Oppanna.com

ಅಯೋಗ್ಯ ಕೂಟ, ಐಸಿಸ್ ಒಕ್ಕೂಟ..

ಬರದೋರು :   ಒಪ್ಪಣ್ಣ    on   30/01/2015    3 ಒಪ್ಪಂಗೊ

ಭಯ.
ನವರಸಲ್ಲಿ ಒಂದಾದ ಈ ಹೆದರಿಕೆಗೆ ಎಲ್ಲೋರುದೇ ಹೆದರುವೋರೇ.
ಒಪ್ಪಕ್ಕಂಗೆ ಜೆರಳೆ ಕಂಡ್ರೆ ಹೆದರಿಕೆ.
ರಂಗಮಾವಂಗೆ ಜಾಲಿಲಿಪ್ಪ ಅಡಕ್ಕೆಯ ಹೆದರಿಕೆ.
ಕಾನಾವಣ್ಣಂಗೆ ಪಾಠಲ್ಲಿ ಬಪ್ಪ ಭಾಮಿನಿಯ ಹೆದರಿಕೆ.
ಬಟ್ಯಂಗೆ ಬೈಲಕರೆ ಹೋರಿಯ ಹೆದರಿಕೆ.
ಎಯ್ಯೂರು ಬಾವಂಗೆ ಗೆದ್ದೆಗಿಳಿವ ಹಂದಿಯ ಹೆದರಿಕೆ.
ಕುಕ್ಕಿಲ ಮಾವಂಗೆ ಈಗ ಕಾರು ಬಿಡ್ಳೇ ಹೆದರಿಕೆ! ಅತ್ತೆ ಪರಂಚುತ್ತವು ಹೇದು!!
ನಾವು ಈ ವಾರ ಮಾತಾಡುಸ್ಸು ಈ ನಮುನೆಯ ಹೆದರಿಕೆಗಳೋ? ಅಲ್ಲ.
ಇಂದು ಶುದ್ದಿಲಿ ಮಾತಾಡ್ಳೆ ಹೆರಟದು ಜೀವದ ಹೆದರಿಕೆ. ಅದೇ – ಭಯೋತ್ಪಾದನೆ.
~
ಲೋಕ ಇಡೀಕ ಹರಡಿದ ಸಂಗತಿ ಇದು ಭಯೋತ್ಪಾದನೆ. ಯೇವದಾರು ಒಂದು ಸಂಘಟನೆಯ ಧ್ಯೇಯೋದ್ದೇಶವ ಊರಿಂಗೆ ತಿಳುಶೇಕಾದರೆ ಯೇವದಾರು ದಾರಿಕರೆಲಿ, ಮೂರು ಮಾರ್ಗ ಸೇರ್ತಲ್ಲಿ ಬೆಡಿ ಹೊಟ್ಟುಸುದು. ಹತ್ತು ಜೆನ ಪಾಪದವು ಸತ್ತು, ಐವತ್ತು ಜೆನಕ್ಕೆ ಗಾಯ ಆತು ಮಡಿಕ್ಕೊಳಿ – ಆ ವಿಷಯ ಪೇಪರಿಲಿ ನಾಕು ದಿನ ಬತ್ತು ಹೇದು ಆದರೆ – ಅದೇ ಅವರ ಮಾಧ್ಯಮ. ಅದರ ಮೂಲಕವೇ ಅವಕ್ಕೆ ಪ್ರಚಾರ.
ಒಳ್ಳೆದರ ಮಾಡಿ ಹೆಸರು ಪಡಕ್ಕೊಂಬದು ನಿಧಾನ, ಆದರೆ ಕೆಟ್ಟ ದಾರಿಲಿ, ಇನ್ನೊಬ್ಬನ ಪ್ರತಿಷ್ಠೆಗೆ ಕಾಲು ಮಡಗಿ ಅವನ ಮೆಟ್ಟಿ ಮೇಲೆ ನಿಂಬಲೆ ನೋಡಿ ಹೆಸರು ಪಡಕ್ಕೊಂಬದು ಭಾರೀ ಬೇಗದ ಸಂಗತಿ.
ಮಾಡುದು ಕೆಟ್ಟ ಕೆಲಸ ಆದರೂ, ಅದಕ್ಕೆ ಧರ್ಮದ ಹೆಸರು ಬೇರೆ ಕೇಡು!
ಹೀಂಗಿಪ್ಪ ಹಲವೂ ಅಯೋಗ್ಯ, ಅಮಾನವೀಯ ಸಂಗತಿಗಳಲ್ಲಿ ತಾಲೀಬಾನು ಒಂದು ಹೇದು ನಾವು ಹಲವೂ ಸರ್ತಿ ಬೈಲಿಲಿ ಮಾತಾಡಿದ್ದು. ಗಾಂಧಾರ ದೇಶವೇ ಮದಲಾದ ಪ್ರಾಚೀನ ಭಾರತೀಯ ಸಂಸ್ಕೃತಿಯ ಕೇಂದ್ರಲ್ಲಿ ಎದ್ದು ಬಂದ ಕ್ಯಾನ್ಸರ್ ಪಿಡುಗು ಆ ಊರಿನ ಎಲ್ಲಾ ಚೆಂದ-ಒಂಬು-ಗರಿಮೆಗಳ ತನ್ನೊಳವೇ ಸುಟ್ಟು ಮಸಿಮಾಡಿ, ಆ ಕಿಚ್ಚಿಲಿ ತಮ್ಮ ಬೇಳೆ ಬೇಯಿಸಿಗೊಂಡ ಕ್ರೂರ ಸಂಘಟನೆಯೇ ತಾಲೀಬಾನು.
ಹಲವಾರು ಒರಿಶದ ಹೋರಾಟಲ್ಲಿ ತಾಲೀಬಾನು ಮಾಯಕ ಆತು – ಹೇದು ಲೆಕ್ಕ.

ಕ್ಯಾನ್ಸರ್ ಪೂರ್ತಿ ಗುಣ ಅಪ್ಪದು ಹೇದು ಇಲ್ಲೆ. ಹಾಂಗೂ ಗುಣ ಆಯೇಕಾರೆ ಅದೊಂದು ಪವಾಡ.
ತಾಲೀಬಾನಿಲಿಯೂ ಹಾಂಗೇ ಆತು. ಅಫಘಾನಲ್ಲಿ ಪೂರ್ತಿ ಗುಣ ಆದ ಹಾಂಗೆ ಕಂಡ್ರೂ, ಪಾತಕಿಸ್ಥಾನಲ್ಲಿ ಎದ್ದತ್ತು, ಓ ಅತ್ಲಾಗಿ ಇರಾಕು, ಸಿರಿಯಾ ಹೇಳ್ತ ಬ್ಯಾರಿದೇಶಂಗಳಲ್ಲಿ ಎದ್ದತ್ತು.
ಪಾತಕಿಸ್ಥಾನವ ದಿನೇದಿನೇ ಬೋಂಬು ಹೊಟ್ಟುಸಿ ತಿಂತಾ ಇದ್ದು. ಆದರೆ ಅತ್ಲಾಗಿ ಇನ್ನೂ ಭೀಕರ ಆಯಿದು ಪರಿಸ್ಥಿತಿ!!
ಅದೆಂತರ? ಅದೇ “ಐಸಿಸ್”.
~

ಒಸಾಮ ಲಾಡೆನ್ ಲೋಕವ ಲಗಾಡಿ ಕೊಡ್ಳೆ ಅಲ್-ಖೈದಾ ಹೇಳ್ತ ಸಂಘಟನೆ ಆರಂಭ ಮಾಡಿದ್ದು ನಿಂಗೊಗೆ ಗೊಂತಿಕ್ಕು. ಆ ಸಂಘಟನೆಯ ಒಟ್ಟಿಂಗೆ ಸಮ್ಮಂದ ಕೈದು ಮಾಡಿಗೊಂಡು ಹೊಸತ್ತೊಂದರ ಆರಂಭ ಮಾಡಿದವು ಕೆಲವು ಜೆನ. ಅಬೂಬಕರ್ ಅಲ್ ಬಾಗ್ದಾದಿ – ಹೇಳ್ತ ಇನ್ನೊಂದು ಭಯಾನಕ ಭಯೋತ್ಪಾದಕ ಅದರ ನಾಯಕ. ಆ ಜೆನರ ಊರಾದ ಸಿರಿಯಾ, ಇರಾಕು ಇದರ ಕಾರ್ಯಸ್ಥಾನ. ಸಣ್ಣ ಪ್ರಮಾಣಲ್ಲಿ ಸುರುವಿಂಗೆ ಬೆಳದ ಸಂಘಟನೆ ದಿನೇದಿನೇ ಭಾರೀ ವೇಗಲ್ಲಿ ಬೆಳದತ್ತು.
ಅದರ ಬೆಳವಣಿಗೆಗೆ ಮುಖ್ಯ ಕಾರಣ ಎರಡು

– ಒಂದು ಧರ್ಮಕ್ಕಾಗಿ ಸಿಕ್ಕುವ ಜೆನಂಗೊ.
– ಇನ್ನೊಂದು ಧರ್ಮಕ್ಕೇ ಸಿಕ್ಕುವ ಜೆನಂಗೊ.

ಧರ್ಮ, ಕುರಾನು ಇತ್ಯಾದಿಗಳ ಉದಾಹರಣೆ ಕೊಟ್ಟು ಮರ್ಳುಮಾಡಿರೆ ನಂಬುತ್ತ ಹಲವಾರು ಜೆನಂಗೊ ಅವಕ್ಕೆ ಸಿಕ್ಕುತ್ತವು. ಅದರ ಅತಿಯಾಗಿ ನಂಬುತ್ತ ಒಂದು ವರ್ಗ ಇದ್ದು; ಅವರ ಎಲ್ಲೋರ ಕೈಲಿ ಬೆಡಿ ಹಿಡುಶಿಗೊಂಡು ಅವರ ಬಳಶಿಗೊಂಬದು.
ಇನ್ನೊಂದು ವರ್ಗ ಇದ್ದು ಅವಕ್ಕೆ ಪೈಶೆ ಕೊಟ್ರಾತು. ಒಳ್ಳೇತ ಸಂಬಳ ಕೊಟ್ಟು – ಎಂತ ಕೆಲಸ ಮಾಡು ಹೇದರೂ ಮಾಡ್ತವು; ಅಂಥವರನ್ನೂ ಬಳಸಿಗೊಂಬದು.
ಹೀಂಗೆ ಎರಡು ವರ್ಗಂದಾಗಿ ಬೆಳದ ಸಂಘಟನೆ ಇದು. ಆರಂಭಲ್ಲಿಯೇ ಇದಕ್ಕೆ ಬೇಕಾಷ್ಟು ಪೈಶೆ ಇದ್ದ ಕಾರಣ ಯೇವದಕ್ಕೂ ಬಂಙ ಆಯಿದಿಲ್ಲೆ. ತೆರೆಮರೆಂದಲೇ ಕೆಲಸ ಮಾಡಿದ ವರ್ಗ, ಒಂದರಿಯೇ ಹೆಬ್ಬುಲಿಯ ಹಾಂಗೆ ಎದ್ದು ನಿಂದತ್ತು.

ಸಿರಿಯಾ ಹೇಳ್ತ ಕಿರಿಯ ದೇಶವ ಕ್ರಮೇಣ ತನ್ನ ಕಬಂಧಬಾಹುಗಳಲ್ಲಿ ತುಂಬುಸಿಗೊಂಡ ಸಂಘಟನೆ ಕ್ರಮೇಣ ನೆರೆಕರೆಯ ಇರಾಕಿಂಗೂ ಎತ್ತಿತ್ತು. ಇರಾಕ್ ದೇಶಲ್ಲಿ ಅಷ್ಟಪ್ಪಗ ಪ್ರಜಾಪ್ರಭುತ್ವ ಇದ್ದರೂ, ಅಮೇರಿಕಾ ದೇಶ ಸಹಕಾರ ಕೊಟ್ಟುಗೊಂಡಿತ್ತು. ಅಮೇರಿಕದ ಮೇಗೆ ಅತೀವ ಕೇಡು ಇಪ್ಪ ಐಸಿಸ್ ಗೆ ಇರಾಕಿಂಗೆ ಮುಕ್ತಿ ಕೊಡುವೊ° ಹೇದು ಪ್ರಚಾರ ಹಬ್ಬುಸಿದವು. ಇದರಿಂದಾಗಿ ಅಲ್ಯಾಣ ಜೆನಂಗಳೂ ರಜ ರಜ ನಂಬಿದವು. ಒಂದೊಂದೇ ಹಳ್ಳಿಗೊ ಅವರದ್ದಾತು.

ಅವರ ಯುದ್ಧದ ರೀತಿ ಹೇಂಗೆ?
ಪಿಕಪ್ಪು ಗಾಡಿಯ ಹಿಂದೆ ಬೆಡಿ ಹಿಡ್ಕೊಂಡು ಐದಾರು ಜೆನ ನಿಂಬದು. ದೊಡ್ಡಮಾರ್ಗಲ್ಲಿ ಹೋಪದು. ದಾರಿಲಿ ಸಿಕ್ಕಿದ ಯೇವ ವಾಹನವೇ ಆಗಿರಲಿ, ಅದಕ್ಕೆ ಗುಂಡು ಬಿಡುದು. ಕಾರಿಲಿ ಇದ್ದೋರೆಲ್ಲ ಗಾಯ ಆಗಿ; ಅದರ ಡ್ರೈವರನ ತೆಗಲೆಗೆ ಗುಂಡು ಬಿದ್ದು, ಆ ಜೆನ ಸತ್ತು, ಅವರ ಕಾರು ಮಾರ್ಗದ ಕರೆಂಗೆ ಹೋಗಿ ಢಿಕ್ಕಿ ಆಗಿ ಬೀಳುದರ ನೋಡುದೇ ಚೆಂದ ಅವಕ್ಕೆ.
ಒಂದು ವೇಳೆ ಹಾಂಗೂ ಸಾಯದ್ರೆ, ಅವರ ಟಯರು ಹೊಟ್ಟುಸಿ, ಗಾಡಿ ನಿಲ್ಲುಸಿ, ಅವರ ಹೆರ ಬಲುಗಿ ಹಾಕಿ, ಸಾಲಾಗಿ ನಿಲ್ಲುಸಿ ಕೊಲ್ಲುದು.
ಪಾಪ, ಪೆಟ್ಟು ತಿಂಬೋರ ಕೈಲಿ ಬೆಡಿ-ಗುಂಡು ಇದ್ದೋ? ಇಲ್ಲೆ. ಕಾಸ್ರೋಡಿಂಗೋ ಪುತ್ತೂರಿಂಗೋ ಹೋವುತ್ತರೆ ನಾವಾರೂ ಬೆಡಿ ತೆಕ್ಕೊಳ್ತೋ? ಓಯಿ!
ಶಸ್ತ್ರವೇ ಇಲ್ಲದ್ದ ಪಾಪದವರ ಕೊಲ್ಲುದರ್ಲಿ ಯೇವ ಪುರುಷಾರ್ಥ ಇದ್ದು?

ಅವು ಹೇಳಿದಾಂಗೆ ಕೇಳದ್ರೆ ಕೊಲ್ಲುದು.
ಅವಕ್ಕೆ ಸಮದಾನ ಕಾಣದ್ರೆ ಕೊಲ್ಲುದು.
ಹೊಡಿ ಮಕ್ಕಳ, ವೃದ್ಧರ ಕೊಲ್ಲುದು.
ಎದುರು ಮಾತಾಡಿದ ಗೆಂಡುಮಕ್ಕಳ ಕೊಲ್ಲುದು.
ಪ್ರಾಯಕ್ಕೆ ಬಂದ ಕೂಸುಗಳ, ನೆಡುಪ್ರಾಯದ ಹೆಮ್ಮಕ್ಕಳ ಬಿಟ್ಟು – ಒಳುದೋರ ಕೊಲ್ಲುದು.

ಸಂಗೀತಗಾರರಿಂಗೆ ಬಡಿವದು :-(
ಸಂಗೀತಗಾರರಿಂಗೆ ಬಡಿವದು 🙁

ಅಂಬಗ ಬದ್ಕಿಪ್ಪೋರ ಎಂತ ಮಾಡ್ತವು?
ಯುದ್ಧಲ್ಲಿ ಬೆಡಿಬಿಡ್ತವಲ್ಲದೋ – ಅವರ ಸೇವೆಗಾಗಿ ಇವರ ಬಲುಗಿಂಡು ಹೋಪದು.
ಅವು ಸೈನಿಕರಾಡ!! ಅಶಕ್ತರ ಕೊಂದು ದೊಡ್ಡಜೆನ ಆವುತ್ತೋರು “ಸೈನಿಕರು” ಹೇಂಗಾವುತ್ತವು? ಆ ಸೈನಿಕರಿಂದ ಗೆಂಡ-ಮಕ್ಕೊ-ಅಬ್ಬೆಪ್ಪ° ಹತರಾದರೂ, ಅನಿವಾರ್ಯವಾಗಿ ಅವರ ಸೇವೆ ಮಾಡೆಕ್ಕಾದ ಸಂದರ್ಭ ಅದೆಷ್ಟು ಹೆಣ್ಣುಜೀವಕ್ಕೆ ಬಯಿಂದೋ, ದೇವರಿಂಗೇ ಗೊಂತು!!
~
ಈಗ ಎಂತಾತು?
ಇಡೀ ಇರಾಕಿಲಿ, ಇಡೀ ಸಿರಿಯಾಲ್ಲಿ ಅವರದ್ದೇ ಕಾರ್ಬಾರು. ಅದಕ್ಕೆ ಹೆಸರು “ಐಸಿಸ್” ಹೇದು ಮಡಗಿದ್ದವು. ಇರಾಕು ಮತ್ತೆ ಸಿರಿಯಾದ ಇಸ್ಲಾಮಿಕ್ ದೇಶ – ಹೇದು ಅರ್ಥ.
ಯೇವದೇ ಆಧುನಿಕ ಗಂಧ ಇಲ್ಲದ್ದ, ಸಂವಿಧಾನ ಇಲ್ಲದ್ದ, ಬರೇ ಕುರಾನಿನ ಆಧಾರಲ್ಲಿ ದೇಶವ ಕಟ್ಟುತ್ತೆ ಹೇದರೆ ಅದೆಷ್ಟು ಮನುಷ್ಯ ಸಹಜವಾಗಿಕ್ಕು?

ಈಗಾಣ ಕಾಲದ ಯೇವ ಮನರಂಜನೆಯೂ ಇಲ್ಲದ್ದೆ, ಯೇವ ಹೊಸತನವೂ ಇಲ್ಲದ್ದೆ, ಯೇವ ಸಂಶೋಧನೆಯೂ ಇಲ್ಲದ್ದೆ, ಕೇವಲ ಕುರಾನ್ ಓದುಸ್ಸು ಮಾಂತ್ರ ಹೇದರೆ ಎಷ್ಟು ಜೆನಕ್ಕೆ ಬದ್ಕಲೆಡಿಗು?
ಪಾಪಕಾರ್ಯಂಗೊಕ್ಕೆ ಹರಾಮು – ಹೇದು ಮದಲೇ ನಿಘಂಟು ಮಾಡಿ ಮಡಗಿದ್ದವು.
ಮನೋರಂಜನೆ ಹರಾಮು. ಬುರ್ಖಾ ಹಾಕದ್ದೆ ಮನೆಂದ ಹೆರ ಹೋಪದು ಹರಾಮು, ಹೆಮ್ಮಕ್ಕೊ ಕಾರು ಬಿಡ್ತದು ಹರಾಮು. ಇತ್ಯಾದಿ ಇನ್ನೂ ಅನೇಕ.
ನಿನ್ನೆ ರಂಗಮಾವನಲ್ಲಿ ಪೇಪರಿಲಿ ಕಂಡತ್ತು – ವಾದ್ಯ ನುಡುಸಿದ ಸಂಗತಿ ಗೊಂತಾದ ಐಸಿಸ್ ಉಗ್ರಂಗೊ ಅವರ ಮೂರು ಮಾರ್ಗ ಸೇರ್ತಲ್ಲಿಗೆ ಬಲುಗಿ ತಂದು ೯೦ ಪೆಟ್ಟು ಕೊಟ್ಟಿದವಾಡ! ಪಾಪ.
ಓ ಮನ್ನೆ ಇನ್ನೊಂದರ ೯೦ ಮಾಳಿಗೆಯ ಕಟ್ಟೋಣಂದ, ಕಣ್ಣಿಂಗೆ ಒಸ್ತ್ರಕಟ್ಟಿ ಕೆಳ ಇಡ್ಕಿದ್ದವಾಡ.

ಹೀಂಗೆಲ್ಲ ಮಾಡ್ಳೆ ಇವಕ್ಕೆ ಅಧಿಕಾರ ಕೊಟ್ಟೋರು ಆರು?
ಆಧುನಿಕತೆ ಎಲ್ಲವೂ ಹರಾಮು ಆದರೆ, ಬೆಡಿ ಹಿಡಿವದೂ ಹರಾಮು ಅಲ್ಲದೋ? ಕಾರಿಲಿ ಹೋಪದೂ ಹರಾಮು ಅಲ್ಲದೋ? ಮೊಬೈಲು, ಕಂಪ್ಯೂಟ್ರು, ಇಂಟರ್ನೆಟ್ಟು – ಎಲ್ಲವುದೇ ಹರಾಮುಗಳೇ ಅಲ್ಲದೋ?
ಅದೆಲ್ಲವೂ ಪ್ರವಾದಿ ಕಾಲಲ್ಲಿ ಇಲ್ಲದ್ದದು, ಅದಕ್ಕೆ ಕಂಡು ಗೊಂತಿಲ್ಲದ್ದದು. ಆದರೆ ಅದರ ಜೆನಂಗೊ ಉಪಯೋಗುಸುತ್ತವು, ಅದು ಸರಿಯೋ?
ಜೆನಂಗೊ ಆಧುನಿಕ ಅಪ್ಪಲಾಗದ್ದರೆ, ಅವರ ಹಿಡುದು ಮಡಗಿದ ಐಸಿಸ್ ಅಯೋಗ್ಯಂಗಳೂ ಆಧುನಿಕ ಅಪ್ಪಲಾಗ. ಎಂತ ಹೇಳ್ತಿ?
~
ಸಾವಿರ ಒರಿಶ ಹಿಂದೆ ಸೃಷ್ಟಿ ಆದ ಧರ್ಮಗ್ರಂಥಂಗಳನ್ನೇ ಈಗಳೂ ಆಧಾರ ಮಡಗಿರೆ, ಧರ್ಮವೂ ಬೆಳೆತ್ತಿಲ್ಲೆ, ಅದರ ಅನುಯಾಯಿಗಳೂ ಮುಂದುವರಿತ್ತವಿಲ್ಲೆ. ಹಿಂಧೂ ಧರ್ಮ ಈಗಂಗೂ ಪ್ರಸ್ತುತ ಆಗಿಪ್ಪಲೆ, ಸದಾ ಬೆಳವ ಅದರ ಚೈತನ್ಯವೇ ಕಾರಣ. ಧರ್ಮಲ್ಲಿ ಆ ಸ್ವಾತಂತ್ರ್ಯ ಬೇಕು, ಹಾಂಗಾರೇ ಅಜರಾಮರವಾಗಿ ಇರ್ತಷ್ಟೇ.
~
ಒಟ್ಟಿಲಿ, ಅಯೋಗ್ಯರ ಕೈಲಿ ಅಧಿಕಾರ ಇದ್ದು. ಮಂಗಂಗಳ ಕೈಲಿ ಪೆಟ್ರೋಲು ಮಾಣಿಕ್ಯ ಇದ್ದು. ಅನಾಹುತಕ್ಕೆ ಇನ್ನೆಂತ ಬೇಕು?
ಆದಷ್ಟು ಬೇಗ ಶಾಂತಿಪ್ರಿಯರು ಎಲ್ಲೋರುದೇ ಒಟ್ಟಾಗಿ, ಶಾಂತಿಧರ್ಮದ ಪಕ್ಕಾ ಪ್ರತಿನಿಧಿಗೊ ಹೇಳ್ತ ಈ ದೇಶದ ಸುರ್ಪವ ಸರಿ ಮಾಡದ್ದರೆ, ಇಡೀ ಲೋಕಕ್ಕೆ ಇದರ ಕಂಟಕ ತಪ್ಪಿದ್ದಲ್ಲ.

ಎಂತ ಹೇಳ್ತಿ?
~
ಒಂದೊಪ್ಪ: ಬೆಡಿ ಹಿಡುದು ಅಧಿಕಾರ ನೆಡೆಶುತ್ತದು ಯೋಗ್ಯತೆ ಅಲ್ಲ, ಅಯೋಗ್ಯತೆ. ಪ್ರೀತಿಲಿ ಅಧಿಕಾರ ನೆಡೆಶುತ್ತದೇ ನಿಜವಾದ ಯೋಗ್ಯತೆ.

~*~
ಸೂ: 

ಪಟಂಗ: ಇಂಟರ್ನೆಟ್ಟಿಂದ

ವಾದ್ಯಯಂತ್ರಂಗಳ ಹೊಡಿ ಮಾಡಿದ್ಸು
ವಾದ್ಯಯಂತ್ರಂಗಳ ಹೊಡಿ ಮಾಡಿದ್ಸು
ವಾದ್ಯಯಂತ್ರಂಗ ಹೊಡಿ ಹೊಡಿ!!!!
ವಾದ್ಯಯಂತ್ರಂಗ ಹೊಡಿ ಹೊಡಿ!!!!

3 thoughts on “ಅಯೋಗ್ಯ ಕೂಟ, ಐಸಿಸ್ ಒಕ್ಕೂಟ..

  1. ಹರೇರಾಮ, ಕಾಡಿಲ್ಲಿ ಮನುಷ್ಯರ ಕೊಲ್ಲುತ್ತ ಹುಲಿಗೆ ಇನ್ನಿಲ್ಲದ್ದ ರಕ್ಷಣೆ!. ನಾಡಿಲ್ಲಿದ್ದ ಮನುಷ್ಯರಿಂಗೆ ಅಮೃತ ಕೊಡುವ ಗೋವಿಂಗೆ ರಕ್ಷಣೆ ಇಲ್ಲದ್ದೆ ಅದರ ಕಾಪಾಡುವ ಹೆದರಿಕೆ!

  2. ಕಾಫೀರರ ಕಂಡ್ರೆ ಆಗ..ಆಧುನಿಕತೆ ಆಗ.. ಆದರೆ ಆರ ಬೇಕಾದರೂ ಕೊಲ್ಲುಲೆ ಅಕ್ಕು ಅಪ್ಪೋ? ! ಎಷ್ಟಾದರೂ ಶಾಂತಿಪ್ರಿಯರು ಅಲ್ಲದೋ?!!! ಒಳ್ಳೆ ಲೇಖನ !

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×