Oppanna.com

ಭೂತ ಬಿರಿವ ಐದು ನಿಮಿಷ…

ಬರದೋರು :   ಒಪ್ಪಣ್ಣ    on   04/11/2011    14 ಒಪ್ಪಂಗೊ

ಬೂತ – ಹೇಳಿತ್ತುಕಂಡ್ರೆ ಅದೊಂದು ದೈವೀಕ ಶೆಗ್ತಿ. ದೇವರ ಉಪಶೆಗ್ತಿ.
ಈ ಲೋಕ ಹೇಳ್ತ ದೊಡಾ ಜಾಗೆಯ ಎಜಮಾನ ದೇವರು ಆದರೆ, ಬೂತಂಗೊ ಹೇಳಿರೆ ಅವನ ಕೆಲಸದ ಆಳುಗೊ. ನಾವೆಲ್ಲ ಹುಳು-ನಕ್ಕುರುಗೊ ಹೇಳಿ ರಂಗಮಾವನ ಅಭಿಪ್ರಾಯ.
ದೇವರಿಂಗೆ ದೇವತಾರಾಧನೆ ಇದ್ದ ಹಾಂಗೆ, ಭೂತಂಗೊಕ್ಕೆ ಅದರದ್ದೇ ಆದ ಪೂಜಾಪದ್ಧತಿ ’ಭೂತಾರಾಧನೆ’ ಇದ್ದು.

ಹಾಂಗೆ ನೋಡಿರೆ – ಭೂತಾರಾಧನೆ, ಕೋಲ, ತಂಬಿಲ, ಪಂಜುರುಳಿ – ಹೇಳಿಗೊಂಡು ಊರಿನೊಳಾಣ ಶುದ್ದಿಗಳ ಬೈಲಿಲಿ ಸುಮಾರು ಸರ್ತಿ ಮಾತಾಡಿದ್ದು ನಾವು.
ಊರ ಒಳದಿಕಾಣ ಒಂದು ವ್ಯಾಜ್ಯಕ್ಕೆ ಬೂತವೇ ತೀರ್ಪು ಕೊಟ್ಟ ಸಂಗತಿಯ ಮೂಲಕ ನಮ್ಮ ಬೈಲಿನೊಳಾಣ ಸಾಮಾಜಿಕ ಚಿತ್ರ ಸಿಕ್ಕಿದ್ದು ನವಗೆ.
ಬೂತ ಕಟ್ಟುತ್ತ ಕೋಟಿಯ ಪುಳ್ಳಿ ಭರತನಾಟ್ಯಲ್ಲಿ ಪಷ್ಟು ಬಂದ ಶುದ್ದಿ ಅಂತೂ ಹೆಚ್ಚಿನವಕ್ಕೆ ಮನಸ್ಸು ಮುಟ್ಟಿದ್ದು.
ತರವಾಡುಮನೆ ಶುದ್ದಿಗಳ ಹೇಳುವಗ ಪಾರೆಅಜ್ಜಿಯ ಶುದ್ದಿಯೂ, ಅದರೊಟ್ಟಿಂಗೆ ಭೂತಾಚರಣೆಯ ಶುದ್ದಿಗಳೂ ಬಂದುಗೊಂಡಿತ್ತು;

ಈ ಭೂತಂಗೊ ಹೇಳ್ತ ಸ್ಥಳೀಯ ಶೆಗ್ತಿಗೊಕ್ಕೆ ನಮ್ಮ ಊರಿನ ಸಂಸ್ಕಾರಲ್ಲಿ ಬಾರೀ ಪ್ರಾಮುಖ್ಯ ಪಾತ್ರ.
ನಮ್ಮ ಊರಿನ ಸಂಸ್ಕಾರವ ಕಟ್ಟಿ, ಬೆಳೆಶಿ, ಒಳಿಶಿದ್ದೇ ಅವು ಅಲ್ಲದೋ?
ತುಳುವ ಸಂಸ್ಕಾರದ ಉಳಿವು-ಬೆಳವಣಿಗೆಗೆ ಕಾರಣೀಭೂತ ಆದ ಅಮೋಘಶೆಗ್ತಿ ಅದುವೇ ಅಲ್ಲದೋ?
ನಮ್ಮ ಊರಿಲಿ ಸನಾತನತೆಯ ಒಳುಶಿಗೊಂಡು ಬಂದ ಆ ಮಹಾಶೆಗ್ತಿಗಳ ನಾವು ಅಂಬಗಂಬಗ ನೆಂಪುಮಾಡಿಗೊಳೆಕು.
ಹಾಂಗಾಗಿ, ಸುಮಾರು ಸರ್ತಿ ಮಾತಾಡಿದ ಅದೇ ಭೂತಂಗಳ ಬಗ್ಗೆ ಇಂದೊಂದರಿ ಮಾತಾಡುವೊ°, ಅಲ್ಲದೋ? 🙂
~

ಭೂತ ಕೋಲದ ಕೊನೆಯ ಹಂತಲ್ಲಿ ಕೋಟಿಕೋಟಿ ಆಶೀರ್ವಾದ ಮಾಡುದು 🙂

ಒಪ್ಪಣ್ಣಂಗೆ ಹಲವಾರು ಬೂತಂಗಳ ಗುರ್ತ ಇದ್ದರೂ, ಒಪ್ಪಣ್ಣನ ಸರೀ ಗುರ್ತ ಇಪ್ಪ ಬೂತ ಹೇಳಿರೆ ಅದು ಪಾರೆಅಜ್ಜಿ.
ಅಜ್ಜಿಯೋ? ಅಪ್ಪು, ಅದೊಂದು ಹೆಣ್ಣು ಬೂತ; ಪಾರೆಅಜ್ಜಿ – ಹೇಳುಗು ಅದರ ಪ್ರೀತಿಲಿ.
ಇಲ್ಲೇ, ಬೈಲಕರೆ ಆಚಹೊಡೇಣ ಪಾರೆಗುಡ್ಡೆಲಿ ಇಪ್ಪ ಹೆಣ್ಣು ಭೂತ; ಶೆಗ್ತಿಸ್ವರೂಪಿಣಿ; ನಂಬಿಗೊಂಡು ನೆಡೆತ್ತ ಊರೋರಿಂಗೆ ಮಹಾತಾಯಿ, ಮಹಾಮಾತೆ.
ಆಸ್ತಿಕ ಮಕ್ಕೊಗೆ ಅದರ ಮೋರೆಲೇ ಕೊಲ್ಲೂರು ಮೂಕಾಂಬಿಕೆಯೂ ಕಾಣ್ತು; ಕಟೀಲು ದುರ್ಗೆಯೂ ಕಾಣ್ತು.
ಅದು ನಮ್ಮ ಊರಿಲಿ ಮದಲಿಂದಲೇ ಇದ್ದರೂ, ಅದರ ಪ್ರಭಾವಳಿ ಹೊಳದು ಕಾಂಬಲೆ ಸುರು ಆದ್ಸು ಕಳುದ ಸರ್ತಿ ಬ್ರಮ್ಮಕಲಶ ಆದ ಮತ್ತೆಯೇ.
ಆ ಒರಿಶದ ನೆಡುಬೇಸಗೆಲಿಯೂ ಮಳೆ ಬಂತಲ್ಲದೋ – ಅಷ್ಟಪ್ಪಗ ಚೆಂಡಿ ಆದ ಪ್ರತಿಯೊಬ್ಬ ಆಸ್ತಿಕನೂ ‘ಇದು ಪಾರೆಅಜ್ಜಿಯ ಮಹಿಮೆಯೇ’ ಹೇಳಿ ನಂಬಿಗೊಂಡವು. ಅಲ್ಲಿಂದ ಮತ್ತೆ ಇಂದಿನ ಒರೆಂಗೆ ಒರಿಶಂಪ್ರತಿ ಅದೇ ದಿನ ನೆಡೆತ್ತ ವಾರ್ಷಿಕೋತ್ಸವಕ್ಕೆ ಮಳೆ ಬಂದುಗೊಂಡೇ ಇದ್ದಲ್ಲದೋ – ಹಾಂಗಾಗಿ ಒರಿಶ ಹೋದ ಹಾಂಗೆ ಚೆಂಡಿ ಆವುತ್ತೋರ, ನಂಬುತ್ತೋರ ಸಂಕೆ ಹೆಚ್ಚಾಗಿಂಡೇ ಹೋಗಿಂಡಿದ್ದು!
~

ಭೂತಸ್ಥಾನದ ಬಾವಿನೀರಿಲಿ ನಿತ್ಯವೂ ಮಿಂದು ಶುದ್ದಲ್ಲಿ ಒಂದರಿ ನೆಣೆ ಮಡಗ್ಗು, ಅದರ ಪೂಜಾರಿ ಕೊರಗಪ್ಪು.
ಹತ್ತರಾಣ ದಾರಿಲೆ ಹೋವುತ್ತ ಜೆನಂಗೊ ಒಂದರಿ ಮೆಟ್ಟುಕಲ್ಲು ಹತ್ತಿ ಕುಂಕುಮ ಮಡಗಿಯೊಂಗು.
ದಿನಾಗುಳೂ ಜೆನ ಸೇರಿಯೇಸೇರುಗು ಹೇಳಿ ಏನಿಲ್ಲೆ, ಆದರೆ ಪ್ರತಿ ತಿಂಗಳ ಶೆಂಕ್ರಾಂತಿಯ ಕಾಲಲ್ಲಿ ಒಂದರಿ ಬಟ್ಟಮಾವ° ದೀಪ ತೋರುಸುತ್ತವಿದಾ; ಆ ದಿನ ಅಂತೂ ಒಳ್ಳೆತ ಜೆನ ಸೇರುಗು.
ಪ್ರತಿಯೊಬ್ಬನೂ ಅವರವರ ಮನಸ್ಸಿಲಿ ಇದ್ದದರ ಅಬ್ಬೆಯ ಕೈಲಿ ಹೇಳಿಗೊಂಡು, ಸಮಾದಾನ ಕಂಡುಗೊಂಡು ಮನೆಗೆ ಪ್ರಸಾದ ತೆಕ್ಕೊಂಡು ಹೋವುತ್ತ ಸಂದರ್ಭ. ಪಾರೆಅಜ್ಜಿ ಪ್ರಸಾದ ಹೇಳಿರೆ – ಜಾತಿಬೇಧ ಬಿಟ್ಟು ಎಲ್ಲೋರುದೇ ಹಾಕಿಗೊಂಬ ಸಂದರ್ಭ ಬಯಿಂದು.

ಶೆಂಕ್ರಾಂತಿಗೆ ಜೆನ ನೂರರಲೆಕ್ಕಲ್ಲಿ ಬಂದರೆ, ಒರಿಶಕ್ಕೊಂದರಿ ನೆಡೆತ್ತ ನೇಮ ಇದ್ದಲ್ಲದೋ – ಈಗ ಅದು ಮಹೋತ್ಸವ ಆಗಿ ಬಿಟ್ಟಿದು. ಆ ನೇಮಕ್ಕೆ ಸಾವಿರಗಟ್ಳೆಲಿ ಜೆನ ಸೇರ್ತು.|
ಹಗಲಿಂಗೆ ತಂತ್ರಿಗೊ ಶುದ್ಧ ಕಲಶ ಮಡಗಿ ಅಭಿಷೇಕ ಮಾಡಿರೆ, ಇರುಳಿಂಗೆ ಭೂತಾರಾಧನೆ.
ಮಧ್ಯಾಹ್ನಕ್ಕೆ ವೈದೀಕ ಕಾರ್ಯಕ್ರಮಂಗೊ, ಇರುಳಿಂಗೆ ದೈವೀಕ ಕಾರ್ಯಕ್ರಮಂಗೊ!
~

ಆ ದಿನ ಇರುಳಿಂಗೆ ಬಂಡಾರವ – ಭೂತದ ಮೂರ್ತಿ, ಕಡ್ತಲೆ ಇತ್ಯಾದಿಗಳ ಒಳಗೊಂಡ ಆಭರಣ ಸಮೂಹ – ಬಂಡಾರವ ಭೂತಸ್ಥಾನಂದ ತೆಕ್ಕೊಂಡು ಹೋಪದು. ತೆಕ್ಕೊಂಡು ಹೋಪದು ಎಲ್ಲಿಗೆ – ಆಚ ಗುಡ್ಡೆಗೆ, ಭೂತಕೊಣಿತ್ತಲ್ಲಿಗೆ.
ಭೂತಸ್ಥಾನ ಇಪ್ಪ ಗುಡ್ಡೆಯ ಇಳುದು, ನೀರಿನ ತೋಡು ದಾಂಟಿ, ಎಡತ್ತಿನ ಗುಡ್ಡೆಯ ಪುನಾ ಭೂತಸ್ಥಾನದಷ್ಟೇ ಎತ್ತರಕ್ಕೆ ಹತ್ತಿರೆ – ಗುಡ್ಡೆಯ ನೆಡುಕೆ ಒಂದು ಮಜಲು ಕಾಣ್ತು. ಆ ಮಜಲಿಲೇ ಭೂತ ಕೊಣಿತ್ತದು.
ಇಲ್ಲಿಂದಲ್ಲಿಗೆ ಕೂಗಳತೆ ಆದರೂ ನೆಡದು ಹೋಯೇಕಾರೆ ಗುಡ್ಡೆ ಇಳುದು – ಹತ್ತೇಕಿದಾ.
ಮದಲು ಒಂದು ಮರ ಮಾಂತ್ರ ಇದ್ದದು ಕೊಣಿತ್ತಲ್ಲಿ; ಬ್ರಮ್ಮಕಲಶದ ಒರಿಶ ಒಂದು ಸಿಮೆಂಟಿನ ಕಟ್ಟೆ ಕಟ್ಟಿದ್ದು ಮೇಸ್ತ್ರಿ; ಭೂತದಕಟ್ಟೆ ಹೇದು ಹೆಸರು ಅದಕ್ಕೆ.

ಭೂತಸ್ಥಾನಂದ ಕೊಣಿತ್ತಲ್ಲಿಗೆ ಬಂಡಾರ ತೆಗದು ತೆಕ್ಕೊಂಡು ಹೋಪದೇ ಒಂದು ಗವುಜಿಯೇ.
ಉದಿಯಪ್ಪಗ ತಂತ್ರಿಗೊ ಶುದ್ದ ಮಾಡಿದ ಬಂಡಾರವ ಬಟ್ಟಮಾವ° ಗುಡಿಒಳದಿಕಂದ – ಒಂದೊಂದೇ ತಂದು ಮಣೆಲಿ ಮಡಗುದು.
ಬಟ್ಟಮಾವಂಗೆ ಎಲ್ಲ ತಂದಾದ ಕೂಡ್ಳೇ ಒಂದು ಪ್ರಾರ್ಥನೆ ಮಾಡ್ತವು; ಆ ಪ್ರಾರ್ಥನೆಯ ಆವೇಶ ಏರಿದ ಹಾಂಗೇ – ಏರಿ ಏರಿ ಏರಿ – ಸ್ವರ ದೊಡ್ಡ ಆಗಿ ತಾರಕಕ್ಕೆ ಎತ್ತಿಪ್ಪಗ – ಬಂಡಾರ ತೆಕ್ಕೊಂಡು ಹೋಪಲೆ ಹೇಳಿ ಸೇರಿದ ಪೂಜಾರಿ ಕುಟುಂಬದೋರಿಂಗೆ ದರ್ಶನ ಸುರು ಆವುತ್ತು.
ಅದೇ ದರ್ಶನಲ್ಲಿ ಈ ಬಂಡಾರವ ಬೂತದಕಟ್ಟೆಗೆ ಮೆರವಣಿಗೆ ಮಾಡ್ತದು; ಬೇಂಡುವಾಲಗದ ಒಟ್ಟಿಂಗೆ.
ಬಂಡಾರ ಅಲ್ಲಿಗೆ ಎತ್ತಿದ ಮತ್ತೆಯೇ, ಪೂಜಾರಿ ಬೂತಕಟ್ಟುತ್ತ ಕೋಟಿಗೆ ಎಣ್ಣೆ ಕೊಡುದು.
ಆ ಎಣ್ಣೆಯ ಉದ್ದಿಗೊಂಡು, ಹೆರಿಯೋರಿಂಗೆಲ್ಲಾ ಕಾಲು ಹಿಡುದು, ಮಿಂದಿಕ್ಕಿ ಬಂದು, ಕೋಟಿ ಬೂತ ಕಟ್ಟುತ್ತ ಕಾರ್ಯ ಸುರುಮಾಡ್ತು.

~
ಹಾಂಗೆ ಮಿಂದಿಕ್ಕಿ ಬಂದ ಕೋಟಿ ಭೂತ ಕಟ್ಟುಲೆ ಸುರುಮಾಡ್ತು.
ಹೇಳಿತ್ತುಕಂಡ್ರೆ – ಭೂತದ ಸ್ವರೂಪ, ಕಲ್ಪನೆಗೆ ಅನುಗುಣವಾದ ಮುಖವರ್ಣಿಕೆಯ ಹಾಕಿಗೊಳ್ತು, ಸೂಕ್ತವಾದ ವೇಷಭೂಷಣಂಗಳ ಮಾಡಿಗೊಳ್ತು. ವೇಷಾಭರಣ ಭೂಷಿತ ಆ ರೂಪವ ಕಂಡ್ರೆ ಸಾಕ್ಷಾತ್ ಪಾರೆಅಜ್ಜಿಯೇ ಎದ್ದು ಬಂದ ಹಾಂಗೆ ಅನುಸೇಕು, ಅಷ್ಟು ರೌದ್ರ,ಚೆಂದ!

ಭೂತ ಕಟ್ಟಿ ಆದ ಮತ್ತಾಣ ಕಾರ್ಯ ಎಂತರ? ಭೂತ ಎದ್ದುನಿಲ್ಲುತ್ತು!
ಭೂತದ ಅಮೋಘ ಶೆಗ್ತಿಯ ತನ್ನ ದೇಹದ ಒಳಂಗೆ ಕಲ್ಪಿಸಿಗೊಂಡು, ಮನಸ್ಸಿಂಗೆ ಆ ಭೂತವನ್ನೇ ಆವಾಹನೆ ಮಾಡಿಗೊಂಡು, ಕಾಯಾ-ವಾಚಾ-ಮನಸಾ – ಆ ಭೂತದ್ದೇ ಪ್ರತಿರೂಪವ ಹೊಂದಿಗೊಂಡು, ತನ್ನ ಸರ್ವಸ್ವವೂ ಆ ಭೂತವೇ, ಆ ಭೂತವೇ ತನ್ನ ಸರ್ವಸ್ವ – ಹೇಳ್ತ ಅದ್ವೈತತೆಲಿ ಆವೇಶ ಸುರು ಮಾಡುದು, ಅದುವೇ ಭೂತ ಎದ್ದು ನಿಂಬದು. ಸೇರಿದ ಸಭೆಗೆ ಒಂದು ಆಕರ್ಷಕ, ಅವರ್ಣನೀಯ ಅನುಭವ.

ಅಷ್ಟರ ಒರೆಂಗೆ ಬರೇ ’ಕೋಟಿ’ ಆಗಿದ್ದ ಪಾತ್ರಿ, ಇನ್ನು ದರ್ಶನ ಬಂದಿದ್ದ ’ಭೂತ’ ಆಗಿ ಬಿಡ್ತು.
ಕೂದುಗೊಂಡು, ಒರಗಿಂಡು, ಐಸ್ಕ್ರೀಮು ನಕ್ಕೆಂಡು, ಚರುಂಬುರಿ ತಿಂದೊಂಡು – ಇದ್ದ ಸರ್ವ ಸಭೆಯೂ ಒಂದರಿ ಎದ್ದು ನಿಲ್ಲೇಕು.
(ಬ್ರಾಹ್ಮಣರು ನಿಲ್ಲೇಕು ಕೇಳ್ತ ಕಟ್ಟುನಿಟ್ಟು ಇಲ್ಲೆ; ಕೂದುಗೊಂಡೇ ಭೂತವ ನೋಡ್ಳಕ್ಕು.)
ಈ ಹೊತ್ತಿಂಗೆ ಭೂತದ ದರ್ಶನಪಾತ್ರಿಯಷ್ಟೇ ದರ್ಶನ ಬಪ್ಪದು ಬೇಂಡುವಾಲಗದೋರಿಂಗೆ!

ಮತ್ತೆ, ಹರಕ್ಕೆ ಸಲ್ಲುಸಿದ್ದರ ಸ್ವೀಕಾರ ಮಾಡಿಗೊಂಡು – ಬೇಕಾದೋರಿಂಗೆ ಅನುಗ್ರಹ ಮಾಡಿಗೊಂಡು – ಎಡೆಡೆಲಿ ತಾಳವಾದ್ಯದ ಲಯಕ್ಕೆ ಸರಿಯಾಗಿ ಹೆಜ್ಜೆ ಹಾಕಿ ಕೊಣಿತ್ತದು. ಇದುವೇ ಬೂತ ಕೊಣಿವದು.
ಅದಿರಳಿ
~

ಈ ಭೂತಕಟ್ಟುತ್ತದು, ಎದ್ದುನಿಂಬದು ಕೊಣಿತ್ತದು, ಎಲ್ಲವನ್ನುದೇ ಹೆಚ್ಚಿನೋರು ಕಂಡಿರ್ತವು.
ಆದರೆ, ಅಕೇರಿಯಾಣ – ಬೂತ ಬಿರಿವದರ ಹೆಚ್ಚಿನವು ಕಂಡಿರ್ತವಿಲ್ಲೆ. ಅಲ್ಲದೋ?
ಒಳುದ ಎಲ್ಲಾ ಘಟನೆಗಳನ್ನೂ – ಆರು ಬೇಕಾರೂ ಕಾಂಬಲೆ ಸಿಕ್ಕುಗು, ಆದರೆ ಈ ಭೂತ ಬಿರಿವದರ ನೋಡೇಕಾರೆ, ನಮ್ಮ ಹತ್ತರಾಣ ಪೈಕಿಲಿ ಬೂತ ನೆಡೇಕು / ನೆಡದಿರೇಕು. ಎಂತಕೆ ಹೇಳಿರೆ, ಬೂತ ನೋಡ್ಳೆ ಹೇದು ಹೋದ ದಿಕ್ಕೆ ಬಿರಿವನ್ನಾರ ಆರುದೇ ನಿಲ್ಲುತ್ತವಿಲ್ಲೆ. ಬಿರಿಯೇಕಾರೆ ಮದಲೇ ಬ್ರಾಹ್ಮಣರ ಕಳುಸಿಕೊಡ್ತವು. ಹಾಂಗಾಗಿ, ಬಿರಿವನ್ನಾರ ನಾವು ಇರೇಕು ಹೇಳಿ ಇದ್ದರೆ, ನಮ್ಮ ಪೈಕಿಲೇ ಆಗಿರೇಕು. 🙂

ಒಪ್ಪಣ್ಣನ ಹತ್ತರಾಣ ಭೂತ ಪಾರೆ ಅಜ್ಜಿ ಆದ ಕಾರಣ, ಭೂತ ಬಿರಿವ ಸಂದರ್ಭಲ್ಲಿ ಒಪ್ಪಣ್ಣ ಅಲ್ಲೇ ಇಪ್ಪದಿದ್ದು.
ಹಾಂಗಾಗಿ, ಈ ಘಟನೆಗೊ ಕಣ್ಣಿಂಗೆ ಕಟ್ಟಿದಷ್ಟು ಸ್ಪಷ್ಟವಾಗಿ ಗೊಂತಿದ್ದು.
ಗೊಂತಿದ್ದೋರಿಂಗೆ ಗೊಂತಿದ್ದು, ಗೊಂತಿಲ್ಲದ್ದೋರಿಂಗೆ ಗೊಂತಪ್ಪಲಾತು – ಬೈಲಿಲಿ ಒಂದರಿ ಮಾತಾಡಿಗೊಂಡರೆ ಹೇಂಗೆ ಹೇದು ಕಂಡತ್ತು.
ಆಗದೋ? 🙂

ಭೂತ ಬಿರಿವದು:

ಬೂತ ಬಿರಿವದು ಹೇಳಿತ್ತುಕಂಡ್ರೆ– ಬೂತ ಎದ್ದುನಿಂಬದರ ಸರಿಯಾದ ವ್ಯುತ್ಕ್ರಮ ರೂಪ.
ಯೇವ ಮಹಾನ್ ಚೈತನ್ಯವ ಮೈಮನಸ್ಸಿಂಗೆ ಆವಾಹನೆ ಮಾಡಿ ಬೂತ ಎದ್ದು ನಿಂದಿದೋ, ಇಷ್ಟೊತ್ತು ಇದ್ದ ಆವೇಶದ ಸರ್ವಸ್ವವನ್ನುದೇ ಪುನಾ ಆ ಮಹಾಶೆಗ್ತಿಗೇ ಅರ್ಪಣೆ ಮಾಡ್ತ ಸಂದರ್ಭಕ್ಕೆ ’ಬಿರಿವದು’ ಹೇಳ್ತವು. ಸುಲಾಬಲ್ಲಿ ಹೇಳ್ತರೆ, ಪಾತ್ರಿಯ ಮೈಲಿ ಇಪ್ಪ ಭೂತದ ಶೆಗ್ತಿ ಪ್ರಕೃತಿಯ ಒಟ್ಟಿಂಗೆ ಲೀನ ಆಗಿ ಬಿಡುದು.

ಪಾರೆ ಅಜ್ಜಿ ಕೊಣಿವದು ಭೂತಸ್ಥಾನದ ಎದುರು ಅಲ್ಲದ್ದರೂ ಬಿರಿವದು ಭೂತಸ್ಥಾನದ ಎದುರೇ.
ಮುನ್ನಾದಿನ ಬಂಡಾರ ತೆಕ್ಕೊಂಡು ಹೋಗಿ, ಇರುಳೇ ಬೂತ ಎದ್ದುನಿಂದಿರ್ತಲ್ಲದೋ – ಬಂದೋರ ಎಲ್ಲಾ ಕಷ್ಟನಷ್ಟಂಗಳ ಕೇಳಿ, ಅವಕ್ಕೆ ಸಮಾದಾನ ಕೊಡುವಗ ಮರದಿನ ಮದ್ಯಾನ್ನ ಆಗಿರ್ತು. ಹಾಂಗಾಗಿ, ಮರದಿನ ಮದ್ಯಾಂತಿರುಗಿಯೇ ಬಿರಿವಲಾತಟ್ಟೆ!
ಸ್ಥಾನಂದ ಹೋಪಗ ಹೇಂಗೆ ಮೆರವಣಿಗೆಲಿ ಹೋಯಿದೋ, ಬಿರಿವಲಪ್ಪಗಳೂ “ಬಿರಿವ ಮೆರವಣಿಗೆಲಿ”ಯೇ ಸ್ಥಾನಕ್ಕೆ ಬಪ್ಪದು!
ಬಂಡಾರ ಹೋಪಗ ತೆಕ್ಕೊಂಡು ಹೋದ ಪಂಚಲೋಹದ ಆ ಮೂರ್ತಿಯನ್ನೂ ಬೂತದ ಒಟ್ಟಿಂಗೇ ತಂದು ಬೂತಸ್ಥಾನದ ಮೆಟ್ಳಿಲಿಪ್ಪ ಮಣೆಮೇಲೆ ಮಡಗುದು ಪೂಜಾರಿಯ ಕೆಲಸ.
ಈಗ ಅದು ಬರೇ ಪಂಚಲೋಹದ ಮೂರ್ತಿ ಅಷ್ಟೇ! ಅಂಬಗ ಭೂತ ಎಲ್ಲಿರ್ತು – ಆವೇಶರೂಪಲ್ಲಿ ಕೋಟಿಯ ಮೈ ಮೇಲೆ ಇರ್ತು!!
ಆ ಮೂರ್ತಿಯ ಹಿಂದಂದಲೇ ಬೂತ ದರ್ಶನಲ್ಲಿ ಬಕ್ಕು.
~
ಊರೆಲ್ಲ ಸುತ್ತಿ ಅಂಗಣಕ್ಕೆ ಬಪ್ಪಗ ಭೂತದ ಕಾಲಿಂಗೆ ನೀರೆರದು ಸ್ವಾಗತ ಮಾಡಿದ್ದು, ಪೂಜಾರಿ.
ಭೂತಸ್ಥಾನದ ಅಂಗಣಕ್ಕೆ ಭೂತ ಬಯಿಂದು, ಯೆಜಮಾನ ಸ್ವಂತ ಮನೆಜಾಲಿಂಗೆ ಬಪ್ಪ ಗಾಂಭೀರ್ಯಲ್ಲಿ.
ಈ ಒರಿಶದ ಹರಕ್ಕೆ ಪೂರ ಸಂದಾಯ ಆಯಿದು – ಹೇಳ್ತದರ ಸಂತೋಷಲ್ಲಿ ಒಪ್ಪಿಗೊಂಡಿದು.
ಸಂತೋಷ ಆದರೂ ಬೊಬ್ಬೆ, ಪಿಸುರು ಬಂದರೂ ಬೊಬ್ಬೆ – ಹಾಂಗಾಗಿ, ಬೂತ ಎಂತ ಹೇಳ್ತಾ ಇದ್ದು ಹೇಳ್ತದು ಅರ್ತ ಆಯೇಕಾರೆ ರಜ್ಜ ಅಭ್ಯಾಸ ಬೇಕು!
~

ಭೂತ ಬಿರಿವನ್ನ ಮದಲೇ ಜೆನಂಗೊ ಬಿರುದ್ದವು!! ಸಾವಿರಾರು ಜೆನ ಇದ್ದ ಸಮೂಹ ಪೂರ ಅದಾಗಲೇ ಬಿರುದ್ದು, ಇನ್ನಿಪ್ಪದು ಹತ್ತೈವತ್ತು ಜೆನ – ಹತ್ತರಾಣವು ಮಾಂತ್ರ.
ಪೂಜಾರಿಯ ಕುಟುಂಬದೋರು, ಹತ್ತರಾಣ ನೆರೆಕರೆಯೋರು, ಭೂತಸ್ಥಾನದ ಕಮಿಟಿಯೋರು!
ಅಷ್ಟೇಯೋ?
ಅಷ್ಟುಮಾಂತ್ರ ಅಲ್ಲದ್ದೆ, ಇನ್ನೆರಡು ವೆಗ್ತಿತ್ವ ಇರ್ತವು –
ಒಂದನೇದಾಗಿ – ಬಟ್ಟಮಾವ°. ಬಟ್ಟಮಾವ°?! ಅಪ್ಪು, ಆ ಪಂಚಲೋಹದ ಮೂರ್ತಿಗೆ ಶುದ್ಧಕಲಶ ಎರದು, ಒಳಾಣ ಮಣೆಮಂಚಮಲ್ಲಿ ಮಡಗಿ ಒಂದು ಆರತಿ ಮಾಡೆಡದೋ..!
ಎರಡ್ಣೇದು – ಕೋಟಿಯ ಕುಟುಂಬಸ್ಥರು!
~

ಬಿರಿವಲಾದ ಬೂತ ಬಟ್ಟಮಾವಂಗೆ ವಿಶೇಷ ಬೊಂಡ ಒದಗುಸಿತ್ತು
ಪೂಜಾರಿಗೊಕ್ಕೆ, ಅವರ ಕುಟುಂಬಸ್ಥರಿಂಗೆ, ಅವರ ಮನೆಯೋರಿಂಗೆ – ಎಲ್ಲೋರಿಂಗೂ ಬೂಳ್ಯ (ಭೂತ ಕೊಡುವ ಗಂಧ ಪ್ರಸಾದಕ್ಕೆ ತುಳುವಿಲಿ ಬೂಳ್ಯ ಹೇಳ್ತವು) ಹಂಚಿತ್ತು.
ಎಲ್ಲೋರಿಂಗೆ ’ಗುಣ ಬರಳಿ’ ಹೇಳ್ತ ಮಾತುಗಳ ಹೇಳಿಗೊಂಡು ಬಿರಿವಲೆ ತಯಾರಾತು!
~
ವಾಲಗದೋರು ಅವಕ್ಕೇ ದರ್ಶನ ಬಂದ ಹಾಂಗೆ ಜೆಪ್ಪುತ್ತಾ ಇದ್ದವು; ಆ ಬೇಂಡಿನ ಗಿಜಿಗಿಜಿ ಕೇಳಿರೆ ಎಂತವಂಗೂ ಹೆದರಿ ದರ್ಶನ ಬಕ್ಕು.
ಭೂತ ಎಲ್ಲಿಲ್ಲದ್ದ ಆವೇಶಲ್ಲಿ ಕೊಣಿತ್ತಾ ಇದ್ದು.
ಬರೇ ನೆಲಕ್ಕಲ್ಲಿ ಮಾಂತ್ರ ಕೊಣುದ್ದು ಸಾಲದ್ದೆ, ಅದರದ್ದೇ ಆದ ಷ್ಟೂಲಿಲಿ ನಿಂದು ಕೊಣಿತ್ತಾ ಇದ್ದು.
ಒಂದು ಕೈಲಿ ದೀಟಿಯೆ ( / ದೀಟಿಗೆ / ದೀವಟಿಗೆ) ಹಿಡುದು, ಮತ್ತೊಂದು ಕೈಲಿ ಮಣಿ ಹಿಡುದು ಅದರ ಚಾವಡಿಗೆ ಆರತಿ ಮಾಡಿತ್ತು; ಅದು ಆರತಿ ಮಾಡುವ ಕ್ರಮ ಹಾಂಗೆ!
ಆರತಿ ಆದ ಮತ್ತೆ ರಜ್ಜ ಅಕ್ಕಿ ಕಾಳು ತೆಕ್ಕೊಂಡು ಸೇರಿದ ಹತ್ತೈವತ್ತು ಜೆನರ ಮೇಗೆ ಬಿಕ್ಕಿತ್ತು. ಎಲ್ಲೋರುದೇ ಭಯಭಕ್ತಿಲಿ ತಲೆತಗ್ಗುಸಿ ನಿಂದವು.
(ನಾಗರ) ಬೆತ್ತದ ಕೋಲು, ಕಡ್ತಲೆ (ಬೆಳ್ಳಿಯ ಕತ್ತಿ), ಚವಳಿ (ಚಾಮರ) – ಮೂರನ್ನೂ ಹಿಡ್ಕೊಂಡು ಎಲ್ಲೋರಿಂಗೂ ಆಶೀರ್ವಾದ ಮಾಡಿಗೊಂಡು ಬತ್ತಾ ಇದ್ದು. ಆ ಕಡ್ತಲೆ ಕೊಡಿ ಒಂದಾರಿ ಮುಟ್ಟಿಕ್ಕುತ್ತೆ ಹೇದು ಎಲ್ಲೋರುದೇ ನುಗ್ಗಿನುಗ್ಗಿ ಎದುರು ಬತ್ತಾ ಇದ್ದವು.
ಮುಂದಲೆಗೆ ಮಡಗಿ ಕಟ್ಟಿದ ಕದ್ರುಮುಡಿ (ಕದಿರು-ಮುಡಿ)ಲಿ ಇಪ್ಪ ಬೆಳ್ಳಿಯ ಕಡ್ಡಿಗಳ ಎಡೆಂಗೆ ಹತ್ತಿಪ್ಪತ್ತರ ನೋಟು ಕಾಣಿಕೆ ಮಾಡ್ತಾ ಇದ್ದವು.
~
ಬೇಂಡು ವಾಲಗ ಏರಿತ್ತು ಒಂದರಿಯೇ!
ಪಾರೆ ಅಜ್ಜಿಯ ಪ್ರತ್ಯಕ್ಷ ಕಾಣ್ತ ದೈವಾನುಕೂಲ ಈ ಒರಿಶದ ಪಾಲಿಂಗೆ ಮುಗಿತ್ತ ಹಂತ ಬತ್ತಾ ಇದ್ದು!
ಏಳು ಮಾಗಣೆ(ಸೀಮೆ)ಗೆ ಅದರ ಆಶೀರ್ವಾದ ಇಪ್ಪದರ ಒತ್ತಿ ಹೇಳಿತ್ತು, ಬಿರಿವ ಮೂರ್ತ ಒದಗಿ ಬಂತು ಹೇಳ್ತದರ ನೆಂಪು ಮಾಡಿತ್ತು. ಎಲ್ಲೋರಿಂಗೂ ಅದು ಸತ್ಯ ತೋರುಸಿ ಕೊಡ್ತೆ ಹೇಳ್ತದರ ಮತ್ತೆ ಮತ್ತೆ ನೆಂಪುಮಾಡಿತ್ತು.
ಎರಡೂ ಕೈಗಳ ಮೇಗೆ ಎತ್ತಿ ಆಶೀರ್ವಾದ ಮಾಡಿಗೊಂಡೇ – ಪ್ರದಕ್ಷಿಣಾಕಾರ ತಿರುಗಿ ತಿರುಗಿ ತಿರುಗಿತ್ತು.

~
ಎಲ್ಲೋರಿಂಗೂ ಆಶೀರ್ವಾದ ಮಾಡಿಕ್ಕಿ – ಒಂದರಿಯೇ ಎರಡುಕೋಲು ಹಾರಿ ಗರ್ಭಗುಡಿ ಹೊಡೆಂಗೆ ತಿರುಗಿ ನಿಂದತ್ತು. ಸಾಮಾನ್ಯದೋರಿಂಗೆ ಪಕ್ಕನೆ ಹೆದರಿ ಹೋಕು ಒಂದರಿ!
ನಿನ್ನೆ ಇರುಳಿಂದ ಹೀಂಗೆ ಎಷ್ಟೂ ಸರ್ತಿ ಹಾರಿದ್ದೋ – ಉಮ್ಮಪ್ಪ!
ಕೋಟಿಯ ಕೈ-ಕ್ಕಾಲು ಮಾಲಿತ್ತು ಒಂದರಿ. ದೇಹದ ಚೈತನ್ಯ ಇಳಿತ್ತಾ ಇಪ್ಪದಕ್ಕೆ ಕೋಟಿಯ ತಮ್ಮನ ಮಗ ಹತ್ತರೆಯೇ ಸುಳಿತ್ತಾ ಇದ್ದು..
ಕೋಟಿಗೆ ಚೈತನ್ಯ ಇಳಿಗು, ಭೂತಕ್ಕೆ ಇಳಿತ್ತಾ?

ಎಡದ ಕೈಲಿ ದೀವಟಿಗೆ, ಬಲದ ಕೈಲಿ ಕಡ್ತಲೆ, ಬಲದ ಪವಿತ್ರಬೆರಳಿಂಗೆ ಸಿಕ್ಕುಸಿದ ಚಾಮರ, ಬೆತ್ತ, ಮಣಿ – ಅದರ ಬಂಡಾರ ಎಲ್ಲವನ್ನೂ ಹಿಡ್ಕೊಂಡು ಜೋರಾಗಿ ಕುಶಿಯ ಬೊಬ್ಬೆ ಹೊಡದು – ಹೊಡಕ್ಕೊಂಡೇ, ಮೂರು ಸುತ್ತು ಹೊಡದು, ಹೊಡದು, ನೇರವಾಗಿ ಬಂದು ಭೂತಸ್ಥಾನದ ಮೆಟ್ಳಿನ ಮೇಗೆ ಬಿದ್ದು ಎದುರಿಪ್ಪ ಮೂರ್ತಿಗೆ ಹೊಡಾಡಿತ್ತು.
ದೊಪ್ಪನೆ ಆ ದೇಹ ಬಿದ್ದಪ್ಪಗ ಆ ಗಾಳಿಗೆ ನೆಲಕ್ಕಂದ ರಜ ದೂಳುದೇ ಎದ್ದತ್ತು.
ಬಿದ್ದಲ್ಲಿಗೇ, ಅದರ ಬಾಯಿಗೆ ಕೌಳಿಗೆ ನೀರು ಎರದವು ಬಟ್ಟಮಾವ°.
ಎಲ್ಲವೂ ಬಿರುದು ಕಳುದತ್ತು.
~

ಬೂತ ಹೇದರೆ ಯೇವದು? ಆವೇಶಲ್ಲಿ ಇದ್ದ ಕೋಟಿಯೋ? ಅಲ್ಲ ಆ ಪಂಚಲೋಹದ ಮೂರ್ತಿಯೋ?
ಇಲ್ಲಿ ಕೋಟಿ ಯೇವದು, ಬೂತ ಯೇವದು ಹೇಳೇಕಾರೆ ನಮ್ಮ ಸಮಾಜದ ಒಳಾಣ ವೆವಸ್ತೆ ನವಗೆ ಅರಡಿಯೇಕು.
ಭೂತದ ಆವೇಶ ಬಂದು, ಎದ್ದು ನಿಂದು, ಬಿರಿವನ್ನಾರ ಅವಧಿಲಿ ಆ ಕೋಟಿಯನ್ನೇ ಪ್ರತ್ಯಕ್ಷ ಭೂತ ಹೇಳಿ ತಿಳ್ಕೊಂಬದು ನಮ್ಮ ಸಮಾಜದ ಹೆಗ್ಗಳಿಕೆ.
ಆ ಸಂದರ್ಭಲ್ಲಿ ಇಡೀ ಸಮಾಜವೇ ಅದರ ಕಾಲಿಂಗೆ ಅಡ್ಡಬೀಳ್ತು. ಅದರ ಒಂದು ಆಶೀರ್ವಾದಕ್ಕೆ ಜೆನಂಗೊ ಹಂಬಲುಸುತ್ತವು. ಅದರ ಒಂದು ಒಳ್ಳೆ ಮಾತಿಂಗೆ ಇರುಳಿಡೀ ಕಾದು ನಿಲ್ಲುತ್ತವು. ಅದು ಕೊಡ್ತ ಒಂದು ಅಭಯಕ್ಕೆ ಎಷ್ಟೆಷ್ಟೋ ದೂರಂದ ಜೆನಂಗೊ ಬಂದು ಸೇರ್ತವು.

ಬಟ್ಟಮಾವ° ಎರದ ನೀರು ಅದರ ಬಾಯಿಗೆ ಹೋಪದ್ದೇ, ದೊಂಡೆ ಒಳಾಂದಲೇ ಒಂದು ವಿಕಾರ ಶಬ್ದ ಹೆರಡುಸಿ ತಲೆ ಅಡ್ಡ ಹಾಕಿತ್ತು.
ಕಣ್ಣಗುಡ್ಡೆಗೊ ಮೇಲೆ ಹೋಗಿ, ಕೈಕ್ಕಾಲು-ತಲೆ ಅಡ್ಡ ಹಾಕಿ ಮನುಗಿದ್ದರ್ಲಿ ಮೈ ಒಳಾಣ ಪರಮಾತ್ಮ ಮಾಂತ್ರ ಅಲ್ಲ, ಜೀವಾತ್ಮವೇ ಹೆರಟತ್ತೋ ಕಾಣೆಕ್ಕು!
~
ಪೂಜಾರಿಗೊ ಒಂದು ಕೊಡಪ್ಪಾನ ನೀರು ತಂದು ಎರದವು.
ಕೋಟಿಯ ತಮ್ಮನ ಮಗ ತಿಮ್ಮ, ಅದರ ಎರಡೂ ರಟ್ಟೆ ಹಿಡುದು ಸರಿ ಕೂರುಸಿತ್ತು, ಅದಕ್ಕೆ ತಲೆನೆಗ್ಗಲೇ ಎಡಿಯ ಈಗ!
ಅಸಾಧಾರಣ ಬಚ್ಚಲು, ಕೋಟಿಗೆ.
ಈಗ, ಎರಡು ನಿಮಿಶ ಮದಲು ಹಾರಿ, ಬೊಬ್ಬೆ ಹೊಡದ – ಅದೇ ಜೆನವೋ ಹೇದು ಸಂಶಯ ಬತ್ತಷ್ಟು ಬಚ್ಚಲು!
ಅದರ ಮೈಮೇಗೆ ಮಾಡಿದ ಭೂತದ ಅಲಂಕಾರಂಗಳ ತೆಗವಷ್ಟೂ ಚೈತನ್ಯ ಇಲ್ಲೆ ಅದಕ್ಕೆ!
ಎಂತರ ಬಚ್ಚಲು ಹಾಂಗುದೆ?
ತಲೆ ಮೇಗೆ ಐದಾರು ಕಿಲ ತೂಕದ “ಕದ್ರುಮುಡಿ” ಹೊತ್ತ ಬಚ್ಚಲೋ?
ಅಲ್ಲ, ಹೆಣ್ಣುಭೂತದ ಎದೆಗೆ ಮಡಗುತ್ತ ಬೆಳ್ಳಿಯ “ಮಿರೆಕ್ಕಟ್ಟ್” ಆಭರಣ ಹೊತ್ತ ಬಚ್ಚಲೋ?
ಅಲ್ಲ, ಕಾಲಿಂಚು ದಪ್ಪ – ಒಂದು ಕೋಲು ಉದ್ದದ ಬೆಳ್ಳಿ ಕಡ್ತಲೆಯ ಕರಿಕ್ಕೆ ಹುಲ್ಲಿನ ಹಾಂಗೆ ಹಿಡುದು ಬೀಸಿದ ಬಚ್ಚಲೋ?
ಕನಿಷ್ಠ ಐದು ಕೇಜಿ ಇಪ್ಪ ದೀಟಿಯೆಯ ಅಂಬಗಂಬಗ ಬಲದ ಕೈಲಿ ಹಿಡುದು, ಎಡದ ಕೈಲಿ ಎರಡು ಕೇಜಿ ತೂಕದ  ಘಂಟಾಮಣಿಯ ಹಿಡುದು ಆರತಿಯ ಮಾಡಿದ ಬಚ್ಚಲೋ?
ಅಲ್ಲ, ಕೇಜಿತೂಕದ ಗಗ್ಗರ (– ಎರಡು ಕಾಯಿಸುಗುಡಿನ ಒಟ್ಟೀಂಗೆ ಮಡಗಿ ಕಟ್ಟಿದ ನಮುನೆಯ ಆಕಾರದ ಕಂಚಿನ ಗೆಜ್ಜೆ)  ಎರಡೂ ಕಾಲಿಲಿ ಕಟ್ಟಿ ಕೊಣುದ ಬಚ್ಚಲೋ!
ಚೌಳಿ, ಕಡ್ತಲೆ, ಬೆತ್ತ, ಗಗ್ಗರ, ಕವಚ, ಕದ್ರುಮುಡಿ, ಮಿರೆಕ್ಕಟ್ಟ್, ಮಣಿ, ದೀಟಿಯೆ, ಪಟ್ಟಿ – ಇದೆಲ್ಲ ಹೊತ್ತುಗೊಂಡು.. ಅಬ್ಬಾ! ಒಂದು ಗಂಟೆ ಅಂತೇ ನಿಂಬದೂ ಕಷ್ಟ ನವಗೆಲ್ಲ!!
ಅದರ ಮೇಗಂದ – ನಿನ್ನೆಂದ ಇಂದಿನ ಒರೆಂಗೆ – ಸಣ್ಣ ಮಕ್ಕಳ ಹಾಂಗೆ ಹಾರೆಕ್ಕು, ಕೊಣಿಯೆಕ್ಕು, ಮಾತಾಡೆಕ್ಕು, ಸಂತೋಷ, ಕೋಪ, ಬೇಜಾರದ ಭಾವನೆಗಳ ತೋರುಸೆಕ್ಕು. ಇದರ ಬಚ್ಚಲೋ?
ಇದೆಲ್ಲದರಿಂದಲೂ ಹೆಚ್ಚಾಗಿ, ಹದಿನೆಂಟು ಗಂಟೆ ಕಾಲ ದೇಹದ ಒಳ ಆ ಭೂತಕ್ಕೆ ಆಶ್ರಯ ಕೊಟ್ಟ ಬಚ್ಚಲೋ!
ಯೇವದು ಹೇಳುದು ಸ್ವತಃ ಕೋಟಿಗೇ ಅರಡಿಯ!
~
ಕೋಟಿಯ ಅಲಂಕಾರ ಪೂರ ಬಿಚ್ಚಿದ್ದವು ಅದರ ಕುಟುಂಬದೋರು.
ಈಗ ಒಂದು ಚೆಂಡಿಹರ್ಕು ಸುತ್ತಿಗೊಂಡಿದು, ತಲೆಕಸವಿನ ಜೊಟ್ಟುಕಟ್ಟಿಗೊಂಡಿದು. ಮೋರೆಲಿ ಬಣ್ಣ ರಜರಜ ಇದ್ದು.
ಬಾರೀ ಬಚ್ಚಲಿಲಿ ಎದ್ದು ನಿಂದತ್ತು. ಜೆನಂಗೊ ಕುತೂಹಲಲ್ಲಿ ನೋಡಿಗೊಂಡೇ ಇದ್ದವು.

ಆಗ ಹೇಂಗೆ ಪ್ರದಕ್ಷಿಣೆ ಬಂದು ಎಲ್ಲೋರಿಂಗೂ ಆಶೀರ್ವಾದ ಮಾಡಿದ್ದೋ, ಈಗ ಬಗ್ಗಿ, ಎರಡೂ ಕೈ ಮುಗುದು ಹಾಂಗೇ ಪ್ರದಕ್ಷಿಣೆ ತಿರುಗಿತ್ತು.
ತನ್ನ ಬಾಯಿಲಿ ಮಾತಾಡುಸಿ, ತನ್ನ ದೇಹದ ಮೂಲಕ ಪ್ರಕಟ ಮಾಡುಸಿದ್ದು ಆ ಮಹಾಮಾಯೆ, ಮಹಾಮಾತೆ.
ಎಂತ ನ್ಯೂನಾತಿರಿಕ್ತ ದೋಷಂಗೊ ಇದ್ದರೂ, ತನ್ನ ಪಾದಕ್ಕೆ ಹಾಕಿ ಈ ಮಗಂಗೆ ಕ್ಷಮೆ ಕೊಡೆಕ್ಕು, ಹೇಳಿ ದೈನ್ಯತೆಲಿ ಹೇಳಿಕ್ಕಿ, ಪಂಚಲೋಹದ ಮೂರ್ತಿಯ ಹತ್ತರೆ ತಟ್ಟೆಲಿ ಮಡಗಿದ ಕುಂಕುಮ ತೆಕ್ಕೊಂಡು ಮೋರಗೆ ಹಾಕಿಗೊಂಡತ್ತು.
ಅದರ ಪ್ರಾರ್ಥನೆ ಮುಗಿವಗ, ಅದರ ಕುಟುಂಬಸ್ಥರು ಎಲ್ಲೋರುದೇ ಅಡ್ಡ ಬಿದ್ದವು.
ಅಬ್ಬೆಂದ ದೊಡ್ಡ ಶೆಗ್ತಿ ಯೇವದಿದ್ದು. ಎಲ್ಲರುದೇ ಸೇವೆ ಮಾಡುದು ಆ ಅಬ್ಬೆದೇ ಅಲ್ಲದೊ!

~

ಬಟ್ಟಮಾವ° ಚೆಂಬಿನ ಕೊಡಪ್ಪಾನ ಹಿಡ್ಕೊಂಡು ನೀರೆಳವಲೆ ಬಾವಿಕಟ್ಟೆಗೆ ಹೋದವು.
ಕಲಶನೀರು ಮೂರ್ತಿ ತಲಗೆ ಎರದು, ಒಳ ಇಪ್ಪ ಮಣೆಮಂಚಲ್ಲಿ ಕೂರುಸಿರೆ, ಮುಂದಾಣ ನೇಮ ಒರೆಂಗೂ ಅಲ್ಲಿಂದಲೇ ಲೋಕವ ನೋಡುಗು, ಪಾರೆ ಅಜ್ಜಿ.

~
ಭೂತ ಕಟ್ಟಿಗೊಂಡು ಕೊಣಿತ್ತ ಕಾರಣ ಅವರ ’ನಲಿಕ್ಕೆಯವು’ ಹೇಳಿಯೂ ಹೇಳ್ತವು ಜೆನಂಗೊ.
ಸಾಕ್ಷಾತ್ ಭೂತವೇ ಅವರ ಮೂಲಕ ಪ್ರಕಟ ಆವುತ್ತ ಕಾರಣ ಸಾಮಾನ್ಯವಾಗಿ ಗಾಂಭೀರ್ಯತೆಲೇ ಅವರ ಸಾಮಾಜಿಕ ಜೀವನ ಇರ್ತು!
ಕೋಟಿಗಂತೂ ಎಷ್ಟು ಗಾಂಭೀರ್ಯ – ಎಷ್ಟು ಗೌರವ,
ತರವಾಡುಮನೆಗೆ ಬಂದು ಪುಗೆರೆ ಕೇಳಿರೂ, ಗಂಜಿ ಕುಡುದರೂ, ಉಪ್ಪಾಡು ನಕ್ಕಿರೂ, ಅವರ ಆತ್ಮಾಭಿಮಾನ ಏನೂ ಕಮ್ಮಿ ಆಗಿತ್ತಿಲ್ಲೆ.
ಅವಕ್ಕೆ ಸಿಕ್ಕುವಷ್ಟು ಮರಿಯಾದಿ ಯೇವದೇ “ಪ್ರಗತಿಪರ ವಿಚಾರವಾದಿಗೊಕ್ಕೆ” ಸಿಕ್ಕುದು ಸಾಧ್ಯವೇ ಇಲ್ಲೆ.
ಇದು ಈಗಾಣ ’ದಲಿತವಾದಿಗೊಕ್ಕೆ’ ಅರ್ತ ಅಕ್ಕೋ?ನಾವುದೇ ಇದರ ತುಂಬ ಯೋಚನೆ ಮಾಡೆಕ್ಕು.
~

ಹಬ್ಬ ಕಳುದ ಕೂಡ್ಳೇ ಬೂತಾರಾಧನೆ ಸುರು ಆವುತ್ತಿದಾ ನಮ್ಮ ಊರಿಲಿ.
ಮೊನ್ನೆ ಹಬ್ಬ ಕಳಾತು. ಇನ್ನು ಹೀಂಗೆ ಎಷ್ಟು ದಿಕ್ಕೆ ಗವುಜಿ ಇದ್ದೋ – ಅಷ್ಟೂ ದಿಕ್ಕೆಯೂ ಕೋಟಿಗೊ ಬೂತ ಕಟ್ಟುತ್ತವು; ಬೂತ ಬಿರಿತ್ತವು.
ಬೂತ ಕಟ್ಟುವಗ ಸಮಾಜದ ಉತ್ತುಂಗಲ್ಲಿ ಇರ್ತವು; ಬಿರುದ ಕೂಡ್ಳೇ ಆ ಸ್ಥಾನವ ಮತ್ತೆ ಆ ಮಹಾಶೆಗ್ತಿಗೇ ಕೊಟ್ಟು, ಯೇವತ್ರಾಣಂತೆ ಮನೆಗೆ ಹೋವುತ್ತವು.
ಅನಾದಿ ಕಾಲಂದಲೂ ಹೀಂಗಿಪ್ಪ ಮಹತ್ಕಾರ್ಯ ಮಾಡ್ತಾ ಬಪ್ಪ ಎಷ್ಟೋ ಕೋಟಿಗೊಕ್ಕೆ ಒಪ್ಪಣ್ಣನ ಕೋಟಿ ಕೋಟಿ ನಮಸ್ಕಾರಂಗೊ.
ಒಂದೊಪ್ಪ: ಭೂತಂಗೊ ಲೊಟ್ಟೆ ಆದರೆ ಬಟ್ರುಗಳೂ ಲೊಟ್ಟೆಯೇ. ಪುರ್ಬು-ಬ್ಯಾರಿಯೂ ಲೊಟ್ಟೆಯೇ. ಎಲ್ಲವೂ ನಾವು ನಂಬಿಗೊಂಡ ಹಾಂಗೆ. ಅಲ್ಲದೋ?

14 thoughts on “ಭೂತ ಬಿರಿವ ಐದು ನಿಮಿಷ…

  1. ಅರೆ!ಇದು ಯಾವ ಭೂತ ?ಆನು ಪಾರೆ ಅಜ್ಜಿಯ ಹೆಸರನ್ನೇ ಕೇಳಿದ್ದಿಲ್ಲೇ ಅನ್ನೇ !ಎನ್ನ ಸಾವಿರದ ತೊಂಬತ್ತೆರಡು ಭೂತಗಳ ಪಟ್ಟಿಲಿ ಇದು ಇಷ್ಟರ ತನಕೆ ಸೇರಿದ್ದಿಲ್ಲೇ ,ಈಗ ಇದರ ಸೇರ್ಸಿ ಸಾವಿರದ ತೊಂಬತ್ತಮೂರು ಆತು ,ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದ ?ಈ ಬಗ್ಗೆ ಮಾಹಿತಿಗೆ ಆರ ಸಂಪರ್ಕಿಸಿರೆ ಅಕ್ಕು ?ಪಾರೆ ಅಜ್ಜಿಯ ಕೋಲ ಎಲ್ಲಿ ಅಪ್ಪದು?

  2. ಒಪ್ಪಣ್ಣಾ ಒಪ್ಪ ಕೊಡುವಾಗ ತಡ ಆತು… ಲೇಖನ ಮೊನ್ನೆಯೇ ಓದಿತ್ತಿ‌ದೆ…
    ಭೂತ ಬಿರಿವ ಸಂಗತಿಯ ಲಾಯ್ಕಲ್ಲಿ ವಿವರಿಸಿದ್ದೆ..

  3. ಒಪ್ಪಣ್ಣೋ…………,

    ಮನಸ್ಸಿಂಗೆ ತುಂಬಾ ಹತ್ತರಾಣ ಶುದ್ದಿಯ ಈ ವಾರ ಹೇಳಿದ್ದೆ. ತುಂಬಾ ಕೊಶೀ ಆತು. ಪಾರೆ ಅಜ್ಜಿ ಅಷ್ಟು ಹತ್ತರೆ ಇದ್ದಿದ್ದರೂ, ಎನಗೆ ಪಾರೆ ಅಜ್ಜಿಯ ಗುರ್ತ ಇತ್ತಿಲ್ಲೆ. ನೀನೇ ಎನಗೆ ಅಜ್ಜಿಯ ಮಹತ್ತಿನ ಪರಿಚಯ ಮಾಡಿದ್ದು. ಪಾರೆ ಅಜ್ಜಿಯ ವೈಭವವ ಹೇಳಿದ್ದು. ನಂತರ ಪಾರೆ ಅಜ್ಜಿಯ ಕಾರುಣ್ಯವ ಸುಮಾರು ಸರ್ತಿ ಕಂಡಿದಲ್ಲದಾ? ಮನಸ್ಸು ತುಂಬಿ ನಂಬಿದವಕ್ಕೆ ನಂಬಿಗೊಂಡು ಬಂದ ರೀತಿಲೇ ಮನದುಂಬಿ ಹರಸುತ್ತ ದೈವ.

    ಪಾರೆ ಅಜ್ಜಿಯ ಆರಾಧನೆಯ ಬಗ್ಗೆ ತುಂಬಾ ಲಾಯಕ ವಿವರ ಕೊಟ್ಟಿದೆ. ಅಲ್ಲಿ ನಡವ ಪ್ರತಿಯೊಂದು ವಿವರವೂ ಬಯಿಂದು. ಪ್ರತಿಯೊಂದನ್ನೂ ನೀನು ಹೇಂಗೆ ಅನುಭವಿಸಿದ್ದೆಯಾ ಹಾಂಗೆ ಬರದ್ದದು ಇನ್ನೂ ಲಾಯ್ಕಾಯಿದು. ಜೋಯಿಶಜ್ಜನ ಆಶೀರ್ವಾದಂದ ಸಿಕ್ಕಿದ ಈ ಅಪೂರ್ವ ಅನುಭವ ನಿನ್ನಂದಾಗಿ ಎಂಗೊಗೂ ಅನುಭವಿಸುಲೆ ಸಿಕ್ಕಿತ್ತು. ಕೋಟಿಯ ಹಾಂಗೆ ಇಪ್ಪ ಜೆನಂಗಳ ಕಾಂಬಗ ಅವರ ಜೀವನದ ಬಗ್ಗೆ ಧನ್ಯತಾ ಭಾವ ಮನಸ್ಸಿಂಗೆ ಬತ್ತು. ಒಂದು ದೈವೀ ಶಕ್ತಿಯ ಮೈಗೆ ಆವಾಹನೆ ಅಪ್ಪಲೆ ಬಿಟ್ಟು, ಹದಿನಾರು ಹದಿನೆಂಟು ಗಂಟೆಗಳ ಕಾಲ ಆ ದೈವದ ಅಧೀನಲ್ಲಿ ಇದ್ದು, ಭಕ್ತರಿಂಗೆ ಬೇಕಾದ ಹಾಂಗೆ ಮಾತಾಡಿ, ವ್ಯವಹರಿಸಿ, ಆರ ಮನಸ್ಸಿಂಗೂ ಬೇಜಾರಾಗದ್ದ ಹಾಂಗೆ, ಲೋಪ ದೋಷಂಗ ಬಾರದ್ದ ಹಾಂಗೆ ಇರೆಕ್ಕಾದರೆ ಅವು ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಎಷ್ಟು ಸುಧೃಢರಾಗಿರೆಕ್ಕು!! ಬಹುಶ ಆ ದೈವೀ ಶಕ್ತಿಯೂ ಅವಕ್ಕೆ ಆ ಆಂತರಿಕ ಶಕ್ತಿಯ ಕೊಡುಗಾದಿಕ್ಕು ಅಲ್ಲದ? ಅಷ್ಟೆಲ್ಲ ದೈವೀ ಪ್ರಭಾವಲ್ಲಿ ಇದ್ದಿದ್ದರೂ ಬಿರುದ ಮತ್ತೆ ಕೋಟಿ ದೈವದ ಹತ್ತರೆ ತೋರ್ಸುತ್ತ ದೈನ್ಯ ಭಾವನೆ ಯಾವ ಅಬ್ಬೆಯನ್ನೂ ಪ್ರಸನ್ನ ಮಾಡುಗು ಅಲ್ಲದ?

    ಒಂದು ದೈವಕ್ಕೆ ತಮ್ಮ ದೇಹಲ್ಲಿ ಪ್ರಕಟ ಅಪ್ಪಲೆ ಜಾಗೆ ಕೊಡುವ ಯಾವ ಮನುಷ್ಯಂಗೂ ತನ್ನ ಉಳಿವಿಂಗಾಗಿ ಅಥವಾ ತನ್ನ ಗೌರವಕ್ಕಾಗಿ ಇನ್ನೊಬ್ಬನ ಹತ್ತರೆ ಬೇಡೆಕ್ಕಾದ ಪರಿಸ್ಥಿತಿ ಬಾರ ಅಲ್ಲದಾ? ಆ ಗೌರವ ತನ್ನಿಂತಾನೇ ಅವಕ್ಕೆ ಬತ್ತು.. ಅದುವೇ ಅವಕ್ಕೆ ದೈವದ ಅನುಗ್ರಹ. ನಮ್ಮ ಬೈಲಿಂಗೆ ಪಾರೆ ಅಜ್ಜಿ ಒಂದು ರಕ್ಷೆಯ ಆವರಣವೇ!!
    ನಿನ್ನ ತುಂಬಾ ಪ್ರೀತಿಲಿ ನೋಡುವ ಪಾರೆಅಜ್ಜಿ ಬೈಲಿನ ಎಲ್ಲೋರಿಂಗೂ ಒಳ್ಳೇದು ಮಾಡಲಿ.
    ಆ ಅಬ್ಬೆ ಪ್ರಕಟ ಅಪ್ಪಗ ಕಾಂಬ ಭಾಗ್ಯ ಸಿಕ್ಕಲಿ..
    ಎಲ್ಲರಿಂಗೂ ಅವರವರ ಕುಟುಂಬದ ದೈವದ ಸಾಕ್ಷಾತ್ಕಾರ ಅಪ್ಪ ಸಮಯಕ್ಕೆ ಅಲ್ಲಿ ಇದ್ದುಗೊಂಡು, ಪ್ರಸಾದ ತೆಕ್ಕೊಂಡು ದೈವದ ರಕ್ಷೆಯ ಪಡಕ್ಕೊಂಬ ಭಾಗ್ಯ ಸಿಕ್ಕಲಿ..

    ಒಂದೊಪ್ಪ ಲಾಯ್ಕಾಯಿದು.

  4. ಎಂಗಳ ಮನೆಯ ಹತ್ತರೆಯೂ ಪಾರೆ ಅಜ್ಜಿ ಇದ್ದು… ಪಾರೆ ಅಜ್ಜಿ ಹೇಳಿ ಕಂಡಪ್ಪಗ ಕಣ್ಣರಳಿತ್ತು… ಬೇರೆ ಬೇರೆ ಸಂಕೊಲೆಗಳ ಕ್ಲಿಕ್ ಮಾಡಿ ನೋಡಿದೆ… ಯಾವ ಪಾರೆ ಅಜ್ಜಿ ಹೇಳಿ ನೋಡುವ ಮೊದಲು ಮಗಳು ಎದ್ದತ್ತು… ಒಪ್ಪನ್ನಂಗೆ ಎಂಗಳ ಪಾರೆ ಅಜ್ಜಿಯ ನಿಜವಾಗಿಯೂ ಗುರ್ತ ಇದ್ದ ಗೊಂತಿಲ್ಲೇ… ಇನ್ನೊಂದು ಸರ್ತಿ ಪಾರೆ ಅಜ್ಜಿಯ ಮನೆಗೆ ಬಂದರೆ ಎಂಗಳ ಮನೆಗೂ ಬನ್ನಿ ಆತೋ…

  5. ‘ಭೂತ ಬಿರಿವದು” ನೋಡಿಯಪ್ಪಗ ಇದು ನಮ್ಮ ಪರಿಭಾಷಿಕ ಶಬ್ದದ ವಿಶ್ಲೇಷಣೆಯೋ ಹೇಳಿ ಗ್ರೇಶಿದೆ. ಓದಿಯಪ್ಪದ್ದೆ ಕೊಶಿ ಆತು.
    ಸಣ್ಣಾಗಿಪ್ಪಗ ದೊಡ್ಡರಜೆಲಿ ಅಜ್ಜನ ಮನೆಗೆ ಹೋದರೆ, ಸಣ್ಣ ಮಾವನಲ್ಲಿ ವಿಷ್ಣುಮೂರ್ತಿ ಒತ್ತೆಕೋಲವೂ, ದೊಡ್ಡಮಾವನಲ್ಲಿ ಗುಳಿಗ ನೇಮವನ್ನೂ ನೋಡಿದ ನೆಂಪಾತು. ಗುಳಿಗ ಪಾರ್ತಿ “ಕೇಪು” ವ ಮರವಲಿಲ್ಲೆ.

  6. ಸಣ್ಣಾಗಿಪ್ಪಗ ದೇರೇಬೈಲಿಲಿ ವರುಷವೂ ನೋಡಿದ ‘ಮಹಾಕಾಳ್ತಿ’ ಕೋಲದ ನೆ೦ಪಾತು.ಭೂತಬಿರಿವ ದೃಶ್ಯ ರೋಮಾ೦ಚಕ ಅನ್ಸಿತ್ತು.
    ಇರುಳಿಡೀ ತನ್ನ ದೇಹವ ದೈವದ ಅಧೀನಕ್ಕೆ ಒಪ್ಪುಸಿ ಧನ್ಯ ಆದ ‘ಕೋಟಿ’ಗೊಕ್ಕೆ ನುಡಿನಮನವೇ ಸರಿ.
    ಧನ್ಯವಾದ ಒಪ್ಪಣ್ಣ.

  7. ಒಪ್ಪಣ್ಣಾ,
    ಭೂತ ಬಿರಿವ ಆ ಸಂದರ್ಭವ ಉಸಿರು ಬಿಗಿ ಹಿಡಿದು ಓದಿದೆ.
    ಕಣ್ಣಿಂಗೆ ಕಟ್ಟುವ ಹಾಂಗೆ ವಿವರಣೆ-ತುಂಬಾ ಲಾಯಿಕ ಆಯಿದು.
    ತುಳುನಾಡು ಭೂತಾರಾಧನೆಗೆ ತುಂಬಾ ಪ್ರಸಿದ್ಧಿ. ಇಲ್ಲಿಯ ಭಕ್ತರು ದೈವ ದೇವರ ನಂಬಿಯೇ ಯಾವದೇ ಕಾರ್ಯಕ್ಕೆ ತೊಡಗಿಸಿಗೊಂಬದು.
    ಲೇಖನಲ್ಲಿ ಭೂತ ಕಟ್ಟುವಾಗ ಉಪಯೋಗಿಸುವ ಹಲವಾರು ಆಭ್ರರಣಂಗಳ ವಿವರವೂ ಸಿಕ್ಕಿತ್ತು.

  8. ಭೂತ ಹೇಳಿರೆ ಡೆವಿಲ್ ವರ್ಶಿಪ್ [ಇನ್ಗ್ಲೀಶಿಲಿ ಹೇಳುದು]ಅಲ್ಲ.
    ಲಾಯ್ಕ ವಿಶ್ಲೇಷಣೆಯ ಲೇಖನ.

  9. ಒಪ್ಪ೦ಗೊ ಒಪ್ಪಣ್ಣಾ.. ಈ ರೀತಿಯ ಆರಾಧನೆ / ಕಲಾರೂಪ ನಮ್ಮ ದಕ್ಷಿಣ ಕನ್ನಡ ಮತ್ತು ಕೇರಳಲ್ಲಿ ಅಲ್ಲದ್ದೆ ಬೇರೆ ಎಲ್ಲಿಯೂ ಇಲ್ಲೆ ಹೇಳಿ ಕಾಣ್ತು. ಇಪ್ಪತ್ತು ವರ್ಷ ಮೊದಲು ಓದಿದ ಒ೦ದು ಪುಸ್ತಕದ ನೆ೦ಪು ಬ೦ತು. ವಿದೇಶದ ಒ೦ದು ಹೆಮ್ಮಕ್ಕೊ ಭೂತಾರಾಧನೆಯ ಬಗ್ಗೆ ತಿಳಿವಲೆ ಬೇಕಾಗಿ ಅಲ್ಲಿ೦ದ ಇಲ್ಲಿಗೆ ಬ೦ದು ದಕ್ಷಿಣ ಕನ್ನಡ- ಕೇರಳದ ವಿವಿಧ ಭಾಗ೦ಗಳಲ್ಲಿ ಸ೦ಚಾರ ಮಾಡಿ ಹತ್ತರೆ ಹತ್ತರೆ ಒ೦ದು ವರ್ಷದ ವರೇ೦ಗೆ ಇಲ್ಲಿಯೇ ವಾಸ ಮಾಡಿ ಬರದ ಒ೦ದು ಪುಸ್ತಕ. ಎಷ್ಟು ಒಳ್ಳೇದಿತ್ತು ಹೇಳಿರೆ ಅಷ್ಟು ವರ್ಷ ಮೊದಲೇ ಅಷ್ಟು ಸಣ್ಣಾಗಿಪ್ಪಗ ಓದಿದ ಪುಸ್ತಕ ಆದರುದೆ ಮನಸ್ಸಿಲ ಆಳಲ್ಲಿ ಎಲ್ಲಿಯೋ ಈಗಳುದೆ ಅದರ ಜಾಡು ಉಳ್ಕೊ೦ಡಿದು.

  10. ಭೂತ ಬಿರಿವದರ ಲಾಯಿಕ್ಕಕೆ ವಿವರಿಸಿ ಹಳೆ ನೆನಪು ಮರುಕಳಿಸುವ ಹಾ೦ಗೆ ಮಾಡಿದ್ದಕ್ಕೆ ಧನ್ಯವಾದ ಒಪ್ಪಣ್ಣ.

  11. ಲೇಖನ ತುಂಬಾ ಒಪ್ಪ ಆಯಿದು ಒಪ್ಪಣ್ಣ…
    ಆನುದೇ ಸುಮಾರು ಭೂತಂಗಳ ನೋಡಿದ್ದೆ. ಬಿರಿವದೂ ನೋಡಿದ್ದೆ. ಭೂತಕೋಲವ ಸರಿಯಾಗಿ ತಿಳ್ಕೊಂಡರೆ ಒಂದೊಂದು ಕುಣಿತಕ್ಕೂ (ಭೂತಕಟ್ಟುತ್ತದು, ಎದ್ದುನಿಂಬದು ಕೊಣಿತ್ತದು, ಇತ್ಯಾದಿ) ಒಂದೊಂದು ಅರ್ಥ ಇದ್ದು ಅಲ್ಲದಾ… ಅದರ ನೋಡುದೇ ಒಂದು ರೀತಿಯ ಆನಂದ. ಬೇಂಡುವಾದ್ಯಕ್ಕೆ ಸರಿಯಾಗಿ ಭೂತಂಗೊ ಹೆಜ್ಜೆ ಹಾಕುದು ನೋಡುದೇ ಒಂದು ಚೆಂದ… ಅದ್ಭುತ…
    {ಬಿರಿಯೇಕಾರೆ ಮದಲೇ ಬ್ರಾಹ್ಮಣರ ಕಳುಸಿಕೊಡ್ತವು…} – ಕೆಲವು ಭೂತಂಗೊಕ್ಕೆ ಬಿರಿವಗ (ಕೋಳಿ) ಬಲಿ ಕೊಡುಲೆ ಇದ್ದ ಕಾರಣ ಆದಿಕ್ಕು ಹೇಳಿ ಎನ್ನ ಅನಿಸಿಕೆ.
    ಒಪ್ಪಂಗಳೊಟ್ಟಿಂಗೆ 🙂

  12. ಹಲವು ದಿಕ್ಕೆ ನಾವು ಭೂತಾರಾಧನೆ ಕಂಡಿದು. ಹಲವು ನಮೂನೆಯ ಭೂತ ಕಟ್ಟಿದ್ದರ, ಕೊಣುದ್ದರ ನೋಡಿದ್ದು. ಆದರೆ, ಅರಶಿನ ಹುಡಿ, ಬೊಂಡ ಸಿಕ್ಕಿಯಪ್ಪದ್ದೆ ಪದ್ರಾಡ್ ಹೆಟ್ಟಿದ್ದುದೇ. ಇಲ್ಲೇ ಹೇಳ್ಳೆ ಎಡಿಯಾ, ಒಂದೆರಡು ದಿಕ್ಕೆ ಭೂತ ಬಿರುದು ಒತ್ತರೆ ಅಪ್ಪನ್ನಾರ ಕಣ್ಣುಜ್ಜಿಗೊಂಡು , ಕೂದಲ್ಲೇ ನೆಲಕ್ಕ ಉದ್ದಿಗೊಂಡು ಕೂಯ್ದುದೆ. ಆದರೇ, ಬಿರಿವದರ ನೋಡಿದ್ದೋ ಕೇಳಿರೆ ಇಲ್ಲೇ!!. ನವಗೆಂತ ಕಾರ್ಯ ಇಲ್ಲೆ ಅದಾ ಅಲ್ಲಿ ಆ ಹೊತ್ತಿಲ್ಲಿ!

    ಭೂತಾರಾಧನೆಗೆ ಹೋಗಿ /ನೋಡಿ ಗೊಂತಿಪ್ಪವಂಗೆ ಈ ಶುದ್ದಿ ಸೂಕ್ಷ್ಮವಾಗಿ ವಿವರವಾಗಿ ಅರ್ಥ ಅಕ್ಕು. ನಿರೂಪಣೆ, ಚಿತ್ರಣ ಲಾಯಕ ಆಯ್ದು. ಚೌಳಿ, ಕಡ್ತಲೆ, ಬೆತ್ತ, ಗಗ್ಗರ, ಕವಚ, ಕದ್ರುಮುಡಿ, ಮಿರೆಕ್ಕಟ್ಟ್, ಮಣಿ, ದೀಟಿಯೆ, ಪಟ್ಟಿ………. ಇತ್ಯಾದಿ ಇತ್ಯಾದಿ ಶಬ್ದಂಗಳೂ ನೆನಪಿಸಿಗೊಂಬ ಕಾರ್ಯ ಆತು. ವೇಷ ಹಾಕಿ ರಂಗಸ್ಥಳಲ್ಲ್ಲಿ ನಾಕು ಪದ್ಯಕ್ಕೆ ಕುಣುದು ಬಂದಪ್ಪಗಳೇ ಉಸ್ಸಪ್ಪಾ ಹೇಳಿ ವೇಷಧಾರಿಗಳ ಏಕುಟು ನೋಡಿರೆ ಒಪ್ಪಣ್ಣನ ಈ ಶುದ್ದಿ ಓದಿದ ಮತ್ತೆ ಅದೆಲ್ಲ ಎಂತ ಲೆಕ್ಕ ಹೇಳಿ ಕಾಣುತ್ತಪ್ಪೋ. ಕೋಟಿಯ ಕೆಲಸವೂ ಅದ್ಭುತ, ಕೋಟಿಗೆ ಕೆಲಸವೂ ಅದ್ಭುತವೇ.

    [ಹೀಂಗಿಪ್ಪ ಮಹತ್ಕಾರ್ಯ ಮಾಡ್ತಾ ಬಪ್ಪ ಎಷ್ಟೋ ಕೋಟಿಗೊಕ್ಕೆ ಒಪ್ಪಣ್ಣನ ಕೋಟಿ ಕೋಟಿ ನಮಸ್ಕಾರಂಗೊ] – ನಾವೂ ಜೊತೆಸೇರಿತ್ತು.

    ಹೇಮರ್ಸಲೇಬೇಕಾದ ಈ ವಿಶೇಷ ಶುದ್ದಿಗೆ ವಿಶೇಷ ಶ್ಲಾಘನೆ ಹೇಳಿತ್ತು -‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×