Oppanna.com

ಆಮೋದಿತ ದೇಶವೇ ಅನುಮೋದಿಸಿತ್ತು ಆ ಮೋದಿಯ..!

ಬರದೋರು :   ಒಪ್ಪಣ್ಣ    on   23/05/2014    6 ಒಪ್ಪಂಗೊ

ಚುಬ್ಬಣ್ಣಂಗೆ ಕಾರು ಬಿಡೆಕ್ಕಾರೆ ಬಾಯಿಲಿ ಒಂದು ಮಾತ್ರೆ ಬೇಕು.
ಅದೆಂತ ಶೀತ-ಜ್ವರದ ಮಾತ್ರೆ ಅಲ್ಲ, ಅಂತೇ ಬಾಯಿಲಿ ಮಡಿಕ್ಕೊಂಬ ಹಾಂಗಿಪ್ಪ ಮಾತ್ರೆ.
ಬಾಯಿ ಚೀಪೆ ಅಪ್ಪಲೆ, ಬಾಯಿ ವಾಸನೆ ಹೋಪಲೆ ಇಪ್ಪದು. ಆಯುರ್ವೇದ ಮಾತ್ರೆ.
– ಎಂತರ? ಅದೇ – ಆಮೋದಿನಿ.

ಮೋದ ಹೇದರೆ ಕೊಶಿ ಹೇಳಿ ಅರ್ತ ಅಡ.
ಆಮೋದಿನಿ ಹೇದರೆ ಕುಷಿಯಿಂದ ಕೂಡಿದ್ದು, ಕುಷಿ ಕೊಡುವಂತದ್ದು – ಹೇಳಿ ಅರ್ತ ಆಡ.
ಕುಶಿಗೆ ತಿಂಬ ಮಾತ್ರೆ ಯೇವದೋ ಅದುವೇ ಆಮೋದಿನಿ. ಅತವಾ, ಯೇವ ಮಾತ್ರೆ ತಿಂಬಗ ಕೊಶಿ ಆವುತ್ತೋ, ಅದುವೇ ಆಮೋದಿನಿ. ಆಯುರ್ವೇದದ ಅಜ್ಜಂದ್ರು ಅದಕ್ಕೇ ಆ ಹೆಸರು ಮಡಗಿದ್ದಾಡ, ಚುಬ್ಬಣ್ಣ ಓ ಮೊನ್ನೆ ಸರ್ಪಂಗಳ ಮದುವೆ ಕಳುಶಿ ಬಪ್ಪಗ ಹೇಯಿದ°.

ಆಮೋದಿನಿಯ ಒಂದರಿ ನೆಂಪಾಗಿ ಹೋತು.

~

ನರೇಂದ್ರ° ಹೇಳ್ತ ಮಾಣಿ ಒಂದರಿ ರಾಮಕೃಷ್ಣ ಪರಮಹಂಸರ ಭೇಟಿ ಆಗಿ ಪರಮಾನಂದ ಹೇದರೆ ಎಂತ್ಸು – ಹೇದು ಕೇಳ್ತನಾಡ. ಮಗುಮಾವ° ಹೇಳುವ ಕತೆ ಇದು.
ರಾಮಕೃಷ್ಣ ಪರಮಹಂಸರು ಅಷ್ಟಪ್ಪಗಳೇ ಆ ಮಾಣಿಗೆ ದೈವದರ್ಶನವ ಮಾಡುಸಿಕೊಡ್ತವು. ಮುಂದೆ ಆ ನರೇಂದ್ರ ವಿವೇಕಾನಂದ ಆಗಿ ಊರು-ಪರಊರುಗಳಲ್ಲಿ ಭಾರತದ ಹೆಸರಿನ ರಾರಾಜಿಸುವ ಹಾಂಗೆ ಮಾಡ್ತ°. ಚಿಕಾಗೋಲ್ಲಿ ನೆಡದ ಧರ್ಮಸಮ್ಮೇಳನಲ್ಲಿ ಭಾಷಣಮಾಡಿದ್ದರಲ್ಲಿ ಹಿಂದೂದೇಶದ ಸನಾತನ ಧರ್ಮ ಹೇದರೆ ಎಂತ್ಸು – ಹೇಳ್ತ ಸಂಗತಿ ಇಡೀ ಲೋಕಕ್ಕೇ ಪರಿಚಯ ಆತು. ಭಾರತದಾದ್ಯಂತ ಸುತ್ತುಹಾಕಿ, ಅಂಬಗಾಣ ಜವ್ವನಿಗರ ಒಟ್ಟುಸೇರ್ಸಿ ಸ್ವಾತಂತ್ರ್ಯಸಂಗ್ರಾಮಕ್ಕೆ ಸಿದ್ಧಮಾಡಿದ°. ಎಲ್ಲೋರಿಂಗೂ ಬೌದ್ಧಿಕ ಚಿಂತನೆಗೆ ಬೇಕಾದ ಆಹಾರವ ಕೊಟ್ಟುಗೊಂಡು ತಾನು ಮಾಂತ್ರ ಕೇವಲ ಕಾವಿಧಾರಿಯಾಗಿ, ಸರ್ವಸಂಸಾರವನ್ನೂ ಬಿಟ್ಟ ವೈರಾಗಿಯಾಗಿ ಜೀವನ ಮಾಡಿದನಡ. ಗುರುಗಳ ಹೆಸರಿನ ಕೀರ್ತಿಪತಾಕೆಯಾಗಿ ಯುಗಯುಗಕ್ಕೂ ಎತ್ತುಸುವ ನಮುನೆಲಿ ರಾಮಕೃಷ್ಣ ಮಿಶನ್ ಹೇಳ್ತ ಒಂದು ಸಂಸ್ಥೆಯನ್ನೂ ಹುಟ್ಟಿ ಹಾಕಿದನಾಡ. ಪುತ್ತೂರಿಲಿ ರಾಮಜ್ಜ° ಅದೇ ವಿವೇಕಾನಂದರ ಹೆಸರಿಲಿ ಕೋಲೇಜು ಸುರುಮಾಡಿ ಈಗ ಎಷ್ಟೋ ಜುಬಿಲಿಯ ಜಿಲೇಬಿ ತಿಂಬ ಗೌಜಿಲಿದ್ದು; ಅದು ಬೇರೆ.

ಹಾಂಗಿಪ್ಪ ನರೇಂದ್ರನ ಒಂದರಿ ನೆಂಪಾಗಿ ಹೋತು.

~

ಜೋಗಿಬೈಲಿಲಿ ಟೊಪ್ಪಿಜೋಯಿಸರು ಹೇದು ಒಬ್ಬ° ಅಜ್ಜ° ಇತ್ತಿದ್ದವಾಡ, ಮಾಷ್ಟ್ರುಮಾವ° ಹೇಳುಗು.
ತಕ್ಕಮಟ್ಟಿಂಗೆ ಕೃಷಿ ಇದ್ದತ್ತು. ಹಾಸಿ ಹೊದವಷ್ಟು ಸಂಪತ್ತೂ ಇದ್ದತ್ತು. ಅವಿಭಕ್ತ ಸಂಸಾರ ಆದ ಕಾರಣ ಹಲವೂ ಜೆನವೂ ಇದ್ದಿದ್ದವು; ಹಾಂಗಾಗಿ ಮನೆಯ ಗೆದ್ದೆಲಿ ಆದ ಅಕ್ಕಿ ಒರಿಶಂದ ಒರಿಶಕ್ಕೆ ಸಾಕಕ್ಕಷ್ಟೆ. ಅತಿಯಾದ ಸಂಪತ್ತು ಇಲ್ಲದ್ದರೂ ನೆಮ್ಮದಿಗೆ ಕಮ್ಮಿ ಆಯಿದಿಲ್ಲೆ. ಹೆಸರಿಲಿ ಜೋಯಿಶರು ಇದ್ದರೂ, ಜ್ಯೋತಿಷ್ಯ ಕಲ್ತಿದವಿಲ್ಲೆ. ಜ್ಯೋತಿಷ್ಯ ಲೆಕ್ಕಾಚಾರದ ತಲೆಬೆಶಿ ಇಲ್ಲದ್ದರೂ, ನಂಬ್ರದ ಲೆಕ್ಕಾಚಾರ ಇದ್ದತ್ತು. ಜಾಗೆ ಗಡಿ ಹಲವು ಇದ್ದಕಾರಣ ಜಾಗೆಗೋ, ನೀರಿಂಗೋ ಸಮ್ಮಂದಪಟ್ಟು ನಂಬ್ರಂಗೊ ಹಲವು ನೆಡಕ್ಕೊಂಡಿದ್ದತ್ತು. ವಾರಲ್ಲಿ ನಾಕುದಿನ ಪೇಟಗೆ ಹೋಕು – ಕೋರ್ಟು, ನಂಬ್ರದ ತಾಪತ್ರಯದ ವಿಲೇವಾರಿಗೂ ಆತು, ಅಡಕ್ಕೆ ಕೊಡ್ಳೂ ಆತು, ಸಭೆ-ಸಮಾರಂಭಕ್ಕೂ ಆತು ಹೇದು.

ಹೀಂಗೇ ಹೋಗಿಹೋಗಿ ಪೇಟೆಯ ಕೆಲವು ರಾಜಕೀಯ ವರ್ತಮಾನಂಗೊ, ರಾಜಕೀಯ ಮನಿಶ್ಶಂಗಳ ಗುರ್ತ ಆತು. ಸ್ವಾತಂತ್ರ ಬಂದ ಸಮೆಯ ಆದಕಾರಣ ದೇಶಲ್ಲಿ ಎಂತರ ನೆಡೆತ್ತಾ ಇದ್ದು ಹೇಳ್ತದು ಗೊಂತಾತು. ದೇಶದ ಬಡಪ್ಪತ್ತು, ಪಾಕಿಸ್ಥಾನದ ರಚನೆ, ನೆಹರುವಿನ ಸ್ವಾರ್ಥ, ಅವನ ತಪ್ಪುಗೊ, ಚೀನಾ ಗಡಿಗಲಾಟೆ, ಕಾಶ್ಮೀರವ ದಾನ ಹಿಡುದ್ದು, ಅವೈಜ್ಞಾನಿಕ ಮೀಸಲಾತಿ ಯೋಜನೆಗೊ, ಅತಿಮೀರಿ ಮಿತಿಮೀರಿದ ಭ್ರಷ್ಟಾಚಾರ – ಇದೆಲ್ಲವೂ ಗೊಂತಾಗಿಂಡು ಇದ್ದತ್ತು.
ಗುರೂಜಿ, ಶ್ಯಾಮಪ್ರಸಾದ ಮುಖರ್ಜಿ ಇತ್ಯಾದಿ ರಾಷ್ಟ್ರೀಯ ಚಿಂತಕರ ವಿಚಾರಧಾರೆ ಹರುದು ಬಂತು.
ಸಂಘಸಂಪರ್ಕಂದಾಗಿ ಹಲವು ಸಾಮಾಜಿಕ ಚಿಂತನೆಗೊ ಬಂದು ಒಲುದತ್ತು.

ಜನರ ಕಾಳಜಿಯನ್ನೂ ಹೊಂದಿ, ಸಂಘದ ಪ್ರೇರೇಪಣೆಯನ್ನೂ ಹೊಂದಿದ ಜನಸಂಘದ ಸಕ್ರಿಯ ಸದಸ್ಯರಾಗಿ ಬೆಳದುನಿಂದವು. ಮನೆಯ ಹಲವು ತಾಪತ್ರಯದ ಎಡಕ್ಕಿಲಿಯೂ ಜನಸಂಘದ ರಾಜಕೀಯಕ್ಕೆ ಸಮಯ ಕೊಟ್ಟವು.

ಮುಂದಾಣ ಎಲ್ಲಾ ಓಟಿನ ಸಮಯಲ್ಲಿ ಜನಸಂಘದ ಅಭ್ಯರ್ಥಿಯ ಬೆಂಬಲಕ್ಕೆ ನಿಂದವು. ರಾಮಜ್ಜನ ಹಾಂಗೆ ಛಲವಾದಿ, ರಾಷ್ಟ್ರವಾದಿಗಳ ಹಿಂದೆಯೇ ನಿಂದು ಕೆಲಸ ಮಾಡಿದವು. ಮನೆಮನೆಯ ಪ್ರಚಾರ ಮಾಡಿದವು.
ಕಾಲಿಲಿ ಚೆರ್ಪು ಇಲ್ಲದ್ದರೂ, ತಲೆಬೆಶಿಲಿಂಗೆ ಮುಂಡಾಸಿನ ಮುಚ್ಚಲು ಇಲ್ಲದ್ದರೂ, ಅನ್ನಾಹಾರ ಹೊತ್ತು ತಪ್ಪಿರೂ, ಗುಡ್ಡೆ ಹತ್ತಿಳುದು ಬಚ್ಚಿ ಬೆಗರು ಬಿಚ್ಚಿರೂ ಬೇಜಾರಿಲ್ಲದ್ದೆ ಜನಸಂಘದ ತತ್ವಾದರ್ಶವ ಮನೆಮನೆಗೆ ಮುಟ್ಟುಸುಲೆ ಹೋರಾಡಿದವು. ಇಡೀ ದೇಶಲ್ಲಿ ಕೋಂಗ್ರೇಸಿನ ಅಲೆ ಇಪ್ಪದು ಗೊಂತಿದ್ದರೂ, ಜನಸಂಘದ ಜೆನ ಗೆಲ್ಲುತ್ತಿಲ್ಲೆ ಹೇದು ಗೊಂತಿದ್ದರೂ – ತನ್ನ ಪಾಲಿನ ಕರ್ತವ್ಯದ ಹಾಂಗೆ ಜನಸಂಘಕ್ಕಾಗಿ ಹೋರಾಡಿದವು. ತನ್ನ ಹೋರಾಟದ ಜವ್ವನ ಮುಗಿವ ಮದಲು ತನ್ನ ಹಾಂಗೇ ಇಪ್ಪ ಐವತ್ತು ಯುವಕರ ತೆಯಾರುಮಾಡಿಕ್ಕಿಯೇ ವಿಶ್ರಾಂತಿ ತೆಕ್ಕೊಂಡವು. ಎಡಿವಷ್ಟು ಸಮೆಯವೂ ಜನಸಂಘಕ್ಕೆ ತನು-ಮನ-ಧನ ಸಹಕಾರ ಕೊಟ್ಟು ಬೆಳೆಶಿದವು. ರಾಷ್ಟ್ರವಾದಿ-ಸಮಾಜವಾದಿ-ಸಂಘವಾದಿ ಚಿಂತನೆ ನಮ್ಮ ಊರಿಲಿ ಬೇರುಬಿಟ್ಟು ಬೆಳವಲೆ ಕಾರಣೀಭೂತರಾದವು.

ಇಂದಿಂಗೆ ನಮ್ಮ ಊರಿಲಿ ಅದೇ ತತ್ವ ಮುಂದುವರುದ್ದು ಹೇದು ಆದರೆ, ಟೊಪ್ಪಿಜೋಯಿಶರ ಹಾಂಗೆ ನಿಃಸ್ವಾರ್ಥ ಕಾರ್ಯಕರ್ತರ ಶ್ರಮ ಇದ್ದು.
ಇದುದೇ ಮೊನ್ನೆ ನೆಂಪಾತು ಒಂದರಿ.

~
ಬ್ರಿಟಿಷರ ಕೈಂದ ಭಾರತಕ್ಕೆ ಮುಕ್ತಿ ಸಿಕ್ಕೇಕು ಹೇದು ಭಾರತದ ಜೆನಂಗಳ ಸಂಘಟನೆ ಕಟ್ಟಿದವು ಅಂಬಗಾಣ ಹೆರಿಯೋರು. ಭಾರತ ರಾಷ್ಟ್ರೀಯ ಕೋಂಗ್ರೇಸು – ಹೇದು ಅದಕ್ಕೆ ಹೆಸರು ಮಡಗಿದ್ದವು. ಅನಿಬೆಸೆಂಟೋ, ಮುನಿಬೆಸೆಂಟೋ – ಸರೀ ನೆಂಪಿಲ್ಲೆ. ಮಾಷ್ಟ್ರುಮಾವ° ಅಂದು ಪಾಟಮಾಡುವಗ ಹೇಳಿತ್ತಿದ್ದವು – ಆರೋ ಸುರುಮಾಡಿದ್ದಡ. ಮುಂದೆ ರಜ ಪೈಶೆಕ್ಕಾರಂಗಳೂ, ಭಾಷಣಕ್ಕಾರಂಗಳೂ ಸೇರಿ ಆ ಸಂಘಟನೆ ಬೆಳದತ್ತು. ಆಫ್ರಿಕಾ ದೇಶಲ್ಲಿ ಒಕಾಲ್ತಿಕೆ ಮಾಡ್ಳೆ ಹೋದ ಗಾಂಧಿಅಜ್ಜ° ಒಪಾಸು ಊರಿಂಗೆ ಬಂದ ಮತ್ತೆ ಆ ಸಂಘಟನೆ ದೇಶವ್ಯಾಪಿ ಆತು. ಜನ ಜನಂಗೊಕ್ಕೆ ಸ್ವಾತಂತ್ರ್ಯ ಸಿಕ್ಕೇಕು ಹೇಳ್ತ ಕೆಚ್ಚು-ಹುಚ್ಚು ಎಳಗಿತ್ತು. ಸ್ವತಂತ್ರ ಭಾರತ ಕಟ್ಟಿದ ಮತ್ತೆ ಕೋಂಗ್ರೇಸಿನ ವಿಸರ್ಜನೆಯೂ ಆಯೇಕು ಹೇದು ಗಾಂಧಿ ಅಜ್ಜ° ಗ್ರೇಶಿತ್ತಿದ್ದವಾಡ. ಸ್ವತಂತ್ರ ಸಿಕ್ಕಿಯೂ ಆತು. ಆದರೆ, ಕೋಂಗ್ರೇಸು ಬೇರೆಯೇ ರೀತಿಲಿ ಕೆಲಸ ಮಾಡ್ಳೆ ಸುರುಮಾಡಿತ್ತು.

ಅಷ್ಟನ್ನಾರ ದೇಶವಾದಿ ಸಂಘಟನೆ ಆಗಿದ್ದ ಕೋಂಗ್ರೇಸು ನೆಹರು ಅಜ್ಜನ ಸ್ವಂತ ಆಸ್ತಿಆಗಿ ಹೋತು. ನೆಹರು ಈ ದೇಶಕ್ಕೆ ಹಲವಾರು ಉಪಕಾರ ಅಪ್ಪ ಕಾರ್ಯ ಮಾಡಿರೂ, ಉಪದ್ರ ಮಾಡಿದ್ದು ಅದರಿಂದಲೂ ಜಾಸ್ತಿ ಇಕ್ಕು. ಗೆಡ್ಡದ ಜೋಯಿಶರ ಹತ್ತರೆ ಕೇಳಿರೆ ವಿವರವಾಗಿ ಹೇಳುಗು.

ನೆಹರುವಿನಿಂದ ಮತ್ತೆ ಆರು ಹೇದು ಚಿಂತನೆ ಬಪ್ಪಗ – ತನ್ನ ಮಗಳೇ ಅಕ್ಕನ್ನೇ-ದು ಕುತ್ತಿಕೊಟ್ಟವಾಡ. ನೆಹರುವಿನ ಮಗಳು ಇಂದಿರಾ ಅಂತೂ ಮೂಲ ಕೋಂಗ್ರೇಸಿನ ಒಡದು – ಇಂದಿರಾ ಕೋಂಗ್ರೇಸ್ – ಹೇದು ಸ್ವಂತ ಹೆಸರಿಲೇ ಒಂದು ಪಕ್ಷ ಕಟ್ಟಿತ್ತಾಡ. ಅದಕ್ಕೆ ಜೈ ಹೇಳುವವು ಮಾಂತ್ರ ಅದರ ಸುತ್ತ ಇಪ್ಪ ನಮುನೆ ನೋಡಿಗೊಂಡತ್ತಾಡ. ಅದಕ್ಕೆ ಆಗದ್ದೋರಿಂಗೆ ಉಪದ್ರಂಗೊ ಕಾಂಬಲೆ ಸುರು ಆತಾಡ. ಇಡಿಯ ದೇಶಕ್ಕೇ “ತುರ್ತು ಪರಿಸ್ಥಿತಿ ಬಯಿಂದು” – ಹೇದು ತನ್ನ ಸ್ವಂತ ಆಡಳ್ತೆಲಿ ಮಡಗಿ ಇಡೀ ದೇಶವನ್ನೇ ತನ್ನ ವೇನಿಟಿ ಬೇಗಿಲಿ ಮಡಿಕ್ಕೊಂಬಲೆ ನೋಡಿತ್ತಾಡ.

ತುರ್ತುಪರಿಸ್ಥಿತಿ ಸಮೆಯಲ್ಲಿ ಅಂತೂ – ಇಂದಿರಾ ಕೋಂಗ್ರೇಸಿಂಗೆ ವಿರೋಧವಾಗಿ ಆರೆಲ್ಲ ಕೆಲಸ ಮಾಡಿದ್ದವೋ – ಅವರೆಲ್ಲರನ್ನೂ ತೆಗತೆಗದು ಜೈಲಿಂಗೆ ಹಾಕಿತ್ತಾಡ. ಅಂತೂ ಇಂತೂ ಒಟ್ಟು ಕಾನೂನು ವೆವಸ್ಥೆಯನ್ನೇ ಹಾಳುಮಾಡಿ ಅನಾಚಾರಮಾಡಿ ಹಾಕಿತ್ತಾಡ ಆ ಇಂದಿರೆ. ಅದರ ಭಾರೀ ಹತ್ರದ ಕೊಂಡಾಟದ ಮಗ ಸಂಜಯ ಸತ್ತರೂ ಇದರ ಮನಸ್ಸು ಕರಗಿದ್ದಿಲ್ಲೆ. ದೇಶದ ಆಳ್ವಿಕೆ ಮುಂದರುದತ್ತು.

ಅದಾದ ಮತ್ತೆ ಬಂದದಾರು? ಅದರ ಸ್ವಂತ ಮಗನೇ – ರಾಜೀವ°. ಅಬ್ಬೆಯ ಕೊಂದ ಕೋಪಲ್ಲಿ ಹಲವು ಸಿಖ್ಖರ ಮಾರಣಹೋಮಂದಲೇ ತನ್ನ ಸರ್ಕಾರವ ಆರಂಭ ಮಾಡಿತ್ತಾಡ. ಬೋಪೋರ್ಸು ಆ ಫೋರ್ಸು ಹೇಳಿಗೊಂಡು ಹಲವು ಫೋರ್ಸಿಲಿ ಪೈಶೆಯ ಅಟ್ಟಿ ಅಟ್ಟಿ ಕಟ್ಟಿ ಮಡಗಿತ್ತಾಡ. ಅದೆಲ್ಲವೂ ಹೆರದೇಶದ ಯೇವದೋ ಬೇಂಕಿಲಿ ಇದ್ದಾಡ – ಗುಣಾಜೆಮಾಣಿ ಒಂದೊಂದರಿ ಹೇಳುದಿದ್ದು.

ರಾಜೀವನೂ ತೀರಿಗೊಂಡ ಮತ್ತೆ ಅದರ ಬೆಳಿಆನೆ ಹೆಂಡತ್ತಿಗೆ ಪ್ರಧಾನಿ ಆಯೇಕು ಹೇದು ಆಶೆ ಇದ್ದತ್ತಾಡ. ಆದರೆ ಹೆರದೇಶದ ಜೆನ ಆದ ಕಾರಣ ಎಡಿಗಾತಿಲ್ಲೆ! ಆದರೆಂತಾತು, ಒಂದು ಪಾಪದ ಮನಿಶ್ಶನ ಕೊರಳಿಂಗೆ ಉರುಳು ಕಟ್ಟಿ, ಬಳ್ಳಿಯ ತನ್ನ ಕೈಲಿ ಹಿಡ್ಕೊಂಡು ಹತ್ತೊರಿಶ ಆಡಳ್ತೆ ಮಾಡಿತ್ತಾಡ. ಅತ್ತೆಯ ಕೈಂದ ಕಲ್ತದು ಹೇಂಗಾದರೂ ತಂತ್ರಂಗೊ ಇತ್ತನ್ನೆ?

ದೇಶದ ಭದ್ರತೆ, ಆರ್ಥಿಕ ಸ್ಥಿತಿ, ಸಾಮಾಜಿಕ ಪರಿಸ್ಥಿತಿಗೊ ಚಿಂದಿ ಚಾಂದ್ರಾಣ ಆಗಿ ಹೊತು – ಹೇದು ಗುಣಾಜೆಮಾಣಿಗೆ ಒಳ್ಳೆತ ಪಿಸುರಿದ್ದು.

~

ಗುಜರಾತು ರಾಜ್ಯಲ್ಲಿ ಭಾಜಪಾದ ಸರಕಾರ ಇದ್ದತ್ತಾಡ. ಇದು ಹತ್ತು ಹದ್ನೈದು ಒರಿಶ ಹಿಂದಾಣ ಕತೆ. ಸುಮಾರು ಒರಿಶಂದ ರಾಜ್ಯಭಾರ ಮಾಡಿಗೊಂಡಿದ್ದೋರಿಂಗೆ ಅಧಿಕಾರ ತಲಗೆ ಅಡರಿದ್ದತ್ತೋ ಏನೋ – ರಜಾ ಅವ್ಯವಹಾರ, ಅಹಂಕಾರಂಗೊ ಬಪ್ಪಲೆ ಸುರು ಆತಾಡ. ಕೇಂದ್ರ ಸರ್ಕಾರಲ್ಲಿ ಕೂದು ಆಡಳ್ತೆ ಮಾಡಿಗೊಂಡಿದ್ದ ಅದೇ ಪಾರ್ಟಿಯ ಓಜುಪೇಯಿ ಅಜ್ಜಂಗೆ ತಲೆಚ್ಚೂಡು ಹಿಡಿವಲೆ ಸುರು ಆತೋ ಏನೋ, ಅಷ್ಟನ್ನಾರ ಅಧಿಕಾರದ ರುಚಿಯೇ ಅರಡಿಯದ್ದ ಒಂದು ಪಾಪದ ಜೆನಕ್ಕೆ ಪೋನು ಮಾಡಿ ಮಾತಾಡ್ಳೆ ಬಪ್ಪಲೆ ಹೇಳಿದನಾಡ. ಮಾತಾಡ್ಳೆ ಬಂದ ಕೂಡ್ಳೇ “ನೀನು ಗುಜರಾತಿನ ಮುಖ್ಯಮಂತ್ರಿ ಆಯೇಕು” ಹೇಯಿದನಾಡ.

ಅಷ್ಟನ್ನಾರ ಮುಖ್ಯಮಂತ್ರಿ ಆಪೀಸನ್ನೂ ಕಂಡು ಗೊಂತಿಲ್ಲದ್ದೋನು, ಪಂಚಾಯ್ತು ಓಟಿಂಗೂ ನಿಲ್ಲದ್ದೋನು ಮುಖ್ಯಮಂತ್ರಿ ಆಯೇಕು ಹೇದರೆ ಹೇಂಗಿಕ್ಕು?
ಅದೇ ವಾಜಪೇಯಿ ಅಜ್ಜನ ಆಯ್ಕೆ. ಈ ವೆಗ್ತಿಯ ತಾಕತ್ತು, ತ್ರಾಣ ವಾಜ್ಪೇಯಿ ಅಜ್ಜಂಗೆ ಗೊಂತಿದ್ದ ಕಾರಣವೇ ನೀನು ಮುಖ್ಯಮಂತ್ರಿ ಆಯೇಕು –ಹೇಯಿದ್ದಡ.
ಅದೇ “ಮೋದಿ”.

~

ಎಣ್ಣೆ ತೆಗದು ಜೀವನ ಮಾಡ್ತ ಬಡ ಕುಟುಂಬಲ್ಲಿ ನರೇಂದ್ರ ಹೇಳ್ತ ಒಂದು ಆಣು ಹುಟ್ಟುತ್ತಾಡ. ನರೇಂದ್ರ ಹೇದು ಹೆಸರು. ಮೋದಿ ಹೇದರೆ ಮನೆತನದ ಹೆಸರು.
ದೊಡ್ಡ ಸಂಸಾರಕ್ಕೆ ಬೇಕಾದ ಧನಸಂಪಾದನೆಗೆ ಅಪ್ಪ-ಅಣ್ಣಂದ್ರ ಒಟ್ಟಿಂಗೆ ಚಾಯ ಮಾರ್ತ ಕೆಲಸ ಸುರು ಮಾಡ್ತಾಡ. ಅಲ್ಲಿಂದಲೇ ಕೆಲವು ಜೆನರ ಸಂಪರ್ಕ ಆಗಿ, ಸಂಘ ಸಂಪರ್ಕಕ್ಕೆ ಬತ್ತಾಡ. ಪ್ರಚಾರಕನಾಗಿ ಜೀವನ ಮಾಡಿ ಮುಂದೆ ಹಿಮಾಲಯದ ಹೊಡೆಂಗೆ ಆಕರ್ಷಿತನಾವುತ್ತಾಡ. ಅಲ್ಲಿ ರಜ ಆಧ್ಯಾತ್ಮಿಕ ಜೀವನ ನೆಡೆಶಿದ ಮತ್ತೆ ಊರಿಂಗೆ ಬತ್ತಾಡ. ಸಣ್ಣ ಪ್ರಾಯಲ್ಲೇ ಸಂಪ್ರದಾಯ ಪ್ರಕಾರ ಮದುವೆಯನ್ನೂ ಮಾಡಿಬಿಡ್ತವಾಡ, ಆದರೆ ಸಂನ್ಯಾಸ ಮನಸ್ಸಿನ ಒಳದಿಕ್ಕೆ ತುಂಬಿದ ಕಾರಣ ಸಂಸಾರ ಮುಂದುವರಿತ್ತಿಲ್ಲೇಡ. ಇಷ್ಟರಲ್ಲೇ ಸಂಘದ ಜೆಬಾದಾರಿಕೆಗೊ ಸಿಕ್ಕಿ, ಊರು – ಪರಊರುಗಳಲ್ಲಿ ತಿರುಗುತ್ತಾಡ. ಸಣ್ಣ ಪ್ರಾಯಲ್ಲೇ ದೊಡ್ಡದೊಡ್ಡ ಸಂಘಟನಾ ಜೆಬಾದಾರಿಕೆಗಳ ನಿರ್ವಹಿಸುತ್ತಾಡ. ಅಡ್ವಾಣಿಅಜ್ಜನ ರಥಯಾತ್ರೆ, ಜೋಷಿಅಜ್ಜನ ಭಾಷಣ, ವಾಜುಪೇಯಿ ಅಜ್ಜನ ಗೆಲ್ಲುಸುತ್ತ ಕಾರ್ಯ – ಹೀಂಗಿರ್ಸ ಜೆಬಾದಾರಿಕೆಗಳ ಹೊತ್ತು ಯಶಸ್ವಿಯಾಗಿ ಹೆಸರುಮಾಡ್ತಾಡ. ಇಷ್ಟಿದ್ದರೂ ತೆರೆಮರೆಲೇ ಕೆಲಸಮಾಡಿಗೊಂಡು ಇಪ್ಪಗಳೇ ಗುಜರಾತಿನ ಮುಖ್ಯಮಂತ್ರಿ ಆಯೇಕು ಹೇದು ಓಜುಪೇಯಿ ಅಜ್ಜನ ಶಿಫಾರಸ್ಸು ಬಂದದು.

ಮುಖ್ಯಮಂತ್ರಿ ಹೇಳಿ ಆದ ಮತ್ತೆಯೇ ಮೊದಲ ಸರ್ತಿಗೆ ವಿಧಾನಸಭೆ ಪ್ರವೇಶ ಮಾಡ್ತಡ. ಮೊದಲೇ ಸಂಘಟನೆ ಹೇದು ಊರೂರುಗಳ ಬೇರುಬೇರು ಗೊಂತಿದ್ದ ಕಾರಣ ಮುಖ್ಯಮಂತ್ರಿ ಆದ ಮತ್ತೆ ಸುಲಾಭ ಆತು. ಸಂಘಟನೆಯ ಅನುಭವ ಮೊದಲೇ ಇದ್ದ ಕಾರಣ ಸರ್ಕಾರ ಕಟ್ಟುಲೂ ಕಷ್ಟ ಆಯಿದಿಲ್ಲೆ. ಊರ ಕಷ್ಟಂಗೊ ಮೊದಲೇ ಗೊಂತಿದ್ದ ಕಾರಣ ಯೇವದು ಸುರುವಿಂಗೆ ಆಯೆಕ್ಕು ಹೇಳ್ತದು ಸರಿಯಾಗಿ ಗೊಂತಿತ್ತು. ಬಡತನ ಮನೆಂದಲೇ ಗೊಂತಿದ್ದ ಕಾರಣ ಬಡವರ ಕಷ್ಟ ಅರಡಿಗಾಗಿಂಡಿದ್ದತ್ತು.

ಇದರಿಂದಾಗಿ ಬೇಗಲ್ಲೇ ಯಶಸ್ವೀ ಮುಖ್ಯಮಂತ್ರಿ ಹೇದು ಹೆಸರಾತು.

ಮತ್ತಾಣ ಓಟಿಲಿ ಅದುವೇ ಗೆದ್ದು ಬಂತಾಡ. ಐದು ಒರಿಶಕ್ಕೆ ಮುಖ್ಯಮಂತ್ರಿ ಆತು.
ಮತ್ತಾಣ ಓಟಿಲಿಯೂ ಅದೇ ಗೆದ್ದತ್ತು. ಮತ್ತೆ ಐದು ಒರಿಶಕ್ಕೆ ಮುಖ್ಯಮಂತ್ರಿ.
ಮತ್ತಾಣ ಓಟಿಲಿಯೂ ಅದೇ ಗೆದ್ದತ್ತು. ಪುನಾ ಐದು ಒರಿಶಕ್ಕೆ ಮುಖ್ಯಮಂತ್ರಿ ಅಪ್ಪಲೆ.
ಆದರೆ, ಹನ್ನೆರಡನೇ ಒರಿಶ ಮುಖ್ಯಮಂತ್ರಿ ಸ್ಥಾನಲ್ಲಿಪ್ಪಾಗ, ಈಗ ಅದರಿಂದಲೂ ಮೇಗೆ ಹೋಯೆಕ್ಕಾಗಿ ಬಂತು.

ಅದೆಂತ?

~

ಮೊನ್ನೆ ನೆಡದ ಲೋಕಸಭಾ ಚುನಾವಣೆಲಿ ಇಡೀ ದೇಶಕ್ಕೆ ದೇಶವೇ ಈ ಜೆನರ ಅನುಮೋದಿಸಿತ್ತಾಡ.
ಕುಷಿಂದ ಚುನಾಯಿಸಿದ್ದೂ ಅಪ್ಪು, ಕುಷಿಗಾಗಿ ಚುನಾಯಿಸಿದ್ದೂ ಅಪ್ಪು.
ಬೇಕಾದ ಬಹುಮತವ ಸ್ಪಷ್ಟವಾಗಿ ಕೊಟ್ಟ ಮತದಾರರು ಈ ಜೆನರ ಪ್ರಧಾನಿಅಪ್ಪಲೆ ಎದುರು ನೋಡ್ತವಾಡ.
ಭ್ರಷ್ಟಾಚಾರ, ಆರ್ಥಿಕ ಸೋಲು, ರಾಷ್ಟ್ರಭದ್ರತೆಯ ತೊಂದರೆಗೊ, ಉದ್ಯೋಗ ನಷ್ಟ – ಇದೆಲ್ಲ ಸಮಸ್ಯೆಗಳ ಕೆಸರಿಲಿ ಮುಳುಗಿದ ನಮ್ಮ ದೇಶದ ಅವಸ್ಥೆಯ  ಮನಗಂಡ ಹೊಸ ಮತದಾರರು ಎಲ್ಲೋರುದೇ ಎದ್ದು ಬಂದು ಇಡೀ ದೇಶಲ್ಲಿ ಕಮಲವ ಅರಳಿಸಿ ಈ ಮೋದಿಯ ಚುನಾಯಿಸಿಕೊಟ್ಟವಾಡ.
ಇದು ಒಬ್ಬ ಇಬ್ಬರ ಶ್ರಮಂದಾಗಿ ಆದ್ದಲ್ಲ, ಟೊಪ್ಪಿ ಜೋಯ್ಸರ ಹಾಂಗೆ ಲಕ್ಷಾಂತರ ಜೆನ ಜೀವತೇದು ಮಾಡಿದ ಶ್ರಮಕ್ಕೆ, ಬಿತ್ತು ಹಾಕಿ ಬೆಳೆಶಿದ ಜನಸಂಘದ ಹೋರಾಟದ ಫಲ.
ಗಾಂಧಿ ಕುಟುಂಬದ ತಪ್ಪುಗಳ ಕಂಡು ರೋಸಿ ಹೋದ ಜನಾಂಗ ತಿದ್ದುಲೆ ಬೇಕಾಗಿ ಕೊಟ್ಟ ತೀರ್ಪಿನ ಫಲ – ಹೇದು ಕೊಳಚ್ಚಿಪ್ಪು ಭಾವ° ಹೇಳಿದ°.
~
ಅದೇನೇ ಇರಳಿ, ಆ ಪ್ರಕಾರ ಬಪ್ಪ ವಾರ ಮೋದಿ ಪ್ರಧಾನಿ ಅಪ್ಪದಾಡ.
ಹನ್ನೆರಡು ಒರಿಶಂದ ಆಳ್ವಿಕೆ ಅಭ್ಯಾಸ ಇಪ್ಪ ಮೋದಿ ಇನ್ನು ಪ್ರಧಾನಿ ಆಗಿ ದೇಶವನ್ನೂ ಅಭಿವೃದ್ಧಿಗೆ ಕೊಂಡೋಗಲಿ- ಹೇಳ್ತದು ದೇಶದ ಯುವ ಜೆನಂಗಳ ಆಶೆ.
~
ಇಡೀ ದೇಶಕ್ಕೆ ದೇಶವೇ ಅನುಮೋದಿಸಿದ ಆ ವೆಗ್ತಿ, ದೇಶವನ್ನೇ ಉತ್ತುಂಗಕ್ಕೆ ಕೊಂಡೋಗಲಿ.
ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ ಈ ದೇಶಲ್ಲಿ ಸದಾ ತಿರುಗಿ – ಮತ್ತೊಂದರಿ ರಾಮರಾಜ್ಯದ ಉದಯ ಆಗಲಿ – ಹೇಳ್ತದು ಬೈಲಿನ ಎಲ್ಲೋರ ಆಶೆ. ಅಲ್ಲದೋ?
~
ಒಂದೊಪ್ಪ: ಹನ್ನೆರಡು ಒರಿಶ ರಾಜ್ಯಲ್ಲಿ ಕಾರ್ಯಭಾರ ಮಾಡಿದ ಮೋದಿಗೆ ಇನ್ನೆರಡು ಒರ್ಷ ಸೇರ್ಸಿ ದೊಡ್ಡ ಕಾಲ ದೇಶಾಡಳ್ತೆ ಸಿಕ್ಕಲಿ – ಹೇಳಿ ಗುಣಾಜೆಮಾಣಿ ಹೇಳ್ತ°.

6 thoughts on “ಆಮೋದಿತ ದೇಶವೇ ಅನುಮೋದಿಸಿತ್ತು ಆ ಮೋದಿಯ..!

  1. ಒಪ್ಪಣ್ಣ,
    ದೇಶಲ್ಲಿಡೀ ಕೆಸರು ತುಂಬಿದ್ದದರಲ್ಲಿ ಸುಂದರ ಹೂಗಿನ ಹಾಂಗೆ ಮೋದಿ ಅರಳಿ ಬಂದಾತು. ದೇಶದ ಮೂಲೆ ಮೂಲೆಲಿ ಮೋದಿಯ ಪ್ರಭೆ ಹರಡಿದ ಹಾಂಗೆ ದೇಶ ಇಡೀ ಬೆಳಗಲಿ..
    ಸ್ವಾತಂತ್ರ್ಯ ಬಂದರೂ ಉನ್ನತಿ ಕಾಣದ್ದ ದೇಶ ಮೋದಿಯ ಆಳ್ವಿಕೆಲಿ ಸ್ವರ್ಣಯುಗ ಆಗಲಿ..

  2. ನಿ೦ಗಳ ಈ ಸದಭಿಲಾಷಗೆ ಎನ್ನದೂ ಸಹಮತ;

  3. ನಮ್ಮ ಆಶೆಯುದೆ ಅದೇ ಒಪ್ಪಣ್ಣಾ.

  4. ನಮ್ಮದುದೆ ಅದೇ ಆಶಯ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×