Oppanna.com

ಹತ್ತೂರು ಕಂಡವ° ಪುತ್ತೂರು ಬಿಡ°!

ಬರದೋರು :   ಒಪ್ಪಣ್ಣ    on   23/04/2010    18 ಒಪ್ಪಂಗೊ

ಮಾಲಿಂಗೇಶ್ವರಾ!
ಈ ಸೆಕಗೂ ನಮ್ಮ ಊರಿಲಿ ಹಬ್ಬಂಗೊಕ್ಕೆ ಏನೂ ಕಮ್ಮಿಲ್ಲೆ!
ಅಲ್ಲದೋ?!

ಊರಿನ ಶೆಕೆ ಶುದ್ದಿ ಮಾತಾಡಿಗೊಂಡು, ಮೀನಾಮೇಷ ಲೆಕ್ಕ ಹಾಕಿಗೊಂಡು ಇದ್ದ ಹಾಂಗೆಯೇ, ಪುತ್ತೂರು ಜಾತ್ರೆ ಬಂದೇ ಬಿಟ್ಟತ್ತು ಅದಾ!
ಹ್ಮ್ ಅಪ್ಪು! ಪುತ್ತೂರು ಜಾತ್ರೆ ಬಪ್ಪದು ಮೀನ-ಮೇಷ ತಿಂಗಳುಗಳಲ್ಲಿ.
ಪ್ರತಿ ಒರಿಶ ಮೀನಾ ತಿಂಗಳು ಇಪ್ಪತ್ತೇಳಕ್ಕೆ ಕೊಡಿ ಏರಿ, ಮತ್ತೆ ಹತ್ತು ದಿನ ಗೌಜಿಲಿ ಪುತ್ತೂರು ಪೇಟೆಲಿ ಜಾತ್ರೆ ಮಾಡಿ, ಕೊಡಿ ಇಳುದು, ದೈವಂಗೊಕ್ಕೆ ಕೋಲ ಕೊಡುಸಿ ಬಿರಿವದು – ಮಾಲಿಂಗೇಶ್ವರನ ಜಾತ್ರೆಯ ವಿಶೇಷ…!

ಪುತ್ತೂರು ದೇವರ ರತೋತ್ಸವ...
ಪುತ್ತೂರು ದೇವರ ರತೋತ್ಸವ...

~
ಮದಲಿಂಗೇ ಹಾಂಗೇ, ಪುತ್ತೂರು ಹೇಳಿತ್ತುಕಂಡ್ರೆ ವೆವಹಾರದ ಕೇಂದ್ರವೇ.
ನೋಡಿನಿಂಗೊ:ಈಗಳೂ ಹಾಂಗೇ, ನಮ್ಮಲ್ಲಿ ಎಂತಾರು ವಸ್ತುಗೊ ಬೇಕಾರೆ ಮದಾಲು ನೀರ್ಚಾಲಿಲಿ ನೋಡ್ತದು, ಅಲ್ಲಿಲ್ಲದ್ರೆ ಬದಿಯೆಡ್ಕಲ್ಲಿ, ಅಲ್ಲಿ ಸಿಕ್ಕದ್ರೆ ಕಣಿಯಾರಪೇಟೆಲಿ, ಅಲ್ಲಿಯೂ ಒದಗದ್ರೆ ಕಾಸ್ರೋಡಿಲಿ – ಮತ್ತಾಣದ್ದು ಕೊಡೆಯಾಲ ಆದರೂ, ’ಪುತ್ತೂರಿಲಿ ದೆಯ್ಯನಲ್ಲಿ ಇಪ್ಪಲೂ ಸಾಕು – ಮೂಡ್ಳಾಗಿ ಹೋಪಗ ವಿಚಾರುಸುವೊ°’ – ಹೇಳ್ತ ಜೆನಂಗೊ ಧಾರಾಳ ಇದ್ದವು.. 🙂

ತೀರಾ ಮದಲಿಂಗೆ ಪುತ್ತೂರು ವಿಜಯನಗರದ ಆಸ್ಥಾನದ ಒಳಪ್ಪಟ್ಟರೂ, ಮತ್ತೆ ಸ್ಥಳೀಯ ಆಳ್ವಿಕೆಯ ಅಡೀಲೇ ಮುಂದುವರುದಿತ್ತು.
ತುಳುವಂಗೊ, ಬಲ್ಲಾಳಂಗೊ, ಅವು, ಇವು – ಎಲ್ಲೊರುದೇ. ರಾಜ° ಯೇವದೇ ಆಗಿ ಬಂದಿದ್ದರೂ,ದೇವಸ್ಥಾನವ ಚೆಂದ ನೋಡಿಗೊಂಡವಡ, ಮಾಷ್ಟ್ರುಮಾವ° ಹೇಳಿದವು.
ದೇವಸ್ಥಾನದ ಹತ್ರೆ ಒಂದು ಕೆರೆದೇ ಇದ್ದಿದಾ – ಸಾಮಾನ್ಯ ಜೆನಜೀವನಕ್ಕೆ ಬಾರೀ ಉಪಯುಕ್ತ ಆಯಿದು ಆ ದೇವರಕೆರೆ.
ಊರೂರಿಂದ ಪ್ರವಾಸ ಹೋಪೋರು ಆ ಕೆರೆಕಟ್ಟೆಲಿ ಮನುಗಿ, ಒರಗಿ, ಎದ್ದು, ಕೆರೆಲಿ ಮಿಂದು, ಮಾರ್ನೇದಿನ ದೇವರ ದರ್ಶನ ಮಾಡಿ, ಅಡಿಗೆಮಾಡಿ, ಉಂಡಿಕ್ಕಿ ಪ್ರಯಾಣ ಮುಂದರುಸುಗಡ.
ಯೇವ ಹೊಸಬ್ಬ° ಆದರೂ ಹೆದರಿಕೆ ಇಲ್ಲದ್ದೆ ಮನಿಕ್ಕೊಂಗಡ ಆ ಕಟ್ಟೆಲಿ – ಕಾವಲೆ ಮಾಲಿಂಗೇಶ್ವರ° ಇದ್ದ° ಅಲ್ಲದೋ!
ಹೆಚ್ಚಲ್ಲ – ಮಾಷ್ಟ್ರುಮಾವ° ಶಾಲಗೆ ಹೋಪಗಳೂ ಕೆರೆಕಟ್ಟೆಲಿ ಮನಿಕ್ಕೊಂಗಡ ಜೆನಂಗೊ. ಮಾಷ್ಟ್ರುಮಾವನೂ ಮನಿಕ್ಕೊಂಡಿದವಡ, ಬೇಕಷ್ಟು ಸರ್ತಿ!

ಆ ಕೆರೆಲಿ ಮದಲಿಂಗೆ ಮುತ್ತು (ಒಪ್ಪ) ಸಿಕ್ಕಿಗೊಂಡು ಇತ್ತಡ, ಹಾಂಗಾಗಿ ಮುತ್ತೂರು – ಮುಂದಕ್ಕೆ ಪುತ್ತೂರು ಹೇಳಿ ಆತು, ಹೇಳಿದವು ಮಾಷ್ಟ್ರುಮಾವ ನೆಗೆಮಾಡಿಗೊಂಡು.
ಹೊಗೆಸೊಪ್ಪು ತಿಂದು ಅವರ ಹಲ್ಲು ಕಪ್ಪಾಯಿದು…
ಸಾವಿರಾರು ಪ್ರಯಾಣಿಕರಿಂಗೆ ಆ ಕೆರೆ ಆಶ್ರಯ ಕೊಟ್ಟಿದು ಮದಲಿಂಗೆ.
ಈಗಾಣೋರಿಂಗೆ ಹೋಟೆಲ್ ರಾಮ – ಒಂದೇ ಕಾಂಬದಿದಾ! – ಕಳಾಯಿಗೀತತ್ತೆ ಹೇಳಿದಾಂಗೆ “ಕಾಲಕ್ಕೆ ತಕ್ಕ ಕೋಲ” ಜೆನಂಗಳದ್ದು!
~

ಮಡಿಕೇರಿಂದ ಕೊಡೆಯಾಲಕ್ಕೆ ಹೋವುತ್ತರೆ ಎಡೆಲಿ ಸಿಕ್ಕುತ್ತ ಪುತ್ತೂರು ದೊಡ್ಡಪೇಟೆ.  ಹಾಂಗಾಗಿ ಪ್ರಯಾಣಿಕರದ್ದು ಒಂದು ಟಿಕಾಣಿ ಇದ್ದೇ ಇದ್ದು. ಅದೇ ನಮುನೆ ಗಟ್ಟದ ಮೇಗಂದ ನಮ್ಮ ಬೈಲಿಂಗೆ ಬತ್ತರೂ ಹಾಂಗೇ, ಪುತ್ತೂರು ಕೇಂದ್ರ ಸ್ಥಾನ…
ಅವಕ್ಕೂ ಪುತ್ತೂರು ಒಂದು ಒಳ್ಕೊಂಬ ಜಾಗೆಯೇ! ಅದಾ, ಬಿಜಾಪುರದ ಗೌಡುಗೊ ಪುತ್ತೂರು ಬಷ್ಟೇಂಡಿಲಿ ಕೂದುಗೊಂಡು ಇದ್ದಿದ್ದವು ಒಂದು ಕಾಲಲ್ಲಿ.
ಅಡಕ್ಕೆತೋಟದ ಹತ್ತೊಕ್ಲುಮಾವ ಬಷ್ಟೇಂಡಿಲೇ ಅವರ ಕ್ರಯಮಾತಾಡಿ ಮನಗೆ ಕರಕ್ಕೊಂಡು ಬಕ್ಕು, ಮದಲಿಂಗೆ!

ಹಾಂಗೆಯೇ, ಅಡಕ್ಕೆ ಮಾರ್ಲುದೇ ಒಳ್ಳೆ ಜಾಗೆ ಅಲ್ಲದೋ – ಪುತ್ತೂರು?
ಕೆಮ್ಕದ ದೊಡ್ಡ ಆಪೀಸು ಇದ್ದು, ಅದರ ಮೇಗಂದ ಏಪೀಎಮ್ಸೀ ಹೇಳಿ ಇನ್ನೊಂದು ಎಂತದೋ ಇದ್ದು, ಸೇಟುಗಳೂ ಇದ್ದವು, ಮಾಪ್ಳೆಗಳೂ ಇದ್ದವು – ಎಲ್ಲವುದೇ ಸೇರಿ ಅಡಕ್ಕೆ ತೆಕ್ಕೊಂಡೋದರೆ ಬೇಡ ಹೇಳಿ ಆಗ!

ಚಿನ್ನದಂಗುಡಿಯ ಸಾಲೋ ಸಾಲು ಇದ್ದು, ಕೋರ್ಟು ರೋಡಿಲಿ, ಬೇಕಾದಷ್ಟು ಚಿನ್ನ ತೆಗವಲಕ್ಕು!
ಕಾರಂತಜ್ಜಂಗುದೇ ಪುತ್ತೂರೇ ಕೊಶಿ ಆದ್ದು, ಅವರ ಸಾಹಿತ್ಯ ಕೃತಿ ಅಲ್ಲೇ ಅರಳಿ ಬಂದದಡ!
ಈಗ ಮಾಂತ್ರ ಮಾಪ್ಳೆಗೊ ಎಲ್ಲ ಜಾಗೆಲಿಯುದೇ ತುಂಬಿ, ಕಲಂಕು ಮಾಡಿಯೊಂಡು ಇದ್ದವು. ಅದಿರಳಿ,
~

ಓ ಮೊನ್ನೆ ಕಣಿಯಾರ ದೇವಸ್ಥಾನಲ್ಲಿದೇ ಜಾತ್ರೆ ಬಂದಿಪ್ಪಗ ನಾವು ಇದೇ ನಮುನೆ ಶುದ್ದಿ ಮಾತಾಡಿದ್ದು.
ಕಣ್ಯಾರದ ಜಾತ್ರೆಲಿ ಬೆಡಿಗೇ ಹೆಚ್ಚಿನ ಗೌಜಿ – ಕುಂಬ್ಳೆಬೆಡಿ ಹೇಳಿಯೇ ಜೆನ ಗುರುತುಸುತ್ತವು. ಆದರೆ ಪುತ್ತೂರು ಜಾತ್ರೆ ಹಾಂಗಲ್ಲ, ಇಡೀ ಜಾತ್ರೆಯೇ ಗೌಜಿ – ಹೆಸರುವಾಸಿ!
ಓ ಮೊನ್ನೆ ಪುತ್ತೂರಿನ ಜಾತ್ರೆಯ ಗೌಜಿಯ ವಿಶಯಲ್ಲಿ ಒಪ್ಪಣ್ಣಂದೇ, ಕೊಳಚ್ಚಿಪ್ಪುಭಾವಂದೇ ಸೀತ ಉದಯಣ್ಣನ ಒಟ್ಟಿಂಗೆ ದೇವಸ್ತಾನಕ್ಕೆ ಹೋದೆಯೊ°.
ಹಾಂ, ಉದಯಣ್ಣನ ಗುರ್ತ ಇದ್ದನ್ನೆ – ಮಾಲಿಂಗೇಶ್ವರ ದೇವರಿಂಗೆ ಪೂಜೆಮಾಡ್ತ ಅಣ್ಣ!
ಒಳ್ಳೆತ ಕುಶಾಲಿನ ಜೆನ, ಅಷ್ಟೇ ಗಾಂಭೀರ್ಯವುದೇ.
ಎಂಗೊ ಅಲ್ಲಿಗೆತ್ತುವಗ ಒಳದಿಕೆ ಬಡಜದಣ್ಣಂದೇ ಇದ್ದವು, ಪಟ್ಟಾಜೆತಮ್ಮಣ್ಣಂದೇ ಇರ್ತವು. ಬೈಲಿನೋರು ಸುಮಾರು ಜೆನ ಇದ್ದವಪ್ಪಾ.. ಮದಲಿಂಗೆ ಕೆದಿಲಾಯಂಗೊ, ಪುತ್ತೂರಾಯಂಗೊ ಮಾಂತ್ರ ಅಡ.
~

ಅಂತೂ ನವಗೆ ಉದಯಣ್ಣ ಸಿಕ್ಕಿದವು, ಜಾತ್ರೆ ಸಮೆಯದ ಶುದ್ದಿಗೊ ಸುಮಾರಿತ್ತು ಅವರತ್ರೆ ಮಾತಾಡ್ಳೆ. ಹಾಂಗಾಗಿ ಒಂದು ಶುದ್ದಿಗೆ ಸಾಕಪ್ಪಷ್ಟು ವಿಶಯ ಸಿಕ್ಕಿತ್ತು.
ಸುರೂವಿಂಗೆ ತೀರ್ತ ಪ್ರಸಾದ ಕೊಡುಸಿದವು..
ಗರ್ಭಗುಡಿಯ ಎದುರು ನಿಂದೊಂಡು ಮಾಲಿಂಗೇಶ್ವರನ ನೋಡುವಗ ಅವನ ದೈವೀ ಸ್ವರೂಪ ಕಂಡತ್ತು.

ಮಾಲಿಂಗೇಶ್ವರ ದೇವರ ಬಿಂಬ - ಸಾಲಂಕೃತ ಲಿಂಗ!

ಎಲ್ಲವನ್ನೂ ಬಿಟ್ಟು ಜೀವರಹಸ್ಯ ಇಪ್ಪ ಲಿಂಗರೂಪಲ್ಲಿ ಬಂದು ನೆಲೆ ಆದ ಸ್ಮಶಾನವಾಸಿಯ ಕಂಡತ್ತು..
ಬಟ್ಟಮಾವಂದ್ರು ರುದ್ರವ ತಾರಕ ಸ್ವರಲ್ಲಿ ಹೇಳಿಗೊಂಡಿತ್ತಿದ್ದವು..
ತೀರ್ತ ತೆಕ್ಕೊಂಡು ಹೊಡಾಡಿ ಆತು, ಮೆಲ್ಲಂಗೆ ಹೆರಬಂದುಗೊಂಡಿಪ್ಪಗ ಜಾತ್ರೆಯ ಬಗ್ಗೆ ವಿವರುಸಿಗಂಡು ಹೋದವು..

ಪುತ್ತೂರು ಜಾತ್ರೆಲಿ ಹತ್ತು ದಿನಲ್ಲಿ ಸುತ್ತಮುತ್ತಲಿನ ಹತ್ತೂರಿಂಗೆ ದೇವರು ಸವಾರಿ ಹೋಪಲಿದ್ದಡ.
ಹಾಂಗಾಗಿ ಆ ಊರಿನ ವಿವರಂಗಳ ಒಟ್ಟಿಂಗೆ ಸಮಗ್ರ ಮಾಹಿತಿ ಕೊಟ್ಟವು ಉದಯಣ್ಣ, ಈ ಸೆಕಗೆ ದೊಡ್ಡಕಂಬಿಯ ಜರಿ ಶಾಲಿಲಿ ಮೋರೆಯ ಬೆಗರು ಉದ್ದಿಗೊಂಡು..!
ಪುತ್ತೂರು ಜಾತ್ರೆಯ ಬಗ್ಗೆ ಸಣ್ಣ ಮಾಹಿತಿ ಈ ಸರ್ತಿ…
~

ರಾಜರಕಾಲಲ್ಲಿ ಪ್ರತಿದಿನ ಜಾತ್ರೆ ಸುರುಅಪ್ಪ ಮದಲು ರಾಜರ ’ದೀಟಿಗೆಸಲಾಮು’ ಗೌರವ ಕೊಟ್ಟುಗೊಂಡು ಕರಕ್ಕೊಂಡು ಬಪ್ಪಲಿತ್ತಡ. ಈಗ ಅದೇ ಕ್ರಮವ ’ಪೋಲೀಸುಷ್ಟೇಷನಿಂದ ಪೋಲೀಸರ’ ಕರಕ್ಕೊಂಡು ಬಪ್ಪದಡ, ನಂಬೀಶಂಗೊ.
ಅದೊಂದು ಪುತ್ತೂರಿನ ವೈಶಿಷ್ಟ್ಯ ಆಚರಣೆ!

ಇನ್ನು, ಪ್ರತಿದಿನ ಎಂತ ವಿಶೇಷ ಹೇಳಿ ನೋಡುವೊ°..

೧. ಸುರೂವಾಣ ದಿನ:
ಕೊಡಿ:
ಪ್ರತಿಒರಿಶ ಮೀನ ಮಾಸ ೨೭ಕ್ಕೆ ಕೊಡಿ ಏರುದಿದಾ…
ತಂತ್ರಿಗೊ ಬಂದು ಮೂರ್ತ ಮಾಡಿ ಕೊಡಿ(ಬಾವುಟ) ಏರ್ತ ಗೌಜಿ, ಅದೊಂದು ನೋಡ್ಳೇ ಚೆಂದ..
ಅಡಕ್ಕೆಗೊನೆ, ಬೊಂಡಕಿಲೆ, ಗರಿ, ಮಡ್ಳು ಎಲ್ಲ ಕಟ್ಟಿ ಚೆಂದದ ಅಲಂಕಾರ ಮಾಡಿದ ಕೊಡಿಮರಕ್ಕೆ ಬೇತಾಳನ ಚಿತ್ರ ಬರದ ಧ್ವಜವ ಏರುಸುದೇ ಒಂದು ಹಬ್ಬ..
ಅಲ್ಲಿಂದ ಮತ್ತೆ ಹತ್ತು ದಿನ ಪುತ್ತೂರು ಸೀಮೆ (ಮದಲಿಂಗೆ ಬಲ್ಲಾಳನ ಆಳ್ವಿಕೆ ಇಪ್ಪಗಾಣ ಸೀಮೆ)ಲಿ ಬೇರೆ ಏವ ಶುಬಕಾರ್ಯವುದೇ ನೆಡೆಯ ಅಡ.
ಕೆಲವು ಜೆನ ಕೊಡಿ ಇಳಿವನ್ನಾರ ಮೆಟ್ಟಿನಜೋಡುದೇ ಹಾಕವು – ಒಬ್ಬೊಬ್ಬರ ಶ್ರದ್ಧೆ ಅದು, ಒಪ್ಪಕ್ಕ ಲಲಿತಸಹಸ್ರನಾಮ ಓದುತ್ತ ಹಾಂಗೆ!

ಆ ದಿನ ಇರುಳಿಂಗೆ ಅಂಕುರಪೂಜೆ ಹೇಳಿ ಒಂದು ಅಪುರೂಪದ ಪೂಜಾಕಾರ್ಯ ನೆಡೆಶುತ್ತವು.
ಅಂಕುರಪೂಜೆ ಹೇಳಿತ್ತುಕಂಡ್ರೆ ಕೆಲವು ಧಾನ್ಯಂಗಳ, ಬಿತ್ತುಗಳ ಅಂಕುರ (ಮುಂಗೆ) ಬರುಸಿ, ಅದರ ಸಮರ್ಪಣೆಮಾಡಿ ಪೂಜೆ!
ಜಾತ್ರೆಯೇ ಮುಂಗೆಬಂದ ದಿನ ಈ ಮುಂಗೆಪೂಜೆ!!

ಜಾತ್ರೆಯ ಸುರೂವಾಣ ಈ ದಿನ ಕಲ್ಲೇಗಕ್ಕೆ (ರಾಮಜ್ಜನ ಕೋಲೇಜಿನ ಊರಿಂಗೆ) ಸವಾರಿ ಹೋಪದಡ.
ಸವಾರಿ ಹೋಪಗ ಆಯಾ ಊರಿನ ಶ್ರದ್ಧಾಳುಗೊ ಕಟ್ಟೆಪೂಜೆ ಮಾಡುಸುಗು – ಗೊಂತಿದನ್ನೇ?
ಮಾರ್ಗದ ಕರೆಲಿ ತೋರಣಕಟ್ಟಿ, ಒಂದು ಶ್ಟೂಲಿಲಿ ಒಂದು ಆರತಿ, ಹೂಗಿನ ಹರಿವಾಣ, ನೈವೇದ್ಯದ ಹಣ್ಣುಕಾಯಿ ಇತ್ಯಾದಿ ಮಡಗಿ ದೇವರುಬಪ್ಪದನ್ನೇ ಕಾದು ನಿಂಗು.
ದೇವರ ಸವಾರಿಯೂ ಹಾಂಗೇ, ಭಕ್ತರ ಕಟ್ಟೆಗೊ ಕಂಡ ಕೂಡ್ಳೇ ನಿಂಗು, ಕಟ್ಟೆಪೂಜೆಗೆ. ಇವರ ಸಮರ್ಪಣೆಯ ವಸ್ತುಗಳ ಬಟ್ಟಮಾವ ನೈವೇದ್ಯ, ಆರತಿಮಾಡಿ ಕೊಟ್ಟದರ ಸಂತೋಷಲ್ಲಿ ತೆಕ್ಕೊಂಗು.

೨. ಎರಡ್ಣೇದಿನ:

ಜಾತ್ರೆಯ ಎರಡ್ಣೇ ದಿನ – ಇಂದು ಹೆಚ್ಚೆಂತ ಗೌಜಿ ಇಲ್ಲದ್ರೂ,
ಯೇವತ್ತಿನ ಕ್ರಮ ಇದ್ದೇ ಇರ್ತು. ನಿತ್ಯಬಲಿ, ತಂತ್ರ, ಒಳಾಣ ಅಂಗಣದ ಸುತ್ತುಗೊ, ರಂಗಪೂಜೆ, ವಿಶೇಷಪೂಜೆಗೊ ನೆಡದೇ ನೆಡೆತ್ತು.
ಜೆನಂಗೊ ಜೆಮೆ ಅಪ್ಪಲೆ ಸುರು ಆಗಿರ್ತು, ಬಪ್ಪೋರು ಬಂದುಗೊಂಡೇ ಇರ್ತವು, ಅವರವರ ಪುರುಸೋತಿಲಿ!

ಇಂದು ಸೂತ್ರಬೆಟ್ಟಿಲೆ ಆಗಿ ಸಾಲ್ಮರ ಹೊಡೆಂಗೆ ಸವಾರಿ.  ನಮ್ಮ ಬೈಲಿನ ಭಾರದ್ವಾಜದ ಮಕ್ಕೊಗೆ ಗೌಜಿಯೇ ಗೌಜಿಅಡ, ಶ್ರೀಅಕ್ಕ ಹೇಳಿದವು.

೩. ಮೂರ್ನೇ ದಿನ:
ಜಾತ್ರೆಯ ಯಥಾವತ್ತು ಮುಂದುವರುದ್ದು. ನಿನ್ನೇಣಹಾಂಗೆಯೇ ಗೌಜಿ ಇದ್ದು.. ಅದೇ ತಂತ್ರ, ಮಂತ್ರ, ಅಲಂಕಾರ, ಚೆಂಡೆ, ಪಟಹ ಇತ್ಯಾದಿ..
ಅಂಗಣದ ಸೇವೆಗೊ ಎಲ್ಲ ಅಲ್ಲದ್ದೇ, ಇಂದ್ರಾಣ ಸವಾರಿ ಪರ್ಲಡ್ಕ ಹೊಡೆಂಗೆ ಅಡ. ಅಲ್ಲಿಗೆ ಹೆಸರೇ ಶಿವಪೇಟೆ ಹೇಳಿ ಮಡಗಿದ್ದವಡ ಈಗ – ಅರ್ತಿಕಜೆಅಜ್ಜ ಹೇಳಿದವು.
ಒರಿಶಕ್ಕೊಂದರಿ ಶಿವ° ಬತ್ತ ಜಾಗೆ ಅಲ್ಲದಾ, ಹಾಂಗೆ ಅಡ.
ಪರ್ಲಡ್ಕಲ್ಲೆ ಬಪ್ಪಗ ಮಂದಾರದ ಕೂಸಿಂಗೆ ಗೌಜಿಯೇ! ಸೈಕ್ಕಾಲಿಲಿ ಮಾರ್ಗದ ಕರೆಂದ ಮನಗೆ ಅತ್ಲಾಗಿತ್ಲಾಗಿ ಹೋಯ್ಕೊಂಡಿತ್ತು, ಆ ಇರುಳುದೇ.
ಗೇಟಿನ ಹತ್ರೆ ಆರತಿ ಆದ್ದರ್ಲಿ ಪುಟ್ಟತ್ತೆಗೆ ದೇವರ ಹತ್ತರಂದ ನೋಡ್ಳೆ ಸಿಕ್ಕಿತ್ತು!
ಮುಂದೆ ಶಿವಪೇಟೆಲಿ ಇನ್ನೂ ಗೌಜಿ ಇತ್ತಡ. ಪುಳ್ಳಿ ಬೆಂಗುಳೂರಿಂದ ಬಂದಕಾರಣ ಅರ್ತಿಕಜೆಅಜ್ಜಂಗೆ ನೆಡಿರುಳಾದರೂ ಒರಗಲೆ ಗೊಂತಿಲ್ಲೆ!!

೪. ನಾಲ್ಕನೇ ದಿನ:
ಅದೇ ನಮುನೆ ಮುಂದರುದ್ದು ಶಿವನ ಗೌಜಿ!
ಜಾತ್ರೆ ತೆಕ್ಕೊಳ್ತಾ ಇದ್ದ°, ಪೇಟೆ ಸುತ್ತುತ್ತಾ ಇದ್ದ°, ಪೇಟೆಯವಕ್ಕೆ – ಸೀಮೆಯವಕ್ಕೆ ಆಶೀರ್ವಾದ ಮಾಡ್ತಾ ಇದ್ದ°. ಇಂದ್ರಾಣ ಸವಾರಿ ಬಂಗಾರುಪೇಟೆ ಹೊಡೆಂಗೆ. ಅದೆಲ್ಲಿ!? – ಅದೇ ಈಗಾಣ ಕೋರ್ಟುರೋಡು!
ಅಲ್ಲಿ ಕೊಡಿಂದ ಕೊಡಿಂಗೆ ಇಪ್ಪದೇ ಚಿನ್ನದ ಅಂಗುಡಿ, ಅಲ್ಲದೋ? – ಈಗ ಎಡೆಲಿ ಎರಡು ಮೆಟ್ಟಿನಜೋಡು ಬಂದರೂ, ಮದಲಿಂಗೆ ಹಾಂಗೇ ಇತ್ತು, ಎಷ್ಟೋ ಒರಿಶಂದ..
ಮುಳಿಯದ ಆನೆಕುಂಞಿಗೆ ಬಯಂಕರ ಗೌಜಿಯ ದಿನ. ಮೈಗೆ ಇಡೀ ಚಿನ್ನ ಹಾಯ್ಕೊಂಡು ಕೊಣಿತ್ತಾ ಇಕ್ಕು, ಅಂಗುಡಿ ಒಳದಿಕೆ!

೫. ಐದನೇ ದಿನ:
ಇಂದು ವಿಶು! ಕಣಿ ನೋಡಿ ಶುಭಕಾರ್ಯ ಮಾಡ್ತ ದಿನ.
ಎಲ್ಲೊರೂ ಅವರವರ ಮನೆಲಿ ಕಣಿ ಮಡಗಿರೂ, ಅವಕಾಶ ಆದರೆ ಒಂದು ಗಳಿಗೆ ದೇವಸ್ಥಾನಕ್ಕೆ ಹೋಪಲಿದ್ದನ್ನೇ!
ಹೇಂಗೂ ಇಂದು ಉದಿಯಪ್ಪಗಳೇ ದೇವಸ್ಥಾನಲ್ಲಿ ಕಣಿ ಮಡುಗ್ಗು, ನೂರಾರು ಜೆನ ಪಲ, ತರಕಾರಿ, ಸುವಸ್ತುಗಳ ತಂದು ಮಡಗಿ ಅಡ್ಡಬೀಳುಗು.
ಮಾಲಿಂಗೇಶ್ವರನ ಪ್ರಸಾದ ತೆಕ್ಕೊಂಡು ನೆಮ್ಮದಿಲಿ ಹೆರಡುಗು..
ಹೋಪಗ ಪುತ್ತೂರು ಮಾರ್ಗದ ಕರೆಯ ಕಣಿ ನೋಡದ್ದೆ ಕಾಲಡಿಮೊಗಚ್ಚಿರೂ ಆತು, ಅದು ಬೇರೆ!

ಇಂದ್ರಾಣ ಸವಾರಿ ಪಡೀಲು ಹೊಡೆಂಗೆ. ನಮ್ಮ ದ್ವಾರಕದಣ್ಣ ಇಂದು ಮನಗೆ ಹೋಪದು ತಡವಾಗಿ!
ಡೀವಿಯ ಮನೆ ಇಲ್ಲೇ ಇಪ್ಪದಡ, ಗುಣಾಜೆ ಮಾಣಿ ಹೇಳಿದ್ದು.

೬. ಆರನೇ ದಿನ:
ಆರನೇ ದಿನ ಬಂದೇ ಬಿಟ್ಟತ್ತು!
ಬೇರೆ ಎಂತ ವಿಶೇಷ ಇಲ್ಲದ್ರೂ, ಜಾತ್ರೆಯ ಇನ್ನೊಂದು ದಿನ ಹೇಳ್ತ ಗೌಜಿ ಇದ್ದೇ ಇದ್ದು.
ನಿನ್ನೆ ಕಣಿ ಮಡಗಿದ್ದರ ಎಲ್ಲ ತೆಗದು ಗಡುದ್ದಿಲಿ ಒಂದು ಅಡಿಗೆ ಮಾಡುಗು, ಎಲ್ಲಾ ತರಕಾರಿಯ ಮಿಶ್ರ ಮಾಡಿ! ಲಾಯ್ಕ ಅಕ್ಕುದೇ ಅದು.

ಇಂದ್ರಾಣ ಸವಾರಿ ಬನ್ನೂರು ಹೊಡೆಂಗೆ.
ಕರೆಂಟಿನ ಕಂಬಂಗಳ ಎಡೆಲಿ ಗೇಸುಲೈಟಿನ ಬೆಣಚ್ಚಿಲಿ ಹೋಪದಡ, ಪ್ರಿನ್ಸುಪಾಲುಮಾವ ಹೇಳಿದವು.
ಹ್ಮ್, ಪ್ರಿನ್ಸುಪಾಲುಮಾವಂದು ಕಟ್ಟೆಪೂಜೆ- ಹಣ್ಣುಕಾಯಿ ಇತ್ತಡ, ಆ ಅಶ್ವತ್ಥಕಟ್ಟೆಯ ಹತ್ತರೆ.

೭. ಏಳನೇ ದಿನ:
ಕೆರೆಆಯನ:
ಕೆರೆಮಧ್ಯಲ್ಲಿ ಕಟ್ಟಿದ ದ್ವೀಪದ ಹಾಂಗಿರ್ತ ಗುಡಿಗೆ ತೆಪ್ಪಲ್ಲಿ ದೇವರು ಹೋಗಿ, ಮಿಂದು, ಪುನಾ ಬಪ್ಪ ಚೆಂದ ನೋಡ್ಳೇ ಕುಶಿ.
ಕೆರೆಯ ಸುತ್ತಲೂ ಜೆನಂಗಳೇ ಜೆನಂಗೊ. ಜೆನಂಗಳದ್ದೇ ಕಟ್ಟೆಯ ಹಾಂಗೆ ಕಾಂಗು!
ಹಣತೆಯ ಬೆಣಚ್ಚು ಕೆರೆನೀರಿಲಿ ಹಂದುವಗ ಸಂಗೀತದ ಸ್ವರವೇ ಏರಿದ ಹಾಂಗೆ ಕಾಂಗು!
ಇಂದು ಸವಾರಿ ದೇವಸ್ಥಾನಲ್ಲೇ, ಅಲ್ಲೇ ಕರೆಲಿ ಇಪ್ಪ ಉಳ್ಳಾಲ್ತಿ ಕಟ್ಟೆಯ ಹತ್ರಂಗೆ ಒರೆಂಗೆ…

ಇದರೆಡಕ್ಕಿಲಿ ಬಲ್ನಾಡುಮಾಣಿ ಒಂದು ಶುದ್ದಿ ಹೇಳಿದ, ಅಲ್ಯಾಣ ಹೆಸರುವಾಸಿ ಉಳ್ಳಾಲ್ತಿ ಇದ್ದಲ್ಲದೋ – ಅದು ಇಂದು ದೇವರ ಭೇಟಿಗೆ ಬಪ್ಪದು ಪುತ್ತೂರು ಜಾತ್ರೆಯ ಇನ್ನೊಂದು ವಿಶೇಷ ಅಡ.
ಭಕ್ತಾದಿಗೊ ಆ ಉಳ್ಳಾಲ್ತಿಗೆ ರಾಶಿರಾಶಿ ಮಲ್ಲಿಗೆ ಸಮರ್ಪಣೆ ಮಾಡುದು ಒಂದು ಕ್ರಮ.
ಈ ಸರ್ತಿ ಅಲ್ಲಿಯೂ ಒಂದು ದಾಕಲೆ ಅಡ – ಎಂಟುಸಾವಿರ ಮಲ್ಲಿಗೆ ಚೆಂಡು ಸಮರ್ಪಣೆ ಆಯಿದಡ!
ಉಳ್ಳಾಲ್ತಿಯಷ್ಟೇ ಕೊಶಿ ಬಾಯಮ್ಮಂಗೂ ಆಯಿಕ್ಕು!

೮. ಎಂಟನೇ ದಿನ:
ಪುತ್ತೂರುಬೆಡಿ:

ಇಂದು ರಥೋತ್ಸವ – ರಟ್ಟೆಜವ್ವನಿಗರಿಂಗೆ ರಥ ಎಳವ ಗೌಜಿ! ಅಜ್ಜಂದ್ರಿಂಗೆ ಕರೆಲಿ ನಿಂದೊಂಡು ಬೀಡಿ ಎಳವ ಗೌಜಿ!!
ಈ ಸರ್ತಿ ಮುತ್ತಪ್ರೈ ಕೊಡುಸಿದ ಹೊಸಾ ರಥ ಅಡ, ದೊಡ್ಡದು.
ಗುಣಾಜೆ ಕುಂಞಿ ಎಷ್ಟು ಸರ್ತಿ ಪಟ ತೆಗದರೂ ಅವನ ಕೆಮರಲ್ಲಿ ಇಡೀ ಹಿಡುಕ್ಕೊಂಡೇ ಇತ್ತಿಲ್ಲೆಡ!
ಅಷ್ಟು ದೊಡ್ಡದು!! – ಕೋಟಿಗಟ್ಳೆ ಕ್ರಯದ್ದಡ.. ಅದರ್ಲಿ ನಮ್ಮ ಪೈಸವೂ ಇದ್ದಡ, ಕೊಳಚ್ಚಿಪ್ಪುಬಾವ ನೆಗೆಮಾಡಿಗೊಂಡು ಹೇಳಿದ.

ರತೋತ್ಸವ – ಆಗಿಯೊಂಡು ಇಪ್ಪಗಳೇ ಬೆಡಿ!!
ಈ ಸರ್ತಿ ಅದುದೇ ಎರಡೆರಡು ಅಡ! ದೇವಸ್ಥಾನದ ಲೆಕ್ಕಲ್ಲಿ ರಜ, ಮುತ್ತಪ್ರೈ ಲೆಕ್ಕಲ್ಲಿ ರಜ..!
ಹೊಟ್ಟುಸಿದ್ದೇ ಹೊಟ್ಟುಸಿದ್ದು, ರಾಮಜ್ಜನ ಕೋಲೇಜು ಗೋಡೆಗಳ ಅದುರುಸುವನ್ನಾರ ಮಾಲಿಂಗೇಶ್ವರಂಗೆ ತೃಪ್ತಿ ಆಯಿದಿಲ್ಲೆಡ!
ಇಂದ್ರಾಣ ಸವಾರಿ ದೇವಸ್ಥಾನದ ಹತ್ತರೆಯೇ ಇಪ್ಪ ಬಂಗಾರ್-ಕಾಯೆರ್ ಕಟ್ಟೆ ಒರೆಂಗೆ.

ಇಂದು ಇದೆಲ್ಲ ಆದ ಮತ್ತೆ ಶಯನ! ಶಯನ ಹೇಳಿರೆ ಮನಿಕ್ಕೊಂಬದು..
ದೇವರು ಯೇವತ್ತೂ ಮನುಗದ್ರೂ, ಇಂದೊಂದು ದಿನ ಮನುಗುದು ಹೇಳಿ ವಿಶೇಷ ಕಲ್ಪನೆ.

ಈ ಸರ್ತಿ ಬೆಡಿಂದ ಮೊದಲು ಮಳೆ ಬಂದು ರಜ್ಜ ಜೆನ ಕಮ್ಮಿ .. ಗ್ರೇಶದ್ದೆ ಬಂದ ಮಳೆಗೆ ಜಾತ್ರೆ ಗೆದ್ದೆಲಿದ್ದೋರೆಲ್ಲ ಚೆಂಡಿ!
ಜಾತ್ರೆಗೆದ್ದೆ – ಗೆದ್ದೆಯೇ ಆಯಿದಡ, ದೇವಸ್ಯಮಾಣಿ ಹೇಳಿದ°! ಬೈಲಿಂದ ಸುಮಾರು ಜೆನ ಹೋದೋರು ಕಂಗಾಲು!
ಮಳಗೆ ನೆನದು ಶೀತ ಆದರೆ ಹೊಸಾ ಸಿಲ್ಕಿನ ಟುವಾಲು ಹಾಳಾವುತ್ತನ್ನೇ ಹೇಳಿಗೊಂಡು ರೂಪತ್ತೆ ಸೀತ ಕಾರಿಂಗೆ ಹೋಗಿ ಕೂದೊಂಡು – ಅಲ್ಲಿಂದಲೇ ಬೆಡಿ ನೋಡಿದ್ದಡ, ಕೂಳಿಂಗ್ಳಾಸು ಹಾಕಿಯೊಂಡು!!
ಒಪ್ಪಕ್ಕಂದೇ ನೆಕ್ರಾಜೆ ಕೂಸುದೇ ಸಂತೆಲಿ ಕೊಡೆ ಅಂಗುಡಿ ಇದ್ದೋ ಹೇಳಿ ಹುಡ್ಕಲೆ ಹೋಗಿ ಚೆಂಡಿ ಆದ್ದೇ ಬಂತು!
ಚೂರಿಬೈಲು ದೀಪಕ್ಕ ಮರದಿನ ಚೂರಿಬೈಲು ಶೀತಕ್ಕ ಆತಡ! ಪಂಜೆ ಚಿಕ್ಕಮ್ಮ ಕೋಡಿಬೈಲು ಕೂಸಿನೊಟ್ಟೀಂಗೆ ರಾಟೆತೊಟ್ಳಿಲಿ ಕೂದು ಸುದಾರುಸಿದ್ದು.
ಬಂಡಾಡಿಪುಳ್ಳಿ ಬಚ್ಚಂಗಾಯಿ ತಿಂಬಗ ನೀರಾಯಿದಡ, ಅಜ್ಜಿ ಹೆರಡದ್ದು ಒಳ್ಳೆದಾತು ಗ್ರೇಶಿತ್ತಡ.

೯. ಒಂಬತ್ತನೇ ದಿನ
ಇಂದು ತುಲಾಭಾರ ಸೇವೆ.
ಆರಾರು ತುಲಾಬಾರ ಹರಕ್ಕೆ ಹೇಳಿಗೊಂಡದಿದ್ದರೆ ಇಂದು ಮಾಡ್ತದು ಅದರ.
ಅದೆಲ್ಲ ಆಗಿ, ಮದ್ಯಾನ್ನದ ಪೂಜೆಯೂ ಆಗಿ ಮತ್ತೆ ದೇವರು ಮೀವಲೆ ಹೋಪದು!

ಎತ್ಲಾಗಿ? ಪುತ್ತೂರಿಂದ ಏಳೆಂಟು ಮೈಲು ದೂರದ ಊರಿಂಗೆ!!
ಮೂರುಗಂಟೆಹೊತ್ತಿಂಗೆಯೇ ದೇವರ ಹೊತ್ತೊಂಡು ನೆಡಕ್ಕೊಂಡು ಹೆರಡುದು.
ಸುಮಾರು ಹತ್ತು ಹನ್ನೊಂದು ಕಿಲೋಮೀಟ್ರು ದೂರಕ್ಕೆ ಸುಮಾರು ಮೂವತ್ತು ನಲುವತ್ತು ಕಿಲ ತೂಕದ ಅಲಂಕೃತ ದೇವರ ಹೊತ್ತೊಂಡು ಹೋಪದು ದೇವರ ಮಹಿಮೆಯೇ..!- ಹೇಳ್ತವು ಉದಯಣ್ಣ.
ಹೋಪ ದಾರಿ ಉದ್ದಕ್ಕೂ ಹಣ್ಣುಕಾಯಿ, ಕಟ್ಟೆಪೂಜೆ ಮಾಂತ್ರ ಅಲ್ಲದ್ದೇ – ಜೆನಂಗೊ ಮಾರ್ಗ ಉಡುಗಿ ನೀರು ತಳುದು ಶುದ್ದ ಮಾಡಿ ಮಡುಗುತ್ತವಡ,
ಯೇವ ಮಂತ್ರಿ ವಾಹನ ಬಂದರೂ ಮಾರ್ಗಂದ ಕೆಳ ಇಳಿತ್ತಡ – ಉದಯಣ್ಣ ಹೇಳಿದವು..

ವೀರಮಂಗಲದ ಕಟ್ಟೆಗೆ ಎತ್ತಿ, ಒಂದು ಪೂಜೆ.
ಕುಮಾರಧಾರಾ  ಹೊಳೆಲಿ ಮೀವದು, ಮಿಂದು ಒಂದು ಕಟ್ಟೆಪೂಜೆ ಮಾಡಿ ಹೆರಡುದು,

ಅಷ್ಟು ಹೊತ್ತು ಮಾಲಿಂಗೇಶ್ವರ ದೇವಸ್ಥಾನದ ಅಂಗಣವ ಅಲ್ಲಿಪ್ಪ “ಅಂಗಣತ್ತಾಯ” ಬೂತ ಕಾಯಿತ್ತು ಹೇಳಿ ಒಂದು ಕಲ್ಪನೆ.

೧೦. ಹತ್ತನೇ ದಿನ:
ಇಂದು ಮಿಂದಿಕ್ಕಿ ಒಪಾಸು ಬಪ್ಪದು.
ನಿನ್ನೆ ಹೋದ್ದದು ನೆಡಕ್ಕೊಂಡು – ಅಲ್ಲಲ್ಲಿ ನಿಂದುನಿಂದುಗೊಂಡು, ಕಟ್ಟೆ ಪೂಜೆ, ಹಣ್ಣುಕಾಯಿಗೊ – ಇದ್ದೊಂಡು.
ಆದರೆ ಬಪ್ಪದು?
– ದೇವರ ಅಲ್ಲಿ ತಲೆಲಿ ಮಡಗಿರೆ ತೆಗವದು ಪುತ್ತೂರಿಲಿಯೇ! ಓಡಿಗೊಂಡೇ ಬರೆಕ್ಕು, ಇಡೀ ಹನ್ನೆರಡು ಕಿಲೋಮೀಟ್ರುದೇ!!
ಎಡೆಲಿ ನೀರು ಕುಡಿವಲಿಲ್ಲೆ, ಬಾಯಿ ಒಡದು ಮಾತಾಡ್ಳಿಲ್ಲೆ . . ಅವರ ಒಟ್ಟಿಂಗೆ ಚೆಂಡೆಯುದೇ ಹಾಂಗೇ – ಓಡಿಗೊಂಡೇ ಬಾರುಸುದು!!
ಯಬಾ, ಅದೊಂದು ಶಕ್ತಿಯೇ ಅಪ್ಪ! ಮಾಲಿಂಗೇಶ್ವರ ಇಲ್ಲದ್ರೆ ಎಡಿಯಲೇ ಎಡಿಯ!

ಅಂತೂ ದೇವಸ್ಥಾನಕ್ಕೆ ಒಪಾಸು ದೇವರು ಎತ್ತಿದಮತ್ತೆ ಕೊಡಿ ಇಳಿವದು.. ಮೊನ್ನೆ ಏರಿ ಇಂದು ಇಳಿವನ್ನಾರದ ಜಾತ್ರೆಯ ಒಂದು ಹಂತದ ಗೌಜಿ ಮುಗಾತು!
ದೇವರ ಕೊಡಿ ಇಳುದಕೂಡ್ಳೇ ಬೂತ ಕೋಲಂಗೊಕ್ಕೆ ಸಮಯ.

೧೧. ಹನ್ನೊಂದನೇ ದಿನ:
ಹತ್ತು ದಿನದ ಜಾತ್ರೆ ಮುಗುದರೂ, ದೇವರ ಪರಿವಾರಲ್ಲಿಪ್ಪ ಬೂತಂಗೊಕ್ಕೆ ಕೋಲ ಇಂದು. ದೈವೀ ಸ್ವರೂಪದ ರಕ್ತೇಶ್ವರಿಗೂ, ಅಂಗಣ ಕಾದ ಅಂಗಣತ್ತಾಯಂಗೂ ಕೋಲ / ನೇಮ.
ಅರುಶಿನ ಗಂಧ ಪ್ರಸಾದ ತೆಕ್ಕೊಂಬ ಆಸ್ತಿಕರು ಸುಮಾರು ಜೆನ ಇದಕ್ಕೂ ಬಂದು ಸೇರುಗು..
ಇಂದೇ, ತುಂಬಿದ್ದ ಜಾತ್ರೆಗೆದ್ದೆ ಕಾಲಿ ಅಪ್ಪ ದಿನ.
~

ಇದಲ್ಲದ್ದೇ ಜಾತ್ರೆ ಗೆದ್ದೆಲಿ ಸುಮಾರು ಗೌಜಿ ಇತ್ತು, ಒಪ್ಪಕ್ಕಂಗೆ ಒಂದು ದಿನಲ್ಲಿ ನೋಡಿ ಮುಗಿಯದ್ದಷ್ಟು!
ಅತ್ತೆಕ್ಕೊಗೆ ಬೇಕಪ್ಪ ಪಾತ್ರ ಸಾಮಾನುಗೊ, ಮಕ್ಕೊಗೆ ಬೇಕಪ್ಪ ಆಟದಸಾಮಾನುಗೊ, ಕೂಸುಗೊಕ್ಕೆ ಬೇಕಪ್ಪ ನಮುನೆ ನಮುನೆ ಬಳೆಗೊ, ಡ್ರೆಸ್ಸುಗೊ, ಬೇಗುಗೊ, ತಂಪು ತಂಪು ಐಸು ಕ್ರೀಮುಗೊ ಇತ್ಯಾದಿ ಇತ್ಯಾದಿ ಎಲ್ಲವೂ..
ಒಂದು ಮೂಲೆಲಿ ಹೋಟೆಲ್ ರಾಮದಷ್ಟು ಎತ್ತರದ ರಾಟೆತೊಟ್ಳು!
ಅದರಲ್ಲಿ ಕೂದರೆ ಒಂದರಿ ಹೋಟೆಲ್ ರಾಮದ ಟೇರೀಸು ನೋಡ್ಳಕ್ಕೂಳಿ ಕಂಡತ್ತಡ ಆಚಕರೆ ಮಾಣಿಗೆ – ಕೂದು ರಾಟೆ ಜೋರು ತಿರುಗುವಗ ಮೂರು ಲೋಕವೂ ಕಂಡತ್ತಡ!!
ಅದರಿಂದ ಇತ್ಲಾಗಿ ಮಕ್ಕೊಗೆ ಜಾರುಬಂಡಿ, ಸಣ್ಣ ಸಣ್ಣ ಜೀಪು,ಕಾರುಗೊ, ಟುರುಟುರುನೆ ಬಾವಿಲಿ ಬೈಕ್ಕು ಬಿಡ್ತದು – ಇನ್ನೂ ಏನೇನೊ..
ನಾವೆಲ್ಲ ಕಾಣದ್ದು, ಕೇಳದ್ದು!!

ಇದರೊಟ್ಟಿಂಗೆ ಚರುಮುರಿ, ದೋಸೆಗೊ, ಅದೆಂತದೊ ಪಾನಿಪೂರಿ, ಮಸಾಲೆಪುರಿ ಹೇಳ್ಯೊಂಡು ತಿಂಬ ವೈವಿದ್ಯಂಗಳುದೇ.
ಈ ಸರ್ತಿ ಒಂದು ಹೊಸತ್ತು ರುಮಾಲಿ ರೋಟಿ ಅಡ. ಬಣಲೆಯ ಕವುಂಚಿ ಹಾಕಿ ಅದರ ಮೇಲೆ ರೊಟ್ಟಿ ಬೇಶಿಯೊಂಡಿತ್ತಿದ್ದವಡ, ಮಾಪಳೆ ಟೊಪ್ಪಿಮಡಗಿದ ನಮುನೆಲಿ!
ಉಮ್ಮಪ್ಪ ಚೂರಿಬೈಲು ದೀಪಕ್ಕ ಎಲ್ಲಿಯಾರು ಹೊಸರುಚಿಲಿ ಅದರ ಓದಿದ್ದೋ ಕೇಳೆಕಷ್ಟೆ.
~

ಈಗ ಊರು ಬದಲಾಯದು, ಮೊಕ್ತೇಸರ್ರು ಬದಲಾಯಿದವು, ತಂತ್ರಿಗೊ ಬದಲಾಯಿದವು, ಬಟ್ಟಮಾವಂದ್ರು ಬದಲಾಯಿದವು,
ಏವದೇ – ಎಷ್ಟೇ ಬಲಾದರೂ,  ಜಾತ್ರೆ ಅಷ್ಟೇ ಚೆಂದಕೆ ನೆಡೆತ್ತಾ ಇದ್ದು.
ಸುಮಾರು ಊರಿನ ಜೆನಂಗೊ ಅವಕ್ಕೆ ಎಡಿಗಾದ ಹಾಂಗೆ ಜಾತ್ರೆಗೆ ಸೇರಿಗೊಂಡು ಚೆಂದಲ್ಲಿ ನೆಡೆಶುತ್ತಾ ಇದ್ದವು..
ದೂರ ದೂರದ ಊರುಗಳಂದ ಸಾವಿರಗಟ್ಳೆ ಜನ ಸೇರುಗು.
ಹಾಂಗೆ ಜೆನ ಸೇರಿರೇ ಅಲ್ಲದೋ ಜಾತ್ರೆಗೊಂದು ಕಳೆ ಇಪ್ಪದು – ಹೇಳಿ ಉದಯಣ್ಣ ಶುದ್ದಿ ಹೇಳಿ ಮುಗಿಶುವಾಗ ಮದ್ಯಾನದ ಮಹಾಪೂಜೆಗಾತು.

ಒಂದೊಪ್ಪ: ಪುತ್ತೂರು ಜಾತ್ರೆಲಿ ಹತ್ತೂರು ಕಾಂಗು. ಅಲ್ಲದೋ?

ಸೂ: ಪುತ್ತೂರು ಜಾತ್ರೆ ಸಮೆಯಲ್ಲಿ ಬೈಲಿನ ಕೆಲವು ಮಕ್ಕೊ ತೆಗದ ಪಟಂಗಳ ಇಲ್ಲಿ ನೇಲುಸಿದ್ದು. ನೋಡಿ, ನಿಂಗಳತ್ರೂ ಇದ್ದರೆ ಕಳುಸಿಕೊಡಿ:

ಆತೋ?

18 thoughts on “ಹತ್ತೂರು ಕಂಡವ° ಪುತ್ತೂರು ಬಿಡ°!

  1. ಮತ್ತೊನ್ದರಿ ಜಾತ್ರೆಗೆ ಹೋಗಿ ಬನ್ದ ಹಾ೦ಗೆ ಆತು. ಹರೇ ರಾಮ.

  2. ಜಾತ್ರೆ ಗೆದ್ದೆಲಿ ಕುಂಬ್ಳೆ ಅಜ್ಜಿ ಸಿಕ್ಕಿದವು… 😉
    ಒಪ್ಪಣ್ಣ ಬೈನ್ದಯಿಲ್ಲೆಯೋ ಅಂಬಗ ಹೇಳಿ ಕೇಳಿದವು…
    ಒಪ್ಪಣ್ಣ ಬಕ್ಕು,ಸಿಕ್ಕಿರೆ ಕೊಡ್ಳಕ್ಕು ಹೇಳಿ ಚಿಕ್ಕು ತೈನ್ದವೋ ಏನೋ .. ಉಮ್ಮಪ್ಪ ….

      1. ವಿಶ್ಯ ಅಪ್ಪು ಭಾವ ಆರಿಂಗೂ ಸಿಕ್ಕ.. ಮೊದ್ಲೆ ಬಂಡಾಡಿ ಅಜ್ಜಿ ಒಪ್ಪಕ್ಕನ ಕಡೆಂಗೆ..

  3. ಪುತ್ತೂರಿನ ಜಾತ್ರೆ ಸೀಮೆಯ ಎಲ್ಲರಿಂಗು ಒಟ್ಟಿಂಗೆ ಪರವೂರಿನ ಭಕ್ತರಿಂಗು ಇಷ್ಟದ ಜಾತ್ರೆ. ಇದರ ಬಗ್ಗೆ ಬರದ ವಿರಣಾತ್ಮಕ ಲೇಖನಂದ ಬಪ್ಪ ವರುಷ ಇನ್ನೂ ಹೆಚ್ಚು ಜನ ಅಕ್ಕೋ ಹೇಳಿ.. ಕೊಳಚಿಪ್ಪು ಬಾವ, ಬಲ್ನಾಡು ಮಾವ, ದಿವ್ಯ ಎಲ್ಲ ಮನೆಲಿ ಕಾಲಿ ರೂಮು ಇದ್ದರೆ ಬಾಡಿಗೆಗೆ ಮಡಗುವ ಬಗ್ಗೆ ಯೋಚಿಸುಗೊ ಏನೋ ಎಂತ ಹೇಳ್ತೆ ಒಪ್ಪಣ್ಣ ಭಾವ..

  4. ಪುತ್ತೂರಿನ ಹತ್ತು ದಿನದ ಜಾತ್ರೆ ಬಗ್ಗೆ ಒಪ್ಪಣ್ಣ ಬರದ ಲೇಖನ ಲಾಯಕಿತ್ತು. ಮತ್ತೂ ಮತ್ತೂ ಓದುಸಿತ್ತು. ಸುತ್ತಮುತ್ತ ನೆಡೆತ್ತ ಹತ್ತುಹಲವು ಜಾತ್ರೆಲಿ ಪುತ್ತೂರಿನದ್ದು ಬಹಳ ಗಮ್ಮತ್ತು. ಏಳನೆಯ ದಿನ ಮಲ್ಲಿಗೆ ರೇಟು ಜಾಸ್ತಿ ಆಗಿ ಉಳಾಲ್ತಿಯಷ್ಟೇ ಬಾಯಮ್ಮಂಗೂ ಕೊಶಿ ಆದ್ದು ಕೇಳಿ ಕೊಶಿ ಆತು. ಜಾತ್ರೆಯ ಎಲ್ಲ ದಿನವುದೆ ರಾಮಜ್ಜನ ಕಾಲೇಜಿನ ಮಕ್ಕೊಗೆ ಭಾರಿ ಗಮ್ಮತ್ತಾಯ್ಕು. ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಂಗೊ. ಇನ್ನಾಣ ವರ್ಷ ಪುತ್ತೂರು ಆಯನಕ್ಕೆ ಹೋಯೆಕು ಹೇಳಿ ಇದ್ದೆ.

  5. ಒಪಣ್ಣ.. ಸೂಪರಣ್ಣಾ ಬರದ್ದದು.. ಎನ್ನ ಮನೆಗೂ ದೇವಸ್ತಾನಕ್ಕೂ ಹತ್ತೇ ನಿಮಿಷ ದಾರಿ ಅಷ್ಟೆ!! 🙂 ಈ ಸರ್ತಿ ಜಾತ್ರೆ ಮಿಸ್ ಮಾಡ್ಲಾಗ ಹೇಳಿ ಕಾಲೇಜ್ ಗೆ ಚಕ್ಕರ್ ಹಾಕಿ ಹಾಸನಂದ ಮನೆಗೆ ಹೋದೆ.. ಜಾತ್ರೆ ಏನೋ ಲಾಕಲ್ಲಿಯೇ ನೋಡಿದೆ.. ಉಳ್ಳಾಲ್ತಿ ಬಪ್ಪದು.. ಬೈಪಾಸಿಲಿ ನಿಂದರೆ ಲಾಯಿಕು ಕಾಣ್ತಿದ.. ಮತ್ತೆ ಮರು ದಿನ ಉದ್ಯಪ್ಪಗ ದರ್ಶನ ಬಲಿ ಭಾರಿ ಲಾಯಿಕಪ್ಪ ನೋಡ್ಲೆ.. ಆದರೆ ಇರುಳು ಗ್ರೇಶದ್ದೆ ಭಾರಿ ಮಳೆ.. ಸಂತೆ ಗೆದ್ದೆಂದ ಓಡಿ ಮಾಡ ಅಡಿಲಿ ಹೇಂಗೋ ನಿಂದೆಯ.. ಮತ್ತೆ ಇದು ಮಳೆ ಬಿಡುವಾಂಗೆ ಕಾಣಿಲ್ಲೆ ಹೇಳಿ ಮನೆಗೋದೆಯ.. ಮನಿಗ್ಯಪ್ಪಗ ಬೆಡಿ ಶಬ್ದ ಕೇಳಿತ್ತು.. 🙁 ಆದರೂ ಕಳುದೊರ್ಶಲ್ಲ ನೋಡಿತ್ತಿದ್ದೆನ್ನೆ ಹೇಳಿ ಸ್ಮಾಧಾನ ಮಾದಿಗೊಂಡ್ಯ 🙂 ಒಪ್ಪಣ್ಣ ಕೊಳಚ್ಚಪ್ಪಣ್ಣ ಬೈಂದಾ ಇಲ್ಲೆ ಅವನ ಮನೆ ಎನ್ನ ಮನೆಂದಲೆ ಕೆಳ ಇಪ್ಪದು 🙂 ಲೊಟ್ಟೆ ಬರವದೆಂತಕೆ?? 🙂

    1. ಕೊಳಚಿಪ್ಪು ಭಾವ ಬಂದದ್ದು ಊರಿಲಿ ಆರಿಂಗೂ ಗೊಂತಾಯಿದಿಲ್ಲೆ. ಎಲ್ಲವೂ ಜಾತ್ರೆ ಗೌಜಿಲಿ ಇತ್ತಿದ್ದವದ. ಕೊಳಚಿಪ್ಪು ಅತ್ತೆಗೂ ಸಹ ಗೊಂತಾಯಿದಿಲ್ಲೆ. ಅವು ಬೆಂಗಳೂರಿಂದ ಬಂದ ಸೊಸೆಗೆ ಜಾತ್ರೆ ತೋರುಸುವ ಗೌಜಿಲಿ ಇತ್ತಿದ್ದವದ.

      1. ಅಪ್ಪು ಮತ್ತೆ.. ಕೊಳಚಿಪ್ಪು ಭಾವ ಹಾಂಗೆಲ್ಲ ಆರಿಂಗು ಸಿಕ್ಕಪ್ಪ..

        1. ಆರಿಂಗೆ ಸಿಕ್ಕದ್ರೂ ಒಪ್ಪಣ್ಣಂಗೆ ಸಿಕ್ಕುಗಿದಾ..!! 😉
          ಎಂತ ಹೇಳ್ತೆ ಅಜ್ಜಕಾನ ಭಾವಾ?

          @ ದಿವ್ಯ,
          ಅದೆಂತಕಪ್ಪಾ ಒಪ್ಪಣ್ಣ ಲೊಟ್ಟೆ ಹೇಳ್ತ° ಹೇಳಿಗೊಂಡು ಸಂಶಯ ಬಂತು..!!
          ಚೆ ಚೆ! ಎಲ್ಯಾರಿದ್ದೋ ಹಾಂಗೆ!
          ಅಜ್ಜಸುರಿಯ..! 😉

          1. ಅಪ್ಪಪ್ಪು ಒಪ್ಪಣ್ಣನ ಚೆಂಬಾಯಿಗೊ ರಜಾ ನಿಶಾಚರಿಗ ಇದಾ..

  6. ಪುತ್ತೂರು ಜಾತ್ರೆ ಲೇಖನ ಓದಿ ಅಪ್ಪಗ ಅಲ್ಲಿಗೆ ಹೋಗಿ ಬಂದ ಹಾಂಗೆ ಆತು. ಹೇಳಿಕೆ ಹೇಳದ್ದೆ ಬಂದ ಮಳೆ, ಮುತ್ತಪ್ಪ ರೈ ಕೊಟ್ಟ ರಥವ ಶುದ್ಧ ಮಾಡ್ಲೆ ಬಂದದೋ ಹೇಳಿ ಆವುತ್ತು. ಜಾತ್ರೆಲಿ ಪ್ರತಿ ದಿನ ನೆಡವ ಕಾರ್ಯಕ್ರಮಂಗಳ ವಿವರ ಕೊಟ್ಟದು ಲೇಖನಕ್ಕೆ ಒಂದು ಶೋಭೆ

  7. ಒಪ್ಪಣ್ಣ, ಪುತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರನ ಬಗ್ಗೆ ಬರದಷ್ಟೂ ಮುಗಿಯ… ಅವನ ಕೃಪೆಗೆ ಒಳಗಾದೋರ ಅನುಭವವೂ ಬೇಕಷ್ಟಿಕ್ಕು.. ಆದರೂ ಅದೆಲ್ಲವೂ ಬಪ್ಪ ಹಾಂಗೆ ದೇವರ ವೈಭವಕ್ಕೆ ಒಪ್ಪ ಕೊಟ್ಟ ಹಾಂಗೆ ಚೆಂದಕ್ಕೆ ಬರದ್ದೆ ನೀನು.. ಮದಲಿಂಗೆ ಅವಭೃತ ಸ್ನಾನಕ್ಕೆ ಶ್ರೀ ಮಹಾಲಿಂಗೇಶ್ವರ ದೇವರು ಹೋಪಗ ದಾರಿ ಮಧ್ಯಲ್ಲಿ ಮಜಲುಮಾರು ಹೇಳುವಲ್ಲಿ ಶ್ರೀ ಉಮಾಮಹೇಶ್ವರ ದೇವರುದೆ ಸಿಕ್ಕಿ ಒಟ್ಟಿನ್ಗೆ ವೀರ ಮಂಗಲಕ್ಕೆ ಹೊಗಿಯೊಂಡಿದ್ದದಡ್ಡ… ಅಲ್ಲಿಂದ ವಾಪಾಸು ಆಯಾ ದೇವರು ಆಯಾ ದೇವಸ್ಥಾನಕ್ಕೆ ಬಂದುಗೊಂಡಿತ್ತಿದ್ದವಡ್ಡ…. ದೇವರ ಬಗ್ಗೆ ವಿಷಯ ಹೇಳುಲೆ ಉದಯಣ್ಣನ್ಗೆ ಪುರುಸೊತ್ತು ಆದ್ದು ಸಾಕು.. ಬೈಲಿಲಿ ದೇವರ ಬಗ್ಗೆ ಮಾಹಿತಿ ಹೆಚ್ಚಾತಿದಾ… ಜೆನಂಗೊಕ್ಕೆ ಜಾತ್ರೆಗೆ ಹೋಗದ್ದರೆ ಎಂತದೋ ಕಳಕ್ಕೊಂಡ ಹಾಂಗೆ.. ಅದಪ್ಪು.. ಪಟಂಗ ಎಲ್ಲಾ ನಮ್ಮ ಬೈಲಿನ ಮಾಣಿಯಂಗಳೇ ತೆಗದ್ದನ್ನೇ.. ನಮ್ಮ ಒಪ್ಪಣ್ಣನ ಹತ್ತರೆ ಕೆಮರ ಇಲ್ಲೆಯೋ? ಒಪ್ಪಣ್ಣನ ಕೆಮರಲ್ಲಿ ಒಪ್ಪಣ್ಣ ತೆಗವ ಪಟಂಗ ಅವನ ಶುದ್ದಿಯ ಹಾಂಗೆ ಒಪ್ಪಕ್ಕೆ ಬಕ್ಕೋ ಹೇಳಿ…..

  8. ಯಾವ ಊರು ತಿರುಗಿರೂ ಪುತ್ತೂರೇ ಮೇಲು

      1. ಎಲ್ಲಾ ಊರು ತಿರುಗಿದೋರ ಅಭಿಪ್ರಾಯ….ಒಪ್ಪಣ್ಣ …:P

  9. ನಮ್ಮೂರಿನ ಜಾತ್ರೆಯ ಬಗ್ಗೆ ಬರದ್ದು ನೋಡಿ ಭಾರಿ ಕೊಶಿ ಆತು ಒಪ್ಪಣ್ಣ.. ಸಂಗ್ರಹಯೋಗ್ಯವಾದ ಬರಹ.. ಆನು ಪುತ್ತೂರಿನವನೆ ಆದರೂ ಎನಗೆ ತಿಳಿಯದ್ದ ಸುಮಾರು ಸಂಗತಿ ಜಾತ್ರೆಯ ಬಗ್ಗೆ ನೀ ಹೇಳಿ ಗೊಂತಾತೀಗ! ಬೆಡಿಯ ಪಟ ಚೆಂದ ಬಯಿಂದು.. ಜಾತ್ರೆಗೆ ಹೇಳಿಕೆ ಇಲ್ಲದ್ದೆ ಬಂದ ಮಳೆಗೆ ಗೆದ್ದೆಲಿ ಇದ್ದೋರೆಲ್ಲ ಚೆಂಡಿ ಆಗಿತ್ತಿದ್ದೆಯ! ವರ್ಷವೂ ಒಂದು ರಜ ಆದರು ಮಳೆ ಬಾರದ್ದೆ ಇಲ್ಲೆ ಜಾತ್ರೆಗೆ, ಆದರೆ ರಥೋತ್ಸವದ ದಿನವೆ ಈ ಮಳೆರಾಯನ ಕಿತಾಪತಿ ಮಾಡಿದ್ದು ಬಾರಿ ಅಪರೂಪ.. ಏನೆ ಆದರು ನೀ ಹೇಳಿದ ಹಾಂಗೆ ಪುತ್ತೂರ ಜಾತ್ರೆಲಿ ಹತ್ತೂರ ಕಾಂಬಲಕ್ಕು ಹೇಳುವ ಮಾತು ಖಂಡಿತಾ ನಿಜ..!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×