Oppanna.com

ಸಂವಹನಲ್ಲಿ ಆಡು ಭಾಷೆಯ ಮಹತ್ವ – ವಿಜಯಾ ಸುಬ್ರಹ್ಮಣ್ಯ – ವಿಷು ಸ್ಪರ್ಧೆ- 2015 – ಪ್ರಬ೦ಧ ದ್ವಿತೀಯ

ಬರದೋರು :   ಸಂಪಾದಕ°    on   09/09/2015    11 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

 
DSC_8596
ಶ್ರೀಮತಿ ವಿಜಯಾ ಸುಬ್ರಹ್ಮಣ್ಯ ಇವರಿಂದ ಪ್ರಶಸ್ತಿ ಸ್ವೀಕಾರ

ವಿಷು ವಿಶೇಷ ಸ್ಪರ್ಧೆ- 2015 ರ ಪ್ರಬ೦ಧ ಸ್ಪರ್ಧೆಲಿ  ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕಿ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ,ಕು೦ಬಳೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಸಂವಹನಲ್ಲಿ ಆಡು ಭಾಷೆಯ ಮಹತ್ವ

ವಿಶ್ವದ ಸಕಲ ಜೀವರಾಶಿಲಿ ಮನುಷ್ಯಂಗೆ ಉನ್ನತ ಸ್ಥಾನ ಇದ್ದು.ಅವಂಗಿಪ್ಪ ಮಾತಾಡುವಶಕ್ತಿ, ವಿವೇಚನಾಯುಕ್ತಿ, ಬೇರೆ ಜೀವಿಗೊಕ್ಕಿಲ್ಲೆ.ಇವೆಲ್ಲ ಮಾನವಂಗೆ ದೇವರು ಕೊಟ್ಟ ವರವೇ ಸರಿ!. ನಮ್ಮ ಮನಸ್ಸಿನೊಳ ಇಪ್ಪ ವಿಚಾರವ ಇನ್ನೊಬ್ಬರಿಂಗೆ ತಿಳುಶುಲೆಬೇಕಾಗಿ ಮಾತು ಹುಟ್ಟಿಗೊಂಡತ್ತು.ಆ ಶಬ್ಧಪ್ರಯೋಗವೇ ಭಾಷೆ ಆತು. ಅದು.., ಕಾಲ,ಜಾಗೆ,ಜೆನ,ಮನ ಹೇಳುವ ಹಾಂಗೆ ಭಿನ್ನತೆಯ ರೂಪ ತಾಳಿತ್ತು.
ಆಡುಭಾಷೆ:-

ನವಗಿಲ್ಲಿ ಕೊಟ್ಟ ಪ್ರಬಂಧದ ವಿಷಯ “ಸಂವಹನಲ್ಲಿ ಆಡು ಭಾಷೆಯ ಮಹತ್ವ”. ಏವ ಸಮುದಾಯಕ್ಕಾದರೂ ಆಡುಭಾಷೆ ಇದ್ದು. ಹಲವಾರು ಭಾಷೆಗಳಲ್ಲಿ ನಮ್ಮ ಹವ್ಯಕಭಾಷೆಯೂ ಒಂದು. ಆನಿಲ್ಲಿ ಹವಿಗನ್ನಡ ಆಡುಭಾಷಗೆ ಒತ್ತುಕೊಟ್ಟು ಬರೆತ್ತೆ. ಏಕೆ ಕೇಳಿರೆ; ಎನ್ನ ಹೆತ್ತಬ್ಬೆ,ಹೊತ್ತಭೂಮಿ,ಮತ್ತೆ ಎನ್ನ ಆಡುಭಾಷೆ. ಇವೆಲ್ಲ ಎನಗೆ ಅತ್ಯಂತ ಅಭಿಮಾನದ ವಿಷಯಂಗೊ. ಹವ್ಯಕರು ಶ್ರೀಶಂಕರಾಚಾರ್ಯ ಪೀಠ ಪರಂಪರೆಯ ಶಿಷ್ಯ ಸಮುದಾಯದ ಬ್ರಾಹ್ಮಣ ವರ್ಗದೊವು.ಇವರ ಮೂಲ; ಉತ್ತರಭಾರತದ ಅಹಿಚ್ಛತ್ರ ಹೇಳುವಲ್ಲಿ.  ಕದಂಬರ ಕಾಲಲ್ಲಿ; ಹವ್ಯ-ಕವ್ಯಾದಿಗಳ ಮಾಡ್ಳೆಬೇಕಾಗಿ ರಾಜರು ಅಲ್ಲಿಂದ ಕರೆಸಿಗೊಂಡೊವು ಹೇದು ಇತಿಹಾಸ ಹೇಳ್ತು.ನಮ್ಮದು ಪ್ರಾಕಿಂದಲೇ ಕೂಡುಕುಟುಂಬದ ವೆವಸ್ತಗೆ ಹೆಸರಾದ್ದು.ಮಕ್ಕೊಗೆ ಸಣ್ಣದಿಪ್ಪಗಳೇ ಅಬ್ಬೆ-ಅಪ್ಪನೊಟ್ಟಿಂಗೆ ಅಜ್ಜ-ಅಜ್ಜಿ,ಅಣ್ಣ-ತಮ್ಮ,ಅಕ್ಕ-ತಂಗೆ,ಅಪ್ಪಚ್ಚಿ-ದೊಡ್ಡಪ್ಪ ಹೀಂಗೆ ಒಟ್ಟಿಂಗೆ ಬೆರವಲೆ ಕಲಿಶುಗು.ಮಕ್ಕೊ ತೊದಲು ಮಾತಾಡ್ಳೆ ತೊಡಗುವಗ; ಹೆತ್ತಬ್ಬೆ ಕಲಿಸಿದ ಭಾಷೆಯೇ ಆಡುಭಾಷೆ.  ಒಬ್ಬ ವ್ಯಕ್ತಿ ಸಮಾಜದೊಟ್ಟಿಂಗೆ ಬೆರವಲಿಪ್ಪ ಮದಾಲಣ ಹೆಜ್ಜೆಯೇ ಕುಟುಂಬ. ಇದು ಭಾಷೆ,ಸಂಸ್ಕೃತಿ, ಸಂಸ್ಕಾರ ಕಲಿಸುವ ಕೇಂದ್ರ ಹೇಳಿರೂ ತಪ್ಪಲ್ಲ.ಇಲ್ಲಿ ನಮ್ಮ ಶ್ರೀ ಗುರುಗೊ ಹೇಳ್ತ ಮಾತೊಂದು ನೆಂಪಾವುತ್ತು.
“ಎಲ್ಲ ಅಬ್ಬೆಕ್ಕೊಗೂ ನಾವು ಗೌರವಂದ ಕೈಮುಗಿವೊ°. ಆದರೆ ಹೆತ್ತಬ್ಬಗೆ ಮಾಂತ್ರ ವಿಶೇಷ ಸ್ಥಾನ-ಮಾನ ಕೊಡುವೊ°”. ಅಪ್ಪು ಎಲ್ಲ ಭಾಷೆಗಳನ್ನೂ ನಾವು ಕಲಿಯೇಕು. ಹಾಂಗೂ ಕಲಿಯಲೆಡಿಗು. ಅಂಬಗ…ನಮ್ಮ ಹುಟ್ಟುಭಾಷೆಯ ವಿಚಾರಕ್ಕೆತ್ತುವಾಗ; ಅದಕ್ಕಿದ್ದ ಮಾನ್ಯತೆ ಬೇರೆಯೇ ಇದ್ದು!.

ಶ್ರೀಗುರುಗೊ ಇನ್ನೊಂದು ಕತೆ ಹೇಳಿದ್ದು ನೆಂಪಾವುತ್ತು. ಒಂದರಿ ಕೃಷ್ಣದೇವರಾಯನ ಆಸ್ಥಾನಕ್ಕೆ ಬಹುಭಾಷಾ ಪಂಡಿತ° ಒಬ್ಬ ಬಂದನಡ. “ಆನು ಹಲವಾರು ಭಾಷೆಲಿ ನಿರರ್ಗಳವಾಗಿ ಮಾತಾಡ್ತೆ. ಆದರೆ ಎನ್ನ ಮಾತೃಭಾಷೆ ಏವದೂಳಿ ಇಲ್ಲಿಪ್ಪ ಪಂಡಿತಕ್ಕೊ ಹೇಳೆಕ್ಕು” ಹೇಳಿದನಡ.ಅಷ್ಟೊತ್ತಿಂಗೆ ಕೃಷ್ಣದೇವರಾಯ ತೆನ್ನಾಲಿರಾಮನತ್ರೆ ಆ ಕೆಲಸ ಒಪ್ಪುಸಿದನಡ. ತೆನ್ನಾಲಿರಾಮ ಒಂದುದಿನದ ಗಡು ತೆಕ್ಕಂಡು ನಾಳಂಗೆ ಹೇಳ್ತೆ ಹೇಳಿಕ್ಕಿ; ಆ ಪಂಡಿತನೊಟ್ಟಿಂಗೆ ಇರುಳು ಮನುಗಲೆ ಅವಕಾಶ ಕೇಳಿದ°. ಹಾಂಗೇ ವೆವಸ್ಥೆ ಆತು. ಇರುಳು ಪಂಡಿತಂಗೆ ಒಳ್ಳೆ ಒರಕ್ಕು ಬಂದ ಸಮಯ ನೋಡಿ ಅವನ ಮೋರಗೆ ಬೆಶಿನೀರು ಚೇಪಿದ° ತೆನ್ನಾಲಿರಾಮ!. ಅಷ್ಟೊತ್ತಿಂಗೆ “ಅಮ್ಮಾ….,” ಹೇದು ಬೊಬ್ಬೆ ಹಾಕೆಂಡು ಎದ್ದ ಪಂಡಿತನ ನೋಡಿ ತೆನ್ನಾಲಿ ರಾಮ “ನಿನ್ನ ಮಾತೃಭಾಷೆ ಕನ್ನಡ” ಹೇಳುವಗ ಪಂಡಿತ ಒಪ್ಪಿಗೊಂಡ°.

ಆಡುಭಾಷೆಯ ಒಳಿಶಿ- ಬೆಳೆಶುವ ಪ್ರಯತ್ನ ನಮ್ಮೆಲ್ಲರಿಂದ ಅಪ್ಪಲೇ ಬೇಕು. ಆಡುಭಾಷೆಲಿ ಕತೆ ಬರದೇ ಎನ್ನ ಜೀವನಲ್ಲಿ ಮದಾಲು ಪ್ರಶಸ್ತಿ ಬಂದದು. ಅದಿಲ್ಲಿ ನೆಂಪುಮಾಡಿಯೊಳುತ್ತೆ. ಹವಿಗನ್ನಡಲ್ಲಿ ಆಯಾಯ ಸೀಮಗೆ ಹೊಂದೆಂಡು ಭಾಷೆ ರಜ,ರಜ ವೆತ್ಯಾಸ ಇದ್ದೂಳಿ ಎಲ್ಲಾ ಸೀಮೆ ಹವ್ಯಕರ ಕಂಡು ಮಾತಾಡ್ಸಿಯಪ್ಪಗ, ಅವು ಬರದ ಬರಹಂಗಳ ಓದಿಯಪ್ಪಗ ಗೊಂತಾವುತ್ತು.
ಸಂವಹನ:-ಇನ್ನೊಬ್ಬರಲ್ಲಿ ಹೇಳುವಂತಾದ್ದು. ಪ್ರಕಟಮಾಡುವಂತಾದ್ದು. ಹೆರವರ ಮುಂದೆ ಮಾತು ಹರಿಯುವಂತಾದ್ದು ಸಂವಹನ. ಹೀಂಗೆ ಮಾತಾಡುವ,ಅಭಿವ್ಯಕ್ತಿ ಮೂಡುವ, ಸಂದರ್ಭಲ್ಲಿ ಒಂದೇ ಸಮುದಾಯದವಾದರೆ; ಒಂದೇ ಆಡುಭಾಷೆಯಾದರೆ,ಅಥವಾ ಬೇರೆಸಮುದಾಯವಾದರೂ ಭಾಷೆಯ ಮೇಗೆ ಅಕರಾಸ್ಥೆ ಇದ್ದರೆ, ಅಲ್ಲಿ ಒಳ್ಳೆ ಆಪ್ತತೆ,ಆತ್ಮೀಯತೆ,ಬಂದುತ್ವ ಒಳಿತ್ತು. ಇನ್ನು, ಬರಹದ ಮುಖೇನ ಅದಕ್ಕೊಂದು ರೂಪ ಕೊಡುವದೇ ಸಾಹಿತ್ಯ ಆವುತ್ತು.ಕೆಲವು ಜೆನಕ್ಕೆ ಮಾತಾಡ್ಳೆ, ಭಾಷಣ ಮಾಡ್ಳೆ ಎಡಿತ್ತು. ಆದರೆ ಬರವಲೆ ಎಡಿತ್ತಿಲ್ಲೆ. ಹಾಂಗೇ ಬರವಲೆ ಎಡಿತ್ತವಕ್ಕೆ ಮಾತಾಡ್ಳೆ[ವೇದಿಕೆಲಿ] ಎಡಿತ್ತಿಲ್ಲೆ.ಮತ್ತೆ, ಮಾತಾಡ್ಳೂ ಬರವಲೂ ಎರಡರಲ್ಲೂ ನಿಪುಣರು ಬೇಕಾದಷ್ಟು ಜೆನ ಇದ್ದವು.
ಹವಿಗನ್ನಡದ ಸಾಹಿತ್ಯಲೋಕ:- ನಮ್ಮ ಹೆರಿಯೊವು ತುಂಬಾಜೆನ ಹವ್ಯಕ ಭಾಷೆಯ ಒಳಿಶಿ- ಬೆಳಶಲೆ ಬೇಕಾಗಿ ಬರವಣಿಗೆ ರೂಪಲ್ಲಿಯೂ ನವಗೆ ಕೊಟ್ಟಿದೊವು. ಅವರ ಪೈಕಿ;ನೆಂಪಾದ ಕೆಲವು ಜೆನರ ಹೇಳ್ತೆ. ಮುಂಗ್ಲಿಮನೆ ಮರಿಯಪ್ಪಭಟ್ರು ಶಬ್ಧಕೋಶ, ತಾಳ್ತಜೆ ಕೇಶವಭಟ್ರು ಪದಸಂಚಯ ಹಾಂಗೂ ಜಾನಪದ,ಸಂಪ್ರದಾಯದ ಹಾಡುಗಳನ್ನೂ ಬರದು ನಮ್ಮ ಸಾಹಿತ್ಯ ಪುಷ್ಟಿಗೆ ಎಡೆಮಾಡಿ ಕೊಟ್ಟಿದೊವು.ಅವು ಹೇಳ್ತೊವು ಹವಿಗನ್ನಡಭಾಷೆ ನೃಪತುಂಗ,ಪಂಪ, ಇವರ ಕಾಲಂದಲೇ ಇದ್ದಾಡೊ!.ಹಾಂಗೇ ಇನ್ನೊಬ್ಬ ಇದೀಗ ಎರಡು ವಾರ ಹಿಂದೆ ಕಾಲವಾದ ಬಾಳಿಲ ಪರಮೇಶ್ವರಭಟ್ರು ಮಹಾಭಾರತ ಪುರಾಣವ “ಧರ್ಮವಿಜಯ” ಹೇಳ್ತ ಮಹಾಕಾವ್ಯ ಹವ್ಯಕಭಾಷೆಲಿ ಬರದು, “ಸೂರಿ” ಪ್ರಶಸ್ತಿ ಗಳಿಸಿದ್ದೊವು.ಇವಕ್ಕೆ ಈ ಸಂದರ್ಭಲ್ಲಿ ಸ್ಮರಣಾಂಜಲಿ. ಇನ್ನು ಭರಣ್ಯದ ಹರಿಕೃಷ್ಣರು ’ದೊಡ್ಡಜಾಲು’ [ಕಾದಂಬರಿ], ಗೆಣಸಲೆ ಹೇಳ್ತ ಮುಕ್ತಕ,  ’ಪಡೆನುಡಿ’ ಹವ್ಯಕ ಭಾಷೆಲಿ ಬರದ್ದೊವು.ಹಾಂಗೇ ಉಡುಪುಮೂಲೆ ರಘುರಾಮಭಟ್ರು ಸೌಂದರ್ಯಲಹರಿಯ ಭಾವಾನುವಾದ ಹವ್ಯಕಲ್ಲಿ ಬರದು ಭಾಷೆಯ ಬೆಳಗಿದ್ದೊವು. ಹೆರಿಯೊವಾದ ವಿ.ಬಿ ಅರ್ತಿಕಜೆವು ಹವಿಗನ್ನಡಲ್ಲಿ ಸಾಹಿತ್ಯ ಕೃಷಿ ಸುಮಾರು ಮಾಡಿದ್ದೊವು. ಶ್ರೀಕೃಷ್ಣಭಟ್ ಅರ್ತಿಕಜೆವೂ ಹವಿಗನ್ನಡಕ್ಕೆ ಕೊಡುಗೆ ಕೊಟ್ಟಿದೊವು. ಹಾಂಗೇ ಇಪ್ಪತ್ತು ವರ್ಷಂದ ಪ್ರತಿ ವರ್ಷ ಕೊಡಗಿನ ಗೌರಮ್ಮಕತಾಸ್ಪರ್ಧಾವೇದಿಕೆ; ಹವ್ಯಕ ಸರಸ್ವತಿ ಸೇವೆ ಮಾಡ್ತಾ ಇದ್ದು. ಈ ಹೆಳೆಲಿ ತುಂಬಾ ಜೆನ ಅಕ್ಕ-ತಂಗೆಕ್ಕೊ ಹವಿಗನ್ನಡವ ಅಪ್ಪಿಗೊಂಡಿದೊವು ಹೇಳ್ಲೆ ಸಂತೋಷಾವುತ್ತು.ಇದೀಗ ಬರಕ್ಕೊಂಡಿಪ್ಪಗ ಮಳೆ ಬಪ್ಪಲೆ ಸುರುವಾತಿದ!. [ಮಾರ್ಚಿ ಒಂದನೆ ತಾರೀಕು]. ತೆಂಗಿನಹಿತ್ತಿಲು ಮಾಂತ್ರ ಇಪ್ಪ ಎನಗೆ ಮಳೆಬಿದ್ದಪ್ಪಗ ಸಂತೋಷಾದರೆ; ಎನ್ನ ತಮ್ಮ “ಜಾಲಿಲ್ಲಿದ್ದ ಅಡಕ್ಕೆ ಚೆಂಡಿಯಾದರೆ ಕ್ರಯ ಕಮ್ಮಿ ಅಕ್ಕೂಳಿ ಪೇಚಾಡಿಗೊಂಡಂ. “ಕುಂಬಾ ತಿಂಗಳಿಲ್ಲಿ ಮಳೆ ಬಂದರೆ ಕುಪ್ಪೆಲಿ ಬೆಳೆ”, ಹಾಂಗೇ “ಮೀನಾತಿಂಗಳಿಲ್ಲಿ ಮಳೆಬಂದರೆ ಮೀನಿಂಗೆ ಕುಡಿಯಲೂ ನೀರಿರ” ಹೇಳುಗು ಹೆರಿಯೊವು.
ಆಡುಭಾಷೆಯ ಮಾತಾಡೆಕ್ಕಾದ ಮಹತ್ವ:-

೧.ನಮ್ಮ ಅಭಿಪ್ರಾಯವ ವೆಕ್ತಪಡಿಸಿಗೊಂಬಲೆ ಹಾಂಗೂ ಇನ್ನೊಬ್ಬರಿಂದ ತಿಳುಕ್ಕೊಂಬಲೆ ಆಡುಭಾಷೆಯಷ್ಟು ಒಳ್ಳೆ ಮಾಧ್ಯಮ ಇನ್ನೊಂದಿಲ್ಲೆ.

೨.ಆಡುಭಾಷೆಲಿ ಕಲ್ತ ತಿಳುವಳಿಕೆ,ಕೌಶಲ್ಯ,ಜ್ಞಾನ,ಇದೆಲ್ಲ ಜೀವನ ಪರಿಯಂತ ಮರೆತ್ತಿಲ್ಲೆ.

೩.ಆಡುಭಾಷೆಲಿ ಮಾತಾಡದೇ ಇದ್ದರೆ ಭಾಷೆ ಒಳಿಯ, ಬೆಳೆಯ.ಮಕ್ಕಳ ಮುಂದೆ ಮನೆಲಿ ಆಡುಭಾಷೆಲೇ ಸಂವಹನ ಮಾಡೆಕ್ಕು.ಅದೆಷ್ಟು ಬಾಲಭಾಷೆ ಹವಿಗನ್ನಡಲ್ಲಿದ್ದು!.
ಉದಾ:-’ಪಾನಿನಿಪಾಚ’ [ದೇವರಿಂಗೆ ನೇವೇದ್ಯ ಮಾಡಿದ ಪಾಯಸ] ಇದ್ದೂಳಿರೆ ಮಕ್ಕೊ ಕೊಶಿಲಿ ಉಂಗು. ಅವಕ್ಕೆ ನಮ್ಮ ಭಾಷೆಲೇ ಕತೆ ಹೇಳೆಕ್ಕು.ಸಂದರ್ಭೋಚಿತವಾಗಿ ನುಡಿಗಟ್ಟು,’ಗಾದೆ’ ಉಪಯೋಗಿಸಿ ಮಾತಾಡೆಕ್ಕು.

೪.ನಮ್ಮ ಆಡುಭಾಷೆಲಿ ಅಪರೂಪದ ಶಬ್ಧಂಗೊ ಇದ್ದು.
ಉದಾ:-’ಅಸಕ್ಕ’ ಈ ಶಬ್ಧದ ನಿಜ ಅರ್ಥ [ಆತ್ಮೀಯರ ತಾತ್ಕಾಲಿಕ ಅಗಲಿಕೆಲಿ ಅಪ್ಪ ಮನಸ್ಸಿನೊಳಾಣ ಹಂಬಲ] ಬಪ್ಪ ಶಬ್ಧ ಕನ್ನಡಲ್ಲಿಯೂ ಇಲ್ಲೆ.
ಹಾಂಗೇ ’ಪೆರಟು’, ’ತಿಮ್ಮುರುಟು’, ’ಎರಟೆಬೆಳವು’ ’ಕೊಂಗಿ’, ’ಗೋಣಸಂಬಯ’, ’ಲೋಗ್ಯ’ ’ಉದಿನಸ್ಕು’, ಹೀಂಗಿದ್ದ ಶಬ್ಧಂಗೊ ಬೇಕಾದಷ್ಟಿದ್ದು.
ಅದು ಒಳಿಯೆಕ್ಕಾರೆ ಏವಗಳೂ ಉಪಯೋಗಿಸೆಂಡಿರೆಕು.

೫.ನಮ್ಮೊಳದಿಕೆ ಒಂದು ’ಲೋಗ್ಯ’ ಬೆಳೆಕಾರೆ ಅದು ಆಡುಭಾಷೆ ಆದರೆ ಅದಕ್ಕೆ ತೂಕ ಹೆಚ್ಚಿಗೆ.

೬.ಅಜ್ಜ-ಅಜ್ಜಿ ಆಡುಭಾಷೆಲಿ ಕತೆಹೇಳ್ತಾ ಬೆಳೆಶಿದ ಮಕ್ಕೊ ಉಶಾರಾವುತ್ತೊವು.
ಅವರೊಟ್ಟಿಂಗೆ ಬೆಳದ ಮಕ್ಕಳ ಬುದ್ಧಿ ಪ್ರಭುದ್ದತೆಯತೂಕ ಈಚ ಮಕ್ಕಳಿಂದ ಹೆಚ್ಚಿಗಿಪ್ಪದಂತೂ ಖಂಡಿತ.

೭.ನಮ್ಮಭಾಷೆಲಿ ಅದೆಷ್ಟೋ ಜಾನಪದ, ಮನೆಮದ್ದುಗೊ,ಇದ್ದು. ಅದು ಅಳಿಯದ್ದೆ ಒಳಿಯೆಕ್ಕಾರೆ, ಉಪಯೋಗುಸುತ್ತಾ ಇರೆಕು.
ಈಗೀಗ ನಮ್ಮ ಹವ್ಯಕರು ಮನೆಲಿಯುದೆ ಮಕ್ಕೊಗೆ ಆಡುಭಾಷೆಯ ಕಲಿಸುದರ ಬಿಟ್ಟು ಕನ್ನಡವನ್ನೋ ಇಂಗ್ಲೀಷನ್ನೋ ಕಲಿಶುದು ಪೇಶನ್ ಆಗಿ ಕಾಣ್ತಾ ಇದ್ದು.

೮.ನಮ್ಮ ಸಂಸ್ಕೃತಿ ಸಂಸ್ಕಾರ ಒಳಿವಲೆ ಆಡುಭಾಷೆಯೇ ಮಾಧ್ಯಮ.

೯.ಎನ್ನತ್ರೆ ತುಂಬಾಜೆನ ಅಕ್ಕ-ತಂಗೆಕ್ಕೊ ಹೇಳ್ತವು “ಎನಗೆ ನಮ್ಮಭಾಷೆಲಿ ಬರವಲೆಡಿತ್ತಿಲ್ಲೆ. ಕನ್ನಡಲ್ಲಿಯಾದರೆ ಬರವೆ” ಹೇದು!. ನೋಡಿ..!,
ಮಾತಾಡ್ತ ಭಾಷೆಲಿ ಬರವಲೆಡಿಯದ್ರೆ;ಬೇರೆ ಭಾಷೆಲಿ ಬರವಲೆಡಿಗೋ! ಹೇದು ಎನ್ನ ಪ್ರಶ್ನೆ!?.ಎಂತ ಹೇಳ್ತಿ?.

೧೦.ನಮ್ಮದರ ಹೆರಾಣೊವು ಉಪಯೋಗಿಸಿಗೊಂಡಪ್ಪಗ ನವಗದರ ಮಹತ್ವ ತಲಗೆ ಹೊಳವದು!.. ಹೀಂಗಾದರೆ ಕ್ರಮೇಣ ನಮ್ಮದು ಹೇಳುದು; ಬೇರೆಯವರ ಪಾಲಕ್ಕು.
ಅಥವಾ ’ಚಾನಾಹಾನಿ’ ಅಕ್ಕು. ಹೆರಿಯೊವು ಹೇಳ್ತ ಒಂದು ನುಡಿಗಟ್ಟುನೆಂಪಾವುತ್ತು. “ನಮ್ಮಸೊತ್ತಿಂಗೆ ಏವದಕ್ಕೂ ಹೋಕಾಲ ಬಪ್ಪಲಾಗ”.ಅದಪ್ಪಾದ್ದೇ.

ಮುಂದಿನ ತಲೆಮಾರಿಂಗೆ ಅದು ಒಳುದು-ಬೆಳೆಕ್ಕು ಹೇದೊಂಡು ನಮ್ಮ ಒಪ್ಪಣ್ಣ ಬೈಲು ಏಳುವರ್ಷಂದ ಕಾರ್ಯಚಟುವಟಿಕೆಲಿ,ತೊಡಗಿಸಿಗೊಂಡಿದು. ಇದರ,ಇಲ್ಲಿ,ನೆಂಪುಮಾಡೆಕ್ಕಾವುತ್ತು. ಹವಿಗನ್ನಡಲ್ಲಿದ್ದ, ನುಡಿಗಟ್ಟುಗೊ, ಆಚಾರ, ವಿಚಾರಂಗೊ, ರೀತಿರಿವಾಜುಗೊ, ಬೇಕಾದಷ್ಟು ತೆಕ್ಕೊಂಬೊಂ.  ಹಳೆಅಜ್ಜಿಯಕ್ಕಳ, ಜೋಳಿಗೆಹೇಳಿರೆ; ಮನೆಮದ್ದಿನ ಖಜಾನೆ! ಮಕ್ಕಳತೂಗಿ, ಉಕ್ಕಾಚು [ಮುಂಗಾಲಿಲ್ಲಿ.,ಕೊಣಿಶುದು] ಮಾಡಿ, ಒಡಂಬಡುಸುವ, ಪೂಜೆ,ಮಂಗಳಾರತಿಯ, ಶೋಭಾನೆಗಳ, ಪತ್ತಾಯಇದ್ದು!!.

ಮದಲಿಂಗೇ, ಮದುವೆಸಂದರ್ಭಲ್ಲಿ, ಏನೂವಿದ್ಯಾಭ್ಯಾಸ ಇಲ್ಲದ್ದ ನಮ್ಮ ಹೆರಿ ಅಜ್ಜಿಯಕ್ಕೊ ಸ್ವಂತಹಾಡುಕಟ್ಟಿ ಹೇಳುಗಡ. ಹೀಂಗಿದ್ದೆಲ್ಲ, ಪ್ರಾಕಿಂದು ಅದೆಷ್ಟಿದ್ದು!
ಅದೆಲ್ಲ ಒಳುದು ಮುಂದಾಣ ತಲೆಮಾರಿಂಗೆ ಸಿಕ್ಕೆಡದಾ?. ಮನೆಲಿದ್ದವರೆಲ್ಲೋರನೋಡಿಗೊಂಬ, ಸಾಮರಸ್ಯಲ್ಲಿ ಬದುಕುವ,ಜಾಣ್ಮೆಯ ಪಿಸುಮಾತುಗಳ ಚೀಲ ಬೇಕೊ?!!..
ನಮ್ಮ ಆಡುಭಾಷೆಯ ಕೊಂಗಾಟ,ಮಹತ್ವ ಗೊಂತಾಯೆಕ್ಕೊ?
ಒಪ್ಪಣ್ಣ-ಒಪ್ಪಕ್ಕಂಗೊ ಆಗಿ.ನಮ್ಮೊವು ನಮ್ಮತನಕ್ಕೆ ಬತ್ತೀರನ್ನೆ?.

೧೧. ನಾವು ಬೇರೆ ರಾಜ್ಯಲ್ಲೋ ಅಂತು-ಗೊಂತಿಲ್ಲದ್ದ ದೇಶಲ್ಲೋ ಒಂಟಿಯಾಗಿದ್ದ ಸಂದರ್ಭಲ್ಲಿ, ಬೇರೆವು ನಮ್ಮದರ ಹೊಗಳುವಗ!.
ದಿಢೀರನೆ ನಮ್ಮ ಜೆನ,ನಮ್ಮ ಭಾಷೆವು ಸಿಕ್ಕಿಯಪ್ಪಗ.ಅಂಬಗ ಇದ್ದನ್ನೆ “ತಬ್ಬಲಿಗೆ ಅಬ್ಬೆ ಸಿಕ್ಕಿತ್ತು” ಹೇಳುವಷ್ಟು ಸಂತೋಷ!!.

೧೨.’ಏನೇ ಆಗು ಮದಾಲು ನಮ್ಮವನಾನಾಗು’ ಹೇಳುವ ಹಾಂಗೆ; ಏವದೇ ಭಾಷೆ ಗೊಂತಿದ್ದರೂ ನಮ್ಮ ಆಡುಭಾಷೆ ರೂಢಿಲಿಪ್ಪಲೇ ಬೇಕು.
ಅದರ ಮರದತ್ತೂಳಿಯಾದರೆ; “ಮರದ ಚಿಗುರು, ಬೇರಿನ ಮರದತ್ತು” ಹೇಳಿ ಆತಿಲ್ಯೋ!.ಮಕ್ಕೊಎಷ್ಟೇ ಉತ್ತುಂಗಕ್ಕೇರಿದ ಕೆಲಸಲ್ಲಿದ್ದರೂ “ಹೆತ್ತಬ್ಬೆಯ ಮರವಲಾಗ” ಸರಿ ಅಲ್ಲೋ?.
ಆಡುಭಾಷೆಯ ಒಳಿತಿಂಗೆ ನವಗೆಡಿಗಾದಷ್ಟು ಪ್ರಯತ್ನಮಾಡೆಕ್ಕಾದ್ದು ನಮ್ಮೆಲ್ಲೋರ ಕರ್ತವ್ಯ.
ನಮ್ಮ ಸನಾತನ ಮೂಲಬೇರಿನ[ಗುರುಪೀಠವ],ಅದಾರೋ ಅಲುಗುಸುಲೆ ನೋಡ್ತವು.  ಅದಕ್ಕೆ ನಾವು ಆಸ್ಪದ ಕೊಡದ್ದೆ; ಗಟ್ಟಿಯಾಗಿ ಎಲ್ಲರೊಂದಾಯೆಕ್ಕು.
ಹವ್ಯಕರ ಹಳೆಬೇರು ಒಳುದು, ಹೊಸಚಿಗುರು ಮೂಡಿ,ಮರ ಹುಲುಸಾಗಿ ’ಅಮರ’ ಅಪ್ಪಲೆ ನಾವೆಲ್ಲ ಒಂದಾಗಿ ನಿಂಬೊ°.
ನಿಂಗೊಲ್ಲ ಕೈಜೋಡುಸುತ್ತಿ ಹೇಳ್ತ ಆತ್ಮ ವಿಶ್ವಾಸದೊಟ್ಟಿಂಗೆ; ನಮ್ಮ ಗುರು ಹೆರಿಯೋರ ಹಾರೈಕೆ, ಶುಭಾಶೀರ್ವಾದ ಬೇಡಿಗೊಂಬೊ°.

~*~*~

11 thoughts on “ಸಂವಹನಲ್ಲಿ ಆಡು ಭಾಷೆಯ ಮಹತ್ವ – ವಿಜಯಾ ಸುಬ್ರಹ್ಮಣ್ಯ – ವಿಷು ಸ್ಪರ್ಧೆ- 2015 – ಪ್ರಬ೦ಧ ದ್ವಿತೀಯ

  1. ಪ್ರಕಾಶ ಹೇಳಿದ್ದು ಸರಿ. ಅಬ್ಬೆಕ್ಕಳೊಟ್ಟಿಂಗೆ ಇದ್ದರೂ ಹೇಳಿಕೊಡುದು ಎಲ್ಲಾಸಮಯಲ್ಲೂ ಇಂಗ್ಲಿಷನ್ನೇ . ಅಪರೂಪದ ಸವಿತಂಗೆ ಧನ್ಯವಾದ

  2. ಈಗಾಣ ಮಕ್ಕೋ ಮದಲಾಣ ಮಕ್ಕಳ ಹಾಂಗೆ ಅಬ್ಬೆಕ್ಕಳೊಟ್ಟಿಂಗೆ ಇಪ್ಪದು ಕಡಮ್ಮೆ ಸಮಯ. ಅದರ ಪರಿಣಾಮ ಅವರ ಭಾಷೆಲಿ ಗೊಂತಾವುತ್ತು!!

  3. ಅಭಿನಂದನೆ ಚಿಕ್ಕಮ್ಮ.
    ಕನ್ನಡಲ್ಲಿ ಬರೆವದು ಹವ್ಯಕಲ್ಲಿ ಬರೆವದರಿಂದ ಸುಲಭ. ಅದಕ್ಕೆ ಕಾರಣ ಕನ್ನಡಲ್ಲಿ ಅಪಾರ ಶಬ್ದ ಸಂಪತ್ತು ಇಪ್ಪದು. ನಾವು ಹವ್ಯಕಲ್ಲಿ ಬರೆವಾಗಲೂ ಆ ಕನ್ನಡ ,ಸಂಸ್ಕೃತ ಶಬ್ದ ಉಪಯೋಗ ಮಾಡಿದರೆ ಕಷ್ಟ ಆವ್ತಿಲ್ಲೇ. ಇದು ಎನ್ನ ಸ್ವಂತ ಅನುಭವ.
    ನಮ್ಮ ರಾಜ್ಯಲ್ಲಿ ಕನ್ನಡಕ್ಕೆ ಮೊದಲ ಮಣೆ,ಆದ್ಯತೆ ಇರೆಕ್ಕು. ಸೋಲಿಗ ಭಾಷೆ,ತುಳು, ಕೊಡವ, ಕೊಂಕಣಿ ಹೀಂಗೆ ನಮ್ಮಲ್ಲಿ ಶಿಕ್ಷಣ ಕೊಟ್ಟುಕೊಂಡು ಹೋದರೆ ಎಲ್ಲಾ ಒಂದು ದ್ವೀಪಂಗಳ ಹಾಂಗೆ ಅಕ್ಕು. ಈ ಮಾತು ಹವ್ಯಕಕ್ಕೂ ಅನ್ವಯಿಸುತ್ತು.
    ನಮ್ಮ ಮಕ್ಕೊ ಆಂಗ್ಳಲ್ಲಿ ಕಲಿವವು ಎಲ್ಲರೂ ಮನೆಲಾದರೂ ಕನ್ನಡ ಓದಲೇ ಬರೆವಲೆ ಕಲಿಯೇಕ್ಕು. ಇಲ್ಲದಿದ್ದರೆ ನಮ್ಮ ಕನ್ನಡವೂ ಉಳಿಯ. ಹವ್ಯಕವೂ ಉಳಿಯ.
    ಹಾಂಗಾಗಿ ಚಿಕ್ಕಮ್ಮನ ಪ್ರಬಂಧಕ್ಕೆ ಈ ಹಿನ್ನುಡಿ ಜೋಡಿಸುತ್ತಾ ಇದ್ದೆ.

  4. ನಮ್ಮ ಭಾಷೆಯ ಮಹತ್ವ, ಅದರಲ್ಲಿಪ್ಪ ಸಾರವ ತೋರುಸಿಕೊಟ್ಟ ವಿಜಯಕ್ಕನ ಪ್ರಬಂಧವುದೆ ಸೂಪರ್ ಆಯಿದು. ಹೆತ್ತಬ್ಬೆಗೆ ವಿಶೇಷ ಮರ್ಯಾದಿ ಕೊಡೆಕಾಗಿಪ್ಪದು ನಿಜ. ವಿಜಯ ಗಳಿಸಿದ ವಿಜಯಕ್ಕಂಗೆ ಅಭಿನಂದನೆಗೊ.

  5. ವಿಜಯತ್ತೆ .. ಆಡು ಭಾಷೆಯ ಬಗ್ಗೆ ತುಂಬಾ ಲಾಯ್ಕಕ್ಕೆ ಬರದ್ದಿರಿ. ನಾವು ನಮ್ಮ ಆಡು ಭಾಷೆಯ ಉಳಿಸೆಕ್ಕು, ಬೆಳೆಶೆಕ್ಕು

  6. ವಿಜಯಕ್ಕ , ಒಳ್ಳೆಯ ಪ್ರಬಂಧ, ನಾವು ಹವ್ಯಕರೆಲ್ಲರು ಖಂಡಿತವಾಗಿಯೂ ಒಗ್ಗಟ್ಟಾಯೆಕ್ಕು, ನಮ್ಮ ಭಾಷೆಯ ಒಳಿಶಿ ಬೆಳೆಶೆಕ್ಕು.ಹರೇ ರಾಮ.

  7. ಒಳ್ಳೆ ಪ್ರಬ೦ಧ ವಿಜಯಕ್ಕ. ಹೊಸ ತರಲ್ಲಿದ್ದು.ಅಭಿನ೦ದನೆಗೊ.

  8. “ಎಲ್ಲ ಅಬ್ಬೆಕ್ಕೊಗೂ ನಾವು ಗೌರವಂದ ಕೈಮುಗಿವೊ°. ಆದರೆ ಹೆತ್ತಬ್ಬಗೆ ಮಾಂತ್ರ ವಿಶೇಷ ಸ್ಥಾನ-ಮಾನ ಕೊಡುವೊ°” – ಸರಿಯಾದ ಮಾತು. ಅಭಿನಂದನೆಗೊ, ವಿಜಯತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×