Oppanna.com

ಬಿದಿಗೆ ರಟ್ಟೆ ಸಂತೆ – ಮಂತ್ರ ಬಾರ ಅಂತೆ ಅಂತೆ!

ಬರದೋರು :   ಒಪ್ಪಣ್ಣ    on   14/05/2010    19 ಒಪ್ಪಂಗೊ

ಬೈಲಕರೆ ಜೋಯಿಶಪ್ಪಚ್ಚಿ ಮನೆಲಿ ತಿತಿ ಕಳಾತು, ಕಳುದ ವಾರ!
ಈ ಅದಿಕಮಾಸಲ್ಲಿ ಎಲ್ಲಿಯೂ ಜೆಂಬ್ರ ವಿಶೇಷ ಇಲ್ಲೆ, ಹಾಂಗಿರ್ತಲ್ಲಿ ಒರಿಶಾವದಿ ಬತ್ತ ತಿತಿಯೋ, ಪೂಜೆಯೋ ಮತ್ತೊ ಮಾಂತ್ರ ಇಕ್ಕಷ್ಟೆ ಇದಾ!
ಬೈಲಿಂದ ಕೆಲವು ಹೋಗಿತ್ತಿದ್ದೆಯೊ°, ಊರಿಲೇ ಇದ್ದಂಡು ಪುರುಸೋತಿಲಿಪ್ಪವು.
ಹೋಪಗ ದಾರಿಗೆ ಹೀಂಗೇ ಶುದ್ದಿ ಮಾತಾಡಿಗೊಂಡು ಹೋದ್ದು, ನೇರಂಪೋಕು – ಅದರ ಬಗ್ಗೆ ಕಳುದ ವಾರ ಮಾತಾಡಿದ್ದು ಇದಾ, ನೀರಿನ ವಿಶಯ!

ತಿತಿ ದಿನ ಮಾತು ಕಂಡಾಬಟ್ಟೆ, ಈ ಸರ್ತಿಯುದೇ ಹಾಂಗೇ ಇತ್ತು.
ಆಚಕರೆ ತರವಾಡು ಮನೆಲಿ ಆದರೆ ಪಿಡಿ ಆಡಿ ಹೊತ್ತುಕಳಗು, ಜೋಯಿಶಪ್ಪಚ್ಚಿಯಲ್ಲಿಗೆ ಈಗ ಪಿಡಿ ತತ್ತವಿಲ್ಲೆ – ಮಕ್ಕೊ ಹಾಳಾವುತ್ತವು ಹೇಳಿಗೊಂಡು!
ಹಾಂಗಾಗಿ, ಬಂದ ಹೊತ್ತೋಗದ್ದವು ಕೂದುಗೊಂಡು ಪಂಚಾತಿಗೆ – ಹೊತ್ತು ಹೋಗೆಡದೋ!!
ಶುದ್ದಿ ಮಾತಾಡುವಗ ಅಂತೇ ಕೂದಂಡು ಲೊಟ್ಟೆಪಂಚಾತಿಗೆಲಿ ಹೊತ್ತು ಕಳವದಕ್ಕೆ, ಊರಿಂಗೆ ಉಪಕಾರ ಅಪ್ಪದರ ಏನಾರು ಮಾತಾಡ್ಳಾಗದೋ – ಹೇಳಿ ರಂಗಮಾವ° ಹೇಳುಗು, ಅಂಬಗಂಬಗ!
~

ಪಂಜಚಿಕ್ಕಯ್ಯನ ಮಗ° ಮಂತ್ರಪಾಟ ಶಾಲಗೆ ಹೋಪದಡ – ಮಾತಾಡಿಗೊಂಡು ಹೋಪಗ ಈ ಶುದ್ದಿ ಬಂತು.
ಅವರ ಊರಿಲೇ ಮಂತ್ರಪಾಟ ಶಾಲೆ ಅಡ. ಮಕ್ಕೊಗೆ ಹೇಳಿ ಮಾಡ್ತ ನಮುನೆದು ಇದ್ದಲ್ಲದೋ –
– “ವಸಂತ ವೇದಪಾಟ ಶಾಲೆ”ಗೊ, ಮದೂರಿಲಿ ಇದ್ದಿದಾ, ಅದೇ ನಮುನೆದು!
ಮೂರು ಒರಿಶ ಕೋರ್ಸು ಇದಾ, ಸಾಮಾನ್ಯ ನಮ್ಮೋರಿಂಗೆ ನಿತ್ಯಬಳಕ್ಕೆಗೆ ಎಷ್ಟು ಮಂತ್ರ ಬೇಕಾವುತ್ತೋ – ಅಷ್ಟರ ಕಲುಶಿಕೊಡ್ತವಡ.
ಅವರ ಮನೆಲಿ ದೇವರಿದ್ದ ಕಾರಣ, ದಿನಾಗುಳೂ ರುದ್ರ ಹೇಳಿ ದೇವರ ತಲಗೆ ನೀರು ಎರೇಕು ಇದಾ, ಹಾಂಗಾಗಿ ಮಗಂಗೆ ರುದ್ರ ಬಪ್ಪಲೇ ಬೇಕು – ಹೇಳಿ ಅಪ್ಪಮ್ಮ ವೇದಪಾಟಶಾಲಗೆ ಕಳುಸಿದ್ದಡ.

ಇದರೆಡಕ್ಕಿಲಿ ಮಗ° ಒಂದು ದಿನಕ್ಕೆ ಮನಗೆ ಬಂದು ಹೋದನಡ. ರಜಾ ದೊಂಡೆಬೇನೆ ಆದ ಕಾರಣ ಗೆಣಮೆಣಸು ಕಷಾಯ ಮಾಡಿ ಕೊಟ್ಟತ್ತಡ, ಮಾಲಚಿಕ್ಕಮ್ಮ.
ಅಡಕ್ಕೆ, ಗೆಣಮೆಣಸಿಂಗೆ ಈಗ ಕ್ರಯವೇ ಇಲ್ಲೆ! ಒಂದೊಂದರಿ ತಲೆಬೆಶೀ ಆವುತ್ತು ಕೊಳಚ್ಚಿಪ್ಪು ಬಾವಂಗೆ. ಹ್ಮ್, ಅದಿರಳಿ!

ಅವ ಈಗ ಬರೇ ಐದನೇ ಕ್ಲಾಸು, ರುದ್ರ ಪಾಟ ಸುರು ಆಯಿದಡ. ಅಷ್ಟು ಸಣ್ಣ ಮಕ್ಕೊಗೆ ರುದ್ರ ಕಲಿಶುದೋ ಹೇಳಿಗೊಂಡು ಮಗುಮಾವಂಗೆ ತಲೆಬೆಶಿ ಅಪ್ಪಲೆ ಸುರು ಆತು.
ಅಷ್ಟಪ್ಪಗ ಅಲ್ಲೇ ಕೂದಿದ್ದ ಪಳನ್ನೀರುಮಾವ° ಮಂತ್ರಕಲಿಶುತ್ತ ಕ್ರಮವ, ಅದು ಹೊರೆ ಆಗದ್ದ ಗುಟ್ಟಿನ ವಿವರುಸುಲೆ ಸುರು ಮಾಡಿದವು.
ಪಳನ್ನೀರುಮಾವ° ಜೋಯಿಶಪ್ಪಚ್ಚಿಗೆ ತುಂಬ ಹತ್ತರೆ! ಹಾಂಗಾಗಿ ತಿತಿಊಟಕ್ಕಪ್ಪಗ ಬಂದು ಎತ್ತಿಗೊಂಡಿದವು.
~

ಪಳನ್ನೀರುಮಾವಂಗೆ ಮಂತ್ರ ಅರಡಿಗು. ಅರಡಿಗು ಹೇಳಿರೆ ಒಳ್ಳೆತ ಅರಡಿಗು – ಮಂತ್ರಪಾಟಶಾಲಗೆ ಹೋಗಿ ಕಲ್ತಿದವು, ದೊಡ್ಡದೊಡ್ಡ ಬಟ್ಟಮಾವಂದ್ರ ಒಟ್ಟಿಂಗೆ ಮಣೆಮಡಿಕ್ಕೊಂಡು ಮಂತ್ರವುದೇ ಹೇಳ್ತವು.
ಅವು ಬರೇ ಕಲ್ತದು ಮಾಂತ್ರ ಅಲ್ಲ, ಕಲಿಶುತ್ತವುದೇ, ಆಸಕ್ತಿ ಇದ್ದೋರಿಂಗೆ! ಅವರಷ್ಟೇ ನಮ್ಮ ಗಣೇಶಮಾವಂಗೂ ಅರಡಿಗು- ಅವು ಚೆಂಙಾಯಿಗೊ ಇದಾ!
(ಒಪ್ಪಣ್ಣಂಗೂ ರಜ ರಜ ಮಂತ್ರ ಅರಡಿಗು, ಗಾಯತ್ರಿಮಂತ್ರಕ್ಕೆ ಸೊರ ಹಾಕಲೆ ತಕ್ಕ ಆದರೂ!)
ಹಾಂಗೆ ಪಳನ್ನೀರು ಮಾವನೇ ಸ್ವತಃ ವಿವರುಸುವಗ ಅದರ್ಲಿ ಎಷ್ಟೋವಿಶಯಂಗೊ ಬಂತು, ಒಪ್ಪಣ್ಣನ ಒಂದು Günstige Replica Uhren ಶುದ್ದಿಗೆ ಸಾಕಪ್ಪಷ್ಟು!
~

ಮಂತ್ರ / ವೇದಪಾರಾಯಣಲ್ಲಿ ಶಬ್ದಂಗಳಷ್ಟೇ ಸ್ವರವೂ ಪ್ರಾಮುಖ್ಯ.
ಮಂತ್ರಂಗಳ ಬಾಯಿಪಾಟ ಮಾಡುಸುತ್ತ ವಿಧಾನಲ್ಲಿ ವಿದ್ಯಾರ್ಥಿಗೆ ನೆಂಪೊಳಿಯೇಕಾರೆ – ಅಂತೇ ಶಾಲೆಲಿ ಹೇಳಿ ಕೊಟ್ಟ ಹಾಂಗೆ ಹೇಳಿಕೊಟ್ರೆ ಸಾಲ! ಆ ಮಂತ್ರದ ಅಕ್ಷರಂಗಳ ಸ್ಪಷ್ಟವಾಗಿ
ಓದುತ್ತದರಿಂದ ಹಿಡುದು, ಆ ಅಕ್ಷರ ಓದುವಗ ನಮ್ಮ ಸ್ವರಲ್ಲಿ ಆಯೇಕಾದ ಏರಿಳಿತಂಗೊ, ಆ ಮೂಲಕ ಮಂತ್ರದ ಧಾಟಿಗೆ ತರೆಕಾದ ಲಯ, ಇಂಪು, ಇತ್ಯಾದಿಗಳನ್ನುದೇ ಸೇರಿ ಹೇಳಿಕೊಡುದಡ.

ಮಂತ್ರ ಸ್ವರದ ಬಗೆಗೆ ಗೊಂತಿದ್ದನ್ನೇ!?
ಮಂತ್ರ ಹೇಳುವಗ ಗಾಡಿಎತ್ತು ಹೊಯಿದಹಾಂಗೆ ಉದಾಕೆ ಹೇಳುದಲ್ಲ, ಬದಲಾಗಿ ನಿರ್ದಿಷ್ಟ ಅಕ್ಷರಕ್ಕೆ ನಿರ್ದಿಷ್ಟ ಸ್ವರಸ್ಥಾನ ಇರೆಕ್ಕು – ಹೇಳ್ತದರ ನಮ್ಮ ಅಜ್ಜಂದ್ರು ನಿಜ ಮಾಡಿದ್ದವು.
ನಾವು ಹೇಳುವಗ ಅದನ್ನೇ ಹೇಳೆಕ್ಕು..
(ಹೃಸ್ವ, ದೀರ್ಘ, ಉದಾತ್ತ, ಅನುದಾತ್ತ, ಸ್ವರಿತ, ದೀರ್ಘಸ್ವರಿತ, – ಹೇಳಿ ಎಂತೆಂತದೋ ಹೇಳಿದವು, ಪಳನ್ನೀರುಮಾವನೋ ಗಣೇಶಮಾವನೋ ಮಣ್ಣ ಇನ್ನೊಂದರಿ ಪುರುಸೋತಿಲಿ ವಿವರುಸುಗು, ಆತಾ?)
ಒಟ್ಟಿಲಿ, ಸ್ವರಮುಖಾಂತರ ಹೇಳುವಗ ಬಾಯಿಪಾಟ ಬೇಗ ಬತ್ತು – ಹೇಳಿದವು ಪಳನ್ನೀರುಮಾವ°.
~

ಮದಲಿಂಗೆ ಬಾಯಿಪಾಟ ಮುಖಾಂತರವೇ ಒಳಿಶಿಗೊಂಡಿದ್ದದು. ಒಂದೇ ಒಂದು ಅಕ್ಷರವಿತ್ಯಾಸ, ಚುಕ್ಕಿ – ಬೊಟ್ಟುದೇ ವಿತ್ಯಾಸ ಇಲ್ಲದ್ದೆ ಈ ಮಂತ್ರಂಗೊ ಸಾವಿರಾರು ಒರಿಶ ಒಳುಕ್ಕೊಂಡು ಬಯಿಂದು – ಹೇಳಿದವು ಎಲೆಮರಿಗೆ ಹತ್ತರೆ ಕೂದ ಮಾಷ್ಟ್ರುಮಾವ°.
ಈಗಾಣ ಮಕ್ಕೊಗೆ ಒಂದು ಪ್ರಶ್ನೆಗೆ ಉತ್ತರ ಬಾಯಿಪಾಟ ಮಾಡ್ಳೆ ಹೇಳಿರೆ ಕಷ್ಟ ಆವುತ್ತು, ಅದರ್ಲಿ ನಮ್ಮ ಅಜ್ಜಂದ್ರು ಹೇಂಗೆ ಇಷ್ಟೆಲ್ಲ ಬಾಯಿಪಾಟ ಮಾಡಿಗೊಂಡಿತ್ತಿದ್ದವಪ್ಪಾ!! ಕೇಳಿದೆ.
ಪಳನ್ನೀರುಮಾವ° ಸಮದಾನಲ್ಲಿ ಉತ್ತರ ಕೊಟ್ಟವು, ಕೊಶೀ ಆತು.
~

ಮಂತ್ರವ ಬಾಯಿಪಾಟ ಮಾಡುಸುವಗಳೂ ಹಾಂಗೇಡ, ಒಂದು ನಿರ್ದಿಷ್ಟ ವಿಧಾನಲ್ಲಿ ಮಾಡುಸುದಡ.
ಅಷ್ಟಪ್ಪಗ ಎಷ್ಟೇ ಕಷ್ಟದ ಮಂತ್ರ ಆದರೂ, ಎಂತದೇ ನಿಧಾನಗತಿಯ ವಿದ್ಯಾರ್ಥಿ ಆದರೂ ಮಂತ್ರ ಕಲಿವಲೆಡಿತ್ತಡ.
ಅದರಿಂದಾಗಿಯೇ, ಶಾಲೆಲಿ ಕಲಿವಲೆ ಉಶಾರಿ ಅಲ್ಲದ್ದ ಸುಮಾರು ಜೆನ ವಿದ್ಯಾರ್ಥಿಗೊ ಮಂತ್ರವ ಬೇಗ ಕಲ್ತುಗೊಳ್ತವಡ.

ವಿಧಾನ:
ಮಂತ್ರವ ಕಲಿಶುವಗ ಒಂದೇ ಸರ್ತಿ ತಲೆ ಒಳಂಗೆ ತುರುಕ್ಕುಸುಲೆ ಇಲ್ಲೆಪ್ಪ!
ಮನಸ್ಸು ಹೇಂಗೆ ಒಂದು ಪರಿಸರವ ಅಭ್ಯಾಸ ಮಾಡ್ತೋ – ಹಾಂಗೇ ರಜರಜವೇ ಕಲಿಶುದು ಹೇಳಿದವು ಪಳನ್ನೀರುಮಾವ°.
ಮಂತ್ರಪಾಟಶಾಲೆಲಿ ಕಷ್ಟದ ಒಂದು ಗೆರೆಯ ಮಕ್ಕೊಗೆ ಹೇಂಗೆ ಹೇಳಿಕೊಡುಗು ಹೇಳ್ತದರ ಉದಾಹರಣೆ ಸಹಿತ ವಿವರುಸಿದವು.
ಆ ಉದಾಹರಣೆಗೆ ರುದ್ರದ ಒಂದು ಗೆರೆ ತೆಕ್ಕೊಂಡವು:
ಮೃಡಾಜರಿತ್ರೇ ರುದ್ರಸ್ತವಾನೋ ಅನ್ಯಂತೇ ಅಸ್ಮನ್ನಿವಪಂತು ಸೇನಾಃ ||
(ಈ ಗೆರೆಗೆ ಸ್ವರ ಇದ್ದು, ಗಣೇಶಮಾವಂಗೆ ಗೊಂತಿದ್ದು)

ಮಂತ್ರ ಕಲಿಶುತ್ತ ವಿಧಾನವ ವಿವರುಸಿದವು:

ಬಿದಿಗೆ:
ಬಿದಿಗೆ ಹೇಳಿರೆ ಎರಡ್ಣೇದು / ಎರಡು ಹೇಳ್ತ ಅರ್ತ ಬತ್ತು – ಪಾಡ್ಯ-ಬಿದಿಗೆ-ತದಿಗೆ ಹೇಳಿ ಶಾಂತತ್ತೆ ಅಂದೇ ಹೇಳಿಕೊಟ್ಟಿದವು ನವಗೆ.

Gurukula ಗುರುಕುಲ
ಯೇವದೋ ಹೊಳೆಕ್ಕರೆಲಿ ವೇದಪಾಟ ನೆಡೆತ್ತಾ ಇಪ್ಪದು! ಮದಲಿಂಗೆ ಬಾರತಲ್ಲಿ ಎಷ್ಟು ದಿಕ್ಕೆ ಹೀಂಗೆ ನೆಡಕ್ಕೊಂಡು ಇತ್ತೊ..!

ಇಲ್ಲಿಯೂ ಬಿದಿಗೆ ಹೇಳಿರೆ ’ಎರಡು’ ಹೇಳಿಯೇ ಲೆಕ್ಕ. ಗುರುಗೊ ಒಂದು ಸರ್ತಿ ಹೇಳಿಕೊಟ್ಟದರ ಮಕ್ಕೊ ಎರಡುಸರ್ತಿ ಹೇಳೆಕ್ಕು.
ಒಟ್ಟು ಹತ್ತು ಬಿದಿಗೆ ಇದ್ದು. – ಹತ್ತು ಸರ್ತಿ ಹೀಂಗೆ ಹೇಳಿಕೊಡ್ಳಿದ್ದು.

ಗುರುಗೊ ಹೇಳಿಕೊಡುವಗಳೂ ಹಾಂಗೆಯೇ, ಸುರೂವಾಣ ಬಿದಿಗೆಗಳಲ್ಲಿ ಉದ್ದ-ಉದ್ದ ಮಂತ್ರದ ಗೆರೆಗಳ ಸಣ್ಣಸಣ್ಣ ತುಂಡು ಮಾಡುದು, ಅರ್ತವತ್ತಾಗಿ.

ತುಂಡು ಮಾಡುವಗ ಕೆಲವೆಲ್ಲ ವಿಶಯ ಗಮನುಸೆಕ್ಕು – ಆ ಶಬ್ದಕ್ಕೆ ಅರ್ತ ಇರೆಕ್ಕು, ಸ್ವರ ಇರೆಕ್ಕು, ಮಧ್ಯಮ ಸ್ವರಲ್ಲಿ ಮುಗಿಯೇಕು ಹೇಳಿಗೊಂಡು!

ಹೇಳಿತೋರುಸಿದವು:
ಮೃಡಾಜರಿತ್ರೇ -ರುದ್ರಸ್ತವಾನೋ – ಅನ್ಯಂತೇ ಅಸ್ಮನ್ – ಅಸ್ಮನ್ನಿವಪನ್ತು – ಇವಪನ್ತು ಸೇನಾಃ ||

ಆದಷ್ಟು ಸಂಧಿ ಶಬ್ದಂಗಳ ತುಂಡುಸಿ, ಮಕ್ಕೊಗೆ ಹೇಳುಲೆ ಸುಲಾಬ ಅಪ್ಪ ಹಾಂಗೆ ಮಾಡಿಕೊಡುದು.
(ಬೆಶೀಮಣ್ಣಿಯ ಪಾತ್ರಂದ ಸಣ್ಣ ಚಮ್ಚಲ್ಲಿ ತಣಿಶಿತಣಿಶಿ ಅಮ್ಮ ಬಾಬೆಗೆ ಕೊಡುದು ಅನುಸಿ ಹೋತು ಒಪ್ಪಣ್ಣಂಗೆ!)

ಉದಾ:
ಗುರು: ಮೃಡಾಜರಿತ್ರೇ
ಮಕ್ಕೊ: ಮೃಡಾ ಜರಿತ್ರೇ, ಮೃಡಾ ಜರಿತ್ರೇ
ಗು: ರುದ್ರ ಸ್ತವಾನೋ
: ರುದ್ರಸ್ತವಾನೋ, ರುದ್ರ ಸ್ತವಾನೋ

ಸುರೂವಾಣ ಬಿದಿಗೆಗೊ ಸಣ್ಣ ಸಣ್ಣ ತುಂಡುಗಳ ಒಳಗೊಂಡಿರ್ತಡ. ಒಟ್ಟು ಹತ್ತು ಬಿದಿಗೆ.
ಹತ್ತನೇದಕ್ಕಪ್ಪಗ ಇಡೀ ಗೆರಯನ್ನೇ ಹೇಳುಸುದಡ. ಒಟ್ಟು ಇಪ್ಪತ್ತು ಸರ್ತಿ ಸರೀ ಅರವಗ ಮಕ್ಕೊಗೆ ತಲಗೆ ಹೋಗದ್ದೆ ಇಕ್ಕೋ!
ಬಿದಿಗೆ ಆದ ಹಾಂಗೆ ಮಕ್ಕೊಗೆ ಓದಲೆ ಅಭ್ಯಾಸ ಆಯ್ಕೊಂಡು ಬತ್ತು. ಮಂತ್ರದ ಹಿಂದೆ ಇಪ್ಪ ಲಯ ಅಭ್ಯಾಸ ಆಗಿರ್ತು.
ಗಮನ ಮಡುಗಿ ಪುಸ್ತಕ ನೋಡ್ತ ಕಾರಣ ಶಬ್ದಂಗಳ ಸ್ವರಸ್ಥಾನವುದೇ ಅರಡಿತ್ತು.

ರಟ್ಟೆ:
ಹತ್ತು ಬಿದಿಗೆ ಮುಗುದಿರ್ತು. ಮಂತ್ರ ಸರಾಗ ಓದಲೆ ಅರಡಿರ್ತು. ಕೆಲವು ಗೆರೆಗಳ ಒಟ್ಟಿಂಗೆ ಸೇರುಸಿ ಹೇಳುದು ಬಾಕಿ ಇಪ್ಪದು!

ಕೆಲವು ಗೆರೆಗಳ ಗುಚ್ಛಕ್ಕೆ – ಒಂದು ಪೇರಗ್ರಾಪಿನಷ್ಟಕೆ – ಹನುಸ್ಸು / ಹನಸ್ಸು ಹೇಳ್ತದು.
(ಶಂಬಜ್ಜ ಹನ್ನಾಸು ಹೇಳಿಗೊಂಡಿತ್ತಿದ್ದವು – ಹೇಳಿದವು ರಂಗಮಾವ°) ಹತ್ತರತ್ತರೆ ಐವತ್ತು ಶಬ್ದಂಗೊ ಇರ್ತಡ್ಡ. ಮಂತ್ರವ ಪಾರಾಯಣಕ್ಕೆ ಅಲ್ಲ – ಅಧ್ಯಯನಕ್ಕಾಗಿ ಹೇಳುವಗ ಒಂದು ಹನ್ನಾಸಿಲಿ ನಿಲ್ಲುಸೆಕ್ಕಡ.
ಇಡೀ ವೇದಲ್ಲಿ ಎಷ್ಟು ಹನ್ನಾಸುಗೊ ಇಕ್ಕೋ – ಅದರ ಎಲ್ಲ ನೆಂಪುಮಡಿಕ್ಕೊಂಡ ಬಟ್ಟಮಾವಂದ್ರು ಬಯಂಕರ ಅಪ್ಪ!
ಅದಿರಳಿ,

ಒಂದು ಹನ್ನಾಸು ಮಂತ್ರವ ಈಗ ಮಕ್ಕೊಗೆ ಹೇಳಿಕೊಡುದು. ಗುರುಗೊ ಒಂದರಿ ಹೇಳ್ತವು, ಮಕ್ಕೊ ಅದರ ಐದು ಸರ್ತಿ ಹೇಳೆಕ್ಕಡ.
ಪುಸ್ತಕ ನೋಡಿ ಹೇಳ್ತಕಾರಣ ಗೆರೆಗೊ ಒಂದಾದಮೇಲೆ ಇನ್ನೊಂದು ಯೇವದು ಹೇಳ್ತದರ ಮನಸ್ಸು ರಜರಜ ಅರ್ತ ಮಾಡಿಗೊಂಬಲೆ ಸುರುಮಾಡ್ತು.
ಅತ್ಲಾಗಿ ಬಿದಿಗೆಯ ಹಾಂಗೆ ತುಂಡುತುಂಡೂ ಅಲ್ಲ, ಇತ್ಲಾಗಿ ಪೂರ್ತಿ ಮಂತ್ರದ ಹಾಂಗೆ ಉದಾಕೆ ಹೇಳುದೂ ಅಲ್ಲ, ಎರಡರ ಮದ್ಯದ್ದು.
ಹತ್ತು ತಿಂಗಳ ಬಾಬೆಯ ಅಪ್ಪ ಕೈ ಹಿಡುದ ನಡೆಶುತ್ತದು ನೆಂಪಾತು ಒಪ್ಪಣ್ಣಂಗೆ…
ಮುಂದೆ ಮಂತ್ರ ದೊಡ್ಡದಿದ್ದು, ಸೀತ ನೆಡಕ್ಕೊಂಡು ಹೋಪಲೆ ಅಬ್ಯಾಸ ಆಗಲಿ ಹೇಳಿ ಗುರುಗೊ ಕೈ ನೀಡಿ ಕರಕ್ಕೊಂಡು ಹೋಪದು…

ಇಷ್ಟಪ್ಪಗ ಸಾಮಾನ್ಯ ಯೇವ ವಿದ್ಯಾರ್ಥಿಗೂ ಮಂತ್ರವ ಸರಾಗ ಓದಲೆ ಬತ್ತು – ಹೇಳಿದವು ಪಳನ್ನೀರುಮಾವ°.

ಸಂತೆ:
ಹತ್ತು ಬಿದಿಗೆ – ಇಪ್ಪತ್ತು ಸರ್ತಿ, ಒಂದು ರಟ್ಟೆ- ಐದು ಸರ್ತಿ ಹೇಳಿದ ಮತ್ತೆ ಮಕ್ಕೊಗೆ ಗುರುಗಳಿಂದ ಸಿಕ್ಕುವ ಹೆಚ್ಚಿನ ಪಾಲು ಮುಗಾತು.
ಇನ್ನು ಏನಿದ್ದರೂ ಸ್ವಂತ ಪ್ರಯತ್ನಲ್ಲಿ ಮುಂದುವರಿಯೆಕ್ಕು.
ಬಾಬೆಗೆ ನಡವಲೆ ಕಲಿಶಿ ಆತು, ಇನ್ನು ಬಾಬೆಯೇ ನಡೇಕು – ಅಪ್ಪಮ್ಮ ಆಯ ತಪ್ಪಿದಲ್ಲಿ ಹಿಡ್ಕೊಂಬದು ಮಾಂತ್ರ!

ಅದೇ ಹನಸ್ಸುಗಳ ಹತ್ತತ್ತು ಸರ್ತಿ ಹೇಳುದಕ್ಕೆ “ಸಂತೆ” ಹೇಳುದು. ಸುರೂವಾಣ ಸಂತೆಗಳಲ್ಲಿ ಗುರುಗೊ ಕೈಲಿ ಒಂದು ದಾಸನಕೋಲು ಹಿಡ್ಕೊಂಡು ಸ್ವರ ತಿದ್ದುಗಡ..
ಮಕ್ಕೊಗೆ ಒಂದು ಹಿಡಿತ ಸಿಕ್ಕುವನ್ನಾರ..
ಒಂದು ಹನಸ್ಸಿನ ಹತ್ತುಸರ್ತಿ ಹೇಳಿದಮತ್ತೆ ಮತ್ತಾಣ ಹನಸ್ಸು – ಹೀಂಗೆ ಇಡೀ ಮಂತ್ರವ ಹತ್ತು ಸರ್ತಿ ಹೇಳಿಪ್ಪಗ ಒಂದು ಸಂತೆ ಆತು! ಒಟ್ಟು ಹತ್ತು ಸಂತೆ ಹೇಳುಲಿದ್ದು.

ರಜ ಉಶಾರಿಲಿ ಗಮನಮಡೂಗಿ ಕಲ್ತ ಮಕ್ಕೊಗೆ ಎರಡು-ಮೂರು ಸಂತೆಗಳಲ್ಲಿ ಕಂಠಸ್ಥ (ಬಾಯಿಪಾಟ ಹೇಳ್ತದಕ್ಕೆ ಬಟ್ಟಮಾವಂದ್ರ ಶೆಬ್ದ) ಬಕ್ಕಡ.
ಮನೆನೆಂಪಾಗಿಯೊಂಡು ಉದಾಸಿನ ಮಾಡ್ತ ಮಕ್ಕೊಗೆ ಏಳು -ಎಂಟು ಸಂತೆ ಆಯೆಕ್ಕಾವುತ್ತಡ ಬಾಯಿಪಾಟ ಬಪ್ಪಲೆ!
~

ಹತ್ತು ಬಿದಿಗೆಲಿ ಇಪ್ಪತ್ತು ಸರ್ತಿ, ಒಂದು ರಟ್ಟೆಲಿ ಐದು ಸರ್ತಿ, ಹತ್ತು ಸಂತೆಲಿ ನೂರು ಸರ್ತಿ – ಒಟ್ಟು ನೂರಿಪ್ಪತ್ತೈದು ಸರ್ತಿ ಒಂದು ಮಂತ್ರವ ಹೇಳುಲಿದ್ದು.
ಈಗಾಣ ಇಂಗ್ರೋಜಿಕೋನ್ವೆಂಟಿಲಿ ಕಲಿಶುತ್ತ ಹಾಂಗೆ ಒಂದೇ ಸರ್ತಿ ಏಬೀಸೀಡೀ ತುರುಕ್ಕುಸುದಲ್ಲ, ಹಂತಹಂತವಾಗಿ ರಜರಜವೇ ಉಣುಸುದು.
ಕಷ್ಟಾತಿಕಷ್ಟ ಮಹಾಪ್ರಾಣ ಸಂಧಿಗಳನ್ನುದೇ ಇದೇ ವಿಧಾನಲ್ಲಿ ಕಲಿಶಿ ಗೊಂತುಮಾಡುಸುದು. ಬಿದಿಗೆ, ರಟ್ಟೆ, ಸಂತೆ – ವಿಧಾನಲ್ಲಿ ಕಲಿತ್ತ ಕಾರಣ ಇದು ಸಾಧ್ಯ ಆತು.
ಈಗಾಣ ಆಧುನಿಕ ವಿದ್ಯಾಭ್ಯಾಸ ವೆವಸ್ತೆಗೆ ನಮ್ಮ ಮಂತ್ರಪಾಟ ವಿಧಾನಂಗಳಿಂದ ತೆಕ್ಕೊಂಬದು ಬಹಳಷ್ಟು ಇದ್ದು – ಹೇಳಿದವು ಮಾಷ್ಟ್ರುಮಾವ°.
~

ನಮ್ಮ ಸಂಸ್ಕೃತಿಲಿ ಮಂತ್ರಂಗಳ, ವೇದಂಗಳ, ಶ್ಲೋಕಂಗಳ ಪುಸ್ತಕರೂಪಕ್ಕೆ ಇಳುಸಿದ್ದು ತೀರಾ ಇತ್ತೀಚೆಗೆ.
ತಾಳೆಗರಿ, ಓಲೆಗರಿ – ಇತ್ಯಾದಿಗಳ ಹದಮಾಡಿ, ಕಬ್ಬಿಣದ ಕಂಟವ (ಜೋಯಿಷಪ್ಪಚ್ಚಿಯ ಹತ್ತರೆ ಇಪ್ಪ ನಮುನೆದು), ಮುಷ್ಟಿಲಿ ಹಿಡುದು ಬರಕ್ಕೊಂಡಿತ್ತಿದ್ದವು, ಆದರೆ ಅದು ಸದ್ಯ…
ಬೌಷ್ಹ ಸಾವಿರ – ಎರಡು ಸಾವಿರ ಒರಿಷ ಮದಲಾಯಿಕ್ಕು. ಅದರಿಂದ ಮದಲಿಂಗೆ ಅಂಬಗ ಹೇಂಗೆ ವಿಶಯಂಗಳ ಒಳಿಶಿಗೊಂಡಿತ್ತಿದ್ದವು?!!
ಆಶ್ಚರ್ಯ ಆವುತ್ತಲ್ಲದೋ!
ಲಕ್ಷಾಂತರ ಶ್ಲೋಕಂಗೊ ಇಪ್ಪ ರಾಮಾಯಣ, ಮಹಾಭಾರತ, ಸಾವಿರಾರು ಹನಸ್ಸುಗೊ, ಮತ್ತು ಅನೇಕಾನೇಕ ಪುರಾಣ, ಇತಿಹಾಸ, ಶಾಸ್ತ್ರ, ಇತ್ಯಾದಿ ವಿಶಯಂಗೊ – ಅದರ ಹೇಂಗೆ ನೆಂಪು ಮಡಿಕ್ಕೊಂಡವು?!
ಮಕ್ಕಳಿಂದ ಮಕ್ಕೊಗೆ, ಪುಳ್ಯಕ್ಕೊಗೆ ಆ ವಿಶಯಂಗೊ ಹೇಂಗೆ ಹರುಕ್ಕೊಂಡು ಬಂತು?!
ಅಜ್ಜ° ಹೇಳಿದ ಅದೇ ಪಾಟ ಪುಳ್ಳಿ ಒರೆಂಗೆ ಹೇಂಗೆ ಒಳುದಿಗಿತ್ತು?! – ಅದುದೇ ಒಂದೇ ಒಂದು ಬಿಂದುವಿಸರ್ಗ ವಿತ್ಯಾಸ ಇಲ್ಲದ್ದೆ!!!
ಆಶ್ಚರ್ಯ!
~

ಮದಾಲು ವೇದ ಮಂತ್ರ ಮಾಡಿದ್ದು ನಾವಾದರೂ, ಮದಾಲು ಪುಸ್ತಕ ಪ್ರಿಂಟು ಮಾಡಿದ್ದು ನಾವಲ್ಲಡ.
ವೇದ ಮಂತ್ರಂಗಳಿಂದ ಎಷ್ಟೋ ಸಾವಿರ ಒರಿಶ ಮತ್ತೆ ಹುಟ್ಟಿದ ಪುರ್ಬುಗಳ ಬಯಿಬಲು ಪುಸ್ತಕ ಸುರೂವಿಂಗೇ ಆಯಿದು.
ಅವಕ್ಕೆ ಅಷ್ಟು ದೊಡ್ಡ ಮಹಾಗ್ರಂಥವ ನೆಂಪುಮಡುಗಲೆ ಎಡುಕ್ಕೊಂಡಿತ್ತಿಲ್ಲೆ, ಬರದುಮಡಿಕ್ಕೊಂಡವು – ನಮ್ಮದರ್ಲಿ ಪುಸ್ತಕದ ಅಗತ್ಯವೇ ಇತ್ತಿಲ್ಲೆ.
ಈ ವೈಶಿಷ್ಟ್ಯಪೂರ್ಣ ವಿದ್ಯಾಭ್ಯಾಸದ ವೆವಸ್ತೆಂದಾಗಿ ಬರದು ಮಡುಗುತ್ತ ಪ್ರಶ್ನೆಯೇ ಬಯಿಂದಿಲ್ಲೆ.ಕೈಯಾನಕೈ ದಾಂಟಿ ತಲೆಮಾರುಗಳ ಮೂಲಕ ದಾಂಟಿ ಬಂದು ಮುಟ್ಟಿದ್ದು.
ಆ ಕಾಲಲ್ಲಿ ಭರತಖಂಡಲ್ಲಿ ಚತುರ್ವೇದ ಕಂಟಸ್ತ ಇಪ್ಪವು ಎಷ್ಟೋ ಜೆನ ಇತ್ತಿದ್ದವು. ಹಾಂಗೆ ನೋಡಿರೆ ಪುಸ್ತಕ ಬಂದಮತ್ತೆಯೇ ವೇದ ಕಂಟಸ್ತ ಇಪ್ಪವರ ಸಂಕೆ ಕಮ್ಮಿ ಆದ್ದು – ಹೇಳಿದವು ಬಟ್ಟಮಾವ°.
ಒಳ ಕ್ಷಣುವಿನವು ಉಂಡಿಕ್ಕಿ ಕೈತೊಳವಲೆ ಹೆರಬಂದಿತ್ತಿದ್ದವು..
~

ಅಂತೂ ಪಂಜಚಿಕ್ಕಯ್ಯನ ಮಗ° ಮಂತ್ರ ಕಲಿತ್ತಾ ಇದ್ದ, ಬಾರೀ ಕೊಶಿಲಿ!
ಅವರ ಮಗ° ಈ ಸರ್ತಿ ಎರಡ್ಣೇ ಒರಿಶಕ್ಕೆ ಅಡ, ರುದ್ರಪಾಟ ಆಯ್ಕೊಂಡು ಇದ್ದಡ.
ಮಾಡಾವಿನ ಹೊಡೇಣ ಗುರುಗೊ ಅಡ, ಬಾರೀ ಚೆಂದಕೆ ಹೇಳಿಕೊಡ್ತವಡ.

ಆಗಲಿ, ಎಲ್ಲ ಮನೆಯ ಮಕ್ಕಳುದೇ ಮಂತ್ರ ಕಲಿಯಲಿ, ಬೇಸಗೆ ರಜೆಲಿ ಹಾಂಗೊಂದು ಸದ್ವಿನಿಯೋಗ ಆಗಲಿ – ತುಂಬಾ ಒಳ್ಳೆದು, ಎಂತ ಹೇಳ್ತಿ?
ಕ್ರಿಕೇಟು ಟ್ರೈನಿಂಗು, ಈಜುಲೆ ಟ್ರೈನಿಂಗು ಹೇಳಿ ಹೊತ್ತು ಕೊಲ್ಲುದರ ಬದಲು ನಾವೇ ಕಲಿಯೆಕ್ಕಾದ ನಮ್ಮ ಮಂತ್ರಂಗಳ ಒಳುಶಿ ಬೆಳೆಶಿರೆ ಎಷ್ಟು ಒಳ್ಳೆದು! ಅಲ್ಲದೋ?

ಒಂದೊಪ್ಪ: ಸಾವಿರಾರು ಒರಿಶಂದ ಬಿದಿಗೆ ರಟ್ಟೆ ಸಂತೆಯೇ ಮಂತ್ರಂಗಳ ಒಳುಶಿದ್ದು. ಇನ್ನು ಸಾವಿರ ಒರಿಶಲ್ಲಿ ಮಂತ್ರಂಗಳೇ ಸಂತೆಗೆ ಎತ್ತುಗೋ ಹೇಳಿ ಒಂದು ಕನುಪ್ಯೂಸು ಬಪ್ಪದು ಹೇಳಿ ರಾಮಮಾವ° ಹೇಳಿದವು!

19 thoughts on “ಬಿದಿಗೆ ರಟ್ಟೆ ಸಂತೆ – ಮಂತ್ರ ಬಾರ ಅಂತೆ ಅಂತೆ!

  1. ಪೆರಡಾಲ ಉದನೇಶ್ವರ ದೇವಸ್ಥಾನಲ್ಲೂ ಕಳೆದ ಸುಮಾರು ವರ್ಷಂದ ವಸಂತ ವೇದ ಪಾಠ ಶಾಲೆ ನಡೆತ್ತಾ ಇದ್ದು. ಶ್ರೀ. ಸತ್ಯೇಶ್ವರ ಭಟ್ರ ಸಮರ್ಥ ನಿರ್ದೇಶನಲ್ಲಿ ಹಾಗು ಗುರುತ್ವಲ್ಲಿ ಯಶಸ್ವಿಯಾಗಿ ನಡೆತ್ತಾ ಇದ್ದು . ಎಂಗೋ ಎಲ್ಲ ಕಲಿವಾಗ ಮದ್ಯಾನ ಊಟದ ವ್ಯವಸ್ಥೆಗೆ ಒಂದೊಂದು ಕುಡ್ತೆ ಅಕ್ಕಿ +೨೫ ಪೈಸೆ ಕೊಡಲೇ ಇಟ್ಟು. ಈಗ ಅದೆಲ್ಲ ಹೋಗಿ ಶ್ರೀಮಠದ ವತಿಂದ ಊಟದ ವ್ಯವಸ್ಥೆ ನಡೆತ್ತು .

  2. laikaidu oppanno…mastru mavana sanna maga koteli vasantha veda pata shaleli kalthadu nempathu.
    elladarottinge idarannu kaliyekkappa.upanayana aada mele maneli mantra bappa ajjandru iddare pulliyakkoge heli kodtavu.
    alladre vasantha veda pata shalage kalusuttavu….
    astadaru kaltu mantra barali heli……..

  3. ಅದ್ಭುತ! ಎಷ್ಟೊಳ್ಳೆ ವಿದ್ಯಾಭ್ಯಾಸ ಕ್ರಮ ಅಲ್ದಾ..
    ಮಾಹಿತಿ ಕೊಟ್ಟದಕ್ಕೆ ಧನ್ಯವಾದಂಗೊ.
    ಎಂಗಳ ಸಂಸ್ಕೃತ ಮಾಷ್ಟ್ರು ಹೀಂಗೇ ಕಲಿಶಿಯೊಂಡಿತ್ತಿದ್ದವು. ಅದು ನೆಂಪಾತು. ಅಲ್ಲಿ ಮಾತ್ರ ಪುಸ್ತಕ ಇತ್ತು. ಇಲ್ಲಿ ಎಲ್ಲವೂ ಮಸ್ತಕಲ್ಲೇ.. 🙂

  4. ಬೈಲಿಲಿ ಮಳೆ ಬಂದು ಕರೆಂಟು ಇತ್ತಿಲ್ಲೆ ಇದಾ? ಗುಡ್ಡೆ ಇಳಿವಲ್ಲಿ ಮರ ಬಿದ್ದಿದಿದಾ.. ಪುನಾ ಎಂತದೋ ಲೈಲಾ ಸೈಕ್ಲೋನು ಅಡಾ ಮಳೆ ಜೋರಕ್ಕು ಹೇಳಿ ಪೆರ್ಲದಣ್ಣ ಫೊನು ಮಾಡಿ ಹೇಳಿದ್ದ ಜಾಗ್ರತೆ ಇರಿ ಆತೋ.. ಹಾಂಗೆ ನಾಕು ದಿನ ಬೈಲಿಂಗೆ ಬಪ್ಪಲಾಯಿದಿಲ್ಲೆ.. ಪಷ್ಟಾಯಿದು .. ಬಿದಿಗೆ ರಟ್ಟೆ ಸಂತೆ ಎಲ್ಲಾ ನೆಂಪಾತು.. ಖಂಡಿತ ನಮ್ಮ ಉಳಿಸಿದ್ದು, ಉಳಿಸುದು ಎಲ್ಲಾ ಇದುವೆ..

  5. ಶುದ್ದಿ ಲಾಯಕ ಆಯಿದು ಒಪ್ಪಣ್ಣ… ನಮ್ಮ ಹಿರಿಯೋರು ಪುಸ್ತಕಲ್ಲಿ ಹಿಡಿಯದ್ದಷ್ಟು ವಿಷಯಂಗಳ ಮಸ್ತಕಲ್ಲಿ ಹಿಡಿಶಿಗೊಂಡಿತ್ತಿದ್ದವು ಅಷ್ಟೇ ಅಲ್ಲದ್ದೆ ಮುಂದಾಣವಕ್ಕೆ ಅದೇ ರೀತಿಲಿ ಶಬ್ದ ಉಚ್ಚಾರ ತಪ್ಪದ್ದೆ ಕಲಿಶಿಗೊಂಡೂ ಬೆಳೆಶಿಗೊಂಡೂ ಬಯಿಂದವು… ಬೇಜಾರ ಹೇಳಿರೆ ಈಗಾಣ ತ್ವರಿತ ಯುಗಲ್ಲಿ ಇದರ ಕಲಿವಲೆ ವಿಶೇಷ ಮನಸ್ಸು ಹೆಚ್ಚಿನವು ಮಾಡದ್ದದು… ಎಲ್ಲೋರಿಂಗೂ ಬೇಗ ಕಲಿವದಾಯೇಕ್ಕು… ಮಾತಾಡ್ಲೆ ಬಾಯಿ ಒಡವಲೆ ಸುರು ಮಾಡಿ ಅಪ್ಪಗಲೇ ಎಲ್ ಕೇ ಜಿ ಗೆ ಹಾಕುಗು.. ಮತ್ತೆ ಆ ಮಕ್ಕೋ ಪೈಸೆ ಸಂಪಾದನೆ ಮಾಡುವ ಯಂತ್ರಂಗ ಅಪ್ಪನ್ನಾರ ಪುರುಸೊತ್ತಿಲ್ಲೇ… ರಜೆಲೂ ಮುಂದಾಣ ವರ್ಷದ ಕೋಚಿಂಗು… ಹೀಂಗಿಪ್ಪಗ ನಮ್ಮ ಸಂಸ್ಕೃತಿದರ ಕಲಿವಲೆ ಸಮಯ ಎಲ್ಲಿದ್ದು? ಈಗ ಗುರುಗಳ ಆದೇಶಂದ ಎಲ್ಲಾ ಪ್ರಾಯದೊರೂ ರುದ್ರ ಕಲಿವಲೆ ಸುರು ಮಾಡಿದ ಕಾರಣ ನಿಧಾನಕ್ಕೆ ಆದರೂ ನಮ್ಮಲ್ಲಿ ಈ ಸಂಪ್ರದಾಯ ಕಡ್ಡಾಯವಾಗಿ ಪುನಃ ಬಕ್ಕು ಹೇಳಿ ಅನುಸುತ್ತು… ಹಾಂಗೆ ಬರಲಿ ಹೇಳಿ ಹಾರೈಕೆದೆ…

    1. ಮಂತ್ರ ಕಲಿಶುತ್ತಲ್ಲಿ ಸ್ಪರ್ಧೆ ಇಲ್ಲೆ, ಫಲಿತಾಂಶ ಮಾಂತ್ರ ಇಪ್ಪದು. 🙂

      ಮೊದಲು “ನಮ್ಮ ಮಕ್ಕೊ ಬೆಳೇಕು” ಹೇಳಿಗೊಂಡಿತ್ತಿದ್ದವು..
      ಈಗ “ಎನ್ನ ಮಕ್ಕೊ ಬೆಳೇಕು” ಹೇಳ್ತವು, ಆಚವ° ಎಂತ ಮಾಡ್ತ ಹೇಳಿ ಸಂಗತಿ ಇಲ್ಲೆ.
      ಅದರಿಂದಾಗಿಯೇ ಈ ’ಸ್ಪರ್ಧೆ’ ಸುರು ಆದ್ದು, ಇಷ್ಟೆಲ್ಲ ಹಾಳಾದ್ದು.
      ಅಲ್ಲದಾ ಅಕ್ಕ°?

  6. ಒಪ್ಪಣ್ಣ, ಪಳನೀರುಮಾವ ಹೇಳಿದ್ದರ ಗ್ರಹಿಸಿಕೊಂಡು ಬರದ್ದು ನೋಡಿದರೆ ಗಾಯತ್ರಿ ಮಂತ್ರಕ್ಕೆ ಮಾತ್ರ ಸ್ವರ ಹಾಕುಲೆ ಬಪ್ಪಂಗೆ ಕಾಣ್ತಿಲ್ಲೆ…! ಎಂತದೆ ಆಗಲಿ ಲೇಖನ.. ಮಂತ್ರ ಕಲಿಶುವ ಗುರುಗೊಕ್ಕೆ ಕೆಲವು ವಿಷಯೊಂಗಳ ಕಲಿಶಿಕೊಡುವ ಹಾಂಗಿದ್ದು…

    1. ಅರ್ತ್ಯಡ್ಕಮಾಣಿ ಬೈಲಿಂಗೆ ಬಂದೆಯೋ–
      ಒಪ್ಪಣ್ಣಂಗೆ ಕೊಶೀ ಆತು!!

      ಬಾ, ಎಲ್ಲ ಶುದ್ದಿಗಳನ್ನುದೇ ಪುರುಸೋತಿಲಿ ಓದು, ಒಪ್ಪ ಕೊಡು.!
      ಬೇರೆಂತ ಕೆಲಸ ಇಲ್ಲೆನ್ನೆ! ಹೇಂಗಾರೂ ರಾಮಜ್ಜನ ಕೋಲೇಜಿಂಗೆ ರಜೆ ಅಲ್ದೋ?

  7. ಸಾವಿರಾರು ಒರಿಶಂದ ಬಿದಿಗೆ ರಟ್ಟೆ ಸಂತೆಯೇ ಮಂತ್ರಂಗಳ ಒಳುಶಿದ್ದು. ಬಿದಿಗೆ ರಟ್ಟೆ ಸಂತೆ ಇನ್ನುದೇ ನೂರಾರು ಸಾವಿರ ಒರಿಶ ಮಂತ್ರಂಗಳ ಒಳ್ಸುತ್ತು .

    -ಪ.ರಾಮಚಂದ್ರ.
    ರಾಸ್ ಲಫ್ಫಾನ್, ಕತಾರ್

      1. ಶಾಲುಸುರುಟಿ ಬೀಸಿದ್ದು ಹಳೆಮನೆ ಅಣ್ಣ ಅಲ್ಲ ಆನು ಹೇಳಿಯೊಂಡು ದೊಡ್ಡಣ್ಣ ಮೀಸೆ ಅಡಿಲಿ ನೆಗೆ ಮಾಡಿಯೊಂಡಿತ್ತಿದ್ದ ಮೊನ್ನೆ..

  8. ಒಪ್ಪಣ್ಣ ಬರದ್ದು ಲಾಯಿಕ್ ಆಯಿದು. “ಏಳ್ಯಡ್ಕ ಮಹೇಶ” ಕೂಡಾ “ಗುರು” ಹೇಳಿ ಗೊಂತಾಗಿ ಕೊಶಿ ಆತು. ಇಲ್ಲಿ ಸುರತ್ಕಲ್ಲಿಲ್ಲಿ “ವಯಸ್ಕರ ಶಿಕ್ಷಣ” ರುದ್ರ ಪಾಠ ನಡೆತ್ತಾ ಇದ್ದು. ಸುಮಾರು 20 ಜನಂಗೊ ಪ್ರಾಯಸ್ಥರು ಕಲಿತ್ತಾ ಇದ್ದೆಯೊ. ನಮ್ಮ ಗುರುಗಳ ಆಶೀರ್ವಾದ ಮತ್ತೆ ಹಾರೈಕೆಂದಾಗಿ ಚೆಂದಕೆ ನಡೆತ್ತಾ ಇದ್ದು.
    ವೇದ ಕಲಿವವಕ್ಕೆ ಸಂಸ್ಕೃತ ಜ್ನಾನ ಇದ್ದರೆ ತುಂಬಾ ಒಳ್ಳೆದು

    1. ರುದ್ರ ಕಲ್ತಾತಾ ಶರ್ಮಪ್ಪಚ್ಚಿ?
      ಮುಂದಕ್ಕೆ ಎಂಗಳ ಬಟ್ಟಮಾವಂಗೆ ಪುರುಸೊತ್ತು ಇಲ್ಲದ್ರೆ ನಿಂಗೊಗೆ ಒಂದು ಮಿಂಚಂಚೆ ಬಿಡ್ತೆ, ಆಗದೋ?

      1. ಖಂಡಿತ. ಮಿಂಚಂಚೆ ಎದುರು ನೋಡ್ತಾ ಇರ್ತೆ.ಎಷ್ಟಾದರೂ ಎಂಗಳದ್ದು ವಯಸ್ಕರ ಶಿಕ್ಷಣ ಅಲ್ಲದ. ಹಾಂಗೆ ರಜಾ ನಿಧಾನ. ರುದ್ರ ಆಯಿದು. ಚಮಕ ೫ ಅನುವಾಕ ಆಯಿದು. ಅಭ್ಯಾಸ ಮುಂದುವರಿತ್ತಾ ಇದ್ದು.

  9. ಭಾರಿ ಲಾಯಿಕ ಆಯಿದು ಒಪ್ಪಣ್ಣಾ.

    ಮಂತ್ರಂಗಳ ಬಗ್ಗೆ, ಅದರ ಕಲಿಶುವ ಕ್ರಮಂಗಳ ಬಗ್ಗೆ, ಸಣ್ಣ ಮತ್ತಿನ್ಗೆ ನಮ್ಮ ಇತಿಹಾಸದ ಬಗ್ಗೆ ಮಾಹಿತಿ ಕೊಟ್ಟದ್ದಕ್ಕೆ thanks.
    ಈ ನಿಂಗಳ ಬರಹ ನೋಡಿ ಎನಗೆ ಸುಬ್ರಮಣ್ಯ ವಸಂತ ವೇದ ಪಾಠ ಶಾಲೇಲಿ ಮಂತ್ರ ಕಲುತ್ತೊಂಡು ಇದ್ದ ದಿನ ನೆಮ್ಪಾತು…

    ಗಣೇಶ ಮಾವ ಕಲಿಶಿದ ರುದ್ರದ ಸಾಲು ಇನ್ನೂ ಕೆಮಿಲಿ ಕೀಳ್ತಾ ಇದ್ದು. ಒಂದೇ ವತ್ಯಾಸ ಹೇಳಿರೆ, ಅವರ ಕೈಲಿ ಬಡಿಗೆ ಇತ್ತಿಲ್ಲೆ. ಸ್ವರಯುಕ್ತವಾಗಿ ಚೆಂದಕೆ ಕಲಿಶುಗು… ನಡುಕೆ ಎಲ್ಲಿಯಾರು ತಪ್ಪಿದರೆ ತಾಳ್ಮೆಲಿ ತಿದ್ದುಗು. ಅಂತೂ ಲೇಖನ ಚೆಂದಕೆ ಬೈಂದು… ಮತ್ತೊಂದರಿ thanks.

    ನಿಂಗಳ,
    ಮಂಗಳೂರಮಾಣಿ .

  10. ಗುರುಗಳೇ…….ಅದ್ಭುತ…..ತುಂಬಾ ಲಾಯಿಕಾಯಿದು…….
    ಕೋಟೆ ಮಂತ್ರ ಕ್ಲಾಸು ನೆನಪಾತು……..ಮಂತ್ರ ಬಪ್ಪಲೆ ಪರಿಶ್ರಮ ಹೇಂಗೆ ಮುಖ್ಯವೋ, ಹೇಳಿ ಕೊಡುವ ಗುರುಗಳ ಪಾತ್ರ ಅಷ್ಟೇ ಮುಖ್ಯ ಹೇಳುದು ಎನ್ನ ಅನಿಸಿಕೆ(ಉದಾ: ಮಹೇಶ ಗುರುಗೋ,ಏಳ್ಯಡ್ಕ:):)………ಕೋಟೆ ಯ ಗಂಜಿ ಊಟ, ಹೊತ್ತೊಪ್ಪಗಾಣ ಸಜ್ಜಿಗೆ ಅವಲಕ್ಕಿ ಬಳುಸುವ ಗೌಜಿ, ಅದಕ್ಕೆ ಲೀಡರು ಹೇಳಿ ಒಬ್ಬ ಯೆಜಮಾನ(ಆನೆ ಆ ಭೂಪ:):)), ಜೀರೆಕ್ಕಿ ಕಷಾಯ, ಎಲ್ಲಾ ಆದ ಮೇಲೆ ಚೆಂಡಾಟ……..ಟ್ಯಾಪಿನ ಅಡೀಲಿ ೨ ನಿಮಿಷದ ಮೀಯಾಣ, ಒಂದು ಘಂಟೆಯ ಅಮೋಘ ಸಂಧ್ಯಾವಂದನೆ!!!!!!!!?????(ಹಿಂದಾಣ ಕಿಟಕಿಂದ ಗುರುಗಳು ಬಂದು ಮಕ್ಕೊ ಸರಿಯಾಗಿ ಜೆಪ ಮಾಡ್ತವೋ,ಇಲ್ಲೆಯೋ ಹೇಳಿ ಪರೀಕ್ಷೆ, ) ಎಲ್ಲಾ ತುಂಬಾ ನೆನಪಾತು:):):) ನಿಂಗಗೆ ನೆನಪಿದ್ದ ಗುರುಗಳೇ…೩ ನೇ ವರ್ಷ ಎನಗೆ ರಜ್ಜ ಪ್ರೊಬ್ಲೆಮ್ create ಆದ್ದು…..ದೊಡ್ದ ಗುರುಗಳಿನ್ಗೆ ಎನ್ನ ಮೇಲೆ ರಜಾ ಅಸಮಾಧಾನ ಅಗಿತ್ತಿದು..ಪರೀಕ್ಷೆ ದಿನ “ಸೂರ್ಯಸ್ಚಮಾ ಮನ್ಯುಷ್ಚ ಮನ್ಯು ಪತಯಷ್ಚ…….”ಮಂತ್ರ ದ ಮೇಲೆ ಯಾವುದೋ question ಕೇಳಿ ಅಪ್ಪಗ ನಿಂಗ ಎನಗೆ clue ಕೊಟ್ತದು….(ಎನಗದು ಈಗಳು ನೆನಪಿದ್ದು….)
    ಆ ಹಳೇ ನೆನಪುಗೋ ಎಂದೂ ಮರೆವಲೆ ಎಡಿಯ……..ತುಂಬಾ ಖುಶಿ ಆತು:):)

    ಕೊನೆಯ ಡ್ರೋಪು:

    ಪಂಜ ಚಿಕ್ಕಯ್ಯ ನ ಮಗ ಮಂತ್ರ ಕಲಿವೊದು ತುಂಬಾ ಖುಷಿಯ ವಿಚಾರವೇ.,…ಆದರೆ ಅವಂಗೆ ಮಹೇಶ ಗುರುಗಳ ಕೈಂದ ಪಾಠ ಕಲಿವ ಭಾಗ್ಯ ಇಲ್ಲೆನ್ನೇ ಹೇಳುದೇ ಬೇಜಾರದ ಸಂಗತಿ..:(:(:(

    1. ದೇಲಂಬೆಟ್ಟು ಬಾಲಣ್ಣಂಗೆ ನಮಸ್ಕಾರ ಇದ್ದು. ಸೌಖ್ಯವೆಯೋ?
      ನಿಂಗಳ ಒಪ್ಪ ನೋಡಿ ಹೀಂಗೆ ಹೇಳಿದವು..

      ಬಾಲಾ..
      ನೀನುದೇ ಬಂದದು ಕೊಶೀ ಆತು.
      ಎಲ್ಲ ಶುದ್ದಿಗಳ ಓದಿ ಉಶಾರಿ ಆಗಿರು..
      ಓದಿ ಓದಿ ಒಪ್ಪಣ್ಣ ಆಗು, ಆತಾ?
      – ಮಹೇಶ.

  11. ಲೇಖನ ತುಂಬ ಚನ್ನಾಗಿದೆ.
    ಮಂತ್ರಗಳನ್ನು ಮಕ್ಕಳಿಗೆ ಹೇಳಿಕೊಡುವುದೆಂದರೆ ಸಂಸ್ಕೃತಿಯನ್ನು ಕಲಿಸಿಕೊಡುವುದು. ಸಂಸ್ಕಾರದಿಂದಲೇ ಹುಟ್ಟಿಬಂದ ಶಬ್ಡ “ಸಂಸ್ಕೃತಿ”. ಉತ್ತಮ ಸಂಸ್ಕಾರಗಳಿಂದ ಪಕ್ವಗೊಂಡ ಬದುಕಿನ ವಿಧಾನಕ್ಕೆ “ಸಂಸ್ಕೃತಿ” ಎನ್ನುತ್ತೇವೆ. ಆ ಶಬ್ಡದಲ್ಲಿ ನಮಗೆ ಮನುಷ್ಯನ ಜೀವನದ ಒಳನೋಟ ಕಾಣುತ್ತದೆ. ಅವನ ಸದ್ಗುಣಗಳ, ಸಂಸ್ಕೃತಿಗಳ (ಸಂಯಕ್+ಕೃತಿ=ಸಂಸ್ಕೃತಿ) ದರ್ಶನವಾಗುತ್ತದೆ.

    ಹಾಗಾದರೆ ಆ ದಿಕ್ಕಿನಡೆಗೆ ನಮ್ಮ ಮುಂದಿನ ಪೀಳಿಗೆ ಸಾಗಬೇಕಾದರೆ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೂ ಸಾಗಬೇಕಾಗಿದೆ.

    ನಮ್ಮ ದೇಶದಲ್ಲಿ ಇಂದು ಸಂಸ್ಕೃತ ಭಾಷೆಗೆ ಹೆಚ್ಚು ಒತ್ತು ಕೊಡಬೇಕಾದ ಆವಶ್ಯಕತೆ ಇದೆ. ಕಾರಣ ಇಷ್ಟೇ ಸಂಸ್ಕೃತ-ಸಂಸ್ಕಾರ-ಸಂಸ್ಕೃತಿ. ಈ ನಾಡಿನಲ್ಲಿ ನಮ್ಮ ಧರ್ಮ-ಸಂಸ್ಕಾರಗಳು ಉಳಿಯಬೇಕಾದರೆ ನಮ್ಮ ಪೂರ್ವಜರ ಭಾಷೆಯದ ಸಂಸ್ಕೃತ ಶಾಲೆಗಳಲ್ಲಿ ಜಾರಿಗೆ ಬರಬೇಕು. ಈ ರೀತಿಯಾದಲ್ಲಿ ಸಮಾಜದ ಅನೇಕ ಸಮಸ್ಯೆಗಳನ್ನ ಪರಿಹರಿಸಬಹುದು.

    ಈ ಮಾತು ಇಲ್ಲಿ ಎಷ್ತು ಸೂಕ್ತವಾಗುತ್ತೋ ಗೊತ್ತಿಲ್ಲ. ಭಾಷೆಯೊಂದಿಗೆ ಆ ನಾಡಿನ ಅಥವಾ ವ್ಯಕ್ತಿಯ ಮಾತು, ನಡವಳಿಕೆ ಮೂಡಿಬರುತ್ತದೆ. ನಮ್ಮ ಮಕ್ಕಳು ಕಲಿಯುವ ಇಂಗ್ಲಿಷ್ ಭಾಷೆಯಲ್ಲಿ ಸಂಸ್ಕೃತಿ ಎಂಬ ಶಬ್ಡಕ್ಕೆ ಸಾಮನ್ಯವಾಗಿ ಬಳಸುವ ಶಬ್ಧ ‘ಕಲ್ಚರ್’ ಹೀಗೆ ಇಂಗ್ಲಿಷ್ ಭಾಷೆಯಲ್ಲಿ ಸಂಸ್ಕೃತಕ್ಕೆ ಹೋಲಿಕೆಯಾಗುವ ಅನೇಕ ಪದಗಳು ಸಿಗುವುದಿಲ್ಲ.

    ಪರಿಣಾಮವಾಗಿ ನಮ್ಮ ದೇಶದ ರಾಜಕೀಯ ಧುರಿಣರ ಶಿಕ್ಷಣವೆಲ್ಲ ಇಂಗ್ಲಿಷ್ ನಲ್ಲಿ ಆಗಿರುವುದರಿಂದ ಇಂಗ್ಲಿಷ್ ಮುಖಾಂತರವೇ ಅವರು ಯೋಚನೆ ಮಾಡುವುದು. ಕೆಲವರಂತೂ ಸ್ವಪ್ನವನ್ನೂ ಇಂಗ್ಲಿಷ್ ನಲ್ಲೇ ಕಾಣುವೆವೆಂದು ಅಭಿಮಾನ ತಾಳುವವರು. ಅಂತಹವರು ‘ಕಲ್ಚರ್’ ಎನ್ನುವ ಮೂಲ ಶಬ್ಧ ಹಿಡಿದು ಅದನ್ನು ‘ಸಂಸ್ಕೃತಿ’ ಎಂದು ನಮ್ಮ ಭಾಷೆಗೆ ತರ್ಜುಮೆ ಮಾಡಿದವರು.

    ನಮ್ಮ ದೇಶದಲ್ಲಿ ಇಂಗ್ಲಿಷ್ ಶಿಕ್ಷಣ ಜಾರಿಗೆ ಬಂದ ನಂತರವೇ ಈ ದೇಶದ ಜನರ ಮಾನಸಿಕತೆಗೂ ಧಕ್ಕೆ ಬಂದಿದೆಯೆಂದರೆ ತಪ್ಪಗಲಿಕ್ಕಿಲ್ಲ. ನಮ್ಮ ದೇಶದಲ್ಲಿ ಇಂಗ್ಲಿಷ್ ಶಿಕ್ಷಣದ ಪರಿಣಾಮವನ್ನು ಇಂದಿನ ಯುವಕರಲ್ಲಿ ಕಾಣುತ್ತಿದ್ದೇವೆ.

    ಒಂದು ಭಾಷೆಯೆಂದರೆ ಕೇವಲ ಭಾಷೆಯಲ್ಲ, ಈ ನೆಲದ ಗುರುತು, ಇತಿಹಾಸ, ಜನಜೀವನ, ಪರಂಪರೆಗಳ ಒಳನೋಟ ಅದು. ಆ ಕಾರಣದಿಂದ ನಮ್ಮ ಮಕ್ಕಳಿಗೆ ಒಪ್ಪಣ್ಣನ ಮಾತುಗಳಲ್ಲೇ ವ್ಯಕ್ತವಾದ ಹಾಗೆ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಲು ಸಂಸ್ಕೃತದಲ್ಲಿ ರೂಪಿಸಲ್ಪಟ್ಟ ಮಂತ್ರಗಳನ್ನು ಮಕ್ಕಳಿಗೆ ಕಲಿಸುವ ಅಗತ್ಯತೆ ಹಾಗೂ ಅನಿವಾರ್ಯತೆ ಇಂದು ಎದ್ದು ಕಾಣುತ್ತಿದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×