು ಹದಕ್ಕೆ ಬಂದುಬಿಡುತ್ತು. ಮನಸ್ಸು ಹದವಾದಪ್ಪಗ ಹೆರಾಣ ಪ್ರಪಂಚಲ್ಲಿ ನಾವು ಅನುಭವುಸುವ ಸುಖ ದುಃಖಂಗೊ ನಿರ್ಲಿಪ್ತವಾಗಿ ಕಾಂಬಲೆ ಅಭ್ಯಾಸ ಆವ್ತು. ಇದರಿಂದ ಸುಖ ಬಂದಪ್ಪಗ ಹಿಗ್ಗಲೂ ಇಲ್ಲೆ, ದುಃಖ ಎದುರಾದಪ್ಪಗ ಕುಗ್ಗಲೂ ಇಲ್ಲೆ. ಸುಖ-ದುಃಖ, ಸೋಲು-ಗೆಲುವಿನ ದ್ವಂದ್ವವೇ ಜೀವನ ಹೇಳುವ ಸಮದೃಷ್ಟಿ ಧ್ಯಾನಯೋಗಂದ ಲಭಿಸುತ್ತು.

ಶ್ಲೋಕ

ಯದಾ ವಿನಿಯತಂ ಚಿತ್ತಂ ಆತ್ಮನ್ಯೇವಾವತಿಷ್ಠತೇ ।
ನಿಃಸ್ಪೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ॥೧೮॥

ಪದವಿಭಾಗ

ಯದಾ ವಿನಿಯತಮ್ ಚಿತ್ತಮ್ ಆತ್ಮನಿ ಏವ ಅವತಿಷ್ಠತೇ । ನಿಃಸ್ಪೃಹಃ ಸರ್ವ-ಕಾಮೇಭ್ಯ ಯುಕ್ತಃ ಇತಿ ಉಚ್ಯತೇ ತದಾ ॥

ಅನ್ವಯ

ಯದಾ ವಿನಿಯತಂ ಚಿತ್ತಮ್ ಆತ್ಮನಿ ಏವ ಅವತಿಷ್ಠತೇ, ಸರ್ವ-ಕಾಮೇಭ್ಯಃ ನಿಃಸ್ಪೃಹಃ ತದಾ ಯುಕ್ತಃ ಇತಿ ಉಚ್ಯತೇ ।

ಪ್ರತಿಪದಾರ್ಥ

ಯದಾ – ಯೇವಾಗ, ವಿನಿಯತಮ್ – ವಿಶಿಷ್ಟವಾಗಿ ಶಿಸ್ತಿಂಗೆ ಒಳಪ್ಪಟ್ಟ, ಚಿತ್ತಮ್ – ಮನಸ್ಸು ಮತ್ತೆ ಅದರ ಚಟುವಟಿಕೆಗೊ, ಆತ್ಮನಿ – ದಿವ್ಯಲ್ಲಿ, ಏವ – ಖಂಡಿತವಾಗಿಯೂ, ಅವತಿಷ್ಠತೇ – ನೆಲೆಸುತ್ತೋ, ಸರ್ವ-ಕಾಮೇಭ್ಯಃ – ಎಲ್ಲ ಬಗೆಯ ಭೌತಿಕ ಇಂದ್ರಿಯತೃಪ್ತಿಗಳಲ್ಲಿ, ನಿಃಸ್ಪೃಹಃ – ಆಸೆಗಳಿಲ್ಲದ್ದವ° ಆವುತ್ತನೋ, ತದಾ – ಅಂಬಗ, ಯುಕ್ತಃ – ಯೋಗಲ್ಲಿ ಚೆಂದಕೆ ನೆಲೆಸಿದವ°, ಇತಿ ಉಚ್ಯತೇ – ಹೇದು ಹೇಳಲ್ಪಡುತ್ತ°.

ಅನ್ವಯಾರ್ಥ

ಏವಾಗ ಯೋಗಾಭ್ಯಾಸಂದ ಯೋಗಿಯು ತನ್ನ ಮಾನಸಿಕ ಚಟುವಟಿಕೆಗಳ ಶಿಸ್ತಿಂಗೆ ಒಳಪ್ಡುಸಿ, ಯಾವುದೇ ಐಹಿಕ ಕಾಮನೆಗೊ ಇಲ್ಲದ್ದೆ, ಭೌತಿಕ ಯಾವ ವಿಷಯಲ್ಲಿಯೂ ಅನುರಾಗಿ ಆಗಿರದ್ದೆ ಆಧ್ಯಾತ್ಮಿಕವಾಗಿ ಮನಸ್ಸಿನ ದೃಢವಾಗಿಬಿಡುತ್ತನೋ, ಅಂಬಗ ಅವ°, ಯೋಗಲ್ಲಿ ಯುಕ್ತನಾಗಿದ್ದ° (ವ್ಯವಸ್ಥಿತನಾಗಿದ್ದ°, ಧ್ಯಾನಯೋಗಿ) ಹೇದು ಹೇಳಲ್ಪಡುತ್ತ°

ತಾತ್ಪರ್ಯ/ವಿವರಣೆ

ಸಾಮಾನ್ಯ ಮನುಷ್ಯನ ಕಾರ್ಯಂಗೊಕ್ಕೂ ಯೋಗಿಯ ಕಾರ್ಯಂಗೊಕ್ಕೂ ವ್ಯತ್ಯಾಸ ಹೇಳಿರೆ, ಯೋಗಿಗೆ ಯಾವುದೇ ಬಗೆಯ ಐಹಿಕ ಬಯಕೆಗೊ ಇರುತ್ತಿಲ್ಲೆ. ಪರಿಪೂರ್ಣ ಯೋಗಿಯು ಮಾನಸಿಕ ಚಟುವಟಿಕೆಗಳಲ್ಲಿ ನಿತ್ಯಕರ್ಮಲ್ಲಿ ನಿಯತ್ತಿನಿಂದ ಕೂಡಿರುತ್ತ°, ಸದಾ ಭಗವದ್ ಚಿಂತನೆಲಿ ಕ್ರಿಯಾಶೀಲನಾಗಿರುತ್ತ°. ಕೃಷ್ಣಪ್ರಜ್ಞೆಲಿಪ್ಪವ° ಈ ಸ್ಥಿತಿಯ ತಂತಾನೇ ತಲಪುವವನಾವುತ್ತ°. ಯೋಗಾಭ್ಯಾಸಂದ ಯೊಗಿಯ ಸುಪ್ತಪ್ರಜ್ಞೆ ನಿಯಂತ್ರಣಗೊಳ್ಳುತ್ತು. ಸಾಮಾನ್ಯವಾಗಿ ನಮ್ಮ ಚಿತ್ತಲ್ಲಿ ಹುದುಗಿಪ್ಪ ಅದೆಷ್ಟೋ ಕಾಲದ ವಿಷಯಂಗೊ ಮತ್ತು ಅದಕ್ಕೆ ಹಿಂದಾಣ ಕಾರಣಂಗೊ ಇತ್ಯಾದಿ ಕಾಡುತ್ತಾ ಇರುತ್ತು. ಯಾವುದೇ ಹಗೆ, ಯಾವುದೇ ಪ್ರೀತಿ ಇವೆಲ್ಲವನ್ನೂ ಮರದು ತನ್ನ ಅಂತರಂಗದ ಪೀಠಲ್ಲಿ ಕೇವಲ ಭಗವಂತನ ಮಾತ್ರವೇ ಕೂರಿಸಿಗೊಂಡು ಧ್ಯಾನಾಸಕ್ತನಾದರೆ ಅಂತರಂಗಲ್ಲಿ ಭಗವಂತನ ದರ್ಶನ ಆವುತ್ತು. ಆ ಭಗವಂತನ ಕಂಡಮತ್ತೆ ನವಗೆ ಈ ಪ್ರಪಂಚಲ್ಲಿ ಮತ್ತ್ತೆ ಬೇರೆ ಎಂತಾದೂ ಬೇಕಪ್ಪ ಇಚ್ಛೆ ಇರ್ತಿಲ್ಲೆ. ಅಂತರಂಗದ ಆನಂದದ ಆ ಚಿಲುಮೆ ಕಂಡಪ್ಪಪ್ಪಗ ಬಾಹ್ಯ ಕಾಮನೆಗೊ ಪೂರ್ತಿ ಕ್ಷುದ್ರವಾಗಿ ಅಳುದುಹೋಗಿ ಧ್ಯಾನಯೋಗಿ ಎಂದೆಣಿಸಿಗೊಳ್ಳುತ್ತ°.

ಶ್ಲೋಕ

ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಸ್ಮೃತಾ ।
ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ ॥೧೯॥

ಪದವಿಭಾಗ

ಯಥಾ ದೀಪಃ ನಿವಾತಸ್ಥಃ ನ ಇಂಗತೇ ಸಾ ಉಪಮಾ ಸ್ಮೃತಾ । ಯೋಗಿನಃ ಯತ-ಚಿತ್ತಸ್ಯ ಯುಂಜತಃ ಯೋಗಮ್ ಆತ್ಮನಃ ॥

ಅನ್ವಯ

ಯಥಾ ನಿವಾತಸ್ಥಃ ದೀಪಃ ನ ಇಂಗತೇ ಸಾ ಉಪಮಾ, ಆತ್ಮನಃ ಯೋಗಂ ಯುಂಜತಃ ಯತ-ಚಿತ್ತಸ್ಯ ಯೋಗಿನಃ ಸ್ಮೃತಾ ।

ಪ್ರತಿಪದಾರ್ಥ

ಯಥಾ – ಹೇಂಗೆ, ನಿವಾತಸ್ಥಃ (ವಾತಃ – ಗಾಳಿಯಿಪ್ಪ, ನಿವಾತಃ – ಗಾಳಿಯಿಲ್ಲದ್ದ) – ಗಾಳಿಯಿಲ್ಲದ್ದ ಜಾಗೆಲಿಪ್ಪ, ದೀಪಃ – ದೀಪವು, ನ ಇಂಗತೇ – ಹೊಯ್ದಾಡುತ್ತಿಲ್ಲೆಯೋ (ನಿಶ್ಚಲವಾಗಿರುತ್ತೋ), ಸಾ – ಆ (ಹಾಂಗೆ), ಉಪಮಾ – ಹೋಲಿಕೆ, ಆತ್ಮನಃ – ದಿವ್ಯತೆಯ, ಯೋಗಮ್ – ಧ್ಯಾನವ, ಯುಂಜತಃ – ಸತತವಾಗಿ ನಿರತನಾಗಿಪ್ಪವ°, ಯತ-ಚಿತ್ತಸ್ಯ – ನಿಯಂತ್ರಿತ ಮನಸ್ಸಿನ, ಯೋಗಿನಃ – ಯೋಗಿಯ, ಸ್ಮೃತಾ – ಪರಿಗಣಿಸಲ್ಪಟ್ಟಿದು.

ಅನ್ವಯಾರ್ಥ

ಗಾಳಿ ಬೀಸದ್ದ ಜಾಗೆಲಿ ದೀಪವು ಹೇಂಗೆ ನಿಶ್ಚಲವಾಗಿ ಇರುತ್ತೋ, ಹಾಂಗೆಯೇ, ಮನಸ್ಸಿನ ನಿಯಂತ್ರಿಸಿಗೊಂಡ ಆಧ್ಯಾತ್ಮವಾದಿ (ಯೋಗಿ), ಆಧ್ಯಾತ್ಮಿಕ ಆತ್ಮದ ಧ್ಯಾನಲ್ಲಿ ನಿಶ್ಚಲನಾಗಿರುತ್ತ°.

ತಾತ್ಪರ್ಯ/ವಿವರಣೆ

ಸದಾ ಆಧ್ಯಾತ್ಮಿಕಲ್ಲಿ ಮಗ್ನನಾಗಿದ್ದು ತಾನು ಆರಾಧುಸುವ ಭಗವಂತನ ನಿರಂತರ ನಿಶ್ಚಲ ಧ್ಯಾನಲ್ಲಿ ಕೃಷ್ಣಪ್ರಜ್ಞೆಲಿ ತನ್ಮಯನಾಗಿ ಯೋಗಿ, ಗಾಳಿ ಬೀಸದ್ದ ಜಾಗೆಲಿ ನಿಶ್ಚಲವಾಗಿ ಉರಿಯುತ್ತಿಪ್ಪ ದೀಪದ ಹಾಂಗೆ ಇರುತ್ತ°. ಗಾಳಿಯಿಲ್ಲದ್ದ ತಾಣಲ್ಲಿ ದೀಪ (ದೀಪಜ್ವಾಲೆ) ಹಂದಾಡುತ್ತಿಲ್ಲೆ. ಹಾಂಗೆಯೇ ಒಳಬಗೆಯ ಹದಗೊಳಿಸಿದ ಯೋಗಿಯ ಧ್ಯಾನ ಆ ದೀಪದ ಜ್ವಾಲೆಯ ಹಾಂಗೆ ನಿಶ್ಚಲವಾಗಿ ಇರುತ್ತು. ಅವನ ಭಗವಂತನ ಕುರಿತಾದ ಮನಸ್ಸಿನ ಯೊಗ (ಆತ್ಮಯೋಗ) ನಿಶ್ಚಲವಾಗಿರುತ್ತು. ಅದು ಅವನ ಗಮನ / ಚಿತ್ತ  ರಜವೂ ಅತ್ತಿತ್ತೆ ಹಂದಾಡುತ್ತಿಲ್ಲೆ.

ಮುಂದೆ ಎಂತರ..       ಇನ್ನಾಣ ವಾರ  ನೋಡುವೋ°

     … ಮುಂದುವರಿತ್ತು

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 06 – SHLOKAS 11 – 19 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

3 thoughts on “ಶ್ರೀಮದ್ಭಗವದ್ಗೀತಾ – ಷಷ್ಠೋsಧ್ಯಾಯಃ – ಆತ್ಮಸಂಯಮಯೋಗಃ (ಧ್ಯಾನಯೋಗಃ) – ಶ್ಲೋಕಂಗೊ 11 – 19

    1. ಇಂದು ಪೇಟೆಲ್ಲಿಪ್ಪ ಹಲವರಿಂಗೆ ಯೋಗಾಭ್ಯಾಸ ಮಾಡುಲೆ ಸಾಧ್ಯ ಆವುತ್ತಿಲ್ಲೇ ಹೇಳಿ ಬೇಸರಿಸಕ್ಕಾದ ಅವಶ್ಯಕತೆ ಇಲ್ಲೇ. ಯೋಗಾಭ್ಯಾಸ ಮಾಡುಲೆ ಮನಸ್ಸಿನೋಳವೆ ಸಿದ್ದತೆ ಮಾಡಿಗೊಮ್ಬಲೆ ಆವುತ್ತು. ಮನಸ್ಸಿಲ್ಲಿ ಸದಾ ಧನಾತ್ಮಕ ವಿಷಯಂಗಳ, ಧನಾತ್ಮಕ ಚಿಂತನೆಗಳ ಮಾಡುತ್ತಾ ಇರೆಕ್ಕು. ಮನಸ್ಸಿಲ್ಲಿ ಸುಂದರವಾದ ಪ್ರಕೃತಿ,ಸುಂದರವಾದ ದೃಶ್ಯ ಇವುಗಳ ಕಲ್ಪಿಸಿಗೊಳ್ಳುತ್ತಾ ಇರೆಕ್ಕು.ಮನಸ್ಸಿಲ್ಲಿ ಎಂತಾದರೂ ನಕಾರಾತ್ಮಕ ಯೋಚನೆ ಬತ್ತು ಹೇಳಿ ಆದರೆ “I am happy,healthy,wealthy and contented” ಈ ತರ ಏನಾದರೊಂದು ಮತ್ತೆ ಮತ್ತೆ ಮನಸ್ಸಿಲ್ಲಿ ಹೇಳುವುದರ ಮೂಲಕ ಮನಸ್ಸಿನ ಸಕಾರಾತ್ಮತೆಗೆ ತಿರುಗುಸೆಕ್ಕು. ಇಂದಿನ ಮಾಧ್ಯಮಂಗ ನಮ್ಮ ಮನಸ್ಸಿಲ್ಲಿ ನಕಾರಾತ್ಮಕ ಭಾವನೆಗಳ ಬೆಳೆಸುದರಲ್ಲಿ ಪ್ರಧಾನ ಪಾತ್ರ ವಹಿಸುತ್ತು. ಅಗತ್ಯ ಇದ್ದಷ್ಟೇ ಅದರಲ್ಲಿ ಆಸಕ್ತಿ ಬೆಳೆಸೆಕ್ಕು. ಸಾಧ್ಯವಾದರೆ ಯಾವುದೇ ಕೆಲಸ ಮಾಡುತ್ತಾ ಇಪ್ಪಗಳೂ ಮನಸ್ಸಿನೊಳ ನಮಗಿಷ್ಟವಾದ ದೇವರ ಪ್ರಾರ್ಥನೆ ಮಾಡುತ್ತಾ ಇರೆಕ್ಕು.

      ಆನು ಸಾಧಾರಣ ಹತ್ತು ಹನ್ನೆರಡು ವರ್ಷಂದ ಯಾವ ಕೆಲಸ ಮಾಡುವಗಳೂ ಎಷ್ಟು ಸಾಧ್ಯವೋ ಅಷ್ಟು ‘ಲಲಿತಾ ಸಹಸ್ರ ನಾಮವ’ ಮನಸ್ಸಿಲ್ಲಿ ಹೇಳಿಗೊಂಡು ಇತ್ತಿದ್ದೆ. ಒಂದು ದಿನವೂ ಪ್ರಯತ್ನಪೂರ್ವಕವಾಗಿ ಧ್ಯಾನ,ಪ್ರಾಣಾಯಾಮಗಳ ಅಭ್ಯಾಸ ಮಾಡಿದವಳಲ್ಲ. ಓದುದರಲ್ಲಿ ಆಸಕ್ತಿ ಕಡಮ್ಮೆ ಆದ ಕಾರಣ ಪುಸ್ತಕಂಗಳ ಓದಿ ಶಾಸ್ತ್ರ,ಪುರಾಣ,ಆಧ್ಯಾತ್ಮವ ಬಲ್ಲವಳೂ ಅಲ್ಲ. ಹರೇ ರಾಮಲ್ಲಿ ತನ್ಮಯತೆಲ್ಲಿ ಸಾಧಾರಣ ೬ ತಿಂಗಳು ಕಳದೆ. ಅಷ್ಟರಿಂದಲೇ ‘ಬ್ರಹ್ಮ ಜ್ಹಾನವ’, ‘ಆತ್ಮ ಸಾಕ್ಷಾತ್ಕಾರ’ವ ಪಡಕ್ಕೊಮ್ಬಲೆ ಸಾಧ್ಯ ಆತು.

  1. ಯೋಗ ಮಾಡುದು ,ಧ್ಯಾನ ಮಾಡುದು ಈಗ ತುಂಬಾ ಪ್ರಚಾರಲ್ಲಿ ಇಪ್ಪದು.ಕೃಷ್ಣ ಧ್ಯಾನಕ್ಕೆ ಕೂಪವು ಹೇಂಗಿರೆಕ್ಕು ಹೇಳಿದ ವಿವರ ಈಗಲೂ ಮಾನ್ಯ,ಸದಾಕಾಲ ಮಾನ್ಯ.ತುಂಬಾ ಉಣ್ಣುದು,ಏನೂ ತಿನ್ನದ್ದಿಪ್ಪದು ಸರಿ ಅಲ್ಲ.ಓದಿ ತುಂಬಾ ಸಂತೋಷ ಆತು.
    [ಕೂಪಗಳೇ ತಲೆ ಬಗ್ಗಿ ಮಾಲುತ್ತು-ಸೋಬಾನೆ ಪದ್ಯಲ್ಲಿ]
    ಯೋಗ,ಧ್ಯಾನ ಮಾಡಲೆ ಹಾಂಗೆ ಇಪ್ಪಲಾಗ ಅಲ್ಲದೊ ಒಪ್ಪಣ್ಣ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×