Oppanna.com

ಹೊಟ್ಟೆತುಂಬಿದ ಹೋಟ್ಳಜ್ಜ ಬೋಳುಗುಡ್ಡೆಲಿ ದನನೆಟ್ಟವಡ..!

ಬರದೋರು :   ಒಪ್ಪಣ್ಣ    on   11/11/2011    23 ಒಪ್ಪಂಗೊ

ಕಟ್ಟಿದ ಬೂತ ಬಿರಿಯಲೇ ಬೇಕು – ರಂಗಮಾವನ ಗಾದೆ!
ಬೂತ ಹೇಂಗೆ ಕಟ್ಟಿತ್ತು, ಅದು ಹೇಂಗೆ ಬಿರುತ್ತು – ಹೇಳ್ತದು ಬೈಲಿನೋರ ತಗಾದೆ, ಕಳುದವಾರ.
ಬೂತ ಕಟ್ಟುದು, ಬಿರಿವದು – ಎರಡೂ ಲೊಟ್ಟೆ ಹೇಳಿ ಕೆಲವು ಜೆನ ನಂಬುಗು. ಇವರ ನಂಬಿಕೆ ಲೊಟ್ಟೆ ಹೇಳಿ ಮತ್ತೆ ಕೆಲವು ಜೆನ ನಂಬುಗು. ಅಪ್ಪೋಲ್ದೋ!
ಏವದು ನಿಜ, ಏವದು ಮಾಂತ್ರ ನಿಜ – ಹೇಳ್ತದು ಒಪ್ಪಣ್ಣಂಗೆ ಅರಡಿಯ; ಪಾರೆಲಿ ಕೂದುಗೊಂಡ ಆ ಅಜ್ಜಿಗೇ ಅರಡಿಗಟ್ಟೆಯೋ ಏನೋ! ಉಮ್ಮಪ್ಪ!

~
ಅದಿರಳಿ, ನಿಂಗೊಗೆ ಹೋಟ್ಳಜ್ಜ°ನ ಗೊಂತಿದ್ದೋ?
ಗೊಂತಿಕ್ಕು ಹೇಳುಲೆಡಿಯ, ಹೋಟ್ಳಿಂಗೆಲ್ಲ ಹೋಪದು ಕಮ್ಮಿ ಅಲ್ಲದೋ ನಿಂಗೊ?! 🙂
ಅಪ್ಪಲೆ ಅವು ಸಾರಡಿ ಕೂಟದವೇ ಆದರೂ, ಮದಲಿಂಗೇ ಪಾಲು ತೆಕ್ಕೊಂಡು ಹೆರ ಹೋಗಿ, ಸುಮಾರು ಊರು, ವ್ಯಾಪ್ತಿಗಳ ಸುತ್ತಿ, ಕೊನೆಗೆ ಬೈಲಕರೆ ಶಾಲೆಬುಡಲ್ಲಿ ಸಣ್ಣ ಜಾಗೆ ಮಾಡಿ ಕೂದವು.
ಈಗಾಣ ಜವ್ವನಿಗರ ಹಾಂಗೆ – ಬಚ್ಚದ್ದೆ ಏನಾರು ಕೂದ್ದಲ್ಲ ಅವು; ಬೇಕಾದಷ್ಟು ದುಡುದು, ದೇಹ ದಣುದು ಬಚ್ಚಿ ಮತ್ತೆಯೇ ಇಲ್ಲಿ ಬಂದು ಕೂದ್ಸು.
ಎಲ್ಲೆಲ್ಲಿಯೋ ರೈಟ° ಆಗಿಂಡು, ಅಡಿಗೆ ಮಾಡಿ, ಹೊಟ್ಟೆ ತುಂಬುಸಿ,  ನಂಬಿಕೆ ಬೆಳೆಶಿ, ಅಕೇರಿಗೆ ಯೇವದೋ ಕೆಟ್ಟ ಗಳಿಗೆಲಿ ದೆಶೆ ತಿರುಗಿ ದಾರಿಗೆ ಬಿದ್ದವು..
ಆರಿಂಗೂ ಬೇಡದ್ದ ಒಂದು ಒಣಕ್ಕಟೆ ಬೋಳುಗುಡ್ಡೆಯ ಬೈಲಕರೆಬಂಟ ಕಮ್ಮಿಗೆ ಈ ಅಜ್ಜಂಗೆ ಮಾರಿ ಕೈ ತೊಳಕ್ಕೊಂಡತ್ತು.
– ಅಂತೂ ವಾನಪ್ರಸ್ಥ ಕಾಲಲ್ಲಿ ಬೈಲಕರೆಗೆ ಬಂದವು.

ಅಂತೇ ಕೂದರೆ ಹೊಟ್ಟೆ ತುಂಬುತ್ಸು ಹೇಂಗೆ? ಉದುಪ್ಪತ್ತಿ ಏನಾರು ಬೇಕನ್ನೇ, ಜೀವನಕ್ಕೆ.
ಮದಲು ರೈಟ° ಆಗಿ ಅಡಿಗೆ ಅನುಭವ ಇದ್ದನ್ನೇ, ಹಾಂಗೆ, ಮೆಲ್ಲಂಗೆ ಒಂದು ಹೋಟ್ಳು ಹಾಕಿದವು.
ಹೋಟ್ಳು ಹೇದರೆ ಮನೆಯೇ; ಇಪ್ಪದೇ ಎರಡು ಕೋಣೆ, ಅದರ್ಲೇ ಎಲ್ಲವೂ – ಮನೆಯನ್ನೇ ಹೋಟ್ಳು ಹೇಳಿದವು.
ಅವು ಹೇಳಿಯಪ್ಪಗ ಜೆನಂಗಳೂ ಹೇಳುಲೆ ಸುರುಮಾಡಿದವು; ಹಾಂಗೆ ಅವು ಹೋಟ್ಳಜ್ಜ° ಆದವು.
~
ಹೋಟ್ಳು ನೆಡೆಷುದು ಹೇದರೆ ಸುಲಬವೋ? ಅಲ್ಲಪ್ಪ!
ಕಾಟುಕೋಳಿಗೆ ಶೆಂಕ್ರಾಂತಿ ಎಂತ ಲೆಕ್ಕ – ಹೇದ ಹಾಂಗೆ, ಆ ದಿನ – ಈ ದಿನ ಹೇದು ನೋಡ್ಳಿಲ್ಲೆ.  ನಿತ್ಯವೂ ಜೆಂಬಾರದ ಅಡಿಗೆ ಆಯೇಕು!
ಅದಕ್ಕೆ ಬೇಕಾದ ಸಾಮಾನು, ಸರಂಜಾಮು ರೂಡಿಮಾಡೇಕು, ತರೇಕು.
ಅದಕ್ಕಿಪ್ಪ ಒಲಗೆ ಸೌದಿ – ಬೇಸಗೆಲಿ ಅಟ್ಟಣೆ ಮಾಡೇಕು, ಮಳೆಗಾಲ ಬೇಕಾದಷ್ಟೇ ಒಡೆಷೆಕ್ಕು. ಚೌಕ್ಕಾರುವನ್ನೋ, ಬಾಬುವನ್ನೋ ಕಂಡು ಕಾಲಿಡಿಯೆಕ್ಕು.
ಅದೆಲ್ಲ ಅಲ್ಲದ್ದೆ, ರುಚಿರುಚಿಯಾಗಿ ಶ್ರದ್ಧೇಲಿ ಅಡಿಗೆ ಮಾಡೇಕು; ಇಂದು ಬಂದೋನು ನಾಳೆಯೂ ಬರೆಡದೋ!!
ಹು! ತಲೆ ತಿಂಬ ಒಯಿವಾಟುಗೊ.
~

ನಮ್ಮೂರಿನ ಮುಳಿಗುಡ್ಡೆಗಳಲ್ಲಿ ಪುನಾ ದನ ನೆಡ್ಳೆ ಎಡಿಗೋ?!!

ಹೋಟ್ಳಜ್ಜಂಗೆ ಇಷ್ಟೆಲ್ಲ ಮಾಡ್ಳೆ – ಅವಕ್ಕೆ ಪ್ರಾಯ ಎಂಭತ್ತೈದು ಕಳುದ್ದು ಪಾಪ!
ಪ್ರಾಯ ಆಗಿ ಬೆನ್ನು ಬಗ್ಗಿದ್ದರಲ್ಲಿ, ಸರ್ತ ನಿಂದಿಕ್ಕಲೆ ಎಡಿತ್ತಿಲ್ಲೆ, ತಾಂಗುಲೆ ಎಂತಾರು ಬೇಕಾವುತ್ತು – ಹೋಟ್ಳಿನ ಬೆಂಚೋ, ಬಾಗಿಲೋ, ದಾರಂದವೋ -ಎಂತಾರು.
ಅವರ ಎಜಮಾಂತಿ, ಹೋಟ್ಳಜ್ಜಿ ಇವರಿಂದ ಗಟ್ಟಿಮುಟ್ಟು ಇದ್ದರೂ – ಪ್ರಾಯಾಗಿ ಕೆಮಿ ಕೇಳ್ತಿಲ್ಲೆ!
ಸಂತಾನ ಭಾಗ್ಯ ಒದಗಿ ಬಯಿಂದಿಲ್ಲೆ ಅವಕ್ಕೆ, ಹಾಂಗಾಗಿ, ಅವಿಬ್ರೇ!
ಇಬ್ರೇ ಆಗಿ ಹೆಚ್ಚು ಸಮೆಯ ಇದ್ದಷ್ಟು ಹತ್ತರೆ ಆವುತ್ತವಡ ಅಲ್ಲದೋ?
ಇವರ ಕಂಡ್ರೆ ಆರುದೇ ಅಪ್ಪು ಹೇಳುಗು. ಹಾಂಗಿರ್ತ – ಆದರ್ಶ ದಂಪತಿಗೊ ಅವು; ಕೆಮರದ ಮುಂದೆ ಅಲ್ಲ, ನಿಜಜೀವನಲ್ಲಿ!
ಆದರೂ ಹೋಟ್ಳು ಮಾಡಿಯೇ ಮಾಡಿದವು.

~
ಹೋಟ್ಳು ಬೈಲಕರೆ ಶಾಲೆಯ ಹತ್ತರೇ ಇರ್ತ ಕಾರಣ ಊಟಕಾಪಿ ಒಳ್ಳೆತ ಕರ್ಚಿ ಆವುತ್ತು; ಶಾಲೆ ಇಪ್ಪ ಸಮೆಯಲ್ಲಿ.
ಹನ್ನೆರಡೂಮುಕ್ಕಾಲಕ್ಕೆ ಬೆಳ್ಳುಳ್ಳಿಒಗ್ಗರಣೆ ಚೊಯಿಂಕನೆ ಬಿದ್ದು ಪರಿಮ್ಮಳ ಹೆರಡುವಗಳೇ ಮಕ್ಕೊಗೆ ಗೊಂತಪ್ಪದು – ಗಂಟೆ ಬಡಿವಲಾತು ಹೇಳಿಗೊಂಡು.
ಶಾಲೆ ಮಾಷ್ಟ್ರಕ್ಕೊಗೂ, ಕೆಲವು ಮಕ್ಕೊಗೂ ಅಲ್ಲಿಯೇ ಮಧ್ಯಾಹ್ನದ ಊಟ.
ಮಾಷ್ಟ್ರಕ್ಕೊ, ಬಂದ ಇನ್ಸುಪೆಕ್ಟ್ರ°, ಮಕ್ಕಳ ಅಪ್ಪಮ್ಮಂದ್ರು – ಎಲ್ಲೋರಿಂಗೂ ಅದೇ ಹೋಟ್ಳಿಂದ ಕಾಪಿಚಾಯ.

ವ್ಯಾಪಾರ ಒಳ್ಳೆತ ಆವುತ್ತು ಹೇಳಿಗೊಂಡು ಅತಿ ಆಶೆ ಮಾಡ್ತವಿಲ್ಲೆ; ಅವರ ಕೈ ಧಾರಾಳ ಹೇಳಿ ಎಲ್ಲೋರುದೇ ಹೇಳುಗು.
ಈಗಾಣ ಹೋಟ್ಳು ನಮುನೆ ಅರೆಹೊಟ್ಟೆಯ ಪ್ಲೇಟು ಊಟ ಅಲ್ಲ; ಬೇಕಾದಷ್ಟು ಬಳುಸುಗು; ಹೊಟ್ಟೆತುಂಬ.
ತೊಂಡೆಕಾಯಿಯೋ, ಬೀಟ್ರೋಟೋ ಮಣ್ಣ ತಾಳು; ಸೌತ್ತೆಯೋ, ಬಸಳೆಯೋ ಮಣ್ಣ ಕೊದಿಲು; ಮೆಣಸಿನ ಪೋಡಿ, ಒಂದು ಗ್ಳಾಸು ಮಜ್ಜಿಗೆ; ಬ್ರಾಮ್ಮರು ಆರಾರು ಹೋದರೆ ಒಂದು ಗ್ಲಾಸು ನೀರು. ಊಟ ಅಷ್ಟೇ.
ಅಷ್ಟಾರೂ ಆರು ಕೊಡ್ತ ಬೇಕೆ! ಮತ್ತೆ, ಈಗಾಣ ಕಾಲಲ್ಲಿ ಹತ್ರುಪಾಯಿಗೆ ಇದರಿಂದ ಹೆಚ್ಚಿಗೆ ಎಂತರ ಸಿಕ್ಕುಗು ಭಾವಾ?
ಎಡೆಹೊತ್ತಿಲಿ ಗೋಳಿಬಜೆಯೋ, ಗೆಣಂಗು ಪೋಡಿಯೋ, ಬನ್ಸೋ, ಉಂಡೆಗಸಿಯೋ – ಎಂತಾರು ಇಕ್ಕು.
ಹಾಂಗಾಗಿ ಬೈಲಕರೆ ರಿಕ್ಷದವು, ಹತ್ತರಾಣ ಅಂಗುಡಿಯವು, ಪೇಟೆಕೆಲಸದವು – ಎಲ್ಲೋರಿಂಗೂ ಅನುಕೂಲ ಆತದಾ!

ಗಣೇಶಮಾವ° ಹೊತ್ತೋಪಗಳಾ ಮಣ್ಣ ಆ ದಾರಿಲೆ ಹೋವುತ್ತರೆ ಒಂದು ಪ್ಳೇಟು ಗೋಳಿಬಜೆಯೂ, ಒಂದು ಚಾಯವೂ ಹೊಡದು ಬಕ್ಕು. ಇವಕ್ಕೆ ಹೊಟ್ಟೆತುಂಬುದರಿಂದಲೂ ಹೆಚ್ಚು, ಅಜ್ಜಂಗೆ ಏನಾರು ರಜ ಚಿಲ್ಲರೆ ಆವುತ್ತಾರೆ ಆಗಲಿ – ಹೇಳ್ತ ಮನಸ್ಸೂ ಇದ್ದು, ಅದರ ಹಿಂದೆ!
ಹೋಟ್ಳಜ್ಜ° ಆರೋಗ್ಯಲ್ಲಿ ಇದ್ದವು, ಹೋಟ್ಳೂ ಆರೋಗ್ಯಲ್ಲಿ ಇದ್ದು. ಇರಳಿ, ಇನ್ನು ಹದ್ನೈದೊರಿಶ ಆದರೆ ಅವಕ್ಕೆ ನೂರೊರಿಶ ಆವುತ್ತು; ಆಗಲಿ ಹೇಳ್ತದು ಒಪ್ಪಣ್ಣನ ಆಶಯ.
ಬೈಲಕರೆ ಬಂಟ ಅವಕ್ಕೆ ಬೋಳುಗುಡ್ಡೆ ಜಾಗೆ ಕೊಟ್ಟಿದು ಹೇಳಿತ್ತಿದ್ದೆ ಅಲ್ಲದೋ; ಈಗ ಆ ವಿಶಯಕ್ಕೆ ಬಪ್ಪೊ°.
~
ಈಗ ಜಾಗಗೆ ಎಲ್ಲಿಲ್ಲದ್ದ ಕ್ರಯ; ಅದರ್ಲೂ ಮಾರ್ಗದಕರೆ ಜಾಗಗೆ ವಿಪರೀತ ಕ್ರಯ.
ಒಳ್ಳೆ ಜಾಗೆಲಿ ಒಂತುಂಡು ಜಾಗೆ ಇದ್ದೋನುದೇ ಈಗ ಲಕ್ಷಾಧಿಪತಿ!
ಅದೇ ಲೆಕ್ಕಲ್ಲಿ ಕ್ರಯ ತೆಗದರೆ, ಹೋಟ್ಳಜ್ಜನೂ ಈಗ ಲಕ್ಷಾಧಿಪತಿಯೇ!
ಆದರೆ, ಅವು ಕೊಡವು; ಆ ಹೋಟ್ಳುಮನೆ, ಆ ತುಂಡು ಜಾಗೆಯ ಬಿಟ್ರೆ ಅವಕ್ಕಿಬ್ರಿಂಗೆ ಬೇರೆ ಎಂತ್ಸರ ಇದ್ದು – ಬೇಕೇ?
~
ಜಾಗೆಯ ಬೆಲೆ ಏರಿದ ಹಾಂಗೇ, ಬಂದವಸ್ತು ಮಾಡ್ತದೂ ಏರಿದ್ದು.
ಒಂತುಂಡು ಜಾಗೆ ಇದ್ದರೆ ಅದಕ್ಕೆ ಲಾಯಿಕದ ಬೇಲಿ ಹಾಕಿ “ಮಾರಾಟಕ್ಕಿಲ್ಲ” ಹೇಳಿ ಬರೆತ್ತದು ಈಗಾಣ ಹೊಸಾ ಕ್ರಮ.
ಹಾಂಗುದೇ ಮಾರಾಟಕ್ಕಿದ್ದರೆ, “ಮಾರಾಟಕ್ಕಿಲ್ಲ” ಹೇಳಿ ಬರದು ಪೋನ್ನಂಬ್ರ ಬರೆತ್ತವು! 😉
ಅದಿರಳಿ.
ಎಲ್ಲೋರುದೇ ಬಂದವಸ್ತು ಮಾಡಿಗೊಂಬಗ ಹೋಟ್ಳಜ್ಜಂದೇ ಬಂದವಸ್ತು ಮಾಡೆಡದೋ – ಅಲ್ಲದ್ದರೆ ಮಾರ್ಗದಕರೆ ಇಪ್ಪ ಅಲ್ಪಸಂಕ್ಯಾತರು ಬಂದು ಗುಡಿಚ್ಚೆಲು ಕಟ್ಟಿರೆ!
ಹಾಂಗೆ, ಎಡಿಗಾರೂ, ಎಡಿಯದ್ರೂ – ಲಾಯಿಕದ ಬೇಲಿ ಹಾಕುಸಿದವು ಮೊನ್ನೆ ಬೇಸಗೆಲಿ.
ಆರಡಿ ಎತ್ತರದ ತಂತಿ ಬೇಲಿ, ಮೊನ್ನೆ ಮಳೆಗಾಲಲ್ಲಿ ಅದಕ್ಕೆ ದಾಸನ ಸೆಸಿ ನೆಡುಸಿದವು.
~
ಹೋಟ್ಳಜ್ಜನ ಜಾಗಗೆ ಬೇಲಿಹಾಕುಸಿ, ಒಳ ಸಜ್ಜಿ ಮಾಡಿದ ಶುದ್ದಿ ಊರೊಳ ತಿರುಗಿತ್ತು.
ಎಂತಾರು ಕೃಷಿ ಇದ್ದೋ – ಹೇಳ್ತ ನಮುನೆಲಿ ಗಟ್ಟಿಬೇಲಿ ಕಂಡ್ರೆ ಆರಿಂಗಾರೂ ಒಂದರಿ ಯೋಚನೆ ಬಕ್ಕು!
ಅಂಬಗ, ಅಡಕ್ಕೆ ಸೆಸಿ ನೆಡ್ತವೋ? ಚೆ, ಅದರ ನೋಡಿಗೊಂಬಲೆ ಎಡಿಯ ಅವರ ಕೈಂದ.
ಅಡಕ್ಕೆ ಸೆಸಿಗೆ ಬೇಕಾದ ಪೋಚಕಾನ ಮಾಡಿಗೊಂಬಲೆ, ಅದುದೇ ಈ ಹೋಟ್ಳಿನ ಎಡಕ್ಕಿಲಿ ಅವರಿಂದ ಪೂರೈಶ.
ಅಂಬಗ ತೆಂಗು ನೆಡ್ತವೋ?
ಕರ್ಚಿಗೆ ತಕ್ಕ ಜಾಗೆಕರೇಲಿ ಸುತ್ತಲೂ ಒಂದು ಸಾಲು ಇದ್ದು; ಇನ್ನು ನೆಡುಕೆ ಪುನಾ ಹಾಕವು!
ಅಂಬಗ ಬೇರೆಂತರ? ಅವು ರಬ್ಬರು ನೆಡುಸುತ್ತವಡ – ಹೇಳಿ ಕೆಲವು ಜೆನ ಗಾಳಿಶುದ್ದಿ ಹಬ್ಬುಸಿದವು.
ಈಗ ಕಾಲಿಜಾಗೆ ಕಂಡ್ರೆ ರಬ್ಬರು ನೆಡ್ತದು ಕೆಲವು ಜೆನರ ಕ್ರಮ ಇದಾ!
ಶುದ್ದಿ ಹಾಂಗೇ ಇದ್ದತ್ತು, ಅದರಷ್ಟಕೇ.
~

ಕೊಳಚ್ಚಿಪ್ಪು ಭಾವನ ನಾಂದಿ ಮೊನ್ನೆ.
ಸೋದರಮಾವ° ಕೈ ಅಡ್ಡ ತಡವದಲ್ಲದ್ದರೆ ಸೀತ ಕಾಶಿಗೇ ಹೋಪ ಹಾಂಗಿತ್ತು; ಹೆರಟ ಪೋರ್ಸು ಕಾಂಬಗ!!
ಮತ್ತೆ, ಪರಿಮ್ಮಳ ಅಡಿಗೆ ನೆಂಪಾತೋ ಏನೋ – ಸೋದರಮಾವಂಗೆ ದೂರು ಹಾಕಿ ಒಪಾಸು ಒಳುದ°, ಮನೆಲಿಯೇ.
ಮದುವೆ ಕಳಿಶಿಕ್ಕಿಯೇ ಹೋಗೀತೆ –ಹೇಳಿಗೊಂಡು! ಹು!!

ಅದಿರಳಿ, ಅಲ್ಲಿಂದ ಊಟ ಕಳಿಶಿಗೊಂಡು ನಾವು ಹೆರಟತ್ತು; ಗಣೇಶಮಾವನ ಒಟ್ಟಿಂಗೆ.
ಊರೋರ ಶುದ್ದಿಯೇ ಮಾತಾಡಿಗೊಂಡು ಬಪ್ಪಗ ಹೋಟ್ಳಜ್ಜನ ಶುದ್ದಿಯೂ ಬಂದೇ ಬಿಟ್ಟತ್ತು.
ಸುಮಾರು ಸಮೆಯಂದ ಊರೋರಿಂಗೆ ಉತ್ತರ ಗೊಂತಿಲ್ಲದ್ದ ಪ್ರಶ್ನೆ ಒಂದಿದ್ದಲ್ಲದೋ – ಅಂಬಗ ಹೋಟ್ಳಜ್ಜ ಆ ಕಾಲಿಜಾಗೆಲಿ ಎಂತರ ನೆಡ್ತವಡ? ಕೇಳಿಯೇಬಿಟ್ಟೆ, ಗಣೇಶಮಾವಂಗೆ ಗೊಂತಿದ್ದೋ ಏನೋ – ಹೇಳಿಗೊಂಡು.

ಮೊನ್ನೆಇತ್ಲಾಗಿ ಬೈಲಕರೆಲಿ ಹೋಪಗ ಒಂದಾರಿ ಹೋಟ್ಳಿಂಗೆ ಹೊಕ್ಕೆರಟಿದವಡ, ಗಣೇಶಮಾವ°.
ಅಷ್ಟಪ್ಪಗ ಹೋಟ್ಳಜ್ಜನ ಕೈಲಿ ಮಾತಾಡಿದ್ದರ ಹೇಳಿದವು.
ಗಣೇಶಮಾವ° ಹೇಳಿದ ಶುದ್ದಿ ಕೇಳಿ ಕೊಶಿಯೂ, ಆಶ್ಚರ್ಯವೂ ಒಟ್ಟಿಂಗೇ ಆತು.
ಅದೆಂತರ?
~
ಹೋಟ್ಳಜ್ಜ° ಆ ಕಾಲಿಜಾಗೆಲಿ – ದನ ನೆಟ್ಟವು ಒಪ್ಪಣ್ಣಾ – ಹೇಳಿದವು ಗಣೇಶಮಾವ°.
ಅರೆ! ಇದೊಂದು ಹೊಸತ್ತನ್ನೇ – ಹೇದು ಕಂಡತ್ತು.
ವಿವರವಾಗಿ ಕೇಳುವಗ ವಿವರುಸಿಗೊಂಡು ಹೋದವು.
ಬಂದವಸ್ತು ಮಾಡಿದ ಆ ಜಾಗೆಲಿ ಹೋದ ಮಳೆಗಾಲ ಕಾಟು ಬಲ್ಲೆ ಎಲ್ಲ ಕೆರಸಿ, ಸೀಮೆಹುಲ್ಲು ನೆಡುಸಿದವಡ. ಕರೆ ಕರೆಲಿ ಜಾಗೆ ಇಪ್ಪಲ್ಲಿ ರಜ ರಾಗಿಯೂ, ಜೋಳವೂ ಬಿಕ್ಕಿದವಡ.
ಮಳೆಗಾಲ ಕಳುದಪ್ಪದ್ದೇ, ಪಷ್ಟ್ಲಾಸು ಚಿಗುರಿ ಬಯಿಂದಾಡ. ಸಾಲಿಲಿ ಸೀಮೆಹುಲ್ಲು ನೆಗದು ಬಂದರೆ, ಕರೆಕರೆಲಿ ರಾಗಿಜೋಳದ ಸೆಸಿಯೂ ಬಯಿಂದಾಡ.
ಇದೆಲ್ಲ ಆರಿಂಗೆ?
ದನಗೊಕ್ಕೆ.
~

ಅವರ ಸಣ್ಣ ಹೋಟ್ಳುಮನೆಯ ಕರೆಲೇ ಸವುದಿ ಕೊಟ್ಟಗೆ ಇದ್ದಲ್ಲದೋ.
ಆ ಕೊಟ್ಟಗೆಯ ಒಂದು ಹೊಡೆಲಿ ಸೌದಿ ಇದ್ದರೆ, ಇನ್ನೊಂದು ಹೊಡೆಲಿ – ಕೆಂಪಿಯೂ, ಭಾಗ್ಯನೂ – ಎರಡು ದನಗೊ ಇದ್ದವು; ಊರ ದನಗೊ.
ಹೋಟ್ಳಿನ ಅಡಿಗೆಲ್ಲಿ ಒಳುದ್ದರ, ಹೆಜ್ಜೆ ತೆಳಿಯ, ಬೆಂದಿಬಾಗವ – ಎಲ್ಲ ಅವಕ್ಕೆ ಕೊಟ್ಟು ಕೊಟ್ಟೂ, ಒಳ್ಳೆ ಗೆನಾಕೆ ಬೆಳದ್ದವುದೇ.
ಈ ಅಜ್ಜಿ ಎಡೆಹೊತ್ತಿಲಿ ಹೋಗಿಹೋಗಿ ಅವರ ಮೈ ಮುಟ್ಟುಗು, ಕೊಂಗಾಟಲ್ಲಿ ಬೆಳದ್ದವು.
ಇಷ್ಟೊಳ್ಳೆ ಗುಡ್ಡೆ ಇಪ್ಪಗ ಈ ದನಗಳ ಹಟ್ಟಿಲೇ ಕಟ್ಟಿ ಕೈಕ್ಕಾಲು ಜಡ ಬರುಸುತ್ತದು ಎಂತ್ಸಕೇ ಹೇಳಿಗೊಂಡು ಹೋಟ್ಳಜ್ಜಂಗೇ ತಲಗೆ ಬಂತಾಡ.
ಅದಕ್ಕೇ, ಆ ಕಾಲಿಗುಡ್ಡೆಗೆ ಬೇಲಿ ಹಾಕಿ, ಅಲ್ಲಿ ರಜ ಮೇವು ತಯಾರುಮಾಡಿ; ಮೊನ್ನೆ ನವರಾತ್ರಿಂದ ಅವರದ್ದೇ ದನ ಅವರದ್ದೇ ಗುಡ್ಡಗೆ ಹೋಪಲೆ ಸುರುಮಾಡಿತ್ತಡ.
~

ಗಣೇಶಮಾವ° ಹೇಳುವಗ ಒಪ್ಪಣ್ಣಂಗೆ ಒಂದು ಮುಖ್ಯ ಸಂಗತಿ ಗಮನುಸಿ ಹೋತು.

ದನ ನೆಡುದು:
ಗಣೇಶಮಾವ° ವಿವರುಸುವಗ ’ಆ ಜಾಗೆಲಿ ದನ ನೆಟ್ಟವಡ’ ಒಪ್ಪಣ್ಣಾ – ಹೇಳಿದವಲ್ಲದೋ. ಎಷ್ಟೊಳ್ಳೆ ಮಾತು.
ಶುದ್ಧ ಭಾಶೆಲಿ ಒಂದರ ನೆಡುದು – ಹೇಳಿರೆ ಎಂತ ಅರ್ತ?
ಒಂದು ವಸ್ತುವಿನ ಪ್ರತಿಷ್ಠೆಮಾಡಿ, ಅದಕ್ಕೆ ಬಂದವಸ್ತು ಕೊಟ್ಟು, ರಕ್ಷಣೆ ಒದಗುಸಿ, ಅದಕ್ಕೆ ಎಂತದೂ ತೊಂದರೆ ಬಾರದ್ದ ಹಾಂಗೆ ಕಾವದು. ಅಪ್ಪೋಲ್ಲದೋ!
ರಬ್ಬರು ನೆಡುದು – ಹೇಳ್ತವು.
ಅದಕ್ಕೆ ಬೇಕಾದ ಬೇಲಿ, ಕೊದಂಟಿ ಪೂರ ಹಾಕಿ, ಸುಣ್ಣ, ಬಣ್ಣ ಎಲ್ಲ ಮೆತ್ತಿ – ಈಟು ಗೊಬ್ಬರ ಸೊರುಗಿ, ನೋಡಿಗೊಂಬದು.
ಹಾಂಗೆಯೇ, ಹೋಟ್ಳಜ್ಜ° – ಬೇಕಾದ ಬಂದವಸ್ತು ಬೇಲಿ ಮಾಡಿಕ್ಕಿ, ಮೇವು ತೆಯಾರು ಮಾಡಿಕ್ಕಿ, ಆ ಗುಡ್ಡೆಲಿ ದನಗೊ ಸ್ವಚ್ಛಂದವಾಗಿ ತಿರುಗುತ್ತ ಹಾಂಗೆ ನೋಡಿಗೊಂಡವು.
~
ನಮ್ಮೂರಿನ ನಮ್ಮೋರಲ್ಲಿ ಎಷ್ಟು ಜೆನಕ್ಕೆ ಬೋಳುಗುಡ್ಡೆ ಇಲ್ಲೆ! ಎಲ್ಲೋರುದೇ ದನ ನೆಡ್ಳೆ ಸುರು ಮಾಡಿರೆ ಕಾಸ್ರೋಡು ತಳಿ ತುಂಬಿ ಹೋಗದೋ?
ತುಂಬ ಬೇಡ, ಅರ್ದ ಎಕ್ರೆ, ಹತ್ತು ಸೆಂಟ್ಸು ಇದ್ದರೂ ಸಾಕು, ಒಂದು ಊರ ದನಕ್ಕೆ.
ಅದರಷ್ಟಕೇ ಬೇಕಾದ್ದರ ತಿಂದುಗೊಂಡು, ಸಗಣ ಕೊಟ್ಟುಗೊಂಡು, ಫಲವತ್ತು ಮಾಡಿಗೊಂಡು, ಚೆಂದಲ್ಲಿ ಓಡಾಡಿಗೊಂಡು ಇರ್ತು. ನವಗೆ ಹೆಚ್ಚಾಗಿ ಬಿಟ್ಟ ಆಹಾರ ಸಾಕು ಅವಕ್ಕೆ, ಸಂತೋಷಲ್ಲಿ ತಿಂದು ನವಗೆ ಅಮೃತ ಕೊಡ್ತವು.

ಜಾಗೆ ಕಂಡ್ರೆ ರಬ್ಬರೋ, ಅಡಕ್ಕೆಯೋ ನೆಡ್ತವು; ಆದರೆ ರಜ ಜಾಗೆ ದನಗೊಕ್ಕೆ ತೆಗದು ಮಡಗಿ, ಒಂದು ಊರದನವ ಸಾಂಕಿ, ಅಲ್ಲಿ ತಿರುಗಲೆ ಬಿಟ್ಟು ’ಗೋಮಾಳ’ ಮಾಡಿರೆ ಎಷ್ಟು ಚೆಂದ ಭಾವ!
ಮದಲಿಂಗೆ ದನಗಳದ್ದೇ ಜಾಗೆ ಅದು; ಈಗ ಬೇಲಿ ಹಾಕಿದ ಕಾರಣ ನಮ್ಮದಾದ್ದದು ಅದೆಲ್ಲ! ಅಲ್ಲದೋ?
ಆ ಲೆಕ್ಕಲ್ಲಿ ನೋಡಿರೆ ಹೋಟ್ಳಜ್ಜನ ಈ ಗೋಸೇವೆ ಮಹತ್ಕಾರ್ಯ ಹೇಳ್ತದು ಬೈಲಿನೋರೆಲ್ಲ ಒಪ್ಪೇಕಾದ ವಿಚಾರವೇ.

~

ದೊಡ್ಡದೊಡ್ಡ ಜಾಗೆ, ಮನೆ, ಗುಡ್ಡೆ ಇಪ್ಪೋರು ಆಗಿದ್ದರೆ ಈ ಜಾಗೆಲಿ ಎಂತ ಮಾಡ್ತಿತವು?
ಈಗಾಣ ಕ್ರಯ ನೋಡಿರೆ ರಬ್ಬರೋ ಮಣ್ಣ ಹಾಕುತಿತವು; ಅಲ್ಲದ್ದರೆ ಯೇವದಾರು ಮಾಪುಳೆಗೆ ಕೊಟ್ಟು ಕೈ ಮುಗಿತ್ತಿತವು.
ಆದರೆ ಈ ಹೋಟ್ಳಜ್ಜ ಅಲ್ಲಿ ದನ ನೆಟ್ಟವಲ್ಲದೋ – ಅದಕ್ಕೆ ಹೇಳಿದ್ದು ಅವರದ್ದು “ಹೊಟ್ಟೆ ತುಂಬಿದ್ದು” ಹೇಳಿಗೊಂಡು.
ಹೊಟ್ಟೆಯೂ ಅಲ್ಲದ್ದೆ, ಮನಸ್ಸೂ ತುಂಬಿದ್ದು -ಹೇಳ್ತದು ನಿಸ್ಸಂಶಯ.

ಬೈಲಕರೆಗೆ ಹೋಪಲಿದ್ದರೆ ಒಂದಾರಿ ಹೋಟ್ಳಜ್ಜನಲ್ಲಿ ಚಾಯ ಕುಡಿಯಲೆ ಮರೇಡಿ.
ನಿಂಗಳದ್ದೂ- ಅವರದ್ದೂ ಹೊಟ್ಟೆ ತುಂಬಲಿ. ಆತೋ?

ಒಂದೊಪ್ಪ: ದನ ನೆಟ್ಟರೆ ಹಾಲು ಸಿಕ್ಕುತ್ತು; ರಬ್ಬರು ನೆಟ್ರೂ ಹಾಲು ಸಿಕ್ಕುತ್ತು. ಆದರೆ, ಕುಡುದರೆ?

ಸೂ: ಪಟ ಇಂಟರ್ನೆಟ್ಟಿಂದ

23 thoughts on “ಹೊಟ್ಟೆತುಂಬಿದ ಹೋಟ್ಳಜ್ಜ ಬೋಳುಗುಡ್ಡೆಲಿ ದನನೆಟ್ಟವಡ..!

  1. ಹರೇ ರಾಮ
    ಗೋಮೂತ್ರ/ಗೋಮಯವ ಯಾವ ತರ ಸಮರ್ಪಕವಾಗಿ ಬಳಸಿಗೊಮ್ಬಲಕ್ಕು … ನಮ್ಮ ಶ್ರೀ ಮಠಲ್ಲಿ ಮಾಹಿತಿ ಲಭ್ಯ ಇಕ್ಕು.

  2. ಹರೇ ರಾಮ,

    ಎಂಗಳ ನೀರಮೂಲೆಲ್ಲಿ ದನ ನೆಡೆಕ್ಕು ಹೇಳಿ ಆಸೆ ಇದ್ದು… ಅರೋಗ್ಯ ಮತ್ತು ನೆಮ್ಮದಿಯ(ಆನೆ) ದೃಷ್ಟಿಂದ ನೋಡುತ್ತರೆ ಕಣ್ಣು ಮುಚ್ಚಿ ನೆಡುಲಕ್ಕು… ಆದರೆ ಇಂದು ಯಾವ ಕೆಲಸ ಸುರು ಮಾಡೆಕ್ಕಾರೂ ಮೊದಲು ತಲೆ ಚಿಂತನೆ ಮಾಡುದು ಆರ್ಥಿಕ ದೃಷ್ಟಿಂದ… ಆರ್ಥಿಕ ದ್ರುಷ್ಟಿಂದಲೂ ಲಾಭದಾಯಕ ಅಪ್ಪ ಹಾಂಗೆ ನೋಡಿಗೊಲ್ಲೆಕ್ಕಾರೆ ಗೋಮಯ ಮತ್ತು ಗೋಮೂತ್ರವ ಸಮರ್ಪಕವಾಗಿ ಬಳಸಿಗೊಲ್ಲೆಕ್ಕು… ಅನುಭವ ಇಪ್ಪವು ಮಾಹಿತಿ ಕೊಡುವಿರಾ… ಅನುಭವ ಇಪ್ಪವರ ವಿಳಾಸ/ಫೋನ್ ನಂಬರ್/ಇಮೇಲ್ ಕೊಡುವಿರಾ?

    1. ದೇಶಭಕ್ತರೆ/ಗುರುಭಕ್ತರೆ/ಧರ್ಮಭಕ್ತರೆ,

      ಬನ್ನಿ… ನಾವೆಲ್ಲ ಒಂದಾಗಿ ದೇಶ ಕಟ್ಟುವ… ಹವ್ಯಕರಿಂಗೆ ದೇಶ ಕಟ್ಟುವ ಸಾಮರ್ಥ್ಯ ಇದ್ದು ಹೇಳುದರ ಸಾಧಿಸಿ ತೋರುಸುವ… ಒಪ್ಪಣ್ಣ ಹೇಳಿದ ಹಾಂಗೆ ದನ ನೆಟ್ಟರೆ ನಮಗೂ ಒಳಿತು, ದೇಶಕ್ಕೂ ಒಳಿತು… ಒಳ್ಳೆ ಕೆಲಸವ ಮಾಡುಲೆ ಮೀನಾ ಮೇಷ ನೋಡಿಗೊಂಡು ಕೂಬ್ಬದು ಎಂತಕೆ? ನಮ್ಮ ಸಮಸ್ಯೆಗಳ ಒಂದಾಗಿ ಚರ್ಚಿಸಿ ಬಗೆಹರಿಸಿಗೊಂಬ… ದೇಶಕ್ಕಾಗಿ/ಧರ್ಮಕ್ಕಾಗಿ ಹೋರಾಡುವ…

      ಎಂಗಳ ನೀರಮೂಲೆಲ್ಲಿ ಒಂದು ಬೋಳು ಗುಡ್ಡೆ ಇದ್ದು… ಅದನ್ನೇ ಮಾದರಿಯಾಗಿ ತೆಕ್ಕೊಂಡು ಚರ್ಚಿಸುವ… ಗುಡ್ಡೆಗೆ ಗಟ್ಟಿ ಬೇಲಿ ಹಾಕುದು ರಬ್ಬರ್ ನೆಡುತ್ತರೂ/ದನ ನೆಡುತ್ತರೂ ಹಾಕೆಕ್ಕು… ಒಂದು ಹಟ್ಟಿ ಕಟ್ಟುವ ಖರ್ಚು ಇದ್ದು… ದನವ ಗುಡ್ಡೆಗೆ ಬಿಟ್ಟು ಸಾಂಕುತ್ತರೆ ಊರ ದನಗೊಕ್ಕೆ ಜಾಸ್ತಿ ಖರ್ಚು ಇಲ್ಲೇ… ಹಾಲು ಕಡಮ್ಮೆ ಸಿಕ್ಕುಗಷ್ಟೇ… ಹಾಲು/ಮಜ್ಜಿಗೆ/ತುಪ್ಪಂದ ಬಪ್ಪ ಆದಾಯ ನಗಣ್ಯ… ಗೋಮೂತ್ರ/ಗೋಮಯವ ಯಾವ ತರ ಸಮರ್ಪಕವಾಗಿ ಬಳಸಿಗೊಮ್ಬಳಕ್ಕು ಹೇಳುದರ ಕಲ್ತುಗೊಲ್ಳೆಕ್ಕಷ್ಟೇ… ಅದರಿಂದ ಬಪ್ಪ ಆದಾಯವ ಲೆಕ್ಕ ಹಾಕಿರೆ ಕೊನೆ ಪಕ್ಷ ನಷ್ಟ ಇಲ್ಲದ್ದ ಹಾಂಗೆ ಮುಂದುವರಿಸಲೇ ಎಡಿಗು ಹೇಳಿ ಆದರೆ ದನ ನೆಡುದಕ್ಕೆ ಯಾವುದೇ ಅಡ್ಡಿ ಇಲ್ಲೇ…

      ದಯವಿಟ್ಟು ಗೋಮೂತ್ರ/ಗೋಮಯವ ಯಾವ ತರ ಸಮರ್ಪಕವಾಗಿ ಬಳಸಿಗೊಮ್ಬಲಕ್ಕು ಹೇಳಿ ಗೊಂತಿಪ್ಪವು ಮಾಹಿತಿ ಕೊಡಿ…

  3. ಒಪ್ಪಣ್ಣ ಒಂದು ಒಳ್ಳೆಯ ಆದರ್ಶ ತುಂಬಿದ ಬರಹ.. ಹೋಟ್ಳಜ್ಜನ ಕಾರ್ಯ ಮೆಚ್ಚೆಕ್ಕಾದ್ದೆ..
    ದನ ನೆಡುದು ಆನು ಕೇಳಿದ ಹೊಸ ಶಬ್ದ…
    ಧನ್ಯವಾದಂಗೊ…

  4. ಒಪ್ಪಣ್ಣ,

    ತುಂಬಾ ಲಾಯ್ಕ ಶುದ್ದಿ. ಎಲ್ಲರನ್ನೂ ಎಚ್ಚರಿಸುವಂಥಾ ಶುದ್ದಿ!!

    [ಮದಲಿಂಗೆ ದನಗಳದ್ದೇ ಜಾಗೆ ಅದು; ಈಗ ಬೇಲಿ ಹಾಕಿದ ಕಾರಣ ನಮ್ಮದಾದ್ದದು ಅದೆಲ್ಲ! ಅಲ್ಲದೋ?]

    ಸತ್ಯವಾದ ಮಾತು. ಜಾನುವಾರುಗೋ ಕೊಶೀಲಿ ಹೊಟ್ಟೆ ತುಂಬುಸಿಗೊಂಡಿಪ್ಪ ಜಾಗೆಗಳ ನಾವು ಬೇಲಿ ಹಾಕಿ ‘ನಮ್ಮದು’ ಹೇಳಿತ್ತು!! ಅವು ಜಗಳಕ್ಕೆ ಬಂದವಾ? ಬೇಲಿಯ ಆಚ ಕರೆಂದ ಮೇದವು. ಆಚವ° ಬೇಲಿ ಹಾಕಿ ಅಪ್ಪಗ ಮತ್ತೊಂದು ಹೊಡೆಂದ ಮೇದವು. ನಮ್ಮ ದನಂಗೊಕ್ಕೆ ತಿಂಬಲೆ ಆದರೂ ಮೇವು ನೆಟ್ಟತ್ತಾ? ಬಿಟ್ಟತ್ತಾ? ಇದ್ದ ಗುಡ್ದೆಲಿ ದನಂಗಳ ಬಾಯಿ ಕಟ್ಟಿತ್ತು. ಮೂಕ ಜಾನುವಾರುಗೋ ಅಲ್ಪತೃಪ್ತಿಯ ಮೂರ್ತಿಗೋ!!! ನಾವು ಮಡಿಗಿದ ಹಾಂಗೆ ನಮ್ಮೊಟ್ಟಿಂಗೆ ಹೊಂದಿಗೊಂಡವು. ನವಗೆ ಕೊಡುದರಲ್ಲಿ ಕಡಮ್ಮೆ ಮಾಡಿದ್ದವಿಲ್ಲೇ. ಧಾರಾಳ ಕೊಟ್ಟವು.

    [ ಅವರದ್ದು “ಹೊಟ್ಟೆ ತುಂಬಿದ್ದು” ಹೇಳಿಗೊಂಡು.]

    ಒಪ್ಪಣ್ಣೋ.., ಹೊಟ್ಟೆ ತುಂಬುದು ಹೇಳಿದರೆ ಎಂತರ ಹೇಳಿ ಈ ಶುದ್ದಿಲಿ ಸರೀ ಗೊಂತಾವುತ್ತು. ಈಗಾಣ ಕಾಲಲ್ಲಿ ಎಷ್ಟು ಸಂಪಾದನೆ ಮಾಡಿದರೂ ಆರದ್ದೂ ಹೊಟ್ಟೆ ತುಂಬುತ್ತಿಲ್ಲೆ. ಇನ್ನೂ ಎಲ್ಲಿಂದ ಸಂಪಾದನೆ ಮಾಡುದು? ಇನ್ನಾರ ಜಾಗೆ ತಿಂಬದು? ಇನ್ನಾರ ನಂಬುಸಿ ಮೋಸ ಮಾಡಿ ತಿಂಬದು ಇದುವೇ ಯೋಚನೆ ಮನುಷ್ಯಂಗೆ!! ತನಗೂ ಅಲ್ಲದ್ದೆ ತನ್ನ ನಂತ್ರಾಣ ತಲೆಮಾರಿಂಗೂ ಸೇರಿ ಕಟ್ಟಿ ಮಡುಗುತ್ತ ಏರ್ಪಾಡುಗೋ!! ಈ ಸಂಪಾದನೆಯ ಎಡಕ್ಕಿಲಿ ಜೆನಂಗ ಒಂದು ಮರೆತ್ತವು. ನಮ್ಮ ಜಾನುವಾರುಗೋ ನಮ್ಮ ಮೂಲ ಧನ! ಅದುವೇ ಇಲ್ಲದ್ದೆ ಆದರೆ ನಾಳೆ ನವಗೆ ಭವಿಷ್ಯ ಇಕ್ಕೋ?

    ಒಪ್ಪಣ್ಣ, ನೀನು ಎರಡು ವಿಷಯಂಗಳ ನೆಡ್ತ ಕ್ರಮ, ಸಾಮ್ಯತೆ ವಿವರ್ಸಿದ್ದು ಲಾಯ್ಕಾಯಿದು. ಒಂದೊಪ್ಪಲ್ಲಿ ಹೇಳಿದ ಹಾಂಗೆ ಎರಡರಲ್ಲಿಯೂ ಹಾಲು ಸಿಕ್ಕುತ್ತು. ಒಂದು ಅಮೃತದ ಹಾಂಗೆ ಜೀವ ಸಂರಕ್ಷಣೆ ಮಾಡ್ತು.. ಮನುಷ್ಯರದ್ದು ಮಾಂತ್ರ ಅಲ್ಲ ಸಮಸ್ತ ಜೀವ ರಾಶಿದೂ ಕೂಡಾ!!! ಇನ್ನೊಂದು ಹಾಲಾಹಲದ ಹಾಂಗೆ ಜೀವ ಭಕ್ಷಣೆ ಮಾಡ್ತು. ಒಂದು ವೇಳೆ ಕುಡುದರೆ ಮನುಷ್ಯರದ್ದು!! ಗೆಡು ಬೆಳವಗ, ಬೆಳದ ಮೇಲೆ ಭೂಮಿಯ ಒಳುದ ಸಸ್ಯ ವರ್ಗದ್ದು!!!

    ಹೋಟ್ಳಜ್ಜ°, ಹೋಟ್ಳಜ್ಜಿಯ ಹಾಂಗೆ ಇಪ್ಪವ್ವು ಎಲ್ಲರಿಂಗೂ ಮಾದರಿ. ಅವರ ದೊಡ್ಡ, ತೃಪ್ತ ಮನಸ್ಸಿಂಗೆ ಕೋಟಿ ಕೋಟಿ ನಮಸ್ಕಾರಂಗೋ. ಇವರ ಮನಸ್ಸಿನ ಹಾಂಗಿಪ್ಪ ಜೆನಂಗಳ ಸಂತತಿ ವೃದ್ಧಿ ಆಗಲಿ..

  5. ಒಳ್ಳೆ ಲೇಖನ.

    ಹೊಟ್ಲಜ್ಜನ ಹಾಂಗಿಪ್ಪ ಹವ್ಯಕರು ನಮ್ಮ ಸಮಾಜದ ಶೋಬೆ. ಕಾಸ್ರೊಡು ಆತ್ಲಾಗಿ ಗುಡ್ದೆಲಿ ಮೇವು ಇದ್ದರೂ ದನವ ಬಿಡ್ಲೆ ಗೊಂತಿಲ್ಲೆ. ಬ್ಯಾರಿಗೊ ಅಲ್ಲಿಂದಲೆ ಬಂದು ಲೊರಿಲಿ ತುಂಬುಸಿಯೊಂಡು ಹೊವುತ್ತವು.

    ಹೊಟ್ಲಜ್ಜನ ಜೀವನ ಎಲ್ಲರಿಂಗೂ ಆದರ್ಶ ಆಗಲಿ.

  6. ಹೋಟ್ಲಜ್ಜಂಗೆ ಅಭಿನಂದನೆ….ಬರೆದ ಒಪ್ಪಣ್ಣಂಗೂ……

  7. ಒಂದು ಸತ್ಯ ಗೋಚರ ಆತು ಒಪ್ಪಣ್ಣಾ..
    ಈಗಾಣ ಕಾಲಲ್ಲಿ ಎಷ್ಟೋ ಜೆನ ನಮ್ಮೋರು ಕೃಷಿಕರೇ ಆಗಿದ್ದರೂ ‘ಗೋಚರಾವಿಂಗೆ ಜಾಗೆ ಇಲ್ಲೆ’ ಹೇಳ್ತ ನೆವನ ಮುಂದೆಮಡುಗಿಂಡು ಹಟ್ಟಿಲಿ ದನಗಳ ಸಂಖ್ಯೆ ಕಮ್ಮಿ ಮಾಡ್ತಾ ಇದ್ದವು. ಆದರೆ ಯಥಾರ್ಥಕ್ಕಾರು ದನಗಳ ಸಾಂಕೆಕ್ಕಾರೆ ಮದಾಲು ನಮ್ಮ ಮನಸ್ಸಿಲ್ಲಿ ಜಾಗೆ ಮಾಡಿಯೊಳ್ಳೆಕ್ಕು ಹೇಳ್ತದರ ಹೋಟ್ಲಜ್ಜ ತೋರ್ಸಿಕೊಟ್ಟವು.
    ನಮ್ಮ ಪೂಜ್ಯ ಶ್ರೀಗುರುಗಳ ಗೋಸಂರಕ್ಷಣಾ ಮಹಾಸಂಕಲ್ಪ ಕಾರ್ಯಗತ ಅಪ್ಪದು ಹೀಂಗಿರ್ತ ನೈಜ ಗೋಪ್ರೇಮಿಗಳ ಸಹಕಾರಂದಲೇ ಅಲ್ಲದೋ?
    ಒಂದು ಒಳ್ಳೆಯ ಶುದ್ದಿಗೆ ವಿಷಯ ಆದ ಹೋಟ್ಲಜ್ಜಂಗೂ ಶುದ್ದಿ ಬರದ ಒಪ್ಪಣ್ಣಂಗೂ ಅಭಿನಂದನೆಗೊ..
    ಹೇಳಿದಾಂಗೆ ಆನುದೆ ಈ ಅಜ್ಜನ ಹೋಟ್ಲಿಲ್ಲಿ ಒಂದೆರಡು ಸರ್ತಿ ಚಾಯ ಕುಡುದ ನೆಂಪಿದ್ದು ಮಿನಿಯಾ…

  8. ಓದುವವರ ಮನಸ್ಸೂ ತು೦ಬಿ ಬಪ್ಪ ಹಾ೦ಗಿಪ್ಪ ಶುದ್ದಿ.
    ಒ೦ದರಿ ಭೂಮಿ ಮೇಲೆ ಬದುಕ್ಕುವ ಅವಕಾಶಲ್ಲಿ ಹೃದಯಶ್ರೀಮ೦ತಿಕೆಯ ಬೆಳೆಸೆಕ್ಕಾದ್ದು ಮುಖ್ಯ ಅಲ್ಲದೋ?
    ಧನ್ಯವಾದ ಒಪ್ಪಣ್ಣಾ.

  9. ಹೋಟ್ಳಜ್ಜನ ಆದರ್ಶವ ನೋಡಿ ತು೦ಬಾ ಖುಶಿ ಆತು..

  10. ಅದೆಲ್ಲ ಸರಿ ಆ ಹೋಟ್ಳಜ್ಜ ಎಲ್ಲಿ ಸಿಕ್ಕುಗು ? ದನ ನೆಟ್ಟದಕ್ಕೆ ಅಭಿನ೦ದನೆ ತಿಳ್ಸಿಕ್ಕಿ………………

    ಅವರ ಹತ್ತರೆ “ಬಸಳೆಯೋ ಮಣ್ಣೋ” ಸಾ೦ಬಾರು ಮಾಡ್ಳೆ ಕಲಿಯಕ್ಕು!!!!!!!!!

  11. ಅಪ್ಪು ಹೋಟ್ಳಜ್ಜನ ಆದರ್ಶ ನಿಜವಾಗಿಯೂ ಅನುಕರಣೀಯ… ನಿನ್ನೆ ಕೊಳಚಿಪ್ಪು ಮದುವೆಲಿ ಮಾಸ್ಟ್ರಮಾವ ಸಿಕ್ಕಿತ್ತವು ಹೋಟ್ಲಜ್ಜನ ಕಥೆಯ ಇನ್ನೂ ವಿಸ್ತ್ತಾರವಗಿ ಹೇಳಿದವು.. ಬಸವಣ್ಣ ಹೇಳಿದ ಹಾಂಗೆ ಕಾಯಕವೇ ಕೈಲಾಸ ಹೇಳುತ್ತದರ ಮಾಡಿ ತೋರುಸುವ ಹೋಟ್ಳಜ್ಜಂಗೆ ನಮೋ ನಮಃ…

  12. ಹೋಟ್ಲಜ್ಜನ ಆದರ್ಶ ಅನುಕರಣೀಯವೇ ಸರಿ.
    ದನಗಳ ಹೊಟ್ಟೆ ತುಂಬಿರೇ ನಮ್ಮ ಹೊಟ್ಟೆ ಕೂಡಾ ತುಂಬುಗಷ್ಟೆ ಹೇಳ್ತ ಸತ್ಯ ಪ್ರತಿಪಾದನೆ ಲಾಯಿಕ ಆಯಿದು.
    “ನೀನಾರಿಗಾದೆಯೋ ಎಲೆ ಮಾನವ-ಹರಿ ಹರಿ ಗೋವು ನಾನು” ಪದ್ಯವ ಮತ್ತೊಂದರಿ ನೆಂಪು ಮಾಡಿ ಕೊಟ್ತತ್ತು.
    ಒಂದೊಪ್ಪ ಲಾಯಿಕ ಆಯಿದು.

  13. ಒಪ್ಪಣ್ಣ ಅಂದು ನಾವು ಶಾಲೆಗೇ ಹೊಪಗಳೇ ಹೋಟ್ಲು ಅಜ್ಜ ದಂಪತಿ ಹಾಂಗೆ ಇತ್ತಿದ್ದವು ಕಾಂಬಲೆ …ಈಗಳೂ ಹಾಂಗೆ ಇದ್ದವು …ಸಾಧಾರಣ 15 ವರ್ಷ ಮೇಲೆ ಆತೋ ಹೇಳಿ ..

  14. ಹೋಟ್ಲಜ್ಜ ದನ ನೆಟ್ಟ ವಿಷಯ ರಸವತ್ತಾಗಿ ಬರದ್ದೆ, ಒಪ್ಪಣ್ಣ. ಇದು ನಿಸ್ಸ೦ದೇಹವಾಗಿ ಕಾರ್ಯರೂಪಕ್ಕೆ ತರೇಕಾದ ಸಲಹೆ.

  15. ಒಳ್ಳೆ ಸಂದೇಶ ಇಪ್ಪ ಲೇಖನ.

  16. Uttama sandeshayukta lekhana oppanna, kathe oduga engala orina hotlajjana nenapige bantu… Hege ellaru usur madire akkaste, ilaldre danagala paadu? ee varsha kulkundada dana, ettugavakkude byarigalee girakiyada!

  17. ಹೋತ್ಳಜ್ಜನ ಹಾಂಗೆ ‘ದನ ನೆಡುವ’ ಬುದ್ದಿ ಎಲ್ಲೋರಿಂಗೂ ಬಂದು ಬೈಲು ತುಂಬಾ ದನಗ!!! ನಮ್ಮೆಲ್ಲರ ಕನಸು ಆದಷ್ಟು ಬೇಗ ನನಸಾಗಲಿ…

  18. ಆಹಾ! ಎಷ್ಟು ಲಾಯಿಕದ ಕೆಲಸ ಮಾಡಿದ್ದವು ಹೋಟ್ಳು ಅಜ್ಜ. ನಿಜವಾಗಿ ಮನ ತುಂಬಿ ಬಂತು ಅವರ ಕಾರ್ಯದ ಬಗ್ಗೆ ಓದಿ.
    ಎಂಗೊ ಸಣ್ಣ ಇಪ್ಪಗ ‘ಹರಿಯೊಲ್ಮೆ’ ಲಿ ಅಪ್ಪಚ್ಚಿಯಕ್ಕಳ ಒಟ್ಟಿಂಗೆ, ದನಂಗಳ ಗುಡ್ಡೆಂದ ಎಬ್ಬುಲೆ ಹೋಗ್ಯೊಂಡಿದ್ದದು, ಹೊಳೆಗೆ ಮೀಶುಲೆ ಎಬ್ಬಿದ್ದು ಎಲ್ಲ ನೆಂಪಾತು.
    ಹೇಳಿದ ಹಾಂಗೆ ಎಲ್ಲಿಪ್ಪದು ಈ ಅಜ್ಜನ ಹೋಟ್ಳು ಒಪ್ಪಣ್ಣ?
    ~ಸುಮನಕ್ಕ.

  19. ಹೋಟ್ಲಜ್ಜನ ಕತೆ ಲಾಯಕ ಓದುಸಿಗೊಂಡುಹೋತು ಹೇಳ್ವದು ನಿಸ್ಸಂದೇಹ. ಜಾಲಕರೆ ಗಣಿಯನ್ನೇ ಸರಿಯಾಗಿ ಬಳಸಿರೆ ಚಿನ್ನದ ಗಣಿ ಮಾಡ್ಳೆ ಎಡಿಗು , ಬಳ್ಳಾರಿ ಗಣಿಯಷ್ಟು ತಲೆಬೆಷಿ ಇಲ್ಲೆ ಹೇಳಿ ಗ್ರೇಶಿಹೋತು. ಎಲ್ಲದಕ್ಕೂ ಮನಸ್ಸೊಂದು ಗಟ್ಟಿ ಇದ್ರೆ ಶರೀರವೂ ಗಟ್ಟಿ ಇರ್ತು ಅಕ್ಕು. ಇದೆರಡು ಗಟ್ಟಿ ಅಪ್ಪಗ ಹೆಮ್ಮೆಯ ಆತ್ಮತೃಪ್ತಿಯೂ ತುಂಬುತ್ತು ಹೇಳುವ ಆಶಯ ಒಪ್ಪಣ್ಣನ ಶುದ್ದಿಲಿ ಲಾಯಕ ಮೂಡಿಬೈಂದು ಹೇಳಿ ಹೇಳುವದು -‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×