Oppanna.com

ಆಚಾರ ಬಿಟ್ಟೋರು ಅತ್ಯಾಚಾರವೇ ಮಾಡುಗಷ್ಟೆ..

ಬರದೋರು :   ಒಪ್ಪಣ್ಣ    on   28/12/2012    16 ಒಪ್ಪಂಗೊ

ಇಲ್ಯಾಣ ಛಳಿ ಸಾಕಾವುತ್ತಿಲ್ಲೇದು ಚುಬ್ಬಣ್ಣ ಉತ್ತರ ಭಾರತಕ್ಕೆ ಹೋದ್ದೂ ಆತು. ಹಿಮ ಬೀಳ್ಸರ ನೋಡುದೂ ಆತು, ಪಟ ತೆಗದೂ ಆತು. ಆ ಪಟಂಗಳ ನೋಡಿಯೇ ಒಳುದೋರಿಂಗೆ ಚಳಿ ಹಿಡುದತ್ತಪ್ಪೋ!
ಬೈಲಿಲಿ ಎಲ್ಲೋರಿಂಗೂ ಚಳಿ ಹಿಡುದರೂ – ಪೆರ್ಲದಣ್ಣಂಗೆ ಮಾಂತ್ರ ಮದುವೆ ಬೆಶಿ!
ಚಳಿಗಾಲಲ್ಲೇ ಮದುವೆ ಆಗು ಪೆರ್ಲದಣ್ಣೋ – ಹೇದು ದಶಂಬ್ರಲ್ಲಿ ಮದುವೆ ಆದ ಸುಭಗಣ್ಣ ಕೆಮಿಕುತ್ತಿದ್ದಾಡ.
ಒಪ್ಪಣ್ಣಂಗೆ ಅದೆಲ್ಲ ಅರಡಿಯ; ಅದಿರಳಿ!
~
ಹಾಂ – ಡೆಲ್ಲಿಯ ಶುದ್ದಿ ತೆಗದೆ ಅಲ್ಲದೋ, ಒಂದು ಸಂಗತಿ ನೆಂಪಾತು.
ಓ ಮನ್ನೆ ಪೊಸವಣಿಕೆ ಜೆಂಬ್ರಲ್ಲಿ ಚೂಂತಾರು ಕುಮಾರಣ್ಣ ಸಿಕ್ಕಿತ್ತಿದ್ದವು. ಅದರ್ಲಿ ಎಂತ ವಿಶೇಷ ಇದ್ದು – ಕೇಳಿದಿರೋ?
ಅವು ಚೂಂತಾರಿಲಿ ಇಪ್ಪದಲ್ಲ, ಡೆಲ್ಲಿಲಿಪ್ಪದು – ಡೆಲ್ಲಿಲಿ!
ಮದಲಿಂಗೆ ಕೊಡೆಯಾಲ, ಚಿಕ್ಕಮಂಗ್ಳೂರು ಹೇದು ಊರಿಲೇ ಇದ್ದರೂ – ಈಗ ದೊಡ್ಡ ಕುರ್ಶಿ ಡೆಲ್ಲಿಲಿ ಇಪ್ಪ ಕಾರಣ ಡೆಲ್ಲಿಗೆ ಟ್ರಾನ್ಸ್ವರು ಆಯಿದಾಡ. ಹಾಂಗೆ ಒಂದು ವಾರ ರಜೆ ಹಾಕಿ ಊರಿಂಗೆ ಬಂದ ಕಾರಣ, ಪೊಸವಣಿಕೆಗೂ ಒಂದು ಗಳಿಗೆ ಬಂದ ಕಾರಣ ಒಪ್ಪಣ್ಣಂಗೆ ಕಾಂಬಲೆ ಸಿಕ್ಕಿದವು.
ಬೇಂಕಿನವು ಹೇದ ಕೂಡ್ಳೇ ಲೆಕ್ಕಾಚಾರದ ಮಾತು ಮಾಂತ್ರ ಮಾತಾಡುಗಟ್ಟೇ – ಹೇದು ಚೆನ್ನೈಭಾವ ಹೇಳುಗು.
ಅವರ ಎಜಮಾಂತಿಯ ಸೋದರ ಮಾವನ ಕಂಡೋರು ಅದರ ಒಪ್ಪುಗುದೇ; 😉
ಆದರೆ ಚೂಂತಾರು ಕುಮಾರಣ್ಣ ಹಾಂಗಲ್ಲ, ಪುರುಸೊತ್ತಿದ್ದರೆ ಎಷ್ಟುದೇ ಮಾತಾಡುಗು; ಪುರ್ಸೊತ್ತಿಲ್ಲದ್ದರೆ ದೂರಂದಲೇ – ಎಷ್ಟುದೇ ನೆಗೆಮಾಡುಗು – ಮೋರೆನೋಡಿ.
ಪೊಸವಣಿಕೆಗೆ ಬಂದರೆ ಅವಕ್ಕೆ ಪುರುಸೊತ್ತೇ ಇದಾ – ಸುಭಗಣ್ಣ ದೊಡ್ಡಜ್ಜನ ಮನೆಲಿ ಪುರುಸೊತ್ತು ಮಾಡಿಗೊಂಡ ಹಾಂಗೆ.
ಸಾಧು ಸ್ವಭಾವದ ಪಾಪದ ಜೆನ; ಹಾಂಗಾಗಿ ಒಪ್ಪಣ್ಣಂಗೂ ಮಾತಾಡ್ಳೆ ಒಳ್ಳೆ ಜೆತೆ ಅಪ್ಪದು ಒಂದೊಂದರಿ. ಮೊನ್ನೆಯೂ ಮಾತಾಡಿದೆಯೊ.
~
ಡೆಲ್ಲಿಲಿ ಎಂತ ವಿಶೇಷ, ಕುಮಾರಣ್ಣಾ – ಕೇಳಿದೆ.
ಸೆಕೆಗಾಲ ಬಂದ್ರೆ ವಿಪ್ರೀತ ಸೆಕೆಯೂ, ಚಳಿಗಾಲ ಬಂದ್ರೆ ವಿಪ್ರೀತ ಚಳಿಯೂ ಡೆಲ್ಲಿಯ ವಿಶೇಷ. ಅದು ಬಿಟ್ರೆ ಬೇರೆಂತದ್ದೂ ಇಲ್ಲೆ! ಹೇಳಿ ನೆಗೆಮಾಡಿದವು. ಡೆಲ್ಲಿಲೇ ಕೂರ್ತೋರಿಂಗೆ ಹಾಂಗೆ ಅನುಸುದು ಸ್ವಾಭಾವಿಕವೇ; ಆದರೆ, ಡೆಲ್ಲಿ ಹಲವು ಕಾರಣಕ್ಕೆ ವಿಶೇಷ. ಹಲವು ಶುದ್ದಿಗೊ ಡೆಲ್ಲಿಂದ ಬತ್ತಾ ಇದ್ದು ಈಗ. ದೇಶದ ಮಟ್ಟಿಂಗೆ ವಿಶೇಷಂಗೊ ಸುರುಅಪ್ಪದೇ ಡೆಲ್ಲಿಲಿ ಇದಾ – ಗುಣಾಜೆಮಾಣಿಯೂ ಇದರ ಒಪ್ಪುಗು. 😉

ಎಂಗೊಗೆ ಮಾಂತ್ರ ದೆಹಲಿ, ದೆಹಲಿ ಹೇದು ದಿನಾಗುಳೂ ಪೇಪರಿಲಿ ಕಾಣ್ತು – ಹೇದೆ. ಮತ್ತೊಂದರಿ ನೆಗೆಮಾಡಿದವು.
ಹ್ಮ್, ಅದೊಂದು ಪ್ರತಿಭಟನೆ ಆಗ್ತಾ ಇದ್ದು, ಅದ್ರ ವಿಶಯ ಗೊತ್ತಿದ್ದಾ ನಿನಿಗೆ – ಕೇಳಿದವು.
ಪಕ್ಕನೆ ಯೇವ ವಿಶಯ ಹೇದು ಅಂದಾಜಿ ಆತಿಲ್ಲೆ ನವಗೆ. ಡೆಲ್ಲಿಲಿ ಪ್ರತಿಭಟನೆ ಹತ್ತು ಹಲವು ಕಾರಣಲ್ಲಿ ದಿನಾಗುಳೂ ನೆಡೆತ್ತರೂ – ಒಪ್ಪಣ್ಣನ ಹತ್ತರೆ ಮಾತಾಡುವಾಗ ನೆಂಪಾದ್ಸು ಯೇವದಪ್ಪಾ?! ಯೇವದರ ಹೇಳಿದ್ದು ಗೊಂತಾತಿಲ್ಲೆ – ಕೇಳಿದೆ.
ಅದೇ, ಒಂದು ಅತ್ಯಾಚಾರ ನಡ್ದು, ಅದಿಕ್ಕೆ ಮತ್ತೆ ಪ್ರತಿಬಟ್ಣೆ ನಡ್ದು, ಅದಿಕ್ಕೆ ಪೋಲೀಸು ಲಾಠೀಚಾರ್ಜು ನಡ್ದು, ಈಗ ದೇಶ ಇಡೀ ಅದ್ರ ಮಾತುಕತೆ ನಡಿತ್ತಾ ಇಪ್ಪುದು – ಗೊತ್ತಾಗಿಕ್ಕು ನಿನಿಗೆ ಕೇಳಿದವು.
ಎತಾರ್ತಕ್ಕೂ ಒಪ್ಪಣ್ಣಂಗೆ ಈ ಸಂಗತಿ ಗೊಂತಾಗಿತ್ತು, ಆದರೆ – ಹತ್ತರೊಟ್ಟಿಂಗೆ ಹನ್ನೊಂದು ಗಲಾಟೆ ಹೇದು ನಾವು ಗ್ರೇಶಿತ್ತು. ಅದರ ಗಂಭೀರತೆ ಇಷ್ಟೆಲ್ಲ ಇಪ್ಪದು ಅಂದಾಜಿ ಆಗಿತ್ತಿಲ್ಲೆ. ಕುಮಾರಣ್ಣ ಪಂಜಭಾಶೆಲಿ ನಿಧಾನಕ್ಕೆ ವಿವರ್ಸಿದವು.
ಅವು ಶಬ್ದಶಬ್ದ ಹೇಳುಲೆ ಒಪ್ಪಣ್ಣಂಗೆ ನೆಂಪಿರ, ಆದರೆ – ವಿಶಯ ಎಂತರ ಹೇದರೆ –
~

ಪ್ರತಿಭಟನೆಯ ರೋಷ, ಒಂದು ಅಕ್ಕನ ಮೋರೆಲಿ!
ಪ್ರತಿಭಟನೆಯ ರೋಷ, ಒಂದು ಅಕ್ಕನ ಮೋರೆಲಿ!

ಮೊನ್ನೆ ಒಂದಿನ ಒಂದು ಕೂಸು ಎಲ್ಲಿಗೋ ಹೆರಟದೋ, ಎಲ್ಲಿಗೋ ಹೋಪದೋ – ಮಾರ್ಗದ ಕರೆಂಗೆ ಬಂತು.
ಬಂದ ಬಸ್ಸಿಂಗೆ ಕೈ ಹಿಡುದತ್ತು, ಬಸ್ಸು ನಿಲ್ಲುಸಿತ್ತು, ಹತ್ತಿತ್ತು.
ಡ್ರೈವರುದೇ, ಮತ್ತೆ ನಾಕು ಜೆನವೂ ಇದ್ದದಾಡ ಆ ಬಸ್ಸಿಲಿ, ಇರಳಿ – ಹೋಯೇಕಾದಲ್ಲಿಂಗೆ ಹೋಯೇಕನ್ನೇ, ಅನಿವಾರ್ಯ.
ಬಸ್ಸು ಹೋಗಿಂಡೇ ಇದ್ದತ್ತು ಅದರಷ್ಟಕೇ.
ಹೋವುತ್ತ ಮಾರ್ಗದ ಪರಿಸರಲ್ಲಿ ಆರೂ ಇಲ್ಲದ್ದ ಜಾಗೆ ಎತ್ತಿ ಅಪ್ಪಗ ವಿಶಯವೇ ಬೇರೆ! ಎಂತರ?
ಆ ಡ್ರೈವರುದೇ – ಅಲ್ಲಿಪ್ಪ ಒಳುದ ಪುಳ್ಳರುಗಳೂ – ಎಲ್ಲೋರುದೇ ಒಂದೇ ಪಾರ್ಟಿಯೋರು!
ಅವೆಲ್ಲವೂ ಒಟ್ಟಾಗಿ ನಿರ್ಜನ ಪ್ರದೇಶಲ್ಲಿ ಈ ಒಬ್ಬಂಟಿ ಕೂಸಿನ ಮೇಗೆ ಅತ್ಯಾಚಾರ ಮಾಡಿ, ಬಸ್ಸಿಂದ ಬಲುಗಿ, ಮಾರ್ಗಕ್ಕೆ ಇಡ್ಕಿಕ್ಕಿ ಓಡಿದ್ದವಾಡ ಬೆಗುಡಂಗೊ!
ಆರೋ ಪುಣ್ಯಾದಿಗರು ಆ ದಾರಿಲಿ ಹೋವುತ್ತೋರು ಈ ಅಕ್ಕನ ಅವಸ್ಥೆ ಕಂಡು ಆಸ್ಪತ್ರೆಗೆ ಸೇರ್ಸಿದವಾಡ.
ಪಾಪ, ದೈಹಿಕ-ಮಾನಸಿಕ ಆಘಾತಂದಾಗಿ ಆ ಕೂಚಕ್ಕ ಈಗ ಚಿಂತಾಜನಕ ಪರಿಸ್ಥಿತಿಲಿ ಇದ್ದಾಡ.
ಇನ್ನೂ ಎಷ್ಟು ದಿನ ಬೇಕು ಹೇದು ಗೊಂತಿಲ್ಲೆ!
ಅಲ್ಲ, ಆ ಬೆಗುಡಂಗಳ ಹಿಡುದು ಜೈಲಿಲಿ ಮಾಡಿದ್ದವು ಈಗ, ಆದರೆ ಅವರ ಕ್ಷಣಿಕ ಹೀನ ಕೃತ್ಯಂದಾಗಿ ಕೂಸಿನ ಜೀವನ, ಜೀವಮಾನ ಪೂರ್ತಿ ಅನುಭವಿಸುತ್ತ ಹಾಂಗೆ ಆತು – ಹೇದು ಎಲ್ಲೋರುದೇ ಬೇಜಾರ ಮಾಡಿಗೊಳ್ತಾ ಇದ್ದವು – ಹೇಳಿದವು ಕುಮಾರಣ್ಣ.
ಈ ತೊಂದರೆ ಬಂದದೆಂತಕೆ? ಅಂತೇ – ದಾರಿಲಿ ಬಂದ ಬಸ್ಸಿಂಗೆ ಕೈ ಹಿಡುದು ಹತ್ತಿದ ಕಾರಣ! ಆ ಪೇಟೆಲಿ ಬಸ್ಸಿಂಗೆ ಹತ್ತುಲೂ ಗೊಂತಿಲ್ಲೆಪ್ಪೋ ಹಾಂಗಾರೆ! ಎಂತಾ ಅರಾಜಕತೆ! ಹೇಳುವೋರು ಕೇಳುವೋರೂ ಆರೂ ಇಲ್ಲೆಯೋ?

ಅಲ್ಲ, ಇದು ನಮ್ಮ ದೇಶದ ಯೇವದೋ ಒಂದು ಅನಾಗರಿಕ ಹಳ್ಳಿಲಿ ನೆಡದ ಸಂಗತಿ ಅಲ್ಲ, ನೆಡು ಪೇಟೆಲಿ! ರಾಜಧಾನಿಲಿ.
ಈ ದುರವಸ್ಥೆಯ ವಿರೋಧಿಸಿ ಸಾವಿರಾರು ಯುವಕ ಯುವತಿಯರು, ಚಿಂತಕರು ಎಲ್ಲೋರುದೇ ಸೇರಿ ಪ್ರತಿಭಟನೆ ಮಾಡಿಗೊಂಡಿತ್ತಿದ್ದವಾಡ.
ಸರಿ, ಮತ್ತೆ ಎಂತಾತು?
~
ರಾಜಧಾನಿಲಿ ಭದ್ರತೆ, ಸುವ್ಯವಸ್ಥೆ ಇಲ್ಲೆ – ಹೇದು ಸೇರಿದೋರು ದೆಹಲಿ ಸರಕಾರವ ಬೈದವು.
ರಾಷ್ಟ್ರಪತಿಯ ಭವನದ ಎದುರು ಎಲ್ಲೋರುದೇ ಕೂದುಗೊಂಡು ಪ್ರತಿಭಟನೆ ಮಾಡುವಾಗ ಏಕಾಏಕಿ ಪೋಲೀಸರ ಲಾಠೀಚಾರ್ಜು ನೆಡದತ್ತಾಡ. ಸುಮಾರು ಜೆನ ಪ್ರತಿಭಟನಾಕಾರರಿಂಗೆ ಪೊಳಿ ಬಿದ್ದತ್ತು. ಪಾಪದೋರಿಂಗೆ ಪೊಳಿ ಎಂತ್ಸಕ್ಕೇ ಹೇದು ಸರಕಾರ ಪೋಲೀಸರಿಂಗೆ ಬೈದತ್ತು.
ಸಣ್ಣ ಇಪ್ಪ ಸಂಗತಿಗಳ ದೊಡ್ಡಮಾಡಿ ಅನಗತ್ಯ ಭಯ ಉಂಟುಮಾಡ್ತವು ಹೇದು ಪೋಲೀಸರು ಮಾಧ್ಯಮದವರ ಬೈದವು.
ಮಾಧ್ಯಮದವರ ಮೇಗೆ ಅಪನಂಬಿಕೆ ಉಂಟಪ್ಪ ಹಾಂಗೆ ನೆಡೆತ್ತವು ಹೇದು ಮಾಧ್ಯಮದವು ಟ್ವಿಟ್ಟರು-ಮೋರೆಪುಟಲ್ಲಿಪ್ಪೋರ ಬೈದವು.
ಎಲ್ಲೋರುದೇ ಅತ್ತಿತ್ತೆ ಬೈಕ್ಕೊಂಡದೇ ಬೈಕ್ಕೊಂಡದು.
ಆದರೆ, ಅಲ್ಲಿ ಅತ್ಯಾಚಾರ ಮಾಡಿದೋರ ಬೈವಲೆ ಆರುದೇ ಇಲ್ಲೆ! ಪೋ!!
~
ಅತ್ಯಾಚಾರಿಗಳ ಬೈವದು ಒಂದು ಸಂಗತಿ; ಆರು ಬೇಕಾರೂ ಬೈಗು. ಆದರೆ ಆ ನಮುನೆಯೋರಿಂಗೆ ನಿಜವಾದ ಶಿಕ್ಷೆ ’ಬರೇ ಬೈದರೆ’ ಸಾಕೋ? ಸಾಲ. ಅಂತಹಾ ನಾಚಿಗೆ ಕೆಟ್ಟ, ಹೀನಾಯ ಕಾರ್ಯಂಗೊ ನೆಡೆಯದ್ದೆ ಇರೆಕ್ಕಾರೆ ಅದಕ್ಕೆಂತಾರು ಪಿರಿ ಆಗೆಡದೋ?
ಎಂತರ ಶಿಕ್ಷೆ ಕೊಡ್ಳಕ್ಕು ಹೇಳ್ತದರ – ಪೇಪರಿಲಿ, ಟೀವಿಲಿ, ರೇಡ್ಯಲ್ಲಿ, ಇಂಟರ್ನೆಟ್ಟಿಲಿ, ಮೋರೆಪುಟಲ್ಲಿ – ಸುಮಾರು ಜೆನ ಚರ್ಚೆ ಮಾಡಿದವು. ಎಲ್ಲೋರುದೇ ತಾಮುಂದು-ನಾಮುಂದು ಹೇದು ಅವರವರ ಅಭಿಪ್ರಾಯಂಗಳ ಹೇಳಿಗೊಂಡವಾಡ. ಎಲ್ಲೋರುದೇ ಮಾತಾಡಿದ್ದಕ್ಕೆ ಹಾಂಗಿರ್ತೋರಿಂಗೆ ಶಿಕ್ಷೆ ಆದ ಹಾಂಗಾತೋ? ಇಲ್ಲೆ.
~
ಕುಮಾರಣ್ಣನ ಅಭಿಪ್ರಾಯ ಪ್ರಕಾರ, ಎತಾರ್ತಕ್ಕೂ – ಶಿಕ್ಷೆ ಕೊಟ್ಟು ಸರಿಮಾಡುದರಿಂದಲೂ, ಈ ಸಮಸ್ಯೆಗೆ ಶಿಕ್ಷಣ ಕೊಟ್ಟೇ ಸರಿಮಾಡೇಕು. ಎಂತರ ಶಿಕ್ಷಣ? “ಸಂಸ್ಕಾರದ ಶಿಕ್ಷಣ”.
ಪ್ರತಿಯೊಬ್ಬ ಮಾಣಿ ಸಣ್ಣ ಇಪ್ಪಗಳೂ – ಅಮ್ಮ, ಅಕ್ಕ, ತಂಗೆ, ಚಿಕ್ಕಮ್ಮ, ಅತ್ತೆ, ಅಜ್ಜಿ – ಎಲ್ಲ ವೆಗ್ತಿತ್ವಂಗಳಲ್ಲೂ ತನ್ನ ಅಸ್ತಿತ್ವವ ಕಾಂಬಲೆ ಪ್ರೇರೇಪಣೆ ಮಾಡಿಗೊಂಡು, ಅವೆಲ್ಲ ಸಂಬಂಧಂಗಳ ಪ್ರೀತಿ ಸೇರಿಗೊಂಡ್ರೇ ತನ್ನ ಜೀವನ ಬೆಳೆಸ್ಸು – ಹೇಳ್ತದರ ತಿಳುಶಿಕೊಡೇಕು. ಬಾಲ್ಯಂದಲೇ ಸಾಹೋದರ್ಯಭಾವವ ತುಂಬುಸಿಬಿಟ್ರೆ ಮೂರ್ನೇಜೆನ ಸಿಕ್ಕಿ ಅಪ್ಪಗಳೂ ಅದೇ ಭಾವನೆಲಿ ಮಾತಾಡುಸಲೆ ಎಡಿತ್ತು. ಅತ್ತಿತ್ತೆ ಎಲ್ಲೋರನ್ನೂ ಅಕ್ಕ ತಂಗೆ ಹೇದು ಕಾಂಬಲೆ ಸುರುಮಾಡಿರೆ ಈ ಸಮಸ್ಯೆಯೇ ಇಲ್ಲೆನ್ನೇ?
ಸಂಸ್ಕಾರ ಹೇಳಿಕೊಡ್ತದು ಅಪ್ಪಮ್ಮನ ಕರ್ತವ್ಯ. ಒಂದು ಬಾಬೆ ಮುಂದಕ್ಕೆ ಒಳ್ಳೆಯೋನಾಗಿ ಬೆಳೆತ್ತನೋ, ಬೆಗುಡ ಆವುತ್ತನೋ – ಅರ್ಧಕ್ಕರ್ಧ ಕಾರಣ ಅವನ ಅಪ್ಪಮ್ಮಂದೇ ಇದ್ದವು, ಅಲ್ದೋ? ಹಾಂಗಾರೆ – ಮಕ್ಕಳ ಬೆಳವಣಿಗೆ / ದುರವಸ್ಥೆಲಿ ಅಪ್ಪಮ್ಮನ ಪಾತ್ರವೂ ಇದ್ದು. ಉದಾಹರಣೆಗೆ, ಅತ್ಯಾಚಾರಿಗೆ ಶಿಕ್ಷೆ ಕೊಡ್ತರ ಒಟ್ಟಿಂಗೇ ಅವರ ಅಪ್ಪಮ್ಮಂಗೂ ಕೊಡೆಕ್ಕು ಹೇಳ್ತದು ಕುಮಾರಣ್ಣನ ಭಾವನೆ. ಅಲ್ಲದ್ದಲ್ಲ – ಅಪ್ಪಮ್ಮ ಸರಿಯಾದ ಬುದ್ಧಿ ಕಲುಶಿದ್ದರೆ ಹಾಂಗಿರ್ಸ ಒಂದು ಸಾಮಾಜಿಕ ಪೀಡೆ ಹುಟ್ಟುತಿತೇ ಇಲ್ಲೆ. ಆಚಾರ ಬಿಟ್ಟ ಹುಳುಗಳೇ ಮುಂದೊಂದು ದಿನ ಅತ್ಯಾಚಾರಿಗೊ ಆಗಿ ಬೆಳವದು.
ಅಲ್ಲದೋ? ಕುಮಾರಣ್ಣ ಹೇಳಿದ ಸಂಗತಿ ಅಪ್ಪದ್ದೇ. ಅವು ಹೇಳುವಾಗ ಮಾಂತ್ರ ಮನನ ಆದ್ಸಲ್ಲದ್ದೆ, ಆ ಸಂಗತಿಗಳ ಬೈಲಿಂಗೆ ಹೇಳುವ ಹೇದೂ ಅನುಸಿತ್ತು.
~
ನಮ್ಮ ಭಾರತೀಯತೆಲಿ ಸ್ತ್ರೀಗಳ ಮಾತೆ ಹೇದು ಕಾಂಬ ಸಂಸ್ಕಾರ ಇದ್ದತ್ತು. ನಾರಿಯರ ಪೂಜೆ ಮಾಡ್ತಲ್ಲಿ ದೇವತೆಗಳ ಸಂಚಾರ ಇರ್ತು – ಹೇದು ನಂಬಿದ ಸಂಸ್ಕೃತಿ ನಮ್ಮದು. ಪ್ರತಿಯೊಬ್ಬಂಗೂ ಅವನದ್ದೇ ಆದ ಸಂಸಾರ. ಅದರ ಚೆಂದಲ್ಲಿ ಸಾಗುಸಿ, ಜೀವನವ ಪರಿಪೂರ್ಣಗೊಳುಶುತ್ತದು ಮೋಕ್ಷದಾರಿ ಹೇದು ನಾವು ತಿಳ್ಕೊಂಬದು.
ಈಗ ಅದೆಲ್ಲದರನ್ನೂ ನಾವು ಬಿಟ್ಟು, ದೂ..ರ ಮಾಡಿ, ಪಾಶ್ಚಾತ್ಯ ಅಂಧಾನುಕರಣೆಲಿ ಬದ್ಕುತ್ತಾ ಇದ್ದು.
ಅಜ್ಜಂದ್ರು ಕೂಡಿಮಡಗಿದ ಉನ್ನತ ಮೌಲ್ಯಂಗಳ, ಜೀವನಕ್ರಮಂಗಳ ಸಂಪೂರ್ಣವಾಗಿ ದೂರೀಕರುಸುತ್ತಾ ಇದ್ದು. ಹೋಗಲಿ, ಕೆಲವು ಅಂಧಾನುಕರಣೆಗಳ ಬಿಡುವೊ, ಆದರೆ ಅದರ ಸಾರವನ್ನೂ ಬಿಟ್ರೆ ಜೀವನ ಇದ್ದೋ?
~
ಒಂದು ಕೂಸು ಹುಟ್ಟುವಾಗಳೇ ಆ ಮನೆಯ ಬೆಳಗುತ್ತು. ಮುಂದೆ ಬೆಳದ ಮತ್ತೆ ಇನ್ನೊಂದು ಮನೆಯ ಬೆಳಗುತ್ತು.
ಅರ್ಥಾತ್, ಒಂದು ಕೂಸು ಹೇದರೆ ಒಂದು ಭಾವೀ ಅಮ್ಮ.
ಹಾಂಗಿಪ್ಪಗ, ಅಂತಾ ಅಮ್ಮಂಗೆ ತೊಂದರೆ ಕೊಡ್ಸು ಸರಿಯೋ?
“ನಮ್ಮ ಅಮ್ಮನೇ ಆ ಪರಿಸ್ಥಿತಿಲಿದ್ದರೆ ಎಂತಕ್ಕು?” – ಎಲ್ಲ ಅತ್ಯಾಚಾರಿಯೂ ಈ ಸಂಗತಿಯ ಆಲೋಚನೆ ಮಾಡಿರೆ, ಸನಾತನಿಯಾಗಿ ಬದ್ಕೇಕಾದ ಸಂಗತಿ ಅರಡಿಗು.
ಅಲ್ಲದೋ?
~
ಒಂದೊಪ್ಪ: ಭಾರತೀಯತೆಲಿ ಯೋಗ ಇದ್ದು, ಪಾಶ್ಚಾತ್ಯತೆಲಿ ಭೋಗ ಇದ್ದು.

16 thoughts on “ಆಚಾರ ಬಿಟ್ಟೋರು ಅತ್ಯಾಚಾರವೇ ಮಾಡುಗಷ್ಟೆ..

  1. ಹರೇ ರಾಮ, ಒಪ್ಪಣ್ಣ.
    ಬರದ್ದು ಭಾಳ ಚೆಲೋ ಆಜು ಎಳ್ಳಿಯಡ್ಕ.
    ” ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ||” ಹೇಳ ಆರ್ಷೋಕ್ತಿ ಇದ್ದಲ. ಅಲ್ಲಿ ‘ನಾರೀ’ ಹೇಳ ಪದನೇ ಉಪಯೋಗಿಸಿದ್ದ, ಪರ್ಯಾಯ ಪದಗಳಾದ.. ಸ್ತ್ರೀ, ಮಹಿಲಾ, ಯೋಷಿತ್, ದಾಮಿನೀ, ಭಾಮಿನೀ, ಕಾಂತಾ, ಅಬಲಾ ಇತ್ಯಾದಿ ಬಳಶಿದ್ವಿಲ್ಲೆ. ಅಲ್ದಾ. ಹೆಣ್ಕುಲ ನಾರೀ ಆಗಿಪ್ಪಲೆ ಪ್ರಯತ್ನ ಮಾಡವು. ಪೂರ್ಣ ಅಲ್ದಿದ್ರೂ ಕೆಲು ಪ್ರಮಾಣ ನಿಯಂತ್ರಣ ಆಗ್ತು. ಇಂದ್ರಣ ಕನ್ನಡ ಪ್ರಭದಲ್ಲಿ ಒಬ್ಬರು ಭಟ್ರು ಚೆಲೋ ಬರೆಜ ಓದು.
    24 ವರ್ಷಗಳ ಕೆಳಗೆ ಯಂಗಳ ಉತ್ತರಕನ್ನಡದ ಒಂದ್ ಕಡೆ ಒಂದು ತರುಣಿ….. ಕ್ಲಾಸ್ ಮೇಟ್ ಒಬ್ಬನ ಹತ್ರ.. ನಿನ್ ಹತ್ರೆ ಯನ್ನ ಸೋಲಸುಲೆ (ರತಿಕ್ರೀಡೆಯಲ್ಲಿ) ಆಗ್ತಿಲ್ಲೆ ಅಂತಡ ! ಮುಂದವರಿದು ನೀ ವಬ್ಬ ಅಲ್ಲ. ಇನ್ನಿಬ್ರ ಬಂದ್ರೂ ಆಗ್ತಿಲ್ಲೆ ಅಂತಡ. ಅಂವ ಅದಕ್ಕೆ ಛಲೇಂಜ್ ಮಾಡಿ ನಾಲ್ಕ ಜನರ ಕರ್ಕಂಡು ಹೋಟ್ಳ ರೂಮಿಗೆ ಹೋದ, ಡೆಲ್ಲಿಲಿ ಈಗ ಆದಾಂಗೆ ಅಲ್ಲೂ ಆತು. ಆದ್ರೆ ಕೂಸ್ ಸತ್ ಹೋಯ್ದಿಲ್ಲೆ. ಈಗ ಗನಾ ಚಿಕ್ಕಿ. ಹಾಂಗೆಯೇ ಡೆಲ್ಲಿ ಕಥೆಗೂ ಎಂಥೋ ಹಿನ್ನೆಲೆ ಇದ್ದು. ಮುಣ್ಶಿಕಾನ್ ಬಾವ ಹೇಳ್ದಂಗೆಯಾ.

  2. ಢೆಲ್ಲಿಲಿ ಆದ ಅತ್ಯಾಚಾರದ ಘಟನೆ ಖಂಡನೀಯ. ಆದರೆ ಜೆನಂಗೊ “ಇದಕ್ಕೆ ನಿಜವಾದ ಕಾರಣ ಆರು” ಹೇದು ಹುಡುಕುವುದರ ಬದಲು ಸುಮ್ಮನೆ ಪ್ರತಿಭಟನೆ ಮತ್ತೊಂದು ಹೇಳಿ ತಮ್ಮ ತಮ್ಮ ಬೇಳೆ ಬೇಯಿಶುಲೆ ನೋಡ್ತವು ಅಷ್ಟೆ.

    ಉದಾಹರಣೆಗೆ ರಾಜಕಾರಿಣಿಗೊ ಇದರ ಮುಂದಾಣ ಚುನಾವಣೆ ಪ್ರಚಾರಲ್ಲಿ ಬಳಸುಗು. ಮತ್ತೆ ಕೆಲವು ಜೆನ ಮೋರೆಪುಟಲ್ಲಿ ಸುಮ್ಮನೆ “Like/Comment” ಬಪ್ಪಲೆ ಬೇಕಾಗಿ ಮಾತ್ರ ಎಂತಾರು ಹಾಂಗೆ ಹೀಂಗೆ ಹೇಳಿ ಬರತ್ತವು ಹೊರತು ಬೇರೆ ಯಾವ ಉದ್ದೇಶವೂ ಅವಕ್ಕೆ ಇಲ್ಲೆ. ಎಂತಗೆ ಹೇದರೆ ದಿನಾಲೂ ಒಂದಲ್ಲದ್ದರೆ ಇನ್ನೊಂದು ರೀತಿಲಿ ಸುಮಾರು ಅತ್ಯಾಚಾರ ಆವ್ತಾ ಇದ್ದು. ಅದೂ ದೇಶದ ಅತ್ಯಂತ ಪ್ರಮುಖ ವೆಗ್ತಿಗಳ ಕೈಯಿಂದಲೇ ಆವ್ತಾ ಇದ್ದು. ಆದರೆ ಇದರ ಬಗ್ಗೆ ಆರೂ ಮಾತಾಡ್ತವೇ ಇಲ್ಲೆ.

    ಮತ್ತೆ ಒಪ್ಪಣ್ಣ ಹೇದ ಹಾಂಗೆ ಮಕ್ಕೊಗೆ ಅಪ್ಪ ಅಮ್ಮಂದಿರು ಸಂಸ್ಕಾರವ ಹೇಳಿ ಕೊಡೆಕು. ಆದರೆ ಸಂಸ್ಕಾರವಂತರೂ ಕೆಲವು “ಸಂಸ್ಕಾರ”ಂಗಳ ಪಾಲಿಸೆಕ್ಕು. ಕೆಲವು ಕೂಚಕ್ಕಂಳ ಬಟ್ಟೆಬರೆ ನೋಡಿದರೇ ಇದು ಗೊಂತಾವ್ತು. ಆದರೆ ಅವು ಎಂತ ಅವಿದ್ಯಾವಂತರ ಹೇದು ಕೇಳಿರೆ ಅದಕ್ಕೆ ಉತ್ತರ ಕೊಡುಲೆ ಕಷ್ಟ ಅಕ್ಕು.

    ಅತ್ಯಾಚಾರ ಮಾಡಿದವು ಆರೇ ಆಗಿರಳಿ ಅವರ ನಡುಮಾರ್ಗಲ್ಲಿ ಕಟ್ಟಿಹಾಕಿ ಕಲ್ಲು ಹೊಡೆದು ಸಾಯ್ಸೆಕ್ಕು. ಸುಮ್ಮನೆ ಜೈಲು ಶಿಕ್ಷೆ ಕೊಟ್ಟರೆ ಬಿಡುಗಡೆ ಆದಪ್ಪಗ ಪುನ: ಬಂದು ಇನ್ನೊಂದು ಅತ್ಯಾಚಾರ ಮಾಡುಗು. ನಾಯಿಗೊಕ್ಕೆ ಒಂದರಿ ಮಾಂಸದ ರುಚಿ ಸಿಕ್ಕಿದರೆ ಮತ್ತೆ ಅವು ಅದರ ತಿಂಬದು ಬಿಡುಗೊ? ಎಂತ ಹೇಳ್ತಿ?

  3. ಸಮಯೋಚಿತ ಲೇಖನ .

    ತಾನು ಅಸುನೀಗಿ ದೇಶಲ್ಲಿ ಎಲ್ಲೋರ ಒರಕ್ಕಿಂದ ಎಬ್ಬಿಸಿದ ಆ ಕೂಸಿನಳ ಇತ್ತಿದ್ದ ಚೇತನಕ್ಕೆ ನಮೋ ನಮಃ.

    ” ಉದಾಹರಣೆಗೆ, ಅತ್ಯಾಚಾರಿಗೆ ಶಿಕ್ಷೆ ಕೊಡ್ತರ ಒಟ್ಟಿಂಗೇ ಅವರ ಅಪ್ಪಮ್ಮಂಗೂ ಕೊಡೆಕ್ಕು ಹೇಳ್ತದು ಕುಮಾರಣ್ಣನ ಭಾವನೆ ” —-ಕುಮಾರಣ್ಣನ ಈ ಭಾವನೆ ಓದಿ ಅಪ್ಪಗ ಎನಗೊಂದು ಕಥೆ ನೆನಪಾತು .

    ಒಬ್ಬ ಅಪ್ಪಂಗೆ ೨ ಜನ ಗಂಡು ಮಕ್ಕೊ. ಒಬ್ಬ ಕಲ್ತು ಐ.ಪಿ.ಎಸ್ ಅಧಿಕಾರಿ ಆದಡ. ಮತ್ತೊಬ್ಬ ಅಪರಾಧ ಮಾಡಿ ಜೈಲಿಲಿ ಶಿಕ್ಷೆ ಅನುಭವಿಸಿಗೊಂದು ಇತ್ತಿದ್ಡಡ. ಮಾಧ್ಯಮದೋರು ಇವರ ಅವಸ್ಥೆ ನೋಡಿ ಸಂದರ್ಶನಕ್ಕೆ ಬಂದವಡೊ. ೨ ಜನ ಮಕ್ಕಳು ತಮ್ಮ ತಮ್ಮ ಪ್ರಸ್ತುತ ಪರಿಸ್ಥಿತಿಗೆ ಅಪ್ಪನೇ ಕಾರಣ ಹೇಳಿದವಡ. ಮಾಧ್ಯಮದವಕ್ಕೆ ಆಶ್ಚರ್ಯ. ಅದು ಹೇಂಗೆ ಹೇಳಿ ಕೇಳದವಡ.

    ಐ ಪಿ ಎಸ್ ಅಧಿಕಾರಿ ಹೇಳಿದ°- ಅಪ್ಪ°, ಎಂಗೋ ಸಣ್ಣದಿಪ್ಪಗ ಕುಡುದು, ಜೂಜಾಡಿ ಇರುಳು ಮನಗೆ ಬಕ್ಕು. ಅಮ್ಮಂಗೆ ಬಡುದು ಚಿತ್ರ ಹಿಂಸೆ ಕೊಡುಗು. ಆನು ಅಷ್ಟಪ್ಪಗಳೇ ಅಪ್ಪನ ಹಾ೦ಗೆ ಅಪ್ಪಲಾಗ ಹೇಳಿ ತೀರ್ಮಾನಿಸಿತ್ತಿದ್ದೆ. ಆನು ಇಂದು ಅಪ್ಪ೦ದಾಗಿ ಈ ಸ್ಥಿತಿಲಿ ಇದ್ದೆ.
    ಕೈದಿದೆ ಹೇಳಿದ°- ಆನು ಅಪ್ಪನ ನೋಡಿಯೇ ಕಲ್ತದು . ಎನಗೆ ಬೇಕಾದ ಹಾ೦ಗೆ ಬದುಕೆಕಾರೆ ಅಪ್ಪನ ಹಾ೦ಗೆ ಮಾಡುದೇ ಸೂಕ್ತ ಹೇಳಿ ಎನಗೆ ಕ೦ಡತ್ತು . ಹಾ೦ಗಾಗಿ ಇಂದು ಇಲ್ಲಿದ್ದೆ .

    ಕಾರಣ ಒಬ್ಬನೇ – ಅಪ್ಪ°. ಪರಿಣಾಮ ಬೇರೆ ಬೇರೆ. ಅಬ್ಬೆ ಅಪ್ಪನ ದೂರುವ ಬದಲು ನಾವು ಆಲೋಚನೆ ಮಾಡೆಕಾದ ವಿಷಯ ಇದ್ದು . ಅಪ್ಪ ಅಮ್ಮ ಸಂಸ್ಕಾರವಂತರಾದ ಕೊಡಲೇ ಅವರಿಂದ ಅದೇ ರೀತಿಯ ಸಂಸ್ಕಾರ ಇಪ್ಪ ಮಕ್ಕೊ ಬೆಳದು ಬಕ್ಕು ಹೇಳಿ ನಿರೀಕ್ಷೆ ಮಾಡಿಕ್ಕೊಂಬದು ಸರಿಯೋ? ಇದಕ್ಕೆ ಗಾಂಧಿಯ ಮಗ ಹರಿಲಾಲ್ ಗಾ೦ಧಿಯೇ ಒಂದು ಉದಾಹರಣೆ. ಒಂದು ಹ೦ತದ ವರೆಗೆ ಅಬ್ಬೆಪ್ಪಂಗೆ ಮಕ್ಕಳ ತಪ್ಪಿನ ತಿದ್ದುಲೆಡಿಗು. ಮಕ್ಕೊ ವಯಸ್ಕರಾದ ಮತ್ತೆ ಒಳ್ಳೆದು, ಕೆಟ್ಟದರ ವಿವೇಚನೆ ಮಕ್ಕಳೆ ಮಾಡೆಕಷ್ಟೇ. ಮಕ್ಕೊ ಮಾಡಿದ ತಪ್ಪಿಂಗೆ ಅಪ್ಪ ಅಮ್ಮ೦ಗೆ ಶಿಕ್ಷಣ ಕೊಡುಲಕ್ಕು. ಶಿಕ್ಷೆ ಕೊಡುದು ಯಾವ ನ್ಯಾಯ? ಅಂತಹ ಮಕ್ಕಳ ಹೆತ್ತದಕ್ಕೆ ಅನುಭವಿಸೆಕ್ಕಾದ ಮಾನಸಿಕೆ ಹಿಂಸೆಯೇ ಸಾಲದೋ?

    ಡೆಲ್ಲಿಲಿ ನಡದ ಘಟನಗೆ, ಮತ್ತೆ ದೇಶಲ್ಲಿಪ್ಪ ಇನ್ನೆಷ್ಟೋ ಅವ್ಯವಸ್ತೆಗೆ ಸಮಯಕ್ಕೆ ಸರಿಯಾಗಿ ನ್ಯಾಯ ಸಿಕ್ಕದ್ದೇ ಅಪ್ಪಲೆ ನಮ್ಮಲ್ಲಿಪ್ಪ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹೇಳುವ ೩ ವ್ಯವಸ್ತೆಗೊ. ಒಂದರಿಂದೊಂದರ ಅವಲಂಬಿಸಿಗೊಂಡಿಪ್ಪದೆ ಕಾರಣ ಹೇಳಿ ಎನಗೆ ಕಾ೦ಬದು. ಆರಕ್ಷಕ ವ್ಯವಸ್ತೆ ಖಾಸಗಿ ಕಂಪೆನಿಗಳ ಕೈಲಿ ಇದ್ದರೆ ಹೇಂಗಕ್ಕು?

    1. ಹಿ೦ದುಳುದ ಹಿಂದುಗೊ ಮುಂದೆ ಬಪ್ಪಲೆ ಹಿಂದೆ ಹಿರಿಯರು ಛ೦ದ್ದಸ್ಸಿಲಿ ಬರದ ಶಾಸನ , ಅವು ಬರದ ಅರ್ಥಲ್ಲಿ ನವಗೆ ಬ್ರಾಹ್ಮರಿಂಗೆ ನೆನಪ್ಪಿದ್ದರೆ ಒಳ್ಳೆದಲ್ಲದೋ ? ಮಾತೃ ದೇವೋಭವ , ಪಿತೃ ದೇವೋಭವ , ಆಚಾರ್ಯ ದೇವೋಭವ,ಅಥಿತಿ ದೇವೋಭವ ಹೇಳಿ ಬರದ್ದವಲ್ಲದಾ ? ಇದರ ಸಮಾಜದ ಘಟನೆ ನೋಡಿಗೊಂಡು ಬದಲುಸಿ ಬರವದ ? ಅಥವಾ ನಮ್ಮ ಮನಸ್ಸಿಲಿ ಇರೆಕ್ಕಾದ್ದ ?
      ಅದು ”ಧರ್ಮೋ ರಕ್ಷತಿ ರಕ್ಷಿತ: ” ಹೇಳುದಕ್ಕೆ ಸಮ ಆವುತ್ತಿಲೆಯೋ ? ಪ್ರಸ್ತುತ ಸಂದರ್ಭಲ್ಲಿ ಎಲ್ಲೋರಿಂಗೂ ಸರಿಯಾದ ಉತ್ತರ ಸಿಕ್ಕುಗಾ?
      ಭಾಷಾ ಸೇವೆ ಮಾಡುವಗ ಮೇಲೆ ತೋರುಸಿದ ಹಾಂಗಿಪ್ಪ ಅನಾಚರದ ಮಾತುಗಳ ಬರವದಕ್ಕೆ ಆರು ಜವಾಬ್ದಾರಿ ? ಕಥೆ೦ದ ಎಂತಾರು ನೀತಿ ಅರ್ಥ ಆವುತ್ತಾ ?

  4. ಸಮಯಕ್ಕೆ ಸರಿಯಾಗಿ ಬಂದ ಸೂಕ್ತ ಲೇಖನ. ಎಲ್ಲರೂ ಬದಲಾಗಲಿ ಹೇಳಿ ಆಶಿಸುವ ಬದಲು ನಾವು ನಮ್ಮ ಜಾಗ್ರತೆಲಿ ಇದ್ದು ,ಬದಲಪ್ಪದೇ ಉತ್ತಮ

  5. ಸಂಬಂಧ ಸಂಸ್ಕೃತಿ ಇದರ ಮೌಲ್ಯವ ಕಳಕೊಡಕಾರಣ ಹೀಂಗೆ ಅಗ್ತೋ ಎನೊ? ಖೇದದ ವಿಚಾರ ನಮ್ಮ ಸಮಜಲ್ಲಿ..ಎಳವೆಲಿಯೆ ನಮ್ಮ ಸಂಸ್ಕೃತಿಯ ಹೇಳಿಕೊಟ್ಟರೆ ಸರಿ ಅಕ್ಕು.

  6. ಎಲ್ಲರೂ ಸಂಸ್ಕಾರವಂತರೇ ಆದರೆ ಹೀಂಗಿಪ್ಪ ಘಟನೆಗೊ ನೆಡೆಯ ಹೇಳುವದು ಸತ್ಯ.
    ಎಂಗೊ ಶಾಲೆಗೆ ಹೋಪಗ ಉದಿಯಪ್ಪಗ ಅಸೆಂಬ್ಲಿ ಆದ ಮತ್ತೆ ಪ್ರತಿಜ್ನಾ ಸ್ವೀಕಾರ ಹೇಳ್ತ ಕಾರ್ಯಕ್ರಮ ಇತ್ತಿದ್ದು.
    ಅದು ಸುರು ಅಪ್ಪದು ಹೀಂಗೆಃ-
    “ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು….”
    ಈಗ ಸಂಸ್ಕಾರ ಶಿಕ್ಷಣ ಕೊಟ್ಟರೆ “ಕೇಸರೀಕರಣ” ಹೇಳಿ ಬೊಬ್ಬೆ ಹಾಕುವ ಬುದ್ಧಿ ಜೀವಿಗೊ ಬೇಕಾಷ್ಟು ಜೆನಂಗೊ ಇಕ್ಕು, ಆದರೆ ಅವು ಅತ್ಯಾಚಾರವ ಖಂಡಿಸುವ ಕನಿಷ್ಟ ಸೌಜನ್ಯವೂ ಕೂಡಾ ಇಲ್ಲದ್ದವು.
    ಶಿಕ್ಷಣ ಸಿಕ್ಕದ್ದೆ ಈ ರೀತಿ ವರ್ತಿಸುವಕ್ಕೆ ಅತ್ಯಂತ ಉಗ್ರವಾದ ಶಿಕ್ಷೆ ಕೊಡೆಕ್ಕಾದ್ದು ಕೂಡಾ ಕಾನೂನಿನ ವ್ಯಾಪ್ತಿಲಿ ಬಂದು ಜ್ಯಾರಿ ಆಯೆಕ್ಕು.

  7. ಪೈಸೆ ಮಾಡೆಕ್ಕು, ಅಗ್ಗದ ಜನಪ್ರಿಯತೆ ಬೇಕು ಹೇಳಿ ಮನಸ್ಸಿಲಿ ಲೆಕ್ಖ ಹಾಕಿಗೊಂಡು, ತೋರಿಕೆಗೆ ಸಮಾಜಲ್ಲಿ ನಡವದನ್ನೇ ನೈಜವಾಗಿ ತೋರಿಸುತ್ತೆ ಹೇಳ್ತಾ ಕೆಟ್ಟದರ ವೈಭವೀಕರಿಸಿ ತೋರಿಸುವ TV ಸೀರಿಯಲ್ ಗಳೂ, ಸಿನೆಮಾಗಳೂ ಈ ಅಧ:ಪತನಕ್ಕೆ ಕಾರಣ ಹೇಳಿ ಎನ್ನ ಭಾವನೆ. ನಮ್ಮ ಸೆನ್ಸಾರ್ ನೋವು ಎಂತ ಮಾಡ್ತಾ ಇದ್ದವೋ ಏನೋ. ಎಲ್ಲದಕ್ಕೂ ಅನುಮತಿ ಕೊಡ್ತವು. ದಂಡು ಪಾಳ್ಯಕ್ಕೆ ಕೋರ್ಟೂ ಕೂಡಾ permission ಕೊಟ್ಟತ್ತು. ಅದರ ಜಾಹಿರಾತು ನೋಡಿಯೇ ಹೊಟ್ಟೆ ತೊಳಸಿತ್ತು ಎನಗೆ.

    ಕಾನೂನು ಪ್ರಕ್ರಿಯೆ ಲಿ ಅಪ್ಪ ವಿಳಂಬಂದಾಗಿ ಶಿಕ್ಷೆಯ ಹೆದರಿಕೆ ಇಲ್ಲದ್ದದೂ ಇನ್ನೊಂದು ಕಾರಣ.

  8. ಆ ಕೂಸು ಇಂದು ಉದಿಯಪ್ಪಗ ೪.೪೦ಕ್ಕೆ ಸತ್ತತ್ತು ಹೇಳಿ ಗೊಂಥಾತು.. ಆತ್ಮಕ್ಕೆ ಶಾಂತಿ ಸಿಕ್ಕಲಿ

  9. ಹಳ್ಳಿಲಿಯೇ ಹೆಚ್ಚಾಗಿ ನಡತ್ತ ಇಂಥ ಅನಾಗರಿಕ ಘಟನೆಗೊ ಡೆಲ್ಲಿಲಿ ನಡದತ್ತು ಹೇಳಿ ಆದರೆ ಇನ್ನು ಎಂತೆಲ್ಲ ಅಪ್ಪಲಿದ್ದೊ. ಗಾಂಧೀಜಿಯ ರಾಮರಾಜ್ಯದ ಕನಸು ಕೇವಲ ಕನಸಾಗಿಯೇ ಒಳಿಗು ಹೇಳಿ ಕಾಣ್ತು

  10. ಒಪ್ಪಣ್ಣಾ,ಈಗ ನೆಡೆತ್ತಾ ಇಪ್ಪದು ಮಾನವ ಸ೦ಕುಲ ತಲೆ ತಗ್ಗುಸೆಕ್ಕಾದ ವಿಷಯ.
    ಡಾರ್ವಿನನ ಸಿದ್ಧಾ೦ತವ ”ವಿಕಾಸ ವಾದ” ಹೇಳಿ ದೆನಿಗೇಳಿದವು,ಮ೦ಗ೦ದ ಮಾನವ ಆಗಿ ‘ವಿಕಸನ’ಆತು ಹೇಳಿ.ಹಾ೦ಗಾರೆ ಈಗ ನಾವು ಮು೦ದುವರಿವದು ಹೋಪದು ದಾನವತ್ವದ ಹೊಡೆ೦ಗೋ?ನಾವು ವಿದ್ಯೆಯ ಕಲ್ತುಗೊ೦ಡು ಮು೦ದೆ ಹೋಪ ಹಾ೦ಗೇ ಒಟ್ಟಿ೦ಗೆ ಪ್ರಜ್ಣೆಯನ್ನೂ ಬೆಳೆಶಿಗೊಳ್ಳೆಕ್ಕು ಹೇಳ್ತದು ಸರ್ವಕಾಲಿಕ ಸತ್ಯ.ಇ೦ದು ನಮ್ಮಲ್ಲಿ ಸ೦ಸ್ಕಾರವ ಮೈಗೂಡುಸಿಗೊ೦ಡು ಬದುಕ್ಕೆಕ್ಕು ಹೇಳಿ ಯೋಚನೆ ಮಾಡುವವ್ವೆ ವಿರಳ ಆಯಿದವು.ಅರಿಷಡ್ವರ್ಗ೦ಗಳ ಬೆಳೆಶಿಗೊ೦ಡರೆ ಸಮಾಜಲ್ಲಿ ದೊಡ್ಡ ಸ್ಥಾನ ಸಿಕ್ಕುತ್ತು ಹೇಳ್ತ ಮೂರ್ಖತನದ ಮಟ್ಟಕ್ಕೆ ಇಳಿತ್ತಾ ಇದ್ದು ಇ೦ದ್ರಾಣ ಸಮಾಜ.
    ಸ೦ಸ್ಕಾರ ಇಲ್ಲೆ , ಪೆಟ್ಟಿನ ಹೆದರಿಕೆಯೂ ಇಲ್ಲೆ.ಪಶ್ಚಿಮಲ್ಲಿ ”ಆನು,ಎನ್ನ ಬದುಕು” ಹೇಳ್ತ ಸ್ವಾತ೦ತ್ರ್ಯ ಕಾಣುತ್ತು,ಅದು ಸಮಾಜವ ಎಷ್ಟು ಹೊ೦ಡಕ್ಕೆ ಇಳುಸಿದ್ದು ಹೇಳಿ ಅವಕ್ಕೆ ಗೊ೦ತಾವುತ್ತಾ ಇದ್ದು.ಆದರೆ ಈ ರೀತಿಯ ಕ್ರೌರ್ಯ, ಲೋಕಲ್ಲಿ ಎಲ್ಲಿಯೂ ಕಾಣ.ಅದಕ್ಕೆ ಕಾರಣ ದೇಶ೦ಗಳಲ್ಲಿಪ್ಪ ಕಾನೂನು ವೆವಸ್ತೆ. ಅರಬ್ ದೇಶ೦ಗಳಲ್ಲಿ ಇ೦ತವರ ಎರಡು ವಾರದೊಳ ಕೊ೦ದೇ ಬಿಡುಗು.
    ನಾಕು ವರುಷ ಮದಲು ಕುಡುದ ಅಮಲಿಲಿ ದೋಸ್ತಿಯನ್ನೇ ಬೆಡಿ ಬಿಟ್ಟು ಕೊ೦ದ ಮನುಷ್ಯ ಸಾಕ್ಷ್ಯಾಧಾರ ಇಲ್ಲದ್ದ ಕಾರಣ೦ದ ನಿನ್ನೆ ಜೈಲಿ೦ದ ಬಿಡುಗಡೆ ಆತು ಹೇಳುವಲ್ಲಿಗೆ ನಮ್ಮ ದೇಶದ ಕಾನೂನು ಎಲ್ಲಿಗೆ ಇಳುದ್ದು ಹೇಳಿ ಅರ್ಥ ಮಾಡಿಗೊ೦ಬಲಕ್ಕು.ಗೆದ್ದ ವಕೀಲ ತಾನು ಉಷಾರಿ ಹೇಳಿ ತಿಳುಕ್ಕೊ೦ಡಿಕ್ಕು,ಆದೆರೆ ನೀನು ಹೇಳಿದ ಹಾ೦ಗೆ,ಸತ್ತದು ತನ್ನ ಮಗನೇ ಹೇಳಿ ಗ್ರೇಶಿದ್ದರೆ ಆ ವಕೀಲನೂ ಪೈಸೆಯ ಮೋರೆ ನೋಡದ್ದೆ ಸತ್ಯಾನ್ವೇಷಣೆ ಮಾಡ್ತಿತ್ತು.
    ರಾಮ ನೆಡದ ನೆಲಲ್ಲಿ ಬದುಕ್ಕುವ ಯೊಗ ಪಡದ ನಾವು ಅವನ ಗುಣ೦ಗಳ ನಮ್ಮ ಜೀವನಕ್ಕೆ ದಾರಿ ತೋರ್ಸುವ ದೀಪವಾಗಿಸಿದರೆ ಈ ಕಸ್ತಲೆ ಎಲ್ಲಾ ಮಾಯ ಅಕ್ಕು ಹೇಳುವ ಆಶಾವಾದ ನಮ್ಮದಾಗಲಿ.

  11. ಅಸಂಸ್ಕೃತ ಮನುಷ್ಯ ಪಶುಂದಲೂ ಕಡೆ..
    ಪಶುಗಳಲ್ಲೂ ಕೂಡಾ ಈ ರೀತಿಯ ಕ್ರೌರ್ಯ ಇಲ್ಲೆ…
    ಲೇಖನ ಲಾಯ್ಕ ಆಯಿದು-ಸಕಾಲಿಕ.

  12. ಮೊದಲು ಅಜ್ಜ ಅಜ್ಜಿ, ಅಪ್ಪ, ಅಮ್ಮ, ಅಕ್ಕ ಅಣ್ಣ, ತಂಗಿ, ತಮ್ಮ, ಅಪ್ಪಚ್ಚಿ, ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪ, ಮಾವ ಅತ್ತೆ ಹೇಳೆ ಎಲ್ಲಾ ಇತ್ತಿದ್ದವು ಈಗಳೂ ಇದ್ದವು, ಆದರೆ ಇನ್ನು ಮುಂದೆ ಅದು ಇರ, ಎಂತಕೆ ಹೇಳಿದರೆ ಒಂದು ಮನೆಲಿ ಒಂದೇ ಮಗು ಇಪ್ಪದು, ಅವಕ್ಕೆ ಅಣ್ಣ ಹೇಳಿದರೆ ಎಂತ, ಅಕ್ಕ ಹೇಳಿದರೆ ಎಂತಾ, ಒಪ್ಪಣ್ಣ ಹೇಳಿದ ಸಂಬಂದಂಗಳ ಪರಿಚಯವೇ ಇರ. ಮತ್ತೆ ಸಂಸಾರದ ಸಂಬಂದಂಗಳ ಬಗ್ಗೆ, ಆಚಾರದ ಬಗ್ಗೆ ಗೊಂತಪ್ಪದು ಹೇಂಗೆ? ಮತ್ತೆ ಈಗಾಣ ಮಕ್ಕೋಗೆ ಜಂಬ್ರಂಗ ಹೇಳಿದರೆ ಮಾರು ದೂರ. ಹೋಗಮ್ಮ ಅಲ್ಲಿಗೆ ಆರು ಬತ್ತವು ಹೇಳಿಯೇ ಹೇಳುದು, ಹೀಂಗೆ ಆದರೆ ಮಂದೆ ನಮ್ಮ ಆಚಾರಂಗಳ ಒಳಿಶುಲೆ ಭಾರಿ ಕಷ್ಟ ಇದ್ದು. ಏನೇ ಆದರೂ ಒಪ್ಪಣ್ಣ ಈ ವಾರಲ್ಲಿ ನಾವೆಲ್ಲ ಯೋಚಿಸುವಂತಹ ವಿಷಯ ಹೇಳಿದ್ದ. ಧನ್ಯವಾದಂಗ

  13. ಒಳ್ಳೆ ಚಿಂತನೆ ಭಾವ. ಪ್ರತಿಯೊಂದಕ್ಕೆ ಅದರದ್ದೇ ಆದ ಮಹತ್ವ, ಮೌಲ್ಯ ಇಪ್ಪದು ನಮ್ಮ ಭಾರತಲ್ಲೇ. ಆದರೆ… ಎಂತ.., ಪ್ರತಿಯೊಂದೂ ನಾಣ್ಯಕ್ಕೆ ಎರಡು ಮುಖ ಇದ್ದಾಂಗೆ ಆಗಿ ಹೋವ್ತ ಇದ್ದು.
    ಭಯ ಭಕ್ತಿ ಶ್ರದ್ಧೆ ನಂಬಿಕೆಗೆ ಹೆಸರು ಹೋದ ಭೂಮಿ ನಮ್ಮದು ಹೇಳಿ ಒಂದೊಡೆಲಿ ನಾವು ಹೇಳಿಗೊಂಡೇ ಇದ್ದು, ದಿನಾ ಪತ್ರಿಕೆಲಿ ಅತ್ಯಾಚಾರ, ಕೊಲೆ, ಕೊಳ್ಳೆ ಬಂದುಗೊಂಡೇ ಇದ್ದು.
    ಅದರ ತಡೆವಲೆ ನಮ್ಮವರಿಂದ ಎಡಿತ್ತಿಲ್ಲೆ. ಏಕೆ?!. ಮನಸ್ಸಿಲ್ಲೆ ಹೇಳಿಯೇ ಹೇಳೇಕ್ಕಷ್ಟೆ. ಮತ್ತೆ ಇವು ಎಂತ ಬೊಜ್ಜಕ್ಕೆ ಮಂತ್ರಿ ಆದಕೂಡ್ಳೆ ವಿದೇಶ ಪ್ರಯಾಣ ಬೆಳೆಸಿದರು ಹೇಳಿ ಡಂಗುರ ಸಾರುತ್ತದೋ! ಅಲ್ಯಾಣ ಒಳ್ಳೆದರ ನೋಡಿ ನಮ್ಮಲ್ಲಿ ಅಳವಡುಸೆಕು ಹೇಳಿ ರಜಾ ಕೂಡ ಕಾಣುತ್ತಿಲ್ಲೆ, ಅದರ ಬದಲು , ಹಾಂಗಿಪ್ಪದರ ಇಲ್ಲಿ ಮಾಡಿರೆ ನವಗೆಷ್ಟು ಒಳ ಹಾಕಲೆಡಿಗು ಹೇಳ್ತದೇ ಇವರ ಲೆಕ್ಕಾಚಾರ.

    ಸಾಮಾಜಿಕ ಬೆಳವಣಿಕೆ ಹೇಳ್ವ ನೆಪಲ್ಲಿ ಯುವ ಸಮಾಜ ಎತ್ಲಾಗಿ ಸಾಗುತ್ತ ಇದ್ದು ಹೇಳಿ ಪ್ರತಿಮನೆಯೋರು ಚಿಂತುಸೆಕ್ಕಾಗಿದ್ದು. ಪ್ರತಿಯೊಬ್ಬನಲ್ಲೂ ನೈತಿಕತೆ ಪ್ರಾಮಾಣಿಕತೆ ಸಣ್ಣಾದಿಪ್ಪಗಳೇ ನೆತ್ತರಿಲ್ಲಿ ಅಡರೇಕು. ಇಂದ್ರಾಣ ಶಿಕ್ಷಣ ಕ್ರಮ ರೇಂಕು ಗಳುಸತ್ತದರ್ಲೇ ಆತು. ಶಾಲೆಲಿಯೂ ಮಕ್ಕೊಗೆ ಹುಡುಗ ಹುಡುಗಿ ಹೇಳಿ ಬೇಧಭಾವವ ಉಂಟುಮಾಡುಸಿ ಮಕ್ಕಳ ಮನಸ್ಸಿಲ್ಲಿ ಕಿಲ್ಬಿಷ ಬೀಜವನ್ನೇ ಹುಟ್ಟುಹಾಕುತ್ತ ಇದ್ದು ಹೇಳಿರೆ ಸಂಪೂರ್ಣ ಅಲ್ಲ ಹೇಳ್ಳೆ ಖಂಡಿತಾ ಎಡಿಯ. ಬೆಳವ ಮಕ್ಕಳ ಮನಸ್ಸಿಲ್ಲಿ ಅದೆಂತೆಂತದೋ ಕುತೂಹಲ ಕೆರಳುಲೆ ಕಾರಣ ಎಂತರ, ಅದಕ್ಕೆಂತ ದಾರಿ ಹೇಳ್ವದರ ಶಾಲೆಯೂ, ಸಮಾಜವೂ, ಪ್ರತಿ ಮನೆಲಿ ಅಬ್ಬೆ ಅಪ್ಪಂದ್ರೂ ಜವಾಬುದಾರರಾಗಿ ಚಿಂತಿಸಿ ನಡಕ್ಕೊಳ್ಳೆಕ್ಕಾಗಿದ್ದು. ಇಲ್ಲದ್ರೆ ‘ಇಂದಿನ ಮಕ್ಕಳೆ ಮುಂದಿನ ಜನಾಂಗ’ ಹೇಳ್ವ ಮಾತಿಂಗೂ ಬೆಲೆ ಇಲ್ಲೆ, ಇಂತ ನೀಚ ಕೃತ್ಯ ಎಸಗುವದೂ ಇಂತ ಮಕ್ಕಳೇ. ಎಲ್ಲಿ ವರೇಂಗೆ ಆ ಚಿಂತನೆ ಮನೆಯವಕ್ಕೆ, ಸಮಾಜಕ್ಕೆ ಬತ್ತಿಲ್ಲ್ಯೊ ಅಲ್ಲಿಯವರೇಂಗೆ ಅಂತೆ ಬಾಯಿ ಬೊಗಳೇ ಸರಿ. ಅದೇ ರೀತಿ ಮಕ್ಕಳ ಮನೇಲಿ ಎಲ್ಲೋರೊಟ್ಟಿಂಗೆ ಬೆರೆತು ಬಾಳುಲೆ ಅವರ ಮನಸ್ಸಿಲ್ಲಿ ಆ ಬಗ್ಗೆ ಮಹತ್ವ, ಶ್ರದ್ಧಾ ಭಕ್ತಿಯ ಮತ್ತು ಜವಾಬುದಾರಿಯ ಉಂಟುಮಾಡೆಕು. ಅಂತೇ ಮಗ/ಮಗಳು ಓದುತ್ತಾ ಹೇದು ಬಾಗಿಲು ಹಾಕಿ ಕೂರ್ಸಿ ಓದಲೆ ಬಿಡ್ಳಾಗ. ಬಾಗಿಲು ಹಾಕಿರೆ ಮಾಂತ್ರವೋ ಕೋನ್ಸಂಟ್ರೇಶನ್ ಬಪ್ಪದು!!! ಅಂಬಗ ಶಾಲೆಲಿ ಪಾಠ ಮಾಡುವಾಗಲೂ ಹಾಂಗೇ ಮಾಡೆಡದೋ. ಈಗಾಣ ಕಾಲಲ್ಲಿ ಮಕ್ಕೊಗೆ ಮನಗೆ ಬಂದವರತ್ರೆ ಮಾತಾಡೆಕು ಹೇಳಿಯೂ ಕಾಣುತ್ತಿಲ್ಲೆ. ಅಬ್ಬೆ-ಅಪ್ಪ ಅದರ ಖಂಡುಸುತ್ತವೂ ಇಲ್ಲೆ.!!

    ಗಂಡುಸರಿಗೆ ನಾವು ಸರಿ ಸಮಾನರು ಹೇಳಿಗೊಂಡು ಸ್ವಾವಲಂಬನೆಲಿ ಮುಂದುವರಿವ ಈ ಕಾಲಕ್ಕೆ ಕೂಸುಗೊಕ್ಕೆ ಸ್ವಸುರಕ್ಷತಾ ಶಿಕ್ಷಣವೂ ಅಗತ್ಯ. ಅಲ್ಲದ್ದೆ ದುಬ್ಯಾಲ್ಲಿ ಹಾಂಗಿದ್ದು, ಕುವೈಟಿಲಿ ಹಾಂಗಿದ್ದಡೋ, ಅಮೇರಿಕಾಲಿ ಹೀಂಗಡೋ.. ಹೇಳಿ ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ಮಾಡಿಗೊಂಬದರಿಂದ ಏವ ಪ್ರಯೋಜನವೂ ಆವ್ತಿಲ್ಲೆ. ರಾಮ ರಾಜ್ಯದ ಕನಸು ನನಸಾಯೇಕ್ಕಾರೆ ಪ್ರತಿಯೊಬ್ಬಂಗೂ ತನ್ನ ಜವಾಬ್ದಾರಿ ಮತ್ತೆ ಪ್ರಾಮಾಣಿಕ ಕರ್ತವ್ಯ ಪೂರೈಸಿಕೊಡೆಕು ಹೇಳ್ವ ಮನೋಭಾವನೆ ಸ್ವಇಚ್ಛೆಂದ ತನ್ನೊಳ ಸದಾ ಜಾಗೃತವಾಯೇಕು.

    ಶುದ್ದಿಗೆ ಒಂದು ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×