Oppanna.com

ಸಾಲದ ಶೂಲ : ಕಥೆ – ಎಸ್.ಕೆ.ಗೋಪಾಲಕೃಷ್ಣ ಭಟ್

ಬರದೋರು :   ಸಂಪಾದಕ°    on   16/05/2012    11 ಒಪ್ಪಂಗೊ

ವಿಷು ವಿಶೇಷ ಸ್ಪರ್ಧೆ- 2012 ರಲ್ಲಿ ಕಥಾ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಕತೆ.
ಲೇಖಕರಾದ ಶ್ರೀ ಎಸ್.ಕೆ. ಗೋಪಾಲಕೃಷ್ಣ ಭಟ್ಟರಿಂಗೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆ..

ಸಾಲದ ಶೂಲ

ಲೇ | ಎಸ್.ಕೆ.ಗೋಪಾಲಕೃಷ್ಣ ಭಟ್ (ನಮ್ಮ ಪ್ರೀತಿಯ ಗೋಪಾಲಣ್ಣ)

ಬಸ್ಸು ಇಳಿದು ಈಚಣ್ಣ ತಂಗೆಯ ಮನೆಗೆ ಎತ್ತುವಾಗ ಹನ್ನೊಂದು ಗಂಟೆ; ಮನೆಂದ ಹೆರಟದು ಉದಿಯಪ್ಪಗ ಏಳು ಗಂಟೆಗೆ – ಎರಡು ಮೂರು ಬಸ್ಸು ಬದಲಿಸಿ ಎತ್ತೆಡದೊ?
ಹಾಂಗಾಗಿ ಬೆಶಿಲಿನ ಕಾರ,ದೊಂಡೆ ಒಣಗಿದ ಕಷ್ಟ,ಮನಸ್ಸಿಲಿ ಕೊರೆತ್ತಾ ಇಪ್ಪ ಚಿಂತೆ-ಎಲ್ಲವನ್ನೂ ಸಹಿಸಿಕೊಂಡು ತಂಗೆಯ ಮನೆಗೆ ಬಂದ°.
ಬಪ್ಪಗಳೇ ಎದುರೇ ತಂಗೆಯ ಕಂಡತ್ತು-ಅವನ ಮನಸ್ಸಿಂಗೆ ಎಂತದೋ ಶಾಂತಿ, ಉಲ್ಲಾಸ ಬಂತು. ತಂಗೆಯ ಹೆಸರೇ ಹಾಂಗೆ, ಶಾಂತಿ ಹೇಳಿ.

“ಎಂತ ಈಚಣ್ಣ? ಬಾ ಬಾ ,” ಹೇಳಿತ್ತು ಶಾಂತಿ. ಈಚಣ್ಣ ಜಾಲ ಕರೆಲಿ ಇಪ್ಪ ನೀರಿನ ಮಂಡಗೆಂದ ಎರಡು ಚೆಂಬು ನೀರು ಕಾಲಿಂಗೆ ಎರಕ್ಕೊಂಡ°. ಮೋರೆಗೆ ನೀರು ಹಾಕಿಯೊಂಡ°-“ಯಬ್ಬ,ಎಂತಾ ಸೆಖೆ!” ಹೇಳಿಕೊಂಡು, ಶಾಲಿಲಿ ಮೋರೆ ಉದ್ದಿಯೊಂಡು ಮನೆಯ ಚಾವಡಿಗೆ ಬಂದ°.
ಶಾಂತಿ ಆಸರಿಂಗೆ ಬೆಲ್ಲ ನೀರು ಕೊಟ್ಟತ್ತು-“ದೋಸೆ ಮಾಡಿದ್ದೆ, ತಿಂತೆಯೋ” ಹೇಳಿ ಕೇಳಿತ್ತು.
“ಬೇಡ,ಈಗ ತಿಂದರೆ ಊಟ ರುಚಿಸ” ಹೇಳಿದ° ಈಚಣ್ಣ.
“ಊಟಕ್ಕೆ ಇನ್ನೂ ಹೊತ್ತಿದ್ದು, ನೀನು ಉದಿಯಪ್ಪಗಳೇ ಹೆರಟಿದೆನ್ನೆ? ತಿನ್ನು ಬಾ” ಹೇಳಿ ಶಾಂತಿಯ ಪ್ರೀತಿಯ ಒತ್ತಾಯ.
ಈಚಣ್ಣ ಒಳ ಹೋದ°,ದೋಸೆ ತಣಿದ್ದರೂ, ಬೆಶಿಲಿಲಿ ಬಂದ ಅವಂಗೆ ರುಚಿ ಆತು.
ಅಲ್ಲದ್ದೆ ಶಾಂತಿ ಮತ್ತೆ ಕಾವಲಿ ಒಲೆಲಿ ಮಡಗಿ, ಎರಡು ಬೆಶಿ ದೋಸೆ ಎರದು ಒತ್ತಾಯ ಮಾಡಿ ಬಡಿಸಿತ್ತು. ಜೇನ, ಚಟ್ನಿ, ಸಾಂಬಾರು -ಎಲ್ಲಾ ರಜ ರಜ ಹಾಕಿಕೊಂಬಾಗ ತಟ್ಟೆ ಖಾಲಿ.
ಕಾಫಿಯ ಲೋಟವೂ ಬಂತು.

ಈಚಣ್ಣ ಕೇಳಿದ° -“ಭಾವ° ಎಲ್ಲಿ? ತೋಟಲ್ಲಿ ಇದ್ದನೊ?”
“ಇಲ್ಲೆ,ಅವು ಪೇಟೆಗೆ ಹೋಯಿದವು,ನಿನಗೆ ಕಾಂಬಲೆ ಸಿಕ್ಕಿದ್ದವಿಲ್ಲೆ ತೋರುತ್ತು”
“ಅಪ್ಪು, ಆನು ಪೇಟೆ ವರೆಗೆ ಹೋಯಿದಿಲ್ಲೆ, ಇಲ್ಲಿಯೇ ಗೋಳಿಕಟ್ಟೆಲಿ ಇಳಿದು ಬಂದೆ”.
ಅಷ್ಟಪ್ಪಾಗ ತಿಮ್ಮಣ್ಣನ ಸವಾರಿ ಒಂದು ಭರ್ತಿ ಚೀಲವ ಹೊತ್ತೊಂಡು ಅಲ್ಲಿಗೆ ಬಂತು.
“ಅದಾ,ಭಾವ ಬಂದವು”ಹೇಳಿ ಓಡಿದ ಶಾಂತಿ, ಚೀಲವ ಇಳಿಸಲೆ ಗೆಂಡಂಗೆ ಸಕಾಯ ಮಾಡಿತ್ತು. “ನೋಡಿ, ಆರು ಬಯಿಂದವು ಹೇಳಿ?”
ಕೈ ತೊಳೆದ ಈಚಣ್ಣ “ಏನು ಭಾವಾ?” ಹೇಳಿಕೊಂಡು ಹೆರ ಬಂದ°.
“ಒಳ್ಳೆದು,ಭಾವಾ ಈಗ ಬಂದದೊ? ಏ ಶಾಂತಿ,ಅಣ್ಣಂಗೆ ಆಸರಿಂಗೆ ಕೊಟ್ಟೆಯೋ?”ಹೇಳಿ ವಿಚಾರಿಸಿದ°, ಮನೆಯ ಯಜಮಾನ ತಿಮ್ಮಣ್ಣ.
“ಎನಗೆ ಕಾಫಿ, ದೋಸೆ ಎಲ್ಲಾ ಆತು, ನೀನು ತೆಕ್ಕೊ ಈಗ, ಒಳ್ಳೇ ಬೆಶಿಲು…”ಹೇಳಿದ° ಈಚಣ್ಣ. ತಿಮ್ಮಣ್ಣ ಕಾಫಿ ಮಾತ್ರ ಕುಡಿದ°.
ಊರ ವರ್ತಮಾನ, ಮನೆಯ ಸುದ್ದಿ, ಮಕ್ಕಳ ಸುದ್ದಿ-ಎಲ್ಲಾ ಮಾತಾಡಿದವು.
ಈಚಣ್ಣನ ಮಗಳು ರತ್ನಂಗೆ ಮನೆ ಬಂದ ಸುದ್ದಿ ಕೇಳಿ ಶಾಂತಿಗೆ ಖುಷಿ ಆತು.ಮಾಣಿ ಎಂಜಿನೀಯರು, ಬೆಂಗಳೂರಿಲಿ-ಅವಂಗೆ ಅಮೇರಿಕಕ್ಕೆ ಹೋಪಲೆ ಇಪ್ಪ ಕಾರಣ ಮದುವೆ ಎರಡು ತಿಂಗಳ ಒಳ ಆಯೆಕ್ಕು- ಹೇಳಿ ತಿಳಿಸಿದ° ಈಚಣ್ಣ.
“ಬೇಗ ಇದ್ದು ಅಂಬಗ”- ಸಂಭ್ರಮಲ್ಲಿ ಹೇಳಿತ್ತು ಶಾಂತಿ. ತಿಮ್ಮಣ್ಣನ ಮೋರೆ ಬೆಶಿಲಿಲಿ ಬಾಡಿದ್ದು, ಮತ್ತೆಯೂ ಬಾಡಿತ್ತು.
“ಈಗ ಭಾವ,ಒಂದು ಮುಖ್ಯ ವಿಷಯ, ಕರ್ಚಿಗೆ ಎಂತಾರೂ ಆಯೆಕ್ಕನ್ನೆ? ನಮ್ಮ ಲೆಕ್ಕ ಮುಗಿಸಲೆ ಎಡಿಗೊ?”- ಮೆಲ್ಲಾಂಗೆ ಕೇಳಿದ° ಈಚಣ್ಣ.

ಅಳಿಯ ಶಾಮ ಡಿಪ್ಲೊಮಾ ಮಾಡಿದ್ದ, ಅವಂಗೆ ದುಬಾಯಿಗೆ ಹೋಪಲೆ ಬೇಕಾಗಿ ಈಚಣ್ಣ ಐವತ್ತು ಸಾವಿರ ಕೊಟ್ಟಿದ°.
ಎರಡು ವರ್ಷ ಆತು, ಈಚಣ್ಣನ ಪೈಸೆ ಬಯಿಂದಿಲ್ಲೆ. ಶಾಮಂಗೆ ಗ್ರೇಶಿದಷ್ಟು ಸಂಬಳ ಸಿಕ್ಕಿತ್ತಿದ್ದಿಲ್ಲೆ. ಅವನ ಕರ್ಚಿ ಕಳಿತ್ತು. ಆದರೆ, ಅಪ್ಪಂಗೆ ಒಂದು ನಯಾಪೈಸೆಯನ್ನೂ ಕಳಿಸಿದ್ದ ಇಲ್ಲೆ.
ತಿಮ್ಮಣ್ಣ ತನ್ನ ಕಷ್ಟ ಹೇಳಿದ-“ಎಂತ ಮಾಡುದು ಭಾವ? ಅಡಕ್ಕೆಗೆ ಈ ವರ್ಷ ಕ್ರಯ ಇದ್ದು – ಬೆಳೆ ಇಲ್ಲೆ. ಎನಗೆ ಈ ವರ್ಷ ಮುಕ್ಕಾಲು ಖಂಡಿ ಅಡಕ್ಕೆ ಆದರೆ ಭಾಗ್ಯ.
ಕೊಕ್ಕೊ, ಬಾಳೆ ಎಲ್ಲಾ ಮಾರಿ ಹೇಂಗೋ ಸುಧಾರಿಸುತ್ತಾ ಇದ್ದೆ, ಶಾಮ ಎಂತದೂ ಕಳಿಸುತ್ತ ಇಲ್ಲೆ- ಅವನ ಕಂಪೆನಿ ಬಾಗಿಲು ಹಾಕಿರೆ, ಅವ ಬರಿ ಕೈಲಿ ಬರೆಕಾಗಿ ಬಕ್ಕು”
“ಎಂತ ಭಾವ ನೀನು ಹೇಳುದು?ಎನ್ನ ಕೈಲಿ ಕರಟ ಹಿಡಿಸೆಕ್ಕು ಹೇಳಿ ಮಾಡಿದ್ದೆಯೋ? ಕೂಸಿನ ಧಾರೆ ಎರದು ಕೊಡುವಾಗ ರಜಾ ಆದರೂ ಚಿನ್ನದ ಹೊಡಿ ಹಾಕೆಡದೊ? ಊಟದ ಕರ್ಚಿ ಬೇರೆ ಇದ್ದು. ಬಂಗಾರಿನ ಕ್ರಯ ನೋಡಿದ್ದಿಲ್ಲಿಯೊ ನೀನು ಪೇಪರಿಲಿ?”
“ಎಲ್ಲಾ ಸರಿ, ಆನು ಕೊಡುತ್ತಿಲ್ಲೆ ಹೇಳಿ ಹೇಳಿದ್ದಿಲ್ಲೆ. ಎಂತಾದರೂ ಮಾಡಿ ಕೊಡುತ್ತೆ….” ಭಾವನ ಸಮಾಧಾನ ಮಾಡಿ, ಪಾಯಸದ ಊಟ ಹಾಕಿಸಿ ಕಳಿಸಿದ° ತಿಮ್ಮಣ್ಣ.

~*~

ತಿಮ್ಮಣ್ಣಂಗೆ ಪೈಸೆ ವ್ಯವಸ್ತೆ ಆಯಿದಿಲ್ಲೆ. ಏವ ಬೇಂಕಿನವೂ ಕೊಡುಲೆ ಒಪ್ಪಿದ್ದವಿಲ್ಲೆ, ಏಕೆ ಹೇಳಿದರೆ, ಬೇಂಕಿನ ಸಾಲ ಮೊದಲೇ ಬಾಕಿ ಇತ್ತು.
ಈಚಣ್ಣ ಹತ್ತು ಹದಿನೈದು ಸರ್ತಿ ಫೋನ್ ಮಾಡಿದ°. ಭಾವನ ಪೈಸೆ ಬಯಿಂದಿಲ್ಲೆ.
ಬದ್ಧಕ್ಕೆ ಬಂದ ತಿಮ್ಮಣ್ಣಂಗೆ ಈಚಣ್ಣ ಮರ್ಯಾದೆ ಮಾಡಿದ್ದ° ಇಲ್ಲೆ. ಹೊಸ ನೆಂಟರು ಆರಿಂಗೂ ಭಾವನ ಗುರ್ತ ಮಾಡಿಸಿ ಕೊಟ್ಟಿದ° ಇಲ್ಲೆ. ಎಲ್ಲರೂ ಪೈಸೆಯನ್ನೇ ನೋಡುದು. ಬಡವನಾದ ತಿಮ್ಮಣ್ಣ ಕೋಪ ಬಂದರೂ ನುಂಗಿಕೊಂಡ. ಹಂತಿಯ ಕರೆಲಿ ಕೂದು ಉಂಡಿಕ್ಕಿ ಹೋದ. ಶಾಂತಿಗೂ ಬೇಜಾರಾತು. ಆದರೆ, ಅಣ್ಣನ ಬೈವಲೆ ಮನಸ್ಸಿಲ್ಲೆ.
ಮದುವೆಯ ಹೇಳಿಕೆ ಟಪ್ಪಾಲಿಲಿ ಬಂತು. ಈಚಣ್ಣ ತಂಗೆಗೆ, ಭಾವಂಗೆ ಅವರ ಮನೆಗೆ ಬಂದು ಹೇಳಿದ್ದ° ಇಲ್ಲೆ. ತಿಮ್ಮಣ್ಣ ಹೋಪದು ಹೇಂಗೆ? “ನೀನು ಹೋವುತ್ತರೆ ಹೋಗು, ನಿನ್ನ ಅಣ್ಣ ಅಲ್ಲದೊ?”ಹೇಳಿದ ಶಾಂತಿಗೆ.
ಶಾಂತಿ ಕೂಗಲೆ ಸುರು ಮಾಡಿತ್ತು-“ನಿಂಗೊ ಹೋಗದ್ದರೆ ಆನು ಹೇಂಗೆ ಹೋಪದು? ಬಂದವು ಎಲ್ಲರೂ ಕೇಳುಗು, ಆನು ಎಂತ ಹೇಳುದು?”
“ಅವಕ್ಕೆ ತುಂಬಾ ಜ್ವರ, ಬಪ್ಪಲೆ ಆವ್ತಿಲ್ಲೆ ಹೇಳು”
“ಉಶಾರಿ ಇಪ್ಪವಕ್ಕೆ ಸೌಖ್ಯ ಇಲ್ಲೆ ಹೇಳಿ ಲೊಟ್ಟೆ ಹೇಳೆಕೊ? ನಿಂಗಳೂ ಬನ್ನಿ- ಬದ್ಧಕ್ಕೆ ಹೇಳಿದ ಮೇಲೆ ಮತ್ತೆ ಮದುವೆಗೆ ಪುನಃ ಮನೆಗೇ ಬಂದು ಹೇಳೆಕು ಹೇಳಿ ಎಂತ?”
“ಅಪ್ಪಪ್ಪು, ನಿನ್ನ ಅಣ್ಣನ ಮನೆಗೆ ಹೇಳಿಕೆ ಇಲ್ಲದ್ದೆಯೂ ಹೋಪಲಕ್ಕು-ಅದು ನಿನಗೆ ಮಾತ್ರ. ನೀನು ಹೋಗೆಡ ಹೇಳಿ ಆನು ಹೇಳಿದ್ದಿಲ್ಲೆ, ಎನ್ನ ಎನ್ನಷ್ಟಕೆ ಬಿಡು”
“ಅದೆಲ್ಲಾ ಆಗ, ನಿಂಗೊ ಹೋಗದ್ದರೆ ಆನೂ ಹೋವ್ತಿಲ್ಲೆ. ಅಣ್ಣನ ಪೈಸೆ ಕೊಟ್ಟಾಗದ್ದೆ ಹೋಪದು ಬೇಡ…”
ಶಾಂತಿಯ ಮಾತು ಕೇಳಿ ತಿಮ್ಮಣ್ಣನ ದೊಂಡೆ ಕಟ್ಟಿತ್ತು. ಕಣ್ಣಿಲಿ ನೀರು ಬಂತು. ಪಾಪ,ಎನ್ನಂದಾಗಿ, ಮನೆಗೆ ಬಂದ ಲಕ್ಷ್ಮೀಸ್ವರೂಪಳಾದ ಕೂಸಿಂಗೆ ಎಂತಾ ಬೇಜಾರ ಆತು -ಹೇಳಿ ಅವನ ಮನಸ್ಸು ಕೊರಗಿತ್ತು.
ಮನಸ್ಸಿಲಿ ಎಂತದೋ ಯೋಚಿಸಿ ಅವ ಅಂಗಿ ಹಾಕಿಕೊಂಡು-“ಇದಾ,ಕೂಗಿಂಡು ಕೂರೆಡ. ಎಂತಾದರೂ ಮಾಡುವ. ಆನೂ ಬತ್ತೆ,ನಿನ್ನೊಟ್ಟಿಂಗೆ. ಈಗ ರಜಾ ಕೆಲಸ ಇದ್ದು ಪೇಟೆಲಿ. ಹೋಗಿಕೊಂಡು ಬತ್ತೆ. ಮನೆಲಿ ಜಾಗ್ರತೆ”ಹೇಳಿ ಹೋದ.
ಅವ ಸೀದಾ ಹೋದ್ದದು ಶೇಖಾಲಿ ಸಾಹುಕಾರನ ಹತ್ತರೆ.
ಅವನ ಮನೆಂದ ರಜಾ ದೂರ ಒಂದು ಎಕ್ರೆ ಮುಳಿ ಬೆಳೆವ ಅಡ್ಕ ಇದ್ದು. ಅದಕ್ಕೆ ಎಂತಾರೂ ವಿಲೇವಾರಿ ಅಕ್ಕೊ ಹೇಳಿ ಕೇಳುಲೆ.
ಸಾಹುಕಾರ ಎರಡು ದಿನಲ್ಲಿ ಹೇಳುತ್ತೆ ಹೇಳಿತ್ತು.
ಎರಡೇ ದಿನಲ್ಲಿ ಮೊಹಮ್ಮದ್ ಹೇಳುವ ಇನ್ನೊಂದು ಸಾಹುಕಾರಂಗೆ ಅಡ್ಕವ ಕೊಡುದು ಹೇಳಿ ಮಾತಾತು. ತಿಮ್ಮಣ್ಣ ಋಣ ಮುಕ್ತ ಆದ°.
ಶಾಂತಿಗೆ, ತಿಮ್ಮಣ್ಣಂಗೆ ಮದುವೆ ಮನೆಗೆ ಹೋಪಲೆ ತೊಂದರೆ ಆಯಿದಿಲ್ಲೆ.
ಪೈಸೆ ಕೈಗೆ ಬಂದಪ್ಪಾಗ, ಈಚಣ್ಣಂಗೆ ಮನಸ್ಸು ಕರಗಿತ್ತು, ಹಿಂದಾಣದ್ದು ನೆನಪಾತು.

~*~

ಬಹಳ ಹಿಂದೆ-ಈಚಣ್ಣನ ಅಜ್ಜ, ಅಜ್ಜಿ ಇಪ್ಪಾಗ ಅವರ ಮನೆ ದೊಡ್ಡ ಮಟ್ಟಿಂಗೆ ನಡಕ್ಕೊಂಡು ಇತ್ತು. ಅವಕ್ಕೆ ಸುಮಾರು ಜಾಗೆಗೊ – ತೋಟ, ಗುಡ್ಡೆ, ಗದ್ದೆ, ಕುಮ್ಮೇರಿ ಹೇಳಿ. ಒಕ್ಕಲುಗಳೂ ಇತ್ತಿದ್ದವು.
ವಿಷು ಕಣಿ ಅವರ ಮನೆಲಿ ದೊಡ್ಡ ಹಬ್ಬ. ಆಳುಗೊ, ಒಕ್ಕಲುಗೊ, ಅವರ ಹೆಂಡತಿಯಕ್ಕೊ ಎಲ್ಲಾ ಬಂದು ಅಡ್ಡ ಬೀಳುಗು.
ಚೀನಿಕಾಯಿ, ಗೇರುಬೀಜ, ಮಾವಿನಹಣ್ಣು ಹೀಂಗೆಲ್ಲಾ ತಂದು ಕೊಡುಗು. ಒಂದು ಸಾಲಿಗ[ನೇಯ್ಗೆ ಮಾಡುವ ಜನ]ಇತ್ತು. ಅದು ಅಜ್ಜಂಗೆ ಒಂದು ಜತೆ ಚೌಕ ತಂದು ಕೊಡುಗು. ಪುಳ್ಳಿಯಕ್ಕೊಗೆ ಅದರ ನೋಡಿರೆ ಸೈಸಲಾಗದ್ದಷ್ಟು ನೆಗೆ! ಅಜ್ಜಂಗೆ ಕೌಪೀನ ಸಿಕ್ಕಿತ್ತು ಹೇಳಿ!
ಒಂದಾರಿ ವಿಷುವಿನ ದಿನ ಬಂದ ಒಂದು ಹೆಣ್ಣು – ಬಾಗಿ – ಮೆಲ್ಲಂಗೆ ಹಿಂದಾಣ ಬಾಗಿಲ ಹತ್ತರೆ ಹೋಗಿ ಅಜ್ಜಿಯ ದಿನಿಗೇಳಿತ್ತು.
ಅಜ್ಜಿ ಎಂತ ಹೇಳಿ ಕೇಳಿದವು. ಕೈಲಿ ಹಿಡುಕ್ಕೊಂಡು ಬಂದ ಉದ್ದಿನ ಕೊಟ್ಟಿಗೆಯ ಅದರ ಕೈಗೆ ಹಾಕಿದವು.
ಅದು ಕೇಳಿದ್ದು ಒಂದು ದೊಡ್ಡ ಸಂಗತಿ- ಆ ಹೆಣ್ಣಿಂಗೆ ಒಂದು ಮದುವೆಗೆ ಬಂಟ್ವಾಳ ಹೊಡೆಂಗೆ ಹೋಪಲೆ ಇದ್ದು. ಅದಕ್ಕೆ ಹಾಕುಲೆ ಒಂದು ಮಾಲೆ ಬೇಕಾಗಿತ್ತು. ಚಿನ್ನದ ಮಾಲೆ ನಾಕು ದಿನದ ಮಟ್ಟಿಂಗೆ ಎರವಲು ಕೇಳಿತ್ತು! ವಿಷುವಿನ ದಿನ, ಕೊಡೆ ಹೇಳ್ಲೆ ಅಜ್ಜಿಗೆ ಆಯಿದಿಲ್ಲೆ. ಖಜಾನೆ ಬೀಗದ ಕೈ ಇಪ್ಪದು ಅಜ್ಜನ ಹತ್ತರೆ.
ಹಾಂಗಾಗಿ ಅಜ್ಜಿ -“ಮಾಣಿ, ಅಜ್ಜನ ಒಳ ಬಪ್ಪಲೆ ಹೇಳು” ಹೇಳಿ ಈಚಣ್ಣನ ಕಳಿಸಿದವು.
ಅಜ್ಜ° ಬಂದವು. ಅಜ್ಜಿಯ ಚಕ್ರಸರವ ತೆಗೆದು ಹೆಣ್ಣಿಂಗೆ ಕೊಟ್ಟಾತು.
ಎಂಟು ದಿನ ಕಳುದತ್ತು. ಆ ಬಾಗಿಯ ಗಂಡ ಬಂದು ಅಜ್ಜನ ಕಾಲಿಂಗೆ ಬಿದ್ದತ್ತು-“ಧನಿಗಳೆ, ನಿಂಗಳೇ ಗತಿ, ಬಾಗಿಯ ದೊಡ್ಡ ಆಶೆಂದಾಗಿ ದೊಡ್ಡ ಅನಾಹುತ ಆತು” ಹೇಳಿತ್ತು.
“ದಾನೆ ಚನಿಯ? ಪಣ್ …”ಹೇಳಿದವು ಅಜ್ಜ. ಚನಿಯ ಹೇಳಿತ್ತು-ಬಾಗಿ ಮದುವೆಗೆ ಹಾಕಿಕೊಂಡು ಹೋದ ಚಕ್ರಸರ ಎಲ್ಲಿಯೋ ತೆಗೆದು ಮಡಗಿದ್ದು ಕಾಣೆ ಆಯಿದು. ಮದುವೆ ಮನೆ ಆದ್ದರಿಂದ ಆರೊ ಹಾರಿಸಿಕ್ಕು. ಈಗ ಎಂತ ಮಾಡುದು? ಜೀವಮಾನ ಇಡೀ ಗೈದರೂ ಬಾಗಿಗೆ ಆ ಆರು ಪವನಿನ ಚಕ್ರಸರ ಮಾಡಿಸಿ ಅಜ್ಜಿಗೆ ವಾಪಾಸು ಮಾಡ್ಲೆ ಎಡಿಯ!
ಬಾಗಿಯೂ ಕೂಗಿಕೊಂಡು ಬಂದು ಅಜ್ಜಿಯ ಕಾಲಿಂಗೆ ಬಿದ್ದತ್ತು.

ಎಂತದೊ ಒಂದು ಚಿನ್ನ ಹಾಕುವ ಆಸೆಲಿ ಹೀಂಗಾತನ್ನೆ ಹೇಳಿ ಅವಕ್ಕೆ ಬೇಜಾರ. ಕಳ್ಳವಂತಿಕೆ, ಮೋಸ ಅವಕ್ಕೆ ಅರಡಿಯ.
ಅಜ್ಜ, ಅಜ್ಜಿ ಅವರ ಸಮಾಧಾನ ಮಾಡಿದವು. ಲೆಕ್ಕ ಪುಸ್ತಕಲ್ಲಿ ಅದರ ಕ್ರಯ ಬರೆದವು. ವಾರಲ್ಲಿ ಒಂದಾರಿ ರಜ ರಜ ಪೈಸೆ ಸಂಬಳಂದ ಕಳವಲೆ ಸುರು ಮಾಡಿದವು.
ಅವು ಇನ್ನು ಎಷ್ಟು ಸಮಯ ಹೀಂಗೆ ಸಾಲ ತೀರಿಸೆಕ್ಕೊ ಏನೊ?
ಎರಡು ವರ್ಷ ಕಳೆದ ಮೇಲೆ ಸರಕಾರ ಭೂಮಿ ಇಲ್ಲದ್ದವಕ್ಕೆ ಭೂಮಿ ಕೊಟ್ಟತ್ತು. ಚನಿಯಂಗೂ ಹತ್ತರಾಣ ಗ್ರಾಮಲ್ಲಿ ಭೂಮಿ ಸಿಕ್ಕಿತ್ತು. ಅದಕ್ಕೆ ಅಜ್ಜನ ಬಿಟ್ಟು ಹೋಪಲೆ ಮನಸ್ಸಿಲ್ಲೆ. ಸಣ್ಣ ಇಪ್ಪಾಗ ಲಾಗಾಯ್ತು ಕೆಲಸ ಮಾಡಿಕೊಂಡು ಬಂದಲ್ಲಿಂದ ಹೋಪದು ಹೇಂಗೆ?
ಅದು ಹೇಳಿತ್ತು-“ಧನಿಗಳೇ, ಆ ಜಾಗೆ ನಿಂಗಳ ಸ್ವಾಧೀನ ಇರಲಿ. ಎನ್ನ ಸಾಲದ ಲೆಕ್ಕಕ್ಕೆ ಬರೆಯಿರಿ” ಹೇಳಿ! ಅಜ್ಜ° ನೆಗೆ ಮಾಡಿದವು.ಅದು ಸರಕಾರ ನಿನಗೆ ಕೊಟ್ಟ ಭೂಮಿ. ಅದರಲ್ಲಿ ನೀನು ಮನೆ ಕಟ್ಟೆಕ್ಕು. ಅದರ ನೀನು ಹಲವು ವರ್ಷ ಮಾರುಲೆ ಆಗ-ಹೇಳಿ ಅದಕ್ಕೆ ತಿಳಿಸಿದವು.
ಹಾಂಗೆ ಅಜ್ಜ° ಹತ್ತು ವರ್ಷ ಕೂಲಿಯ ಲೆಕ್ಕಲ್ಲಿ ಬರೆದು, ಕಳೆದು ಆ ಪೈಸೆ ಚನಿಯಂದ ವಾಪಸು ಬಂತು ಹೇಳಿ ಬರೆದವು.
ಚನಿಯನೂ ಇಪ್ಪಷ್ಟು ದಿನ ನಿಯತ್ತಿಂದ ಕೆಲಸ ಮಾಡಿತ್ತು. ಈಗ ಅದರ ಮಕ್ಕೊ ಕೂಲಿ ಕೆಲಸಕ್ಕೆ ಬತ್ತವಿಲ್ಲೆ. ಅವು ಚನಿಯಂಗೆ ಸಿಕ್ಕಿದ ಜಾಗೆಲಿ ಮನೆ ಕಟ್ಟಿ ಇದ್ದವು.

~*~

ಏವದೊ ಜಾತಿಯ,ಯಾವ ಆಧಾರವೂ,ಸಂಪತ್ತೂ ಇಲ್ಲದ ಚನಿಯಂಗೆ ಅಜ್ಜ ತೋರಿಸಿದ ಔದಾರ್ಯ ಎಂತದು, ಆನೀಗ ಸ್ವಂತ ತಂಗೆ-ಭಾವಂಗೆ ಮಾಡಿದ್ದು ಎಂತದು? – ಈಚಣ್ಣ ತರತರನೆ ನಡುಗಿದ.
ಸಮಾಜಲ್ಲಿ ಎಲ್ಲರೂ ಪ್ರೀತಿ ವಿಶ್ವಾಸಲ್ಲಿ, ದೈವ ಭಯಲ್ಲಿ ಇಪ್ಪ ಹಿಂದಿನ ಕಾಲ ಎಂತದು? ತಾನು, ತನ್ನ ಸಂಸಾರ ಹೇಳುವ ಈಗಾಣ ಸ್ವಾರ್ಥ ಎಂತದು?
ಮಗಳ ಮದುವೆ ಚೆಂದಲ್ಲಿ ಕಳುದ ಮೇಲೆ, ಈಚಣ್ಣ ತಂಗೆಗೆ ಪಟ್ಟೆ ಸೀರೆ, ಭಾವಂಗೆ ಶಾಲು ಉಡುಗೊರೆ ಕೊಟ್ಟು ಮರ್ಯಾದೆ ಮಾಡಿ, ಕ್ಷಮೆ ಕೇಳಿದ°.

~*~*~

ಲೇಖಕರು ಹಲವು ಕನ್ನಡ ಪುಸ್ತಕಂಗಳ ಕರ್ತೃ.

ಲೇಖಕರ ವಿಳಾಸ:
ಎಸ್. ಕೆ. ಗೋಪಾಲ ಕೃಷ್ಣ ಭಟ್
ಶಿವಗಿರಿ ನಗರ,  ಕುಳಾಯಿ – ಹೊಸಬೆಟ್ಟು
ಮಂಗಳೂರು – 19

11 thoughts on “ಸಾಲದ ಶೂಲ : ಕಥೆ – ಎಸ್.ಕೆ.ಗೋಪಾಲಕೃಷ್ಣ ಭಟ್

  1. ಕತೆ ಲಾಯ್ಕಿದ್ದು… ಕೆಲಸದ ಹೆಣ್ಣಿಂಗೂ ಪ್ರೀತಿ, ವಿಶ್ವಾಸ ತೋರಿ ಚಿನ್ನಾಭರಣ ಕೊಟ್ಟದು, ಈಚಣ್ಣನ ಮನಃಪರಿವರ್ತನೆ ಇದೆಲ್ಲ ಕತೆಯ ಮೌಲ್ಯಂಗೊ ಕೊಶಿ ಆತು.. ಇನ್ನೂ ಇನ್ನೂ ಬರೆತ್ತಾ ಇರು ಗೋಪಾಲ ಹೇಳಿ ಹಾರೈಸುವ ವಿಜಯ ಚಿಕ್ಕಮ್ಮ..

  2. ಎಲ್ಲರಿಂಗೂ ಧನ್ಯವಾದ.

  3. ಕತೆಯ ವಿಷಯ,ನಿರೂಪಣೆ ಲಾಯ್ಕ ಆಯಿದು.ತಲೆಮಾರುಗೊ ಕಳುದಪ್ಪಗ ನಮ್ಮ ಯೋಚನೆಯ ದಾರಿ ಎಷ್ಟು ಬದಲಾವುತ್ತಾ ಇದ್ದು,ಪೈಸೆ ಸ೦ಬ೦ಧ೦ಗಳ ಮೀರಿ ಹೇ೦ಗೆ ನಿಲ್ಲುತ್ತಾ ಇದ್ದು ಹೇಳ್ತದರ ಚೆ೦ದಕೆ ಹೇಳಿದ್ದಿ.
    ಹವ್ಯಕ ಸಾಹಿತ್ಯದ ಬೆಳವಣಿಗೆಗೆ ನಿ೦ಗಳ ಕೊಡುಗೆ ಹೀ೦ಗೆಯೇ ಮು೦ದುವರಿಯಲಿ ಹೇಳಿ ಹಾರೈಕೆಗೊ.
    ಅಭಿನ೦ದನೆಗೊ ಗೋಪಾಲಣ್ಣ.

  4. ಮಾವ ಬರದ ಕಥೆ ಒಪ್ಪ ಇದ್ದು.. ಇಷ್ಟ ಆತು

  5. ಅಭಿನ೦ದನೆಗೊ ಮಾವ೦ಗೆ..ಕತೆ ಲಾಯ್ಕಾಯಿದು

  6. ಕತೆ ಲಾಯಿಕಾಯಿದು..
    ಅಭಿನ೦ದನೆಗೊ..

  7. ಅಭಿನಂದನೆಗೊ ಗೋಪಾಲಂಗೆ.
    ಅಜ್ಜನ ಔದಾರ್ಯ, ಪುಳ್ಳಿಯ ಸ್ವಾರ್ಥ, ಮಾನವೀಯತೆಗೆ ಜಯ ಹೇಳಿ ನಿರೂಪಣೆ ಲಾಯಿಕ ಆಯಿದು.

  8. ಹಿಂದಾಣ ಕಾಲದ ಪ್ರೀತಿ ವಿಶ್ವಾಸ, ಸತ್ಯ ನಂಬಿಕೆಗಳ ಎದುರು, ಇಂದ್ರಾಣ ಕಾಲದ ಸ್ವಾರ್ಥ, ಅವಿಶ್ವಾಸ, ಮೋಸಂಗಳ ಚೆಂದಕೆ ತೋರುಸಿಕೊಟ್ಟ ಗೋಪಾಲಣ್ಣನ ಕಥೆ ಮನಸ್ಸಿಂಗೆ ತಟ್ಟುವಂತಾದ್ದು. ಕಥಗೆ ಪ್ರಥಮ ಬಹುಮಾನ ಖಂಡಿತಾ ಕೊಡೆಕಾದ್ದೆ. ಅಣ್ಣ ತಂಗೆಯರ ಪ್ರೀತಿ, ಅವರ ಮಾತುಕತೆ, ಭಾವನ ಮನಸ್ಥಿತಿ, ಕೆಲಸದ ಹೆಣ್ಣು ಮದುವಗೆ ಹೋಪಲೆ ಮಾಲೆ ಕೇಳಿದ್ದದು, ಎಲ್ಲವುದೆ ನೈಜವಾಗಿದ್ದು. ಹಿಂದಾಣ ಕಾಲಲ್ಲಿ ಮದುವೆಗೆ ಹೋಪಲೆ ಬೇಕಾಗಿ ಆಳುಗೊ ಆಭರಣ ಕೇಳುತ್ತದರ ಆನುದೆ ಕಂಡಿದೆ. ಅಂಬಗಾಣ ವಿಶ್ವಾಸ ಈಗ ಕಾಂಬಲೇ ಸಿಕ್ಕ. ಚನಿಯನ ನಿಯತ್ತು ಮೆಚ್ದುವಂತಾದ್ದು.

    ಗೋಪಾಲಣ್ಣ ಬರೆತ್ತ ಶೈಲಿ, ಅದರಲ್ಲಿ ಇಪ್ಪ ವಿಷಯ, ಸಂದೇಶಂಗೊ ನಿಜವಾಗಿಯೂ ಅದ್ಭುತ. ಅಭಿನಂದನೆಗೊ ಗೋಪಾಲಣ್ಣ.

  9. ಪ್ರೀತಿ ಭಾವನೆ ಮಾನವೀಯತೆ ಮೌಲ್ಯಂಗಳ ಒಳಗೊಂಡ ಗೋಪಾಲಣ್ಣನ ಕತೆ ಹೃದಯಸ್ಪರ್ಶೀ ಆತು. ಬಹುಮಾನ ಪಡದ್ದಕ್ಕೆ ಅಭಿನಂದನೆ. ಗೋಪಾಲಣ್ಣನ ಚಿಂತನಾ ಶೈಲಿಯೇ ವಿಶೇಷವೂ, ವ್ಯತ್ಯಾಸವೂ, ಅಪರೂಪವೂ ಮತ್ತು ಹವ್ಯಕ ಸಮಾಜದ ಒಳ್ಳೆ ಸತ್ವ-ಮರ್ಮವ ಅಡಗಿರುತ್ತು ಹೇಳಿ – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×