Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 11 – ಶ್ಲೋಕಂಗೊ 01 – 09

ಬರದೋರು :   ಚೆನ್ನೈ ಬಾವ°    on   06/12/2012    6 ಒಪ್ಪಂಗೊ

ಚೆನ್ನೈ ಬಾವ°

ಶ್ರೀಮದ್ಭಗವದ್ಗೀತಾ – ಏಕಾದಶೋsಧ್ಯಾಯಃ – ವಿಶ್ವರೂಪದರ್ಶನಯೋಗಃ – ಶ್ಲೋಕಾಃ 01 – 09

ಶ್ರೀ ಕೃಷ್ಣಪರಮಾತ್ಮನೇ ನಮಃ

ಶ್ರೀಮದ್ಭಗವದ್ಗೀತಾ

ಏಕಾದಶೋsಧ್ಯಾಯಃ – ವಿಶ್ವರೂಪದರ್ಶನಯೋಗಃ  (ವಿಶ್ವ-ರೂಪ-ದರ್ಶನ-ಯೋಗಃ)

ಶ್ಲೋಕ

ಅರ್ಜುನ ಉವಾಚ

ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್ ।
ಯತ್ತ್ವಯೋಕ್ತಂ ವಚಸ್ತೇನ ಮೋಹೋsಯಂ ವಿಗತೋ ಮಮ ॥೦೧॥

ಪದವಿಭಾಗ

ಅರ್ಜುನಃ ಉವಾಚ

ಮತ್ ಅನುಗ್ರಹಾಯ ಪರಮಮ್ ಗುಹ್ಯಮ್ ಅಧ್ಯಾತ್ಮ-ಸಂಜ್ಞಿತಮ್ । ಯತ್ ತ್ವಯಾ ಉಕ್ತಮ್ ವಚಃ ತೇನ ಮೋಹಃ ಅಯಮ್ ವಿಗತಃ ಮಮ ॥

ಅನ್ವಯ

ಅರ್ಜುನಃ ಉವಾಚ

ತ್ವಯಾ ಮತ್ ಅನುಗ್ರಹಾಯ ಅಧ್ಯಾತ್ಮ-ಸಂಜ್ಞಿತಂ ಯತ್ ಪರಮಂ ಗುಹ್ಯಂ ವಚಃ ಉಕ್ತಮ್, ತೇನ ಮಮ ಅಯಂ ಮೋಹಃ ವಿಗತಃ ।

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ತ್ವಯಾ – ನಿನ್ನಂದ, ಮತ್ ಅನುಗ್ರಹಾಯ – ಎನಗೆ ಅನುಗ್ರಹುಸಲೆಬೇಕಾಗಿ, ಅಧ್ಯಾತ್ಮ-ಸಂಜ್ಞಿತಮ್ – ಅಧ್ಯಾತ್ಮದ ವಿಷಯಂಗಳಿಂದ ಕೂಡಿದ, ಯತ್ – ಏವುದರ, ಪರಮಮ್ ಗುಹ್ಯಮ್ – ಪರಮವಾದ ರಹಸ್ಯವಾದ, ವಚಃ – ಮಾತು, ಉಕ್ತಮ್ – ಹೇಳಲ್ಪಟ್ಟತ್ತೋ, ತೇನ – ಅದರಿಂದ, ಮಮ – ಎನ್ನ, ಅಯಮ್ ಮೋಹಃ – ಈ ಮೋಹವು, ವಿಗತಃ – ದೂರವಾತು.

ಅನ್ವಯಾರ್ಥ

ಅರ್ಜುನ° ಹೇಳಿದ° – ಎನಗೆ ಅನುಗ್ರಹಮಾಡ್ಳೆಬೇಕಾಗಿ ಎಂತ ಪರಮಗುಹ್ಯವಾದ ಅಧ್ಯಾತ್ಮ ವಿಷಯಂಗೊ ನಿನ್ನಂದ ಹೇಳಲ್ಪಟ್ಟತ್ತೋ, ಅದರಿಂದ ಎನ್ನ ಈ ಮೋಹವು ದೂರ ಆತು.

ತಾತ್ಪರ್ಯ / ವಿವರಣೆ

ಇಲ್ಲಿವರೇಂಗೆ ಭಗವಂತ° ಅರ್ಜುನಂಗೆ ಭಗವದುಪಾಸನೆ ಮಾಡೇಕಾರೆ ಭಗವಂತನ ಬಗ್ಗೆ ಎಂತ ಗೊಂತಿರೆಕು, ಅವನ ಬಗ್ಗೆ ಏವ ಚಿಂತನೆ ಮಾಡೆಕು ಹೇಳ್ವದರ ವಿವರಿಸಿದ್ದ. ಭಗವಂತ ಸರ್ವವ್ಯಾಪ್ತ°, ಸರ್ವಾಂತರ್ಯಾಮಿ, ಸರ್ವಸಮರ್ಥ° ಹೇಳ್ವ ಚಿಂತನೆ ಮನದಾಳಲ್ಲಿ ಸ್ಥಿರಗೊಳಿಸಿ, ಅದರಲ್ಲೇ ಅಚಲ ಶ್ರದ್ಧಾಭಕ್ತಿ ಮಡಿಕ್ಕೊಳ್ಳೆಕು ಹೇಳ್ವ ಮಾರ್ಗದರ್ಶನವ ಭಗವಂತ° ಕೊಟ್ಟಿದ°. ಭಗವಂತನ ಮಾತುಗಳಿಂದ ಜ್ಞಾನಿಯಾದ ಅರ್ಜುನನ ಕಾರಣವಶಾತ್ ಆವರಿಸಿಹೋದ ಮೋಹ ಒಂದು ಮಟ್ಟಿಂಗೆ ತೆಳುದತ್ತು. ಅರ್ಜುನಂಗೆ ಭಗವಂತನ ಸಂದೇಶ ಸಂಪೂರ್ಣ ಮನವರಿಕೆ ಆತು. ಭಗವಂತನಲ್ಲಿ ಅರ್ಜುನನ ಮನಸ್ಸು ಗಾಢವಾತು. ಹಾಂಗಾಗಿ ಧನ್ಯತಾಭಾವಂದ ದೇವರತ್ರೆ ಹೇಳಿಗೊಳ್ತ° – ” ಮೋಹೋಯಂ ವಿಗತೋ ಮಮ” – ‘ನಿನ್ನ ಮಹಿಮೆ ತಿಳುದು ಎನ್ನ ಎಲ್ಲ ಸಂಶಯಂಗಳೂ ನೀಗಿತ್ತು”.

ಶ್ಲೋಕ

ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ ।
ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ॥೦೨॥

ಪದವಿಭಾಗ

ಭವ-ಅಪ್ಯಯೌ ಹಿ ಭೂತಾನಾಮ್ ಶ್ರುತೌ ವಿಸ್ತರಶಃ ಮಯಾ । ತ್ವತ್ತಃ ಕಮಲ-ಪತ್ರ-ಅಕ್ಷ ಮಾಹಾತ್ಮ್ಯಮ್ ಅಪಿ ಚ ಅವ್ಯಯಮ್ ॥

ಅನ್ವಯ

ಹೇ ಕಮಲ-ಪತ್ರ-ಅಕ್ಷ!, ಭೂತಾನಾಂ ಭವ-ಅಪ್ಯಯೌ ಮಯಾ ತ್ವತ್ತಃ ವಿಸ್ತರಶಃ ಶ್ರುತೌ ಹಿ, ಅವ್ಯಯಂ ಮಾಹಾತ್ಮ್ಯಮ್ ಅಪಿ ಚ ।

ಪ್ರತಿಪದಾರ್ಥ

ಹೇ ಕಮಲ-ಪತ್ರ-ಅಕ್ಷ – ಏ ತಾವರೆ ಎಸಳಿನಾಂಗೆ ಕಣ್ಣಿಪ್ಪವನೇ! (ಕೃಷ್ಣ!), ಭೂತಾನಾಮ್ – ಸಕಲ ಜೀವಿಗಳ, ಭವ – ಆವಿರ್ಭಾವ ಅಪ್ಯಯೌ – ಅಳಿವು (ಅಂತರ್ಧಾನ/ ಸಾವು), ಮಯಾ – ಎನ್ನಂದ, ತ್ವತ್ತಃ – ನಿನ್ನಂದ, ವಿಸ್ತರಶಃ – ವಿಸ್ತಾರವಾಗಿ, ಶ್ರುತೌ ಹಿ – ಖಂಡಿತವಾಗಿಯೂ ಕೇಳಲ್ಪಟ್ಟತ್ತು, ಅವ್ಯಯಮ್  – ಅಕ್ಷಯವಾದ, ಮಾಹಾತ್ಮ್ಯಮ್ – ಮಹಿಮೆಯ, ಅಪಿ ಚ – ಕೂಡ.

ಅನ್ವಯಾರ್ಥ

ಏ ಕಮಲದ ಎಸಳಿನಂತ ಕಣ್ಣಿಪ್ಪ ಕೃಷ್ಣ!, ಸಕಲ ಜೀವಿಗಳ ಹುಟ್ಟು ಮತ್ತೆ ಸಾವಿನ ವಿಷಯವಾಗಿಯೂ ಎನ್ನಂದ ನಿನ್ನಂದಲಾಗಿ ಕೇಳಲ್ಪಟ್ಟತ್ತು. ಅಕ್ಷಯವಾದ ಮಹಿಮೆಯನ್ನೂ ಕೂಡ (ಅರ್ಥಮಾಡಿಗೊಂಡೆ).

ತಾತ್ಪರ್ಯ / ವಿವರಣೆ

“ಜೀವಿಗಳ ಭವ ಮತ್ತು ಅಪ್ಯಯಗಳ ಬಿತ್ತರವ ಆನು ನಿನ್ನಂದ ಕೇಳಿ ತಿಳ್ಕೊಂಡೆ” ಹೇಳಿ ಹೇಳ್ತ° ಅರ್ಜುನ°. ಇಲ್ಲಿ ಭವ-ಅಪ್ಯಯ ಹೇಳಿರೆ ಹುಟ್ಟು-ಸಾವು, ಸೃಷ್ಟಿ-ಸಂಹಾರ ಹೇಳಿ ಅರ್ಥ. ಇಲ್ಲಿ ಕೃಷ್ಣನ (ಭಗವಂತನ) ‘ಕಮಲಪತ್ರಾಕ್ಷ’ ಹೇಳಿ ದೆನಿಗೋಳ್ತ° ಅರ್ಜುನ°. ತಾವರೆ ಎಸಳಿನಾಂಗೆ ಕಣ್ಣಿಪ್ಪವ° ಕೃಷ್ಣ°, ಕಾರುಣ್ಯದ ರಸಧಾರೆಯ ಹರುಸುವವ° ಶ್ರೀಕೃಷ್ಣ°. ಅವನ ಮಹಿಮೆ ಎಂದೂ ಅಳಿವಿರದ್ದು, ಅನಂತವಾಗಿಪ್ಪ ಸಂಪತ್ತು. ‘ಅತಿ ದುರ್ಲಭವಾದ ನಿನ್ನ ಅಪಾರ, ಊಹಾತೀತ ಮಹಿಮೆಯ ಎನಗೆ ತಿಳುಶಿದೆ, ಅದರ ತಿಳ್ಕೊಂಬ ಜ್ಞಾನ ಶಕ್ತಿಯ ಕೊಟ್ಟೆ’ ಹೇಳ್ವ ಭಾವ ಅರ್ಜುನನದ್ದು.

ಶ್ಲೋಕ

ಏವಮೇತದ್ಯಥಾssತ್ಥ ತ್ವಮ್ ಆತ್ಮಾನಂ ಪರಮೇಶ್ವರ ।
ದ್ರಷ್ಟುಮಿಚ್ಛಾಮಿ ತೇ ರೂಪಮ್ ಐಶ್ವರಂ ಪುರುಷೋತ್ತಮ ॥೦೩॥

ಪದವಿಭಾಗ

ಏವಂ ಏತತ್ ಯಥಾ ಆತ್ಥ ತ್ವಮ್ ಆತ್ಮಾನಮ್ ಪರಮೇಶ್ವರ । ದ್ರಷ್ಟುಮ್ ಇಚ್ಛಾಮಿ ತೇ ರೂಪಮ್ ಐಶ್ವರಮ್ ಪುರುಷೋತ್ತಮ ॥

ಅನ್ವಯ

ಹೇ ಪರಮೇಶ್ವರ!, ಯಥಾ ಏವಂ ತ್ವಮ್ ಆತ್ಮಾನಮ್ ಆತ್ಥ, ಏತತ್, ಹೇ ಪುರುಷೋತ್ತಮ!, ತೇ ಐಶ್ವರಂ ರೂಪಂ ದ್ರಷ್ಟುಮ್ ಇಚ್ಛಾಮಿ ।

ಪದವಿಭಾಗ

ಹೇ ಪರಮೇಶ್ವರ – ಹೇ ಪರಮ ಪ್ರಭುವೇ, ಯಥಾ – ಯಾವರೀತಿಲ್ಲಿ (ಇಪ್ಪಾಂಗೆ), ಏವಮ್ – ಹೀಂಗೆ, ತ್ವಮ್  ಆತ್ಮಾನಂ – ನೀನು ನಿನ್ನ, ಆತ್ಥ – ಹೇಳಿದ್ದೆಯೋ, ಏತತ್ – ಇದರ, ಹೇ ಪುರುಷೋತ್ತಮ! – ಏ ಪುರುಷೋತ್ತಮನೇ, ತೇ – ನಿನ್ನ, ಐಶ್ವರಮ್ ರೂಪಮ್ – ದಿವ್ಯವಾದ ರೂಪವ, ದ್ರಷ್ಟುಮ್ – ನೋಡ್ಳೆ, ಇಚ್ಛಾಮಿ – ಆನು ಇಚ್ಛಿಸುತ್ತೆ.

ಅನ್ವಯಾರ್ಥ

ಏ ಪರಮಪ್ರಭುವಾದ ಪರಮೇಶ್ವರನೇ, ಪುರುಷೋತ್ತಮನೇ, ನಿನ್ನ ಬಗ್ಗೆ ನಿನ್ನ ಯಥಾಸ್ಥಿತಿಯ (ಯಥಾರೂಪವ/ವಾಸ್ತವರೂಪವ) ಯಾವರೀತಿ ನೀನು ವರ್ಣಿಸಿದೆಯೋ, ಅದೇ ಸ್ಥಿತಿಲಿ ನಿನ್ನ ಆ ದಿವ್ಯವಾದ ರೂಪವ ನೋಡ್ಳೆ ಬಯಸುತ್ತೆ. (ಈ ವಿಶ್ವದ ಅಭಿವ್ಯಕ್ತಿಲಿ ನೀನು ಹೇಂಗೆ ಪ್ರವೇಶಿಸಿದ್ದೆ ಹೇಳ್ವದರ ಅದರ ಅದೇ ರೀತಿಲಿ ನೋಡ್ಳೆ ಇಚ್ಛೆಪಡುತ್ತೆ.)

ತಾತ್ಪರ್ಯ / ವಿವರಣೆ

ತಾನು ಸ್ವಯಂ ಅಂಶಂದ ಈ ಭೌತಿಕ ಜಗತ್ತಿನ ಪ್ರವೇಶಿಸಿಪ್ಪದರಿಂದ ಈ ವಿಶ್ವದ ಅಭಿವ್ಯಕ್ತಿಯು ಸಾಧ್ಯ ಆತು ಮತ್ತು ಅದು ಸಾಗುತ್ತಾ ಇದ್ದು ಹೇಳಿ ಭಗವಂತ° ಈ ಮದಲೇ ಹೇಳಿತ್ತಿದ್ದ. ಅರ್ಜುನನ ಮಟ್ಟಿಂಗೆ ಭಗವಂತನ ಈ ಮಾತುಗೊ ಸ್ಪೂರ್ತಿಯ ತಂದುಕೊಟ್ಟತ್ತು. ಮುಂದೆ ಅರ್ಜುನ°, ಭಗವಂತ° ‘ಸಾಮಾನ್ಯ ಮನುಷ್ಯ°’ ಹೇದು ಗ್ರೇಶುವೋರಿಂಗೆ ಗೊಂತಾಗಲಿ ಹೇಳ್ವ ದೃಷ್ಟಿಂದ ಭಗವಂತನ ವಿಶ್ವರೂಪವ ನೋಡೆಕು ಹೇಳಿ ತನ್ನ ಅಪೇಕ್ಷೆಯ ಮಡುಗುತ್ತ°. ಇಲ್ಲಿ ಎರಡು ವಿಷಯಂಗೊ ರಹಸ್ಯವಾಗಿದ್ದು. ಜ್ಞಾನಿಯಾದ ಅರ್ಜುನಂಗೆ ಭಗವಂತನ ಮಾತುಗಳಿಂದ ಸಂಪೂರ್ಣ ಭರವಸೆ ಆತು, ಮೋಹ ಎಲ್ಲ ನಾಶ ಆತು ಹೇಳಿ ಸುರುವಿಂಗೆ ಹೇಳಿದ. ಮತ್ತೀಗ ಆ ರೂಪವ ನೋಡೆಕು ಹೇಳಿ ಕೇಳ್ತ°. ಸಂಶಯ ನಾಶ ಆದ ಮತ್ತೆ ಇದೆಂತಕೆ ಈ ಕೇಳಿಕೆ ?!. ಅದಕ್ಕೆ ಎರಡು ಸಮರ್ಥನೆಗೊ – ಒಂದು, ಅರ್ಜುನನೂ ನಮ್ಮಂತೆ ಒಬ್ಬ° ಮನುಷ್ಯ° ಈ ಐಹಿಕ ಜಗತ್ತಿಲ್ಲಿ. ಒಂದು ವಿಷಯ ಮನಸ್ಸಿಂಗೆ ಆಳವಾಗಿ ಹೊಕ್ಕಿತ್ತು ಹೇಳಿ ಆದರೆ ಅದರ ಕಣ್ಣಿಂದ ಕಾಣೆಕು ಹೇಳ್ವ ಆಶೆ ಮೂಡುವದು ಮನುಷ್ಯ ಸ್ವಭಾವ. ಆ ದೃಷ್ಟಿಂದ ಭಗವಂತನ ಆ ರೂಪವ ನೋಡೆಕು ಹೇಳಿ ಬೇಡಿಕೆ ಮುಂದಿರಿಸಿದ್ದ°. ಇನ್ನೊಂದು, ತನಗೆ ಗೊಂತಪ್ಪದು ಮಾಂತ್ರ ಇಲ್ಲಿ ಉದ್ದೇಶ ಅಲ್ಲ. ಆ ಮೂಲಕ ಭಗವಂತನ ಉಪದೇಶ ಲೋಕದ ಜನರಿಂಗೆ ಮುಟ್ಟೆಕು ಹೇಳ್ವ ಭಾವಲ್ಲಿ, ಇನ್ನೂ ಸಂಶಯ ಇಪ್ಪ ಸಾಮಾನ್ಯ ಮನುಷ್ಯರ ಮನಸ್ಸಿಂಗೆ ನಾಟ್ಳೆ ಈ ಉಪಾಯ ಇಲ್ಲಿ ಅರ್ಜುನನದ್ದು. ಹಾಂಗಾಗಿ ಅದರ ಪ್ರಮಾಣಪೂರ್ವಕವಾಗಿ ಸಾಬೀತು ಮಾಡೆಕು ಹೇಳ್ವ ದೃಷ್ಟಿಂದ ಅರ್ಜುನ ಭಗವಂತನತ್ರೆ ಬಿನೈಸಿಗೊಳ್ತ° –   “ಲೋಕದ ಪುರುಷರಲ್ಲಿ ಒಬ್ಬ ಪುರುಷನಾಗಿ ಕಾಂಬ ಏ ಪುರುಷೋತ್ತಮ!, ನೀನು ಹೇಳಿದ ವಿಚಾರಂಗಳಲ್ಲಿ ಎನಗೆ ಒಂದಿಷ್ಟೂ ಸಂಶಯ ಇಲ್ಲೆ. ಎಂತಕೆ ಹೇಳಿರೆ ನೀನು ಪರಮೇಶ್ವರ°,  (‘ಈಶ’ ಹೇಳಿರೆ ಒಡೆಯ°, ಸಮರ್ಥ°. ನಮ್ಮ ನಿಯಂತ್ರುಸುವ ದೇವತೆಗೊ ‘ಈಶರು’. ಅವರೆಲ್ಲರಿಂಗೂ ಶ್ರೇಷ್ಠನಾಗಿ, ಪರಮನಾಗಿ ಇಪ್ಪವ°, ಭಗವಂತ°, ಸಮಸ್ತ ಜಗತ್ತಿಂಗೇ ಈಶ° – ‘ಪರಮೇಶ್ವರ°’) ಆದರೆ ಆ ನಿನ್ನ ಸರ್ವಸಾಮರ್ಥ್ಯಂದ ತುಂಬಿದ ರೂಪವ ಕಾಂಬ ಇಚ್ಛೆ ಆವ್ತಾ ಇದ್ದು”.

ಶ್ಲೋಕ

ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ ।
ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಮ್ ॥೦೪॥

ಪದವಿಭಾಗ

ಮನ್ಯಸೇ ಯದಿ ತತ್ ಶಕ್ಯಮ್ ಮಯಾ ದ್ರಷ್ಟುಮ್ ಇತಿ ಪ್ರಭೋ । ಯೋಗೇಶ್ವರ ತತಃ ಮೇ ತ್ವಮ್ ದರ್ಶಯ ಆತ್ಮಾನಮ್ ಅವ್ಯಯಮ್ ॥

ಅನ್ವಯ

ಹೇ ಯೋಗೇಶ್ವರ ಪ್ರಭೋ!, ಮಯಾ ತತ್ ದ್ರಷ್ಟುಂ ಶಕ್ಯಮ್ ಇತಿ ತ್ವಂ ಯದಿ ಮನ್ಯಸೇ, ತತಃ ಮೇ ಅವ್ಯಯಮ್ ಆತ್ಮಾನಂ ದರ್ಶಯ ।

ಪ್ರತಿಪದಾರ್ಥ

ಹೇ ಯೋಗೇಶ್ವರ (ಯೋಗ-ಈಶ್ವರ) ಪ್ರಭೋ ! – ಏ ಸಕಲ ಯೋಗ ಶಕ್ತಿಗಳ ಸ್ವಾಮಿಯೇ!, ಪ್ರಭುವೇ, ಮಯಾ – ಎನ್ನಂದ, ತತ್ – – ಅದು (ಅದರ), ದ್ರಷ್ಟುಮ್ – ನೋಡ್ಳೆ, ಶಕ್ತ್ಯಮ್ ಇತಿ – ಎಡಿಗು ಹೇದು, ತ್ವಮ್ – ನೀನು, ಯದಿ ಮನ್ಯಸೇ – ಒಂದುವೇಳೆ ತಿಳಿತ್ತೆಯಾದರೆ, ತತಃ – ಅಂಬಗ, ಮೇ – ಎನಗೆ, ಅವ್ಯಯಮ್  ಆತ್ಮಾನಮ್ – ಅವ್ಯಯವಾದ ನಿನ್ನ, ದರ್ಶಯ – ತೋರುಸು.

ಅನ್ವಯಾರ್ಥ

ಓ ಯೋಗೇಶ್ವರನಾದ ಮಹಾಪ್ರಭುವೇ!, ನಿನ್ನ ಅಪರಿಮಿತವಾದ ವಿಶ್ವರೂಪವ ಎನಗೆ ನೋಡ್ಳೆ ಎಡಿಗು ಹೇಳಿ ನೀನು ಗ್ರೇಶುತ್ತೆಯಾದರೆ ಎನಗೆ ಆ ನಿನ್ನ  ಅವ್ಯಯವಾದ ವಿಶ್ವರೂಪವ ತೋರುಸು.

ತಾತ್ಪರ್ಯ / ವಿವರಣೆ

ಪರಮ ಪ್ರಭು ಭಗವಂತನ ವೈಭವ ಅದ್ಭುತವಾದ್ದು. ಸಾಮಾನ್ಯರಿಂದ ಇದು ನೋಡ್ಳೋ, ಅರ್ಥಮಾಡಿಗೊಂಬಲೋ ಸಾಧ್ಯ ಅಪ್ಪದಲ್ಲ ಹೇಳ್ವದು ಈ ಶ್ಲೋಕಂದ ಗೊಂತಾವ್ತು. ಹಾಂಗಾಗಿ ಅರ್ಜುನ° ಭಗವಂತನತ್ರೆ ಕೇಳಿಗೊಳ್ತ° – “ಎನಗೆ ಆ ನಿನ್ನ ಭವ್ಯರೂಪವ ನೋಡ್ಳೆ ಎಡಿಗು ಹೇದು ನೀನು ಗ್ರೇಶುತ್ತೆ ಹೇದಾದರೆ, ನಿನ್ನ ಆ ರೂಪವ ಎನಗೆ ತೋರುಸು”. ಅಲ್ಲಿ ಅರ್ಜುನ° ಭಗವಂತನ ‘ಪ್ರಭೋ’ ಹೇಳಿ ದೆನಿಗೊಂಡಿದ°. ‘ಪ್ರಭು’ ಹೇಳಿರೆ ಸಾಮರ್ಥ್ಯ. ‘ನೋಡುವ ಸಾಮರ್ಥ್ಯ ಎನಗಿಲ್ಲದ್ರೂ ಆ ಸಾಮರ್ಥ್ಯವ ಕರುಣಿಸಿ ತೋರುಸುವ ಸಾಮರ್ಥ್ಯ ನಿನ್ನಲ್ಲಿ ಇದ್ದು’ ಹೇಳ್ವ ತತ್ತ್ವ ಇಲ್ಲಿ ಅಡಗಿದ್ದು. ಎಂತಕೆ ಹೇಳಿರೆ ಭಗವಂತ° ‘ಯೋಗೇಶ್ವರಃ’ ಹೇಳಿ ಹೇಳ್ತ° ಅರ್ಜುನ°. ಯೋಗ ಹೇಳಿರೆ ಉಪಾಯ. ‘ಎನಗೆ ಹೇಂಗೆ ನಿನ್ನ ರೂಪವ ತೋರುಸೆಕು ಹೇಳ್ವ ಉಪಾಯ ನಿನಗೇ ಗೊಂತಿಪ್ಪದು. ನೀನು ಎಲ್ಲ ಉಪಾಯಂಗಳ(ಯೋಗಂಗಳ) ಪ್ರಭು’ ಹೇಳಿ ಅರ್ಜುನನ ಗೂಢಾರ್ಥದ ಮಾತು ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಶ್ಲೋಕ

ಶ್ರೀಭಗವಾನುವಾಚ

ಪಶ್ಯ ಮೇ ಪಾರ್ಥ ರೂಪಾಣಿ ಶತಶೋsಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ ॥೦೫॥

ಪದವಿಭಾಗ

ಶ್ರೀ ಭಗವಾನ್ ಉವಾಚ

ಪಶ್ಯ ಮೇ ಪಾರ್ಥ ರೂಪಾಣಿ ಶತಶಃ ಅಥ ಸಹಸ್ರಶಃ । ನಾನಾ-ವಿಧಾನಿ ದಿವ್ಯಾನಿ ನಾನಾ-ವರ್ಣ-ಆಕೃತೀನಿ ಚ ॥

ಅನ್ವಯ

ಶ್ರೀ ಭಗವಾನ್ ಉವಾಚ

ಹೇ ಪಾರ್ಥ!, ಮೇ ನಾನಾ-ವಿಧಾನಿ, ನಾನಾ-ವರ್ಣ-ಆಕೃತೀನಿ, ದಿವ್ಯಾನಿ ಚ ಶತಶಃ ಅಥ ಸಹಸ್ರಶಃ ರೂಪಾಣಿ ಪಶ್ಯ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಹೇಳಿದ°, ಹೇ ಪಾರ್ಥ! – ಏ ಪೃಥೆಯ ಮಗನಾದ ಅರ್ಜುನ!, ಮೇ – ಎನ್ನ, ನಾನಾ-ವಿಧಾನಿ – ವಿವಿಧವಾದ, ನಾನಾ-ವರ್ಣ-ಆಕೃತೀನಿ – ಬಗೆಬಗೆಯ (ವಿವಿಧ) ವರ್ಣಂಗಳ ಆಕೃತಿಗಳ, ದಿವ್ಯಾನಿ – ದಿವ್ಯವಾದ, ಚ – ಕೂಡ, ಶತಶಃ – ನೂರಾರು, ಅಥ – ಕೂಡ, ಸಹಸ್ರಶಃ – ಸಾವಿರಾರು, ರೂಪಾಣಿ – ರೂಪಂಗಳ, ಪಶ್ಯ – ನೋಡು.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ° ಹೇಳಿದ°    – ” ಏ ಪೃಥೆಯ ಮಗನಾದ ಅರ್ಜುನ!, ಎನ್ನ ನೂರಾರು, ಸಾವಿರಾರು ವಿಧದ ಬಣ್ಣಂಗಳ, ದಿವ್ಯವಾದ ರೂಪಂಗಳ ನೋಡು”.

ತಾತ್ಪರ್ಯ / ವಿವರಣೆ

‘ನಿನ್ನ ವೈಭವದ ಯಥಾರೂಪವ ತೋರುಸು’ ಹೇಳಿ ಅರ್ಜುನ ಭಗವಂತನತ್ರೆ ಕೇಳಿಗೊಂಡದಕ್ಕೆ ಭಗವಂತ°, “ಎನ್ನ ನಾನಾವಿಧ ರೂಪ ವೈಭವಂಗಳ ನೋಡು” ಹೇಳಿ ಭಗವಂತ° ಶುರುಮಾಡಿದ°. ಭಗವಂತನ ನಾನಾ ರೂಪಂಗೊ ಆದರೆ ಆ ಎಲ್ಲ ರೂಪಂಗಳೂ ಒಂದೇ. ಮೂಲರೂಪಕ್ಕೂ ಅವತಾರ ರೂಪಕ್ಕೂ ಭೇದವಿಲ್ಲೆ. ಹಾಂಗಾಗಿ ಭಗವಂತ° ಅರ್ಜುನಂಗೆ ಹೇಳಿದ್ದು – ‘ಅತ್ಯದ್ಭುತವಾದ ಈ ಹಿಂದೆ ನೀನು ಎಲ್ಲಿಯೂ ಕಾಣದ್ದ ಎನ್ನ ನೂರಾರು, ಸಾವಿರಾರು ಬಗೆಬಗೆಯ, ಹೊಳವ, ಬಣ್ಣದ ಮತ್ತು ಆಕಾರದ ರೂಪಂಗಳ ನೋಡು’. ಇಲ್ಲಿ ಭಗವಂತ° ಅರ್ಜುನನ ‘ಪಾರ್ಥ’ ಹೇದು ವಿಶೇಷ ಅರ್ಥಲ್ಲಿ ದೆನಿಗೊಂಡಿದ°. ನಿಜವಾದ ವೇದಾರ್ಥವ ಅರ್ತು ವೇದಾರ್ಥಭೂತನಾದ ಭಗವಂತನತ್ರಂಗೆ ಪಯಣ ಹೊರಟವ – ‘ಪಾರ್ಥ’ ಹೇಳ್ವ ಅರ್ಥಲ್ಲಿ ಅರ್ಜುನನ ಪಾರ್ಥ ಹೇಳಿ ವಿಶೇಷ ಧ್ವನಿಲಿ ದೆನಿಗೊಂಡಿದ° ಭಗವಂತ°.

ಶ್ಲೋಕ

ಪಶ್ಯಾದಿತ್ಯಾನ್ವಸೂನ್ ರುದ್ರಾನ್ ಅಶ್ವಿನೌ ಮರುತಸ್ತಥಾ ।
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ ॥೦೬॥

ಪದವಿಭಾಗ

ಪಶ್ಯ ಆದಿತ್ಯಾನ್ ವಸೂನ್ ರುದ್ರಾನ್ ಅಶ್ವಿನೌ ಮರುತಾಃ ತಥಾ । ಬಹೂನಿ ಅದೃಷ್ಟ-ಪೂರ್ವಾಣಿ ಪಶ್ಯ ಆಶ್ಚರ್ಯಾಣಿ ಭಾರತ ॥

ಅನ್ವಯ

ಹೇ ಭಾರತ!, ಆದಿತ್ಯಾನ್ ವಸೂನ್ ರುದ್ರಾನ್ ಅಶ್ವಿನೌ ತಥಾ ಮರುತಾಃ ಪಶ್ಯ । ಅದೃಷ್ಟ-ಪೂರ್ವಾಣಿ ಬಹೂನಿ ಆಶ್ಚರ್ಯಾಣಿ ಚ ಪಶ್ಯ ।

ಪ್ರತಿಪದಾರ್ಥ

ಹೇ ಭಾರತ! – ಏ ಭರತವಂಶ ಶ್ರೇಷ್ಠನಾದ ಅರ್ಜುನ!, ಆದಿತ್ಯಾನ್ – ಅದಿತಿಯ ದ್ವಾದಶ ಪುತ್ರರ, ವಸೂನ್ – ಅಷ್ಟವಸುಗಳ, ರುದ್ರಾನ್ – ಏಕಾದಶರುದ್ರ ರೂಪಂಗಳ, ಅಶ್ವಿನೌ – ಇಬ್ರು ಅಶ್ವಿನೀಕುಮಾರರ, ತಥಾ – ಹಾಂಗೇ, ಮರುತಾಃ – ನಲ್ವತ್ತೊಂಬತ್ತು ಮರುತ್ತುಗಳ (ಮರುತ್ ಗಣ, ವಾಯುದೇವತೆಗಳ), ಪಶ್ಯ – ನೋಡು, ಅದೃಷ್ಟ-ಪೂರ್ವಾಣಿ – ಈ ಹಿಂದೆ ನೋಡಿರದ, ಬಹೂನಿ – ಅನೇಕ, ಆಶ್ಚರ್ಯಾಣಿ – ಅದ್ಭುತಂಗಳ, ಚ – ಕೂಡ, ಪಶ್ಯ – ನೋಡು.

ಅನ್ವಯಾರ್ಥ

ಭರತವಂಶಲ್ಲಿ ಪ್ರಸಿದ್ಧನಾದ ಶ್ರೇಷ್ಥನೇ (ಅರ್ಜುನ!), ದ್ವಾದಶಾದಿತ್ಯರ, ಅಷ್ಟವಸುಗಳ, ಇಬ್ರು ಅಶ್ವಿನೀಕುಮಾರರ, ತಥಾ – ಹಾಂಗೇ, ನಲ್ವತ್ತೊಂಬತ್ತು ಮರುತ್ತುಗಳ ಅಭಿವ್ಯಕ್ತಿಗಳ ನೋಡು. ಈವರೇಂಗೆ ನೀನು ಕಂಡಿರದ ಮತ್ತೆ ಕೇಳಿರದ ಆಶ್ಚರ್ಯಂಗಳ ನೋಡು.

ತಾತ್ಪರ್ಯ / ವಿವರಣೆ

“ಜಗತ್ತಿಲ್ಲಿಪ್ಪ ಎಲ್ಲ ಆದಿತ್ಯರ (ದ್ವಾದಶಾದಿತ್ಯರ), ವಸುಗಳ (ಅಷ್ಟವಸುಗಳ), ರುದ್ರರ (ಏಕಾದಶರುದ್ರರ), ಅಶ್ವಿನೀದೇವತೆಗಳ ( ಇಬ್ರು ಅಶ್ವಿನೀ ದೇವತೆಗೊ), ಮರುತ್ತುಗಳ (ನಲ್ವತ್ತೊಂಬತ್ತು ಮರುತ್ತುಗಳ) ಎಲ್ಲವನ್ನೂ ನೋಡು.  ಈ ವರೇಂಗೆ ನೀನು ಎಲ್ಲ್ಯೂ ಕಂಡಿರದ ಕೇಳಿರದ ಅತ್ಯದ್ಭುತ ಅಚ್ಚರಿಗಳ ನೋಡು” ಹೇಳಿ ಭಗವಂತ ಅರ್ಜುನಂಗೆ ಹೇಳಿದ°. ಇಲ್ಲಿ ಅರ್ಜುನನ ಭಗವಂತ° ‘ಭಾರತ’ ಹೇಳಿ ದೆನಿಗೊಂಡಿದ°. ಬನ್ನಂಜೆ ಹೇಳ್ತವು – ಐತರೇಯ ಬ್ರಾಹ್ಮಣಲ್ಲಿ ‘ವಾಯುರ್ವಾವ ಭರತಃ’ ಹೇಳಿ ಒಂದು ಮಾತಿದ್ದು. ಸದಾ ಭಗವಂತನಲ್ಲಿ ನಿರತನಾದ ವಾಯುದೇವರಿಂಗೆ ‘ಭರತ’ ಹೇದು ಹೆಸರು. ಹಾಂಗಾಗಿ ಇಲ್ಲಿ ಭಾರತ ಹೇದು ಅರ್ಜುನನ ಹೇಳಿರೆ ‘ಭೀಮ(ಪ್ರಾಣತತ್ವ)ನ ತಮ್ಮ’ ಹೇಳಿ ಅರ್ಥವ ಕೊಡುತ್ತು. ಸದಾ ಭಗವಂತಂಗೆ ಅತೀ ಹತ್ರೆ ಇಪ್ಪ ಹನುಮಂತ° ಅಥವಾ ಪ್ರಾಣತತ್ವದ ಉಪಾಸನೆ ಭಗವಂತನ ಅರ್ತುಗೊಂಬ ಸುಲಭ ಸಾಧನ.

ಶ್ಲೋಕ

ಇಹೈಕಸ್ಥಂ ಜಗತ್ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್ ।
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ॥೦೭॥

ಪದವಿಭಾಗ

ಇಹ ಏಕಸ್ಥಮ್ ಜಗತ್ ಕೃತ್ಸ್ನಮ್ ಪಶ್ಯ ಅದ್ಯ ಸಚರ-ಅಚರಮ್ । ಮಮ ದೇಹೇ ಗುಡಾಕೇಶ ಯತ್ ಚ ಅನ್ಯತ್ ದ್ರಷ್ಟುಮ್ ಇಚ್ಛಸಿ ॥

ಅನ್ವಯ

ಹೇ ಗುಡಾಕೇಶ!, ಕೃತ್ಸ್ನಂ ಸಚರ-ಅಚರಂ ಜಗತ್, ಯತ್ ಅನ್ಯತ್ ಚ ದ್ರಷ್ಟುಮ್ ಇಚ್ಛಸಿ, ತತ್ ಅಪಿ ಇಹ ಮಮ ದೇಹೇ ಏಕಸ್ಥಮ್ ಅದ್ಯ ಪಶ್ಯ ।

ಪ್ರತಿಪದಾರ್ಥ

ಏ ಗುಡಾಕೇಶ (ನಿದ್ರೆಯ ಗೆದ್ದವ°)ನಾದ ಅರ್ಜುನ!, ಕೃತ್ಸ್ನಮ್ – ಪೂರ್ಣವಾಗಿ, ಸಚರ-ಅಚರಮ್ – ಚರಾಚರ (ಚಲುಸುವ ಮತ್ತು ಚಲುಸದ್ದ), ಜಗತ್ – ವಿಶ್ವವ, ಯತ್ ಅನ್ಯತ್ – ಇನ್ನು ಬೇರೇನಾರು, ಚ – ಕೂಡ, ದ್ರಷ್ಟುಮ್ ಇಚ್ಛಸಿ – ನೋಡ್ಳೆ ಬಯಸುವವನಾದರೆ, ತತ್ ಅಪಿ – ಅದನ್ನೂ, ಇಹ ಮಮ ದೇಹೇ – ಈ ಎನ್ನ ಶರೀರಲ್ಲಿ, ಏಕಸ್ಥಮ್ – ಒಂದೇ ದಿಕ್ಕೆ ಇಪ್ಪದರ, ಅದ್ಯ ಪಶ್ಯ – ಇಂದು ನೋಡು.

ಅನ್ವಯಾರ್ಥ

ಏ ಅಜ್ಞಾನದ ವರಕ್ಕಿನ ಗೆದ್ದ ಅರ್ಜುನ! (ಗುಡಾಕೇಶ!), ಈ ವಿಶ್ವಲ್ಲಿ ಇಪ್ಪ ಸಮಸ್ತ ಚರಾಚರ ವಸ್ತು ವಿಷಯಂಗಳ ಎನ್ನಲ್ಲಿ ನೋಡು. ಇನ್ನು ಬೇರೆ ಏನಾರು ನಿನಗೆ ನೋಡೆಕು ಹೇಳಿ ಆವ್ತರೆ ಅದನ್ನೂ ಎನ್ನಲ್ಲೇ ಒಂದೇ ಜಾಗೆಲಿ (ಎನ್ನ ಶರೀರಲ್ಲಿ) ಇಪ್ಪದರ ನೀನು ನೋಡು.

ತಾತ್ಪರ್ಯ / ವಿವರಣೆ

ಒಂದೇ ದಿಕ್ಕೆ ಕೂದುಗೊಂಡು ಆರಿಂಗೂ ಈ ಇಡೀ ವಿಶ್ವವ ನೇರವಾಗಿ ಕಣ್ಣಿಲ್ಲಿ ಕಾಂಬಲೆ ಎಡಿಯ. ಅತ್ಯಂತ ಮುಂದುವರುದ ವಿಜ್ಞಾನಿಗೂ ಜಗತ್ತಿನ ಇತರ ಜಾಗೆಲಿ ಅಪ್ಪ ಎಲ್ಲ ವಿಷಯಂಗಳ ಒಂದಿಕ್ಕೆ ಕೂದು ನೇರವಾಗಿ ಯಥಾವತ್ತಾಗಿ ಕಾಂಬಲೆ ಎಡಿಯ. ಆದರೆ ಅರ್ಜುನಂಗೆ ಸಮಸ್ತವನ್ನೂ ಒಂದೇ ದಿಕ್ಕೆ ಕಾಂಬ ಸುಯೋಗವ ಭಗವಂತ° ಇಲ್ಲಿ ಕರುಣುಸುತ್ತ°. ಮಾತ್ರವಲ್ಲ, ಇನ್ನು ನಿನ್ನ ಕಣ್ಣಿಂಗೆ ಮನಸ್ಸಿಂಗೆ ಕಾಣದ್ದ ಬೇರೆ ಏನಾರು ನೋಡೇಕು ಹೇಳಿ ಬಯಕೆ ಇದ್ದರೆ ಅದನ್ನೂ ನೋಡಿಗೊ ಹೇಳಿ ಭಗವಂತ° ಹೇಳುತ್ತ°.

ಅದು ಭಗವಂತನ ದಯೆಂದ ಮಾತ್ರವೇ ಸಾಧ್ಯ. ಭಗವಂತ° ಹೇಳ್ತ° – “ಎನ್ನ ದೇಹವ ಆಶ್ರಯಿಸಿಗೊಂಡಿಪ್ಪ ಸಮಸ್ತ ವಿಶ್ವವ ನೋಡು. ಬ್ರಹ್ಮಾಂಡಲ್ಲಿ ಏನೇನಿದ್ದೊ ಅವೆಲ್ಲವನ್ನೂ ಎನ್ನಲ್ಲಿ ಇಪ್ಪದರ ನೋಡು. ಅದರಲ್ಲಿ ಚೇತನ, ಅಚೇತನ, ಚರ ಸ್ಥಿರ ಎಲ್ಲವೂ ಇದ್ದು. ನಿನಗೆ ಎಂತ ನೋಡೆಕು ಹೇಳಿ ಕಾಣುತ್ತೋ ಅದೆಲ್ಲವನ್ನೂ ನೋಡು”.

ಬನ್ನಂಜೆ ಹೇಳ್ತವು – ಇಲ್ಲಿ ಅರ್ಜುನನ ‘ಗುಡಾಕೇಶ°’ ಹೇದು ದೆನಿಗೊಂಡದು – ಅಜ್ಞಾನ, ಆಲಸ್ಯ, ಒರಕ್ಕಿನ ಗೆದ್ದವ – ‘ಗುಡಾಕೇಶ°’. ಇದಲ್ಲದೆ ಇಲ್ಲಿ ಇನ್ನೂ ಒಂದು ವಿಶೇಷ ಇದ್ದು. ನವಗೆ ಭಗವಂತನ ತಿಳಿಯೇಕ್ಕಾದರೆ ನಾವೂ ಕೂಡ ‘ಪಾರ್ಥ°, ಭಾರತ°, ಗುಡಾಕೇಶ° ಆಯೇಕು ಹೇಳ್ವ ಸಂದೇಶ. ವೇದಾರ್ಥವ ತಿಳುದು ವೇದಾರ್ಥಭೂತನಾದ ಭಗವಂತನತ್ರೆ ಪಯಣ (ಪಾರ್ಥ), ಪ್ರಾಣತತ್ವದ ಉಪಾಸನೆ (ಭಾರತ), ಅಜ್ಞಾನ, ಆಲಸ್ಯ, ಗೆದ್ದು ಭಗವಂತನ ಚಿಂತನೆ (ಗುಡಾಕೇಶ) ಮಾಡಿರೆ ಆ ಭಗವಂತನ ರೂಪ ನವಗೆ ಅರ್ಥಮಾಡಿಗೊಂಬಲೆಡಿಗು.

ಶ್ಲೋಕ

ನ ತು ಮಾಂ ಶಕ್ಯಸೇ ದ್ರಷ್ಟುಮ್ ಅನೇನೈವ ಸ್ವಚಕ್ಷುಷಾ ।
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್ ॥೦೮॥

ಪದವಿಭಾಗ

ನ ತು ಮಾಮ್ ಶಕ್ಯಸೇ ದ್ರಷ್ಟುಮ್ ಅನೇನ ಏವ ಸ್ವ-ಚಕ್ಷುಷಾ । ದಿವ್ಯಮ್ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮ್ ಐಶ್ವರಂ ॥

ಅನ್ವಯ

ಅನೇನ ಏವ ಸ್ವ-ಚಕ್ಷುಷಾ ತು ಮಾಂ ದ್ರಷ್ಟುಂ ನ ಶಕ್ಯಸೇ । ಅತ ಏವ ದಿವ್ಯಂ ಚಕ್ಷುಃ ತೇ ದದಾಮಿ । ಮೇ ಐಶ್ವರಂ ಯೋಗಂ ಪಶ್ಯ ।

ಪ್ರತಿಪದಾರ್ಥ

ಅನೇನ – ಈ, ಏವ – ಖಂಡಿತವಾಗಿಯೂ, ಸ್ವ-ಚಕ್ಷುಷಾ – ನಿನ್ನ ಸ್ವಂತ ಕಣ್ಣುಗಳಿಂದ, ತು – ಆದರೋ, ಮಾಮ್ – ಎನ್ನ, ದ್ರಷ್ಟುಂ – ನೋಡ್ಳೆ, ನ ಶಕ್ಯಸೇ – ನೀನು ಸಮರ್ಥನಾವುತ್ತಿಲ್ಲೆ.  ಅತ ಏವ – ಹಾಂಗಾಗಿಯೇ, ದಿವ್ಯಮ್ ಚಕ್ಷುಃ – ದಿವ್ಯವಾದ ಕಣ್ಣ,  ತೇ – ನಿನಗೆ, ದದಾಮಿ – ಕೊಡುತ್ತೆ, ಮೇ – ಎನ್ನ, ಐಶ್ವರಮ್ ಯೋಗಮ್ – ಅಚಿಂತ್ಯವಾದ ಯೋಗಶಕ್ತಿಯ, ಪಶ್ಯ – ನೋಡು.

ಅನ್ವಯಾರ್ಥ

ಆದರೆ ನೀನು ನಿನ್ನ ಈ ಕಣ್ಣುಗಳಿಂದ ಎನ್ನ ನೋಡ್ಳೆ ಎಡಿಗಪ್ಪನವಾವ್ತಿಲ್ಲೆ. ಹಾಂಗಾಗಿ ನಿನಗೆ ದಿವ್ಯವಾದ ಕಣ್ಣು ಕೊಡುತ್ತೆ. ಅದರಿಂದ ಎನ್ನ ಐಶ್ವರ್ಯಯೋಗವ ನೋಡು.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – ಅರ್ಜುನ!, ನೀನೀಗ ನಿನ್ನ ಈ ಸಾಮಾನ್ಯ ಕಣ್ಣುಗಳಿಂದ ಎನ್ನ ಯಥಾರೂಪದ ವೈಭವ ರೂಪವ ಕಾಂಬಲೆ ಎಡಿಯ. ಹಾಂಗಾಗಿ ನಿನಗೆ ಆನು ದಿವ್ಯವಾದ ಜ್ಞಾನದ ಒಳಗಣ್ಣು ಕೊಡುತ್ತೆ. ಆ ಮೂಲಕ ಜಗವ ಆಳುವ ಎನ್ನ ಬಿತ್ತರ ಬಿನ್ನಾಣವ ನೋಡಿಗೊ.”

ಭಗವಂತನ ರೂಪವ ನವಗೆ ನಮ್ಮ ಹೆರಾಣ ಕಣ್ಣಿಂದ ಕಾಂಬಲೆ ಎಡಿಯ. ಸ್ವರೂಪಭೂತನಾದ ಆ ಭಗವಂತನ ನಾವು ನಮ್ಮ ಸ್ವರೂಪಭೂತವಾದ ಕಣ್ಣಿಂದ ಮಾಂತ್ರ ನೋಡ್ಳೆ ಎಡಿಗಷ್ಟೆ. ಅಷ್ಟಾಯೇಕ್ಕಾರೆ ನವಗೆ ಆತ್ಮದರ್ಶನ ಆಗಿರೆಕು. ಹಾಂಗಾಗಿ ಭಗವಂತ° ಇಲ್ಲಿ ಅರ್ಜುನಂಗೆ ಅವನ ಸ್ವರೂಪಭೂತವಾದ  ಕಣ್ಣಿಂದ ಸರ್ವಸಮರ್ಥ ಭಗವಂತನ ನೋಡ್ವ ಸೌಭಾಗ್ಯವ ಕರುಣುಸುತ್ತ°.

ಶ್ಲೋಕ

ಸಂಜಯ ಉವಾಚ

ಏವಮುಕ್ತ್ವಾ ತತೋ ರಾಜನ್ ಮಹಾಯೋಗೇಶ್ವರೋ ಹರಿಃ ।
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ॥೦೯॥

ಪದವಿಭಾಗ

ಸಂಜಯಃ ಉವಾಚ

ಏವಮ್ ಉಕ್ತ್ವಾ ತತಃ ರಾಜನ್ ಮಹಾ-ಯೋಗ-ಈಶ್ವರಃ ಹರಿಃ । ದರ್ಶಯಾಮಾಸ ಪಾರ್ಥಾಯ ಪರಮಮ್ ರೂಪಮ್ ಐಶ್ವರಮ್ ॥

ಅನ್ವಯ

ಸಂಜಯಃ ಉವಾಚ

ಹೇ ರಾಜನ್!, ಏವಮ್ ಉಕ್ತ್ವಾ ತತಃ ಮಹಾ-ಯೋಗ-ಈಶ್ವರಃ ಹರಿಃ ಪಾರ್ಥಾಯ ಪರಮಮ್ ಐಶ್ವರಂ ರೂಪಂ ದರ್ಶಯಾಮಾಸ

ಪ್ರತಿಪದಾರ್ಥ

ಸಂಜಯಃ ಉವಾಚ – ಸಂಜಯ° ಹೇಳಿದ° –  ಹೇ ರಾಜನ್! – ಏವಮ್ ಉಕ್ತ್ವಾ – ಹೀಂಗೆ ಹೇಳಿಕ್ಕಿ, ತತಃ – ಮತ್ತೆ, ಮಹಾ-ಯೋಗ-ಈಶ್ವರಃ ಹರಿಃ – ಅತ್ಯಂತ ಶಕ್ತಿಶಾಲಿ ಯೋಗಿಯಾದ ಭಗವಂತ°, ಪಾರ್ಥಾಯ – ಪಾರ್ಥಂಗೆ, ಪರಮಮ್ ಐಶ್ವರಮ್ ರೂಪಮ್ – ದಿವ್ಯವಾದ ವಿಶ್ವರೂಪವ , ದರ್ಶಯಾಮಾಸ ( ದರ್ಶಯಾಮ್ ಆಸ) –  ತೋರುಸಿದ°.

ಅನ್ವಯಾರ್ಥ

ಸಂಜಯ° ಹೇಳಿದ°, – ರಾಜನೇ!, ಮಾಹಾಯೋಗೇಶ್ವರನಾದ ದೇವೋತ್ತಮ ಪರಮ ಪುರುಷನಾದ ಕೃಷ್ಣ° ಅರ್ಜುನಂಗೆ ಹೀಂಗೆ ಹೇಳಿಕ್ಕಿ ಅವಂಗೆ ತನ್ನ ವಿಶ್ವರೂಪವ ತೋರುಸಿದ°.

ತಾತ್ಪರ್ಯ / ವಿವರಣೆ

ವ್ಯಾಸನಿಂದ ದಿವ್ಯದೃಷ್ಟಿಯ ಪಡಕ್ಕೊಂಡು ಯುದ್ಧರಂಗಲ್ಲಿ ನಡೆತ್ತಾ ಇಪ್ಪ ಘಟನೆಗಳ ವಿವರಣೆಯ ಅಂಧನೃಪ° ಧೃತರಾಷ್ಟ್ರಂಗೆ ವರದಿ ಒಪ್ಪುಸುವ ಸಂಜಯನೂ ಭಗವಂತನ ವಿಶ್ವರೂಪವ ಕಾಣುತ್ತ° ಅವ° ಧೃತರಾಷ್ಟ್ರಂಗೆ ಹೇಳುತ್ತ° – “ಓ ರಾಜನ್!, ಹೀಂಗೆ ಹೇಳಿಕ್ಕಿ ಮಹಾಯೋಗೇಶ್ವರನಾದ ಹರಿ ತನ್ನ ವೈಭವದ ಮಹಿಮೆಯ ರೂಪವ ಅರ್ಜುನಂಗೆ ತೋರುಸಿದ°”. ಬನ್ನಂಜೆ ಹೇಳ್ತವು ಇಲ್ಲಿ ಬಳಕೆಯಾಗಿಪ್ಪ ‘ತತಃ’ ಹೇಳ್ವ ಪದ ಈ ಶ್ಲೋಕಲ್ಲಿ ವಿಶೇಷ ಅರ್ಥವ ಕೊಡುತ್ತು. ಅರ್ಜುನ° ದಿವ್ಯ ದೃಷ್ಟಿ ಸಂಪನ್ನನಾದ್ದರಿಂದ, ದಿವ್ಯರೂಪ ದರ್ಶನ ನೋಡುವ ಅಧಿಕಾರ ಸಂಪನ್ನನಾದ್ದರಿಂದ, ಎಲ್ಲೆಡೆ ತುಂಬಿಗೊಂಡಿಪ್ಪ ಭಗವಂತ°, ತನ್ನ ವಿಶ್ವರೂಪವ ಅವಂಗೆ ತೋರಿದ ಹೇಳ್ವ ಭಾವವ ಈ ಪದ ಇಲ್ಲಿ ಅರ್ಥೈಸುತ್ತು. ಹೇಳಿರೆ ಭಗವಂತ° ಅರ್ಜುನಂಗೆ ವಿಶೇಷ ದೃಷ್ಟಿಯ ಕರುಣಿಸಿದ ಮತ್ತೆ ವಿಶ್ವರೂಪವ ತೋರುಸಿದ° ಹೇಳ್ವ ಭಾವ. ಇನ್ನು ಇಲ್ಲಿ ಹರಿಃ ಹೇಳಿರೆ ಭಗವಂತನ ಸರ್ವಗತತ್ವವ ಸೂಚಿಸುತ್ತು. ಆರು ಯಾವ ದೇವತಾ ಮುಖಲ್ಲಿ ಆಹುತಿ ಕೊಟ್ಟರೂ ಅದರ ಮದಾಲು ಪಡವ ಭಗವಂತ° – ‘ಹರಿಃ’. 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 11 – SHLOKAS 01 – 09

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

6 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 11 – ಶ್ಲೋಕಂಗೊ 01 – 09

  1. ಬೈಲಿಲಿ-ಹಗಲುದೇ ಗುಡಿಹೆಟ್ಟಿ ವರಗುವ ಅಭ್ಯಾಸ ಇಪ್ಪ ಎನ್ನ೦ತವಕ್ಕೆ,ವಿಶ್ವಾಸರೂಪೀ ಭಾವನ-ಗೀತೆ ಕೇಳುವ ಸುಯೋಗ.

  2. ಅರ್ಜುನನ ಮನಸ್ಸಿನ ಮೋಹ ದೂರ ಆಗಿಯಪ್ಪಗ ವಾಸ್ತವವ ನೋಡುವ ಮನಸ್ಸು ಮೂಡಿತ್ತು.ನೋಡುವ ಕಣ್ಣುಗಳ ದೇವರು ಅನುಗ್ರಹಿಸಿದ°.
    ಅಮೋಘ ನಿರೂಪಣೆ.

  3. ಭಗವಂತನ ಅರ್ಥ ಮಾಡೆಕ್ಕಾರೆ ಜ್ಣಾನ ಚಕ್ಶು ಬೇಕು,ಅದರ ಪಡವಲೆ ಯೋಗ್ಯನಾಗಿತ್ತಿದ್ದ ಅರ್ಜುನಂಗೆ ಅದು ಎಡಿಗಾತು,ನಮ್ಮ ಒಳಾಣ ಆ ಶಕ್ತಿಯ ಎಚ್ಚರಿಕೆಲಿ ಮಡುಗೆಕ್ಕು, ಉತ್ತಮ ವಿಚಾರಂಗಳ ಅರ್ಥ ಮಾಡಿಯೊಳೆಕ್ಕು. ಭಗವದ್ಗೀತೆಯ ದಿವ್ಯ ಸಂದೇಶಂಗಳ ಎಲ್ಲೋರಿಂಗುದೆ ಅರ್ಥ ಅಪ್ಪಾಂಗೆ ತಿಳುಶುತ್ತ ಇದ್ದಿ ಭಾವ ,ಧನ್ಯವಾದಂಗೊ

  4. ಅರ್ಜುನಂಗೆ ಕೃಷ್ಣ ಹೇಳಿದ ಹಾಂಗೆ, ಭಗವಂತನ ಸರಿಯಾಗಿ ತಿಳಿಯೆಕಾರೆ ವಿಶೇಷ ಕಣ್ಣು ಬೇಕು.
    ನಮ್ಮ ಅಂತರ್ ದೃಷ್ಟಿಯ ಬಿಡುಸಿ, ತಿಳಿವಲೆ ಪ್ರಯತ್ನ ಪಟ್ಟರೆ ಮಾತ್ರ ಎಡಿಗಷ್ಟೆ.
    ಧನ್ಯವಾದಂಗೊ ಚೆನೈ ಭಾವಯ್ಯಂಗೆ

  5. ವಿಶ್ವರೂಪದ ವರ್ಣನೆ ಸುರುಮಾಡಿದ ಕ್ರಮ ಲಾಯ್ಕ ಆಯಿದು.ಆನು ನೋಡಲಕ್ಕು ಹೇಳಿ ನೀನು ಗ್ರೇಶುತ್ತರೆ ತೋರಿಸು ಹೇಳಿ ಅರ್ಜುನ ಹೇಳುವಲ್ಲಿ,ಅವನ ವಿನೀತ ಭಾವವ ಎಷ್ಟು ಸರಿಯಾಗಿ ವಿವರಿಸಿದ್ದಿ ಚೆನ್ನೈ ಭಾವಯ್ಯ.

  6. ಚೆನ್ನೈ ಭಾವಂಗೆ ನಮೋ ನಮ:. ಭಗವಂತನ ವಿಶ್ವ ರೂಪ ದರ್ಶನವ ನಿಂಗೊ ವಿವರಿಸುಲೆ ಶುರು ಮಾಡಿದ ರೀತಿ ತುಂಬಾ ಲಾಯಕಾಗಿ ಬಯಿಂದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×