Oppanna.com

ತೆಕ್ಕುಂಜ ಶಂಕರ ಭಟ್ಟ ವಿರಚಿತ ಶ್ರೀ ಲಲಿತಾಮಾನಸಪೂಜಾ ಸ್ತೋತ್ರಂ – ಉತ್ತರಾರ್ಧ

ಬರದೋರು :   ತೆಕ್ಕುಂಜ ಕುಮಾರ ಮಾವ°    on   05/10/2011    2 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಶ್ರೀ ತೆಕ್ಕುಂಜ ಶಂಕರ ಭಟ್ಟರ ಶ್ರೀ ಲಲಿತಾಮಾನಸಪೂಜಾಸ್ತೋತ್ರ ದ  ಉತ್ತರಾರ್ಧವ ಇಲ್ಲಿ ಕೊಟ್ಟಿದೆ. ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ಮಾಡಿದ ಕನ್ನಡಾನುವಾದವನ್ನೂ ಸ್ತೋತ್ರದೊಟ್ಟಿಂಗೆ ಹಾಕಿದ್ದೆ. 

ಉತ್ತರಾರ್ಧಃ-

ಜಾನುಪ್ರದೇಶೇ ಭುವನಾಭಿಧೇಯ

ರೇಖಾತ್ರಯಸ್ಯ ಪ್ರಥಮಾಸ್ತಿ ರಮ್ಯಾ

ದೇವೀಗೃಹಸ್ಯಾಭಿಸುಪಾಲನೇಷು

ಸಂತ್ಯತ್ರ ಬದ್ಧಾಃ ಸಕಲಾಯುಧಾಢ್ಯಾಃ೧೩

ಮೊಲಕಾಲಿನ ಪ್ರದೇಶದಲ್ಲಿ ಭೂಪುರವೆಂಬ ಹೆಸರುಳ್ಳ ಮೂರು ರೇಖೆಗಳ ಸಮೂಹದೊಳಗೆ ಒಂದನೆಯ ರೇಖೆಯಿರುವುದು. ಇದು ಸುಂದರವಾಗಿರುವುದು. ಈ ರೇಖೆಯಲ್ಲಿ ದೇವಿಯ ಶ್ರೀ ಚಕ್ರವೆಂಬ ಗೃಹದ ಸಂರಕ್ಷಣೆಯಲ್ಲಿ ಅಧಿಕಾರ ಹೊಂದಿದ ಮತ್ತು ಸಕಲಾಯುಧದಾರಿಗಳಾದ ದೇವತೆಗಳಿರುವರು.( ಅವರನ್ನು ಧ್ಯಾನಿಸುವೆನು)

ಜಂಘೇ ಸುವೃತ್ತೇ ಸುಧೃಢಾ ಸುರೂಪಾ

ರೇಖಾದ್ವಿತೀಯಾ ಸಹಯೋಗಿವೃಂದಾ

ಚರಂತಿ ಬುದ್ಧಾಃ ಪುರುಷಾಃ ಸಮಸ್ತಾಃ

ಸರ್ವಾಯುಧೈರ್ಯುಕ್ತಕರಾರವಿಂದಾಃ೧೪

ಈ ಭೂಪುರದ ಎರಡನೆಯ ರೇಖೆಯು – ಕೋಲು ಕಾಲಿನ ಸ್ಥಾನದಲ್ಲಿ ಸುಂದರವಾಗಿಯೂ ಸುಧೃಢವಾಗಿಯೂ ಇದೆ. ಇದರಲ್ಲಿ ಬಹುಮಂದಿ ಯೋಗಿಗಳಿರುವರು. ಮತ್ತು “ಬುದ್ಧ”ರೆಂದು ಹೆಸರುಳ್ಳ ( ಜ್ಞಾನಿಗಳು) ಪುರುಷರು ಸರ್ವಾಯುಧದಾರಿಗಳಾಗಿ ಇದರಲ್ಲಿ ದೇವೀಗೃಹರಕ್ಷಕರಾಗಿರುವರು( ಅವರನ್ನು ಧ್ಯಾನಿಸುವೆನು)

ರೇಖಾ ತೃತೀಯಾ ಪದಯುಗ್ಮ ಆಹುಃ

ನಷ್ಟಾಂ ಸ್ವಪೂಜಾಂ ಪರಿಪೂರಯಂತಃ

ಏತತ್ರಯೇ ದ್ವಾರಚತುಷ್ಕ ಮಸ್ತಿ

ತತ್ಪಾಲನೇ ಭೈರವನಾಮ ದೇವಾಃ ೧೫

ಆ ಭೂಪುರದ ಮೂರನೆಯ ರೇಖೆಯು ಪಾದದ್ವಯದ ಸ್ಥಾನದಲ್ಲಿರುವುದು. ಈ ರೇಖೆಯಲ್ಲಿ – “ಭೈರವ” ರೆಂಬ ದೇವತೆಗಳು ದೇವೀಗೃಹದ ರಕ್ಷಕರಾಗಿಯೂ, ಶ್ರೀ ದೇವಿಯ ಅರ್ಚನೆಯಲ್ಲಿ ಉಪಾಸಕರಿಗೆ ಒದಗಬಹುದಾದ ನ್ಯೂನತೆಯನ್ನು ಪೂರ್ತಿಗೊಳಿಸುವವರಾಗಿಯೂ ಇರುವರು. ( ಇವರನ್ನು ಧ್ಯಾನಿಸುವೆನು) ಈ ಭೂಪುರವೆಂಬ ರೇಖಾತ್ರೆಯಲ್ಲಿ ಪೂರ್ವಾದಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳಿವೆ.

ಇತ್ಥಂ ಹಿ ಚಕ್ರಂ ಲಲಿತಾಂಬಿಕಾಯಾಃ

ಪೂಜಾವಿಧಿಂ ವಚ್ಮಿ ಮನೋನುಗಮ್ಯಂ

ಅನೇನ ಪೂಜಾವಿಧಿನಾ ಭವೇಯುಃ

ಲೋಕಾ ಸಮಸ್ತಾಃ ಶಿವಲೊಕಮಾಪ್ತಾಃ ೧೬

ಮೇಲೆ ಹೇಳಿದ ರೀತಿಯಲ್ಲಿ ಶ್ರೀ ಲಲಿತಾತ್ರಿಪುರಸುಂದರೀ ದೇವಿಯ ಶ್ರೀ ಚಕ್ರವನ್ನು ಮನಸ್ಸಿನಲ್ಲಿ ಭಾವನೆಮಾಡತಕ್ಕದ್ದು. ಇನ್ನು ಮೇಲೆ ಮನಸ್ಸಿನಿಂದಲೇ ಮಾಡುವ ಪೂಜಾವಿಧಿಯನ್ನು ಹೇಳುವೆನು. ಈ ರೀತಿಯ ಮಾನಸಪೂಜೆಯನ್ನು ವಿಧಿವತ್ತಾಗಿ ಮಾಡುವ ಸಮಸ್ತ ಜನರೂ ಆ ಮಂಗಲರೂಪಿಣಿಯಾದ ದೇವಿಯ ಲೋಕವನ್ನು ( ಮಣಿದ್ವೀಪವನ್ನು) ಹೊಂದುವರು.

ಜ್ಞಾನೇನ ಪಾದ್ಯಂ ಸುಷಮಂ ಪವಿತ್ರಂ

ದಾಸ್ಯಾಮಿ ಚಾರ್ಘ್ಯಂ ಪರಮೇಶಪತ್ನಿ

ಸ್ನಾನಂ ಸುತೀರ್ಥೈಃ ಪರಿತೋ ವಿಧಾಯ

ಸನ್ಮಾರ್ಜನಂ ವಸ್ತ್ರಯುಗಂ ವಿಧಾಸ್ಯೇ ೧೭

ಎಲೌ ಶಿವಪತ್ನಿಯಾದ ದೇವಿಯೇ ! ನಿನ್ನ ಪಾದಗಳಿಂದ ಭಾವನಾರೂಪವಾದ ಉತ್ತಮ ಪಾದ್ಯವನ್ನು ಅರ್ಪಿಸುವೆನು. ನಿನ್ನ ಹಸ್ತಗಳಿಗೆ ಪವಿತ್ರವಾದ ಅರ್ಘ್ಯವನ್ನು ನಿವೇದಿಸುವೆನು. ಗಂಗೆ ಮೊದಲಾದ ನಾನಾ ತೀರ್ಥಗಳಿಗೆ ನಿನಗೆ ಸ್ನಾನವನ್ನು ಅರ್ಪಿಸುವೆನು. ಆಮೇಲೆ ನಿನ್ನ ಅಂಗಗಳ ಜಲವನ್ನು ಉತ್ತಮ ವಸ್ತ್ರದಿಂದ ಮಾರ್ಜಿನ ಮಾಡುವೆನು. ಆಮೇಲೆ ನಿನಗೆ ಉಡುವ ಮತ್ತು ಮೇಲುದುವಿನ ವಸ್ತ್ರಗಳೆರಡನ್ನು ಅರ್ಪಿಸುವೆನು.

ಚಂದ್ರೇಣ ಗಂಧಂ ಪರಿಲೇಪಯಾಮಿ

ಕಸ್ತೂರಿಕಾಂ ಫಾಲತಲೇ ಪ್ರಕುರ್ವೇ

ಶಿರೋವಿಭೂಷಾದಿವಿಭೂಷಣಾನಿ

ಪ್ರದಾಯ ಚಾಂಗೇ ಪರಿತೋಷಯಾಮಿ ೧೮

ಹೇ ಜಗದಂಬ ! ಪಚ್ಚೆ ಕರ್ಪೂರ ಸಹಿತವಾದ ಗಂಧದಿಂದ ನಿನ್ನಂಗಗಳನ್ನು ಲೇಪಿಸುವೆನು. ನಿನ್ನ ನೊಸಲಿಗೆ ಕಸ್ತೂರಿ ತಿಲಕವನ್ನಿಡುವೆನು. ನಿನ್ನ ಶಿರ ಮೊದಲಾದ ಬೇರೆ ಬೇರೆ ಅಂಗಗಳಿಗೆ ಕಿರೀಟ ಮುಂತಾದ ಸಕಲಾಭರಣಗಳನ್ನಿರಿಸಿ ಸಂತೋಷಗೊಳಿಸುವೆನು.

ದಶಾಂಗಯುಕ್ತಂ ಪರಮಂ ಸುಧೂಪಂ

ಆಘ್ರಾಣಯೋಗ್ಯಂ ಪರಿಧೂಪಯಾಮಿ

ದೀಪಂಸುತೇಜೋಮಯಮಾದರೇಣ

ಸಂಯೋಜಯಿತ್ವಾ ಪರಿವೇಷಯಾಮಿ ೧೯

ದಶಾಂಗಚೂರ್ಣಯುಕ್ತವಾಗಿದ್ದು ಪರಿಮಳವನ್ನು ಸ್ವೀಕರಿಸಲಿಕ್ಕೆ ಅರ್ಹವಾಗಿರುವ ಉತ್ತಮ ಧೂಪದಿಂದ ನಿನ್ನನ್ನು ಧೂಪಿಸುವೆನು. ತುಪ್ಪ ಬತ್ತಿಗಳಿಂದ ಶೋಭಿಸುವ ದೀಪವನ್ನು ಹೊತ್ತಿಸಿ ನಿನಗೆ ಬೆಳಗುವೆನು.

ಭಕ್ಷ್ಯಾಜ್ಯಯುಕ್ತಂ ಹವಿರನ್ನಜಾತಂ

ಪಯೋವಿಶೇಷಂ ನಿವೇದಯಾಮಿ

ಸುಪೂಗತಾಂಬೂಲಮಥಾದರೇಣ

ಸುಭಕ್ತಯೇ ತುಭ್ಯಮಿದಂ ಸಚಂದ್ರಂ ೨೦

ಭಕ್ಷ್ಯಗಳಿಂದಲೂ ತುಪ್ಪದಿಂದಲೂ ಕೂಡಿದ ಸಿದ್ಧಾನ್ನವನ್ನೂ, ಉತ್ತಮವಾದ ಹಾಲನ್ನೂ, ನಿವೇದನ ಮಾಡುವೆನು. ಮತ್ತು ಶ್ರೇಷ್ಟತರವಾದ ಅಡಿಕೆ ಕರ್ಪೂರಗಳಿಂದೊಡಗೂಡಿದ ತಾಂಬೂಲವನ್ನು ನಿನಗರ್ಪಿಸುವೆನು.

ನೀರಾಜನಂ ತುಭ್ಯಮಹಂ ಸಮರ್ಪ್ಯ

ಸರ್ವೇಶವಂದ್ಯೇ ಸುತರಾಂ ಸಮಾಮಿ

ರಾಜೋಪಚಾರಾನ್ ಬಹುಧಾ ವಿಧಾಯ

ಸನ್ಮಂತ್ರಪೂತಂ ಸಮಮರ್ಪಯಾಮಿ ೨೧

ಸರ್ವೇಶ್ವರನಿಂದ ವಂದಿಸಲ್ಪಡುವ ಅಂಬಿಕೆಯೇ ! ನಿನಗೆ ಈ ನೀರಾಜನವನ್ನು ಅರ್ಪಿಸಿ, ಸಾಷ್ಟಾಂಗವಾಗಿ ನಮಸ್ಕರಿಸುವೆನು.ಮತ್ತು ಛತ್ರ ಚಾಮರಾದಿ ರಾಜೋಪಚಾರಗಳನ್ನು ನಿನಗರ್ಪಿಸಿ, ಈ ಮಂತ್ರಪುಷ್ಪವನ್ನು ಅರ್ಪಿಸುವೆನು.

ಆತ್ಮಾ ಹಿ ದೇವೀ ಲಲಿತಾಂಬಿಕೋಕ್ತಾ

ಕಾಮೇಶ್ವರಸ್ತತ್ ಪದಲಕ್ಷ್ಯಭೂತಂ

ಏತತ್ಸದೈಕ್ಯಂ ಪರಿಭಾವ್ಯ ನಿತ್ಯಂ

ಜೀವನ್ ಮುಕ್ತೋ ಭವತೀಹ ಲೋಕೇ ೨೨

“ಶ್ರೀ ದೇವಿಯನ್ನು ತನ್ನ ಆತ್ಮನೆಂತಲೂ, ಶ್ರೀ ಕಾಮೇಶ್ವರನನ್ನು ಪರಬ್ರಹ್ಮವೆಂತಲೂ ತಿಳಿದು, ಆ ಜೀವಾತ್ಮಪರಮಾತ್ಮರು ಹಾಲುನೀರುಗಳಂತೆ, ಚಂದ್ರಚಂದ್ರಿಕೆಯರಂತೆ, ಏಕತ್ವವನ್ನು ಹೊಂದಿಕೊಂಡಿರುವರೆಂಬುದು ಸಕಲೋಪನಿಷತ್ತುಗಳ ಸಿದ್ಧಾಂತವು” ಎಂದು ನಿತ್ಯದಲ್ಲೂ ಯಾವ ಉಪಾಸಕನು ಭಾವನೆ ಮಾಡುತ್ತಿರುವನೋ, ಅವನು ಈ ಲೋಕದಲ್ಲಿ ಬದುಕಿರುವಾಗಲೇ ಮುಕ್ತನಾಗಿರುವನೆಂದು(ಮೋಕ್ಷ ಹೊಂದಿದನೆಂದು) ತಿಳಿಯತಕ್ಕದ್ದು.

ಇತ್ಥಂ ಮುಹೂರ್ತತ್ರಯಭಾವನಾಭಿಃ

ನರೋ ಭವೇದ್ಯೋಗಿವರೇಷು ಗಣ್ಯಃ

ಅಯಂ ಸುಪೂಜಾವಿಧಿರಾತ್ಮಾಬುದ್ಧ್ಯಾ

ಪ್ರೋಕ್ತೋ ಮಯಾ ಮಂದತರೇಣ ದೇವಿ ! ॥೨೩॥

ಈ ರೀತಿಯಿಂದ ನಿತ್ಯವೂ ದೇವಿಯನ್ನು ಮಾನಸಪೂಜೆಯಿಂದ ಮೆಚ್ಚಿಸಿ ಕೇವಲ ಮೂರು ಮುಹೂರ್ತದ ಹೊತ್ತು ( ಆರು ಗಳಿಗೆಯ ಹೊತ್ತು) ಮೇಲೆ ಹೇಳಿದ ರೀತಿಯಿಂದ ಐಕ್ಯಭಾವನೆಯನ್ನು ಯಾರು ಮಾಡುವನೋ ಅವನು ಯೋಗೀಶ್ವರನಿಗೆ ಸಮಾನನಾಗುವನು. ಎಲೌ ದೇವಿಯೇ ! ಈ ರೀತಿಯ ನಿನ್ನ ಮಾನಸಪೂಜಾವಿಧಿಯನ್ನು ಅತ್ಯಂತ ಮಂದಬುದ್ಧಿಯಾದ ನಾನು, ನೀನು ಪ್ರೇರಣೆ ಮಾಡಿದ ರೀತಿಯಲ್ಲಿ, ಸ್ವಬುದ್ಧಿಯಿಂದ ಸ್ತೋತ್ರರೂಪವಾಗಿ ಹೇಳಿರುವೆನು.

ಏನಂ ಸುಪೂಜಾವಿಧಿಮಾದರೇಣ

ಶ್ರುಣ್ವನ್ನರೋ ಯಾತಿ ಸುಪುಣ್ಯಲೋಕಂ

ಕುರ್ವನ್ ಸುಭಕ್ತ್ಯಾ ಮನಸಾನುಗಮ್ಯಂ

ಪ್ರಾಪ್ನೋತಿ ಮೋಕ್ಷಂ ಮನುಜೈರಲಭ್ಯಂ ೨೪

ಈ ಮಾನಸಪೂಜಾ ಸ್ತೋತ್ರವನ್ನು ಭಕ್ತಿಯಿಂದ ಕೇಳುವ ಮನುಷ್ಯನು ಸ್ವರ್ಗ ಮುಂತಾದ ಪುಣ್ಯಲೊಕಗಳನ್ನು ಪಡೆಯುವನು. ಈ ವಿಧಿಯಂತೆ ಮಾನಸಪೂಜೆ ಮಾಡುವ ಮನುಷ್ಯನು ಸಾಮಾನ್ಯ ಜನರಿಗೆ ಪಡೆಯಲರಿಯದ ಮೋಕ್ಷವನ್ನೇ ಪಡೆಯುವನು.

ಅಖಿಲಜನಸಮೂಹೇ ಭ್ರಾಂತಿಮುತ್ಸಾರ್ಯ ನಿತ್ಯಂ

ಜನಯ ಜನಸುವಂದ್ಯೇ ಜ್ಞಾನಮಾನಂದರೂಪಂ

ದ್ವಿಜಸಮುದಯಮಧ್ಯೇ ಕ್ಷೇಮಮಾತ್ಮೈ ಕವೇದ್ಯಂ

ದಮಯ ನಿಗಮವಂದ್ಯೇ ದುಷ್ಟವೃಂದಂ ಸುಪುಷ್ಟಂ ೨೫

ಸಾಧುಜನರಿಂದ ವಂದಿಸಲ್ಪಡುವ ಹೇ ಜಗದೀಶ್ವರೀ ! ಸಮಸ್ತ ಜನಸಮೂಹದಲ್ಲಿರುವ ಅಜ್ಞಾನವನ್ನು ನಾಶಮಾಡಿ, ಅವರಲ್ಲಿ ಆನಂದರೂಪವಾದ ಜ್ಞಾನವನ್ನುಂಟುಮಾಡು. ದ್ವಿಜರ ಸಮೂಹದಲ್ಲಿ ಅವರವರ ಆತ್ಮಗಳಿಗೆ ಮಾತ್ರ ಗೋಚರವಾಗುವಂತಹ ಕಲ್ಯಾಣವನ್ನುಂಟುಮಾಡು. ವೇದಗಳಿಂದ ನಮಸ್ಕರಿಸಲ್ಪಡುವ ಹೇ ದೇವೀ ! ಅಭಿವೃದ್ಧಿ ಹೊಂದಿದ ದುಷ್ಟ ಸಮುದಾಯವನ್ನು ಶಮನ ಮಾಡು.

ಇತಿ, ಶ್ರೀ ಲಲಿತಾಮಾನಸಪೂಜಾಸ್ತೋತ್ರಂ ಸಂಪೂರ್ಣಂ.

~*~*~

2 thoughts on “ತೆಕ್ಕುಂಜ ಶಂಕರ ಭಟ್ಟ ವಿರಚಿತ ಶ್ರೀ ಲಲಿತಾಮಾನಸಪೂಜಾ ಸ್ತೋತ್ರಂ – ಉತ್ತರಾರ್ಧ

  1. ಒಪ್ಪ ಆಯಿದು, ತೆಕ್ಕುಂಜೆ ಅಜ್ಜ ಬರದ್ದು.
    ಸುಮಾರು – ಛಂದಸ್ಸು, ಮಾತ್ರಾ ಪ್ರಯೋಗಂಗಳಲ್ಲಿ ಪ್ರಯೋಗಮಾಡಿದ್ದವಪ್ಪೋ!
    ಸರಸ್ವತಿಯ ಒಲುಮೆಯೇ ಸರಿ! 🙂

  2. ಭಾರೀ ಲಾಯಕ ಇದ್ದು. ಶ್ಲೋಕ ಓದಲೆ ಖುಶೀ ಆವ್ತುದೆ. ಅಜ್ಜಂಗೆ ವಂದನೆ, ಮಾವಂಗೆ ಧನ್ಯವಾದ ಹೇಳುತ್ತು – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×