Oppanna.com

ದೀಪಾವಳಿ ದಿನ ಮಾತಾಡಿದ ‘ದೀಪಂಗಳ’ ಶುದ್ದಿ..

ಬರದೋರು :   ಒಪ್ಪಣ್ಣ    on   16/11/2012    11 ಒಪ್ಪಂಗೊ

ಅದಾಗಲೇ ದೀಪಾವಳಿಯೂ ಕಳಾತು.
ಬೆಣಚ್ಚಿನ ಹಬ್ಬಲ್ಲಿ ಹೊಸ ಜಗತ್ತಿನ ಎಲ್ಲೋರುದೇ ಕಂಡವು.
ಪ್ರಜಾವರ್ಗವ ಬಲಿಚಕ್ರವರ್ತಿ ಬಂದು ನೋಡುವ ಈ ಹಬ್ಬದ್ದಿನ ಎಲ್ಲೋರುದೇ ಕೊಶಿಲಿತ್ತಿದ್ದವು.
ಕೇರಳಲ್ಲಿ ಓ ಮೊನ್ನೆ ಓಣ ಹಬ್ಬಕ್ಕೇ ಬಂದು ಹೋಯಿದ°; ಪುನಾ ಬಲಿಬಪ್ಪಲೆ ಬಲಿಗೆ ಪುರ್ಸೊತ್ತಿರ! 😉
ಅದಿರಳಿ.

ಬೈಲಿಲಿಯೂ ದೀಪಾವಳಿಯ ಗವುಜಿ ಜೋರೇ.
ಜಾಣ ಎರಡುಪೆಕೆಟು ‘ಬೀಡಿ’ ಒಂದೇ ದಿನ ಮುಗುಶಿದ್ದನಾಡ, ಮೊನ್ನೆ ಸುಭಗಣ್ಣ ಕೊಶೀಲಿ ಹೇಳುಸ್ಸು ಕೇಳಿತ್ತು.
ಗುದ್ದು ಪಟಾಕಿ ತಾರದ್ದಕ್ಕೆ ದೊಡ್ಡಳಿಯ° ಮನೆಯ ಎಲ್ಲೋರಿಂಗೂ ಗುದ್ದಿದ್ದನಾಡ.
ಬೋಚಬಾವ° ಬೆದ್ರಹಿಂಡ್ಳು ಹೇದು ತಪ್ಪಿ ಗರ್ನಾಲು ಹೊಟ್ಟುಸಿ ಗುಂಯ್ ಶಬ್ದ ಇನ್ನೂ ಕೆಮಿಲಿ ಕೇಳಿಂಡೇ ಇದ್ದು.
ಹೊಸ ಮದುಮ್ಮಾಯಂದ್ರೆಲ್ಲ ಗಳುಗಳ ಕಂಡಿಕ್ಕಿ ಬೆರಳು ತುಂಬುಸೆಂಡು ಬಪ್ಪ ಸಮೆಯ.
ಅಂತೂ –ಎಲ್ಲೋರಿಂಗೂ ಗವುಜಿಯೇ.

ಆಚಮನೆ ದೊಡ್ಡಪ್ಪನಲ್ಲಿ ಹಬ್ಬದ ಅಮಾಸೆಗೇ ತಿತಿ.
ಹಬ್ಬದ್ದಿನವೇ ದೊಡ್ಡಜ್ಜ° ತೀರಿ ಹೋಗಿಪ್ಪಾಗ ಆ ಮನೆಲಿ ಪರಿಸ್ಥಿತಿ ಹೇಂಗಾದಿಕ್ಕು, ಅಪ್ಪೋ!? ಈಗ ಅದರ ನೆಂಪುಮಾಡಿ ಕೂಗಲೆ ಆರೂ ಸಣ್ಣ ಅಲ್ಲ ಹೇಳುವೊ°.
ಮುನ್ನಾಣದಿನವೇ ನೆರೆಕರೆ ಹೇಳಿಕೆ ಹೇಳುಸ್ಸು ಮರಿಯಾದಿ, ಹಾಂಗೆ ಅಮಾಸೆ ಮುನ್ನಾಣ ದಿನ – ನರಕ ಚತುರ್ದಶಿ ಗವುಜಿ ಎಡೆಲಿ ದೊಡ್ಡಪ್ಪ° ಹೇಳಿಕೆ ಮಾಡಿದವು.
ಹೇಳಿಕೆ ಮಾಡ್ಳೇದು ಮುನ್ನಾದಿನ ಇರುಳು ತೋಟಲ್ಲೇ ಬಪ್ಪಾಗ – ಪಕ್ಕನೆ ಆರು ಬಂದದು ಹೇಳಿಯೇ ಗೊಂತಾಗ. ಏಕೆ?
~
ದೊಡ್ಡಪ್ಪಂಗೆ ಅವರದ್ದೇ ಆದ ಮೂರುಬೆಟ್ರಿ ಲೈಟು ಒಂದಿದ್ದು.
ಅದರ -ಪೇಲೆ ತಲೆ ಕಡೆ ಹಿಡಿ- ಎಲ್ಲ ಹಳತ್ತಾಗಿ, ಹೆರಾಣ ಷ್ಟೀಲಿನ ಬಣ್ಣ ಹೋಗಿ ಒಳಾಣ ಹಿತ್ತಾಳಿ ಬಣ್ಣ ಕಾಣ್ತು. ಆದರೂ ದೊಡ್ಡಪ್ಪ° ಹಿಡಿಸ್ಸು ಅದೇ ಲೈಟಿನ. ಹಾಂಗಾಗಿ ಅವು ತೋಟಲ್ಲಿ ಬಪ್ಪಗಳೇ ಕೆಂಪು ನಮುನೆ ಬೆಣಚ್ಚು ಕಂಡು ಗೊಂತಕ್ಕು – ಹೋ, ಇದು ಆಚಮನೆ ದೊಡ್ಡಪ್ಪನೇ ಹೇದು. ಆದರೆ ನಿನ್ನೆ ಬಪ್ಪಗ ತಂದದು ಭಯಂಕರ– ದೊಡ್ಡಬಾವನ ಬೈಕ್ಕಿಂದಲೂ ಜಾಸ್ತಿದೋ ಏನೋ – ಪ್ರಕಾಶಮಾನ ಲೈಟು. ಜಾಲಿಂಗೆತ್ತುವನ್ನಾರ ದೊಡ್ಡಪ್ಪ° ಹೇದು ಅಂದಾಜಿಯೇ ಆತಿಲ್ಲೆ ಇದಾ! ಕೈಲಿ ನೋಡಿರೆ- ಸಾಲಿಗ್ರಾಮದ ನಮುನೆ ಕರಿಬಣ್ಣದ ಸಪೂರ ಲೈಟು. ಲೈಟು ಸಣ್ಣದೇ ಆಗಿರಳಿ, ಎಂತಾ ಬೆಣಚ್ಚು, ಹು!!
ಬಂದು ಎಲೆತಿಂಬಗ ಮೆಲ್ಲಂಗೆ ಕೇಳಿದೆ – “ಬೇರೆ ಲೈಟು ತೆಕ್ಕೊಂಡಿರೋ ದೊಡ್ಡಪ್ಪ°” ಹೇದು. ಅಮೇರಿಕಂದ ಮಾಷ್ಟ್ರುಮಾವನ ಮಗ° ತಂದದೂ– ಹೇಳಿದವು.
“ಹೋ ಹೋ, ಅಪ್ಪೋ” ಬೆಣಚ್ಚು ಒಳ್ಳೆತ ಇದ್ದು – ಮದಲಾಣ ಲೈಟಿನ ಹಾಂಗಲ್ಲಪ್ಪೋ!
ಮದಲಾಣದ್ದು ಹೇದರೆ ಯೇವದು? “ಮೂರುಬೆಟ್ರಿಲೈಟು ಇತ್ತಲ್ಲದೋ ದೊಡ್ಡಪ್ಪ°, ಅದು”.
ಹ್ಮ್, ಅದರಿಂದಲೂ ಮದಲಿಂಗೆ ಲಾಟ್ಣು ಇದ್ದತ್ತು, ಅದು ಇನ್ನೂ ಕಮ್ಮಿ ಬೆಣಚ್ಚಿಂದು – ಹ್ಹ ಹ್ಹ! ಹೇಳಿದವು.
~

ಕಾಲ ಹೋದ ಹಾಂಗೆ ದೀಪಂಗಳೂ ಬದಲಾಯಿದಲ್ಲದೋ?
ಆಚಮನೆ ದೊಡ್ಡಪ್ಪನ ಹತ್ತರೆ ಮಾತಾಡುವಗ ಹಲವು ದೀಪಂಗೊ, ಬೆಣಚ್ಚುಗೊ ನೆಂಪಾತು.
ಬದಲಾದ ಪರಿಸ್ಥಿತಿಲಿ ಒಂದರಿ ಹಳತ್ತರ ನೆಂಪು ಮಾಡುವೊ°, ಎಂತ ಹೇಳ್ತಿ?

ಕಾಲ ಯೇವದೇ ಇರಳಿ, ಜ್ಯೋತಿ ನಿರಂತರ

ದೀಪನ ಶುದ್ದಿ ಮಾತಾಡ್ಸು ಹೇಳುವಗ ಚೂರಿಬೈಲು ದೀಪಕ್ಕನೋ ಹೇದು ಸಂಶಯ ಬಕ್ಕು; ಅಲ್ಲ ದೊಡ್ಡಮಾಣಿ ದೊಡ್ಡಕ್ಕನೋ ಹೇದು ಇನ್ನು ಕೆಲವು ಜೆನ ಗ್ರೇಶುಗು. ಅವರ ಶುದ್ದಿ ನಾವು ಮಾತಾಡಿರೆ ಅವರ ಮನೆಯೋರು ಬಡಿಗೆ ತೆಗೆಯವೋ!?
ಅದಲ್ಲ, ಬೆಣಚ್ಚಿಂಗಿರ್ತ ಸಾಧನಂಗಳ ಬಗ್ಗೆ ಮಾಂತ್ರ. ಆತೋ!

~

ಕಿಚ್ಚು:

ನಾಗರಿಕತೆ ಆರಂಭ ಕಾಲಲ್ಲೇ ಕಿಚ್ಚು ಕಂಡು ಹಿಡುದ್ದವು.
ಕಂಡು ಹಿಡುದ್ದವು ಹೇಳುದರಿಂದಲೂ – ಕಿಚ್ಚಿನ ಉಪಯೋಗುಸಲೆ ಅರಡಿಗಾಗಿಂಡಿದ್ದತ್ತು. ಕಿಚ್ಚು ಅರಡಿಗಾದ ಮತ್ತೆಯೇ “ನಾಗರಿಕತೆ ಆರಂಭ” ಆತು ಹೇಳಿರೂ ತಪ್ಪಲ್ಲ. ಕಿಚ್ಚಿನ ಕಂಡು ಹಿಡಿಯಲೆ ಎಂತ ಇದ್ದು, ಅಲ್ಲದೋ?
ಜಿಂಕೆಯೋ, ಮೊಲವೋ ಗಾಬೆರಿಲಿ ಓಡುವಗಳೋ ಮತ್ತೊ ಬೆಣಚ್ಚುಕಲ್ಲು ಒಂದಕ್ಕೊಂದು ತಿಕ್ಕಿ ಕಿಚ್ಚಿನ ಕಿಡಿ ಎದ್ದು ಒಣಕ್ಕು ಬಜಕ್ಕರೆಗೆ ತಾಗಿ ಕಿಚ್ಚು ಹಿಡುದ್ದು ಮಡಿಕ್ಕೊಳಿ – ಇಡೀ ಕಾಡಿಂಗೆ ಕಾಡೇ ಕಾಳ್ಗಿಚ್ಚಿಂಗೆ ಹೊತ್ತಿ ಹೋಮ ಆಗಿ ಹೋಕು!
ಅತವಾ – ಉಲ್ಕೆಯೋ, ಅಗ್ನಿಪರ್ವತವೋ ಮಣ್ಣ ಇದ್ದರೆ ಇನ್ನೂ ದೊಡ್ಡ ಕಿಚ್ಚು ಇಕ್ಕು.
ಈ ಕಿಚ್ಚು ಒಂದರಿಯೇ ಹೊತ್ತಿ ಮುಗುಸ್ಸರ ಬದಲು, ಹಿಡುದು, ಒಳಿಶಿಂಬದು ಹೇಂಗೆ ಹೇಳ್ತರ ಮನುಷ್ಯ ಅರ್ತಪ್ಪಗಳೇ ಅವ° ನಾಗರಿಕ ಆದ° – ಹೇದು ಮಾಷ್ಟ್ರುಮಾವ° ಒಂದೊಂದರಿ ಹೇಳುಲಿದ್ದು.
ಅವ° ಹೇದರೆ ಆರು? ಆರೋ ಒಬ್ಬ° ಅಲ್ಲ, ನಾವೇ, ನಮ್ಮ ಪೂರ್ವಜರೇ!

ಕಿಚ್ಚಿನ ಕೊಳ್ಳಿಯ ನಂದದ್ದ ಹಾಂಗೆ ಸೌದಿ ಹಾಕಿ ನೋಡಿಗೊಂಬಲೆ ಸುರು ಮಾಡಿದ್ದು ದೀಪದ ಪ್ರಥಮ ಹೆಜ್ಜೆ.
ಛಳಿಕಾಸಲೆ, ಬೆಂದಿ ಬೇಶಲೆ, ಎದುರಾಳಿ ಓಡುಸಲೆ, ಕಾಡುಪ್ರಾಣಿಗಳಿಂದ ರಕ್ಷಿಸೆಂಬಲೆ – ಎಲ್ಲದಕ್ಕೂ ಕಿಚ್ಚೇ ಮೊದಲ ಅಸ್ತ್ರ.

ಎಣ್ಣೆ ದೀಪ:

ಕಿಚ್ಚಿನ ಸೌದಿಲೇ ಮಡಗುಸ್ಸು ಕಲ್ತ ಮತ್ತೆ, ಒಂದೊಂದೇ ಹಂತ ಮೇಗೆ ಏರಿತ್ತು. ಸೌದಿಯೇ ಆಯೇಕು ಹೇದು ಇಲ್ಲೆ, ಎಂತ ಹಾಕಿರೂ ಹೊತ್ತುತ್ತು. ಹಾಂಗಾರೆ “ಎಂತದೂ” ಹೊತ್ತಲೆ ಎಂತ ಕಾರಣ? “ಕೊಬ್ಬಿನಂಶ”.
ಹಾಲಿಂದ, ಮೊಸರಿಂದ, ದನಗಳ ಮೈಂದ ತೆಗದ ತುಪ್ಪವ ಸೌದಿಗೆ ಎರದವು – ಬುರೂನೆ ಹೊತ್ತಿತ್ತು. ಹಾಂಗಾಗಿ ಸಸ್ಯಜನ್ಯ / ಪ್ರಾಣಿಜನ್ಯ ಕೊಬ್ಬು ಕಿಚ್ಚಿನ ಆಕರ್ಷಿಸುತ್ತು ಹೇದು ಅಜ್ಜಂದ್ರಿಂಗೆ ಬೇಗ ಗೊಂತಾತು.
ಸುಲಾಭಲ್ಲಿ ಸಿಕ್ಕುತ್ತ ಧಾನ್ಯ – ಎಳ್ಳಿನ ಬೀಜಲ್ಲಿ ತುಂಬ ಎಣ್ಣೆ ಇದ್ದು ಹೇಳುಸ್ಸು ಕಂಡುಗೊಂಡವು. ಎಳ್ಳಿಂಗೆ ಸಂಸ್ಕೃತಲ್ಲಿ ತಿಲ ಹೇಳ್ತ ಕಾರಣ, ಎಳ್ಳಿಂದ ತೆಗದ “ತೈಲ” ಕಿಚ್ಚಿಂಗೆ ಭಾರೀ ಕೊಶಿ ಹೇಳ್ತದೂ ಅವಕ್ಕೆ ಗೊಂತಾತು.
ಒಂದು ಸಣ್ಣ ಹತ್ತಿ ಉಂಡೆಯ ಎಣ್ಣಗೆ ಮಡಗಿರೆ, ಅದರ ಕೊಡಿಯಂಗೆ ಕಿಚ್ಚುಕೊಟ್ಟರೆ, ಬೇಕಾದಷ್ಟೇ ಹೊತ್ತಿಂಡು ತುಂಬ ಹೊರ್ತು ಒಟ್ಟಿಂಗಿರ್ತು ಹೇಳ್ತದರ ಕಂಡುಹಿಡುದವು.
ಆರು? ಉಮ್ಮಪ್ಪ, ಈಗಾಣೋರ ಹಾಂಗೆ ಕಂಡುಹಿಡಿದವರು – ಇಂತವರು ಹೇದು ಹೆಸರು ಬರೆತ್ತ ಕ್ರಮ ಅವಕ್ಕಿತ್ತಿಲ್ಲೆ!

ಮಿಂಚು – ಗುಡುಗು ಮಳೆ-ಗಾಳಿ ಕಸ್ತಲೆ-ಬೆಣಚ್ಚು ಇವೆಲ್ಲದರನ್ನೂ ಯೇವದೋ ಒಂದು ಅಗೋಚರ ಶೆಗ್ತಿ ನಿಯಂತ್ರಣ ಮಾಡ್ತಾ ಇದ್ದು ಹೇಳ್ತರ ನೆಂಬಿಂಡವು ಅಜ್ಜಂದ್ರು. ಆ ಅಗೋಚರ ಶೆಗ್ತಿಯ ಪ್ರತಿರೂಪ ಆಗಿಂಡು ಈ ಒಂದು “ಜ್ಯೋತಿ”ಯ ಹೊತ್ತುಸಿ ಮಡಗುಸ್ಸು ಅವರ ಪ್ರತೀತಿ ಆತು.
ಆದಿಕಾಲಲ್ಲಿ ಆರಂಭ ಆದ ಈ ಕ್ರಮ ಇಂದಿಂಗೂ ನೆಡೆತ್ತಾ ಇದ್ದು. ದೇವರ ಪೂಜೆ ಮಾಡ್ತರೆ ಮದಾಲು ಒಂದು ದೇವರ ದೀಪ ಹೊತ್ತುಸಲೆ ಹೇಳುಗು ಬಟ್ಟಮಾವ°. ಹೋಮ ಮಾಡ್ತರೆ ಅಂತೂ – ಕಿಚ್ಚಿಂಗೇ ಪೂಜೆ!

~

ಎಳ್ಳೆಣ್ಣೆ ಹಾಕುತ್ತ ಕಾಲುದೀಪಕ್ಕೆ ದೇವರದೀಪ ಹೇಳಿಯೇ ಹೇಳ್ತದು ಪರಿಭಾಷೆ ಆಯಿದು. ಅದೇ ದೇವರದೀಪದ ಬಟ್ಳಿನ ಸಂಕೊಲೆಲಿ ಕಟ್ಟಿ ನೇಲ್ಸಿರೆ ಅದು ನಂದಾದೀಪ ಆತು. ಇಷ್ಟುದ್ದ ಲೋಹತುಂಡಿಲಿ ಹೊತ್ತುಸಿರೆ ಆರತಿ ಆತು.
ಮಣ್ಣಿಲಿಯೋ- ಬರಣಿ ತುಂಡಿಲಿಯೋ ಮಣ್ಣ ಗುಂಡಿ ಮಾಡಿ ಅದಕ್ಕೆ ಎಳ್ಳೆಣ್ಣೆ ಎರದು ಬತ್ತಿ ಮಡಗಿ ಹೊತ್ತುಸಿರೆ ಅದು ಹಣತೆ / ತಿಬಲೆ ಆತು. ಅದೇ ಎಣ್ಣೆ, ಅದೇ ಬತ್ತಿ, ಅದೇ ಜ್ಯೋತಿ, ಆದರೆ ಹೆಸರು ಮಾಂತ್ರ ಬೇರೆ.
ಅದೇ ಎಣ್ಣೆ ಹೇದೆ ಅಲ್ಲದೋ – ಅಪ್ಪು; ಸಾಮಾನ್ಯವಾಗಿ ಎಳ್ಳೆಣ್ಣೆದೇ ದೀಪ ಮಾಡ್ಸು.
ಅದಲ್ಲದ್ದೆ ತೆಂಗಿನ ಕಾಯಿಂದ ತೆಗದ ತೆಂಗಿನೆಣ್ಣೆ, ದನದ ಹಾಲಿಂದ ಪರಿಷ್ಕಾರ ಮಾಡಿದ ಕೊಬ್ಬು “ತುಪ್ಪ” – ಹೀಂಗಿರ್ಸ ಬೇರೆಬೇರೆ ನಮುನೆ ಎಣ್ಣೆಗಳನ್ನೂ ಹಾಕುಲಕ್ಕು ದೇವರಿಂಗೆ.

~

ದೇವರಿಂಗೆ ಅಲ್ಲದ್ದೆ ನಮ್ಮ ನಿತ್ಯ ಬಳಕ್ಕೆಗೆ ಇನ್ನೂ ಹಲವು ಎಣ್ಣೆಗೊ ತೆಗಕ್ಕೊಂಡು ಇತ್ತವಾಡ ಮದಲಿಂಗೆ.
ಅದೆಂತೆಲ್ಲ? ಪೊನ್ನೆ ಕಾಯಿಯ ಪೊನ್ನೆಣ್ಣೆ (ಹೊನ್ನೆಣ್ಣೆ), ಹತ್ತಿ ಬಿತ್ತಿನ ಹತ್ತಿ ಎಣ್ಣೆ, ಹರಳೆಣ್ಣೆ, ನೆಲಕಡ್ಳೆ, ಸೂರ್ಯಕಾಂತಿ, ಸಾಸಮೆ – ಇತ್ಯಾದಿಗಳಿಂದ ತೆಗದ ಬಿತ್ತಿನ ಎಣ್ಣೆಗೊ – ಎಲ್ಲವುದೇ ನಮ್ಮ ನಿತ್ಯ ಬಳಕ್ಕೆಗೆ ಅಕ್ಕಿದಾ.
ಅದೆಲ್ಲವೂ ಎಣ್ಣೆದೀಪಂಗೊಕ್ಕೆ ಬಿದ್ದು ಬೆಣಚ್ಚು ಕೊಟ್ಟುಗೊಂಡಿತ್ತು ನಮ್ಮ ಮನೆಗಳಲ್ಲಿ; ಮೊನ್ನೆ ಮೊನ್ನೆ ಒರೆಂಗೂ.

ಬತ್ತಿ ದೀಪ:

ಎಣ್ಣೆದೀಪವ ನಾವೆಲ್ಲೋರುದೇ ಕಂಡಿದು. ಆದರೆ – ಬತ್ತಿದೀಪವ ಕಂಡಿದಿರೋ? ಸಂಶಯ.
ಆಚಮನೆ ದೊಡ್ಡಪ್ಪ° ಹೇಳುವನ್ನಾರ ಒಪ್ಪಣ್ಣಂಗೂ ಗೊಂತಿತ್ತಿಲ್ಲೆ!
ಅದೆಂತರ ಬತ್ತಿ ದೀಪ ಹೇದರೆ?

ಎಳ್ಳು, ತೆಂಗಿನಕಾಯಿಗಳಲ್ಲಿ ಧಾರಾಳ ಎಣ್ಣೆ ಇದ್ದು; ಹಿಂಡಿರೆ ಅರಿವಷ್ಟು; ಆದರೆ ಕೆಲವು ಬಿತ್ತುಗಳಲ್ಲಿ ತೆಗವಷ್ಟು ಎಣ್ಣೆ ಇಲ್ಲೆ.
ರಜಾ ಪಸೆ ಮಾಂತ್ರ ಇಪ್ಪದು. ಅಂತದ್ದರನ್ನೇ ಬಳಸಿಗೊಂಡು ಬೆಣಚ್ಚು ಮಾಡ್ತದು ನಮ್ಮ ಅಜ್ಜಂದ್ರಿಂಗೆ ಗೊಂತಿತ್ತು.
ಪುಂಡಿಕಾಯಿ” ಹೇದು ಒಂದು ಜಾತಿ ಕಾಯಿ ಇದ್ದಲ್ಲದೋ – ಆ ನಮುನೆದರ ಬಳಸುತ್ತ ಬಗೆ. ಹೇಂಗೆ?

ಪುಂಡಿಕಾಯಿ ಬಿತ್ತಿನ ಮನಾರಕ್ಕೆ ಹೆರ್ಕಿ, ಒಲೆಕಿಚ್ಚಿಲಿ ಚೆಂದಕೆ ಹೊರುದತ್ತು. ಕರಂಚುವಷ್ಟಲ್ಲ, ಹದಾ ಹಸಿ ಕರಿವನ್ನಾರ.
ಮತ್ತೆ ಅದರ ಚೆಂದಕೆ ಗುದ್ದಿ ಹೊಡಿ ಮಾಡ್ತದು. ಅಷ್ಟಪ್ಪಗ ಅದರ್ಲಿಪ್ಪ ಎಣ್ಣೆ ಅಂಶ ಚೆಂದಕೆ ಬಿಟ್ಟು ಪಸೆಪಸೆ ಅಕ್ಕು. ಇದರ?
ಗುಡ್ಡೆಲಿ ಧಾರಾಳ ಮುಳಿಹುಲ್ಲು ಇಕ್ಕಪ್ಪೋ – ಅದರ ಬೇಕಾದಷ್ಟುದ್ದಕ್ಕೆ ತುಂಡುಸಿ ಲಾಯ್ಕಕ್ಕೆ ಒಣಗುಸೇಕು.
ಆ ಮುಳಿಯ ಒಂದು ಹಿಡಿ ಹಿಡುದು ಈ ಹೊಡಿಮಾಡಿದ ಪುಂಡಿಕಾಯಿಯ ಮನಾರಕ್ಕೆ ಪೂಜೇಕು.
ಮೂರುಬೆರಳಷ್ಟು ತೋರಕೆ ಮುಳಿಯ ಹಿಡುದು ಅದಕ್ಕೆ ಪುಂಡಿಕಾಯಿ ಹೊಡಿಯ ಮಿಶ್ರ ಮಾಡಿ ನೆಲಕ್ಕಲ್ಲಿ ಅರದರೆ – ಮುಳಿಯ ಎಡೆಡೆಂಗೆ ಪುಂಡಿಕಾಯಿ ಹೊಡಿ – ಎಣ್ಣೆಪಸೆ ಹೋಗಿ ಅಂಟುತ್ತು ಅಲ್ಲದೋ?
ಅಂಟಿದ ಮುಳಿಕಡ್ಡಿಗೊ ಒಟ್ಟಾಗಿ ಒಂದು “ಮುಳಿ ಬತ್ತಿ” ಆವುತ್ತು. ನಾಕು ಬೆಶಿಲು ಒಣಗುಸಿರೆ ಕೋಪೆ ಬಳ್ಳಿಯ ನಮುನೆ ಒಂದಕ್ಕೊಂದು ಹಿಡುದು ನಿಲ್ಲುತ್ತು. ಈ ನಮುನೆ ಮುಳಿಬತ್ತಿಯ ಬೇಸಗೆಲಿ ಮಾಡಿ ಸೌದಿ ಕೊಟ್ಟಗೆ ಅಟ್ಟಲ್ಲಿ ಮಡಿಕ್ಕೊಂಡ್ರೆ ಮಳೆಗಾಲಕ್ಕೆ ಹೊತ್ತುಸಲಾತು.

ಒಂದು ಅಡಿ ಉದ್ದದ ಈ ಬತ್ತಿಯ ಬುಡ ರಜ್ಜ ಅಗಲ ಮಾಡಿರೆ ನೆಲಕ್ಕಲ್ಲಿ ಕುತ್ತ ಮಡುಗುಲಾವುತ್ತಿದಾ.
ಹಾಂಗೆ ಕುತ್ತ ನಿಲ್ಲುಸಿ ಒಂದು ಕೊಡಿಯಂಗೆ ಕಿಚ್ಚು ಕೊಟ್ರೆ, ರಜರಜವೇ ಹೊತ್ತಿಂಡು ಕೆಳ ಬಕ್ಕು. ಮನೆಗಳಲ್ಲಿ ಇರುಳಾಣ ಊಟದ ಹಂತಿಗೆಲ್ಲ ಈ ಮುಳಿಬತ್ತಿಗೊ ಹದಾ. ಹಂತಿ ಮುಗಿವಗ ಬತ್ತಿಯೂ ಮುಗಿತ್ತು. ಒಂದುವೇಳೆ ಬತ್ತಿ ಮುಗಿಯದ್ದರೆ ಮರದಿನಕ್ಕಾತು!

ಹಳಬ್ಬರಿಂಗೆ ಈ ನಮುನೆದು ಕಂಡು ನೆಂಪಿದ್ದೋ ಏನೋ; ಆಚಮನೆ ದೊಡ್ಡಪ್ಪ° ಕೊಟ್ಟ ಚಿತ್ರಣವೇ ಬೈಲಿಂಗೆ ಹೇಳ್ತಾಇಪ್ಪದು. ಈ ಸರ್ತಿ ಪುಂಡಿಕಾಯಿ ಸಿಕ್ಕಿರೆ ನಾಕು ಮುಳಿಬತ್ತಿ ಮಾಡೇಕು ನವಗೆ; ಕರೆಂಟು ಹೋಗಿಪ್ಪಾಗ ಹೊತ್ತುಸಲೆ ಅಕ್ಕಿದಾ!
ಪುಂಡಿಕಾಯಿ ಸಿಕ್ಕದ್ದರೆ ನಾಣಿಲು ಬಿತ್ತುದೇ ಆವುತ್ತು ಹೇಳಿದವು ದೊಡ್ಡಪ್ಪ°.

~

ಸೂಟೆ:

ಮನೆಯೊಳವೇ ಇಪ್ಪಗ ಎಣ್ಣೆದೀಪ, ಬತ್ತಿದೀಪ ಏವದಾದರೂ ಅಕ್ಕು; ಆದರೆ ಒಂದಿಕ್ಕಂದ ಇನ್ನೊಂದಿಕ್ಕಂಗೆ ಹೋಯೇಕಾರೆ?
ಸೂಟೆಯೇ ಆಯೆಕ್ಕಟ್ಟೆ. ರಟ್ಟೆಯಷ್ಟು ತೋರಕ್ಕೆ ಮಡಲಕಟ್ಟ ಕಟ್ಟಿರೆ ಸೂಟೆ ತೆಯಾರು. ಹೆರಡ್ಳಪ್ಪಗ ಸೂಟೆ ಕಟ್ಟಿ ಒಲೆಂದ ಕಿಚ್ಚು ಹೊತ್ತುಸೆಂಡರೆ ಸೂಟೆಬೀಸಿಗೊಂಡೇ ಮದಲಿಂಗೆ ಎಷ್ಟೂ ದೂರವೂ ನೆಡಗು.
ಸೂಟೆಲಿ ನೆಡವದಕ್ಕೂ, ಲೈಟಿಲಿ ನೆಡವದಕ್ಕೂ ವಿತ್ಯಾಸ ಇದ್ದು. ಸೂಟೆಲಿ ಮಿಣ್ಣಿ ರಟ್ಟದ್ದ ಹಾಂಗೆ ಜಾಗ್ರತೆ ಮಾಡೇಕಿದಾ! ಸೂಟೆಯ ಕಿಚ್ಚು ಕಮ್ಮಿ ಅಪ್ಪಗ ಒಂದರಿ ಜೋರು ಬೀಸುದು – ಅಷ್ಟಪ್ಪಗ ಗಾಳಿಗೆ ಪುನಾ ಹೊತ್ತುಗು! ಒಂದು ಸೂಟೆಲಿ ಹತ್ತರತ್ತರೆ ಮೂರು ಮೈಲು ನೆಡವಲಕ್ಕಾಡ- ದೊಡ್ಡಪ್ಪ° ಒಂದು ಕಣ್ಣಂದಾಜಿ ಹೇಳಿದವು.
ಅದರಿಂದಲೂ ದೂರ ಹೋಯೇಕಾರೆ “ಸಲಕ್ಕೆ ಸೂಟೆ” ಆಯೆಕ್ಕಡ.
ಅಡಕ್ಕೆ ಮರದ ಸಲಕ್ಕೆಯ ಸಪೂರಕ್ಕೆ ತುಂಡುಸಿ ಕಟ್ಟ ಕಟ್ಟಿ ತೆಯಾರು ಮಾಡಿ ಮಡಗ್ಗು ಮದಲಿಂಗೆ. ಹೀಂಗಿರ್ತ ಸೂಟೆಗೊ ಸೌದಿ ಕೊಟ್ಟಗೆಲಿ ತೆಯಾರಿಕ್ಕು. ಆರಾರು ಪಕ್ಕನೆ ಅಂಬೆರ್ಪಿಂಗೆ ಹೆರಡ್ತರೆ ಹೇದು ಮಡಗಿದ್ದು. ಹೆರಡ್ಳಪ್ಪಗ ರಪಕ್ಕ ಒಂದು ಸೂಟೆಯ ಹೊತ್ತುಸೆಂಡು ಹೆರಡುದೇ. ಹೋಯೇಕಾದ ಪ್ರಯಾಣ ತುಂಬ ದೂರಕೆ ಇದ್ದರೆ ಇನ್ನೊಂದೆರಡು ಸೂಟೆ ಕೈಲಿ ಹಿಡ್ಕೊಂಗು; ಒಂದು ಮುಗುದ ಮತ್ತೆ ಇನ್ನೊಂದು ಹೊತ್ತುಸೆಂಬಲೆ. ಎಡಕ್ಕಿಲಿ ಕಿಚ್ಚು ನಂದುಲಾಗ ಇದಾ; ಕಿಚ್ಚಿನ ಪೆಟ್ಟಿಗೆ ಇಲ್ಲದ್ದ ಕಾಲ ಅದು!

ಹಾಂ – ಮುಳಿ ಒಣಗಿದ ಕಾಲಲ್ಲಿ ಸಾಮಾನ್ಯವಾಗಿ ಸೂಟೆ ಹಿಡಿಯವು ಆರುದೇ. ಎಂತಗೆ? ಮುಳಿಗುಡ್ಡೆಲೆ ಹೋಪಗ ಒಂದು ಮಿಣ್ಣಿರಟ್ಟಿ ಕಿಚ್ಚು ಹತ್ತಿಗೊಂಡ್ರೆ, ಇರುಳಿಂದಿರುಳೇ ಎಕ್ರೆಗಟ್ಳೆ ಹೊತ್ತಿಹೋಕು; ಹತ್ತರಾಣ ಜನಂಗೊಕ್ಕೂ ಹೆದರಿಕೆಯೇ! ಹಾಂಗಾಗಿ ಸೂಟೆಪ್ರಯಾಣ ಮುಳಿಒಣಗಿದ ಕಾಲಲ್ಲಿ ನಿಷಿದ್ಧ!
ಜೋರಿನ ಕೂಚಕ್ಕಂಗೊ ಅತ್ತಿತ್ತೆ ಬೈವಗ ಮಾಂತ್ರ ಈ ಶಬ್ದ ಕೇಳುಗಟ್ಟೆ ಈಗ! 😉
~

ಇದು ತುಂಬಾ ಹಿಂದಾಣ ಕತೆ. ಕಿಚ್ಚಿನಪೆಟ್ಟಿಗೆ ಬಂದ ಮತ್ತೆ “ಬೇಕಪ್ಪಗ ಹೊತ್ತುಸುತ್ತ” ಸೌಕರ್ಯ ಬಂತು.
ನಂದಾದೀಪದ ಅವಲಂಬನೆ ಕಮ್ಮಿ ಆತು. ಮರವ ತಿಕ್ಕಿ ಕಿಚ್ಚು ಮಾಡೇಕಾದ ಬಂಙ ಇಲ್ಲದ್ದೆ ಆತು. ಎಣ್ಣೆ ಎರಕ್ಕೊಂಡೇ ಇರೆಕ್ಕಾದ ಅನಿವಾರ್ಯತೆ ಇಲ್ಲದ್ದೆ ಆತು.
ಚಿಮ್ಣೆಣ್ಣೆಯ ಹಾಂಗಿರ್ತ ಹೊಸ ಎಣ್ಣೆಗೊ ಬಪ್ಪಲೆ ಸುರು ಆದ ಮತ್ತೆ – ಆಗ ಹೇಳಿದ ಎಣ್ಣೆಗೊ ಕಮ್ಮಿ ಅಪ್ಪಲೆ ಸುರು ಆತು.
ಪುಂಡಿಕಾಯಿಯ ಒಣಗುಸಿ ಹೊರುದು ಗುದ್ದಿ ಎಣ್ಣೆತೆಗದು ಮುಳಿಬತ್ತಿ ಮಾಡ್ತ ಅಸಲಿಂದ ಕಮ್ಮಿ ಅಸಲಿಂಗೆ ಮೇಣದ ಬತ್ತಿ ಸಿಕ್ಕಲೆ ಸುರು ಆತು. ದೈಹಿಕ ಬಚ್ಚಲಿಂದಲೂ ಪೈಶೆಗೆ ಬೆಲೆ ಕಮ್ಮಿ ಅಪ್ಪ ಕಾಲಲ್ಲಿ ಇಂತದ್ದರ ಕಿಚ್ಚೇ ಹೆಚ್ಚು ಧಾರಾಳ ಆತು.

ಚಿಮ್ಣೆಣ್ಣೆ ಹಾಂಗಿರ್ತ ಮಣ್ಣಿಂದ ತೆಗದ ಮಣ್ಣೆಣ್ಣೆ ಬಂದ ಮತ್ತೆ ದೀಪಂಗಳ ಆಕಾರ ಬದಲಿತ್ತು. ದೇವರದೀಪದ ಹಾಂಗೆ ಬಿಡ್ಸಾಡಿ ದೀಪಕ್ಕೆ ಹಾಕಿರೆ ಪೂರ್ತಿ ಕಿಚ್ಚು ಹಿಡಿಗಿದಾ; ಹಾಂಗಾಗಿ ಎಣ್ಣೆ ಇಡೀ ಮುಚ್ಚಿರೇಕು; ಒಂದು ಬತ್ತಿಲಿ ಆಗಿ ಮಾಂತ್ರ ಬರೇಕು! ಮದಲಾಣ ಹಾಂಗೆ ಕಿಚ್ಚಿನ ಪರಿಮ್ಮಳ ಇಲ್ಲೆ; ಕರಿ ಮಸಿ ಹಿಡಿತ್ತ ವಾಸನೆ!!
ಚಿಮ್ಣೆಣ್ಣೆ ದೀಪದ ಹಿಂದಂದಲೇ ಬೆಳಿಬೆಣಚ್ಚಿನ ಗೇಸು ಲೈಟು ಬಂತು.

ಓಟೆ:

ಚಿಮ್ಣೆಣ್ಣೆ ಬಂದ ಮತ್ತೆ ಎಲ್ಲದಕ್ಕೂ ಅದನ್ನೇ ಅಳವಡುಸಲೆ ಸುರುಮಾಡಿದವು ಹಳಬ್ಬರು.
ಸೂಟೆ ಹೊತ್ತುಸಿ ಬಂಙ ಬಪ್ಪದರಿಂದ ಸುಲಭಲ್ಲಿ ಚಿಮ್ಣೆಣ್ಣೆ ಉಪಯೋಗುಸಿ ಏರ್ಪಾಡು ಮಾಡಿದವು. ಹೇಂಗೆ?
ಅದು ಸೂಟೆ ಅಲ್ಲ, ಓಟೆಲಿ.

ಹೆರಡ್ಳಪ್ಪಗ – ಓಟೆಬೆದುರಿನ ಒಂದು ಗೆಂಟಿಂದ ಉದ್ದಕ್ಕೆ ಕಡುದತ್ತು. ಒಂದು ಹೊಡೆಲಿ ಗೆಂಟೇ ಇಪ್ಪ ಕಾರಣ ಊ-ದ್ದದ ಗ್ಲಾಸಿನ ಹಾಂಗಿರ್ತಿದಾ – ಅದರ ಒಳಂಗೆ ಚಿಮ್ಣೆಣ್ಣೆ ತುಂಬುಸುದು.
ಆ ಚಿಮ್ಣೆಣ್ಣೆಗೆ ಲಾಯಿಕಂಗೆ ಒಂದು ಬತ್ತಿ ಹಾಕಿ – ಅದಕ್ಕೆ ಕಿಚ್ಚು ಕೊಡುದು. ಹಸಿ ಓಟೆ ಆದ ಕಾರಣ ಅಷ್ಟು ಪಕ್ಕಕ್ಕೆ ಕಿಚ್ಚು ಹಿಡಿಯ. ಹಾಂಗೆ – ಅದರ ಹಿಡ್ಕೊಂಡು ಚಿಮ್ಣೆಣ್ಣೆ ಕಿಚ್ಚಿಲಿ ದೂ-ರಕ್ಕೆ ಹೋವುಸ್ಸು ಕೆಲವು ದಿಕ್ಕಾಣ ಕ್ರಮ ಆತು.
ಸುಬ್ರಮಣ್ಯ ಹೊಡೆಲಿ ಬೆದುರ ಓಟೆ ಧಾರಾಳ; ಆದರೆ ಅದು ಕಮ್ಮಿ ಇಪ್ಪಲ್ಲಿ ಎಂತ ಮಾಡುಸ್ಸು?
ಅಲ್ಲಿಗೆ ಬಪ್ಪಂಗಾಯಿ ಓಟೆಯೇ ಆಯೇಕಟ್ಟೆ. ಒಂದು ಎಲೆ ಓಟೆಯ ಬುಡಂದ ಮುರುದತ್ತು, ಅದರೊಳಂಗೆ ಚಿಮ್ಣೆಣ್ಣೆ ತುಂಬುಸಿತ್ತು – ಬತ್ತಿ ಹಾಕಿತ್ತು – ಕಿಚ್ಚುಕೊಟ್ಟತ್ತು – ದಾರಿ ನೆಡದತ್ತು!
ಇಂತಾ ದೀಪಂಗಳ, ದೊಂದಿಗಳ ಹಿಡುದು ಮದಲಾಣೋರು ಬೇಟೆಗೆ, ಯುದ್ಧಕ್ಕೆ, ತಿರುಗಾಟಕ್ಕೆ ಹೋಗಿಂಡಿತ್ತವು ಹೇದರೆ ನಂಬಲೇ ಎಡಿಯ.

ಮುಂದೆ “ಬೆಟ್ರಿ” ಬಂತು; ಹಿಂದಂದಲೇ “ಬೆಟ್ರಿ ಲೈಟು” ಬಂತು.
ಎರಡು ಬೆಟ್ರಿದು, ಮೂರು ಬೆಟ್ರಿದು, ಐದು ಬೆಟ್ರಿದು – ಇತ್ಯಾದಿ ಹೆಚ್ಚೆಚ್ಚು ಬೆಣಚ್ಚಿನ ಲೈಟುಗೊ ಬಂತು, ದಾರಿನೆಡವ ಸಂಗತಿ ಸುಲಬ ಆತು.

~

ಅಂದ್ರಾಣ ಕೆಂಪು ಬೆಣಚ್ಚಿಂಗೆ ಹೋಲುಸಿರೆ ಈಗ ತುಂಬ ಸುಲಬ ಆಯಿದು.
ಕೈಲಿ ಪಳಪಳ ಹೊಳೆತ್ತ ಕರಿ ಲೈಟು ಬಂದಮತ್ತೆ ಇಷ್ಟೆಲ್ಲ ಸಂಗತಿಗೊ ಮಾತಾಡುವಗ ಏನೋ ಒಂದು ದೊಡ್ಡ ಇತಿಹಾಸ ಮಾತಾಡಿದ ಹಾಂಗಾವುತ್ತು.
ಬೆಣಚ್ಚಿನ ಬದಲಾವಣೆಗಳ ಮಾತಾಡಿಗೊಂಬಲೆ ದೀಪಾವಳಿ ಸಮೆಯಂದ ಒಳ್ಳೆದಿನ ಇದ್ದೋ?
ತಿತಿಹೇಳಿಕೆ ಹೇಳಿ ದೊಡ್ಡಪ್ಪ° ಹೆರಟವು.

ಒಂದೊಪ್ಪ: ಕಾಲ ಬದಲಾದ ಹಾಂಗೇ ದೀಪ ಬದಲುಗು – ಆದರೆ ಜ್ಯೋತಿ ಒಂದೇ ಅಲ್ಲದೋ!?

11 thoughts on “ದೀಪಾವಳಿ ದಿನ ಮಾತಾಡಿದ ‘ದೀಪಂಗಳ’ ಶುದ್ದಿ..

  1. ನಮ್ಮ ಒಪ್ಪಣ್ಣ ಹೇದರೆ ನಮ್ಮ ಬೈಲಿನ ಒಳ್ಳೆಣ್ಣೆ ದೀಪ.
    ಆ ದೀಪ ಪ್ರತಿ ಶುಕ್ರವಾರ ಉದಿಯಪ್ಪಗ ಮಿ೦ಚುಲೆ ಸುರುವಾದರೆ ಮತ್ತಣ ಶುಕ್ರವಾರದ ವರೇಂಗೆ, ಮತ್ತೆ ಇನ್ನೊಂದು ಆದ ಮತ್ತೆ ಮಗದೊಂದು, ಮತ್ತಾಣ ವಾರಕ್ಕೆ ಮೇಲೊಂದು…. ಹೀಂಗೆ ಸಾಲು-ಸಾಲು…

    ಲಕ್ಷ – ಲಕ್ಷ ದೀಪದ ಚೆಂದ ಕಾಣ್ತಾ ಇರಲಿ. ಒಟ್ಟಿಲಿ ನಂದಾದೀಪದ ಹಾಂಗೆ!
    ಹರೇರಾಮ.

  2. ಎಂಗಳ ಮನೆಗೆ ಕೆಲಸಕ್ಕೆ ಬಪ್ಪ ನೀಲಪ್ಪನ ಜಾಲಕರೆಲಿ ಸುಮಾರು ಪುಂಡಿ ಕಾಯಿ ಮರ ಇದ್ಫ್ದು. ಅದೊಂದರಿ ಮೇಣದ ಬತ್ತಿ ಮಾಡೊದರ ಹೇಳಿಕೊಟ್ಟಿದು. ಈಗ ಕಾಯಿ ಆಗಿ ಮುಗುತ್ತಡ, ಬಿದ್ದುಗೊಂಡು ಇದ್ದರೆ ತಂದು ಕೊಡ್ತೆ ಹೇಳಿದ್ದು. (ಮೊನ್ನೆ ಕುಲ್ಕುಂದಲ್ಲಿ ನಕ್ಸಲಂಗೊ ಬಂದು ಉಂಡಿಕ್ಕಿ ಹೋದ್ದು ಇದರ ಮನೆಗೇ)

  3. ಯಬ್ಬೋ… ರಾಮ ರಾಮಾ…!!! ಈ ಶುದ್ದಿ ಪಷ್ಟು ಕ್ಲಾಸಾಯಿದು ಒಪ್ಪಣ್ಣಾ.. ಒಪ್ಪ೦ಗೊ..
    ಈ ಬೀಡಿ ಪಟಾಕಿ ಹೇಳಿರೆ ಮೆಣಸು ಪಟಾಕಿಯೆಯೋ? ಬೇರೆಯೋ?
    ಹಾ೦ಗೆಯೇ ಗುದ್ದುತ್ತ ಪಟಾಕಿ ಹೇಳಿರೆ ಸ್ಟಿಕ್ಕರು ಬೊಟ್ಟಿನ ಹಾ೦ಗಿರ್ತ ‘ಕೇಪು” ಪಟಾಕಿಯೆಯೊ?
    ದೊಡ್ಡಜ್ಜ ಅಮಾಸೆ ದಿನ ತೀರಿಹೋದ್ದು ಹೇಳಿಯಪ್ಪಗ ನೆ೦ಪಾತು, ಕೆಲವು ವರಿಷ ಮೊದಲು ಹೀ೦ಗೆಯೇ ದೀಪಾವಳಿ ಅಮಾಸೆ ದಿನ ಮೆಣಸಿನ ಪಾರೆಲಿ ಸೆಡ್ಳು ಬಿದ್ದು ೩-೪ ಜನ ತೀರಿಹೋದ್ದು.. ಆ ಮನೆಯವಕ್ಕೆ ಅವರ ಜೆನ್ಮಲ್ಲಿ ದೀಪಾವಳಿ ಗವುಜಿ ಮಾಡ್ಳೆ ಎಡಿಗೊ?
    ಪೊನ್ನೆಣ್ಣೆ ವಿಷಯ ಅಪ್ಪ ಇದ್ದಿಪ್ಪಗ ಹೇಳಿ೦ಡಿತ್ತಿದ್ದು ಕೇಳಿದ ನೆ೦ಪಿದ್ದು, ಮೊದಲು ಯುಧ್ಧದ ಸಮಯಲ್ಲಿ ರೇಶನು ಅ೦ಗಡಿಗಳಲ್ಲಿ ಚಿಮ್ಣೆಣ್ಣೆ ಸಿಕ್ಕದ್ದೆ ಆಗಿಪ್ಪಗ ಹೀ೦ಗಿರ್ತ ಎಣ್ಣೆಗಳನ್ನೆ ಆಡ ಉಪಯೋಗಿಸಿ೦ಡಿತ್ತಿದ್ದದು..
    ಮುಳಿಬತ್ತಿ ಮಾ೦ತ್ರ ಅಲ್ಲ, ಈ ಪು೦ಡಿಕಾಯಿ, ನಾಣಿಲು ಬಿತ್ತು, ಎಲ್ಲವುದೆ ಈಗ ಒಪ್ಪಣ್ಣನ ಶುದ್ದಿ ಓದುವಗಳೇ ಗೊ೦ತಾದ್ದದು..
    ಅಲ್ಲ ಒಪ್ಪಣ್ಣಾ.. ಈ ಸಲಕ್ಕೆ ಸೂಟೆ ಲಾಯಿಕ ಹೊತ್ತುಗೊ? ಬೀಸಿ೦ಡು ಹೋಪಗ ಕಿಚ್ಚು ನ೦ದಾಯ್ಕು ಅಲ್ಲದೊ?
    ಈಗ ೫-೬ ವರ್ಷ ಮೊದಲಾಣವರೇ೦ಗುದೆ ಕರೆ೦ಟಿನ ಉಪದ್ರ ಇದ್ದತ್ತಿಲ್ಲೆ ಎ೦ಗಳ ಮನೆಲಿ, ಹಾ೦ಗಾಗಿ ಒಪ್ಪಣ್ಣನ ಶುದ್ದಿಲಿಪ್ಪ ಹಲವು ಸಾಧನ೦ಗಳ ಉಪಯೋಗಿಸಿ ಗೊ೦ತಿದ್ದು..

  4. “ಹೊಸ ಮದುಮ್ಮಾಯಂದ್ರೆಲ್ಲ ಗಳುಗಳ ಕಂಡಿಕ್ಕಿ ಬೆರಳು ತುಂಬುಸೆಂಡು ಬಪ್ಪ ಸಮೆಯ” – ಓಹ್ ! ಒಪ್ಪಣ್ಣನ ವರ್ಣನೆ ಅದ್ಭುತ.
    ಒಂದು ಸಾಮಾನ್ಯ ವಿಷಯಕ್ಕೆ ಎಷ್ಟು ಚೆಂದಕೆ ಬಣ್ಣ ಮೆತ್ತಲೆ ಎಡಿಗು ಹೇಳ್ತಕ್ಕೆ ಇದು ಒಳ್ಳೆ ಉದಾಹರಣೆ.
    ದೊಡ್ಡಪ್ಪನ ಆ ಹಳೆ ಟಾರ್ಚಿನ ಆನೂ ಕಂಡಿದೆ. ದೊಡ್ಡಪ್ಪನ ಮಗನ ಮದುವೆ ದಿನ ಉದಿಯಪ್ಪಗ ನಾಕು ಗಂಟಗೆ , ಬೆಟ್ರಿ ಸರೀ ತಾಗದ್ದೆ, ಹೊತ್ತದ್ದೆ ಇದ್ದಿನ ಆ ಲೈಟಿನ “ಕಟ ಕಟ” ಹೇಳಿ ಕುಟ್ಟಿ ಸರಿ ಮಾಡಿಯೆಂಡು ಇತ್ತಿದ್ದ ದೊಡ್ಡಪ್ಪಂಗೆ, ಆನು ಸಕಾಯ ಮಾಡಿ, ಅದು ಸರೀ ಆಗಿ ಹೊತ್ತುತ್ತ ಹಾಂಗೆ ಮಾಡಿ ಕೊಟ್ಟ ಕೊಶಿಯ ವಿಚಾರ ಎನಗೆ ಇನ್ನೂ ನೆಂಪಿದ್ದು. ಒಪ್ಪಣ್ಣ ಆ ಟಾರ್ಚಿನ ವಿವರುಸಿದ್ದದು ಲಾಯಕ್ ಆಯಿದು.

    ಶುದ್ದಿಲಿ ಬಗೆ ಬಗೆಯ ದೀಪಂಗಳ ಬಗೆಲಿ ಒಪ್ಪಣ್ಣ ಚೆಂದಕೆ ಬೆಣಂಚು ಹಿಡುದ್ದ. ದೀಪಂಗೊ ಬೆಳದು ಬಂದ ರೀತಿಯ ಚೆಂದಕೆ ತೋರುಸಿದ್ದ. ಶರ್ಮಪ್ಪಚ್ಚಿ ಹೇಳಿದ ಹಾಂಗೆ, “ಬತ್ತಿ ದೀಪ” ಎನಗುದೆ ಹೊಸತ್ತು. ಆನು ಹಾಂಗಿಪ್ಪದರ ಕಂಡಿದೇ ಇಲ್ಲೆ. ಸೂಟೆ ಬದಲಿಂಗೆ, ಅಂಬಗಾಣ ಜವ್ವನಿಗರು, ಸೈಕಲು ಟಯರಿನ ತುಂಡು ಮಾಡಿ ಹೊತ್ತುಸೆಂಡು ಹೋಗೆಂಡಿದ್ದಿದ್ದವು. ಅಂಬಗ ವಾಯು ಮಾಲಿನ್ಯ ಹೇಳ್ತ ಶಬ್ದದ ಬಳಕೆಯೇ ಇತ್ತಿಲ್ಲೆ ಹೇಳ್ತದುದೆ ನಿಜ. ಗೇಸು ಲೈಟುದೆ ಇತ್ತೀಚೆಗೆ ಕಾಂಬಲೆ ಸಿಕ್ಕುತ್ತಿಲ್ಲೆ. ಎಂತದೇ ಇರಳಿ,
    ದೀಪದ ಜ್ಯೋತಿ ಏವತ್ತುದೆ ಒಂದೆ, ಅಪ್ಪದು.

  5. ಕಿಚ್ಚಿನ ಉಗಮಂದ ಹಿಡುದು, ಅತ್ಯಾಧುನಿಕ ನಮೂನೆಯ ಬೆಳಕಿನ ಸಾಧನಂಗಳ ವರೆಗಿನ ಪರಿಚಯ ಲಾಯಿಕಕೆ ಮೂಡಿ ಬಯಿಂದು.
    “ಮುಳಿ ಬತ್ತಿ” ಬಗ್ಗೆ ಇದುವರೆಗೆ ಕೇಳಿತ್ತಿದ್ದಿಲ್ಲೆ. ಹೊಸ ಮಾಹಿತಿ.
    ಆಧುನಿಕತೆ ಹೀಂಗೆ ಮುಂದುವರ್ಕೊಂಡು ಹೋದರೆ, ಮುಂದೆ ಒಂದು ಕಾಲಲ್ಲಿ ಇವೆಲ್ಲಾ ಬೇಕಾಗಿ ಬಕ್ಕೋ ಹೇಳ್ತ ಸಂಶಯವೂ ಇದ್ದು.
    ಒಳ್ಳೆ ಮಾಹಿತಿ ಕೊಟ್ಟ ಲೇಖನ.

  6. ಜ್ಯೋತಿ ತಮಸ್ಸಿನ ದೂರ ಮಾಡಿ ಎಲ್ಲೋರ ಬಾಳಿಲಿ ಬೆಳಕ ಕೊಡಲಿ..

  7. ಎಂಗಳಲ್ಲಿ ಸಣ್ಣಾದಿಪ್ಪಗ ಪಟಾಕಿಯ ಬದಲು ಒಂದು ಅಡಕೆ ಹಾಳೆಲಿ ನೆಲಕಕ್ಕೆ ಬಡಿಗು. ಅಂಬಗ ಬಡ ಬಡ ಶಬ್ದ ಬಕ್ಕು ಇದಾ…
    ಪೈಸೆ ಖರ್ಚೂ ಇಲ್ಲೆ.. ಬೆಡಿ ಹೊಟ್ಟಿಸಿದ ಹಾಂಗೂ ಆತು 😉

    {ಕಾಲ ಬದಲಾದ ಹಾಂಗೇ ದೀಪ ಬದಲುಗು – ಆದರೆ ಜ್ಯೋತಿ ಒಂದೇ ಅಲ್ಲದೋ!?} – ಹಳೇ ಬೇರು.. ಹೊಸ ಚಿಗುರು ಹೇಳಿದ ಹಾಂಗೆ 🙂

    ಲೇಖನ ಒಪ್ಪ ಆಯಿದು ಒಪ್ಪಣ್ಣ…

  8. ಕಲ್ಲು ತಿಕ್ಕುದರಿಂದ ಕಿಚ್ಚು ಬತ್ತು ಹೇಳುದರಿಂದ ಸ್ವಿಚ್ಚು ಒತ್ತುವ ವರೆಗೆ ನಮ್ಮ ಪ್ರಯಾಣ! ಭಾರೀ ಲಾಯ್ಕದ ವಿವರಣೆ.ಮೊದಲು ಒಲೆಲಿ ಕಿಚ್ಚು ಆರಲೆ ಇಲ್ಲೆಡ. ಸೌದೆ ಮಡುಗಿ ಅದರಲ್ಲಿ ಕೆಂಡ ಯಾವಾಗಲೂ ಇಪ್ಪ ಹಾಂಗೆ ನೋಡುದು. ಉದಿಯಪ್ಪಗ ಅದಕ್ಕೆ ಮಡಲು haaki ಊಪಿ,ಊಪಿ ಹೊತ್ತುಸುದು!ಅದಕ್ಕೆ- ಹೋಮಕ್ಕೆ ಮೊದಲು ಮನೆಯ ಒಲೆಂದ ಇಂಗಾಳು ತಪ್ಪದು;ಮತ್ತೆ ಪೂರ್ಣಾಹುತಿ ಆದ ಮೇಲೆ ಹೋಮಂದ ಇಂಗಾಳು ತೆಗೆದು ಮತ್ತೆ ಅಲ್ಲಿಗೇ ಕೊಂಡೋಗಿ ಸೇರಿಸುದು!ಒಂದು ವೇಳೆ ಒಲೆ ನಂದಿ ಹೋದರೆ? ಬೇರೆ ಮನೆಂದ ಇಂಗಾಳು ತಂದಾಯೆಕ್ಕಷ್ಟೆ. ಹೀಂಗೆ ಮನೆಯ ಒಲೆ ಅಗ್ನಿ ಉಪಾಸನೆಯ ಸಂಕೇತ;ಮನೆಯ ಜೀವಂತಿಕೆಯ ಸಂಕೇತ!

  9. [ಹೊತ್ತಲೆ ಎಂತ ಕಾರಣ? “ಕೊಬ್ಬಿನಂಶ”] – ಅಯ್ಯಪ್ಪೋ.. ಹೀಂಗಿರ್ಸು ಒಂದು ಕೆಣಿ ಇದ್ದು ಹೇದು ಗೊಂತೇ ಇತ್ತಿಲ್ಲೆ ಇದಾ.
    ಎಂತದೇ ಕೇಂಡೇಲು ದೀಪ, ಗುಂಡು ದೀಪ, ದಂಡು ದೀಪ, ಸಾಲುದೀಪಂಗೊ ಇದ್ದರೂ ಭಕ್ತಿಗೆ ತೈಲದೀಪವೇ ಸರಿ. ಓಯ್… ಶುದ್ದಿ ಪಷ್ಟಾಯ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×