Oppanna.com

ವೈದ್ಯರ ಮದ್ದು, ಧನ್ವಂತರಿಯ ಔಷಧಿ..

ಬರದೋರು :   ಒಪ್ಪಣ್ಣ    on   10/05/2013    10 ಒಪ್ಪಂಗೊ

ಯೇ ಒಪ್ಪಣ್ಣೋ, ರಜ ಅಮೃತ ಬಳ್ಳಿ ಇದ್ದರೆ ಕೊಂಡ ಆತೋ – ಕಾನಾವು ಡಾಗುಟ್ರು ಪೋನಿಲಿ ಹೇಳಿದವು.
ಅಂಬೆರ್ಪಿಲಿ ಕೇಳಿದವು, ಕೊಂಡೋಗದ್ದರೆ ಆಗ.
ಮನೆಲಿ ನಾಕೈದು ಬುಡ ತಂದು ನೆಟ್ಟೂ ಆಯಿದಿಲ್ಲೆ; ಆಚಮನೆಲಿ ಇದ್ದ ನೆಂಪು – ಇದ್ದೋ ಕೇಳಿದೆ,
ಯೇಯ್, ಇದ್ದತ್ತಡ, ಆದರೆ ಈ ಸರ್ತಿ ಮಣ್ಣು ಹಿಡಿಶುವಾಗ ಬಳ್ಳಿ ಅಳುದತ್ತಡ. ಇಲ್ಲೆ ಒಪ್ಪಣ್ಣೋ – ಹೇಳಿದವು ಆಚಮನೆ ದೊಡ್ಡಪ್ಪ°. ಆಚಮನೆಲಿ ಇಲ್ಲದ್ದರೆ ಮತ್ತೆ ಇನ್ನು ಹತ್ತರೆ ನೆರೆಕರೆಲಿ ಕೇಳೇಕಾದ್ಸಿಲ್ಲೆ; ಅಂಬಗ ಎಲ್ಲಿಂದ ಸಂಪಾಲುಸುದು?
ಓ ಅಂದು ಮಿತ್ತೂರು ಭಟ್ಟಮಾವನ ಜಾಲಿಲಿ – ಹೋಗಿಪ್ಪಾಗ ಕಂಡ ನೆಂಪಿದ್ದು; ಆಸಕ್ತಿಲಿ ಮಾಡಿದ ದೊಡ್ಡ ಬಳ್ಳಿ ಅದು.
ಆಸಕ್ತಿಲಿ ಮಾಡಿದ್ದಕ್ಕೆ ಅಳಿ ಇಲ್ಲೆ – ಹೇದು ಮಾಷ್ಟ್ರುಮಾವ° ಯೇವಗಳೂ ಹೇಳುಗು; ಹಾಂಗೆ ಆ ಅಮೃತ ಬಳ್ಳಿಯೂ ಅಳುದಿರ. ಅಳುದರೆ ಅದು ಅಮೃತವೋ?!
~

ಮಿತ್ತೂರು ಬಟ್ಟಮಾವನ ಕೈಲಿ ಕೇಳಿಪ್ಪದ್ದೇ – ಹೋ, ಧಾರಾಳ ಕೊಡ್ಳಕ್ಕು. ಯೇವಗಂಗೆ ಬೇಕು? – ಕೇಳಿದವು.
ಕಾನಾವು ಡಾಗುಟ್ರು ಬೇಕು ಹೇಳಿದ್ದವು, ಯೇವಗಂಗೆ ಬೇಕಪ್ಪದು ಹೇಳಿದ್ದವಿಲ್ಲೆ. ನವಗೆ ಟ್ಟೆಟ್ಟೆಟ್ಟೆ ಆತು. ಅದು – ಅದು – ನಾಳ್ತು ಅವರ ಆಸ್ಪತ್ರೆ ಉದ್ಘಾಟನೆ ಇದಾ; ನಾಳೆಯೇ ವಾಸ್ತು ಹೋಮ ಸುರು ಆವುತ್ತು; ಹಾಂಗಾಗಿ ನಾಳೆ ಹೊತ್ತಪ್ಪಗಳೇ ಬೇಕಕ್ಕು – ಹೇದೆ.
ಬಟ್ಟಮಾವ° ತುಂಬ ಸಮದಾನಿ, ತುಂಬಿದ ಕೊಡ. ಹಾಂಗೇ ಸಮದಾನಲ್ಲೇ ಹೇಳಿದವು – ಇದೂ, ನಾಳಂಗೆ ಹೊತ್ತಪ್ಪಗ ಎತ್ತುಸುಲಕ್ಕು; ಆದರೆ ವಾಸ್ತುವಿಂಗೆ ಅಮೃತ ಬಳ್ಳಿ ಬೇಕಾಗ; ಧನ್ವಂತರಿ ಪೂಜೆಯೋ ಮಣ್ಣ ಇದ್ದೋ? ಅದಕ್ಕೆ ಬೇಕಕ್ಕು – ಹೇಳಿದವು. ಅರ್ದಂಬರ್ದ ಗೊಂತಿದ್ದುಗೊಂಡು ಮೀಸೆ ಎಳವಲೆ ಹೆರಟ ಒಪ್ಪಣ್ಣಂಗೆ ನಾಚಿಕೆ ಆತು. ಬಟ್ಟಮಾವ° ನೆಗೆಮಾಡಿದ್ದವಿಲ್ಲೆ; ನಾವುದೇ ನೆಗೆ ಮಾಡಿದ್ದಿಲ್ಲೆ. ಆಯಿಕ್ಕು ಬಟ್ಟಮಾವ° – ಹೇಳಿಕ್ಕಿ ಜಾರಿದೆ.

~
ಮರದಿನ ಮಿತ್ತೂರು ಮನೆಂದ ಅಮೃತಬಳ್ಳಿ ಸಂಪಾಲುಸಿ ಆತು; ಕಾನಾವು ಡಾಗುಟ್ರಲ್ಲಿಗೆ ಎತ್ತುಸಿಯೂ ಆತು.
ಕಾನಾವು ಡಾಗುಟ್ರ ಹೊಸ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದ ಪಾಚದೂಟಕ್ಕೆ ಒಂದು ಗಳಿಗೆ ನಾವುದೇ ಹೋಗಿದ್ದತ್ತು.
ಕೈರಂಗಳ ದೊಡ್ಡಪ್ಪನಿಂದ ತೊಡಗಿ ಕೇಟಿಭಾವನ ಒರೆಂಗೆ ಎಲ್ಲೋರುದೇ ಎದುರು ನಿಂದು ಕಾರ್ಯಕ್ರಮ ಎಳಗುಸಿದ್ದವು. ಹತ್ತು ಹಲವು ಡಾಗುಟ್ರಕ್ಕೊ, ಬೇಂಕು ಮೆನೆಜರಕ್ಕೊ, ಚಿನ್ನದ ಅಂಗುಡಿಯೋರು, ಎಲ್ಲೋರು ಸೇರಿ ಜೆಂಬ್ರ ರೈಸಿದ್ದು – ಸಂಶಯವೇ ಇಲ್ಲೆ. ಕಾನಾವಣ್ಣಂಗೆ ಉಪ್ಪರಿಗೆ ಮೇಲೆ ಪ್ರತ್ಯೇಕ ವೆವಸ್ತೆ ಇಪ್ಪ ಕಾರಣ ಅವಂದೇ ವಿಶೇಷ ಸ್ವಾಗತ ಮಾಡಿಗೊಂಡಿತ್ತಿದ್ದ°.
ಕಾನಾವು ಡಾಗುಟ್ರುಭಾವಂಗೆ ಹೋಮ-ಪೂಜೆ-ಸಭಾ ಕಾರ್ಯಕ್ರಮ, ಎಲ್ಲ ದಿಕ್ಕುದೇ ಮಾತಾಡಿ ತಲೆ ಕರಡದ್ಸು ಭಾಗ್ಯ. ಬಟ್ಟ ಮಾವ° ಮಮ ಹೇಳುಸುವಾಗ ಆಚೊಡೆಂದ ಇಂಗ್ಳೀಶಿಲಿ ಮಾತಾಡುಸುತ್ತ ಜೆನಂಗೊ; ಹೋ – ಒಪ್ಪಣ್ಣಂಗೆ ಅದೆಲ್ಲ ಅರಡಿಯಲೇ ಅರಡಿಯ.
~
ಅಲ್ಲ, ಈ ಅಮೃತ ಬಳ್ಳಿ ಬೇಕಪ್ಪ ಧನ್ವಂತರಿ ಪೂಜೆಯ ಕ್ರಮ ಎಂತರ? ಅದರ ಹಿಂದೆ ಇಪ್ಪ ಉದ್ದೇಶ ಎಂತರ?
ಮೊನ್ನೆ ಮಿತ್ತೂರು ಬಟ್ಟಮಾವನ ಹತ್ತರೆ ಕೇಳುಲಾವುತಿತು; ಆದರೆ ಅವಕ್ಕೆ ಅಂಬೆರ್ಪಿಲಿ ಹೆರಡೇಕಾತು, ಕೇಳುಲಾತಿಲ್ಲೆ. ಅಂಬಗ ಡಾಗುಟ್ರ ಆಸ್ಪತ್ರೆ ಒಕ್ಕಲಿಂಗೇ ಹೋಪೊ° – ಅಲ್ಲೇ ಒಂದರಿ ನೋಡಿದ ಹಾಂಗಾತು- ಗ್ರೇಶಿಗೊಂಡು ಹೆರಟತ್ತು ನಾವು.
ಬಟ್ಟಮಾವ° ಅಂಬೆರ್ಪಿಲಿಕ್ಕು; ಕಾನಾವು ಡಾಗುಟ್ರು ಭಾವ°– ಅಕ್ಕ°, ಮಕ್ಕೊ – ಎಲ್ಲೋರುದೇ ಗಡಿಬಿಡಿಲಿತ್ತಿದ್ದವು. ಆದರೆ, ಶುಭ ಹಾರೈಸಲೆ ಬಂದ ಚೂರಿಬೈಲು ಡಾಗುಟ್ರಿಂಗೆ ಎಂತರ ಅಂಬೆರ್ಪು – ಅಲ್ಲದೋ?
ಒಪ್ಪಣ್ಣನ ಹಾಂಗೇ – ಉಂಬನ್ನಾರವೂ ಪುರುಸೊತ್ತೇ ಅವಕ್ಕೆ; ಹಾಂಗಾಗಿ ಅವರ ಹತ್ರೆ ಮಾತಾಡ್ಳೆ ಸುರುಮಾಡಿತ್ತು ನಾವು.
ಮಾತಾಡಿ ಮಾತಾಡಿ ಈ ಧನ್ವಂತರಿ ಪೂಜೆಯ ಬಗ್ಗೆಯೂ ಮಾತು ಬಂತು.
ಕಳುದೊರಿಶ ಅವರಲ್ಲಿಯೂ ಆಗಿತ್ತು – ಆಚಮನೆ ತಿಥಿಯ ದಿನ; ಹಾಂಗಾಗಿ ನವಗೆ ಹೋಪಲಾಯಿದಿಲ್ಲೆ.
ಸ್ವತಃ ಪೂಜೆ ಮಾಡಿ ಗೊಂತಿಪ್ಪ ಕಾರಣ ಚೆಂದಕೆ ವಿವರ್ಸಿದವು.
ಧನ್ವಂತರಿಯ ಬಗ್ಗೆ, ಪೂಜೆಯ ಬಗ್ಗೆ, ಹೋಮದ ಬಗ್ಗೆ ಚೆಂದಕೆ ಹೇಳಿಗೊಂಡು ಹೋದವು.
~

ಧನ್ವಂತರಿ:
ಚೂರಿಬೈಲು ಡಾಗುಟ್ರು ವಿವರ್ಸಿಗೊಂಡು ಹೋದವು. ಧನ್ವಂತರಿ ಹೇದರೆ ಆರು? ಎಂತ?
ವಿಷ್ಣುವಿನ ಒಂದು ರೂಪ ಆಡ. ಆದಿ ವೈದ್ಯ, ಅನಾದಿ ಮೂರ್ತಿ.
ದೇವರೂ-ಅಸುರರೂ ಸೇರಿಗೊಂಡು ಮಂದಾರ ಪರ್ವತವ ಮಂತಿನ ಹಾಂಗೆ ಮಾಡಿ, ವಾಸುಕಿಯ ಬಳ್ಳಿಯ ಹಾಂಗೆ ಕಟ್ಟಿ ಸಮುದ್ರವ ಕಡದವಲ್ಲದೋ? – ಸಮುದ್ರ ಮಥನದ ಕಾಲಲ್ಲಿ; ಅಷ್ಟಪ್ಪಗ ಸುಮಾರೆಲ್ಲ ಬಂತು ಸಮುದ್ರದ ಅಡಿಯಂದ. ಎಲ್ಲ ಬಂದು, ಅಖೇರಿಗೆ ಅಮೃತವೂ ಬಂತು, ಅಮೃತಕಲಶಲ್ಲಿ. ದೇವತೆಗೊ ಎಲ್ಲೋರುದೇ ಈ ಅಮೃತವ ಕುಡುದವು; ರಾಕ್ಷಸರಿಂಗೆ ಸಿಕ್ಕಿದ್ದಿಲ್ಲೆ – ಎಡಕ್ಕಿಲಿ ಒಂದು ಜೆನಕ್ಕೆ ಮಾಂತ್ರ ಸಿಕ್ಕಿ ಈಗ ಅದು ರಾಹು – ಕೇತು ಆಗಿ ಉಪದ್ರ ಕೊಡ್ತ ಸಂಗತಿ ನಿಂಗೊಗೆ ಅರಡಿಗು; ಅಲ್ಲದೋ? ಆ ದಿನ ಹಂಚಿ ಒಳುದ ಅಮೃತ ಎಲ್ಲಿದ್ದು ಈಗ? ಆರಾರು ಕೇಳಿದ್ದಿರೋ? ಆ ಅಮೃತ ಕಲಶ “ಧನ್ವಂತರಿಯ” ಒಂದು ಕೈಲಿ ಇದ್ದು.
ಧನ್ವಂತರಿಯ ಮತ್ತೊಂದು ಕೈಲಿ ಮದ್ದಿನ ಗೆಡುಗೊ ಇದ್ದಾಡ. ಇಂಗ್ಳೀಶು ಮದ್ದಿನ ಹಾಂಗೆ ಕೆಮಿಕಲ್ಲು, ಕೇಪ್ಸೂಲು ಅಲ್ಲ ನಮ್ಮ ಆಯುರ್ವೇದಲ್ಲಿ; ಕಷಾಯ, ಅರಿಷ್ಟ, ಅರ್ಕ, ಲೇಹಂಗಳೇ ಮದ್ದುಗೊ. ಇದೆಲ್ಲವೂ ಒಂದಲ್ಲಾ ಒಂದು ಎಲೆ, ಬೇರು, ಕಾಂಡಂಗಳಿಂದ ತೆಗೆಸ್ಸು. ಈ ಮದ್ದಿನ ಗೆಡುಗೊ ಧನ್ವಂತರಿ ಕೈಲಿ ಇಪ್ಪದಾಡ.
ಮತ್ತೊಂದು ಕೈಲಿ ಶಂಖ ಇಪ್ಪದಾಡ – ಹೇಳಿದವು ಡಾಗುಟ್ರುಬಾವ°. ಮೂಲರೂಪ ಆದ ವಿಷ್ಣುವಿನ ಕೈಲಿ ಇಪ್ಪದೇ; ಹಾಂಗಾಗಿ ಅದುವೇ ಕಾಣ್ತು ಧನ್ವಂತರಿ ಕೈಲಿ – ಹೇಳಿದವು. ಅಮೃತ ಕಲಶ, ಮದ್ದಿನ ಗೆಡು, ಶಂಖ – ಚೆಲ ಅಂಬಗ ಎಷ್ಟು ಕೈ ಇದ್ದು – ಕೇಟೆ.
ಒಟ್ಟು ನಾಲ್ಕು ಕೈ. ಇನ್ನೊಂದರ್ಲಿ ವೈದ್ಯ ಪುಸ್ತಕ ಇಪ್ಪದು. ಆಯುರ್ವೇದದ ರಹಸ್ಯಂಗಳ, ವೈದ್ಯವಿದ್ಯೆಯ ಮೂಲಂಗಳ ಸುರೂವಿಂಗೆ ಹೇಳಿಕೊಟ್ಟದು ಅವನೇ ಅಡ. ಆಯುರ್ವೇದ ಜನಕ ಸುಶ್ರುತ ಮಹರ್ಷಿಗೇ ಗುರುಗೊ ಆಡ. ವಾತ-ಪಿತ್ಥ-ಕಫದ ತೊಂದರೆ ಗುರ್ತಮಾಡಿಗೊಂಡು, ಅದಕ್ಕೆ ಮದ್ದು ಮಾಡ್ಳಾವುತ್ತು ಹೇದು ಮನುಷ್ಯರಿಂಗೆ ತಿಳಿಶಿಕೊಟ್ಟದೇ ಈ ಧನ್ವಂತರಿ – ಚೂರಿಬೈಲು ಡಾಗುಟ್ರು ವಿವರ್ಸಿಗೊಂಡೇ ಹೋದವು. ಕಿಟುಕಿಂದ ಹೆರ ತಿರುಗಿ ನೋಡಿದೆ, “ಧನ್ವಂತರಿ”ಆಸ್ಪತ್ರೆಯ ಪಳಪಳ ಬೋರ್ಡು ಕಂಡತ್ತು. ಅಲ್ಲೇ ಕೆಳದಿಕ್ಕೆ ಭಾಮಿನಿಯೂ ಕಾನಾವಣ್ಣನೂ ಕಲ್ಲಾಟ ಆಡಿಗೊಂಡೂ ಇತ್ತಿದ್ದವು; ಅದಿರಳಿ.
~

ಕಾನಾವು ಡಾಗುಟ್ರಲ್ಲಿ ಧನ್ವಂತರಿ ಪೂಜೆಯ ಎದುರು ಮಡಗಿದ ಧನ್ವಂತರಿಯ ಚಿತ್ರ
ಕಾನಾವು ಡಾಗುಟ್ರಲ್ಲಿ ಧನ್ವಂತರಿ ಪೂಜೆಯ ಎದುರು ಮಡಗಿದ ಧನ್ವಂತರಿಯ ಚಿತ್ರ

ಧನ್ವಂತರಿಂದ ಸುಶೃತ, ಸುಶೃತ ಮಹರ್ಷಿಗಳಿಂದ ಮತ್ತೆ ಆಯುರ್ವೇದ ವೈದ್ಯರು, ಹಾಂಗಾಗಿ – ಈಗಾಣ ಎಲ್ಲ ವೈದ್ಯರಿಂಗೂ ಸುಶೃತ ಮಹರ್ಷಿಗೊ ಗುರುಗೊ, ಧನ್ವಂತರಿ ದೇವತೆ – ಹೇಳಿ ಲೆಕ್ಕ ಆದ. ವೈದ್ಯ ವೃತ್ತಿಲಿ ಇಪ್ಪ ಆರೇ ಆದರೂ “ಈ ರೋಗಿಗೆ ಎನ್ನಂದಾಗಿ ಗುಣ ಆದ್ದದು” ಹೇಳಿ ಗ್ರೇಶುಲಿಲ್ಲೆ ಅಡ. “ಇದು ಧನ್ವಂತರಿಯ ಅಮೃತಕಲಶಂದಾಗಿ ಗುಣ ಸಿಕ್ಕಿದ್ದದು” ಹೇಳಿಯೇ ಗ್ರೇಶುತ್ತನಾಡ. ತಾನು ಕೊಡುವ ಮದ್ದಿನ ರೂಪಲ್ಲಿ ಧನ್ವಂತರಿಯ ಆಶೀರ್ವಾದ ಸಿಕ್ಕಲಿ – ಹೇದು ಎಲ್ಲಾ ವೈದ್ಯರೂ ಗ್ರೇಶಿಗೊಳ್ತವಾಡ.
ಯೇವದೇ ಡಾಗುಟ್ರು ಆಗಲಿ, ಯೇವದೇ ಮದ್ದು ಆಗಲಿ – ಅದರ್ಲಿ ಅಗೋಚರ ಶೆಗ್ತಿ ಇಲ್ಲದ್ದರೆ ಗುಣ ಅಕ್ಕೋ? ಹಾಂಗಾಗಿ ವೈದ್ಯ ವೃತ್ತಿಯ ಆಸ್ತಿಕ ಬಂಧುಗೊ ಎಲ್ಲೋರುದೇ ಧನ್ವಂತರಿಯ ಆರಾಧನೆ ಮಾಡಿಯೇ ಮಾಡ್ತವು. ತನ್ನ ಕೈಗುಣವ ವೃದ್ಧಿಮಾಡು – ಹೇದು ಆದಿವೈದ್ಯನ ಹತ್ತರೆ ಪ್ರಾರ್ಥನೆ ಮಾಡ್ತವು. ಎಲ್ಲದಕ್ಕೂ ಮೂಲ ಆ ಧನ್ವಂತರಿಯೇ ಅಲ್ಲದೊ? ಅವನ ಕೈಲಿಪ್ಪ ಅಮೃತ ಕಲಶವೇ ಅಲ್ಲದೋ? – ಹೇಳಿದವು ಚೂರಿಬೈಲು ಡಾಗುಟ್ರು.
~

ಈ ಧನ್ವಂತರಿಯ ಆರಾಧನೆಯೂ ಅಷ್ಟೇ ವಿಶಿಷ್ಟ ಅಡ. ಮದಲಿಂಗೆ ಹಳ್ಳಿ ವೈದ್ಯರುಗೊ, ಕೆಲವು ಜೆನ ಊರ ಹೆರಿಯೋರು ಈ ಆರಾಧನೆ ಮಾಡಿಗೊಂಡಿತ್ತವು.
ಈಗ ತುಂಬ ಅಪುರೂಪವೇ ಆಗಿ ಹೋಯಿದು – ಹೇದವು.
ಎರಡು ರೀತಿಲಿ ಧನ್ವಂತರಿ ಆರಾಧನೆ ಮಾಡ್ಳಕ್ಕಡ. ಒಂದು ಹೊತ್ತಿನ ಕಲ್ಪೋಕ್ತ ಪೂಜೆ ಆಗಿಯೂ, ಮೂರು ಹೊತ್ತಿನ ತ್ರಿಕಾಲ ಪೂಜೆಯೂ ಆಗಿಂಡು.

ತ್ರಿಕಾಲ ಪೂಜೆ:
ನಾವು ಬೈಲಿಲಿ ಅಂದೊಂದರಿ ತ್ರಿಕಾಲಪೂಜೆಯ ಬಗ್ಗೆ ಮಾತಾಡಿದ್ದು ಅಪ್ಪೋ. ಅಲ್ಲಿ ದೇವಿ ದುರ್ಗೆಗೆ ಪೂಜೆ ಮಾಡುಸ್ಸು, ಇಲ್ಲಿ ಧನ್ವಂತರಿಗೆ. ಹೆಚ್ಚುಕಮ್ಮಿ ಅದೇ ಕ್ರಮ ಇಲ್ಲಿಯೂ. ಉರೂಟು ಮಂಡಲ, ಸುತ್ತಲೂ ಬಟ್ಟಮಾವಂದ್ರು ಜೆಪ ಮಾಡುಸ್ಸು, ಎತ್ತರದ ದೀಪಕ್ಕೆ ಮೂರು ಹೊತ್ತು ಪೂಜೆ ಮಾಡುಸ್ಸು – ಇದೆಲ್ಲವೂ ಒಂದೇ ನಮುನೆ. ಧನ್ವಂತರಿಗೆ ಅವನದ್ದೇ ಆದ ವಿಶೇಷತೆಗಳ ಬಿಂಬಿಸುವ ಕೆಲವು ಕಾರ್ಯಂಗೊ ವಿತ್ಯಾಸ, ಅಷ್ಟೆ – ಹೇಳಿದವು.
ವಿಷ್ಣುವಿನ ಚಕ್ರ ಮಂಡ್ಳ ಬರದು ಅದಕ್ಕೆ ಅಣಿಲೆ-ಶಾಂತಿ-ನೆಲ್ಲಿ ತ್ರಿಫಲದ ಎಲೆಯ ಹಾಕೆಲಿದ್ದಾಡ. ಆಯುರ್ವೇದಲ್ಲಿ ಈ ತ್ರಿಫಲಕ್ಕೆ ವಿಶೇಷ ಜಾಗೆ ಇದ್ದಾಡ.
ಉದಿಯಪ್ಪಗ ಬೆಳ್ಳಿಯ ಕಲಶಲ್ಲಿ ತುಂಬ ತುಪ್ಪ ತುಂಬುಸಿ, ಮಂಡಲಲ್ಲಿ ಮಡಗಿ ಪ್ರತಿಷ್ಠಾಪನೆ ಮಾಡುದಾಡ. ಅದುವೇ ಧನ್ವಂತರಿಯ ಅಮೃತಕಲಶ ಹೇದು ನಂಬಿಗೊಂಬದು. ಆ ಕಲಶಕ್ಕೆ ಧನ್ವಂತರಿ ಆವಾಹನೆ, ಧನ್ವಂತರಿ ಪೂಜೆ, ಧನ್ವಂತರಿ ಜೆಪ ಮಾಡುದಾಡ. ಧನ್ವಂತರಿಯ ಮೂಲಮಂತ್ರ “ಓಂ ನಮೋ ಭಗವತೇ ಮಹಾ ಸುದರ್ಶನ ವಾಸುದೇವಾಯ ಧನ್ವಂತರಯೇ ಅಮೃತ ಕಲಶ ಹಸ್ತಾಯ ಸರ್ವ ಭಯ ವಿನಾಶಾಯ ಸರ್ವ ರೋಗ ನಿವಾರಣಾಯ. .” – ಇದರಲ್ಲೇ ಜೆಪ.
ಮೂರು ಹೊತ್ತಿನ ಪೂಜೆಲಿ ಸಾಮಾನ್ಯವಾಗಿ ಹದಿನೆಂಟು ಸಾವಿರ ಜೆಪ ಮಾಡ್ತವು; ಆರು ಸಾವಿರದ ಹಾಂಗೆ.
ವಿಷ್ಣುರೂಪೀ ದೇವರು ಆದ ಕಾರಣ ತೊಳಶಿ ಮಾಲೆ ವಿಶೇಷವಾಗಿ ಸಮರ್ಪಣೆ ಮಾಡೇಕಡ. ದೇವರಿಂಗೊಂದು ಮಂಗಳಾರತಿ ಮಾಡುಸ್ಸು.
ಪೂಜೆಯ ಒಟ್ಟಿಂಗೇ ಅಶ್ವಿನೀ ದೇವತೆಯ ಆರಾಧನೆಯೂ ನೆಡೇಕಡ. ಅಶ್ವಿನಿದೇವತೆಗೊ ವಟುರೂಪಲ್ಲಿಪ್ಪ ಕಾರಣ, ಉಪ್ನಾನ ಆದ ಎರಡು ಮಾಣಿಯಂಗಳ ಕೂರ್ಸಿ, ಕೈನ್ನೀರು ಕೊಟ್ಟು ಹಾಲಶನವೂ, ಬೆಲ್ಲಸುಳಿಯೂ ಉಣುಸೇಕಡ – ಇದು ಉದಿಯಪ್ಪಗ.

ಇದೇ ನಮುನೆ ಮಧ್ಯಾಹ್ನದ ಪೂಜೆ. ದೇವರಿಂಗೆ ಚೆರು ಪಾಯ್ಸ. ಬೆಣ್ತಕ್ಕಿ ಅಶನಕ್ಕೆ ಬೆಲ್ಲ ಹಾಕಿದ ನಮುನೆದು.
ಧನ್ವಂತರಿ ವಿಗ್ರಹ ಇದ್ದರೆ ಅಭಿಷೇಕ ಮಾಡಿಗೊಂಬಲಕ್ಕು. ವಿಶೇಷವಾಗಿ. ನವಗ್ರಹ ಪೂಜೆ, ನವಗ್ರಹ ದಾನಂಗಳನ್ನೂ ಮಾಡಿಗೊಳ್ತವು ಆಸ್ತಿಕರು.

ಇರುಳಿಂಗೆ ಧನ್ವಂತರಿ ಹೋಮವನ್ನೂ ಮಾಡ್ತವಾಡ. ಹೋಮರೂಪಲ್ಲಿ ಬಪ್ಪ ಧನ್ವಂತರಿಗೆ ಅತ್ತಿ, ಪಾಲಾಶ, ಅಮೃತ ಬಳ್ಳಿ ಇತ್ಯಾದಿಗಳಿಂದ ಆಹುತಿಯ ಸಮರ್ಪಣೆ ಮಾಡುದಾಡ. ಸಾಮಾನ್ಯವಾಗಿ ನೂರ ಎಂಭತ್ತು ಆಹುತಿ ಕೊಡುಸ್ಸಾಡ.
ರಾತ್ರಿ ಪೂಜೆಗೆ ವಿಶೇಷವಾಗಿ ಸಪಾದಭಕ್ಷ ನೈವೇದ್ಯ ಇದ್ದಡ. ಇದು ಸತ್ಯನಾರಾಯಣ ಪೂಜೆಯ ಸಪಾದಭಕ್ಷ್ಯದ ಹಾಂಗೇ ಗೋಧಿಹೊಡಿಲಿ ಮಾಡ್ತದು ಆದರೂ, ಆಯುರ್ವೇದ ಮದ್ದಿನ ಗುಣಂಗೊ ಇಪ್ಪಂಥ ಜಾಯಿಕಾಯಿ, ಕೇಸರಿ, ಪಚ್ಚೆಕರ್ಪೂರ, ಲವಂಗ, ದ್ರಾಕ್ಷಿ, ಬೀಜದಬೊಂಡು, ಅದರ ಒಟ್ಟಿಂಗೆ ಒಂದು ಮದ್ದಿನ ಹೊಡಿ –  ಇತ್ಯಾದಿಗಳ ಹಾಕಲೆ ಇದ್ದಾಡ.   ಪೂಜಾ ಪ್ರಸಾದಲ್ಲಿ ಸಕಲ ರೋಗ ನಿವಾರಕ ಶೆಗ್ತಿ ಸಿಕ್ಕಲಿ ಹೇಳ್ತ ಆಶಯ ಅಡ. ಪೂಜಾನಂತರ, ಆ ತುಪ್ಪ ತುಂಬಿದ ಬೆಳ್ಳಿ ಕಲಶ ಇಲ್ಲೆಯೋ – ಅದುವೇ ಪ್ರಸಾದ ಅಡ. ಧನ್ವಂತರಿ ಜೆಪದ ಶೆಗ್ತಿ ತುಂಬಿದ ತುಪ್ಪ! ಅದರ ಉದಿಯಪ್ಪಗ ಮಿಂದಿಕ್ಕಿ ಶುದ್ಧಲ್ಲಿ ಬಂದು ನಲುವತ್ತೆಂಟು ದಿನ ಸೇವನೆ ಮಾಡೇಕಡ, ಅನಾರೋಗ್ಯ, ಕಷ್ಟ, ಸಂಕಷ್ಟಂಗೊ, ಕಷ್ಟಸಾಧ್ಯ, ಅಸಾಧ್ಯ ಸರ್ವವೂ ದೂರ ಆಗಿ ಅರೋಗ್ಯವೃದ್ಧಿ ಆವುತ್ತು ಹೇಳ್ತದು ನಮ್ಮ ಸನಾತನ ನಂಬಿಕೆ.
~

ಕಲ್ಪೋಕ್ತ ಪೂಜೆ:
ಮೂರು ಹೊತ್ತಿನ ತ್ರಿಕಾಲಪೂಜೆಯ ಸಂಕ್ಷಿಪ್ತ ರೂಪವೇ ಈ ಕಲ್ಪೋಕ್ತ ಪೂಜಾಕ್ರಮ ಆಡ.
ಬೆಳ್ಳಿ ಕಲಶಲ್ಲಿ ತುಪ್ಪ ತುಂಬುಸಿ ಜೆಪ ಮಾಡ್ಳಿಲ್ಲೆ, ಬದಲಾಗಿ ತೂಷ್ಣಿಲಿ ಪೂಜೆ ಮಾಡಿ ಅರ್ಚನೆ ಮಾಡ್ತದು.
ಅವಂಗೆ ಇಷ್ಟ ಅಪ್ಪ ಸಪಾದ ಭಕ್ಷ್ಯವ ನೈವೇದ್ಯ ಮಾಡ್ತದು. ಹೋಮ ರೂಪಲ್ಲಿ ಆಹುತಿ ಕೊಡ್ತದು.
~
ಈ ಹೋಮಲ್ಲಿ ವಾತಾವರಣ ಶುದ್ಧ ಆವುತ್ತು, ಕೀಟ, ಎರುಗು, ನೆಳವು ಇತ್ಯಾದಿ ಜಂತುಗಳ ಕಾಟ ಕಮ್ಮಿ ಆವುತ್ತು, ಮಾಡುಸಿದೋನ ಕೈಗುಣ ವೃದ್ಧಿ ಆವುತ್ತು – ಹೇಳ್ತದು ನಮ್ಮವರ ನಂಬಿಕೆ – ಹೇಳಿದವು ಚೂರಿಬೈಲು ಡಾಗುಟ್ರು.
ಹಾಂಗಾಗಿಯೇ ಧನ್ವಂತರಿ ದೇವರು ನಮ್ಮ ಡಾಗುಟ್ರುಗೊಕ್ಕೆ ಆರಾಧ್ಯದೈವ ಆದ್ಸು – ಹೇದು ಒಪ್ಪಣ್ಣಂಗೆ ಅಂದಾಜಿ ಆತು.
~
ಜೀವಿಗೆ ರೋಗ ಬಪ್ಪದು ಇಪ್ಪದೇ. ವ್ಯವಸ್ಥೆಲಿ ಏನಾರು ವಿತ್ಯಾಸ ಆದರೆ ಆರೋಗ್ಯ ಸಮಸ್ಯೆ ಬತ್ತು. ಆರೋಗ್ಯ ಕೊಡುವವನೂ ಅವನೇ, ಅನಾರೋಗ್ಯ ಗುಣ ಮಾಡುವವನೂ ಅವನೇ. ಆರು ಅವ°? ಅವನೇ ಆ ದೇವರು. ವೈದ್ಯರು ಮದ್ದು ಕೊಡ್ತವು, ಆದರೆ ಆ ಮದ್ದಿಲಿ ಔಷಧ ರೂಪಲ್ಲಿ ಅಮೃತವ ತುಂಬುಸಿ ಕೊಡ್ತದು ಧನ್ವಂತರಿಯೇ.
ತಾನು ಮದ್ದು ಕೊಡ್ತದು, ತನ್ನಂದಾಗಿ ರೋಗಿಗೊ ಗುಣ ಆವುತ್ತದು – ಹೇದು ಡಾಗುಟ್ರುಗೊ ತಿಳ್ಕೊಂಡ್ರೆ ಅದು ದೊಡ್ಡ ತಪ್ಪು. ಎಲ್ಲವೂ ಆ ಧನ್ವಂತರಿಂದಾಗಿ. ರೋಗ ಗುಣ ಆಗಿ ಆರೋಗ್ಯ ಜೀವನ ಎಲ್ಲೋರಿಂಗೂ ಸಿಕ್ಕಲೆ ಧನ್ವಂತರಿಯ ಅನುಗ್ರಹ ಇರಳಿ – ಹೇಳ್ತದು ಚೂರಿಬೈಲು ಡಾಗುಟ್ರ ಆಶಯ ಆಗಿತ್ತು. ಕಾನಾವು ಡಾಗುಟ್ರುದೇ ಅದೇ ಉದ್ದೇಶಲ್ಲಿ ಈ ಪೂಜೆ ಏರ್ಪಾಡು ಮಾಡಿದ್ದು.
ಎಲ್ಲೋರಿಂಗೂ ಆರೋಗ್ಯ ಭಾಗ್ಯ ಸಿಕ್ಕಲಿ. ವಿಶೇಷವಾಗಿ, ಹೊಸ ಆಸ್ಪತ್ರೆಯ ಕಟ್ಟಿ ಹೆಚ್ಚು ಸೇವೆ ಮಾಡ್ತ ಅವಕಾಶವ ಎದುರುಕಾಣ್ತ ಕಾನಾವು ಡಾಗುಟ್ರಿಂಗೆ ಧನ್ವಂತರಿಯ ಆಶೀರ್ವಾದ ಸಿಕ್ಕಲಿ. ಅವರ ಕೈಂದ ಮದ್ದು ತೆಕ್ಕೊಂಡೋನಿಂಗೆ ಧನ್ವಂತರಿ ಬೇಗ ಗುಣ ಮಾಡ್ಳಿ – ಹೇದು ನಮ್ಮ ಆಶಯ.
~
ಒಂದೊಪ್ಪ: ಬೇನೆಯ ಮದ್ದು ಗುಣಮಾಡುದಲ್ಲ, ಧನ್ವಂತರಿ ಗುಣಮಾಡುವಗ ಆರಾಮ ಕೊಡುದು, ಅಷ್ಟೇ.

10 thoughts on “ವೈದ್ಯರ ಮದ್ದು, ಧನ್ವಂತರಿಯ ಔಷಧಿ..

  1. ತುಂಬಾ ಲಾಯ್ಕಲ್ಲಿ ಮೂಡಿಬಂಯ್ದು….ಈ ಸಪಾತ್ಪಕ್ಷಕ್ಕೆ ಇನ್ನೊಂದು ಅದರದ್ದೇ ಹೆಸರು ಇದ್ದು… ಎಂತಾಳಿ ಆರಿಂಗಾದರೂ ಗೊಂತಿದ್ದಾ?

  2. ಭಾರೀ ಲಾಯಿಕಾಯಿದು ಒಪ್ಪಣ್ಣ ಈ ಲೇಖನ. ಆನು ಕಾನಾವು ಡಾಕುಟ್ರಣ್ಣನಲ್ಲಿಗೆ ಪೂಜೆಗೆ ಹೋಗಿತ್ತಿದ್ದೆ.ಕಾರ್ಯಕ್ರಮ ಲಾಯಿಕಾಯಿದು.

  3. ಭಾರಿ ಲಾಯಿಕಾಯಿದು ಬರದ್ದದು ಒಪ್ಪಣ್ಣ ಮಾವ.ಅಮ್ಮ ಹೇಳ್ತಾ ಇದ್ದು ಈ ಶುದ್ದಿಯ ಹಾ೦ಗೇ ಧನ್ವ೦ತರಿ ಪೂಜೆಯ ಪ್ರಸಾದವು ಭಾರಿ ರುಚಿ ಹೇಳಿ 😉

  4. ಶುದ್ದಿ ಲಾಯಕ ಆಯಿದು ಒಪ್ಪಣ್ಣ, ಧನ್ಯವಾದ೦ಗೊ…..

  5. ಈ ಡಾಕ್ಟ್ರುಕ್ಕಳ ಆಸ್ಪತ್ರೆಯ ಉದ್ಘಾಟನೆಗೆ ಹೋದರೆ ಎಂಥಾ ಹೇಳಿ ಹಾರೈಸುದು ? ಉತ್ತರೋತ್ತರ ಅಭಿವೃದ್ಧಿಯಾಗಲಿ ಹೇಳಿಯಾ ? ಊರಿಲಿ ಕಾಯಿಲೆ ಹೆಚ್ಚಾಗಲಿ ಹೇಳ್ತ ಅರ್ಥವೂ ಬಾರದೋ ಇದರಂದ ?
    ಅಂತೆ ಪೆದಂಬು ಪ್ರಶ್ನೆ ಅಷ್ಟೆ ಇದು -ಸೀರಿಯಸ್ಸು ವಿಚಾರ ಅಲ್ಲ !
    ಲೇಖನ ಲಾಯ್ಕಾಯಿದು ಒಪ್ಪಣ್ಣ , ಧನ್ವಂತರಿಯ ಕೃಪೆ ಎಲ್ಲರ ಮೇಲಿರಲಿ , ಅಮೃತಕಲಶದ ಸತ್ವ ಎಲ್ಲೋರಿಂಗೂ ಸಲ್ಲಲಿ .

    1. [ಸೀರಿಯಸ್ಸು ವಿಚಾರ ಅಲ್ಲ]
      ಇಲ್ಲಿ ಬಂದ ರೋಗಿಗೊಕ್ಕೆ ಬೇಗ ಗುಣ ಆಗಲಿ ಹೇಳಿ ಹಾರೈಸಿ,ಅತ್ತೆ. ವೈದ್ಯರಿಂಗೆ ಯಶಸ್ಸು ಸಿಕ್ಕಲಿ ಹೇಳಿ ಹರಸಿದ ಹಾಂಗೂ ಆತು!

  6. ಧನ್ವಂತರಿ ಬಗ್ಗೆ ಒಳ್ಳೆ ಶುದ್ದಿ. ಧನ್ವಂತರಿ ದೇವರು ನಮ್ಮೆಲ್ಲೋರನ್ನು ಆರೋಗ್ಯ ಸುಖ ನೆಮ್ಮದಿಲಿ ಮಡಗಲಿ.

  7. ವೃತ್ತಿ ಆಧಾರಿತ ದೇವರು..ಫಲವನು ಬಯಸದ ಸೇವೆಯೆ ಪೂಜೆಯು-ಹೇಳಿ ಕುವೆಂಪು ಹೇಳಿದವು.ಇಲ್ಲಿ ಫಲಾಪೇಕ್ಷೆಲಿ ಅವರವರ ವೃತ್ತಿಗೆ ಸಂಬಂಧಿಸಿದ ದೇವರ ಪೂಜಿಸುತ್ತು.ಆಚಾರಿಗೊಕ್ಕೆ ವಿಶ್ವಕರ್ಮ,ವೈದ್ಯರಿಂಗೆ ಧನ್ವಂತರಿ,ಜಟ್ಟಿಗೊಕ್ಕೆ ಹನುಮಂತ-ಹೀಂಗೆಲ್ಲಾ.ತುಂಬಾ ಆಸಕ್ತಿದಾಯಕ ವಿಷಯ ಒಪ್ಪಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×