Oppanna.com

ಜನಗಣಮನ ಅಧಿನಾಯಕ ಜಾರ್ಜ್ – ಹೇ!!

ಬರದೋರು :   ಒಪ್ಪಣ್ಣ    on   15/08/2014    8 ಒಪ್ಪಂಗೊ

ಪರತಂತ್ರದ ಆಂಗ್ಲ ಆಡಳ್ತೆಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದದು ಶಂಭಜ್ಜನ ಏರು ಜವ್ವನಲ್ಲಿ.
ಸ್ವಾತಂತ್ರ್ಯಕ್ಕಾಗಿ ನೆಡದ ಹಲವಾರು ಜಗಳಂಗೊ, ಗಲಾಟೆಗೊ – ಎಲ್ಲವನ್ನೂ ಕೇಳಿ ಗೊಂತಿತ್ತು ಶಂಬಜ್ಜಂಗೆ. ಸಂಸ್ಕೃತಿ – ಸಂಪತ್ತಿಲಿ ಶ್ರೀಮಂತವಾದ ನಮ್ಮ ದೇಶವ ಆಳುಲೆ ಹೆರಾಣೋರು ಎಂತ್ಸಕ್ಕೇ, ನವಗೇ ಎಡಿಯದೋ – ದು ಕಂಡುಗೊಂಡಿತ್ತಾಡ ಶಂಬಜ್ಜಂಗೆ. ಒಂದೆರಡು ಸರ್ತಿ ಸತ್ಯಾಗ್ರಹ ಗಲಾಟೆ ಗೌಜಿಗೊ ಅಪ್ಪಗ ಕೇವಳದ ಗೆಣವತಿ ಅಜ್ಜನ ಒಟ್ಟಿಂಗೆ ಹೋಯಿದವಾಡ.

ಅಂತೂ, ನಲುವತ್ತೇಳಕ್ಕೆ ಭಾರತ ಬಿಟ್ಟು ಹೆರಟೇ ಬಿಟ್ಟವು ಇಂಗ್ಳೇಂಡಿನವು.
ಎರಡು ಶತಮಾನಂದಲೂ ಹೆಚ್ಚು ಭಾರತಮಾತೆಯ ಹಾಲು ಕುಡುದು ಬದ್ಕಿದ ಮಲಮಕ್ಕೊ ಅಂತೂ ಇಲ್ಯಾಣ ಮಕ್ಕಳ ಕೈಗೆ ಜೆಬಾದಾರಿ ಬಿಟ್ಟು ಹೆರಟವು. ಕಾರಣ ಎಂತರ?
ಭಾರತಲ್ಲಿ ಪ್ರತಿರೋಧ ಹೆಚ್ಚಾಗಿಂಡು ಇದ್ದತ್ತು – ಹೇಳ್ತದು ಒಂದು ಕಾರಣ ಅಪ್ಪಾದರೂ, ಇಂಗ್ಳೇಂಡಿನೋರ ಸ್ವಂತದ ಕಾರಣಂಗಳೇ ಹೆಚ್ಚು ಇದ್ದತ್ತು – ಹೇದು ಶಂಬಜ್ಜ° ಹೇಳಿಗೊಂಡಿತ್ತಿದ್ದವಾಡ.
ಎರಡನೇ ಮಹಾಯುದ್ಧಲ್ಲಿ ಆದ ಅಸಾಧಾರಣ ನಷ್ಟಂದಾಗಿ ಭಾರತದ ಹಾಂಗಿರ್ತ ದೇಶವ ನೆಡೆಶುದು ಕಷ್ಟ. ಆಂತರಿಕವಾಗಿ ರಾಜಕೀಯ ಪ್ರತಿರೋಧಂಗೊ ಎಲ್ಲ ಬಂದುಗೊಂಡಿಪ್ಪಾಗ ಇನ್ನು ಇದರ ಮಡಿಕ್ಕೊಂಡು ಸಾಂಕಲೆಡಿಯ – ಹೇದು ಕಂಡತ್ತೋ ಏನೋ ಅವಕ್ಕೆ.
ಇರಳಿ. ಏನೇ ಆದರೂ – ನಲುವತ್ತೇಳರ ನೆಡಿರುಳು – ಅಪರರಾತ್ರಿ ಭಾರತಕ್ಕೆ ಸ್ವಾಯತ್ತೆ ಕೊಟ್ಟವು.
ನೆಹರು ಅಜ್ಜ° ಪ್ರಧಾನಿ ಆಗಿ ಪ್ರಮಾಣವಚನ ತೆಕ್ಕೊಂಡನಾಡ. ಒಳ್ಳೆ ಮೂರ್ತ ಅಲ್ಲ ಅದು – ಹೇದು ಜೋಯಿಷಜ್ಜ° ಪಂಚಾಂಗ ಬಿಡುಸಿ ನೋಡಿ ಹೇಳ್ತಿತವೋ ಏನೋ!
ಇಂದಿಂಗೆ, ಭಾರತಾಂಬೆಗೆ ಪರತಂತ್ರಂದ ಸ್ವಾತಂತ್ರ್ಯ ಸಿಕ್ಕಿ ಅರುವತ್ತೇಳು ಒರಿಶ ಆತು. ಸ್ವಾತಂತ್ರ ಸಿಕ್ಕಿದ ಮೂರ್ತ ಒಳ್ಳೆದಿದ್ದೋ – ಇಲ್ಲೆಯೋ ಗೊಂತಪ್ಪದು ಹೇಂಗೆ? ದೇಶದ ಬೆಳವಣಿಗೆ ಹೇಂಗೆ ನೆಡೆತ್ತಾ ಇದ್ದು ಹೇಳ್ಸರಿಂದ ಗೊಂತಕ್ಕು.

~

ಈ ಸರ್ತಿ ಸ್ವಾತಂತ್ರ ದಿನದಂದು ಗುಣಾಜೆಮಾಣಿಗೆ ಟೀವಿ ಎದುರು ಕೂಪ ಕೆಲಸ ಇದ್ದು.
ಏಕೇದರೆ –ಭಾಷಣ ಮಾಡುಸ್ಸು ಮೋದಿ ಅಲ್ಲದೋ! ಹಾಂಗೆ.
ಮೊನ್ನೆಂದಲೇ ಟೀವಿ ಹಾಕಿ ಕಾದುಗೊಂಡಿದ್ದನಾಡ ಆ ಕಾರ್ಯಕ್ರಮವ; ನಿನ್ನೆ ಸಿಕ್ಕಿದ ಪಾಲಾರಣ್ಣ ಹೇಳಿದ°.

ಮೊನ್ನೆ ಕುಂಟಾಂಗಿಲ ಭಾವನೊಟ್ಟಿಂಗೆ ಕಾಸ್ರೋಡಿಂಗೆ ಹೋಗಿತ್ತಿದ್ದೆ, ರಜ ಮೈಲುತೂತು ಆಯೇಕಾತು ಹೇದು. ಅಲ್ಲೇ ಕರೆಲಿ ಸಿಂಡುಬೇಂಕಿನ ಎದುರು ಚಾಯ ಕುಡಿವಲೆ ಹೋದೆಯೊ°, ಆಸರಪ್ಪದಕ್ಕೆ. ಅಷ್ಟಪ್ಪಗ ಅಲ್ಲಿ ಕಾಂಬಲೆ ಸಿಕ್ಕಿದೋನು ಈ ಪಾಲಾರಣ್ಣ. ಅವನ ಚಾಯ ಮುಗಿವ ಮದಲೇ ಎಂಗೊ ಎತ್ತಿಂಡ ಕಾರಣ ನವಗೂ ಒಂದು ಗ್ಲಾಸುಧರ್ಮಕ್ಕೇ ಒದಗುವ ಭಾಗ್ಯ. ಅಪುರೂಪಲ್ಲಿ ಸಿಕ್ಕಿದ ಪಾಲಾರಣ್ಣನೊಟ್ಟಿಂಗೆ ಕುಂಟಾಂಗಿಲಭಾವನೂ ಸೇರಿ ಮಾತಾಡಿದೆಯೊ°.

ಸ್ವಾತಂತ್ರದಿನ ಎದುರು ಇಪ್ಪಗ ಅದರ ಬಗ್ಗೆಯೇ ವಿಷಯಂಗೊ ಬಂತು.  ಮೋದಿ ಬಂದ ಮತ್ತೆ ರಾಷ್ಟ್ರಲ್ಲಿ ಆದ ಪರಿವರ್ತನೆಗೊ, ಬದಲಾವಣೆಗೊ, ಭವಿಷ್ಯದ ನಿರೀಕ್ಷೆಗೊ – ಎಲ್ಲವುದೇ. ಅದರೊಟ್ಟಿಂಗೆ ರಾಷ್ಟ್ರದ ಪರಿಕಲ್ಪನೆ, ರಾಷ್ಟ್ರದ ಚಿಂತನೆ ಇತ್ಯಾದಿಗಳ ಮಾತಾಡಿ, ಮತ್ತೆ ರಾಷ್ಟ್ರಗೀತೆಯ ಬಗ್ಗೆಯೂ ವಿಷಯಂಗೊ ಬಂತು.

ಈಗ ರಾಷ್ಟ್ರಗೀತೆ ಆಗಿಪ್ಪ ಜನಗಣಮನದ ಬಗ್ಗೆ ಪಾಲಾರಣ್ಣಂಗೆ ಎಲ್ಲಿಯೋ ಓದಿದ ಒಂದು ನೆಂಪಾತಡ. ಆ ಪದ್ಯದ ಉಗಮ ಹೇಂಗಾತು – ಹೇಳ್ತ ಒಂದು ಗುಟ್ಟು ಶುದ್ದಿ. ಅತ್ತಿತ್ತೆ ಕೇಳ್ತೋರು ಆರುದೇ ಇಲ್ಲೆನ್ನೇದು ಧೃಡಮಾಡಿಗೊಂಡು ಆ ಶುದ್ದಿಯ ಪಕ್ಕಪಕ್ಕನೆ ಹೇಳಿಕ್ಕಿದ°. ಅಷ್ಟೇ ಅಂಬೆರ್ಪಿಲಿ ಆನುದೇ ಹೇಳಿಕ್ಕುತ್ತೆ, ಆತೋ?

~

ಭಾರತದ ಮೇಗೆ ಆಳ್ವಿಕೆ ಮಾಡಿ, ತನ್ನ ಕೈವಶ ಮಾಡಿದ ಇಂಗ್ಳೇಂಡು ದೇಶಲ್ಲಿ ರಾಜನ ಆಳ್ವಿಕೆ ಇಪ್ಪದು ನವಗೆಲ್ಲೋರಿಂಗೂ ಗೊಂತಿಪ್ಪದೇ. ರಾಜನೋ-ರಾಣಿಯೋ, ಆ ಒಂದು ಮನೆತನದ ಹೆರಿ ತಲೆ ಅಲ್ಯಾಣ ಅಧಿಪತ್ಯ. ಈಗ ಆದರೂ ರಜ ಪ್ರಜಾಪ್ರಭುತ್ವಕ್ಕೆ ತೂಕ ಇದ್ದು. ಅಂದು ಹಾಂಗಲ್ಲನ್ನೇ, ಪ್ರಭುತ್ವ ಮಾಂತ್ರ ಇದ್ದದು. ರಾಜನ ಆಜ್ಞೆಗೇ ಬೆಲೆ, ರಾಜನ ಮಾತೇ ಮಿತಿ. ಎಲ್ಲದಕ್ಕೂ ಅವನದ್ದೇ ಅಂಕಿತ ಬೇಕಾದ್ಸು. ಹಾಂಗಾಗಿ ಅಂದ್ರಾಣ ಬಾರತದ ರಾಜಕೀಯ ವಿದ್ಯಮಾನಲ್ಲಿ ಇಂಗ್ಲೇಂಡಿನ ರಾಜಂಗೆ ತುಂಬ ಬೆಲೆ ಇದ್ದತ್ತು. ಎಷ್ಟು ಬೆಲೆ ಹೇದರೆ, ಪೈಶೆ ಪಾವಲಿಲಿ ಪೂರ ಇಂಗ್ಳೇಂಡಿನ ರಾಜನ ಚಿತ್ರಂಗಳೇ ತುಂಬಿದ್ದತ್ತು. ಶಂಭಜ್ಜನ ಬಾಲ್ಯಲ್ಲಿ ಪಂಚಮ ಜೋರ್ಜು ಹೇದು ಒಂದು ರಾಜ ಇದ್ದತ್ತಾಡ. ಎಲ್ಲ ರಾಜರ ಹಾಂಗೆ ಅದುದೇ ತನ್ನ ದೇಶದ ಅಧಿಪತ್ಯ ಇಪ್ಪ ಎಲ್ಲಾ ದೇಶಕ್ಕೆ ಒಂದರಿ ಹೋಗಿ ಕಪ್ಪಕಾಣಿಕೆ ಸ್ವೀಕಾರ ಮಾಡಿ ಬಪ್ಪ ಸಂಪ್ರದಾಯ. ಹಾಂಗೆ, ಈ ಪಂಚಮ ಜೋರ್ಜುದೇ ಬಂತು ಭಾರತಕ್ಕೆ. ಅಷ್ಟಪ್ಪಗ ಅದಾಗಲೇ ಇಡೀ ಭರತಖಂಡವೇ ಆ ರಾಜನ ಕೈಲಿ ಇದ್ದತ್ತು.

ಪಂಜಾಬು, ಸಿಂಧು, ಗುಜರಾತು, ಮರಾಠ, ಬಂಗಾಲ, ಮದ್ರಾಸು – ಹೀಂಗೆ ಹಲವು ಬಹುಮುಖ್ಯ ಭೂಭಾಗಂಗೊ ನೇರವಾಗಿ ಇಂಗ್ಲೀಶರ ಕೈಲಿ ಇದ್ದತ್ತು. ಒಳುದ ಭೂಪ್ರದೇಶ ಆದ ಮೈಸೂರು, ಹೈದ್ರಾಬಾದು, ಕಾಶ್ಮೀರ – ಇತ್ಯಾದಿಗಳ ಕೆಲವು ರಾಜಂಗಳ ಆಳ್ವಿಕೆಲಿ ಇದ್ದರೂ, ಬ್ರಿಟೀಷರಿಂಗೆ ಕೈಮುಗಿವ ರಾಜಂಗೊ.

~

ಸಮಾಜಲ್ಲಿ ಎರಡು ಜೆನ ಇರ್ತವಾಡ – ಅಂದೊಂದರಿ ರಂಗಮಾವ° ಹೇಳಿತ್ತಿದ್ದವು.
ಕೆಲಸ ಮಾಡುವೋರು; ಕೆಲಸ ಮಾಡ್ತೆ ಹೇದು ತೋರುಸಿಗೊಂಬೋರು.

ಸ್ವಾತಂತ್ರ ಹೋರಾಟಲ್ಲಿಯೂ ಹಾಂಗೇ ಇದ್ದತ್ತಾಡ. ಸಾವರ್ಕರು, ಸುಭಾಶ್ ಚಂದ್ರ ಬೋಸರು, ಭಗತ್ ಸಿಂಗ್, ಇತ್ಯಾದಿ ಇತ್ಯಾದಿ ಎಲ್ಲೋರುದೇ ಸಮಾಜಲ್ಲಿ ಕ್ರಾಂತಿ ಮಾಡಿಂಡು ಇದ್ದಿದ್ದವು. ನೆಹರುವಿನ ಪಟಾಲಮ್ಮು ಒಂದು ಗುಂಪು – ಹೇಳಿಕೆ ಕೊಟ್ಟುಗೊಂಡು, ಭಾಷಣ ಮಾಡಿಗೊಂಡು ಇತ್ಯಾದಿ ಕಾಲಹರಣ ಮಾಡಿಗೊಂಡು ಇತ್ತಿದ್ದವು – ಹೇದು ಇತಿಹಾಸ ನೋಡಿರೆ ಗೊಂತಾವುತ್ತಾಡ. ಬ್ರಿಟಿಷರ ಎದುರು ಹಾಕಿಂಡು, ಅವರ ಎದುರು ಗಲಾಟೆ ಜಗಳ ದೊಂದಿ ಮಾಡಿಂಡು ಅವಕ್ಕೆ ಆಗದ್ದೆ ಇದ್ದಿದ್ದದು ಒಂದು ಗುಂಪು ಆದರೆ, ಬ್ರಿಟಿಷರ ಒಟ್ಟಿಂಗೇ ಕಾಪಿಚಾಯ ಕುಡುಕ್ಕೊಂಡು, ಅವರ ಕೃಪಾಕಟಾಕ್ಷಲ್ಲಿ ಬದ್ಕಿಂಡು ಇದ್ದಿದ್ದೋರು ಇನ್ನೊಂದು ಗುಂಪು. ಅದೆರಡ್ರಲ್ಲಿ ಬ್ರಿಟಿಷರಿಂಗೆ ಹೆಚ್ಚು ಅಕ್ಕಾದೋರು ಆರೋ – ಅವಕ್ಕೆ ಹೆಚ್ಚು ಅನುಕ್ಕೂಲವೂ ಇದ್ದತ್ತು. ಭಾರತದ ಸ್ವಾತಂತ್ರ್ಯ ಹೋರಾಟಗಾರರು – ಹೇಳ್ತ ಹಣೆಪಟ್ಟಿ ಧರ್ಮಕ್ಕೇ ಸಿಕ್ಕಿಂಡಿದ್ದತ್ತು. ನಿಜವಾದ ಹೋರಾಟಗಾರರಿಂಗೆ “ಭಯೋತ್ಪಾದಕರು” ಹೇಳ್ತ ಹೆಸರು!

ಕರಿನೀರಿನ ಜೈಲುವಾಸ, ಕಂಡಲ್ಲಿ ಗುಂಡು, ಗಲ್ಲು ಶಿಕ್ಷೆ ಹೀಂಗಿರ್ತ ಶಿಕ್ಷೆ ಸ್ವಾತಂತ್ರ ಹೊರಾಟಗಾರರಿಂಗೆ ಸಿಕ್ಕಿರೆ,
ಆರಾಮದ ಜೈಲುವಾಸ. ಹಾಲು-ಸಕ್ಕರೆ ತಿಂಬಲೆಡಿವ ಊಟ. ಬೇಕಾದ್ದರ ಓದುಲೆ, ಬರವಲೆ ಎಡಿಗಪ್ಪ ಜೀವನ- ಹೀಂಗಿಪ್ಪ ಸೆರೆಮನೆ ಧರ್ಮದ ಓರಾಟಗಾರರಿಂಗೆ ಸಿಕ್ಕಿತ್ತು.
ಹಾಂಗೆ, ಧರ್ಮಕ್ಕೇ ಸ್ವಾತಂತ್ರ್ಯ ಹೋರಾಟಗಾರು ಆದೋರಲ್ಲಿ ನೆಹರುದೇ ಒಬ್ಬ°! ಜೀವನ ಇಡೀ ಸುಲಭೋಪಾಯ, ಜೀವನೋಪಾಯಲ್ಲಿ ಬದ್ಕಿ, ಆರಾಮಲ್ಲಿ ಕಳದ ಮಹನೀಯ ಅಡ.

~

1911 ರ ದಶಂಬ್ರಲ್ಲಿ ಕೋಂಗ್ರೇಸು ಪಾರ್ಟಿಯ ವಾರ್ಷಿಕ ಮಿಲನ ಇದ್ದತ್ತಾಡ. ಅದೇ ಸಂದರ್ಭಲ್ಲಿ ಪಂಚಮ ಜೋರ್ಜು ಭಾರತಕ್ಕೆ ಬಪ್ಪ ಗೌಜಿಯೂ ಇದ್ದ ಕಾರಣ, ಕೋಂಗ್ರೇಸು ಸಭೆಲಿ “ಸ್ವಾಗತ ನಿರ್ಣಯ”ವ ಮಾಡಿ ಆತಾಡ. ಹಾಂಗೆ ಸ್ವಾಗತ ನಿರ್ಣಯ ಮಾಡ್ತರಿಂದ ಮದಲು ವಿಶೇಷವಾಗಿ ಒಂದು ಪದ್ಯ ಓದಿದವಾಡ. ಅದುವೇ “ ಜನಗಣಮನ ಅಧಿನಾಯಕ ಜಯಹೇ” ಹೇಳ್ತ ಪದ್ಯ. ಬಂಗಾಳದ ಕವಿ ರವೀಂದ್ರನಾಥ ಠಾಕೂರ ಬರದ ಸಂಸ್ಕೃತ ಶಬ್ದಂಗಳೇ ತುಂಬಿದ ಬೆಂಗಾಳಿ ಉಚ್ಛಾರದ ಪದ್ಯ ಅದು.

ಒಂದೊಂದೇ ಹನ್ಸು ಅರ್ಥ ಮಾಡಿಗೊಂಡು ಹೋದರೆ ಆ ಪದ್ಯದ ನಿಜವಾದ ಬಣ್ಣ ಗೊಂತಾವುತ್ತಾಡ.

ಜನಗಣಮನ ಅಧಿನಾಯಕ ಜಯಹೇ
ಭಾರತ ಭಾಗ್ಯ ವಿಧಾತ ||
ಜನರ ಮನಸ್ಸಿನ ಅಧಿನಾಯಕನೇ, ಭಾರತಕ್ಕೆ ಭಾಗ್ಯದಾತನಾಗಿ ಇಪ್ಪವನೇ!!

ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ ||
ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲ ಜಲಧಿ ತರಂಗ ||
(ಬ್ರಿಟಿಷರ ಆಡಳ್ತೆಲಿ ಅಂಬಗ ಇದ್ದಿದ್ದ) ಪಂಜಾಬು, ಸಿಂಧೂ, ಗುಜರಾತ್, ಮರಾಠಾ, ಮೆಡ್ರಾಸು, ಬಂಗಾಳ – ಇತ್ಯಾದಿ ದೇಶಂಗಳೂ, ವಿಂಧ್ಯ, ಹಿಮಾಚಲ ಇತ್ಯಾದಿ ಪರ್ವತಂಗಳೂ, ಗಂಗೆ, ಯಮುನೆ ಇತ್ಯಾದಿ ಜಲಾಶಯಂಗಳೂ ಒಳಗೊಂಡ ಭವ್ಯ ಭಾರತದ ಅಧಿಪತಿಯೇ…

ತವಶುಭ ನಾಮೇ ಜಾಗೇ,
ತವಶುಭ ಆಶಿಷ ಮಾಗೇ
ಗಾಹೇ ತವ ಜಯಗಾಥಾ

ನಿನ್ನ ಹೆಸರು ಕೇಳಿ ಅಪ್ಪಗಳೇ ಪುಳಕ ಆವುತ್ತ ನಮುನೆಯ ಎಂಗೊಗೆ,
ನಿನ್ನ ಆಶೀರ್ವಾದ ಇರಳಿ..
ನಿನ್ನ ವಿಜಯಗಾಥೆಯ ಎಂಗೊ ಹಾಡ್ತೆಯೊ

ಜನಗಣಮಂಗಳ ದಾಯಕ ಜಯಹೇ, ಭಾರತ ಭಾಗ್ಯ ವಿಧಾತಾ|
ಜನರ ಮಂಗಳದಾಯಕನೇ, ಭಾರತದ ಭಾಗ್ಯದಾತನೇ –
ಜಯಹೇ ಜಯಹೇ ಜಯಹೇ – ಜಯ ಜಯ ಜಯ ಜಯಹೇ |
ಜಯವಾಗಲಿ, ನಿನಗೆ ಜಯವಾಗಲಿ, ಜೈ ಜೈ ಜೈ – ನಿನಗೆ ಜೈ!!

~

ಪಾಲಾರಣ್ಣ ವಿವರ್ಸಿದ ಅರ್ಥ ಕೇಳಿ ಅಪ್ಪಗ ಒಂದರಿ ಬೇಜಾರವೂ ಆತು, ಮೈ ಎಲ್ಲ ಹೇಸಿಗೆ ಹೇಸಿಗೆ ಆತು.
ಶಾಲಗೆ ಹೋಪ ಕಾಲಲ್ಲಿ ಇದನ್ನೇ ಅಲ್ಲದೋ – ಕಣ್ಣು ಮುಚ್ಚಿ ನಿಂದುಗೊಂಡು ಹೇಳಿಂಡು ಇದ್ದದು?
ಇದುವೇ ಅಲ್ಲದೋ ನಮ್ಮ “ರಾಷ್ಟ್ರಗೀತೆ” ಹೇದು ನಂಬಿಗೊಂಡದು.
ಭಾರತ, ಪಂಜಾಬು, ಸಿಂಧು, ಗಂಗೆ, ಹಿಮಾಲಯ – ಹೆಸರುಗೊ ಬತ್ತು ಹೇಳಿ ಅಲ್ಲದೋ ನಾವು ಇದು ಭಾರತಮಾತೆಯ ಬಗ್ಗೆ ಹೇದು ತಿಳ್ಕೊಂಡದು?
ಆದರೆ, ಇಪ್ಪ ವಿಷಯ ಕೇಳಿ ಎಷ್ಟು ಬೇಜಾರಾತು.

ಇದು ರಾಜನ ಅಲ್ಲ, ಭಾರತಮಾತೆಯ ಹೇಳಿದ್ದು – ಹೇದು ಸುಮಾರು ಜೆನ ಮತ್ತೆ ಪುಸುಲಾಯಿಸಿದವಾಡ. ಆದರೂ “ಭಾರತ ಭಾಗ್ಯ ವಿಧಾತ”ಆರು? ಆ ಪುಲ್ಲಿಂಗ ಪೂರ್ವಕ ಸಂಬೋಧನೆ ಮಾಡುದು ಆರ?

ನಾವು ನಮ್ಮ ದೇಶವ “ಮಾತೆ” ಹೇದು ಪರಿಗಣನೆ ಮಾಡುದಲ್ಲದೋ?

~

ಈ ಪದ್ಯ ರಚನೆ ಮಾಡುವ ಎಷ್ಟೋ ಮದಲೇ ರಚನೆ ಆದ “ವಂದೇ ಮಾತರಂ” – ಹೇಳ್ತ ಅದ್ಭುತ ಕಾವ್ಯ ನೋಡಿ ನಿಂಗೊ.
ದೇಶವ ದುರ್ಗೆಯಾಗಿ ಚಿತ್ರಿಸಿ, ಅದರ್ಲಿ ಭಕ್ತಿ ಉಕ್ಕಿ ಬಪ್ಪ ಹಾಂಗೆ ವರ್ಣನೆ ಆಯಿದು. ಬಂಕಿಮಚಂದ್ರ ಚಟರ್ಜಿ ಬರದ ಈ ಮಹಾನ್ ಕವಿತೆ ಸ್ವಾತಂತ್ರ್ಯ ಹೋರಾಟಕ್ಕೂ ಸ್ಪೂರ್ತಿ ಆಗಿತ್ತು.

ಆದರೆ, ಸ್ವಾತಂತ್ರ್ಯ ಸಿಕ್ಕಿದ ಮತ್ತೆ ಪ್ರಧಾನಿ ಆದ ನೆಹರು ಉಪಾಯಲ್ಲಿ – ಜನಗಣಮನ ವ ತಂದು ರಾಷ್ಟ್ರಗೀತೆ ಮಾಡಿದನಾಡ. ನಾವೆಲ್ಲರೂ – ಇಂದಿಂಗೂ – ಧ್ವಜವ ನೋಡಿ ಹೇಳುದು – ಜನಾಗಣಾಮನಾ… ಅದೇ ರಾಗ!!

ನೋಡೊ, ನಮ್ಮ ಮಕ್ಕಳ ಕಾಲಕ್ಕಾದರೂ ವಂದೇ ಮಾತರಂ ರಾಷ್ಟ್ರಗೀತೆ ಆವುತ್ತೋ ಏನೋ!!
ಎಂತ ಹೇಳ್ತಿ?

~

ಒಂದೊಪ್ಪ: ಸ್ವಾತಂತ್ರ್ಯ ದಿನಲ್ಲಿ ಅಬ್ಬೆಗೊಂದು ನಮಸ್ಕಾರ – ವಂದೇ ಮಾತರಂ.

8 thoughts on “ಜನಗಣಮನ ಅಧಿನಾಯಕ ಜಾರ್ಜ್ – ಹೇ!!

  1. ವಂದೇ ಮಾತರಂ ರಷ್ಟ್ರಗೀತೆ ಅಪ್ಪಲೆ ಸರ್ವಥಾ ಯೋಗ್ಯವೇ 🙂
    ಆದರೆ, ಜನಗಣಮನ ಜಾರ್ಜ್ ನ ಉದ್ದೇಶಿಸಿ ಬರದ್ದು ಹೇಳುದರ ಒಪ್ಪುಲೆ ಮನಸ್ಸಾವುತ್ತಿಲ್ಲೆ ಒಪ್ಪಣ್ಣಾ.
    ಜನಗಣಮನವ, ಸುಭಾಶ್ ಚಂದ್ರ ಭೋಸ್ ಅವರ ಸೇನೆಯ ಗೀತೆ ಆಗಿ ಮಾಡಿತ್ತವಡ, ಈ ಪದ್ಯ ಜಾರ್ಜಿನ ಮೇಲೆ ಬರದ್ದು ಆಗಿದ್ದರೆ ಅವ್ವು ಹಆಂಗೆ ಮಾಡ್ತಿತ್ತವೋ ಹೇಳುವ ಅನುಮಾನ ಇದ್ದು. ಆರ ಮೇಗೆ ಬರದರೂ – ನಾವು ಇನ್ನು ಆ ಪದ್ಯ ದೇವರ ಮೇಲೆ ಬರದ್ದು ಹೇಳಿ ಗ್ರೇಶಿಗೊಂಬ° 🙂

  2. ಒಪ್ಪಣ್ಣನ ಈ ಲೇಖನ ತಪ್ಪು ಮಾಹಿತಿ ಕೊಡುತ್ತು. ಈ ಕವನ -ಪ್ರಭಾತ ಗೀತೆ -ದೇವರನ್ನು ಉದ್ದೇಶಿಸಿದ ಪದ್ಯ;ಅದರಲ್ಲಿ ಯಾವುದೇ ಅನುಮಾನ ಬೇಡ. ಜಾರ್ಜ್ ಬಪ್ಪ ಸಂದರ್ಭಲ್ಲಿ ಇದರ ಹಾಡಿದ್ದವು ಹೇಳುದು ಸರಿ;ಚರಿತ್ರೆ ಓದಿದವಕ್ಕೆ ತಿಳಿದ ವಿಷಯವೇ.ಇದರ ಇಂಗ್ಲಿಷ್ ಅನುವಾದ ಓದಿ ನೋಡಿದರೆ ತಪ್ಪು ಕಲ್ಪನೆ ದೂರ ಅಕ್ಕು.
    ಈ ಪದ್ಯಕ್ಕೆ ಐದು ನುಡಿಗೊ ಇದ್ದವು . ಅದರಲ್ಲಿ ಮೊದಲಾಣ ನುಡಿ ಮಾತ್ರ ನಮ್ಮ ರಾಷ್ಟ್ರ ಗೀತೆ ಹೇಳಿ ತೀರ್ಮಾನ ಆದದ್ದು.
    ಉಳಿದ ನಾಕು ನುಡಿ ಇಲ್ಲಿ ಬರೆತ್ತೆ-
    ಅಹ ರಹ ತವ ಆಹ್ವಾನ ಪ್ರಚಾರಿತ ಸುನಿ ತವ ಉದಾರವಾಣಿ
    ಹಿಂದೂ ಬೌದ್ಧ ಶಿಖ ಜೈನ ಪಾರಸಿಕ ಮುಸಲ್ಮಾನ ಕ್ರಿಸ್ತಾನಿ
    ಪೂರಬ ಪಶ್ಚಿಮ ಆಸೇ ತವ ಸಿಂಹಾಸನ ಪಾಸೇ | ಪ್ರೇಮ ಹಾರ ಹೋಯ ಗಾಥಾ
    ಜನಗಣ ಐಕ್ಯ ವಿಧಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ |ಜಯಹೇ….ಜಯ ಹೇ ಜಯ ಹೇ…. ಜಯ ಜಯ ಜಯ ಜಯ ಹೇ||
    ಪತನ ಅಭ್ಯುದಯ ಬಂಧುರ ಪಂಥಾ ಯುಗ ಯುಗ ಧಾವಿತ ಯಾತ್ರಿ
    ಹೇ ಚಿರಸಾರಥಿ ತವ ರಥ ಚಕ್ರೇ ಮುಖರಿತ ಪಥ ದಿನರಾತ್ರಿ
    ದಾರುಣ ವಿಪ್ಲವ ಮಾಝೆ ತವ ಶಂಖಧ್ವನಿ ಬಾಜೆ | ಸಂಕಟ ದುಃಖ ತ್ರಾತಾ
    ಜನಗಣ ಪಥ ಪರಿಚಾಯಕ ಜಯಹೇ ಭಾರತ ಭಾಗ್ಯ ವಿಧಾತಾ [ಜಯಹೇ….]
    ಘೋರ ತಿಮಿರ ಘನ ನಿಬಿಡ ನಿಶೀಥೇ ಪೀಡಿತ ಮೂರ್ಛಿತ ದೇಶೆ
    ಜಾಗ್ರತ ಛಿಲೊ ತವ ಅವಿಚಲ ಮಂಗಲ ನತನಯನೇ ಅನಿಮೇಷೇ
    ದುಃಸ್ವಪ್ನೇ ಆತಂಕೇ ರಕ್ಷಾ ಕರಿಲೇ ಅಂಕೆ | ಸ್ನೇಹಮಯಿ ತುಮಿ ಮಾತಾ
    ಜನಗಣ ದುಃಖತ್ರಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ [ಜಯ ಹೇ ]
    ರಾತ್ರಿ ಪ್ರಭಾತಿಲೋ ಉದಿಲೋ ರವಿ ಛಬಿ ಪೂರ್ವ ಉದಯಗಿರಿ ಭಾಲೇ
    ಗಾಹೇ ವಿಹಂಗಮ ಪುಣ್ಯ ಸಮೀರಣ ನವ ಜೀವನ ರಸ ಡಾಲೇ
    ತವ ಕರುಣಾರುಣ ರಾಗೇ ನಿದ್ರಿತ ಭಾರತ ಜಾಗೇ | ತವ ಚರಣೆ ನತಮಾಥಾ
    ಜಯ ಜಯ ಜಯ ಹೇ ಜಯ ರಾಜೇಶ್ವರ ಭಾರತ ಭಾಗ್ಯ ವಿಧಾತಾ [ಜಯ ಹೇ…]
    ಈ ಪದ್ಯಲ್ಲಿ ಇಪ್ಪ ರಾಜೇಶ್ವರ ಹೇಳುವ ಶಬ್ದ ಜಾರ್ಜ್ ಬಗ್ಗೆ ಇಪ್ಪ ಪದ್ಯವೋ ಹೇಳುವ ಕಲ್ಪನೆ ಕೊಡುತ್ತು. ಆದರೆ ನೋಡಿ-ಚಿರ ಸಾರಥಿ ,ನೀನು ಪತನ ಅಭ್ಯುದಯ ಎಂಬ ದಾರೀಲಿ ಯುಗ ಯುಗ ಧಾವಿತ ಯಾತ್ರಿ, ನಿನ್ನ ರಥದ ಚಕ್ರಲ್ಲಿ ದಿನ ರಾತ್ರಿಗೋ ಪ್ರಕಟ ಆವುತ್ತು ; ದಾರುಣ ವಿಪ್ಲವ ನಿಲ್ಲಲಿ ; ನಿನ್ನ ಶಂಖ ಧ್ವನಿ ಮೊಳಗಲಿ -ಎಂಬ ಮಾತಾಗಲೀ,ನಂತರದ ನುಡಿಲಿ ದೇಶ ಕತ್ತಲೇಲಿ ಇದ್ದು ;ನಮ್ಮ ಸಂಕಟ ಪರಿಹರಿಸು ಹೇಳುವ ಪ್ರಾರ್ಥನೆ ಆಗಲೀ ದೇವರ ಬಗ್ಗೆಯೇ ಹೇಳಿದ್ದು ಹೇಳುದು ಸ್ಪಷ್ಟ;ರವೀಂದ್ರ ನಾಥ ಠಾಕೂರ್ ದೇಶ ಭಕ್ತ ವ್ಯಕ್ತಿ-ಸ್ವಾಭಿಮಾನಿ,ಬಂಗಾಳ ವಿಭಜನೆಯ ಸಮಯಲ್ಲಿ [೧೯೦೫]ಬ್ರಿಟಿಷರ ವಿರುದ್ಧ ಹೋರಾಡಿದ ಜನ. ಅವು ಬರೆದ ಪದ್ಯ ಇದು .ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಹೇಳಿ ಇದಕ್ಕೆ ಹೆಸರು.ಅವು ಬ್ರಿಟಿಷ್ ಬಗ್ಗೆ ಇಷ್ಟು ತಗ್ಗಿ ಬರೆವಲೆ ಸಾಧ್ಯ ಇಲ್ಲೆ. ಹಾಂಗಾಗಿ ಈ ವಿಷಯಲ್ಲಿ ಒಪ್ಪಣ್ಣನ ಅಭಿಪ್ರಾಯ ಸರಿ ಅಲ್ಲ ಹೇಳಿ ವಿನೀತನಾಗಿ ಹೇಳುತ್ತೆ .
    ಆದರೆ ವಂದೇ ಮಾತರಂ ಪದ್ಯ ರಾಷ್ಟ್ರ ಗೀತೆ ಅಪ್ಪ ನಿಜವಾದ ಯೋಗ್ಯತೆ ಇಪ್ಪ ಪದ್ಯ -ಅದರ ಬಗ್ಗೆ ಎನ್ನ ಎರಡು ಮಾತಿಲ್ಲೆ.

    1. ವಂದೇ ಮಾತರಂ ನಮ್ಮ ರಾಷ್ಟ್ರ ಗೀತೆ ಅಯೆಕ್ಕಿತ್ತು ಹೇಳುದರಲ್ಲಿ ಎರಡು ಮಾತಿಲ್ಲೆ. ಆದರೆ ಜನಗಣ ಮನ ಜಾರ್ಜನ ಬಗ್ಗೆ ಬರದ್ದು ಹೇಳಲೇ ಆವುತ್ತಿಲ್ಲೆ. ಎನಗೆ ಗೊಂತಿಪ್ಪ ಒಬ್ಬ ಸಂಘದ ದೊಡ್ಡ ವ್ಯಕ್ತಿ, ( ಈಗ ಭಾರತ ಪರಿಕ್ರಮ ಮಾಡ್ತ ಇದ್ದವು) ಒಂದು ಬೌದ್ಧಿಕಲ್ಲಿ ಹೇಳಿದ ಪ್ರಕಾರ ಜನಗಣಮನ ಶ್ರೀ ಕೃಷ್ಣನ ಬಗ್ಗೆ ಬರದ ಹಾಂಗೆ ಕಾಣ್ತು ಹೇಳಿ ಅಭಿಪ್ರಾಯ ವ್ಯಕ್ತ ಮಾಡಿತ್ತಿದ್ದವು. ಗೋಪಾಲಣ್ಣನ ಅಭಿಪ್ರಾಯಕ್ಕೆ ಎನ್ನ ಸಹಮತ ಇದ್ದು.

      1. ಆದರೆ ಎನಗೆ ಇದು ಸೂರ್ಯನ ಬಗ್ಗೆ ಬರದ್ದಿಕ್ಕು ಹೇಳಿ ಕಾಣ್ತು.

  3. ವಂದೇ ಮಾತರಂ. ಭಾರತ್ ಮಾತಾ ಕಿ ಜೈ.

  4. ಅಧಿನಾಯಕ ಜಯ ಹೇ! ಭಾರತ ಭಾಗ್ಯವಿಧಾತ! ಹೇಳಿ ನಮ್ಮ ಪ್ರಧಾನಮಂತ್ರಿಯ ಉದ್ದೇಶಿಸಿ ಹೇಳಿರೆ ಸಮಾಧಾನ ಅಕ್ಕು.
    ಈಗ ಜನಮಾನಸ ಸಮ್ರಾಟ್ ಮೋದಿಯೇ !

  5. ನಾವು ಇ೦ದು ರಜಾ ಪೇಪರ್ ಓದಿ , ಎದ್ದಿಕ್ಕಿ ಗೋಲಿ ಆಡಲೇ ಹೋಪ ,ಹೇಳಿ ಗ್ರೇಶಿದರೆ ,ಬೈಲ-ಜಾನ್ಸಿ ಅಕ್ಕ೦ದು ,ಬೆಳ್ಳಾರೆಕಾಟುಗೋಲಿ ಬ್ರೇಕಿ೦ಗು ಕತೆ.ಇಲ್ಲಿ ಶ೦ಬಜ್ಜಿ-ಅಜ್ಜನ ಸಮಕಾಲೀನರ ಗಾಥೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×