Oppanna.com

ರಘೂತ್ತಮರ ಮಠಲ್ಲಿ ಗುರು ರಾಘವೇಶ್ವರರ ಚಾತುರ್ಮಾಸ್ಯ ಜಯಿಸಲಿ

ಬರದೋರು :   ಒಪ್ಪಣ್ಣ    on   18/07/2014    6 ಒಪ್ಪಂಗೊ

ತಲೆಂಗಳಲ್ಲಿ ಈ ಒರಿಶ ಪುನರ್ಪುಳಿ ಧಾರಾಳ ಆಗಿದ್ದತ್ತು.
ಬೇಸಗೆಲಿ ಆ ದಾರಿಲೆ ಆಗಿ ಬಾಯಾರಿಂಗೆ ಹೋಪಗ ಅವರ ಮರಲ್ಲಿ ಮೆಡಿಗೊ ಒಪ್ಪಣ್ಣಂಗೆ ಕಂಡಿದ್ದತ್ತು ಅಲ್ಲದೋ, “ಅತ್ತೇ, ಈ ಸರ್ತಿ ಎಸರು ತೆಗದರೆ ಎನಗೊಂದು ಕುಪ್ಪಿ ಕೊಡೆಕ್ಕು” – ಹೇಳಿತ್ತಿದ್ದೆ.
ಕುಪ್ಪಿ ತುಂಬ ಜ್ಯೂಸು ಮಾಡಿ ಕೊಡುವೊ, ಆದರೆ ಆ ಕುಪ್ಪಿ ಒಪಾಸು ಇತ್ಲಾಗಿ ಕೊಡೆಕ್ಕು – ಹೇಳಿತ್ತಿದ್ದವು ವಿನಯತ್ತೆ ನೆಗೆಮಾಡಿಂಡು.
ಹೆಮ್ಮಕ್ಕೊಗೆ ಖಾಲಿ ಕುಪ್ಪಿಗಳ ಮೇಗೆ ಆಶೆ ಇಪ್ಪದು ನಿಂಗೊಗೆ ಅರಡಿಗನ್ನೇ? (https://oppanna.com/oppa/tuppa-kuppi-hemmakkala-shuddi)
ಇರಳಿ, ಅಂಬಗ ನೆಗೆಮಾಡಿ ಬಿಟ್ಟ ಸಂಗತಿ ಒಪ್ಪಣ್ಣಂಗೆ ಮರದೇ ಹೋಗಿದ್ದತ್ತು.
ಕಳುದ ವಾರ ದೊಡ್ಡಳಿಯನ ಬರ್ತು-ಡೇ ಬಗ್ಗೆ ಸೂಪಳು ಕಾರ್ಯಕ್ರಮ ಇದ್ದಿದ್ದಲ್ಲದೋ, ಅಲ್ಲಿ ವಿನಯತ್ತೆ ಸಿಕ್ಕಿದವು.
ಒಪ್ಪಣ್ಣಂಗೆ ಮರೆಪ್ಪು ರಜಾ ಜಾಸ್ತಿ ಆಯಿದೋ, ಪ್ರಾಯ ಹೆಚ್ಚಾತೋ? ಬತ್ತೆ ಹೇಳಿ ಬಯಿಂದೇ ಇಲ್ಲೆನ್ನೇ–ಮನ್ನೆ ನೆಗೆಮಾಡುವಾಗಳೇ ಅಂದ್ರಾಣ ಆ ಪುನರ್ಪುಳಿಯ ಶುದ್ದಿ ಪುನಾ ನೆಂಪಾದ್ಸು.
ಇಲ್ಲೆ ಅತ್ತೆ, ಇನ್ನು ಮರೆತ್ತಿಲ್ಲೆ – ಪುರ್ಸೊತ್ತು ಮಾಡಿಗೊಂಡು ಈ ವಾರವೇ ಬತ್ತೆ – ಹೇದೆ.
ಹಾಂಗೆ, ನಿನ್ನೆಲ್ಲ ಮೊನ್ನೆ ತಲೆಂಗಳಕ್ಕೆ ಹೋದ್ಸು
~
ಹೋಪಗಳೇ ಹೊತ್ತು ನೆತ್ತಿಗೆ ಎತ್ತಿದ ಕಾರಣ ’ಊಟದ ಹೊತ್ತಿಂಗೇ ಎತ್ತಿದ’ ಹಾಂಗಾಯಿದು.
ಆಸರಿಂಗೆ ಎಂತಕ್ಕು – ಕೇಳಿದವು ವಿನಯತ್ತೆ, ’ಎಂತ ಬೇಡತ್ತೆ’ – ಹೇಯಿದೆ.
ಅಲ್ಲ, ರಜ್ಜ ಮಜ್ಜಿಗೆ ನೀರು ಕುಡಿತ್ತೆಯೋ? ಕೇಟವು.
ಈಗ ಇನ್ನು ಮಜ್ಜಿಗೆ ನೀರು ಕುಡುದರೆ ಹಶು ಕೆಡುಗನ್ನೇ-ದು ಯೇಚನೆ ಬಪ್ಪಲೆ ಸುರು ಆತು; ಕೇಳದ್ದ ಹಾಂಗೆ ಸುಮ್ಮನೆ ಕೂದೆ!
ಅಷ್ಟಪ್ಪಗಳೇ ಅಂದಾಜಿ ಆತಾಯಿಕ್ಕು ಅವಕ್ಕೆ – ಇವ ಉಂಬಲೆ ಹೊಟ್ಟೆಲಿ ಜಾಗೆ ಮಡಿಕ್ಕೊಂಬದು ಹೇದು!
ವಿನಯತ್ತೆಗೆ ಅಂದಾಜಿ ಅಪ್ಪದು ಬೇಗ ಇದಾ.
ನಾವು ಮಾತಾಡಿರೂ ಅರ್ಥ ಆವುತ್ತು; ಮಾತಾಡದ್ದೆ ಇದ್ದರೂ ಸಂಗತಿಗೊ ಅರ್ಥ ಆವುತ್ತು!
ಮೌನಂಗಳನ್ನೂ ಅರ್ಥ ಮಾಡೆಕ್ಕಾರೆ ವಿನಯತ್ತೆಯ ಹಾಂಗೆ ವಿಶೇಷ ಶೆಗ್ತಿ ಬೇಕಾವುತ್ತು. ಅದಿರಳಿ.
ಆ ದಿನ ದೀಪಿಅಕ್ಕ ಸಂಗೀತ ಮಾಷ್ಟ್ರಲ್ಲಿಗೆ ಹೋಯಿದಾಡ.
ವಿನಯತ್ತೆಗೆ ಅಡಿಗೆ ಕೋಣೆಲಿ ಕೆಲಸ ಇದ್ದತ್ತು, ಆದರೆ ಮಾವಂಗೆ ಪುರುಸೊತ್ತಲ್ಲದೋ?
ಹೇಂಗೂ ಆಪೀಸಿಂಗೆ ರಜೆ – ಪೇಪರು ತುಂಬ ಶುದ್ದಿ. ಓದಿಗೊಂಡು ಪುರುಸೋತಿಲಿ ಇದ್ದಿದ್ದವು.
ಒಂದು ಮಟ್ಟಿನ ಶುದ್ದಿ ಓದಿ ಆದಪ್ಪದ್ದೇ, ’ಹ್ಮ್, ಮತ್ತೆಂತ ಒಪ್ಪಣ್ಣಾ ಶುದ್ದಿ ಎಲ್ಲ’ – ಕೇಳಿದವು.
ಒಪ್ಪಣ್ಣನ ಬಾಯಿಗೆ ಇಕ್ಕುಳ ಹಾಕಿ ಮಾತು ಎಳವಲೆ ಹಾಂಗೆ ಕೇಳಿದ್ದಷ್ಟೆ ಅವು;
ಅಲ್ಲದ್ದರೆ – ವಿನಯತ್ತೆಗೆ ಅರಡಿವ ಎಲ್ಲ ಶುದ್ದಿಯೂ ಗೊಂತಿರ್ತು ಅವಕ್ಕುದೇ!
ವಿಶೇಷ ಎಂತ ಇಲ್ಲೆ ಮಾವ; ಸಂಗತಿ ಬಟಾಟೆ – ಹೇಯಿದೆ.
ಸಂಗತಿ ಬಟಾಟೆ ಆಯಿಕ್ಕು; ಆದರೆ ಸಾರು ಪುನರ್ಪುಳಿದು – ಹೇಳಿದವು ಮಾವ.
“ಹ್ಹೆ ಹ್ಹೆ” – ಇಬ್ರೂ ನೆಗೆ ಮಾಡಿದೆಯೊ; ಮಾತುಕತೆ ಮುಂದುವರುದತ್ತು.
ಊಟಕ್ಕಾತು – ಹೇದು ವಿನಯತ್ತೆ ಹೇಳುವಾಗ ಎದ್ದೆಯೊ.
ಬಾಳೆಬುಡಲ್ಲಿ ಬಂದು ಕೂದಪ್ಪಗ ತಪಲೆಲಿ ಕಂಡತ್ತು – ಪುನರ್ಪುಳಿ ಸಾರು.
ಶ್ಯೆಲಾ, ಮಾವ ಅಂತೇ ಹೇಳಿದ್ದಲ್ಲ; ಇಪ್ಪದನ್ನೇ ಹೇಳಿದ್ದು – ಪುನರ್ಪುಳಿಯ ಸಾರು ಇದ್ದತ್ತಿದಾ!
ಎಂಗೊಗೆ ಒಪ್ಪಣ್ಣಾ, ಆ ಪುನರ್ಪುಳಿ ಮರಲ್ಲಿ ಮೆಡಿ ಬಿಟ್ಟ ಲಾಗಾಯ್ತು ಊಟಕ್ಕೆ ಒಂದು ಬಗೆ ಸಾರು.
ಮತ್ತೊಂದು ಬಗೆ ಬೇರೆಂತಾರು – ಸೌತ್ತೆಯೋ, ಕೆಂಬುಡೆಯೋ, ದಾರ್ಳೆಯೋ, ಪೇರಳೆಯೋ – ಹೀಂಗೆಂತಾರು. ಆದರೆ ಒಂದು ಬಗೆ ಪುನರ್ಪುಳಿ ಸಾರು ನಿಘಂಟೇ – ಹಾಂಗೆ ಅಷ್ಟು ಧೈರ್ಯಲ್ಲಿ ಹೇಳಿದ್ದಾನು – ಹೇಳಿದವು ನೆಗೆಮಾಡಿಂಡು.
ಅದಿರಳಿ.
~
ಉಂಡಾತು, ಎದ್ದು ಕೈತೊಳದಾತು.
ಮಾವಂಗೆ ಉಂಡಿಕ್ಕಿ ಒರಗೆಕ್ಕಿದಾ; ಹಾಂಗೆ ಕಣ್ಣ ರೆಪ್ಪೆಲ್ಲ ಬಾಡಿ ಬಾಡಿ ಒರಕ್ಕು ತೂಗಲೆ ಸುರು ಅಪ್ಪ ಮದಲೇ ಹೆರಟೆ. ವಿನಯತ್ತೆ ಪ್ರೀತಿಲಿ ತುಂಬುಸಿ ಕೊಟ್ಟ ಒಂದು ಕುಪ್ಪಿ ಪುನರ್ಪುಳಿ ಎಸರು ಹಿಡ್ಕೊಂಡು ಮನೆಗೆ ಬಂದೆ.
ಇನ್ನು ಕುಪ್ಪಿ ತೆಕ್ಕೊಂಡೋಗಿ ಕೊಡೆಕ್ಕಷ್ಟೆ. ಗಡಿಬಿಡಿ ಇಲ್ಲೆ, ಹದಾಕೆ ಕೊಟ್ರೆ ಸಾಕು – ಹೇಳಿದ್ದವು ವಿನಯತ್ತೆ.
ಹೋಪದು, ನಿಧಾನಕ್ಕೆ; ಬಪ್ಪೊರಿಷ ಪುನರ್ಪುಳಿ ಮೆಡಿ ಬಿಡುವ ಮದಲು. 😉
ಸಾರಿನ ಒಗ್ಗರಣೆ ಪರಿಂಮಳ ಕೈಂದಲೂ ಹೋಯಿದಿಲ್ಲೆ, ತಲೆಂದಲೂ ಹೋಯಿದಿಲ್ಲೆ.
~
ಹ್ಮ್, ಮೊನ್ನೆ ಊಟಕ್ಕಪ್ಪಗ ದೀಪಿ ಅಕ್ಕ ಇತ್ತಿದ್ದವಿಲ್ಲೆ; ಸಂಗೀತ ಮಾಷ್ಟ್ರಲ್ಲಿಗೆ ಹೋಗಿದ್ದದು – ಹೇಳಿದೆ ಅಲ್ಲದೋ?
ಕೆಕ್ಕಾರು ಚಾತುರ್ಮಾಸ್ಯಲ್ಲಿ ನೆಡವ ರಾಮಕಥೆಗೆ ಸಂಗೀತ ಹಾಡ್ಳೆ ಇಪ್ಪ ಕಾರಣ ಗುರುಗಳತ್ರೆ ಹೋದ್ಸು – ಹೇಯಿದವು ಮಾವ. ದೀಪಿಅಕ್ಕ ರಾಮಕಥೆಲಿ ಹಾಡುದು ನಿಂಗೊಗೆ ಅದಾಗಲೇ ಗೊಂತಿಕ್ಕು, ಅಲ್ಲದೋ?
ಲಕ್ಷಗಟ್ಳೆ ಜೆನಕ್ಕೆ ಗೊಂತಿದ್ದು, ಇನ್ನು ಬೈಲಿನೋರಿಂಗೆ ಗೊಂತಿಲ್ಲೆ ಹೇಳಿರೆ ಆರೂ ನಂಬವು!! ಹಾಂಗೆ ನಾಳ್ದಿನ ರಾಮಕಥೆಲಿಯೂ ಹಾಡ್ಳೆ ಇದ್ದಾಡ.
ಹಾಂಗೆ ಮೆಲ್ಲಂಗೆ ಊಟದ ಬಾಳೆಬುಡಲ್ಲಿ ಸುರು ಆದ ವಿಷಯ ನಿಧಾನಕ್ಕೆ ಚಾತುರ್ಮಾಸ್ಯದ ಬಗ್ಗೆಯೇ ಬಂತು.
ಇಡೀ ಊಟ ಅಪ್ಪನ್ನಾರವೂ ಸುಮಾರು ಸಂಗತಿಗೊ ಬಂತು.
ಎಂತೆಲ್ಲ ವಿಶಯ ಬಂತು?
~
ಚಾತುರ್ಮಾಸ್ಯ ಹೇದರೆ ಎಂತ್ಸು, ಅದರ ಎಂತಕೆ ಆಚರಣೆ ಮಾಡೇಕು? ಅದರ ಆರೆಲ್ಲ ಆಚರಣೆ ಮಾಡ್ಳಕ್ಕು – ಹೇಳ್ತ ಸಂಗತಿಯ ನಾವು ಅಂದೇ ಬೈಲಿಲಿ ಮಾತಾಡಿಗೊಂಡಿದು. ಅಲ್ಲದೋ?
ನಾಲ್ಕು ತಿಂಗಳು ಒಂದೇ ಕ್ಷೇತ್ರಲ್ಲಿ ನೆಲೆ ನಿಂದು, ಕೆಲವು ಅನ್ನಾಹಾರದ ವ್ಯತ್ಯಾಸಂಗಳ ಅಳವಡುಸಿಗೊಂಡು, ಅಧ್ಯಯನಲ್ಲೇ ತೊಡಗುಸಿಗೊಂಬ ಮಹತ್ತರ ಕಾಲಘಟ್ಟ ಚಾತುರ್ಮಾಸ್ಯ.
ಮಾಸೇತಿ ಪಕ್ಷಃ – ಹೇದು ನಾಲ್ಕು ಪಕ್ಷ – ಎರಡು ತಿಂಗಳ ಕಾಲ ಆಚರಣೆಗೆ ಈಗ ರೂಢಿಲಿ ಇದ್ದು.
ಹಾಂಗೆ, ಮೊನ್ನೆ ಜುಲಾಯಿ ಹನ್ನೆರಡಕ್ಕೆ ಸುರು ಆದ ಚಾತುರ್ಮಾಸ್ಯ, ಸೆಪ್ಟೆಂಬರು ಒಂಭತ್ತರ ಒರೆಂಗೂ ನೆಡೆತ್ತು.
ನಮ್ಮ ಗುರುಗೊಕ್ಕೆ ಇದು ಸನ್ಯಾಸ ದೀಕ್ಷೆ ತೆಕ್ಕೊಂಡ ಮತ್ತೆ ಇಪ್ಪತ್ತೊಂದನೇ ಚಾತುರ್ಮಾಸ್ಯ.
ಮೈಸೂರು, ಹೊಸನಗರ, ಬೆಂಗ್ಳೂರು – ಇತ್ಯಾದಿ ಹಲವು ಜಾಗೆಲಿ ಚಾತುರ್ಮಾಸ್ಯಂಗೊ ಆಯಿದು.
ಆಚೊರಿಶ ಮೂಲಮಠ ಅಶೋಕೆಲಿ,
ಕಳುದೊರಿಶ ಮಾಣಿಮಠ ಪೆರಾಜೆಲಿ.
ಹಾಂಗೇ ಈ ಒರಿಶ ರಘೂತ್ತಮ ಮಠ – ಕೆಕ್ಕಾರಿಲಿ!
ಕಾಗತ ಎಲ್ಲ ಮನ್ನೆಯೇ ಬಯಿಂದು.
ಗುರಿಕ್ಕಾರ್ರ ಮುಖಾಂತರ ಮನೆಮನೆಗೂ ಎತ್ತಿದ್ದು; ಬೈಲಿಂಗೂ ಎತ್ತಿದ್ದು.
ಚಾತುರ್ಮಾಸ್ಯ ಸಂದರ್ಭಲ್ಲಿ ಹಲವು ವಿಶೇಷ ಕಾರ್ಯಕ್ರಮಂಗೊ ಇದ್ದಾಡ- ಹೇದೂ ಗೊಂತಾಗಿತ್ತು.
ಆದರೂ, ಈ ಸರ್ತಿಯಾಣ ಚಾತುರ್ಮಾಸ್ಯದ ಒಂದೆರಡು ವೈಶಿಷ್ಠ್ಯಂಗಳ ಮಾವ ಒತ್ತಿ ಹೇಳಿದವು. ಎಂತರ?
~
ಗುರು ಗ್ರಂಥ ಮಾಲಿಕಾ:
ಅಜ್ಞಾನ ತಿಮಿರಾಂಧಸ್ಯ, ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
– ಹೇದು ಶ್ಲೋಕ ಇದ್ದಲ್ಲದಾ, ಅಜ್ಞಾನ ಹೇಳ್ತ ಅಂಧಕಾರಂದ ಜ್ಞಾನ ಹೇಳ್ತ ಬೆಣಚ್ಚಿಲಿ ಕಣ್ಣು ತೆರೆಸುವವನೇ ಗುರು- ಹೇಳ್ತ ಅರ್ಥ ಬತ್ತಲ್ಲದಾ? ಹಾಂಗೆ, ನಮ್ಮ ಸಂಪ್ರದಾಯಲ್ಲಿ, ನಂಬಿಕೆಲಿ ಹಲವಾರು ಜೆನ ಗುರುಗೊ ಆಗಿ ಹೋಯಿದವು.
ವೇದ ಕಾಲದ ಋಷಿಗೊ, ಪುರಾಣ ಕಾಲದ ಸ್ಮೃತಿಕರ್ತೃಗೊ, ಇತಿಹಾಸ ಕಾಲದ ಸಂನ್ಯಾಸಿಗೊ, ವೀರಂಗೊ, ಪರಾಕ್ರಮಿಗೊ – ಎಲ್ಲರೂ ನವಗೆ ಗುರುಗಳೇ.
ನಮ್ಮ ಜೀವನಕ್ಕೆ ಆರೆಲ್ಲ ಪಾಠ ಕಲಿಶುತ್ತವೋ, ಅವೆಲ್ಲರೂ ಗುರುಗಳೇ.
ಸಹಸ್ರ ಸಹಸ್ರ ಗುರುಗೊ ಇದ್ದವು ನಮ್ಮ ಸನಾತನ ಇತಿಹಾಸಲ್ಲಿ.
ಅವರಲ್ಲಿ ಅರುವತ್ತು ಜೆನ ಆಯ್ದ ವ್ಯಕ್ತಿತ್ವಂಗಳ ಹೆರ್ಕಿ, ಅವರ ಬಗ್ಗೆ ಪುಸ್ತಕ ಬರದು, ಆ ಪುಸ್ತಕವ ಬಿಡುಗಡೆ ಮಾಡ್ಳಿದ್ದಡ ಈ ಚಾತುರ್ಮಾಸ್ಯಲ್ಲಿ – ಹೇಳಿದವು ಮಾವ.
ಅರುವತ್ತು ಪುಸ್ತಕ ಬಿಡುಗಡೆ ಮಾಡ್ತಲ್ಲದೋ – ಅದರ್ಲಿ ವಿಶೇಷ ಎಂತರ?
ವಿಶೇಷ ಎಂತ್ಸರ ಹೇದರೆ – ಚಾತುರ್ಮಾಸ್ಯದ ಪ್ರತಿ ದಿನವೂ ಒಂದೊಂದು ಪುಸ್ತಕದ ಲೋಕಾರ್ಪಣೆ!
ನಭೂತೋ – ಇಷ್ಟನ್ನಾರ ಎಲ್ಲಿಯೂ ಹಾಂಗಿದ್ದ ಒಂದು ಸಂಗತಿ ಆಯಿದಿಲ್ಲೆ.
ಎರಡು ತಿಂಗಳಿನ ಒಂದು ಕಾರ್ಯಕ್ರಮಲ್ಲಿ, ಪ್ರತಿ ದಿನವೂ ಪುಸ್ತಕ ಬಿಡುಗಡೆ ಆದ ಉದಾಹರಣೆ ನಮ್ಮ ಲೋಕದ ಇತಿಹಾಸಲ್ಲಿ ಎಲ್ಲಿಯೂ ಇಲ್ಲೆ. ಅಂಥಾ ಒಂದು ವಿಶೇಷ ಸಾಧನೆಯ ನಮ್ಮ ಮಠ ಮಾಡಿಗೊಂಡಿದ್ದು – ಹೇಳಿದವು.
ಈ ಪುಸ್ತಕ ಮಾಲೆಯ ಪೋಣುಸಿ ಹೆರ ತತ್ತಾ ಇಪ್ಪ ಭಾರತೀ ಪ್ರಕಾಶನದ ಬಗ್ಗೆ, ಅದರೊಳ ಇಪ್ಪ ವಿದ್ವಾನಣ್ಣ, ಜೆಡ್ಡು ಅಕ್ಕ , ಹಿರಿಯ-ಕಿರಿಯ ವಿದ್ವಾಂಸರು, ಲೇಖಕರು, ಇತ್ಯಾದಿ ತಂಡದ ಬಗ್ಗೆ ಭಾರೀ ಹೆಮ್ಮೆ ಆತೊಂದರಿ!
ತುಂಬಾ ಒಳ್ಳೆ ಕೆಲಸ, ನೆಡೆಯಲಿ – ಹೇದು ಮನಸ್ಸು ಗ್ರೇಶಿತ್ತು.
ಇನ್ನೂ ಒಂದು ವಿಶೇಷ ಎಂತರ ಹೇದರೆ, ಅಲ್ಲಿ ಬಿಡುಗಡೆ ಆದ ಅಷ್ಟೂ ಪುಸ್ತಕಂಗಳೂ ನಮ್ಮೆಲ್ಲಾ ಶಿಷ್ಯವರ್ಗದ ಮನೆಗೆ ಧರ್ಮಾರ್ಥವಾಗಿ ಕೊಡ್ತಾ ಇದ್ದವಡ.
“ಇದಾ, ಓದಿ ಮಕ್ಕಳೇ” – ಹೇದು ಅಬ್ಬೆ ಕೊಟ್ಟ ಹಾಂಗೆ ಗುರುಗೊ ನಮ್ಮೆಲ್ಲರಿಂಗೆ ಕೊಡುದು.
ಸುಶಿಕ್ಷಿತ ಮಕ್ಕಳ ವಿದ್ಯಾವಂತರಾಗಿ ಮಾಡೇಕಾರೆ ಎಷ್ಟು ಮುಖ್ಯವಾದ ಕೆಲಸ!!
ಈ ವಿಷಯಕ್ಕೆ ತನುಮನಧನ ರೂಪಲ್ಲಿ ಸುಮಾರು ಜೆನ ಸೇರಿ ಸಹಕರುಸಿಗೊಂಡು ಇದ್ದವಾಡ – ಹೇಳಿದವು ಮಾವ.
ಒಬ್ಬೊಬ್ಬ ಗುರುಗಳ ಬಗ್ಗೆಯೂ ಓದುಲೆ ಮನಸ್ಸು ಕಾದುಗೊಂಡಿತ್ತು. ಪುಸ್ತಕಂಗೊ ಬರಳಿ, ಎಲ್ಲ ಒಂದೇ ಸರ್ತಿ ಓದಿ ಮುಗುಶೇಕು – ಹೇದು ಗ್ರೇಶಿಗೊಂಡೆ ಉಂಬಗ.
ಅದಾಗಿ, ಇನ್ನೊಂದು ಗಂಭೀರ ವಿಷಯ ಹೇಳಿದವು ತಲೆಂಗಳ ಮಾವ.

ಚಂಪಕದ ಅಣ್ಣ ಕಳುಸಿಕೊಟ್ಟ ಚಾತುರ್ಮಾಸ್ಯದ ವಿವರಪುಟ
ಚಂಪಕದ ಅಣ್ಣ ಕಳುಸಿಕೊಟ್ಟ ಚಾತುರ್ಮಾಸ್ಯದ ವಿವರಪುಟ

~

ಲೋಕಾಂತಂದ ಏಕಾಂತಕ್ಕೆ:
ಇದು ನಮ್ಮ ಗುರುಗಳ ಇಪ್ಪತ್ತೊಂದನೇ ಚಾತುರ್ಮಾಸ್ಯ.
ಹೇದರೆ, ಸಂನ್ಯಾಸ ತೆಕ್ಕೊಂಡು ಇಪ್ಪತ್ತೊಂದೊರಿಶ ಆತು.
ಇಷ್ಟೊರಿಶಲ್ಲಿ ಎಷ್ಟೆಲ್ಲ ಬದಲಾವಣೆ ಆಯಿದು ನಮ್ಮ ಸಮಾಜಲ್ಲಿ.
ನವಗೊಂದು ವೇದಿಕೆ ಸೃಷ್ಟಿ ಆಯಿದು, ನಮ್ಮ ಆಧ್ಯಾತ್ಮ, ಆದಿಭೌತಿಕ, ಆದಿ ದೈವಿಕ ವಿಚಾರಂಗಳಲ್ಲಿ ಪ್ರೇರೇಪಣೆ ಆಯಿದು. ಎಲ್ಲಕ್ಕಿಂತ ಮೊದಲಾಗಿ, ನಮ್ಮ ಸಮಾಜೆ ಸಂಘಟಿತ ಆಯಿದು. ಹವ್ಯಕ ಭಾಷೆಯೂ ಒಂದು ಪ್ರಬಲ ಮಾಧ್ಯಮ ಆಯಿದು.. ಭಾರತೀಯ ಗೋವಿನ ಬಗ್ಗೆ ಒಂದು ವಿಶೇಷ ಆಸಕ್ತಿ ಬಯಿಂದು ಜೆನಂಗೊಕ್ಕೆ. ದೇಶಾದ್ಯಂತ ಆಂದೋಲನ ಆಯಿದು, ಆವುತ್ತಾ ಇದ್ದು. ಇದಕ್ಕೆಲ್ಲ ಕಾರಣೀಭೂತರು ಆರು? ನಮ್ಮ ಗುರುಗೊ.
ಕಳುದ ಇಪ್ಪತ್ತೊಂದು ಒರಿಶಲ್ಲಿ ಸಮಾಜದ ಅಷ್ಟೂ ಬದಲಾವಣೆಗೆ ಕಾರಣೀಭೂತರು.
ಅದರ ಎಡೆಲಿ ನಾವು ಎಷ್ಟೋ ದಿನ ಅವರ ಸಮಯ ಹಿಡ್ಕೊಂಡಿದು.
ಮನೆಯ ಸಮಸ್ಯೆ, ಆರೋಗ್ಯ ಸಮಸ್ಯೆ, ಕೋರ್ಟು ಕೇಸುಗಳ ಸಮಸ್ಯೆ, ಅದು-ಇದು – ಎಲ್ಲವನ್ನೂ ತೆಕ್ಕೊಂಡು ಅವರ ಹತ್ತರೆ ಹೋಯಿದು. ಸಂನ್ಯಾಸಿ ಆಗಿದ್ದುಗೊಂಡು ಸಂನ್ಯಾಸದ ಆಂತರ್ಯಕ್ಕೆ ಇಳಿವಲೆ ನಾವು ಸಮಯವೇ ಕೊಟ್ಟಿದಿಲ್ಲೆ.
ಹಾಂಗೆ, ಈ ಚಾತುರ್ಮಾಸ್ಯ ಮುಗುದಪ್ಪದ್ದೇ, ನಮ್ಮ ಗುರುಗೊ ಏಕಾಂತಕ್ಕೆ ಹೋವುತ್ತವಾಡ!!
ಗುರುಗಳ ಮನಸ್ಸಿಂಗೆ ಈ ಸಂಗತಿ ಮೊದಲೇ ಬಂದಿತ್ತೋ ಏನೋ, ಹಾಂಗಾಗಿ – ಪೂರ್ಣತೆಯಿಂದ ಪರಿಪೂರ್ಣತೆಯ ಪ್ರಯಾಣ – ಹೇದು ಗುರುಗೊ ಈ ಚಾತುರ್ಮಾಸ್ಯದ ಕುರಿತಾಗಿ ಹೇಳಿದ್ದವಾಡ.
ಗುರುಗೊ ಅವರ ಎಲ್ಲ ಪ್ರಯಾಣವನ್ನೂ ನಿಲ್ಲುಸಿ, ಎಲ್ಲಿಯೋ ಒಂದು ದಿಕ್ಕೆ ದಿವ್ಯ ಏಕಾಂತಲ್ಲಿ ಇರ್ತವಾಡ – ಹೇದು ವಿನಯತ್ತೆ ಸ್ವರ ಸೇರ್ಸಿದವು. ಯೆತಾರ್ಥವಾಗಿ ಚಾತುರ್ಮಾಸ್ಯ ಹೇದರೂ ಹಾಂಗೇ – ಸ್ವಾಧ್ಯಾಯ, ಅಧ್ಯಯನ ಇತ್ಯಾದಿಗಳಲ್ಲಿ ಸಮಯ ತೊಡಗುಸಿಗೊಂಬದು ಹೇದು ಅರ್ಥ. ಆದರೆ, ಈಗ ನಾವೆಲ್ಲೋರುದೇ ಹೋಗಿ ಅವರ ಏಕಾಂತವ ತುಂಡು ಮಾಡ್ತಾ ಇದ್ದು.
ಇನ್ನು? ಚಾತುರ್ಮಾಸ್ಯ ಕಳುದು ಸೀತ ಏಕಾಂತಕ್ಕೇಡ.
~
ಗುರು ಗ್ರಂಥ ಮಾಲಿಕೆ ಬಪ್ಪ ಕುಷಿಯ ಸಂಗತಿಯೂ, ಏಕಾಂತದ ಬೆಶಿಯ ಸಂಗತಿಯೂ ಒಟ್ಟಿಂಗೇ ಹೇಳಿದವು.
ಶೆಕ್ಕರೆಯ ಸೀವು ತುಂಬಿದ ಪುನರ್ಪುಳಿಯ ಹುಳಿ ಸಾರಿನ ಹಾಂಗೆ – ಎರಡೂ ರುಚಿ ಒಟ್ಟೊಟ್ಟಿಂಗೇ!
ಛೇ.
ಪುನರ್ಪುಳಿ ಸಾರಿನ ಪರಿಮ್ಮಳದ ಹಾಂಗೇ ಈ ವಿಷಯವೂ ತಲೆಲೇ ನಿಂದಿದು ಮೊನ್ನೆಂದ.
ಗುರುಗೊ ಎಷ್ಟೇ ಏಕಾಂತಲ್ಲಿ ಇದ್ದರೂ ನವಗೆಲ್ಲ ಸಿಕ್ಕುತ್ತಾ ಇರೆಕ್ಕು, ಮಾರ್ಗದರ್ಶನ ಕೊಡ್ತಾ ಇರೆಕ್ಕು, ಗುರು ಆಗಿದ್ದು ಶಿಷ್ಯಂದ್ರ ಮನಸ್ಸಿನ ಕಸ್ತಲೆಗಳ ಓಡುಸುತ್ತಾ ಇರೆಕ್ಕು – ಹೇದು ಮನಸ್ಸು ಗ್ರೇಶಿಗೋಂಡೇ ಇದ್ದು ಮನಸ್ಸು.
~
ಕೆಕ್ಕಾರು ರಘೂತ್ತಮ ಮಠಲ್ಲಿ ನೆಡವ ಚಾತುರ್ಮಾಸ್ಯ ಜಯವಾಗಲಿ.
ಲೋಕದ ಶಾಂತಿ-ಸಮೃದ್ಧಿಗೆ ಕಾರಣವಾಗಲಿ.
ಗುರುಗೊಕ್ಕೆ ಅಧ್ಯಯನಕ್ಕೆ ಸಮಯ ಸಿಕ್ಕಲಿ, ಮನಶ್ಶಾಂತಿ ಸಿಕ್ಕಲಿ.
ಏಕಾಂತದ ನೆಮ್ಮದಿ ಸಿಕ್ಕಿ, ಮತ್ತೆ ಆದಷ್ಟು ಬೇಗ ನಮ್ಮೆಲ್ಲರಿಂಗೆ ಮಂತ್ರಾಕ್ಷತೆ ಅನುಗ್ರಹಿಸುವ, ಅದರ ಸ್ವೀಕಾರ ಮಾಡುವ ಯೋಗಭಾಗ್ಯ ನವಗೆ ಸಿಕ್ಕಲಿ – ಹೇದು ಮನಸ್ಸು ಮೊನ್ನೆಂದ ಹೇಳಿಗೋಂಡು ಇದ್ದತ್ತು.
~
ಒಂದೊಪ್ಪ: ಲೋಕಾಂತ ಬಚ್ಚಿರೆ ಏಕಾಂತವೇ ಮೆಚ್ಚುಗು.

6 thoughts on “ರಘೂತ್ತಮರ ಮಠಲ್ಲಿ ಗುರು ರಾಘವೇಶ್ವರರ ಚಾತುರ್ಮಾಸ್ಯ ಜಯಿಸಲಿ

  1. ಸಂಗತಿ ಬಟಾಟೆ ಹೇಳಿಕ್ಕಿ ಇಷ್ಟೊಂದು ಶುದ್ದಿಗಳ ಒಟ್ಟು ಸೇರಿಸಿ ಒಪ್ಪಣ್ಣ ಬೈಲಿಂಗೆ ಕೊಟ್ಟದು ತುಂಬಾ ಚೆಂದ ಆಯಿದು. ಪುನರ್ಪುಳಿ ಸಾರಿಲ್ಲಿ ಜೀವನದ ಸಾರವ ಹೇಳಿದ್ದದು ಮತ್ತೂ ಫಶ್ಟಾಯಿದು. ಕೆಕ್ಕಾರಿನ ಚಾತುರ್ಮಾಸ್ಯದ ರಾಮಕಥೆಲಿಯುದೆ ದೀಪಿಯಕ್ಕನ ಹಾಡು ರೈಸಲಿ. ಒಂದು ಗಳಿಗೆ ಪುರುಸೊತ್ತು ಮಾಡ್ಯೊಂಡು ನಾವುದೆ ಹೋಪೊ.

  2. ಹರೇರಾಮ, ಶಂಕರಾಚಾರ್ಯರ ಸಾಧನೆಗೆ ಸಮವಾದ ಸಾಧನೆ ಮತ್ತೆ ಬೆಣ್ಚಿಗೆಬಕ್ಕು. ಅದರ ನೋಡಿ ಅನುಭವಿಸುವ ಭಾಗ್ಯ ನಮ್ಮದಾಗಲಿ

  3. ವಿಷಯ ಕೇಳಿದ ಮೇಲೆ ಬೇರೆ ಯಾವ ಮಾತೂ ಹೆರಡುತ್ತಿಲ್ಲೆ.
    …{ಏಕಾಂತದ ನೆಮ್ಮದಿ ಸಿಕ್ಕಿ, ಮತ್ತೆ ಆದಷ್ಟು ಬೇಗ ನಮ್ಮೆಲ್ಲರಿಂಗೆ ಮಂತ್ರಾಕ್ಷತೆ ಅನುಗ್ರಹಿಸುವ, ಅದರ ಸ್ವೀಕಾರ ಮಾಡುವ ಯೋಗಭಾಗ್ಯ ನವಗೆ ಸಿಕ್ಕಲಿ}….
    ನಾವೂ ಜಾತಕ ಪಕ್ಷಿಯ ಹಾಂಗೆ ಕಾದೊಂಡಿರ್ತು…. ಹರೇ ರಾಮ

  4. ಲಾಯಕ ಆಯಿದು.ಏಕಾಂತ ತಪಃಶಕ್ತಿಯ ವೃದ್ಧಿಗೆ ಸಹಕಾರಿ.ಅನಂತರ ಗುರುಗಳ ಆಶೀರ್ವಾದ ಮತ್ತೆ ಸಿಕ್ಕಲಿ .

  5. ‘ಶೆಕ್ಕರೆಯ ಸೀವು ತುಂಬಿದ ಪುನರ್ಪುಳಿಯ ಹುಳಿ ಸಾರಿನ ಹಾಂಗೆ’……..ಹರೇ ರಾಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×