Oppanna.com

ಜಾಲು ಕೆರಸುವಗ ನೆಂಪಾದ ಜಾಲಬಾಗಿಲ ಶುದ್ದಿಗೊ..

ಬರದೋರು :   ಒಪ್ಪಣ್ಣ    on   07/12/2012    12 ಒಪ್ಪಂಗೊ

ಶತಮಾನದ ಅಭೂತಪೂರ್ವ ಕಾರ್ಯಕ್ರಮ ಶತಾವಧಾನ ಕಳುದತ್ತು.
ಮೂರೂದಿನ ಹೋಗಿ ನೋಡ್ಳೆ ಅವಕಾಶ ಆಗದ್ಸಕ್ಕೆ ಮಾಷ್ಟ್ರುಮಾವನ ಮನೆಲಿ ಕಂಪ್ಲೀಟ್ರು ಬುಡಲ್ಲಿ ಕೂದು ನೋಡಿದ್ದೂ ಆತು.
ಒಂದು ದಿನ ನಮ್ಮ ಬೈಲಕರೆ ಮದುವೆ ಇದ್ದ ಕಾರಣ ಅಲ್ಲೇ ಅವಧಾನ ಮಾಡಿದ್ದೂ ಆತು. ಮದುವೆ ಮರದಿನ ಸಟ್ಟುಮುಡಿಗೆ ಮಾಣಿಮನೆಗೆ ಹೋದ್ದೂ ಆತು. ಕಾಡೂರು ಬಾವನ ಮನೆಲಿ ಮೈಸೂರುಪಾಕು ತಿಂದದೂ ಆತು.
ಒಂದರಿಯಾಣ ಬೆಶಿ ಕಳುಶಿ ಒಪಾಸು ಮನೆಲೇ ಸ್ವಸ್ಥ ಕೂದುಗೊಂಡು ಒರಕ್ಕು ತೂಗಿದ್ದೂ ಆತು.
ಇನ್ನೆಂತರ?
~
ಹಬ್ಬ ಕಳುದಪ್ಪದ್ದೇ ’ಚೋಲು’ ಬದಲುತ್ತ ಸಂಗತಿ ಗೊಂತಿಪ್ಪದೇ.
ಇಷ್ಟನ್ನಾರ ಅಟ್ಟಲ್ಲಿದ್ದ ಅಡಕ್ಕೆ ಈಗ ’ಚೋಲು’ ಅಡಕ್ಕೆ ಆತು, ಕಳುದೊರಿಶವೇ ಅಟ್ಟಲ್ಲಿದ್ದ ಅಡಕ್ಕೆ “ಡಬ್ಬಲ್ ಚೋಲುದೇ” ಆಗಿಬಿಟ್ಟತ್ತು.
ಇನ್ನು ತೋಟಲ್ಲಿ ಸಿಕ್ಕುತ್ತ ಅಡಕ್ಕೆ “ಹೊಸ ಅಡಕ್ಕೆ” ಆತಿದಾ.
ನಮ್ಮ ಬೈಲಿಲಿಯೂ ಹಾಂಗೇ – ಹೊಸ ಶುದ್ದಿಗೊ ಬಂದಪ್ಪದ್ದೇ – ಪ್ರತಿನಿತ್ಯ ಹಬ್ಬ.
ಹಾಂಗಾಗಿ ಶುದ್ದಿಗಳ ಪ್ರತಿನಿತ್ಯವೂ ಚೋಲು-ಡಬ್ಬಲ್ ಚೋಲು ಹೇದು ಹೇಮಾರ್ಸಿ ಮಡಗುತ್ತು. ಅಪ್ಪೋಲ್ಲದೋ!? ಅದಿರಳಿ.

ಈ ಒರಿಶದ ಅಡಕ್ಕೆಯ ಹೊಸ ಅಡಕ್ಕೆ ಹೇಳಿರೆ ಸಾಕೋ? ಕೊಯಿದು ತಂದು ಒಣಗುಸೆಡದೋ?
ಒಣಗಿದ ಮತ್ತೆ ಅಂಬೆರ್ಪಿನ ಭಾವಯ್ಯಂದ್ರು ಸೊಲುದು ಮಾರೆಡದೋ? ಪುರ್ಸೋತಿನೋರು ಅಟ್ಟಲ್ಲಿ ಹೇಮಾರ್ಸಿ ಮಡಗೆಡದೋ?
ಈಗಂತೂ – ಅಡಕ್ಕೆ ಕೊಯಿವದು ಹೇದರೆ ಭಯಂಕರ ಬಂಙದ ಏರ್ಪಾಡು ಆಗಿ ಹೋತು. ಬತ್ತೆ ಹೇಳಿದ ದಿನ ಬಾರವು; ತಿಂಡಿಕಾಪಿಗೆ ಬೇಶಿ ಮಡಗಿರೆ ಮತ್ತೆ ನಾವೇ ತಿಂದು ಮುಗುಶೇಕಟ್ಟೆ. ಅವ° ಇವ° ಹೇಳಿಲ್ಲೆ, ಜಾಲ ಸುರುವಾಣ ಸುಂದರನೂ ಅಷ್ಟೇ; ಬೈಲ ಕರೆಯ ಬಾಬುದೇ ಅಷ್ಟೆ – ಹೇಳಿದ ದಿನ ಬಾರವು!
ಅಡಕ್ಕೆ ತೆಗವಲೆ ಬಾರದ್ದೆ ಸುಂದರ ಹೀಂಗೂ ಬಂಙ ಬರುಸಿರೆ ಕೊಗ್ಗು ಆಚಾರಿಯ ಕೈಲಿ ಹೇಳಿ ಒಂದು ಏಣಿ ಮಾಡ್ಸೆಕ್ಕಟ್ಟೆಯೋದು ಸುಭಗಣ್ಣ ಆಲೋಚನೆ ಮಾಡಿಗೊಂಡಿದ್ದವು ಒಂದು ಹೊಡೆಲಿ. ಮರ ಹತ್ತುವ ಮಿಶನು ತರುಸಿರೆ ಅಕ್ಕೋದು ನೆಕ್ರಾಜೆ ಅಪ್ಪಚ್ಚಿ ಆಲೋಚನೆಮಾಡ್ತದು ಇನ್ನೊಂದು ಹೊಡೆಲಿ. ಅದೇನೇ ಆಗಲಿ, ಹಣ್ಣಾದ ಅಡಕ್ಕೆಯ ಕೊಯ್ಯದ್ದೆ ಉಪಾಯ ಇಲ್ಲೆ ಮಾಂತ್ರ.
ಕೊಯ್ದ ಅಡಕ್ಕೆಯ ಒಣಗುಸದ್ದೆ ಉಪಾಯ ಇದ್ದೋ? ಅದೂ ಇಲ್ಲೆ. ಒಣಗುಸುತ್ತದು ಎಲ್ಲಿ?
ಜಾಲಿಲಿ!
~

ತರವಾಡುಮನೆ ಜಾಲು – ಕೆರಸಿ ಆತು, ಇನ್ನು ಅಡಕ್ಕೆ ಕೊಯಿಲು ಹರಗುದೇ!

ಈಗ ಜಾಲು ಕೆರಸುವ ಸಮಯ ಇದಾ.
ಮದುವೆ ಬೆಶಿ ಎಲ್ಲ ಕಳುಶಿ ಮನೆಗೆತ್ತಿಯಪ್ಪದ್ದೇ ಜಾಲು ಕೆರಸುವ ಏರ್ಪಾಡು ಸುರು ಆತು.
ಹಾಂಗೆ, ಇದೇ ಸಂದರ್ಭ ನೋಡಿಂಡು ಜಾಲಿನ ಬಗ್ಗೆ, ಜಾಲು ಕೆರಸುತ್ತರ ಬಗ್ಗೆ ರಜಾ ಶುದ್ದಿ ಮಾತಾಡಿರೆ ಎಂತ ಹೇದು ಅನುಸಿತ್ತು.
ಅಕ್ಕಲ್ಲದೋ?
~
ಮನೆ ಎದುರು ಜಾಲಿಪ್ಪದು ಹಳ್ಳಿ ಮನೆಗಳ ಕ್ರಮ. ಎದುರು ಮಾಂತ್ರ ಅಲ್ಲ, ಮನೆ ಸುತ್ತಲೂ ಜಾಲಿಕ್ಕು ಸಾಮಾನ್ಯವಾಗಿ.
ಒಂದು ಆನೆ ಸುತ್ತ ಬಪ್ಪಷ್ಟು ಅಗಲದ ಜಾಲು ಮನೆಸುತ್ತವೂ ಇರೆಕು ಹೇದು ಒಂದು ವಾಡಿಕೆ.
ನೆಲಕ್ಕಂದ ಮನೆ ಕೊಬಳಿಂಗೆ ಎಷ್ಟು ಎತ್ತರ ಇದ್ದೋ – ಅಷ್ಟು ಉದ್ದದ ಜಾಲು ಮನೆಯ ಒಂದೊಡೆಲಿ ಆದರೂ ಇರೇಕು ಹೇದು ಜೋಯಿಶಪ್ಪಚ್ಚಿ ಅಂದೊಂದರಿ ಹೇಳಿದ ನೆಂಪು. ಎಲ್ಲ ಮನೆಗಳಲ್ಲಿ ಅಷ್ಟು ದೊಡ್ಡ ಜಾಲು ಇಕ್ಕು ಹೇಳುಲೆಡಿಯ, ಅತವಾ ಹೆಚ್ಚಿಗೆಯೇ ಇಪ್ಪಲೂ ಸಾಕು. ಜಾಲು ಇಪ್ಪಷ್ಟೇ ಮುಖ್ಯ, ಆ ಜಾಲಿನ ಪೋಚಕಾನ ಮಾಡ್ಸುದೇ.
ಜಾಲಿಂಗೂ ಪೋಚಕಾನ ಇದ್ದೋ? ಅಪ್ಪು; ಮಳೆಗಾಲ ಬೇಸಗೆ – ಒರಿಶಲ್ಲಿ ಕನಿಷ್ಠ ಎರಡು ಸರ್ತಿ ಜಾಲಿನ ಕೆಲಸ ಮಾಡ್ತದು ನವಗೆಲ್ಲ ಗೊಂತಿಪ್ಪದೇ.
~

ಪತ್ತನಾಜೆ ಕಳುದ ಮತ್ತೆ ಮಳೆಗಾಲ ಬಪ್ಪದಿದಾ ಮದಲಿಂಗೆ.
ಮಳೆಗಾಲ ಬಪ್ಪ ಮದಲೇ ಸೌದಿ, ಕೊತ್ತಳಿಂಗೆ ಇತ್ಯಾದಿಗಳ ಏರ್ಪಾಡು ಮಾಡುಸ್ಸು ನವಗರಡಿಗು. ಆ ‘ಮಳೆಗಾಲದ ಅಟ್ಟಣೆಯ’  ಸಮಯಲ್ಲಿ ಬೈಲಿಲಿ ಆ ಶುದ್ದಿಯನ್ನೂ ಮಾತಾಡಿದ್ದು ನೆಂಪಿದ್ದಲ್ಲದೋ? (https://oppanna.com/oppa/malegala-roodi-atta-kottage)
ಮಳೆಗಾಲದ ಅಟ್ಟಣೆಲಿ ಸೌದಿ ಒಯಿಶುದು ಮಾಂತ್ರ ಅಲ್ಲ, ಜಾಲಿಂಗೆ ಕಸವಾಕುದೂ ಒಂದು ಕೆಲಸ!
ಕಸವೋ? ಅಪ್ಪು. ಬಾಕಿದಿನ ಹಾಕಿರೆ ಹೆಮ್ಮಕ್ಕೊ ಬೈಗು; ಆ ದಿನ ಮಾಂತ್ರ ಮಾಪು. ಕಸವುದೇ ಕರುಕುರೆ, ಲೇಸು ತಿಂದ ಕಸವಲ್ಲ ಭಾವಾ; ತೋಟಲ್ಲಿ ಸಿಕ್ಕುತ್ತ ಸೋಗೆ-ಮಡ್ಳಿನ ಕಸವುಗಳ ತಂದು ಮನಾರಕ್ಕೆ ಹರಗಿ ಮಡಗುಸ್ಸು – ಜಾಲಿಡೀಕ.
ಅಂಬಗ ಹೇಂಗೂ ಒಂದರಿಯಾಣ ಅಡಕ್ಕೆ ಎಲ್ಲ ಒಣಗಿ ಜಾಲುಕಾಲಿ ಆಗಿರ್ತಿದಾ, ಹಾಂಗಾಗಿ ಕಾಲಿ ಇದ್ದ ಜಾಲಿಲಿ ಇಡೀ ಸೋಗೆ-ಮಡ್ಳು.

ತೋಟಲ್ಲಿ ಸೋಗೆ ಜಾಸ್ತಿ ಆಯಿದು ಹೇದು ತಂದು ಹಾಕುಸ್ಸಲ್ಲ; ಒಂದು ಕಾರಣ ಇದ್ದು. ಮಳೆಗಾಲ ಸ್ವಾಭಾವಿಕವಾಗಿ ಎಲ್ಲ ದಿಕ್ಕೂ ಜೀವ ಚಿಗುರುವ ಸಂದರ್ಭ. ಜಾಲಿಲಿಯೂ ಸೇರಿ ನಿಂದಿಪ್ಪ ಸಹಸ್ರಾರು ಹುಲ್ಲಿನ ಬಿತ್ತುಗಳಲ್ಲಿಯೂ ಜೀವ ಕೂಡಿ ಸೆಸಿ ಅಕ್ಕು. ಈ ಕಾಟು ಹುಲ್ಲು ಜಾಲಿಡೀ ತುಂಬಿರೆ, ಮಳೆಗಾಲ ಆಗಿ ಹಬ್ಬ ಕಳುದ ಮತ್ತೆ ಅಡಕ್ಕೆ ಹಾಕುಲಪ್ಪಗ ಹುಲ್ಲಿನ ತೆಗೆಸ್ಸೇ ಒಂದು ಕೆಲಸ.
ಅದಕ್ಕೆ, ಮಳೆಗಾಲ ಹಿಡಿವ ಮದಲೇ ಕಸವು ಬಿಕ್ಕಿ ಮಡಗಿರೆ, ಹುಲ್ಲು, ಕಾಟು ಸೆಸಿಗೊ ಪೂರ ಈ ಕಸವಿನ ಮೇಗೆಯೇ ಹುಟ್ಟುತ್ತು, ಚೆಂದಕೆ ಬೆಳೆತ್ತು. ಮಳೆ ಬಿಟ್ಟಮತ್ತೆ ಈ ಕಸವಿನ ಬಾಚಿ ತೆಗದರಾತು. ಕುಂಬು ಸೋಗೆ ಹೊಡಿಗಳ ತೆಗೆಸ್ಸು ಕಾಟುಹುಲ್ಲಿನ ಪೊರ್ಪಿ ತೆಗೆತ್ತಷ್ಟು ಕಷ್ಟದ ಕಾರ್ಯ ಅಲ್ಲ, ಕೊಟ್ಟಿಲಿ ಕೆರಸಿರೆ ಪೂರ ಬತ್ತು ಇದಾ!
ಹಾಂಗೆ, ಮಳೆಗಾಲಂದ ಮದಲು ಹಾಕಿದ ಸೋಗೆ ಮಡ್ಳುಗಳ ಜಾಲಿಂದ ತೆಗದು ಪುನಾ ಮದಲಾಣ ಹಾಂಗೆ ಮಾಡುಸ್ಸೇ ಈಗಾಣ ಕಾಲದ ಕೆಲಸ.
~
ಜಾಲಿನ ಒಂದು ಹೊಡೇಂದ ಸುರು ಮಾಡಿ ಕೊಟ್ಟಿಲಿ ರಜರಜವೇ ಕಸವಿನ ಕೆರಸಿಂಡು ಮನಾರ ಮಾಡುದು.
ಅಲ್ಲಲ್ಲಿ ಒಂದು ಹೆಡಗ್ಗಪ್ಪಷ್ಟು ರಾಶಿ ಕೂಡುದು. ಮತ್ತೆ ಅಕೇರಿಗೆ ಒಟ್ಟಿಂಗೆ ಆ ಕಸವಿನ ಹೊರ್ತದು – ಇದು ಸಾಮಾನ್ಯ ಇಪ್ಪ ಕ್ರಮ. ಹಾಂಗೇ ಆತು ಮೊನ್ನೆಯೂ. ಅಣ್ಣುವಿನ ಮಗ ಸುಕುಮಾರ ಕೆಲಸಕ್ಕೆ ಬಂದಿದ್ದ ಕಾರಣ ಕೆಲಸ ಬೇಗ ಬೇಗ ಸಾಗಿತ್ತು. ಒಂದರಿ ರಾಶಿ ಕೂಡಿಂಡು ಇದ್ದ ಹಾಂಗೇ, ಹೊರ್ಲೂ ಆತು.
ಹೊತ್ತ ಕಸವು ಎಲ್ಲಿಗಿಪ್ಪದು – ಸೂಟುಮಣ್ಣು ಮಾಡ್ಳಿಪ್ಪದು.
ಅದರ ಮೇಗೆ ಹೊಸ ಮಣ್ಣುದೇ ಹಾಕಿ, ಒಂದು ಅಂಗಾರೆ ದಿನ ನೋಡಿ ಕಿಚ್ಚು ಕೊಡುದು!
ಕಸವಿಂದ ತುಂಬಿದ ಜಾಲು ಮತ್ತೆ ಪುನಾ ಮನಾರ ಆತು. ಈ ಕಾರ್ಯಕ್ಕೆ “ಜಾಲು ಕೆರಸುದು” ಹೇಳ್ತವು.
~
ಜಾಲು ಕೆರಸಿ ಅಪ್ಪಗ ನೋಡಿರೆ ಕಳುದೊರಿಶದ ಹಾಂಗೇ ಇಕ್ಕೋ? ಇರ, ರಜ ವಿತ್ಯಾಸ ಇಕ್ಕು.
ಮಳೆಗಾಲಲ್ಲಿ ರಜ ಮಣ್ಣು ಹೋಗಿಕ್ಕು; ಅತವಾ – ಕೆರಸುವಗಳೂ ಹೋಗಿಕ್ಕು.
ಅಂಬಗ ಪುನಾ ಮದಲಾಣ ಹಾಂಗೇ ಮಾಡೆಡದೋ – ಅದಕ್ಕೇ “ಜಾಲು ಗುದ್ದುದು”. ಹೊಳಿವದು ಹೇಳಿಯೂ ಹೇಳ್ತವು.
ಹೊಳಿವಲೆ ಹೊಳಿಮಣೆ, ಗುದ್ದುಲೆ ಮುಟ್ಟಿ – ಎರಡು ನಮುನೆ ಸಲಕ್ಕರಣೆಗೊ ಇರ್ತು ತರವಾಡುಮನೆಲಿ. ಕೆಲಸ ಇಪ್ಪಗ ಮಾಂತ್ರ ಹೆರ ಬಕ್ಕಷ್ಟೆ, ಒಳುದ ದಿನ ಸೌದಿಕೊಟ್ಟಗೆಲಿ ಒರಗಿಂಡಿಕ್ಕು ಅದು.
ಮದಲಿಂಗೆ ಜಾಲು ಗುದ್ದುದು ಹೇದರೆ ಅದುವೇ ಒಂದು ಕಾರ್ಯ. ಪಡಿಗೆಲಿ ರಜ ಹಸಿಮಣ್ಣು ಹಿಡ್ಕೊಂಡು ತಗ್ಗಿದಲ್ಲಿ ಮೆತ್ತಿ, ಉಬ್ಬಿದಲ್ಲಿ ಕೆತ್ತಿ ಜಾಲು ಮನಾರ ಮಾಡ್ತದು ಕೆಲಸ. ಬಟ್ಯಂಗಂತೂ ಎರಡು ಮೂರು ದಿನ ಬೇಕಾಗಿಂಡಿತ್ತು, ತರವಾಡುಮನೆ ಜಾಲು ಪೂರ ಸರಿ ಅಪ್ಪಲೆ.
ಇದಾದಪ್ಪದ್ದೇ ಸಗಣ ಉಡುಗುಸ್ಸು. ಹಟ್ಟಿಂದ ಹೆಡಗೆಲಿ ತಂದ ಸಗಣವ ಕರಡಿ ಹೊಳುದ ಜಾಲಿಂಗೆ ಉಡುಗಿಂಡು ಹೋಪದು. ಮತ್ತೆ ಅದು ಜೆಗಿಲಿಯ ಮುಂದುವರಿಕೆಯಷ್ಟೂ ಮನಾರ ಆವುತ್ತು.
ಅಂತೂ – ಜಾಲು ಸರೀ ಆತು.
~
ಜಾಲುಕೆರಸಿ ಆದ ಮತ್ತೆ ಮನೆಹೆಮ್ಮಕ್ಕಳ ದಿನಚರಿಯೇ ಬದಲುತ್ತು.
ಜಾಲಿಂಗಿಡೀ ಸಗಣ ಉಡುಗಿ ಇನ್ನೂ ಮನಾರ ಮಾಡುಗು. ನಿತ್ಯವೂ ಉಡುಗಿ ರಜವೂ ಕುರೆ ಕಸವು ಎಂತದೂ ಇಲ್ಲದ್ದ ಹಾಂಗೆ ಮಾಡುಗು. ಮನೆ ಜೆಗಿಲಿಯ ಮುಂದುವರುದ ಭಾಗದ ಹಾಂಗೆ ಚೆಂದಕೆ ಮಡಿಕ್ಕೊಂಗು.
ಗಟ್ಟದ ಮೇಗೆ ಅಂತೂ – ರಂಗೋಲಿ, ಬಣ್ಣ ಎಲ್ಲ ಹಾಕಿ ದಿನಾಗುಳೂ ಮದಿಮ್ಮಾಳು ಮಾಡುಗು.
~
ಸಗಣ ಉಡುಗಿದ ಜಾಲಿಲಿ ಮತ್ತೆ ಮಣ್ಣ ಹೊಡಿ ಇಲ್ಲೆ ಇದಾ.
ದೀಪಾವಳಿ ಹಬ್ಬಂದ ಮದಲೇ ಜಾಲು ಕೆರಸಿ ಮಡಗ್ಗು – ಬಲೀಂದ್ರನ ಹಾಕೆಕ್ಕಲ್ಲದೋ?
ಮದಲಿಂಗೆ “ಗೆದ್ದೆ ಕೊಯಿಲು” ಅಪ್ಪನ್ನ ಮದಲೇ ಇಷ್ಟು ಮಾಡಿ ಮಡಗ್ಗು. ಗೆದ್ದೆಂದ ತಂದ ಕೊರಳಿನ (ಕದುರಿನ) ಬಡುದು ಭತ್ತ ಒಣಗುಸೇಕಾರೆ ಜಾಲಿಲಿ ಮಣ್ಣು-ಕಸವಿಪ್ಪಲಾಗ.
ಜಾಲಿಲಿ ಭತ್ತ ಇದ್ದು ಹೇದು ಆದರೆ ಮದಲಿಂಗೆ ಮೆಟ್ಟಿನಜೋಡು ಹಾಕಿಂಡು ಬಾರವು. ಧಾನ್ಯಲಕ್ಷ್ಮಿ ಅಲ್ಲದೋ ಆ ಬತ್ತ.
ಮನೆಯೋರು ಮಾಂತ್ರ ಅಲ್ಲದ್ದೆ – ಆ ಜಾಲಿಲೆ ಆಗಿ ಆರಾರು ಅಪರಿಚಿತರು ಹೋವುತ್ತರೂ – ಅವುದೇ ಮೆಟ್ಟಿನಜೋಡಿನ ಕೈಲಿ ಹಿಡ್ಕೊಂಡು ಜಾಲು ದಾಂಟಿಕ್ಕಿ ಮತ್ತೆ ಪುನಾ ಜೋಡು ಹಾಕಿಂಗು. ಅಪರಿಚಿತರಾದರೂ ಅನಾಗರಿಕರಲ್ಲ ಇದಾ!
ಭತ್ತ ಮದಲಿಂಗಾತು, ಈಗ ಗೆದ್ದೆ ಎಲ್ಲಿದ್ದು ಹೇದು ದುರ್ಬೀನು ಹಾಕಿ ಹುಡ್ಕೇಕಟ್ಟೆ. ಈಗ ಏನಿದ್ದರೂ – ಅಡಕ್ಕೆ ಸುರೂವಾಣ ಕೊಯಿಲು. ಅಡಕ್ಕಗಪ್ಪಗ ತೀರಾ ಭತ್ತ ಒಣಗುಸಲೆ ಮಾಡುವಷ್ಟು ಮನಾರ ಮಾಡೇಕಾದ್ಸಿಲ್ಲೆ.
ಅಲ್ಲದ್ದೇ ಜೆನವೂ ಸಮಗಟ್ಟು ಸಿಕ್ಕುತ್ತವಿಲ್ಲೆ – ಹಾಂಗಾಗಿ ಜಾಲು ಹೊಳಿವದರ ಈಗ ಕಾಂಬಲೇ ಸಿಕ್ಕಪ್ಪೋ!
ಅಪುರೂಪಲ್ಲಿ ಒಂದೊಂದಿಕ್ಕೆ ಇದ್ದೋ ಏನೋ!
ಈಗ ಭತ್ತದ ಬದಲು ಅಡಕ್ಕೆ ಒಣಗ್ಗು. ಅಲ್ಲದ್ದರೆ, ಒಸ್ತ್ರವೋ, ಕಾರೋ – ಬೈಕ್ಕೋ ಎಂತ ಇದ್ದೋ ಅದು ಒಣಗ್ಗು! 🙂
ಕೆಲವು ಮನೆಗಳಲ್ಲಿ ಅಡಕ್ಕೆ ಜಾಲು ಹೇದು ಬೇರೆಯೇ ಇರ್ತು; ಎತ್ತರ- ಬೆಶಿಲ ಮೋರೆಗೆ. ಮನೆ ಎದುರಾಣ ಜಾಲಿನಷ್ಟು ಮನಾರ ಇರ ಅದು. ಜಾಲು ನೋಡಿಯೇ “ಅಡಕ್ಕೆಷ್ಟಕ್ಕು” ಹೇದು ಅಂದಾಜಿ ಮಾಡ್ತೋರು ಇದ್ದವು. ಹೆಚ್ಚು ಅನುಕ್ಕೂಲ ಇಪ್ಪೋರ ಜಾಲು ದೊಡ್ಡ ಇಕ್ಕು ಹೇಳ್ತದು ವಾಡಿಕೆ.
~
ಇಡೀ ಜಾಲು ಸರಿಮಾಡದ್ದರೂ – ಮನೆ ಮೆಟ್ಟುಕಲ್ಲಿನ ಬುಡಲ್ಲಿ ರಜ್ಜ ಜಾಗೆ ಸರಿ ಮಾಡುಗು ಈಗಳೂ.
ಮೆಟ್ಟು ಕಲ್ಲಿಂದ ತೊಳಶಿಕಟ್ಟೆ ಬುಡ ಒರೆಂಗೆ ರಜಾ ಜಾಗೆ ಆದರೂ – ಮನಾರ ಮಾಡಿ ಮಡಿಕ್ಕೊಂಗು. ತಿತಿ ಕೈನ್ನೀರಿಂಗೆ ಪಾದ ತೊಳೆಶಲೆ, ಭಜನೆ – ಬಲೀಂದ್ರನ ನಿಲ್ಲುಸಲೆ – ಇತ್ಯಾದಿಗೊಕ್ಕೆ ಜಾಲಬಾಗಿಲು ಬೇಕಿದಾ.
ಹಾಂ – ಮೆಟ್ಟುಕಲ್ಲಿನ ಹತ್ತರಾಣ ಜಾಗೆಗೆ “ಜಾಲಬಾಗಿಲು” ಹೇಳಿಯೇ ಹೇಳ್ತದು ಮದಲಿಂಗೆ.
~
ಹೀಂಗೆ ಸುರು ಆದ ಜಾಲಿನ ಕತೆ ಮತ್ತಾಣ ಬೇಸಗೆ ಅಕೇರಿ ಒರೆಂಗೂ ಹಲವು ಕಾರ್ಯಕ್ಕೆ ಬಳಕ್ಕೆ ಆವುತ್ತು.
ವಾಸದ ಮನೆ ಮತ್ತೆ ಸಮಾಜದ ಸಂಪರ್ಕ ಸೇತು ಈ ಜಾಲೇ ಇದಾ. ಯೇವ ಅಪರಿಚಿತರು, ಮನೆ ಒಳಂಗೆ ಬಾರದ್ದೋರ ಹತ್ತರೆ ಮದಲಿಂಗೆ ಜಾಲಿಲೇ ಮಾತಾಡುಸುಗಷ್ಟೆ. ಕುಂಞಿ ಮಕ್ಕೊ ನೆಡವಲೆ ಸುರುಮಾಡಿದ ಮತ್ತೆ ಓಡ್ಳೆ ಸುರುಮಾಡ್ತವಲ್ಲದೋ –ಹಾಂಗೆ ಸುರೂವಾಣ ಓಟಂಗೊ ಈ ಜಾಲಿಲೇ ಅಪ್ಪದು. ನಾಕು ಸರ್ತಿ ಬಿದ್ದು, ಎರಡು ಸರ್ತಿ ಗರ್ಪುಸಿಗೊಂಡು – ಎಲ್ಲವೂ ಮನೆಜಾಲಿಲೇ.
ಕಂಜಿಗಳೂ ಹಂಗೇ – ಪೆರ್ಚಿಗಟ್ಟಿ ಓಡೇಕಾರೆ ಜಾಲೇ ಆಯೆಕ್ಕಟ್ಟೆ. ನಾಯಿಗೊಕ್ಕೆ ಇದುವೇ ಸಾಮ್ರಾಜ್ಯ ಅಲ್ಲದೋ?
~
ಒಳ್ಳೆ ಬೇಸಗೆ ಬಂದ ಮತ್ತೆ ಹಲಸಿನ ಕಾಯಿಯ ಕಾಲ ಸುರು ಆತಿದಾ. ಆ ಸಮಯಲ್ಲಿ ಹಪ್ಪಳ ಮಾಡದ್ದೆ ಕಳೀಯ. ಹಪ್ಪಳ ಒಣಗುಸೇಕಾರೆ ಇದೇ ಜಾಲೇ ಆಯೇಕಟ್ಟೆ. ಹಸೆ ಮೇಲೆ ಹಸ್ಸಿ ಚೆಂದಕೆ ಹತ್ತು ಬೆಶಿಲು ಕೊಟ್ರೆ ಹಪ್ಪಳ ತಯಾರು.
ತೆಂಙಿನ ಕಾಯಿ ಒಡದು ಗೋಟುಕಾಯಿ-ಕೊಪ್ಪರ ಒಣಗುಸುದೂ ಇಲ್ಲಿಯೇ. ಕೊಪ್ಪರ ಕಾವ ನೆಪಲ್ಲಿ ತರವಾಡುಮನೆ ದಾಸುವಿಂಗೆ ಆ ಹದ್ನೈದು ದಿನ ಹಬ್ಬ! ಕಳ್ಳ. ರಂಗಮಾವಂಗೆ ಗೊಂತೇ ಇಲ್ಲೆ ಹೇದು ಗ್ರೇಶಿಂಡಿದ್ದು ಅದು. ರಂಗಮಾವಂಗೆ ಗೊಂತಿದ್ದು; ಕಾಕೆ ತಿಂಬ ಬದಲು ದಾಸು ತಿನ್ನಲಿ ಹೇದು ಸುಮ್ಮನೆ ಕೂದ್ದು ಅಷ್ಟೆ! 🙂
ಅದಿರಳಿ.
~
ಎಡಕ್ಕಿಲಿ ಮನೆಲಿ ಜೆಂಬ್ರ ಬಂದರೆ ಇದೇ ಜಾಲೇ ಆಯೆಕ್ಕಟ್ಟೆ ಇದಾ.
ಒಂದು ಸಣ್ಣ ಚೆಪ್ಪರ ಹಾಕಿತ್ತು, ಒಂದು ಮರೆ ಕಟ್ಟಿತ್ತು. ಊಟದ ಹಂತಿ ಜಾಲಿಲಿಯೇ. ಮರದಿನ ಅಲ್ಲಿ ಕೊಟ್ರೂ ಬೇಡ; ಆ ದಿನ ಜಾಲಿಲಿ ಉಂಬಲೂ ಸಂಗತಿ ಅಲ್ಲ ಇದಾ!
ಚೆಪ್ಪರ ಹೇಳುವಗ ನೆಂಪಾತು, ಜೆಂಬ್ರ ಇಲ್ಲದ್ದರೂ ಒಳ್ಳೆ ಬೇಸಗೆಲಿ ಸಣ್ಣ ಚೆಪ್ಪರ ಹಾಕಿ ಜಾಲಿಲೇ ಮನುಗ್ಗಡ ಮದಲಿಂಗೆ. ಮನೆ ಒಳ ಸೆಕೆ ಹೇಳಿಗೊಂಡು.  ಚೆಪ್ಪರ ಎಂತಕೆ – ಆಕಾಶ ನೋಡಿಂಡು ಮನುಗುಲಾಗ ಹೇದು ಕ್ರಮವೇ ಇಲ್ಲೆಯೋ – ಅದಕ್ಕೆ ಒಂದು ನೆಪಮಾತ್ರದ ಚೆಪ್ಪರ. ತಂಪು ಗಾಳಿ ಬರೆಕಾದ್ದು ಮುಖ್ಯ. ಈಗ “ಕೋಟ್ಯಧಿಪತಿಗೊ” ಹೇಳಿ ಗ್ರೇಶಿಂಡ ಕಾರಣ ಭದ್ರತೆಯ ಕಾರಣಂದಾಗಿ ಈ ಸಾಹಸ ಕೆಲವುಜೆನ ಮಾಡ್ತವಿಲ್ಲೆ!
~
ಅಂತೂ – ಒಂದರಿಯಾಣ ಬೇಸಗೆ ಬೆಶಿಲು ಎಲ್ಲ ಮುಗುದ ಮತ್ತೆ ಎಂತರ?
ಪುನಾ ಮಳೆಗಾಲ. ಕಾಲಚಕ್ರ ಹೇದರೆ ಇದುವೇ ಅಲ್ಲದೋ?
ಹಾಂಗೆ, ಮತ್ತಾಣ ಮಳೆಗಾಲಕ್ಕಪ್ಪಗ ಪುನಾ ಕಸವು ಹಾಕಿ ಜಾಲಿನ ಮಣ್ಣಿನ ಒಳಿಶಿಗೊಂಬದು.
ಅಂತೇ ಕಸವು ಬಿಕ್ಕಿ ಬೋಚಬಾವನ ಹಾಂಗೆ ಆಗವು, ಬದಲಾಗಿ ರಜ ಸೂಟುಮಣ್ಣನ್ನೂ ಹಾಕಿ, ಉಪಾಯಲ್ಲಿ ಸಾಲು ಮಾಡುಗು. ಬೆಂಡೆ ಬದನೆ ಚೆಕ್ಕರ್ಪೆ ಅಳತ್ತೊಂಡೆಯ ಹಾಂಗಿರ್ತದು ಜಾಲಿಲೇ ಮಾಡುಗು. ಕೆಲವು ಮನೆಗಳಲ್ಲಿ ಉದ್ದು, ಹಸರು ಇತ್ಯಾದಿ ಧಾನ್ಯಂಗಳನ್ನೂ ಮಾಡಿಂಗು.
~
ಚೂರಿಬೈಲು ದೀಪಕ್ಕನಲ್ಲಿ ಜಾಲಿಂಗೆ ಗೋಡೆ ಇಲ್ಲೆ – ಹೂಗಿನ ಸೆಸಿಗಳೇ ಗೋಡೆ.
ಒರಿಶ ಹೋದಾಂಗೆ ಈ ಹೂಗಿನ ಸೆಸಿ ಸಾಲುಗೊ ಒಳಂತಾಗಿ ಬಂದು ಬಂದು ಈಗ ಜಾಲು ತುಂಬ ಸಣ್ಣ ಆಯಿದಾಡ. ಕೊಯಿಲಿನ ಅಡಕ್ಕೆ ಹಾಕಲೇ ಜಾಗೆ ಇಲ್ಲೆ ಹೇದು ಡಾಗುಟ್ರುಬಾವ° ಒಂದೊಂದರಿ ತಲೆಬೆಶಿ ಮಾಡಿಗೊಳ್ತವು ಪಾಪ!
~
ತರವಾಡು ಮನೆಲಿಯೂ ಮನ್ನೆ ಹೀಂಗೇ ಜಾಲು ಕೆರಸಿದವು. ದಾಸು ನಾಯಿಗೆ ಕುಶಿಯೋ ಕುಶಿ – ಅದರ ಸಾಮ್ರಾಜ್ಯ ದೊಡ್ಡ ಆತು ಹೇದು. ಮದಲು ಈ ಕಸವಿಲೆ ಹೋಪಲೆ ಅದಕ್ಕೆ ಮನಸ್ಸೇ ಕೇಳಿಗೊಂಡಿತ್ತಿಲ್ಲೆ – ಹೋಯೇಕನ್ನೇ ಹೇದು ಹೋಗಿಂಡಿದ್ದದು. ಈಗ ಆರಾಮಲ್ಲಿ ನೆಡಕ್ಕೊಂಡು ಹೋಗಿ ಎಲ್ಲಿ ಬೇಕಾರೂ ಮನಿಕ್ಕೊಂಬಲಕ್ಕಿದಾ!
ತರವಾಡು ಮನೆಲಿ ಮಾಂತ್ರ ಅಲ್ಲ, ಒಪ್ಪಣ್ಣನ ಮನೆಲಿ ಮಾಂತ್ರ ಅಲ್ಲ – ಹಳ್ಳಿಯ ಎಲ್ಲ ಮನೆಗಳಲ್ಲಿಯೂ ಈಗ ಜಾಲು ಕೆರಸಿ ಮನಾರ ಮಾಡ್ತ ಕಾಲ. ಮಳೆಗಾಲದ ಕಸವಿನ, ಮುಗುದ ತರಕಾರಿ ಬಳ್ಳಿಗಳ ಎಲ್ಲ ತೆಗದು ಮತ್ತೆ ಮನೆ ಎದುರಾಣ ಜಾಲಿನ ಉಪಯೋಗಕ್ಕೆ ಮಡಿಕ್ಕೊಂಬದು ಸಾಮಾನ್ಯ ದೃಶ್ಯ.
~
ಈಗಾಣ ಕಾಲಲ್ಲಿ ಅಂತೂ – ಜಾಲುಗಳೇ ಇಲ್ಲೆ.
ಪೇಟೆ ಮನೆಗಳಲ್ಲಿ ಮನೆಯ ಹೊಸ್ತಿಲು ದಾಂಟಿರೆ ಮಾರ್ಗವೇ! ಜಾಲು ಹೇದರೆ ಜಾಗೆ ದೆಂಡ ಹೇದು ಗ್ರೇಶಿದ ಕಾರಣವೇ ಹೀಂಗಾದಿಕ್ಕೋ? ಅಲ್ಲ ಜಾಗೆಯ ಅಭಾವಂದಲೇ ಹೀಂಗಾದಿಕ್ಕೋ ಹೇದು ಅಜ್ಜಕಾನಭಾವಂಗೆ ತಲಗೇ ಹೋವುತ್ತಿಲ್ಲೆ.
ಅದೆಲ್ಲ ಇರಳಿ.
~
ನಿಂಗಳಲ್ಲಿ ಜಾಲು ಕೆರಸಿ ಆತೋ ಭಾವಾ?
~
ಒಂದೊಪ್ಪ: ಮನೆ – ಜಾಲು ದೊಡ್ಡ, ಮನಾರ ಇದ್ದರೆ ಸಾಕೋ; ಮನಸ್ಸೂ ಹಾಂಗೇ ಇರೇಕು.

12 thoughts on “ಜಾಲು ಕೆರಸುವಗ ನೆಂಪಾದ ಜಾಲಬಾಗಿಲ ಶುದ್ದಿಗೊ..

  1. ಒಪ್ಪಣ್ಣಾ, ಹರೇರಾಮ, ಮದಲಾಣವು ಕೂಸಿನ ಕೊಡ್ತ ಮನಗೆ ಮಹತ್ವ ಕೊ ಡುವ ಬದಲು ಅವರ ತೋಟಕ್ಕೂ ಜಾಲಿಂಗೂ ಕೊಡುಗಾಡ ಜಾಲಿನ ಪ್ರಾಧಾನ್ಯತೆ ಹಾಂಗಿದ್ದತ್ತದ ಈ ಲೇಖನಕ್ಕೊಂದು ಒಪ್ಪ

  2. ಒಪ್ಪಣ್ಣೋ..,
    ಮನೆಜೆಗಿಲಿಲಿಯೇ ಕಾಲುನೀಡಿ ಕೂದು ಜಾಲುಕೆರಸುವದರ ನೋಡಿದ ಹಾಂಗೇ ಆತು ನೀನು ಶುದ್ದಿ ಹೇಳಿದ್ದದು. ಯೇವತ್ರಾಣ ಹಾಂಗೇ ಸಣ್ಣ ಸಣ್ಣ ವಿಷಯಂಗಳ ವಿಸ್ತಾರವಾಗಿ ತುಂಬಿಗೊಂಡು ತುಂಬಾ ಲಾಯ್ಕ ಆಯಿದು.
    ನಮ್ಮಲ್ಲಿ ಮನೆಗೆ, ಮನೆ ಹೊಸ್ತಿಲಿಂಗೆ ಎಷ್ಟು ಪ್ರಾಮುಖ್ಯತೆ ಇದ್ದೋ ಅಷ್ಟೇ ಪ್ರಾಮುಖ್ಯತೆಯ ಮನೆಜಾಲಿಂಗೂ ಕೊಟ್ಟಿದವು ನಮ್ಮ ಹೆರಿಯೋರು. ಮನೆಯ ಎದುರು ದೊಡ್ಡ ಜಾಲು ಇದ್ದರೆ ಆ ಮನಗೆ ಒಳ್ಳೆ ಕಳೆ ಬತ್ತು.
    ಒಪ್ಪಣ್ಣ,
    ಮಳೆಗಾಲ ಕಳುದು ಜಾಲು ಕೆರಸಿ ಚೆಂದ ಮಾಡಿ, ಅಡಕ್ಕೆ, ಬತ್ತ ಕೊಯ್ಲುಗಳ ತಂದು ಹಾಕಿ, ಒಣಗಿಸಿ ನಮ್ಮ ಕಣಜ ತುಂಬುಸುವ ಹಾಂಗೇಯೇ, ಕಾಲಕಾಲಕ್ಕೆ ನೆಡವ ಹೋಮ, ಪೂಜೆ, ಉಪ್ನಾನ, ಮದುವೆ ಇತ್ಯಾದಿ ಮನೆಯ ಸಂಭ್ರಮಕ್ಕೂ ಜಾಲೇ ಆಯೆಕ್ಕು. ನಮ್ಮ ಮನೆಯ ಎಲ್ಲಾ ಕೊಶಿಯ, ಬೇಜಾರದ ಎಲ್ಲಾ ಸಂಗತಿಗೊಕ್ಕುದೇ ಮನೆಜಾಲೇ ಸಾಕ್ಷಿಯಾಗಿರ್ತು. ಒಂದು ರೀತಿಲಿ, ನಾವು ಜಾಲಿಲಿ ಒಂದು ಕ್ಷಣ ನಿಂದು ಆಲೋಚನೆ ಮಾಡಿದರೆ ಹಲವು ವಿಚಾರಂಗ ನಮ್ಮ ಕಣ್ಣೆದುರು ಬತ್ತು ಅಲ್ಲದಾ?

    ಒಪ್ಪಣ್ಣ,
    [ಅಣ್ಣುವಿನ ಮಗ ಸುಕುಮಾರ ಕೆಲಸಕ್ಕೆ ಬಂದಿದ್ದ ಕಾರಣ ಕೆಲಸ ಬೇಗ ಬೇಗ ಸಾಗಿತ್ತು.]

    ಅಣ್ಣುವಿಂಗೆ ಉಶಾರಿಲ್ಲೆ ಹೇಳಿ ನಾಕು ದಿನ ರಜೆ ಮಾಡಿ, ‘ಎಲ್ಲೆ ಬರ್ಪೆ’ ಹೇಳಿದ ಜೆನ ನಾಕು ದಿನ ಕಳುದೇ ಬಂದದು ಎಂತಕ್ಕೆ ಹೇಳಿ ಈಗ ಅಂದಾಜು ಆತಿದಾ!!! ಅಡಕ್ಕೆ ಕೊಯ್ಲಿಂಗೆ ಅಪ್ಪಗ ಹೇಂಗಾರು ಬತ್ತನ್ನೆ! ಅಂಬಗ ವಿಚಾರ್ಸುತ್ತೆ!! 😉

    ಒಪ್ಪಣ್ಣೋ,
    [ಮನೆ – ಜಾಲು ದೊಡ್ಡ, ಮನಾರ ಇದ್ದರೆ ಸಾಕೋ; ಮನಸ್ಸೂ ಹಾಂಗೇ ಇರೇಕು.]

    ಒಂದೊಪ್ಪಲ್ಲಿ ನೀನು ಹೇಳಿದ್ದದು ಮುತ್ತಿನ ಹಾಂಗಿದ್ದ ಮಾತು!
    ಮನೆ, ಜಾಲು ಎಷ್ಟು ದೊಡ್ಡ ಇದ್ದರೂ…, ಜಾಲು ತುಂಬಾ ಬೆಳೆಗ ಇದ್ದರೂ.., ಮನೆಯೂ, ಜಾಲು ಮನಾರ ಮಡಿಕ್ಕೊಂಡು ಇದ್ದರೂ… ಮನಸ್ಸು ಸರಿ ಇಲ್ಲದ್ದರೆ ಎಲ್ಲವೂ ಶೂನ್ಯವೇ!!
    ಈಗಾಣ ಕಾಲಲ್ಲಿ ಮನೆ ದೊಡ್ಡ ಆವುತ್ತಾ ಇದ್ದು, ಜಾಲು ಸಣ್ಣ ಆವುತ್ತಾ ಇದ್ದು.
    ನಮ್ಮ ಬೈಲಿನ ಎಲ್ಲಾ ಮನೆಲಿಯೂ ಮನೆ, ಮನಸ್ಸು, ಜಾಲು, ಬೆಳೆ ಎಲ್ಲವೂ ದೊಡ್ಡದೇ ಆಗಿರಲಿ..
    ಎಲ್ಲವೂ ಬೆಳದು ವಿಸ್ತರಿಸಲಿ…
    ಹರೇರಾಮ.

  3. ಈಗ ಹೊಳಿಮಣೆ,ಮುಟ್ಟಿ ಕಾ೦ಬಲೆ ಸಿಕ್ಕೊದೇ ಅಪ್ರೂಪ.ಅದರ ಹಿಡಿವಲೆ ಜೆನ ಸಿಕ್ಕೊದು ಇನ್ನೂ ಅಪ್ರೂಪ.
    ಹಳೆ ನೆನಪುಗಳ ಮತ್ತೆ ತ೦ದ ಕೊಶೀ ಶುದ್ದಿ.
    ಧನ್ಯವಾದ ಒಪ್ಪಣ್ಣಾ.

  4. [ಈಗ ಭತ್ತದ ಬದಲು ಅಡಕ್ಕೆ ಒಣಗ್ಗು. ಅಲ್ಲದ್ದರೆ, ಒಸ್ತ್ರವೋ, ಕಾರೋ – ಬೈಕ್ಕೋ ಎಂತ ಇದ್ದೋ ಅದು ಒಣಗ್ಗು!
    ಕಾಕೆ ತಿಂಬ ಬದಲು ದಾಸು ತಿನ್ನಲಿ ಹೇದು ಸುಮ್ಮನೆ ಕೂದ್ದು ಅಷ್ಟೆ!
    ದಾಸು ನಾಯಿಗೆ ಕುಶಿಯೋ ಕುಶಿ – ಅದರ ಸಾಮ್ರಾಜ್ಯ ದೊಡ್ಡ ಆತು ಹೇದು.]- ಯತಾರ್ಥವೂ ತಿಳಿ ಹಾಸ್ಯವೂ ಸೇರಿಗೊಂಡು ಜಾಲು ಕೆರಸುತ್ತ ಶುದ್ದಿ ಲಾಯಿಕ ಆಯಿದು.
    [ಹೆಚ್ಚು ಅನುಕ್ಕೂಲ ಇಪ್ಪೋರ ಜಾಲು ದೊಡ್ಡ ಇಕ್ಕು ಹೇಳ್ತದು ವಾಡಿಕೆ]- ಅಡಕ್ಕೆ ಎಷ್ಟು ಖಂಡಿ ಆವ್ತು ಹೇಳ್ತ ಲೆಕ್ಕಲ್ಲಿ ಒಬ್ಬಂಗೆ ಕೊಡೆಕ್ಕಾದ ಮರ್ಯಾದೆ ನಿಘಂಟು ಮಾಡುವವೂ ಇತ್ತಿದ್ದವು.

  5. ಶುದ್ದಿ ಬರೆತ್ತದರಲ್ಲಿ ಒಪ್ಪಣ್ಣ೦ಗೆ ಒಪ್ಪಣ್ಣನೇ ಸಾಟಿ ಹೇಳಿ ಪ್ರೂವ್ ಮಾಡಿದ ಇನ್ನೊ೦ದು ಶುದ್ದಿ.. ಒಪ್ಪ೦ಗೊ ಒಪ್ಪಣ್ಣಾ..

  6. ಜಾಲು ಕೆರಸುವ ವಿಷಯ ಮಾತಾಡುವಗ ನಮ್ಮ ನೆನೆಪು ಹಿಂದಾಣ ಕಾಲಕ್ಕೆ ಹೋವುತ್ತು. ಆ ನೆನಪುಗಳೇ ಭಾಳ ಖುಷಿ ಕೊಡ್ತು. ಎಂಗ ಸಣ್ಣಾದಿಪ್ಪಗ ಮಳೆಕಾಲಕ್ಕೆ ಮೊದಲು ಜಾಲಿಂಗೆ ಕಸವು ಹಾಕುದು, ಜಾಲಿಂಗೆ ಪಾಪು ಹಾಕುದು, ಮನೆಯ ಜೆಗಿಲಿಯ ಕರೆಂಗೆ ಮಡಲಿನ ತಟ್ಟಿ ಕಟ್ಟುದು ಹೀಂಗೆ ಹಲವಾರು ಕೆಲಸಂಗೋ. ಈ ತಟ್ಟಿಕಟ್ಟೆಕ್ಕಾರೆ ಮೊಡದ ಮಡಲು ಬೇಕಲ್ಲದೋ. ಅಜ್ಜಿಗೆ ಜನವರಿಂದಲೇ ಅದೇ ತಲೆಬೆಶಿ ಸುರುಆವುತ್ತು. ತಟ್ತಿಗೆ ಮಡಲು ಆಯೆಕ್ಕು, ಮಡಲು ಆಯೆಕ್ಕು ಹೇಳಿ. ಮಳೆಕಾಲಲ್ಲಿ ಜಾಲು ಜಾರ್ತದಕ್ಕೆ ಪಾಪು ಹಾಕುತ್ತದು ( ಇದರಲ್ಲಿ ಎರಡು ಉದ್ದೇಶ ಇರ್ತು, ಒಂದು ಮನಷ್ಯರು ನಡವಗ ಜಾರಿ ಬೀಳುಲೆ ಆಗ ಹೇಳಿ ಮತ್ತೆ ಮಳೆಕಾಲದ ಜಾಲಿನ ಮಣ್ಣು ಮನೆ ಒಳಬತ್ತು ಇದಾ. ಈ ಪಾಪಿಲಿ ಬಂದರೆ ಮಣ್ಣು ಒಳ ಬತ್ತಿಲ್ಲೆ) ಕಸವು ಹಾಕುತ್ತದರಲ್ಲಿಯೂ ಎರಡು ಉದ್ದೇಶ ಒಂದು ಒಪ್ಪಣ್ಣ ಹೇಳಿದ ಹಾಂಗೆ ಹುಲ್ಲು ತೆಗವಲೆ ಸುಲಭ ಅವುತ್ತು, ಇನ್ನೊಓದು ಕಸವಿನ ಮೇಲೆ ಜಾಸ್ತಿ ಹುಲ್ಲು ಬತ್ತಿಲ್ಲೆ. ಹಾಂಗೆಯೇ ಪರಿಸರದ ಕಾಳಜಿಯೂ ಇದ್ದು. ಕಸವು ಹಾಕಿದರೆ ಜಾಲಿನ ಮಣ್ಣು ಮಳೆಗೆ ಕೊರದು ಹೋವುತ್ತಿಲ್ಲೆ. ಹಾಂಗೆಯೇ ಜಾಲು ಕೆರಸುವ ವಿಷಯ ಬಪ್ಪಗ ಜಾಲು ಸರಿಮಾಡುವ ಸಲಕರಣೆಗ ಆದ ಮುಟ್ಟಿ, ಹೊಳಿಮಣೆಗಳದ್ದೂ ನೆನಪ್ಪು ಆವುತ್ತು.
    ಭಾಳ ಲಾಯಕ್ಕದ ವಿಷಯ, ನೆಂಪು ಮಾಡಿ ಕೊಟ್ಟದಕ್ಕೆ ಧನ್ಯವಾದಂಗೋ ಒಪ್ಪಣ್ಣಾಃ

  7. ಶುಧ್ಧಿ ಪೂರ್ತಿ ಓದುವಗ ಸಣ್ಣ ಇಪ್ಪಗ ‘ಹರಿಯೊಲ್ಮೆ’ ಲಿ ಅಜ್ಜ ನಿಂದು ಮಾಡಿಸಿಗೊಂಡಿದ್ದ ಕೆಲ್ಸಂಗೊ ಎಲ್ಲ ಕಣ್ಣಿಂಗೆ ಕಟ್ಟಿತ್ತು.
    ಸಗಣ ಉಡುಗುವ ದಿನ ಎಂಗೊ ಮಕ್ಕೊ ಎಲ್ಲಾ ಭಾರೀ ಖುಶಿಲಿ ನೋಡಿಯೊಂಡಿದ್ದದೆಲ್ಲ ನೆಂಪಾತು.
    ಮೊನ್ನೆ ಮನೆಗೆ (ಸಂಕಹಿತ್ಲು) ಫೋನ್ ಮಾಡಿಪ್ಪಗ ಅಲ್ಲಿದೆ ಜಾಲು ಒತ್ತರೆ ಕೆಲಸ ಅವ್ತಾ ಇಪ್ಪದರ ಹೇಳಿದವು.
    ತುಂಬಾ ಲಾಯಿಕದ ಶುಧ್ಧಿ ಒಪ್ಪಣ್ಣಾ…

  8. ಜಾಲು ಕೆರಸುದು ಕಣ್ಣಿಂಗೆ ಕಾಂಬ ಹಾಂಗೆ ಬರದ್ದೆ ಒಪ್ಪಣ್ಣೋ..ಈಗೆಲ್ಲಿ ಆಕಾಲದ ಮರ್ಜ್ಜಿ..ಈಗ ಬರೀ ನೆಂಪು ಮಾಂತ್ರ..ಈಗ ಜಾಲು ಕೆರಸುವ ಕ್ರಮ ಎಲ್ಲಿಗೆ ಎತ್ತಿದ್ದು ಹೇಳಿದರೆ ಮಳೆ ಬಿಟ್ಟ ಕೂಡಲೆ ಯಾವುದೋ ಒಂದು ವಿಶ ಮದ್ದು ಇದ್ದು ಅದರ ಜಾಲಿಂಗೆ ಒಂದರಿ ಬಿಟ್ಟರೆ ಆತು ಹುಲ್ಲು ,ಕಾಟು ಸೆಸಿಗ ಎಲ್ಲಾ ಒಂದರಿಯೆ ಪಡಿಚ್ಹ..ರಜ್ಜ ದಿನ ಕಳುದು ಒಂದರಿ ಉಡಿಗಿದರೆ ಅಡಕ್ಕೆ ಜಾಲು ತಯಾರು..

  9. ಜಾಲು ಕೆರಸುವ ರಸವತ್ತಾದ ಶುದ್ದಿ ಓದಿ ತುಂಬಾ ಕೊಶಿ ಆತು. ಮತ್ತೊಂದರಿ ಬೊಳುಂಬಿನ ಜಾಲು ನೆಂಪಾತು. ಚೆನ್ನೈ ಭಾವಯ್ಯ ಶುದ್ದಿಂದ ಹೆರ್ಕಿ ತೋರುಸಿದ ವಾಕ್ಯಂಗೊ ಎನಗೂ ಕೊಶಿ ಕೊಟ್ಟತ್ತು. ಇದರ ಒಟ್ಟಿಂಗೆ ಇನ್ನೊಂದು ವಿಚಾರವು ನೆಂಪಾತು. ಜಾಲಿಂಗೆ ಕಸವು ಹೊದಶಿ, ಮನೆ ಮಾಡಿಂದ ನೀರು ಬೀಳ್ತ ಜಾಗಗೆ, (ಹನಿಕ್ಕಾಲ ಕರೆ) ಅಡಕ್ಕೆ ಮರದ ಸಳಕ್ಕೆಯ ಉದ್ದಕೆ ಹಾಸಿ, ಅದರ ಎರಡು ಕಡೆಂಗುದೆ “ಪೂಳು” ಬಡಿವಲಿದ್ದು. ಈ ಸಂಕಲ್ಲೇ ಹೋದರೆ, ಕಾಲಿಂಗೆ ಕಸವು ತಾಗಲಿಲ್ಲೆ. ಮಳೆಗಾಲಲ್ಲಿ ಜಾರುತ್ತಕ್ಕೂ ಒಳ್ಳೆದಾವುತ್ತು. ಮಕ್ಕೊಗೆ . . . .

    ಪೇಟೆಲಿ ಅಡಕ್ಕೆ ಜಾಲಿನ ಹಾಂಗಿಪ್ಪ ಜಾಲು ಮಾಡೆಕು ಹೇಳುವ ಆಸೆ ಮನಸ್ಸಿಲ್ಲಿ ಇದ್ದು. ಅದಕ್ಕೆ ಅಷ್ಟೊಂದು ಪೈಸೆ ಸೊರುಗಲೆ ಆರತ್ರೆ ಇದ್ದು ಭಾವಯ್ಯ. ಊರಿಲ್ಲಿಪ್ಪ ಒಕ್ಕಲಿನ ಜಾಲೇ, ನಮ್ಮ ಪೇಟೆಯ ಜಾಲಿನ ನಾಲ್ಕು ಪಾಲು ಇದ್ದು. ಎಂತೇ ಇರಳಿ.
    ಒಪ್ಪಣ್ಣನ ಶುದ್ದಿಯ ಕಡೇಣ ಒಪ್ಪವುದೆ ಲಾಯಕ ಆಯಿದು. ಒಪ್ಪಣ್ಣಂಗೆ ಧನ್ಯವಾದಂಗೊ.

  10. ಜಾಲು ಕೆತ್ತುದು,ಹೊಳಿವದು[ಬೂದಿ ಹಾಕಿ ಹೊಳಿದರೆ ಲಾಯ್ಕ ಆವುತ್ತು] ನೆಂಪಾತು.ಇದೇ ರೀತಿ ತೋಟದ ಓಳಿ ಕೆರಸುದು,ದಂಡೆ ಹೊಳಿವದು ಎಲ್ಲಾ ದೊಡ್ಡ ಕೆಲಸ ಆಗಿಂಡಿತ್ತು.ಈಗ ಸ್ಪ್ರಿಂಕ್ಲರ್,ಹನಿ ನೀರಾವರಿ ಬಯಿಂದು,ಆ ಕೆಲಸ ಇಲ್ಲೆ!

  11. [ಜಾಲಿಂಗೆ ಕಸವಾಕುದೂ…! ] – ಜಾಲಿಂಗೆ ಕಸವು ಎಂತಕೆ ಹಾಕುಸ್ಸು ಹೇಳ್ತ ಕೆಣಿ ಈಗಷ್ಟೇ ಗೊಂತಾತಿದಾ. ಮಳೆಗಾಲಲ್ಲಿ ಹೆಮ್ಮಕ್ಕ ಪಾತ್ರೆ ತೊಳವಲೆ ಕೊಂಡೋಪಗ, ಬಾವಿಂದ ನೀರೆತ್ತಿಗೊಂಡು ಬಪ್ಪಗ, ಮಾಷ್ಟ್ರು ಮಾವ ಎಲೆತಿಂದು ತುಪ್ಪಲೆ ಹೋಪಾಗ ಜಾರಿ ಬೀಳ್ಳಾಗ ಹೇಳಿ ಆಯಿಕ್ಕು ಹೇದು ಗ್ರೇಶಿದ್ದಿದಾ ಇಷ್ಟನ್ನಾರ!!

    [ಒಂದು ಹೆಡಗ್ಗಪ್ಪಷ್ಟು ರಾಶಿ ಕೂಡುದು ] – ಜಾಲಿಪ್ಪಗ ಕಣ್ಣಿಲ್ಲಿ ಕಂಡಾಂಗೆ ಆತಿದು.

    [ಪಡಿಗೆಲಿ ರಜ ಹಸಿಮಣ್ಣು ಹಿಡ್ಕೊಂಡು ತಗ್ಗಿದಲ್ಲಿ ಮೆತ್ತಿ, ] – ಸುತ್ತಿದ ಮುಂಡಿನ ಕಚ್ಚೆಕಟ್ಟಿ ಕೂದೊಂಡು ಜಾಲಿಂಗೆ ಅಜ್ಜನೋ ಐತಪ್ಪುವೊ ಹೊಳಿತ್ತದು ನೆಂಪಾತು. [ಜಾಲಿಂಗಿಡೀ ಸಗಣ ಉಡುಗಿ ಇನ್ನೂ ಮನಾರ ಮಾಡುಗು ] – ಕುಂಞಿಮಕ್ಕೊ ಮೆಟ್ಟಿಗೊಂಡು ಹೋಕು , ಹೆಮ್ಮಕ್ಕೊ ಪರಂಚಿಗು, ಅಜ್ಜಿ ಅರ್ಬಾಯಿ ಕೊಡುಗು ಹು!

    [ಮೆಟ್ಟಿನಜೋಡಿನ ಕೈಲಿ ಹಿಡ್ಕೊಂಡು ] [ಒಸ್ತ್ರವೋ, ಕಾರೋ – ಬೈಕ್ಕೋ ] [ “ಅಡಕ್ಕೆಷ್ಟಕ್ಕು” ಹೇದು ಅಂದಾಜಿ ಮಾಡ್ತೋರು] [ತಿತಿ ಕೈನ್ನೀರಿಂಗೆ ಪಾದ ತೊಳೆಶಲೆ] [ಎರಡು ಸರ್ತಿ ಗರ್ಪುಸಿಗೊಂಡು ] … ಭಾರೀ ಪಷ್ಟಾಯ್ದು. ಇಂದಿಂಗೆ ಎಲ್ಲ ಕಲ್ಪನೆಯೋ ಹೇಳ್ವಲ್ಯಂಗೆ ಎತ್ತುತ್ತ ಇದ್ದು ಅಂದರೂ ನಮ್ಮ ಕಾಲಲ್ಲಿ ಕಣ್ಣಾರೆ ಕಂಡಿದು ಹೇಳ್ತ ತೃಪ್ತಿ ಇದ್ದು. ಮುಂದಾಣೋರಿಂಗೆ ಈ ಶುದ್ಧಿಯನ್ನೇ ತೋರ್ಸೇಕ್ಕಷ್ಟೇಯೋದು. ಹಪ್ಪಳ ಸೆಂಡಗೆ ಉಪ್ಪಿನಕಾಯಿ ಭರಣಿ ಒಣಗುಸಲೆ; ಚೆಪ್ಪರ ಎಂತಕೆ , ಬೆಂಡೆ ಬದನೆ ಚೆಕ್ಕರ್ಪೆ ಅಳತ್ತೊಂಡೆಯ ಹಾಂಗಿರ್ತದು ಜಾಲಿಲೇ.., ಹೂಗಿನ ಸೆಸಿಗಳೇ ಗೋಡೆ – ಸುಂದರ ದೃಶ್ಯಾವಳಿ ಅಕ್ಷರರೂಪಲ್ಲಿ ಕಂಡಾಂಗೆ ಆತು ಭಾವ. ಲಾಯಕ ಆಯ್ದು . ಒಂದು ಡೋಕ್ಯುಮೆಂಟರಿ ಚಿತ್ರೀಕರಣಮಾಡಿ ಮಡಿಕ್ಕೊಂಬಲಕ್ಕೋದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×