Oppanna.com

ವರುಣನಲ್ಲಿ ಹೋಗಿ ಹೋಗಿ ಬ್ರಹ್ಮನ ಕಂಡ “ಭೃಗುವಲ್ಲೀ”..!!

ಬರದೋರು :   ಒಪ್ಪಣ್ಣ    on   22/04/2011    28 ಒಪ್ಪಂಗೊ

ಮೌಢ್ಯಲ್ಲಿ ಮಂತ್ರ ಕಲಿಯೇಕು ಹೇಳಿ ಗ್ರೇಶುತ್ತದು ಅಂದಿಂದ. ಪುರುಸೊತ್ತೇ ಅಪ್ಪಲಿಲ್ಲೆ!
ಈಗ ಮೌಢ್ಯ ಮುಗುಕ್ಕೊಂಡು ಬಂತು! ಮಂತ್ರ ವಿಶೇಷ ಎಂತೂ ಕಲ್ತಿದಿಲ್ಲೆ!
ಮನಸ್ಸಿಲ್ಲದ್ದಲ್ಲ – ಅವಕಾಶ ಇಲ್ಲದ್ದದೂ ಅಲ್ಲ; ಪುರುಸೊತ್ತಿಲ್ಲದ್ದು ಅಷ್ಟೇ!
ಆಗೆಡದೋ – ಎಲ್ಲಾ ಒಯಿವಾಟುಗಳುದೇ! 😉
~
ಒಪ್ಪಣ್ಣಂಗೆ ಮಂತ್ರ ಅರಡಿಗು, ರಜ ರಜ – ಅಷ್ಟೇ!
ಒಪ್ಪಣ್ಣಂಗೆ ಅರಡಿಗು ಹೇಳುದರಿಂದಲೂ, ಮಂತ್ರ ಕಲುಶಿದ ಗುರುಗೊ ಅರಡುಸಿದ್ದವು – ಹೇಳುಲಕ್ಕು!
ದೊಡ್ಡದೊಡ್ಡ ಮಂತ್ರಂಗೊಕ್ಕೆ ಸೊರ ಸೇರುಸಲೆ ಅರಡಿಯ, ಆದರೆ ಸುಲಬ ಸುಲಬದ ಮಂತ್ರಂಗೊ, ಸೂಗ್ತಂಗೊ, ರುದ್ರ-ಚಮೆಗೊ ಅರಡಿಗು.
ಸಾಮಾನ್ಯ ಹೇಳ್ತ, ಯೇವತ್ತೂ ಕೇಳ್ತ ಮಂತ್ರಂಗೊ ಅರಡಿತ್ತದು – ಬೈಲಿನ ಬಟ್ಟಮಾವಂದ್ರಿಂದಾಗಿ. 🙂
ಕೆಲವು ಸರಾಗ ಹೇಳ್ತ ಮಂತ್ರಂಗಳ ಅರ್ತವೂ ತಕ್ಕಮಟ್ಟಿಂಗೆ ಅರಡಿಗು – ಮಾಷ್ಟ್ರುಮಾವನ ಹಾಂಗಿರ್ತವರ ಸಂಸರ್ಗಂದಾಗಿ!
ಒಬ್ಬರಿಂದೊಬ್ಬರಿಂಗೆ ಇದೆಲ್ಲ ಕೇಳಿಯೇ ಮುಂದುವರಿತ್ತದಲ್ಲದೋ, ಮದಲಿಂದಲೂ..!

ಕೆಲವು ಜೆನ ಜಾಸ್ತಿ ಅರಡಿಯದ್ದರೂ ಹಾಂಗೆ ಒಪ್ಪಿಗೊಂಬಲೆ ನಾಮಾಸು ಮಾಡ್ತವಡ!
ಏನೂ ಬಾರದ್ದೆ ಅದು ಬತ್ತು, ಇದು ಬತ್ತು ಹೇಳಿ ಒಪ್ಪಿಗೊಂಬದಕ್ಕೆ ಅರ್ತ ಇಲ್ಲೆ. – ಹೇಳಿ ಬಟ್ಟಮಾವ° ಒಂದೊಂದರಿ ಹೇಳುಗು.
ಮಂತ್ರಂಗೊ, ಅದರ ಅರ್ತ ಸರೀ ಗೊಂತಿಪ್ಪವುದೇ ಬೈಲಿಲಿ ಧಾರಾಳ ಇದ್ದವು.
ಅದಿರಳಿ.
~
ಮೊನ್ನೆ ಗೋಕರ್ಣಲ್ಲಿ ವಿರಾಟುಪೂಜೆ ಇದ್ದ ಸಂಗತಿ, ಬೈಲಿಂದ ಅವಕಾಶ ಆದ ಕೆಲವು ಜೆನ ಹೋದ್ಸು – ಇದೆಲ್ಲವನ್ನೂ ನಾವು ಮೊನ್ನೆಯೇ ಮಾತಾಡಿದ್ದು.
ಜೆಂಬ್ರ ಗವುಜಿಲಿ ಕಳುದ್ದು, ಅಲ್ಲಿಗೆ ಹೋಗಿ ಸೇರಿಗೊಂಬಲೆ ಅವಕಾಶ ಆಗದ್ದೋರು ಹರೇರಾಮ ಬೈಲಿಲಿ ಅದರ ಪ್ರತ್ಯಕ್ಷ ನೇರವಾಗಿ ಕಂಡದು – ಇದೆಲ್ಲವನ್ನೂ ನಾವು ಮಾತಾಡಿಗೊಂಡಿದು.
ಆದರೆ ಒಪ್ಪಣ್ಣ ಹೋದ ಸಂಗತಿ ಅರಡಿಗೋ?  ಇಲ್ಲೆ! ಅದರ ಶುದ್ದಿ ಮಾತಾಡಿದ್ದಿಲ್ಲೆ.

ಕೊಡೆಯಾಲದ ಬಸ್ಸಿಲಿ ಜಾಗೆ ಇಕ್ಕೋ ಕೇಳಿದ್ದಕ್ಕೆ ಶ್ರೀಶಣ್ಣ – ಕೇಳಿನೋಡ್ತೆ ಹೇಳಿತ್ತಿದ್ದ°.
ಅವ° ಕೇಳಿದ್ದನೂ ಇಲ್ಲೆ, ಎಂತ್ಸೂ ಇಲ್ಲೆ, ಅವಂಗೆ ಮರದ್ದು ಪಾಪ. ಅವಂಗೆ ಪ್ರಾಯ ಆದ ಹಾಂಗೆ ಮರವದು ಜಾಸ್ತಿ ಆಯಿದು.
ಮದುವೆ ಅಪ್ಪದೇ ಮರದ್ದ° – ಹೇಳಿ ಶರ್ಮಪ್ಪಚ್ಚಿ ಒಂದೊಂದರಿ ಕೋಂಗಿ ಮಾಡುಗು! 😉
ಇರಳಿ.

ನಮ್ಮ ಎಡಪ್ಪಾಡಿಬಾವ° ಬೆಂಗುಳೂರಿಂಗೆ ಹೋಗಿದ್ದೋನು – ಅಲ್ಲಿಂದಲೇ ಸೀತ ಗೋಕರ್ಣಕ್ಕೆ ಬಂದು ಸೇರುತ್ತೆ – ಹೇಳಿದನಾಡ.
ಆ ಸೀಟು ಕಾಲಿ ಇತ್ತು ಇದಾ! ಹಾಂಗಾಗಿ ಒಪ್ಪಣ್ಣಂಗೆ ಸೀಟು ಗಟ್ಟಿ ಆತು.
ಹಾಂಗಾಗಿ ಶ್ರೀಶಣ್ಣನ ಕೊಡೆಯಾಲದ ಬಸ್ಸು ಬೇಕಾಯಿದಿಲ್ಲೆ, ಊರಿನ ಬಸ್ಸಿಲೇ ಹೋದ್ದದು ಮತ್ತೆ.

ಎಂಗೊ ಎಲ್ಲೋರುದೇ ಒಟ್ಟಾಗಿ ಮದ್ಯಾಂತಿರುಗಿ ಹೆರಟದು, ಹತ್ತಯಿವತ್ತು ಜೆನ.
ಎರಡೂವರಗೇ ಹೆರಡ್ತದು ಹೇಳಿ ಮಾತಾಡಿಗೊಂಡರೂ, ಎಲ್ಲೋರುದೇ ಬಂದು ಸೇರುವಗ ಹೊತ್ತು ಇಳುದ್ದು.
ಆಗಲಿ, ಅಂತೂ ಅದೇ ದಿನ ಹೆರಟಾತು 🙂
~
ಹೆರಟಪ್ಪದ್ದೇ, ಎಲ್ಲೋರಿಂಗೂ ಊಕು ಬಂದಿತ್ತು!
ಸೀಟು ಇದ್ದರೂ ಅದರ್ಲಿ ಆರು ಕೂರ್ತ? ಸೀಟಿಲೇ ಕೂದುಗೊಂಡ್ರೆ ಆಚವಂಗೆ ಉಪದ್ರ ಮಾಡ್ತು ಆರು? ಅಲ್ಲದೋ? – ಕೇಳುಗು ಅಜ್ಜಕಾನಬಾವ°.
ಜವ್ವನಿಗರು ಎಲ್ಲೋರುದೇ ಹಾಂಗೇ ಯೋಚನೆಮಾಡಿಗೊಂಡವು ಹೇಳಿಕಾಣ್ತು; ವೇನಿಲಿಡೀಕ ಕೆಪ್ಪೆ ತೂಗಿನ ನಮುನೆ – ಗವುಜಿಯೇ ಗವುಜಿ, ಬೊಬ್ಬೆಯೇ ಬೊಬ್ಬೆ. ವೇನು ಕುಂಬುಳಗೆ ಬಂದು, ಕೊಡೆಯಾಲ ಮಾರ್ಗ ಹಿಡುದತ್ತು, ಹೋವುತ್ತ ದಾರಿಯ ಬಗ್ಗೆ –ಎಲ್ಲ ಮಾತಾಡಿಗೊಂಡವು ಬೈಲಿನ ಕೆಲವು ಜೆನಂಗೊ.
~
ಯೇವತ್ತೂ ಎಡಪ್ಪಾಡಿಬಾವ° ಇರ್ತ° ಒಟ್ಟಿಂಗೇ – ಅವ° ಇದ್ದರೆ ಹೀಂಗ್ರುತ್ತರಲ್ಲಿ ಉಶಾರಿ ಇದಾ! ಒಳುದೋರಿಂಗೆ ಆರಾಮಲ್ಲಿ ಬೊಬ್ಬೆ ಹಾಕಲೆಡಿತ್ತು.
ಈ ಸರ್ತಿ ಬಾಕಿದ್ದೋರೇ ಆಯೆಕ್ಕಟ್ಟೆ, ಕಳ್ಳನ ಕೈಲಿ ಬೀಗತ ಕೀ ಕೊಟ್ಟ ನಮುನೆಲಿ.
ಅಜ್ಜಕಾನ ಬಾವಂಗಂತೂ ಕೊಡೆಯಾಲ ಎತ್ತಿತ್ತೋ – ಉಡುಪಿ ಎತ್ತಿತ್ತೋ ಹೇಳಿ ತಲೆ ಹೆರ ಹಾಕಿ ನೋಡ್ತದೇ ಕೆಲಸ.
ಒಂದಂದಾಜಿ ಪ್ರಕಾರ ಬೋಸಬಾವ ಅಂತೂ – ಕುಂಬುಳೆಂದ ಕೊಡೆಯಾಲಕ್ಕೆ ಎತ್ತುವನ್ನಾರ ಕಡಮ್ಮೆಲಿ ಅಯಿವತ್ತು ಸರ್ತಿ ’ಗೋಕರ್ಣ ಎತ್ತಿತ್ತೋ’ ನೋಡಿಗೊಂಡಿದ!

ಅಂತೂ ಕೊಡೆಯಾಲ ಎತ್ತಿತ್ತು.
ಜೋರುಮಾತಾಡೆಡಿ, ಬೊಳುಂಬುಮಾವನ ಮನೆಲಿ ಪರೀಕ್ಷೆ ಓದುತ್ತ ಮಾಣಿ ಇದ್ದಾ° – ಹೇಳಿದವು ಕೆಲವು ಜೆನಂಗೊ.
ಶರ್ಮಪ್ಪಚ್ಚಿಯೋರು ನೆಡಿರುಳು ಹೆರಡುಗು – ಹೇಳಿ ಮೆಲ್ಲಂಗೆ ಮಾತಾಡಿಗೊಂಡು ಮುಂದೆ ಹೋದೆಯೊ°.
~
ಉಡುಪಿಯೂ ಕಳುದು ಕುಂದಾಪುರಕ್ಕೆತ್ತುವಗ ಆ ಕಲ್ಯಾಣಮಂಟಪ ಎತ್ತಿತ್ತು.
ಅಲ್ಲಿಗೆತ್ತುವಗ ಅಂತೂ ಎಲ್ಲೋರಿಂಗೂ ಹಶು ಆಗಿ ತಡೆಯ; ಬೊಬ್ಬೆ ಹೊಡದು ಹೊಡದು ’ಉಸ್ಸಪ್ಪಾ..’ ಹೇಳಿ ಆಯಿದಿದಾ.
ಒಪ್ಪಣ್ಣಂಗೆ ಹಗಲು ಬಚ್ಚಿದ್ದರಲ್ಲಿ ಒಂದು ಒರಕ್ಕೂ ಆಯಿದು! 😉
ಆ ಕಲ್ಯಾಣಮಂಟಪ – ಯೇವ? ಅದೇ ಎಡಪ್ಪಾಡಿಬಾವ ಪೋನಿಲಿ ವೆವಸ್ತೆ ಮಾಡಿದ್ದನಲ್ಲದೋ – ಅದು.
ಅವನ ಆತ್ಮೀಯರ ಕಲ್ಯಾಣಮಂಟಪ ಅಡ, ಅಲ್ಲಿ ಬೈಲಿನೋರಿಂಗೆ ವೆವಸ್ತೆ ಇದ್ದತ್ತು!
ಶರ್ಮಪ್ಪಚ್ಚಿಯೋರಿಂಗೂ ಅಲ್ಲೇ ಇದ್ದದಾಡ, ಮತ್ತೆ ಮಾತಾಡುವಗ ಗೊಂತಾತು.
~
ಎಲ್ಲೋರಿಂದ ಹೆಚ್ಚು ಹಶು ಆದ್ದು ನಮ್ಮ ಬಟ್ಟಮಾವಂಗೆ.
ಅವು ಲೇಸು, ಬೂಸು, ಧೂಳು – ಕಾಟಂಗೋಟಿ ತಿನ್ನವಿದಾ, ಪರಿಷಿಂಚನೆ ಆಗಿ ಚಿತ್ರಗುಪ್ತಂಗೆ ಮಡಗಿಯೇ ಆಹಾರ ತೆಕ್ಕೊಂಗಷ್ಟೇ!
ಹಾಂಗಾಗಿ ಅವಕ್ಕೆ ಹೆಚ್ಚು ಹಶು ಆದ್ದರ್ಲಿ ವಿಶೇಷ ಏನಿಲ್ಲೆ.
ಮುತ್ತಿಗೆ ಬಾವ ಕೊಟ್ಟ ಬಟಾಟೆ ಸೋಂಟೆ ತಿಂದರೂ ಒಪ್ಪಣ್ಣಂಗೆ ಹಶು ಆಗಿ ಒರಕ್ಕು ಬಂದಿತ್ತು. ಅದು ಬೇರೆ ಸಂಗತಿ 😉 ಅದಿರಳಿ,

ಬಾಳೆಬುಡಲ್ಲಿ ಕೂರುಸಿ ಅಶನ ಬಳುಸಿ ಅಪ್ಪದ್ದೇ “ಅಬ್ಬ! ಅನ್ನಂ ಬ್ರಹ್ಮೇತಿ ವ್ಯಜಾನಾತ್!!”  – ಹೇಳಿಗೊಂಡವು ನೆಗೆಮಾಡಿಗೊಂಡು.
ಬಟ್ಟಮಾವಂಗೆ ಹಶು ಅಪ್ಪಗ ಒಂದೊಂದರಿ ಕುಶಾಲು ಎಳಗುತ್ತೋ, ಉಮ್ಮಪ್ಪ.
~
ಊಟ ಆದ ಮೇಗೆ ಒಂದೊಂದು ಕೇಮೆಂಡೀಷು ಬಾಳೆಹಣ್ಣು ತಿಂದಪ್ಪಗಳೇ ಎಂಗೊಗೆ ಉಸುಲು ಸರ್ತ ಆದ್ದದು!
ಏನೇ ಆಗಲಿ, ಅಲ್ಯಾಣ ಆತಿಥ್ಯ ಭಾರೀ ಕೊಶಿ ಆತು ಎಲ್ಲೋರಿಂಗೂ!
ಶರ್ಮಪ್ಪಚ್ಚಿಯವಕ್ಕೂ ಕೊಶಿ ಆಯಿದಡ, ಗೋಕರ್ಣಕ್ಕೆ ಹೋದ ಶುದ್ದಿಲಿ ಹೇಳಿತ್ತಿದ್ದವಿದಾ!
~
ಇರುಳಾಣ ಊಟ ಆಗಿ ಪುನಾ ಹೆರಟಪ್ಪಗ ಎಲ್ಲೋರಿಂಗೂ ಬಚ್ಚಿ ಒರಕ್ಕು ತೂಗಲೆ ಸುರು ಆಗಿತ್ತು.
ಹಾಂಗಾಗಿ ಆಗ ಸೀಟು ಹಿಡಿಯದ್ದೋರುದೇ ಈಗ ಹಿಡುದಿಕ್ಕಿದವು, ಪಾಪ!
~
ವೇನಿನ ಒಳದಿಕೆ ಯೇವ ಲೈಟೂ ಇಲ್ಲೆ. ಆದರೂ ಹೆರಾಣ ಲೈಟುಗೊ ಒಳಂಗೆ ಬಡಿತ್ತಿದಾ – ಹಾಂಗಾಗಿ ಪೂರ್ತಿ ಕತ್ತಲೆ ಅಲ್ಲ.
ಇನ್ನೊಬ್ಬನ ಮೋರೆಯೂ, ಮುಖಭಾವವೂ ಸರೀ ಗೊಂತಾವುತ್ತು.
ಒಳುದೋರೆಲ್ಲ ಒರಗಿದ್ದವು. ವೇನಿನ ಡ್ರಯಿವರ°- ಕಂಡೇಗ್‍ಟ್ರು, ಮತ್ತೆ ಹತ್ತರೆ ಅಡ್ಡಹಂತಿಲಿ ಕೂದ ಇಬ್ರು ಬಾವಯ್ಯಂದ್ರ ಬಿಟ್ಟು.
ಎದುರಾಣ ಸೀಟಿಲಿ ಅಜ್ಜಕಾನ ಬಾವಂಗೆ ಒಳ್ಳೆ ಒರಕ್ಕು. ಬೋಚಬಾವ ಅವನ ಮೇಗೆ ಬಿದ್ದದೂ ಗೊಂತಾಯಿದಿಲ್ಲೆ. 😉
~
ಮಾಷ್ಟ್ರುಮಾವಂಗೆ ಒರಗಲೆ ಗೊಂತಿಲ್ಲೆ! ಉಂಡ ಕೂಡ್ಳೆ ಒಂದರಿ ಎಲೆ ತಿನ್ನದ್ದರೆ ಆಗ ಅವಕ್ಕೆ, ಹಾಂಗೆ ಈಗ ಬಾಯಿಲಿ ಎಲೆ ಇದ್ದಿದಾ!!
ಇನ್ನು ಎಲೆ ತುಪ್ಪಿದ ಮತ್ತೆಯೇ ಆತಷ್ಟೆ.
ಹಾಂಗಾಗಿ ಮೂರು ಜೆನರ ಸೀಟಿನ ಕಿಟುಕಿ ಕರೆಲಿ ಕೂದುಗೊಂಡಿದವು, ಒಬ್ಬನೇ ಆಗಿಂಡು.
ವೇನು ಆಡುವಗ ಅವು ಬಾಯಿ ಆಡುಸುದು ಗೊಂತಾವುತ್ತಿಲ್ಲೆ ದೂರಕ್ಕೆ! 😉

ಅವರಿಂದಲೇ ಬಲತ್ತಿಂಗೆ ಒಪ್ಪಣ್ಣಂಗೆ ಜಾಗೆ ಆದ್ದದು.
ಒಪ್ಪಣ್ಣನಿಂದಲೂ ಬಲತ್ತಿಂಗೆ ಬಟ್ಟಮಾವ°!
ಬಟ್ಟಮಾವಂಗೆ ಹಶು ಕಟ್ಟಿ ಗೊಂತಿಲ್ಲೆ ಆಯಿಕ್ಕು, ಆದರೆ ಒರಕ್ಕು ಕೆಟ್ಟು ಒಳ್ಳೆತ ಅರಡಿಗು.
ವಾಸ್ತುರಾಕ್ಷೋಘ್ನದ ಹಾಂಗಿರ್ತ ಕ್ರಿಯಾಭಾಗ ಇದ್ದರೆ ನೆಡಿರುಳೊರೆಂಗೆ ಒರಕ್ಕು ಹತ್ತರೆಯೂ ಸುಳಿವಲಾಗ!
ಒಂಬತ್ತು-ಹತ್ತು ಗಂಟಗೆ ಚಪಾತಿ-ಪಲಾರ ಮಾಡಿರೆ ಮತ್ತೆ ನೆಡಿರುಳುರೊಂಗೆ ಶ್ರದ್ಧೇಲಿ ಕೂಪದಿದಾ!
ಇಂದುದೇ ಹಾಂಗೇ ಆತು ಅವಕ್ಕೆ ಪಾಪ! ಒರಕ್ಕೇ ಬಾರ. ಕುತ್ತ ಕೂದುಗೊಂಡಿತ್ತಿದ್ದವು, ಬ್ರಹ್ಮತ್ವಕ್ಕೆ ಕೂದುಗೊಂಡ ನಮುನೆ!

ಒಪ್ಪಣ್ಣಂಗೆ ಆಗ ರಜ ಒರಕ್ಕು ಬಂದಿತ್ತಿದಾ, ಹಾಂಗೆ ಇರುಳಾಣ ಒಂದರಿಯಾಣ ಒರಕ್ಕು ಹಾರಿತ್ತು.
ಅಡಕ್ಕೆಗೋಣಿಯ ಬಾಯಿಹೊಲುದ ನಮುನೆ – ಕಣ್ಣಿನ ಎಷ್ಟು ಅಮರ್ಸಿ ಹಿಡ್ಕೊಂಡ್ರೂ ಒರಕ್ಕು ಬತ್ತಿಲ್ಲೆ ಅದ!!

ಈ ಸೀಟಿನ ಮೂರೂ ಜೆನವೂ ಒರಗಿದ್ದವಿಲ್ಲೆ, ಎಂತಾ ಚೋದ್ಯ! ಸೀಟಿಲೇ ಎಂತಾರು ಯಕ್ಷಿಯೋ ಮತ್ತೊ ಇದ್ದೋ!
ಉಮ್ಮಪ್ಪ!!
~

ಆನಂದೋ ಬ್ರಹ್ಮ - ಹೇಳಿದ ಭೃಗು ಪರಮಾನಂದಲ್ಲಿ!

ಒರಕ್ಕು ಹೋದಾಂಗೂ ಆತು, ಹೊತ್ತು ಹೋದ ಹಾಂಗೂ ಆತು – ಹೇಳಿಗೊಂಡು ಎಡತ್ತಿಂಗೆ ತಿರುಗಿ ಮಾತಾಡ್ಳೆ ಸುರುಮಾಡಿದೆ.
ಬಟ್ಟಮಾವ°, ಆಗ ಎಂತದೋ ಹೇಳಿದಿರಲ್ಲದೋ – ಬಾಳೆ ಬುಡಲ್ಲಿ ಕೂದುಗೊಂಡು, ಅದೇವ ಮಂತ್ರ? – ಹೇದು.
‘ಮಾವ°’ ಹೇಳಿ ಮಾಂತ್ರ ಕೇಳಿ ಈಚ ಹೊಡೆಂದ ಮಾಷ್ಟ್ರುಮಾವ ’ಮ್?’ ಹೇಳಿದವು, ಬಾಯಿಲಿಪ್ಪ ಎಲೆಡಕ್ಕೆ ಇದ್ದುಗೊಂಡೇ!
ಬಟ್ಟಮಾವನತ್ರೆ ಕೇಳಿದ್ದು, ಆಗಾಣ ಮಂತ್ರದ ಬಗ್ಗೆ – ಹೇದೆ. ’ಹ್ಮ್’ ಹೇಳಿ ಅವರೋಹಣಲ್ಲಿ ಹೇಳಿಕ್ಕಿ, ಬಟ್ಟಮಾವ ಎಂತ ಉತ್ತರ ಹೇಳ್ತವು ಹೇಳಿ ಗಮನುಸಿಗೊಂಡು ಕೂದವು ಮಾಷ್ಟ್ರುಮಾವಂದೇ.

ಬಟ್ಟಮಾವ° ಒಂದು ಕ್ಷಣ ಆಲೋಚನೆ ಮಾಡಿ ಹೇಳಿದವು, “ಓ! ಅನ್ನಂ ಬ್ರಹ್ಮೇತಿಯೋ – ಅದು ಭೃಗುವಲ್ಲಿ ಅಲ್ಲದೋ..”
ಓ, ಅಪ್ಪಾ – ಹಾಂಗೆ ಹೇಳಿತ್ತುಕಂಡ್ರೆ ಎಂತ ಅರ್ತ? – ಕೇಳಿದೆ ಮೆಲ್ಲಂಗೆ.

ಅಂತೂ ಒಪ್ಪಣ್ಣ ಕೇಳಿದ್ದಕ್ಕೆ ಮಂತ್ರವನ್ನೂ ಎಡೆಡೆಲಿ ಮಿಶ್ರಮಾಡಿಗೊಂಡು ಬಟ್ಟಮಾವ ಭೃಗುವಲ್ಲಿಯ ಅರ್ತ ಹೇಳಿದವು..
ಬಟ್ಟಮಾವ ಹೇಳಿದ ಅರ್ತ ಸಂಸ್ಕೃತ ಸರೀ ಅರಡಿವೋರಿಂಗೆ ಅರ್ತ ಅಪ್ಪ ಹಾಂಗೇ ಇತ್ತು, ಆದರೆ ಮಾಷ್ಟ್ರುಮಾವನೂ ಎಚ್ಚರಿಗೆಲೇ ಇದ್ದ ಕಾರಣ ನವಗೆ ಅರ್ತ ಅಪ್ಪ ನಮುನೆ ಸಂಶಯ ಕೇಳಿಗೊಂಬಲೆ ಸುಲಬ ಆತು.
~
ಸನಾತನ ಧರ್ಮದ ಅಡಿಪಾಯ ವೇದಂಗೊ.
ನಮ್ಮ ಯಜುರ್ವೇದಲ್ಲಿ – ಕೃಷ್ಣ ಯಜುರ್ವೇದಲ್ಲಿ, ತೈತ್ತೀರಿಯೋಪನಿಷತ್ತು – ಹೇಳಿ ಇದ್ದಾಡ.
ಈ ಉಪನಿಷತ್ತುಗೊ – ಹೇಳಿತ್ತುಕಂಡ್ರೆ ಪ್ರಶ್ನೋತ್ತರ ರೂಪಲ್ಲಿ ಇಪ್ಪದಾಡ.

ಈ ಉಪನಿಷತ್ತಿನ ಒಳದಿಕೆ ಸಣ್ಣ ಸಣ್ಣ – “ವಲ್ಲಿ” ಗೊ ಇದ್ದಡ – ಒಂದೊಂದು ವಿಭಾಗದ ಹಾಂಗೆ.
ಅದರ್ಲಿ ಈ ಭೃಗುವಲ್ಲಿಯೂ ಒಂದು ಒಪ್ಪಣ್ಣಾ – ಹೇಳಿದವು.
ಎದುರಾಣವಂಗೆ ಗೊಂತಿಲ್ಲೆ ಹೇಳಿ ಆದರೆ ಅವು ಪುಸ್ಕ ಮಾಡವು, ಚೆಂದಲ್ಲೇ ಹೇಳಿಕೊಡುಗು ಇದಾ!
~
ನೀರಿನ ಅಧಿದೇವತೆ ವರುಣ ಅಡ.
ಭೃಗು ಹೇಳಿತ್ತುಕಂಡ್ರೆ – ಭೃಗುರ್ವೈರ್ವಾರುಣಿಃ – ವರುಣನ ಮಗ ಅಡ. ದೊಡಾ ಮೇಧಾವಿಯೂ ಅಪ್ಪಡ.

ಒಂದರಿ ಈ ಭೃಗು – ಪಿತರಮುಪಸಸಾರಾ- ಅಪ್ಪನ ಹತ್ತರೆ ಸಂಶಯ ಕೇಳಿದನಡ, ಬ್ರಹ್ಮ ಹೇಳಿತ್ತುಕಂಡ್ರೆ ಎಂತರಪ್ಪಾ? ಹೇಳಿಗೊಂಡು!
ಅಪ್ಪನ ಹತ್ತರುದೇ ಎಂತ ಸಸಾರ ಹೀಂಗಿರ್ತದು – ಹೇಳಿ ಆತೊಂದರಿ ಒಪ್ಪಣ್ಣಂಗೆ! 😉
ಅಲ್ಲ, ಈ ಮೇಧಾವಿಗೊಕ್ಕೇ ಸಂಶಯ ಬಪ್ಪದೋ, ಅಲ್ಲ ಸಂಶಯ ಬಂದು ಬಂದು ಮೇಧಾವಿ ಅಪ್ಪದೋ – ಉಮ್ಮಪ್ಪ!
ಎದುರಾಣ ಸೀಟಿಲಿ ಬೋಚಬಾವ° ಎಂತದೂ ಅರಡಿಯದ್ದ ಹಾಂಗೆ – ಅಜ್ಜಕಾನಬಾವನ ಹೆಗಲ ಮೇಲಂಗೆ ಬಿದ್ದುಗೊಂಡಿದ, ಅವಂಗೆ ಗೊಂತಿಕ್ಕೋ ಏನೋ! ಅದಿರಳಿ.
ಉಶಾರಿ ಮಗ°, ಉಶಾರಿ ಅಪ್ಪನ ಹತ್ತರೆ ಕೇಳ್ತ ಸಂಶಯಂದಲೇ ಭೃಗುವಲ್ಲಿ ಸುರು ಅಪ್ಪದಾಡ.
~

ಪ್ರಶ್ನೆ:
ಭೃಗು ವರುಣನ ಕೈಲಿ ಅಧೀಹಿ ಭಗವೋ ಬ್ರಹ್ಮೇತಿ – “ಅಪ್ಪ, ಬ್ರಹ್ಮ ಹೇಳಿತ್ತುಕಂಡ್ರೆ ಎಂತರ?” -ಹೇಳಿ ಕೇಳ್ತನಾಡ.

ಅದಕ್ಕೆ ಸೂತ್ರ ಸಮೇತ ವರುಣ ಉತ್ತರ ಕೊಡ್ತನಾಡ.
“ಯೇವದರಿಂದಾಗಿ – ಯತೋ ವಾ ಇಮಾನಿ ಭೂತಾನಿ ಜಾಯಂತೇ – ಈ ಭೂಮಿಲಿ ಭೂತಜಗತ್ತಿಂಗೆ ಬತ್ತವೋ,
ಯೇನ – ಯೇವದರಿಂದಾಗಿ – ಜಾತಾನಿ ಜೀವಂತಿ – ಜೀವಿಸುತ್ತವೋ, ಅಕೇರಿಗೆ ಯೇವದಕ್ಕೇ ಹೋಗಿ ಶೂನ್ಯಲ್ಲಿ ಒಂದಾವುತ್ತವೋ –
ಅದುವೇ ಬ್ರಹ್ಮ”.
ತೋರ ಮಟ್ಟಿಂಗೆ ನೋಡ್ತರೆ – ಅನ್ನಂ ಪ್ರಾಣಂ ಚಕ್ಷುಃ ಶ್ರೋತ್ರಂ ಮನೋ ವಾಚಮಿತಿ – ಆಹಾರ, ಪ್ರಾಣ, ದೃಷ್ಟಿ, ಶ್ರವಣ, ಮನಸ್ಸು, ಮಾತು – ಇವೆಲ್ಲವೂ ಬ್ರಹ್ಮಂಗೊ – ಹೇಳ್ತನಾಡ ವರುಣ.
ಇನ್ನೂ ಸೂಕ್ಷ್ಮವಾಗಿ ಬೇಕಾರೆ ನೀನೇ ತಪ್ಪಸ್ಸುಮಾಡಿ ತಿಳಿ– ಹೇಳ್ತನಾಡ.

ಹಾಂಗೆ ವರುಣನ ಕೈಲಿ ಮಾತಾಡಿ ಹೆರಟೋನು ಹೋಗಿ  – ಸತಪಸ್ತಪ್ಯಾ – ತಪಸ್ಸು ಮಾಡ್ತ.
ಬೋಚಬಾವನೂ ಒಂದೊಂದರಿ ಉಂಡಿಕ್ಕಿ ಸೀತ ಎದ್ದೊಂಡು ನೆಡೆತ್ತ, ತಪಸ್ಸಿಂಗೋ ಏನೋ!
ಸಾರಡಿ ತೋಡಕರೆಲಿ ಡೆಂಜಿಮಾಟೆ ಒಕ್ಕಿಗೊಂಡು ಇರ್ತ° ಹೊತ್ತಪ್ಪಗ. ಅದಿರಳಿ.
~

ಅನ್ನಂ ಬ್ರಹ್ಮೇತಿ ವ್ಯಜಾನಾತ್:
ಬ್ರಹ್ಮತತ್ವಕ್ಕೆ ಸೂತ್ರ ಎಂತರ ಹೇಳ್ತರ ವರುಣನೇ ಹೇಳಿರ್ತನಲ್ಲದೋ?
ಅದಕ್ಕೆಲ್ಲ ಸರಿಯಾಗಿ ಹೊಂದುತ್ತದು ಯೇವದು – ಹೇಳ್ತ ಗುಟ್ಟು ಹಿಡಿವಲೆ – ನಮ್ಮ ಸುಬಗಣ್ಣ ಇರ್ತಲೆ ಹಿಡಿವಲೆ ಬೈಲಕರಲಿ ಕೂದೊಂಡ ಹಾಂಗೆ – ತಪಸ್ಸು ಮಾಡ್ತ ಭೃಗು!. 😉

ಹಾಂಗೆ ತಪಸ್ಸು ಮಾಡಿ ಮಾಡಿ, ಒಂದು ವಿಶಯ ಕಂಡುಹಿಡಿತ್ತ.
ಅಶನವೇ ಬ್ರಹ್ಮ ಅಲ್ಲದೋ? – ಹೇಳಿಗೊಂಡು.
ಅನ್ನ ಹೇಳಿರೆ ಬರೇ ಜೆಂಬ್ರಲ್ಲಿ ಬಳುಸುತ್ತ ಬೆಣ್ತಕ್ಕಿ ಅಶನ ಅಲ್ಲ, ಜೀವಿಗಳ ಆಹಾರವ ಅನ್ನ ಹೇಳ್ತದಡ.
ಅನ್ನಾದ್ಯೇವ – ಅಶನಂದಲೇ – ಖಲ್ವಿಮಾನಿ ಭೂತಾನಿ ಜಾಯಂತೇ – ಎಲ್ಲವೂ ಹುಟ್ಟುತ್ತು, , ಅನ್ನ ಇಲ್ಲದ್ದರೆ ಬದ್ಕುಲೆಡಿಗೋ?
ಅನ್ನೇನ –  ಅನ್ನಂದಾಗಿಯೇ – ಜಾತಾನಿ ಜೀವಂತೀ – ಎಲ್ಲವೂ ಬದ್ಕಿ ಒಳಿತ್ತು, ಎಲ್ಲ ಜೀವಿಗಳೂ ನಿರ್ನಾಮ ಆಗಿ ಅಕೇರಿಗೆ ಇನ್ನೊಂದಕ್ಕೆ ಆಹಾರವೇ ಆಗಿ ಬಿಡ್ತವು!
ಅದ, ಎಲ್ಲ ಸೂತ್ರವೂ ತಾಗಿ ಬತ್ತು!!
ಕೂಡ್ಳೇ “ಸಿಕ್ಕಿತ್ತೂ ಸಿಕ್ಕಿತ್ತು” ಹೇಳ್ತ ಕೊಶಿಲಿ ಹೋಗಿ ಅಪ್ಪನ ಕೈಲಿ ಹೇಳ್ತ: ಅನ್ನಂ ಬ್ರಹ್ಮ! ಹೇಳಿಗೊಂಡು.
ಅಂತೂ ಭೃಗು – ಅನ್ನವೇ ಬ್ರಹ್ಮ ಹೇಳಿಗೊಂಡು ವ್ಯಜಾನಾತ್ – ತಿಳ್ಕೊಂಡ°.
ಬಟ್ಟಮಾವ° ವಿವರುಸುವಗ ನವಗೇ ಆ ಉತ್ತರ ಹೊಳೆತ್ತದೋ ಅನುಸಿತ್ತು “ ಅಪ್ಪನ್ನೇ” ಆತೊಂದರಿ!
ಎಲ್ಲಾರು ಮಾಡುವುದು ಹೊಟ್ಟೆಗಾಗಿ – ಹೇಳಿ ವಿದ್ಯಾಭೂಷಣ ಹಾಡಿದ ದಾಸರಪದಗಳ ಕೆಸೆಟ್ಟು ದೊಡ್ಡಜ್ಜನ ಮನೆಲಿ ಕಂಡಿದೆ.
ಅಶನದ ದಾರಿಯೇ ಅಲ್ಲದೋ, ಜೆನಂಗಳ ಒಟ್ಟು ಸೇರುಸುದು, ಬೇರೆ ಮಾಡುದು?
ಅಶನಕ್ಕಾಗಿಯೆ ಅಲ್ಲದೋ ಈ ಜೀವನ ಇಷ್ಟೆಲ್ಲ ಬಂಙ ಬಪ್ಪದು? – ಹೇಳಿ ಅನುಸಿತ್ತು.
ಹೇಳಿದಾಂಗೆ, ಬಟ್ಟಮಾವಂಗೆ ಹಶುಹೊಟ್ಟೆಲಿ ಅಶನ ಕಾಂಬಗ ಸೃಷ್ಟಿಕರ್ತ ಬ್ರಹ್ಮನೇ ಕಂಡ ಹಾಂಗೆ ಆತಾಯಿಕ್ಕು, ಪಾಪ! 😉

ಹೇಳಿದಾಂಗೆ, ಬೋಚಬಾವ° ಸಮಾ ಅಶನ ಉಂಡಿಕ್ಕಿ ಒರಗಿದ್ದ° ಇದಾ!
ಅದಿರಳಿ.
ವರುಣನ ಕೈಲಿ ಭೃಗು ಹಾಂಗೆ ಹೇಳಿಅಪ್ಪದ್ದೇ – “ಇನ್ನೂ ತಪಸ್ಸುಮಾಡಿ ತಿಳ್ಕೊಂಡು ಬಾ” ಹೇಳಿ ಕಳುಸಿದನಾಡ.
~
ಪ್ರಾಣೋ ಬ್ರಹ್ಮೇತಿ ವ್ಯಜಾನಾತ್:
ಬ್ರಹ್ಮತತ್ವವ ತಿಳಿಯಲೆ ಭೃಗು ಮಾಡ್ತ ತಪಸ್ಸಿನ ಎರಡ್ಣೇ ಹಂತ ಅಡ ಇದು.
ಯೇವದರಿಂದ ಜೀವ ಉಗಮ ಆವುತ್ತೋ, ಯೇವದರಿಂದಾಗಿ ಬದ್ಕುತ್ತೋ, ಅಕೇರಿಗೆ ಯೇವದಕ್ಕೇ ಲೀನ ಆಗಿ ಬಿಡ್ತೋ – ಅದುವೇ ಬ್ರಹ್ಮ.
ಅಶನ ಮಾಂತ್ರ ಅಲ್ಲ, ಅಂಬಗ ಯೇವದಾಯಿಕ್ಕು – ಹೇಳ್ತದು ತಲೆಲಿ ತಿರುಗುತ್ತಾ ಏಕಾಗ್ರಚಿತ್ತನಾಗಿ ತಪಸ್ಸಿಲಿ ಇದ್ದನಾಡ.
ಅಷ್ಟಪ್ಪಗ ಉತ್ತರ ಹೊಳದತ್ತು ಭೃಗುವಿಂಗೆ – ಪ್ರಾಣ!!
ಪ್ರಾಣಂದಾಗಿಯೇ – ಭೂತಾನಿ ಜಾಯಂತೇ – ಜೀವಿಗೊ ಉಂಟಾವುತ್ತವು.
ಪ್ರಾಣ ಇಲ್ಲದ್ದೋರು ಬದ್ಕುಲಿದ್ದೋ –ಪ್ರಾಣೇನ ಜಾತಾನಿ ಜೀವಂತಿ – ಪ್ರಾಣಂದಾಗಿಯೇ ಬದ್ಕುತ್ತವು.
ಅಕೇರಿಗೆ ಜೀವನ ಮುಗುದ ಮೇಗೆ ಪ್ರಾಣಲ್ಲೇ ಲೀನ ಆಗಿ ಬಿಡ್ತವು!
ಅಪ್ಪನ್ನೇ – ಅಂಬಗ ಇದುವೇ ಬ್ರಹ್ಮ!!
ಪುನಾ ಅಂಬೆರ್ಪಿಲಿ ವರುಣನ ಹತ್ತರಂಗೆ ಓಡಿ ಹೋಗಿ ಹೇಳ್ತ: ಪ್ರಾಣೋ ಬ್ರಹ್ಮ! ಹೇಳಿಗೊಂಡು.
ನವಗೂ ಒಂದರಿ ಅಪ್ಪನ್ನೇ ಕಂಡತ್ತು!

ಪ್ರಾಣವೇ ಎಳಗಿ ಬತ್ತ ನಮುನೆ ಎದುರಾಣ ಬೋಚಬಾವ ಒರಗಿದ್ದ! ಎಂತಾ ಸುಖ!!
ಬ್ರಹ್ಮಗೆಂಟಿಂಗೆ ಈ  ಉತ್ತರ ಸಿಕ್ಕಿ ಅಪ್ಪಗ ಭೃಗುವಿಂಗೂ ಅಷ್ಟು ಕೊಶಿ ಆಗಿರ! 😉

ಬಟ್ಟಮಾವ ಒಂದರಿ ನಿಲ್ಲುಸಿದವು..
ಕುಂದಾಪುರಂದ ಮುಂದೆ ಯೇವದೋ ಒಂದು ಮಾರ್ಗಲ್ಲಿ ಹೋವುತ್ತಾ ಇತ್ತು, ವೇನು.
ಗುಂಡಿ ದೊಡ್ಡದು ಎದುರಿತ್ತು, ಅದರಿಂದಲೂ ದೊಡ್ಡ ಲೋರಿ ಗುಂಡಿಯ ಎದುರಿತ್ತು. ಹಾಂಗಾಗಿ ವೇನು ಎರುಗಿಂದ ರಜಾ ಜೋರು ಹೋಗಿಂಡಿತ್ತು ಅಷ್ಟೇ!
ವೇನು ಮೆಲ್ಲಂಗೆ ಅಪ್ಪದ್ದೇ – ಸಮಯ ನೋಡಿ ಮಾಷ್ಟ್ರುಮಾವ° ಎಲೆ ತುಪ್ಪಿಗೊಂಡವು.
ಇಷ್ಟು ಹೊತ್ತು ಅವೆಂತೂ ಮಾತಾಡಿದ್ದವಿಲ್ಲೆ ಇದಾ!
ಅಲ್ಲದ್ದರೂ ಹಾಂಗೇ, ಆರಾರು ಮಾತಾಡ್ತರೆ ಅವು ಎಡೇಲಿ ಬಾಯಿ ಹಾಕವು, ಕೇಳಿರೆ ಮಾಂತ್ರ ಹೇಳುಗಷ್ಟೆ.
ಅದಿರಳಿ!

ವರುಣನ ಹತ್ತರೆ ಭೃಗು ಹಾಂಗೆ ಹೇಳಿಅಪ್ಪದ್ದೇ – “ಇನ್ನೂ ತಪಸ್ಸುಮಾಡಿ ತಿಳ್ಕೊ” ಹೇಳಿ ಒಪಾಸು ಕಳುಸಿದನಾಡ, ಬಟ್ಟಮಾವ° ಮುಂದರುಸಿದವು.
~
ಮನೋ ಬ್ರಹ್ಮೇತಿ ವ್ಯಜಾನಾತ್:
ಆಹಾರ, ಪ್ರಾಣ ಎರಡರಿಂದಲೂ ಮಿಗಿಲಾದ ಬ್ರಹ್ಮ ಇದ್ದೋ? ಇಲ್ಲದ್ದರೆ ವರುಣ ಪುನಾ ಯೋಚನೆ ಮಾಡ್ಳೆ ಹೇಳ್ತಿತನೋ ??
ಅಂತೂ ಭೃಗು ಮತ್ತೊಂದರಿ ತಪಸ್ಸಿಂಗೆ ಹೋದನಾಡ.
ತಪಸ್ಸಿಲಿ ಬ್ರಹ್ಮಚಿಂತನೆ ಮಾಡಿಗೊಂಡು ಇಪ್ಪಗ ಹೊಳದ ಬ್ರಹ್ಮನೇ –  ಮನಸ್ಸು!!

ಅಪ್ಪು, ಜೀವಿಗೊ ಉಂಟಪ್ಪದೇ ಮನಸ್ಸಿಂದಾಗಿ. ಮನೋಶೆಗ್ತಿ ಇಲ್ಲದ್ದರೆ ಎಂತದೂ ಎಡಿಯ! ಕಲ್ಲಿಂಗೂ ಜೀವಿಗೂ ವಿತ್ಯಾಸ ಈ ಮನಸ್ಸೇ!
ಮನಸಾ ಜಾತಾನಿ ಜೀವಂತಿ – ಮನಸ್ಸಿಂದಾಗಿಯೇ ಜೀವಿಗೊ ಬದ್ಕುತ್ತವು.
ಜೀವಿಗೊ ಮರಣಾನಂತರ ಅಗೋಚರ ಮನೋಶೆಗ್ತಿಲಿ ಲೀನ ಆಗಿ ಬಿಡ್ತವು! ಅಂಬಗ ಸರಿ, ಮನಸ್ಸೇ ಬ್ರಹ್ಮ.
ಹೀಂಗೆ ಗೊಂತಾದ್ದೇ, ಸೀತಾ ವರುಣನ ಹತ್ತರೆ ಹೋವುತ್ತನಾಡ – “ಮನೋ ಬ್ರಹ್ಮ!” ಹೇಳಿಗೊಂಡು.
ವರುಣ ಮತ್ತುದೇ ಆಲೋಚನೆ ಮಾಡ್ಳೆ ಹೇಳ್ತನಾಡ ಭೃಗುವಿನ ಹತ್ತರೆ.

ಕೈಕರಣ ಮಾಡಿಗೊಂಡು ವಿವರುಸುವಗ ಎಂತವಂಗೂ ಪತ್ತೇದಾರಿ ಕತೆಯ ಕೇಳಿದನಮುನೆ ಅಕ್ಕು!
ಅವ° ಹೇಳಿದ, ಇವ° ಕೇಳಿದ ಹೇಳಿ ವಿವರುಸುವಗ ಬಟ್ಟಮಾವನ ಕೈಲಿ – ಲಂ ಪೃಥಿವ್ಯಾತ್ಮನೇ – ಹೇಳಿದ ನಮುನೆ ಮುದ್ರೆಗೊ ಕಂಡೊಂಡಿತ್ತು! 😉

ಬೋಚಬಾವನ ಮನಸ್ಸಿಲಿ ಎಂತ ತಿರುಗಿಂಡು ಇಕ್ಕೋ! ಉಮ್ಮ, ಒರಗಿದ್ದ°, ಹರಟೆಮಾಡುದು ಬೇಡ!!
~
ವಿಜ್ಞಾನಂ ಬ್ರಹ್ಮೇತಿ ವ್ಯಜಾನಾತ್:

ಪುನಾ ಹೋದ ಭೃಗು ಮತ್ತೊಂದರಿ ಬ್ರಹ್ಮಜಿಜ್ಞಾಸೆಯ ತಪಸ್ಸಿಲಿ ಕೂರ್ತನಾಡ!
ಸುರುವಿಂಗೆ ಕಂಡ ಅಶನಂದ ಹೊರತಾಗಿ, ಪ್ರಾಣವೂ ಅಲ್ಲದ್ದೆ, ಮನಸ್ಸಿಂದಲೂ ಮೇಗೆ ಇಪ್ಪ ಬ್ರಹ್ಮ ಅದೇವದು ಅಂಬಗ?
ಹಾಂ! ಗೊಂತಾತು.
ಅದುವೇ “ವಿಜ್ಞಾನ”!!

ಮನಸ್ಸಿಂದಲೂ ಹೆರಾಣ ವಲಯಲ್ಲಿ ಇದ್ದೊಂಡು, ಮನಸ್ಸನ್ನೇ ಆವರುಸಿದ ವಿಶೇಷವಾದ ಜ್ಞಾನವೇ ವಿಜ್ಞಾನ.
ಇದರಿಂದಾಗಿಯೇ ಜೀವಿಯ ಉಗಮ, ಜೀವನ ಉಂಟಾವುತ್ತು.
ಕೊನೆಗೆ ಜೀವನ ಮುಗುದ ಮತ್ತೆ ಈ ವಿಜ್ಞಾನತತ್ವಕ್ಕೇ ಲೀನ ಆಗಿ ಬಿಡ್ತವು ಜೀವಿಗೊ.
ಅಪ್ಪು! ಇದು ಗೊಂತಾದ್ದೇ, ಸೀತಾ ಅಪ್ಪನ ಹತ್ತರೆ ಹೋವುತ್ತ ಭೃಗು.
ವರುಣನ ಎದುರು ಮತ್ತೊಂದರಿ ಹೇಳ್ತ°, “ವಿಜ್ಞಾನಂ ಬ್ರಹ್ಮ” ಹೇಳಿಗೊಂಡು.
– ಬಟ್ಟಮಾವ° ವಿವರುಸುವಗ ಆದಿಕ್ಕಂಬಗ ಹೇಳಿ ಆತು.
ಈ ಮನಸ್ಸು, ಅದರ ವಲಯಂಗೊ ಎಲ್ಲ ವಿದ್ವಾನಣ್ಣನ ಹಾಂಗಿರ್ತ ಅಧ್ಯಾತ್ಮ ಕಲ್ತೋರ ಹತ್ತರೆ ಕೇಳೆಕ್ಕಟ್ಟೆ, ನವಗರಡಿಯ! 😉
ಬೋಚಬಾವಂಗೆ ವಿಜ್ಞಾನ ಕಲುಶಿರೆ ಹೇಂಗಕ್ಕು? ಉಮ್ಮ! ದೊಡ್ಡಬಾವನ ಕೈಲೇ ಕೇಳೆಕ್ಕಟ್ಟೆ. 😉

ಇರಳಿ, ಭೃಗುವಿನ ಕೈಲಿ ಮತ್ತೂ ಒಂದರಿ ಆಲೋಚನೆ ಮಾಡ್ಳೆ ಹೇಳ್ತ ವರುಣಪ್ಪ°.
~

ಆನಂದೋ ಬ್ರಹ್ಮೇತಿ ವ್ಯಜಾನಾತ್:

ಬ್ರಹ್ಮಗೆಂಟಿನ ಕೊನೇ ಎಸಳು ಬಿಡುಸೇಕಷ್ಟೆ ಈಗ.
ಮೊದಲು ತಿಳುದ ಬ್ರಹ್ಮತತ್ವಂಗಳಿಂದ ವಿಭಿನ್ನವಾಗಿ, ಇಪ್ಪ ಬ್ರಹ್ಮಜಿಜ್ಞಾಸೆಯ ತಪಸ್ಸಿಂಗೆ ಹೆರಟ° ಭೃಗು, ಮತ್ತೊಂದರಿ.
ಈಗ ಕೂದು ತಪಸ್ಸು ಮಾಡ್ತದೇ, ತಲಗೆ ಹೋತು: ಆನಂದವೇ ಬ್ರಹ್ಮ!

ಅಪ್ಪು, ಆನಂದಂದಾಗಿಯೇ ಜೀವಿಗಳ ಉಗಮ ಆವುತ್ತು, ಆನಂದಕ್ಕೋಸ್ಕರವಾಗಿಯೇ ಜೀವನ ನೆಡೆತ್ತು, ಜೀವನ ಅಕೇರಿ ಅಪ್ಪಗ ಆನಂದಲ್ಲೇ ಲೀನ ಆಗಿ ಬಿಡ್ತವು!
ಅಂಬಗ ಆನಂದವೇ ಬ್ರಹ್ಮ..
ಹೋಗಿ ವರುಣನ ಕೈಲಿ ಒಪ್ಪುಸುತ್ತನಾಡ: “ಆನಂದೋ ಬ್ರಹ್ಮ”! ಹೇಳಿಗೊಂಡು.

ಬೋಚಬಾವಂಗೆ ಒರಕ್ಕಿಲಿ ಎಂತಾ ಆನಂದ. ಅದರ ಮೇಗಂದ ತಲೆಯ ಒಂದರಿ ತೊರುಸಿಗೊಂಡ.
ಅಪ್ಪು, ತೊರಿಕ್ಕೆಲಿಯೂ ಒಂದು ಆನಂದ ಇರ್ತು ಬಾವಾ! 😉
~
ಇರಳಿ, ಬಟ್ಟಮಾವ° ಇಷ್ಟು ಹೇಳಿದ್ದೇ, ಭೃಗುವಲ್ಲಿಲಿ ಮುಂದೆ ಹೋದ ಹಾಂಗೆ ಅನ್ನದ, ಅನ್ನದಾತನ, ಅನ್ನದಾನದ ಮಹತ್ವ ವಿವರುಸಿದ್ದವು ಹೇಳಿದವು.
ಅನ್ನಂ – ಅನ್ನವ – ನ ನಿಂದ್ಯಾತ್ – ನಿಂದೆ ಮಾಡ್ಳಾಗಡ.
ಅಶನವೇ ಪ್ರಾಣ – ಹೇಳಿಯೂ ಹೇಳಿದ್ದವಡ.
ಆಗ ಹಶುವಿಲಿ ಹಾಂಗೆ ಹೇಳಿದ್ದೋ°…. – ಹೇಳಿದವು ಮತ್ತೊಂದರಿ ನೆಗೆಮಾಡಿಗೊಂಡು.
ತುಂಬ ಹೊತ್ತು ಮಾತಾಡಿಯೋ ಏನೋ – ಒಂದು ಆ…ವಳಿಗೆ ಬಂತು ಅವಕ್ಕೆ.
ಆ….. ಒಬ್ಬನ ಆವಳಿಗೆ ಕಂಡ್ರೆ ಒಪ್ಪಣ್ಣಂಗೂ ಬಪ್ಪದಿದಾ, ಚೆಕ್! 😉
~

ಮಾಷ್ಟ್ರುಮಾವಂಗೆ ಎಲ್ಲವೂ ಕೇಳಿಗೊಂಡೇ ಇತ್ತು.
ಮಾತಾಡುಸಿದ ಹಾಂಗಾತು – ಹೇಳಿಗೊಂಡು ಒಂದರಿ ಹೇಳಿದೆ – ಭೃಗುವಲ್ಲಿಲಿ ಆನಂದವೇ ಬ್ರಹ್ಮ ಹೇಳಿ ತೀರ್ಮಾನ ಆವುತ್ತಲ್ಲದೋ – ಹೇಳಿ.
ಹ್ಮ್? – ಹೇಳಿಗೊಂಡು ಮೆಲ್ಲಂಗೆ ಮಾತಾಡ್ಳೆ ಸುರುಮಾಡಿದವು.

ಆನಂದವೇ ಎಲ್ಲಕ್ಕಿಂತ ಅಗತ್ಯ ಜೀವಿಗೊಕ್ಕೆ.
ಲೋಕದ ಇಷ್ಟೆಲ್ಲ ಪ್ರಗತಿಗೆ ಧಾತು “ಆನಂದ”ವೇ ಅಡ.
ಆನಂದಕ್ಕಾಗಿಯೇ ಬದ್ಕುದು. ಜೀವನದ ಎಲ್ಲಾ ವೆವಸ್ತೆಗಳೂ ಅವರವರ ಆನಂದಕ್ಕೆ ಸರಿಯಾಗಿ ಮಾಡಿಗೊಳ್ತವು.
ಆನಂದ ಇಲ್ಲದ್ದರೆ ಬೇರೆ ಯೇವದಿದ್ದೂ ಪ್ರಯೋಜನ ಇಲ್ಲೆ.
ಆಹಾರ ಇದ್ದು, ಪ್ರಾಣ ಇದ್ದು, ಮನಸ್ಸಿದ್ದು, ವಿಶೇಷವಾದ ಜ್ಞಾನ ಇದ್ದು – ಆದರೆ ಜೀವನಲ್ಲಿ ಆನಂದವೇ ಇಲ್ಲೆ ಹೇಳಿತ್ತುಕಂಡ್ರೆ?
ಇದೆಲ್ಲ ಇದ್ದರೂ ಬ್ರಹ್ಮ ಸಿಕ್ಕ° ಅಲ್ಲದೋ – ಹೇಳಿದವು ಮಾಷ್ಟ್ರುಮಾವ°.
~
ಹಾಂಗೆ ಹೇಳಿಅಪ್ಪದ್ದೇ ಬೋಚಬಾವನ ನೆಂಪಾತು.
ಬೇರೆ ಏವದು ಇಲ್ಲದ್ದರೂ ಅವಂಗೆ ಆನಂದ ಇದ್ದು ಮನಸ್ಸಿಂಗೆ. ಸಂತೋಷಲ್ಲಿ ಇರ್ತ° ನಮ್ಮೊಟ್ಟಿಂಗೆ. ಅದು ಕೊಶಿಯೇ ಅಲ್ಲದೊ?
~

ವೇನು ಎಲ್ಲಿಗೋ ಎತ್ತಿತ್ತು.
ಮಂಗಳಾರತಿಗೆ ಆತು – ಹೇಳ್ತ ಧಾಟಿಲಿ ’ಇನ್ನು ನಾಳೆ ಮಾತಾಡುವೊ’ ಹೇಳಿದವು ಬಟ್ಟಮಾವ° ಒಂದರಿಯೇ!
ಇನ್ನು ಮಾತಾಡಿ ಬೋಚಬಾವನ ಒರಕ್ಕಿಂಗೆ ಹರಟೆ ಅಪ್ಪದು ಬೇಡ ಹೇಳಿಗೊಂಡು ಹಾಂಗೆ ಹೇಳಿದವೋ ಯೇನೋ! ಉಮ್ಮ.
ಅಲ್ಲಿಗೇ ಕುತ್ತ ಕೂದುಗೊಂಡು ಒರಗಿದೆಯೊ°.
~
ಅಂತೂ ನೆಮ್ಮದಿಲಿ ಗೋಕರ್ಣಕ್ಕೆ ಹೋಗಿ ಬಂದೆಯೊ.
ಉಪಾಯಲ್ಲಿ ಮಂತ್ರ ಒಂದರ ಕಲ್ತದರ ಗ್ರೇಶಿ ಕೊಶಿ ಆತು.
ಮೌಢ್ಯವ ಒಳ್ಳೆದರ್ಲೇ ಮುಗುಶಿದ್ದರ ಗ್ರೇಶಿ ಸಮಾದಾನವೂ ಆತು. 😉
ನಿಂಗೊಗೆ?

ಒಂದೊಪ್ಪ: ವಿಶೇಷವಾದ ಮನಸ್ಸಿನ ಬೆಳೆಶಿಗೊಂಡು ಪ್ರಾಣವ ಒಳಿಶಲೆ ದಕ್ಕಿತ ಅನ್ನವನ್ನೂ ತೆಕ್ಕೊಂಡು, ಆನಂದದ ಕಡೆಂಗೆ ಹೋಪದೇ ನಿಜವಾದ ಬ್ರಹ್ಮತತ್ವ ಅಲ್ಲದೋ?

ಸೂ:

  • ನಮ್ಮ ತುಪ್ಪೆಕಲ್ಲು ಅಣ್ಣಂದ್ರು ಹೇಳಿದ “ಭೃಗುವಲ್ಲಿ” ಮಂತ್ರ ಸದ್ಯಲ್ಲೇ ಬೈಲಿಲಿ ಬತ್ತು.
    ಬೈಲಿನ ಚೆನ್ನೈಭಾವ ಇದರ ಪ್ರೀತಿಲಿ ಕಳುಸಿಕೊಟ್ಟದಕ್ಕೆ ಅವಕ್ಕೆ ಒಪ್ಪಂಗೊ 🙂

    ಭೃಗುವಲ್ಲೀ | ತುಪ್ಪೆಕಲ್ಲು ಅಣ್ಣಂದ್ರು | Oppanna.com
  • ಗೋಕರ್ಣಲ್ಲಿ ರುದ್ರ ಓದುವಗ ಅದೇ ಪುಸ್ತಕಲ್ಲಿ ಕಂಡ ಭೃಗುವಲ್ಲಿ ಇಲ್ಲಿದ್ದು:
    (ವೇದಕುಸುಮಾಂಜಲಿರಾಮಕೃಷ್ಣ ಆಶ್ರಮದ ಪ್ರಕಟಣೆ)

28 thoughts on “ವರುಣನಲ್ಲಿ ಹೋಗಿ ಹೋಗಿ ಬ್ರಹ್ಮನ ಕಂಡ “ಭೃಗುವಲ್ಲೀ”..!!

  1. ಯಾವತ್ರಾಣ ಹಾಂಗೆ ಒಳ್ಲೆ ಲೇಖನ. ಹೀಂಗಿಪ್ಪ ಲೇಖನ ತುಂಬಾ ಇಷ್ತ ಆವುತ್ತು.

    ಹಾಂಗರೆ ಕಡೆಂಗೆ ಆನಂದವೆ ಬ್ರಹ್ಮ ಹೇಳಿ ವರುಣ ಹೇಳಿದನಾ?

    ಇನ್ನಷ್ತು ಹೀಂಗಿಪ್ಪ ಲೇಖನ ಬರಲಿ.

  2. ಒಪ್ಪಣ್ಣ, ಮಂತ್ರ, ಧ್ವನಿ, ವಿವರಣೆಯ ಒಟ್ಟಿಂಗೆ ಒಂದು ಪರಿಪೂರ್ಣ ಶುದ್ದಿ. ಈ ವಿಷಯದ ಬಗ್ಗೆ ರಜ್ಜ ಸಮಯ ಮೊದಲು ಒಂದು ಭಾಷಣ ಕೇಳಿತ್ತಿದ್ದೆ. ನಮ್ಮ ಮಂಗ್ಳೂರು ವಿಶ್ವವಿದ್ಯಾಲಯಲ್ಲಿ ಯೋಗಿಕ್ ಸಯನ್ಸಿನ ಮುಖ್ಯಸ್ಥರು ಡಾ।ಕೃಷ್ಣ ಭಟ್ ಮಾತಾಡಿದ್ದದರ! ಅಂಬಗಳೇ ಇದರ ಬಗ್ಗೆ ಹೆಚ್ಚು ತಿಳಿಯೆಕ್ಕು ಹೇಳಿ ಆಗಿದ್ದತ್ತು. ಒಪ್ಪಣ್ಣ, ಬಟ್ಟಮಾವಂದ ಹಾಂಗೇ ಎಂಗೊಗೆ ಶುದ್ದಿಯ ಕೊಟ್ಟಿದೆ. ಲಾಯ್ಕಾಯಿದು ಆತೋ.

    ವರುಣನ ಮಗ° ಭೃಗುವಿಂಗೆ ಈ ವಿಚಾರಂಗಳ ತಿಳ್ಕೊಂಬಲೆ ತಪಸ್ಸು ಮಾಡೆಕ್ಕಾತು. ನೀನು ಬಟ್ಟಮಾವನ ಭಂಡಾರಂದ ವಿಚಾರವ ತೆಗದು ಸುಲಾಬಲ್ಲಿ ಎಂಗೊಗೆ ಅರ್ತ ಅಪ್ಪ ಹಾಂಗೆ ಬೋಚಭಾವನ ಉದಾಹರಣೆ ಕೊಟ್ಟುಗೊಂಡು ವಿವರಣೆ ಕೊಟ್ಟಿದೆ. ಹಾಂಗಾಗಿ ಆದಿಕ್ಕು ರಜ್ಜ ಅರ್ತ ಆತು.;-)

    ಒಪ್ಪಣ್ಣ, ಶುದ್ದಿ ಓದಿ ಅಪ್ಪಗ ಎನಗೆ ಅನಿಸಿದ್ದದು, ಇದು ನಮ್ಮ ಜೀವನದ ಪೂರ್ಣಚಕ್ರ ಅಲ್ಲದಾ ಹೇಳಿ!! ನಾವು ಹುಟ್ಟಿದ ಮತ್ತೆ ಎಲ್ಲವನ್ನೂ ಅನ್ನದ ರೂಪಲ್ಲಿ ತಿಂಬದೇ ಅಲ್ಲದಾ? ಬರೇ ಹೊಟ್ಟೆಗೆ ಮಾಂತ್ರ ಅಲ್ಲ, ಬುದ್ಧಿಗೆ ಕೂಡಾ..!! ರಜ್ಜ ಬೆಳದ ಹಾಂಗೆ ನಾವು ಅನ್ನದ ಒಟ್ಟಿಂಗೆ ಪ್ರಾಣಕ್ಕೆ ಬೇಕಾಗಿ, ಪ್ರಾಣರಕ್ಷಣೆಗೆ ಬೇಕಾಗಿ ಇಪ್ಪ ಮಾರ್ಗಂಗಳ ಮಾಡ್ತು. ಮತ್ತೆ ಮನಸ್ಸು ಹೇಳಿದ ಹಾಂಗೆ ನಡೆತ್ತು ಕೆಲವು ವರ್ಷ!!! ಮನಸ್ಸಿಂಗೆ ಬೇಕಾದ್ದದರ ಮಾಡಿಗೊಂಡು ಹೋವುತ್ತು!!! ಈ ಮೂರರ ಒಟ್ಟಿಂಗೆ ನೀನು ಹೇಳಿದ ಹಾಂಗೆ ವಿಶೇಷ ಜ್ಞಾನ ಸಿಕ್ಕಿ ಅಪ್ಪಗ ನಾವು ಪಕ್ವ ಆವುತ್ತು. ಆ ಸಮಯಲ್ಲಿ ನಮ್ಮ ಪ್ರಾಯವೂ ಪ್ರೌಢತೆಗೆ ಎತ್ತುತ್ತು. ಮತ್ತೆ ಒಳುದ ಜೀವನ ಪೂರ್ತಿ ಆನಂದವೇ ಅಲ್ಲದಾ ಈ ಸತ್ಯವ ಕಂಡವಂಗೆ!!! ನಮ್ಮ ಜೀವನದ ಸಂಧ್ಯೆಗೆ ಅಪ್ಪಗ ನಾವು ಎಲ್ಲವನ್ನೂ ಆನಂದಲ್ಲಿ ಸ್ವೀಕರಿಸುಲೆ ಎಡಿಗಾದರೆ ಬಹುಶ ನಮ್ಮ ಜೀವನ ಸಾರ್ಥಕ ಅಕ್ಕು ಅಲ್ಲದಾ? ಈ ಶುದ್ದಿಯ ಇಡೀ ಸಾರವೂ ಅದುವೇ ಅಲ್ಲದಾ?

    ಒಂದೊಪ್ಪಲ್ಲಿ ನೀನು ಇದೇ ಜೀವನ ತತ್ವವ ಒಂದೇ ಗೆರೆಲಿ ಹೇಳಿದ್ದೆ. ಲಾಯ್ಕಾಯಿದು.

  3. ಒಪ್ಪಣ್ಣೋ,
    ಭಾರೀ ಲಾಯಿಕ ಆಯಿದು ಆನಂದವೇ ಬ್ರಹ್ಮ ಹೇಳಿ ನೀನು ತಿಳಿಶಿಕೊಟ್ಟದು
    ಒಟ್ಟಿಂಗೆ ಬೋಚ ಭಾವನನ್ನೂ ಸೇರಿಸಿಗೊಂಡು ಓದಲೆ ಕೊಶೀ ಆತು.
    ***
    [ಮದುವೆ ಅಪ್ಪದೇ ಮರದ್ದ° – ಹೇಳಿ ಶರ್ಮಪ್ಪಚ್ಚಿ ಒಂದೊಂದರಿ ಕೋಂಗಿ ಮಾಡುಗು! ]-ಶರ್ಮಪ್ಪಚ್ಚಿಗೆ ಮಾತ್ರ ಮರದ್ದಾ, ಅಲ್ಲ ನಿನಗೂ ಕೂಡಾ ಹೇಳಿ ಒಂದು ಸಣ್ಣ ಸಂಶಯ.
    ಮದುವೆ ಮನೆಲಿ ಹೆಂಡತಿ ಸೀರೆಗೆ ಪಾಚ ಬಿದ್ದ ಕತೆ ಬೈಲಿಲ್ಲಿ ಹೇಳಿತ್ತಿದ್ದೆ !!!
    [ಕೊಡೆಯಾಲದ ಬಸ್ಸಿಲಿ ಜಾಗೆ ಇಕ್ಕೋ ಕೇಳಿದ್ದಕ್ಕೆ ಶ್ರೀಶಣ್ಣ – ಕೇಳಿನೋಡ್ತೆ ಹೇಳಿತ್ತಿದ್ದ°.ಅವ° ಕೇಳಿದ್ದನೂ ಇಲ್ಲೆ, ಎಂತ್ಸೂ ಇಲ್ಲೆ, ಅವಂಗೆ ಮರದ್ದು ಪಾಪ] -ಅಪ್ಪು ಒಂದೊಂದರಿ ಹಾಂಗೆ ಆವ್ತಿದ.
    ಇರುಳು ಹಗಲು ಹೇಳಿ ಶಿಫ್ಟಿಲ್ಲಿ ಕೆಲಸ ಮಾಡುವದಲ್ಲದೋ !!!
    ***
    ಕೊಶೀ ಆದ ತಮಾಶೆ ಸಾಲುಗೊ:
    [ಸೀಟಿಲೇ ಕೂದುಗೊಂಡ್ರೆ ಆಚವಂಗೆ ಉಪದ್ರ ಮಾಡ್ತು ಆರು] ಇದಕ್ಕೇ ಇದಾ ಬಸ್ಸಿಲ್ಲಿ ಸೀಟ್ ಇದ್ದೋ ಇಲ್ಲೆಯೋ ಹೇಳಿ ಹೇಳದ್ದು !!!]
    [ಬೋಸಬಾವ ಅಂತೂ – ಕುಂಬುಳೆಂದ ಕೊಡೆಯಾಲಕ್ಕೆ ಎತ್ತುವನ್ನಾರ ಕಡಮ್ಮೆಲಿ ಅಯಿವತ್ತು ಸರ್ತಿ ’ಗೋಕರ್ಣ ಎತ್ತಿತ್ತೋ’ ನೋಡಿಗೊಂಡಿದ!]
    [ಅಡಕ್ಕೆಗೋಣಿಯ ಬಾಯಿಹೊಲುದ ನಮುನೆ – ಕಣ್ಣಿನ ಎಷ್ಟು ಅಮರ್ಸಿ ಹಿಡ್ಕೊಂಡ್ರೂ ಒರಕ್ಕು ಬತ್ತಿಲ್ಲೆ ಅದ!!]
    [ಈ ಮೇಧಾವಿಗೊಕ್ಕೇ ಸಂಶಯ ಬಪ್ಪದೋ, ಅಲ್ಲ ಸಂಶಯ ಬಂದು ಬಂದು ಮೇಧಾವಿ ಅಪ್ಪದೋ – ಉಮ್ಮಪ್ಪ!]
    ***
    ಒಂದೊಪ್ಪ ಲಾಯಿಕ ಆಯಿದು. ಊಟ ಬಲ್ಲವಂಗೆ ರೋಗ ಇಲ್ಲೆಡ.

  4. ಒಪ್ಪಣ್ಣ,
    “ಬ್ರಹ್ಮ ಜ್ಞಾನೇತಿ ಬ್ರಾಹ್ಮಣ” ಹೇಳಿ ಸೂಕ್ತಿ ಇದ್ದು.
    ಭೃಗುವಾರಿಣಿ, ತಪಸ್ಸಿನ ಮೂಲಕ ಕಂಡು ಹಿಡಿದ ಸತ್ಯ-ಆನಂದವೇ ಬ್ರಹ್ಮ ಹೇಳುವದರ ನೀನು ಇಲ್ಲಿ ಎಲ್ಲರಿಂಗೂ ಅರ್ಥ ಅಪ್ಪ ಹಾಂಗೆ ಹೇಳಿದ್ದು ಲಾಯಿಕ ಆಯಿದು.
    ಇಲ್ಲಿ ಭೃಗುವಿಂಗೆ ಅವರ ಅಪ್ಪ, ಎಲ್ಲವನ್ನೂ ಹೇಳಿ ಕೊಡದ್ದೆ, ಸೂಕ್ಷ್ಮ ವಾಗಿ ಹೇಳಿ, ಇನ್ನು ನೀನು ತಪಸ್ಸು ಮಾಡಿ ತಿಳ್ಕೊ ಹೇಳ್ತ.
    ಒಂದೇ ವಿಶಯದ ಬಗ್ಗೆ ತುಂಬಾ ಚಿಂತನೆ ಮಾಡುವದಕ್ಕೆ ತಪಸ್ಸು ಹೇಳ್ತವು. ನವಗೂ ಹಾಂಗೇ, ಯಾವುದಾದರೂ ಒಂದೇ ವಿಶಯವ ಅಲೋಚನೆ ಮಾಡಿಂಡು ಮುಂದೆ ಮುಂದೆ ಹೋದ ಹಾಂಗೆ ಸುಮಾರು ವಿಶಯಂಗೊ ಅರ್ಥ ಆವ್ತು.
    ಆನಂದವೇ ಬ್ರಹ್ಮ ಹೇಳುವಲ್ಲಿ, ಈ ಆನಂದ, ಇಂದ್ರಿಯಂಗಳಿಂದ ಸಿಕ್ಕುವ ಆನಂದ ಅಲ್ಲ. ಇಂದ್ರಿಯ ನಿಗ್ರಹ ಮಾಡಿ ತಪಸ್ಸು ಮಾಡಿ ಎಲ್ಲವೂ ಬ್ರಹ್ಮನಿಂದಲೇ ಹೇಳಿ ಗೊಂತಪ್ಪ ಸತ್ಯದ ಹಂತ.
    ಭೃಗುವಲ್ಲಿಲಿ, ಅನ್ನದ ಬಗ್ಗೆ ಹೇಳ್ತಾ, ಅನ್ನವ ನಿಂದಿಸಲೆ ಅಗ, ಎಂತಕೆ ಹೇಳಿರೆ ಪ್ರಾಣವೇ ಅನ್ನ, ಅನ್ನ ಮತ್ತೆ ಪ್ರಾಣ ಒಂದರ ಒಂದು ಬಿಟ್ಟು ಇಪ್ಪಲೆ ಸಾಧ್ಯ ಇಲ್ಲೆ.
    ಅನ್ನವ ನಿರಾಕರಿಸಲೆ ಆಗ ಎಂತಕೆ ಹೇಳಿರೆ ಅನ್ನಂದಲೇ ಎಲ್ಲಾ ಜೀವಿಗೊಕ್ಕೂ ಶಕ್ತಿ ಸಿಕ್ಕುವದು.
    ಅನ್ನವ ವೃದ್ಧಿ ಮಾಡೆಕ್ಕು ಎಂತಕೆ ಹೇಳಿರೆ ಇದು ಎಲ್ಲರಿಂಗೂ ಬೇಕಾದ್ದು.
    ಅತಿಥಿಗಳ ಸರಿಯಾಗಿ ಸತ್ಕರಿಸೆಕ್ಕು ಹೇಳ್ತ.
    ಉಪನಿಷತ್ತು ಹೇಳಿರೆ ಇಲ್ಲಿ ತತ್ವಂಗೊಕ್ಕೆ ಹೆಚ್ಚು ಪ್ರಾಧಾನ್ಯ. ನಿತ್ಯ ಸತ್ಯದ ತಿಳುವಳಿಕೆಗೆ ಇಲ್ಲಿ ಆದ್ಯತೆ.
    ***

  5. ಒಪ್ಪಣ್ಣನ ಮೂಲಕವಾಗಿ ಸರಳವಾಗಿ ಎಂಗೊಗೆಲ್ಲ ಬ್ರಹ್ಮನ ಬಗ್ಗೆ ತಿಳುಸಿಕೊಟ್ಟ ಬಟ್ಟಮಾವಂಗೆ ಧನ್ಯವಾದಂಗೊ. ಸರಿಯಾಗಿ ಅರ್ಥ ಆತು. ನಡು ನಡುವೆ ಬ್ರಹ್ಮತತ್ವವ ಅರ್ಥ ಮಾಡ್ಯೊಂಡ ಬೋಸ ಬಾವನನ್ನು ಕಂಡತ್ತು. ಒಪ್ಪಣ್ಣನ ಲೇಖನವ ಓದಿ ಅಪ್ಪಗಳೆ ಆನಂದದ ಅನುಭವ ಆತು. ಆಹಾರ ಇದ್ದು, ಪ್ರಾಣ ಇದ್ದು, ಮನಸ್ಸಿದ್ದು, ವಿಶೇಷವಾದ ಜ್ಞಾನ ಇದ್ದು – ಆದರೆ ಜೀವನಲ್ಲಿ ಆನಂದವೇ ಇಲ್ಲದ್ರೆ, ನಿಜ ಒಪ್ಪಣ್ಣ. ಎಂತೂ ಪ್ರಯೋಜನ ಇಲ್ಲೆ. ಆದರೆ, ಕೆಲವು ಜೆನ ಆನಂದಕ್ಕೆ ಬೇಕಾಗಿ ಎಂತೆಂತದೋ, ದುರ್ಮಾರ್ಗಕ್ಕೆ ಇಳಿತ್ತವನ್ನೆ, ಅವರ ಆನಂದ ಇನ್ನೊಬ್ಬನ ದುಃಖಕ್ಕೆ ಕಾರಣ ಆವ್ತಾನೆ ಹೇಳ್ತದು ಬೇಜಾರಿನ ವಿಷಯ.

  6. (ಆನಂದವೇ ಬ್ರಹ್ಮ)
    ಅಂಬಗ “ಬ್ರಹ್ಮಾನಂದ” ಹೇಳಿರೆ ಎಂತ?

    1. ತೈತ್ತರೀಯ ಉಪನಿಷತ್ತಿಲ್ಲಿ “ಬ್ರಹ್ಮಾನಂದ ವಲ್ಲಿ” ಕೂಡಾ ಇದ್ದು

        1. ಶಿಕ್ಷಾವಲ್ಲಿ, ಬ್ರಹಾನಂದ ವಲ್ಲಿ ಮತ್ತೆ ಭೃಗುವಲ್ಲಿ ಹೇಳಿ ಮೂರು ಪ್ರಸಿದ್ದಿ.

  7. ಒಪ್ಪಣ್ಣ ಭಾವ,ಆನಂದದ ಕಡೆಂಗೆ ಹೋಪದೇ ನಿಜವಾದ ಬ್ರಹ್ಮತತ್ವ ಹೇಳ್ತರ ಮನದಟ್ಟು ಮಾಡುವಾ೦ಗೆ ಬರದ್ದು ನೋಡಿ ಕೊಶಿಯಾತು.

  8. ಲೇಖನ ತುಂಬಾ ಲಾಯಕ ಆಯಿದು ಒಪ್ಪಣ್ಣ….

    ಹರೇರಾಮ.ಇನ್ ನ ಚಾತುರ್ಮಾಸ್ಯ ಪ್ರವಚನ ‘ಹುಟ್ಟು’ ವಿಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇದ್ದು.

    1. ಜಯಶ್ರಿ ಅಕ್ಕಂಗೆ ನಮಸ್ಕಾರಂಗೊ.
      ಚಾತುರ್ಮಾಸ್ಯದ ಪ್ರವಚನಲ್ಲಿಯೂ ಇದು ಇದ್ದು ಹೇಳ್ತರ ಕೇಳಿ ಕೊಶಿ ಆತು.

      ಒಂದರಿ ಕೇಳೆಕ್ಕಾತು. ಆರಾರು ಹಾಕಿ ಕೊಡ್ತವೋ ಏನೋ! 🙂

    1. ಸಮ್ಮಂದ ಇದ್ದೋ ಏನೋ!
      ನೆಗೆಮಾಣಿಯ ಹತ್ತರೆ ಕೇಳಿರೆ ಬಾಯಿಗೆಬಂದ ಸಮ್ಮಂದ ಹೇಳುಗು. ಅದಾಗ.

      ಇನ್ನಾಣ ಸರ್ತಿ ಬಟ್ಟಮಾವ ಸಿಕ್ಕಿಪ್ಪಗ ಕೇಳಿ ಹೇಳ್ತೆ, ಆತೋ? 🙂

  9. ಮೊನ್ನೆ ಮೊನ್ನೆ ಅಷ್ಟೆ ಭೃಗುವಿಂಗೆ ಸಂಬಂದಪಟ್ಟ ಒಂದು ಪುಸ್ತಕ ಓದಿತ್ತಿದ್ದೆ. ಆದರಲ್ಲಿಯೂ ಇದೇ ವಿಷಯ ಇತ್ತು. ಈಗ ಒಪ್ಪಣ್ಣನೂ ವಿವರಿಸಿದ. ಎಂತಾ ಯೋಗಾಯೋಗ… 🙂

    1. ಯೋಗಾಯೋಗ! ಅಪ್ಪು ಸಂಶಯ ಇಲ್ಲೆ. ಮೊನ್ನೆ ಮೊನ್ನೆ ಕುಂದಾಪುರದ ಯು. ಪದ್ಮನಾಭ ಭಟ್ಟ ವಿರಚಿತ “ವೇದಾಂತದ ಸಮಗ್ರ ಸಿಧ್ಧಾಂತ” ಪುಸ್ತಕ ಓದಿದ್ದಷ್ಟೆ. ಅದು “ಎಂಗಳ” ಸಹಕಾರನಗರದ ಲೈಬ್ರೆರಿಲಿ ಸಿಕ್ಕಿತ್ತದು. ಎರಡು ಸರ್ತಿ ರೆನ್ಯು ಮಾಡಿ ಮತ್ತೆ ಸಪ್ನಾ ಮಳಿಗೆಂದ ಹೊಸಾ ಪುಸ್ತಕ ಖರೀದಿಸಿದೆ. ಭಾರಿ ಒಪ್ಪ ಪುಸ್ತಕ. ಅದರಲ್ಲಿದೆ ಬಟ್ಟ ಮಾವ ಹೇಳಿದ ಇದೇ ವಿಷಯಂಗೊ ಯಥಾವತ್ತಾಗಿ ಇದ್ದು. ಬಾಲಣ್ಣನುದೆ ಇದೇ ವಿಷಯಂಗಳ ಬಗ್ಗೆ ಲಾಯ್ಕಕ್ಕೆ ಬರದಿತ್ತಿದವು.

      ಈ ಎರಡು ವರ್ಷ ಹಿಂದೆ ಎರಡೆರಡು ಸರ್ತಿ ಓದಿದರೂ ತಲೆಗೆ ಹತ್ತದ್ದ ವಿಷಯಂಗ ಏಕೋ ಇತ್ತೀಚೆಗೆ ಹತ್ತುತ್ತಾ ಇದ್ದು. ಅದರೊಟ್ಟಿಂಗೆ ಬಂಧುಬಳಗದವರಲ್ಲಿಯೂ ಈ ಬಗ್ಗೆ ಆಸಕ್ತಿ, ಚರ್ಚೆ ಕಂಡು ಬತ್ತಾ ಇದ್ದು. ಇದು ಯೋಗಾಯೋಗ ಅಲ್ಲದ್ದೆ ಮತ್ತೆಂತರ!

      ಒಪ್ಪಣ್ಣ, ಇದೇ ರೀತಿ ಬರೆತ್ತಾ ಇರು. ಆನು ಈ ಮಾಹಿತಿಗಳೆಲ್ಲವನ್ನೂ ಸಂಗ್ರಹ ಮಾಡಿ ಮಡಿಕ್ಕೊಳ್ತೆ.. ಅಮೂಲ್ಯ ಮಾಹಿತಿಗೊ ಇವೆಲ್ಲ!

      ಇದೆಲ್ಲ ಓದಿ ಅಪ್ಪಗ ನಮ್ಮ ಹಿರಿಯೋರು ಊಟವ ಯಜ್ಞ ಹೇಳಿದ್ದದು ಎಂತಕ್ಕೆ ಹೇಳಿ ಗೊಂತಾತು. ಯಜ್ಞಲ್ಲಿ ಅಗ್ನಿಗೆ ಸಮಿತ್ತೇ ಅನ್ನ . ನಮ್ಮ ಶರೀರಲ್ಲಿಪ್ಪ ಜೀವಾಗ್ನಿಗೆ ನಾವು ಉಂಬ ಆಹಾರವೇ ಅನ್ನ!

      1. ಅಪ್ಪೂಳಿ, ಯೋಗಾಯೋಗವೇ! ಬಟ್ಟಮಾವನೂ ಅದೇ ಶುದ್ದಿ ಹೇಳೆಕ್ಕಾರೆ! 🙂

        ಶ್ಯಾಮಣ್ಣ, ನೀರ್ಕಜೆ ಅಪ್ಪಚ್ಚಿಯ ಅಪುರೂಪಕ್ಕೆ ಕಂಡು ಕೊಶಿ ಆತು.
        ಇಷ್ಟು ಅಪುರೂಪ ಆಗೆಡಿ, ಆತೋ? 🙂

  10. ಲೇಖನ ತುಂಬಾ ತುಂಬಾ ಒಪ್ಪ ಆಯಿದು ಒಪ್ಪಣ್ಣ… “ಭೃಗುವಲ್ಲೀ” ಮಂತ್ರದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟದ್ದಕ್ಕೆ ಹೃತ್ಪೂರ್ವಕ ಧನ್ಯವಾದಂಗೊ… 🙂

    1. ಮುಣ್ಚಿಕಾನದ ಪ್ರೋತ್ಸಾಹ ಕಡ್ಪಕ್ಕೆ ಕಂಡು ಕೊಶಿ ಆತು.
      ಒಪ್ಪಕ್ಕೆ ಒಪ್ಪಕೆ ಒಪ್ಪಂಗೊ!

  11. ಭೃಗು ಸಂಹಿತಾ ಹೇಳಿ ಇದ್ದಡ,ಅದೆಂತರ?

    1. ಭೃಗು ಸಂಹಿತಾ- ಹೇಳಿತ್ತುಕಂಡ್ರೆ ಭೃಗುವಲ್ಲಿಯೇ.

      ಸಂಹಿತಾ ಪಾಠ ಹೇಳಿತ್ತುಕಂಡ್ರೆ ಮಂತ್ರವ ಇದ್ದ ಹಾಂಗೇ ಓದಿ ಹೇಳ್ತದು.
      ಇದರ ಬಗ್ಗೆ ವಿವರವಾಗಿ ಇನ್ನೊಂದರಿ ಮಾತಾಡುವೊ°, ಆಗದೋ?
      ಹೇಳಿದವು ಬಟ್ಟಮಾವ°.

  12. [ಬಟ್ಟಮಾವಂಗೆ ಹಶುಹೊಟ್ಟೆಲಿ ಅಶನ ಕಾಂಬಗ ಸೃಷ್ಟಿಕರ್ತ ಬ್ರಹ್ಮನೇ ಕಂಡ ಹಾಂಗೆ ] – ಒಪ್ಪಣ್ಣ ನ ಇಂದ್ರಾಣ ಶುದ್ದಿ ಓದಿ ಹೃದಯ ತುಂಬಿತ್ತು. ಎನ್ನ ಕಂಪ್ಯೂಟರ್ಲಿ ಬ್ರಹ್ಮ ಬಂದ ಹಾಂಗೆ ಆತಿದಾ.

    ಶಹಬ್ಬಾಸ್, ಅದ್ಭುತ ಸಂಗ್ರಹ , ಭಾರೀ ಕೆಲಸ ಇಷ್ಟೊಂದು ಮಾಹಿತಿಗಳ ಇಲ್ಲಿ ಕೊಟ್ಟದು. ಧ್ವನಿ ಒಟ್ಟಿನ್ಗೆ ಪಟ್ಯವೂ ನೀಡಿ, ಬೃಗುವಲ್ಲಿ ಮಾಹಿತೀ ನೀಡಿ ಸಾರ್ಥಕ ಕೆಲಸ ಆಯ್ದು ಹೇಳಿ ನಮ್ಮ ಒಪ್ಪ.

    1. ಚೆನ್ನೈಭಾವಾ..
      ಶುದ್ದಿ ಕೇಳಿ ಸುರೂವಿಂಗೆ ಒಪ್ಪ ಕೊಟ್ಟದಕ್ಕೆ ಮತ್ತೊಂದರಿ ಒಂದೊಪ್ಪ!

      ಮಂತ್ರದ ಬಗ್ಗೆ, ವೈದೀಕ ಧರ್ಮದ ಬಗ್ಗೆ ವಿಶೇಷ ಆಸ್ಥೆ ಇಪ್ಪ ನಿಂಗೊಗೆ ಕೊಶಿ ಅಕ್ಕು ಹೇಳಿ ಅಂದಾಜಿ ಇತ್ತು ಒಪ್ಪಣ್ಣಂಗೆ!
      ಬಟ್ಟಮಾವಂದ್ರ ಸ್ವರ ಕೇಳುಲೆ ನಿಂಗಳ ಸಹಕಾರ ತುಂಬ ಇದ್ದು.
      ಧನ್ಯವಾದಂಗೊ. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×