Oppanna.com

ಶಕ್ತಿ -ಸಂಪತ್ತು-ಜನಬಲ ಇಲ್ಲದ್ದ ಬ್ರಾಹ್ಮಣರು ‘ದಲನ’ ಮಾಡಿದವಡ..!?

ಬರದೋರು :   ಒಪ್ಪಣ್ಣ    on   25/05/2012    13 ಒಪ್ಪಂಗೊ

ಬೈಲಿನ ಒಳಾಣ ಕೆಲವು ಮನೆಗೊಕ್ಕೆ ಕಾಗತವೋ, ಹೇಳಿಕೆಯೋ ಪೋಷ್ಟು ಎಂತಾರು ಬಂದರೆ ಬೈಲಕರೆ ಕೃಷ್ಣಪ್ಪುವ ಗೂಡಂಗುಡಿಗೆ ಬಕ್ಕಷ್ಟೆ.
ಯೇವದಾರು ಜೆಂಬ್ರಂದ ಬಪ್ಪಗಳೋ, ಸಾಮಾನಿಂಗೋ, ಬೊಂಡದ ಕಿಲೆ ಅಂಗುಡಿಗೆ ಕಚ್ಚೋಡ ಮಾಡ್ಳೋ, ಹಾಲಿಂಗೋ – ದಿನಾಗುಳೂ ಮಾರ್ಗದಕರೆಂಗೆ ಹೋಪೋರು ಇರ್ತವಿದಾ, ಬಪ್ಪಗ ತಕ್ಕು. ತಪ್ಪಗ ಅವರ ಮನೆದು ಮಾಂತ್ರ ಅಲ್ಲ; ಹತ್ತರಾಣ ಮನೆಗಳದ್ದೂ ತಕ್ಕು.

ಮನ್ನೆ, ಮಾಣಿಮಠಕ್ಕೆ ಹೋಗಿ ಒಪಾಸು ಬಪ್ಪಗ ಎಂತಾರು ಕಾಗತ ಇದ್ದೋ – ಕೃಷ್ಣಪ್ಪು ಗೂಡಂಗುಡಿಗೆ ಹೋಗಿ ಕೇಳಿದೆ. ಉಂಡು – ಹೇದು ಬೈಲಿಂಗಿಪ್ಪ ನಾಕರ ಕೊಟ್ಟತ್ತು.
ಒಂದೇ ಮದುವೆಯ ಹೇಳಿಕೆಗೊ – ಮೂರು ಮನಗೆ – ಒಂದು ಆಚಮನೆ ದೊಡ್ಡಪ್ಪಂಗೆ, ಒಂದು ಮಾಷ್ಟ್ರುಮಾವಂಗೆ, ಒಂದು ತರವಾಡು ಮನೆಗೆ. ಮತ್ತೊಂದು ಬೇರೆಂತದೋ ಬೆಳಿ ಕವರಿಲಿ ಬಂದ್ಸು ತರವಾಡುಮನೆ ಶಾಂಬಾವನ ಒಯಿವಾಟಿಂದು. ಅದಿರಳಿ.
~

ಹಾಂಗೆ, ಬಪ್ಪ ದಾರಿಲೇ ಕಾಗತಂಗಳ ವಿಲೇವಾರಿ ಸುರುಮಾಡಿತ್ತು. ತರವಾಡುಮನೆ ಚಾವಡಿಲಿ ಕಾಲುನೀಡಿ ಕೂದಂಡಿದ್ದ ಪಾತಿಅತ್ತೆಯ ಹತ್ತರೆ ಎರಡೇ ಎರಡು ಮಾತಾಡಿಕ್ಕಿ, ಮಾಷ್ಟ್ರುಮಾವನ ಮನಗೆ ಬಂದದು. ಇನ್ನು ಆಚಮನೆಗೆ ಹೋಗಿಂಡು ಮನಗೆ ಹೋವುತ್ತ ಲೆಕ್ಕಲ್ಲಿ.
ಹೊತ್ತಪ್ಪಗ ಇದಾ – ಮಾಷ್ಟ್ರುಮಾವ° ಪೋನಿಲಿ ಮಾತಾಡಿಂಡು ಇದ್ದಿದ್ದವು; ಜೋರು – ಅಮೆರಿಕಲ್ಲಿಪ್ಪ ದೊಡ್ಡಮಗಂಗೆ ಕೇಳುವ ಹಾಂಗೆ. 😉
ಅವಂಗೆ ಉದಿಯಾತಷ್ಟೇ; ಎದ್ದ ಕೂಡ್ಳೇ ಭಾವಯ್ಯ ಮಾಡಿದ್ದೋ, ಏಳುಸಲೆ ಮಾಷ್ಟ್ರುಮಾವ° ಮಾಡಿದ್ದೋ; ನವಗರಡಿಯ.
ಅರಡಿಯದ್ದರ ಹೇಳಲೆ ಒಪ್ಪಣ್ಣಂಗೂ ಅರಡಿಯ! 😉
~

ಮಾಷ್ಟ್ರುಮಾವ° ಇತಿಹಾಸವನ್ನೂ ಪಾಟ ಮಾಡಿಂಡು ಇತ್ತವು; ಹಾಂಗಾಗಿ ಅದರ್ಲೇ ಆಸಕ್ತಿ.
ಮನೆಯ ಒಳುದೋರ ಪಾಲಿನ ಆಸಕ್ತಿ ಪೂರಾ ಇವಕ್ಕೇ ಬಂದದೋ – ಹೇದು ಒಂದೊಂದರಿ ಎನ ಕಾಣ್ತು. 😉
ಋಗ್ವೇದ, ಆಯುರ್ವೇದ, ಷಾಜಾನು, ಹೊಯಾಂಗು ಹೋ, ತುರ್ಕಿ, ಕೈಬರು, ಬೋಲಾನು, ಜಪಾನು, ಶೀತಲ ಸಮರ, ವೀರಪ್ಪ , ಹರಪ್ಪ – ಎಲ್ಲವುದೇ ಕಾಲಘಟ್ಟಲ್ಲಿ ಕತೆಯ ಹಾಂಗೆ ಹೇಳುಗು ಒಂದೊಂದರಿ. ಶಾಲೆ ಪುಸ್ತಕ ಓದುವಗ ಆವಳಿಗೆ ಬಪ್ಪ ಅವರ ಮಕ್ಕೊಗೆ ಈ ಕತೆಗಳ ಕೇಳುವಗಳೇ – ಹೋ, ಇಷ್ಟೂ ಸುಲಬವೋ – ಅನುಸುದಡ!
ಮೊನ್ನೆಯೂ ಪೋನಿಲಿ ಇದೇ ನಮುನೆ ಎಂತದೋ ಮಾತಾಡಿಗೊಂಡು ಇತ್ತಿದ್ದವು. ಕಾಗತ ಕೊಟ್ಟಿಕ್ಕಿ ಪಕ್ಕನೆ ಹೋಪೊ° – ಗ್ರೇಶಿದ್ದಾನು; ಕತೆ ಹೇಳುವಗ ಮನಸ್ಸಾತಿಲ್ಲೆ ಕೇಳಿಂಡು ನಿಂದೆ.

ಸುಮಾರು ಹೊತ್ತು ಕಳುದು ಮಾತುಕತೆ ನಿಂದತ್ತು; ಪೋನು ಮಾಷ್ಟ್ರುಮನೆ ಅತ್ತೆಯ ಕೈಗೆ ಹೋತು.
ಕಾಗತ ತಂದ ಶುದ್ದಿಯ ಹೇಳಿಕ್ಕಿ ಕೈಲಿ ಕೊಟ್ಟೆ.
ಆಚ ಹೊಡೆಲಿ ಅತ್ತೆ ಮಾಂಬ್ಳಗೊಜ್ಜಿಮಾಡುದರ ಸೊಸೆಗೆ ವಿವರುಸಲೆ ಸುರುಮಾಡಿ ಅಪ್ಪದ್ದೇ, ಹೆರಟ ಹಾಂಗೆ ಮಾಡಿಕ್ಕಿ – “ಅದೆಂತರ ಪೋನಿಲಿ ಮಾತಾಡಿದ ಸಂಗತಿ?” – ಕೇಳಿದೆ.
ನಿಧಾನಕ್ಕೆ ವಿವರುಸಲೆ ಸುರುಮಾಡಿದವು ಮಾಮಾ.
~
ಮಾಷ್ಟ್ರುಮಾವನ ಮಗ ಪೋನಿಲಿ ಮಾತಾಡುವಗ ಬಂದ ಸಂಗತಿ ರಜರಜ ನವಗೂ ಗೊಂತಿಪ್ಪದೇ.
ಮನ್ನೆಇತ್ಲಾಗಿ ಪೇಜಾವರ ಮಹಲು (ಸ್ವಾಮಿಗೊ) ಒಂದು ಸಬೆಲಿ ಆಶೀರ್ವಚನ ಕೊಟ್ಟದು ಪೇಪರಿಲಿ ಬಂದ ಸಂಗತಿ.
ಅವು ಆ ದಿನ ಮಾತಾಡಿದ್ದರ್ಲಿ ಯೇವದೋ ಒಂದು ಗೆರೆಯ ಮಾಂತ್ರ ಕೇಳಿ, ಉರುದು. ಎರದು, ಅರದು, ಬರದು ಹಾಕಿದ್ದವಡ.
ಅದಲ್ಲದ್ದೇ, ಮಾರ್ನೇದಿನ ಅದಕ್ಕೆ ಪ್ರತಿಕ್ರಿಯೆಗೊ, ಮತ್ತಾಣ ದಿನ ಸ್ಪಷ್ಟನೆಗೊ – ಹೀಂಗೇ ನೆಡಕ್ಕೊಂಡಿದ್ದತ್ತು.
ಬೈಲಿಲಿಯೂ ಗುಸುಗುಸು ಮಾತಾಡಿಗೊಂಡಿತ್ತವು ಕೆಲವು ಜೆನ; ಹಾಂಗಾಗಿ ನವಗೂ ಆ ಸಂಗತಿ ಕೇಳಿ ಅರಡಿಗಾದ್ಸು.
ಒಬ್ಬ ನೂರು ಮಾತಾಡಿರೆ ಆಚೋನಿಂಗೆ ಹತ್ತು ಅರ್ತ ಅಕ್ಕು; ಅವ ಮತ್ತೊಬ್ಬಂಗೆ ಹೇಳ್ವಗ ಹತ್ತರಲ್ಲಿ ಒಂದು ಅರ್ತ ಅಕ್ಕು; ಅಷ್ಟಪ್ಪಗ ಅದಕ್ಕೆ ಕೈಕ್ಕಾಲುರೆಂಕೆ ಎಲ್ಲ ಸೇರಿ ಬೆಳದು – ಭಯಂಕರ ಸಂಗತಿ ಆಗಿಬಿಡ್ತು. ಇಲ್ಲಿಯೂ ಹಾಂಗೇ ಆದ್ಸು ಕಾಣ್ತು; ಉಮ್ಮ – ನವಗರಡಿಯ.
ಅದಿರಳಿ.
~
ಆದರೆ, ಮಾಷ್ಟ್ರುಮಾವ ಪೋನಿಲಿ ಮಾತಾಡಿಂಡದು ಇದು ಮಾಂತ್ರ ಅಲ್ಲ; ಇನ್ನೂ ಒಂದಿದ್ದು.
ಮಾಷ್ಟ್ರುಮಾವನ ಮಗಂಗೆ ಎಲ್ಲಿಯೋ ಓದಲೆ ಸಿಕ್ಕಿತ್ತಿದ್ದಡ ಒಂದು ಸಂಗತಿ. ಅದರ ವಿಮರ್ಶೆ ಮಾಡಿಗೊಂಡಿತ್ತವು ಇಷ್ಟೋತು.
ಅದೆಂತರ?

ಈಗಾಣ ರಾಜಕೀಯ ಭಾರತಲ್ಲಿ ಒಂದು ಕ್ರಮ ಇದ್ದಾಡ.
ಎಂತದೇ ಸಾಮಾಜಿಕ ತೊಂದರೆ ಬಂದರೂ “ಬ್ರಾಹ್ಮಣರ” ಮೇಗೆ ದೂರು ಹಾಕುತ್ಸು!
ಬಡತನ, ಅನಕ್ಷರತೆ, ಅನಾರೋಗ್ಯ, ಅಸಮಾನತೆ – ಎಂತದೇ ಇರಳಿ; ಅದು ಬ್ರಾಮ್ಮರಿಂದಲೇ ಆದ್ಸು; ದೇಶದ ಎಲ್ಲಾ ಅನಿಷ್ಟಕ್ಕೆ ಬ್ರಾಮ್ಮರೇ ಕಾರಣ – ಹೇಳುಸ್ಸು ಕೆಲವು.
ನಮ್ಮ ಸಂಪ್ರದಾಯಂದಾಗಿ ಎಂತ ದೋಷ ಬಂದರೂ, ಈಗಾಣೋರಿಂಗೆ ಅಸಂಬದ್ಧ ಹೇದು ಕಾಣ್ತ ಯೇವದಾರು ಆಚರಣೆಗಳ ಕಂಡ್ರೂ ಅದೆಲ್ಲವೂ ಬ್ರಾಮ್ಮಣರಿಂದಾಗಿ – ಹೇಳುಲಕ್ಕು, ಕಣ್ಣುಮುಚ್ಚಿ.

ಆದರೆ, ಅದು ನಿಜವೋ? ಹಾಂಗೆ ಅಪ್ಪಲೆ ಸಾಧ್ಯ ಇದ್ದೋ? ಅದರ ಬಗ್ಗೆಯೇ ನೆಡದ ವಿಮರ್ಶೆ.
ಅವು ಮಾತಾಡಿದ ಸಂಗತಿ ಮಾಂತ್ರ ಅಲ್ಲದ್ದೆ, ಮತ್ತೂ ಕೆಲವು ವಿಶಯಂಗೊ ಸೇರಿ, ಒಂದರ್ಧ ಗಂಟೆ ವಿವರುಸಿದವು; ಇರುಳಿರುಳಪ್ಪನ್ನಾರವೂ.
~

ಎಲ್ಲೋರುದೇ ಹಾಂಗೆ ಹೇಳಿರೂ, ಕೇಳಿರೂ – ನಾವು ನಮ್ಮ ಧರ್ಮದ ಬಗೆಗೆ ಕೆಲವು ವಿಷಯಂಗಳ ತಿಳ್ಕೊಳೇಕು.
ನಮ್ಮದು ಸನಾತನ ಧರ್ಮ. ಇದರ “ವರ್ಣಾಶ್ರಮ ಧರ್ಮ” ಹೇಳಿಯೂ ಹೇಳ್ತವು.
ಅದೆಂತರ ವರ್ಣಾಶ್ರಮ ಹೇದರೆ, ಮಾಷ್ಟ್ರುಮಾವಂಗೆ ಅರಡಿಗು.

ವರ್ಣ:

ಪೂರ್ವಕಾಲಲ್ಲಿ ಒಬ್ಬನ ಕೆಲಸ ಎಂತರ – ಹೇಳ್ತ ಆಧಾರಲ್ಲಿ ಇಡೀ ಸಮಾಜವ ನಾಲ್ಕು ವಿಭಾಗವಾಗಿ ವಿಂಗಡುಸಿದ್ದು. ಮುಂದೆ ಸಮಾಜಕ್ಕೆ ಆ ಕೆಲಸದ ಪ್ರಾಮುಖ್ಯತೆ ಎಷ್ಟು ಹೇಳ್ತರ ಮೇಗೆ ಆಯಾ ವಿಭಾಗದ ಪ್ರಾಮುಖ್ಯತೆ ರೂಢಿ ಆತಾಡ.
ಹಳೆ ಕಾಲದ ಸ್ಮೃತಿಗಳಲ್ಲಿಯೂ ಇದನ್ನೇ ಹೇಳಿದ್ದವಡ.

ಈ ವರ್ಣಂಗೊ ಪರಮಾತ್ಮನಿಂದಲೇ ರಚನೆ ಆದ್ಸು – ಹೇಳ್ತು ಭಗವದ್ಗೀತೆ. ಜ್ಞಾನಯೋಗಲ್ಲಿ ಶ್ರೀಕೃಷ್ಣಪರಮಾತ್ಮ ಹೇಳ್ತ ಮಾತು ಇದು:

ಚಾತುರ್ವರ್ಣ್ಯಂ ಮಯಾ ಸೃಷ್ಟ್ಯಾ ಗುಣಕರ್ಮವಿಭಾಗಶಃ । (ಅಧ್ಯಾಯ 4, ಶ್ಲೋಕ 5)
ಹೊಂದಿದ ಗುಣ, ಮತ್ತೆ ಮಾಡುವ ಕೆಲಸದ ಆಧಾರಲ್ಲಿ ಸಮಾಜವ ನಾಲ್ಕು ವರ್ಣಂಗೊ ಆಗಿ ವಿಭಾಗ ಮಾಡಿದ್ದು ಆನೇ – ಹೇಳಿ ಶ್ರೀಕೃಷ್ಣ ಅರ್ಜುನಂಗೆ ಹೇಳುಸ್ಸಡ.

ವೇದ,ಪುರಾಣ ಪಠಣ-ಬ್ರಾಹ್ಮಣನ ಲಕ್ಷಣ

ಪರಮಾತ್ಮನ ನಂಬದ್ದವುದೇ – “ವರ್ಣಂಗೊ ಅನಾದಿಲೇ ಸುರು ಆದ್ಸು” ಹೇದು ಗ್ರೇಶಿಂಬಲಕ್ಕು.
ಅನಾದಿ ಹೇದರೆ, ನಾಗರಿಕತೆ ಆರಂಭ ಆದ ಕೂಡ್ಳೇ ಈ ನಾಲ್ಕು ವರ್ಣಂಗಳೂ ಸುರು ಆಗಿತ್ತು.

ವೆಗ್ತಿಯ ಗುಣ, ಮತ್ತೆ ಅವನ ಕಾರ್ಯಂಗೊ – ವರ್ಣ ನಿಘಂಟು ಮಾಡ್ಲೆ ಇದೆರಡೂ ಅಗತ್ಯವೇ.

ವೇದ- ಪುರಾಣ ಇತ್ಯಾದಿಗಳ ಪಠಣ ಮಾಡಿಗೊಂಡು ಮುಂದಾಣೋರಿಂಗೆ ಎತ್ತುಸಲೆ ಇಪ್ಪಲೆ ಬ್ರಾಹ್ಮಣ ಹೇಳುವ ಒಂದು ವರ್ಣ.

ಒಬ್ಬ-ಇನ್ನೊಬ್ಬಂಗೆ ವಿದ್ಯಾದಾನ ಮಾಡಿ, ಬುದ್ಧಿವಂತಿಕೆಯ ಸದ್ವಿನಿಯೋಗಮಾಡಿ, ಚಿಂತನೆಗಳ ಮೂಲಕ ಸಮಾಜಕ್ಕೆ ಬೇಕುಬೇಕಾದಲ್ಲಿ ಬೇಕಾದ ಹಾಂಗೆ ಮಾರ್ಗದರ್ಶನ ಕೊಡ್ತದು ಬ್ರಾಹ್ಮಣ ವರ್ಣದ ಕರ್ತವ್ಯ.

ಜೆನಂಗಳ ನೆಮ್ಮದಿಯ ಬದ್ಕಿಂಗೆ ಬೇಕಾದ ಸುರಕ್ಷಿತ ವಾಸಪ್ರದೇಶವ ಒದಗುಸಲೆ ಇಪ್ಪ ಇನ್ನೊಂದು ವರ್ಣವೇ ಕ್ಷಾತ್ರ ವರ್ಣ.

ರಾಜಕೀಯ, ರಾಜ್ಯಾಡಳಿತ, ಜೆನಂಗಳ ಯೋಗಕ್ಷೇಮ, ಖರ್ಚು – ತೆರಿಗೆ ಇತ್ಯಾದಿಗಳ ನೋಡಿಂಬದು ಇವರ ಕರ್ತವ್ಯ.

ಜೆನಂಗೊಕ್ಕೆ ಜೀವನಕ್ಕೆ ಬೇಕಾದ ಆಹಾರ ವಸ್ತುಗೊ, ಆಭರಣಂಗೊ, ಸಾಮಾನು-ಸಲಕರಣೆ- ಸರಂಜಾಮುಗಳ ವ್ಯಾಪಾರ ಮಾಡಿಗೊಂಡು ಇಪ್ಪ ವರ್ಣವೇ “ವೈಶ್ಯ”ವರ್ಣ.

ನ್ಯಾಯಯುತವಾದ ಒಯಿವಾಟು ಮಾಡಿಂಡು, ಕಾಲಕಾಲಕ್ಕೆ ಅಗತ್ಯ ಬಪ್ಪ ಆಹಾರ ಧಾನ್ಯಂಗೊ, ಅಲಂಕಾರಿಕ ವಸ್ತುಗೊ – ಇತ್ಯಾದಿಗಳ ಎತ್ತುಸುತ್ತದು ಇವರ ಜೆವಾಬ್ದಾರಿ.

ದೈಹಿಕವಾಗಿ ಕಷ್ಟದ ಕೆಲಸ ಮಾಡ್ಳೆ ಹುಟ್ಟಿಂದಲೇ ಸಿದ್ಧರಾಗಿಂಡು, ದೇಶದ ಅಗತ್ಯ ಜಾಗೆಗಳಲ್ಲಿ ದುಡಿವವಕ್ಕೆ ಶೂದ್ರ ಹೇಳುವ ವರ್ಣ.

ರಾಜರಿಂಗೆ ಅಗತ್ಯದ ಸಕಾಯ ಮಾಡಿಂಡು, ವೈಶ್ಯರೊಟ್ಟಿಂಗೆ ಸಾಮಾನು ಸರಂಜಾಮು ಸಾಗುಸಲೆ ಸೇರ್ಸೆಂಡು, ಜೆನಂಗೊಕ್ಕೆ ಬೇಕಪ್ಪ ಕಷ್ಟದ ಕೆಲಸಂಗಳ ಮಾಡಿಂಡು ಇಪ್ಪದು ಇವರ ಕರ್ತವ್ಯ.

ಪುರುಷ ಸೂಕ್ತಲ್ಲಿಯೂ ಈ ನಾಲ್ಕು ವರ್ಣಂಗಳ ಬಗೆಗೆ ಉಲ್ಲೇಖ ಬತ್ತಾಡ.
ಜಗತ್ತನ್ನೇ ಆವರುಸಿಪ್ಪ ಆ ಮಹಾ ಪುರುಷನ ಮುಖಂದ ಬ್ರಾಹ್ಮಣ ವರ್ಣದ ಉಗಮ ಆತು – ಹೇದರೆ, ಬ್ರಾಹ್ಮಣರಿಂಗೆ ತಲೆ ಮುಖ್ಯ. ಪುರುಷನ ಬಲಿಷ್ಠ ಬಾಹುಗಳಿಂದ ರಾಜನ ಉಗಮ ಆತು – ಹೇದರೆ ರಾಜಂಗೊಕ್ಕೆ ಬಾಹುಗೊ ಮುಖ್ಯ. ಪಾದಂದ ಶೂದ್ರವರ್ಣದ ಉಗಮ ಆತು – ಹೇದರೆ, ಶೂದ್ರ ವರ್ಣಕ್ಕೆ ಬಲಿಷ್ಠವಾದ ಕಾಲು ಮುಖ್ಯ; ದೈಹಿಕವಾಗಿ ಕಷ್ಟದ ಕೆಲಸ ಮಾಡ್ಳೆ.. ಇನ್ನೂ ಹಲವು ದಿಕ್ಕೆ ಈ ವರ್ಣಂಗಳ ಉಲ್ಲೇಖ ಬತ್ತಾಡ – ಮಾಷ್ಟ್ರುಮಾವ° ಹೇಳುವಗ ವೇದಪಾಟಶಾಲೆಲಿ ಕಲ್ತದು ನೆಂಪಾತು.

~
ಆದರೆ, ಈ ವರ್ಣ ಮತ್ತೆ ಜಾತಿ – ಹೇಳುಸ್ಸು ಒಂದೇ ಅಲ್ಲ; ಬೇರೆ ಬೇರೆ ಸಂಗತಿಗೊ.
ಒಂದೊಂದು ವರ್ಣಲ್ಲಿಪ್ಪ ಜೆನಂಗೊ, ಒಂದೊಂದು ವೃತ್ತಿಮಾಡುವ ಜೆನಂಗೊ ನಿಧಾನಕ್ಕೆ ಅವರವರದ್ದೇ ಗುಂಪು ಗುಂಪಾಗಿ ವಾಸ ಮಾಡ್ಳೆ ಸುರು ಮಾಡಿದವು. ಇದುವೇ ಮುಂದೊಂದು ಹೊಸ ವಿಂಗಡಣೆ – ಜಾತಿ ಹೇದು ಬಳಕ್ಕೆಗೆ ಬಂತು.
ಇದು ನಮ್ಮ –ಮನು , ಯಾಜ್ಞವಲ್ಕ್ಯ – ಇತ್ಯಾದಿ ಸ್ಮೃತಿಗಳಲ್ಲಿ ಉಲ್ಲೇಖ ಇಲ್ಲೆ, ಮತ್ತಾಣ ಸಾಮಾಜಿಕ ಬೆಳವಣಿಗೆಗೊ.

ಈಗಾಣೋರು ಈ ಜಾತಿ ಮತ್ತೆ ವರ್ಣವ ಒಂದೇ ಹೇದು ತಿಳ್ಕೊಂಡು, ಮೇಗೆ ಇಪ್ಪ ಬ್ರಾಹ್ಮಣರ ಬೈವದು – ಹೇಳ್ತದು ಒಂದು ಅಭಿಪ್ರಾಯ.
~

ಆಶ್ರಮ:
ಮಾಡ್ತ ಕಾರ್ಯಕ್ಕೆ ವರ್ಣ ಹೇಂಗೆ ನಿಬದ್ಧವೋ, ಜೀವನದ ಘಟ್ಟಕ್ಕೆ ಆಶ್ರಮಂಗಳೂ ನಿಘಂಟಾವುತ್ತು.
ನಾಲ್ಕು ವರ್ಣ ಇಪ್ಪ ಹಾಂಗೇ ನಾಲ್ಕು ಆಶ್ರಮಂಗೊ ಇದ್ದತ್ತು ಮದಲಿಂಗೆ.
ಬ್ರಹ್ಮಚರ್ಯ ಆಶ್ರಮ:
ಬಾಲ್ಯಲ್ಲಿ ಕಲಿತ್ತ ಪ್ರಾಯ. ಎಡಿಗಾದಷ್ಟು ಕಲ್ತುಗೊಂಬದು ಮಕ್ಕಳ ಕರ್ತವ್ಯ. ಕಲಿವದು ಎಂತದಾದರೂ ಅಕ್ಕು; ಅವರವರ ವರ್ಣಕ್ಕೆ ಅನುಸರುಸೆಂಡು. ಬ್ರಾಹ್ಮಣವರ್ಣದೋನು ಮಂತ್ರ ಕಲಿಗು; ಕ್ಷತ್ರಿಯ ವರ್ಣದೋನು ಕತ್ತಿ ಹಿಡಿಯಲೆ ಕಲಿಗು; ವೈಶ್ಯ ವರ್ಣದೋನು ಪೈಶೆ ಎಣುಸಲೆ ಕಲಿಗು, ಶೂದ್ರ ವರ್ಣದೋನು ಕೊಟ್ಟು ಹಿಡುದು ಗರ್ಪಲೆ ಕಲಿಗು. ಅಂತೂ ತನ್ನ ಮುಂದಾಣ ಜೀವನವ ನೆಡೆಶಲೆ ಬೇಕಾದ ವಿದ್ಯಾಭ್ಯಾಸವ ಕಲಿಗು.

ಗೃಹಸ್ಥ ಆಶ್ರಮ:
ವಿದ್ಯಾಭ್ಯಾಸ ಸಮಾವರ್ತನೆ ಆದಮತ್ತೆ, ತನ್ನ ಜೆಬಾದಾರಿಕೆಯ ಜೀವನಾರಂಭ ಆವುತ್ತು. ಮತ್ತೆ ಎರಡ್ಣೇ ಆಶ್ರಮ ಆರಂಭ ಮಾಡ್ಳಕ್ಕು – ಅದುವೇ ಗೃಹಸ್ಥ.
ವಿವಾಹ ಯೋಗ ಒದಗಿ, ಅನುರೂಪವಾದ ಕೂಸೊಂದರ ಧರ್ಮಪತ್ನಿಯಾಗಿ ಕರಕ್ಕೊಂಡು ಬಂದು, ಸಂಸಾರಿ ಜೀವನ ಆರಂಭ ಮಾಡುದು. ಸಂತಾನವ ಬೆಳೆಶಿ, ಮುಂದಾಣ ತಲೆಮಾರಿಂಗೂ ತಾನು ಕಲ್ತ ವಿದ್ಯೆಯ ಒದಗುಸುತ್ತದು ಅತೀ ಮುಖ್ಯ.
ಅದರೊಟ್ಟಿಂಗೆ, ಆದರಾತಿಥ್ಯ, ದೇವರಪೂಜೆ, ಸಜ್ಜನರ ಸಂಗ ಇತ್ಯಾದಿಗೊ ಗೃಹಸ್ಥ ಆಶ್ರಮದ ಕರ್ತವ್ಯ – ಹೇಳಿದವು ಮಾಷ್ಟ್ರುಮಾವ, ಯೇವದೋ ಒಂದು ಶ್ಲೋಕದ ಉದಾಹರಣೆ ಕೊಟ್ಟೊಂಡು.

ವಾನಪ್ರಸ್ಥ ಆಶ್ರಮ:

ಗೃಹಸ್ಥಾಶ್ರಮ ಪರಿಪೂರ್ಣವಾಗಿ ಮುಗುಶಿದ ಮತ್ತೆ ಇನ್ನೆಂತರ ಒಳುದ್ದು?! ಜೀವನಲ್ಲಿ ಬೇಕಾದಷ್ಟು ಕಂಡು ಆಗಿರ್ತು; ಕಾಡಿಂಗೆ ಹೋಗಿ, ಗೆಡ್ಡೆ ಗೆಣಂಗು ಬಟಾಟೆಗಳ ತಿಂದುಗೊಂಡು ಆರಾಮಕ್ಕೆ ಬದ್ಕುದೇ ಇಪ್ಪದು ಇನ್ನು.
ಮಕ್ಕೊಗೆ ಅವರ ದಾರಿ ತೋರ್ಸಿ ಆಗಿರ್ತು. ಮಗ ವೇದಾಧ್ಯಯನ ಮುಗುಶಿಕ್ಕು; ಅಲ್ಲದ್ದರೆ ವ್ಯಾಪಾರಾರಂಭ ಮಾಡಿಕ್ಕು, ಅತವಾ ರಾಜ್ಯಭಾರ ಮಾಡಿಕ್ಕು, ಅದೂ ಅಲ್ಲದ್ದರೆ ದೈಹಿಕ ಕೆಲಸಂಗೊ ಮಾಡ್ಳೆ ಆರಂಭ ಮಾಡಿಕ್ಕು – ಅಂತೂ ಮಕ್ಕೊ ಅವರದ್ದೇ ಹಾದಿಲಿ ಹೋಪಲೆ ಆರಂಭ ಮಾಡಿರ್ತು. ಹಾಂಗಾಗಿ, ಮನೆದು ಎಂತದೂ ತಲೆಬೆಶಿ ಒಳುದಿರ್ತಿಲ್ಲೆ.

ಸನ್ಯಾಸ ಆಶ್ರಮ:
ವಾನಪ್ರಸ್ಥಾಶ್ರಮವೂ ಕಳುದಪ್ಪಗ ನಿಜವಾದ ವೈರಾಗ್ಯ ಮನಸ್ಸಿಂಗೆ ಎತ್ತಿರ್ತು. ಮನಸ್ಸಿನ ಇನ್ನೂ ಪರಿಶುದ್ಧ ಮಾಡ್ಳೆ ಎಲ್ಲ ಬಂಧನಂಗಳನ್ನೂ ಬಿಡುಸಿಗೊಂಡು ಮೋಕ್ಷದ ದಾರಿಯ ಕಾಂಬದೇ ಸನ್ಯಾಸ. ಯೇವದೇ ವರ್ಣ ಆಗಿರಳಿ, ಸನ್ಯಾಸ ತೆಕ್ಕೊಂಡು ಮೋಕ್ಷದ ದಾರಿಗೆ ಇಳಿಸ್ಸು ಮದಲಾಣ ಕ್ರಮ ಅಡ.
~

ಆದರೆ, ಈಗಾಣೋರ ಡಿಕಿಶ್ನರಿಲಿ ಇಷ್ಟೆಲ್ಲ ವಿಶಯಂಗೊ ಇದ್ದೋ?
ಇಪ್ಪಲೆ, ಅದರೆಲ್ಲ ಕಲ್ತುಗೊಂಬಲೆ ಅವರ ಮನಸ್ಸು ಒಪ್ಪುತ್ತೋ? ಶಾಲೆಂದ ಹೆರ ಬಂದ ಕೂಡ್ಳೇ “ಬ್ರಾಹ್ಮಣ”ವರ್ಗ ನಮ್ಮ ತೊಳುದ್ದು, ದಲನ ಮಾಡಿದ್ದು – ಹೇಳ್ತರ ಮನಸ್ಸಿಂಗೆ ಮಡಿಕ್ಕೊಳ್ತವು.
ಇಂದಿಂಗೂ ಅದೇ ನೆಪಲ್ಲಿ ಬ್ರಾಹ್ಮಣ ವರ್ಗವ ಎಲ್ಲದರ್ಲಿಯೂ ದೂರ ಮಡಗುತ್ತವು. ಮೀಸಲಾತಿ, ವರ್ಗಬೇಧ ಹೇಳಿಗೊಂಡು ಎಲ್ಲದರ್ಲಿಯೂ ದಲನ ಮಾಡ್ಳೆ ಹೆರಡ್ತವು.
ಆದರೆ, ನಿಜವಾಗಿಯೂ ಸಂಗತಿ ಹಾಂಗೆಯೋ?
~

ಇಡೀ ರಾಜ್ಯದ ಅಧಿಪತ್ಯ ಇದ್ದದು ಕ್ಷತ್ರಿಯ ರಾಜರ ಹತ್ತರೆ. ಎಲ್ಲೋರ ಹತ್ತರಂದ ತೆರಿಗೆ ಸಂಗ್ರಹ ಮಾಡಿ, ರಾಜ್ಯಭಾರ ಮಾಡುವ ಕರ್ತವ್ಯದೋರು. ಇನ್ನೊಂದು ರಾಜ್ಯದ ಮೇಲೆ ಆಕ್ರಮಣ ಮಾಡಿ, ರಾಜ್ಯವಿಸ್ತಾರ ಮಾಡಿ, ಕೋಟೆ ಕಟ್ಟಳೆಗಳ ಕಟ್ಟುಸಿ ಮೆರದ್ದದು ಕ್ಷತ್ರಿಯರು.
ಸಂಪತ್ತಿನ ವ್ಯವಹಾರ ಇದ್ದದು ವೈಶ್ಯರ ಹತ್ತರೆ. ಹತ್ತಾರು ಆಳುಗಳ ಮಡಿಕ್ಕೊಂಡು, ದೊಡ್ಡದೊಡ್ಡ ವ್ಯವಹಾರ ಕೇಂದ್ರಂಗಳ ನಿಭಾಯಿಸೆಂಡು, ಕೂಲಿಯಾಳುಗಳ ಮೂಲಕ ಒಂದಿಕ್ಕಂದ ಇನ್ನೊಂದಿಕ್ಕಂಗೆ ಸರಂಜಾಮುಗಳ ಸಾಗುಸೆಂಡು ಇದ್ದದು ವೈಶ್ಯರು.

ಅಂಬಗ – ಜೆನಂಗಳ ನಿಜವಾಗಿ ದಲನ ಮಾಡಿದ್ದು ಆರು?
ಬ್ರಾಹ್ಮಣರೋ?
ಕಲ್ತ ಮಂತ್ರವ ಪಠಣ ಮಾಡಿಂಡು, ವೈದಿಕ ಕ್ರಿಯಾಕರ್ಮಾದಿಗಳ ಮಾಡುಸೆಂಡು ದಾನ ಧರ್ಮಂಗಳ ಸ್ವೀಕರುಸೆಂಡು ಇದ್ದಿದ್ದವು.
ಅದುವೇ ಅವರ ಸಂಪಾದನೆ! ಇದರಲ್ಲಿ ಒಳುದೋರ ಎಷ್ಟು ದಲನ ಮಾಡ್ಳೆಡಿಗು?!

ಬ್ರಾಹ್ಮಣರ ಹತ್ತರೆ ಇದ್ದದೆಂತರ, ವಿದ್ಯೆ ಮಾಂತ್ರ! ಆ ವಿದ್ಯೆ ಒಳುದೋರ ಹತ್ತರೆಯೂ ಇದ್ದತ್ತು.
ಉದಾಹರಣೆಗೆ, ಕ್ಷತ್ರಿಯ ರಾಜಂಗೂ ವೇದಪಾಠ ಆಗಿಯೇ ಆವುತ್ತು, ಅದರೊಟ್ಟಿಂಗೆ ಅವಂಗೆ ಶಸ್ತ್ರವಿದ್ಯೆಯೂ ಆವುತ್ತು.

ಬ್ರಾಹ್ಮಣ ವರ್ಣದೋರಿಂಗೆ ರಾಜರ ಹಾಂಗೆ ಶಕ್ತಿ ಇದ್ದತ್ತಿಲ್ಲೆ, ವೈಶ್ಯರ ಹಾಂಗೆ ಸಂಪತ್ತು ಇದ್ದತ್ತಿಲ್ಲೆ, ಶೂದ್ರರ ಹಾಂಗೆ ಬಲಿಷ್ಠ ಜೆನಸಂಕೆ ಇದ್ದತ್ತಿಲ್ಲೆ – ಇದೆಲ್ಲವೂ ಇದ್ದದು ಬಾಕಿ ವರ್ಣಂಗಳಲ್ಲಿ.
ಆದರೂ, ಇಂದ್ರಾಣ ಅನಕ್ಷರತೆ, ಬಡತನಕ್ಕೆ ಬ್ರಾಹ್ಮಣರು ಕಾರಣ – ಹೇಳ್ತವಲ್ಲದೋ ಜೆನಂಗೊ?!
ಇದುವೇ ದೊಡ್ಡ ಆಶ್ಚರ್ಯದ ವಿಚಾರ.

~

ಈಗಾಣೋರು ಹೀಂಗೆಲ್ಲ ತಿಳ್ಕೊಂಬಲೆ ಕಾರಣ ಎಂತರ?!
ಮಾಷ್ಟ್ರುಮಾವ ಹೇಳ್ತ ಪ್ರಕಾರ, ನಾವು ಈಗಾಣ ಕಾಲಲ್ಲಿ ಕಲಿತ್ತ “ಭಾರತದ ಇತಿಹಾಸ”ವ ನಮ್ಮ ಹಳಬ್ಬರ ಕೈಂದ ಕಲ್ತುಗೊಂಡದಲ್ಲ; ಆರಾರೋ ಬರದ್ದು. ಒಂದೋ ಪುರ್ಬುಗೊ, ಅಲ್ಲದ್ದರೆ ಮಾಪ್ಳೆಗೊ – ಈ ಊರು, ಈ ಮಣ್ಣು, ಇಲ್ಯಾಣ ಜೆನ ಜೀವನ – ಇದೇವದೂ ಅರಡಿಯದ್ದ ಪರ್ದೇಶಿಗೊ!
ಇತಿಹಾಸವ ಬರವೋನಿಂಗೆ ರಜ್ಜ ಆದರೂ ನಮ್ಮತನ ಗೊಂತಿರೇಕು – ಹೇಳ್ತದು ಇತಿಹಾಸ ಕಲುಶುತ್ತೋರಿಂಗೆ ಅರ್ತ ಆಯೇಕಾದ್ಸು ಮುಖ್ಯ.
ಅದು ಅರ್ತ ಆದರೆ, ಈಗಾಣ ಲೊಟ್ಟೆ ಇತಿಹಾಸದ ಗಿಳಿಪಾಟ ನಿಂಗು; ಮತ್ತೆ ಆದರೂ ನಿಜವಾದ ನಮ್ಮ ಹೆರಿಯೋರ ಬಗೆಗೆ ಅಭಿಮಾನ ಬಪ್ಪ ಹಾಂಗಿರ್ತ ಇತಿಹಾಸ ಕಲಿಯಲೆ ಅವಕಾಶ ಅಕ್ಕು – ಹೇಳಿದವು.

~

ಮಾಷ್ಟ್ರುಮಾವನ ಮನೆಂದ ಹೆರಟು ಆಚಮನೆಗೆ ಕಾಗತ ಎತ್ತುಸಿಕ್ಕಿ, ಮನಗೆತ್ತುವನ್ನಾರವೂ ಇದೇ ತಲೆಲಿ ತಿರುಗೆಂಡಿದ್ದತ್ತು.
ಇತಿಹಾಸ ಹೇಂಗೇ ಇರಳಿ; ಈಗಾಣೋರು ಮನುಸ್ಮೃತಿಯ ಬಿಟ್ಟು “ಭಾರತದ ಸಂವಿಧಾನ”ವ ಸ್ವೀಕರುಸಿ ಆಯಿದು. ಅದರ ಮೂಲಕ ಕಳುದ ಎರಡು ತಲೆಮಾರಿಂದ ನೆಡದು ಬತ್ತಾ ಇದ್ದು. ಉದ್ದಾರ ಅಪ್ಪವೇ ಆದ್ಸು; ಉದ್ದಾರ ಆಗದ್ದವು ಇನ್ನೂ ಆಯಿದವಿಲ್ಲೆ.
ವೈಯಕ್ತಿಕ ವ್ಯಕ್ತಿತ್ವದ ತೊಂದರೆಗೆ ಬ್ರಾಹ್ಮಣ ವರ್ಣವ ಬೈದರೆ ಅಕ್ಕೋ? ಇನ್ನಾರೂ ಎಲ್ಲೋರುದೇ ಒಟ್ಟಾಗಿ ಚೆಂದಕೆ ಹೋದರೆ ಭಾರತ ಚೆಂದಲ್ಲಿ ಒಳಿಗು; ಬೆಳಗು.
ಅಲ್ಲದೋ?
ಹಲವು ಕುಶಾಲುಗಳ ಎಡಕ್ಕಿಲಿ ಇದೊಂದು ಗಂಭೀರ ಶುದ್ದಿ!

ಒಂದೊಪ್ಪ: ಇತಿಹಾಸಲ್ಲಿ ಆರೋ ದಲನ ಮಾಡಿದ್ದಕ್ಕೆ ಇಂದು ಬ್ರಾಹ್ಮಣರನ್ನೇ ದಲನ ಮಾಡ್ತನ್ನೇ!

13 thoughts on “ಶಕ್ತಿ -ಸಂಪತ್ತು-ಜನಬಲ ಇಲ್ಲದ್ದ ಬ್ರಾಹ್ಮಣರು ‘ದಲನ’ ಮಾಡಿದವಡ..!?

  1. ಬ್ರಾಹ್ಮಣರ ಮೊದಲ ಶತ್ರುಗೊ ಬ್ರಾಹ್ಮಣರೇ ಹೇಳುದಕ್ಕೆ ಮೊನ್ನೆ ಬ೦ದ ಲೇಖನಕ್ಕೆ ಬೆ೦ಬಲ ಕೊಟ್ಟ ಆ ಪತ್ರಿಕೆಯ ಸ೦ಪಾದಕನೇ ಸಾಕ್ಶಿ!

  2. ಬ್ರಾಹ್ಮಣ್ಯದ ಬಗ್ಗೆ ಪರವಾಗಿ ಬರೆದರೆ ಜಾತೀಯವಾದ ಹೇಳಿಯೂ ಬ್ರಾಹ್ಮಣ್ಯಕ್ಕೆ ವಿರುದ್ಧ ಬರೆದರೆ ಪ್ರಗತಿಪರ ಚಿಂತನೆ ಹೇಳಿಯೂ ಒಂದು ಭ್ರಮೆ ನಮ್ಮ ಸಮಾಜಲ್ಲಿ ಇದ್ದು.ಅದು ಇಪ್ಪಲ್ಲಿ ವರೆಗೆ ಹೀಂಗಿಪ್ಪ ವಾದ ವಿವಾದ ಇಕ್ಕು.ಮತ್ತೆ ಬ್ರಾಹ್ಮಣರು ವೋಟ್ ಬ್ಯಾಂಕ್ ಅಲ್ಲ.ಹಾಂಗಾಗಿ ರಾಜಕೀಯ ಪಕ್ಷಂಗೊಕ್ಕೂ ನಮ್ಮ ಓಲೈಸೆಕ್ಕಾದ್ದಿಲ್ಲೆ.ಅದಕ್ಕೆ ಸರಿಯಾಗಿ ನಮ್ಮಲ್ಲಿ ಇಪ್ಪ ಕೆಲವು ಹಳೆ ಸಂಪ್ರದಾಯಂಗಳೂ [ಉದಾಃ- ಬ್ರಾಹ್ಮಣರಿಂಗೆ ವಿಶೇಷ ಭೋಜನ ವ್ಯವಸ್ಥೆ] ಕೂಡಾ ಬಾಕಿದ್ದವರಿಂದ ಟೀಕೆಗೆ ಗುರಿಯಾವುತ್ತು-ಅದರ ಸಮರ್ಥನೆ ಮಾಡುಲೆ ನಮಗೆ ಕಷ್ಟ ಆವುತ್ತು.ಅಷ್ಟಪ್ಪಾಗ ನಮ್ಮವು ಕೂಡಾ ನಮ್ಮ ಸಂಪ್ರದಾಯಂಗಳ ಟೀಕೆ ಮಾಡುತ್ತಾ ಪ್ರಗತಿಪರರು ಹೇಳಿ ಆವುತ್ತವು.
    ಈಗಾಣ ಮಟ್ಟಿಂಗೆ ನಾವು ನಮ್ಮ ವಾದವಿವಾದಂಗೊಕ್ಕೆ [ಸಹಪಂಕ್ತಿ ಭೋಜನದ ಬಗ್ಗೆ] ಒಂದು ತಾರ್ಕಿಕವಾದ ಅಂತ್ಯ ಕಂಡುಕೊಂಡು ಸರ್ವಸಮ್ಮತವಾದ ತೀರ್ಮಾನಕ್ಕೆ ಬಪ್ಪದು ರಜಾ ಕಷ್ಟವೇ.ಯಾಕೆ ಹೇಳಿದರೆ,ಎರಡೂ ದೃಷ್ಟಿಕೋನಂಗಳಲ್ಲಿ ಸತ್ಯಾಂಶ ಇಕ್ಕು.

  3. ಜಾತಿ, ವರ್ಣ ಮತ್ತೆ ಆಶ್ರಮ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟ ಲೇಖನ.
    ಕುಣಿಯಲಾಗದ್ದ……. ರಂಗಸ್ಥಳ ಡೊಂಕು ಹೇಳ್ತ ಹಾಂಗೆ ತನ್ನಿಂದ ಆಗದ್ದ ಪ್ರತಿಯೊಂದು ಕಾರ್ಯಕ್ಕೂ ಇನ್ನೊಬ್ಬನ ದೂರುವದು ಕೆಲವರ ಜಾಯಮಾನ.
    ಇಂದು ಬ್ರಾಹ್ಮಣರು ಉನ್ನತ ಉದ್ಯೋಗಲ್ಲಿಯೋ, ಸ್ಥಿತಿಲಿಯೋ ಇದ್ದರೆ ಅದು ಅವರ ಸ್ವಂತ ಪ್ರತಿಭೆಂದ ಹೊರತು ಆರತ್ರೂ ಬೇಡಿ ಸಿಕ್ಕಿದ್ದೂ ಅಲ್ಲ ಅಥವಾ ಸರ್ಕಾರದ ರಿಸರ್ವೇಶನ್ ನೀತಿಂದಲೂ ಅಲ್ಲ.
    ಎಂತ ಹೇಳಿರೂ ಸಹಿಸಿಗೊಂಡು ಕೂರ್ತ ಬ್ರಾಹ್ಮಣ ವರ್ಗ ಇದ್ದ ಕಾರಣ, ಅವರ ಮೇಗೆ ದೂರು ಹಾಕಿಂಡು ಲಾಗ ಹೊಡಾವಲಾವ್ತು.
    ಕೆಲವು ಪತ್ರಿಕೆಗಳ ವರದಿ ನೋಡಿರೆ ನವಗೆ ನಮ್ಮವೇ ವೈರಿಗೊ.

  4. ಲೇಖನ ಲಾಯ್ಕ ಆಯಿದು. ಹಿಂದೂ ಸಮಾಜದ ಬಗ್ಗೆ ಪೇಜಾವರ ಶ್ರೀಗಳ ಕಳಕಳಿಯ ಪ್ರಶ್ನಿಸುಲೆ ಎಡಿಯ. ಸಹಪಂಕ್ತಿ ಭೊಜನದ ಹಾಂಗಿಪ್ಪ ವಿಷಯ ಬಿಟ್ಟು ಹಿಂದೂ ಸಮಾಜಲ್ಲಿಪ್ಪ ಬೇರೆ ಕೆಲವು ತಪ್ಪುಗಳ ಮೊದಲು ಸರಿಮಾಡಿಗೊಲ್ಲೆಕ್ಕು.
    ೧) ನಮ್ಮ ಊರಿನ ಕೆಲವು ದೇವಸ್ಠಾನಂಗಳಲ್ಲಿ ಇಂದಿಂಗೂ ಎಲ್ಲಾ ಹಿಂದುಗೊಕ್ಕೆ ಪ್ರವೇಶ ಇಲ್ಲೆ. ನಮ್ಮ ಸಮಾಜ ಹಿರಿಯರು ಸೇರಿ ಇದರ ಸರಿ ಮಾಡೆಕ್ಕು.
    ೨) ನಾವು ಪುರ್ಬುವನ್ನೊ, ಅಡಕ್ಕೆ ಕಛೊಡ ಮಡ್ಳೆ ಬಂದ ಬ್ಯಾರಿಯ ಚಾವಡಿಲಿ ಕೂರ್ಸಿ ಮಾತಾಡ್ಸುತ್ತು, ಆದರೆ ಹಿಂದುಗೊ ಆಗಿಪ್ಪ ಕೆಳ ಜಾತಿ ಅವರ ಮನೆ ಹೊಸ್ತಿಲು ದಾಂಟುಲೆ ಬಿಡ್ತಿಲ್ಲೆ.

  5. ಶುದ್ದಿ ಲಾಯಕ ವಿವರಣೆ ಆಯ್ದು. ಒಪ್ಪ.

    ಮಾತಿನ ಮೇಲ್ಮೈಯ ಮಾತ್ರ ತೆಕ್ಕೊಂಡು ಅದರ ಅಂತರಾಳ ಭಾವನೆಯ ಅರ್ಥಮಾಡಿಗೊಂಬ ವ್ಯವಧಾನೆಕ್ಕೆ ಕೂಡ ಹೋಗದ್ದೆ ಬ್ರಾಹ್ಮಣರು ಸಾತ್ವಿಕರು ಎಂಬ ಸ್ಥಿತಿಯ ದುರುಪಯೋಗಪಡುಸಿಗೊಂಬ ವಿಚಾರವಾದಿಗೊ ಸಮಾಜದ ಸ್ವಾಸ್ಥ್ಯವ ಕಲಂಕುಸಿ ದೊಡ್ಡತನ ಹೇಳ್ಸಿಗೊಂಬ ಹುಂಬಂಗೊ. ಅವ್ವು ಮದಾಲು ಮಾಡೆಕ್ಕಪ್ಪದು – “ಪ್ರಪಂಚಲ್ಲಿ ಜಾತಿ ಮತ ಧರ್ಮ ಯಾವುದೂ ಇಲ್ಲೆ., ಹೆಣ್ಣು ಗಂಡು ಹೇಳ್ವ ಎರಡೇ ಜಾತಿ” ಹೇಳ್ವದಕ್ಕೆ ಹೋರಾಟಮಾಡ್ಳಿ. ಅಂತಹ ವಿಷಯಕ್ಕೆ ವಿವರ ವಿಚಾರಧಾರೆ ಹೆರಡುಗೊ? ತಲೆ ಹೋಕು ಹೇದು ಈ ತಿಳಿಗೇಡಿ ಹೇಡಿಗೊಕ್ಕೆ ಗೊಂತಿದ್ದು. ಹೀಂಗಿಪ್ಪ ಬುದ್ದಿವಂತರು ದೊಡ್ಡಕ್ಕೆ ಬರದ್ದೆ ಹೇಳಿ ಗ್ರೇಶಿಗೊಂಡರೆ ಅದು ಅವರ ಅವಿವೇಕವೇ ಸರಿ ಹೇಳಿ ಹೇಳಿಗೊಂಬದು – ‘ಚೆನ್ನೈವಾಣಿ’

  6. ಬ್ರಾಹ್ಮಣ ಸಂಪ್ರದಾಯದ ಬಗ್ಗೆ ತುಂಬ ಲಾಯ್ಕಕೆ ಬರದ್ದದು ಕೊಶಿ ಆತು.

    ‘ಬೆತ್ತಲೆ’ ಲೇಖಕಂಗೆ ಧಿಕ್ಕಾರ ಹಾಕುವ° ನಾವೆಲ್ಲ. ಈ ಮನುಷ್ಯ ಇನ್ನಾದರೂ ಒಂದು ಅಂಗಿ ಹಾಕಿಗೊಂಡು ಬರೆಯಲಿ, ಬರೇ ಹಿಂದೂ ಸಮಾಜವ ಬೆತ್ತಲೆ ಮಾಡಿದ್ದು ಸಾಕು. ಹೀಂಗಿಪ್ಪ ಅವಕಾಶವಾದಿ, ಸಮಯಸಾಧಕಂಗಳ ಆದಷ್ಟು ದೂರ ಮಡಗುವದು ಒೞೆದು. ಪೇಜಾವರ ಸ್ವಾಮೀಜಿ ಬ್ರಾಹ್ಮಣ ಸಭೆಲಿ ಹೇಳಿದ್ದರ ತಿರುಗಿಸಿ ಏನೆಲ್ಲ ಬರವಲೆ ಈ ಮನುಷ್ಯಂಗೆ ಅಧಿಕಾರ ಕೊಟ್ಟದು ಆರು? ಅದೂ ಪೇಪರಿನ ಮುಖಪುಟಲ್ಲಿ ಹೀಂಗೆಲ್ಲ ಬರೆಕಾದರೆ? ತಮ್ಮ ವೈಯಕ್ತಿಕ ದ್ವೇಷ ಸಾಧನೆಗೆ ಈ ಮನುಷ್ಯ ಪತ್ರಿಕೆಯ ಬಳಸುತ್ತಾ ಇಪ್ಪದು ಮಾತ್ರ ಖಂಡನೀಯ. ಈ ‘ಬೆತ್ತಲೆ’ ಲೇಖಕರ ಒಂಡು ಟೀಮ್ ಇಡೀ ಕನ್ನಡಪ್ರಭ ಪೇಪರಿಂಗೆ ಗುಳೇ ಹೋಯಿದು. ಅವು ಮೊದಲು ಇತ್ತಿದ್ದ ಪೇಪರಿಲ್ಲಿ ಎಂತೆಲ್ಲ ಗೋಟಾಲ ಮಾಡಿದ್ದವು ಹೇಳ್ತದು ಆದಷ್ಟು ಬೇಗನೆ ಹೆರ ಬರಲಿ.

  7. ಒಪ್ಪಣ್ಣ ಒಳ್ಳೆ ರೀತಿಲ್ಲಿ ವಿಷಯವ ಬೈಲಿಂಗೆ ವಿವರುಸಿದ್ದೆ… ಇದರ ಜೊತೆಗೆ ಇನ್ನೊಂದು ಪ್ರಧಾನ ಸಮಸ್ಯೆ ಹೇಳಿದರೆ ಬ್ರಾಹ್ಮಣರಲ್ಲಿ ಆತ್ಮ ವಿಶ್ವಾಸದ ಕೊರತೆ… ಸಮಾಜಲ್ಲಿ ‘ಆನು ಬ್ರಾಹ್ಮಣ’ ಹೇಳಿ ಎದೆಯುಬ್ಬಿಸಿ ಹೇಳುವ ಬ್ರಾಹ್ಮಣರ ಕಾಮ್ಬಲೆ ಸಿಕ್ಕುದು ಕಡಮ್ಮೆ… ಒಬ್ಬ ಮುಸ್ಲಿಂ ಮತ್ತು ಒಬ್ಬ ಬ್ರಾಹ್ಮಣ ಜೊತೆಗೆ ಇದ್ದರೆ ಆ ಮುಸ್ಲಿಂ ‘ಆನು ಮುಸ್ಲಿಂ’ ಹೇಳಿ ಹೇಳಿಗೊಂಡು ಕ್ರಮ ಪ್ರಕಾರವಾಗಿ ಧೈರ್ಯವಾಗಿ ‘ನಮಾಜು’ ಮಾಡುತ್ತ… ಅದೇ ಈ ಬ್ರಾಹ್ಮಣ ‘ಆನು ಬ್ರಾಹ್ಮಣ’ ಹೇಳಿ ಧೈರ್ಯಲ್ಲಿ ಸಂಧ್ಯಾವಂದನೆ ಮಾಡುದು ಕಾಣುತ್ತಿಲ್ಲೆ… ಸಾಧ್ಯವಿದ್ದಷ್ಟು ಈ ಆತ್ಮವಿಶ್ವಾಸವ ನಾವು ಬೆಳೆಸಿಗೊಲ್ಳೆಕ್ಕು…

  8. ಬಹುಶ ಬ್ರಾಹ್ಮಣರ ಬೈದು ಅರಗಿಸಿಗೊ೦ಬದು ತು೦ಬಾ ಸುಲಭ.
    ಸಾಧಾರಣ ಒಳುದೋರ ತ೦ಟೆಗೆ ಹೋಗದ್ದೆ ತಮ್ಮ ಪಾಡಿ೦ಗೆ ನಾವಾತು ನಮ್ಮ ಕೆಲಸ ಆತು ಹೇಳಿ ಇಪ್ಪ ಬ್ರಾಹ್ಮಣರು ಅದೆ೦ತಕ್ಕೆ ಎಲ್ಲೋರ ವಿಮರ್ಶೆಗೂ ಆಹಾರ ಆವ್ತವು ಅರ್ಥ ಆವ್ತಿಲ್ಲೆ. ನಿಜವಾಗಿಯೂ ಬ್ರಾಹ್ಮಣರು ಅವರ ಬುದ್ದಿಯ ಒಳುದೋರ್೦ಗೆ ಉಪದ್ರ ಮಾಡುಲೆ ಉಪಯೋಗಿಸಿದ್ದರೆ ಇ೦ದು ಸಮಾಜ ಹೀ೦ಗೆ ಇರ್ತಿತ್ತಿಲ್ಲೆ.

    ಸಣ್ಣಾದಿಪ್ಪಗ ಶಾಲೆಗೆ ಹೋಪಗಳೆ ಇದ್ದದು ಇ೦ತಾದ್ದೆ ಬ್ರಾಹ್ಮಣರ ಅವಹೇಳನ ಮಾಡುವ ಅದೆಸ್ಟು ಪದ್ಯ೦ಗ? ‘ಭ್ಹಟ್ಟನ ಜುಟ್ಟಿನ’ ಮೇಲೆ ಸುಮಾರು ‘ದಮನಿಸಲ್ಪಟ್ಟ’ ಜನ೦ಗೊಕ್ಕೆ ಕಣ್ಣಾದರೆ ಇನ್ನೂ ಹಲವಕ್ಕೆ ನಮ್ಮೊರ ‘ಪುಳಿಕಜಿಪ್ಪು’ ಹೇಳಿ ನೆಗೆ ಮಾಡುವ ಅಭ್ಯಾಸ.
    ಬ್ರಾಹ್ಮಣರು ಕಲಿಶುವ ವಿದ್ಯೆ ಜನ೦ಗೊಕ್ಕೆ ಬೇಕು, ಬ್ರಾಹ್ಮಣರು ಕೊಡುವ ಮದ್ದು ಜನ೦ಗೊಕ್ಕೆ ಬೇಕು, ಆದರೆ ಬ್ರಾಹ್ಮಣರು ಬೇಡ!

  9. ಭಾರತದ ಭವ್ಯ ಇತಿಹಾಸವ ಇಲ್ಯಾಣ ಹಳಬರೇ ಬರದು ಜೆನಂಗವಕ್ಕೆ ತಿಳುಸಿ ಕೊಟ್ಟಿದ್ದರೆ ನಮ್ಮ ಪರಂಪರೆ ಒಳುತ್ತಿತು, ಬ್ರಾಹ್ಮಣರ ಅವಹೇಳನ ನಿಲ್ಲುತಿತಾಯ್ಕು. ಹೆರಾಣವು ಹೇಳಿದ ಆ ಇತಿಹಾಸಲ್ಲಿ ಅದೆಷ್ಟು ಲೊಟ್ಟೆಗೊ ಇದ್ದೋ ಏನೋ ? ತಾಜಮಹಲಿನ ನಿಜಸಂಗತಿಯ ಹಾಂಗೇ ಎಷ್ಟೋ ಸತ್ಯಂಗೊ ಮಣ್ಣಿನ ಅಡಿಲಿ ಹುಗುದು ಹೋಯಿಕ್ಕು. ಆರೋ ತಪ್ಪು ಮಾಡಿದ್ದಕ್ಕೆ ಆರಿಂಗೋ ಬರೆ ಹಾಕಿದ ಹಾಂಗಾತು. ಒಪ್ಪಣ್ಣನ ಗಂಭೀರ ಸುದ್ದಿಗೆ ಹೀಂಗೊಂದು ಕುಂಞಿ ಒಪ್ಪ.

  10. ವರ್ಣಾಶ್ರಮದ ಬಗ್ಗೆ ವಿವರಣೆ ಕೊಟ್ಟು ಶುದ್ಧಿಯ ವರ್ಣ ಚೆಂದ ಆಯಿದು.ಒಂದೊಪ್ಪವೂ ಲಾಯಿಕ ಆಯಿದು.ಧನ್ಯವಾದಂಗೋ!!!!

  11. ಇದು ಒ೦ದು ಗ೦ಭೀರ ಶುದ್ದಿಯೇ ಸೈ ಒಪ್ಪಣ್ಣಾ.. ಒಪ್ಪ೦ಗೊ.

  12. ಬ್ರಾಮ್ಮರ ತೆಗಳುದು, ಹೀನೈಸುದು ಅನ್ಯ ಕೋಮಿನವಕ್ಕೆ ಒಂದು ಫೇಷನ್ ಆಯಿದು. ಇದು ಖಂಡನೀಯ.
    {ಈಗಾಣೋರು ಮನುಸ್ಮೃತಿಯ ಬಿಟ್ಟು “ಭಾರತದ ಸಂವಿಧಾನ”ವ ಸ್ವೀಕರುಸಿ ಆಯಿದು} ..
    ಭಾರತೀಯರೆಲ್ಲ ‘ಭಾರತ ಸಂವಿಧಾನ’ವ ಒಪ್ಪಿ ಸ್ವೀಕರಿಸಿ ಆಯಿದು. ಅದರ ಪ್ರಕಾರವೇ ನಡಕೊಂಡು ಬರೆಕ್ಕಪ್ಪದು ಎಲ್ಲೋರ ಕರ್ತವ್ಯ.
    ಇದೇ ಸಂವಿಧಾನ ಎಲ್ಲ ಮತ, ಜಾತಿ ಯೋರಿಂಗೆ ಸಮಾನ ಸ್ವಾತಂತ್ರ್ಯ ಕೊಟ್ಟಿದು. ಇನ್ನೊಬ್ಬನ ಅಭಿಪ್ರಾಯವ/ನಂಬಿಕೆಯ ಮನ್ನಿಸೆಕ್ಕು ಹೇಳ್ತದರನ್ನೂ ಹೇಳಿ ಕೊಟ್ಟಿದು. ಬಾಕಿ ಎಲ್ಲ ನಂಬಿಕೆಯ ,ನಂಬಿದೋರ ಕಾಲು ಎಳೆಯದ್ದ ಜೆನ , ಬ್ರಾಮ್ಮರ ನಂಬಿಕೆಗಳ ಮಾಂತ್ರ ಏಕೆ ವಿಮರ್ಶೆ ಮಾಡುದು, ಅಥವಾ ಹೀನೈಸುದು ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×